Sunday 6 May 2018

ಬದುಕೆಂಬ ಬಂಡಿಯಲಿ..4 ಹುಡುಗಿಯರಿಗೆ ವಾಂತಿ ಕೂಡ ಮದುವೆ ಆದ್ಮೇಲೇ ಬರ್ಬೇಕಾ ?© ಡಾ.ಲಕ್ಷ್ಮೀ ಜಿ ಪ್ರಸಾದ

ಹುಡುಗಿಯರಿಗೆ ವಾಂತಿ ಕೂಡ ಮದುವೆ ಆದ್ಮೇಲೇ   ಬರ್ಬೇಕಾ ?© ಡಾ.ಲಕ್ಷ್ಮೀ ಜಿ ಪ್ರಸಾದ

ನಿನ್ನೆ ನೆಲಮಂಗಲದಿಂದ ಮನೆಗೆ ಬರ್ತಾ ಇರಬೇಕಾದರೆ ಬಸ್ಸಿನಲ್ಲಿ ಹದಿನೆಂಟು ಇಪ್ಪತ್ತರ ಎಳೆಯ ತರುಣಿ ನನ್ನ ಪಕ್ಕದಲ್ಲಿ ನಿಂತಿದ್ದಳು
ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವಳಿಗೆ ವಾಂತಿ ಬರುವ ಹಾಗೆ ಆಯ್ತು .ನಾನು ಅದನ್ನು ಗಮನಿಸಿ ಅವಳಿಗೆ ಸೀಟು ಬಿಟ್ಟು ಕೊಟ್ಟೆ‌.ನನ್ನ ಬ್ಯಾಗ್ ನಲ್ಲಿ ಒಂದು ಪ್ಲಾಸ್ಟಿಕ್ ಕವರ್ ಇತ್ತು.ಅದನ್ನು ಕೂಡ ಕೊಟ್ಟೆ‌.ಅವಳು ಅದರಲ್ಲಿ ವಾಂತಿ ಮಾಡಿದಳು.ಆಗ ಅವಳ ಜೊತೆಗೆ ಬಂದಿದ್ದ ಸಂಬಂಧಿಕರು ಯಾರೋ ಅವಳ ತಾಯಿಯಲ್ಲಿ ಏನೇ ವನಜ ,ನಿನ್ನ ಮಗಳು ವಾಂತಿ ಮಾಡ್ತಿದಾಳೆ,ಹುಷಾರು ಕಣೇ ಎಂದು ಹೇಳಿದರು.ಆ ತಾಯಿ ಮಗಳಿಗೆ ನಾಚಿಕೆಯಿಂದ ಮುಖ ಕೆಂಪೇರಿ ತಲೆ ತಗ್ಗಿಸಿದರು.ಮಗಳಿಗಂತೂ ಅಳುವೇ ಬಂತು.ಯಾಕಮ್ಮ ಅಳ್ತೀಯ ಅಂತ ಕೇಳಿದೆ.ಅದಕ್ಕೆ ಅವಳು ಬಸ್ಸು ಕಾರಿನಲ್ಲಿ ಪ್ರಯಾಣಿಸಿದರೆ ನನಗೆ ವಾಂತಿಯಾಗುತ್ತದೆ .ಅದಕ್ಕೆ ಇವರೆಲ್ಲ ಏನೇನೋ ಹೇಳ್ತಾರೆ ಅಂತ ಹೇಳಿದಳು  "  ಈ ಸಮಸ್ಯೆಗೆ ಟ್ರಾವೆಲಿಂಗ್ ಸಿಕ್ ನೆಸ್ ಅಂತಾರೆ ,ಬಸ್ ಹತ್ತುವ ಅರ್ಧ ಗಂಟೆ ಮೊದಲೇ ಒಂದು ಎಮಿಸೆಟ್ ಇಲ್ಲವೇ ಡೋಮಸ್ಟಾಲ್  ಟ್ಯಾಬ್ಲೆಟ್ ತಗೋ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗುತ್ತದೆ‌. ಯಾರು ಏನು ಬೇಕಾದರೂ ಹೇಳಲಿ ತಲೆಕೆಡಿಸಿಕೊಳ್ಳಬೇಡ,ಚೆನ್ನಾಗಿ ಓದಿ ದೊಡ್ಡ ಸ್ಥಾನವನ್ನು ಪಡೆ" ಎಂದು ಹೇಳಿದೆ

ಹೌದು! ನಮ್ಮಲ್ಲಿ ಮದುವೆಗೆ ಮುಂಚೆ ಹುಡುಗಿಯರಿಗೆ ವಾಂತಿ ಕೂಡ ಬರುವಂತಿಲ್ಲ‌!
ನಾನು ಆಗಷ್ಟೇ ಹತ್ತನೇ ತರಗತಿ ಮುಗಿಸಿ ದೂರದ ಮಂಗಳೂರಿನ ಸರ್ಕಾರಿ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜ್) ಪಿಯುಸಿಗೆ ಸೇರಿದ್ದೆ.ಅದು ತನಕ ಬಸ್ಸಿನಲ್ಲಿ ಓಡಾಡಿ ಅನುಭವ ಇರಲಿಲ್ಲ. ಅದಕ್ಕೂ ಮೊದಲು ಯಾರದಾದರೂ ನೆಂಟರ ಮನೆಗೆ ಬಸ್ಸಿನಲ್ಲಿ ಹೋಗಬೇಕಾಗಿ ಬರುವಾಗ  ನನಗೆ ಬಸ್ಸಿನಲ್ಲಿ ವಾಂತಿ ಆಗುತ್ತಿತ್ತು‌.ಆದರೆ ಆಗ ನಾನು ಚಿಕ್ಕ ಹುಡುಗಿ.ಯಾರೂ ನನ್ನ ಮೇಲೆ ಸಂಶಯದ ನೋಟ ಬೀರಿರಲಿಲ್ಲ.ಪಿಯುಸಿಗೆ ಹೋಗುವಾಗ ಬಸ್ಸಿನ ಪ್ರಯಾಣದಲ್ಲಿ ಕೆಲವೊಮ್ಮೆ ನನಗೆ ವಾಂತಿಯಾಗುತ್ತಿತ್ತು.ಇದನ್ನು ನೋಡಿದ ಕೆಲವು ನೆಂಟರು ನನ್ನ ತಾಯಿಯ ಬಳಿ ಏನೇನೋ ಹೇಳಿದ್ದರಂತೆ.ಆದರೆ ನನ್ನ ಅಮ್ಮನಿಗೆ ನನ್ನ ಬಗ್ಗೆ ಪೂರ್ಣ ವಿಶ್ವಾಸವಿತ್ತು.ಹಾಗಾಗಿ ಅಮ್ಮ  ತಲೆಕೆಡಿಸಿಕೊಳ್ಳಲಿಲ್ಲ.
ನಾನು ಸೆಕೆಂಡ್ ಪಿಯುಸಿಗೆ ಬರುವಷ್ಟರಲ್ಲಿ ದೊಡ್ಡಮ್ಮನ ಮಗಳು ತಂಗಿ ರಾಜು( ರಾಜೇಶ್ವರಿ,ಇವಳು ನನಗೆ ಒಳ್ಳೆಯ ಗೆಳತಿ ಕೂಡ ಆಗಿದ್ದಳು) ಅದೇ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರಿದಳು.ನಾವಿಬ್ಬರೂ ಅಜ್ಜನ ಮನೆಯಿಂದ ಕಾಲೇಜಿಗೆ ಹೋಗಿ ಬರಲಾರಂಭಿಸಿದೆವು. ಈಗ ನಾನು ಬಸ್ಸಿನ ಪಯಣಕ್ಕೆ ಹೊಂದಿಕೊಂಡಿದ್ದೆ .ಆದರೂ ಯಾವಾಗಾದರೊಮ್ಮೆ ಬಸ್ಸಿನಲ್ಲಿ ವಾಂತಿ ಆಗುತ್ತಿತ್ತು.( ಈಗಲೂ ದೂರದ ಬಸ್ ಪಯಣ ನನಗೆ ಹಿಡಿಸುವುದಿಲ್ಲ ,ಅದರಲ್ಲೂ ಬೆಂಗಳೂರಿನಿಂದ ಮಂಗಳೂರು ಬಸ್ಸಿನಲ್ಲಿ ಹೋಗುವುದೆಂದರಡ ಬಹಳ ಹಿಂಸೆಯಾಗುತ್ತದೆ.ಎರಡೆರಡು ಎಮಿಸೆಟ್ ಮಾತ್ರೆಗಳನ್ನು ತೆಗೆದುಕೊಂಡರೂ ಘಟ್ಟ ಹತ್ತಿ ಇಳಿಯುವಾಗ ವಾಂತಿ ಆಗುತ್ತದೆ .ಹಾಗಾಗಿ ನಾನು ಸಾಮಾನ್ಯವಾಗಿ ರೈಲಿನಲ್ಲಿ ಓಡಾಡುತ್ತೇನೆ.ತೀರಾ ಅನಿವಾರ್ಯವಾದರೆ ವಿಮಾನವನ್ನು ಆಶ್ರತಿಸುತ್ತೇನೆಯೇ ಹೊರತು ದೂರದೂರಿಗೆ ಬಸ್ಸಿನಲ್ಲಿ ಪ್ರಯಾಣಿಸುವುದಿಲ್ಲ)
ಒಂದು ದಿನ ಬಸ್ಸಿನಲ್ಲಿ ವಾಂತಿ ಆರಂಭವಾದದ್ದು ಮನೆಗೆ ಬಂದ ಮೇಲೂ ಮುಂದುವರಿಯಿತು ‌.ಅಜ್ಜಿ ಮಾಡಿ ಕೊಟ್ಟ ಓಮದ ಕಷಾಯ ಮತ್ತಿತರ ಮನೆ ಮದ್ದಿಗೂ ನಿಲ್ಲಲಿಲ್ಲ. ಆಗ ಒಬ್ಬ ನೆಂಟರು ವಿದ್ಯಾ ( ನನ್ನ ಮನೆಯಲ್ಲಿ ಕರೆಯುವ ಹೆಸರು ) ಬಸುರಿ ತರ ವಾಂತಿ ಮಾಡುತ್ತಾಳೆ ಎಂದು ನನ್ನ ಎದರೇ ಹೇಳಿದರು‌.ಆಗಲೂ ನನಗೆ ಅವರ ಕುಹಕದ ಮಾತು ಅರ್ಥವಾಗಿರಲಿಲ್ಲ. ಆದರೆ ಅದನ್ನು ಕೇಳಿಸಿಕೊಂಡ   ನನ್ನ ಅಜ್ಜಿ ಡಾಕ್ಟರ್ ಹತ್ತಿರ ತೋರಿಸಲು ಹೇಳಿದರು‌.ನಮ್ಮ ಕುಟುಂಬದ ಡಾಕ್ಟರ್ ಬಳಿಗೆ ದೊಡ್ಡಮ್ಮನ ಮಗ ಅಣ್ಣನ ಜೊತೆಗೆ ಹೋದೆ‌.ಆಗ ಪರೀಕ್ಷಿಸಿದ ಡಾಕ್ಟರ್ ಏನೋ ಒಂದು ಕುಹಕದ ನಗು ( ಅವರು ಸಹಜವಾಗಿಯೇ ನಕ್ಕದ್ದು ನನಗೆ ಹಾಗನಿಸಿತೇನೋ ಗೊತ್ತಿಲ್ಲ) ಬೀರಿ ಒಂದು ಔಷದದ  ( Heparil ಎಂದೇನೋ ಬರೆದಿದ್ದ ನೆನಪು )  ಬಾಟಲ್ ನೀಡಿ ದಿನಕ್ಕೆ ಎರಡು ಹೊತ್ತು ಎರಡೆರಡು ಚಮಚ ನೀರಿಗೆ ಬೆರೆಸಿ ಕುಡಿಯಲು ಹೇಳಿದರು‌.ಆ ಮೇಲೆ ಅಣ್ಣನ ಹತ್ತಿರ ಏನೋ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದರಂತೆ.
ಅಣ್ಣ ಬಂದು ಅದನ್ನು ಮನೆಯಲ್ಲಿ ಹೇಳಿದ. ಅಜ್ಜನ ಮನೆ ಮಂದಿ ಅದನ್ನು ಇನ್ನೇನೋ ಅರ್ಥೈಸಿಕೊಂಡರು.
ನನ್ನ ಅಜ್ಜಿ ಅಮ್ಮನಲ್ಲಿ " ಅವಳು ಕಾಲೇಜಿಗಂತ ಹೋಗಿ  ಏನು ಮಾಡಿಕೊಂಡಿದಾಳೋ ಏನೋ? ಎಂದು ಗಾಭರಿಯಲ್ಲಿ ನುಡಿದರಂತೆ.ಆಗ ಅಮ್ಮ ನಿರ್ಧಾರಾತ್ಮಕವಾಗಿ ಇಲ್ಲ ವಿದ್ಯಾ ಅಂತಹವಳಲ್ಲ.ಅವಳು ಕಳೆದ ವಾರ ಹೊರಗೆ ಕುಳಿತಿದ್ದಾಳೆ( ಪೀರಿಯಡ್ ಆಗುವುದನ್ನು ಹೆರ ಕೂಪದು,/ ಹೊರಗೆ ಕುಳಿತುಕೊಳ್ಳುವುದು ಎಂದು ನಮ್ಮ ಭಾಷೆಯಲ್ಲಿ ಹೇಳುತ್ತಾರೆ) ಎಂದು ಹೇಳಿದರು. ಆಗ ಅಜ್ಜಿ ಅವಳು ಸುಮ್ಮನೇ ಹೊರಗೆ ಕುಳಿತ ನಾಟಕ ಮಾಡಿರಬಹುದಲ್ಲ ಎಂದು ಕೇಳಿದರಂತೆ.
ಇರೋದೊಂದು ಸಣ್ಣ ಮನೆ‌.ಪ್ಯಾಡ್ ಗೀಡ್ ಎಂದರೆ ಏನೆಂದೇ ಗೊತ್ತಿಲ್ಲದ ಕಾಲ.ಎಷ್ಟೇ ತೊಳೆದರೂ ಕಲೆ ಉಳಿಯುವ ಒಂದಿನಿತು ವಾಸನೆ ಬರುವ ಒದ್ದೆ  ಬಟ್ಟೆಯನ್ನು ಒಣಗಿಸಲು ಕೂಡ ಸರಿಯಾದ ಜಾಗವಿಲ್ಲ.ಹಾಗಾಗಿ ಮನೆಯ ಗೋಡೆಯ ಕತ್ತಲಿನ ಮೂಲೆಗೆ ಕಟ್ಟಿದ ಬಳ್ಳಿಗೆ ನೇತು ಹಾಕುವುದೊಂದೇ ದಾರಿ ಉಳಿದಿರುವುದು.ಹಾಗಾಗಿ ಅದನ್ನು ಅಮ್ಮ ನೋಡಿರುವುದು ಸಾಮಾನ್ಯ ವಿಚಾರ‌.ಆ ತಿಂಗಳು ಕೂಡ ಅದನ್ನು ನೋಡಿದ್ದ ಅಮ್ಮ"  ಇಲ್ಲ ಅವಳ ಬಟ್ಟೆಗೆ ಕಲೆ ಆಗಿದ್ದು ಕೂಡ ನಾನು ನೋಡಿದ್ದೇನೆ.ಅವಳ ಆರೋಗ್ಯ ಏನೋ ಹಾಳಾಗಿರಬೇಕು.ಅಜೀರ್ಣ ಆಗಿರಬೇಕು ಎಂದು ದೃಢವಾಗಿ ಹೇಳಿದರು.ನಂತರ ಅಜೀರ್ಣಕ್ಕೆ ಕೊಡುವ ಮನೆ ಮದ್ದು ನೀಡಿದರು.ಅರವಿಂದಾಸವವನ್ನು ಎರಡು ಹೊತ್ತು ಎರಡೆರಡು ಚಮಚ ಒಂದು ವಾರ ಕುಡಿಯಲು ಹೇಳಿದರು‌.ನನ್ನ ವಾಂತಿಯ ಸಮಸ್ಯೆ ದೂರವಾಯಿತು‌.ಕ್ರಮೇಣ ಬಸ್ಸು ಪ್ರಯಾಣ ಅಭ್ಯಾಸವಾಗಿ ಬಸ್ಸಿನಲ್ಲಿ ವಾಂತಿ ಆಗುವುದು ಕೂಡ ನಿಂತಿತು‌.
ಇಷ್ಟೆಲ್ಲಾ ಹಿಂದಿನಿಂದ ಅಮ್ಮನಿಗೆ ಅನೇಕರು ಹೇಳಿದರೂ ಕೂಡ ಅಮ್ಮ ನನ್ನ ಮೇಲಿನ ನಂಬಿಕೆ ಕಳೆದುಕೊಳ್ಳಲಿಲ್ಲ.ನನ್ನನ್ನು ಹಿಂದಿನಿಂದ ಕುಹಕದಿಂದ ಅಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕೂಡ ನನಗೆ ತಿಳಿಸಲಿಲ್ಲ.ಸದಾ ಓದಿನ ಕಡೆ ಗಮನ ಕೊಡು ,ಒಳ್ಳೆಯ ಮಾರ್ಕ್ಸ್ ತೆಗೆದು ದೊಡ್ಡ ಕೆಲಸಕ್ಕೆ ಹೋಗಬೇಕು ಎಂದು ಹುರಿದುಂಬಿಸುತ್ತಾ ಇದ್ದರು‌.ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಹೇಳಿ ಆಗಾಗ ಎಚ್ಚರಿಕೆ ನೀಡುತ್ತಾ ಇದ್ದರು‌.ಅಮ್ಮನ ನಂಬಿಕೆಯನ್ನು ನಾನು ಹಾಳು ಮಾಡಲಿಲ್ಲ ಕೂಡ ‌.
ಇದೆಲ್ಲವನ್ನೂ ನನ್ನ ಮದುವೆಯ ನಂತರ ಯಾವಾಗಲೋ ಮಾತಿನ ನಡುವೆ ಅಮ್ಮ ನನಗೆ ತಿಳಿಸಿದ್ದರು‌.
ಸರಿ,ನಾನು ಪಿಯುಸಿಗೆ ಹೋದದ್ದು 1988-89 ರಲ್ಲಿ. ಇದಾಗಿ ಮೂರು ದಶಕಗಳೇ ಕಳೆದಿವೆ‌.ಆದರೆ ವಾಂತಿ ಮಾಡಿದರೆ ಹುಡುಗಿಯರನ್ನು ಸಂಶಯದಿಂದ ನೋಡುವ ಸಮಾಜದ ರೀತಿ ಇನ್ನೂ ಬದಲಾಗಿಲ್ಲ ಎಂದು ನಿನ್ನೆ ಅರಿವಾಯಿತು ನನಗೆ‌.ಹುಡುಗಿಯರಿಗೆ ವಾಂತಿ ಕೂಡ ಬರುವಂತಿಲ್ಲವೇ ? ಈ ಸಮಾಜ ಯಾವಾಗ ಬದಲಾಗುತ್ತದೆ ? ನನಗಂತೂ ಗೊತ್ತಾಗುತ್ತಿಲ್ಲ.
© ಡಾ.ಲಕ್ಷ್ಮೀ ಜಿ ಪ್ರಸಾದ

3 comments:

  1. Very Happy to know that you are also from our Govt College, Mangalore. But also I was at the cusp of Government college to University College ie. I was in the first batch of the University college :) Happy to ready your blog. Keep writing...

    ReplyDelete
    Replies
    1. ಧನ್ಯವಾದಗಳು

      Delete
    2. ನೀವು ಕೂಡ ಅಲ್ಲಿಯ ಹಳೆಯ ವಿದ್ಯಾರ್ಥಿ ಎಂದು ತಿಳಿದು ಸಂತಸವಾಯಿತು,ಬ್ಲಾಗ್ ಓದಿ ಅಭಿಪ್ರಾಯಿಸಿದ್ದಕ್ಕಾಗಿ ಧನ್ಯವಾದಗಳು

      Delete