Sunday 18 June 2017

ನಾನು ಅಳುವುದನ್ನು ಮರೆತು ನೋಡುತ್ತಾ ನಿಂತಿದ್ದೆ- -ಡಾ.ಲಕ್ಮೀ ಜಿ ಪ್ರಸಾದ

ಧೋ ಎಂದು ಮಳೆ ಸುರಿಯುವ ಸದ್ದಿಗೆ ಗಾಢ ನಿದ್ರೆ ಆವರಿಸಿತ್ತು. ನಿರಂತರವಾಗಿ  ಮೊಬೈಲ್‌ ಪೋನ್ ರಿಂಗಾಗುತ್ತಾ ಇತ್ತು.ಕೊನೆಗೂ ಹೇಗೋ ಕಣ್ಣು ತೆರೆದು ಕರೆ ಸ್ವೀಕರಿಸಿದೆ.ಆ ಕಡೆಯಿಂದ ಅಕ್ಕನ ಧ್ವನಿ ಕೇಳಿಸಿತು.ನಡುರಾತ್ರಿ ಒಂದೂವರೆ ಗಂಟೆಗೆ ಅಕ್ಕ ಫೋನ್ ನೋಡಿ ಮೊದಲೇ ದುರಂತದ ಸೂಚನೆ ಸಿಕ್ಕಿ ಮನಸು ಅಳುಕಿತ್ತು.ತಂದೆಗೆ ಸೀರಿಯಸ್ ನೀನು ಆದಷ್ಟು ಬೇಗ ಮನೆಗೆ ಬಾ ಎಂದು ಹೇಳಿ ಅಕ್ಕ ಫೋನ್ ಕತ್ತರಿಸಿದಳು.ಅವಳ ಧ್ವನಿ ನಡುಗುತ್ತಾ ಇತ್ತು ಅದರಿಂದಲೇ ತಂದೆಯವರು ಬದುಕಿರಲಾರರು ಎಂದು ಅನಿಸಿತು.ಆದರೂ ಒಂದು ದೂರದ ಆಸೆಯಿಂದ ತಂದೆ ಮನೆಗೆ ಫೋನ್ ಮಾಡಿದೆ.ಪೋನೆತ್ತಿದ ಸೀಮಾ( ತಮ್ಮನ ಮಡದಿ) ತಂದೆಯವರನ್ನು ಆಸ್ಪತ್ರೆ ಯಿಂದ ಮನೆಗೆ ಕರೆ ತರುತ್ತಿದ್ದಾರೆ ಎಂದು ತಿಳಿಸಿದಾಗ ತಂದೆಯವರು ಇನ್ನಿಲ್ಲ ಎಂಬ ವಾಸ್ತವ ಅರಿವಾಗಿ ದುಃಖ ಉಮ್ಮಳಿಸಿ ಬಂತು.
ರಾತ್ರಿ ಹನ್ನೊಂದು ಗಂಟೆಗೆ ನಾನುಲಗುವ ಮೊದಲು ಮನೆಗೆ ಪೋನ್ ಮಾಡಿದ್ದೆ.ತಂದೆಯವರೇ ಫೋನ್ ಎತ್ತಿದ್ದರು.ಹೇಗಿದ್ದೀರಿ ? ಎಂದು ಕುಶಲ ವಿಚಾರಿಸಿದಾಗ ಆರಾಮಿದ್ದೇನೆ ಸ್ವಲ್ಪ ಧೂಳಿಗೆ ಕಫ ಆಗಿದೆ ಎಂದು ಹೇಳಿ ಉಪ್ಪರಿಗೆ ಮೇಲೆ ಟಿವಿನೋಡುತ್ತಿದ್ದ ಅಮ್ಮನನ್ನು ಕರೆದು ಪೋನ್ ನೀಡಿದ್ದರು.ಅಮ್ಮನ ಹತ್ತಿರ ಹತ್ತು ನಿಮಿಷ ಮಾತನಾಡಿ ನಾನು ಮಲಗಿದ್ದೆ.
ಅಮ್ಮ ಮಲಗಲೆಂದು ಬಾಗಿಲು ಹಾಕಿ ಚಾವಡಿಗೆ ಬರುವಾಗ ತಂದೆ ಕೆಮ್ಮುತ್ತಾ ಇದ್ದರು.ಆ ದಿನ ಅಡಿಕೆಯನ್ನು ಆಯುವ ಕೆಲಸ ಮಾಡಿದ ಕಾರಣ ಅಡಿಕೆ ಧೂಳಿಗೆ ಕೆಮ್ಮು ಬಂದಿದೆ ಎಂದು ತಿಳಿದು ಅಮ್ಮ ಕಫದ ಸಿರಪ್ ಅನ್ನು ನೀಡಿದರು ಕೆಮ್ಮು ಕಡಿಮೆಯಾಯಿತು.ಸ್ವಲ್ಪ ಉಸಿರು ಕಟ್ಟಿದ ಹಾಗೆ ಆಗುತ್ತದೆ ಎಂದು ಹೇಳಿದಾಗ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸಮಿಪದ ವೈದ್ಯರಾದ ಐಕೆ ಭಟ್ಟರ ಮನೆಗೆ ಹೊರಟ.ನಮ್ಮ ಮನೆ ಹಿಂಭಾಗದ ಸಣ್ಣ ಗುಡ್ಡೆ ಯ ದಾರಿಯಲ್ಲಿ ಕಾರು ಹತ್ತುತ್ತಿದ್ದಂತೆ ತಮ್ಮ ತಂದೆಯವರಲ್ಲಿ ಏನಾಗುತ್ತಿದೆ ಎಂದು ಕೇಳಿದಾಗ ಏನಾಗಿಲ್ಲ ಆರಾಮಿದ್ದೇನೆ ಎಂದು ತಿಳಿಸಿ ಕಾರಿನ ಹಿಂಭಾಗಕ್ಕೆ ಒರಗಿ ತಂದೆಯವರು ನಿದ್ರೆಗೆ ಜಾರಿದ್ದರು.ನಿದ್ರೆಯಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಪ್ಪತ್ತ ಮೂರು ವರ್ಷದ ಅವರ ನೋವು ನರಳಿಕೆಒಂದಿನಿತೂ ಇಲ್ಲದ ಸುಖಮರಣ ಅವರು ಬಾಳಿಮದ ಸರಳ ಪ್ರಾಮಾಣಿಕ ನಿಸ್ವಾರ್ಥ ಬದುಕಿಗೆ ಹಿಡಿದ ಕೈಗನ್ನಡಿಯಾಗಿತ್ತು.ಶರಣರಬಾಳನ್ನು ಮರಣದಲ್ಲಿ ನೋಡು ಎಂಬ ಗಾದೆಮಾತಿಗೆ ನಿದರ್ಶನವಾಗಿದ್ದರು ಅವರು.ಯಾರೊಬ್ಬರಿಗೂ ಒಂದಿನಿತು ನೋವು ಮಾಡಿದವರಲ್ಲ ಮೋಸ ವಂಚನೆ ಏನೆಂದೇ ತಿಳಿಯದ ಮುಗ್ದ ಸ್ವಭಾವ ಅವರದು.ಬಿಳಿಯಾದದ್ದೆಲ್ಲಾ ಹಾಲೆಂದು ನಂಬುವ ಅವರಿಗೆ ಅನೇಕರು ಮೋಸ ಮಾಡಿದ್ದರು. ಅವರಿಂದ ಸಹಾಯ ಪಡೆದವರೇ ಹಿಂದಿನಿಂದ ದ್ರೋಹ ಮಾಡಿದ್ದರೂ ಅವರನ್ನು ಉದಾರವಾಗಿಕ್ಷಮಿಸಿವರು ನನ್ನ ತಂದೆ.ಕಷ್ಟದಲ್ಲಿ ಇರುವರನ್ನು ಕಂಡರೆ ಅಪಾರ ಅನುಕಂಪ ತನಗಾದ ಸಹಾಯ ಮಾಡುತ್ತಿದ್ದರು.
 ಸ್ನೇಹಿತೆ ವಿದ್ಯಾ ಮತ್ತು ಅವರ ಪತಿಯ ಸಹಾಯದಿಂದ ಒಂದು ಕಾರನ್ನು ಬಾಡಿಗೆಗೆ ಹಿಡಿದು ಸುರಿವ ಮಳೆಯ ಕಾರ್ತ್ತಗಲಿನಲ್ಲಿ ಮಗನೊಂದಿಗೆ ಬೆಳ್ಳಾರೆಯಿಂದ ತಂದೆ ಮನೆ ಕೋಳ್ಯೂರಿಗೆ ಹೊರಟೆ.ದಾರಿಯಲ್ಲಿ ಅಕ್ಕ ಭಾವನನ್ನೂ ಹತ್ತಿಸಿಕೊಂಡು ಮನೆ ತಲುಪುವಾಗ ಬೆಳಗಿನಜಾವ ಐದೂವರೆ ಆಗಿತ್ತು. ಬೆಳಕು ಹರಿಯುವಮುನ್ನವೇ ಸುದ್ದಿ ತಿಳಿದು ಸಂಬಂಧಿಕರು ಊರವರು ತಂದೆಯ ಶಿಷ್ಯ ವರ್ಗದರು ಬಂದು ಸೇರಿದ್ದರು.
ನನ್ನ ತಂದೆ ವಾರಣಾಸಿ ನಾರಾಯಣ ಭಟ್ಟರು ಪುರೋಹಿತ ರಾಗಿದ್ದರು. ಹವ್ಯಕರಲ್ಲಿ ಪುರೋಹಿರಿಗೆ ಗುರುಗಳ ಸ್ಥಾನಮಾನವಿದೆ.ಆದ್ದರಿಂದ ತಂದೆಯವರಿಗೆ ಅಪಾರ ಶಿಷ್ಯವರ್ಗದವರು ಇದ್ದರುಅವರಲ್ಲಿ ಅನೇಕ ಮಂದಿ ಡಾಕ್ಟರ್ ಗಳು, ಇಂಜಿನಿಯರ್‌ಗಳು, ಬ್ಯುಸಿನೆಸ್‌ ಮ್ಯಾನ್ಗಳು ಹೀಗೆ ನಾನಾ ವೃತ್ತಿಯ ಹಿರಿ ಕಿರಿಯರುಇದ್ದರು..ನನ್ನ ತಂದೆಯವರನ್ನು ಕಿರಿಯರೆಲ್ಲರೂ ಭಟ್ಟಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನನ್ನ ತಂದೆಯ ಶಿಷ್ಯ ವರ್ಗದವರು ತಂದೆಯವರಿಗೆ ಮನೆ ಮಂದಿಯಂತೆ ಆತ್ಮೀಯ ರಾಗಿದ್ದರು. ತಂದೆಯ ಸರಳ ಮುಗ್ದ ವ್ಯಕ್ತಿತ್ವ ಎಲ್ಲರನ್ನೂ ಹತ್ತಿರ ತಂದಿತ್ತು.
ಮನೆ ಅಂಗಳಕ್ಕೆ ಕಾಲಿಡುತ್ತಲೇ ತಂದೆಯ ನೆನಪು ಬಂದು ದುಃಖ ಉಮ್ಮಳಿಸಿ ಬಂದು ಅಳುತ್ತಲೇ ಮನೆ ಒಳಗೆ ಪ್ರವೇಶ ಮಾಡಿದೆ.ತಂದೆಯ ಶಿಷ್ಯ ವರ್ಗದವರುತುಂಬಾ ಮಂದಿ ತಂದೆಯವರ ದೇಹದ  ಕಾಲಬದಿಯಲ್ಲಿ ಕುಳಿತು ಅಳುತ್ತಾ ಇದ್ದರು.ಅವರಲ್ಲಿ ಕೆಲವರು ಡಾಕ್ಟರ್ ಗಳೂ ಇದ್ದರು.ದಿನನಿತ್ಯ ಸಾವು ನೋವುಗಳನ್ನು ನೋಡುವ ದೊಡ್ಡ ದೊಡ್ಡ ಡಾಕ್ಟರ್ ಗಳೂ ಅಳುವಂತೆ ಮಾಡಿದ್ದ ನನ್ನ ತಂದೆಯ ಔನ್ನತ್ಯಕ್ಕೆ ಬೆರಗಾಗಿ ನಾನು ಅಳುವುದನ್ನು ಮರೆತು ಅವರೆಲ್ಲ ಅಳುವುದನ್ನು ನೋಡುತ್ತಾ ನಿಂತಿದ್ದೆ.
ನನ್ನ ತಂದೆಯವರು ಪುರೋಹಿತರಾಗಿದ್ದರೂ ನಮಗೆ ಮನೆಯಲ್ಲಿ ಯಾವುದೇ ಕಟ್ಟು ಕಟ್ಟಳೆವಿಧಿಸಿರಲಿಲ್ಲ.ನಮಗೆ ಬೇಕಾದುದನ್ನು ಓದುವವೇಷಭೂಷಣ ಧರಿಸುವ ಸ್ವಾತಂತ್ರ್ಯ ಇತ್ತು.ಜೀವನ ಇಡೀ ಮಕ್ಕಳ ಏಳಿಗೆಗಾಗಿ ದುಡಿದ ಅವರುಒಂದು ದಿನ ಕೂಡ ತಾನು ದುಡಿದು ತಂದು ಹಾಕಿದ್ದೇನೆ ತನ್ನ ದುಡ್ಡು ದುಡಿಮೆ ಎಂದು ಹೇಳಿಲ್ಲ.
ಮಕ್ಕಳು ಪ್ರಥಮ ಸ್ಥಾನ ಪಡೆಯಬೇಕು ಎಂದು ಅವರ ಆಸೆಯಾಗಿತ್ತು.
ಪ್ರತಿ ಸಲ ಮಾರ್ಕ್ಸ್ ಕಾರ್ಡ್ ಸಿಕ್ಕಿದಾಗ"ಫಸ್ಟಾ .?ಎಂದು ಕೇಳುತ್ತಿದ್ದರು. ಅಲ್ಲವೆಂದಾದರೂ ಬೈಯುತ್ತಿರಲಿಲ್ಲ  ಮಾತಾಡದೆ ಸಹಿಹಾಕಿಕೊಡುತ್ತಿದ್ದರು.ಮೊದಲ ಸ್ಥಾನ ಗಳಿಸಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು.ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರಾಂಕ್ ಗಳಿಸಿದಾಗ ಸ್ವರ್ಗ ಸಿಕ್ಕಂತೆ ಸಂಭ್ರಾಮಿಸಿದ್ದರು
ತೀರಾ ಕಷ್ಟ ಇದ್ದಾಗಲೂ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಓದಿಸಿದರು.ಹೆಚ್ಚಾಗಿ ಎಲ್ಲೆಡೆ ಬರಿಗಾಲಿನಲ್ಲಿ ನಡೆದುಕೊಂಡೇ ಹೋಗುತ್ತಿದ್ದರು.ಒಂದು ದಿನ‌ಕೂಡ ಹುಷಾರಿಲ್ಲವೆಂದು ಮಲಗಿರಲಿಲ್ಲ
ಸಾಯುವ ದಿನ ಕೂಡ ರಾತ್ರಿ ಹನ್ನೊಂದು ಗಂಟೆಯ ವರೆಗೆ ಅಡಿಕೆ ಆಯುವಕೆಲಸ ಮಾಡಿದ್ದರು.ಆರೋಗ್ಯ ವಾಗಿದ್ದ ಅವರು ಹೀಗೆ ಯಾವುದೇ ಸೂಚನೆ ಇಲ್ಲದೆ ಮರಣವಪ್ಪಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ.ಮಕ್ಕಳೆಲ್ಲ ಒಳ್ಳೆಯ ಕೆಲಸ ಹಿಡಿದು ಸಂಮೃದ್ದವಾಗಿದ್ದಾಗ ಅವರು ದೇವನೆಡೆಗೆ ಸದ್ದಿಲ್ಲದೆ ನಡೆದಿದ್ದರು.ದಿನನಿತ್ಯ ‌ಮಲಗುವ ಮೊದಲು ದೇವರಲ್ಲಿ ಅವರು ಅನಾಯಾಸೇನೆ ಮರಣಂ ವಿನಾ ದೈನ್ಯೇನ ಜೀವನಂ...ಅನಾಯಾಸವಾದ ಮರಣವನ್ನು ದೈನ್ಯ ರಹಿತವಾದ ಜೀವನವನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಇದ್ದರು .ದೇವರು ಅವರ ಪ್ರಾರ್ಥನೆ ಯನ್ನು ಮನ್ನಿಸಿ ಅದನ್ನು ಅವರಿಗೆ ಕರುಣಿಸಿದ್ದ.





Sunday 11 June 2017

ಮದುವೆಗೆ ಬೇಕಾದ ಹೂವಿನ ಹಾರ ನಾನೇ ತಂದಿದ್ದೆ © ಡಾ ಲಕ್ಷ್ಮೀ ಜಿ ಪ್ರಸಾದ




ಚಿತ್ರ ಕೃಪೆ:  ಕನ್ನಡ ಕನ್ನಡತಿ
ಅಂದು ೧೯೯೩ ರ ಪೆಬ್ರವರಿ ಹದಿಮೂರನೇ ತಾರೀಕು,ನಾನು ಮತ್ತು ಗೆಳತಿ ಅನುಪಮಾ ಉಜಿರೆ ( ಖ್ಯಾತ ಕಥಾಗಾರ್ತಿ ಅನುಪಮಾ  ಪ್ರಸಾದ್) ಜೊತೆ ಬೆಳಗ್ಗೆ ಸುಮಾರು ಏಳು ಗಂಟೆ ಹೊತ್ತಿಗೆ ಉಜಿರೆಯಿಂದ ಮಂಗಳೂರಿಗೆ ಹೋಗಲು  ಬಸ್ ಹತ್ತಿದ್ದೆ .ಮರು ದಿನ  ಹದಿನಾಲ್ಕನೇ ತಾರೀಕಿಗೆ  ನನ್ನ ಮದುವೆ.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಅಕ್ಕನ ಮದುವೆ ಆಗಿತ್ತು. ಅಣ್ಣ ದೂರದ ಕುಂಭಕೋಣಂ ನಲ್ಲಿ ಓದುತ್ತಾ ಇದ್ದಹಾಗಾಗಿ‌ ಮನೆಯಲ್ಲಿ ಹಿರಿಯಳಾಗಿ ನಾನೇ ಇದ್ದೆ. ತಮ್ಮಂದಿರು ಚಿಕ್ಕವರು .  ಹಾಗಾಗಿಮನೆಗೆ ಬೇಕಾದ ಸಾಮಾನುಗಳನ್ನು ತರುವುದು,ಬಟ್ಟೆ ಬರಹಗಳನ್ನು ತರುವುದು ಮೊದಲಾದ ವ್ಯವಹಾರವನ್ನು ಮಾಡಿ ಅನುಭವವಾಗಿತ್ತು.
 ವಾರದ ಮೊದಲು ಉಜಿರೆಯಲ್ಲಿ ದ್ವಿತೀಯ ವಿಜ್ಞಾನ ಪದವಿ ಓದುತ್ತಿದ್ದ ನಾನು ಊರಿಗೆ ನಾಂದಿಗಾಗಿ  ಬಂದಿದ್ದೆ . ( ಹವ್ಯಕರಲ್ಲಿ ಮದುಮಗ ಮತ್ತು ಮದುಮಗಳಿಗೆ ಮದುವೆ ದಿನ ಅಥವಾ ಅದಕ್ಕಿಂತ ಹಿಂದೆ ಹತ್ತು ದಿನಗಳ ಒಳಗೆ ಒಂದು ನಾಂದಿ ಎಂಬ ಶುಭಕಾರ್ಯವಿದೆ . ನಾಂದಿಯ ನಂತರ ಸೂತಕ ಬಂದರೆ ಮದುವೆ ತನಕ ತಂದೆ ತಾಯಿ ಮತ್ತು ಮದುಮಕ್ಕಳಿಗೆ ಸೂತಕ ತಾಗುವುದಿಲ್ಲ ) ಅದಕ್ಕೂ ಕೆಲ ದಿನಗಳ ಮೊದಲು ಮದುವೆಗೆ ಬೇಕಾದ ಚಿನ್ನವನ್ನು ಮಂಗಳೂರಿನ ಭಂಡಾರ್ಕರ್ ಮಳಿಗೆಗೆ ಹೋಗಿ ಮಾಡಿಸಲು ಹೇಳಿ ದುಡ್ಡು ಕೊಟ್ಟು ಬಂದಿದ್ದೆವು .
ಕಾಲೇಜಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದ ಕಾರಣ ರಜೆ ಹಾಕುವಂತಿರಲಿಲ್ಲ .ಹಾಗಾಗಿ ನಾಂದಿ ಮರುದಿನ ಉಜಿರೆಗೆ ಹೋಗಿದ್ದೆ.ಹನ್ನೆರಡನೇ ತಾರೀಖಿನಂದು ಕೊನೆಯ ಪೂರ್ವ ಸಿದ್ಧತಾ ಪರೀಕ್ಷೆ ಬರೆದು‌ ಮರುದಿನ ಎಂದರೆ ಮದುವೆ ಹಿಂದಿನ ದಿನ ಊರಿಗೆ ಬರುತ್ತೇನೆ ಎಂದು ಹೇಳಿದ್ದೆ.ಆಗ ಅಮ್ಮ ಊರಿಗೆ ಬರುವಾಗ ಮಂಗಳೂರಿಗೆ ಬಮದು ಭಂಡಾರ್ಕರ್ ಚಿನ್ನದ ಮಳಿಗೆಗೆ ಹೋಗಿ ಮಾಡಿಸಲು ಹಾಕಿದ ಒಡವೆಗಳನ್ನು ತಂದು ಬಿಡು ಎಂದು ಹೇಳಿದರು.ಜೊತೆಗೆ ಮರುದಿನ ಮದುವೆಗೆ ಬೇಕಾದ ಹೂವಿನ ಹಾರ,ಹೂ ಮೊದಲಾದವುಗಳನ್ನು ತರುತ್ತೇನೆ ಎಂದು ಒಪ್ಪಿ ಕೊಂಡೆ .
ಮಂಗಳೂರಿಗೆ ತಲುಪಿದಾಗ ಸುಮಾರು ಹತ್ತು ಗಂಟೆ ಆಗಿತ್ತು .ಮೊದಲಿಗೆ ಚಿನ್ನದ ಮಳಿಗೆಗೆ ಹೋದೆವು.ಅಲ್ಲಿ ಒಡವೆಗಳು ಇನ್ನೂ ಸಿದ್ಧವಾಗಿರಲಿಲ್ಲ.ಒಂದು ಗಂಟೆ ಬಿಟ್ಟು ಬನ್ನಿ ಎಂದು ಹೇಳಿದರು .ಸರಿ ಎಂದು ಅಲ್ಲಿಯೇ ಸಮೀಪದ ಹೂವಿನ ಮಾರುಕಟ್ಟೆಗೆ ಹೋದೆವು .ಅಲ್ಲಿ ಚರ್ಚೆ ಮಾಡಿ ಎರಡು ಹೂವಿನ ಹಾರ ಹಾಗೂ ಬೇಕಾದ ಇತರ ಬಿಡು ಹೂ,ಕಟ್ಟಿದ ಹೂವು,ಮಲ್ಲಿಗೆ,ಗುಲಾಬಿ ಸೇವಂತಿಗೆ ಗಳನ್ನು ಖರೀದಿಸಿ ಮತ್ತೆ ಚಿನ್ನದ ಮಳಿಗೆಗೆ ಬಂದೆವು .ಇಷ್ಟೆಲ್ಲಾ ಆಗುವಾಗ ಹನ್ನೊಂದೂವರೆ ಆಗಿತ್ತು. ಅಲ್ಲಿಂದ ಒಡವೆಗಳನ್ನು ತೆಗೆದುಕೊಂಡು ಲೇಡಿಗೋಷನ್ ಗೆ ಬಂದು ಬಸ್ ಹಿಡಿದು ತಲಪಾಡಿಗೆ ಬಂದು ಅಲ್ಲಿಂದ ನಮ್ಮ ಊರಿಗೆ ಹೋಗುವ ಬಸ್ ಹತ್ತಿದೆ.ಬಸ್ ನಲ್ಲಿ ಬಾಲ್ಯ ಸ್ನೇಹಿತೆ ಶೋಭಿತಾಳನ್ನು ನೋಡಿ ನಾಳೆ ನನ್ನ ಮದುವೆ ಬಾ ಎಂದು ಆಹ್ವಾನ ಪತ್ರಿಕೆ ನೀಡಿದೆ .ಮಂಗಳೂರಿನಲ್ಲಿ ಸುತ್ತಿ ಸುಸ್ತಾಗಿದ್ದ  ನನ್ನನ್ನು ಅಪನಂಬಿಕೆಯಿಂದ ನೋಡಿ ಏ ಸುಳ್ಳುಹೇಳಿ ತಮಾಷೆಮಾಡುತ್ತಿದ್ದೀಯ ? ಎಂದು ಕೇಳಿದಳು.ಸುಳ್ಳು ಹೇಳುತ್ತಾ ಇಲ್ಲ ಅದು ಸತ್ಯ ಎಂದು ಒಪ್ಪಿಸಲು ನಾನು ಹೆಣಗಾಡಬೇಕಾಯಿತು.  ಅವಳು ಸಾಮನ್ಯ ವೇಷ ಭೂಷಣ ದಲ್ಲಿದ್ದ ನನ್ನನ್ನು ಮದುಮಗಳು ಎಂದು ಅವಳು ಎಂದು ಭಾವಿಸಲು ಅವಳಿಗೆ ಕಷ್ಟಕರ ವಾಗಿತ್ತು .ಅಂತೂ ಇಂತು  ತಲುಪಿದಾಗ ಸಂಜೆ ಮೂರಾಗಿತ್ತು. ಗಂಟೆ ಮೂರಾದರೂ ಮದುಮಗಳು ಬಾರದ ಕಾರಣ ಮನೆಯಲ್ಲಿ ಗಡಿಬಿಡಿ ಆರಂಭವಾಗಿತ್ತು .ಅಣ್ಣನನ್ನು ಕಾರು ಮಾಡಿಕೊಂಡು ಉಜಿರೆಗೆ ಕಳಹಿಸಲು ಏರ್ಪಾಡು ಮಾಡುತ್ತಾ ಇದ್ದರು.ಅಷ್ಟರಲ್ಲಿ ನಾವು ತಲುಪಿದೆವು .ಎಲ್ಲರೂ ನಿರಾಳರಾದರು .ನಾವು ಊಟ ಮಾಡಿದೆವು.ಹತ್ತಿರದ ಬಂಧುಗಳು ಹಿಂದಿನ ದಿವಸವೇ ಬಂದಿದ್ದು ಪಟ್ಟಾಂಗ ಹೊಡೆದೆವು .ಹವ್ಯಕರಲ್ಲಿ ನಾಂದಿ ಬಿಟ್ಟರೆ ಮದುವೆಗೆ ಮೊದಲು ಯಾವುದೇ ಸಂಪ್ರದಾಯ ದ ಕಾರ್ಯಕ್ರಮ ಇರುವುದಿಲ್ಲ ಹಾಗಾಗಿ ನಾನು ಪೂರ್ವ ಸಿದ್ಧತಾ ಪರೀಕ್ಷೆ ಗಳನ್ನು ಬರೆದು ಮದುವೆ ಹಿಂದಿನ ದಿನ ಬಂದಿದ್ದೆ .ಇಂದು ಪೇಸ್ ಬುಕ್ ‌ನಲ್ಲಿ ಸ್ನೇಹಿತರೊಬ್ಬರು ಹೂವಿನ ಹಾರಕ್ಕಾಗಿ ಅಲೆದಾಡಿದ ಬಗ್ಗೆ ಬರೆದಿರುವುದನ್ನು ಓದಿದಾಗ ತಕ್ಷಣವೇ ನಾನೂ ಹೂವಿನ ಹಾರಕ್ಕಾಗಿ ಅಲೆದಾಡಿದ ವಿಚಾರ ನೆನಪಿಗೆ ಬಂತು 

Sunday 4 June 2017

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಅನೇಕರು ತಿಗಳಾರಿ/ ತುಳು ಲಿಪಿ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಮೆಸೆಂಜರ್ ಮೂಲಕ ಹೆಚ್ಚಿನ ವರಿಗೆ ಬ್ಲಾಗ್ ಲಿಂಕ್ ಓಪನ್ ಅಗುತ್ತಿಲ್ಲವಂತೆ ಹಾಗಾಗಿ ಬ್ಲಾಗ್ ಬರಹವನ್ನು ಕಾಪಿ ಮಾಡಿ ಹಾಕಿರುವೆ

ಎಂಥ ಅವಸ್ಥೆ .ಯಾರಿಗೆ ಹೇಳೋಣ .ಕೇಳೋರು ಯಾರು ?

ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಹೊರತು ಬೇರೆ ಬೇರೆಯಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವೆಬ್ ನಲ್ಲಿ ತುಳು ವರ್ಣ ಮಾಲೆಯಲ್ಲಿಯೇ ದೋಷಗಳು ಇಲ್ಲಿ ಇದು ತಿಗಳಾರಿ ಲಿಪಿ ಎಂದು ಹೊರಗಡೆ ಪ್ರಸಿದ್ಧವಾಗಿದೆ ತುಳುನಾಡಿನ ಕೆಲವೆಡೆ ತುಳು ಲಿಪಿ ಎಂದು ಕರೆಯುತ್ತಾರೆ ಎಂಬ ಸತ್ಯವನ್ನು  ಮುಚ್ಚಿಟ್ಡು ತುಳು ಲಿಪಿ ಎಂದು ಮಾತ್ರ ಹೇಳಲಾಗಿದೆ  .

ಅದಿರಲಿ ತಿಗಳಾರಿ ಅಥವಾ ತುಳು ವರ್ಣಮಾಲೆಯಲ್ಲಿ ಹ್ರಸ್ವ ಎ ಒ ಸ್ವರಗಳಿಲ್ಲ ಇಲ್ಲಿ ತಿಗಳಾರಿ / ತುಳು ಲಿಪಿ ಯಲ್ಲಿ ರುವ ದೀರ್ಘ ಏ ಓ ಗಳನ್ನು ಬರೆದು ಅದರ ಕೆಳಗಡೆ ಹ್ರಸ್ವ ಎ ಒ ಎಂದು ಕನ್ನಡ ದಲ್ಲಿ ಬರೆದಿದ್ದಾರೆ ಕಳೆದ ವರ್ಷ ಏಳೆಂಟು ಲಿಪಿ ತಜ್ಞರು ಬಂದು ಏನೋ ವಿಚಾರ ಮಾಡಿದ್ದಾರಂತೆ ಆದರೂ ತುಳು ಅಕಾಡೆಮಿ ವೆಬ್ ನಲ್ಲಿ ಆದ ಇಷ್ಟು ದೊಡ್ಡ ಪ್ರಮಾದವನ್ನೇ ತಿದ್ದಿಲ್ಲ ,ತುಳು ಲಿಪಿ/ ತಿಗಳಾರಿ ಲಿಪಿ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡಾ ಇಲ್ಲ ಇರುವ ವರ್ಣಮಾಲೆಯಲ್ಲಿ ಇಷ್ಟು ದೊಡ್ಡ ತಪ್ಪು ಯಾರಿಗೆ ಹೇಳೋಣ ? ರಿಜಿಸ್ಟ್ರಾರ್ ಗೆ ಈ ಬಗ್ಗೆ ಪೋನ್ ಮಾಡಿದರೆ ಬರೆದು ತಿಳಿಸಿ ಎಂಬ ಉತ್ತರ ಸಿಕ್ಕಿದೆ.
ಹಾಗಾಗಿ ಈ ಲಿಪಿ ಬಗ್ಗೆ ಮಾಹಿತಿ ಗೆ ಇಲ್ಲಿ ಓದಿ

ತುಳು ಭಾಷೆಯನ್ನು ಅಪಭ್ರಂಶಗೊಳಿಸಿ ವಿರೂಪ ಗೊಳಿಸಬೇಡಿ

ಭಾಷೆಯೊಂದಕ್ಕೆ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ ನಮ್ಮ ರಾಷ್ಟ್ರೀಯ ಭಾಷೆ ಹಿಂದಿ ಪ್ರಾಚೀನ ಭಾಷೆ ಸಂಸ್ಕೃತ ಜನಪ್ರಿಯ ಭಾಷೆ ಇಂಗ್ಲಿಷ್ ಗೂ ಸ್ವಂತ ‌ಲಿಪಿಯಿಲ್ಲ ಹಿಂದಿ ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ನಾಗರಿ ಲಿಪಿಯನ್ನು ಬಳಸುತ್ತಾರೆ ಇಂಗ್ಲಿಷ್ ಗೆ ರೋಮ್ ಲಿಪಿ ಬಳಸುತ್ತಾರೆ
ಈ ಹಿಂದೆ ಸಂಸ್ಕೃತ ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದು ಅದನ್ನು  ತುಳುನಾಡಿನಲ್ಲಿ ಯೂ ಸಂಸ್ಕೃತ ದ ವೇದ ಮಂತ್ರಗಳನ್ನು ಬರೆಯಲು  ತುಳುನಾಡಿನ ಹವ್ಯಕ ,ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬಳಕೆ ಮಾಡಿದ್ದಾರೆ  ಜೊತೆಗೆ ಉತ್ತರ ಕನ್ನಡದ ಶಿವಮೊಗ್ಗ ಕೆಳದಿ ತಮಿಳುನಾಡಿನ ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ತುಳು ಬ್ರಾಹ್ಮಣರು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದಾರೆ ಇದಕ್ಕೆ ಮೊದಲಿನಿಂದಲೂ ತಿಗಳಾರಿ ಲಿಪಿ ಎಂದು ಕರೆಯುತ್ತಾ ಇದ್ದರು ತುಳು ಲಿಪಿ ಎಂಬ ಹೆಸರೂ ಕೆಲವರು ಬಳಸಿದ್ದಾರೆ   ಆದರೆ ಪ್ರಸ್ತುತ  ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ  ಯಾಕೆಂದರೆ ಇದರಲ್ಲಿ ತುಳು ಭಾಷೆಯಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ಇದರಿಂದಾಗಿ ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿ/ ತುಳುಲಿಪಿ ಯನ್ನು ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ

ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಮಾತ್ರ ಬಳಕೆಗೆ ತಂದದ್ದಲ್ಲ ಹವ್ಯಕ ಚಿತ್ಪಾವನ ಕರಾಡ ಕೋಟ ಬ್ರಾಹ್ಮಣರು ಉತ್ತರ ಕನ್ನಡ ಶಿವಮೊಗ್ಗ ಕೆಳದಿಯ ಕನ್ನಡ ಬ್ರಾಹ್ಮಣರು,ಮೈಸೂರಿನ ಬೆಂಗಳೂರಿನ‌ಕೆಲವು ಬ್ರಾಹ್ಮಣ ಸಮುದಾಯಗಳು  ತಂಜಾವೂರು ಕಂಚಿಯ  ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ಧರ್ಮಸ್ಥಳ ದಲ್ಲಿ ಸಂಗ್ರಹವಾಗಿರುವ ಒಂದೂವರೆ ಸಾವಿರದಷ್ಟು ತಿಗಳಾರಿ / ತುಳು ಲಿಪಿ ಹಸ್ತಪ್ರತಿ ಗಳಲ್ಲಿ ಅನೇಕ ಹವ್ಯಕ ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬರೆದ ಅವರುಗಳ ಮನೆಯಲ್ಲಿ ಸಿಕ್ಕ ಹಸ್ತಪ್ರತಿ ಗಳಿವೆ ನಮ್ಮ ( ನಾವು ಹವ್ಯಕ ರು) ಮನೆಯಲ್ಲಿಯೂ ಅನೇಕ ತಿಗಳಾರಿ ಲಿಪಿ ಯ ಹಸ್ತಪ್ರತಿ ಗ್ರಂಥಳಿದ್ದು ಇವರಲ್ಲವು ಮಂತ್ರ ಪ್ರಯೋಗಗಳಾಗಿವೆ ಹವ್ಯಕರಲ್ಲಿ ಈ ಲಿಪಿಯಲ್ಲಿ ಹವ್ಯಕ ಭಾಷೆಯಲ್ಲಿ ಪತ್ರ ವ್ಯವಹಾರ ಕಡತ ನಿರ್ವಹಣೆಗಳಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಈ ಲಿಪಿಯಲ್ಲಿ ಬರೆದ ಹವ್ಯಕ ಕನ್ನಡ ದ ಪತ್ರಗಳು ನೂರಕ್ಕಿಂತ ಹೆಚ್ಚು ಇವೆ
ಇನ್ನು ಅದು ಬ್ರಾಹ್ಮಣರು ಬಳಕೆಗೆ ತಂದ ಲಿಪಿ ಎಂಬುದಕ್ಕೆ ಅದರಲ್ಲಿ ಸಿಕ್ಕ ಎಲ್ಲಾ ಕೃತಿಗಳನ್ನು ಬ್ರಾಹ್ಮಣರು ಬರೆದಿದ್ದು ಒಂದೇ ಒಂದು ಕೃತಿ ಬೇರೆಯವರು ಬರೆಯದಿರುವವುದು ಈಗಲೂ ಅದನ್ನು ಹೇಳಿಕೊಟ್ಟವರು ಬ್ರಾಹ್ಮಣರು ಎಂಬ ಆಧಾರವೇ ಸಾಕು
ಲಿಪಿ ರೂಪಿಸಲು ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅದನ್ನು ಯಾರು ಯಾಕೆ ಬಳಸಿದ್ದಾರೆ ಎಂಬುದು ಮುಖ್ಯ ವಾಗುತ್ತದೆ
ಇದರಲ್ಲಿ ತುಳು ಭಾಷೆಯ ಹ್ರಸ್ವ ಎಒ  ಇಲ್ಲ ಇದರಲ್ಲಿ  ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
ಅಲ್ಲದೆ ತುಳು ಭಾಷೆಯ ಏಳು ಕೃತಿಗಳು ಮಾತ್ರ ಆ ಲಿಪಿ ಯಲ್ಲಿ ಇರುವುದು ಅದರಲ್ಲಿ ಯೂ ಹ್ರಸ್ವ ಎ ಒ ಗಳು ಇಲ್ಲದ ಕಾರಣ ತುಂಬಾ ದೋಷಗಳಿವೆ ತುಳು ಕರ್ಣ ಪರ್ವ ವನ್ನು ಪುಣಿಚಿತ್ತಾಯ ರು ಈ ಹಿಂದೆ ನನಗೆ ಗೌರವ ಪ್ರತಿ ನೀಡಿದ್ದು ಅದರಲ್ಲಿ ಈ ದೋಷಗಳಿರುವುದನ್ನು ಅವರೂ ಹೇಳಿದ್ದಾರೆ
ಲಿಪಿಯೊಂದು ಇದ್ದಕ್ಕಿದ್ದಂತೆ ರೂಪು ಗೊಳ್ಳುವುದಿಲ್ಕ ಇದು ತಮಿಳಿನ ಗ್ರಂಥ ಲಿಪಿಯನ್ನು ಹೋಲುತ್ತಿದ್ದು ಅದರಿಂದ ರೂಪುಗೊಂಡಿದೆ ಗ್ರಂಥ ಲಿಪಿ ತುಳುನಾಡಿನಲ್ಲಿ ಇರಲಿಲ್ಲ ದಕ್ಷಿಣ ಭಾರತದ ್ಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ
ಅಲ್ಲಿನ ತಮಿಳು ಲಿಪಿಯಲ್ಲಿ ಮುವತ್ತಾರು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದಾ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ದ  ಬ್ರಾಹ್ಮಣ ರು ಅಲ್ಲಿನ ಗುರುಗಳಿಂದ ಗ್ರಂತ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು ನಂತರ ಕಾಲಾಂತರದಲ್ಲಿ ಅದು ಬದಲಾಗುತ್ತಾ ತಿಗಳಾರಿ ಲಿಪಿ ಆಯಿತು ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಲು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು
ಆದರೆ ಇದು ತುಲು ಭಾಷೆಯ ಲಿಪಿ ಅಲ್ಲ
ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ ಉತ್ತರದಲ್ಲಿ ನಾಗರಿ ಲಿಪಿ ತಮಿಳುನಾಡಿನಲ್ಲಿ ಗ್ರಂಥ ಲಿಪಿ ತೆಲುಗರು ತೆಲುಗು ಲಿಪಿ ಯನ್ನು ಸಂಸ್ಕೃತ ಕ್ಕೆ ಬಳಸುತ್ತಾ ಇದ್ದರು
ಅಕಾಡೆಮಿ ಗೆ ಹೇಳಿ ಲಿಪಿ ಯ ಇತಿಹಾಸವನ್ನು ತಿಳಿಸಿ ಪರಿಷ್ಕರಿಸಿ ಬಳಕೆಗೆ ತರುವ ಕೆಲಸ ಆಗಬೇಕಿದೆ ಅಕಾಡೆಮಿ ವೆಬ್ ಹಾಕಿದ ತುಳು ವರ್ಣ ಮಾಲೆ ಚಾರ್ಟ್ ನಲ್ಲಿ ತಪ್ಪಿದೆ ಹಾಗೆ ನೋಡಿದರೆ ವಿದ್ಯಾ ಶ್ರೀ ಅವರು ಪ್ರಕಟಿಸಿದ ವರ್ಣಮಾಲೆ ಸರಿ ಇದೆ .ತಪ್ಪನ್ನು ತಿದ್ದಿ ಪರಿಷ್ಕರಿಸದೆ ಬಳಸಿದರೆ ತುಳು ಭಾಷೆ ಅಪಭ್ರಂಶ ಗೊಂಡು ವಿರೂಪ ಗೊಳ್ಳುತ್ತದೆ

1 ತುಳುನಾಡಿನ ವ್ಯಾಪ್ತಿ ಉಡುಪಿ ಕಾಸರಗೋಡು ದ.ಕ ಜಿಲ್ಲೆ ತಿಗಳಾರಿ ಲಿಪಿ ತಮಿಳುನಾಡಿನ ತಂಜಾವೂರು ಕಂಚಿ ಧರ್ಮ ಪುರ ಕೃಷ್ಣ ಪುರ ಗಳಲ್ಲಿ ಬಳಕೆಇದೆ ಕರ್ನಾಟಕ ದಲ್ಲಿ ಉತ್ತರ ಕನ್ನಡ ಶಿವಮೊಗ್ಗ ಮಲೆನಾಡಿನಲ್ಲಿ ಬಳಕೆ ಇತ್ತು ತುಳು ಭಾಷೆ ಮತ್ತು  ತುಳುವರು ಇಲ್ಲದ ಕಡೆಯೂ ಬಳಕೆಯಲ್ಲಿತ್ತು

2, ಈ ಲಿಪಿಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಿಕ್ಕಿದ್ದು ಅವೆಲ್ಲವೂ ಸಂಸ್ಕೃತ ವೇದ ಮಂತ್ರಗಳಾಗಿವೆ  ಕೇವಲ ಏಳು‌ ತುಳು ಕೃತಿಗಳು ಮಾತ್ರ ಈ ಲಿಪಿಯಲ್ಲಿ ಇವೆ

3 ಇದು ತುಳು ಭಾಷೆಗೆ ಸೂಕ್ತ ವಾಗಿಲ್ಲ ಇದರಲ್ಲಿ  ತುಳುವಿನ ಎಲ್ಲ ಅಕ್ಷರಗಳು ಇಲ್ಲ ಇದರಲ್ಲಿ ತುಳುವಿನಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ತುಳುವಿನಲ್ಲಿ ಇಲ್ಲದೆ ಇರುವ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ

4 ಇದು ಸಂಸ್ಕೃತ ವನ್ನು ಬರೆಯಲು ರೂಪುಗೊಂಡ ಲಿಪಿಯಾಗಿದ್ದು ಸಂಸ್ಕೃತ ದ ಎಲ್ಲ ಅಕ್ಷರಗಳು ಇವೆ ಉದಾ ಸಂಸ್ಕೃತ ದಲ್ಲಿ ದೀರ್ಘ ಋ ಇದೆ ಇದರಲ್ಲೂ ಇದೆ ಲೃ ಅನ್ನುವ ವಿಶಿಷ್ಠವಾದ ಅಕ್ಷರ ಸಂಸ್ಕೃತ ದಲ್ಲಿದೆ ಇದರಲ್ಲೂ ಅದು ಇದೆ ಸಂಸ್ಕೃತ ದಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹಾಗಾಗಿ ಇದರಲ್ಲೂ ಇಲ್ಲ

5 ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಂಸ್ಕೃತ ದಲ್ಲಿವೆ ಅವುಗಳಲ್ಲಿ 99 .9% ಶೇಕಡ ವೇದ ಮಂತ್ರಗಳು

6 ಒಂದು ಲಿಪಿ ತನ್ನಿಂದ ತಾನೇ ಸೃಷ್ಟಿ ಯಾಗುವುದಿಲ್ಲ ಬಳಕೆಯಲ್ಲಿರುವ ಒಂದು ಲಿಪಿ ಬದಲಾಗುತ್ತಾ ಕಾಲಾಂತರದಲ್ಲಿ ಇನ್ನೊಂದು ಲಿಪಿ ಯಾಗುತ್ತದೆ ಮೂಲ ಲಿಪಿಗೂ ಹೊಸ ಲಿಪಿಗೂ 50- 60% ವ್ಯತ್ಯಾಸ ಉಂಟಾದಾಗ ಅದನ್ನು ಇನ್ನೊಂದು ಲಿಪಿಯಾಗಿ ಗುರುತಿಸುತ್ತಾರೆ ಆ ಲಿಪಿ ಬೆಳೆದ ಪರಿಸರದಲ್ಲಿ ಅದಕ್ಕೆ ಮೂಲವಾಗಿರುವ ಲಿಪಿ ಇರಲೇ ಬೇಕು ತಿಗಳಾರಿ ಲಿಪಿ ಗೆ ಮೂಲವಾದ ಆರ್ಯ ಎಳತ್ತು /ಗ್ರಂಥ ಲಿಪಿ ತಮಿಳುನಾಡಿನ ಪರಿಸರದಲ್ಲಿ ಪ್ರಚಲಿತವಿದೆ ತುಳುನಾಡಿನಲ್ಲಿ ಇಲ್ಲ

7 ತುಳು ಲಿಪಿಯನ್ನು ವಿದ್ಯಾ ಶ್ರೀ ಅವರಿಗೆ ಹೇಳಿಕೊಟ್ಟ ಲಿಪಿ ತಜ್ಞ ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ತಿಗಳಾರಿ ಎಂದು ಬರೆದುಬ್ರಾಕೆಟ್ ಒಳಗೆ ತುಳು ಲಿಪಿ ಎಂದು ಅಥವಾ ತುಳು ಲಿಪಿ ಎಂದು ಬರೆದು ಬ್ರಾಕೆಟ್ ಒಳಗೆ ತಿಗಳಾರಿ ಲಿಪಿ ಎಂದು ಬರೆಯಬೇಕು ಎಂದು ತಿಳಿಸಿದ್ದಾರೆ. (ಅವರು ಹೀಗೆ ಹೇಳಿದ ಬಗ್ಗೆ ದಾಖಲೆ ಇದೆ)ಆದರೆ ಇವರಿಂದ ಲಿಪಿ ಕಲಿತು ಪ್ರಚಾರ ಮಾಡುವ ತರಗತಿ ಮಾಡುವ ವಿದ್ಯಾ ಅವರು‌ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ ಜೊತೆಗೆ ಬ್ರಾಹ್ಮಣರು ತುಳು ಲಿಪಿಯನ್ನು ತಿಗಳಾರಿ ಎಂದು ಕರೆದು ಅಡಗಿಸಿ ಇಟ್ಟು ತುಳುವರಿಗೆ ಸಿಗದ ಹಾಗೆ ಮಾಡಿದರು ಎಂದು ಹೇಳುತ್ತಾ ಜನರಲ್ಲಿ ಬ್ರಾಹ್ಮಣ ದ್ವೇಷ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳುಗೆಡವುತ್ತಾ ಇದ್ದಾರೆ
8 ಲಿಪಿ ತಜ್ಞರಾದ ಡಾ .ಪದ್ಮನಾಭ ಕೇಕುಣ್ಣಾಯ ಅವರು ತುಳುವಿಗೆ ಲಿಪಿ ಇರುವುದಾದರೂ ಅದು ಮೂಲತ ತಿಗಳಾರಿ ಲಿಪಿ ಹೊರಗಡೆ ಅದು ತಿಗಳಾರಿ ಎಂದು ಪ್ರಸಿದ್ದಿ ಪಡೆದಿದೆ ಹಾಗಾಗಿ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ತುಳು ಲಿಪಿ ಎಂದು ಮೊದಲಿಗೆ ಗುರುತಿಸಿದ ಡಾ.ವೆಂಕಟ್ರಟಜ ಪುಣಿಚಿತ್ತಾಯರು ಕೂಡ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ಎಂದು ಅವರಿಗೆ ಆತ್ಮೀಯ ರಾಗಿದ್ದ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
9 ಲಿಪಿ ತಜ್ಞರಾದ ಡಾ.ಗೀತಾಚಾರ್ಯ ತುಳುವಿಗೆ ಲಿಪಿ ಇರಲಿಲ್ಲ, ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಯನ್ನು ತುಸು ಮಾರ್ಪಡಿಸಿ ತುಳು ಲಿಪಿ ರೂಪಿಸಿದರು ಎಂದು ಹೇಳಿದ್ದಾರೆ
10 ಲಿಪಿ ತಜ್ಞರಾದ ಡಾ.ಗುಂಡಾ ಜೋಯಿಸ್ ಕೆಳದಿ ವೆಂಕಟೇಶ ಜೋಯಿಸ್ ಡಾ.ಪಿವಿ ಕೃಷ್ಣ ಮೂರ್ತಿ ಮೊದಲಾದವರು ಅದು ತಿಗಳಾರಿ ಲಿಪಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ
11  ಇದರಲ್ಲಿ  ಉಳು ಭಾಷೆಯ ಹ್ರಸ್ವ ಎ ಒ ಗಳಿಗೆ ಅಕ್ಷರ ಇಲ್ಲ   ಸಂಸ್ಕೃತ ದಲ್ಲಿ ಮಾತ್ರ ಇರುವ ದೀರ್ಘ ಋ ಇದೆ ಅಲ್ಲದೆ ತುಳುವಿನ ವಿಶಿಷ್ಟ ಉಚ್ಚಾರಣೆ ಗಳಿಗೆ ರೇಖಾ ಸಂಕೇತ ಅಥವಾ ಅಕ್ಷರಗಳು ಇಲ್ಲ
12 ಪ್ರಸ್ತುತ ತಿಗಳಾರಿ ಲಿಪಿಯ ಸುಮಾರು ಹತ್ತು  ಸಾವಿರದ ಹಸ್ತ ಪ್ರತಿಗಳು ಸಿಕ್ಕಿದ್ದು ಇವುಗಳು ತಮಿಳುನಾಡಿನ  ತಂಜಾವೂರು, ಕಂಚಿ ,ಧರ್ಮಪುರಿ,ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ,,ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ಕೆಳದಿ ಮೊದಲಾದ ಕಡೆ ಸಿಕ್ಕಿದವುಗಳಾಗಿವೆ ಇವುಗಳಲ್ಲಿ ಏನಿದೆ ಎಂದು ತಿಗಳಾರಿ ಬಲ್ಲವರು ಓದಿದ್ದು .ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿಬರೆದ ವೇದ ಮಂತ್ರ ಪುರಾಣ ಕೃತಿಗಳು ಆಗಿವೆ ಎಂದು ತಿಳಿಸಿದ್ದಾರೆ
 13 ತುಳುನಾಡಿನಲ್ಲಿ ಸಿಕ್ಕ ಹಸ್ತ ಪ್ರತಿಗಳು ಸುಮಾರು ಒಂದೂವರೆ ಸಾವಿರ ಇವುಗಳನ್ನು ಕೂಡ ತೆರೆದು ಓದಿದ್ದು ಇವುಗಳಲ್ಲಿ ಏಳು ತುಳು ಭಾಷೆಯ ಕೃತಿಗಳು ,ಒಂದು ಕನ್ನಡ ಭಾಷೆಯ ಜನಪದ ಹಾಡುಗಳು ಬಿಟ್ಟರೆ ಉಳಿದವುಗಳೆಲ್ಲ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಎಂದು ಧರ್ಮಸ್ಥಳದ ಹಸ್ತ ಪ್ರತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾದ ಡಾ ವಿಘ್ನರಾಜ ಭಟ್ ತಿಳಿಸಿದ್ದಾರೆ
15 ತಿಗಳಾರಿ ಲಿಪಿ ತೀರ ಇತ್ತೀಚಿನ ವರೆಗೂ ಬಳಕೆಯಲ್ಲಿತ್ತು ಹಾಗಾಗಿ ಅದರಲ್ಲಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ಹಸ್ತಪ್ರತಿ ಗಳು ಲಭ್ಯವಾಗಿವೆ ಆದರೆ ತುಳು ಭಾಷೆಯ ಕೃತಿಗಳು ಲಭಿಸಿದ್ದು ಕೇವಲ ಏಳು
16 ತುಳುನಾಡಿನಲ್ಲಿ ಈ ಲಿಪಿಯ ಒಂದೂವರೆ ಸಾವಿರದಷ್ಟು ಸಂಸ್ಕೃತ ಹಸ್ತಪ್ರತಿ ಗ್ರಂಥಗಳು ಸಿಕ್ಕಿದೆ ಆದರೆ ತುಳುವಿನದ್ದು ಸಿಕ್ಕಿದ್ದು ಏಳು ಮಾತ್ರ ಒಂದೊಮ್ಮೆ ಇದು ತುಳು ಭಾಷೆ ಬರೆಯಲು ಬಳಕೆಗೆ ಇದ್ದಿದ್ದರೆ  ಲಿಪಿ ಆಗಿರುತ್ತಿದ್ದರೆ ಕೊನೆಯ ಪಕ್ಷ ತುಳುನಾಡಿನಲ್ಲಿ ಸಿಕ್ಕ ಹಸ್ತಪ್ರತಿ ಗಳಲ್ಲಿಯಾದರೂ ಹೆಚ್ಚಿನ ಕೃತಿಗಳು ತುಳುಭಾಷೆಯದು ಆಗಿರುತ್ತಿತ್ತು ,ತಿಗಳಾರಿ ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಕಾರಣ ತುಳುವಿನ  ಎಲ್ಲಾ ಹಸ್ತಪ್ರತಿ ಗಳು ಕಳೆದು ಹೋಗಿರುವ ಸಾಧ್ಯತೆ ಇಲ್ಲ ಹಾಗೆ ಕಳೆದು ಹೋಗುತ್ತಿದ್ದರೆ ಇದೇ ಲಿಪಿಯ ಲ್ಲಿ ಬರೆದ ಸಂಸ್ಕೃತ ವೇದ ಮಂತ್ರಗಳ ಹಸ್ತ ಪ್ರತಿಗಳು  ಕೂಡ ಉಳಿಯುತ್ತಿರಲಿಲ್ಲ ಹಾಗಾಗಿ  ಈ ಲಿಪಿಯಲ್ತುಲಿ ಳುಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆ ಆದದ್ದು ತೀರಾ ತೀರಾ ಕಡಿಮೆ  ಎಂದು ಹೇಳಬಹುದು .ಬನ್ನಂಜೆ ಗೋವಿಂದ ಆಚಾರ್ಯರು ತೌಳವ ಬ್ರಾಹ್ಮಣರು ಇದನ್ನು ಬಳಕೆಗೆ ತಂದ ಕಾರಣ ಇದಕ್ಕೆ  ತುಳು ಲಿಪಿ ಎಂದು ಹೆಸರು ಇದನ್ನು ಬೇರೆಕಡೆ ತಿಗಳಾರಿ ಎಂದು ಕರೆಯುತ್ತಾರೆ. ಇದು ತುಳು ಭಾಷೆಯ ಲಿಪಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

17 ಈ ಎಲ್ಲಾ ಆಧಾರಗಳು  ತಿಗಳಾರಿ ಮತ್ತು ತುಲು ಲಿಪಿ ಎರಡೂ ಒಂದೇ ಬೇರೆ ಬೇರೆಯಲ್ಲ  ಎಂದು ಪ್ರೂವ್ ಮಾಡುತ್ತವೆ ಇದು ಮೂಲತ ತಿಗಳಾರಿ ಲಿಪಿ ತುಳುನಾಡಿನ ಕೆಲವೆಡೆ ಮಾತ್ರ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ
18 "ತಿಗಳಾರಿ ಲಿಪಿ ಯನ್ನು ತಮಿಳು ನಾಡಿನ ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ‌ಮಾಡಲು ಹೋದ ತುಳುನಾಡು ಹಾಗೂ ಮಲೆನಾಡಿನ ಬ್ರಾಹ್ಮಣರು ಕಲಿತು ಬಳಕೆಗೆ ತಂದ ಕಾರಣ ಅದು ತುಳು ನಾಡು ಮಲೆನಾಡಿನ ಪರಿಸರದಲ್ಲಿಯೂ ಹರಡಿತು ,ತುಳುನಾಡಿನ ಕೆಲವೆಡೆ ಅದನ್ನು ತುಳು ಲಿಪಿ ಎಂದು ಕರೆದಿದ್ದಾರೆ "ಎಂದು ಡಾ ವಿಘ್ನರಾಜ ಭಟ್ ಡಾ ವೆಂಕಟೇಶ ಜೋಯಿಸ್ ಡಾ ಗುಂಡಾ ಜೋಯಿಸ್ ಡಾ ದೇವರ ಕೊಂಡಾ ರೆಡ್ಡಿ ಡಾ ಪದ್ಮನಾಭ ಕೇಕುಣ್ಣಾಯ ಡಾ ವೆಂಕಟ್ರಾಜ ಪುಣಿಚಿತ್ತಾಯ ,ಡಾ ಬನ್ನಂಜೆ ಗೋವಿಂದಾಚಾರ್ಯರ ಮೊದಲಾದ ಲಿಪಿ ತಜ್ಞರು, ವಿದ್ವಾಂಸರು ಅಭಿಪ್ರಾಯಪಡುತ್ತಾರೆ
19 ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದದ್ದು ಅಲ್ಲ ತುಳುನಾಡ ಹವ್ಯಕ ಬ್ರಾಹ್ಮಣರು ಕೋಟ ಕರಾಡ ಚಿತ್ಪಾವನ ಬ್ರಾಹ್ಮಣರು, ಶಿವಮೊಗ್ಗ ಉತ್ತರ ಕೆಳದಿ ಯ ಬ್ರಾಹ್ಮಣರು ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆ ಮಾಡುತ್ತಿದ್ದರು ತುಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಸಂಸ್ಕೃತ ಹಸ್ತ ಪ್ರತಿ ಗಳು ಈ ಲಿಪಿಯಲ್ಲಿ ಸಿಕ್ಕಿದ್ದು ಅದರಲ್ಲಿ ಹವ್ಯಕ ಕೋಟ ಚಿತ್ಪಾವನ ಕರಾಡ ಮರಾಠಿ ಬ್ರಾಹ್ಮಣರು ಬರೆದ ಕೃತಿಗಳು ಇವೆ ಇವುಗಳಲ್ಲಿ ತುಳುಭಾಷೆಯಲ್ಲಿ ಇರುವ ಕೃತಿಗಳು ಕೇವಲ ಏಳು ಮಾತ್ರ .ಈ ಲಿಪಿಯ ಹತ್ತ ಸಾವಿರಕ್ಕಿಂತ ಹೆಚ್ಚು ಹಸ್ತಪ್ರತಿ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಸಿಕ್ಕಿದ್ದು ಇವು ಶಿವಮೊಗ್ಗ ಕೆಳದಿ ರಾಮಚಂದ್ರಾಪುರ ಉತ್ತರ ಕರ್ನಾಟಕ ದ ತುಳುವೇತರ ಬ್ರಾಹ್ಮಣ ರ ಮನೆಯಲ್ಲಿ ಸಿಕ್ಕಿವೆ ಮೈಸೂರು ನಲ್ಲೂ ಬೆಂಗಳೂರಿನಲ್ಲಿ ತಮಿಳುನಾಡಿನ ತಂಜಾವೂರು  ಕಂಚಿ ಯ ತುಳುವರಲ್ಲದ ಇತರ ಬ್ರಾಹ್ಮಣರ ಮನೆಗಳು ಬರೆದಿರುವುದು ಸಿಕ್ಕಿವೆ. ಹವ್ಯಕ ಬ್ರಾಹ್ಮಣರು ಹವ್ಯಕರ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಇಂಥಹ ನೂರಕ್ಕಿಂತ ಹೆಚ್ಚಿನ ಪತ್ರಗಳಿವೆ ಹಾಗಾಗಿ ಇದನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದರು ಎನ್ನುವುದು ಸರಿಯಲ್ಲ

20 ವಿದ್ಯಾ ಶ್ರೀ ಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಬೇರೆ ಬೇರೆ ಎಂಬುದಕ್ಕೆ ಆಧಾರವಾಗಿ ದೇವರಾಜ ಸ್ವಾಮಿ ಅವರ ಕೃತಿಯಲ್ಲಿನ ತಿಗಳಾರಿ ಮತ್ತು ತುಳು ವರ್ಣಮಾಲೆ ಚಿತ್ರ ಚಿತ್ರವನ್ನು ಪೇಸ್ ಬುಕ್ ನಲ್ಲಿ ಹಾಕಿದ್ದು ಅದರಲ್ಲಿನ ತಿಗಳಾರಿ ಲಿಪಿಯನ್ನು ವಿದ್ಯಾ ಶ್ರೀ ಅವರು ಹೇಳಿಕೊಡುವ ಲಿಪಿ ಹೋಲುತ್ತದೆ ಹೊರತು ತುಳು ವರ್ಣ ಮಾಲೆಯಲ್ಲಿ ಇರುವ ಹಾಗೆ ಇಲ್ಲ ಅವರು ಅವರು ಹಾಕಿದ ತಿಗಳಾರಿ ಲಿಪಿ ಚಿತ್ರ ದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ   ದೀರ್ಘ ಋ ಇದೆ ವಿದ್ಯಾ ಅವರು ಹೇಳಿಕೊಡುವ ಲಿಪಿ ಯಲ್ಲೂ ಇದೆ ಅವರು ಪ್ರೂಫ್ ಗಾಗಿ ಹಾಕಿದ ತುಳು ವರ್ಣಮಾಲೆಯ ಲ್ಲಿ ದೀರ್ಘ ಋ ಇಲ್ಲ ಅದೇ ರೀತಿಯಲ್ಲಿ ವಿದ್ಯಾ ಶ್ರೀ ಹೇಳಿಕೊಡುವ ಎಲ್ಲಾ ಅಕ್ಷರಗಳು ಅವರೇ ಪ್ರೂಫ್ ಗಾಗಿ ನೀಡಿದ ತಿಗಳಾರಿ ಮತ್ತು ತುಳು ವರ್ಣಮಾಲೆ ಗಳಲ್ಲಿ ತಿಗಳಾರಿ ಲಿಪಿ ಯನ್ನು ಹೋಲುತ್ತವೆ ಇದನ್ನು ಕೇಳಿದಾಗ ನಮ್ಮ ಗುರುಗಳು ತುಳು ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರ ಗುರುಗಳಾದ ವಿಘ್ನರಾಜ ಭಟ್ ತಿಗಳಾರಿ ಲಿಪಿ ಮತ್ತು ತುಳು ಎರಡೂ ಒಂದು ಎಂದು ಹೇಳಿದ್ದಾರೆ ಆದರೆ ಇವರು ತಿಗಳಾರಿ ಮತ್ತು ತುಳು ಬೇರೆ ಎಂದು ಹೇಳುತ್ತಿದ್ದಾರೆ
ಇವರು ಹೇಳಿಕೊಡುವ ಲಿಪಿ ತುಳ ವರ್ಣಮಾಲೆ ಬದಲಿಗೆ ತಿಗಳಾರಿ ಲಿಪಿ ಯಂತೆ ಇದೆ ಎಂದಾಗ ಗುರುಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಲಿಪಿಯನ್ನು ಯಾರು ಕೂಡ ಬಳಕೆ ಮಾಡಬಹುದು ಆದರೆ  ಅದು ತಿಗಳಾರಿ ಲಿಪಿ ಎಂಬ ಸತ್ಯವನ್ನು ಮುಚ್ಚಿಟ್ಟು ಅದು ತುಳು ಭಾಷೆಯ ಸ್ವಂತ ಲಿಪಿ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಮತ್ತು ಅದನ್ನು ತುಳು ಭಾಷೆಗೆ ಸೂಕ್ತ ವಾ್ಉವಂತೆ ಪರಿಷ್ಕರಿಸದೆ ಇದ್ದ ಹಾಗೆ ಬಳಸಿ ತುಳು ಭಾಷೆಯನ್ನು ಅಪಭ್ರಂಶ ಗೊಳಿಸುವುದು ಸರಿಯಲ್ಲ  ©ಡಾ.ಲಕ್ಷ್ಮೀ ಜಿ ಪ್ರಸಾದ,ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

(ಲಿಪಿ ತಜ್ಞರಾದ ಜಮದಗ್ನಿ ಅಗ್ನಿ ಹೋತ್ರಿಯವರು ಇದು ತಿಗಳಾರಿ ಲಿಪಿ ಎಂದು ತಿಳಿಸಿ ,ವಿದ್ಯಾ ಅವರು ಹೇಳಿಕೊಡುತ್ತಾ ಇರುವ ತಿಗಳಾರಿ (ತುಳು) ಲಿಪಿಯಲ್ಲಿ ಅನೇಕ ದೋಷಗಳು ಇರುವುದನ್ನು ಗಮನಿಸಿ ಪೇಸ್ ಬುಕ್ ಮೂಲಕ  ವಿದ್ಯಾ ಅವರಿಗೆ  ನೀಡಿದ ಸೂಚನೆಗಳು--


Vidya Shree S Shetty ನಾವು ದಕ್ಷಿಣ ಕನ್ನಡದವರಲ್ಲ ,ತುಳು ಬರುವುದಿಲ್ಲ .ಲಿಪಿಯ ದೃಷ್ಟಿಯಿಂದ ಸಲಹೆಗಳನ್ನು ಕೊಡಬಲ್ಲೆ. ನೀವು ಪ್ರಸ್ತುತ ಹೇಗೆ ಕಲಿಸುತ್ತಿದ್ದೀರೋ ನನಗೆ ತಿಳಿಯದು. ನೀವು ಕಲಿಸುವ chart ಕೊಟ್ಟರೆ ಸಲಹೆ ನೀಡಬಲ್ಲೆ.ಉಕಾರ,ಉಕಾರದ ಕಾಗುಣಿತಕ್ಕೆ special forms ಇದೆ.ಕು,ಗು,ಜು ಇತ್ಯಾದಿಗಳಿಗೆ circle ಕೆಳಗೆ ಬರೆಯಬಾರದು. ಕೆಲವು ಅಕ್ಷರಗಳಾದ ಐ,ಖ,ಙ,ಞ,ಛ,ಟ,ಝ ಇತ್ಯಾದಿಯಲ್ಲಿ ಮಾರ್ಪಾಡು ಬೇಕು. ಇಲ್ಲಿ ಸಂಯುಕ್ತಾಕ್ಷರ ಕನ್ನಡದಂತೆ ಬರೆಯುವುದಿಲ್ಲ. ಎರಡೂ ಒಂದೇ size ಇರಬೇಕು,ಚಿಕ್ಕದು ದೊಡ್ಡದು ಇರಬಾರದು.ಯ,ರ,ಲ,ವ,ಮ ಇವುಗಳಿಗೆ ಸ್ಪೇಸಿಯಲ್ ರೂಪಗಳು ಇವೆ, ವ್ಯಂಜನಕ್ಕೆ ಜೋಡಿಸಿ ಬರೆಯಬೇಕು ಬಿಡಿಸಿ ಬರೆಯಬಾರದು,ಸಾಮಾನ್ಯದ ತರಹ ಬರೆಯಬಾರದು. ವ್ಯಂಜನದ ಹಿಂದೆ ಅನುಸ್ವಾರ ಬಳಸುವುದಿಲ್ಲ,ಮಲಯಾಳದಂತೆ ಅಂದ ಬದಲು ಅನ್ದ ಎಂದೇ ಬರೆಯುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಪ್ರತ್ಯೇಕ ಅಂಕಿಗಳು ಇಲ್ಲ,ಕನ್ನಡ ಸಂಖ್ಯೆಗಳನ್ನೇ ಬಳಸುತ್ತಾರೆ. ಪ್ರತ್ಯೇಕ ಸಂಖ್ಯೆ ಎನ್ನುವ ಹಸ್ತಪ್ರತಿಗಳ ಲಿಪಿ ಮಲಯಾಳ ಲಿಪಿ. ವ್ಯಂಜನಗಳ ಸಂಯುಕ್ತಾಕ್ಷರ ಬಹಳ ಕ್ಲಿಷ್ಟ ಕನ್ನಡದಂತೆ ಸುಲಭವಲ್ಲ.ಕ್ಕ,ತ್ತ,ತ್ಕ,ದ್ಧ,ತ್ಮ,ಕ್ಷ ,ರ್ಯ,ರ್ವ,ಸ್ಥetc ಗಳಲ್ಲಿ ಎರಡು ಅಕ್ಷರಗಳನ್ನು ಹೊಂದಿಸಿ ಅಕ್ಷರ ಬರೆಯುತ್ತಾರೆ, ಕೆಳಗೆ ಸಾಮಾನ್ಯವಾಗಿ ಬರೆಯುವುದಿಲ್ಲ.ಇ ,ಈ,ಉ ಸ್ವಲ್ಪ ಬೇರೆ ತರಹ ಬರೆಯುತ್ತಾರೆ.ಟ್ ,ತ್ ,ಕ್ ,ನ್ ಇವುಗಳು ವಿಶಿಷ್ಟವಾಗಿ ಬರೆಯುತ್ತಾರೆ,ಹಲಂತವನ್ನು ಸಾಮನ್ಯವಾಗಿ ಹಾಕುವುದಿಲ್ಲ.ಹೀಗೆ ಅನೇಕ ಕಲಿಕೆಯಲ್ಲಿ ಬದಲಾವಣೆಗಳು ಆವಶ್ಯಕ.ನಿಮ್ಮ ಪತ್ರಿಕೆಯ font ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಲ್ಕೈದು ಹಸ್ತಪ್ರತಿಗಳನ್ನು ಗಮನಿಸಿದರೆ ಸರಿಯಾದ ರೂಪಗಳು ರೂಪಗಳು ಯಾವುವು ಎಂದು ನಮಗೆ ಗೊತ್ತಾಗುವುದು.ನಮ್ಮ ಉದ್ದೇಶ ಇಷ್ಟೇ ಜನರು ಸರಿಯಾಗಿ ಕಲಿಯಲಿ.)

Thursday 1 June 2017

ಬದುಕ ಬಂಡಿಯಲಿ 12 ಕಾಲೇಜಿನಲ್ಲಿ ಮೊದಲ ದಿನದ ಪೇಚಾಟ © ಡಾ ಲಕ್ಷ್ಮೀ ಜಿ ಪ್ರಸಾದ

ಮೂರು ದಶಕಗಳ ಹಿಂದೆ ನಮ್ಮ ಸಮಾಜದಲ್ಲಿ ಸ್ತ್ರೀ ಶಿಕ್ಷಣಕ್ಕೆ ಯಾವುದೇ ರೀತಿಯ ಪ್ರಾಧಾನ್ಯತೆ ಇರಲಿಲ್ಲ. ನಮ್ಮ ಹವ್ಯಕರಲ್ಲಿ ಅಂತೂ ಹುಡುಗಿಯರು ಓದುವುದು ನಿಷ್ಪ್ರಯೋಜಕ ಎಂದು ಹೇಳುವ ಬಗ್ಗೆ   ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ ಎಂಬ ಮಾತು ಪ್ರಚಲಿತವಿತ್ತು .ಹುಡುಗಿಯರು ಏನು ಓದಿದರೇನು ? ಒಲೆಉ ಬೂದಿ ಗೋರುವುದು ತಪ್ಪದು ಎಂದು ಈ ಮಾತಿನ ಅರ್ಥ.
ಹುಡುಗಿಯರು ಓದುವುದು ವ್ಯರ್ಥ .ಏನೇ ಓದಿದರೂ ಅವರು ಅಡುಗೆ ಮಾಡಲು ಲಾಯಕ್ಕು ಎಂಬ ರೀತಿಯ ಅವಜ್ಞೆ ಆ ಕಾಲದಲ್ಲಿ ಇತ್ತು.
ಆದರೂ ಆ ಕಾಲದಲ್ಲಿ ನನ್ನ ಅಮ್ಮ ನನ್ನ ಓದಿಗೆ ಬೆಂಬಲ ನೀಡಿದರು.ತನ್ನ ಮಗಳು ಓದಿ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದು ಅಮ್ಮನ ಆಶಯವಾಗಿತ್ತು.
ಆಗ ನಮಗೆ ಮಂಗಳೂರಿನಲ್ಲಿ ಕಾಲೇಜುಗಳು ಇರುವುದು ಗೊತ್ತಿತ್ತಾದರೂ ಸೈಂಟ್ ಅಲೋಶಿಯಸ್, ಕೆನರಾ,ಆಗ್ನೆಸ್ ಎಂಬ ಮೂರು ಪ್ರತಿಷ್ಠಿತ ಕಾಲೇಜುಗಳು ಬಿಟ್ಟರೆ ಉಳಿದವುಗಳ ಹೆಸರು ಕೂಡ ತಿಳಿದಿರಲಿಲ್ಲ .

ಫಲಿತಾಂಶಕ್ಕೆ ಮೊದಲೇ ನಾವು ಅರ್ಜಿ ತಂದಿರಿಸಬೇಕು ಇತ್ಯಾದಿ ಯಾಗಿ ಪ್ರವೇಶ ಪ್ರಕ್ರಿಯೆ ಬಗ್ಗೆ ಯೂ ತಿಳಿದಿರಲಿಲ್ಲ .ಹಾಗಾಗಿ ನನ್ನ ಫಲಿತಾಂಶ ಬರುವ ತನಕ ನಾವು ಯಾವುದೇ ಕಾಲೇಜಿನಿಂದ ಅರ್ಜಿ ತಂದು ಇಡಲಿಲ್ಲ.ಫಲಿತಾಂಶ ಬಂದ ತಕ್ಷಣವೇ ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅವರಲ್ಲಿ ಅರ್ಜಿ ತಂದು ಕೊಡಲು ಕೇಳಿದೆವು.ಅವರು ಮಂಗಳೂರು ಸರ್ಕಾರಿ ಕಾಲೇಜಿನ( ಈಗಿನ ವಿಶ್ವವಿದ್ಯಾಲಯ ಕಾಲೇಜು) ಅರ್ಜಿ ತಂದು ಕೊಟ್ಟರು .ಉಳಿದೆಲ್ಲ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಗಳು ಮುಗಿದಿದ್ದವು ( ಪ್ರವೇಶ ಪ್ರಕ್ರಿಯೆ ಗಳ ಬಗ್ಗೆ ಮುಂದೆ ಓದಬಹುದಾದ ಕೋರ್ಸ್ ಪದವಿಗಳ ಬಗ್ಗೆ ನಮಗೆ ನಾನು ಓದಿದ ಶಾಲೆಯ ಶಿಕ್ಷಕರು ಯಾವುದೇ ಒಂದು ರೀತಿಯ ಮಾಹಿತಿ ನೀಡಿರಲಿಲ್ಲ ಅದು ಯಾಕೆ ? ಈ ಹಳ್ಳಿ ಮಕ್ಕಳು ಓದಿ ಏನು ಉದ್ದಾರ ಆದಾರು ಎಂಬ ಉಪೇಕ್ಷೆ ಇತ್ತೇ ಅಥವಾ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲವೇ ? ನನಗೆ ಈ ಪ್ರಶ್ನೆ ಆಗಾಗ ಕಾಡುತ್ತದೆ)
ಆದರೂ ನಾನು ತಂದೆಯವರ ಜೊತೆ ಮಂಗಳೂರಿಗೆ ಹೋಗಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಒಂದು ಸೀಟು ಕೊಡುವಂತೆ ,ಓದಲು ಅವಕಾಶ ಕೊಡುವಂತೆ ವಿನಂತಿ ಮಾಡಿದೆವು.ಆಗ ಅಲ್ಲಿ ನನ್ನ ಮಾರ್ಕ್ಸ್ ನೋಡಿ ಇದು ಒಳ್ಳೆಯ ಮಾರ್ಕ್ಸ್ ಆದರೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಲ್ಲಿ ಇಂಗ್ಲಿಷ್ ಮೀಡಿಯಂ ನಲ್ಲಿ ಓದುವುದು ಕಷ್ಟ ಅಲ್ಲದೆ ಅಡ್ಮಿಶನ್ ಮುಗಿದಿದೆ ಎಂದು ಹೇಳಿದರು.
ಅದೇ ದಿನ ಸರ್ಕಾರಿ ಕಾಲೇಜಿನಲ್ಲಿ ನನಗೆ ಸೀಟ್ ಸಿಕ್ಕಿತು.
ಅದಾಗಿ ಹದಿನೈದು ದಿನಗಳ ನಂತರ ಕಾಲೇಜು ಆರಂಭ.ಮೊದಲ ದಿನ ಚಿಕ್ಕಪ್ಪನ ಮಗಳು ಅಕ್ಕ ಸಂಧ್ಯಾ ಜೊತೆ ಬಹಳ ಸಂಭ್ರಮದಿಂದ ಜೊತೆ ಕಾಲೇಜಿಗೆ ಹೊರಟೆ.ತಲಪ್ಪಾಡಿ ತಲುಪಿದಾಗ ಕರ್ನಾಟಕ ದಲ್ಲಿ ಯಾವುದೋ ಕಾರಣಕ್ಕೆ ಆ ದಿನ ಬಸ್ ಸ್ಟ್ರೈಕ್ ಹಾಗಾಗಿ ಅರ್ಧ ದಾರಿ ಹೋಗಿ ಹಿಂದೆ ಬಂದೆವು.ಮರು ದಿನ ಮಂಜೇಶ್ವರದಿಂದ ರೈಲು ಹತ್ತಿ ಹೋದೆವು .ಸಂಧ್ಯಾ ಅಕ್ಕ ನನ್ನನ್ನು ಮಂಗಳೂರು ಕಾಲೇಜಿಗೆ ಹೋಗುವವರ ಜೊತೆ ಸೇರಿಸಿ ಅವಳು ಓದುವ ಗಣಪತಿ ಕಾಲೇಜಿಗೆ ಹೋದಳು.ಮತ್ತು ಸಂಜೆ ಐದಯ ಗಂಟೆಗೆ ರೈಲು ಇದೆ ಅದಕ್ಕೆ ಬಾ ಎಂದು ಹೇಳಿದಳು.

ಅಂತೂ ಕಾಲೇಜು ತಲುಪಿದೆ.ಮೊದಲ ಎರಡು ಅವಧಿ ಯಾರೂ ಕ್ಲಾಸ್ ತೆಗೆದುಕೊಳ್ಳಲಿಲ್ಲ ಮಧ್ಯಾಹ್ನ ಮೇಲೆ ಮೂವರು ತರಗತಿ ತೆಗೆದುಕೊಂಡರು .ನಮ್ಮ ತರಗತಿಯಲ್ಲಿ ಇದ್ದವರೆಲ್ಲ ಕನ್ನಡ ಮಾಧ್ಯಮ ದಲ್ಲಿ ಓದಿದವರು.ಆದರೂ ಒಂದಕ್ಷರ ಕನ್ನಡ ದಲ್ಲಿ ಯಾವುದೇ ಒಬ್ಬ ಉಪ‌್ಯಾಸಕರು ಮಾತಾಡಲಿಲ್ಲ .ಇಂಗ್ಲಿಷ್ ತರಗತಿ ತೆಗೆದು ಕೊಂಡ ಓರ್ವ ಉಪನ್ಯಾಸಕಿ " ಏನೋ ಒಂದಷ್ಟು ಹೇಳಿ ವಿದೇಶಿ ಯರು ಮಸತಾಡುವ ರೀತಿಯ ಇಂಗ್ಲಿಷ್ ನಲ್ಲಿ ಎರಡು ನಿಮಿಷ  ಮಾತಾಡಿ ಬೋರ್ಡ್ ನಲ್ಲಿ If the boys learns to cook " ಎಂದು ಬರೆದು ಇಡೀ ಅವಧಿಯಲ್ಲಿ ಬೊಂಬೆ ತರಹ ನಿಂತಿದ್ದರು.ಬಾಬ್ ಕಟ್ ಮಾಡಿದ ಕೇಶ ಶೈಲಿಯ ಅವರೂ ನನಗೆ ಒಂದು ಬೊಂಬೆಯ ಹಾಗೆ ಕಾಣುತ್ತಿದ್ದರು .ನಾನು ಅವರ ಮುಖ ನೋಡುತ್ತಾ ಕುಳಿತೆ .ಅಲ್ಲಿನ ಇಂಗ್ಲಿಷ್ ವಾತಾವರಣದಲ್ಲಿ ನನ್ನ ಸಂಭ್ರಮವೆಲ್ಲ ಆತಂಕವಾಗಿ ಮಾರ್ಪಾಡಾಗಿತ್ತು. ತರಗತಿಯಲ್ಲಿ ಇದ್ದ    ಇಂಗ್ಲಿಷ್ ಮಾಧ್ಯಮ ದಲ್ಲಿ ಓದಿದ್ದ  ಒಬ್ಬಿಬ್ಬರು ಏನೋ ಬರೆದಿದ್ದು ಗಂಟೆ ಬಾರಿಸಿದಾಗ ಅದನ್ನು ತಗೊಂಡು ಅವರು ಹೋದರು .ಅವರು ಹಾಗೆ ಬೋರ್ಡ್ ನಲ್ಲಿ ಬರೆದದ್ದು ಏನಿರಬಹುದು ಎಂದು ನಾನು ಶಿಕ್ಷಕಿ ಯಾಗುವ ತನಕ ತಿಳಿದೆ ಇರಲಿಲ್ಲ. ನಾನು ಶಿಕ್ಷಕಿಯಾದ ಮೇಲೆ ಸಾಮಾನ್ಯವಾಗಿ ಮೊದಲ ಒಂದೆರಡು ದಿನ‌ಮಕ್ಕಳಿಗೆ ನಾವು ಪರಿಚಯ ದ ನಂತರ ಸರಳವಾದ ಪ್ರಬಂಧ ಗಳನ್ನು ಬರೆಯಲು ಹೇಳುತ್ತೇವೆ.ಆಗ ನನಗೆ ತಲೆಗೆ ಹೋದದ್ದು ನಾನು ಕಾಲೆಜಿಗೆ ಹೋದ ಮೊದಲ ದಿನ ಆ ಉಪನ್ಯಾಸಕಿ ಪ್ರಬಂಧ ಬರೆಯಲು ಹೇಳಿರಬಹುದೆಂದು ತಿಳಿಯಿತು.ಅದರೆ ನೂರರಷ್ಟು ಇದ್ದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರೂ ಅವರು ನೀಡಿದ ಪ್ರಬಂಧ ಬರೆಯದೆ ಇದ್ದಾಗಲೂ ನಮಗೆ ಸರಳವಾಗಿ ಅರ್ಥವಾಗು ರೀತಿಯಲ್ಲಿ ಹೇಳಿ ನಾಲ್ಕು ಸಾಲು ಹೇಳಿಕೊಟ್ಟು ಬರೆಯಿಸುವ ಪ್ರಯತ್ನ ಮಾಡಲೇ ಇಲ್ಲ .ಆಗ ಈಗಿನಂತೆ ಫಲಿತಾಂಶ ಕಡಿಮೆ ಬಂದರೆ ಇವರನ್ನು ಯಾರೂ ಕೇಳುವವರು ಇರಲಿಲ್ಲವೇ ? ಬಹುಶಃ ಇರಲಿಲ್ಲ ಇದ್ದರೆ ಈಗ ನಾವೆಲ್ಲಾ ಮಾಡುವಂತೆ    ಕಲಿಸುವ ಯತ್ನ ಮಾಡುತ್ತಿದ್ದರು ಖಂಡಿತಾ

 ಕೊನೆಯ ಅವಧಿ ಸಂಜೆ ನಾಲ್ಕರಿಂದ ಐದು ಗಂಟೆ ತನಕ ಇತ್ತು .ರೈಲಿಗೆ ಹೋಗುವ ವಿದ್ಯಾರ್ಥಿ ಗಳಿಗೆ ಕೇಳಿದರೆ ಐದು ನಿಮಿಷ ಮೊದಲೇ ಬಿಡುತ್ತಾರೆ ಎಂದು ನನಗೆ ಮೊದಲೇ ಆ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರು ತಿಳಿಸಿದ್ದರು .ಕೊನೆಯ ಅವಧಿ ಗಣಿತದ್ದು ಆಗಿತ್ತು. ಅವರೂ ಒಂದಕ್ಷರ ಕನ್ನಡ ಪದ ಹೇಳಿರಲಿಲ್ಲ .ಹಾಗಿರುವಾಗ ಅವರಲ್ಲಿ ನಾನು ರೈಲಿಗೆ ಹೋಗಲು ಐದು ನಿಮಿಷ ಬೇಗ ಬಿಡಿ ಎಂದು ಕೇಳುವುದು ಹೇಗೆ ಅಂತ ಗೊತ್ತಾಗಲಿಲ್ಲ. ಐದು ಗಂಟೆಗೆ ಐದು ನಿಮಿಷ ಇರುವಾಗ ಬೇರೆ ದಾರಿ ಇಲ್ಲದೆ ಎದ್ದು ನಿಂತು ಕನ್ನಡ ದಲ್ಲಿಯೇ ಬೇಗ ಹೋಗಲು ಅನುಮತಿ ಕೇಳಿದೆ .ನನ್ನನ್ನು ಯಾವುದೋ ಅನ್ಯ ಗ್ರಹ ಜೀವಿ ಎಂಬಂತೆ ನೋಡಿ ಗೋ ಎಂದು ಹೇಳಿ ಹೋಗಲು ಅನುಮತಿ ನೀಡಿದರು .ಅಲ್ಲಿಂದ ಒಂದೇ ಉಸಿರಿಗೆ ಓಡಿಕೊಂಡು ರೈಲ್ವೇ ಸ್ಟೇಷನ್ ಗೆ ಬಂದೆ .ಅಲ್ಲಿ ಒಂದು ರೈಲು ನಿದಾನವಾಗಿ ಚಲಿಸಲು ಆರಂಭಿಸಿತ್ತು .ಓಡಿ ಹೋಗಿ ಕೊನೆಯ ಭೋಗಿಗೆ ಹತ್ತಿದೆ .ಅದೃಷ್ಟವಶಾತ್ ಅದು ನಾನು ಹೋಗ ಬೇಕಾಗಿದ್ದ ರೈಲು ಆಗಿತ್ತು .ನಾನು ಟಿಕೆಟ್ ಕೂಡ ತೆಗೆದುಕೊಂಡು ಇರಲಿಲ್ಲ. ಒಂದೊಮ್ಮೆ ಅದು ಬೇರೆಡೆಗೆ ಹೋಗು ರೈಲಾಗಿರುತ್ತಿದ್ದರೆ ? ಅಥವಾ ನಾನು ಬರುವಷ್ಟರಲ್ಲಿ ಅದು ಹೋಗಿರುತ್ತಿದ್ದರೆ ? ನನಗೆ ನೆನೆದರೆ ಈಗಲೂ ಭಯವಾಗುತ್ತದೆ.ಯಾಕೆಂದರೆ ನನಗೆ ಮಂಗಳೂರಿನಲ್ಲಿ ಓಡಾಡಿ ಅಭ್ಯಾಸ ಇರಲಿಲ್ಲ ಯಾರ ಪರಿಚಯವೂ ಇಲ್ಲದೆ ರೈಲ್ವೆ ಸ್ಟೇಷನ್ ನಲ್ಲಿ ಏನು ಮಾಡುತ್ತಿದ್ದೆನೋ ? ದೇವರೇ ಬಲ್ಲ!
ಸದ್ಯ ಹಾಗಾಗಲಿಲ್ಲ.
ಅದರ ಮರುದಿನಕ್ಕೆ ಆಗುವಾಗ ಬಸ್ ಸ್ಟ್ರೈಕ್ ನಿಂತಿದ್ದು ನಾನು ಅಕ್ಕನ ಜೊತೆ ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ ಕೋಳ್ಯೂರಿನಿಂದ ಮಂಗಳೂರಿಗೆ ಬಂದೆ.ನನ್ನನ್ನು ಕಾಲೇಜು ತಲುಪಿಸಿ ಅಕ್ಕ ಅವಳ ಕಾಲೇಜಿಗೆ ಹೋದಳು.
ಆ ದಿನವೂ ಒಂದೆರಡು ಅವಧಿ ತರಗತಿ ಯನ್ನು ಯಾರೋ ತೆಗೆದುಕೊಂಡರು.ಯಾವ ವಿಷಯ ಅಂತ ನನಗೆ ಗೊತ್ತಾಗಲಿಲ್ಲ ಯಾಕೆಂದರೆ ಅವರೆಲ್ಲರೂ ಸಾಕ್ಷಾತ್ ಇಂಗ್ಲೆಂಡಿಂದ ಉದುರಿದವರಂತೆ ಇಂಗ್ಲಿಷ್ ಅನ್ನು ವಿದೇಶಿ ಶೈಲಿಯಲ್ಲಿ  ಬಾಯಿಯಲ್ಲಿ ಕಲ್ಲು ಇಟ್ಟುಕೊಂಡವರಂತೆ ಮಾತಾಡುತ್ತಾ ಇದ್ದರು.ಅಂತೂ ಸಂಜೆ ಐದು  ಗಂಟೆಗೆ ಎಲ್ಲರೂ ಮನೆಗೆ ಹೊರಟೆವು .
ಈಗ ಬಂತು ನನಗೆ ಪೇಚಾಟ.ಬೆಳಗ್ಗೆ ಕಾಲೇಜಿಗೆ ಬಂದ ರಸ್ತೆ ವನ್ ವೇ ಆಗಿತ್ತು. ಈಗ ಹಿಂದೆ ಹೋಗುವುದು ಹೇಗೆ ತಿಳಿಯಲಿಲ್ಲ. ಆಗ ಸಹಾಯಕ್ಕೆ ಬಂದವಳು ನನಿ ಸಹಪಾಠಿ ಶಾಲಿನಿ.ಅವಳಿಗೆ ಮಂಗಳೂರು ಸರಿಯಾಗಿ ಪರಿಚಯ ಇದ್ದು ನನ್ನನ್ನು ರಸ್ತೆ ದಾಟಿಸಿ ಲೇಡಿ ಗೋಷನ್ ಆಸ್ಪತ್ರೆ ಬಳಿ ಕರೆದುಕೊಂಡು ಬಂದು ತಲಪ್ಪಾಡಿಗೆ ಹೋಗುವ 42 ಎಂಬ ಸಂಖ್ಯೆ ಯ ಬಸ್ ಗೆ ಹತ್ತಿಸಿದಳು ಅಂತೂ ಅವಳ ಸಹಾಯದಿಂದ ಮನೆ ಸೇರಿದೆ.ಇಂದು ನಮಗೆ ಕಾಲೇಜು ಆರಂಭ .ಹಾಗಾಗಿಯೇ ನನ್ನ ಕಾಲೇಜಿನ ಮೊದಲ ದಿನದ ನೆನಪು ಆಯಿತು
ಅಂದು ನನಗೆ ಕಲಿಯಲು ಅವಕಾಶ ಸಿಗದ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಾನು ನಂತರ ಸಂಸ್ಕೃತ ಉಪನ್ಯಾಸಕಿಯಾಗಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ .ಕಲಿಯಲು ಅವಕಾಶ ಸಿಗದೇ ಇದ್ದರೂ ಕಲಿಸಲು ಅವಕಾಶ ಸಿಕ್ಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ.