Monday 25 April 2016

ಶಿಕ್ಷಕರನ್ನು ಪಾಠ ಮಾಡಿಕೊಂಡಿರಲು ಬಿಟ್ಟು ಬಿಡಿ(26 ಏಪ್ರಿಲ್ 2016 ವಿಶ್ವವಾಣಿ) -ಡಾ.ಲಕ್ಷ್ಮೀ ಜಿ ಪ್ರಸಾದ

 
ಹತ್ತನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಅನೇಕ ವಿದ್ಯಾರ್ಥಿಗಳು ಅಸಂಬಂದ್ಧ ಉತ್ತರಗಳನ್ನು ಬರೆದಿರುವ ಬಗ್ಗೆ ಓದಿದೆ. ಸಂಗ್ರಹ ಮೂಲ ವಿನಿಮಯ ಮೂಲಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ ಎಂಬ ಒಂದು ಪ್ರಶ್ನೆಗೆ ‘ಅನಿಸುತಿದೆ ಏಕೋ ಇಂದು ನೀನೇನೆ ನನ್ನವನೆಂದು ಆಹಾ ಎಂಥ ಮಧುರ ಯಾತನೆ, ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ’ ಎಂದು ಒಬ್ಬ ಬರೆದಿದ್ದಾನೆ.ಇನ್ನೊಬ್ಬ ‘ಕಿಂಗ್’ ಎಂಬುದರ ಕನ್ನಡ ಭಾವಾರ್ಥ ಬರೆಯಿರಿ ಎಂಬ ಪ್ರಶ್ನೆಗೆ ಸಿಗರೇಟ್ ಎಂದು ಉತ್ತರಿಸಿದ್ದ. ಮತ್ತೊಬ್ಬ ವಿದ್ಯಾರ್ಥಿ ‘ನಾನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾ. ಆದರೆ ಅಲ್ಲಿ ಗಣಿತ ಶಿಕ್ಷಕರು ಇಲ್ಲದ ಕಾರಣ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿದೆ. ಅಲ್ಲಿ ಇಂಗ್ಲಿಷ್‌ನಲ್ಲಿ ಪಾಠ ಮಾಡಿದ್ದು ನನಗೆ ಅರ್ಥವಾಗಿಲ್ಲ. ಆದ್ದರಿಂದ ನನಗೆ ದಯವಿಟ್ಟು ಅರುವತ್ತು ಅಂಕಗಳನ್ನು ಕೊಡಿ’ ಎಂದು ವಿನಂತಿಸಿದ್ದಾನೆ.ನೆಹರೂ ಮೊದಲ  ಕಾನೂನು ಸಚಿವರನ್ನಾಗಿ ಅಂಬೇಡ್ಕರರನ್ನು ಏಕೆ ನೇಮಿಸಿದರು ಎಂಬ ಪ್ರಶ್ನೆಗೆ ‘ಐ ಅಮ್ ಸಾರೀ, ಮತ್ತೆ ಬನ್ನಿ ಪ್ರೀತಿಸೋಣ, ಐಮಿಸ್ ಯು ಎಂದು ಉತ್ತರ ಬರೆದಿದ್ದಾನೆ.
ಮತ್ತೊಬ್ಬ ‘ನನಗೆ ಗಣಿತ ಅರ್ಥವಾಗುವುದಿಲ್ಲ. ನಾನು ನನ್ನ ಮನೆ ಮಂದಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನನಗೆ ಅರುವತ್ತು ಅಂಕ ಕೊಡಿ ನಿಮಗೆ ಪುಣ್ಯ ಬರುತ್ತದೆ’ ಎಂದು ಬರೆದಿದ್ದಾನೆ.. ಕಳೆದ ವರ್ಷ ಗಣಿತ ಉತ್ತರ ಪತ್ರಿಕೆಯಲ್ಲಿ ಕೋಳಿ ಸಾರು ಮಾಡುವ ವಿವರಣೆ ಇದ್ದ ಬಗ್ಗೆ ವರದಿಯಾಗಿತ್ತು.ಕಿಂಗ್ ಎಂದರೆ ಕಿಂಗ್ ಸಿಗರೇಟ್ ನೆನಪಿಗೆ ಬರುತ್ತದೆ ಆದರೆ ಅರಸನ ನೆನಪು ಯಾಕಿಲ್ಲ? ಪಾಠದ ನಡುವೆ ಕಿಂಗ್ /ಅರಸನ ಕಥೆಯನ್ನೂ ಹೇಳಿದ್ದರೆ ಈ ಮಕ್ಕಳು ‘ಕಿಂಗ್’ ಎಂದರೆ ಅರಸ ಎಂದು ನೆನಪಿಟ್ಟುಕೊಳ್ಳುತ್ತಿದ್ದರು. ಆದರೆ ಇಂದಿನ ಶಿಕ್ಷಕರ ಜವಾಬ್ದಾರಿ, ಅವರ ಕರ್ತವ್ಯಗಳ ಬಗ್ಗೆ ನೋಡಿದರೆ ಅವರು ಪೂರಕ ಕಥೆ ಹೇಳುವುದು ಬಿಡಿ ಪಾಠದಲ್ಲಿರುವುದನ್ನು ಹೇಳಲೂ ಅವರಿಗೆ ಸಮಯ ಸಿಗುವುದಿಲ್ಲ. ಇಂದಿನ ಪಾಠ ಕ್ರಮದಲ್ಲಿ ಅವುಗಳಿಗೆಲ್ಲ ಅವಕಾಶವೂ ಇಲ್ಲ !ಇತ್ತೀಚಿಗೆ ಒಬ್ಬರು ಮೇಷ್ಟ್ರು ಸಿಕ್ಕರು. ಸುಮ್ಮನೆ ಮಾತನಾಡಿಸಿದೆ. ಅದಕ್ಕೆ ಅವರು ‘ಅಯ್ಯೋ ನಮ್ಮ ಅವಸ್ಥೆ ಏನು ಹೇಳುವುದು ಮೇಡಂ.
ಪಾಠ ಮಾಡಲು ನಮಗೆ ಸಮಯವೇ ಇಲ್ಲ ಉಳಿದ ಕೆಲಸವೇ ಆಯ್ತು. ಹಾಗಾಗಿ ಪಾಠ ಮುಗಿದಿಲ್ಲ. ಅದಕ್ಕೆ ಮಕ್ಕಳಿಗೆ ಆದಿತ್ಯವಾರವೂ ತರಗತಿ ತಗೊಳ್ಳುತ್ತೇನೆ. ನಮ್ಮಲ್ಲಿ ಶಾಲೆಗೆ ಬಾರದ ಮಕ್ಕಳನ್ನು ಹುಡುಕಿ ತರುವುದು, ಅವರ ಹೆತ್ತವರನ್ನು ಕಂಡು ಮನ ಒಲಿಸುವುದು ಇದೇ ಆಯ್ತು. ಇವೆಲ್ಲದರ ನಡುವೆ ನಮಗೆ ಪಾಠ ಮಾಡಲು ಸಮಯವೆಲ್ಲಿದೆ? ಶಾಲೆಗೆ ಬಾರದ ಮಕ್ಕಳ ಬಗ್ಗೆ ಓಡಾಡಿ ಮಾಹಿತಿ ಸಂಗ್ರಹಿಸಿ ಅವರನ್ನು ಶಾಲೆಗೆ ಸೇರಿಸುವ, ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಭರದಲ್ಲಿ ಶಾಲೆಗೆ ಬಂದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ನಿಟ್ಟುಸಿರುಬಿಟ್ಟರು!
ಇತ್ತೀಚಿಗೆ ವಾಟ್ಸಪ್ ನಲ್ಲಿ ಒಂದು ಮೆಸೇಜ್ ಬಂದಿತ್ತು
"ಅಕ್ಷರ ದಾಸೋಹ, ಕ್ಷೀರಭಾಗ್ಯ, ಸೈಕಲ್ ವಿತರಣೆ, ಪಠ್ಯಪುಸ್ತಕ, ಬ್ಯಾಗ್ ವಿತರಣೆ, ಚಿಣ್ಣರ ಅಂಗಳ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಶಾಲೆ ಬಿಟ್ಟ ಮಕ್ಕಳ ಮನೆಭೇಟಿ, ಎಸ್‌ಡಿಎಂಸಿ ರಚನೆ, ಶೌಚಾಲಯ ನಿರ್ವಹಣೆ, ಕಟ್ಟಡ ಕಾಮಗಾರಿ, ಸಮುದಾಯದತ್ತ ಶಾಲೆ, ವಾರ್ಷಿಕೋತ್ಸವ, ಪ್ರಗತಿಪತ್ರ ತುಂಬವುದು, ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು, ವಿದ್ಯಾರ್ಥಿವೇತನ ಸಮನ್ವಯ, ಶಿಕ್ಷಣ ಜನಗಣತಿ, ಮಕ್ಕಳ ಗಣತಿ, ಜಾತಿಗಣತಿ, ಚುನಾವಣಾಕಾರ್ಯ, ಪಲ್ಸ ಪೋಲಿಯೋ, ಎಸ್‌ಡಿಎಂಸಿ ಸಭೆ, ಪಾಲಕರ ಸಭೆ, ಪುನಶ್ಚೇತನ ತರಬೇತಿ, ಸೇತುಬಂಧ, ನಲಿ ಕಲಿ ಕಲಿ ನಲಿ, ಪ್ರತಿಭಾ ಕಾರಂಜಿ, ರಾಷ್ಟ್ರೀಯ ಹಬ್ಬಗಳು, ದಿನಾಚರಣೆಗಳು, ಒಂದಷ್ಟು ಜಯಂತಿಗಳು... ಇಷ್ಟೆಲ್ಲ ಕೆಲಸ ಕಾರ್ಯಗಳನ್ನು ಶಿಕ್ಷಕರು ಮಾಡಿ ಮುಗಿಸಿದಾಗ ಅವರಿಗೆ ಗಾಂಧಿ ಹುಟ್ಟಿದ ಇಸವಿ ಬಿಡಿ ತಾವು ಹುಟ್ಟಿದ ದಿನವೇ ನೆನಪಿರಲ್ಲ! @ಎಸ್ಕೆ
ಇದನ್ನು ಓದಿದಾಗ ಆರಂಭದಲ್ಲಿ ತುಸು ನಗು ಬಂದಿತ್ತು ಆದರೆ ಇದು ಇದು ವಾಸ್ತವ. ಇದನ್ನು ಓದಿದಾಗ ಇಷ್ಟೆ ಕೆಲಸಗಳನ್ನು ಮಾಡಿಕೊಂಡು ಶಿಕ್ಷಕರು ಮಕ್ಕಳಿಗೆ ಯಾವಾಗ ಪಾಠ ಮಾಡುತ್ತಾರೆ ಎಂದು ನನಗೆ ಸಂಶಯ ಬಂದಿತ್ತು.
ಸರ್ಕಾರಿ ಶಾಲೆಗಳಲ್ಲಿ ಪಾಠ ಪ್ರವಚನಗಳಿಗಿಂತ ಉಳಿದದ್ದೇ ಹೆಚ್ಚು ನಡೆಯುತ್ತವೆ. ಇಷ್ಟೆ ಕೆಲಸಗಳ ನಡುವೆ ಪಾಠ ಮಾಡಲು ಎಷ್ಟು ಸಮಯ ಸಿಗುತ್ತದೆ? ಏನೋ ಅವಸರವಸರದಿಂದ ಹರಿ ಬರಿಯಾಗಿ ಪಾಠ ಮಾಡಿದ್ದರೆ ಅದು ಮಕ್ಕಳ ತಲೆಗೆ ಒಂದಿನಿತೂ ಹೋಗುವುದಿಲ್ಲ.

ಒಂದೆಡೆ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ. ಇನ್ನೊಂದೆಡೆ ಪ್ರತಿಭಾವಂತರನ್ನು ಶಿಕ್ಷಣ ಕ್ಷೇತ್ರ ಆಕರ್ಷಿಸುತ್ತಿಲ್ಲ. ಪ್ರತಿಭಾವಂತರು ಇಂಜಿನಿಯರ್, ಮೆಡಿಕಲ್ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಬಿಕಾಂ, ಎಂಕಾಂ ಮಾಡಿದವರೂ ಒಳ್ಳೆ ವೇತನ ಸಿಗುವ ಖಾಸಗಿ ಕಂಪನಿಗಳ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲವರು ಮಾತ್ರ ಬೇರೆ ದಾರಿ ಇಲ್ಲದೆ ಶಿಕ್ಷಕರಾಗುತ್ತಿದ್ದಾರೆ. ಈ ಸಮಸ್ಯೆ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಲಕ್ಷ ಗಟ್ಟಲೆ ಡೊನೇಶನ್ ಹಾಗೂ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು ಕೂಡ ಶಿಕ್ಷಕರಿಗೆ ಒಳ್ಳೆಯ ವೇತನ ಕೊಡುವುದಿಲ್ಲ.ಕಲಿಕೆಗೆ ಕನಿಷ್ಠ ಒತ್ತಡ ಅತ್ಯಗತ್ಯ. ಆದರೆ ಇಂದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜೋರು ಮಾಡುವಂತಿಲ್ಲ.
 ನನ್ನ ಜೊತೆ ಕೆಲಸ ಮಾಡುತ್ತಿದ್ದ ಶಿಕ್ಷಕಿ ಒಬ್ರು ಅವರ ಅನುಭವವನ್ನು ಹೀಗೆ ಹೇಳಿದ್ದರು... ಅವರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಒಬ್ಬ ಹುಡುಗ ಕಡಲೇಕಾಯಿ ತಿನ್ನುತ್ತಾ ಇದ್ದ. ಆಗ ಇವರು ‘ಪಾಠ ಮಾಡುವಾಗ ತಿನ್ನುವುದು ಸಭ್ಯತೆಯಲ್ಲ’ ಎಂದು ಬುದ್ಧಿ ಹೇಳಿದರು. ಆಗ ಹುಡುಗ ನಾನು ತಿಂತೇನೆ ಏನು ಮಾಡುತ್ತೀರಾ? ಹೊಡೀತೀರ? ಹೊಡೆದರೆ ನಾನು ನಾಳೆಯಿಂದ ಶಾಲೆಗೆ ಬರುವುದಿಲ್ಲ. ಆಗ ನಾನು ಶಾಲೆ ಬಿಟ್ಟದ್ದಕ್ಕೆ ನಿಮ್ಮನ್ನೇ ಬೈತಾರೆ ಗೊತ್ತಾ? ಎಂದು ಹೇಳಿ ಕಡಲೆ ಕಾಯಿ ತಿನ್ನುವುದು ಮುಂದುವರಿಸಿದ. ಜೋರು ಮಾಡಿದರೆ ತಕ್ಷಣವೇ ಬಿಇಒಗೆ ದೂರು ಹೋಗುತ್ತದೆ. ಮಾಧ್ಯಮಗಳು ಬರುತ್ತವೆ. ನನ್ನನ್ನು ಖಳನಾಯಕಿ ಸ್ಥಾನದಲ್ಲಿ ನಿಲ್ಲಿಸಿ ಬಾಯಿಗೆ ಬಂದ ಹಾಗೆ ಆಡಿಕೊಳ್ಳುತ್ತಾರೆ. ಹಾಗಾಗಿ ನಾನು ಆತನನ್ನು ಸುಮ್ಮಗೆ ಬಿಟ್ಟೆ ಎಂದರು.ಖಾಸಗಿ ಶಾಲೆಗಳಲ್ಲಿನ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಮಕ್ಕಳಿಗೆ ಗದರುವಂತಿಲ್ಲ. ಪಾಠಕ್ಕೆ ಪೂರಕ ವಿಚಾರಗಳ ಬಗ್ಗೆ, ನೈತಿಕ ಮೌಲ್ಯಗಳ ಬಗ್ಗೆ, ದೈನಂದಿನ ವಿಶೇಷ ವಿಚಾರಗಳ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಕೇವಲ ಪಾಠದಲ್ಲಿರುವುದನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸಬೇಕು. ಉಸಿರು ಕಟ್ಟುವ ವಾತಾವರಣದಲ್ಲಿ ಸ್ವತಂತ್ರವಾಗಿ ಪಾಠ ಮಾಡಲು ಸಾಧ್ಯವಿಲ್ಲ. ದೇಶ ಭಕ್ತರ, ತ್ಯಾಗಿಗಳ ರೋಮಾಂಚಕ ಕಥೆಗಳು, ಬದುಕಿನಲ್ಲಿ ಭರವಸೆ ಮೂಡಿಸುವ ಸಾಧಕರ ವಿಚಾರಗಳು, ಮೌಲಿಕ ವಿಚಾರಗಳು ಪಾಠದಲ್ಲಿ ಇಲ್ಲ. ಬದುಕಿಗೆ ಒಂದಿನಿತು ಸಹಕಾರಿಯಾಗಿರದ, ಮಕ್ಕಳ ಸಾಮರ್ಥ್ಯಕ್ಕೆ ಮೀರಿದ ಶುಷ್ಕ ವಿಚಾರಗಳೇ ತುಂಬಿವೆ.
ಗುಣಮಟ್ಟ ಹೆಚ್ಚಿಸುವುದೆಂದರೆ ಅತಿ ಹೆಚ್ಚು ವಿಚಾರಗಳನ್ನು ಮಕ್ಕಳ ತಲೆಗೆ ತುಂಬಿಸುವುದು ಎಂಬ ಭ್ರಮೆಯಲ್ಲಿ ತಯಾರಾದ ಪಾಠಗಳು ಮಕ್ಕಳಿಗೆ ಓದಲು ಪ್ರೇರೇಪಿಸುತ್ತಿಲ್ಲ.ಮೊದಲು ಶಾಲೆಗಳಲ್ಲಿ ಪ್ರತಿ ದಿನ ಒಂದು ಅವಧಿ ಆಟಕ್ಕೆ ಮೀಸಲು. ಗ್ರಂಥಾ ಲಯ ಅವಧಿಯೂ ಇತ್ತು. ಅದರಲ್ಲಿ ನಾವು ಕಥೆ, ಕಾದಂಬರಿಗಳನ್ನು ಓದುತ್ತಿ ದ್ದಾವು. ಆಟದಿಂದ ಮನಸಿಗೆ ವಿಶ್ರಾಂತಿ ದೊರೆಯುತ್ತದೆ. ಉತ್ಸಾಹ ಮೂಡುತ್ತದೆ. ಶಿಕ್ಷಕರು ಪಾಠದ ನಡುವೆ ಕಥೆ, ಬೇರೆ ವಿಚಾರಗಳನ್ನು ಹೇಳುತ್ತಿದ್ದರು. ಒಗಟುಗಳನ್ನುಬಿಡಿಸುತ್ತಿದ್ದರು. ಇದೆಲ್ಲದರಿಂದ ಶಾಲೆ ಮುಗಿಸಿ ಬರುವಾಗಲೂ ನಾವು ಉತ್ಸಾಹದಿಂದ ಇರುತ್ತಿದ್ದಾವು. ಲೇಖಕಿ ಸಾರಾ ಅಬೂಬಕ್ಕರ್ ಆಟ ಆಡುವುದಕ್ಕಾಗಿಯೇ ಶಾಲೆಗೆ ಹೋಗುತ್ತಿದ್ದರಂತೆ!


ಈಗ ಮಕ್ಕಳಿಗೆ ಆಟ ಆಡಲು ಮೈದಾನ ಬಿಡಿ ಹತ್ತು ಅಡಿ ಜಾಗ ಕೂಡ ಇಲ್ಲ. ಶಾಲೆಗಳಲ್ಲಿ ಇಡೀ ದಿನ ನೀರಸ ಪಾಠ ಕೇಳಿ ಉತ್ಸಾಹ ಕಳೆದುಕೊಂಡು, ಸುಸ್ತಾಗಿ ಜೋಲು ಮುಖ ಹಾಕಿಕೊಂಡು, ಮಣಗಟ್ಟಲೆ ಭಾರದ ಚೀಲ ಹಿಡಿದುಕೊಂಡು ಶಾಲೆ ಬಿಟ್ಟು ಮನೆಗೆ ಬರುವ ಮಕ್ಕಳನ್ನು ನೋಡಿದರೆ ನಿಜಕ್ಕೂ ಅಯ್ಯೋ ಎನಿಸುತ್ತದೆ. ಗುಣಮಟ್ಟದ ಶಿಕ್ಷಣ ನೀಡುವುದೊಂದೇ ಇದಕ್ಕೆಲ್ಲ ಇರುವ ಪರಿಹಾರ. ಇದಕ್ಕಾಗಿ ಅರ್ಹ ಶಿಕ್ಷರನ್ನು ಆಯ್ಕೆ ಮಾಡಬೇಕು. ,ಒಳ್ಳೆಯ ವೇತನ ನೀಡಬೇಕು. ಮುಖ್ಯವಾಗಿ ಶಿಕ್ಷಕರನ್ನು ಬೇರೆ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಪಾಠಕ್ಕೆ ಗಮನ ನೀಡಲು ಬಿಡಬೇಕು.

Tuesday 12 April 2016

ವಿದ್ಯೆ ಕಲಿಸುವ ಗುರುವಿಗೆ ಮೋಸ ಮಾಡಬಹುದೇ ?(ವಿಶ್ವವಾಣಿ,13 ಏಪ್ರಿಲ್2016 ಪುಟ 7 )-ಡಾ.ಲಕ್ಷ್ಮೀ ಜಿ ಪ್ರಸಾದ

ಜಗತ್ತಿನಲ್ಲಿ ಪದೋನ್ನತಿಯೇ ಇಲ್ಲದೆ ಇರುವ ಹುದ್ದೆ  ಪಿಯು ಉಪನ್ಯಾಸಕರದ್ದು ಮಾತ್ರ ಇರಬೇಕು! ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಉಪನ್ಯಾಸಕನಾಗಿಯೇ ನಿವೃತ್ತನಾಗಬೇಕು. ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇತರರಿಗೆ ಹೆಚ್ಚಿನ ವೇತನ ಕೊಟ್ಟರೆ ಹೊರೆ ಆಗುವುದಿಲ್ಲವೇ? https://www.vishwavani.news/epaper.html
ಧಿಕ್ಕಾರ ಧಿಕ್ಕಾರ! ಇಂಥವರನ್ನು ಇನ್ನೂ ಸಹಿಸಿಕೊಂಡಿರುವ ಈ ಸರಕಾರಕ್ಕೂ ದಿಕ್ಕಾರ, ಅವರು ತಮ್ಮ ಸ್ವಂತದ ಮೌಲ್ಯಮಾಪನ ಮಾಡ್ತಾ ಇದ್ದಾರೆ ಮಕ್ಕಳಿಗೆ ಗೊತ್ತಿರೋದುಕ್ಕಿಂತ ಕಡಿಮೆ ತಿಳಿವಳಿಕೆ ಇರೊ ಮೌಲ್ಯಮಾಪನ ಮಾಡೊ ಅಧ್ಯಾಪಕರಿಗೆ ನನ್ನ ಧಿಕ್ಕಾರ. ಮೌಲ್ಯಮಾಪನಕ್ಕೆ ಹಾಜರಾಗದೆ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಲು ನಿಂತಿರುವ ಉಪನ್ಯಾಸಕರಿಗೆ ಧಿಕ್ಕಾರವಿರಲಿ. ಪಿಯು ಉಪನ್ಯಾಸಕರ ಕುರಿತಾಗಿ ಇಂತಹ ಮಾತುಗಳನ್ನು ಕೆಲವು ದಿನಗಳಿಂದ ಫೇಸ್‌ಬುಕ್ ಟ್ವಿಟ್ಟರ್‌ಗಳಂಥ ಸಾಮಾಜಿಕ ತಾಣಗಳಲ್ಲಿ ಕೇಳುತ್ತಿದ್ದೇವೆ.
ಪಿಯು ಉಪನ್ಯಾಸಕರ ಸಮಸ್ಯೆಗಳ ಅರಿವು  ಪ್ರಜ್ಞಾವಂತ  ಬರಹಗಾರರಿಗೂ ಗೊತ್ತಿಲ್ಲವೆಂದಾದರೆ ಇನ್ನು ಜನಸಾಮಾನ್ಯರಿಗೆ ಹೇಗೆ ಅರ್ಥವಾಗಲು ಸಾಧ್ಯ?ಒಂದು ವಿಷಯವನ್ನು ನಾನು ಮೊದಲಿಗೆ ಹೇಳುತ್ತೇನೆ. ಈಗ ನಡೆಯುತ್ತಿರುವ ಮೌಲ್ಯ ಮಾಪನ ಬಹಿಷ್ಕಾರ ಮತ್ತು ಪ್ರತಿಭಟನೆ ಏಕಾ ಏಕಿ ದಿನ ಬೆಳಗಾಗುವಷ್ಟರಲ್ಲಿ ನಿರ್ಣಯವಾಗಿ ಆರಂಭವಾದದ್ದಲ್ಲ. ಈ ಬಗ್ಗೆ ಮೂರು ನಾಲ್ಕು ತಿಂಗಳ ಮೊದಲೇ ನಿರ್ಧಾರವಾಗಿತ್ತು, ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಉಪನ್ಯಾಸಕರ ಸಂಘ ಅನೇಕ ಬಾರಿ ಮನವಿ ಮಾಡಿತ್ತು. ಈ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ವರದಿ ಬರುತ್ತಲೇ ಇತ್ತು. ಇಷ್ಟಕ್ಕೂ ಉಪನ್ಯಾಸಕರ ಹಲವು ವರ್ಷಗಳ ಬೇಡಿಕೆ ಅನ್ಯಯವಾದದ್ದಲ್ಲ. ಅದು ನ್ಯಾಯಯುತವಾದ ಬೇಡಿಕೆಯೇ ಆಗಿದೆ. ವೇತನ ಹೆಚ್ಚಿಸುವಂತೆ ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ವೇತನ ತಾರತಮ್ಯ ನಿವಾರಿಸುವಂತೆ ಕೇಳುತ್ತಿದ್ದಾರೆ. ಈ ಹಿಂದೆಯೇ ಅನೇಕ ಬಾರಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ ಕೂಡ. ಆದರೆ, ಯಾವುದೇ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದಕ್ಕೆ ಮೌಲ್ಯ ಮಾಪನ ಬಹಿಷ್ಕಾರದ ದಾರಿಯನ್ನು ಹಿಡಿದಿದ್ದಾರೆ. ಮೌಲ್ಯ ಮಾಪನ ಬಹಿಷ್ಕಾರ ಸರಿಯಲ್ಲ,
ಬೇರೆ ಸಮಯದಲ್ಲಿ ಪ್ರತಿಭಟನೆ ಮಾಡಿ ಎಂದು ಅನೇಕರ ಅಭಿಪ್ರಾಯ. ಬೇರೆ ಸಮಯದಲ್ಲಿ ಪಾಠ ಪ್ರವಚನ ಮಾಡದೆ ಇದ್ದರೆ ಕೇವಲ ಕಾಲೇಜ್‌ನಲ್ಲಿ ಮಾಡುವ ಪಾಠವನ್ನು ಮಾತ್ರ ಅವಲಂಭಿಸಿರುವ ವಿದ್ಯಾರ್ಥಿಗಳಿಗೆ ಅಪಾರ ನಷ್ಟವಾಗುತ್ತದೆ. ಪ್ರತಿ ತಿಂಗಳು ಇಷ್ಟಿಟ್ಟು ಪಾಠವನ್ನು ಮುಗಿಸಲೇ ಬೇಕಾಗುತ್ತದೆ. ಕೆಲವೊಮ್ಮೆ ಸಮಯ ಸಾಕಾಗದೆ ಹೆಚ್ಚಿನ ಉಪನ್ಯಾಸಕರು ಹೆಚ್ಚುವರಿಯಾಗಿ ಶನಿವಾರ ಮಧ್ಯಾಹ್ನ ಮೇಲೆ ಹಾಗೂ ಆದಿತ್ಯವಾರ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಪಾಠ ಮಾಡುವ ಅವಧಿಯಲ್ಲಿ ಪಾಠ ಮಾಡದೆ ಪ್ರತಿಭಟಿಸಿದರೆ ನಷ್ಟ ಯಾರಿಗೆ ಅಂತ ಈಗ ಅರ್ಥವಾಗಬಹುದು ಅಲ್ಲವೇ?ಮತ್ತೊಂದು ಆಕ್ಷೇಪ ಏನೆಂದರೆ ಈಗ ಮೌಲ್ಯಮಾಪನ ಮಾಡದೆ ಅನಂತರ ಹರಿ ಬರಿಯಾಗಿ ಮನಸ್ಸಿಲ್ಲದ ಮನಸಿನಿಂದ ಮೌಲ್ಯ ಮಾಪನ ಮಾಡಿದರೆ ಮಕ್ಕಳಿಗೆ ಅಂಕ ಕೊಡುವಾಗ ಒಂದೆರಡು ಅಂಕ ವ್ಯತ್ಯಾಸ ಬಂದರೆ ಏನು ಮಾಡುವುದು? ಮನಸ್ಸಿಲ್ಲದೆ ಮೌಲ್ಯ ಮಾಪನ ಮಾಡುವಾಗ ಅಂಕ ವ್ಯತ್ಯಾಸ ಬರುವುದಾದರೆ ಮನಸ್ಸಿಲ್ಲದೆ ಪಾಠ ಮಾಡಿದರೆ ಹೇಗಾಗಬಹುದು?ಇಷ್ಟಕ್ಕೂ ಪ್ರತಿಭಟನೆ ಯಾಕಾಗಿ? ಎಷ್ಟು ವರ್ಷಗಳ ಬೇಡಿಕೆ ಎಂಬುದು ತಿಳಿದಿದೆಯೇ ?ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ನಮ್ಮಲ್ಲಿನ ಸಾಮಾನ್ಯ ನಿಯಮ. ತಹಸೀಲ್ದಾರ್, ಪಶು ವೈದ್ಯರು, ಕಿರಿಯ ಎಂಜಿನಿಯರ್‌ಗಳು, ಸಬ್ ಇನ್ಸ್‌ಪೆಕ್ಟರ್, ವೈದ್ಯಾಧಿಕಾರಿಗಳು ಹಾಗೂ ಉಪನ್ಯಾಸಕರು ಒಂದೇ ಗ್ರೇಡ್‌ನ ಸರ್ಕಾರಿ ಉದ್ಯೋಗಿಗಳು.
ಹಾಗಾಗಿ ಇವರೆಲ್ಲರಿಗೂ ಒಂದೇ ರೀತಿಯ ವೇತನ ಶ್ರೇಣಿ ಇರುತ್ತದೆ. 1996ನೆಯ ಇಸವಿ ತನಕ ಇವರೆಲ್ಲರಿಗೂ ಒಂದೇ ರೀತಿಯ ವೇತನ ಇತ್ತು. ನಂತರ ಮಾತ್ರ ಉಪನ್ಯಾಸಕರನ್ನು ಹೊರತು ಪಡಿಸಿ ಉಳಿದವರಿಗೆ ಕಾಲ ಕಾಲಕ್ಕೆ ವೇತನವನ್ನು ಹೆಚ್ಚಿಸಲಾಯಿತು. ಉಪನ್ಯಾಸಕರಿಗೆ ಮಾತ್ರ ಹೆಚ್ಚಿಸಲಿಲ್ಲ. ಹೀಗಾಗಿ ಉಪನ್ಯಾಸಕರ ಹಾಗೂ ಸಮಾನ ಶ್ರೇಣಿಯ ಇತರ ಸರಕಾರಿ ಉದ್ಯೋಗಿಗಳ ಆರಂಭಿಕ ಮೂಲ ವೇತನದಲ್ಲಿ ಸುಮಾರು ಎಂಟು ಸಾವಿರ ರುಪಾಯಿಗಳಷ್ಟು ವ್ಯತ್ಯಾಸವಿದೆ. ಇಷ್ಟು ಅಂತರವನ್ನು ಸರಿ ಪಡಿಸಿ ಉಪನ್ಯಾಸಕರಿಗೆ ಇತರರಂತೆ ವೇತನ ನೀಡಿದರೆ ಸರಕಾರದ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಸರಕಾರ ಕೆಲ ವರ್ಷಗಳ ಮೊದಲು ಕುಮಾರ ನಾಯಕ್ ಅವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಿತು. ಸಮಿತಿಯು ಸಾಕಷ್ಟು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ನೀಡಿತು. ಸಮಿತಿಯು ಮಾಡಿದ ಸಲಹೆಯನ್ನು ಜಾರಿಗೆ ತಂದರೆ ತಾರತಮ್ಯ ಪೂರ್ಣ ನಿವಾರಣೆ ಆಗದಿದ್ದರೂ ಒಂದಿನಿತು ಅಂದರೆ ಸುಮಾರು ಮೂರು ಸಾವಿರ ರೂಪಾಯಿಗಳಷ್ಟು ವೇತನ ಹೆಚ್ಚಳವಾಗುತ್ತದೆ. ನಾಲ್ಕು ವರ್ಷ ಕಳೆದರೂ ಸಮಿತಿಯ ವರದಿಯನ್ನು ಜಾರಿಗೆ ತಂದಿಲ್ಲ .
ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಆಗಿದೆ. ಆದರೆ ಮೌಲ್ಯ ಮಾಪನಈ ಲೇಖನಕ್ಕೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.ಸಮಯದಲ್ಲಿ ಬಿಟ್ಟು ಬೇರೆ ಸಮಯದಲ್ಲಿ ಮಾಡುವ ಪ್ರತಿಭಟನೆಗೆ ಯಾವುದೇ ಬೆಲೆ ಬರುವುದಿಲ್ಲ. ಅದು ಹೆತ್ತವರ ಗಮನಕ್ಕೂ ಬರುವುದಿಲ್ಲ! ಹೇಗೂ ಉಪನ್ಯಾಸಕರು ವಿಶೇಷ ತರಗತಿ ಮಾಡಿ ಪಾಠ ಮುಗಿಸುತ್ತಾರೆ. ಹಾಗಿರುವಾಗ ಉಪನ್ಯಾಸಕರ ಸಮಸ್ಯೆ ಬಗ್ಗೆ ಯಾರೇಕೆ ತಲೆಕೆಡಿಸಿಕೊಳ್ಳುತ್ತಾರೆ? ಮೊನ್ನೆ ಮಾತಿಗೆ ಸಿಕ್ಕ ಎಂಜಿನಿಯರ್ ಒಬ್ಬರು ಉಪನ್ಯಾಸಕರಿಗೆ ಈಗಾಗಲೇ ತುಂಬಾ ವೇತನ ಇದೆ. ದಿನಕ್ಕೆ ನೂರು ರುಪಾಯಿ ವೇತನಕ್ಕೆ ದುಡಿಯುವವರು ಇಲ್ಲವೇ? ಎಂದು ಕೇಳಿದ್ದರು. ಉಪನ್ಯಾಸಕರ ಬಗ್ಗೆ ಜನರಿಗಿರುವ ಭಾವನೆ ಇದರಿಂದ ಗೊತ್ತಾಯಿತು ನನಗೆ. ನಾನು ತಕ್ಷಣ ಕೇಳಿದೆ ನಿಮ್ಮಲ್ಲಿ ಜವಾನರಿಗೆ ಎಷ್ಟು ವೇತನ? ಅಬ್ಬಬ್ಬ ಅಂದ್ರೆ ಏಳು ಎಂಟು ಸಾವಿರ ತಾನೇ? ನೀವು ಯಾಕೆ ಒಂದು ಲಕ್ಷ ರುಪಾಯಿ ವೇತನ ಪಡೆಯುತ್ತೀರಿ? ನಿಮಗೇಕೆ ಅಷ್ಟು ವೇತನ? ಎಂದು. ಅದು ನಮ್ಮ ಕಲಿಕೆಗೆ ಅರ್ಹತೆಗೆ ಅನುಭವಕ್ಕೆ ಸಿಗುವ ವೇತನ ಎಂದರು. ಆಗ ನಾನು ಕೇಳಿದೆ. ನೀವು ಹೆಚ್ಚಿನ ಕಲಿಕೆ ಅರ್ಹತೆ ಹೊಂದಿದ್ದರೆ ಹೆಚ್ಚಿನ ವೇತನ ಪಡೆಯಬಹುದು,
ಉಪನ್ಯಾಸಕರು ಹೆಚ್ಚಿನ ಕಲಿಕೆಯನ್ನು ಅರ್ಹತೆಯನ್ನು ಅನುಭವವನ್ನು ಹೊಂದಿದ್ದಾರೆ. ಅವರು ಹೆಚ್ಚಿನ ವೇತನ ಪಡೆಯಬಾರದೇ? ತಾರತಮ್ಯ ಮಾಡಿದರೆ ಪ್ರತಿಭಟಿಸಬಾರದೆ? ಎಂದು. ಮರುಮಾತಾಡದೆ ಸುಮ್ಮನಾದರು. ಕೆಲ ವರ್ಷಗಳ ಹಿಂದಿನ ತನಕ ಪದವಿ ಪೂರ್ವ ಶಿಕ್ಷಣ ಉನ್ನತ ಶಿಕ್ಷಣ ಇಲಾಖೆಯ ಜತೆಗಿತ್ತು. ಇದರಿಂದ ಪದವಿ ಕಾಲೇಜ್ ಮತ್ತು ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಒಂದೇ ರೀತಿಯ ವೇತನ ಇತ್ತು. ಕೆಲ ವರ್ಷಗಳ ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉನ್ನತ ಶಿಕ್ಷಣ ಇಲಾಖೆಯಿಂದ ಬೇರೆಯಾಗಿ ಸ್ವತಂತ್ರವಾಯಿತು.
ಈಗ ಪದವಿ ಕಾಲೇಜ್ ಉಪನ್ಯಾಸಕರಿಗೆ ಯುಜಿಸಿ ವೇತನವಿದ್ದು, ಪಿಯು ಉಪನ್ಯಾಸಕರ ದುಪ್ಪಟ್ಟು ವೇತನ ಪಡೆಯುತ್ತಾರೆ. ಪದವಿ ಪೂರ್ವ ಉಪನ್ಯಾಸಕರು ಪದವಿ ಕಾಲೇಜ್ ಉಪನ್ಯಾಸಕರಷ್ಟೇ ಅರ್ಹತೆ ಹೊಂದಿದ್ದರೂ ಕೂಡ ಅವರ ಅರ್ಧದಷ್ಟು ವೇತನಕ್ಕೆ ತೃಪ್ತಿ ಹೊಂದಬೇಕು. ಒಟ್ಟಿನಲ್ಲಿ ಇವರು ಹೆಸರಿಗೆ ಉಪನ್ಯಾಸಕರು ಅಷ್ಟೇ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅತಂತ್ರರಾಗಿದ್ದಾರೆ. ಪದವಿ ಕಾಲೇಜ್ ಉಪನ್ಯಾಸಕರಿಗೆ ಸಂಶೋಧನಾ ಕಮ್ಮಟಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಓಓಡಿ ಸೌಲಭ್ಯವಿರುತ್ತದೆ. ಯುಜಿಸಿ ಪ್ರಾಯೋಜಿತ ವಿಚಾರ ಸಂಕಿರಣಗಳು ಆಗಾಗ ಅಲ್ಲಲ್ಲಿ ಕಾಲೇಜ್‌ಗಳಲ್ಲಿ ಯೂನಿವರ್ಸಿಟಿಗಳಲ್ಲಿ ಆಯೋಜನೆ ಆಗುತ್ತಲೇ ಇರುತ್ತದೆ. ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಇಂಥಹ ಯಾವುದೇ ಸೌಲಭ್ಯವಿಲ್ಲ, ನಾನು ಅನೇಕ ಯೂನಿವರ್ಸಿಟಿಗಳಿಗೆ ಸಂಶೋಧನಾ ಪ್ರಬಂಧ ಮಂಡಿಸಲು ನನ್ನ ಖಾತೆಯಲ್ಲಿರುವ ಸಿಎಲ್, ಇಎಲ್‌ಗಳನ್ನೂ ಹಾಕಿ ಹೋಗಿದ್ದೇನೆ.
ಅಲ್ಲಿಗೆ ಅನೇಕ ಪದವಿ ಕಾಲೇಜ್ ಹಾಗೂ ಯೂನಿವರ್ಸಿಟಿಗಳ ಉಪನ್ಯಾಸಕರು ಓಓಡಿ ಸೌಲಭ್ಯ ಪಡೆದುಕೊಂಡು ಹಾಜರಾಗಲು ಬಂದಿರುವುದನ್ನು ನೋಡಿ ಛೆ! ನನಗೆ ಪ್ರಬಂಧ ಮಂಡಿಸಲು ಕೂಡ ಈ ಸೌಲಭ್ಯವಿಲ್ಲವಲ್ಲ ಎಂದು ಅನೇಕ ಬಾರಿ ನೊಂದುಕೊಂಡಿದ್ದೇನೆ ಕೂಡ!ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಲ್ಲಿ ಅನೇಕರು ಉಪನ್ಯಾಸಕರ ಅರ್ಹತಾ ಪರೀಕ್ಷೆಗಳಾದ NET, SLET ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅನೇಕರು ಸಂಶೋಧನಾ ಅಧ್ಯಯನ ಮಾಡಿ ಪಿಚ್‌ಡಿಯಂಥ ಉನ್ನತ ಪದವಿಗಳನ್ನು ಪಡೆದಿದ್ದಾರೆ. ಆದರೆ ಇವರಾರಿಗೂ ಒಂದಿನಿತು ಮನ್ನಣೆ ಇಲ್ಲ. ಪಿಎಚ್‌ಡಿ ಪಡೆದವರಿಗೆ ನಾಲ್ಕು- ಐದು ಇನ್ಕ್ರಿಮೆಂಟ್ ಕೊಡಿ ಎಂಬ ಬೇಡಿಕೆ ಹಲವು ದಿನಗಳಿಂದ ಇಟ್ಟಿದ್ದರೂ ಅದಕ್ಕೆ ಯಾವುದೇ ಮನ್ನಣೆ ದೊರೆತಿಲ್ಲ. ಅರ್ಹತೆ ಗಳಿಸಿದ ಪಿಯು ಉಪನ್ಯಾಸಕರನ್ನು ಪದವಿ ಕಾಲೇಜ್‌ಗೆ ಭಡ್ತಿ/ ಪದೋನ್ನತಿ ಕೊಡಿ ಎಂದು ಕೇಳಿದರೆ ಅದಕ್ಕೆ ಸಾವಿರ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಲಾಗುತ್ತದೆ.ಬಹುಶ ಜಗತ್ತಿನಲ್ಲಿ ಒಂದು ಹುದ್ದಾಗೆ ಸೇರಿದ ಮೇಲೆ ಪದೋನ್ನತಿಯೇ ಇಲ್ಲದೆ ಇರುವ ಹುದ್ದಾ ಪಿಯು ಉಪನ್ಯಾಸಕರದ್ದು ಮಾತ್ರ ಇರಬೇಕು! ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಉಪನ್ಯಾಸಕನಾಗಿಯೇ ನಿವೃತ್ತನಾಗಬೇಕು.
ಎ ಒಂದಷ್ಟು ಬೆರಳೆಣಿಕೆಯಷ್ಟು ಮಂದಿಗೆ ಪ್ರಿನ್ಸಿಪಾಲ್ ಆಗಿ ಭಡ್ತಿ ಹೊಂದುವ ಅವಕಾಶ ಸಿಗುತ್ತದೆ ಅಷ್ಟೇ! ಹೆಚ್ಚಿನವರು ಸೇರಿದ ಹುದ್ದಾಯ ನಿವೃತ್ತರಾಗಬೇಕು. ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇರಿಕೊಂಡವರು ಪದವಿ ಶಿಕ್ಷಣ ಪಡೆದು ಬಿಎಡ್ ಪದವಿ ಗಳಿಸಿದರೆ ಪ್ರೌಢ ಶಾಲೆ ಶಿಕ್ಷಕರಾಗಿ ಪದೋನ್ನತಿ ಹೊಂದಲು ಅವಕಾಶವಿದೆ. ಪ್ರೌಢ ಶಾಲೆ ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದು ಪಿಯು ಉಪನ್ಯಾಸಕರಾಗಿ ಭಡ್ತಿ ಪಡೆಯುತ್ತಾರೆ.
ಆದರೆ ಪಿಯು ಉಪನ್ಯಾಸಕರು ಎನ್‌ಇಟಿ, ಪಿಎಚ್‌ಡಿ ಪದವಿಗಳನ್ನು ಪಡೆದರೂ ಯಾವುದೇ ಪ್ರಯೋಜನವಿಲ್ಲದ ಕಾರಣ ಹೆಚ್ಚಿನ ಅಧ್ಯಯನಕ್ಕೆ, ಪದವಿ ಗಳಿಕೆಗೆ ಮುಂದಾಗುವುದೇ ಇಲ್ಲ. ಅದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಂತ ನೀರಾಗುತ್ತಿದೆ!ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜ್‌ಗಳಲ್ಲಿ ಸಾಕಷ್ಟು ಅನುಭವ ಇರುವ ಅರ್ಹ ಪ್ರತಿಭಾವಂತ ಉಪನ್ಯಾಸಕರೇ ಇದ್ದಾರೆ. ಆದರೆ ಇವರ ಸಮಸ್ಯೆಗಳು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರ್ಹರಾರೂ ಉಪನ್ಯಾಸಕರಾಗಲು ಮುಂದೆ ಬರಲಾರರು ಖಂಡಿತ. ಈಗಂತೂ ಪಿಯು ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆಗೆ ಬಿಎಡ್ ಕಡ್ಡಾಯವಾಗಿದೆ.
2013ನೇ ವರ್ಷದಲ್ಲಿ ಆಯ್ಕೆಯಾದವರಲ್ಲಿ ಬಿಎಡ್ ಪದವಿ ಇಲ್ಲದ ಸುಮಾರು 800 ಮಂದಿ ಉಪನ್ಯಾಸಕರ ಭವಿಷ್ಯ ಅತಂತ್ರವಾಗಿದೆ. ತಮ್ಮ ಭವಿಷ್ಯದ ಅಭದ್ರತೆ ಕಾಡುತ್ತಿರುವಾಗಲೂ ತನ್ಮಯತೆಯಿಂದ ಪಾಠ ಮಾಡಿ ಉತ್ತಮ ಫಲಿತಾಂಶ ತರುತ್ತಿರುವ ಇವರುಗಳು ನಿಜಕ್ಕೂ ಶ್ಲಾಘ್ಯರು. ಒಂದು ಕಡೆ ಕಡಿಮೆ ವೇತನ, ಇನ್ನೊಂದು ಕಡೆ ವೇತನ ತಾರತಮ್ಯ, ಮತ್ತೊಂದೆಡೆ ಉನ್ನತ ಕಲಿಕೆಗೊಂದಿಷ್ಟೂ ಮನ್ನಣೆ ಇಲ್ಲದ, ಪದೋನ್ನತಿಯ ನಿರೀಕ್ಷೆಯೇ ಇಲ್ಲದ, ಭರವಸೆಯೇ ಇಲ್ಲದ ಯಾಂತ್ರಿಕತೆ, ಯಾವ ಬೇಡಿಕೆಗಳಿಗೂ ಇಲ್ಲದ ಸ್ಪಂದನೆ. ಇನ್ನು ಪ್ರತಿಭಟಿಸದೇ ಏನು ಮಾಡಬೇಕು ಹೇಳಿ? ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಗಮನ ಕೊಟ್ಟರೆ ಅವರುಗಳ ಪ್ರತಿಭಟನೆ, ಮೌಲ್ಯ ಮಾಪನ ಬಹಿಷ್ಕಾರಗಳು ಇರುವುದೇ ಇಲ್ಲ ಅಲ್ಲವೇ? ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇತರರಿಗೆ ಹೆಚ್ಚಿನ ವೇತನ ಕೊಟ್ಟರೆ ಹೊರೆ ಆಗುವುದಿಲ್ಲವೇ? ಇದಕ್ಕೆ ಉತ್ತರಿಸುವವರು ಯಾರು?
(ಲೇಖಕರು ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು)

Saturday 2 April 2016

ಶಿಕ್ಷಕಿಯಾಗಿ ಧನ್ಯತೆಯ ಕ್ಷಣಗಳು -4 ಡಾ.ಲಕ್ಷ್ಮೀ ಜಿ ಪ್ರಸಾದ


                                                ಸತ್ಯ ಎಂ ಭಟ್ ಅವರ ತಾಯಿಯೊಂದಿಗೆ
"ಪಾಠ ಮಾಡುವುದು ಎಂದರೆ ಪಾಠ ಪುಸ್ತಕಲ್ಲಿನ ವಿಚಾರವನ್ನುವಿವರಿಸುವುದು ಪ್ರಶ್ನೋತ್ತರ ಬಾಯಿ ಪಾಠ ಮಾಡಿಸುವುದು ಅಂಕ ಗಳಿಸುವಂತೆ ಮಾಡುವುದು ಮಾತ್ರ" ಎಂಬ ಬಗ್ಗೆ ನನಗೆ ಒಲವಿಲ್ಲ .
ಪಾಠ ಪುಸ್ತಕದಲ್ಲಿರುವುದನ್ನು ಮಾತ್ರ ಹೇಳಿ ಕೊಡಲು ಶಿಕ್ಷಕರ ಅಗತ್ಯವೇನಿದೆ ?ಎಲ್ಲ ಪ್ರಶ್ನೆಗಳ ಉತ್ತರ ವ್ಯಾಕರಣ ಎಲ್ಲವೂ ಗೈಡ್ ಗಳಲ್ಲಿವೆ .ಅನೇಕರು ಗೈಡ್ ಅನ್ನು ಆಧರಿಸಿಯೇ ಪಾಠ ಮಾಡುತ್ತಾರೆ ಕೂಡ

ಹಾಗಾಗಿ ನಾನು ಸಮಯ ಸಿಕ್ಕಾಗೆಲ್ಲ ನನ್ನ ವಿದ್ಯಾರ್ಥಿಗಳಿಗೆ ಕಥೆ ಕವನನಾಟಕ ರಚನೆ ಸೇರಿದಂತೆ ಅನೇಕ ಸಾಹಿತ್ಯಿಕ ವಿಚಾರಗಳ ಬಗ್ಗೆ ಮಾಹಿತಿ ಕೊಡುತ್ತಿರುತ್ತೇನೆ ಇದಕ್ಕೆ ಪೂರಕವಾಗಿ ಸ್ಥಳೀಯ ಕವಿ ವಿದ್ವಾಂಸರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಶಿಬಿರಗಳನ್ನು ಏರ್ಪಡಿಸುತ್ತಿರುತೇನೆ

ಬಹುಶ ನಾನು ಬೆಳ್ಳಾರೆ ಗೆ ಉಪನ್ಯಾಸಕಿಯಾಗಿ ಹೋದ ವರ್ಷ ಅಥವಾ ಅದರ ಮರು ವರ್ಷ ಇರಬೇಕು .ಒಂದು ದಿನ ಯಾರೋ ಒಬ್ಬ ಉಪನ್ಯಾಸಕರು ಬಂದಿರಲಿಲ್ಲ ಹಾಗಾಗಿ ನಾನು ದ್ವಿತೀಯ ಪಿಯುಸಿ ಮಕ್ಕಳ ತರಗತಿಯನ್ನು ಹೆಚ್ಚುವರಿಯಾಗಿ ತೆಗದುಕೊಂಡೆ.ಅದು ಅಂದಿನ ಕೊನೆ ಅವಧಿ .
ಬೆಳಗಿನಿಂದ ಪಾಠ ಕೇಳಿ ಕೇಳಿ ವಿದ್ಯಾರ್ಥಿಗಳು ಸುಸ್ತಾಗಿದ್ದರು .ಹಾಗಾಗಿ ಪಾಠ ಬದಲಿಗೆ ಬೇರೆ ಏನಾದರೂ ಸಾಹಿತ್ಯ ಚಟುವಟಿಕೆ ಮಾಡಿಸೋಣ ಎನ್ನಿಸಿತ್ತು
ಹಾಗಾಗಿ ಯಾವಾಗಲೋ ಕಾವ್ಯ ರಚನಾ ಕಮ್ಮಟ ದಲ್ಲಿ ಬಳಕೆ ಮಾಡುವುದಕ್ಕಾಗಿ ತೆಗೆದಿಟ್ಟಿದ್ದ  ನಾನಾ ಭಾವಗಳನ್ನು ಹೊರ ಸೂಸುವ ಬಣ್ಣದ ಚಿತ್ರಗಳನ್ನು ತಂದು ತೋರಿಸಿದೆ .ಇದನ್ನು ನೋಡುವಾಗ ನಿಮಗೆ ಏನನ್ನಿಸುತ್ತದೆ ?ಅದನ್ನು ಅಕ್ಷರ ರೂಪದಲ್ಲಿ ಬರೆಯಿರಿ ಎಂದು ಹೇಳಿದೆ ,ಅದು ಕಥೆ ಆಗ ಬಹುದು ಕವನ ಆಗ ಬಹುದು ಏನೂ ಆಗ ಬಹುದು ಎಂದು ತಿಳಿಸಿದೆ .
ವಿದ್ಯಾರ್ಥಿಗಳು ತಮಗೆ ಅನಿಸಿದಂತೆ ತಮ್ಮ ತಮ್ಮ ಭಾವಕ್ಕೆ ಸಿಕ್ಕಂತೆ ಕಥೆ ಕವನ ಪ್ರಬಂಧಗಳನ್ನು ಬರೆದರು .

ನಾನು ಕೊಟ್ಟ ಚಿತ್ರಗಳಲ್ಲಿ  ಒಂದು ಚಿತ್ರ ಮಗುವನ್ನು ಎತ್ತಿಕೊಂಡ ತಾಯಿ ಕೂಡ ಇತ್ತು .
ಅದನ್ನು ನೋಡಿಯೋ ಅಥವಾ ತನ್ನ ತಾಯಿಯನ್ನು ನೆನಪಿಸಿಕೊಂಡೋ ಏನೋ ತಿಳಿಯದು ಸತ್ಯ ಗಣೇಶ ಎಂಬ  ವಿದ್ಯಾರ್ಥಿ ಅಮ್ಮ ಎನ್ನುವ ಶೀರ್ಷಿಕೆಯಲ್ಲಿ ಒಂದು ಉತ್ತಮ ಕವನ ರಚಿಸಿದ್ದ .
ತುಂಬಾ ಚೆನ್ನಾಗಿ ಭಾವ ಪೂರ್ಣವಾಗಿತ್ತು.
ಇದಾಗಿ ಕೆಲವು ವಾರಗಳ ನಂತರ ಸ್ಥಳೀಯ ಹಿರಿಯ ವಿದ್ವಾಂಸರಾದ ಬಾಳಿಲ ಪರಮೇಶ್ವರ ಭಟ್ ಅವರನ್ನು ಕರೆಸಿ ಜೆಸಿಐ ಸಂಘಟನೆಯ ಸಹಾಯದೊಂದಿಗೆ ಒಂದು ಕಾವ್ಯ ರಚನಾ ಕಮ್ಮಟ ಏರ್ಪಡಿಸಿದ್ದೆ .
ಅವರು ನಮ್ಮ ಮಕ್ಕಳಿಗೆ ಕಾವ್ಯ ರಚನೆಯ ಒಳಗುಟ್ಟುಗಳನ್ನು ಹೇಳಿಕೊಟ್ಟಿದ್ದರು .
ಇದಾದ ನಂತರವೂ ಸಮಯ ಸಿಕ್ಕಾಗ ವಿದ್ಯಾರ್ಥಿಗಳಲ್ಲಿ  ಸಾಹಿತ್ಯ ಓದು ಮತ್ತು ರಚನೆ ಗೆ ಬೆಂಬಲ ಕೊಡುತ್ತಾ ಇದ್ದೆ .
ಇದಾಗಿ ಸುಮಾರು ಸಮಯ ನಂತರ ಕಾಲೇಜ್ ವಾರ್ಷಿಕೋತ್ಸವ ಹತ್ತಿರ ಬಂತು .
ನಮ್ಮ ವಿದ್ಯಾರ್ಥಿಗಳು ಒಳ್ಳೆ ಕಥೆ ಕವನ ರಚಿಸುತ್ತಾರೆ ಎಂಬುದನ್ನು ಅರಿತಿದ್ದ ನಾನು ಪ್ರಾಂಶುಪಾಲರಲ್ಲಿ ಚರ್ಚಿಸಿ ಕವನ ಮತ್ತು ಕಥಾ ರಚನೆ ಸ್ಪರ್ಧೆ ಇರಿಸಿದೆ ,ಈ ಬಗ್ಗೆ ಸಾಕಷ್ಟು ವಾದ ಮಾಡಬೇಕಾಗಿ ಬಂತು ಇಷ್ಟರ ತನಕ ಇಲ್ಲಿ ಕವನ ರಚನೆ ಕಥಾ ರಚನೆ ಸ್ಪರ್ಧೆ ಇರಲಿಲ್ಲ .ಅಲ್ಲದೆ ಮಕ್ಕಳಿಗೇನು ಕಥೆ ಕವನ ಬರೆಯೋಕೆ ಬರುತ್ತೆ ?ಇತ್ಯಾದಿ ಮಾತುಗಳು ಬಂತು .ಕೊನೆಗೆ "ಬಹುಮಾನದ ಖರ್ಚನ್ನು ನಾನು ಕೊಡುತ್ತೇನೆ "ಎಂದ ಮೇಲೆ ಅದಕ್ಕೆ ಅವಕಾಶ ಸಿಕ್ಕಿತು
ಕವನ ಸ್ಪರ್ಧೆಯ ದಿನದಂದು ಬಂದು ನೋಡಿದರೆ ಕವನ ಬರೆಯುತ್ತಿದ್ದ ಹೆಚ್ಚಿನನ ಮಕ್ಕಳು ಅಲ್ಲಿ ಸ್ಪರ್ಧೆಯಲ್ಲಿ ಇರಲಿಲ್ಲ .ಮೂರು ನಾಕು ವಿದ್ಯಾರ್ಥಿಗಳು ಮಾತ್ರ ಇದ್ದರು .
ಹೊರಗಡೆ ಬಂದು ಚೆನ್ನಾಗಿ ಕವನ ರಚಿಸುತ್ತಿದ್ದ ಅನೇಕ ಮಕ್ಕಳನ್ನು ಬಲವಂತದಿಂದ ಎಳೆದು ತಂದು ಕಾಗದ ಕೊಟ್ಟು ಬರೆಯಲು ಕೂರಿಸಿದೆ .
ಹೀಗೆ ಎಳೆದು ತಂದು ಕೂರಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬಾತ ಪ್ರಥಮ ಬಹುಮಾನ ಪಡೆದ.ಅವನೇ ಸತ್ಯ ಗಣೇಶ /ಸತ್ಯ ಎಂ ಭಟ್ ,ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ .
ಈಗ ನನ್ನ ಫೇಸ್ ಬುಕ್ ಸ್ನೇಹಿತ ಈತ .ಇಂದು ತಾಯಿ ಜೊತೆ ಭಾವಚಿತ್ರವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರು ಆಗ ನಾನು ಕೇಳಿದೆ "ಅಂದಿನ ಅಮ್ಮ ಕವನ ನೆನಪಿದೆಯೇ ಅಂತ ?
ಅವರು ಚಾಟ್  ಮಾಡುತ್ತಾ ಹೇಳಿದರು ,ಐವತ್ತು ಅರುವತ್ತು ಕವನಗಳು ಇದ್ದ ಪುಸ್ತಕ ಮನೆ ಬದಲಾಯಿಸುವಾಗ ಕಳೆದು ಹೋಗಿದೆ ಅದರಲ್ಲಿ ಆ ಕವನ ಕೂಡ ಇತ್ತು ಎಂದು.
ಪುನಃ ಒಮ್ಮೆ ಸಾವಕಾಶ ಹುಡುಕಲು ಹೇಳಿದೆ ಮತ್ತು ಕವನ ರಚನೆ ಮುಂದುವರಿಸಲು ಹೇಳಿದೆ.
ಆಗ ಗೊತ್ತಾಯಿತು ಅವರು ಒಂದು ಕವನ ಸಂಕಲನವನ್ನು ಹೊರ ತರುವ ಯೋಚನೆಯಲ್ಲಿದ್ದಾರೆ ಎಂದು !
ಭಯಂಕರ ಖುಷಿ ಆಯ್ತು ನನಗೆ ,ನನ್ನ ವಿದ್ಯಾರ್ಥಿಯೊಬ್ಬ ಕವನ ಸಂಕಲನ ತರುವುದು ಅತ್ಯಂತೆ ಹೆಮ್ಮೆಯ ವಿಚಾರ ನನಗೆ !
ವಿದ್ಯಾರ್ಥಿಗಳ ಯಶಸ್ಸಿನಲ್ಲಿಯೇ ತಾನೇ ಶಿಕ್ಷಕರ ಸಾರ್ಥಕ್ಯತೆ ಇರುವುದು !
ನನ್ನ ಅನೇಕ ವಿದ್ಯಾರ್ಥಿಗಳ ಕಥೆ ಕವನ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುದು ನೋಡಿದಾಗ ತುಂಬಾ ಸಂತಸವಾಗುತ್ತದೆ .ಸತ್ಯ ಎಂ ಭಟ್ ಅವರಂತೆ ಪ್ರದೀಪ್,ಯಶಸ್ವಿನಿ  ಕಾವ್ಯ, ಪ್ರಸಾದ್  ಸೇರಿದಂತೆ ಅನೇಕರು ಕಥೆ ಕವನ ನಾಟಕ ಲೇಖನಗಳನ್ನು ಬರೆಯುತ್ತಿದ್ದಾರೆ ಸಾಹಿತ್ಯ ಕೃಷಿ ಮುಂದುವರಿಸುತ್ತಿದ್ದಾರೆ ಎಂಬುದು ನನಗೆ ಹೆಮ್ಮೆಯ ಸಂತಸದ ವಿಷಯವಾಗಿದೆ