Saturday 31 March 2018

ದೊಡ್ಡವರ ದಾರಿ 53 ತುಳುನಾಡು ಪ್ರಿಯ ಸುನಿಲ್ ಎಂ ಎಸ್ © ಡಾ‌.ಲಕ್ಷ್ಮೀ ಜಿ ಪ್ರಸಾದ



ದೊಡ್ಡವರ ದಾರಿ 53 ತುಳುನಾಡು ಪ್ರಿಯ ಸುನಿಲ್ ಎಂ ಎಸ್
ಮೊನ್ನೆ ಮಾರ್ಚ್ ಒಂಬತ್ತನೇ ತಾರೀಕಿನಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕರ್ನಾಟಕ ಯುವರಾಜ್ಯ ವೇದಿಕೆಯ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ನನಗೆ ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದ್ದರು‌.
ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವವರು ಸುನಿಲ್ .ನನಗೆ ಇವರನ್ನು ಫೇಸ್ ಬುಕ್ ಮೂಲಕ ಮೂರು ನಾಲ್ಕು ವರ್ಷಗಳಿಂದ ಪರಿಚಯ.ಬಹಳ ಮುಗ್ಧ ಪ್ರಾಮಾಣಿಕ ಸಹೃದಯ ತರುಣನಾಗಿ ಅಕ್ಕಾ ಎಂದು ಬಾಯಿ ತುಂಬಾ ನನ್ನನ್ನು ಕರೆಯುವ ಸುನಿಲ್ ನನಗೆ ಆಪ್ತರಾಗಿದ್ದರು‌.ಕನ್ನಡ ಕಟ್ಟುವ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ಕಾರ್ಯವೆಸಗುತ್ತಿರುವ ಇವರು ಒಂದು ದಿನ ನನ್ನ ಬಯೋ ಡೇಟಾ ಕೇಳಿದರು.ಯಾಕೆ ಏನೆಂದು ವಿಚಾರಿಸುವಷ್ಟು ನನಗೆ ಸಮಯ ಇರಲಿಲ್ಲ ಯಾಕೆಂದರೆ ನಮಗೆ ಕಾಲೇಜಿನಲ್ಲಿ ಮೌಲ್ಯ ಮಾಪನನದ ಒತ್ತಡದ ಕಾರ್ಯ‌.ಫಲಿತಾಂಶ ಪ್ರಥಮ ಪಿಯುಸಿ ಫಲಿತಾಂಶ ಸಮೀಪದಲ್ಲಿಯೇ ಇದ್ದ ಕಾರಣ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿ ಕೊಡಬೇಕಾಗಿತ್ತು.
ನಂತರ ಒಂದು ದಿನ ನನಗೆ ನಿಮ್ಮನ್ನು ಕರ್ನಾಟಕ ಯುವ ರಕ್ಷಣಾ ವೇದಿಕೆ ಸಾಧನಾ ಕಣ್ಮಣಿ ಪ್ರಶಸ್ತಿ ಗೆ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು‌.ನನಗೆ ದೊಡ್ಡ ಅಚ್ಚರಿ ಏನೂ ಆಗಲಿಲ್ಲ. ನಾನು ಹೆಚ್ಚಾಗಿ  ತುಳುನಾಡು ಸಂಸ್ಕೃತಿ ಕುರಿತಾಗಿ ಅಧ್ಯಯನ ಮಾಡಿದ ಕಾರಣ ದಕ್ಷಣಕನ್ನಡ ಸಂಘಟನೆಗಳಾದ   ತುಳುವೆರೆಂಕುಲು  ಬೆಂಗಳೂರು ಇವರು ಬಲಿಯೇಂದ್ರ ಪುರಸ್ಕಾರ- 2016.ದಕ್ಷಿಣ ಕನ್ನಡಿಗರ ಸಂಘದಿಂದ ಕರಾವಳಿ ರತ್ನ, ಶಾಮರಾವ್ ಫೌಂಡೇಶನ್ ನಿಂದ OUTSTANDING TEACHER AWARD- 2013 ಅನ್ನು ನೀಡಿದ್ದರು
 ನಾನು ಹೆಚ್ಚಾಗಿ ತುಳು ಸಂಸ್ಕೃತಿಗೆ ಸಂಬಂಧಿಸಿ ಅಧ್ಯಯನ ಮಾಡಿದ್ದಾಗಿದ್ದರೂ ಅನೇಕ ಕನ್ನಡ ಸಂಘಟನೆಗಳು ನನ್ನನ್ನು ತುಳುನಾಡಿನವಳು ಎಂದು ಪರಿಗಣಿಸದೆ ಕನ್ನಡತಿಯಾಗಿ ಭಾವಿಸಿ ನನ್ನ ಅಧ್ಯಯನ ,ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಬೆಂಬಲ ನೀಡಿವೆ‌.ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಕನ್ನಡ ಕೈಂಕರ್ಯವನ್ನು ನಿರಂತರ ಮಾಡುತ್ತಿರುವ ಶೇಖರ್ ಅಜೆಕಾರ್ 2014 ರಲ್ಲಿಯೇ ಕರ್ನಾಟಕ ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು.
2015 ರಲ್ಲಿ ಕನ್ನಡ ಕಾವಲು ಪಡೆಯ ಮೂಲಕ ಕನ್ನಡಮ್ಮನ ಸೇವೆ ಮಾಡುವ ಸತೀಶ ಜವರೇ ಗೌಡ ಅವರು ನನ್ನ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿದ್ದರು‌.ಅದೇ ವರ್ಷ ಕನ್ನಡಕ್ಕಾಗಿ ಹಿರಿಯರ ಕಾಲದಿಂದಲೂ ಶ್ರಮಿಸುತ್ತಿರುವ ಗುರುನಾರಾಯಣರಾವ್ ಅವರು ನನ್ನನ್ನು ತುಳುನಾಡಿನವಳು ಎಂದು ಭಾವಿಸದೆ ಕನ್ನಡತಿ ಎಂಬ ನೆಲೆಯಲ್ಲಿ ನನ್ನ ಅಧ್ಯಯನ ವನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ನಿಮಿತ್ತ ಪರಮೇಶ್ವರ ಪುಲಕೇಶಿ  ಪ್ರಶಸ್ತಿ ಯನ್ನು ನೀಡಿ ಸತ್ಕರಿಸಿದ್ದರು.2017 ರ. ಆರಂಭದಲ್ಲಿಯೇ   ಡಾ.ಬಾಲಾಜಿಯವರ  ಕಟ್ಟಿ ಬೆಳೆಸಿರುವ ಕನ್ನಡ ಜಾನಪದ ಪರಿಷತ್ ನಿಂದ ಜಾನಪದ ಪ್ರಪಂಚ- 2017 ಪ್ರಶಸ್ತಿ ನೀಡಿ ನನ್ನ ತುಳು ಜಾನಪದ ಅಧ್ಯಯನ ವನ್ನು ಗುರುತಿಸಿದ್ದರು.
ಹಾಗಾಗಿ ಕರ್ನಾಟಕ ಯು ರಕ್ಷಣಾ ವೇದಿಕೆ ನನ್ನನ್ನು ಸಾಧನಾ ಕಣ್ಮಣಿ ಪ್ರಶಸ್ತಿಗೆ ಆಯ್ಕೆ ಮಾಡಿದಾಗ ನನಗೇನು ದೊಡ್ಡ ಆಶ್ಚರ್ಯ ಆಗಲಿಲ್ಲ.
ಆದರೆ ಆಚ್ಚರಿ ಆದದ್ದು ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತಳಹದಿ ಬಗ್ಗೆ.
ನನಗೆ ನೀಡಿದ ಸಾಧನಾ ಕಣ್ಮಣಿ ಪ್ರಶಸ್ತಿ ಯ ಫಲಕದಲ್ಲಿ ಸ್ಪಷ್ಟವಾಗಿ ತುಳುನಾಡಿಗೆ ನೀಡಿದ ಕೊಡುಗೆಗಾಗಿ ಮತ್ತು ತುಳು ಸಂಸ್ಕೃತಿಯ ಅಧ್ಯಯನಕ್ಕಾಗಿ ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದೆ ಎಂದು ಬರೆದಿದೆ‌
ಕಳೆದ ಎಂಟುವರ್ಷಗಳಿಂದ ಕನ್ನಡ ಕಟ್ಟುವ ಸಲುವಾಗಿ ಕರ್ನಾಟಕ ಯುವ ರಕ್ಷಣಾ ವೇದಿಕೆ ರಚಿಸಿ ಎಲ್ಲ ಜಿಲ್ಲೆ ತಾಲೂಕುಗಳಲ್ಲಿ ಶಾಖೆಗಳನ್ನು ತೆರೆದು ಕನ್ನಡ ಕೈಂಕರ್ಯ ಮಾಡುತ್ತಿರುವ ಸುನಿಲ್ ತುಳುನಾಡನ್ನು ಕೂಡ ಕರ್ನಾಟಕದ ಭಾಗವಾಗಿಯೇ ಪ್ರೀತಿಸಿದ್ದಾರೆ ಹಾಗಾಗಿಯೇ ತುಳುನಾಡಿಗೆ ನೀಡಿದ ಕೊಡುಗೆ ಹಾಗೂ ಅಧ್ಯಯನಕ್ಕಾಗಿ ನನ್ನನ್ನು ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದ್ದಾರೆ‌
ಅಲ್ಲಲ್ಲಿಕನ್ನಡ ಮತ್ತು ತುಳು ಸಂಘರ್ಷ ಏಳುತ್ತಿರುವೆಡೆ ಇವರದು ಸಮನ್ವಯದ ಹಾದಿ .ಇವರು ತುಳುನಾಡಿನವರು ಅಲ್ಲದಿದ್ದರೂ ತುಳುನಾಡಿನ ಮೇಲೆ ಇವರಿಗಿರುವ ಪ್ರೀತಿ ಅಭಿಮಾನವನ್ನು ಯಾರು ಕೂಡ ಮೆಚ್ಚುವದ್ದೇ ಆಗಿದೆ.ಇವರ ಸಂಘಟನಾ ಸಾಮರ್ಥ್ಯ ಕೂಡ ಮೆಚ್ಚುವದ್ದೇ ಆಗಿದೆ‌
ಅದೂ ಅಲ್ಲದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಿ ಪ್ರಶಸ್ತಿ ನೀಡಿದ್ದು ಅನುಸರಣಯೋಗ್ಯವಾಗಿದೆ
© ಡಾ.ಲಕ್ಷ್ಮೀ ಜಿ ಪ್ರಸಾದ

Sunday 25 March 2018

ದೊಡ್ಡವರ ದಾರಿ 52 ರಾಮಾಯಣ ಕಥೆ ಹೇಳಿದ ಕೊಮ್ಮೆ ತಿಮ್ಮಣ್ಣ ಮಾಷ್ಟ್ರು© ಡಾ.ಲಕ್ಷ್ಮೀ ಜಿ ಪ್ರಸಾದ


ದೊಡ್ಡವರ ದಾರಿ :53 ರಾಮನ ಕಥೆ ಹೇಳಿದ ಕೊಮ್ಮೆ ಮಾಷ್ಟ್ರು
ನನ್ನ ಮಗನನ್ನು ಐದನೇ ತರಗತಿಗೆ ಪ್ರಶಾಂತಿ ವಿದ್ಯಾ ಕೇಂದ್ರಕ್ಕೆ ಸೇರಿಸಿದ್ದೆವು.ಅಲ್ಲಿ ಅವನಿಗೆ ಒಂದು ಪ್ರವೇಶ ಪರೀಕ್ಷೆ ಮಾಡಿದ್ದರು.ಅದರಲ್ಲಿ ರಾಮಾಯಣ ಬರೆದವರು ಯಾರು ಎಂದು ಕೇಳಿದ್ದರು‌.ನನ್ನ ಮಗನಿಗೆ ಗೊತ್ತಿರಲಿಲ್ಲ. ನಂತರ ನನ್ನಲ್ಲಿ ಕೇಳಿದ.ಹೌದು ಅದರಲ್ಲಿ ಅವನ ತಪ್ಪಿರಲಿಲ್ಲ ಯಾಕೆಂದರೆ ರಾಮಾಯಣ ಕಥೆಯನ್ನು ಅವನು ಆ ತನಕ ಕೇಳಿರಲಿಲ್ಲ .ನಂತರ ನಾನು ಸಣ್ಣ ಮಕ್ಕಳು ಓದುವ ರಾಮಾಯಣ ಪುಸ್ತಕ ತಂದು ಕೊಟ್ಟೆ.ಅದು ಬೇರೆ ವಿಚಾರ.
ಆಗ ತಕ್ಷಣ ನನಗೆ ನೆನಪಿಗೆ ಬಂದದ್ದು ನಮಗೆ ರಾಮಾಯಣ ಕಥೆಯನ್ನು ಅಭಿನಯ ಸಹಿತವಾಗಿ ಹೇಳಿದ ಕೊಮ್ಮೆ ತಿಮ್ಮಣ್ಣ ಮಾಷ್ಟ್ರು.
ನನಗೆ ಐದು ವರ್ಷ ಆಗುವಾಗ ನನ್ನ ಸಣ್ಣ ತಮ್ಮ ಗಣೇಶ ಹುಟ್ಟಿದ್ದ.ಹಾಗಾಗಿ ಅಮ್ಮ ಬಾಣಂತನಕ್ಕೆ ನನ್ನ ಅಜ್ಜನ ಮನೆಗೆ ಹೋಗಿದ್ದರು‌.ಆದ್ದರಿಂದ ನಾನು ಒಂದನೇ ತರಗತಿಗೆ ಮೀಯಪದವು ವಿದ್ಯಾವರ್ಧಕ ಶಾಲೆಗೆ ಸೇರಿದೆ.ಅಲ್ಲಿ ನನಗೆ ಕಲಿಕೆ ಏನೂ ತೊಡಕಾಗಲಿಲ್ಲ.ವೇದವಲ್ಲಿ ಟೀಚರ್ ನಮಗೆ ತುಂಬಾ ಪ್ರೀತಿಯಿಂದ ಅ ಆ ಇ ಈ ಅಕ್ಷರ ಮಾಲೆ ,ಒಂದು ಎರಡು ನೂರರ ತನಕ ಸಂಖ್ಯೆಗಳನ್ನು ಹೇಳಿಕೊಟ್ಟಿದ್ದರು.ಬಹುಶಃ  ಕಲಿಕೆಯಲ್ಲಿ ನಾನು ಮುಂದಿದ್ದೆ ಅಂತ ಕಾಣುತ್ತದೆ.ಯಾಕೆಂದರೆ ಇಡೀ ತರಗತಿಗೆ ಒಂದು ಎರಡು ನೂರರ ತನಕ ಹೇಳಿಸುವ ಜವಾಬ್ದಾರಿ ನನಗೆ ಕೊಟ್ಟಿದ್ದರು.ದಿನಾಲು ನಾನು ಒಂದು ಎರಡು ಎಮದು ತರಗತಿಯ ಸಹಪಾಠಿಗಳಲ್ಲಿ ದೊಡ್ಡದಾಗಿ ಹೇಳಿಸುತ್ತಾ ಇದ್ದೆ‌
ಎರಡನೇ ತರಗತಿಗಾಗುವಾಗ ನಾನು ಅಮ್ಮ ನಮ್ಮ ಕೋಳ್ಯೂರಿನಲ್ಲಿ ಕಟ್ಟಿದ ಹೊಸ( ಮಣ್ಣಿನ )ಮನೆಗೆ ಬಂದಿದ್ದರು‌.ನಾನು ಕೂಡ ಹಠಮಾಡಿ ಅಜ್ಜನ ಮನೆಯಲ್ಲಿ ನಿಲ್ಲದೆ ಅಮ್ಮನ ಜೊತೆ ಬಂದಿದ್ದೆ‌ಹಾಗಾಗಿ ಎರಡನೇ ತರಗತಿಗೆ ನಾನು ಕೋಳ್ಯೂರು ಶಂಕರನಾರಾಯಣ ಪ್ರಾಥಮಿಕ ಶಾಲೆಗೆ ಸೇರಿದೆ.ಇಲ್ಲಿ ಎರಡನೇ ತರಗತಿಗೆ ಮೇಷ್ಟ್ರಾಗಿದ್ದವರು ಕೊಮ್ಮೆ ತಮ್ಮಣ್ಣ ಭಟ್
ಇಲ್ಲಿ ಕೂಡ ಕಲಿಕೆಯಲ್ಲಿ ನಾನು ಹಿಂದೆ ಇರಲಿಲ್ಲ .ಆದರೆ ಯಾಕೋ ಏನೋ ನನಗೆ ನೆನಪಿಲ್ಲ .ನನಗೆ ದಿನಾಲು ಪೆಟ್ಟು ಬೀಳುತ್ತಿತ್ತಂತೆ.ನನ್ನ ಸಹಪಾಠಿಗಳಾದ ಯಶೋದೆ ಮತ್ತು ಅವಳ ತಂಗಿ‌ಮಲ್ಲಿಕಾ ನನಗೆ ಈ ವಿಚಾರವನ್ನು ನಾನು ಹೈಸ್ಕೂಲ್ ಓದುವ ಸಮಯದಲ್ಲಿ ಹೇಳಿದ್ದರು‌
ಅದೃಷ್ಟವಶಾತ್ ನನಗೆ ಇದು ನೆನಪಿಲ್ಲ‌ ಮರೆವು ಕೂಡ ವರವೇ.ನನಗೆ ಯಾಕೆ ಪೆಟ್ಟು ಬೀಳುತ್ತಿತ್ತೆಂದರೆ ನಾನು ದಿನಾಲು ತಡವಾಗಿ ಶಾಲೆಗೆ ಬರುತ್ತಿದ್ದೆನಂತೆ.ದಿನಾಲು ಪೆನ್ಸಿಲ್ ಕಡ್ಡಿಗಳನ್ನು ಕಳೆದು ಹಾಕುತ್ತಿದ್ದೆನಂತೆ .ದಿನಾಲು ಪೆನ್ಸಿಲ್ ಕಳೆದು ಹೋಗುತ್ತಿದ್ದುದು ನನಗೆ ನೆನಪಿದೆ.ಆದರೆ ಎಲ್ಲಿ ಹೋಗುತ್ತಿತ್ತು? ಯಾರು ತೆಗೆಯುತ್ತಿದ್ದರು ಗೊತ್ತಿಲ್ಲ,ಶಿಸ್ತಿನ ಶಿಪಾತಯಿಯಾಗಿರುವ ಕೊಮ್ಮೆ ಮಾಷ್ಟ್ರು ಅದನ್ನು ನೀಟಾಗಿ ನನಗೆ ಇಟ್ಟುಕೊಳ್ಳುವ ಬಗ್ಗೆ ಹೇಳಿಕೊಡುತ್ತಿರಲಿಲ್ಲವಂತೆ ,ಬದಲಿಗೆ ಚೆನ್ನಾಗಿ ಹೊಡೆತುತ್ತಿದ್ದರಂತೆ.ಯಶೋದೆಯ ತಾಯಿ ಬಹಳ ಸಹೃದಯಿ. ಅವರು ನನಗೆ ದಿನಾಲು ಪೆಟ್ಟು ಬೀಳುವ ಬಗ್ಗೆ ನೊಂದುಕೊಳ್ಳುತ್ತಿದ್ದರಂತೆ.ನಾನು ದಿನಾಲು ತಡವಾಗಿ ಬರುತ್ತಿದ್ದರೆ ನಮ್ಮ ತಂದೆ ಅಥವಾ ತಾಯಿಗೆ ತಿಳಿಸದೆ ನನಗೇಕೆ ಹೊಡೆಯುತ್ತಿದ್ದರು ಕೊಮ್ಮೆ ಮಾಷ್ಟ್ರು ? ನನಗೆ ಇಂದಿಗೂ ಅರ್ಥವಾಗುತ್ತಾ ಇಲ್ಲ‌.ಅಥವಾ ನಾನೇಕೆ ಇದನ್ನು ನಮ್ಮ ಮನೆಯಲ್ಲಿ ತಿಳಿಸಿಲ್ಲ‌? ನಮ್ಮ ತಂದೆ ತಾತಿಗೆ ಮಕ್ಕಳ ಬಗ್ಗೆ ತುಂಬಾ ಕಾಳಜಿ ಇತ್ತು. ಒಂದೊಮ್ಮೆ ಶಾಲೆಯಲ್ಲಿ ವಿನಾ ಕಾರಣ ಹೊಡೆತ ಬೀಳುತ್ತದೆ ಎಂದು ಗೊತ್ತಾಗಿದ್ದರೆ ಖಂಡಿತಾ ಬಂದು ಮಾತನಾಡುತ್ತಿದ್ದರು. ನನ್ನನ್ನು ಅ ಶಾಲೆ ಬಿಡಿಸಿ ಹಿಂದಿನ ವಿದ್ಯಾವರ್ಧಕ ಶಾಲೆಗೆ ಸೇರಿಸುತ್ತಿದ್ದರು
ಆದರೆ ನನಗೆ ಅವರು ಅಷ್ಟೆಲ್ಲಾ ಹೊಡೆದಿದ್ದಾರೆಂಬುದು ನಾನು ದೊಡ್ಡವಳಾದ ಮೇಲೆ ಯಶೋದೆ ಮತ್ತು ಮಲ್ಲಿಕಾ ಹೇಳಿ ಗೊತ್ತೇ ಹೊರತು ನನಗೆ ನಿಜಕ್ಕೂ ನೆನಪಿಲ್ಲ.ಆಗ ಅವರು ಕೂಡ ಚಿಕ್ಕವರು.ಒಂದೆರಡು ಸಲ ನನ್ನ ಉಡಾಫೆಗೆ ಹೊಡೆದಿದ್ದನ್ನೇ ತುಂಬಾ ಹೊಡೆದಿದ್ದರು,(ನಾನು ಈಗಿನಂತೆ ಆಗಲೂ ಉಡಾಫೆಯೇ ಆಗಿದ್ದಿರಬಹುದು.ಅದಕ್ಕಾಗಿ ಒಂದೆರಡೇಟು ಬಿದ್ದಿರಬಹುದು) ಎಂದು ಭಾವಿಸಿ ನನಗೆ ಹೇಳಿರಲಿಕ್ಕೂ ಸಾಕು
ಅದೇನೇ ಇರಲಿ  ಬಗ್ಗೆ ತುಂಬಾ ಪ್ರೀತಿಯೇ ಇದೆ .ಯಾಕೆಂದರೆ ಅವರು ತುಂಬಾ ಚಂದದ ಕಥೆಗಳನ್ನು ಹೇಳುತ್ತಿದ್ದರು.ಆ ಕಥೆಗಳನ್ನು ಕೇಳುವುದಕ್ಕಾಗಿಯೇ ನಾನು‌ ಪೆಟ್ಟು ಬೀಳುತ್ತಿದ್ದರೂ ಶಾಲೆಗೆ ಹೋಗುತ್ತಿದ್ದಿರಬೇಕು .ನನಗೋ ಕಥೆಗಳೆಂದರೆ ಜೀವ .(ನಾನು ನಾಲ್ಕನೆಯ ತರಗತಿಗೆ ಬರುವಷ್ಟರಲ್ಲಿ ಸಾತಿಸುತೆ,ಉಷಾ ನವರತ್ನರಾಂ, ಮೊದಲಾದವರ ಕಾದಂಬರಿಗಳನ್ನು ಓದುತ್ತಾ ಇದ್ದೆ .ನಾನು ಓದಿನ ಮೊದಲ ಕಾದಂಬರಿ ಸಾಕು ಮಗ,ಯಾರು ಬರೆದದ್ದು ಎಂದು ನೆನಪಿಲ್ಲ)
ನನಗೆ ತಿಮ್ಮಣ್ಣ ಮಾಷ್ಟ್ರು ತುಂಬಾ ಇಷ್ಟವಾಗಲು ಕಾರಣ ಅವರು ಅಭಿನಯ ಸಹಿತವಾಗಿ ಹೇಳುತ್ತಿದ್ದ ಕಥೆಗಳು ಅದರಲ್ಲೂ ರಾಮಾಯಣ ಕಥೆಗಳು.
ದಶರಥ ಕಾಡಿಗೆ ಹೋದಲ್ಲಿ ಕೈಕೇಯಿಯ ಭೇಟಿ ಆಗುವುದು,ಅವರಲ್ಲಿ ಪ್ರೇಮಾಂಕುರವಾಗುವುದು,ನಂತರ ವಿವಾಹ,ಪುತ್ರ ಕಾಮೇಷ್ಠಿ ಯಾಗ ,ರಾಮಲಕ್ಷ್ಮಣ,ಭರತ ಶತ್ರುಘ್ನರ ಜನನ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕಾಡಿಗೆ ಒಯ್ಯುವುದು, ತಾಟಕಿಯನ್ನು ಕೊಲ್ಲುವುದು,ಶಬರಿಯ ಪ್ರಸಂಗ ಸೀತಾ ಸ್ವಯಂವರ,ರಾಮನಿಗೆ ಪಟ್ಟಾಭಿಷೇಕಕ್ಕೆ ನಿರ್ಧರಿಸುವುದು,ಮಂಥರೆ ಬಂದು ಕೈಕೇಯಿಗೆ ದುರ್ಬೋಧನೆ ಮಾಡುವುದು,ಕೈಕೇಯಿ ಎರಡು ವರಗಳನ್ನು ಕೇಳುವುದು ,ರಾಮಲಕ್ಷ್ಮಣ ಸೀತೆಯರು ಕಾಡಿಗೆ ಹೋಗುವುದು,ಭರತನ ಭ್ರಾತೃಪ್ರೇಮ ಪಾದುಕೆಗಳನ್ನು ಸಿಂಹಾಸನದಲ್ಲಿಟ್ಟು ಆಡಳಿತ ಮಾಡುವುದು ಸೀತಾಪಹರಣ,ಹನುಮಂತ ಸಖ್ಯ,ಲಂಕಾದಹನ,ರಾಮ ರಾವಣರ ಯುದ್ಧ,ಅಯೋಧ್ಯೆಗೆ ಪುಷ್ಪಕ ವಿಮಾನದಲ್ಲಿ ಬರುವುದು ಸೇರಿದಂತೆ ರಾಮಾಯಣದ ಪೂರ್ತಿ ಕಥಾನಕವನ್ನು ನಮಗೆ ಹೇಳಿದ್ದರು. ದಿನಾಲು ಸಂಜೆ ಆಟಕ್ಕೆ ಮಾಡಿ ದಲಿನ ಅವಧಿ ಕಥೆ ಹೇಳುವುದಕ್ಕಾಗಿ ಮೀಸಲಾಗಿತ್ತು.ನಾವೆಲ್ಲಾ ಈ ಅವಧಿಯನ್ನು ತುದಿಗಾಲಿನಲ್ಲಿ‌ ನಿಂತು ಕಾಯುತ್ತಿದ್ದೆವು.ಬಹುಶಃ ನಾವೆಲ್ಲರೂ ಎರಡನೇ ತರಗತಿಯಲ್ಲಿ ರೆಗುಲರ್ ಆಗಿ ಶಾಲೆಗೆ ಬರಲು ಕೂಡ ಇದೇ ಆಕರ್ಷಣೆ ಆಗಿತ್ತು.
ತಿಮ್ಮಣ್ಣ ಮಾಷ್ಟ್ರಿಗೆ ಯಕ್ಷಗಾನದ ಮೇಲೆ ಅಭಿರುಚಿ ಇದೆ‌.ಅದರಿಂದಾಗಿ ರಾಮಾಯಣದ ಎಲ್ಲ ಪ್ರಸಂಗಗಳನ್ನು ನಮ್ಮ ಎಳೆಯ ಮನಸಿಗೆ ನಾಟುವಂತೆ ಅರ್ಥವಾಗುವಂತೆ ಹೇಳಲು ಅವರು ಸಮರ್ಥರಾಗಿದ್ದರು.ಈಗಲೂ ಅವರು ರಾಮಾಯಣದ ಕಥೆ ಹೇಳುತ್ತಿದ್ದ ಪರಿ ನನಗೆ ಕಣ್ಣಿಗೆ ಕಟ್ಟುತ್ತಿದೆ.ಸೀತಾ ಸ್ವಯಂವರಕ್ಕೆ ಬಂದ ರಾವನ ಶಿವ ಧನುಸ್ಸನ್ನು ಎತ್ತಲು ಹೋಗಿ ಅದರಡಿಯಲ್ಲಿ ಅವನ ಕೈಗಳು ಸಿಕ್ಕು ಹಾಕಿಕೊಳ್ಳುವುದು,ಅಂಗದ ಸಂಧಾನಕ್ಕೆ ಹೋದಾಗ ರಾವಣನ ಸಿಂಹಾಸನದಷ್ಟು ಎತ್ತರಕ್ಕೆ ತನ್ನ ಬಾಲವನ್ನು ಸುತ್ತಿ ಕುಳಿತುಕೊಳ್ಳುವುದು ಆಹಾ..ಇದೆಲ್ಲವನ್ನೂ ಕೊಮ್ಮೆ ಮಾಷ್ಟ್ರು ವರ್ಣಿಸುತ್ತಿದ್ದ ಪರಿಯನ್ನು ಶಬ್ದದಲ್ಲಿ ಕಟ್ಟಿಕೊಡಲಾಗದು ,ಕೇಳಿ ನೋಡಿಯೇ ಆನಂದಿಸಬೇಕು.ಅದಕ್ಕಾಗಿ  ಕೋಳ್ಯೂರಿನ ಮಕ್ಕಳಾದ ನಾವುಗಳು ಅವರಿಗೆ ಆಭಾರಿಯಾಗಿರಬೇಕು.ಬಹುಶಃ ,ಮಾತಿನ ,ಅಭಿನಯ ಕೌಶಲ ನನಗೆ ಬೆಳೆಯಲು ಕೂಡ ಇದೇ ಕಾರಣವಾಗಿರಬಹುದು- ಡಾ.ಲಕ್ಷ್ಮೀ ಜಿ ಪ್ರಸಾದ

Tuesday 20 March 2018

ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ- ಅಮರ ಸುಳ್ಯದ ಕ್ರಾಂತಿ -©ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು

ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ- ಅಮರ ಸುಳ್ಯದ ಕ್ರಾಂತಿ
© ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೊಬೈಲ್ 9480516684
ಕೋಲಾರ ಜಿಲ್ಲೆಯ ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14-03-2018 ರಂದು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ

1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದರ್ಥವಲ್ಲ. ಬ್ರಿಟಿಷ್ ಗವರ್ನರ್ ಜನರಲ್ ಡಾಲ್‍ಹೌಸಿ ಬಳಕೆಗೆ ತಂದ ನಿಯಮಾವಳಿಯ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ. ದತ್ತು ತೆಗೆದುಕೊಳ್ಳುವುದಕ್ಕೆ ಮೊದಲೇ ರಾಜನು ಸತ್ತರೆ ಅಥವಾ ಆತನಿಗೆ ದತ್ತು ತೆಗೆದುಕೊಳ್ಳಲು ಅನುಮತಿ ಸಿಗದೆ ಇದ್ದರೆ ಆ ರಾಜನ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು.  ಡಾಲ್‍ಹೌಷಿ ತಂದ ನಿಯಮದಿಂದಾಗಿ ಕೊಡಗು ರಾಜ್ಯ ಕೂಡ ಬ್ರಿಟಿಷರ ಪಾಲಾಗಬೇಕಾಗುತ್ತದೆ.

ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರವನ್ನು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು  ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲಿ. ಕೊಡಗರಸರ ಕಾಲದಲ್ಲಿ ಭತ್ತ, ತೆಂಗಿನಕಾಯಿ ಮೊದಲಾದ ವಸ್ತುಗಳ ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದಿನ ರೂಪದಲ್ಲಿ ಕೊಡಬೇಕೆಂದು ನಿಯಮ ತಂದರು. ಇದರಿಂದಾಗಿ ಸುಳ್ಯದ ರೈತಾಪಿಜನರು ತೀವ್ರವಾಗಿ ಅಸಮಾಧಾನಗೊಂಡರು. ಸುಳ್ಯದ ಜನರು ಬ್ರಿಟಿಷರನ್ನು ತೊಲಗಿಸಿ ಕೊಡಗನ್ನು ವಶಪಡಿಸಿಕೊಂಡು ಕೊಡಗಿನ ಆಡಳಿತವನ್ನು ಪುನರಾರಂಭಿಸಬೇಕೆಂದು ಒಮ್ಮತದಿಂದ ನಿರ್ಧರಿಸಿದರು. ಇದರ ಫಲವಾಗಿ ಸುಳ್ಯ ಬೆಳ್ಳಾರೆ ಪರಿಸರದಲ್ಲಿ ಒಂದು ಸ್ವಾತಂತ್ರ್ಯ ಸಮರ ಆರಂಭವಾಗಿ 1837 ಎಪ್ರಿಲ್ 5ರಂದು ಮಂಗಳೂರಿನ ಕಲೆಕ್ಟರನ ಆಫೀಸಿನ ಎದುರು ಸ್ವತಂತ್ರ ಧ್ವಜವನ್ನು ಊರಿ, ಹದಿಮೂರು ದಿನಗಳ ಕಾಲ ಕೊಡಗು, ಕಾಸರಗೋಡು, ದ.ಕ.ಜಿಲ್ಲೆಯನ್ನೊಳಗೊಂಡ ಪ್ರದೇಶವು ಸ್ವಾತಂತ್ಯದ ಸಿಹಿಯನ್ನು ಅನುಭವಿಸಿತು. ಇದರ ಫಲವಾಗಿ ಸ್ವತಂತ್ರ ನೆಲಕ್ಕಾಗಿ, ತಾಯ್ನಾಡಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆಯಿತು. ಆದರೆ ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು.

ಡಿ. ಎನ್. ಕೃಷ್ಣಯ್ಯನವರು ಹೇಳುವ ಪ್ರಕಾರ 1833ರಲ್ಲಿ ಅಪರಂಪರನೆಂಬ ಜಂಗಮನೊಬ್ಬ ತಾನು ಕೊಡಗಿನ ಲಿಂಗರಾಜೇಂದ್ರ ಒಡೆಯರ ಅಣ್ಣ ಅಪ್ಪಾಜಿಯ ಮಗ ವೀರಪ್ಪ ಒಡೆಯ ಎಂದು ಹೇಳಿಕೊಂಡಾಗ ಕೊಡಗಿನ ಜನರು ಅದನ್ನು ನಂಬುತ್ತಾರೆ. ಆದರೆ ಬ್ರಿಟಿಷರು ಆತನು ರಾಜವಂಶದವನಲ್ಲವೆಂದು ತಿಳಿದು 1835ರಲ್ಲಿ ಆತನನ್ನು ಬಂಧಿಸುತ್ತಾರೆ.

ಅಪರಂಪರನನ್ನು ಬಂಧಿಸಿದಾಗ ಕಲ್ಯಾಣಸ್ವಾಮಿ ಎಂಬಾತನು ತಾನು ಅಪ್ಪಾಜಿಯ ಎರಡನೇ ಮಗ ನಂಜುಂಡಪ್ಪ ಎಂದು ಹೇಳಿಕೊಂಡು ಸುಳ್ಯದಲ್ಲಿ ಜನರು ದಂಗೆ ಏಳುವ ಲಕ್ಷಣ ಕಾಣಿಸಿಕೊಂಡಾಗ ಅವನು ಕೊಡಗಿನವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದನು.ಬ್ರಿಟಿಷರಿಗೆ ಇದು ತಿಳಿದು ಆತನನ್ನು 1837ರಲ್ಲಿ ಬಂಧಿಸಿದರು.

ಸುಳ್ಯದ ರೈತಾಪಿ ಜನರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಹೇಳಿ ನಂಬಿಸಿ ಕೆದಂಬಾಡಿ ರಾಮಗೌಡರ ಮನೆಗೆ ಕರೆತಂದು ಆತನನ್ನು ಕಲ್ಯಾಣಸ್ವಾಮಿ ಎಂದು ಬಿಂಬಿಸಿದರು. ರಾಮಗೌಡರಿಗೆ ಓರ್ವ ಬ್ರಿಟಿಷ್ ಅಮಲ್ದಾರನೊಡನೆ ದ್ವೇಷವಿದ್ದು ಆತನನ್ನು ರಾಮಗೌಡರು ಕೊಲ್ಲುತ್ತಾರೆ. ಇದನ್ನೇ ಮಹತ್ಕಾರ್ಯವೆಂದು ಭಾವಿಸಿದ ಸುಳ್ಯದ ಜನರು ದಂಗೆಯೇಳುವುದಕ್ಕೆ ಬೆಂಬಲಿಸಿದರು 1837 ಮಾರ್ಚ್ 30ರಂದು ಹೋರಾಟ ಆರಂಭವಾಯಿತು. ರಾಮಗೌಡರಿಗೆ ಕೂಜಗೋಡು ಮಲ್ಲಪ್ಪಗೌಡರ ಬೆಂಬಲ ದೊರೆಯಿತು. ಇಡೀ ಗೌಡ ಸಮುದಾಯ ಹೋರಾಟಕ್ಕೆ ಬೆಂಬಲ ನೀಡಿತು.

1837ರ ಮಾರ್ಚ್ 30ರಂದು ರಾಮಗೌಡರು ಬೆಳ್ಳಾರೆಗೆ ಕಲ್ಯಾಣಸ್ವಾಮಿಯನ್ನು (ಪುಟ್ಟ ಬಸಪ್ಪ) ಕರೆ ತರುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣ ಸ್ವಾಮಿಗೆ ಪಟ್ಟಕಟ್ಟುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡರು.ಅಲ್ಲಿ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸುತ್ತ್ತಾರೆ . ಕೊಡಗಿನ ಬೇರೆ ಬೇರೆ ಭಾಗಗಳಿಗೆ ನಿರೂಪ ಕಳಿಸಿ  ಬೆಂಬಲ ಕೇಳಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ಗುಂಪು ಸುಬ್ರಹ್ಮಣ್ಯ ಕಡೆಗೆ ಹೋಯಿತು. ಶ್ರೀ. ಕೆ.ಆರ್. ವಿದ್ಯಾಧರ ಮಡಿಕೇರಿ ಅವರು ‘ಕಂಚುಡ್ಕ ರಾಮಗೌಡ ಹಾಗೂ ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಸೈನ್ಯವನ್ನು ಕುಂಬಳೆ ಕಾಸರಗೋಡಿಗೆ ಕಳುಹಿಸಲಾಯಿತು. ಇನ್ನೊಂದು ತಂಡ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮತ್ತೊಂದು ತಂಡ ಉಪ್ಪಿನಂಗಡಿ ಬಿಸಲೆಗೆ ಹೋಯಿತೆಂದು’ ಅಭಿಪ್ರಾಯ ಪಟ್ಟಿದ್ದಾರೆ. ಡಿ.ಎನ್. ಕೃಷ್ಣಯನವರ ಪ್ರಕಾರ ಪುತ್ತೂರು, ಪಾಣೆ ಮಂಗಳೂರು ಮತ್ತು ಮಂಗಳೂರಿಗೆ ರಾಮಗೌಡ ಹಾಗೂ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ದಂಡು ಹೊರಟಿತು. ಪುತ್ತೂರನ್ನು ವಶಪಡಿಸಿಕೊಂಡು ಪಾಣೆಮಂಗಳೂರಿಗೆ ಬಂದಾಗ ನಂದಾವರದ ಲಕ್ಷ್ಮಪ್ಪ ಬಂಗರಸನು ಕೂಡಿಕೊಂಡನು. 1837 ಎಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿಕೊಂಡು ಬಾವುಟಗುಡ್ಡದಲ್ಲಿ ಧ್ವಜ ಹಾರಿಸಿದರು ಇಲ್ಲಿ 13 ದಿನ ಆಡಳಿತ ನಡೆಸಿದರು.

ಕೊಡಗಿನಲ್ಲಿ ಗುಡ್ಡೆಮನೆ ಅಪ್ಪಯ್ಯ ಹೋರಾಟಕ್ಕೆ ಬೆಂಬಲ ನೀಡಿದರಾದರೂ ಬ್ರಿಟಿಷರ ಕುಮ್ಮಕ್ಕಿನಿಂದಾಗಿ ಇತರರಿಂದ ಬೆಂಬಲ ಸಿಗಲಿಲ್ಲ ಜೊತೆಗೆ ತಲಚೇರಿ-ಕಣ್ಣನ್ನೂರುಗಳಿಂದ ಬ್ರಿಟಿಷ್ ಸೈನ್ಯ ಮಂಗಳೂರು ತಲುಪಿತು. ಇವರಲ್ಲಿ ಸಾವಿರಾರು ಜನರು ಇದ್ದರೂ ಕೂಡ ಕೋವಿಯಂಥ ಮಾರಕಾಯುಧಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದ್ದರಿಂದ ಕಲ್ಯಾಣಸ್ವಾಮಿ ತಪ್ಪಿಸಿಕೊಂಡು ಕಡಬದತ್ತ ಸಾಗಿದನು. ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಬ್ರಿಟಿಷ್ ಪರವಾದ ಹಿಂದುಗಳೇ ಇದ್ದ ಸೈನ್ಯವನ್ನು ಎದುರಿಸಲು ಆಗದೆ ಸೋಲಬೇಕಾಯಿತು. ನಾಲ್ಕು ನಾಡಿನ ಉತ್ತು, ಶಾಂತಳ್ಳಿ ಮಲ್ಲಯ್ಯ ಗುಡ್ಡೆಮನೆ ಅಪ್ಪಯ್ಯ, ಚೆಟ್ಟಿಕುಡಿಯ, ಕುರ್ತುಕುಡಿಯ, ಲಕ್ಷ್ಮಣ ಬಂಗರಸ ಮೊದಲಾದವರು ಸೆರೆ ಸಿಕ್ಕಿದರು.

1837 ಮೇ ತಿಂಗಳ ಎರಡನೇ ವಾರದಲ್ಲಿ ಕಲ್ಯಾಣಸ್ವಾಮಿಯನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದು ಆತನನ್ನು ಮಡಿಕೇರಿಗೆ ಕರೆತರುತ್ತಾರೆ ಬ್ರಿಟಿಷರು ಕಲ್ಯಾಣಸ್ವಾಮಿ(ಪುಟ್ಟ ಬಸಪ್ಪ) ಮತ್ತು ಲಕ್ಷ್ಮಪ್ಪ ಬಂಗರಸ ಇವರನ್ನು ಮಂಗಳೂರಿನ ಬೀರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದರು. ಗುಡ್ಡೆ ಮನೆ ಅಪ್ಪಯ್ಯರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸುತ್ತಾರೆ. ಚೆಟ್ಟಿಕುಡಿಯ, ಕುರ್ತುಕುಡಿಯ ಮತ್ತು ಕೃಷ್ಣಯ್ಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಾಂತಯ್ಯ ಮಲ್ಲಳ್ಳಿ ಮೊದಲಾದವರಿಗೆ 7-14 ವರ್ಷಗಳ ತನಕ ಸೆರೆಮನೆವಾಸದ ಶಿಕ್ಷೆಯಾಯಿತು. ಡಾ ಪ್ರಭಾಕರ ಶಿಶಿಲರು ಹೇಳಿದಂತೆ ``ಸ್ವಾತಂತ್ರ್ಯ ಸಂಗ್ರಾಮವೆಂದಾಗ ಬೇಕಿದ್ದ ಈ ಹೋರಾಟವನ್ನು ಕಲ್ಯಾಣಪ್ಪನ ಕಾಟುಕಾಯಿ(ದರೋಡೆ) ಎಂದು ಬ್ರಿಟಿಷರು ಕರೆದರು.

ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡದ್ದು ಬಿಟ್ಟರೆ ಬೇರೆಯಾರ ಸಂಪತ್ತನ್ನು ಈ ಹೋರಾಟಗಾರರ ಗುಂಪು ದೋಚಲಿಲ್ಲ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳುವ ತನಕ ಬ್ರಿಟಿಷರಿಗೆ ಹೋರಾಟಕ್ಕಾಗಿ ಜನರ ಗುಂಪೊಂದು ಸಂಘಟಿತವಾದದ್ದು ತಿಳಿಯಲಿಲ್ಲ. ಖಜಾನೆಯನ್ನು ವಶಪಡಿಸಿಕೊಂಡಾಗ ಕೂಡ ದರೋಡೆ ಎಂದು ತಿಳಿದರೇ ಹೊರತು, ಅಲ್ಲೊಂದು ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ಧವಾದುದ್ದು ಬ್ರಿಟಿಷರ ಗಮನಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗಿನ ಮುಂಜಾಗರೂಕತೆಯನ್ನು ವಹಿಸಲಾಗಿತ್ತು. ಬೆಳ್ಳಾರೆಯ ಹಿರಿಯರ ಪ್ರಕಾರ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಇತರೆಡೆಗೆ ದಂಡು ಸಾಗುವಾಗ ಮದುವೆ ದಿಬ್ಬಣದ ರೂಪದಲ್ಲಿ ಸಾಗುತ್ತಿತ್ತು. ಹೀಗೆ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣನ್ನು ತಿನ್ನಿಸಿದ್ದರು. ಈ ಹೋರಾಟಗಾರರು ತೆಂಗಿನ ಮಡಲಿನ ಕೊತ್ತಲಿಂಗೆಯ ಮಂಡೆಯನ್ನು ಆಯುಧವಾಗಿ ಉಪಯೋಗಿಸಿಕೊಂಡಿದ್ದರು. ಈ ಹೋರಾಟಗಾರರ ಕೆಚ್ಚೆದೆಗೆ ಸಾಹಸಕ್ಕೆ ಸಾಕ್ಷಿಯಾದ ಬೆಳ್ಳಾರೆಯ ಕೋಟೆ ಈಗ ಕೂಡ ಇದೆ. ಇವರು ವಶಪಡಿಸಿಕೊಂಡ ಬ್ರಿಟಿಷರ ಖಜಾನೆ ಕೂಡ ಇದೆ. ಬೆಳ್ಳಾರೆಯ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಸೇರಿಕೊಂಡು ಬೆಳ್ಳಾರೆಯ ಕೋಟೆ ಇದೆ. ಈ ಪ್ರದೇಶವನ್ನು ಈಗ ಬಂಗ್ಲೆಗುಡ್ಡೆ ಎಂದು ಕರೆಯುತ್ತಾರೆ. ಬ್ರಿಟಿಷರ ಖಜಾನೆ ಇದ್ದ ಬಂಗಲೆಯ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂ ಬ ಹೆಸರು ಬಂದಿದೆ. ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಬೇಕಾಗಿದೆ .ಜೊತೆಗೆ ಇಲ್ಲಿ ಸ್ವತಂತ್ರ ಧ್ವಜ ಹಾರಿಸಿದ ನೆನಪಿಗಾಗಿ ಇದೇ ಜಾಗದಲ್ಲಿ ಪ್ರತಿ ಸ್ವಾತಂ ತ್ರ್ಯ  ದಿನಾಚರಣೆಯಂದು ಇಲ್ಲಿ ನಮ್ಮ ದೇಶದ ಧ್ವಜವನ್ನು ಹಾರಿಸಿ ಈ ಸ್ವಾತಂ ತ್ರ್ಯ ಹೋರಾಟವನ್ನು ಮತ್ತು ಹುತಾತ್ಮರಾದ ಕಲ್ಯಾಣ ಸ್ವಾಮೀ ಹಾಗು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸೂಚಿಸುವ ಕಾರ್ಯ ಅಗತ್ಯವಾಗಿ ಆಗ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೊಬೈಲ್ 9480516684


ಆಧಾರಗ್ರಂಥಗಳು:


1ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಲೇ| ಗಣಪತಿರಾವ ಐಗಳು


 2 ಚಿಕವೀರ ರಾಜೇಂದ್ರ ( ಐತಿಹಾಸಕ ಕಾದಂಬರಿ) ಲೇ: ಮಾಸ್ತಿ ವೆಂಕಟೇಶ ಅಯ್ಯಂಗಾರ್

3 ಸ್ವಾಮಿ ಅಪರಂಪಾರ ( ಐತಿಹಾಸಿಕ ಕಾದಂಬರಿ)- ಲೇ| ನಿರಂಜನ( ಕುಲ್ಕುಂದ ಶಿವರಾಯ)

4 ಕಲ್ಯಾಣ ಸ್ವಾಮಿ ( ಐತಿಹಾಸಿಕ ಕಾದಂಬರಿ) ಲೇ| ನಿರಂಜನ ( ಕುಲ್ಕುಂದ ಶಿವರಾಯ)

5 ಚೆನ್ನ ಬಸಪ್ಪ ನಾಯಕ ( ಐತಿಹಾಸಿಕ ಕಾದಂಬರಿ) ಲೇ ನಿರಂಜನ( ಕುಲ್ಕುಂದ ಶಿವರಾಯ)


 6 ಅಮರಸುಳ್ಯದ ದಂಗೆ  -ಲೇ|ಎನ್.ಎಸ್ ದೇವಿಪ್ರಸಾದ  ಸಂಪಾಜೆ


7  In pursuits of our roots - Putturu Anantharaja Gowda


8 ರಾಜ ಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡದ ಗೌಡರು- ಲೇ ಪುತ್ತೂರು ಅನಂತರಾಜ ಗೌಡ


9 ಪಂಜ ಸೀಮಾ ದರ್ಶನ-ಲೇ|ಕಾನಕುಡೇಲು ಗಣಪತಿ ಭಟ್ಟ  -


10 ತುಳುನಾಡಿನ ಅಪೂರ್ವ ಭೂತಗಳು  ಲೇ|ಡಾ|| ಲಕ್ಷ್ಮೀ ಜಿ. ಪ್ರಸಾದ  

11  ಬೆಳ್ಳಾರೆ - ಒಂದು ಸಾಂಸ್ಕೃತಿಕ ಅಧ್ಯಯನ( ಸಂಶೋದನಾ ಲೇಖನ) - ಲೇ ಡಾ.ಲಕ್ಷ್ಮೀ ಜಿ ಪ್ರಸಾದ ,ತುಳುವ ಪ್ರಾದೇಶಿಕ ಸಂಶೋಧನಾ ಕೇಂದ್ರ ಉಡುಪಿ

12 ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಪ್ರಾಚ್ಯಾವಶೇಷಗಳು(ಸಂಶೋಧಾನಾ ಲೇಖನ) - ಲೇ| ಡಾ.ಲಕ್ಷ್ಮೀ ಜಿ ಪ್ರಸಾದ, ಇತಿಹಾಸ ದರ್ಶನ ಸಂ೨೭/೨೦೧೨,ಕರ್ನಾಟಕ ಇತಿಹಾಸ ಅಕಾಡೆಮಿ

13  ಕೆನರ ಜಿಲ್ಲೆಯ ಕಲೆಕ್ಟರ್ ಎಂ.ಲೆವಿನ್, ಮೇಜರ್ ಜನರಲ್ ವಿಗೋರ್(Vigourheux) ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ

14 ಕೊಡಗು ಗಜೇಟಿಯರ್

laxmi prasad at 02:14

Share

ದೊಡ್ಡವರ ದಾರಿ: 51ಉದಾರ ಮನಸಿನ ಮುಕುಂದರಾಜ್ ಲಕ್ಕೇನಹಳ್ಳಿ



ನನಗೆ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ, ಅಧ್ಯಯನ ಸಂದರ್ಭದಲ್ಲಿ ಅನೇಕರು ಸಹಾಯ ಮಾಡಿದ್ದಾರೆ .ಬೆಂಬಲ ನೀಡಿದ್ದಾರೆ.ಹಾಗೆಯೇ ನನಗೆ ನಿರಂತರ ಬೆಂಬಲ ನೀಡಿದವರು ಪ್ರಸ್ತುತ  ಬೆಂಗಳೂರಿನ ಅತ್ತಿಗುಪ್ಪೆ ವಿಜಯನಗರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ ಮುಕುಂದ ರಾಜ್ ಅವರು‌
ಅವರು ಬೆಂಬಲ ನೀಡಿದ್ದಾರೆ ಎಂಬ ಏಕೈಕ  ಕಾರಣಕ್ಕೆ ನಾನಿಲ್ಲಿ ಅವರ ಬಗ್ಗೆ ಬರೆಯಹೊರಟಿದ್ದಲ್ಲ.
ಸ್ವತಃ ನಾಟಕಕಾರರೂ ಸಾಹಿತಿಯೂ,ಚಲನ ಚಿತ್ರ ನಿರ್ಮಾಪಕರೂ  ಆಗಿರುವ ಅವರಿಗೆ ಬರವಣಿಗೆ ಬಗ್ಗೆ ಅತೀವ ಒಲವಿದೆ‌.ಅಂತೆಯೇ ಬರೆಯುವವರ ಬಗ್ಗೆಯೂ ಅಪಾರ ಅಭಿಮಾನವಿದೆ.
ನನಗೆ ಒಂದಿಷ್ಟು ಗೀಚುವ ಅಭ್ಯಾಸವಿದ್ದು ಅದನ್ನು ಬ್ಲಾಗ್‌ನಲ್ಲಿ ಬರೆದು ಫೇಸ್ ಬುಕ್ ನಲ್ಲಿ ಹಾಕುತ್ತಾ ಇರುತ್ತೇನೆ.ದೊಡ್ಡ ಅಧ್ಯಯನ ಏನೂ ಅಲ್ಲ ನನ್ನದು.ಆದರೂ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾಲಯ,ದ್ರಾವಿಡ ವಿಶ್ವವಿದ್ಯಾಲಯ, ಭಾರತೀಯಾರ್ ಯುನಿವರ್ಸಿಟಿ ಸೇರಿದಂತೆ ಅನೇಕ ಯುನಿವರ್ಸಿಟಿಗಳಳ್ಳಿ ಸಂಶೋಧನಾ ಪ್ರಬಂಧ ಮಂಡನೆ ಮಾಡುವ ಅವಕಾಶ ಸಿಗುತ್ತದೆ.
ಇಲ್ಲೆಲ್ಲಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರಿಗೆ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ ಮಾತ್ರವಲ್ಲ ಹಾಜರಾದವರಿಗೆ ಕೂಡ ಅನ್ಯ ಕಾರ್ಯ ನಿಮಿತ್ತ ರಜೆ ಸೌಲಭ್ಯ ದೊರೆಯುತ್ತದೆ.
ಆದರೆ ನಾನು ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುವ ಕಾರಣ ಪ್ರಬಂಧ ಮಂಡನೆ ಮಾಡಲು ಕೂಡ ನನಗೆ ಈ ಸೌಲಭ್ಯ ದೊರೆಯುವುದಿಲ್ಲ.
ಆದರೂ ಕೆಪಿಎಸ್ ಸಿ ನಿಯಮಾವಳಿ ಅನುಬಂಧ ಎರಡರಲ್ಲಿ ಇಂತಹ ಸಂದರ್ಭಗಳಲ್ಲಿ ವಿಶೇಷ ರಜೆ ನೀಡಲು ಅವಕಾಶವಿದೆ.ಆದರೆ ಪ್ರಸ್ತುತ ನನಗಿನ್ನೂ ಈ ಸೌಲಭ್ಯ ದೊರೆತಿಲ್ಲ.
ಇತ್ತೀಚೆಗೆ ನಮ್ಮ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಕುಂದ್ ರಾಜ್ ಅವರು ಆಗಮಿಸಿದ್ದರು.ಆಗ ಭಾಷಣದ ನಡುವೆ ಸಾಹಿತ್ಯ ಸಂಶೋಧನಾ ವಿಚಾರಗಳಲ್ಲಿ ಎಲ್ಲವನ್ನೂ ನಿಯಮವನ್ನು ನೋಡಲಾಗುವುದಿಲ್ಲ‌.ಒಂದಿನಿತು ಹೊಂದಾಣಿಕೆ ಮಾಡಿ ಬೆಂಬಲ ಕೊಡಬೇಕು.ಬರಹಗಾರರಿಗೆ ಸಾವಿಲ್ಲ‌ತನ್ನ ಸಾವಿನ ನಂತರವೂ ಬರಹಗಳ ಮೂಲಕ ಬರಹಗಾರ ಬದುಕಿಯೇ ಇರುತ್ತಾರೆ‌ಆಧ್ದರಿಂದ ಬರಹಗಾರರಿಗೆ ಸಮಾಜದಲ್ಲಿ ವಿಶೇಷ ಮನ್ನಣೆ ಎಂದು ಹೇಳಿದ್ದರು.
ಇದಾಗಿ ಕೆಲದಿನಗಳ ನಂತರ ನಾನು ಅವರಲ್ಲಿ ಮಾತನಾಡುವಾಗ ಅವರು ಮಾತಿನ ನಡುವೆ ಒಂದು ವಿಚಾರ ತಿಳಿಸಿದರು.ಹಿಂದೆ ಶಿವರುದ್ರಪ್ಪ ನವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ಅಲ್ಲಿ ಉಪನ್ಯಾಸಕರಾಗಿದ್ದ ಕಿ ರಂ ನಾಗರಾಜು ಅವರನ್ನು ಎಂ ಇ ಎಸ್ ಕಾಲೇಜಿಗೆ ಯಾವುದೋ ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ಆಹ್ವಾನಿಸಿದ್ದರು.ಈ ವಿಚಾರ ಜಿ ಎಸ್   ಶಿವರುದ್ರಪ್ಪ ಅವರಿಗೆ ಹೋಗೋ ತಿಳಿಯಿತು.
ಕಿ ರಂ ನಾಗರಾಜ್ ಅವರು ಎಂಇ ಎಸ್ ಕಾಲೇಜಿನ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ರಜೆ ಅರ್ಜಿ ಬರೆದುಕೊಟ್ಟಾಗ  ಜಿ ಎಸ್  ಶಿವರುದ್ರಪ್ಪನವರು ನೀವು ಇಲ್ಲಿ ಮಾಡುವುದು ಕನ್ನಡ ಪಾಠವೇ ,ಅಲ್ಲಿ‌ಮಾಡುವುದೂ ಕೂಡ ಅದೇ,ರಜೆ ಹಾಕುವುದು ಬೇಡ ಸುಮ್ಮನೆ ಹೋಗಿ‌ಬನ್ನಿ ಎಂದು ಅವರಿಗೆ ಹೋಗಲು ಅವಕಾಶ ಮಾಡಕೊಟ್ಟರಂತೆ.
 ಇದನ್ನು ಹೇಳುತ್ತಾ ನೀವೇನಾದರೂ ನಮ್ಮ ಕಾಲೇಜಿನಲ್ಲಿ ಇರುತ್ತದ್ದರೆ ನಿಮಗೆ ಅದೇನು ಬರೆಯಲಿಕ್ಕಿದೆ ಅದನ್ನ ಬರ್ಕೋಮ್ಮ ಅಂತಿದ್ದೆ   ನಿಮ್ಮಬದಲು ಕೆಲಸ ನಾನು ಪಾಠ  ಮಾಡುತ್ತಿದ್ದೆ ಎಂದು ಹೇಳಿದರು.
ವಾಸ್ತವದಲ್ಲಿ ಇದು ಸಾಧ್ಯವೋ ಅಸಾಧ್ಯವೋ ಅದು ಬೇರೆ ಮಾತು‌.ಆದರೆ ಬರವಣಿಗೆ ಮತ್ತು ಬರಹಗಾರರ ಬಗ್ಗೆ ಅವರಿಗಿರುರುವ ಅಭಿಮಾನ ಮಾತ್ರ ವರ್ಣನಾತೀತವಾದುದು ,ಅದಕ್ಕೆ ಅವರು ದೊಡ್ಡವರು.ಏನಂತೀರಿ?