Saturday 18 December 2021

ನನಗೂ ಆತ್ಮವಿದೆ ಆ ಪುಣ್ಯಾತ್ಮನ ನಾಲಿಗೆಯಲ್ಲಿ ಮಚ್ಚೆ ಇತ್ತಾ ?

 ನನಗೂ ಆತ್ಮವಿದೆ 


ಆ ಪುಣ್ಯಾತ್ಮನ ನಾಲಿಗೆಯಲ್ಲಿ ಮಚ್ಚೆ ಇತ್ತಾ ?


ಯಾವ ಶುಭ ಘಳಿಗೆಯಲ್ಲಿ ಆ ಪುಣ್ಯಾತ್ಮ ಆ ಮಾತನ್ನು ಆಡಿದರೋ ಏನೋ..ಅಸ್ತು ದೇವತೆಗಳು ಅಸ್ತು ಎಂದಿರಬೇಕು ಖಂಡಿತಾ

2008-09 ರ ಶೈಕ್ಷಣಿಕ ವರ್ಷದಲ್ಲಿ ನಾವು ಬೆಂಗಳೂರಿನ ಬ್ಯಾಂಕ ಕಾಲನಿಯ  ಬಾಡಿಗೆ ಮನೆಯಿಂದ ಈಗಿರುವ ಮನೆಗೆ ವಾಸ್ತವ್ಯವವನ್ನು ಬದಲಾಯಿಸಿದೆವು.ಮೊದಲು ಕೆಲಸ ಮಾಡುತ್ತಿದ್ದ ಕಾಲೇಜು ಮನೆಯಿಂದ ಬಹಳ ದೂರ ಆಯಿತು 

ಹಾಗಾಗಿ ಮನೆಗೆ ಸಮೀಪದ ಕಾಲೇಜುಗಳಲ್ಲಿ ಕನ್ನಡ ಖಾಲಿ ಹುದ್ದೆ ಇದೆಯಾ ಎಂದು ವಿಚಾರಿಸುತ್ತಿದ್ದೆ.

ಇಲ್ಲಿಯೇ ಉಳ್ಳಾಲು ಕ್ರಾಸ್ ಸಮೀಪದ ಐಶ್ವರ್ಯ ಕಾಲೇಜಿನಲ್ಲಿ  ( ಈಗ ಇದು ಮುಚ್ಚಿದೆ) ಕನ್ನಡ ಹುದ್ದೆ ಇರುವುದು ತಿಳಿಯಿತು.

ಅರ್ಜಿ ಬರೆದುಕೊಂಡು ಸರ್ಟಿಪಿಕೇಟ್ ಗಳ ಜೆರಾಕ್ಸ್ ಇರಿಸಿಕೊಂಡು ಹೋದೆ.ಅದು ನಾಗರಾಜ ಎಂಬ ವೈದ್ಯರು ನಡೆಸುತ್ತಿದ್ದ ಕಾಲೇಜಾಗಿತ್ತು.ಶ್ರೀ ಲಕ್ಷ್ಮೀ ಎಂಬವರು  ನಾಮಕಾವಸ್ತೆ ಪ್ರಿನ್ಸಿಪಾಲರಾಗಿದ್ದರು.ಅಲ್ಲಿ ಎಂ ಡಿ ಎಂಬ ಬೋರ್ಡ್ ಹಾಕಿಕೊಂಡಿದ್ದ ಪ್ರಸಾದ್ ಎಂಬವರ ಮಾತೇ ಅಂತಿಮ.ಅವರನ್ನೇ ಭೇಟಿ ಮಾಡಿದೆ.ಮಾರ್ಕ್ಸ್ ಕಾರ್ಡನ್ನೆಲ್ಲ ನೋಡಿದರು.ಫಿಎಚ್ ಡಿ ಮಾಡ್ತಿದ್ದೀರಾ ,ಎಲ್ಲಿ ತನಕ ಬಂದಿದೆ ಎಂದು ಕೇಳಿದರು.ಪ್ರಬಂಧ ಸಿದ್ದವಾಗಿದೆ.ಇನ್ನು ಸಲ್ಲಿಸಿ ಮೌಖಿಕ ಪರೀಕ್ಷೆ ಎದುರಿಸಿದರೆ ಆಯಿತು ಎಂದೆ..ಸರ್ಟಿಪೀಕೇಟ್ ಗಳನ್ನು ನೋಡುತ್ತಾ..ಓ ಎನ್ ಇ ಟಿಯೂ ಪಾಸ್ ಮಾಡಿದ್ದೀರಿ..ನೀವೆಲ್ಲ ಇಲ್ಲಿ ಎಷ್ಟು ದಿನ ನಿಲ್ತೀರಾ ? ಸರ್ಕಾರಿ ಕೆಲಸ ಸಿಕ್ಕು ಬಿಟ್ಟು ಹೋಗ್ತೀರಿ ಎಂದರು.ಅವರು ಹಾಗೆ ಅಂದ ಘಳಿಗೆ ನಿಜಕ್ಕೂ ಶುಭ ಘಳಿಗೆಯೇ ಇರಬೇಕು.ಅಸ್ತು ದೇವತೆಗಳು ಆಶೀರ್ವದಿಸಿರಬೇಕು

ಆ ಕಾಲದಲ್ಲಿ ಪಿಯು ಡಿಗ್ತಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಸಂದರ್ಶನ  ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು.ಸಂದರ್ಶನ ಇರುವಲ್ಲಿ ಎಲ್ಕೆಡೆ ದುಡ್ಡೇ ಮಾನದಂಡ..ಇನ್ಪ್ಲೂಯೆನ್ಸೇ ಅರ್ಹತೆ..ಹಾಗಾಗಿ ಇವೆರಡು ಇಲ್ಲದ ನನ್ನಂತಹವರಿಗೆ ಸರ್ಕಾರಿ ಕಾಲೇಜು ಉಪನ್ಯಾಸಕ ಕೆಲಸ ಗಗನ ಕುಸುಮವಾಗಿತ್ತು.

ಆದರೆ ಅವರು ಆ ಮಾತನ್ನು ಹೇಳಿದ ದಿನವೇ ಲಿಖಿತ  ಪರೀಕ್ಷೆ ಮೂಲಕ ಪಿಯು ಕಾಲೇಜಿಗೆ ಉಪನ್ಯಾಸಕರ ಅಯ್ಕೆ ಎಂದು ಆದೇಶವಾಯಿತು.ಅದಕ್ಕೂ ಮೊದಲು ತುಂಬಾ ಸಮಯದಿಂದ ಅನೇಕರು ಈ ಬೇಡಿಜೆಯನ್ನು ಇರಿಸಿದ್ದರು.ನಾನೂ ಪತ್ರಿಕೆಯಲ್ಲಿ ಬರೆದು ಪತ್ರಾಂದೋಲನ ಮಾಡಿದ್ದೆ.ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ.ಯಾವುದೂ ಪ್ರಯೋಜನ ಆಗಿರಲಿಲ್ಲ


ಅಂದು ಅನೇಕರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಲಿಖಿತ ಪರೀಕ್ಷೆ ಮೂಲಕ ಅಯ್ಕೆ ಎಂದು ಆದೇಶ ಮಾಡಿತು.ನಂತರ  ಪರೀಕ್ಷೆ ದಿನಾಂಕದ ಘೋಷಣೆ ಅಯಿತು

ಆ ಕಾಲೇಜಿಗೆ ಸೇರಿ ಹೆಚ್ಚು ಸಮಯ ಆಗಿರಲಿಲ್ಲ.ಪರೀಕ್ಷೆಯ ದಿನಾಂಕ ಘೋಷಣೆಯಾದ ಕೂಡಲೇ ಕಾಲೇಜಿಗೆ ರಾಜೀನಾಮೆ ಕೊಟ್ಟು ಹಗಲು ರಾತ್ರಿ ಓದಿದೆ.ಉತ್ತಮ ಅಂಕಗಳು ಬಂದು ಯಾರ ಪ್ರಭಾವ ದುಡ್ಡು ಇಲ್ಲದೆ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದೆ.

ಈಗಲೂ ಇದು ನಿಜವಾ ? ಕನಸಾ ಎಂದೆನಿಸುತ್ತದೆ.

ದುಡ್ಡು ಪ್ರಬಾವ ಇಲ್ಲದ ಸಾಮಾನ್ಯ ಜನರಿಗೆ ದುರ್ಲಭವಾಗಿದ್ದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ನನಗೆ ಸಿಕ್ಕಿದ್ದು ನಿಜಕ್ಕೂ ಪವಾಡವೇ ಸರಿ‌.

ಇದು ನೆನಪಾದಾಗೆಲ್ಲ ಐಶ್ವರ್ಯ ಕಾಲೇಜಿನ ಎಂಡಿ ಆಗಿದ್ದ  ಸತ್ಯ ಪ್ರಸಾದ್ ಅವರು ಹೇಳಿದ ಮಾತು ನೆನಪಾಗುತ್ತದೆ.

ಈಗ ಅವರೆಲ್ಲಿದ್ದಾರೆ ಎಂದು ಗೊತ್ತಿಲ್ಲ.ಆ ಕಾಲೇಜು ಮುಚ್ಚಿದೆ.ಎಂದಾದರು ಒಂದಿನ ಅವರನ್ನು ಭೇಟಿ ಮಾಡಿ ನಿಮ್ಮ ನಾಲಿಗೆಯಲ್ಲಿ ಮಚ್ಚೆ ಇದೆಯಾ ಎಂದು ಕೇಳಿ ಸ್ವೀಟ್ ಕೊಡಬೇಕೆಂದಿರುವೆ.ನಾಲಿಗೆಯಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಹೇಳುವ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಪ್ರಚಲಿತವಿದೆ.ಏನೇ ಆದರೂ ಅರ್ಹತೆಯನ್ನು ನೋಡಿ ಮೆಚ್ಚಿ ಅವರಾಡಿದ ಮಾತುಗಳನ್ನು ಮರೆಯಲಾಗದು ಖಂಡಿತಾ 

ಡಾ.ಲಕ್ಷ್ಮೀ ಜಿ ಪ್ರಸಾದ್ 


ನನ್ನ ಆತ್ಮಕ್ಕೂ ಒಂದು ಕಥೆಯಿದೆ ಆಕೆ ಅವಳೇ ಇರಬಹುದಾ?


 ನನ್ನ ಆತ್ಮಕ್ಕೂ ಒಂದು ಕಥೆಯಿದೆ

ಆಕೆ ಅವಳೇ ಇರಬಹುದಾ?

ಬೆಳಗ್ಗೆ ಕಾಲೇಜಿಗೆ ಹೋಗ್ತಾ ರಾಜರಾಜೇಶ್ವರಿ ದ್ವಾರದ  ಬಳಿಯ  ಸಿಗ್ನಲ್ ಬಳಿ ಓರ್ವ ನನ್ನದೇ ವಯಸ್ಸಿನ ಮಹಿಳೆಯನ್ನು ನೋಡಿದೆ..ತಕ್ಷಣವೇ ಅವರನ್ನು ಎಲ್ಲೋ ನೋಡಿದ ಹಾಗೆ ಅನಿಸ್ತು.ಯಾರು ಏನೆಂದು ನೆನಪಾಗಲಿಲ್ಲ..ಈವತ್ತು ನನಗೆ ಪರೀಕ್ಷಾ ಕಾರ್ಯ ಇರಲಿಲ್ಲ.ಹಾಗಾಗಿ ಆಕೆ ಯಾರೆಂಬ ವಿಚಾರ ಕಾಡ್ತಾ ಇತ್ತು.

ಯಾಕೋ ಆ ಮುಖ ತುಂಬಾ ಪರಿಚಿತ ಎಂದೆನಿಸುತ್ತಿತ್ತು.ಆದರೆ ಯಾರೆಂದು ನೆನಪಾಗುತ್ತಾ ಇಲ್ಲ.ಮನೆಗೆ ಬಂದು ಏನೋ ಓದುತ್ತಿರುವಾಗ  ವಿಚಾರಗಳ ಬಗ್ಗೆ ಸುರೇಶ್ ಎಂಬವರು ಫೋನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ,ಸಂಸ್ಕೃತಿ ಬಗ್ಗೆ ಮಾಹಿತಿ ಕೇಳಿದರು.ಆಗ ಅವರು ರೆಫರ್ ಮಾಡಲು ಪುಸ್ತಕಗಳ ಹೆಸರನ್ನು ತಿಳಿಸಿ ಎಂದರು.ಆಗ ಗಣಪತಿರಾವ ಐಗಳ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಕೃತಿಯನ್ನು ಸೂಚಿಸಿದೆ.

ಹಾಗೆ ಆ ಪುಸ್ತಕವನ್ನು ಇನ್ನೊಮ್ಮೆ ಓದಬೇಕೆಂದು ನನಗನಿಸಿತು.ಅಷ್ಟೇ..ನನಗೆ ತಕ್ಷಣ ಪವಿತ್ರ ? ನೆನಪಾದಳು..ಹೌದು ಬೆಳಗ್ಗೆ ನೋಡಿದ ಮಹಿಳೆ ಪವಿತ್ರಾಳಂತಿದ್ದರು.ಪವಿತ್ರ ನನ್ನದೇ ವಯಸ್ಸಿನವರು.ಒಂದೆರಡು ವರ್ಷ ದೊಡ್ಡವರು.ನಾನು ಪ್ರಥಮ ಪಿಯುಸಿ ಓದುತ್ತಿರುವಾಗ ಭೇಟಿಯಾದ ಹುಡುಗಿ.ಬಹುಶಃ ಅವಳಾಗ ಪದವಿ ಓದುತ್ತಾಇದ್ದಳು.ಕೆನರಾ ಕಾಲೇಜಿನ ವಿದ್ಯಾರ್ಥಿನಿ ಎಂದ ನೆನಪು..

ನಾನು ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ( ಈಗಿನ ವಿಶ್ವ ವಿದ್ಯಾಲಯ ಕಾಲೇಜು)  ಪಿಯುಸಿ ಓದಿದ್ದೆ.ಆಗ ಮಂಜೇಶ್ವರ ತನಕ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದೆ.ಮಂಜೇಶ್ವರ ಕಾಸರಗೋಡು ಕುಂಬಳೆ ಉಪ್ಪಳ ಮೊದಲಾದ ಪ್ರದೇಶಗಳಿಂದ ಅನೇಕ ವಿದ್ಯಾರ್ಥಿಗಳು ಮಂಗಳೂರಿಗೆ ಅದೇ ರೈಲಿನಲ್ಲಿ ಓದಲು ಬರುತ್ತಿದ್ದರು


ಒಂದಿನ ನನಗೆ ರೈಲಿನಲ್ಲಿ ಪರಿಚಿತಳಾದವಳು ಆ ಹುಡುಗಿ.ಆಕೆಯ ಹೆಸರು ಪವಿತ್ರ ಎಂದು ನೆನಪು.ಒಂದಿನ ಮಾತನಾಡುತ್ತಾ ತಾನು ಬಹು ದೊಡ್ಡ ವಿದ್ವಾಂಸರಾದ ಗಣಪತಿರಾವ್ ಐಗಳ ಹತ್ತಿರದ ಸಂಬಂಧಿ.ಅವರು ನನಗೆ ಮುತ್ತಜ್ಜನಾಗ ಬೇಕು ಎಂದಿದ್ದಳು

ನನಗೆ ಗಣಪತಿರಾವ ಐಗಳ ಹೆಸರು ಕೂಡ ಕೇಳಿ ಗೊತ್ತಿರಲಿಲ್ಲ.ಹಾಗಾಗಿ ಯಾರು ಅವರು ಎಂದು ಕೇಳಿದೆ.ಆಗ ಅವಳು ಅವರು  ಶಾಲೆಯಲ್ಲಿ ಮೇಷ್ಟ್ರಾಗಿದ್ದರು.ಅವರು ತುಂಬಾ ಪುಸ್ತಕಗಳನ್ನು ಬರೆದಿದ್ದಾರೆ.ದೊಡ್ಡ ಇತಿಹಾಸಜ್ಞರು ಅವರು.ಅವರ ಜ್ಞಾನಕ್ಕೆ ಅವರಿಗೆ ಯಾವುದೇ ಸರಿಯಾದ ಮನ್ನಣೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಬಹಳ ಬೇಸರದಿಂದ ಹೇಳಿದ್ದಳು.ಅವಳಿಗೆ ಆ ಬಗ್ಗೆ ಬಹಳ ಬೇಸರ ಇತ್ತು

ನನಗೆ ಆಗ ಅದೆಲ್ಲ ಅರ್ಥ ಆಗಲಿಲ್ಲ.ಅರ್ಹತೆಗೆ ಮನ್ನಣೆ ಯಾಕೆ ಸಿಗಲಿಲ್ಲ ಎಂಬ ವಿಚಾರವೆಲ್ಲ ಅರ್ಥವಾಗುವಷ್ಟು ಪ್ರೌಢತೆ ನನ್ನಲ್ಲಿರಲಿಲ್ಲ.ಅಲ್ಲದೇ ಆಗ ನಾನು ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದು ಇತಿಹಾಸದ ಬಗ್ಗೆ ಆಸಕ್ತಿಯಾಗಲೀ ತಿಳುವಳಿಕೆಯಾಗಲೀ ನನಗೆ ಇರಲಿಲ್ಲ.

ಇದಾಗಿ ಸುಮಾರು ಹದಿನೈದು ವರ್ಷಗಳ ನಂತರ ಗಣಪತಿರಾವ ಐಗಳ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಎಂಬ ಗ್ರಂಥವನ್ನು  ಓದಿದೆ.ಆಗ ಅವರ ವಿದ್ವತ್ ಬಗ್ಗೆ ತಿಳಿಯಿತು.ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ತಿಳಿಯಲು ಇದೇ ಪುಸ್ತಕ ಪ್ರಮುಖ ಆಕರವಾಗಿದೆ.ಅಷ್ಟು ಮಾಹಿತಿ ಸಂಗ್ರಹಕ್ಕಾಗಿ ಬಸ್ ಕಾರುಗಳೂ ಇಲ್ಲದ ಆ ಕಾಲದಲ್ಲಿ  ಎಷ್ಟು ಕಷ್ಟ ಪಟ್ಟಿರಬಹುದೆಂದು ಊಹಿಸಿದರೆ ಅಬ್ಬಾ ಎನಿಸುತ್ತದೆ.ಅವರು ಬಂಟ್ವಾಳದ  ಶಾಲೆಯಲ್ಲಿ ಮೇಷ್ಟ್ರಾಗಿದ್ದರು.ಇವರ ಕಾಲ  1881-1944

ಅವರ ಕಾಲದಲ್ಲಿ ಅವರ ಅಧ್ಯಯನಕ್ಕೆ ಆ ಹುಡುಗಿ ಹೇಳಿದಂತೆ ಸೂಕ್ತ ಮನ್ನಣೆ ದೊರೆತಿರಲಿಲ್ಲವೇ ? 

ಈ ಬಗ್ಗೆ ನನಗೆ ತಿಳಿದಿಲ್ಲ.ಅವರ ಕಾಲದಲ್ಲಿ ಅವರ ಅಧ್ಯಯನಕ್ಕೆ ಸೂಕ್ತ ಮನ್ನಣೆ ಸಿಕ್ಕೋ ಇಲ್ಲವೋ ಗೊತ್ತಿಲ್ಲ ಆದರೆ ಈಗ ಮಾತ್ರ ಅವರ ಕೃತಿಯನ್ನು ಓದದೆಯೇ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ಅರಿಯಲು ಸಾಧ್ಯವಿಲ್ಲ.

ಹಾಗಾಗಿ ಗಣಪತಿರಾವ ಐಗಳು ಅಜರಾಮರ 

ನನಗೆ ಬೆಳಗ್ಗೆ ಆ ಮಹಿಳೆಯನ್ನು ನೋಡಿದಾಗ ಅವರಾರೆಂದು ನೆನಪಿಗೆ ಬರುತ್ತಿದ್ದರೆ ನಾನು ಖಂಡಿತವಾಗಿಯೂ ಕಾರು ನಿಲ್ಲಿಸಿ ಇಳಿದು ಮಾತನಾಡುತ್ತಿದ್ದೆ

ಗಣಪತಿರಾವ ಐಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದಿತ್ತು.ಆಗ ನೆನಪೇ ಬಾರದ ಬಗ್ಗೆ ಈಗ ಬೇಸರವಾಗುತ್ತಿದೆ..

ಕಾಯಕ್ಕಳಿವುಂಟು ಕಾಯಕಕ್ಕೆ ಅಳಿವಿಲ್ಲ..ಕಾಯ ಇರುವಷ್ಟು ಸಮಯ ನಮ್ಮಲ್ಲಿ ಹೊಟ್ಟೆಕಿಚ್ಚಿನಿಂದ ಸೂಕ್ತ ಸ್ಥಾನಮಾನ ಸಿಗದಂತೆ ತಡೆಯುವವರೂ ಕಿರುಕುಳ ಕೊಡುವವರು,ತುಳಿಯುವವರೂ ಇರುತ್ತಾರೆ.ನಮ್ಮ ನಂತರ ನಮಗೆ ಕಿರುಕುಳ ಕೊಟ್ಟವರೂ ಇಲ್ಲವಾಗುತ್ತಾರೆ‌.ನಂತರದ ತಲೆಮಾರು ಬರುವಾಗ  ನಮ್ಮ ಅದ್ಯಯನದ ಕೃತಿಗಳು ಮಾತ್ರ ಮಾತನಾಡುತ್ತವೆ ಅಲ್ಲವೇ..