Saturday 30 November 2019

ಸುಬ್ಬಿ ಇಂಗ್ಲೀಷ್ ಕಲ್ತದ್ದು : ರಚನೆ : ಡಾ.ಲಕ್ಷ್ಮೀ ಜಿ ಪ್ರಸಾದ (ಮೂಲ : ಹವ್ಯಕ ಕನ್ನಡ ನಾಟಕ ಸುಬ್ಬಿ ಇಂಗ್ಲೀಷ್ ಕಲ್ತದು)



                                   ಸುಬ್ಬಿ ಇಂಗ್ಲೀಷ್ ಕಲ್ತದ್ದು
ನಾಟಕ ರಚನೆ : ಡಾ.ಲಕ್ಷ್ಮೀ ಜಿ ಪ್ರಸಾದ,ಕನ್ನಡ ಉಪನ್ಯಾಸಕರು,ಸರ್ಕಾರಿ ಪಿಯು ಕಾಲೇಜು, ಬ್ಯಾಟರಾಯನಪುರ ಬೆಂಗಳೂರು
                                       ದೃಶ್ಯ -1
(ಸುಬ್ಬಿ ಅಡಿಗೆ ಮಾಡಿಗೊಂಡು ಇರುವಾಗ ಫೋನ್ ರಿಂಗ್ ಆಗುತ್ತದೆ )
ಸುಬ್ಬಿ ; ಅಯ್ಯೋ ರಾಮ ದೇವರೇ ಇದೊಂದು ಫೋನ್ ಮೂರೂ ಹೊತ್ತು ಬೊಬ್ಬೆ ಹೊಡಕೊಂಡೇ   ಇರುತ್ತದೆ..ಒಂದು ಕೆಲಸ ಮಾಡಲು ಬಿಡುತ್ತಾ ಇಲ್ಲ..ಗಳಿಗೆಗೊಮ್ಮೆ ಫೋನ್ ಬರುತ್ತಾ ಇದ್ದರೆ ನಾನು ಅಡಿಗೆ ಮಾಡುದಾದರೂ ಹೇಗೆ (ಫೋನ್ ಎತ್ತಿ )ಹಲ್ಲೋ ಯಾರು ?..ಯಾರು ..?ಸರಿ ಕೇಳ್ತಿಲ್ಲ..ದೊಡ್ಡಕ್ಕೆ ಮಾತಾಡಿ ..ಅರೆ ನೀವು ಎಂತ ಹೇಳುವುದೆಂದು ಗೊತ್ತಾಗುತ್ತಾ ಇಲ್ಲೆಲ್ಲ ..(ಫೋನ್ ಇಡುತ್ತಾಳೆ )
ಅಯ್ಯೋ ದೇವರೇ ..ನನ್ನ ಕರ್ಮವೇ .?ಯಾರೋ ಇವರ ಫ್ರೆಂಡ್ ಗಳ ಫೋನ್ ಆಗಿರ ಬೇಕು !ಅವರಿಗೆ ಒಬ್ರಿಗೂ ನಮ್ಮ ಭಾಷೆ ಬರುವುಲ್ಲ,ಎಲ್ಲರು ಕೂಡ ಇಂಗ್ಲೀಷ್ ಹಿಂದಿ ಭಾಷೆಗಳಲ್ಲಿ ಮಾತಾಡುತ್ತಾರೆ‌ .ಯಾರೋ ಏನೋ..ಇನ್ನು ಆಗಿನಿಂದಲೇ ಮತ್ತೆ ಮತ್ತೆ ಫೋನ್ ಬರುತ್ತ ಇದೆ‌ ..ಅಯ್ಯೋ ರಾಮ ..ಪಲ್ಯ ಒಲೆಯಲಿ ಇಟ್ಡು ಬಂದಿರುವೆ ‌ತಳ ಹಿಡಿಯಿತೋ ಏನೊ ..ನೋಡುತ್ತೇನೆ..
(ಫೋನ್ ಮತ್ತೆ ರಿಂಗ್ ಆಗುತ್ತದೆ )
ಇನ್ನು ಪುನಃ ಯಾರಿಂದಪ್ಪಾ ಫೋನ್ ? ಇವರ ಫ್ರೆಂಡ್ಸ್ ಗಳಿಗೆ ಮಾಡಲು ಬೇರೆ ಕೆಲಸ ಇಲ್ವಾ ? ಮತ್ತೆ ಮತ್ತೆ ಫೋನ್ ಮಾಡಿ ಇಂಗ್ಲಿಷಿಲಿ ಏನೋ ಹೇಳ್ತಿದಾರೆ.ಅಲ್ಲ ಇವರಾದರೂ ಹೇಳಬಾರದಾ ರಾತ್ರಿ ಮಾತ್ರ ಫೋನ್ ಮಾಡಿ ನನ್ನ ಹೆಂಡತಿಗೆ ಇಂಗ್ಲಿಷ್ ಬರಲ್ಲ ಅಂತ.(ಫೋನ್ ಎತ್ತಿ)ಹಲ್ಲೋ ಯಾರು ?..(ಫೋನ್ ಇಟ್ಟು )ಮತ್ತೆ ಅದೇ ರಾಮಾಯಣ !ಯಾರೋ ಇವರ ಫ್ರೆಂಡ್ಸ್ ಇಂಗ್ಲಿಷಿನಲ್ಲಿ ಎಂತದೋ ಹೇಳ್ತಾ ಇರಬೇಕು ..ಎಂತ ಬೇಕಾದರೂ ಹೇಳಲಿ ..ನನಗೇನು  ? ಈ  ಫೋನಿನ ದೆಸೆಯಿಂದಾಗಿ ನನಗಂತು ನೆಮ್ಮದಿ ಇಲ್ಲ
(ಮತ್ತೆ ಫೋನ್ ರಿಂಗ್ ಆಗುತ್ತದೆ)
ಸುಬ್ಬಿ : ಇದು ಬೊಬ್ಬೆ ಹಾಕಿಕೊಂಡೆ ಇರಲಿ ನಾನಂತೂ ಇವತ್ತು  ಎತ್ತುವುದಿಲ್ಲ.. .ನನಗೆ ತುಂಬಾ ಕೆಲಸ ಇದೆ  (ಒಳ ಹೋಗುತ್ತಾಳೆ)
               (ಫೋನ್ ಮತ್ತೆ ಮತ್ತೆ ರಿಂಗ್ ಆಗುತ್ತದೆ )
ಸುಬ್ಬಿ : ಈವತ್ತು ಏನಾಗಿದೆ ಈ ಫೋನಿಗೆ?ಯಾರಿದು  ದಿನ ಇಡೀ  ಫೋನ್ ಮಾಡುತ್ತಾ ಇರುವುದು ಅಂತ   ಗೊತ್ತಾಗುತ್ತಾ ಇಲ್ಲವಲ್ಲ? ಇರಲಿ ಅವರಿಗೆ ಮಾಡುತ್ತೇನೆ.. (ಫೋನ್ ಎತ್ತಿ ) ಹಲ್ಲೋ ಯಾರದು ಇಡೀ ದಿನ ಫೋನ್ ಮಾಡುದು ?ನಿಮಗೆ ಬೇರೆಂಥ ಕೆಲಸ ಇಲ್ವಾ ?ಇಡಿ  ಫೋನ್ ..(ಬೈದು ಫೋನ್ ಇಟ್ಟು ಒಳಗೆ ಹೋಗುತ್ತಾಳೆ)
ಸುಬ್ಬಿ : (ಸ್ವಗತ) ಅಬ್ಬಾ !ಅಡಿಗೆ ಕೆಲಸ ಎಲ್ಲ ಮಗೀತಪ್ಪ !ಸ್ವಲ್ಪ ಹೊತ್ತು ಆರಾಮಾಗಿ ಕುಳಿತುಕೊಳ್ಳುವೆ ಇನ್ನು ..ಸಾಕಾಗಿ ಹೋಯ್ತು   ...ನನ್ನ ಗೆಳತಿಯರೆಲ್ಲ ಈಗ ಆರಾಮಾಗಿ ಶಾಲೆ ಕಾಲೇಜುಗಳಿಗೆ ಹೋಗಿ ಕೊಂಡು ಇರಬಹುದು  ..ನಾನು ಮಾತ್ರ ಮದುವೆ ಆಗಿ ಸೋತೆ ..ನಾನು ಹಠ ಮಾಡಿ ಮದುವೆ ಬೇಡ ,ನಾನು ಶಾಲೆಗೆ ಹೋಗುತ್ತೇನೆ ಎಂದು ಹೇಳಬೇಕಾಗಿತ್ತು ..ಭಾರೀ ದೊಡ್ಡ ತಪ್ಪು ಮಾಡಿದೆ ಅಂತ  ಎನಗೆ ಈಗ  ಅರ್ಥವಾಗಿದೆ ..ಛೆ !ಏನು ಮಾಡುದು ?
                             (ಟಕ್ ಟಕ್ ಬಾಗಿಲು ಬಡಿದ ಶಬ್ದ ಆಗುತ್ತದೆ )
ಓ ಯಾರೋ ಬಂದಿದಾರೆ ಅಂತ ಕಾಣುತ್ತದೆ  ಕಾಣೆಕ್ಕು ಬಾಗಿಲು ಬಡಿಯುತ್ತಾ ಇದ್ದಾರೆ. ಯಾರು ಅಂತ ನೋಡುತ್ತೇನೆ..
                                    (ಅಪ್ಪ ಅಮ್ಮ ಒಳ ಗೆ ಬರುತ್ತಾರೆ ) 
ಸುಬ್ಬಿ : ಓ !ಅಪ್ಪ ಅಮ್ಮ ..!ಬನ್ನಿ ಬನ್ನಿ ..ಬಾಯಾರಿಕೆಗೆ ಶರಬತ್ತು ತರ್ತೇನೆ ಬನ್ನಿ  ಕುಳಿತುಕೊಳ್ಳಿ
ಅಪ್ಪ :ಬಾಯಾರಿಕೆಗೆ ಎಂಥ ಬೇಡ ಮಗಳೇ
ಸುಬ್ಬಿ : ಈ ಬಿಸಿಲಿಗೆ ಬಂದಿದ್ದೀರಿ‌. ..ತಣ್ಣಗೆ ಪುನರ್ಪುಳಿ ಶರ್ಬತ್ತು  ಮಾಡಿ ತರುತ್ತೇನೆ.. ಆಗಬಹುದಲ್ಲಾ  ?ಸ್ವಲ್ಪ ಕುಡೀರಿ
ಅಮ್ಮ : ಸರಿ .ಒಂದು ಅರ್ಧರ್ಧ ಲೋಟ ಸಾಕು ಸುಬ್ಬಿ ..ಸುಬ್ಬ  ಇಲ್ವಾ ಮನೆಯಲ್ಲಿ ?
ಸುಬ್ಬಿ : ಇಲ್ಲಮ್ಮ ಅವರು ಆಫೀಸಿಗೆ ಹೋಗಿದ್ದಾರೆ, ಈಗ ಬರಬಹುದು,ಒಂದು ನಿಮಿಷ ಕೂತಿರಿ ಶರ್ಬತ್ತು  ಮಾಡಿ ತರುತ್ತೇನೆ..
(ಒಳ ಹೋಗಿ ಮಾಡಿ ತರುತ್ತಾಳೆ)
ಸುಬ್ಬಿ : (ಸರ್ಬತ್ತು ಕೊಡುತ್ತಾ ) ಅಲ್ಲ ..ನೀವು  ಎಂಥ ಹೀಂಗೆ ದಿಡೀರನೆ ಬಂದದ್ದು ?ನೀವು ಫೋನ್ ಮಾಡಿದರೆ ಇವರು ಕರೆದುಕೊಂಡು ಬರಲು ಬರ್ತಿದ್ರಲ್ವಾ ?ಬಸ್ ಸ್ಟಾಂಡ್ ನಿಂದ ಹೇಗೆ ಬಂದಿರಿ ?ದಾರಿ ಸರಿ ಸಿಕ್ಕಿತ್ತಾ ?ಎಂಥಕ್ಕೂ ಫೋನ್  ಮಾಡಿದ್ದರೆ ನಾನು ಇವರನ್ನು ಕಳುಹಿಸುತ್ತಿದ್ದೆ..
ಅಮ್ಮ : ಎಷ್ಟು ಸರ್ತಿ ಮಾರಾಯ್ತಿ ನಿನಗೆ ಫೋನ್ ಮಾಡುದು ?ಫೋನ್ ಮಾಡಿ ಮಾಡಿ ಸಾಕಾಯಿತು ..ನೀನು ಫೋನ್ ಎತ್ತಲೇ ಇಲ್ಲ ..ಕೊನೆಗೆ ಫೋನೆತ್ತಿ ನಾನು ಮಾತನಾಡುವ ಮೊದಲೇ " ನಿಮಗೇನು ಬೇರ ಕೆಲಸ ಇಲ್ವಾ ಫೋನ್ ಇಡಿ ಎಂದು ಹೇಳಿ ಬೈದು ಇಟ್ಟೆ ನೀನು ! ಎಂಥ ಕಥೆ ನಿನ್ನದು ?ಅಷ್ಟು ತಾಳ್ಮೆ ಇಲ್ಲದಿದ್ದರೆ ಹೇಗೆ ?
ಸುಬ್ಬಿ : ಅಯ್ಯೋ ದೇವರೇ ..ಅದು ಅಷ್ಟು ಸಲ ಫೋನ್ ಮಾಡಿದ್ದು ನೀವಾ!?ಬೆಳಗ್ಗಿನಿಂದ ಯಾರೋ ಮತ್ತೆ ಮತ್ತೆ  ಫೋನ್ ಮಾಡಿ ಇಂಗ್ಲಿಷಿನಲ್ಲಿ ಎಂಥದೋ ಹೇಳ್ತಾ ಇದ್ದರು .ಅದಕ್ಕೆ ಫೋನ್ ಎತ್ತಿರಲಿಲ್ಲ..ಮತ್ತೆ  ಮತ್ತೆ ಫೋನ್ ಬಂದಾಗ ಕೋಪ ಬಂದು ಹಾಗೆ ಹೇಳಿದ್ದು ಅಷ್ಟೇ!ಬೇಸರವಾಯಿತಾ ನಿಮಗೆ ?
ಅಮ್ಮ :ಮತ್ತೆ ಯಾರಿಗಾದರೂ ಬೇರವಾಗದ ಇರುತ್ತಾ? ಅಲ್ಲ ..ಸುಬ್ಬಿ ನೀನು ಅಷ್ಟು ತಾಳ್ಮೆ ಕಳೆದುಕೊಂಡರೆ ಹೇಗೆ?ನೋಡು.. ಈಗ ನೀನು ಸಣ್ಣ ಕೂಸು ಅಲ್ಲ ..ಎಲ್ಲರೊಟ್ಟಿಗೆ ನಯ ವಿನಯದಿಂದದ ಇರಬೆಕು ಗೊತ್ತಾಯ್ತಾ?
(ಮಾತಾಡುತ್ತ ಇರುವಾಗ ಸುಬ್ಬ ಒಳಗೆ ಬರುತ್ತಾನೆ )
ಸುಬ್ಬ  :ಹಾಗೆಯೇ ಹೇಳಿ ಅತ್ತೆ ..ನೀವು ಇವಳಿಗೆ ಸ್ವಲ್ಪ ಬುದ್ಧಿ ಹೇಳಿ ..ಇವಳ ಹತ್ರ  ಎಷ್ಟು ಸಲ ಹೇಳ್ತೇನೆ ಅಂತ ಇಲ್ಲ .ಸಿಡುಕಬಾರದು ಎಂದು  ,ಆದರೆ ನನ್ನ ಫ್ರೆಂಡ್ ಗಳ ಫೋನ್ ಬಂದರೆ ಸಾಕು ಇವಳಿಗೆ ಕೋಪ ಬರುತ್ತದೆ..
ಸುಬ್ಬಿ : ಹೌದು ಮತ್ತೆ ..ನಿಮ್ಮ ಫ್ರೆಂಡ್ಸ್  ಎಲ್ಲ ಇಂಗ್ಲಿಷ್‌ನಲ್ಲಿ ಮಾತಾಡುತ್ತಾರೆ..ನನಗೆ ಎಂತದು ತಲೆಬುಡ ಗೊತ್ತಾಗುವುದಿಲ್ಲ,ಮತ್ತೆ ಎಂಥ ಮಾಡುದು ನಾನು ?ನೀವು ನಿಮ್ಮ  ಫ್ರೆಂಡ್ ಗಳ ಹತ್ತಿರ ನನ್ನ ಹೆಂಡತಿಗೆ ಇಂಗ್ಲೀಷು ಬರಲ್ಲ ಅಂತ  ಹೇಳಿ ಅಂದ್ರೆ ನೀವು ಹೇಳುತ್ತಾ ಇಲ್ಲ.. ನಾನೇನು ಮಾಡಲಿ ?


ಸುಬ್ಬ :ಅದಕ್ಕೆ ನಾನು  ಹೇಳುದು  ಸ್ವಲ್ಪ ಇಂಗ್ಲೀಷು ಕಲಿ  ಅಂತ, ಕ್ಲಾಸಿಗೆ ಹೋಗಿ ಕಲಿ ಎಂದು ಆದರೆ ನಿನಗೆ ಕಲಿಯಲು  ಮನಸಿಲ್ಲ ..ನನ್ನ ಫ್ರೆಂಡ್ಸ್ ಗಳು ಯಾರಾದರೂ ಮನೆಗೆ ಬಂದರೆ ನಿನಗೆ ಇಂಗ್ಲೀಷು ಬರಲ್ಲ ಎಂದು ಗೊತ್ತಾದರೆ ನನಗೆ ಎಷ್ಟು ನಾಚಿಕೆ ಗೊತ್ತಾ ?ಅವರ ಹೆಂಡತಿಯರೆಲ್ಲ ಎಲ್ಲ ಡಬ್ಬಲ್ ಡಿಗ್ರಿ ಮಾಡಿದ್ದಾರೆ ಗೊತ್ತಾ ?
ಸುಬ್ಬಿ : ನೋಡಮ್ಮ ..ಇವರು ಹೀಗೆ ದಿನಾಲೂ ನಾನು ಓದಿಲ್ಲ ಎಂದು ನನ್ನ ಹಂಗಿಸುತ್ತಾರೆ!ಇವರಿಗೆ ಅಷ್ಟು ನಾಚಿಕೆ ಆಗುದಾದರೆ ನನ್ನ ಮದುವೆ ಆದ್ದು ಎಂಥಕೆ ? ಕೇಳಿ ..
ಸುಬ್ಬ :ಮದುವೆ ಆದ ಮೇಲೆ ನಿನಗೆ ಇಂಗ್ಲೀಷು ಕಲಿಸಬಹುದು ಎಂದು ಭಾವಿಸಿ ಮದುವೆ ಆದೆ ,ನಿನಗೆ ಕಲಿವ ಮನಸ್ಸೇ ಇಲ್ಲ ..
ಅಪ್ಪ : ಹೌದು ..ಮಗಳೇ ..ಏನೋ ಸೋದರತ್ತೆ ಮಗಳು ಎಂದು ಪ್ರೀತಿಯಿಂದ ಮದುವೆ ಆದ .ನೀನು ಚೂರು ಇಂಗ್ಲೀಷು ಕಲಿ ನಿನಗೆ ಇಂಗ್ಲೀಷು ಬಂದರೆ ಸಮಸ್ಯೆಯೇ ಇಲ್ಲಲ್ಲಾ..
ಅಮ್ಮ : ಸಾಕಿನ್ನು ಆ ವಿಚಾರ ..ಸುಬ್ಬಿ ..ಅಡಿಗೆ ಆಗಿದ ?ಆದರೆ ಊಟ ಮಾಡುವ ಎಲ್ಲರೂ. ಗಂಟೆ ಎರಡಾಯಿತು ..ಹಸಿವಾಗ್ತಿದೆ ..ಊಟ ಮಾಡುವ ..
ಅಪ್ಪ : ಸ್ಸರಿ..ಸ್ಸರಿ ..ಬಡಿಸಿ ..
(ಎಲ್ಲ ಒಳ ಹೋವುತ್ತವು)
(ಫೋನ್ ಮತ್ತೆ ರಿಂಗ್ ಆವುತ್ತು )
ಸುಬ್ಬ ;ಹಲೋ . S.Raja  is here
ಥೋಮಸ್; hello Mr S.Raja How are you ?Iam Thomas here
ಸುಬ್ಬ :Hello friend ,how are you ?when did you come from U S A?
ಥೋಮಸ್ : We arrived India yesterday,Tolin also came with me ,we are coming to your house today evening
ಸುಬ್ಬ :What a surprise visit !You are always welcome
ಥೋಮಸ್ : Thank you very much ,meet you on evening
ಸುಬ್ಬ : ok bye


ಸುಬ್ಬ : (ಸ್ವಗತ ) ಸಂಜೆ ನನ್ನ ಸ್ನೇಹಿತರು  ಬರ್ತಾರೆ !ನಾನು ನನ್ನ ಹೆಂಡತಿ ಡಬ್ಬಲ್ ಗ್ರಾಜುವೇಟ್ ಎಂದು ಹೇಳಿದ್ದೆ  ಅವರಲ್ಲಿ!ಈಗ ಎಂಥ ಮಾಡುದು ?(ಭಾರೀ ಚಿಂತೆಲಿ ತಲೆಗೆ ಕೈ ಕೊಟ್ಟು ಕೂರುತ್ತ )
ಅಪ್ಪ ; ಎಂಥ ಸುಬ್ಬ  ?ಯಾರದು ಫೋನ್ ?ಏನು ಸಮಾಚಾರ ?
ಸುಬ್ಬ : ಎಂಥ  ಹೇಳುದು ಮಾವ ? ಈಗ ಸಂಜೆ ನನ್ನ ಸ್ನೇಹಿತರು ಇಲ್ಲಿಗೆ ಬರ್ತಾರೆ ..ಅದೇ ಯೋಚನೆ ನನಗೆ ..!
ಅಪ್ಪ : ಅದಕ್ಕೆ ಅಷ್ಟು ತಲೆಬಿಸಿ   ಮಾಡಲು ಏನಿದೆ ?ನಿನ್ನ ಅತ್ತೆ ಮತ್ತು  ಸುಬ್ಬಿ ಸೇರಿ ಏನಾದರೂ ತಿಂಡಿ ,ಸಿಹಿ ಮಾಡಿಯಾರು ,ಬೇಕಾದರೆ ಬೆಕರಿಯಿಂದಲೂ ತರಬಹುದಲ್ವಾ?
ಸುಬ್ಬ : ಅಯ್ಯೋ ಅದೆಂತ ತೊಂದರೆ ಇಲ್ಲ ಮಾವ
ಅಪ್ಪ :ಮತ್ತೆ ಅವರು ಬರುವಾಗ ನಾವು ಇದ್ದರೆ ತೊಂದರೆ ಆಗುತ್ತಾ?ನಾವು ಬೇಕಿದ್ರೆ ಈಗಲೇ ಹೊರಡುತ್ತೇವೆ !
ರಾಜ : ಅಯ್ಯಯ್ಯೋ ನೀವು ಇರಿ ಮಾವ ,ನೀವು ಇದ್ದರೆ ಎಂಥ ತೊಂದರೆ ಇಲ್ಲೆ .ನನಗೆ ಸಮಸ್ಯೆ ಅಲ್ಲ ಮಾವ.
ಸುಬ್ಬ : ಮತ್ತೆ ಎಂತ ಯೋಚನೆ ಹೇಳು ?ಸರಿ ಮಾಡುವ ಎಲ್ಲ
ಸುಬ್ಬ ; ಅದೇ ಮಾವ ..ಅದೇ ನಮ್ಮ ಸುಬ್ಬಿಗೆ ಇಂಗ್ಲೀಷು ಬರುವುದಿಲ್ಲ ಅಲ್ವಾ,ಎನ್ನ ಸ್ನೇಹಿತರಿಗೆ ಕನ್ನಡ  ಬರುವುದಿಲ್ಲ.ಅವರು ಅಮೆರಿಕಾಲ್ಲಿ ಇರುವುದು‌..ಅವರು ಇಂಗ್ಲಿಷಿನಲ್ಲಿಯೇ ಮಾತಾಡುತ್ತಾರೆ‌.ಏನು ಮಾಡುದು ಈಗ .. ಗೊಂತ್ತಾಗುತ್ತಾ ಇಲ್ಲ ಎನಗೆ
ಅಮ್ಮ : ಅದಕ್ಕೇನಂತೆ ? ಆರಂಭದಲ್ಲೇ ನೀನು ನಿನ್ನ ಸ್ನೇಹಿತರ ಬಳಿ   ಸುಬ್ಬಿಗೆ ಇಂಗ್ಲೀಷು ಬರುವುದಿಲ್ಲ ಎಂದು ತಿಳಿಸಿ ಬಿಡು.
ಸುಬ್ಬ : ಅದಾಗದು ಅತ್ತೆ ..ನಾನೆ ನನ್ನ ಸ್ನೇಹಿತರ  ಬಳಿ ನನ್ನ ಹೆಂಡತಿ ಡಬ್ಬಲ್ ಡಿಗ್ರಿ ಓದಿದ್ದಾಳೆ ಎಂದು ಹೇಳಿದ್ದೆ ..ಈಗ ಎಂಥ ಎಂತ ಮಾಡುದು ?
ಸುಬ್ಬಿ : ಈಗ ಎಂಥ ಮಾಡುದು ?ಮತ್ತೆ ಸುಳ್ಳು ಹೇಳಿದ್ದು ಯಾಕೆ ?ಎಂಥ ಬೇಕಾದರೂ ಮಾಡಿ ನನಗೆ ಗೊತ್ತಿಲ್ಲ.
ಸುಬ್ಬ : (ಜೋರಾಗಿ ಕೋಪದಿಂದ)ಸುಬ್ಬಿ ಅದೆಲ್ಲ ನನಗೆ ಗೊತ್ತಿಲ್ಲ ..ನೀನು ಅವರ ಬಳಿ ಇಂಗ್ಲಿಷಿನಲ್ಲಿ ಮಾತನಾಡಬೇಕು ಅಷ್ಟೇ !
ಸುಬ್ಬಿ :ಅಲ್ಲಾರಿ  ಹೈ ಸ್ಕೂಲ್  ಮೆಟ್ಟಿಲು ಹತ್ತದ ನಾನು ಇಂಗ್ಲಿಷಿನಲ್ಲಿ ಹೇಗೆ  ಮಾತಾಡುದು ಹೇಳಿ ?
ಸುಬ್ಬ : ನಾನು ಹೇಳಿ ಕೊಡುತ್ತೇನೆ ..ಕಲಿ .
ಸುಬ್ಬಿ: ಅಲ್ಲಾರಿ ನಿಮ್ಮ ಸ್ನೇಹಿತರು ಸಂಜೆ  ಬರ್ತಾರೆ ..ಇನ್ನು ಒಂದೆರಡು ಗಂಟೆ ಒಳಗೆ ಅವರು ಬರುತ್ತಾರೆ..ಅಷ್ಟು ಕಡಿಮೆ ಸಮಯದಲ್ಲಿ ಇಂಗ್ಲಿಷ್ ಕಲಿಯಲು ಸಾಧ್ಯವೇ ?!ಏನು ಹೇಳ್ತಿದೀರಿ ನೀವು ಎಂದು  ಎನಗೆ ಅರ್ಥ ಆಗುತ್ತಾ ಇಲ್ಲ ನನಗೆ. ಎಂಥ ಮರ್ಲು ನಿಮ್ಮದು!
ಅಮ್ಮ : ಹೌದು ಸುಬ್ಬ  ..ಸುಬ್ಬಿ ಹೇಳುವುದರಲ್ಲಿಯೂ ಅರ್ಥ ಇದೆ ,ಒಂದೆರಡು ಗಂಟೆಯಲಿ ಇಂಗ್ಲೀಷು ಕಲಿಯಲು ಸಾಧ್ಯವೇ? ಅದೆಂತ ಮಕ್ಕಳಾಟವ?
ಸುಬ್ಬ : ಅದು ಹಾಗಲ್ಲ ಅತ್ತೆ ..ನನ್ನ  ಸ್ನೇಹಿತರಿಗೆ ಸುಬ್ಬಿ ಹತ್ತಿರ ಮಾತನಾಡುವದ್ದು ಏನಿರುತ್ತೆ   ಹೇಳಿ ?ಸುಮ್ಮನೆ ಶಿಷ್ಟಾಚಾರಕ್ಕಾಗಿ ಹೆಸರು ,ಊರು ಮಕ್ಕ ಳು,ವಯಸ್ಸು  ..ಕೇಳ್ತಾರೆ  ಅಷ್ಟೇ ?ಅವರು ಹೇಗೆ ಮಾತನಾಡುತ್ತಾರೆ ಎಂದು ನನಗೆ ಗೊತ್ತಿದೆ. ಬೇರೆ ಕಡೆ ನಾನು ಗಮನಿಸಿದ್ದೇನೆ.ಅವರು ಮಾತನಾಡುವುದನ್ನು. .ಅದಕ್ಕೆ ಒಂದೊಂದು ಶಬ್ದದಲ್ಲಿ ಉತ್ತರ ಹೇಳಿದರೆ ಆಯಿತು ಅದನ್ನು ನಾನು ಈಗ ಸುಬ್ಬಿಗೆ ಹೇಳಿ ಕೊಡ್ತೇನೆ. ಅದನ್ನು ಕಲಿಯಲು ಅರ್ಧ ಗಂಟೆ ಕೂಡ ಬೇಡ
ಅಪ್ಪ :ಹೌದು ಸುಬ್ಬಿ ,ಸುಬ್ಬ  ಹೇಳುವುದು  ಸರಿ ನೀನು ಅವನು ಹೇಳಿ ಕೊಟ್ಟ ಹಾಗೆ ಕಲಿ, ನಾವು ಆ ಕಡೆ ಇರ್ತೇವೆ
ಸುಬ್ಬಿ : ಹ್ಹೂ ಸರಿ .ಅಪ್ಪ ..
ಸುಬ್ಬ : ನೋಡು ಸುಬ್ಬಿ ಅವರು ಸುರುವಿಗೆ ನಿನ್ನ ಹೆಸರೇನು ಎಂದು ಕೇಳ್ತಾರೆ  ..ಏನು  ಹೇಳ್ತಿ ನೀನು ?
ಸುಬ್ಬಿ  :ನನ್ನ ಹೆಸರು ನಿಮಗೆ ಗೊತ್ತಲ್ವ ?
ಸುಬ್ಬ ;ನನಗೆ ಗೊತ್ತು ಆದರೆ ಅವರಿಗೆ ಗೊತ್ತಿಲ್ಲ ಅಲ್ವಾ
ಸುಬ್ಬಿ : ಓ ಹೌದು ..ನನ್ನ ಹೆಸರು ಸುಬ್ಬಲಕ್ಷ್ಮಮ್ಮ ಎಂದು ತಾನೇ   ಅದನ್ನೇ ಹೇಳ್ತೇನೆ..
ಸುಬ್ಬ : ಈ ಸುಬ್ಬಲಕ್ಷ್ಮಮ್ಮ ಶಾಂತಮ್ಮ ನಂಜುಡಮ್ಮ ಎಲ್ಲ ಹಳೆ ಹೆಸರು ಅದು ಆಗದು ..ಈಗ ನಾನು ಎನ್ನ ಹೆಸರು ಸುಬ್ಬ ರಾಜ ಹೇಳಿ ಇರುವುದನ್ನು ಎಸ್ .ರಾಜ ಎಂದು ಚಿಕ್ಕದು ಮಾಡಿ ಚಂದದ ಮಾಡಿಲ್ವಾ ?ಈಗ ಮನೆಯವರಿಗೆ  ಬಿಟ್ರೆ ಬೇರೆ ಯಾರಿಗೂ ನನ್ನ ಹೆಸರಿನ ಎಸ್ ಎಂದರೆ  ಸುಬ್ಬ ಎಂಬ ವಿಚಾರ ಗೊತ್ತಿಲ್ಲ ಅಲ್ವಾ ಗ?ಹಾಗೆ ನಿನ್ನ ಹೆಸರನ್ನು ಬೇರೆ ಮಾಡುವ ..ನೀನೊಂದು ಚೆಂದದ ಹೆಸರು ಹೇಳು .
ಸುಬ್ಬಿ :ಆಗಬಹುದು ..ಹಾಗಾದರೆ  ನಾನು ಯಾವ ಹೆಸರು ಹೇಳಬೇಕು?
ಸುಬ್ಬ :( ಯೋಚನೆ ಮಾಡಿ ) ಹ್ಹ ..ನೀನು ಚಂದನಾ ಎಂದು ಹೇಳು
ಸುಬ್ಬಿ :ಹ್ಹ  ಆಗಬಹುದು ಹೆಸರು ಚಂದ ಇದೆ ಇದು  ಚಂದನಾ ಕನ್ನಡ ವಾಹಿನಿ
ಸುಬ್ಬಿ :ತಲೆ ಹರಟೆ ಮಾಡಬೇಡ ,ಸುಮ್ಮನೆ ಇರು
ಸುಬ್ಬಿ :ಆಯಿತು ಮಾರಾಯರೇ ,ಏನು ಹೇಳಬೇಕು  ನಾನು? ಹೇಳಿ
ಸುಬ್ಬ :ನೀನು ಚಂದಕ್ಕೆ ಚಂದನಾ ಎಂದು ಹೇಳು
ಸುಬ್ಬ : ಚಂದಕ್ಕೆ ಚಂದನಾ
ಸುಬ್ಬಿ :ಅಯ್ಯೋ ರಾಮ !ಚಂದಕ್ಕೆ ಚಂದನಾ ಅಲ್ಲ ಮಾರಾಯ್ತಿ ಖಾಲಿ ಚಂದನಾ
ಸುಬ್ಬಿ : ಖಾಲಿ ಚಂದನಾ
ಸುಬ್ಬ :ಅಯ್ಯೋ ದೇವರೇ ನನ್ನ ಕರ್ಮ !ಒಮ್ಮೆ ಚಂದನಾ ಎಂದು ಹೇಳು ಮಾರಾಯ್ತಿ
ಸುಬ್ಬಿ :ಚಂದನಾ
ರಾಜ : ಪುನಃ ಹೇಳು
ಸುಬ್ಬಿ :ಚಂದನಾ
 ಸುಬ್ಬ : ಗುಡ್  ನಂತರ ನಿನ್ನ ಊರು ಯಾವುದು ಎಂದು ಕೇಳುತ್ತಾರೆ ,ಏನು  ಹೇಳುತ್ತಿ?
ಸುಬ್ಬಿ : ಕೊಡೆಯಾಲ ಎಂದು ಹೇಳುತ್ತೇನೆ ..
ಸುಬ್ಬ : ಹಾಗೆ ಬೇಡ ನೀನು ಸ್ಟೈಲ್ ಆಗಿ ಮ್ಯಾಂಗಲೋರ್  ಎಂದು ಹೇಳು
ಸುಬ್ಬಿ :ಮಾಂಗನೂರು
ಸುಬ್ಬ ಮಂಗನೂರು ಅಲ್ಲ ಮಾರಾಯ್ತಿ  ಮ್ಯಾಂಗಲೋರ್
ಸುಬ್ಬಿ : ಮ್ಯಾಂಗಲೋರ್
ಸುಬ್ಬ ;ಹಾಗೆ ಹೇಳು ಸರಿಯಾಯಿದು ,ನಂತರ ಅವರು ನಿನ್ನ ಹತ್ತಿರ ನಿನಗೆ ಎಷ್ಟು ಜನ ಮಕ್ಕಳು ಎಂದು ಕೇಳಬಹುದು ಆಗ  ಏನು  ಹೇಳುತ್ತಿ?
ಸುಬ್ಬಿ :ನಿಜವಾಗಿಯೂ ಇಲ್ಲಲ್ವ ,ಎಂಥ ಮಕ್ಕಳು ಇದ್ದಾರೆ ಎಂದು ಹೇಳಬೇಕಾ  ?
ಸುಬ್ಬ : ಬೇಡ ಬೇಡ ಇಲ್ಲ ಎಂದೇ ಹೇಳುವ ,ಇಲ್ಲ ಎಂಬುದನ್ನೇ ಇಂಗ್ಲಿಷಿಲಿ ನೋ ಎಂದು ಹೇಳು
ಸುಬ್ಬಿ : ಸ್ನೋ
ಸುಬ್ಬ ಸ್ನೋ ಅಲ್ಲ ಪೌಡರ್
ಸುಬ್ಬಿ : ಸ್ನೋ ಅಲ್ಲ ಪೌಡರ್
ಸುಬ್ಬ :ಅಯ್ಯೋ ರಾಮ !ನೋ ಎಂದು ಹೇಳು ಮಾರಾಯ್ತಿ
ಸುಬ್ಬಿ : ಸ್ನೋ
ಸುಬ್ಬ : ಅಯ್ಯೋ ಕರ್ಮವೇ !ಸ್ನೋ ಅಲ್ಲ ಮಾರಾಯ್ತಿ ನೋ ನೋ ಹೇಳಿ ಹೇಳಲು ಆಗುತ್ತಿಲ್ವಾ  ನಿನಗೆ ?ನಿನ್ನ ನಾಲಗೆಗೆ ಬೆಣಚುಕಲ್ಲು ಹಾಕಿ ಉಜ್ಜಬೇಕು ..(ಕೋಪ )
ಸುಬ್ಬಿ : (ಕೋಪದಿಂದ ) ಇಕೊಳ್ಳಿ  ನೀವು  ಇಂಗ್ಲೀಷು ಕಲಿಸಿ  ಕೊಡ್ತೇನೆ ಎಂದು ಹೇಳಿದ್ದಕ್ಕೆ ನಾನು ಕಲಿಯುತ್ತಾ ಇರುವುದು ನಿಮ್ಮ ಮರ್ಯಾದೆ ಉಳಿಸುವುದಕ್ಕಾಗಿ  !ಹ್ಹ ! ಬೈದರೆ ಜೋರು ಮಾಡಿದರೆ ನಾನು ಕಲಿಯಲಾರೆ,ಮತ್ತೆ ನಿಮಗೆ ನಾಚಿಕೆ ಆದರೆ ನನಗೆ ಗೊತ್ತಿಲ್ಲ !ಏನು ಬೇಕಾದರು ಮಾಡಿಕೊಳ್ಳಿ ನನಗೆ ತುಂಬಾ ಕೆಲಸ ಇದೆ ನಾನು ಒಳಗೆ ಹೋಗುತ್ತೇನೆ..(ಒಳ ಗೆ ಹೋಗಲು ತಯಾರಾಗುತ್ತಾಳೆ )
ಸುಬ್ಬ : ಅಯ್ಯಯ್ಯೋ ನಿಲ್ಲು ನಿಲ್ಲು .. ಹೋಗಬೇಡ  ಸುಬ್ಬಿ..ಬೈಯುದಿಲ್ಲ  ಮಾರಾಯ್ತಿ ಬಾ ,ನೋ ಹೇಳಿ ಹೇಳು
ಸುಬ್ಬಿ : ನೋ
ಸುಬ್ಬ:  ಸರಿ ಹಾಗೆ ಹೇಳು ,ಮುಂದೆ ಅವರು ನಿನ್ನ ವಯಸ್ಸು ಎಷ್ಟು ಎಂದು ಕೇಳಬಹುದು ಏನು ಹೇಳುತ್ತಿ ?
ಸುಬ್ಬಿ : ನಿಜವಾಗಿ ಹದಿನಾರು ಎಂಥ ಎಪ್ಪತ್ತಾರು ಎಂದು ಹೇಳಬೇಕ?
ಸುಬ್ಬ :ಬೇಡ ಆದರೆ 16 ಕೂಡ ಬೇಡ ನನ್ನ ಸ್ನೇಹಿತರೆಲ್ಲ   ಸಮ ವಯಸ್ಸಿನವರನ್ನೇ  ಮದುವೆ ಆಗಿದ್ದಾರೆ..ಹಾಗಾಗಿ ನೀನು ನನ್ನಿಂದ 10 ವರ್ಷ ಚಿಕ್ಕವಳು ಎಂದರೆ ನನಗೆ ಒಂಥರಾ ನಾಚಿಕೆ ಆಗುತ್ತದೆ. ಅದಕ್ಕೆ ನೀನು ಇಪ್ಪತ್ತಾರು ಎಂದು  ಹೇಳು .ಅದರ ಇಂಗ್ಲಿಷಿನಲ್ಲಿ  ಟ್ವೆಂಟಿ ಸಿಕ್ಸ್ ಎಂದು ಹೇಳು
ಸುಬ್ಬಿ : ಶುಂಟಿ ಮಿಕ್ಸ್
ಸುಬ್ಬ ;(ಸ್ವಗತ ) ಓ ದೇವರೇ ಇವಳಿಗೆ ಹೇಗಪ್ಪಾ  ಹೇಳಿಕೊಡುವುದು? (ಸುಬ್ಬಿ ಹತ್ತಿರ)ನಿನಗೆ ಸದಾ ಅಡಿಗೆ ಮನೆಯದೇ ಧ್ಯಾನ ಸುಬ್ಬಿ ಅದಕ್ಕೆ ಶುಂಟಿ ಮಿಕ್ಸ್ ಎಂದು ಬರುತ್ತದೆ‌ ಅದರ ಅಡುಗೆಗೆ ಇಟ್ಟುಕೋ  ,ಈಗ ಟ್ವೆಂಟಿ ಸಿಕ್ಸ್ ಎಂದು ಹೇಳು
ಸುಬ್ಬಿ :ಟ್ವೆಂಟಿ..
ಸುಬ್ಬ : ಹ್ಹ ಹ್ಹ ..ಹಾಗೆ ಟ್ವೆಂಟಿ ಸಿಕ್ಸ್
ಸುಬ್ಬಿ : ಟ್ವೆಂಟಿ ವಿಕ್ಸ್
ಸುಬ್ಬ: ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬಿ : ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬ : ಸುಬ್ಬಿ ಎನಗೆ ಕೋಪ ಬರಿಸಬೇಡ ,ಸರಿಯಾಗಿ ಹೇಳು,ಟ್ವೆಂಟಿ ಸಿಕ್ಸ್
ಸುಬ್ಬಿ  :ಟ್ವೆಂಟಿ ಸಿಕ್ಸ್
ಸುಬ್ಬ :ವೆರಿ ಗುಡ್ ,ಇಷ್ಟು ಹೇಳಿದರೆ ಸಾಕು !
ಸುಬ್ಬಿ : ಅದು ಸರಿ ..ಆದರೆ ನೀವು  ಹೇಳಿ ಕೊಟ್ಟ ರೀತಿಯಲ್ಲಿಯೇ ಪ್ರಶ್ನೆ ಕೇಳುತ್ತಾರೆ  ಎಂದು ಹೇಗೆ ಹೇಳುವುದು ?ಸುರುವಿಗೆ ಹೆಸರು ಕೇಳುವ ಬದಲು ಊರು ಯಾವುದು ಎಂದು ಕೇಳಿದರೆ ನನಗೆ ಹೇಗೆ ಗೊತ್ತಾಗುವುದು ..?
ಸುಬ್ಬ:  (ಯೋಚಿಸಿಗೊಂಡು ) ಹೌದಲ್ಲ  ..?!ಎಂಥ ಮಾಡುದೂ ಇದಕ್ಕೆ ..ಹ್ಹ ಒಂದು ಉಪಾಯ ಗೊತ್ತಾತಿತು  ..ಅವರು ನಿನ್ನ ಹೆಸರು ಕೇಳಿದಾಗನಾನು  ಹೀಗೆ ಕಣ್ಣು ಮುಚ್ಚುತ್ತೇನೆ‌ ಒಂದು ಕ್ಷಣ (ಕಣ್ಣು ಮುಚ್ಚಿ ತೋರುಸಕ್ಕು )ಆಗ ನೀನು ಚಂದನಾ ಎಂದು ಹೇಳು ,ಅವರು ಊರಿನ ಹೆಸರು ಕೇಳುವಾಗ ನಾನು ಕೈಯನ್ನು ಹೀಗೆ ಹಣೆಯ ಮೇಲೆ ಇಡುತ್ತೇನೆ (ಕೈ ಹಣೆಗೆ ಇಟ್ಟು ತೋರಿಸುತ್ತಾನೆ)ಅದನ್ನು ನೋಡಿ ನೀನು ಮ್ಯಾಂಗಲೋರ್ ಎಂದು ಹೇಳು .ಮಕ್ಕಳು ಎಷ್ಟು ಹೇಳಿ ಕೇಳುವಾಗ ನಾನು ಹೀಗೆ ಕೆಳಗೆ ನೋಡುತ್ತೇನೆ.,ನಿನ್ನ ವಯಸ್ಸು  ಕೇಳುವಾಗ ಹೀಗೆ ಕೈ ಎತ್ತುತ್ತೇನೆ ..ಅದನ್ನು ನೋಡಿ ಟ್ವೆಂಟಿ ಸಿಕ್ಸ್ ಎಂದು ಹೇಳು ..ಸರಿಯಾ .
ಸುಬ್ಬಿ :ಸರಿ ಅವರು ಮೊದಲು ಹೆಸರು ಕೆಳುತ್ತಾರೆ  ಆಗ  ನೀವು ಕಣ್ಣು ಮುಚ್ಚುತ್ತೀರಿ ,ನಾನು ಚಂದನಾ ಎಂದು ಹೇಳಬೇಕು,ನಿಂಗ ಹಣೆಲಿ ಕೈ ಮಡುಗಿರೆ ಉರ ಹೆಸರು ಹೇಳಕ್ಕೂ ಅನಂತರ ಕೈ ಎತ್ತುತ್ತೀರಿ.. ..ಅಲ್ಲ ಅಲ್ಲ ಕೆಳಗೆ ನೋಡುತ್ತೀರಿ  ಆಗ  ನೋ ಹೇಳಬೇಕು. ಅನಂತರ ಕೈ ಎತ್ತುತ್ತೀರಿ  ಆಗ ಟ್ವೆಂಟಿ ಮಿಕ್ಸ್ ಅಲ್ಲಲ್ಲ ಟ್ವೆಂಟಿ ಸಿಕ್ಸ್ ಹೇಳಬೇಕು  ಸರಿಯಾ ..
ಸುಬ್ಬ : ಹ್ಹ ಸರಿ ಇದೆ ,ನೋಡು ನೀನು ಮನಸ್ಸು ಮಾಡಿದರೆ ಎಲ್ಲ  ಆಗುತ್ತದೆ .ಆ ಮೇಲೆ ಅವರು ಬಂದ ಕೂಡಲೇ ಹಲೋ ಎಂದು ಹೇಳಬೇಕು ಹೇಗೆ?
ಸುಬ್ಬಿ : ಹಲ್ಲೋ
ಸುಬ್ಬ : ಹಲ್ಲು ನಿನ್ನ ಬಾಯಿಯಲ್ಲಿ ಇದೆ  ಹಲೋ ಎಂದು ಹೇಳಬೇಕು.
ಸುಬ್ಬಿ : ಹಲೋ
ಸುಬ್ಬ :ಮತ್ತೆ ಹೈ ಹೀಲ್ಡ್ ಚಪ್ಪಲಿ ಹಾಕಿ ಕೊಂಡು ಕೈಯಲ್ಲಿ ಕಾಫಿ ಹಿಡ್ಕೊಂಡು ಸ್ಟೈಲ್ ಆಗಿ ತಂದು ಕೊಡಬೇಕು
ಸುಬ್ಬಿ : ಅದೆಂತದು ಹೈ ಹೈ ಹೇಳಿದರೆ ?
ಸುಬ್ಬಿ : ಅದು ಎತ್ತರದ ಚಪ್ಪಲಿ ನಂತರ ಅವರು ಹೋಗುವಾಗ ಥ್ಯಾಂಕ್ಸ್ ಹೇಳಬೇಕು
ಸುಬ್ಬಿ : ಟಾಂಕಿಸ್
ಸುಬ್ಬ : ಟಾಂಕಿ ನೀರು ತುಂಬಿಸಿ‌ಇಡಲು ನಿನ್ನ ಹತ್ತಿರ ಇಟ್ಟುಕೋ ಈಗ ಥ್ಯಾಂಕ್ಸ್ ಎಂದು ಹೇಳು
ಸುಬ್ಬಿ : ಥ್ಯಾಂಕ್ಸ್ 
ಸುಬ್ಬ : ಸರಿ ನಾನು ಪೇಟೆಗೆ ಹೋಗಿ  ಹೈ ಹೀಲ್ಡ್ ತರ್ತೇನೆ ನಿನಗೆ ..ನೀನು ಎಲ್ಲ ನೆನಪು ಮಾಡಿಕ್ಕೊಂಡು ತಯಾರಾಗಿರು .
 (ಸುಬ್ಬ ಪೇಟೆಗೆ ಹೋಗುತ್ತಾನೆ )
ಸುಬ್ಬಿ : ಅಮ್ಮ ಅಮ್ಮಾ ಇಲ್ಲಿ ಬಾ .
ಅಮ್ಮ : ಎಂಥ ಸುಬ್ಬಿ
ಸುಬ್ಬಿ : (ಭಾರೀ ಸಂತಸದಿಂದ)ನೋಡು ಅಮ್ಮಾ ನನಗೆ ಎಷ್ಟು ಬೇಗ ಇಂಗ್ಲೀಷು ಬಂತು ಗೊತ್ತಾ ?
ಅಮ್ಮ : ಹ್ಹೂ ಗೊತ್ತಾಯಿತು, ನಮಗೆ ಅಲ್ಲಿಗೆ ಕೇಳಿಕೊಂಡು ಇತ್ತು ನಿನ್ನ ಕಲಿಕೆ ಏನಾದರು ಎಡವಟ್ಟು ಆಗದಿದ್ದರೆ ಸಾಕು....
ಸುಬ್ಬಿ : ಏನಾಗಲಿಕ್ಕಿಲ್ಲ  ಬಿಡು ..ನಾವು ಸ್ವಲ್ಪ ಸ್ವೀಟ್  ಮತ್ತೆ  ತಿಂಡಿ ಮಾಡುವ ಬಾ
(ಅಡಿಗೆ ಸಿದ್ಧತೆಯ ಅಭಿನಯ )
    (ಟಕ್ ಟಾಕ್ ಶಬ್ದ ..
ಸುಬ್ಬಿ ; ಓ ಇವರು ಬಂದರು ಎಂದು ಕಾಣುತ್ತೆ
(ಸುಬ್ಬ ಒಳಂಗೆ ಬತ್ತ )
ಸುಬ್ಬ :ಇಕೋ ಹೈ ಹೀಲ್ಡ್ ..ಹಾಕಿಕೋ..
ಸುಬ್ಬಿ : (ಜಾರಿ ಬೀಳುಲೇ ಆಗಿ )ಹ್ಹಾ ..
ಅಮ್ಮ : ಜಾಗ್ರತೆ ..ಜಾಗ್ರತೆ ..ಸರಿ ನೀನೆಲ್ಲ ಅಭ್ಯಾಸ ಮಾಡಿಕೋ ..ನಾನು ಒಳಗೆ  ತಿಂಡಿ ತಯಾರು ಮಾಡುತ್ತೇನೆ..
ಸುಬ್ಬ : ಎಲ್ಲ ನೆನಪಿದೆಯಲ್ಲ ಸುಬ್ಬಿ ..ಹೆಸರು ಹೇಳು ..
ಸುಬ್ಬಿ : ನೀವು ಕಣ್ಣು ಮುಚ್ಚಿಲ್ಲ ..
ಸುಬ್ಬ : ಹ್ಹ ಹ್ಹಾ ..ಕಣ್ಣು ಮುಚ್ಚಿದೆ
ಸುಬ್ಬಿ :ಚಂದನಾ
ಸುಬ್ಬ :ಊರು (ಹಣೆ ಮುಟ್ಟಿ )
ಸುಬ್ಬಿ:ಮ್ಯಾಂಗಲೋರ್
ಸುಬ್ಬ :ವೆರಿ ಗುಡ್ ಸುಬ್ಬಿ ,ಒಪ್ಪಕ್ಕ ನೀನು ..ಮಕ್ಕ ಳು(ತಲೆ ಕೆಳಗೆ ಹಾಕಿ )
ಸುಬ್ಬಿ: ಆ ..ಎಂತದಪ್ಪಾ ..ಹ್ಹ ಹ್ಹಾ ಟ್ವೆಂಟಿ ಸಿಕ್ಸ್ ಸರಿಯ ?
ಸುಬ್ಬ :ಅಲ್ಲ ಅಲ್ಲ ನೋ
ಸುಬ್ಬಿ : ಹೌದೌದು  ನನಗೆ ಮರೆತು ಹೋಯಿತು ..ನೋ
ಸುಬ್ಬ :ವಯಸ್ಸು ?
ಸುಬ್ಬಿ : ಟ್ವೆಂಟಿ ಸಿಕ್ಸ್ ..ಹೋಗುವಾ ಥ್ಯಾಂಕ್ಸ್ ಬರುವಾಗ ಹಲೋ ಸರಿ  ತಾನೇ?
ಸುಬ್ಬ :ಸರಿ ಇದೆ  ನಿನಗೆ ಮನಸ್ಸು ಆದರೆ ಎಲ್ಲ ಬರುತ್ತದೆ..ಆದರೆ ಮನಸ್ಸು ಆಗುವುದು  ಮಾತ್ರ ನಮ್ಮ ಮೋಡೆ ಕೋಣ ಕರು  ಹಾಕಿದಾಗ  .(ನಗು )
ಸುಬ್ಬಿ : ಇಕೊಳ್ಳಿ ಬೇಡ !
(ಬಾಗಿಲು ಟಕ ಟಕ್ ಟಕ್ ಶಬ್ದ )
ಸುಬ್ಬ :ಅವರು ಬಂದರು ಎಂದು ಕಾಣುತ್ತೆ ಸುಬ್ಬಿ ನೀನು ಒಳಗೆ ಇರು ನಾನು ಕರೆದಾಗ  ಬಾ ..
                                 (ಗೆಳೆಯರ ಪ್ರವೇಶ )
ಸುಬ್ಬ :welcome friends welcome ,please be seated
Friends :thanks
Eriend 1 :how are you Mr S .Raja ?
ಸುಬ್ಬ:Iam very fine ,thanks ,how are you dears ?
Friends :we are fine. thanks
Friend 1 :Your house is very beautiful.You must be proud of it
ಸುಬ್ಬ :thanks ,credit goes to my wife
Friend 2: By the by Mr.S.Raja,where is your wife ?
ಸುಬ್ಬ: just wait, I will call her..chandana ..chandana..
 ಸುಬ್ಬಿ : ಏನ್ರೀ  ..?ಹ್ಹ ಹ್ಹ ..!ಹಲ್ಲೂ ಹಲ್ಲೂ ..!!(ಸುಬ್ಬ ಕೋಪದಿಂದ ನೋಡುತ್ತಾನೆ ,ಗಾಭರಿ ಆಗಿ )ಅಲ್ಲ ಅಲ್ಲ ..ಥ್ಯಾಂಕ್ಸ್ ..ಥ್ಯಾಂಕ್ಸ್
(ಸುಬ್ಬ ನಾಚಿಕೆ ಆಗಿ ಹಣೆಗೆ ಕೈ ಹಿಡಿಯುತ್ತಾನೆ ಅದೇ ಹೊತ್ತಿಗೆ)
Friend 1:How are you Mrs Raja?May I know your name please
ಸುಬ್ಬಿ :(ಸುಬ್ಬ ಹಣೆಗೆ ಕೈಇಟ್ಟಿದ್ದನ್ನು  ನೋಡಿ) (ಸ್ವಗತ ) ಓ ಇವರು ಹಣೆಗೆ ಕೈ ಇಟ್ಟಿದ್ದಾರೆ  ಅಂದ್ರೇ  ಅವರು ಮೊದಲಿಗೆ ಊರ ಹೆಸರು ಕೇಳಿರಬೇಕು ..ಹಾಗಾಗಿ ಮ್ಯಾಂಗಲೋರ್ ಎಂದೇ ಹೆಳುತ್ತೇನೆ ..(ಪ್ರಕಾಶ ) ಮ್ಯಾಂಗಲೋರ್
(ಇದರ ಉತ್ತರ ಕೇಳಿ ತಲೆ ಕೆಟ್ಟು ಕಣ್ಣು ಮುಚ್ಚಿದ ಸುಬ್ಬ )
Friend 2 : (ಸಂಶಯದಿಂದ ಮುಖ ಮುಖ ನೋಡಿ )you are from which place ?
ಸುಬ್ಬಿ :( ಸುಬ್ಬ ಕಣ್ಣು ಮುಚ್ಚಿದ್ದರ ನೋಡಿಕ್ಕಿ  )ಚಂದನಾ
Friend 1 :She is very young
Friend 2 :How old are you Mrs Raja ?
 (ನಾಚಿಕೆಂದ ಸುಬ್ಬ ತಲೆತಗ್ಗಿಸಿ ನಿತ್ತಿದ್ದ  )
ಸುಬ್ಬಿ : (ಸುಬ್ಬ ತಲೆ ಕಂತು ಹಾಕಿದ್ದರ ನೋಡಿಕ್ಕಿ ) ನೋ
friend  2 : (ವಿಚಿತ್ರವಾಗಿ ನೋಡಿ ) Do you have any children ?
(ಸುಬ್ಬ ಒಳ ಹೋಗು ಹೇಳಿ ಸನ್ನೆ ಮಾಡಿದ )
ಸುಬ್ಬಿ : (ಸುಬ್ಬನ ಸನ್ನೆಯ ಕೈ ಎತ್ತಿದ್ದು   ಎಂದು ಭಾವಿಸಿ ) ಟ್ವೆಂಟಿ ಸಿಕ್ಸ್
friends :Oh my God!
ಸುಬ್ಬ : ಸುಬ್ಬಿ ಒಳಗೆ ಹೋಗು ಒಳಗೆ ಹೋಗು ಒಮ್ಮೆ..
Friends : Mr S. Raja Is your wife litle  mad ?! (ತಲೆ ಕೆಟ್ಟಿದ ಹೇಳುವಾಗೆ ಅಭಿನಯಿಸಿ ಕೇಳಿದರು )
ಸುಬ್ಬ :Sorry my friends sorry She doesn’t know English ,I forgotton to tell
Friends :ok its all right,we will come again ,It was nice to see you and your wife
ಸುಬ್ಬ : Thanks ,It is our pleasure
ಸುಬ್ಬಿ : ( ಗಡಿ ಬಿಡಿಲಿ ಒಳಗಿನಿಂದದ ಕಾಫಿ ರುವ ಬದಲು ಬದಲು ಚಪ್ಪಲಿ ಹಿಡ್ಕೊಂಡು ಬಂದು ) ಹಲೋ ಹಲೋ ..
Friends : What is this ?
ಸುಬ್ಬಿ : ಹೈ .. ಹೈ ..ಒಹ್ ಕಾಫಿ ತರುತ್ತೇನೆ.
Friends: ok..ok all right ,May God bless you ,see you again
                                           (ಹೋಗುತ್ತಾರೆ)
ಸುಬ್ಬ : ಅಲ್ಲ ಸುಬ್ಬಿ ನನ್ನ ಮರ್ಯಾದೆ ತೆಗೆದೆ ಅಲ್ವಾ  ..!ಛೆ ..
ಸುಬ್ಬಿ : ನಾನೇನು  ಮಾಡಿದೆ ?ಎಲ್ಲ ನೀವು ಹೇಳಿ ಕೊಟ್ಟ ಹಾಗೆ ನಿಮ್ಮ ಕೈ ಕಣ್ಣು ನೋಡಿಗೊಂಡೆ  ಹೇಳಿದ್ದೆ  ಅಷ್ಟು ಸರಿಯಾಗಿ ಮಾತಾಡಿನಾಡಿದ್ದೆ ಇಂಗ್ಲಿಷಿನಲ್ಲಿ !
ಸುಬ್ಬ : ಹೇಳಿದ್ದೇನೋ ನಾನು ಹೇಳಿ ಕೊಟ್ಟ ಹಾಗೆ,ಆದರೆ ಎಲ್ಲ ಉಲ್ಟಾ ಪಲ್ಟಾ ಹೇಳಿದ್ದೀಯ ,ಹೆಸರು ಕೇಳಿದರೆ ಊರು ,ಊರು ಕೇಳಿದರೆ ಹೆಸರು ,ವಯಸ್ಸು  ಕೇಳಿದರೆ ನೋ ಮಕ್ಕಳು ಎಷ್ಟು ಕೇಳಿದರೆ ೨೬ ಎಂದು ಹೇಳಿದೆ !ನೀನು ಬುದ್ಧಿವಂತೆ ಎಂದು ಭಾವಿಸಿ ಆನು ಮೋಸ ಹೋದೆ ..
ಸುಬ್ಬಿ :ಇಲ್ಲಲ್ಲಾ  ನಾನು ಎಲ್ಲ ಸರಿ ಹೇಳಿದ್ದೆನೆ !ನೀವು  ಶುರುವಿಗೆ ಹಣೆಗೆ ಕೈ ಇಟ್ರಿ ಆಗ ನಾನು ಊರು ಹೇಳಿದೆ ,ನಂತರ ನೀವು ಕಣ್ಣು ಮುಚ್ಚಿದಿರಿ,ಕಣ್ಣು ಮುಚ್ಚಿದರೆ ಹೆಸರು ಹೇಳು ಎಂದು ಹೆಳಿ ಕೊಟ್ಟದ್ದು ನೀವೇ ತಾನೇ ? ಹಾಗೆ ಹೇಳಿದೆ ನಾನು ..ನೀವು ತಲೆ ತಗ್ಗಿಸಿದಾಗ  ಟ್ವೆಂಟಿ ಸಿಕ್ಸ್  ಎಂದು ಹೇಳಿದ್ದೆ ಕೈ ಎತ್ತಿದಾಗ ನೋ ಹೇಳಿದ್ದೆ ಎಲ್ಲ ಸರಿಯಾಗಿಯೇ ಹೇಳಿದ್ದೇನೆ ನಾನು ನನ್ನ ಬೈಬೇಡಿ  ಸುಮ್ಮ ಸುಮ್ಮನೆ ..ಬೈಯಲು ನಾನೇನು  ತಪ್ಪು ಮಾಡಿರುವೆ ಹೇಳಿ  ..ಶುರುವಿಲಿ ರಜ್ಜ ಗಡಿ ಬಿಡಿ ಆಯಿತು ಅದು ಬಿಟ್ರೆ ಉಳಿದದ್ದೆಲ್ಲ ಸರಿ ಹೇಳಿಲ್ವಾ ನಾನು ?
ಸುಬ್ಬ :ಅಯ್ಯೋ ರಾಮ ದೇವರೇ !ನೀನು ಶುರುವಿಗೆ ಥ್ಯಾಂಕ್ಸ್ ಹೇಳಿದ್ದು ನೋಡಿ ತಲೆ ಕೆಟ್ಟು ಹಣೆ ಹಣೆ ಬಡ್ಕೊಂಡ್ರೆ ಅದನ್ನು ಹಣೆ ಮುಟ್ಟಿದ್ದು ಎಂದು ಭಾವಿಸುದ ?ಅಷ್ಟು ಗೊತ್ತಾಗುವುದಿಲ್ವ ನಿಂಗೆ ?ನಿನ್ನ ಹೆಡ್ಡು ಹೆಡ್ಡು ಬುದ್ಧಿಗೆ ನಾಚಿಕೆ ಆಗಿ ಕಣ್ಣು ಮುಚ್ಚಿದರೆ ಅದನ್ನು ಕಣ್ಣು ಮುಚ್ಚಿದ್ದು  ಎಂದು ತಿಳಿಯುದ ..?! ಛೆ ..ಎಲ್ಲ ನನ್ನ ಕರ್ಮ ! ಹಣೆ ಬರ ,,ಅಲ್ಲ ಸುಬ್ಬಿ ಅವರು ನಿನ್ನ mad .ಅ  ಕೇಳಿದರು  ಗೊತ್ತಾ ?
ಸುಬ್ಬಿ :ಅದೆಂತದು ಮೇ ಮೇ ಹೇಳ್ರೆ ?
(ಅಪ್ಪ ಅಮ್ಮ ದೂರಲ್ಲಿ ನಿಂತು ನೋಡುತ್ತಾ ಇದ್ದಾರೆ )
ಸುಬ್ಬ : ಇಲ್ಲಪ್ಪಾ ಇಲ್ಲ ಇನ್ನು ನಿನಗೆ ಇಂಗ್ಲೀಷು ಹೇಳಿ ಕೊಡಲು ನನ್ನಿಂದ  ಸಾಧ್ಯವಿಲ್ಲ !ನಿನಗೆ ಹೇಳಿಕೊಡಲು  ಆ ಬ್ರಹ್ಮನೇ ಬರಬೇಕಷ್ಟೇ  ..ನಿನ್ನಂತವರಿಗೆಇಂಗ್ಲೀಷು ಹೇಳಿ ಕೊಟ್ಟದಕ್ಕೆ ಚಪ್ಪಲಿಯಲ್ಲಿ ಹೊಡ್ಕೋಬೇಕು ನಾನು
ಸುಬ್ಬಿ : (ಕೈಯಲಿ ಇದ್ದ ಚಪ್ಪಲಿ ತೋರ್ಸಿ ) ಹೊಡಿಬೇಕಾ ?
ಅಮ್ಮ : (ಮುಂದೆ ಬಂದು ) ಎಂಥ ಸುಬ್ಬಿ ನಿನ್ನದು ಅವತಾರ ?ಗಂಡನಿಗೆ ಹೊಡೆಯಲು  ಚಪ್ಪಲಿ ತೋರಿಸುತ್ತೀಯ ?ನಾಚಿಕೆ ಆಗಲ್ವಾ ನಿನಗೆ ?ತಪ್ಪಾಯಿತು ಎಂದು ಹೇಳು  ಹೋಗು !
ಸುಬ್ಬ : ಅದಳ ತಪ್ಪಾಯಿತು ಬೇಡ ಏನೂ ಬೇಡ ..ನಾನಿನ್ನು ಒಂದು ಕ್ಷಣವು ಇವಳೊಟ್ಟಿಗೆ ಇರುವುದಿಲ್ಲ,ನಾನು ಈಗಲೇ ಮನೆ ಬಿಟ್ಟು ಹೋಗುತ್ತೇನೆ .. (ಕೋಪದಲ್ಲಿ ಹೊರಗೆ ಹೋಗಲು ಹೊರಟ  )
                                (ಸುಬ್ಬಿ ಅಳುತ್ತಾಳೆ)
ಅಪ್ಪ : ನಿಲ್ಲು ಸುಬ್ಬ ನಿಲ್ಲು ..(ಹೆಗಲಿಂಗೆ  ಕೈ ಹಾಕಿ ) ಎಂಥ ಸುಬ್ಬ ಇದು ಮಕ್ಕಳಾಟಿಕೆ ! ಇಷ್ಟು ಸಣ್ಣ ಕಾರಣಕ್ಕೆಲ್ಲ  ಕೋಪ ಮಾಡಿಗೊಂಡು ಮನೆ ಬಿಟ್ಟು ಹೋಗ್ತಾರಾ ?ಸುಬ್ಬಿ ಸ್ವಲ್ಪ ಹಠ ಮಾರಿ ಎಂಬುದು ಬಿಟ್ರೆ ಒಳ್ಳೆಯ ಗುಣದ ಹುಡುಗಿ ಅಲ್ವ ?ಇಷ್ಟಕ್ಕೂ ಇಂಗ್ಲೀಷ್ ಕಲಿಸಲು ಹೊರಟದ್ದು  ನೀನೇ ತಾನೇ ?ಇಂಗ್ಲೀಷು ಗೊತ್ತಿಲ್ಲದ  ಅವಳು  ನಿನ್ನ ನೋಡಿ ಉತ್ತರ ಕೊಟ್ಟಿದ್ದಾಳೆ ..ಏನೋ ಸ್ವಲ್ಪ ತಪ್ಪಾಗಿದೆ ಅದರಲ್ಲಿ ತಲೆ ಹೋಗುವಂತಹಾದ್ದು ಏನಿದೆ ?ಎಷ್ಟಾದರೂ ಸುಬ್ಬಿ ನಿನಗಾಗಿಯೇ ಹುಟ್ಟಿದ ಕೂಸು ಅಲ್ವಾ?ಅದಕ್ಕೆ ಈಗ ಇನ್ನೂ 16-17  ವರ್ಷ ಅಷ್ಟೇ ,ಅಜ್ಜಿಯ ಆಸೆ ತೀರಿಸಲೆಂದು   ತುಂಬಾ ಚಿಕ್ಕ ವಯಸ್ಸಿನ  ಅವಳಿಗೂ ನಿನಗೂ ಮದುವೆ ಮಾಡಿದ್ದು ತಾನೇ.. ನಿನಗೂ 25 -26 ವರ್ಷ ,,ಚಿಕ್ಕ ವಯಸ್ಸೇ ..ಆದರೆ ಅವಳು ಇನ್ನೂ ಸಣ್ಣವಳು ಅಲ್ವಾ ? ಅವಳಿಗೆ ಶಾಲೆಗೆ ಹೋಗುವ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿದ್ದು ನಮ್ಮ  ತಪ್ಪು ..ಆದರೆ ಮದುವೆ ಅಗಿ ಬಿಟ್ಟಿದೆ ಅಲ್ವ  ? ಕ್ಷಮಿಸಿ ಬಿಡು ,ಎಷ್ಟಾದರೂ ಅವಳು ನಿನ್ನ ಪ್ರೀತಿಯ ಹೆಂಡತಿ ಅಲ್ವಾ? ಅಲ್ಲಿ ನೋಡು .ಹೇಗೆ ಅಳುತ್ತಾ ಇದ್ದಾಳೆ ನೋಡು...ಹೋಗು ಅವಳನ್ನು ಸಮಾಧಾನ ಮಾಡು
ಸುಬ್ಬ : ನನ್ನದೇ ತಪ್ಪು ಸುಬ್ಬಿ  ಅಳಬೇಡ .ಇನ್ನು ನಿನ್ನ ಯಾವತ್ತಿಗೂ ಇಂಗ್ಲೀಷು ಬರಲ್ಲ ಎಂದು ಹಂಗಿಸುವುದಿಲ್ಲ ,ಬೈಯುವುದಿಲ್ಲ ,,ಖಂಡಿತಾ ..ಇಂಗ್ಲೀಷ್ ಭಾಷೆಯ ಭ್ರಮೆ ಬಿಟ್ಟು ಹೋಯಿತು ಎನಗೆ ,ನನ್ನ ಕ್ಷಮಿಸು ಚಿನ್ನ ..ಇನ್ನು ಅಳಬೇಡ‌.ನನ್ನದೇ ತಪ್ಪು.
ಸುಬ್ಬಿ : ಇಲ್ಲ ನನ್ನದು ಕೂಡ ತಪ್ಪು ಇದೆ. ನೀವು  ಅನೇಕ ಬಾರಿ   ಹೇಳಿದ್ದರೂ ಇಂಗ್ಲೀಷ್ ಮಾತನಾಡಲು ಕಲಿಸುವ ಕ್ಲಾಸ್ ಗೆ ಹೋಗಿ ಕಲಿಯದ್ದು ನನ್ನ ತಪ್ಪು .ನಾಳೆಯಿಂದಲೇ ನಾನು ಕ್ಲಾಸೆಗೆ ಹೋಗಿ ಕಲಿತ್ತೆ...
ಸುಬ್ಬ : ಬೇಡ ಸುಬ್ಬಿ ನನಗೆ ಈಗ ಇಂಗ್ಲೀಷಿನ ಭ್ರಮೆ ಪೂರ್ತಿ  ಬಿಟ್ಟು ಹೋಗಿದೆ,ಇಂಗ್ಲೀಷು ಬಾರದಿದ್ದರೆ ಏನೂ ತೊಂದರೆ ಇಲ್ಲ ,  ಅದು ನಾಚಿಕೆ ಹೇಳುವ ಭ್ರಮೆ ಬೇಡ .ಚಂದದ ನಮ್ಮ ಭಾಷೆ ಕನ್ನಡ ಕಸ್ತೂರಿ ಇರುವಾಗ  ಇಂಗ್ಲೀಷಿನ ಹಂಗು ನಮಗೆಂತಕೆ?ನಮ್ಮ ಜಗಳ ನೋಡಿ ಅತ್ತೆ ಮಾವ ಏನು ಭಾವಿಸಿದರೋ  ಏನೊ ?
ಸುಬ್ಬಿ : ಎಲ್ಲ ನೀವೇ ಮಾಡಿದ್ದು ..
ಸುಬ್ಬ : ಪುನಃ ಜಗಳ ಸುರು ಮಾಡಿದೆಯ ?ಜಗಳ ಸಾಕು ಇಲ್ಲಿ ಬಾ .
ಅಪ್ಪ : (ಅಮ್ಮನ ಹತ್ತಿರ ) ; ಅಬ್ಬ ..ಅವರು ರಾಜಿ ಆದರು ..ತಪ್ಪು ಅವರದ್ದಲ್ಲ ನಮ್ಮದೇ .ಈಗ ಕಾನೂನೇ ಇದೆ 18 ವರ್ಷಕ್ಕೆ ಮೊದಲು ಮದುವೆ ಮಾಡಬಾರದು ಎಂದು  .
ನಾವು  ಆಡುವ ಶಾಲೆಗೆ ಹೋಗುವ ಹದಿನಾಲ್ಕು ವರ್ಷಕ್ಕೆ ಸುಬ್ಬಿಯ ಮದುವೆ ಮಾಡಿದ್ದು ನಮ್ಮದು ಅಕ್ಷಮ್ಯ ಅಪರಾಧ  ಗೊತ್ತಾದರೆ  ನಮಗೆ ಜೈಲು ಆಗುತ್ತದೆ. .ಹಿರಿಯರ ಆಸೆ  ಈಡೇರಿಸಲು  ಎಂದು ನಾವು  ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಡಿ ಕುಣಿವ  ಕಾಲದಲ್ಲಿ ಮದುವೆ ಮಾಡ್ರೆಯ ಹೀಂಗೆಯ ಆಗುತ್ತದೆ .ಒಂದು ಕೆಲಸ ಮಾಡುವ ,ಸುಬ್ಬ ಹೇಗೂ ಬರುವ ತಿಂಗಳು ಅಮೆರಿಕಕ್ಕೆ ಹೋಗುತ್ತಾನೆ ಅಲ್ವಾ?ಅವನಿಗೆ  ಈಗ ಇವಳನ್ನು ಒಟ್ಟಿಗೆ ಕರಕೊಂಡು ಹೋಗಲು  ಆಗುವುದಿಲ್ಲ ಅಲ್ವಾ? ಅವನು ಮತ್ತೆ ಹಿಂದೆ  ಬರುವಾಗ ಎರಡು ಮೂರು ವರ್ಷಾಗುತ್ತದೆ ,ಅಷ್ಟು ಸಮಯ ಇನ್ನು ಸುಬ್ಬಿ ಶಾಲೆಗೆ ಹೋಗಿ ಕಲಿಯಲಿ ,ಮುಂದೆ ಕೂಡ ಅವಳು  ಓದಲಿ,ನಾವು ಮಾಡಿದ ತಪ್ಪನ್ನು  ಸ್ವಲ್ಪ  ಆದರೂ ಸರಿ ಮಾಡುವ
ಅಮ್ಮ :ಸರಿ  ಹಾಗೆ ಮಾಡುವ   
ಅಪ್ಪ : (ಸಭಿಕರ ಹತ್ತರೆ )..ನಮ್ಮನ್ನು   ನೋಡಿ ಆದರೂ ಇನ್ನು ಬೇರೆ ಯಾರೂ ಹುಡುಗಿಯರಿಗೆ  18 ವರ್ಷಕ್ಕೆ ಮೊದಲು ಮದುವೆ ಮಾಡಬಾರದು  ಎಂದು ಅರ್ಥ ಮಾಡಿಕೊಳ್ಳಲಿ ,ಇನ್ನು ನೀವು  ಆರೂ ಕೂಡಾ ನಾವು ಮಾಡಿದ  ಮಾಡಿದ ತಪ್ಪನ್ನು ಮಾಡಬೇಡಿ  ಆಯ್ತಾ  ?ಹೆಣ್ಣೊಂದು ಕಲಿತರೆ ಇಡೀ ಸಮಾಜವೇ ಕಲಿತಂತೆ..ಹೆಣ್ಣುಮಕ್ಕಳನ್ನು ಓದಿಸಿ. ಸ್ವಾಭಿಮಾನದಿಂದ .ಕಾಲ ಮೇಲೆ ನಿಲ್ಲುವ ಹಾಗೆ ಬೆಳೆಸಿ..ಹದಿನೆಂಟು ತುಂಬುವ ಮೊದಲೇ ಮದುವೆ ಮಾಡಬೇಡಿ..ಅವಳಿಗೆ ಬೆಳೆಯಲು ಅವಕಾಶ ಕೊಡಿ.ಹೆಣ್ಣು ಮಗು ಭಾರವಲ್ಲ..ಅವಳು ಮನೆಯ ಭಾಗ್ಯ ದೇವತೆ.. ಜಗತ್ತಿಗೆ ಬೆಳಕ ಕೊಡುವವಳು ಅವಳು..ಅವಳಿಗೆ  ಶಿಕ್ಷಣ ಕೊಟ್ಟು ಸ್ವಾಭಿಮಾನದಿಂದ ಬದುಕಲು ಅವಕಾಶ ಕೊಡೋಣ ..
                                     ಶುಭಂ

Saturday 7 September 2019

ಗುಡ್ಡೆ ಅಜ್ಜನೇ ವಿಕ್ರಮನಿಗೆ ದಾರಿ ತೋರಿಸು

ದಾರಿ ತೋರಿಸುವ ಗುಡ್ಡೆ ಅಜ್ಜನೇ  ಇಲ್ಲಿಂದಲೇ ತಲೆ ಬಾಗುವೆ ..ದಾರಿ ತಪ್ಪಿದ ವಿಕ್ರಮನಿಗೆ ದಾರಿ ತೋರಿಸು..
ನನ್ನ ಅಜ್ಜನ ಮನೆ ಹತ್ತಿರ ಪೊಳ್ಳಕಜೆ( ಕಾಸರಗೋಡು ಜಿಲ್ಲೆಯ ಮೀಯಪದವು ಸಮೀಪದಲ್ಲಿ) ಎಂಬ ದುರ್ಗಾರಾಧನೆಯ ಪವಿತ್ರ ಸ್ಥಳ ಇದೆ‌.
ನನ್ನ ತಂದೆ ಮನೆ ಕೋಳ್ಯೂರಿನಿಂದ ಅಜ್ಜನ ಮನೆಗೆ ಇಲ್ಯಾಗಿಯೇ ಹೋಗಬೇಕು. ಈ ದಾರಿಯಲ್ಲಿ ಒಂದು ದೇರ ಸಿಗುತ್ತದೆ. ದೇರದ ಆರಂಭದಲ್ಲಿ ಒಂದು ದೊಡ್ಡ ಕುಂಟಾಲದ ಮರ,ಅದರಡಿಯಲ್ಲಿ ಗುಳಿಗನ ಕಲ್ಲು ಇದೆ‌.ಆ ದಾರಿಯಲ್ಲಿ ಹೋಗಿ ಬರುವವರೆಲ್ಲ ಅಲ್ಲೇ ಪೊದೆಲುಗಳಿಂದ ಹೂ ಅಥವಾ ಚಿಗುರು ಕೊಯ್ದು ಗುಳಿಗನ ಕಲ್ಲಿಗೆ ಹಾಕುವುದು ವಾಡಿಕೆ‌
ಒಂದು ದಿವಸ ನನ್ನ ಸಣ್ಣಜ್ಜಿ ಮತ್ತು ನಾನು ಈ ಕಾಡಿನ  ದಾರಿಯಲ್ಲಿ ಹೋಗುವಾಗ ದಾರಿ ತಪ್ಪಿದೆವು.ಯಾವ ಕಡೆ ಹೋಗಬೇಕೆಂದು ತಿಳಿಯಲಿಲ್ಲ.ಆಗ ನನ್ನ ಸಣ್ಣಜ್ಜಿ ನಾವು ಗುಳಿನ ಕಲ್ಲಿಗೆ ಚಿಗುರು  ಹಾಕಲಿಲ್ಲ.ಅದಕ್ಕೆ ನಮಗೆ ದಾರಿ ಗೊತ್ತಾಗುತ್ತಿಲ್ಲ ಎಂದು ಹೇಳಿ ಅಲ್ಲೇ ಸಮೀಪದ ಪೊದೆಗಳಲ್ಲಿ ಇದ್ದ ಕಿಸ್ಕಾರದ ಹೂಗಳನ್ನು ಕೊಯ್ದು ಒಂದು ಕಡೆ ಹಾಕಿ ಗುಳಿಗನಿಗೆ ಕೈ‌ಮುಗಿದರು.
ಅದು ನಿರ್ಜನ ಪ್ರದೇಶ, ಜನಸಂಚಾರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.ಆದರೂ ಆ ದಾರಿಯಲ್ಲಿ ಯಾರೋ ಒಬ್ಬರು ಸೊಪ್ಪಿನ ಕಟ್ಟ ಹೊತ್ತುಕೊಂಡು ಬಂದರು. ಅಜ್ಜ ಅಜ್ಜಿ ನಾವು  ದಾರಿ ತಪ್ಪಿದ ಬಗ್ಗೆ ತಿಳಿಸಿ ದಾರಿ ತೋರಿಸಲಯ ಹೇಳಿದರು. ಅವರು ನಮಗೆ ಯಾವ ಕಡೆ ಹೋಗಬೇಕೆಂದು ತಿಳಿಸಿ ಕಾಡಿನ ದಾರಿಯಲ್ಲಿ ದೇರ ಇಳಿದು ಹೋದರು.
ಅವರು ಸೂಚಿಸಿದಂತೆ ಸ್ವಲ್ಪ ದೂರ ನಡೆದಾಗ ನಾವು ಯಾವಾಗಲೂ ಓಡಾಡುತ್ತಿದ್ದ ದಾರಿ ಕಾಣಿಸಿತು ಅನಂತರ ಯಾವುದೇ ಸಮಸ್ಯೆ ಇಲ್ಲದೆ ಮನೆ ಸೇರಿದೆವು.
ನನ್ನ ಅಜ್ಜಿ ಆ ದಿನ ಅವರು ಚಿಕ್ಕಾಗಿದ್ದಾಗ ನಡೆದ ಒಂದು ವಿಚಾರ ಹೇಳಿದರು ‌.ಅವರು ಚಿಕ್ಕವರಿದ್ದಾಗ ಅವರು,ಅವರ ತಾಯಿ ಮತ್ತು  ಅಕ್ಕ ಆ ದಾರಿಯಲ್ಲಿ ಹೋಗುವಾಗ ಗುಳಿಗನ ಕಲ್ಲಿಗೆ ಹೂ ಹಾಕಲು ಮರೆತರಂತೆ.ಸ್ವಲ್ಪ ದೂರ ಹೋದಾಗ ಇವರಿಗೆ ದಾರಿ ತಪ್ಪಿತು .ದಟ್ಟ ಕಾಡಿನ ಆ ದೇರದಲ್ಲಿ ಯಾವ ಕಡೆ ಹೋಗಬೇಕೆಂದು ತಿಳಿಯಲಿಲ್ಲವಂತೆ‌.
ಆಗ ಅವರ ತಾಯಿಗೆ ತಾವು ಮಾಡಿದ ತಪ್ಪುನ ಅರಿವಾಗಿ ಅಲ್ಲೇ ಸಮೀಪದ ಗಿಡಗಳಲ್ಲಿ ಇದ್ದ ಕಿಸ್ಕಾರ ( ಕೇಪುಳ) ಹೂವನ್ನು ಕೊಯ್ದು ಒಂದು ಮರದ ಅಡಿಯಲ್ಲಿ ಇರುವ ಕಲ್ಲಿಗೆ ಹಾಕಿ ನಮ್ಮದು ತಪ್ಪಾಯಿತು ಗುಡ್ಡೆ ಅಜ್ಜ( ಆ ಗುಳಿಗನನ್ನು ಗುಡ್ಡೆ ಅಜ್ಜ ಎಂದು ಕರೆಯುತ್ತಾರೆ) ನಮಗೆ ದಾರಿ ತೋರಿಸು ಎಂದು ನಮಸ್ಕಾರ ಮಾಡಿದರಂತೆ.ನಮಸ್ಕಾರ ‌ಮಾಡಿ ತಲೆ ಎತ್ತಿ ನೋಡಿದರೆ ಅವರು ಅದೇ ಗುಳಿಗ ಬನದ ಎದುರೇ ನಿಂತಿದ್ದರಂತೆ.ಅಲ್ಲಿ ಅವರಿಗೆ ಹೋಗುವ ದಾರಿ ಇತ್ತು.ಅದರ ಮೂಲಕ ಮನೆ ಸೇರಿದರಂತೆ.ಅಲ್ಲಿಯ ಗುಳಿಗನಿಗೆ  ಪ್ರಾರ್ಥನೆ ಮಾಡಿದರೆ ದಾರಿ ತಪ್ಪಿದವರು,ದಾರಿ ತಪ್ಪಿದ ಹಸು ಕರುಗಳು ಸಿಗುತ್ತವೆ ಎಂಬ ನಂಬಿಕೆ ಇದೆ ‌.ಹಾಗಾಗಿ ನಾನು ಕೂಡ ನಮ್ಮ ಗುಡ್ಡೆ ಅಜ್ಜನಲ್ಲಿ ಚಂದ್ರನಲ್ಲಿಗೆ ಹೋಗುವಾಗ ದಾರಿ ತಪ್ಪಿದ ವಿಕ್ರಮನಿಗೆ ಸರಿ ದಾರಿ ತೋರುವಂತೆ ಪ್ರಾರ್ಥನೆ ಮಾಡಿರುವೆ‌.
ನಂಬಿಕೆಯ ಮೇಲೆ ಜಗತ್ತು ನಿಂತಿದೆ ..ಇನ್ನೇನು ಹೇಳಲಿ..

Wednesday 4 September 2019

ನನ್ನೊಳಗೂ ಒಂದು ಆತ್ಮವಿದೆ.. ನಾನೇಕೆ ಆತ್ಮ ಕಥೆ ಬರೆಯಲು ಆರಂಭಿಸಿದೆ ? ಡಾ.ಲಕ್ಷ್ಮೀ ಜಿ ಪ್ರಸಾದ

ನಾನೇಕೆ ಆತ್ಮಕಥೆಯನ್ನು ಬರೆಯಲು ಆರಂಭಿಸಿದೆ ಗೊತ್ತಾ ?
  ನಾವ್ಯಾರೂ ಶಾಶ್ವತರಲ್ಲ..
ಆದರೂ ನಾಲ್ಕೈದು ವರ್ಷ ಮಾತ್ರ ಬದುಕಬಹುದು ..ಎಂದು ಖ್ಯಾತ ನ್ಯೂರಾಲಜಿಸ್ಟ್ ಒಬ್ಬರು ಹೇಳಿದಾಗ ನನಗಾದ ದಿಗ್ಭ್ರಮೆಯನ್ನು ಶಬ್ದಗಳಲ್ಲಿ ವರ್ಣಿಸಲಾಗದು...ನಾನು ಸಾಕಷ್ಟು ಧೈರ್ಯವಂತೆ..ಆದರೂ ಇನ್ನು ನಾಲ್ಕೈದು ವರ್ಷದ ಬದುಕು ಮಾತ್ರ ನನಗುಳಿದಿದೆ ಎಂದವರು ಹೇಳಿದಾಗ ಜಗತ್ತಿಡೀ ಶೂನ್ಯವಾಗಿ ಕಂಡದ್ದು ನಿಜ..
ಕೆಲ  ವರ್ಷಗಳ ಹಿಂದೆ ತೀವ್ರ ತಲೆ ನೋವು ಜ್ವರ ಬಂದಿತ್ತು‌.ಹತ್ತಿರದ ಡಾ.ರವಿ ಅವರ ಕ್ಲಿನಿಕ್ ಹೋಗಿ ಅವರು ಹೇಳಿದಂತೆ ಔಷಧ ತಗೊಂಡಿದ್ದರೂ ಕಡಿಮೆಯಾಗಿರಲಿಲ್ಲ..ಹಾಗಾಗಿ ತಜ್ಞ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಂಡು ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ನನ್ನ ಸರದಿಗಾಗಿ ಕಾಯುತ್ತಾ ಇದ್ದೆ.ಇದ್ದಕ್ಕಿದ್ದಂತೆ ಏನೋ ಕೆಟ್ಟ ವಾಸನೆ ಬಂದಂತಾಗಿ ಉಸಿರು ಸಿಕ್ಕಿ ಹಾಕೊಂಡಂತೆ ಆಗಿ ಹಿಂಸೆ ಆಯಿತು. ಅಷ್ಟೇ ನನಗೆ ಗೊತ್ತಾಗಿದ್ದು..
ನಂತರ ಎಚ್ಚರಾಗುವಾಗ ಐಸಿಯು ವಿನಲ್ಲಿದ್ದೆ‌.ಆರಂಭದಲ್ಲಿ ನಾನೆಲ್ಲಿದ್ದೇನೆ ಎಂದು ತಿಳಿಯದೆ ಗೊಂದಲ ಆಯಿತು ಅದು ಆಸ್ಪತ್ರೆ ಐಸಿಯು ಅಂತ ನನಗೆ ಗೊತ್ತಾಗಲು ಸುಮಾರು ಹೊತ್ರು ತಿಳಿಯಿತು. ನಾನು ನಾಲ್ಕೈದು ಗಂಟೆ ಪ್ರಜ್ಞೆ ಇಲ್ಲದೆ ಇದ್ದೆನೆಂದು ಮತ್ತೆ ತಿಳಿಯಿತು.
ಅಷ್ಟರೊಳಗೆ ರಕ್ತ ಪರೀಕ್ಷೆ, ಸಿಟಿ ಸ್ಕಾನಿಂಗ್  ಇತ್ಯಾದಿಗಳನ್ನು ಮಾಡಿದ್ದರು.ನಂತರ ಎಮ್ ಅರ್ ಐ ಸ್ಕಾನಿಂಗ್ ಆಯಿತು ‌.ನಂತರ ನ್ಯೂರಾಲಜಿ ವೈದ್ಯರು ಬಂದುಸಿಸ್ಟರ್ ಗಳಿಗೆ  ಏನೇನೋ ನಿರ್ದೇಶನ  ಮಾಡಿ  ಹೋದರು.
ನನಗೋ ಆತಂಕ.ಒಂದು ಸಣ್ಣ ಜ್ವರ  ತಲೆನೋವಿಗೆ ಇಷ್ಟೆಲ್ಲ ಪರೀಕ್ಷೆಗಳು ಯಾಕೆ ? ಒಂದಿನಿತು ಸುಸ್ತಾಗಿ ತಲೆ ಸುತ್ತಿ ಬಿದ್ದಿದ್ದರೆ ಅದಕ್ಕೆ ಐಸಿಯು ಎಂತಕೆ ? ಎಲ್ಲಕ್ಕಿಂತ ಹೆಚ್ಚಾಗಿ ನ್ಯೂರಾಲಜಿಷ್ಟು ಯಾಕೆ ಅಂತ ?
ಅಂತೂ ಇಂತೂ ಜ್ವರ ಬಿಟ್ಟು ಹುಷಾರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದೆ.ಮನೆಗೆ ಕಳಹಿಸುವಾಗ ಒಂದುವಾರ ಬಿಟ್ಟು ಅದೇ ನ್ಯೂರಾಲಜಿಸ್ಟ್ ಅನ್ನು ಕಾಣಬೇಕೆಂದು ಸೂಚಿಸಿದ್ದರು.ಒಂದು ವಾರದಲ್ಲಿ ಹೋಗಲಾಗಲಿಲ್ಲ ನನಗೆ .ಹತ್ತಿಪ್ಪತ್ತು ದಿನ ಕಳೆದು ಎಲ್ಲಾ ರಿಪೋರ್ಟ್ ಗಳನ್ನು ಹಿಡಿದುಕೊಂಡು ಹೋಗಿ ಅವರನ್ನು ಭೇಟಿಯಾದೆ.
ಅವರು ನಿಮಗೆ ಮರೆವು ಇದೆಯಾ ? ಬಸ್ ಇಳಿಯುವ ಸ್ಟಾಪ್ ಗೊತ್ತಾಗುತ್ತಾ ಇತ್ಯಾದಿಯಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು‌.ನನಗೆ ತಿಳಿದಂತೆ ಪ್ರಾಮಾಣಿಕ ಉತ್ತರ ನೀಡಿದೆ‌‌.ನಾನೋ ತುಂಬಾ ಬೇಜವಾಬ್ದಾರಿ ಹಾಗಾಗಿ ವಸ್ತುಗಳನ್ನೆಲ್ಲ ಎಲ್ಲೆಲ್ಲೋ ಇಟ್ಟು ಮರೆತು ಊರಿಡೀ ಹುಡುಕಾಡುತ್ತೇನೆ‌‌‌.ಹಾಗಾಗಿ ಮರೆವು ಇದೆ ಎಂದು ಹೇಳಿದೆ‌.ಅವರೇನು ಗ್ರಹಿಸಿದರೋ ಗೊತ್ತಿಲ್ಲ.. ಇಷ್ಟಕ್ಕೂ ನನಗೇನಾಗಿದೆ ? ಈಗ ಜ್ವರ ಇಲ್ಲ ಆರಾಮಾಗಿದ್ದೇನಲ್ಲ ಎಂದು ಕೇಳಿದೆ.ಎಮ್ ಅರ್ ಐ ಸ್ಕಾನಿಂಗ್ ರಿಪೋರ್ಟ್ ಗಳನ್ನು ಮತ್ತೆ ಮತ್ತೆ ನೋಡಿ ಮೆದುಳು ಸವೆದಿದೆ ಎಂದು ಏನೇನೋ ಹೇಳಿದರು.(  ಬೇರೆ ಸಂದರ್ಭದಲ್ಲಾಗಿದ್ದರೆ ಓ ಹಾಗಾದರೆ ನನಗೆ ಮೆದುಳು ಇದೆ ಅಂತ ಗೊತ್ತಾಗಿ ಸಂತಸ ಪಡುತ್ತಿದ್ದೆ  ,,😀 ಆದರೆ ಅಂದು ಆ ಪರಿಸ್ಥಿತಿ ಯಲ್ಲಿ ನಾನಿರಲಿಲ್ಲ )
ತುಂಬಾ ಆತಂಕಕ್ಕೆ ಒಳಗಾದೆ‌.ಮೆದುಳು ಸವೆದರೆ ಎಂತ ಮಾಡುವುದು ? ಅದಕ್ಕೆ ಔಷಧ ಇಲ್ಲವೇ ಎಂದು ಕೇಳಿದೆ.ಅವರು ಇಲ್ಲವೆಂಬಂತೆ ತಲೆ ಆಡಿಸುತ್ತಾ  ನಾಲ್ಕೈದು ವರ್ಷ ಬದುಕಬಹುದು ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು... ಒಂದಷ್ಟು ಹೊತ್ತು ಏನೂ ತೋಚದೆ ಸುಮ್ಮನಾದೆ..ಸ್ವಲ್ಪ ಹೊತ್ತಿಗೆ" ನಮ್ಮೂರ ಸುರೇಶಣ್ಣನವರಿಗೆ  ಖ್ಯಾತ ವೈದ್ಯರೊಬ್ಬರು ನೀವಿನ್ನು ಹೆಚ್ಚೆಂದರೆ ಆರು ತಿಂಗಳು ಬದುಕಬಹುದಷ್ಟೇ ಎಂದು ಹೇಳಿದ್ದರೂ ನಂತರ ಅವರು ಆಯರ್ವೇದ ವೈದ್ಯರ ಚಿಕಿತ್ಸೆ ಪಡೆದರು. ಆ ವೈದ್ಯರು ಹಾಗೆ ಹೇಳಿ ಹತ್ರು ಹದಿನೈದು ವರ್ಷಗಳ ನಂತರ ಕೂಡ ಸುರೇಶಣ್ಣ ಚೆನ್ನಾಗಿಯೇ ಬದುಕುತ್ತಿದ್ದಾರೆ " ಎಂಬುದು ನೆನಪಿಗೆ ಬಂದು ಸ್ವಲ್ಪ ಮಟ್ಟಿಗೆ ಧೈರ್ಯ ಬಂತು.ಜೊತೆಯಲ್ಲಿ
ಯಾವಾಗಲೋ ಓದಿದ್ದು ನೆನಪಾಯಿತು‌.ವಯಸ್ಸಾಗುತ್ತಾ ಎಲ್ಲರ ಮೆದುಳೂ ಸವೆಯುತ್ತದೆ ಅದರಲ್ಲಿ ವಿಶೇಷ ಏನಿಲ್ಲ ಎಂದು. ಅದನ್ನು ವೈದ್ಯರಲ್ಲಿ ಹಾಗೆಯೇ ಕೇಳಿದೆ‌‌.ನನಗೆ ನಲುವತ್ತೈದು ವರ್ಷ ಆಯಿತು.ಹಾಗಾಗಿ ಸ್ವಲ್ಪ ಮೆದುಳು ಸವೆದಿದ್ದರೆ ಅದು ಸಹಜ ತಾನೇ ಎಂದು. ಆಗ ಅವರು ನಿಮ್ಮ ಮೆದುಳು ಜಾಸ್ತಿ ಸವೆದಿದೆ ಎಂದರು. ಎಷ್ಟು ವರ್ಷ ಆದಷ್ಟು ಸವೆದಿದೆ ಎಂದು ಕೇಳಿದೆ.ಒಂದು ಇಪ್ಪತ್ತು ವರ್ಷದಷ್ಟು ಜಾಸ್ತಿ ಎಂದರೆ ಸುಮಾರು ಅರುವತ್ತೈದು ವರ್ಷ ಆಗುವಾಗ ಎಷ್ಟೋ ಅಷ್ಟು ಅಂದರು.
ಅಷ್ಟೆ ತಾನೇ ಡಾಕ್ಟರ್ ,ನೂರು ವರ್ಷ ಬದುಕುತ್ತಾರಲ್ಲಾ ? ಇನ್ನೂ ಮೂವತ್ತೈದು ವರ್ಷಗಳಷ್ಟು( 100-65 -35) ಕಾಲ ನನ್ನ ಮೆದುಳು ಕೆಲಸ ಮಾಡುತ್ತಲ್ಲಾ ? ನನಗೀಗ ನಲುವತ್ತೈದು ,ಇನ್ನೂ ಮೂವತ್ತೈದು ವರ್ಷ ಅಂದರೆ ಎಂಬತ್ತು ವರ್ಷ ತನಕ ನನಗೆ ಆಯುಸ್ಸು ಇದೆಯಲ್ಲ? ಎಂದು ತಕ್ಷಣವೇ ನಗುತ್ತಾ ಕೇಳಿದೆ.ನಾನು ಒಂಚೂರು ಹಾಗೆಯೇ ..ಎಂತಹ ಸಂದರ್ಭದಲ್ಲಿ ಕೂಡ ತೀರಾ ಗಾಂಭೀರ್ಯ ದಿಂದ ಇರಲು ಬರುವುದಿಲ್ಲ..
ಅವರು ಕೂಡ ಹ್ಹ ಹ್ಹಹ್ಹ ಎಂದು ಬಾಯಿ ತುಂಬಾ ನಕ್ಕರು.
ಇಂತಹ ಧನಾತ್ಮಕ ಮನೋಭಾವ ನಿಮ್ಮಲ್ಲಿದ್ದರೆ ಎಂಬತ್ತೇನು ನೂರು ವರ್ಷ ಬದುಕುತ್ತೀರಿ ,ಆದರೂ ಆರೋಗ್ಯದ ಬಗ್ಗೆ ಸ್ವಲ್ಪ ನಿಗಾ ವಹಿಸಿ ಎಂದು ಹೇಳಿ ಒಂದಷ್ಟು ಮೆಡಿಸಿನ್ ಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವಂತೆ ಬರೆದುಕೊಟ್ಟರು‌.
ಅಲ್ಲಿ ತಮಾಷೆ ಮಾಡಿ ನಗಾಡಿ ಎದ್ದು ಬಂದಿದ್ದರೂ ಅವರು ಇನ್ನೂ ನಾಲ್ಕೈದು ವರ್ಷ ಬದುಕಬಹುದಷ್ಟೇ ಎಂದು ಹೇಳಿದ್ದು ತಲೆ ಕೊರೆಯುತ್ತಾ ಇತ್ತು.
ಹಾಗಾಗಿ ಮತ್ತೆ ಇಬ್ಬರು ನರ ರೋಗ ತಜ್ಞರನ್ನು ಭೇಟಿ ಮಾಡಿದೆ‌‌
ಮತ್ತೊಮ್ಮೆ ಮೆದುಳಿನ  ಸಿಟಿ ಸ್ಕಾನಿಂಗ್ ,ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಿದರು‌.
ಮತ್ತೆ ರಿಪೋರ್ಟ್ ಗಳನ್ನು ನೋಡಿ,ನನ್ನನ್ನು ಪರೀಕ್ಷಿಸಿ ಒಂಚೂರು ಸಮಸ್ಯೆ ಇರುವುದಾದರೂ ಅಂತಹ ಕ್ರಿಟಿಕಲ್ ಏನೂ ಇಲ್ಲ..ಎಂದರು.
ಮತ್ತೆ ನಾನು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ.ನನಗೆ ಆ ಹಿಂದಿನ  ವೈದ್ಯರು ಹೇಳಿದಂತಹ ಗಹನವಾದ ಸಮಸ್ಯೆ ಇಲ್ಲದಿದ್ದರೂ ಒಂಚೂರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದೆ.ಅಲ್ಲಾ ನಲುವತ್ತೊಂಬತ್ತು ವರ್ಷ ಆದ ಮೇಲೆ ಹದಿನಾರು ವರ್ಷದ ಹುಡುಗಿ ಹಾಗೆ ಇರಬೇಕೆಂದರೆ ಇರಲಾಗುತ್ತದಾ ಅಲ್ವಾ ?

ಅದೇನೇ ಇರಲಿ, ಆ ವೈದ್ಯರು ನಾಲ್ಕೈದು ವರ್ಷ ಎಂದು ಹೇಳಿದ್ದು ಮಾತ್ರ ನನ್ನಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ‌.ಅಷ್ಟರ ತನಕ ನಾನು ನನಗಾಗಿ ಬದುಕಲೇ ಇಲ್ಲ..ನನಗೆ ಸೀರೆ ಚಿನ್ನ ಬಂಗಲೆ ಕಾರು  ಯಾವುದರ ವ್ಯಾಮೋಹ ಕೂಡ ಇಲ್ಲ..
ಆದರೂ ಯಾವುದೂ ಬೇಡವೆಂಬ ನಿರ್ಲಿಪ್ತತೆಯನ್ನು ತೊರೆದು ನಾನು ಬದುಕನ್ನು ಎಂಜಾಯ್ ಮಾಡಲು ಶುರು ಮಾಡಿರುವೆ‌‌.
ನನ್ನ ಕಲ್ಪನೆಗೆ ಅನುಗುಣವಾಗಿ ಚಂದದ ಮನೆಯನ್ನು ಕಟ್ಟಿಸಿದೆವು‌.ಮೊದಲಿಗೆ ಹೋಲಿಸಿದರೆ ಈ ಎರಡು ವರ್ಷಗಳಲ್ಲಿ ನಾನು ಹೆಚ್ಚು ಸೀರೆ,ಡ್ರೆಸ್ ಗಳನ್ನು ತೆಗೆದುಕೊಂಡಿರುವೆ. ಸದ್ಯದಲ್ಲೇಒಂದು  ಚಂದದ ಕಾರು ತಗೊಳ್ಳಬೇಕೆಂದಿರುವೆ‌.
ಮನೆ ಅಂಗಳದಲ್ಲಿ ನನಗಿಷ್ಟವಾದಂತೆ ಹೂಗಿಡಗಳನ್ನು ತರಕಾರಿ ಗಿಡಗಳನ್ನು ಹಾಕಿ ಆನಂದಿಸುತ್ತಿರುವೆ.
ನಾನು ನನಗಾಗಿ ಕೂಡ ಒಂದು ಸ್ವಲ್ಪ ಸಮಯವನ್ನು ಮೀಸಲಿಟ್ಟಿರುವೆ‌‌.
ಹಾಗೆಂದು ತೀರಾ ಸ್ವಾರ್ಥಿ ಆಗಿಲ್ಲ.ಎಲ್ಲ ಸುಖಗಳೂ ನನಗೇ ಸಿಗಬೇಕೆಂಬ ಹುಚ್ಚು ನನಗಿಲ್ಲ.
ಮೊದಲಿನಿಂದಲೂ ನಾನು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿದ್ದೆ‌.ಈಗಲೂ ಮುಂದುವರೆಸಿರುವೆ‌.
ನನ್ನ ಬದುಕಿನ ವಿಚಾರಗಳನ್ನು ಆಗೊಮ್ಮೆ ಈಗೊಮ್ಮೆ ಬ್ಲಾಗ್ ನಲ್ಲಿ ಬರೆಯುತ್ತಾ ಇದ್ದೆ‌.ಆತ್ಮಕಥೆ ಬರೆಯ ಬೇಕೆಂದು ಕೂಡ ಇದ್ದೆ‌.ಆದರೆ ಅದಕ್ಕೆ ಕನಿಷ್ಠ ಅರುವತ್ತು ವರ್ಷ ಆದರೂ ಆಗಬೇಕು.ಅನುಭವ ಆಗಬೇಕು.ಹಾಗಾಗಿ ನಂತರ ಬರೆಯುವುದು ಎಂದು ಕೊಂಡಿದ್ದೆ‌.ಆದರೆ ಯಾವಾಗ ವೈದ್ಯರ ಬಾಯಿಂದ ನಾಲ್ಕೈದು ವರ್ಷ ಎಂಬ ಮಾತು ಕೇಳಿದೆನೋ ನಾನು
ಬೇಗನೆ ನನ್ನ ಆತ್ಮಕಥೆ ಬರೆಯಬೇಕೆಂದು ಕೊಂಡೆ‌.
ಅವರೇನು ಹೇಳಿದರೋ ನಾನೇನು ಅರ್ಥ ಮಾಡಿಕೊಂಡೆನೋ ‌ಗೊತ್ತಿಲ್ಲ.ಅವರು ಹೈ ಪೈ ಇಂಗ್ಲಿಷ್ ನಲ್ಲಿ ಮಾತಾಡ್ತಿದ್ದರು.ನನಗೋ ಅಷ್ಟೇನೂ ಇಂಗ್ಲಿಷ್ ಜ್ಞಾನವಿಲ್ಲ.ನಾನು ಮತ್ತೊಮ್ಮೆ ಎರಡು ಮುರು ವರ್ಷಗಳ ನಂತರ ಕಂಡಾಗ ತಾವು ಹಾಗೆ ಹೇಳಿಯೇ ಇಲ್ಲ ಎಂದಿದ್ದರು.
ಇರಲಿ.
ನಂತರ ಬೆರೆ ಇಬ್ಬರು  ಮೂವರು ತಜ್ಞ ವೈದ್ಯರ ಅಭಿಪ್ರಾಯವನ್ನು ಪಡೆದು ಆ ವೈದ್ಯರದು ನನ್ನ ಸಮಸ್ಯೆಯ ಕುರಿತು  ತಪ್ಪು ಗ್ರಹಿಕೆ ಆಗಿತ್ತು ಎಂದು ತಿಳಿದುಕೊಂಡೆ.

ಇದಾಗಿ ಏಳು ವರ್ಷಗಳೇ ಕಳೆದು ಹೋಗಿವೆ ಈಗ .

ಆದರೂ ಸಾಯುವುದಕ್ಕೆ ಇಷ್ಟೇ ವಯಸ್ಸು ಎಂಬ ನಿಗದಿತ ಅವಧಿ ಇಲ್ಲ..ಯಾರು ಯಾವ ಕ್ಷಣಕ್ಕೂ ಸಾಯಬಹುದು.ಅದಕ್ಕೆ,ಮೆದುಳು ಸವೆತ, ಕ್ಯಾನ್ಸರ್, ಕಿಡ್ನಿ ಪೈಲೂರು,ಹಾರ್ಟ್ ಅಟ್ಯಾಕ್ ಮೊದಲಾದ ಗಹನ ಅರೋಗ್ಯ  ಸಮಸ್ಯೆಗಳೇ  ಆಗಬೇಕಿಲ್ಲ..ಆರೋಗ್ಯವಂತ ವ್ಯಕ್ತಿ ಕೂಡ ಮಾತನಾಡುತ್ತಲೇ ಕುಸಿದು ಜೀವ ಬಿಟ್ಟಿರುವ ಅನೇಕ ವೃತ್ತಾಂತ ಗಳನ್ನು ಕೇಳಿದ್ದೇವೆ,ವಿಡಿಯೋ ಗಳಲ್ಲಿ ನೋಡಿದ್ದೇವೆ.
ಇಷ್ಟಕ್ಕೂ ನಾವ್ಯಾರೂ ಈ ಭೂಮಿಯಲ್ಲಿ ಶಾಶ್ವತವಾಗಿ ಇರುವುದಿಲ್ಲ.. ಒಬ್ಬರ ಹಿಂದೆ ಒಬ್ಬರು ಸಾಗುತ್ತಲೇ ಇರುತ್ತೇವೆ.
ಅದಕ್ಕೂ ಮೊದಲು ಇಲ್ಲಿ ಹುಟ್ಟಿದ್ದರ ಗುರುತನ್ನು ನಾವು ಬಿಟ್ಟು ಹೋಗುವುದಕ್ಕಾಗಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕಿದೆ.
ಎಲ್ಲಕ್ಕಿಂತ ಹೆಚ್ಚು ನನ್ನ ಅಧ್ಯಯನದ ಸಾವಿರದ ಎಂಟು  ದೈವಗಳ ಮಾಹಿತಿ ಇರುವ ಬೃಹತ್ ಹೊತ್ತಗೆಯನ್ನು ಪ್ರಕಟಿಸಬೇಕಿದೆ 
ಇಷ್ಟನ್ನು ಅನಿಗ್ರಹಿಸಿದ ದೇವರು ಮುಂದೆಯೂ ಕೈ ಹಿಡಿದು ನಡೆಸುವನೆಂಬ ನಂಬಿಕೆಯಿಂದಿರುವೆ.
 

Tuesday 27 August 2019

ನನ್ನೊಳಗೂ ಒಂದು ಆತ್ಮವಿದೆ..ಮೊದಲಬಾರಿಗೆ ಸಿಡಿದೆದ್ದ ಸ್ವಾಭಿಮಾನ© ಡಾ.ಲಕ್ಷ್ಮೀ ಜಿ ಪ್ರಸಾದ


ಮೊದಲ ಬಾರಿಗೆ ಸಿಡಿದೆದ್ದ ಸ್ವಾಭಿಮಾನ
ನನಗೊತ್ತು.. ಇದನ್ನು ಬರೆದರೆ ಅದು ಅವರದೇ ಸಂಗತಿ ಎಂದು ಅವರಿಗೆ ಗೊತ್ತಾಗುತ್ತದೆ ಅಂತ..ಅವರಿಗೆ ಬೇಸರವಾಗಬಹುದೋ ನನ್ನ ಬಗ್ಗೆ ಕೋಪ ಉಕ್ಕಿ ಬಂದೀತೋ ಗೊತ್ತಿಲ್ಲ.. ಅದೇನೇ ಇದ್ದರೂ ಅವರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ.. ಹಾಗಾಗಿ ಅವರ ಹೆಸರನ್ನು ಮತ್ತು ನನಗೆ ಮತ್ತು ಅವರಿಗಿರುವ ಹತ್ತಿರದ ಸಂಬಂಧವನ್ನು ಇಲ್ಲಿ ಮುಚ್ಚಿಡುತ್ತೇನೆ‌.ಹಾಗೆಂದು ಈ ವಿಚಾರವನ್ನೇ ಮುಚ್ಚಿಟ್ಟರೆ ಆತ್ಮ ಸಾಕ್ಷಿಯಾಗಿ ಬರೆಯುವ ಆತ್ಮಕಥೆಗೆ ಅರ್ಥ ಇಲ್ಲ
ಸಣ್ಣ ಮಕ್ಕಳಿಗೂ ಭಾವನೆಗಳಿರುತ್ತವೆ..ಅವರಿಗೂ ಸ್ವಾಭಿಮಾನ ಇರುತ್ತದೆ..ಅವರವರ ಭಾವನೆಗಳನ್ನು ಹಿರಿಯರು ಕೂಡ ಗೌರವಿಸಬೇಕು.ಮಕ್ಕಳಲ್ಲಿ ಬೇಧ ಮಾಡಬಾರದು..ಮಾಡಿದರೆ ಅದೆಂದೂ ಮಕ್ಕಳ ಮನಸಿನಿಂದ ಅಳಿಸಿ ಹೋಗುವುದಿಲ್ಲ..ಇದಕ್ಕೆ ನಾನೇ ಸಾಕ್ಷಿ
ಅದ್ಯಾಕೋ ಏನೋ ಗೊತ್ತಿಲ್ಲಪ್ಪ..ನಾನು ಚಿಕ್ಕಂದಿನಿಂದಲೇ ತಾರತಮ್ಯದ ಬಿಸಿಯನ್ನು ಅನುಭವಿಸುತ್ತಲೇ ಬೆಳೆದು ಬಂದೆ.ನಾನು ಚಿಕ್ಕವಳಿದ್ದಾಗ ನಮ್ಮದು ಕೂಡು ಕುಟುಂಬ. ಅಜ್ಜಿ ,ನಮ್ಮ ತಂದೆ,ತಾಯಿ ನಾವು ನಾಲ್ಕು ಜನ ಮಕ್ಕಳು ( ಕೊನೆಯ ತಮ್ಮ ಆಸ್ತಿ ಪಾಲಾದ ನಂತರನಮ್ಮ  ಹೊಸ ಮನೆಯಲ್ಲಿಯೇ ಬೆಳೆದವನು),ದೊಡ್ಡ ಚಿಕ್ಕಪ್ಪ,ಚಿಕ್ಕಮ್ಮ ಅವರ ಮಗಳು ಸಂಧ್ಯಾ ಸಣ್ಣ ಚಿಕ್ಕಪ್ಪ ಒಟ್ಟಿಗೆ ಇದ್ದೆವು.ದೊಡ್ಡ ಚಿಕ್ಕಪ್ಪನವರಿಗೆ ಒಬ್ಬಳೇ ಮಗಳು ಸಂಧ್ಯಾ. ನನಗಿಂತ ಐದಾರು ತಿಂಗಳು ದೊಡ್ಡವಳು. ನನಗ್ಯಾಕೋ ಮನೆ ಮಂದಿ ಎಲ್ಲ ಅವಳನ್ನೇ ಮುದ್ದು ಮಾಡುತ್ತಿದ್ದರು ಎಂದು ನನಗೆ ಅನಿಸುತ್ತಾ ಇತ್ತು.
ನನಗೆ ಐದು ವರ್ಷ ಆಗುವಾಗ
ನಮ್ಮ ಮನೆಯಲ್ಲಿ ಆಸ್ತಿ ಪಾಲಾಗಿ ನಮ್ಮ ತಂದೆ ಮಣ್ಣಿನ ಮನೆಯೊಂದನ್ನು ಕಟ್ಟಿ ಬೇರೆ ಬಿಡಾರ ಹೂಡಿದ್ದೆವು
ನಮ್ಮ ಹತ್ತಿರದ ಸಂಬಂಧಿ ದೊಡ್ಡ ವಿದ್ವಾಂಸರು ಆಗಿದ್ದರು. ಅವರೆಂದರೆ ನನಗೆ ಜೀವ ಆಗಿತ್ತು.ನನ್ನ ತಂದೆಯವರಿಗೂ ತುಂಬಾ ಪ್ರೀತಿ‌ಅವರ ಹೆಸರು ಹೇಳಿದರೆ ಮತ್ತೆ ನಮ್ಮ ತಂದೆಯವರಿಗೆ ಬಾಯಾರಿಕೆಗೆ ನೀರು ಬೇಡ. ಅಷ್ಟು ಅಭಿಮಾನ ಅವರ ಬಗ್ಗೆ. ಹಾಗಾಗಿಯೋ ಏನೋ ನಮಗೂ ಅವರ ಬಗ್ಗೆ ತುಂಬಾ ಪ್ರೀತಿ. ಅವರು ಯಾವಾಗ ಊರಿಗೆ ಬರುತ್ತಾರೆ ಎಂಬುದನ್ನು ಜಾತಕ ಪಕ್ಷಿಯಂತೆ ಕಾಯುತ್ತಾ ಇದ್ದೆವು.ಬರುವಾಗ ಏನಾದರೂ ತಿಂಡಿ ತರುತ್ತಿದ್ದರೋ ಏನೋ ನನಗೆ ಈಗ ನೆನಪಾಗುತ್ತಿಲ್ಲ..
ಒಂದು ಬಾರಿ ಬಂದಾಗ ನನಗೆ ಒಂದು ಉಣ್ಣೆಯ ಫ್ರಾಕ್ ತಂದು ಕೊಟ್ಟಿದ್ದರು‌.ಅಕ್ಕನಿಗೆ ಒಂದು ಉಣ್ಣೆಯ ರವಕೆ ,ಅಣ್ಣನಿಗೆ ಒಂದು ಸ್ವೆಟರ್ ತಂದಿದ್ದರು. ತಮ್ಮಂದಿರು ತೀರಾ ಚಿಕ್ಕವರು ಹಾಗಾಗಿ ಏನೂ ತಂದಿರಲಿಲ್ಲ.ಅವರು ಕೊಟ್ಟ ಉಣ್ಣೆಯ ಹಳದಿ ಬಣ್ಣದ ಕೆಂಪು ಅಂಚಿನ ಉದ್ದ ಕೈ ಯ ಫ್ರಾಕ್ ತುಂಬಾ ಚಂದ ಇತ್ತು‌‌.ಬಡವರಾಗಿದ್ದ ನಮಗೆ ಹೊಸ ಅಂಗಿ ತೆಗೆಯುತ್ತಿದ್ದುದು ಕೋಳ್ಯೂರು  ಜಾತ್ರೆಗೆ ಮಾತ್ರ.ಇನ್ನೂ ಬೆಲೆ ಬಾಳುವ ಉಣ್ಣೆಯ ಅಂಗಿಯನ್ನು ನಾವು ಕಂಡೇ ಇರಲಿಲ್ಲ. ಹಾಗಾಗಿ ನನಗೆ ಬಹಳ ಸಂತಸವಾಗಿತ್ತು.....ಅವರು ತಂದು ಕೊಟ್ಟ ಅಂಗಿ ಎಂದು ಬಹಳ ಹೆಮ್ಮೆಯಿಂದ ಹಾಕಿ ತಿರುಗಾಡಿದ್ದೆ.
ಆ ಸಮಯದಲ್ಲಿ ನಮಗೆ ಮತ್ತು ದೊಡ್ಡ ಚಿಕ್ಕಪ್ಪನವರಿಗೆ ಯಾವುದೋ ವಿಷಯಕ್ಕೆ ವಿವಾದ ಆಗಿ ಹೋಗಿ ಬರುವುದು ಇರಲಿಲ್ಲ. ಇದಾಗಿ ಎರಡು ವರ್ಷಗಳ ನಂತರ ನಮಗೆ ರಾಜಿಯಾಯಿತು.ಎರಡೂ ಮನೆಗಳ ಮಂದಿ ಹೋಗಿ ಬರುತ್ತಿದ್ದೆವು.
ಇಂತಹ ಒಂದು ದಿನ ನಾನು ಆ ಉಣ್ಣೆಯ ಫ್ರಾಕ್ ಅನ್ನು ಧರಿಸಿದ್ದೆ‌.ಅದನ್ನು ನೋಡಿದ ನನ್ನ ಚಿಕ್ಕಪ್ಪನ ಮಗಳು ಸಂಧ್ಯಾ " ಇದು ..ಅವರು ನನಗೆ ತಂದು ಕೊಟ್ಟ ಅಂಗಿ,ಆದರೆ ನನ್ನ ತಂದೆ ಅದನ್ನು ಬೇಡ ಎಂದು ಹೇಳಿ ಹಿಂದೆ ಕೊಟ್ಟರು.( ಆ ಸಮಯದಲ್ಲಿ  ಸಂಧ್ಯಾಳ ತಂದೆ( ನನ್ನದೊಡ್ಡ ಚಿಕ್ಕಪ್ಪ) ಮತ್ತು ಅವರ ನಡುವೆ ಏನೋ ವೈಮನಸ್ಸು ಇತ್ತು )ಅದನ್ನು ನಾವು ಬೇಡ ಎಂದು ಹಿಂದೆ ಕೊಟ್ಟ ನಂತರ ನಿನಗೆ ಕೊಟ್ಟಿದ್ದಾರೆ " ಎಂದು ಹೇಳಿದಳು.
ಓಹ್ ಎದೆಗೆ ಬೆಂಕಿ ಬಿದ್ದ ಅನುಭವ...ನಾಚಿಕೆ ಅವಮಾನದಿಂದ ಕುಗ್ಗಿ ಹೋದೆ‌.ಬೇರೆಯವರು ಬೇಡ ಎಂದದ್ದನ್ನು ,ಬಿಸಾಡುವ ಬದಲು ನನಗೆ ಕೊಟ್ಟರೇ ? ಸಂಧ್ಯಾ ಮತ್ತು ನಾನು ಹೆಚ್ಚು ಕಡಿಮೆ ಒಂದೇ ವಯಸ್ಸಿನವರು.ಅವರಿಗೆ ನಾವಿಬ್ಬರೂ ಸಮಾನ ಹತ್ತಿರದ ಸಂಬಂಧಿಗಳು.ಇಬ್ಬರೂ ಅಣ್ಣನ ಮಕ್ಕಳೇ.
ಹಾಗಿರುವಾಗ ಅವಳಿಗೆ ಮಾತ್ರ ಫ್ರಾಕ್ ತಂದರೇ ? ನಾನು ಲೆಕ್ಕಕ್ಕಿಲ್ಲದವಳಾಗಿದ್ದೆನೇ ? ಈ ಪ್ರಶ್ನೆಗೆ ನನಗೆ ಅಂದು ಉತ್ತರ ಸಿಕ್ಕಿರಲಿಲ್ಲ...ಇಂದೂ ಉತ್ತರ ಸಿಕ್ಕಿಲ್ಲ...ಆ ಕ್ಷಣಕ್ಕೆ ನಾನೇಕೆ ಆ ಫ್ರಾಕ್ ಅನ್ನು ತಗೊಂಡೆನೋ ಎಂದು ಪಶ್ಚಾತ್ತಾಪವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ‌ .ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿತ್ತು ನನಗೆ ಹಳೆಯ ಅಂಗಿ ಯಲ್ಲಿ ಇರುವುದು ಎಂದಿಗೂ ಅವಮಾನ ಎನಿಸಿರಲಿಲ್ಲ..
ಆದರೆ ನಮ್ಮಿಬ್ಬರ ನಡುವೆ ತಾರತಮ್ಯ ಮಾಡಿ ಚಿಕ್ಕಪ್ಪನ ಮಗಳಿಗೆ ಮಾತ್ರ ಫ್ರಾಕ್ ತಂದದ್ದು ಮಾತ್ರವಲ್ಲದೆ ಅವರು ಬೇಡವೆಂದು ನಿರಾಕರಿಸಿದ್ದನ್ನು ಕೊಟ್ಟದ್ದನ್ನು ನಾನು ಗೊತ್ತಿಲ್ಲದೆ ತೊಟ್ಟೆನಲ್ಲ ಎಂಬುದನ್ನು ಇಂದಿಗೂ ನೆನೆದರೆ ನನ್ನ ಎದೆಯಲ್ಲಿ ಬೆಂಕಿ ಏಳುತ್ತದೆ.
ಅದು ಅವಳು ನಿರಾಕರಿಸಿದ್ದನ್ನು ನನಗೆ ಕೊಟ್ಟದ್ದು ಎಂದು ಗೊತ್ತಿದ್ದರೆ ನಾನು ಖಂಡಿತವಾಗಿಯೂ ತೆಗೆದುಕೊಳ್ಳುತ್ತಿರಲಿಲ್ಲ.ನನ್ನ ತಂದೆ ತಾಯಿ ಗೂ ಈ ವಿಚಾರ ಗೊತ್ತಿರಲಿಲ್ಲ. ಗೊತ್ತಾಗಿದ್ದರೆ ಅವರು ಕೂಡ ಬೇಡ ಎಂದು ನಿರಾಕರಿಸುತ್ತಿದ್ದರು.
ನನಗೆ ಈಗಲೂ ಅರ್ಥವಾಗದ ವಿಚಾರ ಇದು.ನಾನು ಅವಳು ಒಂದೇ ವಯಸ್ಸಿನವರಾದರೂ ನನಗೇಕೆ ಫ್ರಾಕ್ ತರಲಿಲ್ಲ ? ನಾನು ಲೆಕ್ಕಕ್ಕಿಲ್ಲದವಳಾಗಿದ್ದೆನೇ ? ಇನ್ನೂ ನನ್ನ ಮೇಲೆ ಏನಾದರೂ ಕೋಪ ಇತ್ತಾ ಎಂದರೆ ನನಗಿನ್ನೂ ಆಗ ಆರು ವರ್ಷ,ನನ್ನ ‌ಮೇಲೆ ಏನು ದ್ವೇಷ ಇರಲು ಸಾಧ್ಯ ? ಅಥವಾ ನಾನೇನು ಅನ್ಯಾಯ ಮಾಡಿರಲು ಸಾಧ್ಯ ?
ಇದನ್ನು ಗಮನಿಸುವಾಗ ಅವಳನ್ನು ಹೆಚ್ಚು ಮುದ್ದು ಮಾಡುತ್ತಿದ್ದರೆಂದು ನನಗೆ ಅನಿಸುತ್ತಾ ಇದ್ದದ್ದು ಸತ್ಯವಿರಬೇಕೆಂದು ನನಗೆ ಅನಿಸುತ್ತದೆ. ಒಂದು ಸಣ್ಣ ಫ್ರಾಕ್ ತರುವಲ್ಲಿ ತಾರತಮ್ಯ ಮಾಡಿದವರು ಇತರ ವಿಚಾರಗಳಲ್ಲಿ ತಾರತಮ್ಯ ಮಾಡಿದ್ದರೆ ಅದರಲ್ಲಿ ಅಸಹಜವಾದ್ದು ಏನೂ ಇಲ್ಲ.
ಆದರೆ ಈ ತಾರತಮ್ಯ ನನ್ನನ್ನು ಚಿಕ್ಕಂದಿನಿಂದಲೇ ಕಾಡಿದ್ದು ಸತ್ಯ.ಈ ಘಟನೆ ನನ್ನ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದು ಕೂಡ ಅಷ್ಟೇ ಸತ್ಯವಾದ ವಿಚಾರ.ಅಂದೇ ಅಂದುಕೊಂಡಿದ್ದೆ ನಾನು ಓದಿ ಒಳ್ಳೆಯ ಸ್ಥಾನ ಪಡೆದು ಎಲ್ಲರೆದುರು ತಲೆಯೆತ್ತಿ ನಡೆಯಬೇಕು ಎಂದು.
ದೇವರ ದಯೆಯಿಂದ ಇಂದಿಗೆ ಅದು ಸಾಧ್ಯವಾಗಿದೆ ಕೂಡ .ಅದಕ್ಕಾಗಿ ನಾನು ನನಗೆ ವಿದ್ಯೆ ಕೊಡಿಸಿ ಸ್ವಂತ ಕಾಲಮೇಲೆ ನಿಂತು, ಸ್ವಾಭಿಮಾನದಿಂದ ಬದುಕುವಂತೆ ಮಾಡಿದ ನನ್ನ ಹೆತ್ತವರಿಗೆ ನಾನು ಯಾವತ್ತಿಗೂ ಋಣಿಯಾಗಿದ್ದೇನೆ.
ಈ ತಾರತಮ್ಯ ನಾನು ದೊಡ್ಡವಳಾದ ನಂತರ ಇತ್ತೀಚೆಗೆ  ಅವರ ಮಗಳ ಮದುವೆ ಸಮಯದಲ್ಲೂ ಕೂಡ ಅವರಿಂದಲೇ ಮತ್ತೆ  ನಡೆದಿದೆ.ಈಗ ನನಗೆ ಬೇಸರವಿಲ್ಲ ಯಾಕೆಂದರೆ ಕೊಟ್ಟವರ ಕೈ ಯಾವಾಗಲೂ ಮೇಲೆ,ತಗೊಂಡವರ ಕೈ ಯಾವಾಗಲೂ ಕೆಳಗೆ,ನನಗೆ ಏನೂ ಕೊಡದೇ ಇದ್ದರೆ ನನಗೆ ಸಂತಸ ಯಾಕೆಂದರೆ ನನ್ನ ಕೈ ಕೆಳಗಾಗುವುದಿಲ್ಲ ಅಲ್ವಾ ?

Sunday 25 August 2019

ನನ್ನೊಳಗೂ ಒಂದು ಆತ್ಮವಿದೆ..13 ..ಒಂದು ಕಾಶಿ ಇನ್ನೊಂದು ಕಾಶಿಗೆ ಹೊರಟದ್ದನ್ನು ನೋಡಿದ್ದೀರಾ ?



ಒಂದು ಕಾಶಿ ಇನ್ನೊಂದು ಕಾಶಿಯನ್ನು ನೋಡಲು ಹೋಗುವ ಬಗ್ಗೆ ಕೇಳಿದ್ದೀರಾ ?
“ಕಾಸಿಗಿ ಹೋಗುದಕ ಏಸೊಂದು ದಿನಬೇಕು/
, ತಾಸ್ ಹೊತ್ತಿನ ಹಾದಿ ತೌರೂರು ಮನೆಯಲ್ಲಿ/
ಕಾಶಿ ಕುಂತವಳೆ ... ಕಾಸಿ ಕುಂತವ್ಳೆ ಹಡೆದವ್ವ
ನನ್ನಮ್ಮನೇ ಒಂದು ಕಾಶಿ..ಅವರೀಗ ಕಾಶಿಗೆ ಹೋಗಿದ್ದಾರೆ
ನನ್ನಮ್ಮ ,ಅಣ್ಣ ಅಕ್ಕ ಬಾವ ,ತಮ್ಮ ತಮ್ಮನ ಹೆಂಡತಿ ಮಕ್ಕಳು ಮೊನ್ನೆ ಕಾಶಿಗೆ ಹೊರಟರು.ಅಕ್ಕ ಬಾವ ತಮ್ಮ ತಮ್ಮನ ಮಡದಿ ಮಕ್ಕಳು ಮಂಗಳೂರಿನಿಂದ ವಿಮಾನ ಹತ್ತಿ ಇಪ್ಪತ್ತೆರಡನೆಯ ತಾರೀಕಿನಂದು ಸಂಜೆ ಬೆಂಗಳೂರಿನ ನಮ್ಮ ಮನೆಗೆ ಬಂದರು.ಅಮ್ಮ ಹದಿನೈದು ದಿನ ಮೊದಲೇ ನಮ್ಮ ಮನೆಗೆ ಬಂದಿದ್ದರು.ಮಗ ಊರಿಗೆ ಹೋದವನು ಒತ್ತಾಯ ಮಾಡಿ ಅಮ್ಮನನ್ನು ನಮ್ಮನೆಗೆ ಕರೆದುಕೊಂಡು ಬಂದಿದ್ದ.
ಇಪ್ಪತ್ತಮೂರನೇ ತಾರೀಕಿನಂದು ಬೆಳಗೆ ಎಂಟೂವರೆಯ ವಿಮಾನದಲ್ಲಿ ಕಾಶಿಗೆ( ವಾರಾಣಸಿ) ಹೋಗಲು ಸೀಟ್ ಬುಕ್ ಆಗಿತ್ತು.
ಅಕ್ಕ ಬಾವ ತಮ್ಮ ಮಕ್ಕಳೆಲ್ಲ ಸೇರಿದ್ದರಿಂದ ಬಹಳ ಸಂಭ್ರಮದ ವಾತಾವರಣ.
ತಮ್ಮನ ಮಕ್ಕಳಿಗೆ ಪಿಜ್ಜಾ ತಿನ್ನುವ ಆಸೆ ಅಯಿತು.ಆದರೆ ಮರುದಿನದಿಂದ ಐದು ದಿನಗಳ ಕಾಲ ಪ್ರಯಾಣ ಇದ್ದ ಕಾರಣ ತಮ್ಮ ಬೇಡ ಎಂದು ಹೇಳಿದರು.ಸೊಸೆಯ ಮುಖ ಚಿಕ್ಕದಾಯಿತು.ಆಗ ನಾನು ಮುಂದಿನ ಬೇಸಗೆ ರಜೆಯಲ್ಲಿ ಹದಿನೈದು ದಿನ ಇರುವಂತೆ ಬಾ..ಇಡೀ ಬೆಂಗಳೂರು ಸುತ್ತಿಸುತ್ತೇನೆ ಬೇಕಾದ್ದು ತೆಗೆದು ಕೊಡುತ್ತೇನೆ ಎಂದು ಸಮಾಧಾನ ಮಾಡಿದೆ.
‌ಮರುದಿವಸ ನಾಲ್ಕೂವರೆಗೆ ವಿಮಾನ ನಿಲ್ದಾಣಕ್ಕೆ ಹೋಗಲು ಕಾರನ್ನು ಬರುವಂತೆ ಹೇಳಿದ್ದೆವು.
‌ಮರು ದಿನದ ತಿಂಡಿ ಎಲ್ಲ ಮೊದಲೇ ಸಿದ್ಧ ಪಡಿಸಿದ್ದೆವು..
‌ಮರು ದಿನ ಮೂರು ಗಂಟೆಗೆ ಏಳ ಬೇಕಿದ್ದರಿಂದ ಬೇಗ ಬೇಗನೆ ಊಟ ಮಾಡಿ ಮಲಗಿ ಎಂದು ಅಮ್ಮ ಗದರಿದರೂ ನಮ್ಮ ಅಕ್ಕ ತಮ್ಮಂದಿರ ಮಾತು ಹರಟೆ ತಮಾಷೆ ಸುಲಭಕ್ಕೆ ಕೊನೆಗಾಣುವಂತಿರಲಿಲ್ಲ.ಅಂತೂ ಇಂತೂ ಒಮಬತ್ತೂವರೆಗೆ ಎಲ್ಲರಿಗೆ ಚಾಪೆ ಹಾಸಿ ಮಲಗಲು ವ್ಯವಸ್ಥೆ ಮಾಡಿದೆ, ಎಲ್ಲರೂ ಬೆಳಕು ನಂದಿಸಿ ಹಾಸಿಗೆಯಲ್ಲಿ ಬಿದ್ದು ಕೊಂಡೆವು.ಅವರಿಗೆಲ್ಲಾ ಪ್ರಯಾಣ ಮಾಡಿ ಬಂದು ಸುಸ್ತಾಗಿ ನಿದ್ರೆ ಬಂದಿರಬಹುದು
‌ಆದರೆ ನನಗೆ ಮಾತ್ರ ಒಂದಿನಿತು ನಿದ್ದೆ ಕಣ್ಣಿಗೆ ಹತ್ತಲಿಲ್ಲ..ಕಣ್ಣಿಗೆ ಕಾಣುತ್ತಾ ಇದ್ದದ್ದು ಒಂದೇ ದೃಶ್ಯ... ನಾನೂ ಕಾಶಿಗೆ ಬರುತ್ತೇನೆ ಎಂದು ದುಃಖಿಸಿ ದುಃಖಿಸಿ ಅಳುತ್ತಿದ್ದ ಮೂರು ನಾಲ್ಕು ವರ್ಷದ ಸಣ್ಣ ಹುಡುಗಿಯ ಚಿತ್ರ...ಆ ಹುಡುಗಿ ಬೇರೆ ಯಾರೂ ಅಲ್ಲ..ನಾನೇ ಆಗಿದ್ದೆ.
‌ನಾನು ಚಿಕ್ಕವಳಿದ್ದಾಗ ಅಂದರೆ ಸುಮಾರು ನಲುವತ್ತೆರಡು ವರ್ಷಗಳ ಮೊದಲು ನಮ್ಮ ಕುಟುಂಬವಿಡೀ ಕಾಶಿಗೆ ಹೋಗಿತ್ತು.ಸಂಸಾರದ ಜವಾಬ್ದಾರಿ ಹಾಗೂ ಎಳೆಯ ಮಕ್ಕಳಿರುವ ಕಾರಣದಿಂದಾಗಿ ನನ್ನ ತಂದೆ ತಾಯಿ ಮತ್ತು ನಾವು ಐದು ಜನ ಮಕ್ಕಳು ಮಾತ್ರ ಹೋಗಿರಲಿಲ್ಲ..
‌ನನಗೆ ಬೇರೆ ಯಾರು ಹೊದರೂ ಅಷ್ಟೊಂದು ದುಃಖ ಆಗುತ್ತಿರಲಿಲ್ಲವೋ ಏನೋ..ನನ್ನ ಜೊತೆ ಜೊತೆಗೇ ಬೆಳೆದ ನನಗಿಂತ ಕೆವಲ ಐದಾರು ತಿಂಗಳು ದೊಡ್ಡವಳಾದ ಚಿಕ್ಕಪ್ಪನ ಮಗಳು ಸಂಧ್ಯಾ ನನ್ನನ್ನು ಬಿಟ್ಟು  ಕಾಶಿಗೆ ಹೋಗುವುದು ಸಹಿಸಲಾಗದ ವಿಚಾರವಾಗಿತ್ತು.ಚಿಕ್ಕಪ್ಪ ಚಿಕ್ಕಮ್ಮ ಹೋಗುವ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದರು ಅದೇನು ಅಸಹಜ ವಿಚಾರವಲ್ಲ
‌ಆದರೆ ಅಷ್ಟೆಲ್ಲ ಯೋಚಿಸುವಷ್ಟು ನಾನು ದೊಡ್ಡವಳಾಗಿರಲಿಲ್ಲ.ಹಾಗಾಗಿ ಒಂದೇ ಸಮನೆ ನಾನೂ ಕಾಶಿಗೆ ಬರುತ್ತೇನೆ ಎಂದು ಹಠ ಮಾಡುತ್ತಿದ್ದೆ
ನನ್ನಲ್ಲಿ ಇರುವುದರಲ್ಲಿ ಒಂದು ಚಂದದ  ಕೆಂಪುಬಣ್ಣದ ಫ್ರಾಕ್ ಹಾಕಿ ಸಿದ್ಧಳಾಗಿದ್ದೆ.ಯಾರೇನೂ ಹೇಳಿ ಸಮಾಧಾನ ಮಾಡಿದರೂ ನಾನು ಕೇಳುವ ಪರಿಸ್ಥಿತಿ ಯಲ್ಲಿ ಇರಲಿಲ್ಲ ಯಾಕೆಂದರೆ ಸಂಧ್ಯಾ ಹೋಗುತ್ತಿದ್ದಾಳಲ್ಲ‌! ಮತ್ತೆ ನನ್ನನ್ಯಾಕೆ ಕರೆದುಕೊಂಡು ಹೋಗಬಾರದು ಎಂಬುದೊಂದೇ ಪ್ರಶ್ನೆ ನನ್ನದು‌ಆಗ ಅಜ್ಜಿ ಅವಳ ತಂದೆ ತಾಯಿ ಹೋಗುತ್ತಾರೆ ಹಾಗಾಗಿ ಅವಳನ್ನು ಕರೆದುಕೊಂಡು ಹೋಗುತ್ತಾರೆ...ನೀನು ನಿನ್ನ ತಂದೆ ತಾಯಿ ಹೋದಾಗ ಅವರ ಜೊತೆಯಲ್ಲಿ ಹೋಗು ಕಾಶಿಗೆ ಹೋಗುದೆಂದರೆ ಸಣ್ಣ ವಿಚಣರವಲ್ಲ..ಅದಕ್ಕೆ ಪುಣ್ಯ ಬೇಕು ಎಂದು ಏನೇನೋ ಹೇಳಿದರು...ಅದೆಲ್ಲ ಅರ್ಥ ಆಗುವ ವಯಸ್ಸು ನನ್ನದಲ್ಲ.ನನಗೆ ಕಾಶಿ ಎಂದರೇನು ? ಎಂದು ಕೂಡ ಗೊತ್ತಿರಲಿಲ್ಲ. ನನ್ನ ಒಬ್ಬ ಚಿಕ್ಕಪ್ಪ ರಾಮಕೃಷ್ಣ ಭಟ್ ಕಾಶಿಯಲ್ಲಿ ಪ್ರೊಫೆಸರ್ ಆಗಿದ್ದರು‌.ಅವರೆಂದರೆ ನನಗೆ ತುಂಬಾ ಇಷ್ಟ ಹಾಗಾಗಿ ಇವರೆಲ್ಲ ಅವರ ಮನೆಗೆ ಹೋಗುತ್ತಾರೆ ಎಂದು ಭಾವಿಸಿದ್ದೆ.ಹಾಗಾಗಿ ಸಂಧ್ಯನ ಜೊತೆಗೆ ನನಗೂ ಕಾಶಿ ಅಪ್ಪಚ್ಚಿ ಮನೆಗೆ ಹೋಗಬೇಕೆಂದಿತ್ತು.
ಬಹುಶಃ ಇವರೆಲ್ಲ ಬೆಳಗಿನ ಜಾವ ಮನೆ ಬಿಟ್ಟಿರಬಹುದು ಮಂಗಳೂರು ತನಕ ಕಾರು ಅಥವಾ ಜೀಪಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಹೋಗಿದ್ದಿರಬಹುದು.
ಇವರನ್ನು ಕಳಹಿಸಿಕೊಡುವುದಕ್ಕಾಗಿ ಇರಬಹುದು ನನ್ನ ಸೋದರತ್ತೆ ಮುಂಡ್ರಕಜೆ ಅತ್ತೆ ಬಂದಿದ್ದರು.ಇವರೆಲ್ಲ ಹೊರಡುವಾಗ ನಾನು ಅತ್ತು ಕರೆದು ಗಲಾಟೆ ಮಾಡುತ್ತೇನೆಂದು ಇರಬಹುದು, ಅತ್ತೆ ನನ್ನನ್ನು ಮುದ್ದು ಮಾಡಿ ನಾನು ನೀನು ಒಟ್ಟಿಗೆ ಕಾಶಿಗೆ ಹೋಗುವ ಆಯ್ತಾ ಎಂದು ಮುದ್ದು ಮಾಡಿ ಕೈ ಹಿಡಿದು ಗುಡ್ಡ ಹತ್ತಿ ಎಲ್ಲಿಗೋ ಕರೆದುಕೊಂಡು ಹೋದರು.ಅಲ್ಲಿ ನಾಯಿ ಬೆಕ್ಕುಗಳ ಕಥೆ ಹೇಳಿದರು.ಇಲ್ಲಿ ನನ್ನ ಅತ್ತೆ ಬಗ್ಗೆ ಒಂದೆರಡು ಮಾತು ಬರೆಯಲೇ ಬೇಕು.ನನ್ನತ್ತೆ ಹೆಚ್ಚೇನೂ ಓದಿದವರಲ್ಲ..ಆದರೆ ಹಳ್ಳಿ ಮದ್ದುಗಳ ಕುರಿತು ಅಪಾರ ಜ್ಣಾನವಿದೆ.ಅವರ ಮನೆಗೆ ಬಂದು ಅನೆಕರು ಔಷಧಿ ತಗೊಂಡು ಹೋಗಿ ಗುಣಮುಖರಾಗುತ್ತಿದ್ದರು.ಬಂದವರಿಗೆಲ್ಲ ಉಚಿತವಾಗಿ ಔಷಧ ಕೊಡುತ್ತಿದ್ದದಲ್ಲದೆ ಊಟ ತಿಂಡಿಯನ್ನು ಕೂಡ ಬಡಿಸುತ್ತಿದ್ದರು.ಆ ಬಗ್ಗೆ ಅವರಿಗೆ ಒಂದಿನಿತು ಬೇಸರವಿರಲಿಲ್ಲ.ಅವರಿಗೆ ಅನೇಕ ಕಥೆಗಳು ಗೊತ್ತಿದ್ದವು. ಹೆಣ್ಣು ನಾಯಿ ಎರಡು ಮನುಷ್ಯ ಶಿಶುಗಳನ್ನು ಮರಿ ಹಾಕುವುದು ,ಅವರು ದೊಡ್ಡವರಾದ ಮೇಲೆ ದೊಡ್ಡವಳು ತಾಯಿ ನಾಯಿ ಬಾಗಿಲಿಗೆ ಬಂದಾಗ ಕಲ್ಲು ಬಿಸಾಡಿ ಓಡಿಸುವುದು,ಚಿಕ್ಕವಳು ಆದರದಿಂದ ನೋಡಿಕೊಳ್ಳುವುದು ಅವಳಿಗೆ ತಾಯಿ ನಾಯಿ ನಿಧಿಯನ್ನು ತೋರಿಸುವುದು..ಇತ್ಯಾದಿ ಅನೇಕ ಜಾನಪದ ಕಥೆಗಳ ಭಂಡಾರವೇ ಅತ್ತೆಯ ಬಾತಿಯೊಳಗೆ ಅಡಗಿತ್ತು.
ಹೀಗೆ ಅತ್ತೆ ಕಥೆ ಹೇಳುತ್ತಾ ನನ್ನನ್ನು ಮಂಗಡಿಸಿ( ಸಮಾಧಾನ ) ಮಾಡಿ ಮನೆಗೆ ಹಿಂದಿರುಗುವಷ್ಟರಲ್ಲಿ ಮನೆ ಇಡೀ ಖಾಲಿ ಆಗಿತ್ತು.ಎಲ್ಲರೂ ಕಾಶಿಗೆ ಹೋಗಿ ಆಗಿತ್ತು.ನಾನು ಮಂಗ ಆದ್ದು ಗೊತ್ತಾಗಿ ಮತ್ತೆ ಅತ್ತು ಗೋಳಾಡಿದೆ.ಆಗ ಅಮ್ಮ ನಾವು ಕೂಡ ಮುಂದೆ ಕಾಶಿಗೆ ಹೋಗುವ ಎಂದು ಸಮಾಧಾನ ಮಾಡಿದರು.
ಅವರೆಲ್ಲ ಕಾಶಿಗೆ ಹೋಗಿ ಬಂದರು..ಅಮ್ಮನಿಗೊಂದು ಪಟ್ಟೆ ಸೀರೆ ತಂದಿದ್ದರು..ನನಗೂ ಏನಾದರೂ ಹೊಸ ಅಂಗಿ ತಂದಿರಬಹುದೇ ಎಂದು ಆಸೆ ಗಣ್ಣಿನಿಂದ ತಂದ ವಸ್ತುಗಳನ್ನು ನೊಡುತ್ತಾ ಕಾಯುತ್ತಿದ್ದೆ..ಕಾದದ್ದೇ ಬಂತು ಅಷ್ಟೇ !
ಕಾಲ ಒಂದೇ ತರಹ ಇರುವುದಿಲ್ಲ..1996 ,ರಲ್ಲಿ ನಾನು ಕಾಶಿ ಹರಿದ್ವಾರ ಹೃಶೀಕೇಶ ಮೊದಲಾದೆಡೆ ಹೋಗಿ ಬಂದೆ ಆಗಲೂ ನನಗೆ ನನ್ನನ್ನು ಬಿಟ್ಟು ಹೊದ ನೆನಪು ಕಾಡಿತ್ತು.
ತಂದೆ ಇರುವಾಗಲೇ ನಮಗೆಲ್ಲ ಕಾಶಿಗೆ ಹೋಗಿ ಬರಬೇಕೆಂದು ಇತ್ತು‌..ಆದರೆ ಯಾಕೋ ಕಾಲ ಕೂಡಿ ಬರಲಿಲ್ಲ.. ತಂದೆಯವರು ಅನಿರೀಕ್ಷಿತವಾಗಿ ಸಡನ್ ಆಗಿ ತೀರಿ ಹೋದರು‌.ಆಗ ಅವರ ಅಸ್ಥಿಯನ್ನು ಗಂಗೆಯಲ್ಲಿ ಹಾಕುವ ಸಲುವಾಗಿ ಶುದ್ಧೀಕರಿಸಿ ಎತ್ತಿಟ್ಟಿದ್ದೆವು.
ನಿನ್ನೆ ತಂದೆಯವರ ಏಳನೇ ವರ್ಷದ ತಿಥಿ ಇದನ್ನು ಪ್ರಯೋಗದಲ್ಲಿ ಮಾಡಿದರು.( ನನಗೆ ಇವರೊಂದಿಗೆ ಕಾಶಿಗೆ ಹೋಗಲಾಗಲಿಲ್ಲ)
ಈ ಬಾರಿ ಕಾಶಿಗೆ ಹೊರಡುವಾಗ ಅಮ್ಮ ಬಹಳ ಭಾವುಕರಾಗಿದ್ದರು.ಹಿಂದೆ ತಾನನುಭವಿಸಿದ ಅವಮಾನ ತಿರಸ್ಕಾರಗಳು ಮಾಡಿರಬಹುದು ಜೊತೆಗೆ ಅಪ್ಪನ ನೆನಪೂ ಆಗಿರಬಹುದು.
ಮೊದಲೊಂದು ಕಾಲವಿತ್ತು‌ಜನರು ನಡೆದು ಕೊಂಡು ಕಾಶಿಗೆ ಹೋಗುತ್ತಿದ್ದರು‌
ನನ್ನ  ಅಜ್ಜಿ ಚಿಕ್ಕಪ್ಪ ನವರೆಲ್ಲ  ರೈಲಿನಲ್ಲಿ ಕಾಶಿಗೆ ಹೋಗಿದ್ದರೆ ಇಂದು ಅಮ್ಮ ವಿಮಾನದಲ್ಲಿ ಹೋಗಿದ್ದಾರೆ.
ಕಾಲ ಎಲ್ಲರ ಕಾಲನ್ನೂ ಎಳೆಯುತ್ತದೆ ,ಯಾರನ್ನೂ ಬಿಡುವುದಿಲ್ಲ..ಕಾಲದ ಚಕ್ರ ಮೇಲೆ ಕೆಳಗೆ ಹೋಗುತ್ತಲೇ ಇರುತ್ತದೆ.ಕಷ್ಟ ಬಂದಾಗ ಕುಗ್ಗದೆ ಸಿರಿ ಬಂದಾಗ ಹಿಗ್ಗದೆ ಬಾಳನ್ನು ಹದದಿಂದ ಬಾಳುವುದು ಮನುಷ್ಯ ಧರ್ಮ.ನನ್ನಮ್ಮ ಕಾಶಿಗೆ ಹೋಗುವ ಮುನ್ನ ಎರಡು ಸಾವಿರ ರುಪಾಯಿ ನನ್ನ ಕೈಗಿತ್ತು ಮೊನ್ನೆಯಷ್ಟೇ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಇರುವ ಮನೆ ಕೆಲಸದ ಅಜ್ಜಿಗೆ ಕೊಡು ಎಂದು ಹೇಳಿ ಕೊಟ್ಟರು.
ಮಾನವೀಯತೆಗಿಂತ ದೊಡ್ಡ ಧರ್ಮ ಬೇರೆ ಇಲ್ಲ ..ಕಾಶಿಗೆ ಹೋದದ್ದಕ್ಕಿಂತ ಸಾವಿರ ಪಟ್ಟು ಪುಣ್ಯ ಸಂಚಯವನ್ನು ಅಮ್ಮ ಇಲ್ಲಿಯೇ ಗಳಿಸಿ ಹೋದರು.ಸದಾ ಕಷ್ದಲ್ಲಿರುವವರಿಗಾಗಿ ಮರುಗುವ ತನ್ನ ಕೈಲಾದ ಸಹಾಯ ಮಾಡುವ ಅಮ್ಮನಿಗೆ ಕಾಶಿಗೆ ಹೋಗಿ ಆಗಬೇಕಾದ್ದು ಏನೂ ಇಲ್ಲ..ಅಮ್ಮನೇ ಒಂದು ಕಾಶಿ ..ಅದೇನೇ ಇರಲಿ  ಅಲ್ಲಿವಿಶ್ವನಾಥನ ದರ್ಶನದಿಂದ ಬದುಕು ಸಾರ್ಥಕವಾಗಲಿ ಎಂದು ಆಶಿಸುವೆ

Saturday 6 July 2019

ನನ್ನೊಳಗೂ ಒಂದು ಅತ್ಮವಿದೆ : 12 ಮನೆಯಲ್ಲಿ ರುಬ್ಬುವ ಕಲ್ಲಿದೆಯಾ ?

ಮನೆಯಲ್ಲಿ ರುಬ್ಬುವ ಕಲ್ಲು ಇದೆಯಾ ?
ಪ್ರತಿ ದಿವಸ ಹಿಂದಿನ ತರಗತಿಗಳಲ್ಲಿ ಆದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದು ನನ್ನ ಅಭ್ಯಾಸ,ಇಂದು ಕೂಡ ನಿನ್ನೆಯ ಆದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದೆ.ಕೆಲವರು ಉತ್ತರಿಸಲಿಲ್ಲ.,ಪ್ರಶ್ನೆ ಕೇಳಿದಾಗ ಉತ್ತರಿಸದೆ ಇದ್ದರೆ ಒಂಚೂರು ಗದರಬೇಕಾಗುತ್ತದೆ ಇಲ್ಲವಾದಲ್ಲಿ ‌ಮರುದಿನ ಕೂಡ ಹಾಗೆಯೇ ಪಠ್ಯವನ್ನು ಓದದೆಯೇ ಬರುತ್ತಾರೆ.ಮಕ್ಕಳನ್ನು ಏನಂತ ಜೋರು ಮಾಡುದು ?  ಯಾವಾಗಲೂ ಒಂದೇ ರೀತಿಯಲ್ಲಿ ಗದರಲು ಆಗುತ್ತಾ ? ಇವತ್ತು ಉತ್ತರಿಸದೆ ಇದ್ದವರು ಹುಡುಗಿಯರು.ಅವರಲ್ಲಿ ಮನೆಯಲ್ಲಿ ರುಬ್ಬುವ ಕಲ್ಲಿದೆಯಾ ಕೇಳಿದೆ, ಇಲ್ಲವೆಂದರು ! ಇದೆ  ಎಂದಿದ್ದರೆ  ಹೋಗಿ ರುಬ್ಬಿ ಅದೇ ಒಳ್ಳೆದು ಅದಕ್ಕೆ ಓದಿ ಬರೆದು ಮಾಡಬೇಕಿಲ್ಲ ಎಂದು ಜೋರು ಮಾಡಬಹುದಿತ್ತು..ಇನ್ನೆಂತ ಮಾಡುದು ? ಏನೋ ಒಂದು ಹೇಳಿ ಒಂಚೂರು ಗದರಿದೆ.
ಒಬ್ಬಿಬ್ಬರಿಗೆ  ಒಂಚೂರು ಅವಮಾನ ಎನಿಸಿ ಕಣ್ಣಲ್ಲಿ ಸ್ವಲ್ಪ ನೀರು ಬಂತು..ಅಂತಹವರು ಮರುದಿನ ಚೆನ್ನಾಗಿ ಓದಿಕೊಂಡು ಬರ್ತಾರೆ..ಜೋರು ಮಾಡಿದರೂ ಏನೂ ಆಗದ ಭಂಡತನ ಇರುವವರು ಇರ್ತಾರಲ್ಲ..ಇವರನ್ನು ಓದಿಸುವುದೇ ಕಷ್ಟದ ವಿಚಾರ..ಹಾಗಂತ ಬೈದ ಮಾತ್ರಕ್ಕೆ ಅವಮಾನ ಆದ ಮಾತ್ರಕ್ಕೆ ವಿದ್ಯಾರ್ಥಿಗಳು ಓದಿ ಒಳ್ಳೆಯ ಅಂಕ ಗಳಿಸುತ್ತಾರೆಂದೇನೂ ಇಲ್ಲ..ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿರುವುದು ನನಗೆ ನೆನಪಾಯಿತು..
ನಾನಾಗ ದ್ವಿತೀಯ ಪಿಯುಸಿ ಯಲ್ಲಿ ಓದುತ್ತಾ ಇದ್ದೆ‌.ನಮ್ಮಮಂಗಳೂರಿನ  ಸರ್ಕಾರಿ ಪಿಯು ಕಾಲೇಜಿನಲ್ಲಿ ( ಈಗಿನ ಯುನಿವರ್ಸಿಟಿ ಕಾಲೇಜು) ವಿಜ್ಞಾನದ ಉಪನ್ಯಾಸಕರು ಒಂದಿನಿತೂ ಕನ್ನಡದಲ್ಲಿ ಪಾಠ ಮಾಡುತ್ತಿರಲಿಲ್ಲ.. ಸಾಕ್ಷಾತ್ ಲಂಡನ್ ನಿಂದ ಉದುರಿದವರಂತೆ ಒಂದು ಪದ ಕನ್ನಡ ಬಳಸದೆ ಇಂಗ್ಲಿಷ್ ನಲ್ಲಿ ಪಾಠ ಮಾಡುತ್ತಿದ್ದರು. ಆದರೆ ಬೈಗಳು ಮಾತ್ರ ಕನ್ನಡದಲ್ಲಿ ಇರುತ್ತಾ ಇತ್ತು.ಹಾಗಾಗಿ ನನಗೆ ಹೆಬ್ಬಾರರು ಬೈದದ್ದು ನೆನಪಿದೆ..ಅವರೇನು ಪಾಠ ಮಾಡಿದ್ದರು ? ಏನು ಪ್ರಶ್ನೆ ಕೇಳಿದ್ದರು ಎಂದು ಗೊತ್ತಿಲ್ಲ.. ಇಂಗ್ಲಿಷ್ ‌ನಲ್ಲಿ ಪಾಠ ಮಾಡಿದ್ದು ಅರ್ಥ ಆಗಿದ್ದರೆ ತಾನೇ ಅವರೇನು ಕೇಳಿದ್ದರು ಎಂದು ಗೊತ್ತಾಗುವುದು !
ಒಂದು ದಿನ ನಮ್ಮ ಭೌತಶಾಸ್ತ್ರ ಉಪನ್ಯಾಸಕರಾದ ಹೆಬ್ಬಾರರು( ಅವರ ಪೂರ್ತಿ ಹೆಸರು ನೆನಪಾಗುತ್ತಾ ಇಲ್ಲ,ಅವರನ್ನು ಅವರ ಸರ್ ನೇಮ್ ನಲ್ಲಿ  ಹೆಬ್ಬಾರರು ಎಂದೇ ಕರೆಯುತ್ತಿದ್ದರು) ಏನೋ ಪ್ರಶ್ನೆ ಕೇಳಿದರು.ಎಲ್ಲರಂತೆ ನಾನು ಕೂಡ ನನ್ನ ಸರದಿ ಬಂದಾಗ ತಲೆ ತಗ್ಗಿಸಿ ನಿಂತೆ..ಆಗ ಹೆಬ್ಬಾರರು ಮನೆಯಲ್ಲಿ ರುಬ್ಬುವ ಕಲ್ಲಿದೆಯಾ  ಎಂದು  ಕನ್ನಡ ಭಾಷೆಯಲ್ಲಿ ಕೇಳಿದರು. ಇದೆ ಎಂದು ತಲೆಯಾಡಿಸಿದೆ‌..ಹಾಗಾದರೆ ಮನೆಗೆ ಹೋಗಿ ರುಬ್ಬಲು ಕಲಿ ಎಂದರು..ನನಗೆ ಆಗಲೇ ರುಬ್ಬಲು ಬರುತ್ತ ಇತ್ತು..ಹಾಗೆಂದು ನಾನು ಹೇಳಲಿಲ್ಲ.. ನಂತರ ಅವರು ಅವರ ಮಗನ ಬಗ್ಗೆ ಹೇಳಿದರು.ಅವರ ಮಗ ಕೂಡ ಪಿಯುಸಿ ಓದುತ್ತಾ ಇದ್ದ.ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಓದುತ್ತಾ ಇದ್ದ.ಆ ಬಗ್ಗೆ ತಿಳಿಸಿ  ಆ ಕಾಲೇಜಿನ  ಸ್ವರ್ಗ ಸದೃಶ ವಾತಾವರಣ, ಶಿಕ್ಷಣದ ಗುಣಮಟ್ಟದ ಬಗ್ಗೆ ಹೊಗಳಿದರು.
ಆಗ ನಾನು ಸಂತ ಅಲೋಶಿಯಸ್ ಕಾಲೇಜು ಹೇಳಿರಬಹುದು ? ಅಲ್ಲಿಯ ಶಿಕ್ಷಕರು ಹೇಳಿರಬಹುದು ? ಎಂದು ಆಲೋಚಿಸುತ್ತಾ ಇದ್ದೆ.ಆದರೆ ಅಲ್ಲಿಯ ಶಿಕ್ಷಕರ ಬಗ್ಗೆ ನನಗೆ ಊಹಿಸಲು ಸಾಧ್ಯವಾಗುತ್ತಾ ಇರಲಿಲ್ಲ. ನನಗೆ ಕೂಡ ಅಲ್ಲಿ ಪಿಯುಸಿಗೆ ಸೇರಬೇಕೆಂದಿದ್ದರೂ ಸೀಟು ದೊರೆತಿರಲಿಲ್ಲ.ಅವರು ಅಲೋಶಿಯಸ್ ಕಾಲೇಜನ್ನು ಹೊಗಳಿದಾಗ ನನಗೆ  ಸೀಟು ಸಿಗದ ಬಗ್ಗೆ ತುಂಬಾ ಬೇಸರ ಎನಿಸಿತ್ತು. "ಆ ಸ್ವರ್ಗ ಸದೃಶ ಕಾಲೇಜನ್ನು, ಅಲ್ಲಿನ ಶಿಕ್ಷಕರನ್ನು, ಪಾಠ ಮಾಡುವ ವಿಧಾನವನ್ನು ಒಮ್ಮೆಯಾದರೂ ನೋಡಬೇಕು" ಎಂದು ಆಸೆಯಾಗಿತ್ತು.
ಆಗ ಹೆಬ್ಬಾರರು ಬೈದಾಗ ನನಗೆ ಮರ್ಯಾದೆ ಹೋಗಿ ಕಣ್ಣೀರು ಬಂದಿತ್ತು‌.ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ತೆಗೆದು, ಡಿಗ್ರಿ ಆದರೂ ಅಲೋಶಿಯಸ್ ಕಾಲೇಜಿನಲ್ಲಿ ಓದಬೇಕು ಎಂದೆನಿಸಿತ್ತು ಆದರೆ ಅವರು ಹಾಗೂ ಇತರ ಉಪನ್ಯಾಸಕರು ಇಂಗ್ಲಿಷ್ ನಲ್ಲಿ ಮಾಡಿದ ವಿಜ್ಞಾನ ಪಾಠಗಳು ಅರ್ಥವೇ ಆಗಿರದ ಕಾರಣ ಉತ್ತಮ ಅಂಕಗಳನ್ನು ಗಳಿಸಲು ನನಗೆ ಸಾಧ್ಯವಾಗಿರಲಿಲ್ಲ.. ನಮ್ಮ ತರಗತಿಯಲ್ಲಿ 99% ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ಓದಿದವರೇ ಆಗಿದ್ದರು.ಆದರೂ ಕೂಡ ನಮಗೆ ಒಂದು ಪದ ಕೂಡ ಕನ್ನಡ ದಲ್ಲಿ ವಿವರಿಸದೆ ಇಂಗ್ಲಿಷ್ ನಲ್ಲಿ ಯಾಕೆ ಪಾಠ ಮಾಡುತ್ತಿದ್ದರು ? ಅದರ ಪರಿಣಾಮವಾಗಿ ಹತ್ತು ಶೇಕಡಾದಷ್ಟು ಫಲಿತಾಂಶ ಕೂಡ ಬರುತ್ತಿರಲಿಲ್ಲ.. ನಮ್ಮ ತರಗತಿಯಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಒಬ್ಬಿಬ್ಬರು ಪಾಸಾಗಿದ್ದರು.ಆದರೂ ಇವರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲವೇ ? ನನಗಂತೂ ಅರ್ಥವಾಗುತ್ತಿಲ.ಈಗ ನಮ್ಮ ಕಾಲೇಜು ಹಾಗೂ ಇತರ ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ಪಾಠ ಮಾಡುವಾಗ ಕನ್ನಡದಲ್ಲಿ ಕೂಡ ವಿವರಿಸಿ ಅರ್ಥ ಮಾಡಿಸುತ್ತಾರೆ.( ನಮ್ಮ ಕಾಲೇಜಿನ ವಿಜ್ಞಾನ ಉಪನ್ಯಾಸಕರು ಪಾಠ ಮಾಡುವಾಗ ಅವರು ಕನ್ನಡದಲ್ಲಿ ಕೂಡ ವಿವರಿಸುವುದನ್ನು ಕೇಳಿಸಿಕೊಂಡಿದ್ದೇನೆ)
ನಾನೇನೋ ಮುಂದೆ  ಹೇಗೋ ಬಿಎಸ್ಸಿ  ಓದಿದೆ.ನಂತರ ಸಂಸ್ಕೃತ ಎಂಎ ಓದಿ ಮೊದಲ ರ‍‍್ಯಾಂಕ್ ತೆಗೆದೆ.ನಂತರ ನಮ್ಮ ಉಪನ್ಯಾಸಕರಾದ  ಹೆಬ್ಬಾರರ ಮಗ ಓದಿದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಆಯ್ಕೆಯಾಗಿ ಮೂರು ನಾಲ್ಕು ವರ್ಷ ಕೆಲಸ ಮಾಡಿದೆ.ಹೌದು ಹೆಬ್ಬಾರರು ಹೇಳಿದ್ದು ನಿಜ ಅದು ವಿದ್ಯಾರ್ಥಿಗಳ ಪಾಲಿಗೆ ಸ್ವರ್ಗ ಸದೃಶ ವಾಗಿತ್ತು.ಆದರೆ
ಕಾಲೇಜು ಎಂದರೆ ನಾಲ್ಕು ಗೋಡೆಗಳ ಕಟ್ಟಡ ಮಾತ್ರವಲ್ಲ. ಉತ್ತಮ ಕಾಲೇಜು ಎಂದು ಹೆಸರು ಪಡೆಯಲು ಅಲ್ಲಿ‌ ಉಪನ್ಯಾಸಕರೇ ಕಾರಣ. ಸಂತ ಅಲೋಶಿಯಸ್ ಕಾಲೇಜಿಗೆ ಸೇರಿದ ತನ್ಮ ಮಗನ ಬಗ್ಗೆ ,ಕಾಲೇಜು ಬಗ್ಗೆ ಹೊಗಳಿ, ನಮ್ಮನ್ನು ಹೀಯಾಳಿಸುವ ಬದಲು  ನಮ್ಮ ಸರ್ಕಾರಿ ಕಾಲೇಜನ್ನು ಕೂಡ ಉಪನ್ಯಾಸಕರು ಮನಸ್ಸು ಮಾಡಿದ್ದರೆ ಸಂತ ಅಲೋಶಿಯಸ್ ಕಾಲೇಜಿಗೆ ಸಮನಾಗಿಸಲು ಸಾಧ್ಯವಿತ್ತು. ಬೈದದ್ದು,ರುಬ್ಬಲು ಯೋಗ್ಯ ಎಂದು ಹೀಯಾಳಿಸಿದ್ದು ತಪ್ಪಲ್ಲ.ವಿದ್ಯಾರ್ಥಿಗಳಲ್ಲಿ ಕೆಚ್ಚನ್ನು ಹುಟ್ಟಿಸಲು ಒಂಚೂರು ಅವಮಾನ ಮಾಡುದು ಅನಿವಾರ್ಯ. ಆದರೆ ಹೀಯಾಳಿಸುವುದರ ಜೊತೆಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಇಲ್ಲೇಕೆ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಕೂಡ ಆಲೋಚಿಸಿ,ನಮಗೆ ಅರ್ಥವಾಗುವಂತೆ ಕನ್ನಡದಲ್ಲಿಯು ವಿವರಿಸಿದ್ದರೆ ನಾವುಗಳು ಕೂಡ ಅವರ ಮಗನಂತೆಯೆ ಉತ್ತಮ ಅಂಕಗಳನ್ನು ಗಳಿಸುತ್ತಿದ್ದೆವು .ನಾನೇನೋ ಮುಂದೆ ನನ್ನ ಕ್ಷೇತ್ರವನ್ನು ಬದಲಿಸಿ,ಇಂಗ್ಲಿಷ್ ನ ಹಂಗಿಲ್ಲದ ಸಂಸ್ಕೃತ ಎಂಎ ಓದಿ ಯಶಸ್ಸು ಗಳಿಸಿದೆ..ಆದರೆ ಎಲ್ಲರೂ ಹಾಗಾಗಲು ಸಾಧ್ಯವೇ ? ದ್ವಿತೀಯ ಪಿಯುಸಿ ಯಲ್ಲಿ ನಮಗೆ ಅಂತಿಮ ಪರೀಕ್ಷೆ ಹೊರತು ಪಡಿಸಿದರೆ ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಯಾವದೂ ಇರಲಿಲ್ಲ.. ಪ್ರಥಮ ಪಿಯುಸಿಯಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಮಾಡಿದ್ದರು. ಅದರಲ್ಲಿ ಕೆಮೆಷ್ಟ್ರಿಯಲ್ಲಿ ಒಂದು ಪ್ರಶ್ನೆ ಯ ಅರ್ಥವನ್ನು ಕನ್ನಡದಲ್ಲಿ ತಿಳಿಸಲು ನಾನು ನಮ್ಮ ಕೆಮೆಷ್ಟ್ರಿ ಉಪನ್ಯಾಸಕ ರಾಗಿದ್ದ ಶಿವರಾಮ ಭಟ್ ಅವರಲ್ಲಿ ಕೇಳಿದೆ‌.ಹಾಗೆ ಹೇಳಲು ಆಗುವುದಿಲ್ಲ ಎಂದವರು ನಿರಾಕರಿಸಿದ್ದರು. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇರುತ್ತವೆ ಹಾಗಿರುವಾಗ ಪ್ರಥಮ ಪಿಯುಸಿಯಲ್ಲಿ ಒಂದು ಪ್ರಶ್ನೆಯ  ಕನ್ನಡ ಅನುವಾದ ತಿಳಿಸಿದ್ದರೆ ಅಪರಾಧವಾಗುತ್ತಿತ್ತೇ ? ಒಟ್ಟಿನಲ್ಲಿ ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಮಕ್ಕಳ ಪಾಲಿಗೆ ಇವರುಗಳು ಕಂಟಕರೇ ಆಗಿದ್ದರು ಎಂಬುದು ವಾಸ್ತವ
ಈವತ್ತು ಮಕ್ಕಳನ್ನು ಉತ್ತರ ಹೇಳದ್ದಕ್ಕೆ ಗದರಿದಾಗ ಇದು ನೆನಪಾಯಿತು. ನಾನು ಉತ್ತರ ಹೇಳದ ಮಕ್ಕಳಿಗೆ ಗದರಿದರೂ ಅವರು ಸೋಮಾರಿತನದಿಂದ ಓದದೆ ಬರುವ ಕಾರಣ ಉತ್ತರ ಹೇಳುತ್ತಿಲ್ಲವೋ ಅಥವಾ ನನ್ನ ಪಾಠ ಅರ್ಥವಾಗುತ್ತಿಲ್ಲವೋ ಎಂಬುದನ್ನು ಗಮನಿಸುತ್ತೇನೆ,ಉತ್ತರಿಸದ ಮಕ್ಕಳಿಗೆ ಮತ್ತೊಮ್ಮೆ ಹೇಳಿಕೊಟ್ಟು ಮರುದಿನ ಕಲಿತುಕೊಂಡು ಬರಬೇಕೆಂದು ತಾಕೀತು ಮಾಡುತ್ತೇನೆ..ಆ ಕಾರಣವೋ ಅಥವಾ ಈಗಿನ ಮಕ್ಕಳು ಓದುತ್ತಾರೋ ಗೊತ್ತಿಲ್ಲ ನನ್ನ ವಿಷಯದಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ ಎಂಬುದು ಮಾತ್ರ ಸತ್ಯ.
ಕೆಲವೊಮ್ಮೆ ನಮಗೆ  ಅರ್ಥವಾಗದ  ಭಾಷೆಯಲ್ಲಿ ಪಾಠ ಮಾಡಿ ಕಡಿಮೆ ಫಲಿತಾಂಶ ಬಂದಾಗ ನಿಮಗೆ ಒಂದು ಕ್ಷಣವಾದರೂ ನಮ್ಮಗಳ ಭವಿಷ್ಯ ಹಾಳಾಗುವ ಬಗ್ಗೆ ಒಂದು ಕ್ಷಣವಾದರೂ ಪಶ್ಚಾತ್ತಾಪ ಕಾಡಿಲ್ಲವೇ ಎಂದು ಕೇಳಬೇಕು ಎನಿಸುತ್ತದೆ. ಈಗ ಅವರುಗಳು ಎಲ್ಲಿದ್ದಾರೂ ತಿಳಿಯದು.
ಕೇಳಿ ಮಾಡುವುದಕ್ಕದರೂ ಏನಿದೆ ಅಂತ ಸುಮ್ಮನಾಗುತ್ತೇನೆ

Saturday 4 May 2019

ನನ್ನೊಳಗೂ ಒಂದು ಆತ್ಮವಿದೆ : ಭಾಗ 11 ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ


ಚಿತ್ರ : 1997 ರಲ್ಲಿ ಹವ್ಯಕ ಮಹಾ ಸಭೆಯಲ್ಲಿ ಅದೇ ನಾಟಕವನ್ನು ಮಾಡಿದ್ದು,ಸುಬ್ಬನ ಪಾತ್ರದಲ್ಲಿ ನಾನು ಮತ್ತು ಸುಬ್ಬಿಯ ಪಾತ್ರದಲ್ಲಿ ಪುಷ್ಪಕ್ಕ( ಖ್ಯಾತ ಡೆಂಟಿಸ್ಟ್ ಖಂಡಿಗೆ ಡಾ.ಕೃಷ್ಣ ಭಟ್ ಅವರ ಮಡದಿ)
ನನ್ನೊಳಗೂ ಒಂದು ಆತ್ಮವಿದೆ : ಭಾಗ 11
ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ
ಇಂದು ಫೇಸ್ ಬುಕ್ ಮೂಲಕ ಗೆಳೆಯರಾದ ಜಯಲಕ್ಷ್ಮಿ ಅವರು ತಾವು ಸ್ವಾಮೀಜಿಯವರು ನೀಡಿದ ನಿಂಬೆಹಣ್ಣು ಮತ್ತು ಭರವಸೆಯ ನುಡಿ ನಂಬಿ ಓದಿ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ವಿಚಾರವನ್ನು ಹಂಚಿಕೊಂಡಿದ್ದರು‌.ತಕ್ಷಣವೇ ನನಗೂ ಇಂತಹ ಒಂದು ಪ್ರೇರಣೆ ಸಿಕ್ಕಿದ್ದು ನೆನಪಾಯಿತು.
ಆಗ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ ಎಂದು ನೆನಪು.ನಾನು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆ ಮೀಯಪದವಿನಲ್ಲಿ ಪಡೆದಿದ್ದೆ.ನನ್ನ ಅಜ್ಜನ ಮನೆ ಮೀಯಪದವು ಶಾಲೆಗೆ ಹತ್ತಿರದಲ್ಲಿ ಇದೆ.ಹಾಗಾಗಿ ಎರಡನೇ ತರಗತಿಯಿಂದ ನಾಲ್ಕನೇ ತರಗತಿ ತನಕ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಓದಿ ನಂತರ ಅಜ್ಜನ ಮನೆಯಿಂದ ಮೀಯಪದವು ಶಾಲೆಗೆ ಹೋಗಿದ್ದೆ.ಅಲ್ಲಿ ತನಕ ಸಾಮಾನ್ಯ ಹಳ್ಳಿ ಬೆಪ್ಪು ತಕ್ಕಡಿಯಾಗಿದ್ದ ನನ್ನ ಬದುಕಿನಲ್ಲಿ ಬಹು ದೊಡ್ಡ ತಿರುವು ಸಿಕ್ಕಿತು. ಅಷ್ಟರ ತನಕ ನಾನು ಕಲಿಕೆಯಲ್ಲಿ ಕೂಡ ತೀರಾ ಜಾಣ ವಿದ್ಯಾರ್ಥಿನಿ ಅಲ್ಲ.ತರಗತಿಯಲ್ಲಿ ಇದ್ದ ಹದಿನಾರು ಹದಿನೇಳು ಮಂದಿಯಲ್ಲಿ ನನಗೆ ಆರೋ ಏಳನೆಯದೋ ರ‍‍್ಯಾಂಕ್ ಬರುತ್ತಾ ಇತ್ತು.ಆರೋಗ್ಯ ಸರಿ ಇಲ್ಲದ ಕಾರಣ ಯಾವುದೇ ಆಟಗಳಲ್ಲಿ ಭಾಗವಹಿಸುತ್ತಾ ಇರಲಿಲ್ಲ ( ಈ ಬಗ್ಗೆ ಇನ್ನೊಂದು ದಿನ ಬರೆಯುವೆ) ಅಥವಾ ನನ್ನನ್ನು ಸೇರಿಸಿಕೊಳ್ಳುತ್ತಾ ಇರಲಿಲ್ಲ ಎಂದರೆ ಸರಿಯಾದೀತು.
ಐದನೇ ತರಗತಿಗೆ ಬರುವಷ್ಟರಲ್ಲಿ ನನ್ನ ತಲೆ ಹುಣ್ಣಿನ ಸಮಸ್ಯೆ ಪರಿಹಾರವಾಗಿತ್ತು‌.ಸಾವಿನ ದವಡೆಯಿಂದ ಪಾರಾಗಿದ್ದೆ‌.
ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ವಿಧಾನವೇ ಬೇರೆ,ಅಲ್ಲಿಯ ಶಿಕ್ಷಕರು ಇತರರಂತಲ್ಲ.ನಾಲಿಗೆ ಎಳೆದರೂ ಒಂದಕ್ಷರ ಬಾರದ,ಒಂದು ಹೆಜ್ಜೆ ಹಾಕಲು ಅರಿಯದ ನಮಗೆ ನಾಟಕ ಭಾಷಣ ಏಕಪಾತ್ರಾಭಿಯ ,ನೃತ್ಯ ಹೇಳಿಕೊಟ್ಡು ಬಾಲಕಲೋತ್ಸವಕ್ಕೆ ಕರೆದೊಯ್ದು ನಮಗೆ ವೇಷಭೂಷಣ ಹಾಕಿಸಿ,ಬಣ್ಣ ಹಾಕಿ ಸ್ಪರ್ಧೆಯಲ್ಲಿ ಗೆಲ್ಲುವ ಹಾಗೆ ಮಾಡುತ್ತಿದ್ದರು.ನಮಗೆ ಬಹುಮಾನ ಬಂದಾಗ ನಮ್ಮ ಶಿಕ್ಷಕರಾದ ಸರೋಜಿನಿ ಟೀಚರ್ ಶ್ರೀಧರ್ ಮಾಷ್ಟ್ರು, ಶ್ರೀನಿವಾಸ ಮಾಷ್ಟ್ರು, ವಸಂತ ಮಾಷ್ಟ್ರು ಪುಷ್ಪವಲ್ಲಿ ಟೀಚರ್ ,ನಾವಡ ಮಾಷ್ಟ್ರು ಸೇರಿದಂತೆ ಎಲ್ಲರೂ ತಮಗೆ ರಾಷ್ಟ್ರ ಪ್ರಶಸ್ತಿ ಬಂದ ಹಾಗೆ ಸಂಭ್ರಮಿಸುತ್ತಾ ಇದ್ದರು.ನಾನು ಏಳನೇ ತರಗತಿಯಲ್ಲಿ ಇದ್ದಾಗ ಪಿಳ್ಳಂಗೋವಿಯ ಚೆಲುವ ಕೃಷ್ಣನ.. ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಹೇಳಿ ಕೊಟ್ಟು ಬಾಲಕಲೋತ್ಸವದಲ್ಲಿ ಬಹುಮಾನ ಬರುವಂತೆ ಮಾಡಿದ್ದರು.ಈ ನೃತ್ಯದಲ್ಲಿ ನಾನು ಕೃಷ್ಣನ ಪಾತ್ರವನ್ನು ಮಾಡಿದ್ದೆ.ಈಗೆಲ್ಲ ಕೃಷ್ಣ ವೇಷ ಧರಿಸಿದ ಮುದ್ದು ಪುಟಾಣಿಗಳನ್ನು ನೋಡುವಾಗೆಲ್ಲ ನಾನು ಹೀಗೆ ಕಂಡಿರಬಹುದೇ ಹಾಗೆ ಇದ್ದೆನಾ ಎಂದು ಯೋಚಿಸುತ್ತೇನೆ.ಆಗ ಫೋಟೋ ಗಿಟೋ ತೆಗೆಯಲು ಯಾರಲ್ಲಾದರೂ ಕ್ಯಾಮರಾ ಇದ್ದರೆ ತಾನೇ ? ನಾನು ಕೊನೆಯ ಪಕ್ಷ ಕನ್ನಡಿಯಲ್ಲಿ ಕೂಡ ಮುಖ ನೋಡಿಕೊಂಡಿಲ್ಲ ಅಥವಾ ನೋಡಿದ್ದರೂ ಈಗ ನನಗೆ ನೆನಪಿನಲ್ಲಿ ಉಳಿದಿಲ್ಲ. ಆ ದಿನ ನೃತ್ಯ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿದ ಬೇರೆ ಶಾಲೆಯ ಹುಡುಗಿ ವೇದಿಕೆ ಪಕ್ಕ ಇದ್ದಳು.ಅವಳ ಮುಖ ನನಗೆ ನೆನಪಿದೆ ಅವಳು ತುಂಬಾ ಮುದ್ದಾಗಿ ಕಾಣುತ್ತಿದ್ದಳು. ನನಗೆ ಮುಖಕ್ಕೆ ಬಣ್ಣ ಹಾಕಿ ಕೃಷ್ಣ ವೇಷ ಹಾಕಿದ ಶ್ರೀನಿವಾಸ ಮಾಷ್ಟ್ರು, ಸರೋಜ ಟೀಚರ್ ಅವಳನ್ನು ನೋಡಿ ನಮ್ಮ ಕೃಷ್ಣನಿಗೆ ಅವಳು ಸರಿಗಟ್ಟಲಾರಳು ಎಂದು ಮೆಲ್ಲಗೆ ಮಾತಾಡಿಕೊಂಡಿದ್ದರು.ಅದು ಕೇಳಿ ನನಗೆ ಬಹಳ ಖುಷಿ ಆಗಿತ್ತು. ನಾನು ತುಂಟ  ಕೃಷ್ಣನಾಗಿ ನಗುತ್ತಾ ನೃತ್ಯ ಮಾಡಬೇಕೆಂದು ಸರೋಜಾ ಟೀಚರ್ ಹೇಳಿದ್ದರು.ಆದರೆ ಕೃಷ್ಣ ಹೇಗೆ ನಗುತ್ತಾನೆ ಎಂಬ ಬಗ್ಗೆ ಚಿತ್ರದಲ್ಲಿ ಕೂಡ ನನಗೆ ನೋಡಿ ಗೊತ್ತಿರಲಿಲ್ಲ. ನಾನು ನನ್ನ ಚೆಟ್ಟು ಹಲ್ಲು ಕಾಣುವ ಹಾಗೆ ನಗುವ ಅಭಿನಯ ಮಾಡುತ್ತಿದ್ದೆ.ಕೊನೆಗೆ ಸರೋಜಾ ಟೀಚರ್ ಕೃಷ್ಣ ಮುಗುಳು ನಗಬೇಕು ಅದು ಹೀಗೆ ಎಂದು ಅವರು ಮುಗುಳು ನಗುವಿನ ಅಭಿನಯವನ್ನು ಮಾಡಿ ತೋರಿಸಿ ನನಗೆ ಕಲಿಸಿದ್ದರು.
ವಸಂತ ಮಾಷ್ಟ್ರು ಮತ್ತು ಸರೋಜಾ ಟೀಚರ್ ತಾಳ ಟಂಕಿ ಜೊತೆಯಲ್ಲಿ ಹಾಡಿದ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡಿಗೆ ಹೆಜ್ಜೆ ಹಾಕಿ ನಾವು ಬಹುಮಾನ ಪಡೆದೆವು.ನನ್ನ ಜೊತೆಯಲ್ಲಿ ಗೋಪಿಕಾ ಸ್ತ್ರೀಯರಾಗಿ ಹೇಮ ಮಾಲಿನಿ,ಕೃಷ್ಣ ವೇಣಿ,ಹರಿಣಾಕ್ಷಿ ಮತ್ತು ಇನ್ನೊಬ್ಬಳು ( ಹೆಸರು ಮರೆತು ಹೋಗಿದೆ) ಹೆಜ್ಜೆ ಹಾಕಿದ್ದರು.ಆಗ ನಾವು ಬಹುಮಾನ ಪಡೆದೆವೆಂದು ಬೀಗಿದ್ದೆವು.ಆದರೆ ಈಗ ಗೊತ್ತಾಗುತ್ತಿದೆ..ಅದು ನಮಗೆ ಸಿಕ್ಕ ಬಹುಮಾನವಲ್ಲ..ಅದರ ಗರಿಮೆ ನಮ್ಮ ಶಿಕ್ಷಕರಿಗೆ ಸೇರಿದ್ದು ಎಂದು. ಜೊತೆಗೆ ಅದೇ ವರ್ಷ ಶಾಲೆಯ ವಾರ್ಷಕೋತ್ಸವದಲ್ಲಿ  ಯಮ ಗರ್ವ ಭಂಗ ನಾಟಕವನ್ನು ನಮಗೆ ಹೇಳಿಕೊಟ್ಟು ಮಾಡಿಸಿದ್ದರು.ಅಂದು ಮತ್ತೊಮ್ಮೆ ವಾರ್ಷಕೋತ್ಸವದಲ್ಲಿ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡಿಗೆ ಮತ್ತೆ ಕೃಷ್ಣ ನಾಗಿ ಹೆಜ್ಜೆ ಹಾಕಿದೆ.ಕೊನೆಯಲ್ಲಿ ಗೋಪಿಕಾ ಸ್ತ್ರೀ ಯರ ನಡುವೆ ಕೊಳಲು ಹಿಡಿದು ನಿಂತ ಅಭಿನಯ ಇತ್ತು.ಅಂದು ವಾರ್ಷಿಕೋತ್ಸವಕ್ಕೆ ಬಂದ ನನ್ನ ಅಣ್ಣ ನಂತರ ನೀನು ಕೊನೆಯಲ್ಲಿ ಕೃಷ್ಣ ಕೊಳಲು ಊದುವ ಭಂಗಿಯಲ್ಲಿ ಗೋಪಿಕಾ ಸ್ತ್ರೀ ಯರ ನಡುವೆ ನಂತದ್ದು ಭಾರೀ ಚಂದ ಕಾಣುತ್ತಾ ಇತ್ತು..ನನಗೆ ಈಗಲೂ ಕಣ್ಣಿಗೆ ಕಾಣುತ್ತಿದೆ ಎಂದು ಹೇಳಿದ್ದ.ಅದೆಲ್ಲ ನೆನಪಾಗುವಾಗ ನಾನು ಕೃಷ್ಣ ನಾಗಿ ಹೇಗೆ ಕಾಣಿಸಿದ್ದೆ ಎಂಬ ಕುತೂಹಲ ನನಗೆ ಆಗಾಗ ಕಾಡುತ್ತದೆ.
ಯಮ ಗರ್ವ ಭಂಗ ನಾಟಕದಲ್ಲಿ ನಾನು ಬಲರಾಮನಾಗಿ ಗೆಳತಿ ಹೇಮಮಾಲಿನಿ( ಈಗ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ) ಕೃಷ್ಣ ನಾಗಿ ಅಭಿನಯಿಸಿದ್ದೆವು.
ಜೊತೆಗೆ ಆಟೋಟ ಸ್ಪರ್ಧೆಗಳಲ್ಲಿ ಕೂಡ ತರಬೇತಿ ನೀಡಿ ನಮ್ಮನ್ನು ಸ್ಪರ್ಧೆಗೆ ಕರೆದೊಯ್ಯುತ್ತಾ ಇದ್ದರು.ಹಾಗಾಗಿ ನಾನು ಡಿಸ್ಕ್ ಎಸೆತ ಮತ್ತು ಎತ್ತರ ಜಿಗಿತದಲ್ಲಿ ಹಲವಾರು ಬಹುಮಾನ ಪಡೆದಿದ್ದೆ.
ಏಳನೇ ತರಗತಿಯಲ್ಲಿ ಓದುತ್ತಿರುವಾಗ ಬಹುಶಃ ಓಣಂ ರಜೆಯ ಸಂದರ್ಭದಲ್ಲಿ ನಾವು ಅಜ್ಜನ ಮನೆಯಲ್ಲಿ ಆಟಕ್ಕಾಗಿ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚಿಸಿ ಅಭಿನಯಿಸಿದ್ದೆ.ಇದು ಗೊತ್ತಾಗಿ ವಸಂತ ಮಾಷ್ಟ್ರು ನನ್ನಲ್ಲಿ ಆ ನಾಟಕವನ್ನು ಅಭಿನಯಿಸಿ ತೋರಿಸುವಂತೆ ಶಾಲೆಯಲ್ಲಿ ಹೇಳಿದ್ದರು‌.ನಾನೆ ರಚಿಸಿದ ಕಾರಣ ನಾಟಕದಲ್ಲಿನ  ಆರೂ ಪಾತ್ರಗಳ ಸಂಭಾಷಣೆ ನನಗೆ ಬಾಯಿಗೆ ಬರುತ್ತಿತ್ತು. ಇಡೀ ನಾಟಕವನ್ನು ನಾನೊಬ್ಬಳೇ ಏಕ ಪಾತ್ರಾಭಿನಯದ ಮಾದರಿಯಲ್ಲಿ ಅಭಿನಯಿಸಿ ತೋರಿಸಿ ಅವರಿಂದ ಮೆಚ್ಚುಗೆ ಪಡೆದಿದ್ದೆ.ಇದಾಗಿ ಮೂವತ್ತು ವರ್ಷಗಳ ನಂತರ ಅದೇ ನಮ್ಮ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿ ರಚಿಸಿ ಹಠಮಾರಿ ಹುಡುಗಿ  ಯಃಕಶ್ಚಿತ್ ಲಕ್ಷ್ಮೀ  ಡಾ.ಲಕ್ಷ್ಮೀ ಜಿ ಪ್ರಸಾದ ಆಗಿ ಬದಲಾಗಲು ಪ್ರೇರಣೆ ನೀಡಿದ  ಶಿಕ್ಷಕರಿಗೆ ಅರ್ಪಣೆ ಮಾಡಿದ್ದೆ.
ನಾನು ಎಂಟನೇ ತರಗತಿಗೆ ಶ್ರೀ ವಾಣಿ ವಿಜಯ ಹೈಸ್ಕೂಲ್  ಕೊಡ್ಲ ಮೊಗರಿಗೆ ಸೇರಿ ತಾಯಿ ಮನೆಯಿಂದ ಶಾಲೆಗೆ ಹೋಗುತ್ತಿದ್ದೆ.
ಇಲ್ಲಿ ನಾನು ಆ ನಾಟಕವನ್ನು ಯುವಜನೋತ್ಸವದ ಸ್ಪರ್ಧೆಯಲ್ಲಿ ಮಾಡಿದೆ.ವಾಣಿ ವಿಜಯ ಪ್ರೌಢ ಶಾಲೆಯ ವಾತಾವರಣ ಮೀಯಪದವು ಶಾಲೆಗಿಂತ ತುಂಬಾ ಭಿನ್ನವಾಗಿತ್ತು.ಇಲ್ಲಿ ನಮಗೆ ಯಾವುದಕ್ಕೂ ಬೆಂಬಲ ಇರಲಿಲ್ಲ. ಬಹುಶಃ ಸರ್ಕಾರದ ಆದೇಶ ಇದ್ದ ಕಾರಣ ಯುವಜನೋತ್ಸವ ಮಾಡಿ ಒಂದಷ್ಟು ಸ್ಪರ್ಧೆಗಳನ್ನು ಕಷ್ಟದಲ್ಲಿ ನಡೆಸುತ್ತಾ ಇದ್ದರು.ಇಲ್ಲಿ ನಮಗೆ ತರಬೇತಿ ಪ್ರೋತ್ಸಾಹ ಎಂತದೂ ಇರಲಿಲ್ಲ. ಆದರೂ ನಾನು ಒಂದು ತಂಡ ಕಟ್ಟಿ ನಾಟಕದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.ಇಲ್ಲಿ ಹುಡುಗಿಯರು ವೇದಿಕೆ ಏರಲು ಹಿಂದೇಟು ಹಾಕುತ್ತಿದ್ದರು. ಅಂತೂ ಇಂತೂ ಕೆಲವರ ಮನ ಒಲಿಸಿ ನಾಟಕ ಹೇಳಿಕೊಟ್ಟು ಸಿದ್ಧ ಪಡಿಸಿದ್ದೆ.ನಮಗೆ ಅಭ್ಯಾಸ ಮಾಡಲು ಕೂಡ ಶಾಲಾ ಅವಧಿಯಲ್ಲಿ ಅವಕಾಶ ಇರಲಿಲ್ಲ. ಶಾಲೆ ಮುಗಿದ ನಂತರ ನಾವು ಬಯಲಿನಲ್ಲಿ ನಿಂತು ಅಭ್ಯಾಸ ಮಾಡಿದ್ದೆವು.ಶಾಲೆಯ ಕೊಠಡಿಯ ಒಳಗಡೆ ಅದಕ್ಕೆಲ್ಲ ಅವಕಾಶ ಇರಲಿಲ್ಲ. ಜೊತೆಗೆ  ಶರವು  ಮಹಾ ಗಣಪತಿ ಹಾಡಿಗೆ ಒಂದು ಪೂಜಾ ನೃತ್ಯಕ್ಕೂ ಹೆಜ್ಜೆ ಜೋಡಿಸಿ ತಯಾರಾಗಿದ್ದೆ.ನಾನು ಮೀಯಪದವು ಶಾಲೆಯಲ್ಲಿ ಇದ್ದಾಗ ಬೇರೆ ಮಕ್ಕಳಿಗೆ ಅಲ್ಲಿನ ಶಿಕ್ಷಕರು ಕಲಿಸಿದ್ದ ಒಂದು ಜಿಪ್ಸಿಗಳೆ ನಿಮ್ಮ ನಾವು ಮೊದಲು ಕಂಡಾಗ ಎಂಬ ಹಾಡಿನ ನೃತ್ಯವನ್ನು ಅಲ್ಲಿಯೇ ಐದು ಆರನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಹುಡುಗಿಯರಿಗೆ ಹೇಳಿ ಕೊಟ್ಟು ಸ್ಪರ್ಧೆಗೆ ತಯಾರು ಮಾಡಿದ್ದೆ. ಈ ಹುಡುಗಿಯರ ಹೆಸರು ಮರೆತು ಹೋಗಿದೆ ಒಬ್ಬಳು ನಮ್ಮ ಮನೆ ಪಕ್ಕದ ನಳಿನಿ ಇರಬೇಕು ಜೊತೆಗೆ ರಾಜೇಶ್ವರಿ ಎಂಬ ಇನ್ನೊಂದು ಹುಡುಗಿಗೆ ಒಂದು ಪೂಜಾ ನೃತ್ಯ ಹೇಳಿ ಕೊಟ್ಟಿದ್ದೆ.
ಯುವಜನೋತ್ಸವದ ಮೊದಲ ಹಂತ ಶಾಲೆಯ ಒಳಗೆ ಸ್ಪರ್ಧೆ. ಇಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನ ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಕರೆದು ಕೊಂಡು ಹೋಗಬೇಕಿತ್ತ ಎಂದು ನೆನಪು. ವಾಣಿ ವಿಜಯ ಹೈಸ್ಕೂಲ್ ನಲ್ಲಿ ಶಾಲೆಯ ಒಳಗೆ ಯುವಜನೋತ್ಸವ‌ ಮಾಡಿ ಸ್ಪರ್ಧೆ ನಡೆಸಿ ಬಹುಮಾನ ಕೊಡುತ್ತಾ ಇದ್ದದ್ದೇ ಕಷ್ಟದಲ್ಲಿ. ಇನ್ನು ನಮಗೆ ತರಬೇತಿಯನ್ನು ನೀಡಿ ಅಂತರ್ಶಾಲಾ ಸ್ಪರ್ಧೆಗೆ ಕರೆದೊಯ್ಯುವ ಮಾತೆಲ್ಲಿ ?
ಇರಲಿ ನನಗಾಗ ಇದನ್ನೆಲ್ಲ ಅರ್ಥಮಾಡಿಕೊಳ್ಳುವ ವಯಸ್ಸಲ್ಲ.ಮೀಯಪದವು ಶಾಲೆಯ ಹಾಗೇ ಇಲ್ಲೂ ಎಂದು ಭಾವಿಸಿದ್ದೆ‌.ಮೊದಲಿನಿಂದಲೂ ನಾನು ಒಂಚೂರು ಅತ್ಯುತ್ಸಾಹದ ಹುಡುಗಿ ಆಗಿದ್ದೆ ಕಾಣಬೇಕು.
ಯುವಜನೋತ್ಸವಕ್ಕೆ ಎರಡು ದಿನ ಇರುವಾಗ ಸುಬ್ಬಿ ಪಾತ್ರ ಮಾಡಿದ ಹುಡುಗಿ ಶೋಭಾ ನಾನು ನಾಟಕದಲ್ಲಿ ಮಾಡುವುದಿಲ್ಲ ಎಂದು ನಿರಾಕರಿಸಿದಳು.ಆಗ ಸುಬ್ಬನ ಸ್ನೇಹಿತನ ಪಾತ್ರವನ್ನು ಅಭ್ಯಾಸ ಮಾಡಿದ್ದ ಹೇಮಾಳಿಗೆ ಸುಬ್ಬಿ ಪಾತ್ರದ ಎಲ್ಲ ಸಂಭಾಷಣೆ ಬಾಯಿಗೆ ಬರುತ್ತಾ ಇತ್ತು‌‌.ಅವಳು ಸುಬ್ಬಿ ಪಾತ್ರ ಮಾಡಲು ಒಪ್ಪಿದಳು. ನನ್ನದ ಸುಬ್ಬ ಪಾತ್ರ .ಸ್ನೇಹಿತರ ಜಾಗಕ್ಕೆ ಇಬ್ಬರನ್ನು ಹೇಗೋ ಹುಡುಕಾಡಿ ಹೊಂದಾಣಿಕೆ ಮಾಡಿದೆವು.ಇಲ್ಲಿ ನನ್ನಂತೆ ಉತ್ಸಾಹದ ಹುಡುಗಿ ( ಈಗ ತಕ್ಷಣಕ್ಕೆ ಹೆಸರು ಬಾಯಿಗೆ ಬರುತ್ತಾ ಇಲ್ಲ) ಈಗ ಸುಂಕದ ಕಟ್ಟೆಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾರೆ.ನಾನು ಕೇರಳ ತುಳು ಅಕಾಡೆಮಿಯ ಕಾರ್ಯಕ್ರಮ ದಲ್ಲಿ ಇತ್ತೀಚೆಗೆ ಭೇಟಿ ಮಾಡಿ ಮಾತಾಡಿರುವೆ‌
 ಹೇಮಾಳಿಗೆ ಒಂದು ಕೊರವಂಜಿ ನೃತ್ಯ ಕೂಡ ಹೇಳಿ ಕೊಟ್ಟಿದ್ದೆ.ಅಂತೂ ಇಂತೂ ಯುವಜನೋತ್ಸವದ ಸ್ಪರ್ಧೆಯಲ್ಲಿ ನಮ್ಮ ನಾಟಕ ಪ್ರಥಮ ಬಹುಮಾನ ಪಡೆಯಿತು. ಸ್ಪರ್ಧಿಸಿದ್ದು ನಮ್ಮದು ಸೇರಿ ಮೂರು ತಂಡ ಅಷ್ಟೇ ,ಹುಡುಗಿಯರ ತಂಡ ನಮ್ಮದು ಮಾತ್ರ .ಜೊತೆಗೆ ನನ್ನ ಪೂಜಾ ನೃತ್ಯ ಮತ್ತು ಹೇಮಾಳ ಕೊರವಂಜಿ ನೃತ್ಯಕ್ಕೆ ಬೇರೆ ಸ್ಪರ್ಧಿಗಳು ಇರಲಿಲ್ಲ, ನಮಗೆ ಫಸ್ಟ್ ಸೆಕೆಂಡ್ ಬಹುಮಾನ ಕೊಟ್ಟರು.ಜಿಪ್ಪಿಗಳೆ ನಾವು ನಿಮ್ಮ ಮೊದಲು ಕಂಡಾಗ ಹಾಡಿಗೆ ನಾನು ಹೇಳಿ ಕೊಟ್ಟ ನೃತ್ಯವನ್ನು ಆ ಇಬ್ಬರು ಸಣ್ಣ ಹುಡುಗಿಯರು ಮಾಡಿದರು.ಅವರಿಗೂ ಬೇರೆ ಸ್ಪರ್ಧಿಗಳೇ ಇರಲಿಲ್ಲ, ಬಹುಶಃ ಅವರಿಗೆ ವಿಶೇಷ ಬಹುಮಾನ ಕೊಟ್ಟಿಬಹುದು.ಅಥವಾ ಮೊದಲ ಬಹುಮಾನ ಎಂದೇ ಕೊಟ್ಟಿದ್ದರೋ ಏನೋ ಗೊತ್ತಿಲ್ಲ.
ಇದು ಬಿಟ್ಟರೆ ಕಂಠ ಪಾಠ ಸ್ಪರ್ದೆ ಇತ್ತು‌.ಇದಕ್ಕೆ ಹತ್ತು ಹನ್ನೆರಡು ಜನ ಸ್ಪರ್ಧಿಗಳು ಇರುತ್ತಿದ್ದರು. ನಾನು ಈ ವಿಭಾಗದಲ್ಲೂ ಬಹುಮಾನ ಪಡೆದಿದ್ದೆ‌
ಅಂದಿನ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಬಂದಿದ್ದ ಅಲ್ಲಿನ ನಿವೃತ್ತ ಹಿಂದಿ ಶಿಕ್ಷಕರೂ ಸಾಹಿತಿಗಳೂ ಆಗಿದ್ದ ವಿಶ್ವೇಶ್ವರ ಭಟ್ ನಮ್ಮ ನಾಟಕವನ್ನು ನೋಡಿದ್ದು ಸಮಾರೋಪ ಭಾಷಣದಲ್ಲಿ ಇಂದು ಸುಬ್ಬನ ಪಾತ್ರ ವಹಿಸಿದ ಹುಡುಗಿಗೆ ದೊಡ್ಡ ಭವಿಷ್ಯ ಇದೆ   ಎಂದು ನನ್ನ ಕುರಿತು ಮೆಚ್ಚುಗೆಯ ಮಾತನ್ನು ಹೇಳಿದರು.

ಇದು ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಅವರಿಗೆ ನಾನು ಯಾರೆಂದು ಗೊತ್ತಿರಲಿಲ್ಲ. ಸುಬ್ಬನ ಪಾತ್ರವನ್ನು ಮಾತ್ರ ನೋಡಿದ್ದರು.ನನ್ನ ಹೆಸರು ಗೊತ್ತಿಲ್ಲದ ಕಾರಣ ಪಾತ್ರದ ಹೆಸರು ಹೇಳಿ ಮೆಚ್ಚುಗೆ ಮಾತು ಹೇಳಿದ್ದರು.ಎಲ್ಲಾ ಶಿಕ್ಷಕರೂ,ವಿದ್ಯಾರ್ಥಿಗಳೂ ದೊಡ್ಡದಾಗ ಕ್ಲಾಪ್ ಹಾಕಿದರು.
ಸಭೆಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತು ಕೇಳುತ್ತಿದ್ದ ನನಗೆ ರೋಮಾಂಚನವಾಯಿತು.
ಹೌದು ಅವರು ಹೇಳಿದ ಮಾತನ್ನು ಗಟ್ಟಿಯಾಗಿ ನೆಚ್ಚಿಕೊಂಡೆ.ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ.ಅಂದರೆ ನಾನು ಎಲ್ಲರಂತೆ ಸಾಮಾನ್ಯ ಳಾಗಿ ಇರುವುದಿಲ್ಲ, ನನಗೆ ದೊಡ್ಡ ಭವಿಷ್ಯ ಇದೆ ಎಂದು ನಾನು ನಂಬಿದೆ‌.
ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ
ಹುಡುಗಿ ಏನು ಓದಿದರೇನು ? ಅವಳಿಗೆ ಒಲೆ ಬೂದಿ ಗೋರುವ ಕೆಲಸ ತಪ್ಪದು ಎಂಬ ಮಾತು ನಮ್ಮಲ್ಲಿ ಪ್ರಚಲಿವಿತ್ತು.ಆದರೆ ಅಂದು ನಾನು ಕೇವಲ ಒಲೆ ಬೂದಿ ಗೋರಲು ಲಾಯಕ್ಕಾದವಳಾಗಿ ಉಳಿಯುವಿದಿಲ್ಲ..ನಾನು ಮುಂದೆ ತುಂಬಾ ಓದಬೇಕು ,ನನಗೆ ದೊಡ್ಡ ಭವಿಷ್ಯ ಸಿಗುತ್ತದೆ ಎಂದು ನಿರ್ಧರಿಸಿದೆ..
ಎಸ್ ಎಸ ಎಲ್ ಸಿಯಲ್ಲಿ ಫಸ್ಟ್ ಕ್ಲಾಸ್ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದೆ.ಮುಂದೆ ಓದಿದೆ. ಇಂದು ದೊಡ್ಡ ಭವಿಷ್ಯ ಸಿಗದೇ ಇದ್ದರೂ ಕೂಡ ನಾನು ನನ್ನತನವನ್ನು ಪಡೆಯುವಷ್ಟು ಭವಿಷ್ಯವನ್ನು ಪಡೆದೆ.
ಈ ನಾಟಕ ನಡೆಯುವಾಗ ಒಂದು ಪ್ರಮಾದ ಆಗಿ ಸಭೆಯಲ್ಲಿದ್ದವರೆಲ್ಲ ನಗಾಡಿದ್ದರು.ಸುಬ್ಬನಿಗೆ ಇಬ್ಬರು ಸ್ನೇಹಿತರಯ.ಅವರು ಬಂದಾಗ ವೆಲ್ ಕಂ್ ಮೈ ಫ್ರೆಂಡ್ಸ್,ಪ್ಲೀಸ್ ಬಿ ಸೀಟೆಡ್ ಎಂದು ಹೇಳಿದಾಗ ಅವರು ಕುಳಿತುಕೊಳ್ಳಬೇಕೆಂದು ಹೇಳಿಕೊಟ್ಟಿದ್ದೆ.ಆದರೆ ಅವರಿಗೆ ಕುಳಿತುಕೊಳ್ಳಲು ಅಲ್ಲಿ ಒಂದು ಖುರ್ಚಿ ಮಾತ್ರ ಇತ್ತು.ಇಬ್ಬರೂ ಒಂದೇ ಕುರ್ಚಿಯಲ್ಲಿ  ಕುಳಿಯರು.ಅದು ಎರಡು ಕೈ ಇರುವ ಹಳೆಯ ಮರದ ಕುರ್ಚಿ. ಮುರಿಯದ್ದು ನಮ್ಮ ಪುಣ್ಯ! ನಂತರ ಅವರು ಎದ್ದು ನಿಂತು ಮಾತನಾಡಲು ಇದೆ.ಏಳ ಹೊರಟಾಗ ಟೈಟ್ ಆಗಿ ಇಬ್ಬರಿಗೂ ಏಳಲಾಗುತ್ತಿಲ್ಲ..ಇವರ ಪರಿಸ್ಥಿತಿ ನೋಡಿ ಸಭೆಯ ಮಂದಿದ ಜೊತೆಯಲ್ಲಿ ಇವರುಗಳು ನಗುತ್ತಿದ್ದಾರೆ.ನನಗೋ ಆತಂಕ ಸಿಟ್ಟು.ಕುರ್ಚಿಯ ಹಿಂಭಾಗ ನಿಂತು ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ಒಬ್ಬಳ ಬೆನ್ನಿಗೆ ಕುಟ್ಟಿದೆ.ಒಬಗಬಳು ಎದ್ದಳು.ಅಲ್ಲಿಗೆ ಸಮಸ್ಯೆ ಪರಿಹಾರ ಆಯ್ತು.ಅವರಿಬ್ಬರೂ ಏಕ ಕಾಲಕ್ಕೆ ಮೇಲೇಳಳು ಯತ್ನ ಮಾಡಿದ್ದರಿಂದ ಹೀಗಾಗಿತ್ತು.ತಪ್ಪು ನನ್ನದೇ ನಾನು ಅವರಿಗೆ ಕುಳಿಕೊಳ್ಳಲು ಎರಡು ಕುರ್ಚಿ ಇಡಬೇಕಾಗಿತ್್ತಯ.ಮೊದಲ ಬಾರಿಗೆ ವೇದಿಕೆ ಏರಿದ ಅವರಿಗೆ ಗೊಂದಲ ಆದದ್ದು ಸಹಜ..ನಕ್ಕದ್ದು ಮಾತ್ರ ಆಗ ತೀವ್ರ ಕೋಪ ಯರಿಸಿತ್ತು.ಆದರೆ ಸುಬ್ಬನಾಗಿ ವೇದಿಕೆ ಮೇಲೆ ಇದ್ದೆ ..ತೋರಿಸುವ ಹಾಗೆ ಇರಲಿಲ್ಲ.. ಈಗ ನೆನೆದರೆ ನಗು ಬರುತ್ತಿದೆ..ಅಂತೂ ಇಂತೂ ನಾಟಕ ಮಾಡಿ ಮೊದಲ ಬಹುಮಾನ ಪಡೆದು ಸ್ವರ್ಗ ಸಿಕ್ಕಂತೆ ಬೀಗಿದ್ದೆವು ನಾವು.

Thursday 2 May 2019

ನನ್ನೊಳಗೂ ಒಂದು ಆತ್ಮವಿದೆ ಭಾಗ 10 ಕಿವಿ ಕೇಳಿಸುತ್ತಿದ್ದರೂ ನನಗೆ ಕಿವಿ ಕೇಳಿಸುವುದಿಲ್ಲ ಎಂದ ಅಕ್ಕಮ್ಮಜ್ಜಿಯ ಪ್ರೀತಿಯನ್ನು ಹೇಗೆ ತಾನೇ ಮರೆಯಲಿ



ಚಿತ್ರ ಕೃಪೆ : ಅಂತರ್ಜಾಲ
ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದಿನ ಮಾತಿದು.ನನ್ನ ಓದಿನ ಕಾರಣಕ್ಕೆ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡು ಎಕ್ಕಾರಿನ ಒಂದು ರೂಮಿನ ಮೋಟು ಗೋಡೆಯ  ಗೆದ್ದಲು ಹಿಡಿದ ಮಣ್ಣಿನ ಮನೆಯನ್ನು ನೂರ ಐವತ್ತು ರುಪಾಯಿ ಬಾಡಿಗೆಗೆ ಹಿಡಿದಿದ್ದೆವು.ಅದಕ್ಕಿಂತ ಒಳ್ಳೆಯ ಮನೆ ನಮ್ಮ ಬಜೆಟ್ ಗೆ ಸಿಕ್ಕಲು ಸಾಧ್ಯವಿರಲಿಲ್ಲ. ಈ ಮನೆಯಲ್ಲಿ ಇದ್ದದ್ದು  ಒಂದು ಕೊಠಡಿ ಸುಮಾರು ಎಂಟಡಿ ಅಗಲ ಹತ್ತು ಹನ್ನೆರಡಡಿ ಉದ್ದ ಇದ್ದಿರಬಹುದು. ಅದರ ಒಂದು ತುದಿಯಲ್ಲಿ ಮೂರಡಿ ಎತ್ತರಕ್ಕೆ ಒಂದು ಸಣ್ಣ ಗೋಡೆ.ಅದರ ಆಕಡೆ ಅಡಿಗೆ ಮನೆ,ಅದಕ್ಕೆ ತಾಗಿಕೊಂಡು ಸ್ನಾನದ ಮನೆ.ಇದು ಮೂರುಅಡಿ ಉದ್ದ ಮೂರಡಿ ಅಗಲ ಇದ್ದಿರಬಹುದು.
ನಮ್ಮ ಈ ಮನೆಯ ಎತ್ತರ ಸುಮಾರು ಎಂಟು ಹತ್ತಡಿ ಇದ್ದಿರಬಹುದು. ಆದರೆ ಗೋಡೆ ಮಾತ್ರ ಆರಡಿ ಎತ್ತರ ಇತ್ತು.ಒಂದು ಕುರ್ಚಿ ತಗೊಂಡು ಹತ್ತಿ ಆಕಡೆಗೆ ಇಣುಕಿದರೆ ಆ ಕಡೆಯ ಇಳಿಸಿ ಕಟ್ಟಿದ ಜೋಪಡಿ ಕಾಣುವಂತೆ ಇತ್ತು.ಆದರೆ ಹತ್ತಿ ನೊಡಲು ನಮ್ಮಲ್ಲಿ ಖುರ್ಚಿಯಾಗಲಿ ಮಂಚವಾಗಲೀ ಇರಲಿಲ್ಲ. ಹಾಗಾಗಿ ಅಲ್ಲಿ ಏನಿದೆ ಎಂದು ಸುಮಾರು ಸಮಯ ಗೊತ್ತಿರಲಿಲ್ಲ. ಅಲ್ಲಿ ಒಂದು ಅಜ್ಜಿ ಮತ್ತು ಅವರ ಬುದ್ಧಿ ಮಾಂದ್ಯ ಮಗ ವಾಸಮಾಡುತ್ತಿದ್ದರು.ಆ ಮಗನಿಗೆ ಅಮವಾಸ್ಯೆ ಹತ್ತಿರ ಬಂದಂತೆಲ್ಲ ಕೋಪ ಆಕ್ರೋಶ ಹೆಚ್ಚಾಗುತ್ತಾ ಇತ್ತು ಏನೇನೋ ಕೂಗಾಡುತ್ತಾ ಇದ್ದ.
ಅದಿರಲಿ.ನಮ್ಮದು ಅರ್ಧ ಗೋಡೆಯ ಮನೆ ಆದ ಕಾರಣ ಸಣ್ಣ ಸದ್ದಾದರೂ ಆ ಕಡೆಗೆ ಕೇಳುವಂತೆ ಇತ್ತು..ನಾವು ಅಲ್ಲಿಗೆ ಬಂದು ಒಕ್ಕಲಾದ ಒಂದೆರಡು ದಿನಗಳಲ್ಲೇ ಅಕ್ಕಮ್ಮಜ್ಜಿ ತನ್ನ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಬಹಳ ಇಷ್ಟವಾದರು.ಅವರು ಮಾತನಾಡುತ್ತಾ ನನಗೆ ಕಿವಿ ಕೇಳಿಸುವುದಿಲ್ಲ ಮಗಾ.ಇನ್ನು ನನ್ನ ‌ಮಗ ಮಲಗಿದ ತಕ್ಷಣ ನಿದ್ದೆ ಮಾಡುತ್ತಾನೆ.ಅವನಿಗೇನೂ ಗೊತ್ತಿಲ್ಲ ಸಣ್ಣ ಮಗುವಿನ ಬುದ್ಧಿ  ಅವನದು( ಇದು ಸತ್ಯದ ವಿಚಾರವೇ ಆಗಿತ್ತು) ಆದರೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದು ಶುದ್ಧ ಸುಳ್ಳು.ಆದರೆ ಹೊಸತಾಗಿ ಮದುವೆಯಾಗಿ ಬಂದು ಸಂಸಾರ ಹೂಡಿದ  ನಮಗೆ ಸಂಕೋಚವಾಗಬಾರದೆಂಬ ಸದುದ್ದೇಶದಿಂದ ಅವರು ಹಾಗೆ ಹೇಳಿದ್ದರು.
ಅಕ್ಕಮ್ಮಜ್ಜಿ ಬಹಳ ಸಹೃದಯಿ. ಆಗಾಗ ನಮ್ಮ ಮನೆ ಅಂಗಳ ಗುಡಿಸಿ ಮನೆಗೆ ಹತ್ತಿದ ಗೆದ್ದಲು ತೆಗೆಯಲು ಸಹಾಯ ಮಾಡುತ್ತಿದ್ದರು ‌.ನಮ್ಮ ‌ಮನೆಯ ಓನರ್ ನಾಗವೇಣಿ ಅಮ್ಮನವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಅವರ ಮೊದಲ ‌ಮಗ ಬುದ್ಧಿ ಮಾಂದ್ಯ.ಆದರೆ ಎರಡನೇ ಮಗ ಮುಂಬಯಿಯಲ್ಲಿ  ಒಳ್ಳೆಯ ಕೆಲಸದಲ್ಲಿ ಇದ್ದ ,ಒಳ್ಳೆಯ ಆದಾಯವೂ ಇತ್ತು.ಆತ ತನ್ನ ತಾಯಿಯನ್ನು ಎಂದರೆ ಅಕ್ಕಮ್ಮಜ್ಜಿ ಯನ್ನು ಮುಂಬಯಿಗೆ ಕರೆದುಕೊಂಡು ಹೋಗಲು ತಯಾರಿದ್ದ ಆದರೆ ಬುದ್ಧಿ ಮಾಂದ್ಯನಾದ ಅಣ್ಣನನ್ನು ಕರೆದುಕೊಂಡು ಹೋಗಲು ತಯಾರಿರಲಿಲ್ಲ.ಆತನನ್ನು ನೋಡಿಕೊಳ್ಳುವ ಸಲುವಾಗಿ ಅಕ್ಕಮ್ಮಜ್ಜಿ ಎಕ್ಕಾರಿನಲ್ಲಿ ಕೂಲಿ ಮಾಡುತ್ತ ಇಳಿಸಿ ಕಟ್ಟಿದ ಅಡಿಕೆ ಮರದ ಸೋಗೆಯ ಜೋಡಿಯಲ್ಲಿ ದೊಡ್ಡ ‌ಮಗನೊಂದಿಗೆ ಬದುಕುತ್ತಾ ಇದ್ದರು.ನಾನಿರುವ ತನಕ ಮಗನನ್ನು ಬೀದಿ ಪಾಲಾಗಲು ಬಿಡುವುದಿಲ್ಲ ,ಮುಂದೆ ದೇವರು ಇಟ್ಟಂತೆ ಆಗುತ್ತದೆ ಎಂದು ಹೇಳುತ್ತಾ ಇದ್ದರು.ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ದೊಡ್ಡದಾಗಿ ನೋವಿನಿಂದ ನರಳಿದ ದೊಡ್ಡ ‌ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದ.ಅದೇ ಜೋಪಡಿಯ ಈ ಕಡೆ ಇದ್ದ ನಾವು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಎದೆ ಬಡಿತ ,ಮತ್ತು ನಾಡಿ ಬಡಿತ ನಿಂತಿತ್ತು. ಆರಂಭದಲ್ಲಿ ಎದೆ ಬಡಿದು ಅತ್ತ ಅಕ್ಕಮ್ಮಜ್ಜಿ ನಂತರ ನಾನು ಇರುವಾಗಲೇ ಮಗ ಸತ್ತಿದ್ದು ಒಳ್ಳೆದಾಯಿತು‌.ಇಲ್ಲವಾದರೆ ನನ್ನ ನಂತರ  ಊಟ ತಿಂಡಿ,ಸ್ನಾನ ಆಸರೆ ಇಲ್ಲದೆ ಹುಣ್ಣಾಗಿ ಸಾಯಬೇಕಿತ್ತು.ನನ್ನನ್ನು ಸಣ್ಣ ಮಗ ನೋಡಿಕೊಂಡಾನು ಎಂದು ಸಮಾಧಾನ ಮಾಡಿಕೊಂಡಿದ್ದರು.ನಂತರ ದೊಡ್ಡ ಮಗನ ಅಂತ್ಯ ಸಂಸ್ಕಾರಕ್ಕೆ ಬಂದ ಸಣ್ಣ ‌ಮಗ ಎಕ್ಕಾರು ನಾಗವೇಣಿ ಅಮ್ಮನವರಿಗೆ " ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ " ಎಂದು ಮಾತು ಕೊಟ್ಟು ಮುಂಬಯಿಗೆ ಕರೆದುಕೊಂಡು ಹೋಗಿದ್ದ.ಮುಂದೇನಾತು ತಿಳಿಯದು.ಬಹುಶಃ ಮಗ ಚೆನ್ನಾಗಿ ನೋಡಿಕೊಂಡಿರಬಹುದು.ಕೆಲ ತಿಂಗಳ ಹಿಂದೆ ಹೊಸತಾಗಿ ಸಂಸಾರ ಹೂಡಿದ ಆತ್ಮೀಯರಾದ ಪರಶುರಾಮ ಯತ್ನಾಳ್( ಹೈ ಕೋರ್ಟ್ ನ್ಯಾಯವಾದಿ) ಮನೆಗೆ ಹೋಗಬೇಕೆಂದು ಕೊಂಡಾಗ ಅಕ್ಕಮ್ಮಜ್ಜಿ ಮತ್ತು ತೀರಾ ಕಡಿಮೆ ಬಾಡಿಗೆಗೆ ಮನೆ ಕೊಟ್ಟ  ನಾಗವೇಣಿ ಅಮ್ಮನವರ ಸಹೃದಯತೆ ನೆನಪಾಗಿಇದನ್ನು  ಬರೆದಿದ್ದೆ,ಈಗ ಆತ್ಮಕಥೆ ಗೆ ಜೋಡಿಸಿರುವೆ - ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪದವಿ ಪೂರ್ವ ಕಾಲೇಜು

ನನ್ನೊಳಗೂ ಒಂದು ಆತ್ಮವಿದೆ ಭಾಗ 9 ಆತ್ಮ ಕಥೆಯೆಂದರೆ ಬರಿಯ ಗೋಳಲ್ಲ


ಇತ್ತೀಚೆಗೆ ಫಲಿತಾಂಶಗಳು ಅಂತರ್ಜಾಲದ ಮೂಲಕ ಮಕ್ಕಳಿಗೆ ಸಿಗುತ್ತವೆ‌.ನಮ್ಮ ಕಾಲದಲ್ಲಿ ಹಾಗಿರಲಿಲ್ಲ.
ನಮ್ಮ ಹತ್ತನೇ ತರಗತಿಯ ಪಬ್ಲಿಕ್ ಪರೀಕೆಯ ಫಲಿತಾಂಶದ ದಿನ ಹೇಗೋ ನಮಗೆ ಗೊತ್ತಾಗುತ್ತಾ ಇತ್ತು.ನಮ್ಮ ಮನೆಗೆ ಪತ್ರಿಕೆ ತರಿಸುತ್ತಾ ಇರಲಿಲ್ಲ. ಬಹುಶಃ ಹೆಡ್ ಮಾಷ್ಟ್ರು ತರಿಸ್ತಾ ಇದ್ರೋ ಏನೋ.ಅದರ ಮೂಲಕ ನಮ್ಮ ಫಲಿತಾಂಶದ / ಪಾಸ್ ಫೈಲ್ ದಿನ ಗೊತ್ತಾಗುತ್ತಾ ಇದ್ದಿರಬಹುದು .ಬಾಯಿ ಮಾತಿನ ಮೂಲಕ ನನಗೂ ಗೊತ್ತಾಗಿತ್ತು.ನನ್ನ ತಂದೆ ತಾಯಿ ಅಕ್ಕ ಅಣ್ಣನಿಗೆ ನನ್ನ ಬಗ್ಗೆ ತುಂಬಾ ನಂಬಿಕೆ ಇತ್ತು.ಹಾಗಾಗಿ ಅವರು ನನ್ನಷ್ಟು ಆತಂಕಕ್ಕೆ ಒಳಗಾಗಿರಲಿಲ್ಲ‌.ಆದರೆ ನನಗೆ ಗಣಿತದ ಎರಡನೇ ಪತ್ರಿಕೆ  ಮತ್ತು ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ತುಂಬಾ ಆತಂಕ ಇತ್ತು.ವಾಸ್ತವವಾಗಿ ಗಣಿತ ನನ್ನ ಆಸಕ್ತಿಯ ವಿಚಾರ.ಆದರೆ ಒಂಬತ್ತನೇ ತರಗತಿಯಲ್ಲಿ ನಡೆದ ಒಂದು ವಿಚಾರದಿಂದ ನಾನು ಶಾಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೆ.ಅದರ ಪರಿಣಾಮವಾಗಿ ನಾನು ಕಲಿಕೆಯಲ್ಲಿ ತುಸು ಹಿಂದೆ ಬಿದ್ದಿದ್ದೆ.ಅದರಲ್ಲೂ ಗಣಿತದಲ್ಲಿ ಹಿಂದೆ ಬಿದ್ದಿದ್ದೆ.ಬಹುಶಃ ನಾನು ಹೋಮ್ ವರ್ಕ್ ಮಾಡುತ್ತ ಇರಲಿಲ್ಲ. ಮಾಡದ ಬಗ್ಗೆ ವಿಚಾರಿಸುವ ಮೇಷ್ಟ್ರು ಗಳು ನಮ್ಮ ವಾಣಿವಿಜಯ ಹೈಸ್ಕೂಲ್ ನಲ್ಲಿ ಒಬ್ಬಿಬ್ಬರು ಮಾತ್ರ ಇದ್ದರು.ನಮ್ಮ ಕೆಮೆಷ್ಟ್ರಿ ಮಾಷ್ಟ್ರು ಅಮೈ ಸುಬ್ರಹ್ಮಣ್ಯ ಭಟ್ ಒಳ್ಳೆಯ ಶಿಕ್ಷಕರಾಗಿದ್ದರು‌.ಜೊತೆಗೆ ದಿನ ದಿನ ಕಲಿತುಕೊಂಡು ಬರುವುದು ನಮಗೆ ಅನಿವಾರ್ಯ ಆಗಿತ್ತು. ಬಹುಶಃ ಅವರ ಕೆಮೆಷ್ಟ್ರಿ ವಿಷಯದಲ್ಲಿ ಯಾರೂ ಫೈಲ್ ಅಗುತ್ತಾ ಇರಲಿಲ್ಲ ‌ಅಂತೆಯೇ ಫಿಸಿಕ್ಸ್ ಪಾಠ ಮಾಡುತ್ತಿದ್ದ ಅಮೈ ಕೃಷ್ಣ ಮಾಷ್ಡ್ರು ಕೂಡ ಶಿಸ್ತಿನ ಸಿಪಾಯಿ. ದಿನ ನಿತ್ಯ ಹಿಂದಿನ ದಿನದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದರು.ಅವರು ಕಷ್ಟದ ವಿಚಾರವನ್ನು ಕೂಡ ಬಹಳ ಸುಲಭ ಎನಿಸುವಂತೆ ಲೀಲಾಜಾಲವಾಗಿ ನಮಗೆ ಅರ್ಥ ಮಾಡಿಸುತ್ತಿದ್ದರು.ಹಾಗಾಗಿ ಇವೆರಡು ವಿಷಯಗಳಲ್ಲಿ ನನಗೆ ಉತ್ತಮ ಅಂಕಗಳು ಬರುತ್ತಾ ಇದ್ದವು.ಸಮಾಜ ಶಾಸ್ತ್ರಕ್ಕೆ ತೊಟ್ಟೆತ್ತೋಡಿ ಮಾಸ್ಟರ್ ಇದ್ದರು‌.ಅವರು ಪಾಪದ ಮಾಷ್ಟ್ರು ಹಾಗಾಗಿ ನಾವು ನೋಟ್ಸ್ ಬರೆಯುತ್ತಾ ಇದ್ದೇವಾ ಓದುತ್ತಾ ಇದ್ದೇವಾ ಎಂಬುದನ್ನು ಗಮನಿಸಿ ಎರಡೇಟು ಬೆನ್ನಿಗೆ ಕೊಡುತ್ತಾ ಇರಲಿಲ್ಲ ಜೊತೆಗೆ ನನಗೆ ಆಗ ಇತಿಹಾಸ ಭೂಗೋಳ ಇತ್ಯಾದಿ ಆಸಕ್ತಿಯ ವಿಚಾರಗಳು ಆಗಿರಲಿಲ್ಲ. ಇವುಗಳ ನಡುವೆ ಕಬ್ಬಿಣದ ಕಡಲೆಯಾದದ್ದು ಇಂಗ್ಲಿಷ್.ನಿಜಕ್ಕೂ ನಾನು ಸಂಸ್ಕೃತ ಉಪನ್ಯಾಸಕಿಯಾಗಿ ಅಲೋಶಿಯಸ್ ಕಾಲೇಜಿಗೆ ಸೇರುವ ತನಕವೂ is was ಗಳ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ಅಲ್ಲಿ ಸಂಸ್ಕೃತ ವನ್ನು ಇಂಗ್ಲಿಷ್ ಮಾಧ್ಯಮ ದಲ್ಲಿ ಪಾಠ ಮಾಡಬೇಕಿತ್ತು.ಆಗ ಪ್ರಸಾದ್ ಮತ್ತು ಹಿಂದಿ ಉಪನ್ಯಾಸಕಿ ಜೂಡಿ ಮೇಡಂ ನನಗೆ ಸ್ವಲ್ಪ ಇಂಗ್ಲಿಷ್ ಹೇಳಿಕೊಟ್ಟರು .ನಮ್ಮ ಶಾಲೆಯ ಇಂಗ್ಲಿಷ್ ಶಿಕ್ಷಕರು ಕನ್ನಡದಲ್ಲಿ ಇಂಗ್ಲಿಷ್ ಅನ್ನು ಒಂದಿನಿತೂ ಕನ್ನಡದಲ್ಲಿ ಹೇಳದ ಕಾರಣ ಇಂಗ್ಲಿಷ್ ಪಾಠಗಳಲ್ಲಿ ಏನು ಕಥೆ ಇತ್ತು, ವಿಷಯ ಇತ್ತು ಎಂಬುದೇ ನನಗೆ ಗೊತ್ತಿರಲಿಲ್ಲ. ಆಗಿನ್ನೂ ಗೈಡ್ ಗಳು ಬಂದಿರಲಿಲ್ಲವೋ ಅಥವಾ ನಮಗೆ ಅಂತಹದ್ದೊಂದು ಇದೆ ಎಂದು ಗೊತ್ತಿರಲಿಲ್ಲವೋ ಏನೋ ಒಟ್ಟಿನಲ್ಲಿ ನಮಗೆ ಗೈಡ್‌ ಸಿಕ್ಕಿರಲಿಲ್ಲ.
ಇಂಗ್ಲಿಷ್ ಎರಡನೇ ಪತ್ರಿಕೆಯನ್ನು ಅಮೈ ಕೃಷ್ಣ ‌ಮಾಷ್ಟ್ರು ಪಾಠ ಮಾಡಿದ್ದರು. ಹಾಗಾಗಿ ಕಥೆ ಸುಮಾರಾಗಿ ಅರ್ಥವಾಗಿತ್ತು.ಟಾಲ್ ಸ್ಟಾಯ್ ಯ ಯಾವುದೋ ಒಂದು ನೀಳ್ಗಥೆಯನ್ನು ಎರಡನೇ ಪತ್ರಿಕೆಗೆ ಸಿಲಬಸ್ ಮಾಡಿದ್ದರು. ಕಥೆ ಅರ್ಥವಾದ ಕಾರಣ ಪ್ರಶ್ನೆಗಳಿಗೆ ಉತ್ತರ ಬರೆಯಬಲ್ಲವಳಾಗಿದ್ದೆ..ಆದರೆ ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ಆತಂಕ ಇತ್ತು.
ಫಲಿತಾಂಶದ ದಿನ ಬೆಳಗ್ಗೆಯೇ ನಾವೆಲ್ಲ ಹೋಗಿ ಶಾಲೆಯಲ್ಲಿ ಕಾಯುತ್ತಾ ಇದ್ದೆವು.ತರಗತಿ ಪರೀಕ್ಷೆಗಳಲ್ಲಿ ಸುಮಂಗಲ,ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮತ್ತು ನಾನು ಪ್ರತಿಸ್ಪರ್ಧಿ ಗಳಾಗಿದ್ದೆವು.ಸಾಮಾನ್ಯವಾಗಿ ಸುಮಂಗಲ ‌ಮೊದಲ ಸ್ಥಾನ ಪಡೆಯುತ್ತಿದ್ದಳು.ಎರಡನೇ ಸ್ಥಾನಕ್ಕಾಗಿ ನಿಶಾ ಮತ್ತು ನನ್ನೊಳಗೆ ಪೈಪೋಟಿ ಇತ್ತು.ಸುಮಂಗಲ ಸುಶಿಕ್ಷಿತರ ಮನೆ ಹುಡುಗಿಯಾಗಿದ್ದಳು.ನಿಶಾನ ತಂದೆ ಯಾವುದೋ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹಾಗಾಗಿ ಅವರಿಗೆ ಮನೆಯಿಂದ ಕಲಿಕೆಗೆ ಹೆಚ್ಚಿನ ಬೆಂಬಲ ಇತ್ತು.
ಫಲಿತಾಂಶದ ದಿನ ನಾವೆಲ್ಲ ಹೆಡ್ ಮಾಷ್ಟ್ರು ಕೊಠಡಿಯ ಹೊರಗೆ ಜಾತಕ ಪಕ್ಷಿಗಳಂತೆ ಕಾಯುತ್ತಾ ಇದ್ದೆ.ಆಗ ಹೆಚ್ಚು ಬಸ್ ಗಳು ಇರಲಿಲ್ಲ. ನಮ್ಮ ಹೆಡ್ ಮಾಷ್ಟ್ರು ಕಾಸರಗೋಡಿಗೆ ಹೋಗಿ ಫಲಿತಾಂಶವನ್ನು ಕಟ್ಟೆತ್ತಲ ಬಸ್ಸಿನಲ್ಲಿ ತರಬಹುದು ಎಂದು ಕಾಯುತ್ತಾ ಇದ್ದೆವು.ಅದು ಬರುವಾಗ ಮಧ್ಯಾಹ್ನ ಆಗುತ್ತಾ ಇತ್ತು..
ಆ ದಿನದ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗುತ್ತಾ ಇತ್ತು.ಅಂತೂ ಇಂತೂ ಕಟ್ಟತ್ತಲ ಬಸ್ ಬಂತು .ನಮ್ಮ ಹೆಡ್ ಮಾಷ್ಟ್ರು ಒಂದು ದೊಡ್ಡ ಫೈಲ್ ಅನ್ನು ಹಿಡಿದುಕೊಂಡು ಬಂದು ಅವರ ಕೊಠಡಿ ಹೊಕ್ಕರು.ನಮ್ಮಲ್ಲಿ ಪಿನ್ ಡ್ರಾಪ್ ಸೈಲೆನ್ಸ್.. ಒಳಗಿನಿಂದ ಸುಮಂಗಲ, ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮೊದಲಾದವರ ಹೆಸರುಗಳನ್ನು ಹೇಳಿದ್ದು ಕೇಳಿಸಿತು.ನನ್ನ ಹೆಸರು ಹೇಳಿದ್ದು ಕೇಳಿಸಲಿಲ್ಲ.ನನ್ನ ಎದೆ ನನಗೇ ಕೇಳಿಸುವಷ್ಟು ದೊಡ್ಡದಾಗಿ ಬಡಿದುಕೊಳ್ಳುತ್ತಾ ಇತ್ತು.ಮತ್ತೆ ಸ್ವಲ್ಪ ಹೊತ್ತಿನಲ್ಲಿ ರಿಸಲ್ಟ್ ನಲ್ಲಿ ಪಾಸಾದವರ ಪಟ್ಟಿಯನ್ನು ಹೆಡ್ ಮಾಷ್ಟ್ರು ಕೊಠಡಿಯ ಹೊರಭಾಗದ ನೋಟೀಸ್ ಬೋರ್ಡ್ ಗೆ ತಂದು ಅಂಟಿಸಿದರು.
ಅಬ್ಬಾ!ಬಚಾವ್ ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾದವರ ಪಟ್ಟಿಯಲ್ಲಿ ಇದ್ದೆ.ಆಗ ನನಗಾದ ಸಂತಸವನ್ನು ವರ್ಣಿಸಲಾರೆ.ಅದು ಶಬ್ದಾತೀತವಾದುದು! ಈಗಿನಂತೆ ಆಗ ಫಲಿತಾಂಶ ಬಂದ ದಿನವೇ ನಮಗೆ ಅಂಕಗಳು ಗೊತ್ತಾಗುತ್ತಿರಲಿಲ್ಲವೆಂದು ಕಾಣುತ್ತದೆ.ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದರೂ ನನಗೆ ಎಷ್ಟು ಅಂಕಗಳು ಬಂದಿವೆ ಎಂದು ತಿಳಿದಿರಲಿಲ್ಲ. ಜೊತೆಗೆ ನಮ್ಮೊಳಗೆ ಸ್ಪರ್ಧೆ ಇತ್ತಲ್ಲ! ಹಾಗಾಗಿ ಯಾರು ಫಸ್ಟ್ ,ಸೆಕೆಂಡ್, ಥರ್ಡ್ ಎಂದು ತಿಳಿಯುವ ಕುತೂಹಲ ಕೂಡ ಇತ್ತು.
ಹೊರಗಡೆ ಹಾಕಿದ ಫಲಿತಾಂಶದ ಪಟ್ಟಿಯಲ್ಲಿ ಸುಮಂಗಲ, ನಿಶಾ,ವಿಜಯರ ಹೆಸರಿನ ಮುಂದೆ ಒಂದು ಸಣ್ಣ ಟಿಕ್ ಮಾರ್ಕ್ ಇತ್ತು.ಹಾಗಾಗಿ ಮೊದಲ ಮೂರು ಸ್ಥಾನ ಅವರಿಗೆ ಸಿಕ್ಕಿದೆ ಎಂದು ನಾವುಗಳು ಉಹಿಸಿದೆವು.ನನಗೊಂಚೂರು ಪೆಚ್ಚು ಕೂಡ ಆಯಿತು. ಮೊದಲ ಸ್ಥಾನ ಗಳಿಸಬೇಕೆಂದು  ಕೊನೆ ಗಳಿಗೆಯಲ್ಲಿ ಹಗಲು ರಾತ್ರಿ ಓದಿದ್ದೆ.ನನ್ನ ತಂದೆ ತಾಯಿ ಅಷ್ಟೊಂದು ಓದಿದವರಲ್ಲ ಹಾಗಾಗಿ ಗಣಿತ ಮತ್ತು ಇಂಗ್ಲಿಷ್ ಅನ್ನು ನನಗೆ ಅರ್ಥ ಮಾಡಿಸುವವರು ಇರಲಿಲ್ಲ. ಸುಮಂಗಲ, ನಿಶಾ,ವಿಜಯರಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಹೇಳಿ ಕೊಡುವವರು ಇದ್ದರು.
ಹಾಗಾಗಿ ಅವರುಗಳೇ ಮೊದಲ ಮೂರು ಸ್ಥಾನ ಗಳಿಸಿರಬಹುದೆಂದು ಊಹಿಸಿದೆ.
ಹಾಗೆಯೇ ಮನೆಗೆ ಬಂದು ಹೇಳಿದೆ ಕೂಡ. ಕೇವಲ ಟಿಕ್ ಮಾರ್ಕ್ ಇತ್ತು ಅನ್ನುವ ಕಾರಣಕ್ಕೆ ಅವರಿಗೇ ಮೊದಲ ಮೂರು ಸ್ಥಾನ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನನ್ನ ತಂದೆ ತಾಯಿ ನನಗೆ ಧೈರ್ಯ ತುಂಬಿದರು.ಮರುದಿನ ಮಾರ್ಕ್ಸ್ ತಿಳಿಸುತ್ತೇವೆ ಎಂದು ಹೇಳಿದ್ದರು. ಹಾಗೆ ಬೆಳಗ್ಗೆಯೇ ಶಾಲೆಗೆ ಹೋದೆ.
ನನ್ನ ಊಹೆ ತಪ್ಪಾಗಿತ್ತು‌.ನಿರೀಕ್ಷೆಯಂತೆ ಸುಮಂಗಲಳಿಗೆ‌ ಮೊದಲ ಸ್ಥಾನ ಬಂದಿತ್ತು.ನಾನು ಎರಡನೇ ಸ್ಥಾನ ಪಡೆದಿದ್ದೆ.ಮತ್ತು  ಆಗಿನ ಕಾಲಕ್ಕೆ ಉತ್ತಮ ಅಂಕಗಳನ್ನು (408/600) ಪಡೆದಿದ್ದೆ.ಮನೆಯಲ್ಲಿ ಸಂಭ್ರಮವೋ ಸಂಭ್ರಮ.ನನ್ನ ಫಲಿತಾಂಶವನ್ನು ಹೇಳುವ ಸಲುವಾಗಿಯೇ ನನ್ನ ತಂದೆಯವರು ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬಂದಿದ್ದರು!
ಕೇರಳದ ಫಲಿತಾಂಶ ತಡವಾಗಿ ಬರುತ್ತದೆ ಕರ್ನಾಟಕ ರಾಜ್ಯದ ಫಲಿತಾಂಶ ಬೇಗ ಬರುತ್ತಾ ಇತ್ತು‌.ಹಾಗಾಗಿ ನಾವು‌ ಮೊದಲೇ ಅರ್ಜಿ ತಂದು ಇಡಬೇಕಾಗಿತ್ತಂತೆ ಈ ವಿಚಾರ ನಮಗೆ ಗೊತ್ತಿರಲಿಲ್ಲ. ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ನನಗೆ ಮಂಗಳೂರಿನ ಗವರ್ನಮೆಂಟ್ ಕಾಲೇಜಿನ ಅರ್ಜಿ ತಂದು ಕೊಟ್ಟರು.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಡ್ಮಿಶನ್ ಗೆ ಯತ್ನ ಮಾಡಿದೆನಾದರೂ ನನಗೆ ಅಲ್ಲಿ ಸೀಟ್ ಸಿಗಲಿಲ್ಲ. ಇದಾಗಿ ಆರೇ ವರ್ಷಗಳಲ್ಲಿ ನಾನು ಅದೇ ಸಂತ ಅಲೋಶಿಯಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಹುದ್ದೆಗೆ ಅಯ್ಕೆಯಾಗಿ ಉಪನ್ಯಾಸಕಿ ಆದ್ದು ನನ್ನ ಬದುಕಿನ ಒಂದು ಅವಿಸ್ಮರಣೀಯ ಘಟನೆ ಅಂದು ಕಲಿಕೆಗೆ ಅವಕಾಶ ಸಿಗದಿದ್ದರೂ ನಂತರ ಅದೇ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಸಲು ಅರ್ಹತೆ ಪಡೆದು ಕಲಿಸಿದ್ದು ಬದುಕಿನಲ್ಲಿ ಹೀಗೂ ಆಗುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು.
ಬೇರೆಡೆ ಸೀಟ್ ಸಿಗದ ಕಾರಣ ಗವರ್ನಮೆಂಟ್ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜಿಗೆ) ಸೇರಿದೆ
ನಮ್ಮ ತರಗತಿಯಲ್ಲಿ ತೊಂಬತ್ತೊಂಬತ್ತು ಶೇಕಡಾ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ಓದಿದವರಾಗಿದ್ದರು.ಆದರೆ ಇಲ್ಲಿನ ಉಪನ್ಯಾಸಕರು ಮಾತ್ರ ಸಾಕ್ಷಾತ್ ಇಂಗ್ಲೆಂಡ್ ನಿಂದ ಉದುರಿದವರ ಹಾಗೆ ಇದ್ದರು‌.ಒಂದಕ್ಷರ ಕನ್ನಡದಲ್ಲಿ ಹೇಳುತ್ತಿರಲಿಲ್ಲ.ಪರಿಣಾಮ ಹತ್ತನೆಯ ತರಗತಿಯಲ್ಲಿ ವಿಜ್ಞಾನ ದಲ್ಲಿ 99% ಅಂಕಗಳನ್ನು
ಗಳಿಸಿದ್ದ ನಾನು ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದುಳಿದೆ.
ಪ್ರಥಮ ಪಿಯುಸಿ ಕಿರು ಪರೀಕ್ಷೆಯಲ್ಲಿ ( ಕೆಮೆಷ್ಟ್ರಿ) ಯಲ್ಲಿ ನಾನೊಂದು ಪ್ರಶ್ನೆಯ ಅರ್ಥವನ್ನು ಕನ್ನಡದಲ್ಲಿ ತಿಳಿಸಲು ಅಲ್ಲಿ ಇನ್ವಿಜಲೇಷನ್ ಮಾಡುತ್ತಿದ್ದ ಪಟಿಕಲ್ ಶಿವರಾಮ ಭಟ್ ಎಂಬ ಉಪನ್ಯಾಸಕರಲ್ಲಿ ಕೇಳಿದೆ.ನಾನು ಉತ್ತರವನ್ನು ಕೇಳಿದ್ದಲ್ಲ‌.ಪ್ರಶ್ನೆಯ ಕನ್ನಡ ರೂಪವನ್ನು ಕೇಳಿದ್ದು.ಅದು ಹೇಳಲಾಗುವುದಿಲ್ಲ ಎಂದವರು ಹೇಳಿದರು! ಆದರೆ ವಿಜ್ಞಾನ ವನ್ನು ಕನ್ನಡ ಮಾಧ್ಯಮ ದಲ್ಲಿ ಕೂಡ ಬರೆಯಲು ಅವಕಾಶ ಇದೆ ಎಂದು ಗೊತ್ತಾದದ್ದು ನನಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದಾಗಲೇ.ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಇದ್ದವು.ಪಿಯುಸಿ ಅಂತಿಮ ಪರೀಕ್ಷೆ ಯ ಪ್ರಶ್ನೆ ಪತ್ರಿಕೆ  ಕನ್ನಡ ಮತ್ತು ಇಂಗ್ಲಿಷ್  ಭಾಷೆಗಳಲ್ಲಿ ಇರುವಾಗ ಪ್ರಥಮ ಪಿಯುಸಿ ಯ ಕಿರು ಪರೀಕ್ಷೆಯಲ್ಲಿ ನಾನು ಕೇಳಿದ ಒಂದು ಪ್ರಶ್ನೆ ಯ ಕನ್ನಡ ಅನುವಾದವನ್ನು ತಿಳಿಸುವುದು ಅಪರಾಧವಾಗುತ್ತಿರಲಿಲ್ಲ.ಅರ್ಥವಾಗದ ಭಾಷೆಯಲ್ಲಿ ಪಾಠ ಕೇಳುವುದು ಎಂತ ಹಿಂಸೆ ಗೊತ್ತಾ ? ಕ್ಷಣ ಕ್ಷಣ ಕೂಡ ಯುಗವಾಗಿ ಬಿಡುತ್ತದೆ.ಪಾಠ ಯಾವಾಗ ನಿಲ್ಲಿಸುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ.ನಿಮಿಷ ನಿಮಿಷಕ್ಕೂ ವಾಚು ನೋಡುತ್ತಾ ಇದ್ದೆ.ಸುಮ್ಮನೇ ಅರ್ಥವಾಗದ್ದನ್ನು ಕೇಳುವಾಗ ಟಾಯ್ಲೆಟ್ ಗೆ ಹೋಗಬೇಕು ಎಂದು ಅನಿಸುವುದು,ಬೆನ್ನು ನೋವಾಗುವುದು..ಹೀಗೆ ಹೊತ್ತು ಕಳೆಯಲಾಗದೆ ಒದ್ದಾಡುತ್ತಾ ಇದ್ದೆ.ನಮ್ಮ ತರಗತಿಯಲ್ಲಿ ಹೆಚ್ಚಿನವರು ಹತ್ತನೇ ತರಗತಿಯಲ್ಲಿ ವಿಜ್ಞಾನ ದಲ್ಲಿ 80% ಕ್ಕಿಂತ ಹೆಚ್ಚು ಅಂಕಗಳು ಪಡೆದವರೇ ಆಗಿದ್ದರು.
ಹೀಗೆ ಇಂಗ್ಲಿಷ್ ಭಾಷೆಯಲ್ಲಿ ಪಾಠ ಮಾಡಿದ್ದು ಅರ್ಥವಾಗದ್ದರ ಪರಿಣಾಮ
ದ್ವಿತೀಯ ಪಿಯುಸಿ ಯಲ್ಲಿ  ಹತ್ತನೇ ತರಗತಿ ತನಕ ನನ್ನ ಇಷ್ಟದ ಸಬ್ಜೆಕ್ಟ್ ಕೆಮೆಷ್ಟ್ರಿ ಮತ್ತು ಗಣಿತದಲ್ಲಿ ಫೈಲ್ ಆಗಿದ್ದೆ.ನಾನು ಮಾತ್ರವಲ್ಲ ಒಬ್ಬಿಬ್ಬರು ಬಿಟ್ಟರೆ ಉಳಿದವರೆಲ್ಲ ಫೈಲ್ ಆಗಿದ್ದರು.ಬಹುಶಃ 1% ಕ್ಕಿಂತಲೂ ಕಡಿಮೆ ಫಲಿತಾಂಶ ಇದ್ದಿರಬಹುದು. ಇಷ್ಟಾದರೂ ಅಲ್ಲಿನ ಉಪನ್ಯಾಸಕರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲವೇ? ಈಗ ನಲುವತ್ತು ಶೇಕಡಾ ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಅವರ ವಿಚಾರಣೆ ಇರುತ್ತದೆ,ಭಡ್ತಿ ಕಡಿತ ಮಾಡುತ್ತಾರೆ‌
ಇತ್ತ
ನನ್ನ ಮೇಲೆ ತುಂಬಾ ಭರವಸೆ ಇಟ್ಟಿದ್ದ ಹೆತ್ತವರಿಗೆ ಭ್ರಮೆ ನಿರಸನವಾಯಿತು.ಬೈಗಳ ಸುರಿ ಮಳೆಯಾಯಿತು.
ಅದೇ ಕ್ಷಣ ಓದಲು ಕುಳಿತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಹೇಗೋ ಬಾಯಿಪಾಠ ಮಾಡಿ ಎರಡೂ ವಿಷಯಗಳಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ತೆಗೆದೆ.
ಡಿಗ್ರಿಗೆ ಸೇರುವಾಗ ಆರ್ಟ್ಸ್ ತೆಗೆದುಕೊಳ್ಳಬೇಕೆಂದು ಬಯಸಿ ತಂದೆಯವರ ಜೊತೆಯಲ್ಲಿ ಕೆನರಾ ಕಾಲೇಜಿಗೆ ಹೋಗಿ ಸೀಟ್ ಕೇಳಿದೆ.ಮರು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಇದ್ದವು.ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದವು ಹಾಗಾಗಿ ಸೀಟ್ ಕೊಡಲು ಫ್ರಾಂಶುಪಾಲರು ಒಪ್ಪಿದರು‌.ಎಷ್ಟೋ ಫೀಸ ನ್ನು( ಎಷ್ಟು ಕೇಳಿದ್ದರೆಂದು ನನಗೆ ನೆನಪಿಲ್ಲ) ಕೊಡಬೇಕೆಂದು ಹೇಳಿದರು.ಆಗ ನನ್ನ ತಂದೆಯವರು ನಮಗೆ ಅಷ್ಟು ಫೀಸ್ ಕೊಡಲು ಕಷ್ಟವಾಗುತ್ತದೆ. ನಮಗೆ ಎರಡು ಖಂಡಿ ಅಡಿಗೆ ಆಗುವುದು.ಇದರಲ್ಲಿ ಐದು ಜನರ ಓದು ಆಗಬೇಕು, ದೊಡ್ಡ ಮಗಳ ಮದುವೆಯ ಸಾಲ ಇದೆ ಎಂದು ಹೇಳಿ ಫೀಸ್ ಕಡಿಮೆ ಮಾಡಲು ವಿನಂತಿಸಿದರು.ಆಗ ಪ್ರಾಂಶುಪಾಲರು ನನ್ನ ತಂದೆಯವರನ್ನು ಗದರಿದ್ದು ನನಗೆ ಭಯವಾದದ್ದು ಈಗಲೂ ನೆನಪಿದೆ,ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದು ದೊಡ್ಡ ದನಿಯಲ್ಲಿ ದಟ್ಟಿಸಿ ಕೇಳಿದ್ದರು ಅವರು.ಅಧಿಕಾರ ದುಡ್ಡು ‌ಮನುಷ್ಯನಲ್ಲಿ ಎಂತಹ ದರ್ಪ ತರುತ್ತದೆ ಎಂಬುದರ ಪ್ರತ್ಯಕ್ಷ ಅನುಭವ ಆದದ್ದು ನನಗೆ ಆಗಲೇ..ಅವರಿಗೆ ನಮ್ಮ ತಂದೆಯವರನ್ನು ಗದರುವ ಹಕ್ಕೇನಿತ್ತು ? ಫೀಸ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದಾದರೆ ಅದನ್ನು ಹಾಗೆಯೇ ಹೇಳಬಹುದಿತ್ತು.ಏನು ಮಾಡುವುದು ? ಬಡತನ ಎಲ್ಲ ಅನುಭವವನ್ನು ಮಾಡಿಸುತ್ತದೆ.ನಂತರ ನನ್ನ ತಂದೆಯವರನ್ನು ಅವಮಾನಿಸಿದ   ಆ ಕಾಲೇಜು ಬೇಡವೆಂದು  ನಾನು ನಿರ್ಧರಿಸಿದೆ. ಮತ್ತು ಗವರ್ನಮೆಂಟ್ ಕಾಲೇಜಿಗೆ ಸೇರಿ ಪದವಿಯಲ್ಲಿ ಆರ್ಟ್ಸ್ ತೆಗೆದುಕೊಂಡು ಓದುವುದೆಂದು ಆಲೋಚಿಸಿದ್ದೆ. ಆ ಪ್ರಾಂಶುಪಾಲರ ಪೂರ್ಣ ಹೆಸರು ನನಗೆ ನೆನಪಿಲ್ಲ.. ಉಪಾಧ್ಯಾಯ ಎಂದೇನೋ ಇತ್ತು‌.ಮುಂದೆ ಕಟೀಲಿನಲ್ಲಿ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‍‍್ಯಾಂಕ್ ತೆಗೆದಿದ್ದಾಗ ,ವಾರ್ಷಿಕೋತ್ಸವದಲ್ಲಿ ಅವರು ಅತಿಥಗಳಾಗಿ ಆಹ್ವಾನಿಸಲ್ಪಟ್ಟಿದ್ದು  ನನಗೆ ವಿಠಲ್ ರಾವ್ ಸ್ಮಾರಕ ಚಿನ್ನದ ಪದಕವನ್ನು ಕೂಡ ಕೊಟ್ಟಿದ್ದರು ಎಂದು ನೆನಪು‌.
ನಂತರ ನಾನು ಉಜಿರೆಯಲ್ಲಿ ಎಸ್ ಡಿ ಎಂ ಸಿ ಕಾಲೇಜಿನಲ್ಲಿ  ಮನಸಿಲ್ಲದ ಮನಸಿನಲ್ಲಿ ಬಿಎಸ್ಸಿ ಓದಿದೆ
ಅದು ಕೂಡ ಆಕಸ್ಮಿಕವಾಗಿ.
ನನ್ನ ತಮ್ಮ ಈಶ್ವರ ಭಟ್ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ತೆಗೆದಿದ್ದ.ಇವನನ್ನು ಉಜಿರೆ ಕಾಲೇಜಿಗೆ ಸೇರಿಸುವ ಸಲುವಾಗಿ ಸೀಟ್ ಕೇಳಲು ನಮ್ಮ ಸಂಬಂಧಿಕರಾದ ಅಲ್ಲಿನ ಫಿಸಿಕ್ಸ್ ಪ್ರಾಧ್ಯಾಪಕರಾದ ಗಣಪಯ್ಯ ಅವರನ್ನು ಅಣ್ಣ ಹೋಗಿ ಭೇಟಿ ಮಾಡಿದ.ಆಗ ಅವರು ಅಕ್ಕ ತಂಗಿಯರು ಏನು ಮಾಡುತ್ತಿದ್ದಾರೆ ಎಂದು ವಿಚಾರಿಸಿದರು‌.ಆಗ ಅಣ್ಣ ನನ್ನ ವಿಚಾರ ಹೇಳಿದ‌.ಆಗ ಅವರು ಅವಳೂ ಇಲ್ಲಿ ಬರಲಿ ಎಂದು ಹೇಳಿದರು‌.ವಿಜ್ಞಾನಕ್ಕೆ ಹೆಚ್ಚು ಸ್ಕೋಪ್ ಇದೆ ಹಾಗಾಗಿ ಬಿಎಸ್ಸಿ ಓದು ಎಂದು ತಿಳಿಸಿ ನನಗೆ ಬಿಎಸ್ಸಿ ಗೆ ಸೀಟ್ ಕೊಡಿಸಿದರು ‌ಅಲ್ಲೂ ಭಾಷೆಯದೇ ತೊಡಕು ನನಗೆ .ಅಂತೂ ಪಾಸಾಗಿ  ಸೀಟ್ ಕೊಡಿಸಿದ ಅವರ ಮರ್ಯಾದೆ ಉಳಿಸಿದ್ದೆ‌.
ಅಲ್ಲಿಂದ ನಾನು ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ. ಹಲವು ಅಡ್ಡಿ ಆತಂಕಗಳ ನಡುವೆಯೂ ಸಂಸ್ಕೃತ ಎಂಎಗೆ ಸೇರಿದೆ.ನನಗಲ್ಲಿ ರ‍‍್ಯಾಂಕ್ ತೆಗೆಯುವ ಗುರಿ ಇತ್ತು‌.ಆದರೆ ಅದನ್ನು ತಲುಪುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ‌.
ಅಲ್ಲಿ ಪದವಿಯಲ್ಲಿ ಸಂಸ್ಕೃತ ವನ್ನು ಮೇಜರ್ ವಿಷಯವಾಗಿ ತಗೊಂಡು ರ‍‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ರಮಿತಾ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಅವರ ಸಂಸ್ಕೃತ ಭಾಷೆ ಮತ್ತು ವಿಷಯದ ಕುರಿತಾದ ಜ್ಞಾನ ನೋಡಿ ನಾನು ಕಂಗಾಲಾಗಿದ್ದೆ.ಹಾಗಾಗಿ ಲೈಬ್ರರಿ ಯಿಂದ ಪುಸ್ತಕಗಳನ್ನು ತಂದು ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೆ..ಕಾಲು ವಾರ್ಷಿಕ ಪರೀಕ್ಷೆಗಳಲ್ಲಿಯೇ ಇತರರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದೆ.
ಆಗ ನನಗೆ ಮದುವೆಯಾಗಿತ್ತು.ಇತರೆ ಸಹಪಾಠಿಗಳು ಅವಿವಾಹಿತರಾಗಿದ್ದರು.ಆದರೆ ಇದೇನೂ ನಮ್ಮಲ್ಲಿ ಅಂತರ ತರಲಿಲ್ಲ. ನೀತಾ,ಕಮಲಾಯನಿ ನನಗೆ ಹೆಚ್ಚು ಆಪ್ತರಾಗಿದ್ದರು‌.ನನ್ನ ಸಹಪಾಠಿ ಗಳಿಗೆ ವಿವಾಹಾನಂತರದ ಬದುಕಿನ ಬಗ್ಗೆ ಒಂಚೂರು ‌ಕುತೂಹಲ ,ಆತಂಕ ಇತ್ತು‌.ಒಳ್ಳೆಯ ಗಂಡ ಸಿಕ್ಕಿದರೆ ಬದುಕು ಸ್ವರ್ಗ ಎಂಬುದನ್ನು ಸೂಕ್ಷ್ಮ ವಾಗಿ ತಿಳಿಸಿ ಅವರ ಕುತೂಹಲವನ್ನು ತಣಿಸಿ ಆತಂಕವನ್ನು ದೂರ ಮಾಡಿದ್ದೆ‌.ನಾನು ಸತ್ಯವನ್ನು ಹೇಳಿದ್ದೆ.ಪ್ರಸಾದ್ ಬಹಳ ಸಹೃದಯಿ ಆದ ಕಾರಣ ಬಡತನವಿದ್ದರೂ ಕೂಡ ನಮ್ಮ ಬದುಕು ಸ್ವರ್ಗ ಸದೃಶವೇ ಆಗಿತ್ತು ಆಗ.ಆಗ ಮಾತ್ರವಲ್ಲ ಈಗಲೂ ಸಿರಿವಂತಿಕೆ ಬಂದ ಮೇಲೆ ಕೂಡ, ಆದರೆ ಕಳೆದ ದಿನಗಳನ್ನು ನಾನು ಮರೆತಿಲ್ಲ ಹಾಗಾಗಿ ಬಡವರನ್ನು ಅಥವಾ ಯಾರನ್ನೂ ಕೂಡ ತಾತ್ಸಾರದಿಂದ ಕಾಣುವುದಿಲ್ಲ.
ಸಂಸ್ಕೃತ ಎಂಎ ಓದುವಾಗ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಎಲ್ಲರೂ ಬಡ ಮಧ್ಯಮ ಕುಟುಂಬದವರೇ ಆಗಿದ್ದೆವು.ವರ್ಷವಿಡೀ ಎರಡು ಮೂರು ಪ್ರತಿ ಡ್ರೆಸ್ ಗಳಲ್ಲೇ ಕಳೆದಿದ್ದೆವು.ಎಲ್ಲರೂ ಹಾಗೇ ಇದ್ದ ಕಾರಣ ನಮಗೆ ಅದೊಂದು ಕೊರತೆಯಾಗಿ ಕಾಣಿಸಿರಲಿಲ್ಲ.ಎಲ್ಲರಲ್ಲೂ ಸಾಧನೆಯ ಕನಸಿತ್ತು.
ನಮಗೆ ಮಧ್ಯಾಹ್ನ ಕಟೀಲಿನಲ್ಲಿ ದೇವಸ್ಥಾನದಲ್ಲಿ ಸುಗ್ರಾಸ ಭೋಜನದ ವ್ಯವಸ್ಥೆ ಇತ್ತು‌.ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇತ್ತು.ಮಧ್ಯಾಹ್ನ ಪೂಜೆಯಾದ ನಂತರದ ಊಟಕ್ಕೆ ಕಾದರೆ ಪ್ರಸಾದದ ಊಟ ಇತ್ತು‌ ಬ್ರಾಹ್ಮಣರಿಗೆ ಒಳಗೆ ಬೇರೆ ವ್ಯವಸ್ಥೆ ಇತ್ತು‌ ನಮ್ಮಲ್ಲಿ ಹೆಚ್ಚನವರು ಬ್ರಾಹ್ಮಣ ರಾದ ಕಾರಣ ನಾವು ಪೂಜೆಯ ಬಳಿಕದ ಪ್ರಸಾದದ ಊಟಕ್ಕೆ ಕಾಯುತ್ತಿದ್ದೆವು‌.ದಿನಾಲು ಪಾಯಸ ಇರುತ್ತಿತ್ತು. ಅಲ್ಲಿ ಒಂದು ಸಾರು ಮಾಡುತ್ತಿದ್ದರು.. ಅಷ್ಟು ರುಚಿಯಾದ ಸಾರನ್ನು ನಾನು ಬೇರೆಲ್ಲೂ ಉಂಡಿಲ್ಲ‌ಅಲ್ಲಿನ ಉಪ್ಪಿನಕಾಯಿಯೂ ಅಷ್ಟೇ, ಅತ್ಯದ್ಭುತ! ಪ್ರತಿ ಶುಕ್ರವಾರ ಗಂಜಿ ಇತ್ತು ಅದು ಕುಡ ಬಹಳ ರುಚಿಯಾದುದು‌ ಇನ್ನೂ ಚಂಡಿಕಾ ಹೋಮ ಏನಾದರೂ ವಿಶೇಷ ಇದ್ದರೆ ಪಾಯಸದ ಜೊತೆಗೆ ಸ್ವೀಟ್ ಕೂಡ ಇರುತ್ತಿತ್ತು ‌ಜೊತೆಗೆ ನಮಗೆ ಊಟ ದಕ್ಷಣೆಯಾಗಿ ಎರಡು ರುಪಾಯಿ ಐದು ರುಪಾಯಿ ಸಿಗುತ್ತಾ ಇತ್ತು‌.ಇಪ್ಪತ್ತೈದು ವರ್ಷಗಳ ಹಿಂದೆ ಎರಡು ರುಪಾಯಿ ಐದು ರುಪಾಯಿ ಗಳಿಗೆ ತುಂಬಾ ಬೆಲೆ ಇತ್ತು‌  ಹಾಗಾಗಿ ಆ ದಿನ ನಮಗೆ ಖುಷಿಯೋ ಖುಷಿ..ನಮ್ಮ ತರಗತಿಗಳನ್ನು ದೇವಸ್ಥಾನದ ಊಟದ ಸಮಯಕ್ಕೆ ಹೊಂದಾಣಿಕೆ ಮಾಡಿದ್ದೆವು.ಉಪನ್ಯಾಸಕರಾದ ನಾಗರಾಜ್ ಮತ್ತು ಪದ್ಮನಾಭ ಮರಾಠೆ ನಮ್ಮ ಜೊತೆಯಲ್ಲಿ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದರು ‌ಕೆಲವೊಮ್ಮೆ ಊಟ ಭಾರವಾಗಿ ತರಗತಿ ಬೇಡ ಎಂದರೆ ಅವರುಗಳು ಒಪ್ಪುತ್ತಿದ್ದರು‌.ಆಗ ಬಹಳ ಖುಷಿಯಿಂದ ಮನೆಗೆ ಬಂದು ನಿದ್ರೆ ಮಾಡುತ್ತಿದ್ದೆ ನಾನು,ಕಟೀಲಿನಲ್ಲಿ ಎರಡು ವರ್ಷ ಭರ್ಜರಿಯಾಗಿ  ರುಚಿಯಾದ ಸುಗ್ರಾಸ ಭೋಜನ ಸವಿದದ್ದು ನನ್ನ ಬದುಕಿನ ಸುವರ್ಣ ಗಳಿಗೆಗಳು.
ಮೊದಲ ವರ್ಷ ಎಂಎ ಯಲ್ಲೂ ಅಷ್ಟೇ, ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದೆವು.ಆದಿನಗಳು ಇಂದಿಗೂ ಸ್ಮರಣೀಯವಾಗಿವೆ
ಮೊದಲ ವರ್ಷದ ಕೊನೆಯಲ್ಲಿ ಡಾ.ಜಿ ಎನ್ ಭಟ್ಟರ ಪ್ರಯತ್ನದಿಂದಾಗಿ  ನಮಗೆಲ್ಲ ಒಂದೊಂದು ಸಾವಿರ ರುಪಾಯಿ ಸ್ಕಾಲರಚ ಶಿಪ್ ಬಂದಿತ್ತು.ಆರ್ಥಿಕ ತೊಂದರೆ ಇರುವಾಗ ಇಷ್ಟು ದೊಡ್ಡ ಮೊತ್ತ ಸ್ಕಾಲರ್ ಶಿಪ್ ದುಡ್ಡು ಬಂದಾಗ ಆದ ಸಂತಸವನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ‌.ಅ ಒಂದು ಸಾವಿರ ರುಪಾಯಿ ಗಳನ್ನು ಕೈಯಲ್ಲಿ ಹಿಡಿದುಕೊಂಡು ಅತ್ತು ಬಿಟ್ಟಿದ್ದೆ.ಉಳಿದವರದೂ ಅದೇ ಅವಸ್ಥೆ  .ಮೊದಲ  ವರ್ಷ ಎರಡನೇ ಎರಡು ಚೂಡಿದಾರ್ ನಲ್ಲಿ ಕಳೆದಿದ್ದೆ.ಅಲ್ಲಲ್ಲಿ ಹರಿದು ತೇಪೆ ಹಾಕಿದ್ದೆ‌‌.ಹಾಗಾಗಿ ಬಂದ ದುಡ್ಡಿನಲ್ಲಿ ಎರಡು ಡ್ರೆಸ್ ತೆಗೆದುಕೊಂಡು ಉಳಿದ ಹಣದಲ್ಲಿ ಬೇಕಾದ ಪುಸ್ತಕಗಳನ್ನು ಖರೀದಿಸಿದ್ದೆ‌.ಜೊತೆಯಲ್ಲಿ ನನಗೆ ಬಹಳ ಇಷ್ಟವಾದ ಮೈಸೂರು ಪಾಕನ್ನು ಸ್ವಲ್ಪ ಖರೀದಿಸಿ ತಿಂದಿದ್ದೆವು


Saturday 27 April 2019

ನನ್ನೊಳಗೂ ಒಂದು ಆತ್ಮವಿದೆ8. ನನಗೂ ಗರ್ಭಿಣಿಯರಿಗೆ ಸಹಜವಾದ ಬಯಕೆ ಇತ್ತು © ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನೊಳಗೂ ಒಂದು ಆತ್ಮವಿದೆ..8
ನನಗೂ ಗರ್ಭಿಣಿಯರಿಗೆ ಸಹಜವಾದ  ಬಯಕೆ ಇತ್ತು..
ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಘಟನೆ ಇದು.
ಅದಕ್ಕಿಂತ ನಾಲ್ಕು ಐದು ವರ್ಷಗಳ ಮೊದಲು ನನ್ನ ಕಲಿಕೆಯ ಕಾರಣಕ್ಕೆ ಜಗಳವಾಗಿ ನಾವು ಮನೆ ಬಿಟ್ಟು ಹೊರಗಡೆ ನಡೆದಿದ್ದರೂ ನಂತರ ನಮಗೆ ರಾಜಿಯಾಗಿತ್ತು.ವರ್ಷದಲ್ಲಿ ಒಂದೆರಡು ಸಲ ಮನೆಗೆ ಬಂದು ಹೋಗುತ್ತಿದ್ದೆವು.ಏನಾದರೂ ಪೂಜೆ ಪುನಸ್ಕಾರ, ಅಜ್ಜ ಅಜ್ಜಿಯ ತಿಥಿಗಳಿಗೂ ಬಂದು ಹೋಗುತ್ತಿದ್ದೆವು.
ಹಾಗೆಯೆ ಒಂದು ದಿನ ಪ್ರಸಾದ್  ಅಜ್ಜಂದೋ ಅಜ್ಜಿದೋ ತಿಥಿ ಇತ್ತು. ನಮ್ಮ ಮದುವೆಯಾಗಿ ನಾಲ್ಕೈದು ವರ್ಷ ಗಳಾಗಿದ್ದವು.ನನಗೆ ಎರಡು ಮೂರು ಸಲ ಮೂರು ನಾಲ್ಕು ತಿಂಗಳಾಗಿ ಗರ್ಭ ಹೋಗಿತ್ತು.ಮತ್ತೆ ನಿಪುಣ ವೈದ್ಯರ ಚಿಕಿತ್ಸೆ ಪಡೆಯುತ್ತಾ ಇದ್ದೆ.
ಆ ದಿನ ಅಜ್ಜನ  ತಿಥಿಯ ದಿನಕ್ಕಾಗುವಾಗ ನನಗೆ ಪೀರಿಯಡ್ ನ  ದಿನ ಮುಂದೆ ಹೋಗಿ ಐದು ದಿನಗಳಾಗಿದ್ದವು.ನನಗೆ ಸಣ್ಣಗೆ ವಾಂತಿ ಬರುವ ಹಾಗೆ ಹಿಂಸೆ ಶುರುವಾಗಿತ್ತು.ಹಾಗಾಗಿ ಮತ್ತೆ ನನ್ನ ‌ಮಡಿಲಲ್ಲಿ ಒಂದು ಚಿಗುರು ಕುಡಿ ಹುಟ್ಟುವುದೇನೋ ಎಂಬ ಸಂಶಯ ಉಂಟಾಗಿತ್ತು.ಹಾಗಾಗಿ  ಬಸ್ ಪ್ರಯಾಣ ಮಾಡಿ ಊರಿಗೆ ಹೋಗಿ ಬರುವುದು ಬೇಡ ಎನಿಸಿತ್ತು.
ಅದಕ್ಕೂ ಹದಿನೈದು ದಿನ ಮೊದಲು ಪ್ರಸಾದರಿಗೆ ಫೋನ್ ಮಾಡಿದ ಅತ್ತೆಯವರು "ಸುಮನಿಗೆ ( ಮೈದುನನ ಹೆಂಡತಿ) ದಿನ ತಪ್ಪಿದೆ "  ಎಂದು ಹೇಳಿದ್ದರು.ಹಾಗೆಂದರೇನೆಂದು ಪ್ರಸಾದ್ ನನ್ನಲ್ಲಿ ಕೇಳಿದಾಗ ಅವಳು ಒಂದೂವರೆ ತಿಂಗಳ ಸಣ್ಣ ಗರ್ಭಿಣಿ ಇರಬಹುದು ಎಂದು ನನಗೆ ಅರ್ಥವಾಗಿದ್ದು ಅದನ್ನೇ ಪ್ರಸಾದ್ ಗೆ ಹೇಳಿದ್ದೆ.
ಇದಾಗಿ ತಿಥಿಗೆ ಬಾ ಎಂದು ಅತ್ತೆ ಪ್ರಸಾದರನ್ನು ಫೋನ್ ಮೂಲಕ ಕರೆದಿದ್ದು,ಆಗ ಫೋನ್ ನಲ್ಲಿ ಮಾತನಾಡುವಾಗ ಸುಮ ಸಣ್ಣ ಗರ್ಭಿಣಿ( ಎರಡು ತಿಂಗಳ) ಎಂದು ಹೇಳಿದ್ದರು.
ನಾನು ಪ್ರಯಾಣ ಬೇಡ ಎಂದು ನಿರ್ಧರಿಸಿದ ಕಾರಣ ಪ್ರಸಾದ್ ಒಬ್ಬರೇ ಊರಿಗೆ ಅಜ್ಜ/ ಅಜ್ಜಿ ತಿಥಿಗೆ ಹೋಗಿದ್ದರು. ಅದು ಜುಲೈ ಅಗಸ್ಟ್  ತಿಂಗಳು ಇರಬೇಕು. ಹಲಸಿನ ಹಣ್ಣಿನ ಕಾಲ ಮುಗಿಯತ್ತಾ ಬರುವ ಸಮಯ.ಮನೆಯಲ್ಲಿ ಆ ವರ್ಷದ ಕೊನೆಯ  ಒಂದು ಹಲಸಿನ ಹಣ್ಣು ಇತ್ತಂತೆ.ಸುಮ "ನಾನು ನಂತರ ಆದರೆ ತಿನ್ನುವೆ " ಎಂದು ಹೇಳಿದಳಂತೆ.ಅದಕ್ಕೆ ಆ ಹಣ್ಣನ್ನು ತುಂಡು ಮಾಡಲಿಲ್ಲ .ಅಪರೂಪಕ್ಕೆ ಬಂದ ಮಗ ಪ್ರಸಾದ್ ಗೂ ಸಿಗಲಿಲ್ಲ. ನಾವು ಮಂಗಳೂರಿನಲ್ಲಿ ಇದ್ದ ಕಾರಣ ನಮಗೂ ಹಲಸಿನ ಹಣ್ಣು ಸಿಗುವುದು ಅಪರೂಪ ಆಗಿತ್ತು. ಊರಲ್ಲಿ ರುಚಿಯಾದ ಹಣ್ಣನ್ನು ತಿಂದು ಅಭ್ಯಾಸವಾದ ನಮಗೆ ಪೇಟೆಯಲ್ಲಿ ಕೊರೆದು ಮಾರುವ ಹಲಸಿನ ತೊಳೆಯ ಬಗ್ಗೆ ಒಲವಿರಲಿಲ್ಲ .ಹಾಗಾಗಿ ನಾವು ಹಲಸಿನ ಹಣ್ಣು ಇಷ್ಟವೇ ಆಗಿದ್ದರೂ ಪೇಟೆಯಲ್ಲಿ ಮಾರುವುದನ್ನು ತೆಗೆದುಕೊಳ್ಳುತ್ತಿರಲಿಲ್ಲ.ನಾನು ಎಪ್ರಿಲ್ ಮೇ ರಜೆಯಲ್ಲಿ ಅಮ್ಮನ ಮನೆಗೆ  ಹೋಗಿದ್ದಾಗ ಯಥೇಚ್ಛವಾಗಿ ಹಲಸಿನ ಹಣ್ಣು ತಿನ್ನುತ್ತಿದ್ದೆ‌.ಬರುವಾಗ ನಮಗೆ ಅಮ್ಮ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡಿ ಕೊಡುತ್ತಿದ್ದರು.ಮಂಗಳೂರಿನ ಮನೆಗೆ ತಂದಾಗ ಪ್ರಸಾದರಿಗೆ ಹಲಸಿನ ಹಣ್ಣು ಮತ್ತು ಕೊಟ್ಟಿಗೆ( ಗಟ್ಟಿ) ಸಿಗುತ್ತಾ ಇತ್ತು ಅಷ್ಟೇ, ಹಾಗಾಗಿ ಹಲಸಿನ ಹಣ್ಣು ಅವರಿಗೆ ಇನ್ನೂ ಅಪರೂಪ.
ತಿಥಿ ‌ಮುಗಿಸಿ ಅದೇ ದಿನ ರಾತ್ರಿಯೇ ಮಂಗಳೂರಿನ ನಮ್ಮ ಮನೆಗೆ ಬಂದವರು " ಮನೆಯಲ್ಲಿ ವರ್ಷದ ಕೊನೆ ಹಲಸಿನ ಹಣ್ಣು ಇದ್ದದ್ದು.ಅದನ್ನು ಚೊಚ್ಚಲ ಗರ್ಭಿಣಿ ಸುಮಳಿಗಾಗಿ ಮೀಸಲಿರಿಸದ್ದು ಕೂಡ ಹೇಳಿದರು.
ಮಗನಿಗೆ ಹಲಸಿನ ಹಣ್ಣು ಬಹಳ ಇಷ್ಟ ಎಂದೂ ಗೊತ್ತಿದ್ದು ಅದರಿಂದ ಒಂದು ತುಂಡು ಕತ್ತರಿಸಿ ತೆಗೆದು ಪ್ರಸಾದರಿಗೆ ಕೊಡಬಹುದಿತ್ತು..ಒಬ್ಬರಿಗೇ ಇಡೀ ಹಣ್ಣು ಬೇಕಾಗುತ್ತಾ..ಅಂತ ನನಗೂ ಅನಿಸಿತು. ನಮಗೆ ಮಕ್ಕಳಾಗುವಲ್ಲಿ ನಿದಾನ ಆದದ್ದು ಮತ್ತು ಎರಡು ಮೂರು ಬಾರಿ ಗರ್ಭ ಹೋಗಿದ್ದು ಗೊತ್ತಿರುವ ಕಾರಣ ಮನೆ ಮಂದಿಗೆ ಮೈದುನನ ಮಡದಿ ಗರ್ಬಿಣಿಯಾದದ್ದು ತುಂಬಾ ಸಂಭ್ರಮದ ವಿಷಯವಾಗಿ ಇದ್ದಿರಬಹುದು.ಹಾಗಾಗಿ ಹಲಸಿನ ಹಣ್ಣನ್ನು ಅವಳಿಗಾಗಿ ಮೀಸಲಿರಿಸಿದ್ದು ತಪ್ಪೇನೂ ಅಲ್ಲ..ಆದರೆ ನನಗೆ ಯಾಕೋ ತಕ್ಷಣವೇ ಹಲಸಿನ ಹಣ್ಣು ಬೇಕೆನಿಸಿತು.ತುಂಬಾ ಆಶೆ ಅಯಿತು.ಮನೆಯಲ್ಲಿ ಹಲಸಿನ ಹಣ್ಣನ್ನು ಒಂದೊಮ್ಮೆ ಕೊರೆದಿದ್ದರೆ ಪ್ರಸಾದರಿಗೆ ನಾಲ್ಕು ಸೊಳೆ ಸಿಗುತ್ತಿತ್ತೇ ಹೊರತು ನನಗೆ ಸಿಗುತ್ತಿರಲಿಲ್ಲ.
ಆಗ ಫೋನ್ ನಮ್ಮಲ್ಲಿ ಇರಲಿಲ್ಲ. ಅಮ್ಮನಿಗೆ ಹೇಳಿದ್ದರೆ ಮನೆಯ ಮರದಲ್ಲಿ ಉಳಿದಿದ್ದರೆ ಹಲಸಿನ ಹಣ್ಣನ್ನು ತಮ್ಮನ ಮೂಲಕ ಕಳುಹಿಸಿಕೊಡುತ್ತಾ ಇದ್ದರು ಖಂಡಿತಾ.
ಆದರೆ ಫೋನ್ ಇಲ್ಲದ ನಾನು ಅಮ್ಮನಲ್ಲಿ ಕೇಳುವುದು ಹೇಗೆ? ಮರುದಿನವೇ ತಾಯಿ ‌ಮನೆಗೆ ಹೋಗ ಬೇಕು ಅನಿಸಿತು.
ಮತ್ತೆ  ಪೀರಿಯಡ್ ಮುಂದೆ ಹೋಗಿ ಐದು ದಿನ ಗಳಾಗಿವೆ ,ಪ್ರಯಾಣ ಒಳ್ಳೆಯದಲ್ಲ ಎಂದು ನೆನಪಾಗಿ ಆಸೆಗೆ ತಡೆ ಹಾಕಿಕೊಂಡೆ.
ಹೌದು ನಮ್ಮ ನಿರೀಕ್ಷೆ ನಿಜವಾಗಿತ್ತು.ಮಗ ಅರವಿಂದ ನ್ನ ಮಡಿಲಲ್ಲಿ ಕುಡಿಯೊಡೆದಿದ್ದ.ನಲುವತ್ತು ದಿನವಾದ ಮೇಲೆ ವೈದ್ಯರಲ್ಲಿ ಹೋದೆ. ಲ್ಯಾಬ್ ನಿಂದ ಬಂದ ವರದಿ ನೋಡಿ ಪರೀಕ್ಷಿಸಿದ ವೈದ್ಯೆ ಡಾ.ಮಾಲತಿ ಭಟ್ ಗರ್ಭಿಣಿಯಾಗಿರುವುದನ್ನು ಧೃಢ ಪಡಿಸಿದರು.ಇ ಮೊದಲು ಮೂರು ಬಾರಿ ಗರ್ಭಪಾತವಾದ ಕಾರಣ ಈ ಬಾರಿ  ತುಂಬಾ ಜಾಗ್ರತೆಯಿಂದ ಇರಬೇಕು. ಬೆಡ್ ರೆಸ್ಟ್ ತೆಗೆದುಕೊಳ್ಳಬೇಕೆಂದು ತಿಳಿಸಿದರು.ಅಷ್ಟಾಗುವಾಗ ನನಗೆ ತುಂಬಾ ವಾಂತಿ ಹಿಂಸೆ ಶುರುವಾಗಿತ್ತು.ನಮ್ಮ ಬಾಡಿಗೆ ಮನೆಯ ಓನರ್ ಮನೆಯಲ್ಲಿ ಫೋನ್ ಇತ್ತು.ಯಾವಾಗಲಾದರೊಮ್ಮೆ ಅಮ್ಮ ಅಲ್ಲಿಗೆ ಕರೆ ಮಾಡಿದರೆ ಓನರ್ ಮಡದಿ ಶೈಲಜಾ( ನನಗೆ ಒಳ್ಳೆಯ ಸ್ನೆಹಿತೆಯಾಗಿದ್ದರು) ನಮಗೆ ಫೋನ್ ಬಂದದ್ದನ್ನು ತಿಳಿಸುತ್ತಿದ್ದರು.ಅವರ ಮನೆಗೆ ( ಅವರ ಮನೆ ನಮ್ಮ ‌ಬಾಡಿಗೆ ಮನೆಯ ಪಕ್ಕದಲ್ಲಿ ಇತ್ತು) ಹೋಗಿ ಅಮ್ಮನಲ್ಲಿ ಮಾತನಾಡುತ್ತಾ ಇದ್ದೆ.
ಹೀಗೆ ಕೆಲವು ದಿನ ಕಳೆದಾಗ ಅಮ್ಮನ ಫೋನ್ ಬಂತು. ಆಗ ನಾನು ಅಮ್ಮನಿಗೆ ವಿಷಯ ತಿಳಿಸಿದೆ.ಮತ್ತು ನಮ್ಮ ‌ಮನೆಯಲ್ಲಿ ( ಅತ್ತೆ ಮನೆಯಲ್ಲಿ) ಸುಮಳಿಗಾಗಿ ಹಲಸಿನ ಹಣ್ಣನ್ನು ತೆಗೆದಿರಿಸಿದ ಬಗ್ಗೆಯೂ ಹೇಳಿದೆ.ಆಗ ಅಮ್ಮ ನಮ್ಮ ಮನೆ ತೋಟದ ಹಲಸಿನ ಮರದಲ್ಲಿ ಕೊನೆಯ ಒಂದು ಹಣ್ಣು ಇದೆ .ನಾಳೆಯೆ ಕೊಟ್ಟಿಗೆ ( ಕಡುಬು/ ಗಟ್ಟಿ) ಮಾಡಿ ನಿನಗೆ ಕಳುಹಿಸುತ್ತೇನೆ,ಸ್ವಲ್ಪ ಹಣ್ಣಿನ ಸೊಳೆಗಳನ್ನು ಕೂಡ ಗಣೇಶನ( ನನ್ನ ಸಣ್ಣ ತಮ್ಮ ,ಮಂಗಳೂರಿನ ರೋಷನಿ ನಿಲಯ ಕಾಲೇಜಿನಲ್ಲಿ ಎಂ ಎಸ್ ಡಬ್ಯೂ ಓದುತ್ತಾ ಇದ್ದರು) ಎಂದು ಹೇಳಿದರು.ಅಮ್ಮ ಹೇಳಿದಂತೆ ಮಾಡಿದರು.ಅಮ್ಮ ಕಳುಹಿಸುವ ಹಲಸಿನ ಹಣ್ಣಿನ ಕೊಟ್ಟಿಗೆ ಮತ್ತು ಹಲಸಿನ ಹಣ್ಣಿಗಾಗಿ ಜಾತಕ ಪಕ್ಷಿಯಂತೆ ಕಾದಿದ್ದೆ.ತಮ್ಮ ತಂದ ತಕ್ಷಣವೇ ತಿನ್ನಲು ಹೊರಟೆ..ಆದರೆ ನನಗೆ ಬಹಳ ಇಷ್ಟವಾಗಿದ್ದ ಹಲಸಿನ ಹಣ್ಣಿನ ಪರಿಮಳಕ್ಕೆ ಹೊಟ್ಟೆ ತೊಳಸಿ ಬಂತು. ವಾಂತಿ ಆಯಿತು. ತಿನ್ನಲಾಗಲಿಲ್ಲ.
. ಹಲಸಿನ ಹಣ್ಣು ತಿನ್ನಬೇಕೆನಿಸಿದರೂ ತಿನ್ನಲಾಗದ ಹಿಂಸೆ.
ಹೆಣ್ಣಿನ ಬದುಕೇ ವಿಚಿತ್ರ. ಮಗು ಬೇಕೆಂದು ಬಯಸಿ ಚಿಕಿತ್ಸೆ ಪಡೆದು ಗರ್ಭ ಧರಿಸಿದ್ದರೂ ಒಡಲಲ್ಲಿ ಕುಡಿ ಹುಟ್ಟಿದಾಗ ದೇಹಕ್ಕೆ ಒಗ್ಗದೆ ಆಗುವ ಹಿಂಸೆಯೇ ವಾಂತಿ.
ಅಂತೂ ಇಂತೂ ನಾಲ್ಕು ತಿಂಗಳಾಗುವಾಗ ವಾಂತಿ ಕಡಿಮೆಯಾಗಿತ್ತು.ನಂತರ ತಿನ್ನುವ ಚಪಲ / ಬಯಕೆ ಶುರು ಆಯ್ತು.
ನನಗೆ ಬೆಡ್ ರೆಸ್ಟ್ ಇತ್ತು.ಹಾಗಾಗಿ ಬೇಕಾದದ್ದನ್ನು ಮಾಡಿ ತಿನ್ನುವಂತೆ ಇರಲಿಲ್ಲ. ಪ್ರಸಾದರಿಗೆ ಮಾಮೂಲಿ‌ ಅನ್ನ ಸಾರು, ಸಾಂಬಾರ್ ಮಾಡಲು ಮಾತ್ರ ಬರುತ್ತಿತ್ತು. ನನಗೆ ಬೇಕು ಬೇಕಾದ ತಿಂಡಿಗೇನು ಮಾಡುದು? ಅಮ್ಮ ಆಗಾಗ ತಮ್ಮನ ಮೂಲಕ ಅದು ಇದು ಮಾಡಿ ಕಳಹಿಸುತ್ತಾ ಇದ್ದರು.ನನ್ನ ಅತ್ತೆ ಮನೆಯಲ್ಲಿ ಯಾವಾಗಲೂ ಸ್ವೀಟ್ ತಿಂಡಿ ಮಾಡುತ್ತಲೇ ಇರುತ್ತಿದ್ದರು.
ಪ್ರಸಾದ್ ಹೋಟೆಲಿನಿಂದ ಆಗಾಗ ತಂದು ಕೊಡುತ್ತಾ ಇದ್ದರು‌.ನನಗೆ ಬೇಕೆನಿಸಿದ ಸಿಹಿ ತಿಂಡಿಗಳನ್ನು ಬೇಕರಿಯಿಂದ ತಂದು ಕೊಡುತ್ತಾ ಇದ್ದರು.ಆದರೂ ನನಗೆ ವಿಪರೀತ ತಿನ್ನುವ ಚಪಲ ಆಗ. ಅತ್ತೆಯವರದು ದೊಡ್ಡ ಕೈ ..ಊರಿನರಿಗೆಲ್ಲಾ ಕರೆದು ಕರೆದು ಕೊಡುತ್ತಾ ಇದ್ದರು.ಹಾಗೆ ನನಗೂ  ಕಳುಹಿಸಿಯಾರೆಂದು ಒಂದು ದೂರದ ಆಸೆ ಇತ್ತು .ಮಾವ ಮೈದುನ ಆಗಾಗ ಮಂಗಳೂರಿಗೆ ಮಂಗಳೂರಿಗೆ ಏನೋ ಕೆಲಸದಲ್ಲಿ ಬರ್ತಾ ಇದ್ದರು‌.ಆಗೆಲ್ಲ ಮಂಗಳೂರಿನಲ್ಲಿ ಮನೆ ಮಾಡಿ ಇದ್ದ ಅತ್ತೆಯ ತಮ್ಮನ ಮನೆಗೆ( ಪ್ರಸಾದರ ಸೋದರ ಮಾವನ ಮನೆ) ಮನೆಯಲ್ಲಿ ಅತ್ತೆ ಮಾಡಿದ ಸ್ವೀಟ್,ಚಕ್ಕುಲಿ ತಿಂಡಿ ತಿನಿಸುಗಳನ್ನು ಕಳುಹಿಸುತ್ತಾ ಇದ್ದರು. ನಾನು ಗರ್ಭಿಣಿ ಎಂದು ಅತ್ತೆಗೆ ಮನೆ ಮಂದಿಗೆ ತಿಳಿದಿತ್ತು..ಹಾಗಾಗಿ ನನಗೂ ತಿಂಡಿ  ಕಳುಹಿಸಿ ಯಾರೆಂದು ಕಾಯುತ್ತಾ ಇದ್ದೆ.ಕಾದದ್ದೇ ಬಂತು ಅಷ್ಟೇ..
ಪ್ರಸಾದರ ದೊಡ್ಡ ಸೋದರ ಮಾವನ ಮನೆ ಮಂಗಳೂರಿನ ನಮ್ಮ ಮನೆಯ ಹತ್ತಿರವೇ ಇತ್ತು.ಅರ್ಧ ಕಿಲೋಮೀಟರ್ ದೂರ ಕೂಡ ಇರಲಿಲ್ಲ ಮತ್ತು ಸೋದರ ಮಾವ ಮತ್ತು ಅವರ ಮಡದಿ ದಿನ ನಿತ್ತ ನಮ್ಮ ಮನೆ ಎದುರಿಗಿನ ರಸ್ತೆಯಲ್ಲಿಯೇ ಓಡಾಡುತ್ತಿದ್ದರು.ಪ್ರಸಾದರ ಸೋದರ ಮಾವನ ಹೆಂಡತಿಗೆ ನಾನಾಬಗೆಯ ತಿಂಡಿ ತಿನಿಸುಗಳನ್ನು ಮಾಡಲು ಬರುತ್ತಿತ್ತು.. ಯಾವಾಗಲೂ ಮಾಡುತ್ತಿದ್ದರು ಕೂಡ.ಹಾಗೆ ನನಗೆ ಒಂದು ದಿನವಾದರೂ ತಂದು ಕೊಟ್ಟಾರೆಂದು ಕಾಯತ್ತಾ ಇದ್ದೆ..ಅಲ್ಲೂ ಅಷ್ಟೇ ಕಾದದ್ದೇ ಬಂತು .. ಒಂದು ತುಂಡು ತಿಂಡಿ ಕೂಡ ಒಂದು ದಿನವೂ ಬರಲಿಲ್ಲ ‌.ನಮ್ಮ ‌ಮನೆ ಓನರ್‌ ಮಡದಿ ಶೈಲಜಾ ನನಗಾಗಿ ಬೇರೆ ಬೇರೆ ತಿಂಡಿ ಮಾಡಿ ನನಗೆ ತಂದು‌ಕೊಡುತ್ತಾ ಇದ್ದರು.ಸ್ವಂತ ಅಕ್ಕ ತಂಗಿಯಂತೆ ನನ್ನನ್ನು ನೋಡಿಕೊಂಡಿದ್ದರು ಅವರು.ನನಗೆ ಇದ್ದ ಬಯಕೆ ಅವರ ಮೂಲಕ ಈಡೇರುತ್ತಾ ಇತ್ತು.ಜೊತೆಗೆ ಅಮ್ಮನ ಮನೆಯಿಂದ ಆಗಾಗ ತಿಂಡಿ ತಿನಿಸುಗಳು ತಮ್ಮನ ಮೂಲಕ ಬರ್ತಾ ಇತ್ತು.ಪ್ರಸಾದ್ ದಿನಾಲು ಆಫೀಸಿಂದ ಬರುವಾಗ ನನಗಾಗಿ  ಮಸಾಲೆ ದೋಸೆ, ಪಪ್ಸ್,ಗೋಭಿ ಮಂಚೂರಿ ಲಡ್ಡು ಹೋಳಿಗೆ ಮೊದಲಾದವನ್ನು ಕಟ್ಟಿಸಿಕೊಂಡು ಬರುತ್ತಾ ಇದ್ದರು.ಸಂಜೆಯಾದರೆ ಪ್ರಸಾದರ ಬರುವನ್ನೇ ಕಾಯುತ್ತಾ ಇದ್ದೆ.ನಾನು ಎದ್ದು ಓಡಾಡುವಂತೆ ಇದ್ದರೆ ಅದು ಮಾಡಿ ತಿನ್ನಬಹುದಿತ್ತು..ಇದು‌ಮಾಡಿ ತಿನ್ನಬಹುದಿತ್ತು ಎಂದು ಮನದಲ್ಲಿಯೇ ಮಂಡಿಗೆ ಮೆಲ್ಲುತ್ತಾ ಇದ್ದೆ..ಏನು ಮಾಡುದು..ಎಂಟು ತಿಂಗಳು ತುಂಬುವವರೆಗೂ ವೈದ್ಯರು ಬೆಡ್ ಹೇಳಿದ್ದರು.ದಿನ ಬಿಟ್ಟು ದಿನ ಏನೋ ಇಂಜೆಕ್ಷನ್ ತಗೊಳ್ಳಬೇಕಿತ್ತು. ನಮ್ಮ ಮನೆಗೆ ತುಂಬಾ ಹತ್ತಿರದಲ್ಲಿ ನಮ್ಮ ಆತ್ಮೀಯರಾದ  ಬಡೆಕ್ಕಿಲ ಡಾಕ್ಟರ್ ಅವರ ಮನೆ ಇತ್ತು.ಅವರು ಮನೆಗೆ ಬಂದು ನನಗೆ ಇಂಜೆಕ್ಷನ್ ಕೊಟ್ಟು ಹೋಗುತ್ತಿದ್ದರು.ಒಮ್ಮೊಮ್ಮೆ ಅವರ ಮಡದಿ ಲಲಿತಕ್ಕ ಮಾಡಿ ಕೊಟ್ಟ ತಿಂಡಿಯನ್ನು ಜೊತೆಯಲ್ಲಿ ತಂದು ಕೊಡುತ್ತಿದ್ದರು. ಆರು ತಿಂಗಳಾದಾಗ ನನಗೆ ವೈದ್ಯರು ನಿದಾನಕ್ಕೆ ಒಂದರೆಡು ನಿಮಿಷ ನಡೆಯಲು ಅನುಮತಿ ಕೊಟ್ಟಿದ್ದರು.ಹಾಗಾಗಿ ನಂತರ ನಾನೇ ಅವರ ಮನೆಗೆ ಹೋಗಿ ಇಂಜೆಕ್ಷನ್ ಹಾಕಿಸಿಕೊಂಡು ಮನೆಗೆ ಬರುತ್ತಿದ್ದೆ.ಹೀಗೆ ಏಳು ತಿಂಗಳ ಕಾಲ ದಿನ ಬಿಟ್ಟು ದಿನ ಇಂಜೆಕ್ಷನ್ ತಗೊಂಡಿದ್ದೆ‌.ಇಂಜೆಕ್ಷನ್ ‌ಮತ್ತು ಸಿರಿಂಜನ್ನು ಪ್ರಸಾದ್ ಮೆಡಿಕಲ್ ಶಾಪ್ ನಿಂದ ತಂದು‌ಕೊಡುತ್ತಿದ್ದರು..
ಏಳು ತಿಂಗಳ ಕಾಲ ಎರಡು ದಿನಕ್ಕೊಮ್ಮೆ ನನಗೆ ಇಂಜೆಕ್ಷನ್ ನೀಡಿದ ಬಡೆಕ್ಕಿಲ ಡಾಕ್ಟರ್ ನನ್ನಿಂದ ಒಂದು ನಯಾ ಪೈಸೆ ಪೀಸ್ ಕೂಡ ತೆಗೆದುಕೊಂಡಿಲ್ಲ..ಕಷ್ಟಕಾಲದಲ್ಲಿ ನೆರವಾದ ಅವರನ್ನು ಯಾವತ್ತಿಗೂ ನಾನು‌ ಮರೆಯಲಾರೆ.ಅವರ ಮಗ ನಂದ ಕಿಶೋರ್ ಈಗ ಖ್ಯಾತ ಯೂರೋಲಜಿಷ್ಟ್ ಆಗಿದ್ದಾರೆ‌.
ನಾನು ತಿಂಗಳಿಗೊಮ್ಮೆ  ಗೈನಕಾಲಜಿಷ್ಟ್  ಡಾ.ಮಾಲತಿ ಭಟ್ ಅವರನ್ನು  ಕಾಣಬೇಕಿತ್ತು.ಆಗೆಲ್ಲ ನನಗೆ ಜೊತೆಯಾದವರು  ಓನರ್ ಮಡದಿ ಸ್ನೇಹಿತೆ ಶೈಲಜಾ. ಬಾಡಿಗೆ ಕಾರಿನಲ್ಲಿ ಹೋಗಿ ಬರುತ್ತಿದ್ದೆವು.ಮನೆಯಿಂದ ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಎರಡು ಮೂರು ಕಿಮೀ ದೂರ  ಅಷ್ಟೇ, ಆದರೆ ಬೆಡ್ ರೆಸ್ಟ್ ಇದ್ದ ಕಾರಣ ಆಟೋ ದಲ್ಲಿ ಹೋಗುವಂತಿರಲಿಲ್ಲ..ದುಬಾರಿ ದುಡ್ಡು ನೀಡಿ ಕಾರಿನಲ್ಲಿ ಹೋಗಬೇಕಾಗಿತ್ತು‌.ಆದರೆ ಶೈಲಜಾ ಅವರ ಪರಿಚಯದ ಓರ್ವ  ಬಾಡಿಗೆಗೆ ಕಾರು ಓಡಿಸುವ  ಕಾರ್ ಡ್ರೈವರ್ ನಮಗೆ ಸ್ವಲ್ಪ  ಕಡಿಮೆ ಬಾಡಿಗೆ  ತಗೊಳ್ಳುತ್ತಾ ಇದ್ದರು.
ಹಾಗಾಗಿ ಅವರಿಗೆ ಶೈಲಜಾ ತಮ್ಮ ‌ಮನೆಯ ಲ್ಯಾಂಡ್‌ ಲೈನ್ ಪೋನ್ ನಿಂದ ಫೋನ್ ಮಾಡಿ ಬರಹೇಳುತ್ತಿದ್ದರು‌.ನಾವಿಬ್ಬರು ಹೋಗಿ ಬರುತ್ತಾ ಇದ್ದೆವು.
ಎಂಟು ತಿಂಗಳು ತುಂಬಿದ ನಂತರ ನನಗೆ ಕಾರಿನಲ್ಲಿ ಆಯಾಸವಾಗದಂತೆ ಮೂವತ್ತು ನಲುವತ್ತು ಕಿಮೀ ಪ್ರಯಾಣ ಮಾಡಬಹುದು, ಮನೆಯಲ್ಲೂ ಜಾಗರೂಕತೆಯಿಂದ ಓಡಾಡಬುದು ಎಂದು ಡಾಕ್ಟರ್ ತಿಳಿಸದ್ದರು.ನಮ್ಮಲ್ಲಿ ಗರ್ಬಿಣಿಗೆ ಗಂಡನ ಮನೆಯಲ್ಲಿ ಏಳು ತಿಂಗಳಿನಲ್ಲಿ ಕೋಡಿ ಹೋಮ/ ಸೀಮಂತ ಮಾಡುವ ಪದ್ಧತಿ ಇದೆ.ನಾನು ಈ ಬಗ್ಗೆ ಅತ್ತೆಯವರಲ್ಲಿ ಹೇಳಿದಾಗ ಅವರು ಅದಕ್ಕೆ ಒಪ್ಪಲಿಲ್ಲ. ಯಾಕೆಂದರೆ ಅವರ ಸಂಬಂಧಿಕರಲ್ಲಿ ಯಾರಿಗೋ ಒಬ್ಬರಿಗೆ ಸೀಮಂತ ಮಾಢಿದ ನಂತರ ಗರ್ಭಪಾತ ಆಯಿತಂತೆ! ಹಾಗೆ ನನಗೂ ಆದರೆ ಅವರಿಗೆ ಅವಮಾನವಂತೆ!
ನನ್ನ ಮೈದುನನ ಮಡದಿ ಕೂಡ ಚೊಚ್ಚಲ ಗರ್ಭಿಣಿ ಆಗಿದ್ದಳು ಎಂದು ಹೇಳಿದ್ದೆನಲ್ಲ
ಅವಳಿಗೆ ಮನೆಯಲ್ಲಿ ಭಾರೀ ವಿಜೃಂಭಣೆಯಿಂದ ಕೋಡಿ ಹೋಮ/ ಸೀಮಂತ ಮಾಡಿದರು.ಪ್ರಸಾದ್ ಹೋಗಿದ್ದರು.ಅವರ ಕೈಯಲ್ಲಿ ಕೂಡ ಮಾಡಿದ ಒಂದು ತುಂಡು ಸ್ವಿಟ್ ನನಗೆ ಕಳುಹಿಸಿರಲಿಲ್ಲ. ಗರ್ಭ ಪಾತವಾಗಿ ಅವಮಾನ ಪಡುವವರಿಗೆ ಸ್ವಿಟ್ ಕೊಡುವುದು ವೇಸ್ಟ್ ಎಂದು ಭಾವಿಸಿರಬಹುದು.
ನಂತರ ನನ್ನ ತಂದೆಯವರು ಅತ್ತೆ ಮಾವನ ಮನೆಗೆ ಹೋಗಿ ಮಗಳಿಗೆ ಕೋಡಿ ಹೋಮ ಮಾಡಿ ನಮ್ಮ ಮನೆಗೆ ( ತಮದೆ ಮನೆಗೆ) ಕಳುಹಿಸಿಕೊಡಿ ಎಂದು ಕ್ರಮಪ್ರಕಾರ ಕೇಳಿದಾಗ ಬೇರೆ  ವಿಧಿಯಿಲ್ಲದೆ ಕಾಟಾಚಾರಕ್ಕೆ ಯಾವ ಸಂಬಂಧಿಕರಿಗೂ ತಿಳಿಸದೆ ಸಣ್ಣಕೆ ಮನೆಯಲ್ಲಿ ಕೋಡಿ ಹೋಮ ಮಾಡಿದರು.ಹುಟ್ಟುವ ಮಸರಿಯಾಗಿ ಸ್ವೀಟ್  ಕೂಡ ಮಾಡಲಿಲ್ಲ. ನಂತರ ನಾನು ತಂದೆ ಮನೆಗೆ ಹೋಗಿ ಎರಡು ದಿನ ಇದ್ದು ಕಾರಿನಲ್ಲಿ ಮಂಗಳೂರಿನ ನಮ್ಮ ಮನೆಗೆ ಬಂದೆ.ಪ್ರಸವದ ನಂತರ ತಂದೆ ಮನೆಗೆ ಹೊಗುವುದು ಎಂದು ನಿರ್ಧರಿಸಿದೆ.
1998 ರ ಮೇ ತಿಂಗಳಿನ 14-15 ರ ಒಳಗೆ ಪ್ರಸವ ಆಗಬಹುದು, ಸಿಸೇರಿಯನ್ ಆಗಬೇಕು ಎಂದು ವೈದ್ಯರು ಮೊದಲೇ ಹೇಳಿದ್ದರು.ಮರುದಿವಸದಿಂದ ಅಮ್ಮ ನನ್ನ ಜೊತೆಯಲ್ಲಿ ಬಂದು ಇರುತ್ತೇನೆ ಎಂದು ಹೇಳಿದ್ದರು.
1998 ಎಪ್ರಿಲ್ 28 ರಂದು ಬೆಳಗಿನಿಂದ ನನಗೆ ಏನೋ ಹಿಂಸೆ ,ಪ್ರಸಾದ್ ಆ ದಿನ ಆಫೀಸ್ ಕೆಲಸದಲ್ಲಿ ಮಣಿಪಾಲ್  ಹೋಗಿದ್ದರು. ನಾನು ಶೈಲಜಾ ರಲ್ಲಿ ನನಗೆ ಏನೊ ಹಿಂಸೆ ಅಗುತ್ತಿದೆ ಎಂದು ಹೇಳಿದೆ.ಆಗ ಅವರು ನಾವು ಆಸ್ಪತ್ರೆಗೆ ಹೋಗಿ ಬರುವ ಎಂದು ಹೇಳಿ ಬಾಡಿಗೆ  ಕಾರಿನ ಡ್ರೈವರ್ ಗೆ ಫೋನ್ ಮಾಡಿ ಬರಲು ಹೇಳಿದರು.ಕಾರು ಬರುವಷ್ಟರಲ್ಲಿ  ಶೈಲಜಾ ಮನೆಗೆ ಯಾರೋ ನೆಂಟರು ಬಂದರು.ಆಗ ಶೈಲಜಾ ನೀವು ಕಾರಲ್ಲಿ ಹೋಗಿ ,ಸ್ವಲ್ಪ ಹೊತ್ತು ಬಿಟ್ಟು ( ಬಂದನೆಂಟರಲ್ಲಿ ಮಾತನಾಡಿ ಅವರಿಗೆ ಕಾಫಿ ಮಾಡಿ ಕೊಟ್ಟು ಅವರು ಹೋದ ಕೂಡಲೇ )  ನಾನು ಅಟೋದಲ್ಲಿ  ಆಸ್ಪತ್ರೆಗೆ ಬರುತ್ತೇನೆ ಎಂದು ನನ್ನನ್ನು ಕಾರು ಹತ್ತಿಸಿ ಕಳುಹಿಸಿದರು .
ನಾನು ಕಾರು ಇಳಿಯುತ್ತಿದ್ದಂತೆ ವೈದ್ಯರಾದ ಡಾ.ಮಾಲತಿ ಭಟ್ ಹೊರಗೆ ಹೋಗಲು ಅವರ ಕಾರಿನ ಬಳಿಗೆ ಬರುತ್ತಾ ಇದ್ದರು‌.ಪರಿಣತ ವೈದ್ಯರಾದ ಅವರು ನನ್ನನ್ನು ಒಂದು ಕ್ಷಣ ದಿಟ್ಟಿಸಿ ನೋಡಿದರು‌.ಮತ್ತೆ ಅವರು ಕಾರು ಹತ್ತದೆ ಒಳಗೆ ಬಾ ಎಂದು ನನ್ನನ್ನು ಕರೆದು  ಪರೀಕ್ಷಾ ಕೊಠಡಿಗೆ ಹೋದರು.ನನ್ನನ್ನು ಪರೀಕ್ಷೆ ಮಾಡಿದ  ತಕ್ಷಣವೇ ಅಲ್ಲಿನ ಮುಖ್ಯ ನರ್ಸಿಗೆ ಏನೋ ಹೇಳಿದರು‌, ಮಗುವಿನ ಹಾರ್ಟ್ ಬೀಟ್ ನಿದಾನವಾಗಿದೆ ..ಕೂಡಲೇ ಸಿಸೇರಿಯನ್  ಮಾಡಬೇಕು ಎಂದು ಹೇಳಿದರು.ಅಷ್ಟರಲ್ಲಿ ಶೈಲಜಾ ಬಂದಿದ್ದರು. ಅವರು ಸಹಿ ಮಾಡಿದರು. ಮುಖ್ಯ ನರಸ್ ನನ್ನನ್ನು ಅಪರೇಷನ್ ಕೊಠಡಿಗೆ ಕರೆದುಕೊಂಡು ಹೋದರು‌.ಏನೇನೋ ಇಂಜೆಕ್ಷನ್ ಕೊಟ್ಟರು.ಅಪರೇಷನ್ ಸಮಯದಲ್ಲಿ ಹಾಕುವ ಹಸಿರು ಗೌನ್ ಹಾಕಿದರು‌.ಅಪರೇಷನ್ ಟೇಬಲ್ ನಲ್ಲಿ ಮಲಗಿಸಿದರು‌.ಕಣ್ಣಗೆ ಮಂಪರು ಆವರಿಸಿ ಕಣ್ಣು‌ಮುಚ್ಚಿದೆ.ಪೂರ್ತಿಯಾಗಿ ಎಚ್ಚರ ತಪ್ಪಿರಬೇಕು..ಇದ್ದಕ್ಕಿದ್ದಂತೆ ಉಸಿರಾಟಕ್ಕೆ ತುಂಬಾ ಕಷ್ಟವಾಯಿತು ಎಚ್ಚರವಾಯಿತು.ಕಣ್ಣು ತೆರೆದು ನೋಡಿದಾಗ ಹಸಿರು ಬಟ್ಟೆ ತೊಟ್ಟಿದ್ದ ವೈದ್ಯರು ಮಸುಕು ಮಸುಕಾಗಿ ಕಾಣಿಸಿದರು.‌ಬೆನ್ನಲ್ಲಿಯೇ ತೀವ್ರ ಹೊಟ್ಟೆ ನೋವಾಗಿ ಅಮ್ಮಾ ಎಂದು ದೊಡ್ಡಕೆ ಬೊಬ್ಬೆ ಹಾಕಿದೆ..ಆಗ ವೈದ್ಯರು ನನ್ನ ಬಾಯಿಯನ್ನು ಬಲವಂತವಾಗಿ ತೆರೆದು  ಏನೋ ಟ್ಯೂಬನ್ನು ತುರುಕಿದರು‌ ತೀವ್ರ ನೋವಾಗುತ್ತಾ ಇತ್ತು.ನನ್ನನ್ನು ಒಂದಿನಿತು ಮಿಸುಕಾಡದಂತೆ ಸಿಸ್ಟರ್ ಗಳು ಗಟ್ಟಿಯಾಗಿ ಹಿಡಿದಿದ್ದರು. ಅವಳಿಗೆ ಎಚ್ಚರ ಅಗಿದೆ ಅನಾಸ್ತೇಶಿಯಾ ಜಾಸ್ತಿ ಮಾಡಿ ಅಂತ ಏನೋ ಹೇಳಿದು ಕೇಳಿಸಿತು..ಜೊತೆಗೆ ಉಸಿರಾಟಕ್ಕೆ  ಸ್ವಲ್ಪ ಅರಾಮ ಎನಿಸಿತು.ಇಷ್ಟೆಲ್ಲಾ ಹತ್ತು ಹದಿನೈದು ಸೆಕುಂಡ್ ಗಳ ಕಾಲದಲ್ಲಿ ಅಗಿತ್ತು‌.ಮತ್ತೆ ನನಗಡ ಮಂಪರು ಅವರಿಸಿ ನಿದ್ದೆ ಬಂತು..
ಮತ್ತೆ ಯಾರೋ ಒಬ್ಬರು ನನ್ನನ್ನು ಕುಲುಕಿ,ತಲೆಗೆ ಬಡಿದು ,ಕೈಗೆ ಚಿವುಟಿ ಲಕ್ಷ್ಮೀ ಕಣ್ಣು ತೆರೆಯಿರಿ..ಅಪರೇಷನ್ ಆಯಿತು. ನಿಮಗೆ‌ಮಗ ಹುಟ್ಟಿದ್ದಾನೆ ನೋಡಿ ಎಂದು ಮತ್ತೆ ಮತ್ತೆ ಹೇಳುತ್ತಾ ಇದ್ದರು..ಹೇಗೋ ಕಣ್ಣು ತೆರೆದೆ..ಮತ್ತೆ ಹಸಿರು ಗೌನ್ ತೊಟ್ಟ ವೈದ್ಯರು ಕಾಣಿಸಿದರು.ನಾನು ಹೇಳುದು ಕೇಳಿಸ್ತಿದೆಯಾ ? ನಿಮಗೆ  ಗಂಡು ಮಗು ಹುಟ್ಟಿದೆ ..ಕಣ್ಣು ‌ಮುಚ್ಚಬೇಡಿ..ನಿಮ್ಮ ಹೆಸರು ಹೇಳಿ ಎಂದು ಹೇಳಿದರು..ನಾಲಗೆ ತೊದಲುತ್ತಾ ಇತ್ತು..ಹೇಗೋ ಲಕ್ಷ್ಮೀ ಎಂದು ನನ್ನ ಹೆಸರು ಹೇಳಿದೆ.. ನನಗೆ ಉಸಿರಾಡಲು ತುಂಬಾ ಕಷ್ಟ ಅಗುತ್ತಾ ಇತ್ತು‌.ಅಲ್ಲಿ ಆ ವೈದ್ಯರು ಇನ್ಯಾರಿಗೋ ಅವರಿಗೆ ಎಚ್ಚರಾಗಿದೆ. ಆಕ್ಸಿಜನ್ ಕಂಟಿನ್ಯೂ ಮಾಡಿ‌..ಅವರಿಗೆ ಉಸಿರಾಟದ ತೊಂದರೆ ಇದೆ ಅಂತ ಮೊದಲೇ ಹೇಳ್ಬೇಕಿತ್ತು..ಎಂದೇನೋ ಹೇಳುತ್ತಾ ಇದ್ದರು.ಮತ್ತೆ  ನನ್ನ ಮುಖಕ್ಕೆ ಏನನ್ನೋ ಗಟ್ಟಿಯಾಗಿ ಹಿಡಿದರು( ಶ್ವಾಸಕೋಶಕ್ಕೆ ಆಕ್ಸಿಜನ್ ಟ್ಯೂಬ್  ಹಾಕಿದ್ದನ್ನು ತೆಗೆದು ಆಕ್ಸಿಜನ್  ಮಾಸ್ಕ್ ಹಾಕಿದ್ದು ಎಂದು ನನಗೆ ನಂತರ ಸಿಸ್ಟರ್ ಹೇಳಿ ತಿಳಿಯಿತು) ಮಂಪರು ಅವರಿಸಿ ಮತ್ತೆ ಕಣ್ಣು‌ಮುಚ್ಚಿದೆ.
ಈ ನಡುವೆ ಶೈಲಜಾ ಪ್ರಸಾದ್ ಆಪೀಸ್ ಗೆ ಫೋನ್ ಮಾಡಿ ಅವರನ್ನು ಬರಲು ಹೇಳಿದ್ದರು ನನ್ನ ಅಮ್ಮನ ಮನೆಗೂ ಪೋನ್ ಮಾಡಿ ವಿಷಯ ತಿಳಿಸಿದ್ದರು..ಪ್ರಸಾದ್ ಬಂದ ಮೇಲೆ (ಅವರ ಮನೆಗೆ ಯಾರೋ ಬಂದ ಕಾರಣ) ಮನೆಗೆ ಹೋಗಿದ್ದರು. ಸಿಸೇರಿಯನ್ ಮುಗಿಯುವಷ್ಟರಲ್ಲಿ ಪ್ರಸಾಸ್ ಆಸ್ಪತ್ರೆಗೆ ಬಂದಿದ್ದರು. ನನ್ನ ‌ಮಗ ಮುದ್ದು ಬೊಮ್ಮಟೆಯನ್ನು ಬಿಳ ಬಟ್ಟೆಯಲ್ಲಿ  ಬೆಚ್ವನೆ ಸುತ್ತಿ ಪ್ರಸಾದ್ ಕೈಗೆ ಸಿಸ್ಟರ್ ತಂದು ಕೊಟ್ಟಿದ್ದರು. ನನಗೆ ಉಸಿರಾಟದ ತೊಂದರೆ ಕಾಣಿಸಿದ ಕಾರಣ ಐಸಿಯುವಿಗೆ ಶಿಪ್ಟ್ ಮಾಡಿದ್ದರು.
ಪ್ರಸಾದ್ ಅವರ ಜೀವನದಲ್ಲಿ ಮೊದಲ ಬಾರಿಗೆ ಆಗಷ್ಟೇ ಹುಟ್ಟಿದ ಮಗುವನ್ನು ನೋಡಿದ್ದು ಮತ್ತು ಎತ್ತಿಕೊಂಡದ್ದು.ಅವರಿಗೆ ಮೊದಲು ಇವನು ಅತ್ತರೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲವಂತೆ.
ರಾತ್ರಿ ಅಗುವಷ್ಟರಲ್ಲಿ ಅಮ್ಮ ಮತ್ತು ತಮ್ಮ ಗಣೇಶ ಬಂದರು.
ನನ್ನ ಉಸಿರಾಟ ಸುಮಾರಾಗಿ ತಹಬದಿಗೆ ಬಂದು ಆಕ್ಸಿಜನ್ ಮಾಸ್ಕ್ ನೊಂದಿಗೆ  ನನ್ನನ್ನು ರಾತ್ರಿ ವಾರ್ಡ್ ಗೆ ಶಿಪ್ಟ್ ಮಾಡಿದರು‌.ಆಗಲೂ ಮಂಪರು ನನಗೆ. ಅಮ್ಮ ಮಗನನ್ನು ನನ್ನ ಮಗ್ಗುಲಲ್ಲಿ ಮಲಗಿಸಿದರು..ಮುದ್ದು ಬೊಮ್ಮಟೆ ಕಣ್ಣು ಮುಚ್ಚಿ ನಿದ್ರೆ ಮಾಡುತ್ತಾ ಇತ್ತು..
ನಾಳೆ ಮತ್ತೆ ಇಪ್ಪತ್ತು ವರ್ಷಗಳ ನಂತರದ ಎಪ್ರಿಲ್ 28 ಬರುತ್ತಿದೆ ..ಮಗನ ಬರ್ತ್ ಡೇ ನಾಳೆ....ಸಹೃದಯಿ ಮಗನನ್ನು ನನಗೆ ದಯಪಾಲಿಸಿ ಅಮ್ಮನ ಪದವಿಯನ್ನು ಕೊಟ್ಟ ದೇವರಿಗೆ ನಾನು ಆಭಾರಿಯಾಗಿದ್ದೇನೆ ಜೊತೆಗೆ ನೋಟ ಮಾತ್ರದಲ್ಲಿಯೇ ನನಗೆ ಏನೋ ಸಮಸ್ಯೆ ಆಗಿದೆ ಎಂಬುದನ್ನು ಗಮನಿಸಿ ಹೊರಗೆ ಹೋಗಲು ಕಾರಿನ ಬಳಿ ಬಂದು ,ಹಿಂದೆ ಹೋಗಿ ನನ್ನನ್ನು ಕರೆದು ಪರೀಕ್ಷಿಸಿ ತಕ್ಷಣವೇ ಸಿಸೇರಿಯನ್ ಮಾಡಿ ನನ್ನನ್ನು ನನ್ನ ಮಗನನ್ನು ಬದುಕಿಸಿ ಕೊಟ್ಟ ಡಾ.ಮಾಲತಿ ಭಟ್ ಅವರನ್ನು ಕೂಡ ಸದಾ ನೆನೆಯುತ್ತೇನೆ.
ಆದರೆ ನನಗೆ ಇಂದಿಗೂ ಒಂದು ಅರ್ಥವಾಗದ ವಿಚಾರ ಒಂದಿದೆ. ಮೈದುನನ ಮಡದಿಗಾಗಿ ಅಪರೂಪಕ್ಕೆ ಬಂದ ಮಗನಿಗೂ ಹಲಸಿನ ಹಣ್ಣನ್ನು ಕೊಡದೆ ಮೀಸಲಿರಿಸಿದ ಅತ್ತೆ ನನಗೂ ಬಯಕೆ ಇದೆ ಎಂಬುದನ್ನೇಕೆ ಮರೆತರು? ನನ್ನ ಅತ್ತೆಯವರು ನಮ್ಮ ಸಂಬಂಧಿಕರಲ್ಲಿ ಯಾರೇ ಬಸುರಿಯಾದರೂ ಅವರನ್ನು ಮನೆಗೆ  ಕರೆದು ಔತಣದ ಊಟ ತಯಾರು ಮಾಡಿ ಬಡಿಸುತ್ತಿದ್ದರು‌‌.ತಮ್ಮ ತಂಗಿಯರಿಗೆ ನೀಡದ ತಿಂಡಿ ತಿನಿಸುಗಳೇ ಇಲ್ಲ ..ಆದರೂ ಆ ಸಂಬಂಧಿಕರಿಗೆ  ಅತ್ತೆಯ ಸೊಸೆಗೆ( ನನಗೆ) ಏನಾದರೂ ತಿಂಡಿ ಮಾಡಿ  ಕೊಡಬೇಕೆಂದು ಅನಿಸಲಿಲ್ಲ..ಅತ್ತೆಯ ತಮ್ಮ ತಮ್ಮನ ಮಡದಿಯ ಮನೆ ನಮ್ಮ ಮನೆ ಹತ್ತಿರದಲ್ಲಿ ಇದ್ದು ದಿನಾಲೂ ಮನೆ ಮುಂದಿನ ರಸ್ತೆಯಲ್ಲಿ ಓಡಾಡುತ್ತಿದ್ದರೂ ಒಂದು ದಿನವಾದರೂ ತಮ್ಮ ಮನೆಗೆ ಒಂದು ಹೊತ್ತಿನ ಊಟಕ್ಕೆ ಕರೆಯಬೇಕೆನಿಸಲಿಲ್ಲ..? ತಿಂಡಿ ತಂದು ಕೊಡಬೇಕೆನಿಸಲಿಲ್ಲ ಯಾಕೆ ? ಅದಕ್ಕಿಂತ ಮೊದಲು ನನಗೆ ಎರಡು ಮೂರು ತಿಂಗಳಾಗಿ ಗರ್ಭ ಹೋಗಿತ್ತು.. ಹಾಗಾಗಿಯೂ ಈ ಬಾರಿಯೂ ಉಳಿಯಲಾರದೆಂಬ ತಾತ್ಸಾರ ಇತ್ತೇ ? ಒಂದೊಮ್ಮೆ ಗರ್ಭಪಾತವೇ ಅಗುವುದಾದರೂ ಕೂಡ ಸಹಜವಾದ ಬಯಕೆ ಆಗ ಕೂಡ ಇರುತ್ತದಲ್ಲ...ಅದಿವರಿಗೆ ಅರ್ಥವಾಗಿಲ್ಲವೇಕೆ? ಹೇಗೂ ಗರ್ಭ ಹೋಗುತ್ತದೆ,ಹಾಗಾಗಿ ಇವಳಿಗೆ ತಿಂಡಿ ತಿನಿಸುಗಳು ಕೊಟ್ಟರೆ ವೇಸ್ಟ್  ಎಂದು ಕೊಂಡರೇ ? ನನಗೆ ಇಂದಿಗೂ ಅರ್ಥವಾಗಿಲ್ಲ..ನನ್ನ  ಅಮ್ಮ ಅಕ್ಕನ ಹೊರತಾಗಿ ಯಾರೂ ನನಗ ಬಸುರಿ ಸಮ್ಮಾನ( ಔತಣ) ಬದಲಿಗೆ ತಿಂಡಿ ತಿನಿಸುಗಳನ್ನು ತಂದು ಕೊಟ್ಟದ್ದಿಲ್ಲ.
ಇರಲಿ ,ಕೊಡದಿದ್ದುದೇ ಒಳ್ಳೆಯದಾಯಿತು.
ಕೊಟ್ಟವರ ಕೈ ಯಾವಾಗಲೂ ಮೇಲೆ,ತಗೊಂಡವರ ಕೈ ಯಾವಾಗಲೂ ಕೆಳಗೆ ಇರುತ್ತದೆ.ಇವರುಗಳು ಕೊಡದ ಕಾರಣ ನನ್ನ ಕೈ ಕೆಳಗಾಗಲಿಲ್ಲ .ಹಾಗಾದಂತೆ ದೇವರು ಕಾದಿರಬೇಕು.ಈವತ್ತು ಹವ್ಯಕಾಂಗಣ ವಾಟ್ಸಪ್ ಗ್ರೂಪಿನಲ್ಲಿ  ಹಲಸಿನ ಹಣ್ಣಿನ ಚಿತ್ರ ಹಾಕಿದ್ಷರು.ನೋಡುತ್ತಲೇ ಇವೆಲ್ಲ ನೆನಪಾಗಿ ಬರೆದೆ..ಕಾಕತಾಳೀಯ ಎಂಬಂತೆ ಮಗನ ಹುಟ್ಟು ಹಬ್ಬ ನಾಳೆಯೇ ಇದೆ.
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ ,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ




Wednesday 24 April 2019

ನನ್ನೊಳಗೂ ಒಂದು ಆತ್ಮವಿದೆ 7: ಒಂದೇ ಒಂದು ಬಾರಿ ಅತ್ತೆಯವರಿಂದ ಮೆಚ್ಚುಗೆ ಪಡೆದಿದ್ದೆ © ಡಾ.ಲಕ್ಷ್ಮೀ ಜಿ ಪ್ರಸಾದ


ನನಗೆ ಎರಡನೇ ವರ್ಷ ಬಿಎಸ್ಸಿ ಓದುತ್ತಿದ್ದಾಗಲೇ ಸುಮಾರಾಗಿ ಅಡಿಗೆ ಮಾಡಲು ಬರ್ತಾ ಇತ್ತು.ತಂದೆ ಮನೆಯಲ್ಲಿ ತುಂಬಾ ಶುದ್ಧದ ಆಚರಣೆ ಇದ್ದ ಕಾರಣ ಅಮ್ಮ ಹೊರಗೆ ಕುಳಿತಾಗ ತಿಂಗಳಲ್ಲಿ ಮೂರು ದಿನ ಅಡುಗೆ ಮಾಡುವುದು ನನಗೆ ಇಷ್ಟ  ಇಲ್ಲದೇ ಇದ್ದರೂ ಅನಿವಾರ್ಯ ಆಗಿತ್ತು.ರುಚಿಯಾಗದಿದ್ದರೆ ಬೇರೆಯವರ ಸಂಗತಿ ಬಿಡಿ,ನನಗೇ ಮೊದಲಿಗೆ ಊಟ ತಿಂಡಿ ಸೇರದೆ ಸೋಲುವವಳು ನಾನೇ..ಹಾಗಾಗಿ ಅಮ್ಮನಲ್ಲಿ ಕೇಳಿ ಕೇಳಿ ಮಾಡಿ ಮಾಡಿ ಸುಮಾರಾಗಿ ಚೆನ್ನಾಗಿಯೇ ಅಡುಗೆ ಮಾಡಲು ಬರ್ತಾ ಇತ್ತು..ಮದುವೆ ಆಗಿ ಬಂದ ಮೇಲೂ ನನಗೆ ಅಡುಗೆ ಮಾಡಲು ಇಷ್ಟ ಇತ್ತು..ಆದರೆ ಮನೆ ಮಂದಿ ಯಾಕೋ ನನ್ನನ್ನು ಗುಡಿಸಿ ಒರಸಲು,ತೋಟದಿಂದ ಸೋಗೆ ಎಳೆದು ತರಲು ,ಹುಲ್ಲು ಕಿತ್ತು ತರಲು ನೇಮಿಸಿದ ಹೆಣ್ಣಾಳಿನ ಹಾಗೆ ಸೊಸೆ ,ಹೆಣ್ಣಾಳಿಗೆ ಸಂಬಳ ಕೊಡಬೇಕು, ಇವಳಿಗೆ ಅದೂ ಅಗತ್ಯ ಇಲ್ಲ ಎಂದು ಭಾವಿಸಿದ್ದರು  ಕಾಣಬೇಕು.ನನ್ನನ್ನು ಅದೇ ರೀತಿಯ ಕೆಲಸಕ್ಕೆ ಹಚ್ಚುತ್ತಾ ಇದ್ದರು..ಜೊತೆಗೆ ಅತ್ತಿಗೆಯ ಹರಿದ ರವಕೆ ,ಹರಿದ ಚೂಡಿದಾರ್ ಪ್ಯಾಂಟ್ ಹೊಲಿಯಲು,ಅವಳ ತಲೆಯ ಹೇನು ಹೆಕ್ಕಿ ತೆಗೆದು  ಕುಟ್ಟುವ ಕೆಲಸವೂ ನನಗೆ ಮೀಸಲಾಗಿತ್ತು..ನಾನು ಚಿಕ್ಕಂದಿನಲ್ಲೇ ಅತ್ಯತ್ಸಾಹದ ಸ್ವಭಾವ.. ಹಾಗಾಗಿ ಚೆನ್ನಾಗಿ ಕೆಲಸ ಮಾಡಿ ಅತ್ತೆ ಮಾವ ಮನೆ ಮಂದಿಯಿಂದ ಮೆಚ್ಚುಗೆ ಪಡೆಯ ಬೇಕೆಂಬ ಹುಚ್ಚು ಬೇರೆ..ಆದರೆ ನನಗೆ ತಂದೆಯ ಮನೆಯಲ್ಲಿ ನಾನಾಗಿ ಸ್ವಂತ ಆಸಕ್ತಿಯಿಂದ ಯಾವಾಗಲಾದರೊಮ್ಮೆ,ಸೋಗೆ ಎಳೆದು ತರುವುದು,ಅಡಿಕೆ ಹೆಕ್ಕುವುದು ಹುಲ್ಲು ತರುವುದು ಬಿಟ್ಟರೆ ಹೆಚ್ಚು ಕಡಿಮೆ ಬೇರೆ ಮನೆ ಕೆಲಸವನ್ನು ಮಕ್ಕಳಲ್ಲಿ ನಮ್ಮ ತಂದೆ ತಾಯಿ ಮಾಡಿಸುತ್ತಾ ಇರಲಿಲ್ಲ.ದನದ ಹಾಲು ಕರೆಯುವ ಕೆಲಸವೂ ಅಷ್ಟೇ, ಯಾವಗಲಾದರೊಮ್ಮೆ ನನ್ನ ಆಸಕ್ತಿಯಿಂದ ನಾನಾಗಿ ಮಾಡುತ್ತಿದ್ದೆನೇ ಹೊರತು ಮನೆಯಲ್ಲಿ ಹೆಚ್ಚೇನೂ ಕೆಲಸವನ್ನು ಅಮ್ಮ ನಮ್ಮಲ್ಲಿ ಮಾಡಿಸುತ್ತಾ ಇರಲಿಲ್ಲ.. ನಮ್ಮ ಮದುವೆಯಾದ ನಾಲ್ಕನೇ ದಿನಕ್ಕೆ ಗಂಡನ ಮನೆಯಲ್ಲಿ ದಿಂಡು ಕಾರ್ಯ ಆಯಿತು ( ಒಂದು ಹೋಮ ಪೂಜೆ ಬಹುಶಃ ಶೋಭನಕ್ಕೆ ಸಂವಾದಿ ಕಾರ್ಯ )
ಅದಕ್ಕೆ ಮೊದಲೇ ನನ್ನಲ್ಲಿ ಅತ್ತೆಯವರು ಹಸು ಕರೆಯಲು ( ಹಾಲು ಹಿಂಡಲು) ಬರುತ್ತಾ ಎಂದು ಕೇಳಿದ್ದರು.. ತಂದೆ ಮನೆಯಲ್ಲಿ ನನಗೆ ಇಷ್ಟ ಬಂದ ದಿನ ಚಂದದ ಕರುವಿನಲ್ಲಿ ಆಟವಾಡುವ ಸಲುವಾಗಿ ಅಥವಾ ಹಸುವಿನ ಮೇಲೆ ಏನೋ ಒಂದು ಪ್ರೀತಿಗೆ ಹಾಲು ಹಿಂಡುತ್ತಿದ್ದೆನಲ್ಲ..ಅತ್ತೆ ಕೇಳಿದ್ದೇ ತಡ ಹ್ಹು ಬರುತ್ತೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದೆ..ಹೇಳಿದ್ದೇ ತಡ ಅಂತ ದಿಂಡಿನ ಮರುದಿನ ನನ್ನ ಅತ್ತೆಯವರು ಬೆಳಗ್ಗೆ ಬೇಗ ಎಬ್ಬಿಸಿ ದೊಡ್ಡ ಚೊಂಬು (ಅಥವಾ ಸಣ್ಣ ಕೊಡಪಾನ ಅನ್ನಬಹುದೋ ಏನೋ) ಹಸುಗಳ ಹಾಲು ಹಿಂಡಲು ಹೇಳಿದರು..ಆ ಚೊಂಬನ್ನು ನೋಡಿಯೇ ನನಗೆ ಗಾಭರಿ ಆಗಿತ್ತು..ನಮ್ಮ ತಂದೆ ಮನೆಯಲ್ಲಿ ಕರುವಾಗಿದ್ದನಿಂದ ನಾನೇ ಎತ್ತಿ ಮುದ್ದಾಡಿದ ಕರುವೇ ಗಡಸಾಗಿ( ಹೆಣ್ಣು ಹಸುವಾಗಿ ) ಕರು ಹಾಕಿದ ಹಸುಗಳ ಹಾಲನ್ನು ಹಿಂಡುತ್ತಿದ್ದೆ.ಊರ ಹಸುಗಳು ಹೆಚ್ಚು ಹಾಲುಕೊಡುವುದಿಲ್ಲ..ಮೂರು ನಾಲ್ಕು ಕುಡ್ತೆ ಹೆಚ್ಚಂದರೆ ಆರು ಕುಡ್ತೆ( ಒಂದು ಲೀಟರ್ ಅ ) ಹಾಲು ಕೊಡುತ್ತಾ ಇದ್ದವು.ಮತ್ತು ನಮ್ಮ ತಂದೆ ಮನೆಯಲ್ಲಿ ಏಕ ಕಾಲಕ್ಕೆ ಹಾಲು ಕೊಡುವ ಎರಡು ಮೂರು ಹಸುಗಳು ಇರುತ್ತಿರಲಿಲ್ಲ.. ಅಕಸ್ಮಾತ್ ಎಲ್ಲ ಗಡಸುಗಳೂ ಒಂದೇ ಸಮಯದಲ್ಲಿ ಅಪರೂಪಕ್ಕೆ ಒಂದಕ್ಕಿಂತ ಹೆಚ್ಚು ಹಾಲು ಕರೆಯುವ( ಹಿಂಡುವ) ಹಸು  ಇದ್ದರೂ ಇದ್ದರೂ ನಾನು ಕರೆಯತ್ತಾ ( ಹಾಲು ಹಿಂಡುತ್ತಾ ) ಇದ್ದಿದ್ದು  ಒಂದನ್ನು ಮಾತ್ರ..ಅದೂ ಅಮ್ಮ ಹಸುವನ್ನು ಹಟ್ಟಿಯಿಂದ ಹೊರಗಡೆ ತಂದು ಜಗಲಿಯಲ್ಲಿ ಕಟ್ಟಿದಾಗ ಮಾತ್ರ..ನನಗೋ ಸೆಗಣಿ ಅಂದರೆ ಆಗ ಮಾತ್ರವಲ್ಲ ಈಗ ಕೂಡ ತುಂಬಾ ಅಸಹ್ಯ..ಅದರ ವಾಸನೆ ಬಣ್ಣ ಎರಡೂ ನನಗಾಗಗದು..ಹಾಗಾಗಿ ಹೊರಗೆ ಜಗಲಿಯಲ್ಲಿ ಕಟ್ಟಿದಾಗ ಹಸುವಿನ ಸೆಗಣಿ ಮೆಟ್ಟಬೇಕಾಗಿ ಬರುವುದಿಲ್ಲ.. ಹಟ್ಟಿಯಲ್ಲಿ ಹಸುಗಳ ಸೆಗಣಿ ಇರುತ್ತದೆ..ಅದರ ಮೇಲೆ ಸ್ವಲ್ಪ ಸೊಪ್ಪು ಹಾಕಿ ಕಾಲಿಗೆ ಬಟ್ಟೆಗೆ ತಾಗದಂತೆ ಮಾಡಿ ಹಾಲು ಹಿಂಡುತ್ತಾರೆ.
ಅತ್ತಯವರು ನನಗೆ ದೊಡ್ಡ ಚೊಂಬು ಕೊಟ್ಟಾಗಲೇ ಹಸು ಅಷ್ಟು ಹಾಲು ಕೊಡುತ್ತೆ ಅಂತ ನನಗೆ ಅಂದಾಜು ಆದ್ದು. ಜರ್ಸಿ ಹಸುಗಳು ಮೂರು ನಾಲ್ಕು ಲೀಟರ್ ಹಾಲು ಕೊಡುತ್ತವೆ‌.ಅತ್ತೆ ಮನೆಯಲ್ಲಿ ಇದ್ದದ್ದು ಇಂತಹ ನಾಲ್ಕಾರು ದೊಡ್ಡ ಜಾತಿಯ ಜರ್ಸಿ ಹಸುಗಳು..ಹಾಲು ಹಿಂಡಲು ಬರುತ್ತೆ ಎಂದು ಒಪ್ಪಿಕೊಂಡು ಆಗಿತ್ತಲ್ಲಾ..ಬೇರೆ ವಿಧಿ ಇಲ್ಲದೆ ಸೆಗಣಿಯ ಮೇಲೆ ಹೇಗೋ ಕುಳಿತು ಹಾಲು ಹಿಂಡಲು ಶುರು ಮಾಡಿದೆ..ನಿಯಮಿತವಾಗಿ ಹಾಲು ಹಿಂಡಿ ಅಭ್ಯಾಸವಿಲ್ಲದ ನನಗೆ ದೊಡ್ಡ ಚೊಂಬಿ‌ನ. ಕಾಲಂಶದಷ್ಟು ಹಾಲು ಹಿಂಡುವಷ್ಟರಲ್ಲಿ ಕೈಗಳು ಸೋತು ಹೋದವು..ಪೂರ್ತಿ ಹಿಂಡಲು ಸಾಧ್ಯವಾಗದೆ ಕರುವನ್ನು ಹಾಲು ಕುಡಿಯಲು ಬಿಟ್ಟು ನಾನು ಎದ್ದು ನಾನು ಹಟ್ಟಿಯಿಂದ ಮನೆಗೆ ಬಂದೆ..(ಹಟ್ಟಿಗೂ ಮನೆಗೂ ಐವತ್ತು ಮೀಟರ್ ಗಳಷ್ಟು ಅಂತರ ಇತ್ತು ) ಇಷ್ಟು ಬೇಗ ಆಯ್ತಾ ? ಎಂದು ಅತ್ತೆ ತುಸು ಆಶ್ಚಯ್ರದಿಂದ  ಕೇಳಿ ನನ್ನ ಕೈಲ್ಲಿದ್ದ ಹಾಲಿನ ಚೊಂಬನ್ನು ತೆಗೆದುಕೊಂಡು ನೋಡಿದರು..ಹಾಲು ಇಷ್ಟೇ ಸಿಕ್ಕಿದ್ದಾ ಕೇಳಿದರು..ಕೈ  ನೋವಾಗಿ ಅರ್ಧದಲ್ಲೇ ಬಿಟ್ಟು ಬಂದೆ ಎಂದು ಹೇಳಲು ನನ್ನ ಸ್ವಾಭಿಮಾನಕ್ಕೆ ಪೆಟ್ಟಾಗಿ ( ನನಗೆ ಹಾಲು ಹಿಂಡಲು ಬರುತ್ತೆ ಎಂದು ಹಿಂದಿನ ದಿನವಷ್ಟೇ ಬಹಳ ಆತ್ಮವಿಶ್ವಾಸದಿಂದ ಹೇಳಿ ಕೊಂಡಿದ್ಸೆನಲ್ಲ)  ಹ್ಹೂ ಎಂದು ಹೂಗುಟ್ಟಿದೆ..ಅತ್ತೆ ತಕ್ಷಣವೇ ಕರುವನ್ನು ಹಾಲು ಕುಡಿಯಲು ಬಿಟ್ಟು ಬಂದೆಯಾ ? ಎಂದು ಗಾಭರಿ ಯಿಂದ ಕೇಳಿದರು.ಹೌದು ಎಂದು ಹೇಳಿದೆ. ಗಡಿಬಿಡಿಯಿಂದ ಅದೇ ಹಾಲಿನ ಚೊಂಬು ಹಿಡಿದುಕೊಂಡು ಹಟ್ಟಿಗೆ ಓಡಿದರು.. ಓಡಿ ಎಂತ ಪ್ರಯೋಜನ? ಕರು ಚಂದಕ್ಕೆ ಬಾಲ ಎತ್ತಿ ಯಥೇಚ್ಛವಾಗಿ ಹಾಲು ಕುಡಿದು ಸಂಭ್ರಮಿಸುತ್ತಾ ಇತ್ತು..ಆಗ ನನ್ನ ಅತ್ತೆಯವರ ಮುಖದ ಭಾವ ಈಗ ನೆನೆಸಿದರೆ ನಗು ಬರುತ್ತದೆ.😀 ನನ್ನ ಅತ್ಯುತ್ಸಾಹದ ಮಾತು ಕೇಳಿ ನನ್ನನ್ನು ನಾಲ್ಕು ಐದು ಲೀಟರ್ ಹಾಲು ಕೊಡುವ ಹಸುವಿನ ಹಾಲು ಹಿಂಡಲು ಹೇಳಿದ ತನ್ನ ಮೂರ್ಖತನಕ್ಕೆ ಪೆಚ್ಚಾದರೋ..ಹಾಲು ಸಿಗದ ಬಗ್ಗೆ ಚಿಂತೆ ಆಯಿತೋ( ದಿನ ನಿತ್ಯ ಕೆ ಎಮ್ ಸಿಗೆ ನಿಗಧಿತ ಪ್ರಮಾಣದ ಹಾಲು ಮಾರಾಟ ಮಾಡಬೇಕಾದ ನಿರ್ಬಂಧ ಇತ್ತು ,ಅಥವಾ ಇವರುಗಳು ಹಾಗೆ ನಿರ್ಬಂಧ ಹಾಕಿ ಕೊಂಡಿದ್ದರೋ ಗೊತ್ತಿಲ್ಲ!),ಕರುವಿಗೆ ಅಜೀರ್ಣ ಆದರೆ ಎಂದು ಭಯಪಟ್ಟರೋ..ಹಾಲು ಹಿಂಡಲು ಬರುತ್ತೆ ಎಂದ ನನ್ನ ಮೂರ್ಖತನಕ್ಕೆ ಮರುಕ ಉಂಟಾಯಿತೋ..ಸಂಬಂಧಿಕರೆಲ್ಲ ಸೊಸೆಗೆ ಹಾಲು ಹಿಂಡಲು ಬರುತ್ತಾ ಎಂದು ಕೇಳಿದರೆ ಹೇಗೆ ಉತ್ತರಿಸುವುದು ಎಂದು ಆತಂಕವಾಯಿತಾ..ಮನೆ ಮಂದಿಗೆ ಏನು ಹೇಳುವುದೆಂದು ತೋಚಲಿಲ್ಲವಾ ಗೊತ್ತಿಲ್ಲ.. ಅವರ ಮುಖದಲ್ಲಿ ಏಕ ಕಾಲದಲ್ಲಿ ಹರಡಿದ ಭಾವನೆಗಳನ್ನು ಊಹಿಸಲು ನನಗೆ ಆಗ ಮಾತ್ರವಲ್ಲ ಈಗಲೂ ಸಾಧ್ಯವಾಗುತ್ತಾ ಇಲ್ಲ..
ಅದಾಗಿ ನಾವು  ಒಂದೆರಡು ಅಲ್ಲಿ ಇಲ್ಲಿ ಔತಣಕ್ಕೆ ಹೋಗಿ ಬಂದೆವು.ನಂತರ ನಾನು ಕಾಲೇಜಿಗೆ ಹೊರಟು ನಿಂತೆ.ಇಂಗ್ಲಿಷ್ ಪರೀಕ್ಷೆ ಪ್ರಿಪರೇಟರಿ ಬರೆಯಲು ಬಾಕಿ ಇತ್ತು..ಒಂಚೂರು ಓದಿದ ಹಾಗೆ ಮಾಡಿ ಕಾಲೇಜಿಗೆ ಬಂದೆ.ಆಗ ನಾನು ಮತ್ತು ತಮ್ಮ ಈಶ್ವರ ಭಟ್ ಉಜಿರೆಯಲ್ಲಿ  ಪೆಜತ್ತಾಯರು ಓದುವ ಮಕ್ಕಳಿಗಾಗಿಯೇ ಕಟ್ಟಿಸಿದ ಸಾಲು ಕೊಠಡಿಗಳಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಬಾಡಿಗೆಗೆ ಇದ್ದು ಸ್ವತಃ ಅಡಿಗೆ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದೆವು.. .ಮೊದಲ ವರ್ಷ. ಮೆಸ್ ನಲ್ಲಿ ಇದ್ದೆವು..ಆದರೆ ತಿಂಗಳು ತಿಂಗಳು ಇನ್ನೂರು ಮುನ್ನೂರು ರೂಗಳಷ್ಟು ಮೆಸ್ ಗೆ ಕಟ್ಟಬೇಕಿತ್ತು .ಇಪ್ಪತ್ತೆಂಟು ವರ್ಷಗಳ ಹಿಂದಿನ ಸಂಗತಿ ಇದು.ನಮ್ಮಿಬ್ಬರ ಮೆಸ್ ಬಿಲ್ ಕೊಡಲು ನಮ್ಮ ತಂದೆ ತಾಯಿ ತುಂಬಾ ಕಷ್ಟಪಡಬೇಕಾಗುತ್ತದೆ ಎಂಬ ಅರಿವು ನಮಗಿತ್ತು..ಹಾಗಾಗಿ ಎರಡನೇ ಬಿಎಸ್ಸಿ ಯ ಆರಂಭದಲ್ಲೇ ಪೆಜತ್ತಾಯರ ಬಾಡಿಗೆ ಕೋಣೆಗೆ ನಾನು ಮತ್ತು ತಮ್ಮ ಬಂದಿದ್ದೆವು.ನಾನೇ ಸೀಮೆ ಎಣ್ಣೆ ಸ್ಟವ್ ನಲ್ಲಿ ಸಾರು ಪಲ್ಯ ಏನಾದರೂ ಮಾಡುತ್ತಿದ್ದೆ.ಅಕ್ಕಿಯನ್ನು ತೊಳೆದು ಕುದಿ ಬರಿಸಿ ನಾವೇ ರಟ್ಟಿನ ಪೆಟ್ಟಿಗೆಯಲ್ಲಿ ಬೈಹುಲ್ಲಿನ ಹಾಸಿಗೆ ತುಂಬಿ ತಯಾರು ಮಾಡಿದ  ದೇಶಿ  ಸ್ವಮೇಕ್ ಚೈನಾ ಪಾಟ್ ? 😀 ನಲ್ಲಿ ಇಟ್ಟು ಅನ್ನ ಬೇಯಿಸುತ್ತಾ ಇದ್ದೆವು.ವಾರಕ್ಕೊಮ್ಮೆ ಪೆಜತ್ತಾಯರ ಮನೆಗೆ ಹೋಗಿ   ಅವರ ತುರಿ ಮಣೆಯಲ್ಲಿ  ತೆಂಗಿನ ಕಾಯಿ ತುರಿದು( ನಮ್ಮ ತಂದೆ ಮನೆಯ ಸಣ್ಣ ತೋಟದಲ್ಲಿ ಕೆಲವು ತೆಂಗಿನ ಮರ ಇದ್ದು ನಾವು ರೂಮಿಗೆ ಸುಲಿದ ನಾಲ್ಕಾರು ತೆಂಗಿನ ಕಾಯಿ ತಗೊಂಡು ಹೋಗುತ್ತಾ ಇದ್ದೆವು) ಅವರ ರುಬ್ಬುವ ಕಲ್ಲಿನಲ್ಲಿ ರುಬ್ಬಿ ತಂದು ಸಾಂಬಾರ್ ಮಾಡುತ್ತಾ ಇದ್ದೆ‌.ಎರಡು ಮೂರು ದಿವಸ ಬೆಳಗ್ಗೆ ಸಂಜೆ ಕುದಿಸಿ ಬಳಸುತ್ತಾ ಇದ್ದೆವು..
ಉಜಿರೆಗೆ ಬಂದು ಈ ಕೊಠಡಿಗೆ ಪ್ರಸಾದ್ ಜೊತೆ ಬಂದೆ..ಅಷ್ಟೇ.. ಪ್ರಸಾದ್ ಮುಖ ನೋಡಬೇಕಿತ್ತು..😀 ಪ್ರಸಾದ್ ಮನೆಯವರು ಆಗಿನ ಕಾಲಕ್ಕೆ ಸಾಕಷ್ಟು ಸ್ಥಿತಿ ವಂತರಾಗಿದ್ದರು(  ಸಾಕಷ್ಟು ಸಿರಿವಂತರಾಗಿದ್ದರು) ಅತ್ತೆ ಮದುವೆ ಆಗಿ ಬಂದಾಗ ಹೆಚ್ಚೇನೂ ಇರಲಿಲ್ಲವಂತೆ..ಅತ್ತೆ ಮತ್ತು ಮಾವ ಸ್ವತಃ ಕೊಟ್ಟು ಪಿಕ್ಕಾಸು( ಹಾರೆ ಗುದ್ದಲಿ) ಹಿಡಿದು ಮಣ್ಣು ಸಮತಟ್ಟು ಮಾಡಿ ಅಡಕೆ ಬಾಳೆ ತೆಂಗು ಬೆಳೆಸಿದ್ದರಂತೆ( ಅತ್ತೆಯವರು ಯಾವಾಗಲೋ ಮಾತಿನ ನಡುವೆ ಹೇಳಿದ್ದರು).ಪ್ರಸಾದರಿಗೆ  ಹಾಗಾಗಿ ನಮ್ಮಷ್ಟು ಬಡತನವನ್ನು ಅನುಭವಿಸಿ ಗೊತ್ತಿರಲಿಲ್ಲ.. ಹಳೆಯ ಹೆಂಚಿನ ಸಣ್ಣ ಕೊಠಡಿ, ಒಂದೆಡೆ ನನ್ನ ಮತ್ತು ತಮ್ಮನ ಬಟ್ಟೆಗಳು ಚಾಪೆ,ಮತ್ತೊಂದೆಡೆ ನಮ್ಮ ಸ್ವಮೇಕ್ ದೇಸಿ ಚೈನಾಪಾಟ್..ಇನ್ನೊಂದು ಕಡೆ ಸೀಮೆ ಎಣ್ಣೆಯ ಸ್ಟೌ..
ಈ ಸಾಮಾನುಗಳ ನಡುವೆ ಮಲಗಲು ತೀರಾ ಕಡಿಮೆ ಜಾಗ ಇತ್ತು..ಒಂದು ವಾರ ನಾನು ತಮ್ಮ ಹೇಗೋ ಕೈಕಾಲು ಸುರುಟಿಕೊಂಡು ಮಲಗಿದ್ದೆವು..ನಂತರ ಪಕ್ಕದ ಕೊಠಡಿಯಲ್ಲಿ ನಮ್ಮ ಹಾಗೇ ಬಂದ ಹುಡುಗ ಇದ್ದ.( ಅವನ ಹೆಸರು ಮರೆತು ಹೋಗಿದೆ ಈಗ)ಅವನಿಗೆ ಮತ್ತು ನನ್ನ ತಮ್ಮನಿಗೆ ಸ್ನೇಹವಾಗಿ ಅವರಿಬ್ಬರೂ ಅವನ ಕೊಠಡಿಯಲ್ಲಿ ಮಲಗುತ್ತಿದ್ದರು..ಹಾಗಾಗಿ ನನಗೆ ಸ್ವಲ್ಪ ಆರಾಮವಾಗಿತ್ತು.
ಈ ಕೊಠಡಿ ನೋಡಿ ನಮ್ಮ ಪರಿಸ್ಥಿತಿ ಪ್ರಸಾದರಿಗೆ ಅರ್ಥವಾಗಿದ್ದಿರಬೇಕು.ನನ್ನ ಕೈಗೆ ಸ್ವಲ್ಪ ದುಡ್ಡು ಕೊಟ್ಟು ಅವರು ಹಿಂದೆ ಮನೆಗೆ ಬಂದು ‌ಮರುದಿನವೇ ಉದ್ಯೋಗ ನಿಮಿತ್ತ ಬೆಂಗಳೂರು ನಡೆದರು..
ಅಂತೂ ಇಂತೂ ಎರಡನೇ ಬಿಎಸ್ಸಿ ಅಂತಿಮ ಪರೀಕ್ಷೆಗಳನ್ನು ಬರೆದು ನಾನು ಅತ್ತೆ ಮನೆಗೆ ಬಂದೆ..ಮತ್ತೆ ಒಂದೆರಡು ದಿನದ ಒಳಗೆ ಪ್ರಸಾದ್ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು..ಅವರು ಹನುಮಂತ ನಗರದಲ್ಲಿ ಚಿಕ್ಕದೊಂದು ಮನೆ ಬಾಡಿಗೆಗೆ ಹಿಡಿದಿದ್ದರು.ರಾತ್ರಿ ಬಸ್ಸಿನಲ್ಲಿ ಬರುವಾಗ ಘಾಟಿ ಹತ್ತುವಾಗ ತುಂಬಾ ವಾಂತಿಯಾಗಿ ನನಗೆ ಬೆಳಗಿನ ಜಾವ ಮನೆಗೆ ತಲುಪುವಷ್ಟರಲ್ಲಿ ಸುಸ್ತಾಗಿ ಕಣ್ಣು ಕತ್ತಲಿಟ್ಟಿತ್ತು..ಬಂದು ಮುಖವನ್ನು ತೊಳೆದ ಹಾಗೆ ಮಾಡಿ ಬರುವಷ್ಟರಲ್ಲಿ ಪ್ರಸಾದ್ ಹಾಸಿಗೆ ಬಿಡಿಸಿ ಕೊಟ್ಟರು.. ನಾನು ಮಲಗಿದೆ..ಎಷ್ಟು ಹೊತ್ತಾಯಿತೋ ಗೊತ್ತಿಲ್ಲ.. ರೈಲು ಕೂ ಹಾಕಿದ ಹಾಗೆ ಭಯಾನಕ ಸದ್ದಾಗಿ ಗಾಭರಿಕೊಂಡು ಎಚ್ಚರಗೊಂಡೆ.ನನ್ನ ಗಾಭರಿ ನೋಡಿ ಪ್ರಸಾಸರಿಗೂ ಗಾಭರಿ ಏನಾಯ್ತು ಅಂತ..ಮತ್ತೆ ಪುನಃ ಅದೇ ಸದ್ದು..ಅಮ್ಮಾ ಎಂದು ಕಿರುಚಿದೆ..ಪ್ರಸಾದ್ ಓಡಿಕೊಂಡು ಬಂದು ಎಂತ ಎಂತಾಯಿತು ಎಂದು ಸಮಾಧಾನಿಸಿ ಕೇಳುವಷ್ಟರಲ್ಲಿ ಮತ್ತೆ ಅದೇ ಸದ್ದು.. ಮತ್ತೆ ಗಾಭರಿಯಾಗಿ ಆ ಕಡೆ ಈ ಕಡೆ ನೋಡಿದೆ..ಇರು ಕುಕ್ಕರ್ ಆಫ್ ಮಾಡಿ ಬರುತ್ತೇನೆ ಎಂದು ಪ್ರಸಾದ್ ಅಡಿಗೆ ರೂಮಿನ ಕಡೆ ಹೋದರು! ತಕ್ಷಣವೇ ಎಚ್ ಜಿ ರಾಧಾದೇವಿ,ಸಾಯಿಸುತೆ ಮೊದಲಾದವರ ಕಾದಂಬರಿಗಳಲ್ಲಿ ಕುಕ್ಕರ್ ಕೂ ಹಾಕಿದ ಬಗ್ಗೆ  ಓದಿದ್ದು ನೆನಪಾಯಿತು..ಹ್ಹಾ..ಹಾಗಾದರೆ ಆ ನನ್ನನ್ನು ಗಾಭರಿಗೊಳಿಸಿದ ಸದ್ದು ಅದೆಂದು ಅರ್ಥವಾಯಿತು..ಕುಕ್ಕರ್,ಮಿಕ್ಸಿ,ಗ್ಯಾಸ್ ಸ್ಟವ್,ಟಿವಿ ಡಿಶ್ ಇತ್ಯಾದಿ ಪದಗಳನ್ನು ಇವರುಗಳ ಕಾದಂಬರಿಗಳಲ್ಲಿ ಓದಿದ್ದೆ‌ಇವು ಶ್ರೀಮಂತರ ಮನೆಗಳಲ್ಲಿ ಇರುತ್ತದೆ ಅಂತ ಕೂಡ ಗೊತ್ತಿತ್ತು..ಆದರೆ ಅವು ಹೇಗಿರುತ್ತವೆ,ಕುಕ್ಕರ್ ಕೂ ಹಾಕುವುದೆಂದರೆ ಅಷ್ಟು ಜೋರಾದ ಸದ್ದು ಇರುತ್ತದೆ ಎಂಬ ಊಹೆ ಕೂಡ ನನಗಿರಲಿಲ್ಲ.. ಇನ್ನು ಉಪಯೋಗಿಸುವ ಬಗ್ಗೆ ಹೇಗೆ ಗೊತ್ತಿರುತ್ತದೆ ?ಹಾಗಾಗಿ  ಪ್ರಸಾದ್ ಬೆಳಗ್ಗೆಯೇ ಅಡಿಗೆ ಮಾಡಿಟ್ಟು ಗ್ಯಾಸ್ ಸ್ಟವ್ ಮುಟ್ಟಬೇಡ,ಗೊತ್ತಾಗದೆ ಬೆಂಕಿ ಹಿಡುದರೆ ಕಷ್ಟ, ನಾನು ಸಂಜೆ ಬರುವಾಗ ತಿಂಡಿ ಕಟ್ಟಿಸಿಕೊಂಡು  ಬರುತ್ತೇನೆ,ಈಗ ಮತ್ತು ಮಧ್ಯಾಹ್ನ ಊಟ ಮಾಡು ಎಂದು ಹೇಳಿ ಕುಕ್ಕರ್ ಮುಚ್ಚಳ ತೆರೆದು ಇಟ್ಟು ಹೋಗಿದ್ದರು‌..ಸಂಜೆ ಬೇಗನೇ ಬಂದರು.ಬರುವಾಗ ಎರಡು ಮಸಾಲೆ ದೋಸೆ ಕಟ್ಟಿಸಿಕೊಂಡೇ ಬಂದಿದ್ದರು.ಬಂದು ನನಗೆ ಕಾಫಿ ಮಾಡಿ ಕೊಟ್ಟು,( ನನ್ನ ತಾಯಿ ಮನೆಯಲ್ಲಿ ನಮಗೆಲ್ಲರಿಗೂ ಬೆಲ್ಲದ ಕಾಫಿ ಕುಡಿದು ಅಭ್ಯಾಸ) ಅವರು ಚಹಾ ಮಾಡಿಕೊಂಡು ಕುಡಿದರು. ಅಮೇಲೆ ನಿನಗೆ ತಿನ್ನಲು ಎಂತಾದರೂ ಬೇಕ? ಎಲ್ಲ ಇಲ್ಲಿ ಹತ್ರವೇ ಸಿಗುತ್ತದೆ..ಏನಾದರೂ ಬೇಕಿದ್ದರೆ ಹೇಳು ಎಂದರು..ತಕ್ಷಣವೇ ನಾನು ಮೊದಲ ವರ್ಷ ಬಿಎಸ್ಸಿ ಓದುವಾಗ ನಮ್ಮ ಮೆಸ್ ನಲ್ಲಿ ಇದ್ದ ಸಹಪಾಠಿ ಸಿರಿವಂತರ ಮನೆ ಮಗಳು ಸುಮನ್ ಪಪ್ಸ್ ಬಗ್ಗೆ ಹೇಳಿದ್ದು ನೆನಪಾಯಿತು. ಅವಳೊಂದು ಆದಿತ್ಯವಾರ  ನಾವೆಲ್ಲ ಉಜಿರೆ ಪೇಟೆಗೆ ಹೋಗಿ ಪಪ್ಸ್ ತಿಂದು ಬರುವ ಎಂದು ಹೇಳಿದ್ದಳು.ಅವಳನ್ನು ಹೊರತು ಪಡಿಸಿ ನಾನೂ ಸೇರಿದಂತೆ ಇತರೆ ಮೆಸ್ ನಲ್ಲಿ ಇದ್ದ ಹುಡುಗಿಯರಿಗೆ ಆ ಶಬ್ದವನ್ನೇ ಕೇಳಿ ಗೊತ್ತಿರಲಿಲ್ಲ.. ಅದೇನೆಂದು ಕೇಳಿದೆವು..ಅದು ಒಂತರಾ ಪಲ್ಯವನ್ನು ನಡುವೆ ಹಾಕಿ ಬ್ರೆಡ್ ಅನ್ನು ಹುರಿದ ಹಾಗೆ ಇರುತ್ತದೆ‌.ತುಂಬಾ ರುಚಿ ಇರುತ್ತದೆ ಎಂದು ಹೇಳಿದ್ದಳು. ಹಾಗೆ ನಾವೆಲ್ಲ‌ ಮೆಸ್ಸಿನ
ಕಾವೇರಿ ಆಂಟಿಯ ಅನುಮತಿ ಪಡೆದು ಕೈಯಲ್ಲಿ ಸ್ವಲ್ಪ ದುಡ್ಡು ಹಿಡಿದುಕೊಂಡು ಉಜಿರೆ ಪೇಟೆಯಲ್ಲಿ ಇದ್ದ ಒಂದೇ ಒಂದು ಬೇಕರಿಗೆ ಬಂದೆವು.ಅಲ್ಲಿ ಸುಮನ್ ಪಪ್ಸ್  ಕೊಡಿ ಎಂದು ಅಲ್ಲಿದ್ದವರಲ್ಲಿ ಕೇಳಿದವರು..ಬಹುಶಃ ಅಲ್ಲಿದ್ದವರು ಕೂಡ ಮೊದಲ ಬಾರಿಗೆ ಆ ಪದ ಕೇಳಿದ್ದರೋ ಏನೋ ಗೊತ್ತಿಲ್ಲ.. ಒಂಚೂರು ಪೆಚ್ಚು ಪೆಚ್ಚಾಗಿ ನಮ್ಮಲ್ಲಿ ಅದಿಲ್ಲ ,ಬೇರೆ ಏನು ಬೇಕು ಕೇಳಿದರು..ಹಾಗೆಲ್ಲ ಬೇಕರಿ ತಿಂಡಿ ತಿನ್ನುವಷ್ಟು ದುಡ್ಡು ನನ್ನಲ್ಲಿ ಇರಲಿಲ್ಲ, ನನ್ನ ತಂದೆ ತಾಯಿ ನನ್ನನ್ನು ಬಹಳ ಕಷ್ಟ ಪಟ್ಟು ಓದಿಸುತ್ತಿದ್ದಾರೆ ಎಂಬ ಅರಿವು ನನಗಿತ್ತು..ಹಾಗಾಗಿ ತಕ್ಷಣವೇ ನಾನು ಬೇರೇನು ಬೇಡವೆಂದೆ..ಸುಮನ್ ,ಸಲೀಲ,ಸಂಧ್ಯಾ ಬಿಟ್ಟರೆ ಉಳೊದವರೆಲ್ಲರ ಪರಿಸ್ಥಿತಿ ನನಗಿಂತ ಬೇರೆಯಾಗಿ ಇರಲಿಲ್ಲ.. ಹಾಗಾಗಿ ಅವರುಗಳು ಕೂಡ ಬೇಕರಿ ತಿಂಡಿ ಇಷ್ಟವಿದ್ದರೂ ಕೂಡ ನನ್ನಂತೆ ಬೇಡ ಎಂದರು‌.ನಾವ್ಯಾರೂ ಏನನ್ನೂ ತೆಗೆದುಕೊಳ್ಳದ ಕಾರಣ ಸುಮನ್ ಕೂಡ ಏನನ್ನು ತೆಗೆದುಕೊಳ್ಳದೆ ನಮ್ಮ ಜೊತೆ ಹಿಂತಿರುಗಿದಳು..ಸಾಕಷ್ಟು ವಿದ್ಯಾವಂತರ,ಸರ್ಕಾರಿ ಉದ್ಯೋಗದಲ್ಲಿದ್ದು ಸಿರಿವಂತರ ‌ಮಗಳಾದರೂ ಸುಮನ್ ನಮ್ಮೊಂದಿಗೆ ಹೊಂದಿಕೊಂಡಿದ್ದಳು..ಒಂದು ದಿನ ಕೂಡ ತಾನು ಸಿರಿವಂತೆ ಎಂಬಂತೆ ನಡೆದುಕೊಂಡಿರಲಿಲ್ಲ.. ಕಾಲೇಜಿಗೆ ಸೇರಿ ಒಂದೆರಡು ತಿಂಗಳುಗಳಲ್ಲಿಯೇ  ಚುರುಕಿನ ಹುಡುಗಿಯಾಗಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಳು.ಅವಳು ಪದವಿಯಲ್ಲಿ ಪತ್ರಿಕೋದ್ಯಮ ತೆಗೆದು ಕೊಂಡಿದ್ದು ನಿರಂಜನ ವಾನಳ್ಳಿಯವರು ಶುರು ಮಾಡಿದ,ಅಥವಾ ಮೊದಲೇ ಇದ್ದುದನ್ನು ಮುಂದುವರಿಸುತ್ತಾ ಇದ್ದ ಕೈ ಬರಹದ   ಕಾಲೇಜು ವಾಲ್ ಮ್ಯಾಗಜಿನ್ ( ಕೈ ಬರಹದ ಭಿತ್ತಿ ಪತ್ರಿಕೆ) ನಲ್ಲಿ ಲೇಖನಗಳನ್ನು ಬರೆಯುತ್ತಿದ್ದಳು.ಕವನಗಳನ್ನು ಬರೆಯುತ್ತಿದ್ದಳು.ಶ್ರೀಮಂತಿಕೆಯ ಜೊತೆಗೆ ಪ್ರತಿಭೆ,ಸಜ್ಜನಿಕೆ ಸೇರಿ ನಮ್ಮ ‌ಮೆಸ್ ನಲ್ಲಿ ಒಂದು ತನ್ನದೇ ಆದ ವಿಶಿಷ್ಠವಾದ ಸ್ಥಾನವನ್ನು ಗಳಿಸಿದ್ದಳು.ಬಹುಶಃ ಏಳನೆಯ ತರಗತಿಯಲ್ಲಿ ಇದ್ದಾಗ ನಾನು ನಾಟಕ ಬರೆದದ್ದು ಬಿಟ್ಟರೆ ಒಂಬತ್ತನೇ ತರಗತಿಯಲ್ಲಿ ಇದ್ದಾಗ ಒಂದು ಕಥೆ ಬರೆದು ಅಮ್ಮನಿಗೆ ಓದಿ ಹೇಳಿದ್ದೆ.ಚೆನ್ನಾಗಿದೆ ..ಆಗಾಗ ಬರೆಯುತ್ತಿರು ಎಂದು ಅಮ್ಮ ತುಂಬು ಪ್ರೋತ್ಸಾಹ ನೀಡಿದ್ದರೂ ಕೂಡ ನಂತರ ನಾನೇನನ್ನೂ ಬರೆದಿರಲಿಲ್ಲ..ಮೆಸ್ ನಲ್ಲಿ ಸುಮನ್ ನ ಕವಿತೆಗಳಿಗೆ ಬರಹಗಳಿಗೆ ಸಿಗುತ್ತಾ ಇದ್ದ ಮೆಚ್ಚುಗೆ ನನ್ನನ್ನು ಮತ್ತೆ ಬರೆಯಲು ಪ್ರೇರೇಪಿಸಿದೆವು.ನಾನು ನನ್ನಷ್ಟಕ್ಕೆ ರಫ್ ಪುಸ್ತಕದಲ್ಲಿ ಕಥೆಗಳನ್ನು, ಕವಿತೆಗಳನ್ನು ಬರೆಯತೊಡಗಿದೆ‌. ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿ ಇಂಗ್ಲಿಷ್ ಗೆ ಆದ್ಯತೆ ಕೊಡುವ ಬಗ್ಗೆ ಒಂದು ಒಂದು ಪುಟ್ಟ ಬರಹ ಬರೆದು ಸುಮನ್ ಗೆ ಕೊಟ್ಟಿದ್ದೆ.ಅದನ್ನು ಓದಿ ಚೆನ್ನಾಗಿದೆ ಎಂದ ಅವಳು ಅದನ್ನು ಕಾಲೇಜಿನ ಭಿತ್ತಿ ಪತ್ರಿಕೆಗೆ ನೀಡಿದ್ದಳು..ಆದೇ ಯಾಕೋ ಅದನ್ನು ನಿರಂಜನ ವಾನಳ್ಳಿ ಅಥವಾ ಇನ್ಯಾರೋ ಆ ಪತ್ರಿಕೆಯ ಜವಾಬ್ದಾರಿ ವಹಿಸಿದವರು ಅದನ್ನು ರಿಜೆಕ್ಟ್ ಮಾಡಿದರು.ಅದನ್ನು ತಿಳಿಸಿದ ಸುಮನ್ " ಇದು ನವೆಂಬರ್ ತಿಂಗಳು ಆಗಿದ್ದರೆ ಖಂಡಿತಾ ವಾಲ್ ಮ್ಯಾಗಜೀನ್ ನಲ್ಲಿ ಹಾಕುತ್ತಿದ್ದರು.ಈಗ ಸಕಾಲ ಅಲ್ಲ ಹಾಗಾಗಿ ಅದನ್ನು ರಿಜೆಕ್ಟ್ ಮಾಡಿರಬಹುದು..ಆದರೂ ಬರಹ ಚೆನ್ನಾಗಿದೆ " ಎಂದು ಹೇಳಿ ಬರೆಯುವ ನನ್ನ ಉತ್ಸಾಹ ಬತ್ತಿ ಹೋಗದಂತೆ ಮೆಚ್ಚುಗೆಯ ಮಾತನ್ನು ಆಡಿದ್ದಳು.ಬಹುಶಃ ಅವಳಿಗೆ ಅವಳ ವಯಸ್ಸನ್ನು ಮೀರಿದ ಪ್ರೌಢತೆ ಇತ್ತೆನಿಸುತ್ತದೆ ನನಗೆ.ಆದರೆ ಮೊದಲ ವರ್ಷ ಬಿಎ ಪರೀಕ್ಷೆ ಆಗುತ್ತಿದ್ದಂತೆ ಅವಳ ಮದುವೆ ಆಯಿತು.. ಅದಾಗಿ ಎಷ್ಟೋ ವರ್ಷಗಳ ನಂತರ ನಾನು 2009 ರಲ್ಲಿ ಬೆಳ್ಳಾರೆ ಯ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾದ ನಂತರ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನಕ್ಕೆ ಹೋಗಿದ್ದೆ‌.ಆಗ ನನಗೆ ಉಳಿದುಕೊಳ್ಳಲು ಪ್ರಕೃತಿ ಚಿಕಿತ್ಸೆ ಕಾಲೇಜಿನ. ಹಾಸ್ಟೆಲ್  ಮೆಸ್ ಗೆ ಹತ್ತಿರವಾಗಿತ್ತು.ಆಗ ನಾನು ಮೆಸ್ ಗೆ ಹೋಗಿ ಕಾವೇರಿ ಆಂಟಿ ಮತ್ತು ಮಾವ( ಆಗಷ್ಟೇ ಉಜಿರೆ ಹೈಸ್ಕೂಲ್ ನ ಇಂಗ್ಲಿಷ್ ಶಿಕ್ಷಕರಾಗಿ  ಸೇವೆಯಿಂದ ನಿ ವೃತ್ತಿ ಹೊಂದಿದ ವೆಂಕಟರಮಣ ಭಟ್ ಮಾಷ್ಟ್ರು) ಅವರನ್ನು ಭೇಟಿಯಾಗಿದ್ದೆ .ಆಗ ನನಗೆ ಸುಮನ್ ಗೆ ಕ್ಯಾನ್ಸರ್ ಆಗಿ ಗುಣ ಆಗಿ ಮತ್ತೆ ಪುನಃ  ಮರುಕಳಿಸಿದೆ ಎಂದು ಗೊತ್ತಾಯಿತು. ಅವಳ ನಂಬರ್ ತಗೊಂಡು ಫೋನ್ ಮಾಡಿ ಮಾತಾಡಿದೆ.ಎರಡನೇ ಬಾರಿಗೆ ಕ್ಯಾನ್ಸರ್ ಬಂದ ಬಗ್ಗೆ ಬಹಳ ಬೇಸರದಿಂದ ಹೇಳಿದಳು.ಮೊದಲ ಬಾರಿ ಬಂದದ್ದು ಗುಣ ಆಗಿದೆ ತಾನೇ ? ಈ ಬಾರಿಯೂ ಗುಣ ಆಗುತ್ತದೆ, ಸರಿಯಾಗಿ ಚಿಕಿತ್ಸೆ ಪಡೆ ಎಂದು ಧೈರ್ಯ ಹೇಳಿ ನೀನು ಉಜಿರೆಯಲ್ಲಿ ಮೊದಲ ವರ್ಷ ಬಿಎ ಓದುತ್ತಿದ್ದಾಗ ಕತೆ ಕವಿತೆಗಳನ್ನು ಬರೆಯುತ್ತಿದ್ದೆಯಲ್ಲ..ಈಗಲೂ ಬರೆಯುತ್ತಿದ್ದೀಯಾ ಎಂದು ಕೇಳಿದೆ.ಅಪರೂಪಕ್ಕೆ ಮೂಡ್ ಚೆನ್ನಾಗಿದ್ದಾಗ ಬರೆಯುತ್ತೇನೆ ಎಂದು ಹೇಳಿದಳು..

ಪುಸ್ತಕವಾಗಿ ಪ್ರಕಟವಾಗಿವೆಯಾ ಎಂದು  ಕುತೂಹಲದಿಂದ ಕೇಳಿದೆ..ಇಲ್ಲ.. ಪತ್ರಿಕೆಗಳಲ್ಲಿ ನಿನ್ನ ಲೇಖನಗಳು ಪ್ರಕಟವಾಗುತ್ತಿವೆಯಾ ?  ಲಕ್ಷ್ಮೀ ಜಿ ಪ್ರಸಾದ ಎನ್ನುವ ಹೆಸರಿನಲ್ಲಿ ಬರೆಯುತ್ತಿರುವುದು ನೀನಾ ಎಂದು ಕೇಳಿದಳು.ಹೌದು..ನಿನಗೆ ಹೇಗೆ ಗೊತ್ತಾಯಿತು ಎಂದು ಕೇಳಿದಾಗ " ನೀನು ಅಂದು‌ಮೆಸ್ ನಲ್ಲಿ ಇದ್ದಾಗ ಕನ್ನಡ ಭಾಷೆಯ ನಿರ್ಲಕ್ಷ್ಯ ದ ಬಗ್ಗೆ ಒಂದು ಸಣ್ಣ ಲೇಖನ ಬರೆದಿದ್ದೆಯಲ್ಲ..ಅದರ ವಿಸ್ತೃತ ರೂಪದ ಲೇಖನವನ್ನು ನಾನು ವಿಜಯ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಎಂಬ ಲೇಖನದಲ್ಲಿ ನೋಡಿದೆ.ಅದರಲ್ಲಿ ಲೇಖಕರ ಹೆಸರು ಲಕ್ಷ್ಮೀ ಜಿ ಪ್ರಸಾದ ಎಂದಿತ್ತು.ಬಹುಶಃ ಅದು ನಿನ್ನ ಲೇಖನವೇ ಇರಬೇಕೆಂದು ಊಹಿಸಿದೆ.ನಿನ್ನ ಬೇರೆ ಲೇಖನಗಳನ್ನು ಓದಿದ್ದೇನೆ,ಚೆನ್ನಾಗಿ ಬರೀತೀಯ..ನನಗೆ ಮದುವೆ ನಂತರ ಹೆಚ್ಚು ಬರೆಯಲಾಗಲಿಲ್ಲ‌‌.ಮಕ್ಕಳಾಗಲಿಲ್ಲ ಅದೇ ಕೊರಗಿನಲ್ಲಿ ಇದ್ದೆ .ನಂತರ ನಾವೊಂದು ಮಗುವನ್ನು ದತ್ತು ಪಡೆದು ಹ್ಯಾಪಿ ಆಗಿದ್ದೆವು‌ ಅಷ್ಟರಲ್ಲಿ ಕ್ಯಾನ್ಸರ್ ಬಂತು..ಅದು ಗುಣ ಆಗಿದೆ ಎಂದು ಉಸಿರುಬಿಡುವಷ್ಟರಲ್ಲಿ ಮತ್ತೆ ಈಗ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಹೇಳಿದಳು..ಆಗ ನೀನು ಚಿಕಿತ್ಸೆ ಪಡೆದು ಗುಣ ಪಡಿಸಿಕೋ ಜೊತೆಗೆ ನಿನ್ನ ಕವಿತೆಗಳನ್ನು ಪ್ರಕಟಿಸು..ನಾವಿದ್ದಾಗಲೂ ಇಲ್ಲದೇ ಇದ್ದಾಗಲೂ ನಾವು ಬರೆದ ಪುಸ್ತಕಗಳು ನಮ್ಮನ್ನು ಚಿರಸ್ಥಾಯಿಯಾಗಿಸುತ್ತವೆ‌.ಬರವಣಿಗೆಗೆ ಅಂತಹ ಶಕ್ತಿ ಇದೆ ಎಂದು ಹೇಳಿದೆ.ಆಗ ಅವಳು ನಿನ್ನ ಪುಸ್ತಕಗಳು ಪ್ರಕಟವಾಗಿದೆಯಾ ಎಂದು ಕೇಳಿದಳು.ಹೌದು ಎಂದು ಹೇಳಿ ಮೂರು ಪುಸ್ತಕಗಳು ಪ್ರಕಟವಾಗಿವೆ, ಈಗ ಐದು ಪುಸ್ತಕಗಳು ಅಚ್ಚಿನಲ್ಲಿ ಇವೆ ಎಂದು ತಿಳಿಸಿದೆ.ಬಹಳ ಸಂತೋಷಗೊಂಡ ಅವಳು " ಲಕ್ಷ್ಮೀ ನಿನಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು ಪುಸ್ತಕಗಳು ಲೇಖನಗಳು ಪ್ರಕಟವಾಗಿದ್ದು ಕೇಳಿ ತುಂಬಾ ಖುಷಿ ಆಯ್ತು..ನಾನು ಕೂಡ ನನ್ನ ಕವಿತೆಗಳನ್ನು ಪ್ತಕಟಿಸುತ್ತೇನೆ ಮತ್ತೆ ಕಳಹಿಸಿಕೊಡುತ್ತೇನೆ ಎಂದು ಉತ್ಸಾಹದಿಂದ ಹೇಳಿದಳು.ನಂತರ ಅವಳ ಕವನ ಸಂಕಲನ ಮತ್ತು ರಂಗೋಲಿ ಅಥವಾ ಚಿತ್ತಾರದ ಒಂದು ಪುಸ್ತಕ ಪ್ರಕಟವಾದ ಬಗ್ಗೆ  ಉಜಿರೆಯ ಇನ್ನೋರ್ವ ಮೆಸ್ ಮೇಟ್ ನಾಪೋಕ್ಲಿನ ವಿದ್ಯಾಳಿಂದ ತಿಳಿಯಿತು (  ಅವರು ಮತ್ತು ಅವರ ಪತಿ ಸುರೇಶ್ ಭಟ್ ( ಉಪನ್ಯಾಸಕರು) ಇಬ್ಬರೂ ಲೇಖಕರಾಗಿದ್ದು ಅವರ ಬರಹ ಗಳು ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತಿರುತ್ತವೆ,ವಿದ್ಯಾ ಮತ್ತೆ ನನಗೆ ಫೇಸ್ ಬುಕ್ ಸ್ನೇಹಿತೆಯಾಗಿದ್ದಾರೆ)
ನಂತರ ಒಂದೆರಡು ವರ್ಷದ ಬಳಿಕೆ  ಹೂ‌ ಮನಸಿನ ಹುಡುಗಿ ದೇವರ ಪಾದವನ್ನು ಸೇರಿದ್ದು ತಿಳಿದು ತುಂಬಾ ಸಂಕಟವಾಯಿತು.
ಅದಿರಲಿ ನನ್ನ ಕಥೆ ಎಲ್ಲಿಂದೆಲ್ಲಿಗೋ ಸಾಗಿದೆ ..ಮತ್ತೆ ಹಿಂದೆ ಬರುತ್ತೇನೆ‌.
ಬೇಸಗೆ ರಜೆ ಮುಗಿಯುತ್ತಿದ್ದಂತೆ ಅಂತಿಮ ವರ್ಷದ ಬಿಎಸ್ಸಿ ಪದವಿ ತರಗತಿಗಳು ಆರಂಭವಾದವು.ನಾನು ಬೆಂಗಳೂರಿನಿಂದ ಮನೆಗೆ ಬಂದು ಪುಸ್ತಕ ಬಟ್ಟೆ ಬರೆ ತೆಗೆದುಕೊಂಡು ಕಾಲೇಜು ಹೊರಟೆ,ಪ್ರಸಾದ್ ನನ್ನನ್ನು ಕಾಲೇಜು ಹಾಸ್ಟೆಲ್ ಗೆ ಸೇರಿಸಿದರು‌.ಹತ್ತನೇ ತರಗತಿ ತನಕ ಜಾಣ ವಿದ್ಯಾರ್ಥಿನಿ ಆಗಿದ್ದ ನಾನು ನಂತರ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದೆ.ಇಂಗ್ಲಿಷ್ ನಲ್ಲಿ ಮಾಡುವ ಪಾಠ ನನಗೆ ಅರ್ಥವಾಗದೇ ಇದ್ದದು ಇದಕ್ಕೆ ಪ್ರಮುಖ ಕಾರಣವಾಗಿತ್ತು.ಅಂತೂ ಇಂತೂ ಬಿಎಸ್ಸಿ ಪದವಿ ಅಂತಿಮ ವರ್ಷದ ಅಂತಿಮ ಪರೀಕ್ಷೆಗಳು ಮುಗಿದು ಮನೆಗೆ ಬಂದೆ.ಆಗಾಗಲೇ ಪ್ರಸಾದ್ ಬೆಂಗಳೂರಿನ ಕೆಲಸ ಬಿಟ್ಟು ಬಿಟ್ಟಿದ್ದರು‌.ಮನೆಯಲ್ಲಿ ಕೃಷಿ ನೋಡಿಕೊಳ್ಳಲು ಜನ ಸಾಕಾಗುತ್ತಿಲ್ಲ..ನೀನು ಕೆಲಸ ಬಿಟ್ಟು ಬಂದು ಬಿಡು ಎಂದು ಮಾವ ಹೇಳಿದ್ದರಂತೆ.ಅದಕ್ಕೆ ನನ್ನಲ್ಲಿ ಒಂದು ಮಾತು ಕೂಡ ತಿಳಿಸದೆ ಬೆಂಗಳೂರಿನಲ್ಲಿ ಇದ್ದ ಒಳ್ಳೆಯ ಕೆಲಸ ಬಿಟ್ಟು ಬಂದಿದ್ದರು.
ಈಗಂತೂ ನಾನು ಸಂಪೂರ್ಣವಾಗಿ ಮನೆ ಕೆಲಸದ ಆಳಾಗಿ ಬಿಟ್ಟೆ‌.ಬೆಳಗಾಗೆದ್ದು ಮನೆ ಗುಡಿಸಿ ಒರಸಿ ತೋಟಕ್ಕೆ ಹೋಗಿ ಹುಲ್ಲು ತಂದು ಸೋಗೆ ಎಳೆದು, ಗುಡ್ಡದಿಂದ ಒಣ ಕಟ್ಟಿಗೆ ತರುವ,ಹಸು ಕರೆಯುವ ಕೆಲಸಕ್ಕೆ ಮೀಸಲಾದೆ‌.ನನಗೆ ಒಂದು ಲೋಟ ಕಾಫಿ ಮಾಡಿಕೊಳ್ಳುವ ಸ್ವಾತಂತ್ರ್ಯ ವೂ ಇರಲಿಲ್ಲ. ಒಮ್ಮೆ ಅಣ್ಣ ಮತ್ತು ಚಿಕ್ಕಪ್ಪ ನಮ್ಮ ಮನೆಗೆ ಬಂದಿದ್ದರು.ಆ ದಿವಸ ನನಗೆ ಇತರೆ ಕೆಲಸದಿಂದ ವಿನಾಯತಿ ನೀಡಿ ಅಣ್ಣ ಚಿಕ್ಕಪ್ಪಂದಿರ ಹತ್ತಿರ ಮಾತನಾಡಲು ಬಿಟ್ಟು ಉದಾರತೆ ಮೆರೆದಿದ್ದರು ಮನೆ ಮಂದಿ.ಮಧ್ಯಾಹ್ನ  ಊಟ ಆದ ಮೇಲೆ ಅತ್ತೆ ಮಾವ ಮಲಗಿದ್ದರು.ಪ್ರಸಾದ್ ಮತ್ತು ಮೈದುನ ತೋಟದ ಕೆಲಸಕ್ಕೆ ಹೋಗಿದ್ದರು.ಆಗ ಚಿಕ್ಕಪ್ಪ "ಎನಗೊಂದು ಅರ್ಧ ಲೋಟೆ ಚಾಯ ಮಾಡಿ‌ಕೊಡು ಮಗಳೋ,ತಲೆ ಬೇನೆ ಅವುತ್ತು( ನನಗೆ ಅರ್ಧ ಲೋಟ ಚಹಾ ಮಾಡಿ ಕೊಡು ಮಗಳೇ,ತಲೆ ನೋವಾಗುತ್ತಿದೆ) ಎಂದು ಹೇಳಿದರು.ಆಗ ಅಣ್ಣನೂ ನನಗೂ ಒಂದು ಲೋಟ ಇರಲಿ ಎಂದ.ನಾನು ಮನೆ ಮಂದಿ ಏನು ಹೇಳುವರೋ ಎಂದು  ಹೆದರುತ್ತಾ ಹೋಗಿ ಗ್ಯಾಸ್ ಸ್ಟೌ ಹಚ್ಚಿ( ಆಗ ನಾನು ಸರಿಯಾಗಿ ಗ್ಯಾಸ್ ಸ್ಟೌ ,ಮಿಕ್ಸ್,ಕುಕ್ಕರ್ ಗಳ ಬಳಕೆಯನ್ನು ಪ್ರಸಾದರಿಂದ ಕಲಿತಿದ್ದೆ) ಅಲ್ಲೇ ಸಮೀಪದಲ್ಲಿ ಇದ್ದ ಹಾಲಿನ ಪಾತ್ರೆಯಿಂದ ಸ್ವಲ್ಪ ಹಾಲು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಸಕ್ಕರೆ ಚಹಾ ಪೌಡರ್ ಹಾಕಿ ಕುದಿಸಿ ಅಣ್ಣ ಮತ್ತು ಚಿಕ್ಕಪ್ಪನಿಗೆ ಚಹಾ ಮಾಡಿ ಕೊಟ್ಟೆ.
ಅತ್ತೆ ಯವರು ನಿದ್ರೆ ಮಾಡಿ ಎದ್ದು ಹೊರಗೆ  ಬರುವಾಗ ಅಣ್ಣ ಚಿಕ್ಕಪ್ಪ ಚಹಾ ಕುಡಿಯುತ್ತಾ ಇದ್ದರು..ಆಗ ನನ್ನ ಕಡೆ ಅವರು ಬೀರಿದ ದೃಷ್ಟಿ ನೆನೆದರೆ ಈಗಲೂ ನನಗೆ ಎದೆ ಡವ ಡವ ಆಗುತ್ತಿದೆ.ಅಣ್ಣ ಚಿಕ್ಕಪ್ಪ ಹೋಗುವ ತನಕ ಏನೂ ಹೇಳಲಿಲ್ಲ..
ಅವರು ಆ ಕಡೆ ಹೋಗುತ್ತಲೇ ಚಹಾ ಮಾಡುವ ಮೊದಲು ಕೇಳಿಲ್ಲ ಯಾಕೆ ? ಎಷ್ಟು ಹಾಲು ಇದೆ ಅಂತ ನೋಡಿಕೊಂಡು ಬಳಕೆ ಮಾಡಬೇಕು.. ಉಳಿದವರಿಗೆ ಚಹಾ ಮಾಡಲು ಹಾಲೆಲ್ಲಿದೆ..ಇತ್ಯಾದಿಯಾಗಿ ಹಲವಾರು ಆಖ್ಷೇಪಗಳನ್ನು ಮಾಡಿದರು.ಅದರ ನಂತರ ನಾನು ಅಡುಗೆ ಮನೆ ಕಡೆ ಕಾಲಿಡುವುದನ್ನೇ ಬಿಟ್ಟು ಬಿಟ್ಟಿದ್ದೆ.ನೀವೆಲ್ಲ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಈಗ ಇಷ್ಟು ಜೋರಿರುವ ನಾನು ನನ್ನ ಅತ್ತೆ ಮನೆಯಲ್ಲಿ ಹೆದರಿ ಇಲಿ ಮರಿಯ ಹಾಗೆ 😀
ಇದಾದ ನಂತರ ಒಂದು ದಿನ ಹಸು ಕರೆಯುವಾಗ ( ಆಗ ನನಗೆ ನಾಲ್ಕು ಐದು ಲೀಟರ್ ಹಾಲು ಹಿಂಡುವುದು ಅಭ್ಯಾಸ ಆಗಿತ್ತು) ಒಂದು ದೊಡ್ಡ ಹಸುವಿಗೆ ನನ್ನ ‌ಮೆಲೆ ಏನು ಕೋಪ ಬಂತೋ ಗೊತ್ತಿಲ್ಲ.. ಹಾಲು ಕರೆಯುವಾಗ ಒದೆದು ನನ್ನನ್ನು ಬೀಳಿಸಿತು.ಆಗ ಸಹಜವಾಗಿ ನಾನು ನೋವಿನಿಂದ ಚೀತ್ಕರಿಸಿದೆ.ಪ್ರಸಾದ್ ಅಲ್ಲೇ ಹತ್ತಿರ ಇದ್ದವರು ಓಡಿ ಬಳಿಗೆ ಬಂದರು.ಹಸುವಿಗೆ ಗಾಬರಿ ಆಗಿ ಅದರ ಎರಡೂ ಕೈಗಳನ್ನು ನನ್ನ ಎದೆ ಮೆಲೆ ಮೆಟ್ಟಿ ನಿಂತಿತು.ಪ್ರಸಾದ್ ಅದನ್ನು ಹೋಗೋ ದೂಡಿ ನನ್ನನ್ನು ಎಬ್ಬಿಸಿ ಹೊರಗೆ ಕರೆತಂದರು..ನನಗೆ ತುಂಬಾ ನೋವಾಗಿತ್ತು..ಅದಕ್ಕಿಂತ ಹೆಚ್ಚಾಗಿ ಸೆಗಣಿ ಮೈಗೆ ಹತ್ತಿಕೊಂಡದ್ದು ತುಂಬಾ ಹೇಸಿಗೆ ಆಗಿತ್ತು.ಕೈಯಲ್ಲಿ ಇದ್ದ ಚೊಂಬು ಬಿದ್ದು ಹೋಗಿ ಕರೆದ ಹಾಲು ಹಟ್ಟಿಗೆ ಚೆಲ್ಲಿತ್ತು‌.
ನಾನು ಬಂದು ಸೀದಾ ಬೆಸ್ನೀರು ಕೊಟ್ಟಗಗೆ( ಸ್ನಾನದ ಮನೆ) ಹೊಕ್ಕು ಸ್ನಾನ ಮಾಡಿ ಬೇರೆ ಸೀರೆ ಉಟ್ಟುಕೊಂಡು ಬಂದೆ( ಮದುವೆಯಾದ ಮೇಲೆ ನನಗೆ ಸೀರೆ ಕಡ್ಡಾಯವಾಗಿತ್ತು )
ಹೊರಗೆ ಬರುವಾಗ ನನ್ನ ಬಗ್ಗೆ "  ಏನೂಂತ ಇವಳನ್ನು ಬೆಳೆಸಿದ್ದಾರೋ ಇವಳ ತಂದೆ ತಾಯಿ.. ಒಂದು ನಯವಿನಯ ಇಲ್ಲ.. ನೆಟ್ಟಗೆ ಒಂದು ದನ ಕರೆಯಲು( ಹಾಲು ಹಿಂಡಲು) ಬರುವುದಿಲ್ಲ.. ನಾಲ್ಕು ಲೀಟರ್ ಹಾಲು ಹಾಳಾಯ್ತು. ಹೀಗೆಮನೆಯನ್ನು ‌ಮುಳುಗಿಸಿ ಬಿಡ್ತಾಳೆ.ಬಹಳ ಉಷಾರಿ( ಜಾಣೆ) ಅಂತ ಹೊಗಳುತ್ತಾರೆ.ಆದರೆ ಏನೊಂದೂ ಮಾಡಲು ಸೋಮಾರಿತನ ,ಏನೂ ಬಾರದ ದಡ್ಡಿ ಇದು ,ಶಂಖ ಕೂಡ ಊದಲು ಬರುವುದಿಲ್ಲ" ಇತ್ಯಾದಿಯಾಗಿ ನನ್ನ ಬಗ್ಗೆ ಅತ್ತೆ ಮಾವ ಬೈಯುತ್ತಾ ಇರುವುದು ಕೇಳಿಸಿತು..
ಆ ಕ್ಷಣ ನಾನು ನಿರ್ಧರಿಸಿ ಬಿಟ್ಟೆ..ಮುಂದೆ ನಾನು ಓದಬೇಕು ಎಂದು.. ನನ್ನನ್ನು ಅದು ತನಕ ಯಾರೂ
ದಡ್ಡಿ ಎಂದು ಹೇಳಿರಲಿಲ್ಲ..ಇಷ್ಟಕ್ಕೂ ನನ್ನದೇ ವಯಸ್ಸಿನ ಅತ್ತಿಗೆ ವೀಣಾಳಿಗೆ( ಪ್ರಸಾದ ತಂಗಿಗೆ) ಏನೂ ಬರುತ್ತಾ ಇರಲಿಲ್ಲ..
ತಕ್ಷಣವೇ ನಾನು ಅತ್ತೆ ಮಾವನ ಎದುರು ಹೋಗಿ ಹೇಳಿದೆ.ನಾನು  ಇನ್ನು ಹಸು‌ ಕರೆಯುವುದಿಲ್ಲ..ಹುಲ್ಲು ತರುವುದಿಲ್ಲ..ನಾನು ಮುಂದೆ ಸಂಸ್ಕೃತ ಎಂಎ ಓದುತ್ತೇನೆ " ಎಂದು ಸ್ಥಿರವಾಗಿ ಹೇಳಿದೆ‌.
ಇಲ್ಲಿ ಕೆಲಸ ಮಾಡುದು ಯಾರು ? ಎಂದು ಮಾವ ಕೋಪದಿಂದ ಕೇಳಿದರು.ಯಾರು ಬೇಕಾದರೂ ಮಾಡಿ ನನಗೆ ಗೊತ್ತಿಲ್ಲ.. ನಾನು ಮುಂದೆ ಓದುತ್ತೇನೆ ಎಂದು ಹೇಳಿದೆ.ನಾವು ಓದಿಸಿದರೆ ತಾನೇ ನೀನು ಓದುವುದು ಎಂದು ಅತ್ತೆ ಹೇಳಿದರು.
ನಾನು ಪ್ರಸಾದ್ ಹತ್ತರ ಕಡಾ ಖಂಡಿತವಾಗಿ ನಾನು ಮುಂದೆ ಓದಲೇ ಬೇಕು..ನೀವು ಓದಿಸಿದರೆ ಸರಿ..ಇಲ್ಲವಾದಲ್ಲಿ ತಂದೆ ಮನೆಗೆ ಹೋಗಿ ಓದುತ್ತೇನೆ ಎಂದು ನಿರ್ಧಾರಾತ್ಮಕವಾಗಿ ಹೇಳಿದೆ.ಅದಾಗಲೇ ಪ್ರಸಾದ್ ಕೂಡ ಮತ್ತೆ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದ್ದರು‌.ಮಂಗಳೂರಿನಲ್ಲಿ ಒಂದು ವೆಟರ್ನರಿ ಮೆಡಿಕಲ್ ಶಾಪ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರು. ತೀರಾ ಕಡಿಮೆ (ಎಂಟು ನೂರು ರುಪಾಯಿ ಎಂದು ನೆನಪು) ಸಂಬಳ .ಈ ಸಂಬಳದಲ್ಲಿ ಬೇರೆ ಮನೆ ಬಾಡಿಗೆ ಹಿಡಿದು ಬದುಕಲು ಅಸಾಧ್ಯ ಎಂದು  ಮನೆ ಮಂದಿಗೆ ಮಾತ್ರವಲ್ಲ ನಮಗೂ ಗೊತ್ತಿತ್ತು.."ಇಷ್ಟು ಕಡಿಮೆ ಸಂಬಳದಲ್ಲಿ ಬೇರೆ ಮನೆ ಮಾಡಿ ಹೇಗೆ ಅವಳನ್ನು ಓದಿಸ್ತಾನೆ ಅವನು ? ಒಮ್ಮೆ ಮನೆ ಬಿಟ್ಟು ಹೋದರೆ ಮತ್ತೆ ಮನೆ ಸೇರಿಸುವುದಿಲ್ಲ " ಇತ್ಯಾದಿ ಮಾತುಗಳನ್ನು ನನಗೆ ಕೇಳುವ ಹಾಗೆ ಹೇಳುತ್ತಿದ್ದರು.
ಅಂತೂ ಇಂತೂ ಬಿಎಸ್ಸಿ ರಿಸಲ್ಟ್ ಬಂತು ,ಪಾಸಾಗಿದ್ದೆ ಆದರೆ ಎಂ ಎಸ್ಸಿಗೆ ಸೇರುವಷ್ಟು ಮಾರ್ಕ್ಸ್ ಇರಲಿಲ್ಲ.ಹಾಗಾಗಿ ಸಂಸ್ಕೃತ ಎಂಎ ಗೆ ಸೇರುವುದೆಂದು ಒಂದು ದಿನ  ನಿರ್ಧರಿಸಿ ಕಟೀಲಿಗೆ ಬಂದು ವಿಚಾರಿಸಿ ಹೋಗಿದ್ದೆ‌.ನನಗೆ ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದ ಕಾರಣ ಸೀಟು ಕೊಡುತ್ತೇನೆ,ಮಾರ್ಕ್ಸ್ ಕಾರ್ಡ್ ತಗೊಂಡು ಬಾ,ಎಂದು ಹೇಳಿ ಕೊನೆಯ ದಿನಾಂಕವನ್ನು ಅಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರು ಹೇಳಿದರು.
ಇತ್ತ ಮನೆಯಲ್ಲಿ ಅಘೋಷಿತ ಕರ್ಫ್ಯೂ..ನನ್ನನ್ನು ನೋಡಿದರೆ ಉಗ್ರಗಾಮಿಯನ್ನು ನೋಡಿದ ಹಾಗೆ ಮಾಡುತ್ತಿದ್ದರು.ಮನೆಗೆ ಬಂದ ನೆಂಟರುಗಳು ಕೂಡ ಗಾಯಕ್ಕೆ ಉಪ್ಪು ಹಚ್ಚಿ ಉರಿ ಹೆಚ್ಚಾಗುವಂತೆ ಮಾಡಿತ್ತಿದ್ದರು..ಇನ್ನೇನು ಮರುದಿನ ಎಂಎಗೆ ಸೇರಲು‌ ಕೊನೆಯ ದಿನ ಎಂದಾಗ ಹಿಂದಿನ ದಿನ ಪ್ರಸಾದ್ ಹತ್ತಿರ ಹಠ ಹಿಡಿದು ಎಂಎ ಗೆ ಸೇರುವ ಸಲುವಾಗಿ ಉಜಿರೆಗೆ ಹೋಗಿ ಮಾರ್ಕ್ಸ್ ಕಾರ್ಡ್ ತಂದೆ‌..ಮುಂದಿನದನ್ನು ಈ ಹಿಂದೆಯೇ ಬರೆದಿರುವೆ.
ಇದಾಗಿ ವರ್ಷ ಗಳು ಉರುಳಿದವು.ಒಮ್ಮೆ ಮನೆ ಬಿಟ್ಟು ಹೊರ ನಡೆದರೂ ಮತ್ತೆ ರಾಜಿಯಾಯಿತು.ನಾವು ಯಾವಾಗಲಾದರೂ ಬಂದು ಹೋಗುತ್ತಿದ್ದೆವು.ನಾನು ಹಠ ಹಿಡಿದು ಓದಿ ರ‍್ಯಾಂಕ್ ತೆಗದು ಕೆಲಸಕ್ಕೆ ಸೇರಿದಾಗ ಅತ್ತೆಯವರಿಗೆ ನನ್ನ ಬಗ್ಗೆ ಮೆಚ್ಚುಗೆ ಮೂಡಿತ್ತು.
ಹೀಗೆ ಒಂದು ಬಾರಿ ಮನೆ ಹೋಗಿದ್ದಾಗ ಮಾವನವರು ಕೈತೋಟದಲ್ಲಿ ಬೆಳೆಸಿದ ಗುಂಡಗಿನ ನಾಲ್ಕೈದು ಬದನೆಕಾಯಿಗಳನ್ನು ಕೊಯ್ದು ತಂದಿಟ್ಟಿದ್ದರು.ಆಗ ಅತ್ತಿಗೆ ವೀಣಾ( ಪ್ರಸಾದ್ ತಂಗಿ) "ಅಬ್ಬೆ ಇದರ ಸುಟ್ಟು ಹಾಕಿ ಗೊಜ್ಜಿ ಮಾಡುತ್ತೀರಾ" ( ಅಮ್ಮ ಇದನ್ನು ಸುಟ್ಟು ಬದನೆ ಗೊಜ್ಜು ಮಾಡುತ್ತೀರಾ?) ( ಪ್ರಸಾದ್ ಮನೆಯಲ್ಲಿ ಮಕ್ಕಳು ತಾಯಿಗೆ ಅಬ್ಬೆ ಎಂದು ಕರೆದು ಬಹುವಚನದಲ್ಲಿ‌ಮಾತನಾಡುತ್ತಿದ್ದರು) ಎಂದು ಕೇಳಿದಳು.ಆಗ ಅತ್ತೆಯವರು ನನಗೆ ಬದನೆ ಗೊಜ್ಜು ಮಾಡಲು ಸರಿಯಾಗಿ ಗೊತ್ತಿಲ್ಲ ಎಂದು ಹೇಳಿದರು.ಆಗ ಅಲ್ಲೇ ಇದ್ದ ನಾನು "ಗೊಜ್ಜು ಮಾಡಲು ನನಗೆ ಬರುತ್ತದೆ, ನಾನು ಮಾಡಲಾ ? ಎಂದು ಕೇಳಿದೆ.ಆಗ ಅತ್ತೆ ಒಪ್ಪಿದರು.ಉಳಿದವರೆಲ್ಲ ನನ್ನತ್ತ ಒಂದು ತಿರಸ್ಕಾರದ ನೋಟ ಬೀರಿ ಎದ್ದು ಹೋದರು‌.ಬೆಸ್ನೀರು ಕೊಟ್ಟಗೆಯ( ಸ್ನಾನದ ಮನೆ) ಹಿಂಭಾಗ ನೀರು ಬಿಸಿ ಮಾಡಲು ದೊಡ್ಡದಾದ ಒಲೆ ಇತ್ತು.ಅಲ್ಲಿ ನಿಗಿ ನಿಗಿ ಕೆಂಡ ಇತ್ತು.ಎರಡು ಬದನೆಕಾಯಿಗಳನ್ನು ತೊಳೆದು ಒರಸಿ ಕೆಂಡದಲ್ಲಿ ಸುಟ್ಟು ಸಿಪ್ಪೆ ತೆಗೆದು  ಹಿಸುಕಿ,ಉಪ್ಪು,ಹುಳಿ,ಸ್ವಲ್ಪ ಬೆಲ್ಲ ಸ್ವಲ್ಪ ನೀರು ಹಾಕಿ ಕುದಿಸಿದೆ‌.ಹದ ಬಂತು ಅನಿಸಿದಾಗ ಬೆಳ್ಳುಳ್ಳಿ ಒಗ್ಗರಣೆ ಹಾಕಿದೆ ಎರಡು ಮೆಣಸು ಹುರಿದು ಹಿಸುಕಿ ಹಾಕಿ ಕದಡಿದೆ,ಘಮ್ ಅಂತ ಪರಿಮಳ ಬಂದಾಗ ಗೊಜ್ಜು ಸರಿಯಾಗಿ ಎಂದೆನಿಸಿ ಮುಚ್ಚಿ ಇಟ್ಟೆ.
ಮಧ್ಯಾಹ್ನ ಎಲ್ಲರೂ ಊಟಕ್ಕೆ ಕುಳಿತರು.ಗೊಜ್ಜು ನನಗೆ ನನಗೆ ಬೇಡ ಎಂದು ಮನೆ ಮಂದಿ ಹೇಳಿದರೂ ರುಚಿ ನೋಡಿ ಎಂದು ಅತ್ತೆ ಬಲವಂತದಿಂದ ಎಲ್ಲರ ಬಟ್ಟಲಿಗೂ ಒಂದೊಂದು ಚಮಚದಷ್ಟು ಬಳಸಿದರು.ಒಬ್ಬೊಬ್ಬರೇ ಸ್ವಲ್ಪ ನೆಕ್ಕಿ ನೋಡಿ‌ ಮತ್ತೆ ಹಾಕಿ ಕೊಂಡರು‌.ಬದನೆ ಗೊಜ್ಜು ನನಗೆ ಬಹಳ ಇಷ್ಟ ನಾನು ಹಾಕಿಕೊಂಡು ಉಂಡೆ,ಅತ್ತೆ ರುಚಿ ನೋಡಿ " ತುಂಬಾ ಲಾಯ್ಕ ಅಯಿದು( ತುಂಬಾ ಚೆನ್ನಾಗಿದೆ) ಎಂದು ನನ್ನ ಕೆಲಸದ ಬಗ್ಗೆ ಮೊದಲ ಮತ್ತು ಕನೆ ಬಾರಿಗೆ ಮೆಚ್ಚುಗೆಯ ಮಾತನಾಡಿದ್ದರು...ಈವತ್ತು ತೇಜಸ್ವಿನಿ ಪೇಸ್ ಬುಕ್ ನಲ್ಲಿ ಬದನೆ ಗೊಜ್ಜು ಮಾಡಿದ ರೀತಿಯನ್ನು ವಿವರಿಸಿ ಪೇಸ್ ಬುಕ್ ನಲ್ಲಿ ಹಾಕಿದ್ದನ್ನು ಓದುತ್ತಲೇ ನನಗೆ ಜೀವನದಲ್ಲಿ ಒಂದೇ ಒಂದು ಬಾರಿ ಅತ್ತಯವರ ಕೈಯಿಂಂದ ಪಡೆದದ್ದು ನೆನಪಾಗಿ ಇಷ್ಟೆಲ್ಲ ಬರೆದೆ