Thursday 5 April 2018

ದೊಡ್ಡವರ ದಾರಿ :55 -ದಿಟ್ಟ ನಿಲುವಿನ ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿ :55 -ದಿಟ್ಟ ನಿಲುವಿನ  ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ
ಸಾಮಾನ್ಯವಾಗಿ ನಾವು ಅನ್ಯಾಯ ನಡೆದಾಗ ಕೂಡ ಸಹಿಸಿಕೊಂಡು ಮೌನವಾಗಿ ಬಿಡುತ್ತೇವೆ.ಯಾಕೆಂದರೆ ನ್ಯಾಯವನ್ನು ಪಡೆಯುವುದು ಸುಲಭದ ದಾರಿಯಲ್ಲ.ನ್ಯಾಯಕ್ಕಾಗಿ ಅಲೆದಾಡುವುದು ಅನ್ಯಾಯವಾದದ್ದಕ್ಕಿಂತ ಹೆಚ್ಚಿನ ಕಷ್ಟ ಆಗುತ್ತದೆ ಎಂಬುದು ನ್ಯಾಯಕ್ಕಾಗಿ ಹೋರಾಡುವ ನನ್ನ ಸ್ವಂತ ಅನುಭವ.
ಆದರೂ ವೈಯುಕ್ತಿಕವಾಗಿ ತೀರಾ ಅನ್ಯಾಯವಾದಾಗ ನಾವು ಹೋರಾಡುತ್ತೇವೆ.ಹೆಚ್ಚಿನವರೂ ಅಲೆದಾಟ ಸಾಕಾಗಿ  ಅರ್ಧದಲ್ಲಿಯೇ ಕೈಬಿಡುತ್ತಾರೆ.ಯಾಕೆಂದರೆ ಇಂದು ನ್ಯಾಯ ಪಡೆಯಲು ಕೂಡ ಅಷ್ಟೇ ಪರಿಶ್ರಮ ಪಡಬೇಕಾಗುತ್ತದೆ.
ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರ ಸಂಖ್ಯೆ ತೀರಾ ಕಡಿಮೆ‌.ಅನ್ಯಾಯ ನಡೆದಾಗ ಜನರ ಮುಂದೆ ಎರಡು ದಾರಿಗಳು ಇರುತ್ತವೆ‌.ಒಂದು ಅನ್ಯಾಯ ಮಾಡಿದವರ ವಿರುದ್ಧ ತಾನೇ ಹೋರಾಡುವುದು‌.ಇಲ್ಲಿ ಅಂತಹವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ.ಎರಡನೆಯದು ನ್ಯಾಯಾಂಗ ಆಧರಿತ ಹೋರಾಟ‌.ಪೋಲಿಸರಿಗೆ ದೂರು ಕೊಡುವುದು,ನಂತರ ನ್ಯಾಯಾಲಯದಲ್ಲಿ ಹೋರಾಡುವುದು‌.
ಇಲ್ಲಿ ರಾಜಾರಾಮ ಭಟ್ ಈ ಎರಡನೆಯ ದಾರಿಯನ್ನು ಆಯ್ಕೆ ಮಾಡಿಕೊಂಡವರು‌.
ನಡೆದ ವಿಚಾರವನ್ನು ಸಂಕ್ಷಿಪ್ತವಾಗಿ ಹೇಳಿ ಬಿಡುತ್ತೇನೆ.
ಬಂಟ್ವಾಳ ತಾಲೂಕಿನ ಕೈರಂಗಳದಲ್ಲಿ ಒಂದು ಗೋಶಾಲೆಯಲ್ಲಿ ಕಟ್ಟಿ ಮಲೆನಾಡು ಗಿಡ್ಡ ಮೊದಲಾದ ಅಪರೂಪದ ತಳಿಯ ಗೋವುಗಳ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ‌.ಇದರ ವ್ಯವಸ್ಥಾಪಕರು ರಾಜಾರಾಮ ಭಟ್ ಅವರು‌.
ಇಲ್ಲಿನ ಗೋಶಾಲೆಯಿಂದ ಇದಕ್ಕೆ ಮೊದಲೇ ಎರಡು ಭಾರಿ ಹಸುಗಳನ್ನು ಕದ್ದೊಯ್ದಿದ್ದಾರೆ.ಈ ಬಾರಿ ಇಲ್ಲಿ ನಡೆದದ್ದು ಕೇವಲ ಗೋವುಗಳ ಕಳ್ಳತನವಲ್ಲ .
ಈ ಭಾರಿ ತಲವಾರು ತೋರಿಸಿ ಬಲವಂತವಾಗಿ ಗೋವನ್ನು ಎತ್ತಿಕೊಂಡು ಹೋದದ್ದಲ್ಲದೆ ಇನ್ನೂ ಬರುತ್ತೇವೆ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಹಾಕಿದ್ದಾರೆ‌.
ಕಳ್ಳತನ ಹೇಡಿಗಳ ಕಾರ್ಯ .ಅದರೆ ಇದು ಬಹಳ ದೌರ್ಷ್ಟ್ಯದ ಕೆಲಸ.ಇಂದು ತಲವಾರು ತೋರಿಸಿ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಮಾಡಿ  ಸಂರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಯಿಂದ ಬಲವಂತವಾಗಿ ಎತ್ತಿಕೊಂಡು ಹೋದವರು ಮುಂದೆ ಮನೆಯ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗಲಾರರೇ ? ಇದು ನನ್ನ ಆತಂಕ ಕೂಡ.
ಇಲ್ಲಿ ನಡೆದ ಗೋ ಕಳ್ಳತನದ ವಿರುದ್ಧ ಪೋಲಿಸರಿಗೆ ಅಮೃತ ಧಾರಾ ಗೋಶಾಲೆಯ ವ್ಯವಸ್ಥಾಪಕರಾದ ರಾಜಾರಾಮ ಭಟ್ ಅವರು ದೂರು ನೀಡಿದ್ದಾರೆ‌.ಅದರೆ ಆರೋಪಗಳನ್ನು ಬಂಧಿಸದ ಕಾರಣ ಈಗ ಹೋರಾಟದ ಮೂರನೆಯ ಆಯಾಮವಾದ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ‌
ಕಳೆದ ಆರು ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಇವರು ಮಾಡುತ್ತಿದ್ದಾರೆ‌.ಅವರೇ ಹೇಳಿದಂತೆ ಇದು ಗಾಂಧೀಜಿಯವರು ಹಾಕಿ ಕೊಟ್ಟ ದಾರಿ ಇದು.ಅಹಿಂಸಾ ಮಾರ್ಗದ ಶಕ್ತಿಯುತ ಹೋರಾಟವಿದು‌.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕೂಡ ಪ್ರೇರಕವಾದ ಹೋರಾಟದ ಮಾರ್ಗವಿದು.
ಆದರೆ ಇದನ್ನು ಕೈಗೊಳ್ಳಲು ಬಹಳ ದಿಟ್ಟತನ ಬೇಕು ಮನೋ ನಿಗ್ರಹ ಬೇಕು.
ಒಂದು ಹೊತ್ತಿನ ಊಟ ತಿಂಡಿ ತಪ್ಪಿದರೇ ಒದ್ದಾಡುವ ನಮಗೆ ಕಳೆದ ಆರ ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ರಾಜಾರಾಮ ಭಟ್ ಅವರ ಮನೋಸ್ಥೈರ್ಯವನ್ನು ಊಹೆ ಮಾಡುವುದು ಕಷ್ಟದ ವಿಚಾರ‌.ಯಾಕೆಂದರೆ ಇಲ್ಲಿ ಜೀವಾಪಾಯ ಕೂಡ ಇದೆ‌.ನಮ್ಮಂತೆ ಅವರಿಗೆ ಕೂಡ ಹೆಂಡತಿ ‌ಮಗಳ ಸಂಸಾರವಿದೆ.ಅವರ ಜವಾಬ್ದಾರಿ ಕೂಡ ಇದೆ.( ಇವರ ಮಡದಿ ಜ್ಯೋತಿ ಮತ್ತು ನಾನು ಬಾಲ್ಯ ಸ್ನೇಹಿತೆಯರು‌ಒಂದೇ ಶಾಲೆಯಲ್ಲಿ ಓದಿದವರು.ಅವರು ನನಗಿಂತ ಒಂದು ವರ್ಷ ಸೀನಿಯರ್ )
ಅವೆಲ್ಲವನ್ನೂ ಮೀರಿ ನಿಂತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವ ರಾಜಾರಾಮ ಭಟ್ ಅವರ ದಿಟ್ಟ ನಿಲುವನ್ನು ಯಾರು ಕೂಡ ಮೆಚ್ಚಬೇಕಾದದ್ದೇ ಆಗಿದೆ.ಇವರೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಾ ಇರುವ ವಿಶ್ವನಾಥ್,ದೇವರಾಜ್,ಪ್ರಭಾವತಿ ತಲೆಂಗಳ,ರಾಜೇಶ್
ರತೀಶ್ ಶೆಟ್ಟಿ,ಪ್ರಶಾಂತ್ಕೊಣಾಜೆ  ಶಂಕರ ಭಟ್ ಬಾಲಸುಬ್ರಹ್ಮಣ್ಯ,ಮೋಹನ ಇವರುಗಳು ಕೂಡ ಸ್ತುತ್ಯರ್ಹರೇ ಆಗಿದ್ದಾರೆ, ಏನಂತೀರಿ ? ನಿಮ್ಮ ಅಭಿಪ್ರಾಯ ತಿಳಿಸಿ