Friday 21 December 2018

ದೊಡ್ಡವರದಾರಿ : ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಕೆ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ


ನಮ್ಮ ನಮ್ಮ ಕನಸುಗಳ ಈಡೇರಿಕೆಗಾಗಿ ಸಾಧನೆ ಮಾಡುವವರು ನೂರಾರು ಮಂದಿ ಇದ್ದಾರೆ ಆದರೆ ತಮ್ಮ ಸರ್ವಸ್ವವನ್ನೂ ಸಮಾಜ ಸೇವೆಗೆ ಮುಡಿಪಾಗಿಡುವವರ ಸಂಖ್ಯೆ ತೀರಾ ಕಡಿಮೆ..ಹೀಗೆ ಸಮಾಜ ಸೇವೆಗಾಗಿ ಅನಾಥ ಬಡ ಮಕ್ಕಳಿಗಾಗಿ ಸ್ವಂತ ಮನೆ ಸೈಟುಗಳನ್ನು  ಮಾರಾಟ ಮಾಡಿ ತಮ್ಮನ್ನು ಸಮಾಜ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡು ಹಲವರಿಗೆ ದಾರಿ ದೀಪ ವಾದವರು ಪದ್ಮಾ ಕೆ ಭಟ್  ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡುವ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ  ನನ್ನ್ನುಯ ನಾಮಿನೇಟ್ ಮಾಡಿದವರು ಕೂಡ ಇವರು.ನನ್ನ ಸಾಧನೆಯ ಬಗ್ಗೆ ಮನವರಿಕೆ ಮಾಡಿಸಿದವರು ಕೂಡ ಇವರು.ವಿವಾಹಾನಂತರ ಸಮಾಜದ ಕಟ್ಟುಪಾಡುಗಳನ್ನು ಮೀರಿ ಓದಿ ಸಾಧನೆಯ ದಾರಿ ಹಿಡಿದ ನನಗೆ ಅನೇಕ ಶತ್ರು ಗಳು ಕೂಡ ಇದ್ದಾರೆ. ನನಗೆ ಬಂದಂತಹ ಒಂದು ಮಾಹಿತಿ ಪ್ರಕಾರ ಇಂತಹವರಲ್ಲಿ ಯಾರೋ ಕೆಲವರು ನನ್ನ ಪತಿ ಗೋವಿಂದ ಪ್ರಸಾದ ಹವ್ಯಕರೆಂದು ಗೊತ್ತಿದ್ದರೂ ಕೂಡ ಅವರಯ ಹವ್ಯಕರಲ್ಲವೆಂದು ಹೇಳಿ,ಪ್ರಶಸ್ತಿ ಬಾರದಂತೆ ಮಾಡಲು ಯತ್ನ ಮಾಡಿದರಂತೆ..ಆಗ ನನ್ನ ಪತಿ ಗೋವಿಂದ ಪ್ರಸಾದರು ಹವ್ಯಕರೆಂದು ತಿಳಿಸಿ ನನ್ನ ಪರ ನಿಂತವರು ಪದ್ಮಾ ಭಟ್ .
ಇವರು ನಿಜಕ್ಕೂ ನನಗಿಂತ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಹೆಚ್ಚು ಅರ್ಹರು ಎಂದು ನನ್ನ ಅಭಿಪ್ರಾಯ ಹಾಗಾಗಿ ನಾನು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದೆ,ಅವರು ಸಮಾಜ ಸೇವೆ ವಿಭಾಗದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ ಗೆ ಆಯ್ಕೆ ಆಗಿರುವರೋ ಇಲ್ಲವೋ ನನಗೆ ತಿಳಿಯದು . ಸಾಧನೆಯ ಹಾದಿ ಹೂ ಹಾಸಿನದು ಅಲ್ಲ.ಅಲ್ಲಿ ಕಲ್ಲು ಮುಳ್ಳುಗಳೇ ಹೆಚ್ಚಿರುತ್ತವೆ.ನನ್ನಂತೆ ಅವರು ಕೂಡ ಆರೋಪಗಳಿಗೆ ಒಳಗಾಗಿರಬಹುದು .ಆದರೆ ಅಂತಿಮವಾಗಿ ಸತ್ಯಕ್ಕೆ ಜಯ ನಿಶ್ಚಿತ  ಹಾಗಾಗಿ  ಅವರು ನಿಜಕ್ಕೂ ಹವ್ಯಕ ರತ್ನ
ಹಾಗಾಗಿ ಅವರ ಬಗ್ಗೆ ದೊಡ್ಡವರ ದಾರಿ ಅಂಕಣದಲ್ಲಿ ಒಂದು ಬರಹ ಬರೆದಿದ್ದೆ.ಅವರ ಸಂಕ್ಷಿಪ್ತ ಪರಿಚಯವನ್ನು ಇನ್ನೊಮ್ಮೆ ನೀಡಲು ನಾನು ಹೆಮ್ಮೆ ಪಡುತ್ತೇನೆ.

ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ನ ಸಂಸ್ಥಾಪಕಿ ಪದ್ಮಾ ಕೆ ಭಟ್‍ರವರ ಕಿರುಪರಿಚಯ:

ಪದ್ಮಾ ಕೆ.ಭಟ್ ರವರು ಕಳೆದ ಸುಮಾರು ಹದಿನೆಂಟು ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಶ್ರೀ ಸತ್ಯ ಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್(ರಿ) ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿ, ಅನಾಥ ಮತ್ತು ಬಡ ಮಕ್ಕಳ ಆಶ್ರಮ,  ವೃದ್ಧಾಶ್ರಮ, ಮಹಿಳಾ ಸೇವಾಶ್ರಮ, ನಿತ್ಯ ಅನ್ನದಾನ ಇತ್ತಯಾದಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು   "ಆಸರೆ " ಅನ್ನುವ  ಹೆಸರಿನಡಿ  ನಡೆಸುತ್ತಿದ್ದಾರೆ..ಇಲ್ಲಿ 1ರಿಂದ 10ನೇ ತರಗತಿಯತನಕ ಬಡ ಮಕ್ಕಳಿಗೆ ಉಚಿತ ಊಟ, ವಸತಿ, ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ನ್ನು ನೀಡಿದ್ದಾರೆ.. “ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯ”ವನ್ನು ಮೈಸೂರು ರಸ್ತೆಯ ಚಳ್ಳಘಟ್ಟ ಎಂಬಲ್ಲಿ ಪ್ರಾರಂಭಿಸಿ,, 1ರಿಂದ 5ನೇ ತರಗತಿಯತನಕದ ಪುಟ್ಟ ಮಕ್ಕಳಿಗೆ ಆಶ್ರಮದ ಆವರಣದಲ್ಲೇ ವಿದ್ಯಾಭ್ಯಾಸದ ವ್ಯವಸ್ಥೆಯನ್ನೂ ಮಾಡಿದ್ದಾರೆ..

ಸತ್ಯ,ನ್ಯಾಯ, ಧರ್ಮಕ್ಕಾಗಿ ಹೋರಾಟ...ಮಹಿಳೆಯರ, ಬಡವರ ಮತ್ತು ನೊಂದವರ ಮುಖವಾಣಿಯಾಗಿ..ರಾಜಧಾನಿ ಎಕ್ಸ್‍ಪ್ರಸ್, ಕನ್ನಡ ಮಾಸ ಪತ್ರಿಕೆಯ ಸಂಪಾದಕರಾಗಿ, ಪ್ರಕಾಶಕರಾಗಿ ಮಾಧ್ಯಮ ಬಲಯದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ...
ಶ್ರೀ ನಾಗಬ್ರಹ್ಮ ದೇವಸ್ಥಾನ, ನಾಗದೇವನಹಳ್ಳಿ, ಬೆಂಗಳೂರು ಇದರ ಸಂಸ್ಥಾಪಕ ಧರ್ಮದರ್ಶಿಗಳಾಗಿ, ಮಹಿಳಾ ಉದ್ಯಮಿಯಾಗಿ ...ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ಪದ್ಮಾ ಕೆ.ಭಟ್ ರವರು ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ಸಂಸ್ಥೆ ಮತ್ತು ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯದ ಮೂಲಕ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಊಟ, ವಸತಿ, ಆರೋಗ್ಯ ತಪಾಸಣೆಯ ಜೊತೆಗೆ, ನುರಿತ ಶಿಕ್ಷಕರಿಂದ ಪಾಠ, ನೃತ್ಯ, ಸಂಗೀತ, ಸಾಂಸ್ಕøತಿಕ ಕ್ರೀಡೆಗಳು ಹೀಗೆ ಹಲವು ಆಯಾಮಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃಧ್ಧಿಗೆ ಶ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಸಮಾಜದಲ್ಲಿ ಬಡ ಮಹಿಳೆಯರಿಗಾಗಿ ಸ್ವ-ಉದ್ಯೋಗ ತರಬೇತಿ ಶಿಬಿರಗಳು, ಮಹಿಳಾ ಅಬಲಾಶ್ರಮ, ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದಾರೆ.
ಪದ್ಮಾ ಕೆ.ಭಟ್ ರವರು ನಾಗದೇವನಹಳ್ಳಿಯಲ್ಲಿ ಶ್ರೀ ನಾಗಬ್ರಹ್ಮ ದೇವಸ್ಥಾನವನ್ನು ಕಟ್ಟಿಸಿ, ನಿತ್ಯ ಪೂಜೆಯ ಜೊತೆಗೆ, ಪ್ರತೀ ತಿಂಗಳು ಕುಕ್ಕೆ ಸುಬ್ರಹ್ಮಣ್ಯದ ಮಾದರಿಯಲ್ಲಿ ಆಶ್ಲೇಷ ಬಲಿ ಪೂಜೆ,ಹೋಮ..ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನದಾನವನ್ನು ನಡೆಸುತ್ತಿದಾರೆ.                                                                   
ಮೂಲತಃ ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರು ತಾಲೂಕಿನ “ಕಾವು” ಎಂಬ ಹಳ್ಳಿಯವರಾದ  ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ದಿ|| ಕಾವು ಕೃಷ್ಣಾಭಟ್ ಮತ್ತು ದೇವಕಿ ದಂಪತಿಯ ಮೊದಲ ಮಗಳಾದ ಪದ್ಮಾ ಕೆ ಭಟ್, ಪುತ್ತೂರು ತಾಲೂಕಿನ ಪೆರ್ನಾಜೆಯ ಶ್ರೀ ಸೀತಾರಾಘವ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು  ಮುಗಿಸಿ, 2 ವರ್ಷಗಳ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ನಂತರ ಮಂಗಳೂರಿನ ಸರಕಾರಿ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೊಮೊ ಇನ್ ಟೆಲಿಕಮ್ಯುನಿಕೇಷನ್ ಇಂಜನಿಯರಿಂಗ್ ಮುಗಿಸಿ, 1987 ರಲ್ಲಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಮೆ|| ಬಿಹೆಚ್‍ಇಎಲ್‍ನಲ್ಲಿ ಡಿಪ್ಲೊಮೊ ಅಪ್ರೆಂಟೀಸ್ ಟ್ರೈನಿಯಾಗಿ, ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರ “ಸ್ತ್ರೀ ಶಕ್ತಿ ಪ್ಯಾಕೇಜ್” ಎಂಬ ಮಹಿಳಾ ಉದ್ಯಮಶೀಲತಾ ತರಬೇತಿ ಮುಗಿಸಿ 1991ರಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ “ನಿಯೋ ಶಾರ್ಪ್ ಇಂಜಿನಿಯರಿಂಗ್ ಟೆಕ್ನಾಲಜೀಸ್” ಎಂಬ ಸಣ್ಣ ಕೈಗಾರಿಕೋದ್ದಿಮೆಯನ್ನು ಪ್ರಾರಂಭಿಸಿದರು. ಇಂದು 30ಜನ  ಕಾರ್ಮಿಕರಿಗೆ ಜೀವನೋಪಾಯ ಕಲ್ಪಿಸಿ ಯಶಸ್ವೀ ಮಹಿಳಾ ಉದ್ಯಮಿಯೆನಿಸಿಕೊಂಡಿದ್ದಾರೆ.
ಒಬ್ಬ ಮಹಿಳೆಯಾಗಿ, ಮಹಿಳಾ ಉದ್ಯಮಿಯಾಗಿ  ಸಮಾಜ ಸೇವೆಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು, ಯಾರ ನೆರವೂ ಇಲ್ಲದೇ ಮತ್ತು ಸರ್ಕಾರದಿಂದ ಯಾವ ಸಹಾಯವನ್ನೂ ಪಡೆಯದೇ ಅನೇಕ ಬಡ ಮಕ್ಕಳ, ನಿರ್ಗತಿಕ ಮಹಿಳೆಯರ ಮತ್ತು ನೊಂದವರ ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ, ನಿಸ್ವಾರ್ಥವಾಗಿ  ಶ್ರಮಿಸುತ್ತಿದ್ದಾರೆ.
ಇವರ ಸಮಾಜಸೇವೆ ಮತ್ತು ಧಾರ್ಮಿಕ ಸೇವೆಯನ್ನು ಗುರುತಿಸಿ ಇವರಿಗೆ 2005 ರಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ರೋಟರಿ ಕ್ಲಬ್, ಮೈಸೂರು ಉತ್ತರ ಇವರಿಂದ ಸನ್ಮಾನ, ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಕೆಂಗೇರಿ ಉಪನಗರ ಇವರಿಂದ 2009ರಲ್ಲಿ ಶ್ರೇಷ್ಠ ಸಮಾಜ ಸೇವಕಿ ಪ್ರಶಸ್ತಿ,2011ರಲ್ಲಿ ಅಭಿಮಾನಿಗಳ ಸಂಗಮ(ರಿ) ಇವರಿಂದ ಶಿರ್ಡಿ ಶ್ರೀ ಸಾಯಿಬಾಬ ನ್ಯಾಷನಲ್ ಅವಾರ್ಡ್, ಜನ್ಮಭೂಮಿ ಸಾಂಸ್ಕøತಿಕ ಮತ್ತು ನಾಗರಿಕರ ವೇದಿಕೆ(ರಿ) ಇವರಿಂದ ಆದರ್ಶ ರತ್ನ ಪ್ರಶಸ್ತಿ, ಸ್ಪಂದನಾ ಸೇವಾ ಸಂಸ್ಥೆ(ರಿ) ಇವರಿಂದ ಸಾಮಾಜಿಕ ಸೇವಾ ಸ್ಪಂದನ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಪೊಲೀಸ್ ಪತ್ರಿಕೆಯ ವತಿಯಿಂದ ಅತ್ಯುತ್ತಮ ನಾಗರಿಕ ಪ್ರಶಸ್ತಿ, ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ(ರಿ) ಇವರಿಂದ 2012 ನೇ ಸಾಲಿನ ಕಡಲ ತೀರದ ಭಾರ್ಗವ ಡಾ|| ಕೆ.ಶಿವರಾಮ ಕಾರಂತರ ಸದ್ಭಾವನಾ ರಾಜ್ಯ ಪ್ರಶಸ್ತಿ, 2013 ರಲ್ಲಿ ಸುರಕ್ಷಾ ಸೇವಾಶ್ರಮ(ರಿ) ಇವರಿಂದ ಸುರಕ್ಷಾ ರಾಜ್ಯ ಪ್ರಶಸ್ತಿ, ಶಾರದಾ ಕಲಾನಿಕೇತನ(ರಿ) ಇವರಿಂದ ಸಮಾಜಸೇವಾ ಶ್ರೇಷ್ಠ ರತ್ನ ಪ್ರಶಸ್ತಿ ಇತ್ಯಾದಿ ಹಲವಾರು ಸಂಘ-ಸಂಸ್ಥೆಗಳು ಅಭಿನಂದನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇವರ ಸಂದರ್ಶನ ಕಾರ್ಯಕ್ರಮಗಳು ಚಂದನ(ಡಿ.ಡಿ.9), ಈ-ಟಿವಿ,(ಇಂದಿನ ಕಲರ್ಸ್) ಸುವರ್ಣವಾಹಿನಿ ಇತ್ಯಾದಿ ಹಲವಾರು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಈ ರೀತಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪದ್ಮಾ ಕೆ ಭಟ್ ರವರು ತಮ್ಮ ಬದುಕನ್ನು “ಇತರರಿಗಾಗಿ ಮೀಸಲಿಟ್ಟಿದ್ದಾರೆ” ಎಂದರೆ ಅತಿಶಯೋಕ್ತಿಯಲ್ಲ. “ಮಾನವತೆಯ ಸೇವೆಯೇ ಜೀವನದ ಅತ್ಯುತ್ತಮ ಸೇವೆ” ಎಂಬ ಜೇಸಿ ಸಂಸ್ಥೆಯ 10ನೇ ಧ್ಯೇಯ ವಾಣಿಯಂತೆ ನಂಬಿ ನಡೆಯುತ್ತಿರುವ ಎಲೆ ಮರೆಯ ಕಾಯಿ ಇವರು. ಇವರ ಈ ಎಲ್ಲಾ ಸೇವೆಯನ್ನು ಸರ್ಕಾರ,ದಾನಿಗಳು ಗುರುತಿಸಿ ಇವರ ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವಿನ ಹಸ್ತದೊಂದಿಗೆ ಬೆಂಬಲಿಸಿದರೆ ಇವರಿಂದ ಇನ್ನೂ ಹೆಚ್ಚಿನ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಬಹುದು.
 ,ಎಲ್ಲರೂ ಈ ಸಂಸ್ಥೆಗೆ ಉದಾರವಾಗಿ ಸಹಾಯ ಮಾಡಿ ಹೇಳಿ ಪದ್ಮಕ್ಕನ ಪರವಾಗಿ ನಾನು ಕೇಳಿಗೊಳ್ಳುತ್ತೇನೆ
ಈ ಸಂಸ್ಥೆ ಗೆ ಕೊಟ್ಟ ದುಡ್ಡಿ ಗೆ ಟ್ಯಾಕ್ಸ್ ವಿನಾಯತಿ ಇದ್ದು ಇವರ ಅಕೌಂಟ್ ನಂಬರ್ ಪೋನ್ ನಂಬರ್ ಗಳನ್ನು ಇಲ್ಲಿ ಕೊಡುತ್ತೇನೆ Please send your contributions to
Sri Satya Sai Mahila charitable trust (R)

SB a/c no 559010100076216
Ifs code : UTIB0000559
Axis Bank,
Rajajinagar Branch, Bangalore-10

Regards
Padmaa Bhat
Mob: 8884572149/9844540380

Sunday 9 December 2018

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್ ಕೆಪಿ ಸತ್ಯನಾರಾಯಣ

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್  ಕೆಪಿ ಸತ್ಯನಾರಾಯಣ


ನಮ್ಮ ಬ್ಯಾಡರ ಹಳ್ಳಿ ಪೋಲಿಸ್ ಸ್ಟೇಷನ್ ವ್ಯಾಪ್ತಿಯ ಮಾಗಡಿ ರಸ್ತೆ, ಉಳ್ಳಾಲು ಉಪನಗರ ಮೊದಲಾದ ಪ್ರದೇಶಗಳು ಕಳ್ಳತನ ರೌಡಿಸಂ,ದರೋಡೆಯ ಕಾರಣಗಳಿಗೆ ಕುಖ್ಯಾತಿಯನ್ನು ಪಡೆದಿದ್ದು ಈ ಪರಿಸರದಲ್ಲಿ ರಾತ್ರಿ ವೇಳೆಯಲ್ಲಿ ‌ಮಾತ್ರವಲ್ಲ ಹಗಲು ಕೂಡ ಓಡಾಡಲು ಜನ ಹಿಂಜರಿಯುತ್ತಾ ಇದ್ದರು.ಇಲ್ಲಿಗೆ ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಬಂದ ಕೆಪಿ ಸತ್ಯನಾರಾಯಣ ಅವರ ದಕ್ಷತೆ ಹಾಗೂ ಅವರ ನೇತೃತ್ವದಲ್ಲಿ ಅಳವಡಿಸಿಕೊಂಡ ಆಧುನಿಕ ತಂತ್ರಜ್ಞಾನದ ಸಲಕರಣೆಗಳ ಪರಿಣಾಮವಾಗಿ  ಇಲ್ಲಿ  ಅಪರಾಧಗಳ ಸಂಕ್ಯೆ ಗಣನೀಯವಾಗಿ ಕಡಿಮೆ ಆಗಿದೆ.(ಶೇಕಡಾ 70 ರಷ್ಟು) . ಬ್ಯಾಡರ ಹಳ್ಳಿ ಫೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಎಲ್ಲಾ ಚೌಕಗಳಲ್ಲಿ,ಆಯ ಕಟ್ಟಿನ ಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪೋಲಿಸ್ ಸ್ಟೇಷನ್ ನಿಯಂತ್ರಣ ಕೊಠಡಿಯಲ್ಲಿ  ನೋಡುವ ಮತ್ತು ನಿಯಂತ್ರಿಸುವ ವ್ಯವಸ್ಥೆ ಯನ್ನು ಇವರು ಅಳವಡಿಸಿದ್ದರು.ಕಸ ತುಂಬಿ ನಾರುತ್ತಿದ್ದ ಪೋಲಿಸ್ ಸ್ಟೇಷನ್ ನ ಪರಿಸರವನ್ನು ಸ್ವಚ್ಛ ಗೊಳಿಸಿ ಹುಲ್ಲಿನ ಹಾಸು ಗಿಡ‌ಮರ ಬೆಳೆಸಿ ಪಾರ್ಕ್ ನಂತೆ ಮಾಡಿದ್ದರು.ಮನಸಿದ್ದರೆ ಮಾರ್ಗವಿದೆ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ‌.
ಇಲ್ಲಿ ಅಳವಡಿಸಿದ ತಂತ್ರಜ್ಞಾನವನ್ನು ಎಲ್ಲೆಡೆ ಅನುಸರಿಸಿದರೆ ಎಲ್ಲಾ ಕಡೆಯಲ್ಲಿ ಕೂಡ ಅಪರಾಧಗಳ ಸಂಖ್ಯೆ ಖಂಡಿತಾ ಇಳಿಮುಖವಾದೀತು .(ಈ ಬಗ್ಗೆ ನಾನು ಒಂದು ಲೇಖನ ಬರೆದು ಪ್ರಕಟಿಸಲು ಯತ್ನ ಮಾಡಿದೆನಾದರೂ ಯಾಕೋ ಏನೋ ಪತ್ರಿಕೆಗಳು ಪ್ರಕಟಿಸುವ ಮನಸ್ಸು ಮಾಡಲಿಲ್ಲ.
ಸಾಮಾನ್ಯವಾಗಿ ಶೈಕ್ಷಣಿಕ ,ವೈಚಾರಿಕ ಅಥವಾ ತುಳು ಜಾನಪದ ಸಂಸ್ಕೃತಿಗಳ ಬಗ್ಗೆ ಮಾತ್ರ ಬರೆದು ಅಭ್ಯಾಸವಿರುವ ನಾನು ಇಲ್ಲಿ   ಅಳವಡಿಸಿದ ಆಧುನಿಕ ತಂತ್ರಜ್ಞಾನದ ಬಗ್ಗೆ ಮತ್ತು ಅದರ ಪರಿಣಾಮವಾಗಿ ಅಪರಾಧಗಳ ಕುಸಿತಗಳ ಬಗ್ಗೆ ಬರೆದದ್ದು ಅರ್ಥವಾಗುವ ಹಾಗೆ ಇರಲಿಲ್ಲವೋ, ಲೇಖನ ಆಶಯ ಸ್ಪಷ್ಟವಾಗಲಿಲ್ಲವೋ ,ಪತ್ರಿಕೆಗಳಿಗೆ ಬರೆಯುವುದು ಬಿಟ್ಟು ಎರಡು ಮೂರು ವರ್ಷಗಳಾಗಿದ್ದು ನಾನು ಅಪರಿಚಿತಳಾದೆನೋ ಅಥವಾ ಇದು ಸ್ಥಳೀಯ ಸುದ್ದಿ  ಮಾತ್ರ ಎನಿಸಿತೋ ಏನೋ ಗೊತ್ತಿಲ್ಲ.ಅಂತೂ‌ ಇಂತೂ ಪ್ರಕಟವಾಗಲಿಲ್ಲ.   ಒಳ್ಳೆಯ ವಿಚಾರವನ್ನು  ಜನರಿಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆ ನನಗೆ  ಬೇಸರವಿದೆ)
ಇರಲಿ ..
ಪ್ರಸ್ತುತ ನಮ್ಮ ಸುತ್ತಲಿನ ಪ್ರದೇಶಗಳನ್ನು ಸುರಕ್ಷಿತವಾಗಿ ಮಾಡಿದ್ದ ಕೆಪಿ ಸತ್ಯನಾರಾಯಣ ಅವರಿಗೆ ವರ್ಗಾವಣೆ ಆಗಿದೆಯಂತೆ.ಸರ್ಕಾರಿ ಉದ್ಯೋಗಿಗಳಿಗೆ ಕೆಲಸ ಮಾಡುವ ಸ್ಥಳ  ಶಾಶ್ವತವಲ್ಲ,ವರ್ಗಾವಣೆ ಇದ್ದದ್ದೇ ..ಆದರೂ ಇನ್ನೊಂದು ಎರಡು ವರ್ಷವಾದರೂ ಅವರು ಇಲ್ಲೇ ಇರಬೇಕಿತ್ತು.ಇದ್ದಿದ್ದರೆ ನಮ್ಮ ಪರಿಸರ ಸಂಪೂರ್ಣವಾಗಿ ಸುರಕ್ಷಿತವಾಗುತ್ತಿತ್ತು.ಅವರು ವರ್ಗಾವಣೆಗೊಂಡರೂ ಅವರು ಇಲ್ಲಿ ಮಾಡಿದ ಮಹತ್ಕಾರ್ಯ ವ್ಯರ್ಥವಾಗಲಾರದು.ಅದಕ್ಕಾಗಿ  ಅವರಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ .ಅವರಿಂದ ಆರಂಭವಾಗಿರುವ ವ್ಯವಸ್ಥೆ ಮುಂದುವರಿದೀತು.ಜೊತೆಯಲ್ಲಿ ಅವರು ವರ್ಗಾವಣೆಗೊಂಡು ಹೋಗುವ ಪರಿಸರದಲ್ಲಿ ಕೂಡ ಅಪರಾಧಗಳ ಸಂಖ್ಯೆ ಇಳಿಮುಖವಾಗಿ ಜನರು ನೆಮ್ಮದಿಯ ಉಸಿರು ಬಿಟ್ಟಾರು.
ಒಳ್ಳೆಯ ಫೋಟೋ ಗ್ರಾಫರ್ ಕೂಡ ಆಗಿರುವ ಸತ್ಯನಾರಾಯಣ ಅವರು  ದಕ್ಷ ಪೋಲಿಸ್ ಅಧಿಕಾರಿ ಆಗಿದ್ದರೂ  ಜನಸ್ನೇಹಿ ಕೂಡ ಆಗಿದ್ದರು. ದಕ್ಷತೆ ಅವರಲ್ಲಿ ಇದೆ ಆದರೆ  ಒಂದಿನಿತೂ ದರ್ಪವಿಲ್ಲ,ಕವಿ ಹೃದಯದ ಅವರು ಕೆಟ್ಟವರಿಗೆ ದುಸ್ವಪ್ನ ಕೂಡ ಆಗಿದ್ದರು.ಸಜ್ಜನರಿಗೆ ಪ್ರಿಯರಾದವರೂ ಆಗಿದ್ದರು.
ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭಾಶಯಗಳನ್ನು ಹೇಳುತ್ತಾ ಮುಂದೆ ಭಡ್ತಿ ಹೊಂದಿ ಇನ್ನೂ ಉನ್ನತ ಹುದ್ದೆಯನ್ನು ಪಡೆದು   ನಮ್ಮ ಪರಿಸರಕ್ಕೆ  ಮತ್ತೆ ಬರಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ
Aravinda Bhat Govinda Prasad Manikanth Armanikanth

ದೊಡ್ಡವರ ದಾರಿ : 62 ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್ © ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ 63 : ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್
ದೊಡ್ಡವರು ದೊಡ್ಡವರೆಂದು ಗುರುತಿಸಲ್ಪಡಲು ಕಾರಣ ಅವರಲ್ಲಿ ಇರುವ ದೊಡ್ಡ ಗುಣವೇ ಆಗಿರುತ್ತದೆ. ನನ್ನ ಸುತ್ತಮುತ್ತಲಿನ ಪರಿಚಯದ ಮಂದಿಯಲ್ಲಿ ಇಂತಹ ಒಂದು ವಿಶಿಷ್ಟ ಗುಣ ನನ್ನ ಗಮನಕ್ಕೆ ಬಂದರೆ ಅವರ ಬಗ್ಗೆ ಬರೆಯುವುದು ನನ್ನ ಹವ್ಯಾಸ.
ಸುಮಾರು ಒಂದು ತಿಂಗಳಿನಿಂದ  ಟಿಎನ್ ಸೀತಾರಾಮ್ ಬಗ್ಗೆ ಬರೆಯಬೇಕೆಂದು ಕೊಂಡಿರುವೆ.ಬರೆಯುವ ಮೊದಲು ಅವರಲ್ಲಿ ಒಮ್ಮೆ ಮಾತನಾಡಬೇಕೆಂದು ಕೊಂಡಿದ್ದೆ.
ತಿಂಗಳ ಮೊದಲು ಮಗಳು ಜಾನಕಿ ಫೇಸ್ ಬುಕ್ ಗ್ರೂಪಿನಲ್ಲಿ ಧಾರಾವಾಹಿಯ ಒಂದು ಪಾತ್ರದ ಬಗ್ಗೆ ಜನರು ತಪ್ಪಾಗಿ ಭಾವಿಸಿ ನಿಂದನೆ ರೂಪದ ಹೇಳಿಕೆಗಳನ್ನು ನೀಡುತ್ತಾ ಇದ್ದರು.ಆಗ ನಾನು ಅದು ಸರಿಯಲ್ಲ ಎಂದು ಹೇಳಿ ಆ ಪಾತ್ರದ ಬಗೆಗಿನ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ನನ್ನ ಯತ್ನ ವಾಗಿ ಒಂದು ಹೇಳಿಕೆ ಹಾಕಿದ್ದೆ.ಆಗ ಸೀತಾರಾಮ್ ಅವರು ಮೆಸೆಂಜರ್ ನಲ್ಲಿ "ನಿಮ್ಮ ಗ್ರಹಿಕೆ ಸರಿ ಇದೆ,ಪ್ರೌಢವಾಗಿ ವಿಶ್ಲೇಷಣೆ ಮಾಡಿ ಬರೆದಿರುವಿರಿ" ಎಂದು ಮೆಸೇಜ್ ಮಾಡಿದರು. ಅರೇ..ಇವರು ನನ್ನ   ಬರಹಗಳನ್ನು ಓದುತ್ತಾರಾ ? ಎಂದು  ಆಶ್ಚರ್ಯ ಆಗಿತ್ತು.
ನಂತರ ಒಂದು ದಿನ  ದಾರಾವಾಹಿಯಲ್ಲಿ "ಜಾನಕಿಗೆ ನಿರಂಜನ ಸತ್ಯವನ್ನು ಮರುದಿನ  ಊಟದ ಸಮಯದಲ್ಲಿ ಹೇಳುತ್ತೇನೆ" ಎಂದಾಗ ಗ್ರೂಪಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಾ ಇತ್ತು. ನಾನು ಆಗ ಈಗಾಗಲೇ ಜಾನಕಿಗೆ ಆನಂದ,ತಾಯಿ,ನಿರಂಜನ ಮೋಸ ಮಾಡಿದ್ದಾರೆಂದು ತಿಳಿದು ಆಘಾತ ಆಗಿದೆ.ಆನಂದ ‌ಮೋಸ ಮಾಡಿದನೆಂದು ತಿಳಿದಾಗ ಜಾನಕಿ ಒಣ ವೇದಾಂತವನ್ನು ಹೇಳುತ್ತಾ ಇಷ್ಟವಾಗದ್ದನ್ನು ಮತ್ತೆ ಮತ್ತೆ ಹಾಕಿಸಿಕೊಂಡು ತಿನ್ನುತ್ತಾ ಹೇಗೇಗೋ ವರ್ತಿಸಿದ್ದಾಳೆ.ನಂತರ ನಿರಂಜನ ಮೋಸ ಮಾಡಿದನೆಂದು ತಿಳಿದಾಗ ತೀರಾ ಆಘಾತ ಆಯಿತು. ನಂತರ ತಾಯಿ ಸತ್ಯವನ್ನು ಮುಚ್ಚಿಟ್ಟ ವಿಚಾರ ತಿಳಿದಾಗ ತಾಯಿಯಲ್ಲಿ ಮಾತು ಬಿಡುತ್ತಾಳೆ.ಈಗ ತಂದೆಯೂ ದ್ರೋಹ ಮಾಡಿದ್ದಾನೆಂದು ತಿಳಿದರೆ ಅದನ್ನು ಸ್ವೀಕರಿಸಲು ಸಹಜವಾಗಿ  ಸಾಧ್ಯವಾಗಲಾರದು.ಜಾನಕಿಯ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಮಾನಸಿಕ ಸಮತೋಲನ ಕಳೆದುಹೋಗಬಹುದು ಹಾಗಾಗಿ ಈಗಲೇ ಸತ್ಯ ತಿಳಿಯುವುದು ಸರಿಯಲ್ಲ ಎಂದು ಬರೆದಿದ್ದೆ.
ಆಗ ಸೀತಾರಾಮ್ ಅವರು ನೀವು ಹೇಳಿದ್ದು ಸರಿ ಇದೆ ಈಗಾಗಲೇ ರೆಕಾರ್ಡಿಂಗ್ ಆಗಿ ಚಾನಲ್ ಗೆ ಕಳುಹಿಸಿ ಆಗಿದೆ . ಸ್ವಲ್ಪ ಮೊದಲೇ ಗೊತ್ತಾಗಿದ್ದರೆ ಕಥೆಯನ್ನು ಸ್ವಲ್ಪ ಬದಲಾಯಿಸುತ್ತಾ ಇದ್ದೆ" ಎಂದು ತಿಳಿಸಿ "ನಿರಂಜನ ಸತ್ಯವನ್ನು ಹೇಳುವ ಕಥಾಭಾಗ ಯಾವ ದಿನಾಂಕ ದಂದು ಪ್ರಸಾರವಾಗುತ್ತದೆ" ಎಂದು ತಿಳಿಸಿದ್ದರು.ನನ್ನಂತಹ ಸಾಮಾನ್ಯರ ಅಭಿಪ್ರಾಯವನ್ನು ಕೂಡ ಸಕಾರಾತ್ಮಕವಾಗಿ ಸ್ವೀಕರಿಸುವ ಅವರ  ಹಿರಿತನದ ಅರಿವು ನನಗಾಗ ಆಯಿತು.
ಆಗ ಅವರಲ್ಲಿ ಮಾತನಾಡುತ್ತಾ( ಮೆಸೆಂಜರ್ ನ ಮೂಲಕ ) ಇರುವಾಗ ತಪ್ಪಿ ಕೈತಾಗಿ ಮೆಸೆಂಜರ್ ಕಾಲರ್ ಮೂಲಕ ಅವರಿಗೆ ವೀಡಿಯೋ ಕರೆ ಹೋಯಿತು. ಅದು ತನಕ ಮೆಸೆಂಜರ್ ವೀಡಿಯೋ ಕಾಲರ್ ಅನ್ನು ಒಮ್ಮೆಯೂ ಬಳಕೆ ಮಾಡದ ನನಗೆ ಕರೆ ಹೋಗುತ್ತಾ ಇರುವುದು ಗೊತ್ತಾದರೂ ಡಿಸ್ ಕನೆಕ್ಟ್ ಮಾಡುವುದು ಹೇಗೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಗಾಭರಿಯಾಗಿ ಹತ್ತಿರದಲ್ಲೇ ಇದ್ದ ಮಗನನ್ನು ಕರೆದು" ಮಾರಾಯ ಇಲ್ಲಿ ಸೀತಾರಾಮ್ ಗೆ ಕಾಲ್ ಹೋಗ್ತಾ ಉಂಟು ಬೇಗ ಕಟ್ ಮಾಡು " ಎಂದು ಹೇಳಿ ಡಿಸ್ ಕನೆಕ್ಟ್ ಮಾಡುವಷ್ಟರಲ್ಲಿ ಏಳೆಂಟು ಭಾರಿ ರಿಂಗಾಗಿತ್ತು."ಸೀತಾರಾಮ್ ಶಾರ್ಟ್ ಟೆಂಪರ್ಡ್ ಅಂತ ಯಾರೋ ಹೇಳುದು ಕೇಳಿದ್ದೆ.ಈಗ ನನಗೆ ಎರಡು ಬೈದರೆ ಎಂತ ಮಾಡುದು " ಎಂದು ಆತಂಕ ಆಯಿತು ಕೂಡ! ತಕ್ಷಣವೇ ತಪ್ಪಿ ಕರೆ ಹೋಗಿದೆ ಎಂದು ತಿಳಿಸಿ ಕ್ಷಮೆ ಕೋರಿದೆ.
ಅಷ್ಟರಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮೆಸೇಜ್ ಮಾಡಿದರು."ನಾನೇನೋ‌ ಮಾತಾಡಲು ಇಚ್ಛಿಸಿರುವೆ" ಎಂದು ಭಾವಿಸಿ ಅವರು ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದರು.  ಅವರ ಸಜ್ಜನಿಕೆಗೆ ತಲೆಬಾಗಿತು.
ನನಗೊಮ್ಮೆ ಅವರಲ್ಲಿ ಮಾತನಾಡಬೇಕಿಂದಿದ್ದರೂ ಆ ದಿನ ಮಾತನಾಡಲು ವಿಷಯವಿರಲಿಲ್ಲ ಹಾಗಾಗಿ ಕರೆ ಮಾಡಿರಲಿಲ್ಲ.
ಇದಾಗಿ ಕೆಲ ದಿನಗಳಲ್ಲಿ ಧಾರಾವಾಹಿಯ ಮುಖ್ಯ ಪಾತ್ರವೊಂದರ ಮೂಲಕ  ಮತ್ತಷ್ಟು ಋಣಾತ್ಮಕ ಪರಿಣಾಮ ಬೀರುವ ಕಥಾನಕ ಬಂತು.ಆಗ ನಾನು ನಾನು ಸೀತಾರಾಮ್ ಅವರಲ್ಲಿ ಆ ಪಾತ್ರ ಅದೇ ರೀತಿ ಸಾಗಿದರೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿ ,"ಆ ಪಾತ್ರದ ಚಿತ್ರಣದಲ್ಲಿ ಬದಲಾವಣೆ ಮಾಡಲು ಸಾಧ್ಯವೇ ?"ಎಂದು ಮನವಿ ಮಾಡಿದೆ.ಮತ್ತೆ ಒಳಗಿಂದೊಳಗೆ ಭಯ ಇತ್ತು.ನಿಮಗೆ ಯಾಕೆ ಅಧಿಕ ಪ್ರಸಂಗ ಅಂತ ಬೈದರೆ ಎಂದು,😀
ಆದರೆ ದೊಡ್ಡವರು ಒಳ್ಳೆಯ ವಿಚಾರಗಳನ್ನು ಎಲ್ಲೆಡೆಯಿಂದ ಸ್ವೀಕರಿಸುತ್ತಾರೆ ಎಂಬುದಕ್ಕೆ ಸೀತಾರಾಮ್ ಅವರು ಪ್ರತ್ಯಕ್ಷ ನಿದರ್ಶವಾದರು. ನನ್ನ ಅಭಿಪ್ರಾಯವನ್ನು ಒಪ್ಪಿ "ಹೇಗೆ ಬದಲಾವಣೆ ಮಾಡಬಹುದು?" ಎಂದು ಕೇಳಿದರು.ಆಗ ನಾನು ಅವರಿಗೆ ಕರೆ ಮಾಡಿ ಮುಕ್ತವಾಗಿ ಮಾತನಾಡಿದೆ.ಯಾವ ರೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ನನ್ನ ಅಭಿಪ್ರಾಯವನ್ನು ತಿಳಿಸಿದೆ.ತುಂಬಾ ತಾಳ್ಮೆಯಿಂದ ನನ್ನಂತಹ ಸಾಮಾನ್ಯಳ ಅಭಿಪ್ರಾಯ ವನ್ನು ಆಲಿಸಿದರು.ತುಂಬಾ ಚೆನ್ನಾಗಿ ಮಾತನಾಡಿದರು.ನಂತರ ಈ ಬಗ್ಗೆ ನಮ್ಮ ತಂಡದ ಜೊತೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು ‌.
ನಂತರ ಎರಡು ಮೂರು ದಿನ ಕಳೆದಾಗ "ನೀವು ಹೇಳಿದ ಕಥೆ ..ದಿನದಂದು ಬರುತ್ತದೆ" ಎಂದು ತಿಳಿಸಿದರು.
ಹೌದು,ಅವರು ಆ ಪಾತ್ರದಲ್ಲಿ  ನಾನು ಅಭಿಪ್ರಾಯಿಸಿದ ರೀತಿಯಲ್ಲಿ ಬದಲಾವಣೆ ಮಾಡಿದ್ದು ಪ್ರಸಾರವಾಯಿತು. ಅದನ್ನು ತುಂಬಾ ಸಹಜವಾಗಿ ತಂದಿದ್ದರು.  ಆಗ ಆ ಪಾತ್ರದ ಬಗ್ಗೆ ಅನೇಕರು ಒಳ್ಳೆಯ ರೀತಿಯಲ್ಲಿ ಹೇಳಿಕೆ,ಕಮೆಂಟ್ ಹಾಕಿದರು ಕೂಡ.
"ತಾನು ಮಾಡಿದ್ದೇ ಸರಿ,ಅದನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ಮನೋಭಾವ ಹೆಚ್ಚಿನವರಲ್ಲಿ ಇರುತ್ತದೆ.ಇಂತಹವರ  ನಡುವೆ ಟಿಎನ್ ಸೀತಾರಾಮ್ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ.ಅವರೇಕೆ ದೊಡ್ಡವರು ಎಂಬುದು  'ಒಳ್ಳೆಯದನ್ನು ಎಲ್ಲೆಡೆಯಿಂದ ಸ್ವೀಕರಿಸುವ' ಅವರ  ದೊಡ್ಡ ಗುಣದಿಂದ ತಿಳಿಯುತ್ತದೆ. ಒಂದೆರಡು ವರ್ಷಗಳ ಹಿಂದೆ ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಅವರ ಪಕ್ಕವೇ ಕುಳಿತಿದ್ದೆ.ಮಾಯಾಮೃಗ ಧಾರಾವಾಹಿ ನೋಡುತ್ತಿದ್ದ ಸ್ನೇಹಿತರು ಸೀತಾರಾಮ್ ಬಗ್ಗೆ ಹೇಳುತ್ತಾ ಇದ್ದರು.ನಾನು ಕಾಲೇಜು ಮುಗಿಸಿ ಬರುವಷ್ಟರಲ್ಲಿ ಅದು ಮುಗಿಯುತ್ತಿದ್ದ ಕಾರಣ ನಾನು ನೋಡಿರಲಿಲ್ಲ.ನಂತರದ ಮನ್ವಂತರ,ಮುಕ್ತ, ಮುಕ್ತ ಧಾರಾವಾಹಿಗಳನ್ನು ನೋಡಿ ನಾನು ಸೀತಾರಾಮ್ ಅವರ ಫ್ಯಾನ್ ಆಗಿದ್ದೆ.ಅವರನ್ನು ಒಮ್ಮೆ ಭೇಟಿಯಾಗಿ ಮಾತನಾಡಬೇಕೆಂದು ಕೂಡ ಅಂದುಕೊಂಡಿದ್ದೆ .ಆದರೂ ಅವರ ಪಕ್ಕದಲ್ಲೇ ಕುಳಿತಿದ್ದರೂ  ಹಿಂಜರಿಕೆಯಿಂದ ಮಾತನಾಡಿರಲಿಲ್ಲ!  ( ನಾನು ಒಂಚೂರು ಹಾಗೆಯೇ ..ಮಂಗಳೂರಿನಲ್ಲಿ ಇದ್ದಾಗಲೇ  ಡಾ.ನಾ ಸೋಮೇಶ್ವರ, ಡಾ.ಚಂದ್ರಶೇಖರ ಕಂಬಾರ,ಹಂಪನಾ ಮೊದಲಾದವರನ್ನು ಭೆಟಿಯಾಗಿ ಮಾತನಾಡಬೇಕೆಂದು ಮನಸಿನಲ್ಲೇ ಆಶಿಸುತ್ತಾ ಇದ್ದೆ.ಆದರೆ ಬೆಂಗಳೂರಿನಲ್ಲಿ ಚಂದ್ರ ಶೇಖರ ಕಂಬಾರರ ಮನೆ ಹತ್ತಿರವೇ ಇದ್ದಾಗ ಕೂಡ ಹೋಗಿ ಮಾತನಾಡಲಿಲ್ಲ.ಒಂದೆರಡು ಭಾರಿ ಮಾತನಾಡಲೆಂದೇ ಅವರ ಮನೆ ಗೇಟ್ ತನಕ ಹೋಗಿ ಹಿಂಜರಿಕೆ ಕಾಡಿ ಹಿಂದೆ ಬಂದಿದ್ದೆ.ಡಾ.ನಾ ಸೋಮೇಶ್ವರ ಅವರನ್ನು ಅನೇಕ ಬಾರಿ ಕಂಡಿದ್ದರೂ ಮಾತನಾಡಲಯ ಹಿಂದೇಟು ಹಾಕಿರುವೆ.) ಆದರೆ ಸೀತಾರಾಮ್ ಅವರನ್ನು ಮಾತ್ರ ಖಂಡಿತಾ ಮುಖತಃ ಭೇಟಿಯಾಗಿ ಒಂದು ಸೆಲ್ಪಿ ಹಿಡಿದುಕೊಂಡು ಬರಬೇಕೆಂದು ಕೊಂಡಿರುವೆ .

Sunday 2 December 2018

ದೊಡ್ಡವರ ದಾರಿ 62 ಪ್ರೀತಿಯ ಮೇಷ್ಟ್ರು ಡಾ.ಭೈರಮಂಗಲ ರಾಮೆಗೌಡ © ಡಾ.ಲಕ್ಷ್ಮೀ ಜಿ ಪ್ರಸಾದ

ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು - ಡಾ.ಭೈರಮಂಗಲ‌ ರಾಮೇಗೌಡ© ಡಾ.ಲಕ್ಷ್ಮೀ ಜಿ ಪ್ರಸಾದ
ತುಂಬಾ ಸಮಯದಿಂದ ಭೈರಮಂಗಲ ರಾಮೇಗೌಡರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಸೋಮಾರಿತನ ಒಂಚೂರು ಕೆಲಸದ ಒತ್ತಡ,ಬರೆಯುವ ಮೂಡ್ ನ ಕೊರತೆಯ ಕಾರಣದಿಂದಾಗಿ ಬರೆಯಲಾಗಲಿಲ್ಲ.
ರಾಮೇಗೌಡು ಬಹಳ ಜನಪ್ರಿಯ ಕನ್ನಡ ಪ್ರಾಧ್ಯಾಕರು.ಅವರ ವಿದ್ಯಾರ್ಥಿಗಳು ಅವರನ್ನು ತುಂಬಾ ನೆಚ್ಚಕೊಂಡಿದ್ದಾರೆ.
ತುಂಬಾ ಜನ ಉಪನ್ಯಾಸಕರಿದ್ದಾರೆ.ಆದರೆ ಇವರ ವಿದ್ಯಾರ್ಥಿಗಳು ಮಾತ್ರ ಇವರನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ. ಯಾರು ಕೂಡ ರಾಮೇಗೌಡರ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದಿಲ್ಲ .ಯಾಕೆ ? ಹೆಚ್ಚು ಕಡಿಮೆ ವರ್ಷದ ‌ಮುನ್ನೂರ ಅರುವತ್ತೈದು ದಿನಗಳಲ್ಲಿ ಕೂಡ ಅವರು ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪನ್ಯಾಸಕಾರರಾಗಿ ಆಹ್ವಾನಿಸಲ್ಪಡುತ್ತಾರೆ .ಇಷ್ಟು ಜನರ ಪ್ರೀತಿಯನ್ನು ಹೇಗೆ ಗಳಿಸಿದರು? ಯಾರಿಗಾದರೂ ಮನದಲ್ಲಿ  ಮೂಡಬಹುದಾದ ಪ್ರಶ್ನೆ ಇದು.ಆದರೆ ನನಗೆ ಇದಕ್ಕೆ ಉತ್ತರ ಗೊತ್ತು. ಮೊದಲಿಗೆ ಅವರ ಪ್ರಗಲ್ಭ ಪಾಂಡಿತ್ಯ ಇದಕ್ಕೆ ಕಾರಣ.
ಜೊತೆಗೆ ಅವರ ಸಜ್ಜನಿಕೆ,ಉದಾತ್ತತೆ,ವಿದ್ಯಾರ್ಥಿ ಪ್ರಿಯತೆ ಕಾರಣವಾಗಿದೆ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಪದವಿ ಕಾಲೇಜು ಕನ್ನಡ ಉತ್ತರ ಪತ್ರಿಕೆ ‌ಮೌಲ್ಯ ಮಾಪನದಲ್ಲಿ ನನಗೆ ಅವರು ಡಿಸಿ ಆಗಿದ್ದರು. ಮೌಲ್ಯ ಮಾಪನ ಆರಂಭದಲ್ಲಿ ಅರ್ಧ ಕಾಲು ಅಂಕಗಳನ್ನು ಕೊಡಬೇಡಿ‌.ಉದಾಹರಣೆಗೆ "ಎರಡುವರೆ ಅಂಕ ಕೊಡುವ ಬದಲು ಎರಡು ಅಥವಾ ‌ಮೂರು ಕೊಡಿ. ನಾನು ಅರ್ಧ ಅಂಕವನ್ನು ಬಿಡುವ ಬದಲು ವಿದ್ಯಾರ್ಥಿಗಳಿಗೆ  ಅದನ್ನು ಕೊಡುತ್ತೇನೆ. ನಾನು‌ಮಾಡುವ ಹಾಗೆಯೇ ನೀವು‌ ಮಾಡಬೇಕೆಂದಿಲ್ಲ.ಆಯ್ಕೆ ನಿಮ್ಮದು " ಎಂದು ತಮ್ಮ ವಿದ್ಯಾರ್ಥಿ ಸ್ನೇಹಿ ನಿಲುವನ್ನು ತಿಳಿಸಿದ್ದರು.ಒಂದಿನಿತು ಕೂಡ ಅವರಲ್ಲಿ ಅಧಿಕಾರದ ಮಾತಿರಲಿಲ್ಲ.ನಾನಾಗ ಒಂದು ಕಥಾ ಸಂಕಲನ ಮತ್ತು ಒಂದು ಲೇಖನ ಹೀಗೆ ಎರಡು ಪುಸ್ತಕಗಳನ್ನು ಪ್ರಕಟಿಸಬೇಕೆಂದು ಆಲೋಚಿಸುತ್ತಾ ಇದ್ದೆ.ಈ ಬಗ್ಗೆ ಅವರಲ್ಲಿ ಸಲಹೆ ಕೇಳಿದಾಗ ‌ಲಕ್ಷ್ಮೀ‌ಪ್ರಿಂಟರ್ಸ್ ನ ವಿಳಾಸ ನೀಡಿ ಪ್ರಕಟಿಸಿ ,ಮುನ್ನೂರು ಪುಸ್ತಕಗಳನ್ನು ಪುಸ್ತಕ ಪ್ರಾಧಿಕಾರ ಗ್ರಂಥಾಯಗಳಿಗೆ ನೀಡಲು ಖರೀದಿಸುತ್ತದೆ.ಹಾಗಾಗಿ ಮಾರಾಟ ಆಗದಿದ್ದರೆ ಎಂಬ ಚಿಂತೆ ಬೇಡ,ಧೈರ್ಯವಾಗಿ ಪ್ರಕಟಿಸಿ" ಎಂದು ಬೆಂಬಲದ ಮಾತುಗಳನ್ನು ಆಡಿದ್ದರು. ಆಗಾಗಲೇ ಅವರು ತುಂಬಾ ಪ್ರಸಿದ್ಧರಾಗಿದ್ದರು.ನನ್ನಂತ ಬಾಲಂಗೋಚಿಯ ಪುಸ್ತಕ ಪ್ರಕಟನೆಯ ಕನಸನ್ನು ತಿರಸ್ಕಾರದಿಂದ ಕಾಣದೆ ಬೆಂಬಲಿಸಿದ್ದರು.ಆಗಲೇ ನನಗೆ ಅವರೇಕೆ ದೊಡ್ಡವರು ಎಂದರಿವಾಗಿತ್ತು.
ನಂತರ ಸುಮಾರು ಹನ್ನೆರಡು ವರ್ಷಗಳ ನಂತರ ನನಗೆ ಫೇಸ್ ಬುಕ್ ನಲ್ಲಿ ನನಗೆ ಕಾಣಲು ಸಿಕ್ಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ.ಅದನ್ನು ಸ್ವೀಕರಿಸಿಯಾರೆಂಬ ನಂಬಿಕೆ ನನಗಿರಲಿಲ್ಲ .ಆದರೆ ನನ್ನ ಊಹೆ ಹುಸಿಯಾಗಿ ಅವರು ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದರು.
ಫೇಸ್ ಬುಕ್ ನಲ್ಲಿ ನಾನು ಭಾಗವಹಿಸಿದ ಅತಿಥಿಯಾಗಿ ಕಾರ್ಯಕ್ರಮಗಳನ್ನು ,ಪಡೆದ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿಕೊಂಡಾಗ ಅವರು ಪ್ರತಿಕ್ರಿಯೆ ನೀಡಿ ಬೆಂಬಲ ನೀಡಿದರು‌.
ಪೇಸ್ ಬುಕ್ ನಲ್ಲಿ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಇರುತ್ತಾರೆ.ತಾವು ಪಡೆದ ಪ್ರಶಸ್ತಿ ಸನ್ಮಾನಗಳ ಬಗ್ಗೆ ಹಾಕಿಕೊಳ್ಳುತ್ತಾರೆ.ಎಲ್ಲರ ಅಭಿನಂದನೆಗಳನ್ನು ಸ್ವೀಕರಿಸುತ್ತಾರೆ‌.ಆದರೆ ಬೇರೆಯವರ ಸಾಧನೆಗಳನ್ನು ಗುರುತಿಸುವ ಅವರಿಗೆ ಒಂದು ಬೆಂಬಲದ ಮಾತನ್ನು ಹೇಳಬೇಕು ಎಂಬುದನ್ನು ಮರೆತುಬಿಡುತ್ತಾರೆ. ಹಾಗೆ ಮಾಡಿದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಾರೋ ಏನೋ ನನಗೆ ತಿಳಿಯದು.ಅಥವಾ ಬೇರೆಯವರ ಏಳಿಗೆ ಇವರಿಗೆ ಸಹ್ಯವಾಗುವುದಿಲ್ಲವೋ ಏನೋ ನನಗೆ ಅರ್ಥವಾಗುವುದಿಲ್ಲ.
ಇಂತಹವರ ನಡುವೆ ಭೈರಮಂಗಲ ರಾಮೇಗೌಡ ಸರ್ ತುಂಬಾ ಭಿನ್ನವಾಗಿ ಕಾಣಿಸುತ್ತಾರೆ.ತಮ್ಮ ಎಡೆಬಿಡದ ಕಾರ್ಯಗಳ ನಡುವೆಯೂ ಚಿಕ್ಕವರಿಗೆ ಪ್ರೋತ್ಸಾಹ ನೀಡುತ್ತಾರೆ‌.ಹಾಗಾಗಿಯೇ ಅವರು ದೊಡ್ಡವರು‌. ಸಮಾಜದಲ್ಲಿ ದೊಡ್ಡವರೆಂದು ಗುರುತಿಸಲ್ಪಡುವುದು ಸಣ್ಣ ವಿಚಾರವಲ್ಲ.ದೊಡ್ಡ ಗುಣ ಇದ್ದರೆ ಮಾತ್ರ ವಿದ್ವಾಂಸರು ಹಿರಿಯರು ದೊಡ್ಡವರೆಂದು ಗುರುತಿಸಲ್ಪಡುತ್ತಾರೆ .ಅದಕ್ಕೆ ಡಾ.ಭೈರಮಂಗಲ ರಾಮೆಗೌಡರು ನಿದರ್ಶನವಾಗಿದ್ದಾರೆ.
©ಡಾ.ಲಕ್ಷ್ಮೀ ಜಿ ಪ್ರಸಾದ

Thursday 8 November 2018

ಬದುಕ ಬಂಡಿಯಲಿ ೨೭ ಸರಿಯಾದುದನ್ನು ಸರಿ ಎಂದು ಸಾಧಿಸಲೂ ಕಷ್ಟ ಪಡಬೇಕಾಯಿತು ©-ಡಾ.ಲಕ್ಷ್ಮೀ ಜಿ ಪ್ರಸಾದ

 ಬದುಕ ಬಂಡಿಯಲ್ಲಿ
ಮುಖ ಪುಟ ಸ್ನೇಹಿತರಾದ ಶ್ರೀನಿವಾಸ ಹೊಳ್ಳರು ಶುಭಾಶಯ ಎಂಬ ಪದದ ಅಪಪ್ರಯೋಗದ( ತಪ್ಪು ಬಳಕೆಯ) ಕುರಿತು ಒಂಚೂರು ತಮಾಷೆಯಾಗಿ ಒಂದು ಸಾಲಿನ ಹೇಳಿಕೆಯನ್ನು ಹಾಕಿದರು.ಆ ಬಗ್ಗೆ ಒಂದು ಸಣ್ಣ ಚರ್ಚೆ ಅಥವಾ ಅಭಿಪ್ರಾಯ ವಿನಿಮಯ ಕೂಡ ನಡೆಯಿತು. ಆಗ ನನಗೆ ನಾನು ಬಿಎಡ್ ಓದುವಾಗ ನಡೆದ ಒಂದು ಘಟನೆ ನೆನಪಾಯಿತು.
2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಆಯ್ಕೆಯಾದ ಸುಮಾರು 2400 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡುವಾಗ ನಾಲ್ಕು ವರ್ಷಗಳ ಒಳಗೆ ಬಿಎಡ್ ಪದವಿಯನ್ನು ಪಡೆಯಬೇಕೆಂಬ ನಿಬಂಧನೆಯನ್ನು ಹಾಕಿದ್ದರು.ಕೆಲಸ ಸಿಕ್ಕ ಸಂತಸದಲ್ಲಿ ಆಗ ನಾವ್ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಆದರೆ ಕೆಲಸಕ್ಕೆ ಸೇರಿ ಎರಡು ವರ್ಷಗಳಾದಾಗ  ಬಿಎಡ್ ಪಡೆದಿಲ್ಲವೆಂಬ ಕಾರಣಕ್ಕೆ  ನಾನೂ  ಸೇರಿದಂತೆ ಸುಮಾರು 1400 ಉಪನ್ಯಾಸಕರ ಪರೀಕ್ಷಾರ್ಥ ಖಾಯಂ ಪೂರ್ವ ಸೇವಾವಧಿಯನ್ನು ( probationary period)  ತೃಪ್ತಿಕರವೆಂದು ಘೋಷಣೆ ಮಾಡದೆ ಭಡ್ತಿಯನ್ನು ಇಲಾಖೆ ತಡೆ ಹಿಡಿದಾಗ ನಮಗೆಲ್ಲ ಈ  ನಿರ್ಬಂಧ ಉಂಟು ಮಾಡಿ ಸಮಸ್ಯೆಯ ಗಹನತೆ ಅರ್ಥವಾಯಿತು.
ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು,ನಾವುಗಳು ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳು,ಶಾಸಕರುಗಳಲ್ಲಿ ನಮ್ಮ ಸಮಸ್ಯೆಯನ್ನು ಬಗೆ ಹರಿಸುವಂತೆ ವಿನಂತಿಸಿದೆವು.ಆಗ ಸದಾನಂದ ಗೌಡರು ಮತ್ತು ಕಾಗೇರಿಯವರು ಮುಖ್ಯ ಮಂತ್ರಿ,ಶಿಕ್ಷಣ ಮಂತ್ರಿಗಳಾಗಿದ್ದರೆಂದು ನೆನಪು. ಈ ಬಗ್ಗೆ ಕೋರ್ಗೆ ಮೊರೆ ಹೋಗುವ ಯತ್ನ ವೂ ನಡೆಯಿತು. ಪ್ರತಿಭಟನೆ ಹೋರಾಟವೂ ಆಯಿತು.ಅಂತೂ ಇಂತೂ ನಾವು ಕೆಲಸಕ್ಕೆ ಸೇರಿ ನಾಲ್ಕು ವರ್ಷ ಅಗುತ್ತಾ ಬಂತು.ಈ ನಡುವೆ ಚುನಾವಣೆ ಬಂದು ಸರಕಾರ ಬದಲಾಗಿ ಸಿದ್ಧ ರಾಮಯ್ಯ ಅವರು ಮುಖ್ಯಮಂತ್ರಿಗಳಾದರು.ಸಜ್ಜನ ರಾಜಕಾರಣಿ ಎಂದೇ ಖ್ಯಾತರಾದ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾದರು.ನಮ್ಮ ಮನವಿ ,ಹೋರಾಟ,ಪ್ರತಿಭಟನೆ ಇತ್ಯಾಗಿ ನಡೆಯುತ್ತಲೇ ಇತ್ತು.ಕೊನೆಗೂ ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ನಮಗೆ ಒಂದು ವರ್ಷ  ಓದಿ ಬಿಎಡ್ ಪದವಿ ಪಡೆಯಲು ವೇತನ ಸಹಿತ ರಜೆಯನ್ನು ನೀಡಿದರು.
 ಸಂಸ್ಕೃತ, ಹಿಂದಿ,ಕನ್ನಡ ಮೂರು ಭಾಷೆಗಳ ಎಂಎ ಪದವಿ,ಎಂ ಫಿಲ್,ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ನಂತರ ನನ್ನ ನಲುವತ್ತನೇ ವಯಸ್ಸಿನಲ್ಲಿ ಕೆಲಸವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಎಡ್ ಪದವಿ ಓದಲು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದೆ.ಇಲ್ಲಿ ನನ್ನ ಹಾಗೆ  ಹತ್ತು ಜನ ಉಪನ್ಯಾಸಕರು ಬಿಎಡ್ ಗೆ ದಾಖಲಾತಿ ಪಡೆದಿದ್ದರು.ನನ್ನ ಹಾಗೆ ಡಾಕ್ಟರೇಟ್ ಪದವಿಯನ್ನು ಪಡೆದವರೂ,ನನಗಿಂತ ಹಿರಿಯರೂ ಕೂಡ ಆಗಿರುವ ಉಪನ್ಯಾಸಕರೂ ಇದ್ದರು.
ಆಗಷ್ಟೇ ಬಿಎ ಪದವಿ ಪಡೆದು ಬಂದಿರುವ ಇಪ್ಪತ್ತು ಇಪ್ಪತ್ತೊಂದು ವರ್ಷ ವಯಸ್ಸಿನ ( ನಮ್ಮ ಅರ್ಧದಷ್ಟು ವಯಸ್ಸಿನ ) ಎಳೆಯರೊಂದಿಗೆ ಕುಳಿತು,ಅವರ ಮಟ್ಟಕ್ಕೆ ಅನುಗುಣವಾಗಿ ರಚಿತವಾದ ಪಠ್ಯಕ್ರಮವನ್ನು ಓದುವುದು ನಮಗೆ ಒಂದಿನಿತು ಇಕ್ಕಟ್ಟನ್ನು ತಂದಿಟ್ಟಿತು.ಆರಂಭದಲ್ಲಿ ಅಲ್ಲಿನ ಉಪನ್ಯಾಸಕರು ನಮ್ಮನ್ನು ಇತರ ಸಾಮಾನ್ಯ ವಿದ್ಯಾರ್ಥಿಗಳಂತೇ ಪರಿಗಣಿಸಿ ಪಾಠ ಮಾಡ ಹೊರಟಾಗ ಸಾಕಷ್ಟು ಚರ್ಚೆಗಳು ನಡೆದವು. ( ನಂತರದ ದಿನಗಳಲ್ಲಿ ನಮ್ಮ ಅಭಿಪ್ರಾಯ, ಅನುಭವ,ವಿದ್ವತ್ ಗಳಿಗೆ ಅವರೂ ಮನ್ನಣೆ ನೀಡಿದರು)
ಈ ಸಂದರ್ಭದಲ್ಲಿ ಯಾವುದೋ ಒಂದು ಕಾರ್ಯಕ್ರಮ ( ಕನ್ನಡ ರಾಜ್ಯೋತ್ಸವ ಎಂದು ನೆನಪು) ಅಯೋಜನೆ ಆಯಿತು. ನಾವುಗಳು ಕಾಲೇಜನ್ನೆಲ್ಲಾ ಸಿಂಗರಿಸಿದೆವು.ಕೆಲವು ವಿದ್ಯಾರ್ಥಿಗಳು ವೇದಿಕೆಯ ಹಿಂದಿನ  ಕಪ್ಪು ಹಲಗೆಯಲ್ಲಿ ಕಾರ್ಯಕ್ರಮದ ಬಗ್ಗೆ ಬರೆದು ಶುಭಾಷಯಗಳು ಎಂದು ಬರೆದಿದ್ದರು.ಅದನ್ನು ಗಮನಿಸಿದ ನಾನು ಅಲ್ಲಿದ್ದ ವಿದ್ಯಾರ್ಥಿಗಳಿಗೆ( ಅವರು ನಮ್ಮ ಸಹಪಾಠಗಳು ಕೂಡ ಆಗಿದ್ದರು) ಶುಭಾಷಯ ತಪ್ಪು ಬಳಕೆ,ಶುಭಾಶಯ ಎಂಬುದು ಸರಿಯಾದ ರೂಪ ಎಂದು ತಿಳಿಸಿ ಅದನ್ನು ಅಲ್ಲಿ ಶುಭಾಶಯಗಳು ಎಂದು ಸರಿ ಪಡಿಸಿಸಿದೆ.
ನಂತರ ಬೇರೆ ಕೆಲಸಕ್ಕೆ ಹೋದೆ.ಇನ್ನೇನು ಕಾರ್ಯಕ್ರಮ ನಾಲ್ಕೈದು ನಿಮಿಷಗಳಲ್ಲಿ ಶುರು ಆಗುತ್ತದೆ ಎಂದಾದಾಗ ಮತ್ತೆ ವೇದಿಕೆ ಕಡೆಗೆ ಬಂದೆ.ನೋಡಿದರೆ ಮತ್ತೆ ಶುಭಾಷಯ ಎಂಬ ತಪ್ಪು ಬಳಕೆ ಇತ್ತು.ಅರೇ,ಈಗ ಅರ್ಧ ಗಂಟೆ ಮೊದಲು ಇದನ್ನು ನ ಶುಭಾಶಯ ಎಂದು  ಸರಿ ಪಡಿಸಿ ಹೋಗಿದ್ದೆ,ಯಾರು ಬದಲಾಯಿಸಿದ್ದು ? ಎಂದು ಕೇಳಿದೆ.ಅಲ್ಲಿನ ಉಪನ್ಯಾಸಕರು ಒಬ್ಬರು ಬಂದು ನಾನು ಸರಿಪಡಿಸಿದ್ದನ್ನು ನೋಡಿ ಅದು ತಪ್ಪೆಂದು ಹೇಳಿ ಮತ್ತೆ ಶುಭಾಷಯ ಎಂದು ತಪ್ಪಾಗಿ ಬರೆಸಿದ್ದರು.ನಾನು ಅದನ್ನು ತಪ್ಪೆಂದಾಗ ವಿದ್ಯಾರ್ಥಿಗಳೆಲ್ಲ ( ಇವರುಗಳು ನನ್ನ ಸಹಪಾಠಗಳು ಕೂಡ ) ಒಂದಾಗಿ "ನಿಮಗೇನು ಗೊತ್ತು ? ನಮ್ಮ .. ಸರ್ ನಾವು ಮೊದಲು ಬರೆದಿದ್ದೇ ( ಶುಭಾಷಯ ಎಂಬುದನ್ನು) ಸರಿ ಎಂದಿದ್ದಾರೆ.ನಿಮ್ಮ ಮಾತು ಕೇಳಿ ನಾವು ಶುಭಾಶಯ ಎಂದು ಬದಲಾಯಿಸಿ ಸರ್ ಕೈಂದ ಬೈಗಳು ತಿನ್ನ ಬೇಕಾಯಿತು" ಎಂದು ನನ್ನನ್ನೇ ತರಾಟೆಗೆ ತೆಗೆದುಕೊಂಡರು. ಆಗ ನಾನು ಗ್ರಂಥಾಲಯಕ್ಕೆ ಹೋಗಿ ಕನ್ನಡ ಶಬ್ದ ಕೋಶ ತಂದು ತೋರಿಸಿ ,ಅವರ ತಪ್ಪನ್ನು ತಿಳಿಯಪಡಿಸಿ ಅದನ್ನು ತಿದ್ದಬೇಕೆಂದು ಕಾಲೇಜು ಗ್ರಂಥಾಲಯಕ್ಕೆ ಹೋದರೆ " ಈಗ ಕಾರ್ಯಕ್ರಮ ಇದೆ,ಪುಸ್ತಕ ಕೊಡಲಾಗುವುದಿಲ್ಲ " ಎಂಬ ನಿರ್ದಾಕ್ಷಿಣ್ಯವಾದ ಉತ್ತರ ಸಿಕ್ಕಿತು.
ಏನು ಮಾಡುವುದು ಗೊತ್ತಾಗಲಿಲ್ಲ.ಅಷ್ಟರಲ್ಲಿ ಸರ್ಕಾರಿ ಬಿಎಡ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿ ಅಲ್ಲಿ ಗೌರವ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಸರ್   (ನಂಜುಂಡಪ್ಪ) ಬಂದರು.ಅವರಿಗೆ ವಿದ್ಯಾರ್ಥಿಗಳು ಶುಭಾಷಯ ಎಂದು ತಪ್ಪಾಗಿ ಬರೆದುದನ್ನು ತೋರಿಸಿ,ಅವರು ಅದನ್ನೇ ಸರಿ ಎಂದು ವಾದಿಸುತ್ತಿರುವ ಬಗ್ಗೆ ತಿಳಿಸಿದೆ‌.ಹಿರಿಯ ವಿದ್ವಾಂಸರಾಗಿದ್ದ ಅವರಿಗೆ ಶುಭಾಷಯ ಎಂಬುದು ತಪ್ಪು ಬಳಕೆ ಎಂದು ಗೊತ್ತಿತ್ತು.ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳನ್ನು ಸ್ವಲ್ಪ ಜೋರು ಮಾಡಿ ಶುಭಾಶಯಗಳು ಎಂದು ಬರೆಸಿದರು.
ಬರೆದು ಮುಗಿಸುವಷ್ಟರಲ್ಲಿ ವೇದಿಕೆಗೆ ಅತಿಥಿಗಳು ಆಗಮಿಸಿದ್ದರು. ಅದಾಗಲೇ ತಪ್ಪನ್ನು ಸರಿ ಪಡಿಸಿ ಶುಭಾಶಯಗಳು ಎಂದು  ಸರಿಯಾದ ರೂಪವನ್ನು ಬರೆಸಿದ್ದ ಕಾರಣ ಕಾಲೇಜಿನ  ಮರ್ಯಾದೆ ಉಳಿಯಿತು ಜೊತೆಗೆ ನಮ್ಮದು ಕೂಡ.- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲಮಂಗಲ

Sunday 14 October 2018

ಬದುಕ ಬಂಡಿಯಲಿ- ಎರಡನೇ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನ ಎರಡನೇಯ ಕೆಟ್ಟ ಅನುಭವ..
ಕೆಟ್ಟ ಅನುಭವವೆಂದರೆ ಮೈ ಸವರಿ ಚಿವುಟಬೇಕು ಎಂದೇನೂ ಇಲ್ಲ!
ನಾನು ಹತ್ತನೇ ತರಗತಿ ಉತ್ತೀರ್ಣಳಾಗಿ ಪಿಯುಸಿಗೆ ಮಂಗಳೂರಿನ ಸರ್ಕಾರಿ ಕಾಲೇಜಿಗೆ( ಈಗುನ ವಿಶ್ವ ವಿದ್ಯಾಲಯ ಕಾಲೇಜು,ಆಗ ಅಲ್ಲಿ ಪಿಯುಸಿ ಮತ್ತು ಡಿಗ್ರಿ ಎರಡೂ ಒಟ್ಟಿಗೆ ಇತ್ತು) ಸೇರಿದೆ.ಇಲ್ಲಿ ಒಂದು ಸುಸಜ್ಜಿತವಾಗ ಸಭಾಂಗಣ ಇದೆ‌.ಮಂಗಳೂರಿಗೆ ರವೀಂದ್ರನಾಥ ಟಾಗೋರ್ ಬಂದಾಗ ಇಲ್ಲಿ ಉಪನ್ಯಾಸ ನೀಡಿದ್ದರಂತೆ.ಅದರ ನೆನಪಿಗಾಗಿ ಆ ಸಭಾಂಗಣಕ್ಕೆ ರವೀಂದ್ರ ಕಲಾ ಭವನ ಎಂದು ಹೆಸರಿತ್ತು ‌.ಇಲ್ಲಿ ಸದಾ ಸಾಂಸ್ಕೃತಿಕ  ಕಾರ್ಯಕ್ರಮ  ಹಾಗೂ ವಿದ್ವಾಂಸರ ಉಪನ್ಯಾಸ ಕಾರ್ಯಕ್ರಮಗಳು  ಆಗುತ್ತಾ ಇತ್ತು.
ನನಗೆ ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಜೀವ.ಜೊತೆಗೆ ವಿದ್ವಾಂಸರ ಮಾತುಗಳನ್ನು ಕೇಳಲು ಕೂಡ ತುಂಬಾ ಆಸಕ್ತಿ ಇತ್ತು. ಆದರೆ ಈ ಕಾಲೇಜಿನಲ್ಲಿ ಹುಡುಗಿಯರಿಗೆ ಯಾವುದೇ ಕಾರ್ಯಕ್ರಮವನ್ನು  ನೋಡುವುದು ಅಸಾಧ್ಯದ ವಿಚಾರವಾಗಿತ್ತು.
ಕಾರ್ಯಕ್ರಮ ಶುರು ಆಗುತ್ತಲೇ ಪುಂಡು ಹುಡುಗರ ಸಮೂಹ ಹುಡುಗಿಯರನ್ನು ಕಿಚಾಯಿಸಲು ಶುರು ಮಾಡುತ್ತಿದ್ದರು‌.ಏನೆನೋ ಕೆಟ್ಟದಾಗಿ ಬರೆದು ರಾಕೆಟ್ ಮಾಡಿ ಬಿಸಾಡುತ್ತಿದ್ದರು.ಇದು ಹುಡುಗಿಯರ ತಲೆಗೆ ಬಂದು ಬೀಳುವುದನ್ನು ನೋಡಿ ನಗಾಡಿ ಗಲಾಟೆ ಮಾಡುತ್ತಿದ್ದರು. ಒಂದು ಸಲ ಅಮೃತ ಸೋಮೇಶ್ವರರ ಉಪನ್ಯಾಸ ಕಾರ್ಯಕ್ರಮ ಇತ್ತು .ನಾನು ಅವರ ಮಾತುಗಳನ್ನು ಕೇಳುವ ಸಲುವಾಗಿ ಮುಂದೆ ಹೋಗಿ ಕುಳಿತಿದ್ದೆ .ಅವರ ಮಾತುಗಳನ್ನು ತನ್ಮಯತೆಯಿಂದ ಕೇಳುತ್ತಿರುವಾ ರಾಕೆಟ್ ಒಂದು ನನ್ನ ತಲೆ ಮೇಲೆ ಬಂದು ಬಿತ್ತು.ನನಗೇನಾದರೂ ಈಶ್ವರನಂತೆ ಮೂರನೆಯ ಉರಿಗಣ್ಡು ಇದ್ದರೆ ಅದನ್ನು ತೆರೆದು ಆ ಪುಂಡು ಹುಡುಗರನ್ನು ಸುಟ್ಟು ಬಿಡುತ್ತಿದ್ದೆ‌.ಆದರೇನು ಮಾಡಲಿ ಆ ಶಕ್ತಿ ನನಗಿರಲಿಲ್ಲ,ಅಸಹಾಯಕತೆಯಿಂದ ಅವಮಾನದಿಂದ  ಕಣ್ಣಲ್ಲಿ ನೀರು ತುಂಬಿ ಬರಲು ಎದ್ದು ಸಭಾಂಗಣದಿಂದ ಹೊರಬಂದೆ.
ಆಗೆಲ್ಲಾ  ಇವನ್ನು ನಿಯಂತ್ರಿಸದ ಅಲ್ಲಿನ ಉಪನ್ಯಾಸಕರ ಮೇಲೆ ನನಗೆ ತುಂಬಾ ಸಿಟ್ಟು ಬರುತ್ತಿತ್ತು. ಆಗಲೇ ನಿರ್ಧರಿಸಿ ಬಿಟ್ಟಿದ್ದೆ‌.ನಾನು‌ ಮುಂದೆ ಉಪನ್ಯಾಸಕಿಯಾದರೆ ನನ್ನ ವಿದ್ಯಾರ್ಥಿನಿಯರಿಗೆ ಈ ಕಿರುಕುಳ ಆಗದಂತೆ ತಡೆಯಬೇಕೆಂದು.ಇದಕ್ಕೆ ಬಹಳ ಸರಳ ಉಪಾಯವಿದೆ.ಉಪನ್ಯಾಸಕರು ಅಲ್ಲಲ್ಲಿ ವಿದ್ಯಾರ್ಥಿಗಳ ನಡುವೆ ಕುಳಿತರಾಯಿತು.
ನಾನು ಮುಂದೆ ಶ್ರೀ ರಾಮ ಪ್ರಾಥಮಿಕ ಶಾಲೆ, ಚಿನ್ಮಯ ಪ್ರೌಢಶಾಲೆ, ಸಂತ ಅಲೋಶಿಯಸ್ ಕಾಲೇಜುಗಳಲ್ಲಿ ಕೆಲಸ ಮಾಡಿದೆ‌.ಇಲ್ಲೆಲ್ಲ ತುಂಬಾ ಶಿಸ್ತು ಇತ್ತು.ಹಾಗಾಗಿ ಕಾರ್ಯಕ್ರಮ ನೋಡಲು ಹುಡುಗಿಯರಿಗಾಗಲೀ ಬೇರೆಯವರಿಗಾಗಲೀ ಯಾವುದೇ ಸಮಸ್ಯೆ ಇರಲಿಲ್ಲ.
ನಂತರ ಪ್ರಸಾದರಿಗೆ ಬೆಂಗಳೂರಿನಲ್ಲಿ ಕೆಲಸವಾದ ಕಾರಣ ನಾವು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದೆವು
ಇಲ್ಲಿ ಎನ್ ಆರ್ ಕಾಲೊನಿಯಲ್ಲಿ ಇರುವ ಅನುದಾನಿತ ಕಾಲೇಜೊಂದರಲ್ಲಿ ಅನುದಾನ ರಹಿತ ಉಪನ್ಯಾಸಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದೆ‌.ಇಲ್ಲಿ ಮತ್ತೆ  ಆಪಾ ಪೋಲಿ ಹುಡುಗರು ಅಲ್ಲಿನಷ್ಟು ಅಲ್ಲದಿದ್ದರೂ  ಹುಡುಗಿಯರಿಗೆ ಕಾಟ ಕೊಡುತ್ತಿದ್ದರು .ಇದನ್ನು ನಿಲ್ಲಿಸಲು ನಾನು ಶಕ್ತಿ ಮೀರಿ ಯತ್ನ ಮಾಡಿದೆ ಜೊತೆಗೆ ಸಹೋದ್ಯೋಗಿ ರೇವತಿ ಕೂಡ ಕೈಜೋಡಿಸಿದ್ದರು.ಇಲ್ಲಿ ಸುಮಾರಾಗಿ ನಿಯಂತ್ರಣಕ್ಕೆ ತಂದಿದ್ದೆವು.ನಂತರ ಸರ್ಕಾರಿ ಉದ್ಯೋಗ ದೊರೆತು ಬೆಳ್ಲಾರೆಗೆ ಹೋದೆ.ಇಲ್ಲಿ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ ಮತ್ತೆ ನೆಲಮಂಗಲಕ್ಕೆ ಬಂದಾಗ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಇತ್ತು .ಇಲ್ಲಿ ಕೂಡ ವಿದ್ಯಾರ್ಥಿಗಳ ನಡುವೆ ಕುಳಿತು ಹುಡುಗರ ಪುಂಡಾಟಿಕೆಯನ್ನು ನಿಯಂತ್ರಣಕ್ಕೆ ತಂದೆವು

ಬದುಕ ಬಂಡಿಯಲಿ - ಮೊದಲ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ಮೀ ಟೂ ಅಭಿಯಾನ ತಪ್ಪಲ್ಲ,ಅದರಲ್ಲಿ ರಾಜಕೀಯ ಬೆರೆಸಿ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಬಳಸುವುದು ತಪ್ಪು ,ಕಾನೂನು ಗಟ್ಟಿ ಗೊಳಿಸಬೇಕಿದ್ದಲ್ಲಿ ರಾಜ್ಯ ಮತ್ತು ಕೇಂದ್ರ ಎರಡರ ಮೇಲೂ ಒತ್ತಡ ಹಾಕಬೇಕು‌.

ನನಗಾದ ಮೊದಲ ಕೆಟ್ಟ ಅನುಭವ ಇನ್ನೂ ನನಗೆ ನೆನಪಿದೆ ..
 ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓಣಂ ರಜೆಯಲ್ಲಿ ಅಜ್ಜನ ಮನೆಗೆ ಹೋಗಿದ್ದೆ
ನನ್ನ ಅಜ್ಜನ ಮನೆ ಹೊಸ ಮನೆಯಿಂದ ನನ್ನ ತಂದೆ ಮನೆಗೆ ಸುಮಾರು ಎರಡು ‌ಮೈಲು ದೂರ.ಅರ್ಧಾಂಶ ಕಾಡು ದಾರಿ ಅರ್ಧಾಂಶ ಬಯಲು ಗುಡ್ಡೆಗಳ ದಾರಿ.
ಅಜ್ಜನ ಮನೆಯಿಂದ ತಾಯಿ ಮನೆಗೆ ಒಬ್ಬಳೇ ಬರುತ್ತಾ ಇದ್ದೆ.ನನ್ನ ತಾಯಿ ಮನೆ ತಲುಪಲು ಇನ್ನೂ  ಸುಮಾರು ಅರ್ಧ ಕಿಮೀ ದೂರ ಇತ್ತು.ಅಜ್ಜಿ ಮನೆಯಲ್ಲಿ ಬೆಳೆದ ದಾರೆಪೀರೆ,ಸೊರೆಕಾಯಿ ಹಾಗಲ ಕಾಯಿಗಳನ್ನು  ಅಡಿಕೆಯ ಉದ್ದ ಹಾಳೆಯಲ್ಲಿ ಕಟ್ಟಿ ತಾಯಿಗೆ ಕೊಡಲು ಕೊಟ್ಟಿದ್ದರು.ಬೇರೆ ಏನೋ ಕೂಡ ಗಂಟು ಇತ್ತು.ನಾನು ಭಾರದ ಕಟ್ಟು ಹೊತ್ತುಕೊಂಡು ನಿದಾನವಾಗಿ ನಡೆದುಕೊಂಡು ನಿರ್ಜನವಾದ ದಾರಿಯಲ್ಲಿ ನಡೆದು ಕೊಂಡು ಬರುತ್ತಾ ಇದ್ದೆ‌.ನನ್ನ ಎದುರಾಗಿ ಒಬ್ಬಾತ ನನ್ನನ್ನು  ವಿಚಿತ್ರವಾಗಿ ನೋಡುತ್ತಾ ದಾಟಿ ಹೋದ .ಕೆಟ್ಟ ದೃಷ್ಟಿಯನ್ನು ಅರ್ಥೈಸಿಕೊಳ್ಳುವಷ್ಟು ಪ್ರೌಢತೆ ನನಗಿನ್ನೂ ಬಂದಿರಲಿಲ್ಲ.
ನಾನು ಸ್ವಲ್ಪ ದೂರ ನಡೆದು ಬಂದು ದಾರಿ ಬದಿಯಲ್ಲಿ ಇದ್ದ ಕಲ್ಲಿನ ಮೇಲೆ ನನ್ನ ತಲೆಯ ಮೇಲೆ ಇದ್ದ ಕಟ್ಟನ್ನು ಇಳಿಸಿ ಇನ್ನೊಂದು ಕಲ್ಲಿನ ಮೇಲೆ ತುಸು ವಿಶ್ರಾಂತಿ ಗಾಗಿ ಕುಳಿತೆ,ಸಂಜೆ ಸಮಯ,ಆಕಾಶ ಶುಭ್ರವಾಗಿ ನೀಲಿ ಬಣ್ಣದಿಂದ ಕಾಣುತ್ತಾ ಇತ್ತು‌,ಸುತ್ರ ಮುತ್ತ ಹಸಿರು. ನೋಡುತ್ತಾ ಹಾಗೆಯೇ ಕುಳಿತಿದ್ದೆ‌.ಆಕಾಶವನ್ನು ನೋಡುತ್ತಾ ಸುಮ್ಮನೇ ಕುಳಿತುಕೊಳ್ಳುವುದೆಂದರೆ ಈಗಲೂ ನನಗೆ ತುಂಬಾ ಇಷ್ಟ ‌ಸುಮ್ಮನೇ ಟೇರೇಸ್ ಏರಿ ಸಂಜೆ ಹೊತ್ತು ಅಥವಾ ರಾತ್ರಿ ಬೆಳದಿಂಗಳಿನಲ್ಲಿ ಆಕಾಶ ನೋಡುತ್ತಾ ಜಗತ್ತನ್ನೇ ಮರೆತು ಬಿಡುತ್ತೇನೆ.
ಅಂದು ಕೂಡ ಹಾಗೆಯೇ ಆಯಿತು. ಸ್ವಲ್ಪ ಹೊತ್ತು ನನ್ನನ್ನು ದಾಟಿ ಮುಂದೆ ಹೋದ ವ್ಯಕ್ತಿ ಅತ್ತ ಇತ್ತ ಯಾರೂ ಇಲ್ಲವೆಂಬುದನ್ನು ಖಚಿತ ಪಡಿಸಿಕೊಂಡೇ ಇರಬಹುದು, ನನ್ನ ಸಮೀಪ ಬಂದು ಮುಖ ಸವರಲು ಬಂದ‌.ನಾನೋ ತಕ್ಷಣವೇ ಅಲ್ಲೇ ಕಲ್ಲಿನ ಮೇಲೆ ಇರಿಸಿದ್ದ ಅಜ್ಜಿ ಉದ್ದನೆಯ ಹಾಳೆಯನ್ನು ಸುತ್ತಿ ಮಾಡಿ ಕೊಟ್ಟ ಗಂಟನ್ನು ಎತ್ತಿ ಅವನಿಗೆ ತಾರಾಮಾರ ಹೊಡೆದೆ .ಆತ ಅಲ್ಲೇ ಕುಸಿದು ಬಿದ್ದ .ಅಲ್ಲಿಂದ ಗಂಟನ್ನು ಹಿಡಿದುಕೊಂಡು ಹಿಂದೆ ತಿರುಗಿ ನೋಡದೆ ಒಂದೇ ಸಮನೆ ಓಡಿ ಮನೆ ಸೇರಿದೆ.ಅಮ್ಮನಿಗೆ ಮಾತ್ರ ವಿಷಯ ತಿಳಿಸಿದೆ‌.ಅವನೇನಾದರೂ ಸತ್ತು ಹೋಗಿದ್ದನೇ ಎಂದು ಕೂಡ ನಮಗೆ ಆತಂಕವಾಯಿತು.ಬಹುಶಃ ಅವನಿಗೆ ಸಾಯುವಂತಹ ಏಟೇನೂ ಬಿದ್ದಿರಲಿಲ್ಲವೆಂದು ಕಾಣುತ್ತದೆ. ಯಾರೂ ಸತ್ತ ಸುದ್ದಿ ನಮ್ಮೂರಿನಲ್ಲಿ ಹರಡಿರಲಿಲ್ಲ.ಬಹುಶಃ ಆತ ಮತ್ತೆ ಸಾವರಿಸಿಕೊಂಡು ಎದ್ದು ತನ್ನ ಹಾದಿ ಹಿಡಿದು ಹೋಗಿರಬಹುದು.ಮುಂದೆಂದೂ ಹೆಂಗಸರ ಸುದ್ಧಿಗೆ ಹೋಗಿರಲಾರ‌.
ಇದರ ನಂತರವೂ ಕೆಟ್ಟ ಅನುಭವ ಆಗಿದೆ .ಪೋಲೀಸರಿಗೆ ದೂರನ್ನು ಕೊಟ್ಟು ಕೇಸ್ ಹಾಕಿದ್ದೇನೆ ಕೂಡ .ಆದರೆ ಸಮಾಜ ಗಂಡಿನ ಪರವೇ ಇರುತ್ತದೆ ಎಂಬ  ಕಟು ಅನುಭವ ಆಗಿದೆ ಎಂಬುದು ಕೂಡ ಅಷ್ಟೇ ಸತ್ಯ !

Sunday 7 October 2018

ಬದುಕ ಬಂಡಿಯಲಿ - ನನಗೆ ಕಿವಿ ಕೇಳಿಸುವುದಿಲ್ಲ ಮಗಾ ಎಂದ ಎಕ್ಕಾರಿನ ಅಕ್ಕಮ್ಮಜ್ಜಿ

ನನಗೆ ಕಿವಿ ಕೇಳಿಸುವುದಿಲ್ಲ ಮಗಾ ಎಂದ  ಎಕ್ಕಾರಿನ ಅಕ್ಕಮ್ಮಜ್ಜಿ

ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದಿನ ಮಾತಿದು.ನನ್ನ ಓದಿನ ಕಾರಣಕ್ಕೆ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡು ಎಕ್ಕಾರಿನ ಒಂದು ರೂಮಿನ ಮೋಟು ಗೋಡೆಯ  ಗೆದ್ದಲು ಹಿಡಿದ ಮಣ್ಣಿನ ಮನೆಯನ್ನು ನೂರ ಐವತ್ತು ರುಪಾಯಿ ಬಾಡಿಗೆಗೆ ಹಿಡಿದಿದ್ದೆವು.ಅದಕ್ಕಿಂತ ಒಳ್ಳೆಯ ಮನೆ ನಮ್ಮ ಬಜೆಟ್ ಗೆ ಸಿಕ್ಕಲು ಸಾಧ್ಯವಿರಲಿಲ್ಲ. ಈ ಮನೆಯಲ್ಲಿ ಇದ್ದದ್ದು  ಒಂದು ಕೊಠಡಿ ಸುಮಾರು ಎಂಟಡಿ ಅಗಲ ಹತ್ತು ಹನ್ನೆರಡಡಿ ಉದ್ದ ಇದ್ದಿರಬಹುದು. ಅದರ ಒಂದು ತುದಿಯಲ್ಲಿ ಮೂರಡಿ ಎತ್ತರಕ್ಕೆ ಒಂದು ಸಣ್ಣ ಗೋಡೆ.ಅದರ ಆಕಡೆ ಅಡಿಗೆ ಮನೆ,ಅದಕ್ಕೆ ತಾಗಿಕೊಂಡು ಸ್ನಾನದ ಮನೆ.ಇದು ಮೂರುಅಡಿ ಉದ್ದ ಮೂರಡಿ ಅಗಲ ಇದ್ದಿರಬಹುದು.
ನಮ್ಮ ಈ ಮನೆಯ ಎತ್ತರ ಸುಮಾರು ಎಂಟು ಹತ್ತಡಿ ಇದ್ದಿರಬಹುದು. ಆದರೆ ಗೋಡೆ ಮಾತ್ರ ಆರಡಿ ಎತ್ತರ ಇತ್ತು.ಒಂದು ಕುರ್ಚಿ ತಗೊಂಡು ಹತ್ತಿ ಆಕಡೆಗೆ ಇಣುಕಿದರೆ ಆ ಕಡೆಯ ಇಳಿಸಿ ಕಟ್ಟಿದ ಜೋಪಡಿ ಕಾಣುವಂತೆ ಇತ್ತು.ಆದರೆ ಹತ್ತಿ ನೊಡಲು ನಮ್ಮಲ್ಲಿ ಖುರ್ಚಿಯಾಗಲಿ ಮಂಚವಾಗಲೀ ಇರಲಿಲ್ಲ. ಹಾಗಾಗಿ ಅಲ್ಲಿ ಏನಿದೆ ಎಂದು ಸುಮಾರು ಸಮಯ ಗೊತ್ತಿರಲಿಲ್ಲ. ಅಲ್ಲಿ ಒಂದು ಅಜ್ಜಿ ಮತ್ತು ಅವರ ಬುದ್ಧಿ ಮಾಂದ್ಯ ಮಗ ವಾಸಮಾಡುತ್ತಿದ್ದರು.ಆ ಮಗನಿಗೆ ಅಮವಾಸ್ಯೆ ಹತ್ತಿರ ಬಂದಂತೆಲ್ಲ ಕೋಪ ಆಕ್ರೋಶ ಹೆಚ್ಚಾಗುತ್ತಾ ಇತ್ತು ಏನೇನೋ ಕೂಗಾಡುತ್ತಾ ಇದ್ದ.
ಅದಿರಲಿ.ನಮ್ಮದು ಅರ್ಧ ಗೋಡೆಯ ಮನೆ ಆದ ಕಾರಣ ಸಣ್ಣ ಸದ್ದಾದರೂ ಆ ಕಡೆಗೆ ಕೇಳುವಂತೆ ಇತ್ತು..ನಾವು ಅಲ್ಲಿಗೆ ಬಂದು ಒಕ್ಕಲಾದ ಒಂದೆರಡು ದಿನಗಳಲ್ಲೇ ಅಕ್ಕಮ್ಮಜ್ಜಿ ತನ್ನ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಬಹಳ ಇಷ್ಟವಾದರು.ಅವರು ಮಾತನಾಡುತ್ತಾ ನನಗೆ ಕಿವಿ ಕೇಳಿಸುವುದಿಲ್ಲ ಮಗಾ.ಇನ್ನು ನನ್ನ ‌ಮಗ ಮಲಗಿದ ತಕ್ಷಣ ನಿದ್ದೆ ಮಾಡುತ್ತಾನೆ.ಅವನಿಗೇನೂ ಗೊತ್ತಿಲ್ಲ ಸಣ್ಣ ಮಗುವಿನ ಬುದ್ಧಿ  ಅವನದು( ಇದು ಸತ್ಯದ ವಿಚಾರವೇ ಆಗಿತ್ತು) ಆದರೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದು ಶುದ್ಧ ಸುಳ್ಳು.ಆದರೆ ಹೊಸತಾಗಿ ಮದುವೆಯಾಗಿ ಬಂದು ಸಂಸಾರ ಹೂಡಿದ  ನಮಗೆ ಸಂಕೋಚವಾಗಬಾರದೆಂಬ ಸದುದ್ದೇಶದಿಂದ ಅವರು ಹಾಗೆ ಹೇಳಿದ್ದರು.
ಅಕ್ಕಮ್ಮಜ್ಜಿ ಬಹಳ ಸಹೃದಯಿ. ಆಗಾಗ ನಮ್ಮ ಮನೆ ಅಂಗಳ ಗುಡಿಸಿ ಮನೆಗೆ ಹತ್ತಿದ ಗೆದ್ದಲು ತೆಗೆಯಲು ಸಹಾಯ ಮಾಡುತ್ತಿದ್ದರು ‌.ನಮ್ಮ ‌ಮನೆಯ ಓನರ್ ನಾಗವೇಣಿ ಅಮ್ಮನವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಅವರ ಮೊದಲ ‌ಮಗ ಬುದ್ಧಿ ಮಾಂದ್ಯ.ಆದರೆ ಎರಡನೇ ಮಗ ಮುಂಬಯಿಯಲ್ಲಿ  ಒಳ್ಳೆಯ ಕೆಲಸದಲ್ಲಿ ಇದ್ದ ,ಒಳ್ಳೆಯ ಆದಾಯವೂ ಇತ್ತು.ಆತ ತನ್ನ ತಾಯಿಯನ್ನು ಎಂದರೆ ಅಕ್ಕಮ್ಮಜ್ಜಿ ಯನ್ನು ಮುಂಬಯಿಗೆ ಕರೆದುಕೊಂಡು ಹೋಗಲು ತಯಾರಿದ್ದ ಆದರೆ ಬುದ್ಧಿ ಮಾಂದ್ಯನಾದ ಅಣ್ಣನನ್ನು ಕರೆದುಕೊಂಡು ಹೋಗಲು ತಯಾರಿರಲಿಲ್ಲ.ಆತನನ್ನು ನೋಡಿಕೊಳ್ಳುವ ಸಲುವಾಗಿ ಅಕ್ಕಮ್ಮಜ್ಜಿ ಎಕ್ಕಾರಿನಲ್ಲಿ ಕೂಲಿ ಮಾಡುತ್ತ ಇಳಿಸಿ ಕಟ್ಟಿದ ಅಡಿಕೆ ಮರದ ಸೋಗೆಯ ಜೋಡಿಯಲ್ಲಿ ದೊಡ್ಡ ‌ಮಗನೊಂದಿಗೆ ಬದುಕುತ್ತಾ ಇದ್ದರು.ನಾನಿರುವ ತನಕ ಮಗನನ್ನು ಬೀದಿ ಪಾಲಾಗಲು ಬಿಡುವುದಿಲ್ಲ ,ಮುಂದೆ ದೇವರು ಇಟ್ಟಂತೆ ಆಗುತ್ತದೆ ಎಂದು ಹೇಳುತ್ತಾ ಇದ್ದರು.ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ದೊಡ್ಡದಾಗಿ ನೋವಿನಿಂದ ನರಳಿದ ದೊಡ್ಡ ‌ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದ.ಅದೇ ಜೋಪಡಿಯ ಈ ಕಡೆ ಇದ್ದ ನಾವು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಎದೆ ಬಡಿತ ,ಮತ್ತು ನಾಡಿ ಬಡಿತ ನಿಂತಿತ್ತು. ಆರಂಭದಲ್ಲಿ ಎದೆ ಬಡಿದು ಅತ್ತ ಅಕ್ಕಮ್ಮಜ್ಜಿ ನಂತರ ನಾನು ಇರುವಾಗಲೇ ಮಗ ಸತ್ತಿದ್ದು ಒಳ್ಳೆದಾಯಿತು‌.ಇಲ್ಲವಾದರೆ ನನ್ನ ನಂತರ  ಊಟ ತಿಂಡಿ,ಸ್ನಾನ ಆಸರೆ ಇಲ್ಲದೆ ಹುಣ್ಣಾಗಿ ಸಾಯಬೇಕಿತ್ತು.ನನ್ನನ್ನು ಸಣ್ಣ ಮಗ ನೋಡಿಕೊಂಡಾನು ಎಂದು ಸಮಾಧಾನ ಮಾಡಿಕೊಂಡಿದ್ದರು.ನಂತರ ದೊಡ್ಡ ಮಗನ ಅಂತ್ಯ ಸಂಸ್ಕಾರಕ್ಕೆ ಬಂದ ಸಣ್ಣ ‌ಮಗ ಎಕ್ಕಾರು ನಾಗವೇಣಿ ಅಮ್ಮನವರಿಗೆ " ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ " ಎಂದು ಮಾತು ಕೊಟ್ಟು ಮುಂಬಯಿಗೆ ಕರೆದುಕೊಂಡು ಹೋಗಿದ್ದ.ಮುಂದೇನಾತು ತಿಳಿಯದು.ಬಹುಶಃ ಮಗ ಚೆನ್ನಾಗಿ ನೋಡಿಕೊಂಡಿರಬಹುದು.ಇಂದು ಹೊಸತಾಗಿ ಸಂಸಾರ ಹೂಡಿದ ಆತ್ಮೀಯರಾದ ಪರಶುರಾಮ ಯತ್ನಾಳ್( ಹೈ ಕೋರ್ಟ್ ನ್ಯಾಯವಾದಿ) ಮನೆಗೆ ಹೋಗಬೇಕೆಂದು ಕೊಂಡಾಗ ಅಕ್ಕಮ್ಮಜ್ಜಿ ಮತ್ತು ತೀರಾ ಕಡಿಮೆ ಬಾಡಿಗೆಗೆ ಮನೆ ಕೊಟ್ಟ  ನಾಗವೇಣಿ ಅಮ್ಮನವರ ಸಹೃದಯತೆ ನೆನಪಾಗಿ ಬರೆದೆ - ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ

Thursday 6 September 2018

ಬದುಕ ಬಂಡಿಯಲಿ.24 .- ಡಾ.ಲಕ್ಷ್ಮೀ ಜಿ ಪ್ರಸಾದ

ಇಂದು ಕಾಲೇಜಿನಿಂದ ಮನೆಗೆ ಬರುತ್ತಿರ ಬೇಕಾದರೆ ಬಸ್ಸಿನಲ್ಲಿ ನಾನು ಕುಳಿತ ಸೀಟಿಗಿಂತ ಎರಡು ಸೀಟು ಮುಂದೆ ಕುಳಿತಿದ್ದ ಯುವತಿ ಹಿಂತಿರುಗಿ ನೋಡಿ ಮುಗುಳು ನಕ್ಕರು.ನನ್ನ ಹಿಂದಿನ ಸೀಟ್ ನಲ್ಲಿ ಯಾರಾದರೂ ಅವರ ಪರಿಚಿತರು ಕುಳಿತಿರಬಹುದು.ಅವರನ್ನು ನೋಡಿ ಪರಿಚಯದ ನಗು ಬೀರಿರಬಹುದು ಎಂದು ಕೊಂಡೆ.ಅವರು ಮತ್ತೊಮ್ಮೆ ನೋಡಿ‌ಮುಗುಳು ನಕ್ಕರು ಯಾರಾದರೂ ನನ್ನ ಪರಿಚಿತರಿದ್ದು ನಾನು ಮರೆತಿರಬಹುದೇನೋ ಎಂದು ಕೊಂಡು ನಾನು ಪ್ರತಿನಗು ಬೀರಿದೆ. ಮುಂದಿನ ಸ್ಟಾಪ್ ನಲ್ಲಿ ಅವರ ಪಕ್ಕದ ಸೀಟ್ನಲ್ಲಿದ್ದವರು ಇಳಿದು ಹೋದರು.ಆಗ ಅವರು ನನ್ನನ್ನು ಇಲ್ಲಿಗೆ ಬರ್ತೀರಾ ಮೇಡಂ pls ಎಂದು ‌ಕರೆದರು.ಯಾಕೆಂದು ಗೊತ್ತಾಗದಿದ್ದರೂ ಎದ್ದು ಅವರ ಪಕ್ಕ ಕುಳಿತೆ." ನಿಮ್ಮಲ್ಲಿ ಮಾತಾಡಲು ಯುನಿವರ್ಸಿಟಿಗೆ ಬರಬೇಕೆಂದಿದ್ದೆ " ಎಂದು ಹೇಳಿದರು.ಯುನಿವರ್ಸಿಟಿಯಾ ? ಯಾವ ಯುನಿವರ್ಸಿಟಿ ? ನೀವು ನನ್ನನ್ನು ಬೇರೆ ಯಾರೋ ಎಂದು ತಪ್ಪಾಗಿ ಭಾವಿಸಿರಬೇಕು ಎಂದು ಹೇಳಿದೆ."ನೀವು ಬೆಂಗಳೂರು ಯುನಿವರ್ಸಿಟಿ ಯ ಕನ್ನಡ ಪ್ರೊಫೆಸರ್ ಅಲ್ವಾ ? ಎಂದು ಕೇಳಿದರು
ಅಲ್ಲ ನಾನು ನೆಲಮಂಗಲ ಪಿಯು ಕಾಲೇಜು ಉಪನ್ಯಾಸಕಿ ಎಂದು ಉತ್ತರಿಸಿದೆ .ನೀವು ಲಕ್ಷ್ಮೀ ಜಿ ಪ್ರಸಾದ್ ತಾನೇ ? ಎಂದು ಕೇಳಿದರು.ಹೌದು ಎಂದೆ."ಗಣೇಶಯ್ಯ ಕಾದಂಬರಿಯಲ್ಲಿನ ಲಕ್ಷ್ಮೀ ಪೋದ್ದಾರ್ ನೀವೆ ತಾನೆ ? ನಿಮ್ಮ ಫೋಟೋ ಕೂಡಾ ಅದರಲ್ಲಿ ಇದೆ" ಎಂದು ಹೇಳಿದರು.ಆಗ ನನಗೆ ವಿಷಯವೇನೆಂದು ತಲೆಗೆ ಹೋಯಿತು. ಕೆ ಎನ್ ಗಣೇಶಯ್ಯ ಅವರು ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ  ನನ್ನನ್ನು ಒಂದು ಮುಖ್ಯ ಪಾತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿಯೂ ತುಳು ಸಂಶೋಧಕಿಯ ಪಾತ್ರ ನನ್ನದು.ಅ ಕಾದಂಬರಿಯಲ್ಲಿ ಲಕ್ಷ್ಮೀ ಪೋದ್ದಾರ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್. ಆ ಕಾದಂಬರಿಯ ಕೊನೆಯಲ್ಲಿ ಡಾ.ಗಣೇಶಯ್ಯ ಅವರೊಂದಿಗಿನ ಫೋಟೋ ಹಾಕಿ ಲಕ್ಷ್ಮೀ ಜಿ ಪ್ರಸಾದ ಪೋದ್ದಾರ್ ಆದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದರು .ಅವರ ಕಾದಂಬರಿ ಓದಿರುವ ಸುನೀತಾ ಅವರು ಅಲ್ಲಿ ಹಾಕಿರುವ ನನ್ನ ಫೋಟೋ ನೋಡಿದ್ದು ಬಸ್ ನಲ್ಲಿ ಗುರುತಿಸಿ ಮಾತನಾಡಿದರು.ಗಣೇಶಯ್ಯ ಅವರ ಕಾದಂಬತಿಗಳ ಬಗ್ಗೆ  ಮಾತನಾಡಿದರು ಭೂತಾರಾಧನೆ ತುಳು ಸಂಸ್ಕೃತಿಯ ಕುರಿತಾಗಿಯೂ ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದರು .ನನ್ನ ಪೋನ್ ನಂಬರ್ ತಗೊಂಡರು.ಅವರೊಂದಿಗೆ ಸೆಲ್ಫಿ ತಗೊಳ್ಳಬೇಕು ಅನ್ನುವಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು.ಅಂದ ಹಾಗೆ ಆ ಅಂದದ ಯುವತಿ ಕಾನ್ಪುರದ ಐಐಟಿಯಲ್ಲಿ ಎಂ ಟೆಕ್ ಓದ್ತಿದ್ದಾರೆ.ಅವರಿಗೆ ಕನ್ನಡ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸವಿದೆ.ಉತ್ತರ ಕಾಂಡ ಸೇರಿದಂತೆ ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ಓದಿದ್ದಾರೆ.ಕೆ ಎನ್ ಗಣೇಶಯ್ಯ ಅವರ ಎಲ್ಲಾ ಕಾದಮಬರಿಗಳನ್ನೂ ಓದಿದ್ದಾರೆ.ವಸುಧೇಂದ್ರ ಕೂಡ ಅವರಿಗೆ ತುಂಬಾ ಅಚ್ಚುಮೆಚ್ಚು ಅಂತೆ.ಎ ಅರ್ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಅನ್ನು ಇಪ್ಪತ್ತು ಮೂವತ್ತು ಬಾರಿ ಓದಿದ್ದಾರಂತೆ.ಅವರ ಮಾತೃಭಾಷೆ ತೆಲುಗು ಅಂತೆ ಅದರೆ ಹುಟ್ಟಿ ಬೆಳೆದದ್ದು ಎಲ್ಲಾ ಬೆಂಗಳೂರಿನಲ್ಲಿ .ಅವರ ಸಾಹಿತ್ಯದೆಡೆಗಿನ ಒಲವು ನೋಡಿ ತುಂಬಾ ಸಂತಸವಾಯಿತು
https://www.google.co.in/amp/avadhimag.com/%3fp=173110&amp=1

Saturday 25 August 2018

ಬದುಕ ಬಂಡಿಯಲಿ‌23 :ನನ್ನ ‌ಮೊದಲ ಉಪನ್ಯಾಸ ಡಾ.ಲಕ್ಷ್ಮೀ ಜಿ ಪ್ರಸಾದ ‌


ನನ್ನ ‌ಮೊದಲ‌ ಉಪನ್ಯಾಸ ..
ನಾನು ಸುಮಾರು ಇನ್ನೂರೈವತ್ತು   ಇನ್ನೂರೆಂಬತ್ತು ಉಪನ್ಯಾಸಗಳನ್ನು ಬೇರೆ ಬೇರೆ ವಿಷಯಗಳ ಬಗ್ಗೆ  ನೀಡಿದ್ದೇನೆ‌.
ನನ್ನ ಮೊದಲ ಉಪನ್ಯಾಸ ರಕ್ಷಾ ಬಂಧನ ದ ಕುರಿತು  ಕಲ್ಲಡ್ಕ ಶಾಲೆಯಲ್ಲಿ ಆಗಿತ್ತು .ಆಗ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ಬಗ್ಗೆ ,ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿದ್ದೆ‌.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ನಾನು ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಇದ್ದೆ‌.ಆಗಷ್ಟೇ ಎರಡನೇ ವರ್ಷದ ಎಂಎ ಪರೀಕ್ಷೆ ಮುಗಿಸಿ ಕೆಲಸಕ್ಕೆ ಸೇರಿದ್ದೆ‌.ಫಲಿತಾಂಶ ಇನ್ನೂ ಬಂದಿರಲಿಲ್ಲ.
 ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ನಿಮಿತ್ತ ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಉಪನ್ಯಾಸ ನೀಡಲು ಯಾರನ್ನೋ ಆಹ್ವಾನಿಸಿದ್ದು ,ಆ ದಿನ ಬೆಳಗ್ಗೆ ಅವರಿಗೆ ಬರಲಾಗುವುದಿಲ್ಲ ಎಂದು ಯಾರಲ್ಲೋ ಹೇಳಿಕಳುಹಿಸಿದ್ದರು.ಆಗ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದು ಯಾರು ಎಂಬ ಸಮಸ್ಯೆ ಉಂಟಾಯಿತು‌.ಆಗ ಅಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದ ಗೋಪಾಲ್ ರಾವ್ ಅವರು ನನ್ನಲ್ಲಿ ರಕ್ಷಾ ಬಂಧನದ ಬಗ್ಗೆ ಅರ್ಧ ಗಂಟೆ ಮಾತನಾಡಿ ಎಂದು ಹೇಳಿದರು‌.ಆರಂಭದಲ್ಲಿ ನಾನು ಹಿಂದೇಟು ಹಾಕಿದೆ‌.ಆಗ ಅಲ್ಲಿ ಶಿಕ್ಷಕಿಯಾಗಿದ್ದ ಸಂಧ್ಯಾ ಮಾತಾಜಿ ಹಾಗೂ ಐತಪ್ಪ ಮಾಸ್ಟರ್ ಅವರು ಒತ್ತಾಸೆಯಾಗಿ ನಿಂತು ಧೈರ್ಯ ತುಂಬಿದರು‌."ನೀವು‌ಮುಂದೆ ಕಾಲೇಜು ಉಪನ್ಯಾಸಕರಾಗಲಿರುವವರು. ಮೈಕ್ ಹಿಡಿದು ನಾಲ್ಕು ಮಾತಾಡಲು ಹಿಂದೇಟು ಹಾಕಿದರೆ ಹೇಗೆ? ಬರೆಯುವ ಹವ್ಯಾಸ ನಿಮಗಿದೆ.ಅಂತೆಯೇ ಉಪನ್ಯಾಸ ನೀಡುವುದಕ್ಕೂ ಅಭ್ಯಾಸಮಾಡಿಕೊಳ್ಳಿ.ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಂಧ್ಯಾ ಮಾತಾಜಿ ಹೇಳಿದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತದೆ.ನಂತರ ರಕ್ಷಾ ಬಂಧನಕ್ಕೆ ಸಂಬಂಧಿಸಿದ ಎರಡು ‌ಮೂರು ಕಥೆಗಳನ್ನು ನನಗೆ ಹೇಳಿಕೊಟ್ಟು ಭಾಷಣಕ್ಕೆ ತಯಾರಾಗಲು ನನಗೆ ಸಹಾಯ ಮಾಡಿದರು .
ಅಂತೂ ಇಂತೂ ಸಭಾ ಕಾರ್ಯಕ್ರಮದಲ್ಲಿ ಇಪ್ಪತ್ತು ನಿಮಿಷ ಮಾತನಾಡಿದೆ‌.ನಾನು ನೀಡಿದ  ಮೊದಲ ಉಪನ್ಯಾಸವದು.ಚೆನ್ನಾಗಿ ಮಾತನಾಡಿದ್ದೇನೆ ಎಂದು ಮುಖ್ಯೋಪಾಧ್ಯಾಯರು ಮತ್ತು ಉಳಿದ ಅಧ್ಯಾಪಕರು ಮೆಚ್ಚುಗೆಯನ್ನು ತಿಳಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.
ಅದಕ್ಕೂ ಮೊದಲು ನಾನು ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಯಲ್ಲಿ ಭಾಷಣ ಮಾಡಿ ಬಹುಮಾನ ಪಡೆದುಕೊಂಡಿದ್ದೆ‌.ಆದರೆ ಸ್ಪರ್ಧೆಯಲ್ಲಿ ಐದು ಹತ್ತು ನಿಮಿಷ ಮಾತನಾಡುವುದಕ್ಕೂ ತುಂಬಿದ ಸಭೆಯಲ್ಲಿ ಭಾಷಣ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.
ಈ ನಿಟ್ಟಿನಲ್ಲಿ ನನಗೆ ಉಪನ್ಯಾಸ ನೀಡಲು ಅವಕಾಶ ನೀಡಿ,ನಾನು ಕೂಡ ಉಪನ್ಯಾಸ ನೀಡಬಲ್ಲೆ ಎಂಬ ಧೈರ್ಯವನ್ನು ತುಂಬಿದ ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ  ಗೋಪಾಲ್ ರಾವ್ ಮತ್ತು ಅಧ್ಯಾಪಕರನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುವೆ .
ಇದಕ್ಕೂ ಒಂದು ವರ್ಷದ  ಮೊದಲು ನಮ್ಮ ಊರು ಕೋಡಪದವಿನಲ್ಲಿ ಕೃಷ್ಣಾಷ್ಟಮಿ  ಮತ್ತು ರಕ್ಷಾ ಬಂಧನ ಹಬ್ಬದ ನಿಮಿತ್ತ ಒಂದು ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಅದರಲ್ಲಿ ಒಂದು ಉಪನ್ಯಾಸ ನೀಡುವಂತೆ ಮಾತಾಜಿಯವರು ತಿಳಿಸಿದ್ದರು.ಆದರೆ  ಸ್ಥಳೀಯರಾಗಿ  ಬಲಿಷ್ಠರಾಗಿದ್ದ  ನಮ್ಮ ಹತ್ತಿರದ ಸಂಬಂಧಿಯೊಬ್ಬರು ( ಪ್ರಸಾದರ ದೊಡ್ಡಪ್ಪನ ಮಗ) ಇದು ಗೊತ್ತಾಗಿ ಹೊಟ್ಟಿಕಿಚ್ಚಿನಿಂದ ನನಗೆ ಅಲ್ಲಿ  ನೀಡಿದ ಅವಕಾಶ ವನ್ನು ತಪ್ಪಿಸಿ ,ಆ ದಿನ ಉಪನ್ಯಾಸ ನೀಡಲು ಬೇರೆ ಯಾರನ್ನೋ ಕರೆಸಿದ್ದರು. ಈ ಬಗ್ಗೆ ನನ್ನ ಅತ್ತೆಯವರೇ "ಅಬ್ಬಾ ಇವರುಗಳ ಮತ್ಸರವೇ !ಎಂದು ಉದ್ಗರಿಸಿದ್ದರು. ಸಾಮಾನ್ಯವಾಗಿ ನನ್ನ ಅತ್ತೆಯವರು ಅವರ ಕಡೆಯವರನ್ನು(  ನನ್ನ ಗಂಡನ ಮನೆ ಸಂಬಂಧಿಕರನ್ನು ) ಬಿಟ್ಟುಕೊಡುತ್ತಿರಲಿಲ್ಲ.ಆದರೆ ಈ ವಿಷಯದಲ್ಲಿ ಅವರಿಗೆ ಕೂಡ ನಮ್ಮ ಸಂಬಂಧಿಕರ ಹೊಟ್ಟೆಕಿಚ್ಚಿನ ಅರಿವಾಗಿತ್ತು.
ಇಲ್ಲಿ ತಪ್ಪಿದ ಅವಕಾಶ ಮತ್ತೆ ನನಗೆ ಕಲ್ಲಡ್ಕ ಶಾಲೆಯಲ್ಲಿ ದೊರೆತಿತ್ತು .ಜಗತ್ತು ಬಹಳ ವಿಶಾಲವಾಗಿದೆ‌.ಕೊಲ್ಲುವ ಶಕ್ತಿಗಿಂತ ಕಾಯುವ ದೇವರು ಬಲಿಷ್ಠನಾಗಿರುತ್ತಾನೆ.ಕಾಲೆಳೆಯುವ ಮಂದಿ ಕೆಲವರಿದ್ದರೆ ಬೆಂಬಲಕೊಡುವವರು ನೂರಾರು ಜನರಿರುತ್ತಾರೆ ಎಂಬುದು ಮೊದಲ ಬಾರಿಗೆ ನನಗೆ ಇಲ್ಲಿಯೇ ಅರಿವಾದದ್ದು.ಹಾಗಾಗಿಯೇ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ನಿಲುವನ್ನು ಆಧರಿಸಿ ಉಪನ್ಯಾಸ ನೀಡಿದ್ದೆ .

Saturday 11 August 2018

ದೊಡ್ಡವರ ದಾರಿ 61 ಅತುಲ ಆತ್ಮ ವಿಶ್ವಾಸದ ತರುಣ ಹನುಮಂತ ನಾಯಕ್© ಡಾ.ಲಕ್ಷ್ಮೀ ಜಿ ಪ್ರಸಾದ

ನೋಡ್ತಾ ಇರಿ ಮೇಡಂ, ಒಂದಲ್ಲ ಒಂದಿನ ನಾನು ಒಳ್ಳೆಯ ಕೆಲಸ ಪಡೆಯುತ್ತೇನೆ..ಎಂದ ಇಪ್ಪತ್ತೈದರ ತರುಣ ಹನುಮಂತ ನಾಯಕ್ ನ ಆತ್ಮವಿಶ್ವಾಸದ ಮಾತು ನನಗೆ ಬಹಳ ಇಷ್ಟವಾಯಿತು.ದಿನಾಲು ಬೆಂಗಳೂರಿನ ನಮ್ಮ ಮನೆಯಿಂದ ನೆಲಮಂಗಲದ ಕಾಲೇಜಿಗೆ ಓಲಾ ಅಥವಾ ಉಬರಚ ಕ್ಯಾಬ್ ನಲ್ಲಿ ಹೋಗಿ ಬರುತ್ತೇನೆ.ಸಾಮಾನ್ಯವಾಗಿ ಮುಂದಿನ ಸೀಟಿನಲ್ಲೇ ಕುಳಿತುಕೊಳ್ಳುತ್ತೇನೆ‌.ಹೆಚ್ಚಾಗಿ ಕಾರಿನಲ್ಲಿ ಕುಳಿತ ತಕ್ಷಣವೇ ಫೇಸ್ ಬುಕ್, ವಾಟ್ಸಪ್ ,ಬ್ಲಾಗ್ ಗಳಲ್ಲಿ ಮುಳುಗಿ ಹೋಗುತ್ತೇನೆ.ಒಳ್ಳೆಯ ಮೂಡ್ ಇದ್ದ ದಿನ ಕ್ಯಾಬ್ ಡ್ರೈವರ್ ಗಳ ಸ್ಥತಿ ಗತಿ ಬಗ್ಗೆ ಮಾತನಾಡುವುದೂ ಇದೆ.ಹೆಚ್ಚಿನ ಕ್ಯಾಬ್ ಡ್ರೈವರ್ ಗಳು ನಮಗೇನೂ ಅಸಲಾಗುವುದಿಲ್ಲ ಮೇಡಂ. ಇಪ್ಪತ್ತಾರು ಸೆಕಡಾ ಕಮಿಷನ್ ಕೊಟ್ಟ ಮೇಲೆ ನಮಗೇನೂ ಉಳಿಯುವುದಿಲ್ಲ‌. ಕಾರಿನ  ಸಾಲದ ತಿಂಗಳ ಕಂತು ಕಟ್ಟಲಾಗದೆ
ತುಂಬಾ ಜನರ ಕಾರುಗಳು ಸೀಸ್ ಆಗಿವೆ ಇತ್ಯಾದಿಯಾಗಿ ಹೇಳುತ್ತಾ ಇರುತ್ತಾರೆ.
ನಮ್ಮ ಕಾಲೇಜಿನಲ್ಲಿ ಮೊದಲ‌ ಕಿರು ಪರೀಕ್ಷೆ ಮುಗಿಸಿ ಉತ್ತರ ಪತ್ರಿಕೆ ತಿದ್ದಲು ಮನೆಗೆ ತಗೊಂಡು ಬಂದೆ.ಬರುವಾಗ   ನೆಲಮಂಗಲದಿಂದ ಮನೆಗೆ ಉಬರ್ ಕ್ಯಾಬ್ ನಲ್ಲಿ ಬಂದೆ.ನನ್ನ ಕೈಯಲ್ಲಿ ಇದ್ದ ಉತ್ತರ ಪತ್ರಿಕೆಗಳ ದೊಡ್ಡ ಕಟ್ಟನ್ನು ನೋಡಿದ ಕ್ಯಾಬ್ ಡ್ರೈವರ್ ನೀವು ಟೀಚರಾ ಮೇಡಂ ಎಂದು ಕೇಳಿದರು.ಹೌದು,ನಾನು ನೆಲಮಂಗಲ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದೇನೆ ಎಂದು ಹೇಳಿದೆ.
ಆಗ ಅವರು "ನಾನು ಕೂಡ ಡಿಎಡ್ ಮಾಡಿದ್ದೇನೆ ಮೇಡಂ" ಎಂದು ಹೆಮ್ಮೆಯಿಂದ ಹೇಳಿದರು.ಮತ್ಯಾಕೆ ಶಿಕ್ಷಕರಾಗಲಿಲ್ಲ ಎಂದು ಕೇಳಿದೆ.ಆಗ ನಾನು ಖಾಸಗಿಯಾಗಿ ಒಂದೆರಡು ಶಾಲೆಗಳಲ್ಲಿ ಕೆಲಸ ಮಾಡಿದೆ ಮೇಡಂ. ಎಂಟು ಹತ್ತು ಸಾವಿರ ಸಂಬಳ ಕೊಡ್ತಾರೆ.ಅದು ಎಲ್ಲಿಗೂ ಸಾಕಾಗುವುದಿಲ್ಲ.ಅದಕ್ಕೆ ಸರಿಯಾದ ಕೆಲಸ ಸಿಗೋ ತನಕ ಇರಲಿ ಅಂತ ಕಾರು ಓಡಿಸುತ್ತಿದ್ದೇನೆ ಎಂದು ಹೇಳಿದರು. ಆಗ ಇದರಲ್ಲಿ ಅಸಲಾಗುತ್ತಾ ಬರುತ್ತಾ ?   ನಿಮಗೆ ಎಷ್ಟು ಆದಾಯ ಬರುತ್ತದೆ ಎಂದು ಕೇಳಿದೆ.ಆಗ ಅವರು ನಮಗೆ ವಾರಕ್ಕೆ  ಇಪ್ಪತ್ತೈದು ಮೂವತ್ತು  ಸಾವಿರದಷ್ಟು ಬ್ಯುಸಿನೆಸ್‌ ಸಿಗುತ್ತದೆ. ಕಮಿಷನ್, ಡೀಸೆಲ್ ಬೆಲೆ ಬಿಟ್ಟು ವಾರಕ್ಕೆ ಇಪ್ಪತ್ತು ಸಾವಿರದಷ್ಟು ಆದಾಯ ಬರುತ್ತದೆ .ತಿಮಗಳಿಗೆ ಹದಿನೆಂಟು ಸಾವಿರ ಕಾರಿನ ಸಾಲದ ಕಂತು ಇರುತ್ತದೆ.ಉಳಿದ ಐವತ್ತು ಅರುವತ್ತು ಸಾವಿರ ನಮಗೆ ಉಳಿಯುತ್ತದೆ ಎಂದು ಹೇಳಿದರು. ಅರೇ! ಎಲ್ರೂ ವರಗಕ್ ಒಔಟ್ ಆಗಲ್ಲ ಎಂದು ಅಲವತ್ತುಕೊಳ್ತ್ತಾ ಇದ್ದರೆ ಇವರು ಇಷ್ಟು ಅದಾಯ ಗಳಿಸುವ ಬಗ್ಗೆ ಹೇಳುತ್ತಾರಲ್ಲ ಎಂದು ಸಂತಸವಾಯಿತು ಜೊತೆಗೆ ಒಂಚೂರು ಆಶ್ಚರ್ಯ ಕೂಡ ಅಯಿತು.ಮತ್ತೆ ತುಂಬಾ ಜನ ನಮಗೆ ಲಾಸ್ ಆಗುತ್ತಿದೆ, ಎಂದು ಹೇಳುತ್ತಾರಲ್ಲ ? ಎಂದು ಕೇಳಿದೆ.ಸೋಮಾರಿಗಳು ಮೇಡಂ ಅವರು.ಬೆಳಗ್ಗಿನಿಂದ ಸಂಜೆ ತನಕ ಮೈಗಳ್ಳತನ ಬಿಟ್ಟು ದುಡಿದರೆ ಇಲ್ಲೂ ದುಡ್ಡು ಬರುತ್ತೆ ಮೇಡಂ. ಕೆಲವೊಮ್ಮೆ ಮನೆಯಿಂದ ಹೊರಟು ಒಂದೆರಡು ಗಂಟೆ ಕಳೆದರೂ ಡ್ಯೂಟಿ ಬೀಳಲ್ಲ .ಆಗೆಲ್ಲ ತಾಳ್ಮೆಯಿಂದ ಕಾಯಬೇಕಾಗುತ್ತದೆ‌. ಬಿದ್ದ ಡ್ಯೂಟಿನ ಮಾಡಬೇಕು  ಅದು ಬಿಟ್ಟು ಕಂಪೆನಿನ ಬೈಕೊಂಡು ಮನೆಗೆ ಹೋಗಿ ಮಲಕ್ಕೊಂಡರೆ ದುಡ್ಡು ಎಲ್ಲಿಂದ ಬರುತ್ತೆ ಮೇಡಂ ? ಎಂದು ಹೇಳಿದರು.ಹೌದು.ಅವರು ಟೊಯೋಟಾ ಇಟಿಯೋಸ್ ಕಾರನ್ನು ಖರೀದಿಸಿ ಉಬರ್ ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ.ಹನುಮಂತ ನಾಯಕ್  ಮತ್ತು ಅವರ ತಮ್ಮ ಒಗ್ಗಟ್ಟಿನಂದ ಕೆಲಸ ಮಾಡುತ್ತಾರೆ. ಇವರು ಹಗಲು ಹೊತ್ತಿನಲ್ಲಿ ಕಾರು ಓಡಿಸುತ್ತಾರೆ.ಇವರ ಸಹೋದರ ರಾತ್ರಿ ಹೊತ್ತು ಇದೇ ಕಾರನ್ನು ಓಡಿಸುತ್ತಾರೆ.ದಿವಸಕ್ಕೆ ಮೂರು ನಾಲ್ಕುಸಾವಿರ ದುಡಿಯಲೇ ಬೇಕೆಂಬ ಗುರಿ ಇಟ್ಟುಕೊಂಡು ರಸ್ತೆಗೆ ಇಳಿಯುತ್ತಾರೆ‌ಟಾರ್ಗೆಟ್ ತಲುಪಿದ ನಂತರವೇ ಮನೆಗೆ ಹಿಂದಿರುಗುತ್ತಾರೆ‌.ಅವರು ಗುರಿ ತಲುಪುವಲ್ಲಿಯವರೆಗೆ ಡ್ಯೂಟಿಗಾಗಿ ತಾಳ್ಮೆಯಿಂದ ಕಾಯುತ್ತಾರೆ‌.ಹಾಗಾಗಿ ಸಾಕಷ್ಟು ಸಂಪಾದನೆ ಕೂಡ ಮಾಡುತ್ತಾರೆ.ಮಾತಿನ ನಡುವೆ ಅವರು ಡಿಎಡ್ ಮಾಡಿದ ನಂತರ ಬಿಎ ಓದಿ ನಂತರ ಎಂ್ ಎಸ್ ಡಬ್ಯು ಕೂಡ ಓದಿರುವುದು ತಿಳಿಯಿತು. ಕಾರು ಓಡಿಸುವ ಕಾಯಕ ಮಾಡುತ್ತಲೇ ಒಳ್ಳೆಯ ಕೆಲಸಕ್ಕಾಗಿ ಕೂಡ ಪ್ರಯತ್ನ ಮಾಡುತ್ತಿದ್ದಾರೆ‌.ಅಗ ಮಾತಿನ ನಡುವೆ ನೋಡುತ್ತಿರಿ ಮೇಡಂ, ಒಂದಲ್ಲ ಒಂದು ದಿನ ನಾನು ಒಳ್ಳೆಯ ಕೆಲಸ ಪಡೆದೇ ಪಡೆಯುತ್ತೇನೆ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿದರು‌.ನನಗೂ ಕೂಡ ಅವರು ಅದನ್ನು ಸಾಧಿಸಿಯಾರು ಎನಿಸಿತು.ಅಥವಾ ಸ್ವ ಉದ್ಯೋಗ ಮಾಡುತ್ತಲೇ ಈ ಇಬ್ಬರು ಯುವಕರು ಉನ್ನತ ಮಟ್ಟದ ಸಾಧನೆಯನ್ನು ಮಾಡಬಹುದು ಎನಿಸಿತು‌.ಧನಾತ್ಮಕ ಚಿಂತನೆ,ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ.ಈ ಯುವಕರಲ್ಲಿ ಈ ಮೂರೂ ಗುಣಗಳಿವೆ. ಇವುಗಳ ಮೂಲಕ ಉನ್ನತ ಸಾಧನೆಯನ್ನು ಮಾಡಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ,ಬೆಂಗಳೂರು ಗ್ರಾಮಾಂತರ ಜಿಲ್ಲೆ 

Saturday 28 July 2018

ನಮಗಾಗಿ ...ನಮ್ಮ ಮುಂದಿನ ಜನಾಂಗಕ್ಕಾಗಿ ಬೊಗಸೆ ನೀರು ಉಳಿಸೋಣ‌.ಬನ್ನಿ...ಡಾ. ಲಕ್ಷ್ಮೀ ಜಿ ಪ್ರಸಾದ


ನಮಗಾಗಿ ...ನಮ್ಮ ಮುಂದಿನ ಜನಾಂಗಕ್ಕಾಗಿ ಬೊಗಸೆ  ನೀರು ಉಳಿಸೋಣ‌.ಬನ್ನಿ...ಡಾ. ಲಕ್ಷ್ಮೀ ಜಿ ಪ್ರಸಾದ

.ಇದಕ್ಕಾಗಿ ಹೆಚ್ಚುವರಿ  ಖರ್ಚು ಆಗುವುದಿಲ್ಲ
ಬೋರ್ ವೆಲ್ ಗೆ ಮಳೆ ನೀರು ಇಂಗಿಸುವ ವ್ಯವಸ್ಥೆ ...

ಇಷ್ಟರ ತನಕ ಬೋರ್ ವೆಲ್ ಸುತ್ತ ಹತ್ತಡಿ ಮಣ್ಣು ತೆಗೆದು ಕಲ್ಲು ಜಲ್ಲಿ ಕಲ್ಲು, ಮರಳು ಇದ್ದಿಲು ತುಂಬಿ ಮಳೆ ನೀರನ್ನು ಹರಿಸಿ ನೀರು ಇಂಗಿಸುತ್ತಾ ಇದ್ದೆವು,ಈಗ ಮನೆ ವಿಸ್ತರಿಸುವುದರಿಂದ ಕಟ್ಟಡದ ಅಡಿ ಭಾಗದಲ್ಲಿ ಬೋರ್ ವೆಲ್ ಬರುವ ಕಾರಣ ಹಿಂದಿನಂತೆ ನೇರವಾಗಿ ನೀರನ್ನು ಇಂಗಿಸಲು ಆಗುವುದಿಲ್ಲ. ಅದಕ್ಕಾಗಿ ಮಳೆ ನೀರಿನ ಸಂಗ್ರಹಕ್ಕಾಗಿ ಏಳುಸಾವಿರ ಲೀಟರ್ ನ ಸಂಪನ್ನು ನಿರ್ಮಿಸಿ ಅದರ ಕೆಳಭಾಗದಲ್ಲಿ ಒಂದು ಇಂಚಿನ ಪೈಪ್ ಇರಿಸಿದ್ದೇವೆ‌.  ಇನ್ನೊಂದು ತುದಿಯನ್ನು ಬೋರ್ ವೆಲ್ ಕೇಸಿಂಗ್ ಪೈಪಿನಲ್ಲಿ ಒಂದಿಂಚಿನ ರಂಧ್ರ ಮಾಡಿ ಅದಕ್ಕೆ ಜೋಡಿಸಿದ್ದೇವೆ.ಮಳೆ ನೀರು ತೊಟ್ಟಿ/ ಸಂಪಿನಲ್ಲಿ ಸಂಗ್ರಹವಾಗಿ ಒಂದಿಂಚಿನ ಪೈಪಿನ ಮೂಲಕ ನಿದಾನವಾಗಿ ಬೋರ್ ವೆಲ್ ಒಳಗೆ ಹೋಗುತ್ತದೆ.ಮಳೆ ನೀರನ್ನು ಸಂಪಿಗೆ ಬಿಡುವ ಮೊದಲೇ ಪೈಪಿಗೆ ಫಿಲ್ಟರ್ ಜೋಡಿಸಿ ಶುದ್ದೀಕರಿಸಿ ಬಿಡುವ ವ್ಯವಸ್ಥೆ ಮಾಡಬೇಕಾಗುತ್ತದೆ.1000-1200 ಅಡಿಯ ಚಾವಣಿಯಲ್ಲಿ ಬೀಳುವ ಮಳೆ ನೀರನ್ನು ಶುದ್ದೀಕರಿಸಲು  ಮೂರು ಇಂಚಿನ ಫಿಲ್ಟರ್ ಸಾಕಾಗುತ್ತದೆ ,ಇದರ ಬೆಲೆ ಸುಮಾರು ನಾಲ್ಕು ನಾಲ್ಕೂವರೆ ಸಾವಿರ ₹ .ಸಂಪು ಹೇಗಾದರೂ ಮಾಡಬೇಕಾಗುತ್ತದೆ. ಒಂದೊಮ್ಮೆ ಕಾವೇರಿ ನೀರನ್ನು ಕೂಡ ಬಳಸುವುದಾದರೆ ಹನ್ನೆರಡು ಹದಿನೈದು ಸಾವಿರ ಲೀಟರ್ ನ ಸಂಪನ್ನು ಮಾಡಿ ನಡುವೆ ಒಂದು ಗೋಡೆ ಹಾಕಿ ಎರಡು ಭಾಗ ಮಾಡಿ ಒಂದರಲ್ಲಿ ಕಾವೇರಿ ನೀರು,ಇನ್ನೊಂದರಲ್ಲಿ ಮಳೆ ನೀರು ಸಂಗ್ರಹ ಮಾಡಬಹುದು, ಹೆಚ್ಚಾದ ಮಳೆ ನೀರನ್ನು ಮೇಲೆ ಹೇಳಿದ ರೀತಿಯಲ್ಲಿ ಬೋರ್ ವೆಲ್ ಗೆ ತುಂಬಬಹುದು.

ಆರಂಭದಿಂದಲೂ ಬೋರ್ ವೆಲ್ ಗೆ ನೀರು ಇಂಗಿಸಿರುವ ಕಾರಣವೋ ಏನೋ ಸುತ್ತ‌ಮುತ್ತ ಎಂಟುನೂರು ಅಡಿ ತೋಡಿದರೂ ನೀರು ಸಿಗದೇ ಇದ್ದರೂ ನಮ್ಮ ಬೋರ್ ವೆಲ್ ನಲ್ಲಿ ನೂರಿಪ್ಪತ್ತು ಅಡಿಯಲ್ಲಿ ನೀರಿದೆ
ನಮ್ಮ ಮನೆ ಬೋರ್ ವೆಲ್ ಗೆ ಮಳೆ ನೀರು ಇಂಗಿಸುವಲ್ಲಿ ಮಾಹಿತಿ ನೀಡಿ ಸಹಕರಿಸಿದ Subrahmanya Shagrithaya Shivaprasad Shagrithaya     Nataraj C Nagadala, Shivaprasad Bhat   Lakkanna TR sridevi vishwanath ಶ್ರೀನಿವಾಸ್ ,ಡೇವಿಡ್ ಕೊಕ್ಕಡ,ರಾಮ್ ಪ್ರತೀಕ್ ಪುತ್ತೂರು, ಶ್ರೀಪಡ್ರೆ ಯವರಿಗೆ  ಹಾಗೂ ಇದನ್ನು ಸಮರ್ಪಕವಾಗಿ ಅಳವಡಿಸಿಕೊಟ್ಟ ನಮ್ಮ ಮನೆ ನಿರ್ಮಾಣದ  ಕಾಂಟ್ರಾಕ್ಟರ್ ಕಮ್ ಮೇಸ್ತ್ರಿ Likitha  constructions ನ  ವೇಣುಗೋಪಾಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
ಹೆಚ್ಚಿನ ಮಾಹಿತಿಗಾಗಿ http://shikshanaloka.blogspot.com/2016/05/c.html?m=1
ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ (c)ಡಾ.ಲಕ್ಷ್ಮೀ ಜಿ ಪ್ರಸಾದ

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ
8 ವರ್ಷಗಳ ಹಿಂದೆ ನಾವು ನಮ್ಮ ಬೆಂಗಳೂರಿನ ಮನೆಯ ಬೋರ್ ವೆಲ್ ಗೆ ಛಾವಣಿ ನೀರು ಇಂಗಿಸುವ ವ್ಯವಸ್ಥೆ ಮಾಡಿದೆವು ...
2003 ರಲ್ಲಿ ನಾವು ಈ ಬೋರ್ ವೆಲ್ ಕೊರೆದಾಗ ಸುಮಾರು 60 -70 ಅಡಿಗಳಲ್ಲಿಯೇ ನೀರು ಸಿಕ್ಕಿತು ,ಎಂತಕ್ಕೂ ಇರಲಿ ಅಂತ 120 ಅಡಿ ಆಳ ತೋಡಿದೆವು ಅದಕ್ಕಿಂತ ಹೆಚ್ಚ್ಚು ತೋಡಲು ಸಾಧ್ಯವಾಗಲಿಲ್ಲ .ಆಗ ನಾವಿನ್ನೂ ಬೆಂಗಳೂರಿಗೆ ವಲಸೆ ಬಂದಿರಲಿಲ್ಲ ..ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ನಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತಿದ್ದೆ ... ನಾನು ಶ್ರೀ ಪಡ್ರೆ ಹಾಗೂ ಇತರರ ಸಂಗ್ರಹಿಸುವ ನೀರು ಇಂಗಿಸುವ ನಾನಾ ವಿಧಾನಗಳ ಬಗೆಗಿನ ಲೇಖನಗಳನ್ನು ಓದುತ್ತ ಇದ್ದೆ ಹಾಗೆ ಬೆಂಗಳೂರು ಸುತ್ತ ಮುತ್ತ ನೀರಿನ ಸಮಸ್ಯೆಯನ್ನು ಓದುತ್ತಾ ಇದ್ದೆ ,ಅಗಲೆ ಅಂದುಕೊಂಡಿದ್ದೆ ನಮ್ಮ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಮಾಡಬೇಕು ಎಂದು ಇಲ್ಲವಾದಲ್ಲಿ ನೀರು ಆರಿ ಹೋಗಬಹುದು ಎಂದು ಎನಿಸಿತ್ತು ನನಗೆ
2008 ರಲ್ಲಿ ನಾವು ನಮ್ಮ ಈ ಪುಟ್ಟ ಮನೆಗೆ ಒಕ್ಕಲಾದೆವು ,ಆಗ ಮೊದಲು ನಾವು ಮಾಡಿದ ಕೆಲಸ ನಮ್ಮ ಕೊಳವೆ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಯನ್ನು ಮಾಡಿದ್ದು
ಹೇಗೆ ಇನ್ಗಿಸುವುದು ಬೆಂಗಳೂರಿನ ಕೊಳಚೆ ನೀರು ಕೂಡ ಇಂಗಿದರೆ ಎಂಬ ಭಯ ಕಾಡಿತ್ತು
ಈ ಬಗ್ಗೆ ಶ್ರೀ ಪದ್ರೆಯವರನ್ನು ಸಂಪರ್ಕಿಸಿ ನಮ್ಮ ಬಾವಿಗೆ ನೀರು ಇಂಗಿಸುವ ಬಗ್ಗೆ ಸಲಹೆ ಕೇಳಿದೆ ಅವರು ಗ್ರೀನ್ ಅರ್ಥ್ ಫೌಂಡೇಶನ್ ರವಿ ಅವರ ಸಲಹೆ ಪಡೆಯಲು ತಿಳಿಸಿದರು 

ಫೋನ್ ಮೂಲಕ ಅವರನ್ನು ಈ ಬಗ್ಗೆ ಸಲಹೆ ಕೇಳಿದೆ.ಅವರ ಸಲಹೆಯಂತೆ ಬೋರೆವೇಲ್ ಸುತ್ತ ಆರಡಿ ಅಗಲ ಹತ್ತು ಅಡಿ ಆಳ ಗುಂಡಿ ತೋಡಿಸಿದೆವು,ನಂತರ ಆಳದಲ್ಲಿ ಒಂದು ಅಡಿ ಮರಳು ತುಂಬಿದೆವು ನಂತರ ಎರಡು ಅಡಿ ಜಲ್ಲಿ ಕಲ್ಲು ತುಂಬಿದೆವು ನಂತರ ಎರಡು ಅಡಿ ದೊಡ್ಡ ಬೋರ್ಡೊ ಕಲ್ಲುಗಳನ್ನು ತುಂಬಿಸಿದೆವು ನಂತರ ಒಂದು ಅಡಿ ಮರಳು ತುಂಬಿದೆವು ನಂತರ ಮತ್ತೆ ಒಂದಡಿ ಜಲ್ಲಿ ಕಲ್ಲು ಅದರ ಮೇಲೆ ಒಂದಷ್ಟು ಇದ್ದಿಲು ತುಂಬಿ ಮೇಲ್ಭಾಗ ಮತ್ತೆ ಒಂದಷ್ಟು ಮರಳು ತುಂಬಿ ಒಂದಡಿಯಷ್ಟು ಆಳ ನೀರು ತುಂಬಲು ಬಿಟ್ಟು ಬಿಟ್ಟೆವು .ಅಲ್ಲಿಗೆ ತಾರಸಿ ನೀರು ಬರುವ ಹಾಗೆ ಮಾಡಿದೆವು 
ಮತ್ತು ಛಾವಣಿ ನೀರು ಜೊತೆಗೆಅಂಗಳದ ನೀರು ಕೂಡ ಇಂಗಲಿ ಎಂಬ ಉದ್ದೇಶದಿಂದ ಅಂಗಳವನ್ನು ಸಮತಟ್ಟು ಮಾಡದೆ ಎಲ್ಲ ಕಡೆಯಿಂದ ಬಾವಿಯೆಡೆಗೆ ನೀರು ಬರುವಂತೆ ಚಾರೆಯಾಗಿ ಮಾಡಿ ಹಾಗೆ ಬಿಟ್ಟು ಬಿಟ್ಟೆವು ,ಜೊತೆಗೆ ಒಂದಷ್ಟು ಪಾರಿಜಾತ ಮೀಸೆ ಹೂ /ರತ್ನ ಗ್ರಂಥಿ ಸೇರಿದಂತೆ ಕೆಲವು ಸಸಿಗಳನ್ನು ಹಾಕಿದೆವು .ಅದರಲ್ಲಿ ಒಂದು ಪೇರಳೆ ಹಣ್ಣಿನ ಗಿಡವೂ ಇದೆ ಈಗ ಇವೆಲ್ಲ ಎತ್ತರಕ್ಕೆ ಬೆಳೆದು ನಿಂತು ಮನೆಗೆ ನೆರಳನ್ನೂ ತಂಪನ್ನೂ ತಂದು ಕೊಟ್ಟಿವೆ ಹಕ್ಕಿಗಳು ಚಿಟ್ಟೆಗಳು ಸ್ವಚ್ಚಂದವಾಗಿ ಬಂದು ಅಲ್ಲಿನ ಮೀಸೆ ಹೂವಿನ ಕಾಯಿಗಳನ್ನು ಒಡೆದು ತಿನ್ನುತ್ತವೆ ಪೇರಳೆ ಹಣ್ಣನ್ನೂ ಬಿಡುವುದಿಲ್ಲ ಅವು ತಿಂದು ಬಿಟ್ಟ ಕೆಲವು ಹಣ್ಣುಗಳು ನಮಗೂ ದಕ್ಕುವುದಿದೆ .ಜೊತೆಗೆ ಒಂದಷ್ಟು ಕಸ ಕಡ್ಡಿ ಬಿದ್ದು ಉಪದ್ರ ಕೂಡ ಆಗುತ್ತದೆ ,ಹಳ್ಳಿಯಲ್ಲಿ ಬೆಳೆದ ನನಗೆ ತೀರ ಸಿನೆಮಾ ಸೆಟ್ ಮಾದರಿಯ ಮನೆ ಬೇಕೆಂಬ ಭ್ರಮೆ ನನಗಿಲ್ಲ ಹಕ್ಕಿಗಳ ಕಲರವದೊಂದಿಗೆ ಬದುಕುವುದೇ ಅಪ್ಯಾಯಮಾನವಾಗುತ್ತದೆ ,ಆದರೂ ಬಂದ ಹೋದ ಜನರೆಲ್ಲಾ ಇದನ್ನು ಆಕ್ಷೇಪಿಸಿ ಒಂದು ಐನೂರು ರುಪಾಯಿ ಕೊಟ್ಟು ಇದನ್ನೆಲ್ಲಾ ಕಡಿಸಿ ಸ್ವಚ್ಚ ಮಾಡಬಾರದೇ?ಇದರಲ್ಲಿ ಹಾವು ಇರಬಹುದು ಎಂದು ಸಲಹೆ ಕೊಟ್ಟದ್ದೂ ಉಂಟು ..ಆಗೆಲ್ಲ ನಾನು ಹೇಳುತ್ತೇನೆ" ಹಾವು ಇದ್ದರೆ ಇರಲಿ ಬಿಡಿ ಈ ಪೇಟೆಯ ಕಾಂನ್ಕ್ರೀಟ್ ಕಾಡಿನಲ್ಲಿ ಅವಕ್ಕೆ ಬದುಕಲು ಜಾಗವಿಲ್ಲ.ಎಂದು" ಬಾಯಿಯಲ್ಲಿ ಹಾಗೆ ಹೇಳಿದರೂ ಮನದೊಳಗೆ ತುಸು ಆತಂಕವಾಗುವುದುಂಟು ,ನಮ್ಮ ಮನೆ ಸುತ್ತ ಮುತ್ತಲಿನ ಮಂದಿ ನಿಮ್ಮ ತೋಟದಲ್ಲಿ (ತೋಟ ಎನ್ನುವಷ್ಟು ಜಾಗವಿಲ್ಲ ಕೇವಲ 500 ಅಡಿ ಜಾಗವಿದೆ ಅಷ್ಟೇ )ಹಾವುಗಳು ಹರಿದಾಡುತ್ತಿವೆ ನಾವು ಕಣ್ಣಾರೆ ನೋಡಿದ್ದೇವೆ ಆ ಗಿಡಮರಗಳನ್ನು ಕಡಿಸಿ ಬಿಡಿ ಎಂದು ಆಗಾಗ ಹೇಳುತ್ತಿರುತಾರೆ .ಆದರೆ ನಾವು ಮನೆ ಮಂದಿ ಒಮ್ಮೆ ಕೂಡ ಇಲ್ಲಿ ಹಾವು ಹರಿದಾಡಿದ್ದನ್ನು ನೋಡಿಲ್ಲ ಆಗಾಗ ಹುಲ್ಲು ಕೀಳಿಸಿ ಸ್ವಚ್ಛ ಮಾಡುವಾಗ ಎಲ್ಲೂ ಹಾವಿನ ಮೊಟ್ಟೆಗಳು ನಮಗೆ ಕಾಣಸಿಕ್ಕಿಲ್ಲ ಆಗ ನಾನು ನಮ್ಮ ಹಳ್ಳಿಯ ತೋಟವನ್ನು ಕಾಲು ದಾರಿಯನ್ನು ನೆನಪಿಸಿಕೊಳ್ಳುತ್ತೇನೆ "ಅಲ್ಲೆಲ್ಲ ಹಸಿರು ಕಸಕಡ್ಡಿ ಇರುತ್ತದೆ ಅಲ್ಲಿ ಹಾವು ಇರುವುದಿಲ್ಲವೇ ?ಎಂದು"
ಇಂದಿನ ಆಕ್ಸಿಡೆಂಟ್ ಹೃದಯಾಘಾತ ಸಾವುಗಳನ್ನು ಗಮನಿಸಿದರೆ ಹಾವು ಕಡಿದು ಸಾಯುವ ಮಂದಿ ತೀರ ಕಡಿಮೆ ಅಲ್ಲವೇ ಎಂದು!
ಅದು ಏನೇ ಇರಲಿ ನಮ್ಮ ಮನೆಯ ಆಸುಪಾಸಿನಲ್ಲಿ ಉಲ್ಲಾಳು ಉಪನಗರ, ಜ್ಞಾನ ಭಾರತಿ ,ನಾಗರಭಾವಿ ಸೇರಿದಂತೆ ಸುತ್ತ ಮುತ್ತ ಅಂತರ್ಜಲ ಮಟ್ಟ ತೀರಾ ಕುಸಿದಿದೆ ಒಂದು ಸಾವಿರ ಅಡಿ ತೋಡಿದರೂ ನೀರು ಸಿಗುತ್ತಿಲ ಸಿಗುವ ನೀರಿನಲ್ಲಿ ಕೂಡ ಫ್ಲೋರೈಡ್ ಮೊದಲಾದ ರಾಸಾಯನಿಕಗಳ ಅಂಶ ತುಂಬಾ ಜಾಸ್ತಿ ಇದೆ
ಆದರೆ ನಮ್ಮ ಬಾವಿಯಲ್ಲಿ ಇಂದಿಗೂ 120 ಅಡಿ ಆಳದಲ್ಲಿಯೇ ನೀರಿದೆ ,ಇಲ್ಲಿ ಅಕ್ಕ ಪಕ್ಕ ಅನೇಕರು ಬೋರ್ ವೆಲ್ ಕೊರೆದಿದ್ದಾರೆ 800 -1000 ಅಡಿ ತೋಡಿದ್ದಾರೆ ಕೆಲವರಿಗೆ ಅಷ್ಟಾದರೂ ನೀರು ಸಿಕ್ಕಿಲ್ಲ ಆಗೆಲ್ಲ ನನಗೆ ನಮ್ಮ ಬಾವಿಯ ನೀರು ಬೇರೆ ಬಾವಿಗೆ ಹೋಗಬಹುದೇನೋ ಎಂಬ ಆತಂಕ ಕಾಡುತ್ತದೆ ಆದರೆ ಇಂಗಿಸಿದ ನೀರು ಸಾಮಾನ್ಯವಾಗಿ ಬೇರೆ ಬಾವಿಗೆ ಹೋಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ನಮ್ಮ ಮನೆ ಮುಖ್ಯ ರಸ್ತೆಯ ಬದಿಯಲ್ಲಿದೆ .ಕೆಲ ವರ್ಷಗಳಲ್ಲಿ ಇಲ್ಲಿ ವಾಣಿಜ್ಯ ಕಟ್ಟಡ ಹಾಕಿ ನಾವು ಬೇರೆಡೆ ಮನೆ ಮಾಡುವುದು ಅನಿವಾರ್ಯವಾಗಬಹುದು ಏಕೆಂದರೆ ಈಗಾಗಲೇ ರಸ್ತೆಯಲ್ಲಿ ಹೋಗುವ ವಾಹನಗಳ ಸದ್ದು ಅಕ್ಕ ಪಕ್ಕದ ಸಾ ಮಿಲ್ ,ಮೆಕ್ಯಾನಿಕ್ ಶಾಪ್ ಗಳಿಂದ ಹೊರಡುವ ಧೂಳು ಸದ್ದು ನಮ್ಮನ್ನು ಕಂಗೆಡಿಸುತ್ತವೆ.ಸುತ್ತ ಮುತ್ತ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ
ಮುಂದೊಂದು ದಿನ ನಾವು ಇಲ್ಲಿ ವಾಣಿಜ್ಯ ಕಟ್ಟಡ ಹಾಕಬೇಕಾಗಿ ಬಂದರೆ ಬೋರ್ ವೆಲ್ ಗೆ ನೀರು ಇಂಗಿಸಲು ಸಾಧ್ಯವೇ ?ಗೊತ್ತಿಲ್ಲ ಈ ಬಗ್ಗೆ ಆಗ ತಜ್ಞರ ಸಲಹೆ ಕೇಳಿದರಾಯಿತು ಎಂದು ಕೊಂಡಿದ್ದೇನೆ ಅಷ್ಟರ ತನಕ ಹೀಗೆ ಬಾವಿಗೆ ನೀರು ತುಂಬುತ್ತಾ ಇರಲಿ ಎಂದು..
ಒಂದು ಮಾತು ಮಾತ್ರ ಸತ್ಯವಾದುದು
ಮಂತ್ರಕ್ಕೆ ಮಾವಿನಕಾಯಿ ಉದಿರುವುದಿಲ್ಲ ಎಂಬುದು .ಮಾವಿನ ಕಾಯಿ ಬೀಳಬೇಕಾದರೆ ಕಲ್ಲು ಎಸೆಯಬೇಕು, ಒಂದು ಎಸೆತಕ್ಕೆ ಬೀಳುತ್ತದೆ ಎಂದೇನಿಲ್ಲ ಬೀಳುವ ತನಕ ಎಸೆಯುತ್ತಾ ಇರಬೇಕು ,ಅಂತರ್ಜಲ ಕುಸಿತ ನೀರಿನ ಬರದ ಬಗ್ಗೆ ಆತಂಕದ ಕಾಳಜಿಯ ಮಾತುಗಳನ್ನು ಆಡಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು .ಸಾವಿರ ಮಾತಿಗಿಂತ ಒಂದು ಕೃತಿ ಮೇಲೆ ಎಂಬುದು ನನ್ನ ಸ್ಪಷ್ಟ ನಿಲುವು ಇದಕ್ಕೆ ನೀವೇನಂತೀರಿ ?
ಅಂದ ಹಾಗೆ ನಮ್ಮಬಾವಿಗೆ ಚಾವಣಿ ನೀರು ಇಂಗಿಸಲು ನಮಗೆ ಆದ ಖರ್ಚು ನಾಲ್ಕು ಐದು ಸಾವಿರ ರೂಪಾಯಿಗಳು ಅಷ್ಟೇ ,ಇದನ್ನು ನಮಗೆ ನಾವು ಹೇಳಿದಂತೆ ಮಣ್ಣು ಅಗೆದು ಮರಳು ಕಲ್ಲು ತುಂಬಿ ನೀರು ಇಂಗಿಸುವ ಕೆಲಸವನ್ನುಒಂದು ಆದಿತ್ಯವಾರ ಬಂದು ,ಕೇವಲ ಕೂಲಿಗಾಗಿ ಮಾಡದೆ ,ಅತ್ಯಂತ ಶ್ರದ್ಧೆಯಿಂದ , ಅತ್ಯುತ್ಸಾಹದಿಂದ ಮಾಡಿಕೊಟ್ಟು ನಾವು ಮೊದಲ ಬಾರಿಗೆ ನೀರು ಉಳಿಸುವ ಕೆಲಸವನ್ನು ಮಾಡಿದ್ದೇವೆ ಅಕ್ಕ ಎಂದು ಸಂಭ್ರಮಿಸಿದ ರವಿ ಮತ್ತು ಸುಜಾತ (ಹೆಸರು ಸರಿಯಾಗಿ ನೆನಪಿಲ್ಲ )ದಂಪತಿಗಳಿಗೆ ನಾವು ಆಭಾರಿಯಾಗಿದ್ದೇವೆ .

ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಿ 9480516684 ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು,ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಂಗಳೂರು.

Saturday 21 July 2018

ದೊಡ್ಡವರ ದಾರಿ 60 ಎಳೆಯರಿಗೆ ಸ್ಫೂರ್ತಿಯಾಗಿರುವ ಸ್ಪೂರ್ತಿ ಎಸ್ ಸಮರ್ಥ್© ಡಾ‌.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿಯಲ್ಲಿ ಸಾಗುವವರೆಲ್ಲ ವಯಸ್ಸಿನಲ್ಲಿ ದೊಡ್ಡವರಾಗಿರಬೇಕಾಗಿಲ್ಲ.ದೊಡ್ಡತನವನ್ನು ಮೆರೆಯುವವರೆಲ್ಲ ದೊಡ್ಡವರೇ .  ನೆಲಮಂಗಲ ಸರ್ಕಾರಿ ಪಿಯು ಕಾಲೇಜಿಗೆ ವರ್ಗಾವಣೆಯಾಗಿ ಬಂದು ಮೂರು ವರ್ಷಗಳು ಆಗುತ್ತಾ ಬಂತು.ನಮ್ಮ ವೇತನ ಇಲ್ಲಿನ UCO Bank ನಲ್ಲಿ ಆಗುತ್ತಿರುವ ಕಾರಣ ನೆಲಮಂಗಲಕ್ಕೆ  ಬಂದ ಒಂದೆರಡು ವಾರದ ಒಳಗೆ ಬ್ಯಾಂಕ್ ಗೆ ಹೋಗಿ ಎಸ್ ಬಿ ಅಕೌಂಟ್ ಮಾಡಿಕೊಂಡು ಬಂದಿದ್ದೆ.ಅದು ಬಿಟ್ಟರೆ ಬ್ಯಾಂಕ್ ಗೆ ಹೋಗಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಬಾರಿ!
ಈಗೆಲ್ಲಾ ಎಟಿಎಂ ಹಾಗೂ ಅಂತರ್ಜಾಲದ ಮೂಲಕ ಬ್ಯಾಂಕ್ ವ್ಯವಹಾರ ಮಾಡಲಾಗುವ ಕಾರಣ ಬ್ಯಾಂಕ್ ಗೆ ಹೋಗಬೇಕಾದ ಪ್ರಸಂಗ ಬಂದಿರಲಿಲ್ಲ.
ಇತ್ತೀಚೆಗೆ ಮನೆ ವಿಸ್ತರಿಸುವ ಸಲುವಾಗಿ ದುಡ್ಡು ಹೊಂದಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ನಮಗೆ ಯಾವೆಲ್ಲಾ ರೀತಿಯ ಸಾಲ ಸಿಗುತ್ತವೆ? ಅದಕ್ಕೆ ಬಡ್ಡಿ ದರ ಎಷ್ಟು  ಇತ್ಯಾದಿಗಳ ಬಗ್ಗೆ ತಿಳಿಯಲು ಯುಕೋ ಬ್ಯಾಂಕ್ ಗೆ ಹೋಗಿ ಅಲ್ಲಿನ ಮ್ಯಾನೇಜರ್ ಅನ್ನು ಕಂಡು ಮಾಹಿತಿ ಪಡೆದಿದ್ದೆ‌.ಎಲ್ಲ ಮಾಹಿತಿ ಪಡೆದು ಹಿಂತಿರುಗುವಷ್ಟರಲ್ಲಿ ಒಬ್ಬರು ಚಿನ್ನದ ಮೇಲೆ ಸಾಲ ಪಡೆಯಲು ಬಂದರು.ಆಗ ನಾನು ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿ ದರವೆಷ್ಟು ಎಂದು ವಿಚಾರಿಸಿದಾಗ ವಾರ್ಷಿಕ ಏಳು ಶೇಕಡಾ ಎಂದೂ,ಒಂದು ವರ್ಷದೊಳಗೆ ಕಟ್ಟದೆ ಇದ್ದರೆ 1.65 ಶೇಕಡ ಹೆಚ್ಚು ಬಡ್ಡಿ ದರವೆಂದು ತಿಳಿಯಿತು. ( ಕೃಷಿಗಾಗಿ ಚಿನ್ನದ ಮೇಲೆ ಸಾಲ ತೆಗೆದರೆ ಮೂರು ಶೇಕಡಾ ಸಬ್ಸಿಡಿ ಇರುತ್ತದೆ.)ನಮಗಿನ್ನೂ ಮನೆ ಕಟ್ಟುವ ಸಾಲ ಸಿಕ್ಕಿಲ್ಲ.ಆದರೂ ಮನೆ ಕಟ್ಟಲು ಶುರು ಮಾಡಿದ್ದು, ದುಡ್ಡಿನ ಹೊಂದಿಸುವ ಸಲುವಾಗಿ
ಎರಡು ದಿನಗಳ ಹಿಂದೆ ಸ್ವಲ್ಪ ಚಿನ್ನ ತೆಗೆದುಕೊಂಡು ಯುಕೋ  ಬ್ಯಾಂಕ್ ಗೆ ಹೋದೆ.ಬಹಳ ಸೌಜನ್ಯತೆಯಿಂದ ವರ್ತಿಸಿದ ಸಿಬ್ಬಂದಿ ನನ್ನ ಚಿನ್ನವನ್ನು ತೆಗೆದುಕೊಂಡು ತೂಗಿ  ತೀರಾ ಕಡಿಮೆ ಅವಧಿಯಲ್ಲಿ ಯಾವುದೇ ಕಿರಿ ಕಿರಿ ಮಾಡದೆ  ಸಾಲ ನೀಡಿದರು.ನಾನದನ್ನು ನನ್ನ ಖಾತೆಗೆ ಜಮೆ ಮಾಡಲು ತಿಳಿಸಿದೆ‌.ನಂತರ ನಾನು ಇಲ್ಲಿ ಚಿನ್ನವನ್ನು ಇಟ್ಟದ್ದಕ್ಕೆ ದಾಖಲೆ ಕೊಡಿ ಎಂದು ಕೇಳಿದೆ.ಆಗ ಗೋಲ್ಡ್ ಕಾರ್ಡ್ ನೀಡುತ್ತೇವೆ.ಒಂದೆರಡು ಗಂಟೆ ಕಾಯಬೇಕಾಗುತ್ತದೆ‌ ಅಥವಾ ನಾಳೆ ಬನ್ನಿ ,ನಾಳೆ ಕೊಡುತ್ತೇವೆ ಎಂದು ಹೇಳಿದರು.ತರಗತಿ ನಡುವೆ ಬಿಡುವು ಇದ್ದ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ನಾನು ಬ್ಯಾಂಕ್ ಗೆ ಹೋಗಿದ್ದು,ನನಗೆ ಒಂದೆರಡು ಗಂಟೆ ಕಾಯಲು ಸಾಧ್ಯವಿರಲಿಲ್ಲ. ಹಾಗಾಗಿ ಒಂದಿನಿತು ಅಳುಕಿನಿಂದಲೇ ಹಿಂತಿರುಗಿದೆ.
ಮರುದಿನ ಬೆಳಗ್ಗೆ ಮತ್ತೆ ಬ್ಯಾಂಕ್ ಗೆ ಹೋಗಿ ಚಿನ್ನವನ್ನು ಇಟ್ಟಿರುವುದಕ್ಕೆ ದಾಖಲೆ ಕೇಳಿದೆ‌.ಆಗ ಅಲ್ಲಿನ ಹಿರಿಯ ಸಿಬ್ಬಂದಿ ಒಂದು ಕಾರ್ಡ್ ನೀಡಿದರು.ಅದರಲ್ಲಿ ನನ್ನ ಅಕೌಂಟ್ ನಂಬರ್ ‌ಮತ್ತು ಹೆಸರು ಇತ್ತು.ಸಾಲದ ಪ್ರಮಾಣ ನಮೂದಿಸಿತ್ತು.ಅದರ ಕೆಳಗೆ ಯಾವುದೇ ಸಹಿ, ಮೊಹರು ಇರಲಿಲ್ಲ. ಆಗ ನಾನು ಸಹಿ,ಮೊಹರು ಇರುವ ಸರಿಯಾದ ದಾಖಲೆ ಬೇಕೆಂದು ಕೇಳಿದೆ‌.ಅವರು ಯಾವುದೋ ಪುಸ್ತಕ ತೋರಿಸಿ ಅದರಲ್ಲಿ ನನ್ನ ಅಕೌಂಟ್ ನಂಬರ್ ಹೆಸರು ಮತ್ತು ಸಾಲದ ಪ್ರಮಾಣ ಬರೆದಿರುವುದನ್ನು ತೋರಿಸಿದರು‌.ಮತ್ತು ಹದಿನೈದು ಇಪ್ಪತ್ತು ಲಕ್ಷದಷ್ಟು ಸಾಲವನ್ನು ಚಿನ್ನ ಇಟ್ಟು ಬೇರೆಯವರು ಪಡೆದಿರುವುದನ್ನು ತೋರಿಸಿದರು.ಇದು ನಿಮ್ಮಲ್ಲಿ ಇರುವ ದಾಖಲೆ,ನನಗೆ ನಿಮ್ಮಲ್ಲಿ ಚಿನ್ನ ಇಟ್ಟಿರುವುದಕ್ಕೆ ದಾಖಲೆ ಬೇಕು ಎಂದು ಕೇಳಿದೆ.ಆಗ ಅವರು ಮೊದಲು ನೀಡಿದ ಕಾರ್ಡ್ ಗೆ ಮೊಹರು ಹಾಕಿ ನೀಡಿದರು ‌.ಈ ಕಾರ್ಡಿನ ಹಿಂಭಾಗದಲ್ಲಿ ನಾನು ಇಟ್ಟ ಚಿನ್ನದ ಭಾರವನ್ನು ಗ್ರಾಮ್ ಗಳಲ್ಲಿ ಬರೆದು gross weight ಮತ್ತು net weight ಗಳನ್ನು ಬರೆದಿದ್ದರು.ಇದಕ್ಕೆ ಸಹಿ ಮಿಹರು ಯಾವುದೂ ಇರಲಿಲ್ಲ ‌.ಹಾಗಾಗಿ ಅದಾಗದು,ನನಗೆ ಸರಿಯಾದ ದಾಖಲೆ ಬೇಕೆಂದು ಕೇಳಿದೆ.ಆಗ ಅವರು ರಾಷ್ಟ್ರೀಕೃತ ಬ್ಯಾಂಕ್ ಮೇಡಂ, ನಂಬಿಕೆ ಇದ್ದರೆ ಸಾಲ ತೆಗೆದುಕೊಳ್ಳಿ ಇಲ್ಲವಾದರೆ ಬೇರೆಡೆ ಚಿನ್ನ ಇಟ್ಟು ಸಾಲ ತೆಗೆದುಕೊಳ್ಳಿ ಎಂದು ಹೇಳಿದರು ‌.ಅವರಿಗೆ ಕನ್ನಡ ಬರುತ್ತಿರಲಿಲ್ಲ. ಹಾಗಾಗಿ ನಾನೇನು ಕೇಳುತ್ತಿರುವೆ,ನನ್ನ ಆಶಯವೇನು ಎಂದು ಅರ್ಥವಾಗಿಲ್ಲ ಎಂದು ತಿಳಿಯಿತು ‌.
ಹಾಗಾಗಿ ಅವರಲ್ಲಿ ಚರ್ಚಿಸದೆ ನೇರವಾಗಿ ಬ್ಯಾಂಕ್ ಮ್ಯಾನೇಜರ್ ಸ್ಫೂರ್ತಿ ಯವರನ್ನು ಭೇಟಿ ಮಾಡಿದೆ.ತುಂಬಾ ಚಿಕ್ಕ ವಯಸಿನ ಮಹಿಳಾ ಮ್ಯಾನೇಜರ್ ಹೇಗಿರುತ್ತಾರೋ ? ನಾನು ಹೇಳುವುದನ್ನು ಕೇಳಿಸಿಕೊಂಡು ನಾನು ಇಟ್ಟ ಚಿನ್ನಕ್ಕೆ ಸರಿಯಾದ ದಾಖಲೆ ನೀಡುತ್ತಾರೋ ಇಲ್ಲವೋ ? ತಮ್ಮ  ಬ್ಯಾಂಕ್ ನ ಹಿರಿಯ  ಸಿಬ್ಬಂದಿಯನ್ನು ಸಮರ್ಥಿಸಿಕೊಳ್ಳುವರೋ ಏನೋ ಎಂದು ತುಸು ಆತಂಕ ಇತ್ತು ಕೂಡ. ಆದರೆ ಚಿಕ್ಕ ವಯಸ್ಸೇ ಆಗಿದ್ದರೂ ಕೂಡ ಬಹಳ ಸಮರ್ಥ ಬ್ಯಾಂಕ್ ಮ್ಯಾನೇಜರ್ ಅವರಾಗಿದ್ದರು.ನಾನು ಚಿನ್ನ ಇಟ್ಟ ಬಗ್ಗೆ ದಾಖಲೆ ಬೇಕೆಂದು ಹೇಳಿದಾಗ ಈ ಬಗ್ಗೆ ಒಂದು ದಾಖಲೆ ಸಹಿ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಮ್ಯಾನೇಜರ್ ಕ್ಯಾಬಿನ್ ನಲ್ಲಿ ಒಂದೆರಡು ನಿಮಿಷ ಕುಳಿತುಕೊಳ್ಳಲು ಹೇಳಿ ,ನನಗೆ ಸಾಲ ನೀಡಿದ ಸಿಬ್ಬಂದಿ ಬಳಿಗೆ ಹೋಗಿ‌ ಮಾತಾಡಿದರು.ಕೆಲವೇ ನಿಮಿಷಗಳಲ್ಲಿ ನಾನು ಇಟ್ಟ ಚಿನ್ನಕ್ಕೆ ಸೂಕ್ತ ದಾಖಲೆ ನೀಡಿದರು.ಹಿರಿಯ ಸಿಬ್ಬಂದಿ ಪರ ನಿಲ್ಲದೆ ಗ್ರಾಹಕರಿಗೆ ನೀಡಬೇಕಾದ ದಾಖಲೆಯನ್ನು ಕ್ಷಣಮಾತ್ರದಲ್ಲಿ ಒದಗಿಸಿದ  ಚಿಕ್ಕ ವಯಸ್ಸಿನಲ್ಲೇ ಮ್ಯಾನೇಜರ್ ಆಗಿರುವ ಸ್ಫೂರ್ತಿಯವರ ಬಗ್ಗೆ ಮೆಚ್ಚುಗೆ ಮೂಡಿ,ನನ್ನ ಪರಿಚಯ ಹೇಳಿ‌ ಅವರನ್ನು ಪರಿಚಯಿಸಿಕೊಂಡೆ.  ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಕಲೆ ಹಾಕಿದೆ
ಅವರು  ವಿಜ್ಞಾನ  ಪದವಿ ಮುಗಿಯುತ್ತಲೇ ಬ್ಯಾಂಕ್ ನಡೆಸುವ IBPS ಪರೀಕ್ಷೆಗೆ ಕಟ್ಟಿ ಉತ್ತೀರ್ಣರಾಗಿ ಯುಕೋ ಬ್ಯಾಂಕ್ ನ ಸಂದರ್ಶನ ಎದುರಿಸಿ ಪ್ರೊಬೆಷನರಿ ಆಫೀಸರ್ ಆಗಿ ಆಯ್ಕೆಯಾದರು. ಮೂರು ವರ್ಷಗಳು ಮುಗಿಯುತ್ತಲೇ ಮ್ಯಾನೇಜರ್ ಹುದ್ದೆಗೆ ಮತ್ತೆ ಪರೀಕ್ಷೆ ಬರೆದು ಅಯ್ಕೆಯಾದರು‌.ಆರು ವರ್ಷಗಳಲ್ಲಿ ಏಳು ಜಿಲ್ಲೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಪ್ರಸ್ತುತ ಸ್ವ ಸಾಮರ್ಥ್ಯದಿಂದ ನೆಲಮಂಗಲದ ಯುಕೊ ಬ್ಯಾಂಕ್ ಗೆ ಮ್ಯಾನೇಜರ್ ಆಗಿ ಒಂದು ವಾರದ ಹಿಂದೆಯಷ್ಟೇ ವರ್ಗಾವಣೆ ಹೊಂದಿ ಬಂದಿದ್ದಾರೆ‌. ಎಂಬಿಎ ಓದಿರುವ, ಒಬ್ಬ ಚಿಕ್ಕ ‌ಮಗಳು‌ ಮತ್ತು ಪತಿಯೊಂದಿಗಿನ ಸುಖೀ ಸಂಸಾರವನ್ನು ನಿಭಾಯಿಸುತ್ತಲೇ ಮೂವತ್ತೊಂದರ ಎಳೆಯ ವಯಸ್ಸಿನಲ್ಲಿಯೇ ಬ್ಯಾಂಕ್ ಮ್ಯಾನೇಜರ್ ಆಗಿರುವ ಸಾಮರ್ಥ್ಯವಂತೆ ಸ್ಪೂರ್ತಿ ಎಸ್ ಸಮರ್ಥ ನಿಜಕ್ಕೂ ಇಂದಿನ ಎಳೆಯರಿಗೆ ಸ್ಫೂರ್ತಿಯಾಗಿದ್ದಾರೆ.


ದೊಡ್ಡವರ ದಾರಿ 59 ವಾಸ್ತವತೆಯ ಅರಿವು ಮೂಡಿಸಿದ ಶ್ರೀಮತಿ ಶಾಂತಾ ಆಚಾರ್ © ಡಾ.ಲಕ್ಷ್ಮೀ ಜಿ ಪ್ರಸಾದ

ಸುಮಾರು ಹದಿನೈದು ಹದಿನೆಂಟು ವರ್ಷಗಳ ಹಿಂದೆ ನಾನು ಮಂಗಳೂರಿನ ಚಿನ್ಮಯ ಪ್ರೌಢ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ.ಇಲ್ಲಿ ಕಳೆದ ಮೂರು ನಾಲ್ಕು ವರ್ಷಗಳು ನನ್ನ ಪಾಲಿಗೆ ಅವಿಸ್ಮರಣೀಯವಾದುದು.ಇಲ್ಲಿ ಕೆಲಸ ಮಾಡುವ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಆರ್ಥಿಕವಾಗಿ ಅಷ್ಟೇನೂ ಬಲಾಢ್ಯರಲ್ಲದೇ ಇದ್ದರೂ ಎಲ್ಲರಲ್ಲೂ ಅಪಾರ ಜೀವನೋತ್ಸಾಹವಿತ್ತು.ಕರ್ತವ್ಯವೆಂಬಂತೆ ಕಾಟಾಚಾರಕ್ಕೆ ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲೂ ತರಬೇತಿ ನೀಡುತ್ತಿದ್ದೆವು. ನಮ್ಮಲ್ಲಿ ಶ್ರೀಮತಿ ಶಾಂತಾ ಆಚಾರ್ ಎಂಬ ಶಿಕ್ಷಕಿ ಇದ್ದರು.ಇವರ ಪತಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು ಇವರಿಗೆ ಕೆಲಸ ಮಾಡುವ ದುಡಿದು ಗಳಿಸುವ ಅನಿವಾರ್ಯತೆ ಏನೂ ಇರಲಿಲ್ಲ. ಇಬ್ಬರೂ ಮಕ್ಕಳು ಪ್ರತಿಭಾವಂತರಾಗಿದ್ದು ದೊಡ್ಡ ಮಗ ಅಶ್ವಿನ್ ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪರಾಗಿದ್ದರೆ ಇನ್ನೊಬ್ಬ ಮಗ ವಿದೇಶದಲ್ಲಿ ಇಂಜಿನಿಯರ್ ಆಗಿದ್ದರು.ಆದರೂ ಒಂದಿನಿತೂ ಅಹಂಕಾರ ಮೇಲರಿಮೆ ಶಾಂತಾ ಆಚಾರ್ ಅವರಿಗಿರಲಿಲ್ಲ.ನಮ್ಮಲ್ಲಿ ಒಂದಾಗಿ ಎಲ್ಲರಂತೆ ದುಡಿಯುತ್ತಿದ್ದರು.ಇವರು ಸಂಗೀತ ವಿದುಷಿಯಾಗಿದ್ದರು.ಇವರು ಇವರಿಗೆ ನಿಗಧಿತವಾಗಿರುವ ಪಾಠದ ಅವಧಿಯಲ್ಲಿ ಪಾಠ ಮಾಡಿ ಕೊನೆಯಲ್ಲಿ ಒಂದು ಗಂಟೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಂಗೀತ ಹೇಳಿಕೊಡುತ್ತಾ ಇದ್ದರು.ಪ್ರತಿಭಾ ಕಾರಂಜಿ ಸೇರಿದಂತೆ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಕ್ಕಳನ್ನು ತಯಾರು ಮಾಡಿ ಬಹುಮಾನ ಬರುವಂತೆ ಮಾಡಿ ತಾನು ದುಡಿಯುವ ಚಿನ್ಮಯ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದು ಕೊಟ್ಟಿದ್ದರು.ಇವರೊಂದಿಗೆ ಅರುಣಾ ಟೀಚರ್ ಮೋಹಿನಿ ಟೀಚರ್ ಉಷಾ ಟೀಚರ್ ಮೊದಲಾದವರು ಕೈಜೋಡಿಸಿ ಮಕ್ಕಳನ್ನು ಸಿದ್ಧಪಡಿಸುತ್ತಿದ್ದರು.ನಾನು ಈ ಶಾಲೆಗೆ ಶಿಕ್ಷಕಿಯಾಗಿ ಬಂದಾಗ ನನ್ನ ಅಭಿವ್ಯಕ್ತಗೂ ಇಲ್ಲಿ ಸೂಕ್ತ ವೇದಿಕೆ ದೊರೆಯಿತು. ಚಿಕ್ಕಂದಿನಲ್ಲಿಯೇ ನಾಟಕ ರಚನೆ ಅಭಿನಯದಲ್ಲಿ ಆಸಕ್ತಿ ಇದ್ದ ನಾನು ಇಲ್ಲಿನ ಮಕ್ಕಳಿಗಾಗಿ ಹಸಿರು ಕರಗಿದಾಗ,ನೀರಕ್ಕನ ಮನೆ ಕಣಿವೆ ಮೊದಲಾದ ನಾಟಕಗಳನ್ನು ರಚಿಸಿದೆ.ಇವುಗಳನ್ನು ವೇದಿಕೆಗೆ ತರುವಲ್ಲಿ ಅನುಭವೀ ಶಿಕ್ಷಕಿ ಅರುಣಾ ಸಹಾಯ ಮಾಡಿದ್ದರು ‌.ನನ್ನ ನಾಟಕಗಳಲ್ಲಿ ಅಲ್ಲಲ್ಲಿ ಹಾಡುಗಳು ಬರುತ್ತವೆ.ಇವಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಒಂದು ಸವಾಲಿನ ವಿಷಯವಾಗಿತ್ತು.ಈ ಸಂದರ್ಭದಲ್ಲಿ ನನಗೆ ಪೂರ್ಣ ಬೆಂಬಲವಿತ್ತವರು ಸಂಗೀತಜ್ಞರಾದ ಶಾಂತಾ ಆಚಾರ್.ನನ್ನ ನಾಟಕಗಳ ಹಾಡುಗಳನ್ನು ರಾಗಕ್ಕೆ ಅನುಗುಣವಾಗಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಅದಕ್ಕೆ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ನಾಟಕಕ್ಕೆ ಒಂದು ವಿಶಿಷ್ಠವಾದ ಮೆರುಗನ್ನು ತಂದು ಕೊಟ್ಟಿದ್ದರು.ಇಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದ ಶಕುಂತಲಾ ಸಾಂತ್ರಾಯ ಸ್ವತಃ ಓರ್ವ ಕವಯಿತ್ರಿ ಆಗಿದ್ದರು.ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವಕ್ಕೆ ಅವರೊಂದು ಹಾಡು ಬರೆದು ಕೊಡುತ್ತಿದ್ದರು.ಅದಕ್ಕೆ ಕೂಡ ಶಾಂತಾ ಅಚಾರ್ ಅವರು ರಾಗ ಸಂಯೋಜನೆ ಮಾಡಿ ಮಕ್ಕಳಲ್ಲಿ ಹಾಡಿಸುತ್ತಾ ಇದ್ದರು.ಇಂತಹ ಸಂದರ್ಭದಲ್ಲಿ ಒಂದು ದಿನ ನಾನು ಆತ್ಮೀಯರಾದ ಶಾಂತಾ ಮೇಡಂ ಅವರಲ್ಲಿ " ನನಗೆ ರಾಗ ಸಂಯೋಜನೆ ಮಾಡಿ ಹಾಡಲು ಬರುವುದಿಲ್ಲ .ಇದರಿಂದಾಗಿ ನನಗೆ ನನ್ನ  ನಾಟಕಗಳನ್ನು ರಂಗದಲ್ಲಿ ಪ್ರಸ್ತಿತಿ ಗೊಳಿಸಲು ಕಷ್ಟವಾಗುತ್ತದೆ. ಇದಕ್ಕಾಗಿ ಬೇರೆಯವರನ್ನು ಅವಲಂಭಿಸಬೇಕಾಗುತ್ತದೆ‌.ನನಗೂ ನಿಮ್ಮಂತೆ ರಾಗ ಸಂಯೋಜನೆ ಮಾಡಿ ಹಾಡಲು ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿದೆ.ಆಗ ಅವರು" ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಲಕ್ಷ್ಮೀ,ನೀವು ರ‍್ಯಾಂಕ್ ವಿಜೇತೆ ನಿಮಗೆ ಒಳ್ಳೆಯ ಬುದ್ದಿವಂತಿಕೆ ಇದೆ,ಬರವಣಿಗೆಯ ಶಕ್ತಿ ಇದೆ.ನಿಮ್ಮ ಅನೇಕ ಲೇಖನಗಳು ಪ್ರಕಟವಾಗಿವೆ. ಅನೇಕ ಕಥೆಗಳು ಕೂಡ ಪ್ರಕಟವಾಗಿವೆ‌.ಒಳ್ಳೆಯ ಮನೆ  ಗಂಡ ಮಗ ಸಂಸಾರ ಇದೆ.ಇರುವುದನ್ನು ಬಿಟ್ಟು ಇಲ್ಲದೇ ಇರುವ ಕಡೆ ಚಿಂತಿಸಬಾರದು.ಎಲ್ಲವನ್ನೂ ದೇವರು  ನಿಮಗೇ ಕೊಟ್ಟರೆ ಬೇರೆಯವರಿಗೇನೂ ಬೇಡವೇ ? ಇರುವುದರಲ್ಲಿ ತೃಪ್ತಿ ಪಟ್ಟು ನೆಮ್ಮದಿಯಿಂದ ಬದುಕಬೇಕು " ಎಂದು ತಿಳಿಸಿ ಹೇಳಿದರು.ತಕ್ಷಣವೇ ನಾನು ಬದಲಾದೆ.ಅವರು ವಾಸ್ತವದ ಅರಿವನ್ನು ಮೂಡಿಸಿದ್ದರು‌.ಎಲ್ಲದರಲ್ಲೂ ಎಲ್ಲರೂ ಪರಿಣತಿ ಸಾಧಿಸಲು ಸಾಧ್ಯವಿಲ್ಲ ‌ಎಲ್ಲದರಲ್ಲೂ ತಾನೇ ಮುಂದಿರಬೇಕೆಂದು ಬಗೆದರೆ ಯಾವುದೊಂದರಲ್ಲೂ ಪರಿಣತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ವಾಸ್ತವದ ಅರಿವು ಮೂಡಿತು ‌.ಮತ್ತು ತಮಗೇ ಎಲ್ಲವೂ ಬೇಕೆಂಬ ಸ್ವಾರ್ಥ ಒಳ್ಳೆಯದಲ್ಲ ಎಂಬುದು ಮನವರಿಕೆಯಾಗಿ ನನಗೆ ಒಲಿಯದ ವಿಚಾರಗಳ ಸುದ್ದಿ ಬಿಟ್ಟು ನನಗೊಲಿದ ವಿದ್ಯೆಯಲ್ಲಿ ಪರಿಣತಿ ಪಡೆಯಲು ಯತ್ನ ಮಾಡಿದೆ‌.ಎಲ್ಲವೂ ತನಗೇ ಬೇಕೆಂಬ ಸ್ವಾರ್ಥ ಇರಬಾರದು ಎಂಬ ಮಾತನ್ನು ಸದಾ ನೆನಪಿನಲ್ಲಿ ಇಟ್ಟು ಕೊಂಡಿರುವೆ‌.

Friday 15 June 2018

ಬದುಕ ಬಂಡಿಯಲಿ 22 ನಾನು‌ ಮತ್ತು ಮಗ ಬಚಾವಾಗಿದ್ದೆವು!

ನಾನು‌ ಮತ್ತು ಮಗ ಬಚಾವಾಗಿದ್ದೆವು!

ಇದನ್ನು ಓದುತ್ತಿದ್ದಂತೆ ಸುಮಾರು ವರ್ಷಗಳ ಹಿಮದಿನ ಘಟನೆ ನೆನಪಾಯಿತು!
.ಸುಮಾರು ಹದಿನೇಳು ವರ್ಷಗಳ ಹಿಂದಿನ‌ಕಥೆಯಿದು.ಮಗ ಅರವಿಂದ್ ಇನ್ನೂ ಎರಡು ಮೂರು ವರ್ಷದ ಮಗು.
ನಾವಾಗ ಮಂಗಳೂರಿನಲ್ಲಿ ಇದ್ದೆವು.ಒಂದು ದಿನ ತಾಯಿ ಮನೆಗೆ ಮಗನ ಜೊತೆ ಹೊರಟಿದ್ದೆ.ಹಾಗಾಗಿ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ಖಾಸಗಿ ವೇಗದೂತ ಬಸ್ಸನ್ನು ಹತ್ತಿದ್ದೆ.
ಬಸ್ ಪಂಪ್ ವೆಲ್ ತಲುಪಿದಾಗ ಬಸ್ ಹತ್ತಿದ ಒಬ್ಬ ವ್ಯಕ್ತಿ ಮತ್ತು ಡ್ರೈವರ್ ನಡುವೆ ಜಗಳ ಶುರುವಾಯಿತು‌.ಒಬ್ಬರಿಗೊಬ್ಬರು ಬೈದಾಡುತ್ತಿದ್ದರು‌.ಜಗಳವಾಡುತ್ತಲೇ ಡ್ರೈವರ್ ಬಸ್ಸನ್ನು ಯದ್ವಾ ತದ್ವಾ ಚಾಲನೆ ಮಾಡುತ್ತಿದ್ದರು‌.ಬಸ್ ನ ಕಂಡಕ್ಟರ್ ಅನ್ನು ಕರೆದು " ಅವರ ಜಗಳವನ್ನು ನಿಲ್ಲಿಸಿ,ಜಗಳ ನಿಂತ ನಂತರ ಬಸ್ಸು ಚಾಲನೆ ಮಾಡಲು ಹೇಳಿ" ಎಂದು ವಿನಂತಿಸಿದೆ‌.ಆತ ಒಮ್ಮೆ ಅವರಿಗೆ ತಿಳಿ ಹೇಳಲು ಯತ್ನ ಮಾಡಿದನಾದರೂ ಪ್ರಯೋಜನವಾಗದೆ ಕೊನೆಗೆ ಹಿಂದೆ ಹೋಗಿ ನಿಂತರು
ಆಗ ಅಲ್ಲಿದ್ದ ಸ್ವಲ್ಪ ವಿದ್ಯಾವಂತರಂತೆ ಕಾಣುತ್ತಿದ್ದ ಪ್ರಯಾಣಿಕರಾದ ಒಬ್ಬರಲ್ಲಿ " ನೋಡಿ ಇವರು ಹೀಗೆ ಡ್ರೈವ್ ಮಾಡಿದರೆ ನಾವು‌ಮನೆ ತಲುಪಲಾರೆವು .ಅವರಿಗೆ ಬಸ್ ಸೈಡಿಗೆ ಹಾಕಲು ಹೇಳಿ ಎಂದು ತಿಳಿಸಿದರ ಆಗ ಅವರು ಒಮ್ಮೆ ಎದ್ದು ನಿಂತರಾದರೂ‌ ಮತ್ತೆ ಅಳುಕಿ ಪೇಪರ್ ಓದತೊಡಗಿದರು.ಅಷ್ಟರಲ್ಲಿ ತೊಕ್ಕೋಟು ಬಂತು.ಅಲ್ಲಿ ಬಸ್ ಸ್ಟಾಪ್ ಇದೆ‌ಬಸ್ ನಿಂತ ತಕ್ಷಣ ನಾನು‌ಮಗನನ್ನು ಎತ್ತಿಕೊಂಡು ಇಳಿದೆ .
ನಾನು ಹೊಸಂಗಡಿ ತನಕ ಟಿಕೆಟ್ ತೆಗೆದುಕೊಂಡಿದ್ದೆ‌.ಆದರೆ ಆ ಬಸ್ ನಲ್ಲಿ ಮುಂದುವರಿಯುವುದು ಅಪಾಯ ಎನಿಸಿ ಅರ್ಧದಲ್ಲಿಯೇ ಇಳಿದೆ‌ನಂತರ ಬಂದ ಬಸ್ ಹತ್ತಿ ಮತ್ತೆ ಹೊಸಂಗಡಿಗೆ ಟಿಕೆಟ್ ತೆಗೆದೆ.ನಾನಿದ್ದ ಬಸ್ ತಲಪಾಡಿ ಸಮೀಪಿಸುವಷ್ಟರಲ್ಲಿ ರಸ್ತೆ ಇಡೀ ಜಾಮ್ ಅಗಿತ್ತು‌ .ಜನರೆಲ್ಲ ಗಾಭರಿಯಿಂದ ಅತ್ತ ಇತ್ತ‌ಓಡಾಡುತ್ತಿದ್ದರು.
ಹೌದು‌ ಮೊದಲು ನಾನಿದ್ದ ಬಸ್ ಭೀಕರ ಅಫಘಾತಕ್ಕೆ ಈಡಾಗಿತ್ತು .ರಸ್ತೆಯಿಂದ ಉರುಳಿ ಗದ್ದೆಗೆ ಬಿದ್ದಿತ್ತು‌.ಅ ಬಸ್ ನಲ್ಲಿ ಇದ್ದಿದ್ದೇ ಹತ್ತು ಹದಿನೈದು ಜನರು‌.ಅವರಲ್ಲಿ ಏಳೆಂಟು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.ಎಲ್ಲರಿಗೂ ಗಾಯವಾಗಿತ್ತು‌
ಸದ್ಯ ನನ್ನನ್ನು ‌ಮತ್ತು ಮಗನನ್ನು ದೇವರೇ ಕಾಪಾಡಿರಬೇಕು ನಾವು ತೊಕ್ಕೋಟಿನಲ್ಲಿ ಇಳಿಯದೆ ಅದೇ ಬಸ್ಸಿನಲ್ಲಿ ಮುಂದುವರಿದಿದ್ದರೆ ನಮಗೂ ಇದೇ ಗತಿ ಆಗಿರುತ್ತಿತ್ತು‌.ನನಗೆ ಇಳಿಯುವಂತೆ ಪ್ರೇರಣೆ ಎಲ್ಲಿಂದ ಬಂತೋ ತಿಳಿಯದು‌.ಇದು ಸಮಯ ಪ್ರಜ್ಞೆಯೇ ಆಯುರ್ಬಲವೋ ನನಗೆ ತಿಳಿಯದು .ಅದೇನೇ ಇದ್ದರೂ ನಾವು ಆ ದಿನ ಅಪಾಯದಿಂದ ಬಚಾವಾಗಿದ್ದೆವು.

Tuesday 12 June 2018

ಬದುಕ ಬಂಡಿಯಲಿ 21- ನಾನು ತುಳುನಾಡಿನವಳು © ಡಾನಾನು ತುಳುನಾಡಿನವಳು © ಡಾ ಲಕ್ಷ್ಮೀ ಜಿ ಪ್ರಸಾದ

ನಾನು ತುಳುನಾಡಿನವಳು © ಡಾನಾನು ತುಳುನಾಡಿನವಳು © ಡಾ ಲಕ್ಷ್ಮೀ ಜಿ ಪ್ರಸಾದ

ನಾನ್ಯಾವ ನಾಡಿನವಳು ?
ಹೀಗೊಂದು ಜಿಜ್ಞಾಸೆ ಸದಾ ನನ್ನನ್ನು ಕಾಡುತ್ತಾ ಇರುತ್ತದೆ .ನನ್ನ ಊರು ಯಾವುದು ಎಂದು ಕೇಳಿದಾಗ ನಾನು ಹೇಳುವುದು

" ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ  ಕೋಳ್ಯೂರು ಎಂಬ ಪುಟ್ಟ ಗ್ರಾಮದ ವಾರಣಾಸಿ ಮನೆ ಬಗ್ಗೆ "

ಕೇಳುವವರಲ್ಲಿ ನನ್ನ ಗಂಡನ ಮನೆ ಯಾವುದು ಎಂಬ ಕುತೂಹಲ ಕಂಡರೆ ನಾನು ಅದನ್ನು ನೇರವಾಗಿ ಹೇಳುತ್ತೇನೆ ನನ್ನ ಗಂಡ ಪ್ರಸಾದ್ ಮನೆ ಬಂಟ್ವಾಳ ತಾಲೂಕಿನ  ಕೋಡಪದವಿನ ಸರವು ಎಂಬ ಮನೆ ಇದು ನಮ್ಮ ಕುಟುಂಬದ ಮನೆಯ ಹೆಸರಲ್ಲ ನನ್ನ ಪತಿಯ ಅಜ್ಜ ಎಲ್ಲಿಂದಲೋ ಬಂದು ಕೋಡಪದವು ಸಮೀಪದ ಪಂಜಿಗದ್ದೆ ಎಂಬ ಪರಿಸರದ ಒಂದಷ್ಟು ಜಾಗ ಖರೀದಿಸಿ ನೆಲೆಯಾದವರು ಅವರು ತೀರ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಕಾರಣ ಅವರ ಮಕ್ಕಳಿಗೆ ಅವರ ಮೂಲ ಯಾವುದು ಎಂದು ತಿಳಿದಿಲ್ಲ ಮನೆದೇವರು ಕೂಡ ಯಾರೆಂದು ತಿಳಿದಿಲ್ಲ ಅಲ್ಲಿಂದ ಆಸ್ತಿ ಭಾಗವಾಗಿ ಅಲ್ಲಿಂದ ಎರಡು ಕಿಮೀ ದೂರದ ಸರವು ಎಂಬ ಪ್ರದೇಶದಲ್ಲಿ ಸ್ವಲ್ಪ ಜಾಗ ಪಡೆದು ನೆಲೆಯಾದವರು ನನ್ನ ಪ್ರಸಾದ ತಂದೆಯವರು ನಾನು ಮದುವೆಯಾಗಿ ಬಂದದ್ದು ಇದೇ ಮನೆಗೆ ಬಂದದ್ದು ಮಾತ್ರ ಅಲ್ಲಿ ಬದುಕಿದ್ದು ಬೆರಳೆಣಿಕೆಯಷ್ಟು ದಿನಗಳು
ಇಪ್ಪತ್ತೈದು ವರ್ಷಗಳ ಹಿಂದೆ ಮದುವೆಯಾದ ಮೇಲೆ ಓದಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇರಲಿಲ್ಲ ನಮ್ಮ ಕುಟುಂಬದ ಮಂದಿಯೂ ಅದಕ್ಕೆ ಹೊರತಾಗಿ ಇರಲಿಲ್ಲ ಇದೇ ಕಾರಣಕ್ಕೆ ನಾನು ಪ್ರಸಾದ ಒಂದಿಗೆ ಮನೆ ಬಿಟ್ಟು ಹೊರ ನಡೆದು ನಾನು ಓದುವ ಕಟೀಲು ಕಾಲೇಜು ಬಳಿ ಮನೆ ಮಾಡಿ ಸಂಸಾರ ಪ್ರಾರಂಭಿಸಿದೆವು ಅನೇಕ ಏಳು ಬೀಳುಗಳನ್ನೂ ಕಂಡೆವು ಅಲ್ಲಿದ್ದದ್ದು ಒಂದೇ ವರುಷ ಅಲ್ಲಿಂದ ಮತ್ತೆ ಮಂಗಳೂರಿನಲ್ಲಿ ಹತ್ತು ವರ್ಷ ಬದುಕಿದೆವು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸುತ್ತಾ ಪ್ರಸಾದ ಬೆಂಗಳೂರಿಗೆ ಸಪ್ಟೆಂಬರ್ 2004 ರಲ್ಲಿ ಬಂದಾಗ ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದೆ
ಶೈಕ್ಷಣಿಕ ವರ್ಷದ ಮಡುವೆ ಕೆಲಸ ಬಿಡುವುದು ಸರಿಯಲ್ಲ ವೆಂದು ಮಾರ್ಚ್ 2005 ರ ತನಕ ಕೆಲಸದಲ್ಲಿ ಮುಂದುವರಿದು ಪ್ರಥಮ ಪಿಯುಸಿ ಮೌಲ್ಯ ಮಾಪನ ಮಾಡಿ‌ಕೊಟ್ಟು ಕಾಲೇಜು  ಮ್ಯಾಗಜೀನ್ ಕೆಲಸವನ್ನು ಮುಗಿಸಿಕೊಟ್ಟು ಗೌರವದಿಂದ ಅಲ್ಲಿಂದ ರಿಲೀವ್ ಆಗಿ ಬೆಂಗಳೂರಿಗೆ ಬಂದೆ ಬಂದ ಮರುದಿನವೇ ಎಪಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಇದ್ದದ್ದು ಗೊತ್ತಾಗಿ ಮಗನನ್ನು ಗಾಡಿಯಲ್ಲಿ ಕೂರಿಸಕೊಂಡು ವಿಳಾಸ ಹುಡುಕುತ್ತಾ ಎನ್ ಆರ್ ಕಾಲೋನಿಗೆ ತಡವಾಗಿ ಬಂದು ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಆಯ್ಕೆಯಾದೆ
ಬನಶಂಕರಿ ತೃತೀಯ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು
ಅಲ್ಲಿಂದ 2008 ರಲ್ಲಿ ಈಗಿನ  ಅಂಗೈ ಅಗಲದ ನಮ್ಮ ಪುಟ್ಟದಾದ ಸ್ವಂತ ಮನೆಗೆ ಬಂದೆವು ಮತ್ತೆ 2009 ರಲ್ಲಿ ಬೆಳ್ಳಾರೆಗೆ ಉಪನ್ಯಾಸಕಿಯಾಗಿ ಹೋದೆ 2015 ರಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕಾಲೇಜಿಗೆ ವರ್ಗಾವಣೆ ಪಡೆದು ಬಂದೆ
ಹಾಗಾಗಿ ನಮಗೆ ನಾವೆಲ್ಲಿಯವರುಎಂದು ಕೇಳಿದರೆ ಒಂದಿನಿತು ತಬ್ಬಿಬ್ಬಾಗುತ್ತೇನೆ ಕೊನೆಯಲ್ಲಿ ನಾನು "ತುಳುನಾಡಿನ ವರು "  ಎನ್ನುತ್ತೇನೆ
ಯಾಕೆಂದರೆ ನನ್ನ ಮಾತೃಭಾಷೆ ಹವ್ಯಕ ಕನ್ನಡ ವೃತ್ತಿ ಕನ್ನಡ ಉಪನ್ಯಾಸಕಿಯಾಗಿ, ಆದರೂ ನನ್ನನ್ನು ಸೆಳೆದದ್ದು ತುಳು ಸಂಸ್ಕೃತಿ ಕೈ ಹಿಡಿದು ಸಲಹಿದವಳು ತುಳುವಪ್ಪೆ
ಇಷ್ಟಾಗಿಯೂ ಇತ್ತೀಚೆಗೆ ಕನ್ನಡ ಜಾನಪದ ಪರಿಷತ್ ಮೈಸೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ನನ್ನನ್ನು ಜಾನಪದ ಪ್ರಪಂಚ ಪ್ರಶಸ್ತಿ ಗೆ ಆಯ್ಕೆಮಾಡಿದಾಗ ಅವರು ಕಾಸರಗೋಡಿನವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ಮಾಡಿದ್ದು ತಿಳಿಯಿತು ತಕ್ಷಣವೇ ನಾನು ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ  ಮದುವೆಯಾಗಿ ಬಂದ ಮನೆಯ ನನ್ನ ಪತಿ ಪ್ರಸಾದ ಮನೆ ವಿಳಾಸ ಮತ್ತು ಇನ್ನೂ ಅಲ್ಲಿಯೇ ಓಟಿನ ಹಕ್ಕು ಇರುವ ಬಗ್ಗೆ ವೋಟರ್ಸ ಕಾರ್ಡಿನ ದಾಖಲೆ ಒದಗಿಸಿ ದಾಖಲೆ ಪ್ರಕಾರ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಳು ಆದರೆ ಮಾನಸಿಕವಾಗಿ ನಾನು ಅಲ್ಲಿಯವಳಲ್ಲ ಅವರೆಂದೂ ನನ್ನನ್ನು ಸೊಸೆಯಾಗಿ ಸ್ವೀಕರಿಸಲಿಲ್ಲ ಅದನ್ನು ತಪ್ಪು ಎಂದು ದೂಷಿಸಲಾರೆ .ಸೆರಗು ತಲೆಗೆ ಹೊದ್ದು ಬೆಳಗ್ಗೆ ಎದ್ದು ಹೊಸಿಲಿ ಬರೆದು ಮನೆಯೊಳಗೆ ಗೃಹಿಣಿಯಾಗಿರುವ ಸೊಸೆಯನ್ನು ನಿರೀಕ್ಷಿಸಿದ ಸಂಪ್ರದಾಯ ವಾದಿ ಬ್ರಾಹ್ಮಣ ಕುಟುಂಬದ ಜನ ನಡು ರಾತ್ರಿ ನಢಯುವ ಭೂತಕೋಲವನ್ನು ರೆಕಾರ್ಡ್  ಕ್ಯಾಮರಾ ಹಿಡಿದುಕೊಂಡು ಜಾತಿ ನೀತಿ ಧರ್ಮದ ಗಡಿ ದಾಟಿ ಸಾಗುವ ನನ್ನಂಥ ಟಪೋರಿಯನ್ನು ಸೊಸೆಯಾಗಿ ಹೇಗೆ ತಾನೆ ಸ್ವೀಕರಿಸಿಯಾರು ಅಲ್ಲವೇ ?
ಬೆಂಗಳೂರು ಅನ್ನವನ್ನು ಕೊಟ್ಟ ಊರು ಎಂಬ ಕೃತಜ್ಞತೆ ಇರುವುದಾದರೂ ನಾನು ಬೆಂಗಳೂರಿನವಳು ಎಂಬ ಭಾವ ನನಗಿನ್ನೂ ಬಂದಿಲ್ಲ ಬಾರದೆ ಇರುವುದನ್ನು ಹೇಗೆ ಒಪ್ಪಲಿ ?
ಹಾಗಾಗಿ ನಾನು ಎಲ್ಲಿಯವಳು ಕೇಳಿದರೆ ಇಂದಿಗೂ ಹೇಳುವುದು ನಾನು ತುಳುನಾಡಿನವಳು ಗಡಿನಾಡಿನವಳು ಎಂದು .ಬೆಳ್ಳಾರೆಯಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಕಾರಣ ನಾನು ಅಲ್ಲಿಯವಳೆಂದು ಅನೇಕರು ಭಾವಿಸಿದ್ದಾರೆ ಅದು ಕೂಡ ನನಗೆ ಅನ್ನ ಕೊಟ್ಟ ಊರು ಸಂಶೋಧನೆ ಗೆ ಇಂಬು ಕೊಟ್ಟ ಊರು ನನಗೊಂದು ಅಸ್ತಿತ್ವ ತಂದು ಕೊಟ್ಟ ಬೀಡು ಎಂಬ ಕೃತಜ್ಞತೆ ನಮಗಿದೆಯಾದರೂ ನಾನು ಅಲ್ಲಿಯವಳಲ್ಲ  ಕೆಲವರು ಡೆಲ್ಲಿ,ಮುಂಬೈ ಮಧುರೆ ಚೆನೈ ಯಲ್ಲಿ ಓದಿದ ಕೆಲಸ ಮಾಡಿ ಕಾರಣಕ್ಕೆ ಹೊರನಾಡಿವರು ಎಂದು ಕರೆಯಲ್ಪಡುತ್ತಾರೆ ಹಾಗೆ ನೋಡಿದರೆ   ನಾನು ಅಂದ್ರ ಪ್ರದೇಶದ ಕುಮಪ್ಪಂನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗದ ಮೊದಲ ವಿದ್ಯಾರ್ಥಿನಿ ನಾನು ಎರಡನೇಯ ಡಾಕ್ಟರೇಟ್ ಪಡೆದದ್ದು ಅಲ್ಲಿಂದಲೇ ಆ ಬಗ್ಗೆ ಯೂ ನನಗೆ ಕೃತಜ್ಞತೆ ಇದೆಯೇ ಹೊರತು ನಾನು ಹೊರನಾಡಿನವಳು ಎಂದು ಕರೆಸಿಕೊಳ್ಳಲಾರೆ  ಹಾಗಾಗಿಯೇ ನಾನು ತುಳುನಾಡಿನವಳು ಎಂದು ಹೆಮ್ಮೆಯಿಂದ ಹೇಳುವೆ
ಇದೆಲ್ಲಾ ಯಾಕೆ ನೆನಪಾಯಿತೆಂದರೆ ನಿನ್ನೆವೇದಿಕೆಯಲ್ಲಿ  ವಸಂತಕುಮಾರ್ ಪೆರ್ಲ ಅವರು ಗಡಿನಾಡಿನ ಆರುನೂರು ಬರಹಗಾರರ ಒಂದು ಪಟ್ಟಿಯನ್ನು ಮಾಡಿದ್ದು ಪ್ರಕಟವಾಗಿರುವ ಬಗ್ಗೆ ತಿಳಿಸಿದರು ಈ ಪಟ್ಟಿಯಲ್ಲಿ ನಾನು ಸೇರದೆ ಇದ್ದ ಬಗ್ಗೆ ನನಗೆ ಈ ಹಿಂದೆಯೇ ಮಾಹಿತಿ ಇತ್ತು(ಇದು ಅವರು ಮಾಡಿದ ಪಟ್ಟಿಯಲ್ಲ, ವಿವರಗಳು ನನಗೆ ಮರೆತು ಹೋಗಿವೆ)ಜೊತೆಗೆ ತುಳುನಾಡ ಬರಹಗಾರರ ಒಂದು ಪಟ್ಟಿ ಕೂಡ ಪ್ರಕಟವಾಗಿದ್ದು ಅದರಲ್ಲೂ ನಾನು ಸೇರಿಲ್ಲವಂತೆ
ಹಾಗಾಗಿ ನಾನೆಲ್ಲಿಯವಳು ಎಂದು ಕಾಡುತ್ತಿದ್ದ ಜಿಜ್ಞಾಸೆ ಇಂದು ಮತ್ತೆ ಕಾಡುತ್ತಿದೆ  ಹೆಚ್ಚಿನ  ಓದಿಗಾಗಿ http://shikshanaloka.blogspot.in/2017/05/blog-post.html?m=1
(ಚಿತ್ರ -ತುಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುವ ಕೆಳದಿ ಅರಸಿ ಚನ್ನಮ್ಮ ನ ಮಹಾ ಮಾಂಡಳಿಕನಾಗಿದ್ದ  ಕಾಸರಗೋಡು ತಿಮ್ಮಣ್ಣ ನಾಯಕನ ಕುರಿತಾದ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಕುಂಬಳೆ ಕೋಟೆ ಗೆ ಬಂದಾಗಿನದು ) ಲಕ್ಷ್ಮೀ ಜಿ ಪ್ರಸಾದ

ನಾನ್ಯಾವ ನಾಡಿನವಳು ?
ಹೀಗೊಂದು ಜಿಜ್ಞಾಸೆ ಸದಾ ನನ್ನನ್ನು ಕಾಡುತ್ತಾ ಇರುತ್ತದೆ .ನನ್ನ ಊರು ಯಾವುದು ಎಂದು ಕೇಳಿದಾಗ ನಾನು ಹೇಳುವುದು

" ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ  ಕೋಳ್ಯೂರು ಎಂಬ ಪುಟ್ಟ ಗ್ರಾಮದ ವಾರಣಾಸಿ ಮನೆ ಬಗ್ಗೆ "

ಕೇಳುವವರಲ್ಲಿ ನನ್ನ ಗಂಡನ ಮನೆ ಯಾವುದು ಎಂಬ ಕುತೂಹಲ ಕಂಡರೆ ನಾನು ಅದನ್ನು ನೇರವಾಗಿ ಹೇಳುತ್ತೇನೆ ನನ್ನ ಗಂಡ ಪ್ರಸಾದ್ ಮನೆ ಬಂಟ್ವಾಳ ತಾಲೂಕಿನ  ಕೋಡಪದವಿನ ಸರವು ಎಂಬ ಮನೆ ಇದು ನಮ್ಮ ಕುಟುಂಬದ ಮನೆಯ ಹೆಸರಲ್ಲ ನನ್ನ ಪತಿಯ ಅಜ್ಜ ಎಲ್ಲಿಂದಲೋ ಬಂದು ಕೋಡಪದವು ಸಮೀಪದ ಪಂಜಿಗದ್ದೆ ಎಂಬ ಪರಿಸರದ ಒಂದಷ್ಟು ಜಾಗ ಖರೀದಿಸಿ ನೆಲೆಯಾದವರು ಅವರು ತೀರ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಕಾರಣ ಅವರ ಮಕ್ಕಳಿಗೆ ಅವರ ಮೂಲ ಯಾವುದು ಎಂದು ತಿಳಿದಿಲ್ಲ ಮನೆದೇವರು ಕೂಡ ಯಾರೆಂದು ತಿಳಿದಿಲ್ಲ ಅಲ್ಲಿಂದ ಆಸ್ತಿ ಭಾಗವಾಗಿ ಅಲ್ಲಿಂದ ಎರಡು ಕಿಮೀ ದೂರದ ಸರವು ಎಂಬ ಪ್ರದೇಶದಲ್ಲಿ ಸ್ವಲ್ಪ ಜಾಗ ಪಡೆದು ನೆಲೆಯಾದವರು ನನ್ನ ಪ್ರಸಾದ ತಂದೆಯವರು ನಾನು ಮದುವೆಯಾಗಿ ಬಂದದ್ದು ಇದೇ ಮನೆಗೆ ಬಂದದ್ದು ಮಾತ್ರ ಅಲ್ಲಿ ಬದುಕಿದ್ದು ಬೆರಳೆಣಿಕೆಯಷ್ಟು ದಿನಗಳು
ಇಪ್ಪತ್ತೈದು ವರ್ಷಗಳ ಹಿಂದೆ ಮದುವೆಯಾದ ಮೇಲೆ ಓದಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇರಲಿಲ್ಲ ನಮ್ಮ ಕುಟುಂಬದ ಮಂದಿಯೂ ಅದಕ್ಕೆ ಹೊರತಾಗಿ ಇರಲಿಲ್ಲ ಇದೇ ಕಾರಣಕ್ಕೆ ನಾನು ಪ್ರಸಾದ ಒಂದಿಗೆ ಮನೆ ಬಿಟ್ಟು ಹೊರ ನಡೆದು ನಾನು ಓದುವ ಕಟೀಲು ಕಾಲೇಜು ಬಳಿ ಮನೆ ಮಾಡಿ ಸಂಸಾರ ಪ್ರಾರಂಭಿಸಿದೆವು ಅನೇಕ ಏಳು ಬೀಳುಗಳನ್ನೂ ಕಂಡೆವು ಅಲ್ಲಿದ್ದದ್ದು ಒಂದೇ ವರುಷ ಅಲ್ಲಿಂದ ಮತ್ತೆ ಮಂಗಳೂರಿನಲ್ಲಿ ಹತ್ತು ವರ್ಷ ಬದುಕಿದೆವು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸುತ್ತಾ ಪ್ರಸಾದ ಬೆಂಗಳೂರಿಗೆ ಸಪ್ಟೆಂಬರ್ 2004 ರಲ್ಲಿ ಬಂದಾಗ ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದೆ
ಶೈಕ್ಷಣಿಕ ವರ್ಷದ ಮಡುವೆ ಕೆಲಸ ಬಿಡುವುದು ಸರಿಯಲ್ಲ ವೆಂದು ಮಾರ್ಚ್ 2005 ರ ತನಕ ಕೆಲಸದಲ್ಲಿ ಮುಂದುವರಿದು ಪ್ರಥಮ ಪಿಯುಸಿ ಮೌಲ್ಯ ಮಾಪನ ಮಾಡಿ‌ಕೊಟ್ಟು ಕಾಲೇಜು  ಮ್ಯಾಗಜೀನ್ ಕೆಲಸವನ್ನು ಮುಗಿಸಿಕೊಟ್ಟು ಗೌರವದಿಂದ ಅಲ್ಲಿಂದ ರಿಲೀವ್ ಆಗಿ ಬೆಂಗಳೂರಿಗೆ ಬಂದೆ ಬಂದ ಮರುದಿನವೇ ಎಪಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಇದ್ದದ್ದು ಗೊತ್ತಾಗಿ ಮಗನನ್ನು ಗಾಡಿಯಲ್ಲಿ ಕೂರಿಸಕೊಂಡು ವಿಳಾಸ ಹುಡುಕುತ್ತಾ ಎನ್ ಆರ್ ಕಾಲೋನಿಗೆ ತಡವಾಗಿ ಬಂದು ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಆಯ್ಕೆಯಾದೆ
ಬನಶಂಕರಿ ತೃತೀಯ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು
ಅಲ್ಲಿಂದ 2008 ರಲ್ಲಿ ಈಗಿನ  ಅಂಗೈ ಅಗಲದ ನಮ್ಮ ಪುಟ್ಟದಾದ ಸ್ವಂತ ಮನೆಗೆ ಬಂದೆವು ಮತ್ತೆ 2009 ರಲ್ಲಿ ಬೆಳ್ಳಾರೆಗೆ ಉಪನ್ಯಾಸಕಿಯಾಗಿ ಹೋದೆ 2015 ರಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕಾಲೇಜಿಗೆ ವರ್ಗಾವಣೆ ಪಡೆದು ಬಂದೆ
ಹಾಗಾಗಿ ನಮಗೆ ನಾವೆಲ್ಲಿಯವರುಎಂದು ಕೇಳಿದರೆ ಒಂದಿನಿತು ತಬ್ಬಿಬ್ಬಾಗುತ್ತೇನೆ ಕೊನೆಯಲ್ಲಿ ನಾನು "ತುಳುನಾಡಿನ ವರು "  ಎನ್ನುತ್ತೇನೆ
ಯಾಕೆಂದರೆ ನನ್ನ ಮಾತೃಭಾಷೆ ಹವ್ಯಕ ಕನ್ನಡ ವೃತ್ತಿ ಕನ್ನಡ ಉಪನ್ಯಾಸಕಿಯಾಗಿ, ಆದರೂ ನನ್ನನ್ನು ಸೆಳೆದದ್ದು ತುಳು ಸಂಸ್ಕೃತಿ ಕೈ ಹಿಡಿದು ಸಲಹಿದವಳು ತುಳುವಪ್ಪೆ
ಇಷ್ಟಾಗಿಯೂ ಇತ್ತೀಚೆಗೆ ಕನ್ನಡ ಜಾನಪದ ಪರಿಷತ್ ಮೈಸೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ನನ್ನನ್ನು ಜಾನಪದ ಪ್ರಪಂಚ ಪ್ರಶಸ್ತಿ ಗೆ ಆಯ್ಕೆಮಾಡಿದಾಗ ಅವರು ಕಾಸರಗೋಡಿನವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ಮಾಡಿದ್ದು ತಿಳಿಯಿತು ತಕ್ಷಣವೇ ನಾನು ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ  ಮದುವೆಯಾಗಿ ಬಂದ ಮನೆಯ ನನ್ನ ಪತಿ ಪ್ರಸಾದ ಮನೆ ವಿಳಾಸ ಮತ್ತು ಇನ್ನೂ ಅಲ್ಲಿಯೇ ಓಟಿನ ಹಕ್ಕು ಇರುವ ಬಗ್ಗೆ ವೋಟರ್ಸ ಕಾರ್ಡಿನ ದಾಖಲೆ ಒದಗಿಸಿ ದಾಖಲೆ ಪ್ರಕಾರ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಳು ಆದರೆ ಮಾನಸಿಕವಾಗಿ ನಾನು ಅಲ್ಲಿಯವಳಲ್ಲ ಅವರೆಂದೂ ನನ್ನನ್ನು ಸೊಸೆಯಾಗಿ ಸ್ವೀಕರಿಸಲಿಲ್ಲ ಅದನ್ನು ತಪ್ಪು ಎಂದು ದೂಷಿಸಲಾರೆ .ಸೆರಗು ತಲೆಗೆ ಹೊದ್ದು ಬೆಳಗ್ಗೆ ಎದ್ದು ಹೊಸಿಲಿ ಬರೆದು ಮನೆಯೊಳಗೆ ಗೃಹಿಣಿಯಾಗಿರುವ ಸೊಸೆಯನ್ನು ನಿರೀಕ್ಷಿಸಿದ ಸಂಪ್ರದಾಯ ವಾದಿ ಬ್ರಾಹ್ಮಣ ಕುಟುಂಬದ ಜನ ನಡು ರಾತ್ರಿ ನಢಯುವ ಭೂತಕೋಲವನ್ನು ರೆಕಾರ್ಡ್  ಕ್ಯಾಮರಾ ಹಿಡಿದುಕೊಂಡು ಜಾತಿ ನೀತಿ ಧರ್ಮದ ಗಡಿ ದಾಟಿ ಸಾಗುವ ನನ್ನಂಥ ಟಪೋರಿಯನ್ನು ಸೊಸೆಯಾಗಿ ಹೇಗೆ ತಾನೆ ಸ್ವೀಕರಿಸಿಯಾರು ಅಲ್ಲವೇ ?
ಬೆಂಗಳೂರು ಅನ್ನವನ್ನು ಕೊಟ್ಟ ಊರು ಎಂಬ ಕೃತಜ್ಞತೆ ಇರುವುದಾದರೂ ನಾನು ಬೆಂಗಳೂರಿನವಳು ಎಂಬ ಭಾವ ನನಗಿನ್ನೂ ಬಂದಿಲ್ಲ ಬಾರದೆ ಇರುವುದನ್ನು ಹೇಗೆ ಒಪ್ಪಲಿ ?
ಹಾಗಾಗಿ ನಾನು ಎಲ್ಲಿಯವಳು ಕೇಳಿದರೆ ಇಂದಿಗೂ ಹೇಳುವುದು ನಾನು ತುಳುನಾಡಿನವಳು ಗಡಿನಾಡಿನವಳು ಎಂದು .ಬೆಳ್ಳಾರೆಯಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಕಾರಣ ನಾನು ಅಲ್ಲಿಯವಳೆಂದು ಅನೇಕರು ಭಾವಿಸಿದ್ದಾರೆ ಅದು ಕೂಡ ನನಗೆ ಅನ್ನ ಕೊಟ್ಟ ಊರು ಸಂಶೋಧನೆ ಗೆ ಇಂಬು ಕೊಟ್ಟ ಊರು ನನಗೊಂದು ಅಸ್ತಿತ್ವ ತಂದು ಕೊಟ್ಟ ಬೀಡು ಎಂಬ ಕೃತಜ್ಞತೆ ನಮಗಿದೆಯಾದರೂ ನಾನು ಅಲ್ಲಿಯವಳಲ್ಲ  ಕೆಲವರು ಡೆಲ್ಲಿ,ಮುಂಬೈ ಮಧುರೆ ಚೆನೈ ಯಲ್ಲಿ ಓದಿದ ಕೆಲಸ ಮಾಡಿ ಕಾರಣಕ್ಕೆ ಹೊರನಾಡಿವರು ಎಂದು ಕರೆಯಲ್ಪಡುತ್ತಾರೆ ಹಾಗೆ ನೋಡಿದರೆ   ನಾನು ಅಂದ್ರ ಪ್ರದೇಶದ ಕುಮಪ್ಪಂನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗದ ಮೊದಲ ವಿದ್ಯಾರ್ಥಿನಿ ನಾನು ಎರಡನೇಯ ಡಾಕ್ಟರೇಟ್ ಪಡೆದದ್ದು ಅಲ್ಲಿಂದಲೇ ಆ ಬಗ್ಗೆ ಯೂ ನನಗೆ ಕೃತಜ್ಞತೆ ಇದೆಯೇ ಹೊರತು ನಾನು ಹೊರನಾಡಿನವಳು ಎಂದು ಕರೆಸಿಕೊಳ್ಳಲಾರೆ  ಹಾಗಾಗಿಯೇ ನಾನು ತುಳುನಾಡಿನವಳು ಎಂದು ಹೆಮ್ಮೆಯಿಂದ ಹೇಳುವೆ
ಇದೆಲ್ಲಾ ಯಾಕೆ ನೆನಪಾಯಿತೆಂದರೆ ನಿನ್ನೆವೇದಿಕೆಯಲ್ಲಿ  ವಸಂತಕುಮಾರ್ ಪೆರ್ಲ ಅವರು ಗಡಿನಾಡಿನ ಆರುನೂರು ಬರಹಗಾರರ ಒಂದು ಪಟ್ಟಿಯನ್ನು ಮಾಡಿದ್ದು ಪ್ರಕಟವಾಗಿರುವ ಬಗ್ಗೆ ತಿಳಿಸಿದರು ಈ ಪಟ್ಟಿಯಲ್ಲಿ ನಾನು ಸೇರದೆ ಇದ್ದ ಬಗ್ಗೆ ನನಗೆ ಈ ಹಿಂದೆಯೇ ಮಾಹಿತಿ ಇತ್ತು(ಇದು ಅವರು ಮಾಡಿದ ಪಟ್ಟಿಯಲ್ಲ, ವಿವರಗಳು ನನಗೆ ಮರೆತು ಹೋಗಿವೆ)ಜೊತೆಗೆ ತುಳುನಾಡ ಬರಹಗಾರರ ಒಂದು ಪಟ್ಟಿ ಕೂಡ ಪ್ರಕಟವಾಗಿದ್ದು ಅದರಲ್ಲೂ ನಾನು ಸೇರಿಲ್ಲವಂತೆ
ಹಾಗಾಗಿ ನಾನೆಲ್ಲಿಯವಳು ಎಂದು ಕಾಡುತ್ತಿದ್ದ ಜಿಜ್ಞಾಸೆ ಇಂದು ಮತ್ತೆ ಕಾಡುತ್ತಿದೆ  ಹೆಚ್ಚಿನ  ಓದಿಗಾಗಿ http://shikshanaloka.blogspot.in/2017/05/blog-post.html?m=1
(ಚಿತ್ರ -ತುಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುವ ಕೆಳದಿ ಅರಸಿ ಚನ್ನಮ್ಮ ನ ಮಹಾ ಮಾಂಡಳಿಕನಾಗಿದ್ದ  ಕಾಸರಗೋಡು ತಿಮ್ಮಣ್ಣ ನಾಯಕನ ಕುರಿತಾದ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಕುಂಬಳೆ ಕೋಟೆ ಗೆ ಬಂದಾಗಿನದು )

Friday 8 June 2018

ಬದುಕ ಬಂಡಿಯಲಿ 20 - ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ಮೇಲಧಿಕಾರಿಯಾಗಿ ಬಂದರೇ..



ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ಮೇಲಧಿಕಾರಿಯಾಗಿ ಬಂದರೇ..© ಡಾ.ಲಕ್ಷ್ಮೀ ಜಿ ಪ್ರಸಾದ

ಹೌದು ಒಂದೊಮ್ಮೆ ನನ್ನ ಆಶಯ ಈಡೇರಿದರೆ ಆ ಕ್ಷಣದ ನನ್ನ ಸಂತಸವನ್ನು ಅಳೆಯಲು ಯಾವ ಮಾಪಕವೂ ಇರಲಾರದು..
ನಮ್ಮ ಕಾಲೇಜಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಾ ಇದೆ.ನಮಗೆ ಮೇ ಎರಡರಿಂದ ಕಾಲೇಜು ಶುರುವಾಗಿದ್ದು ಕಾಲೇಜಿಗೆ ಬಂದಾಗ ಚುರುಕಾದ ಈ ಮಕ್ಕಳನ್ನು ನಮ್ಮ ಕಾಲೇಜು ವಠಾರದಲ್ಲಿ ನೋಡಿದೆ.
ಕಟ್ಟಡದ ಗಾರೆ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಖಳು ಇವರು.ದೊಡ್ಡ ಮಕ್ಕಳು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದರು.ಶಾಲೆ ಶುರುವಾದಾಗ ಇವರು ಶಾಲೆಗೆ ಹೋಗಬಹುದು ಎಂದು ಭಾವಿಸಿದ್ದೆ.ನಾವು ಉಪನ್ಯಾಸಕರು ಮುದ್ದಾದ ಈ ಮಕ್ಕಳಿಗೆ ನಾವು ತಂದಿದ್ದ ತಿಂಡಿ ತಿನಸು ಹಣ್ಣು ಬಿಸ್ಕೆಟ್ ಸ್ವಲ್ಪ ಭಾಗ ಕೊಡುತ್ತಾ ಇದ್ದೆವು.ದೊಡ್ಡ ಹುಡುಗಿಯರು ಸಣ್ಣವರಿಗೆ ತಿನ್ನಿಸಿ ತಾವೂ ತಿಂದು ಖುಷಿ ಪಡುವುದನ್ನು ನೋಡುವುದೇ ನಮಗೆ ಸಂಭ್ರಮ.ದೊಡ್ಡ ಮಕ್ಕಳೆಂದರೆ ಅಲ್ಲಿರುವವರಲ್ಲಿ ದೊಡ್ಡವರು ಅಷ್ಟೇ, ಇನ್ನೂ ಹತ್ತು ಹನ್ನೆರಡು ವರ್ಷದ ಪೋರಿಯರು ಇವರು.
ಮೇ ಇಪ್ಪತ್ತನಾಲ್ಕರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡವು.
ಈ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಚಿಕ್ಕವರನ್ನು ನೋಡಿಕೊಂಡು ಆಟವಾಡಿಕೊಂಡು ಇದ್ದರು.ಆಗ ನಾನು ಮಕ್ಕಳಲ್ಲಿ ನೀವು ಶಾಲೆಗೆ ಹೋಗುವುದಿಲ್ಲವೇ ಎಂದು ವಿಚಾರಿಸಿದೆ.ತಂಗಿಯ ರನ್ನು ( ಚಿಕ್ಕ ಮಕ್ಕಳು) ನೋಡಿಕೊಳ್ಳಲು ಯಾರೂ ಇಲ್ಲ ಹಾಗಾಗಿ ಶಾಲೆಗೆ ಹೋಗುತ್ತಾ ಇಲ್ಲ ಎಂದು ತಿಳಿಸಿದರು.ಇವರು ಕಳೆದ ವರ್ಷದ ತನಕ ದೂರದ ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ಓದಿದ್ದು ದೊಡ್ಡ ಹುಡುಗಿಯರು ಆರನೇ ತರಗತಿ ಪಾಸ್ ಆಗಿದ್ದರು. ಚಿಕ್ಕವಳು ಒಂದನೇ ತರಗತಿ ಓದಿದ್ದಳು.ಇನ್ನಿಬ್ಬರು ಒಂದೆರಡು ವರ್ಷದ ಕೈಗೂಸುಗಳು.
ಚಿಕ್ಕವರನ್ನು ನೋಡಿಕೊಳ್ಳುವುದಕ್ಕಾಗಿ ಇವರ ಓದು ನಿಂತರೆ ಹೇಗೆ ? ಏನು ಮಾಡುವುದೆಂದು ಯೋಚಿಸಿದೆ‌.ನಮ್ಮ ಕಾಲೆಜಿಗೆ ಸೇರಿದಂತೆ ಹೈಸ್ಕೂಲ್ ಮತ್ತು ಬಿ ಆರ್ ಸಿ ಕಛೇರಿ ಇದೆ. ನಾನು ಮತ್ತು ನಮ್ಮ ಕಾಲೇಜು ಉಪನ್ಯಾಸಕರಾದ ಶ್ರೀಶ ಮೇಡಂ ಮತ್ತು ಅನಿತಾ ಮೇಡಂ   ಅಲ್ಲಿ ಹೋಗಿ ಬಿಆರ್ ಸಿ ಅಧಿಕಾರಿಗಳಾದ ನರಸಿಂಹಯ್ಯ ಅವರಿಗೆ ಈ ಬಗ್ಗೆ ತಿಳಿಸಿ ಈ ಮಕ್ಕಳ ಓದಿಗೆ ಏನಾದರೂ ವ್ಯವಸ್ಥೆ ಮಾಡುವಂತೆ ಕೋರಿದೆವು.ಅವರು ತಕ್ಷಣವೇ ಅಲ್ಲಿನ ಶಿಕ್ಷಕರಾದ ಲೋಕೇಶ್ ಅವರನ್ನು ಕಳುಹಿಸಿಕೊಟ್ಟರು ‌.ಅವರು  ಬಂದು ಮಕ್ಕಳಲ್ಲಿ ಮಾತನಾಡಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವರ ಹೆತ್ತವರಿಗೆ ತಿಳುವಳಿಕೆ ನೀಡಿದರು‌.ಈ ಮಕ್ಕಳ ಹೆತ್ತವರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲು ಒಪ್ಪಿದ್ದಾರೆ.ಚಿಕ್ಕ ಮಕ್ಕಳನ್ನು ಅಂಗನವಾಡಿಗೆ ಸೇರಿಸುವಂತೆ ಲೋಕೇಶ್ ಅವರು ತಿಳಿಸಿದರು.
ಈ ಮಕ್ಕಳಲ್ಲಿ ಎಲ್ಲರೂ ಅಥವಾ ಕೊನೆ ಪಕ್ಷ ಒಬ್ಬರು ಓದಿ ಮುಂದೆ  ಐಎಎಸ್ ಮಾಡಿ ನಮ್ಮ ಮೇಲಧಿಕಾರಿಯಾಗಿ ಬಂದರೆ ಹೇಗಾಗಬಹುದು ಎಂದು ಊಹಿಸಿ ಸಂಭ್ರಮಿಸಿದೆ‌.ಈ ಮಕ್ಕಳು ನಮ್ಮ ಆಶಯದಂತೆ ಓದಿ ಮುಂದೆ ಐಎಎಸ್ ಐಪಿಎಸ್ ಅಧಿಕಾರಿ ಗಳಾಗಲಿ ಎಂದು ಹಾರೈಸುವೆ

Wednesday 6 June 2018

ಬದುಕ ಬಂಡಿಯಲಿ 19- ಹೀಗೊಂದು ಮೋಸ ಪುರಾಣ © ಡಾ.ಲಕ್ಷ್ಮೀ ಜಿ ಪ್ರಸಾದ

ಹೀಗೊಂದು ಮೋಸ ಪುರಾಣ (c)ಡಾ.ಲಕ್ಷ್ಮೀ ಜಿ ಪ್ರಸಾದ


ವಿಷ್ಣು ಪುರಾಣ ಶಿವ ಪುರಾಣ ಗರುಡ ಪುರಾಣ ಹೆಸರು ಕೇಳಿದ್ದೀರಿ ಇದ್ಯಾವುದು ಮೋಸ ಪುರಾಣ ಅಂತ ತಿಳಿಯಬೇಕೆ ?ಹಾಗಾದರೆ ಸಾವಕಾಶ ಓದಿ ಇದನ್ನು

ಸಾಮಾನ್ಯವಾಗಿ ನಾನು ಯಾವುದೇ ಪ್ರಶಸ್ತಿ ಗಾಗಲಿ, ಪುಸ್ತಕ ಬಹುಮಾನಕ್ಕಾಗಲಿ ಫೆಲೋ ಶಿಪ್ ಗಾಗಲೀ ಅರ್ಜಿ ಸಲ್ಲಿಸುವುದಿಲ್ಲ .ಎರಡು ದಿನ ಮೊದಲು ಕನ್ನಡ ಜಾನಪದ ಅಕಾಡೆಮಿ ಕೆಲವು ವಿಷಯಗಳ ಮೇಲೆ  ಅಧ್ಯಯನ ಮಾಡಲು ಫೆಲೋ ಶಿಪ್ ಗೆ ಅರ್ಜಿ ಆಹ್ವಾನಿಸಿತ್ತು .ಅದರಲ್ಲಿ ನನ್ನ ಆಸಕ್ತಿಯ ಒಂದೆರಡು ವಿಷಯಗಳೂ ಇದ್ದವು .ಆ ದಿನ ಅದನ್ನು ಓದಿದಾಗ ಅರ್ಜಿ ಸಲ್ಲಿಸಬೇಕು ಎಂದು ಕೊಂಡೆ .ಹಾಗೆ ಮಗನಲ್ಲಿ ಈ ಬಾರಿ ನಾನು ಫೆಲೋಶಿಪ್ ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದೆ
ದಿನ ಪಂಡು ಕಳೆದಾಗ .ಮತ್ಯಾಕೋ ಬೇಡ ಅನಿಸಿತ್ತು ಇಷ್ಟರ ತನಕ ನಾನು ಯಾವುದೇ ಸಂಘ ಸಂಸ್ಥೆ  ಅಕಾಡೆಮಿಗಳ  ಅನುದಾನ ಪಡೆಯದೇ ಸ್ವಂತ ಅಧ್ಯಯನ ಮಾಡಿದ್ದೇನೆ ಈಗ ಇನ್ನು ಇವೆಲ್ಲ ಕಿರಿ ಕಿರಿ ಬೇಡ ಎನ್ನಿಸಿತು ..ಹಾಗಾಗಿ ಅರ್ಜಿ ಸಲ್ಲಿಸುವ ವಿಚಾರ ಬಿಟ್ಟು ಬಿಟ್ಟಿದ್ದೆ ..
ನಿನ್ನೆ ಏನೋ ಮಾತಾಡುವಾಗ ಮಗ ಹೇಳಿದ "ಅಮ್ಮ ಈಗಾಗಲೇ ಅಲ್ಲಿ ಕೊಟ್ಟ ವಿಷಯಗಳ ಬಗ್ಗೆ ಸ್ಟಡಿ ಮಾಡಿದ್ದೀಯಲ್ಲ .ಇನ್ನು ಒಂದಷ್ಟು ಮಾಡಿ ಎಲ್ಲ ಒಟ್ಟಿಗೆ ಸೇರಿಸಿ ಬರೆದು ಸಲ್ಲಿಸಿದರೆ ಆಯಿತು ಅಲ್ವ ?ನೀನು ಯಾಕೆ ಫೆಲೋ ಶಿಪ್ ಸಿಗುತ್ತಾ ಅಂತ ಯತ್ನಿಸಬಾರದು ,ಒಂದು ಸಲ ಅರ್ಜಿ ಸಲ್ಲಿಸಿ ನೋಡು ಸಿಗುತ್ತಾ ಅಂತ ಹೇಳಿದ ..
ಹೌದಲ್ಲ ?ಅನಿಸಿತು ನನಗೆ .
ದಿನ ದಿನ ಕಳೆದ ಹಾಗೆ ನಾನು ಚಿಕ್ಕವಳಾಗುದಿಲ್ಲ ,ಮುಂದೆ ವಯಸ್ಸಾದಂತೆ  ಮೊದಲಿನಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ? ಈಗ ಒಂದು ಗುರಿ ಇದ್ದರೆ ಹೇಗೋ ಸಂಶೋಧನೆ ಮಾಡಿ ಬಿಡಬಹುದು ಜೊತೆಗೆ ಫೆಲೋ ಶಿಪ್ ಇರುವ ಕಾರಣ ಅಧ್ಯಯನಕ್ಕೆ ಆರ್ಥಿಕ ಹೊರೆ ಅಂತು ಬೀಳುದಿಲ್ಲ ..
ಹಾಗೆ ಆಲೋಚಿಸಿ ಇಂದು ಕನ್ನಡ ಜಾನಪದ ಅಕಾಡಮಿ ಗೆ ಹೋಗಿ ಅರ್ಜಿ ಸಲ್ಲಿಸಿ ಬಂದೆ .ಅಲ್ಲಿಗೆ ಹೋಗುವಾಗ ತುಸು ಅಳುಕಿತ್ತು ಅಲ್ಲಿನ ರಿಜಿಸ್ತ್ರರ್ ಹೇಗೋ ಏನೋ ಎಂದು ,
ಆದರೆ ಅಲ್ಲಿನ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಮಾತಾಡಿದ ಮೇಲೆ ನನಗೆ ಮನಸು ನಿರಾಳ  ಆಯಿತು ,ಬಹಳ ಸಜ್ಜನಿಕೆಯಿಂದ ಮಾತಾಡಿದರು .ನನ್ನ ಆರ್ಜಿ ಆಯ್ಕೆಯಾಗಿ ಫೆಲೋ ಶಿಪ್ ಸಿಗುತ್ತೋ ಇಲ್ಲವೋ ಅದು ಬೇರೆ ವಿಚಾರ ಆದರೆ ಅವರ ಸರಳತೆ ಸಹೃದಯ ಮಾತು ಇಷ್ಟವಾಯಿತು

ಅಲ್ಲಿ ಅರ್ಜಿ ಸಲ್ಲಿಸಿ ಬರುವಾಗ ನನಗೆ ತುಳು ಅಕಾಡೆಮಿ ಫೆಲೋಶಿಪ್  ಪುರಾಣ ನೆನಪಾಯಿತು

ಸುಮಾರು 5- 6 ವರ್ಷಗಳ ಹಿಂದೆ ತುಳು ಅಕಾಡೆಮಿ ತುಳು ಅಧ್ಯಯನ ಆಸಕ್ತರಿಂದ ಫೆಲೋ ಶಿಪ್ ಗಾಗಿ ಅರ್ಜಿ ಆಹ್ವಾನಿಸಿತ್ತು ,ಪತ್ರಿಕೆಯಲ್ಲಿ ಈ ಬಗ್ಗೆ ಓದಿ ನಾನು ತುಳು ಅಕಾಡೆಮಿ   ರಿಜಿಸ್ಟ್ರಾರ್ ಗೆ ಫೋನ್ ಮಾಡಿದೆ ,ಈ ಬಗ್ಗೆ ಮಾಹಿತಿ ಕೇಳಿದೆ .ಸರಕಾರಿ ಉದ್ಯೋಗಿಗಳೂ ಅರ್ಜಿ ಸಲ್ಲಿಸಬಹುದೇ? ಎಂದು ಕೇಳಿದೆ .ಆಗ ಅವರು ಅಕಾಡೆಮಿ ಅಧ್ಯಕ್ಷರಾದ .... ಅವರಿಗೆ ಫೋನ್ ಕೊಟ್ಟರು ,ಅವರು ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದರು .ಇರ ಬಹುದು ಎಂದು ಕೊಂದು ನಾನು ಸುಮ್ಮನಾದೆ .
ಸುಮಾರು ಎರಡು ಮೂರು ತಿಂಗಳ ನಂತರ ತುಳು ಅಕಾಡೆಮಿ ಫೆಲೋ ಶಿಪ್ ಗೆ ಆಯ್ಕೆ ಆದವರ ಹೆಸರುಗಳು ಪತ್ರಿಕೆಗಳಲ್ಲಿ ಬಂತು .ಅದರಲ್ಲಿ  ಬೆಳ್ಳಾರೆಸರ್ಕಾರೀ ಪ್ರಥಮ ದರ್ಜೆ ( ಶಿವರಾಮ ಕಾರಂತ) ಕಾಲೇಜ್ ನ ಹಿರಿಯ ಉಪನ್ಯಾಸಕರಾದ ಡಾ.ನರೇಂದ್ರ ರೈ ದೇರ್ಲ ಅವರ ಹೆಸರೂ ಇತ್ತು .ಅವರು ಫೆಲೋ ಶಿಪ್ ಗೆ ಅರ್ಹರೇ!ಆ ಬಗ್ಗೆ ಎರಡು ಮಾತಿಲ್ಲ ಆದರೆ ಸರ್ಕಾರೀ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲವೆಂದಾದ ಮೇಲೆ ಅವರಿಗೆ ಹೇಗೆ ಸಿಕ್ತು ?
ನಾನು ಎಲ್ಲೋ ಮೋಸ ಹೋದ ಬಗ್ಗೆ ತುಸು ವಾಸನೆ ಬಡಿಯಿತು .
ಮತ್ತೆ ರಿಜಿಸ್ಟ್ರಾರ್ ಚಂದ್ರ ಹಾಸ ರೈಗಳಿಗೆ ಫೋನ್ ಮಾಡಿದೆ .ಮತ್ತೆ ಯಥಾ ಪ್ರಕಾರ ಅವರು ಅಧ್ಯಕ್ಷರಾದ ...ಯವರ ಕೈಗೆ ಫೋನ್ ಹಸ್ತಾಂತರಿಸಿದರು !
ಆಗ ಅವರು ಹೇಳಿದರು ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಿದರಂತೆ !ನಾನು ಫೋನ್ ಮಾಡಿದಾಗ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಇತ್ತು ಅಲ್ಲಿ ತನಕ ನಿಯಮ ಬದಲಾವಣೆ ಆಗಿರಲಿಲ್ಲ (ಮಾಡಿರಲಿಲ್ಲ !!!!!) ನಂತರ ಎರಡು ದಿನದಲ್ಲಿ ಬದಲಾವಣೆ ಆಯಿತು ಹಾಗಾದರೆ !
ಕೊಡಲು ಮನಸು ಇಲ್ಲದೇ ಇದ್ದರೆ ನಾನಾ ನೆಪಗಳು ಸಿದ್ಧವಾಗಿರುತ್ತದೆ ಇದನ್ನು ಪ್ರಶ್ನಿಸಿದರೆ ಅದು ಘೋರ ಅಪರಾದ !ಅದು ಜಗಳ ಕಂಟ ತನ ಎಂಬ ಬಿರುದು ಬೇರೆ ಸಿಗುತ್ತದೆ ಅದಕ್ಕೆ ನಾನು ಎಲ್ಲಿ ಯಾವುದೇ ಫೆಲೋಶಿಪ್ ಗೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುದಿಲ್ಲ
ನನ್ನ ಮಿತಿಯಲ್ಲಿ ನನಗೆಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ ..
ಆದರೆ ಜನ ಹೇಗೆಲ್ಲ ಕಾಲು ಎಳೆಯುತ್ತಾರೆ ನಮಗೆ ಗೊತ್ತಿಲ್ಲದೇ ಎಷ್ಟು ಮೋಸ ಹೋಗುತ್ತ್ತೇವೆ ಅಲ್ಲವೆ ಅಂತ ಆಶ್ಚರ್ಯ ಆಗುತ್ತದೆ .
ಇದೆ ರೀತಿ ಇನ್ನೊಂದು ವಿಷಯದಲ್ಲಿ ಮೋಸ ಹೋದದ್ದು ನನಗೆ ನೆನಪಾಗುತ್ತಿದೆ .
ಕೆಲವು ವರ್ಷಗಳ ಹಿಂದೆ ನಾನಾ ಕೆಲವು ಪುಸ್ತಕಗಳನ್ನು ನಾನೇ ಸ್ವಂತ ಪ್ರಕಟಿಸಿದ್ದೆ ,ನಂತರ 2010 ರಲ್ಲಿ ನನಗೆ ಪಿಎಚ್ ಡಿ ಪದವಿ ದೊರೆಯಿತು .
ನನ್ನ ಪಿಎಚ್ ಡಿ ಸಂಶೋಧನಾ ಪ್ರಬಂಧವನ್ನು ಯಾರಾದರೂ ಪ್ರಕಾಶಕರು ಪ್ರಕಟಿಸಿದರೆ ಒಳ್ಳೆಯದಿತ್ತು ಎಂದು ಆಲೋಚಿಸುತ್ತಿದ್ದೆ
ನನಗೆ ಈ ಕ್ಷೇತ್ರದಲ್ಲಿ ಯಾರೂ ಪರಿಚಯ ಇರಲಿಲ್ಲ ,ನನ್ನ ಪರಿಚಿತ ಸಂಶೋಧಕಿ ಒಬ್ಬರ  ಸಂಶೋಧನಾ ಮಹಾ ಪ್ರಬಂಧವನ್ನು ನವ ಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು ನನಗೆ ತಿಳಿದಿತ್ತು
ಹಾಗೆ ಯಾವಾಗಲೋ ಅವರು ಸಿಕ್ಕಾಗ ನವಕರ್ನಾಟಕ ಪುಸ್ತಕ ಪ್ರಕಾಶಕರು ಯಾರು? ಅವರ ನಂಬರ್ ಕೊಡಲು ಸಾಧ್ಯವೇ? ಎಂದು ಕೇಳಿದೆ
ಆಗ ಅವರು ತಕ್ಷಣವೇ "ಅವರಿಗೆ ನನ್ನ ಥಿಸಿಸ್ ಪ್ರಕಟಿಸಿಯೇ ತುಂಬಾ ನಷ್ಟ ಆಯಿತಂತೆ ಅವರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದೇ ಇಲ್ಲ ನನ್ನದನ್ನು ಏನೋ ಪ್ರಕಟಿಸಿದರು ಈಗ ನಷ್ಟ ಆಯಿತು ಇನ್ನು ಯಾರ ಸಂಶೋಧನಾ ಪ್ರಬಂಧ ವನ್ನು ಪ್ರಕಟಿಸುವುದೇ ಇಲ್ಲ ಎಂದು ಹೇಳಿದ್ದಾರೆ "ಎಂದು ಹೇಳಿದರು !ನಾನು ಸತ್ಯ ನಂಬಿದೆ ಇರಬಹುದು ಎಂದು !

ನಂತರ ನನ್ನ ಸಂಪ್ರಬಂಧವನ್ನು ಪ್ರಚೇತ ಬುಕ್ ಪಬ್ಲಿಷರ್ಸ್ ಪ್ರಕಟ ಮಾಡಿದರು ,ಅದು ಸಾಕಷ್ಟು ಯಶಸ್ವಿ ಅಯ್ತಿ ಕೂಡ .ನಷ್ಟ ಆಗಲಿಲ್ಲ ಬದಲಿಗೆ ಲಾಭ ತಂದು ಕೊಟ್ಟಿತ್ ತುಕೂಡ

ಈ ಪುಸ್ತಕವನ್ನು ಅವರು ನವಕರ್ನಾಟಕ ಮಳಿಗೆಗಳಲ್ಲೂ ಮಾರಾಟಕ್ಕೆ ಹಾಕಿದ್ದರು ಅಲ್ಲಿ ಕೂಡ ಸಾಕಷ್ಟು ಪುಸ್ತಕಗಳು ಮಾರಾಟವಾಗಿವೆ .


ಒಂದಿನ ನಾನು ಮಂಗಳೂರಿನ ನವಕರ್ನಾಟಕ ಮಳಿಗೆಗೆ ಹೋದೆ ಆಗ ನನ್ನ ಎದುರಿನಲ್ಲಿಯೇ ಇಬ್ಬರು ನನ್ನ ಪುಸ್ತಕವನ್ನು ಕೇಳಿದರು.ಅಲ್ಲಿ ಪುಸ್ತಕಪ್ರತಿ ಮುಗುದಿತ್ತು .ಆಗ ಅಲ್ಲಿನ ಮ್ಯಾನೇಜರ್ ಅವರು ಮೇಡಂ ನೀವು ಈ ಪುಸ್ತಕವನ್ನು ನಮ್ಮ          ನವ ಕರ್ನಾಟಕ ಪಬ್ಲಿಕೇಶನ್ ನಲ್ಲಿ ಪ್ರಕಟ ಮಾಡಬೇಕಿತ್ತು .ಇದಕ್ಕೆ ಇನ್ನೂ ಹೆಚ್ಚು ವ್ಯಾಲ್ಯೂ ಇರುತ್ತಿತ್ತು ನಿಮ್ಮ ಈ ಪುಸ್ತಕಕ್ಕೆತುಂಬಾ ಬೇಡಿಕೆ ಇದೆ ಎಂದು" ಹೇಳಿದರು ಆಗ ನಾನು ನವ ಕರ್ನಾಟಕ ದವರು ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದಿಲ್ಲವಂತೆ !ಎಂದು ಹೇಳಿದೆ .ಹಾಗೆ ಹೇಳಿದ್ದು ಯಾರು ?ನಿಮಗೆ ಯಾರೋ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ,ನವಕರ್ನಾಟಕ ಪ್ರಕಾಶಕರು ಸಂಶೋಧನಾ ಕೃತಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಹೇಳಿದರು !

ನಾನು ಮತ್ತೆ ಮೋಸ ಹೋಗಿದ್ದೆ !ಏನು ಮಾಡುದು ಹೀಗೆ ಕಾಲೆಳೆಯುವ ಮಂದಿ ಇರುತ್ತಾರೆ..ಏನುಮಾಡುವುದು !ಆದರೂ ತಕ್ಷಣಕ್ಕೆ ತೀರಾ ಸತ್ಯ ಅನಿಸುವ ಹಾಗೆ ಹೇಳಿದಾರಿ ತಪ್ಪಿಸುವ ಉಪಾಯಗಳು ಇವರಿಗೆ ಹೇಗೆ ನೆನಪಾಗುತ್ತವೆ ಅಂತ ಅಚ್ಹ್ಕಾರಿ ಆಗುತ್ತದೆ ಬಹುಶ ಇಂಥವರು ಸದಾ ಇದೆ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಅನಾಯಾಸವಾಗಿ ಇಂಥ ಟ್ರಿಕ್ ಗಳು ಹೊಳೆಯುತ್ತವೆ ಇರಬೇಕು
ಆಲದ ಮರ ಸೊಂಪಾಗಿ ಬೆಳೆದು ಮೃಗ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಬೆಳೆಯಲು ಬಿಡುವುದಿಲ್ಲ ಅಂತೆಯೇ ಅನೇಕರು ಇರುತ್ತಾರೆ .ಇಂಥವರ ನಡುವೆಯೂ ಡಾ.ಅಮೃತ ಸೋಮೇಶ್ವರ ,ಡಾ,ವಾಮನ ನಂದಾವರ ,ಡಾ.ಸುಬ್ಬಣ್ಣ ರೈ ಮೊದಲಾದ ಕೆಲವು ವಿದ್ವಾಂಸರು ತಾವು ಬೆಳೆಯುವುದರೊಂದಿಗೆ ಬೇರೆಯವರನ್ನೂ ಬೆಳೆಸುತ್ತಾರೆ ಅನ್ನುವುದು ಸಂತೋಷದ ವಿಚಾರ
ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 18- ನಾಲ್ಕು ತೆಂಗಿನ ಸಸಿ ನೆಡಬೇಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 18- ನಾಲ್ಕು ತೆಂಗಿನ ಸಸಿ ನೆಡಬೇಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ

ನಾಲ್ಕು ತೆಂಗಿನ‌ಸಸಿ ನೆಡಬೇಕಿತ್ತು.
©ಡಾ ಲಕ್ಷ್ಮೀ ಜಿ ಪ್ರಸಾದ
ಅಂದು2009  ಸೆಪ್ಟೆಂಬರ್ 24 ನೆಯ ತಾರೀಖು, ನನಗೆ ತೀರದ ಸಂಭ್ರಮ. ಹಿಂದಿನ ದಿನವಷ್ಟೇ ಬೆಳ್ಳಾರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕನ್ನಡ ಉಪನ್ಯಾಸಕಿಯಾಗಿ ಪಿಯು ಇಲಾಖೆ ನಿರ್ದೇಶಕರ ಆದೇಶ ಪತ್ರ ದೊರೆತಿತ್ತು .ತುಳು ಸಂಸ್ಕೃತಿ ಯ ಅಧ್ಯಯನ ಕ್ಕಾಗಿ ಬೆಂಗಳೂರು ಸುತ್ತ ಮುತ್ತ ಅವಕಾಶ ಇದ್ದರೂ ಕೂಡ ಬೆಳ್ಳಾರೆಯನ್ನೆ ಅಧ್ಯಯನ ದ ದೃಷ್ಟಿಯಿಂದ ಆಯ್ಕೆ ಮಾಡಿದ್ದೆ .ನನಗೆ ಬೇಕಾದ ಸ್ಥಳದಲ್ಲಿ ಯೇ ಉದ್ಯೋಗ ಅವಕಾಶ ಸಿಕ್ಕಿದ್ದು ತುಂಬಾ ಸಂತಸ ತಂದಿತ್ತು .24 ರ ರಾತ್ರಿ ಎಂಟು ಗಂಟೆಯ ರೈಲಿಗೆ ಟಿಕೆಟ್ ಬುಕ್ ಮಾಡಿಸಿದ್ದೆ ಹಾಗಾಗಿ ಆರು ಗಂಟೆ ವೇಳೆಗೆ ಗಂಟು ಮೂಟೆ ಕಟ್ಟಿಕೊಂಡು ಮೆಜೆಸ್ಟಿಕ್ ಗೆ ಹೊರಟಿದ್ದೆ .ಮೈಸೂರು ಸೆಟಲೈಟ್ ತನಕ ಬಸ್ ಸಿಕ್ಕಿತು ಅಲ್ಲಿಗೆ ತಲುಪುವಷ್ಟರಲ್ಲಿ ಜೋರಾದ ಮಳೆ ರಸ್ತೆ ಇಡೀ ನೀರು ತುಂಬಿ ಹರಿಯತ್ತಿತ್ತು .ಅಟೋಗಳೇ ಇರಲಿಲ್ಲ ಒಂದೆರಡು ಬಂದರೂ ನಿಲ್ಲಿಸಲಿಲ್ಲ ಕೊನೆಗೂ ಒಂದು ಅಟೋ ನಿಂತಿತು ರೈಲ್ವೆ ನಿಲ್ದಾಣ ಬಿಡಲು ಹೇಳಿದೆ ಅರುವತ್ತು ರುಪಾಯಿ ಕೊಡಬೇಕು ಎಂದರು ಅರುವತ್ತೇನು ಆರುನೂರು ಹೇಳಿದ್ದರೂ ಕೊಟ್ಡು ಹೋಗುವ ಅನಿವಾರ್ಯತೆ ನನಗಿತ್ತು ಸುಮಾರು ನಲವತ್ತು ಐವತ್ತು ಮೀಟರ್ ಹಾಕಿದರೂ ಬೀಳುತ್ತಾ ಇತ್ತು ಹಾಗಾಗಿ ಒಪ್ಪಿ ಅಟೋ ಹತ್ತಿದೆ .ಅಟೋ ತುಂಬಾ ಹಳೆಯದಾಗಿತ್ತು ನೀರಿನ ಸೆಳವಿಗೆ ಅಲ್ಲಲ್ಲಿ ಆಫ್ ಆಗುತ್ತಾ ಇತ್ತು ಒಂದೆರಡು ಕಡೆ ಅಟೋವಾಲಾ ಇಳಿದು ಅಟೋ ದೂಡಿ ಸ್ಟಾರ್ಟ್ ಮಾಡಿದ್ದರು .ಆಗಲೇ ನಾನು ಅವರನ್ನು ಗಮನಿಸಿದ್ದು .ಬಿಳಿ ಗಡ್ಡದ ಸುಮಾರು ಎಪ್ಪತ ವಯಸ್ಸಿನ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.ಅಟೋ ಮುಂದೆ ಸಾಗುತ್ತಿದ್ದಂತೆ ಅಟೋ ಹಳತಾಗಿದೆ ಅಮ್ಮ ಹಾಗಾಗಿ ಆಗಾಗ್ಗೆ ಕೈ ಕೊಡುತ್ತಿದೆ ಎಂದು ತಮ್ಮ ಕಷ್ಟ ವನ್ನು ಹೇಳಿಕೊಂಡರು .ಆಗ ನಾನು ನೀವೇಕೆ ಈ ವಯಸ್ಸಿನಲ್ಲಿ ದುಡಿಯುತ್ತೀರಿ ಮಕ್ಕಳಿಗೆ ಕೆಲಸ ಸಿಕ್ಕಿಲ್ಲವೇ ಎಂದು ಕೇಳಿದೆ. ಆಗ ಅವರು ಒಂದು ದೊಡ್ಡ ನಿಟ್ಟುಸಿರು ಬಿಟ್ಟು " ನನಗೆ ನಾಲ್ಕು ಜನ ಗಂಡುಮಕ್ಕಳು ಎಲ್ಲರನ್ನೂ ದುಡಿದು ಅಟೋ ಓಡಿಸುತ್ತಾ ಸಾಲ ಸೋಲ ಮಾಡಿ ಓದಿಸಿದೆ ಎಲ್ಲರೂ ಒಳ್ಳೆಯ ಕೆಲಸದಲ್ಲಿ ಇದ್ದಾರೆ ಆದರೆ ನಾನು‌ಮಾಡಿದ ಸಾಲವನ್ನು ತೀರಿಸಲು ನಾನು ದುಡಿಯುತ್ತಿರುವೆ ಅವರೆಲ್ಲರೂ ಅವರವರ ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದಾರೆ ನನಗೆ ದುಡಿಯದೆ ಬೇರೆ ವಿಧಿಯಿಲ್ಲ ನಾನು ನಾಲ್ಕು ಜನ ಮಕ್ಕಳನ್ನು ಸಾಕುವ ಬದಲು ನಾಲ್ಕು ತೆಂಗಿನ ಸಸಿ ನೆಡುತ್ತಿದ್ದರೆ ಈಗ ದುಡಿದು ಮನೆಗೆ ಹೋದಾಗ ಕುಡಿಯಲು ಎಳನೀರು ಕೊಡುತ್ತಾ ಇದ್ದವು ಎಂದು ಹೇಳಿ ಕಣ್ಣೀರು ಒರಸಿಕೊಂಡರು.ನನ್ನ ಕಣ್ಣಂಚೂ ತೇವವಾಯಿತು ಅಷ್ಟರಲ್ಲಿ ರೈಲ್ವೆ ಸ್ಟೇಷನ್ ತಲುಪಿದೆವು ಇಳಿದು ದುಡ್ಡು ಕೊಟ್ಟು ನನ್ನ ಜಗತ್ತಿಗೆ ಪ್ರವೇಶ ಮಾಡಿದೆ ಇಂದು ಮತ್ತೆ ಇದು ನೆನಪಾಯಿತು ಇದು ಕಲ್ಪನೆಯಲ್ಲ ನಿಜವಾದ ಕಥೆ/ ವ್ಯತೆ ಇದು ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

Monday 4 June 2018

ಬದುಕ ಬಂಡಿಯಲಿ 16 ಕಾಲವನ್ನು ಕಂಡವರಿಲ್ಲ © ಡಾ.ಲಕ್ಷ್ಮೀ ಜಿ ಪ್ರಸಾದ

ಕಾಲವನ್ನು ಕಂಡವರಿಲ್ಲ..ಸಂಪತ್ತು ಅಧಿಕಾರ ಇದ್ದಾಗ ಕೈಲಾದ ಸಹಾಯ ಮಾಡಬೇಕು..ಏನಂತೀರಿ?
- ಡಾ.ಲಕ್ಷ್ಮೀ ಜಿ ಪ್ರಸಾದ

ಇಂದು ಉತ್ತರ ಪತ್ರಿಕೆ ತಿದ್ದುತ್ತಾ ಬಿಗ್ ಬಾಸ್  ಅಂತಿಮ ಕಾರ್ಯಕ್ರಮ ನೋಡುತ್ತಾ ಇದ್ದೆ.ಅದರಲ್ಲಿ ಗೆದ್ದವರಿಗೆ 50 ಲಕ್ಷ ರು ಬಹುಮಾನ ಅಂತ ಗೊತ್ತಾಯಿತು. ಅಲ್ಲಿ ಅಂತಿಮವಾಗಿ ಆಯ್ಕೆಯಾದ ಇಬ್ಬರಲ್ಲಿ ಒಬ್ಬರಾದ ದಿವಾಕರ್ ಅವರಿಗೆ ಇದು ದೊಡ್ಡ ಕೊಡುಗೆಯೇ ಅಗಬಲ್ಲದು. ಆದರೆ ಬಿಗ್ ಬಾಸ್ ಎಂಬುದು ಒಂದು ವ್ಯಕ್ತಿತ್ವದ ಸ್ಪರ್ಧೆ.ಅದರಲ್ಲಿ ಯಾರು ಉತ್ತಮವಾಗಿ ನಿರ್ವಹಣೆ ಮಾಡಿರುತ್ತಾರೋ ಅವರೇ ಗೆಲ್ಲಬೇಕು.ಸ್ಪರ್ಧೆಯಲ್ಲಿ ಸ್ಪರ್ಧಿಯ ಹಿನ್ನೆಲೆ ಮುಖ್ಯವಾಗಬಾರದು.
ಬಹುಶಃ ಚಂದನ್ ಶೆಟ್ಟಿ ನಿರ್ವಹಣೆ ಚೆನ್ನಾಗಿದ್ದಿರ ಬೇಕು( ನಾನು ಒಂದೇ ಒಂದು ಎಪಿಸೋಡ್ ಕೂಡ ನೋಡಿಲ್ಲ, ಈವತ್ತು ಮಾತ್ರ ನೋಡಿದ್ದು ) ಹಾಗಾಗಿ ಚಂದನ್ ಶೆಟ್ಟಿ ಗೆದ್ದಿದ್ದಾರೆ.
ವಿನ್ನರ್ ಗೆ 50 ಲಕ್ಷ ರುಪಾಯಿ ಬಹುಮಾನ ಇದ್ದಾಗ ರನ್ನರ್ ಗೆ ಕನಿಷ್ಠ ಪಕ್ಷ 25 ಲಕ್ಷ ರುಪಾಯಿ ನಗದು ಬಹುಮಾನ ಇಡಬೇಕಿತ್ತು ಎಂದೆನಿಸಿತು ನನಗೆ.ಮತ್ತು ದಿವಾಕರ್ ಗೆ ಅದು ಆರ್ಥಿಕ ಬಲವಾಗಿ ಬಿಗ್ ಬಾಸ್ ಗೆ ಬಂದದ್ದಕ್ಕೆ ಒಂದು ಕೊಡುಗೆಯಾಗಿರುತ್ತಿತ್ತು.
ಅದಿರಲಿ
ನಾನು ಹೇಳ ಹೊರಟಿದ್ದು ಅದಲ್ಲ .ಸುಮಾರು ಹದಿನೈದು ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ವನ್ನು ಅಮಿತಾ ಬಚ್ಚನ್ ನಡೆಸಿಕೊಡುತ್ತಾ ಇದ್ದರು.ಅದರಲ್ಲಿ ಒಬ್ಬ   ಮನೆ ಮನೆಗೆ  ಬಟ್ಟೆಯ ವ್ಯಾಪಾರಿ( ಕಟ್ಟನ್ನು ಹೊತ್ತುಕೊಂಡು ಹೋಗಿ ವ್ಯಾಪಾರ ಮಾಡುವ ವ್ಯಕ್ತಿ ಎಂದು ನೆನಪು)  14 ಪ್ರಶ್ನೆಗಳಿಗೆ ಉತ್ತರಿಸಿ 50 ಲಕ್ಷ ಗೆದ್ದಿದ್ದರು.15 ನೇ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹೊರಬಂದರೆ 50 ಲಕ್ಷ ರುಪಾಯಿ ಅವರಿಗೆ ಸಿಗುತ್ತದೆ.15 ನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿದರೆ ಅವರಿಗೆ ಕೇವಲ 3.50 ಲಕ್ಷ ಮಾತ್ರ ಸಿಗುತ್ತದೆ. ಈ ಹಂತದಲ್ಲಿ ಅವರಿಗೆ ಹದಿನೈದನೇ ಪ್ರಶ್ನೆಯನ್ನು ಕೇಳಿದರು.ಇವರು ಏನನ್ನೋ ಉತ್ತರಿಸಿದರು‌.ಅದನ್ನು ನಿಶ್ಚಿತ ಗೊಳಿಸುವ ಮೊದಲು ಅಮಿತಾ ಬಚ್ಚನ್ ಅವರು ಈಗ ಕೂಡ ನಿಮಗೆ ಸ್ಪರ್ಧೆಯಿಂದ ಹೊರಬಂದು 50 ಲಕ್ಷ ರುಪಾಯಿ ಪಡೆದುಕೊಳ್ಳಬಹುದು.ಸ್ಪರ್ಧೆಯಲ್ಲಿ ಮುಮದುವರಿದರೆ ಉತ್ತರ ಸರಿಯಾಗಿದ್ದರೆ ಮಾತ್ರ ಒಂದು ಕೋಟಿ ರುಪಾಯಿ ಸಿಗುತ್ತದೆ. ಉತ್ತರ ತಪ್ಪಾದರೆ  ಕೇವಲ ಮೂರೂವರೆ ಲಕ್ಷ ಮಾತ್ರ ಸಿಗುತ್ತದೆ. ಒಮ್ಮೆ ಆಲೋಚಿಸಿ ನೋಡಿ ಎಂದು ನುಡಿದರು.ಆಗ ಆ ಸ್ಪರ್ಧಿ ಸ್ಪರ್ದೆಯಿಂದ ಹೊರ ಸರಿದರು.ನಂತರ ಅವರು ಕೊಟ್ಟ ಉತ್ತರ ಸರಿಯಿದೆಯೇ ಎಂದು ನೋಡಿದಾಗ ಅದು ತಪ್ಪಾಗಿತ್ತು‌.ಒಂದೊಮ್ಮೆ ಅವರು ಸ್ಪರ್ಧೆಯಿಂದ ಹಿಂದೆ ಸರಿಯದೆ ಇರುತ್ತದ್ದರೆ ಅವರು 46.5 ಲಕ್ಷ ರುಪಾಯಿ ಗಳನ್ನು ಕಳೆದುಕೊಳ್ಳುತ್ತಿದ್ದರು.ಅಮಿತಾಭ್ ಸಲಹೆಯನ್ನು ಸ್ವೀಕರಿಸಿ ಅವರು 50 ಲಕ್ಷ ರುಪಾಯಿಗಳನ್ನು ಪಡೆದುಕೊಂಡಿದ್ದರು.ಆಗ ಅವರು ಮತ್ತು ಅವರ ಮಡದಿ ವೇದಿಕೆಯಲ್ಲಿ ಅಮಿತಾಭ್ ಕಾಲು ಮುಟ್ಟಿ ನಮಸ್ಕರಿಸಿದ್ದರು.
ಈ ಬಗ್ಗೆ ಮರುದಿನ ಚಿನ್ನಯ ಶಾಲೆಯಲ್ಲಿ ( ಆಗ ನಾನು ಅಲ್ಲಿ ಸಂಸ್ಕೃತ ಶಿಕ್ಷಕಿ ಆಗಿದ್ದೆ) ನಾನು, ನಮ್ಮ ಗಣಿತದ ಮೇಷ್ಟ್ರು ಕೃಷ್ಣ ಉಪಾಧ್ಯಾಯ ಮೊದಲಾದವರು ಚರ್ಚಿಸಿದೆವು‌ಅವರಿಗೆ ಅಷ್ಟು ದೊಡ್ಡ ಮೊತ್ತವನ್ನು ಉಳಿಸಿಕೊಟ್ಟ,ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಹಿರಿಯರಾದ ಅಮಿತಾ ಬಚ್ಚನ್ ಕಾಲಿಗೆ ಬಿದ್ದು ನಮಸ್ಕರಿಸಿದ್ದರಲ್ಲಿ ನನಗೇನೂ ತಪ್ಪು ಕಂಡಿಲ್ಲ ಎಂದು ಹೇಳಿದೆ.ಆಗ 50 ಲಕ್ಷ ರುಪಾಯಿ ಎಂದರೆ ನನ್ನ ಜೀವಮಾನ ದುಡಿದರೂ ನನಗೆ ಅಷ್ಟು ದೊಡ್ಡ ಮೊತ್ತ ಗಳಿಸಲು ಅಸಾಧ್ಯ ಎಂದು ನಾನು ಭಾವಿಸಿದ್ದೆ.ಅದನ್ನು ಪಕ್ಕದಲ್ಲೇ ಕುಳಿತಿದ್ದ ಕೃಷ್ಣ ಉಪಾಧ್ಯಾಯರಲ್ಲೂ ಹೇಳಿದ್ದೆ.ಆಗ ಅವರು ಕೂಡ ಅದನ್ನು ಹೌದೆಂದು ಒಪ್ಪಿಕೊಂಡಿದ್ದರು‌.ಆಗ ನನ್ನ ತಿಂಗಳ ಸಂಬಳ ಮೂರು ಸಾವಿರ ಇತ್ತು.ವರ್ಷಕ್ಕೆ ಮೂವತ್ತಾರು ಸಾವಿರ. ಅದರಂತೆ ಮೂವತ್ತು ವರ್ಷಗಳ ಕಾಲ ದುಡಿದರೆ ಸುಮಾರು ಹತ್ತು ಹನ್ನೊಂದು ಲಕ್ಷ ರುಪಾಯಿ ಅಗುತ್ತಾ ಇತ್ತು‌ಹಾಗಾಗಿ ಐವತ್ತು ಲಕ್ಷದ ದುಡ್ಡನ್ನು ಊಹೆ ಮಾಡುವುದೂ ನಮಗೆ ಅಸಾಧ್ಯ ಆಗಿತ್ತು.
ಆದರೆ ಕಾಲ ಒಂದೇ ರೀತಿ ಇರುವುದಿಲ್ಲ. ಪ್ರಸ್ತುತ ನನ್ನ ವೇತನ ಲೆಕ್ಕ ಹಾಕಿದರೆ  ಏಳೆಂಟು ವರ್ಷದಲ್ಲಿ  50 ಲಕ್ಷ ತಲುಪಬಹುದು. ನಿವೃತ್ತಿ ಆಗುವ ತನಕದ ವೇತನ ಒಟ್ಟು  ಲೆಕ್ಕ ಹಾಕಿದರೆ ಒಂದು ಎರಡು ಕೋಟಿ ಆಗಬಹುದು.ಈಗಾಗಲೇ ನಾನು ಗಳಿಸಿದ ವೇತನ ಲೆಕ್ಕ ಹಾಕಿದರೆ ಒಟ್ಟು ಮೊತ್ತ ಮೂವತ್ತು ಲಕ್ಷ ದಷ್ಟು ಆಗಿರಬಹುದು .ಹಾಗಂತ ಅದ್ಯಾವುದೂ ಉಳಿದಿಲ್ಲ .ಅದು ಬೇರೆ ವಿಚಾರ.
ಈಗ ಕೃಷ್ಣ ಉಪಾಧ್ಯಾಯರು ಮಂಗಳೂರಿನ ಮಧುಸೂದನ ಕುಶೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ನನಗಿಂತ ಹೆಚ್ಚಿನ ವೇತನ ಅವರಿಗಿರಬಹುದು .ದಿವಾಕರ್ ಕೂಡ ಮುಂದೊಂದು ದಿನ ಕೋಟ್ಯಧೀಶ ಆಗಬಹುದು.
ಹಾಗಾಗಿ ಒಂದು ಮಾತು ಹೇಳಬಯಸುವೆ.ಕಾಲವನ್ನು ಕಂಡವರಿಲ್ಲ ಆಳು ಅರಸಾಗಬಹುದು.ಅರಸ ಆಳಾಗಬಹುದು.ದುಡ್ಡು ಅಧಿಕಾರ ಶಾಶ್ವತವಲ್ಲ.ಇವುಗಳು ಇದ್ದಾಗ ನಾಲ್ಕು ಜನರಿಗೆ ಕೈಲಾದ ಸಹಾಯ ಮಾಡಬೇಕು. ಕೊಡುವುದರಲ್ಲಿ ಕೂಡ ತೃಪ್ತಿ ಕಾಣಬೇಕು.ಆಗಲೇ ಬದುಕಿಗೊಂದು ಸಾರ್ಥಕತೆ ಉಂಟಾಗುತ್ತದೆ
ಕಾಲ ಒಂದೇ ತರನಾಗಿ ಇರುವುದಿಲ್ಲ. ನಾನು ಚಿನ್ಮಯ ಶಾಲೆ ಶಿಕ್ಷಕಿ ಆಗಿದ್ದಾಗ ಮಂಗಳೂರು ಸಂಸ್ಕೃತ ಸಂಘ ಮಂಗಳೂರಿನ ಶಾಲಾ ಕಾಲೇಜು ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿದ್ದೆವು.ಆಗ ಸಂಸ್ಕೃತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬಂದಿದ್ದರು.ಅವರೆಲ್ಲ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದವರು‌.ನಾನೋರ್ವ ರ‌್ಯಾಂಕ್ ವಿಜೇತೆ ಆಗಿದ್ದರೂ ಖಾಸಗಿ ಶಾಲೆಯಲ್ಲಿ ಪುಡಿಕಾಸಿಗಾಗಿ ದುಡಿಯುತ್ತಾ ಇದ್ದೇನೆ ಎಂಬ ಕೀಳರಿಮೆ ನನ್ನಲ್ಲಿ ಇತ್ತು ಎಂದು ಕಾಣಿಸುತ್ತದೆ.ಬಂದ ಪದಾಧಿಕಾರಿಗಳು ಯಾರೂ ನನ್ನನ್ನು ಕೀಳಾಗಿ ಕಂಡಿಲ್ಲ ಆದರೂ ಅವರಲ್ಲಿ ಮಾತನಾಡುವಾಗ ನಾನು ತುಂಬಾ ತೊದಲುತ್ತಾ ಇದ್ದೆ.ಶಬ್ದಗಳು ಸಿಗದೆ ತಡವರಿಸಿ ಏನೇನೋ ಹೇಳುತ್ತಾ ಇದ್ದೆ.ಆಗ ಸಂಸ್ಕೃತ ಸಂಘದ ಅಧ್ಯಕ್ಷರಾಗಿ ಇದ್ದವರು( ಅವರ ಹೆಸರು ವಾಸುದೇವ ರಾವ್ ಎಂದು ನೆನಪು) ಯಾರೋ ಒಬ್ಬ ಪ್ರೊಫೆಸರ್ ಹೆಸರು ಹೇಳಿ ಅವರು ಕೂಡ ನನ್ನ ಹಾಗೆ ತೊದಲುತ್ತಾ ಮಾತಾಡುತ್ತಾರೆಂದು ಹೇಳಿದ್ದರು.
ನಾನು ಶಾಲಾ ದಿನಗಳಲ್ಲಿಯೇ ನಾಟಕ ಏಕಪಾತ್ರಾಭಿನಯ,ಭಾಷಣಗಳಲ್ಲಿ ರಾಜ್ಯ ಮಟ್ಟದ ಬಹುಮಾನ ಪಡೆದವಳು.ಒಳ್ಳೆಯ ಮಾತುಗಾತಿ ಎಂದು ಕೂಡ ಹೆಸರು ಪಡೆದಿದ್ದೆ.ಉತ್ತಮ ಕಾರ್ಯಕ್ರಮ ನಿರೂಪಕಿಯಾಗಿಯೂ ಹೆಸರಿತ್ತು.ಆದರೆ ಅದೇ ವರ್ಷದ ಸಂಸ್ಕೃತ ಸಂಘದ ವಾರ್ಷಿಕೋತ್ಸವದ ನಿರೂಪಣೆಯ ಜವಾಬ್ದಾರಿ ನನಗೆ ನೀಡಿದ್ದು ಹಲವಾರು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಸಂಸ್ಕೃತ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ನಾನು ನಿರೂಪಣೆ ಮಾಡುವಾಗ ಮತ್ತೆ ಮಾತಿಗೆ ಶಬ್ದಗಳು ಸಿಗದೆ ತೊಳಲಾಡಿದ್ದೆ.ಮೊದಲು ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಆಗಿದ್ದು ಮಗ ಹುಟ್ಟಿದಾಗ ಬೇರೆ ದಾರಿ ಇಲ್ಲದೆ ಅಲ್ಲಿ ಕೆಲಸ ಬಿಟ್ಟಿದ್ದೆ.ಮಗನಿಗೆ ಒಂದು ವರ್ಷವಾದಾಗ ಮತ್ತೆ ನಮ್ಮ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿ ಕೆಲಸಕ್ಕೆ ಹೋಗಬೇಕಾಯಿತು. ಆಗ ಚಿನ್ಮಯ ಪ್ರೌಢಶಾಲೆ ಯಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆ ದೊರೆತಿತ್ತು.ನಂತರ ಒಂದೆರಡು ವರ್ಷಗಳಲ್ಲಿ ಮತ್ತೆ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆ ಖಾಲಿಯಿದ್ದು ,ಪ್ರಾಂಶುಪಾಲರಾದ ಸ್ವಿಬರ್ಟ್ ಡಿಸಿಲ್ವಾ ಅವರು ಫೋನ್ ಮಾಡಿ ಕರೆಸಿ ಸಂಸ್ಕೃತ ಉಪನ್ಯಾಸಕ ಹುದ್ದೆಯನ್ನು ನೀಡಿದರು.ಅಲ್ಲಿ ಮತ್ತೆ ಒಂದು ವರ್ಷ ಕೆಲಸ ಮಾಡುವಷ್ಟರಲ್ಲಿ ಪ್ರಸಾದ್ ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ತು .ಹಾಗಾಗಿ ನಾನು ಅಲೋಶಿಯಸ್ ಕಾಲೇಜು ಉಪನ್ಯಾಸಕ ಹುದ್ದೆಯನ್ನು ಬಿಟ್ಟು ಬೆಂಗಳೂರಿಗೆ ಬಂದೆ.ಆದರೆ ಇಲ್ಲಿ ನನ್ನ ಅರ್ಹತೆಗೆ ಅನುಗುಣವಾಗಿ ಉಪನ್ಯಾಸಕ ಹುದ್ದೆ ಸಿಕ್ಕಿದ ಕಾರಣ ಸಮಸ್ಯೆಯಾಗಲಿಲ್ಲ.ನಂತರ ಸರ್ಕಾರಿ ಹುದ್ದೆಯೂ ದೊರೆಯಿತು.ನನ್ನ ಅಧ್ಯಯನವನ್ನು ಜನರು ಗುರುತಿಸಿದರು‌.ದೇಶದ ಎಲ್ಲೆಡೆಗಳಿಂದ ಉಪನ್ಯಾಸ ನೀಡಲು ಆಹ್ವಾನಿಸುತ್ತಾರೆ‌.ಇಂದು ಲಕ್ಷ ಜನರು ಸೇರಿದ ವೇದಿಕೆಯಲ್ಲಿ ಕೂಡ ಯಾವುದೇ ಅಳುಕಿಲ್ಲದೆ ನಿರರ್ಗಳವಾಗಿ ಉಪನ್ಯಾಸ ನೀಡುತ್ತೇನೆ.
ಕೆಲವೊಮ್ಮೆ ಸಮಯ ಕಡಿಮೆ ಇದ್ದಾಗ ಸಂಘಟಕರು ವಿಷಯವನ್ನು ಮೊಟಕು ಗಲಿಸಲು ಸೂಚಿಸುತ್ತಾರೆ‌ ಅದರಮತೆ ನಾನು ನಿಲ್ಲಿಸಿದಾಗ ಸಭಾಸದರು ಮಾತು ಮುಂದುವರಿಸಿ ಎಂದು ಹೇಳಿ ಅವರುಗಳ ಕೋರಿಕೆಗೆ ಸಂಘಟಕರು ನನ್ನಲ್ಲಿ ಪೂರ್ತಿಯಾಗಿ ಮಾತಾಡುವಂತೆ ಹೇಳಿದ ಸಂದರ್ಭಗಳೂ ಇವೆ. ಕಳೆದ ವರ್ಷ ಕಂಬಳ ಪರವಾದ ಪ್ರತಿಭಟನಾ ಸಭೆಯಲ್ಲಿ ನಾನು ಮಾತು ನಿಲ್ಲಿಸ ಹೋದಾಗ ಜನರು ಪೂರ್ತಿಯಾಗಿ ಹೇಳಿ ಎಂದು ವಿನಂತಿಸಿ ಮಾತು ಮುಂದುವರಿಸಿದ್ದೆ.   ಆದರೆ ಅಂದೇಕೆ  ಸಂಸ್ಕೃತ ಸಂಘದ ವಾರ್ಷಿಕೋತ್ಸವದ ನಿರೂಪಣೆಯಲ್ಲಿ ಹಾಗೇಕೆ ತಡವರಿಸಿದೆ ? ಕೀಳರಿಮೆ ಅಷ್ಟೊಂದು ಪ್ರಭಾವ ಬೀರಿತ್ತಾ ಆಶ್ಚರ್ಯ ಆಗುತ್ತಿದೆ ಈಗ‌
ಅದಕ್ಕೆ ಹೇಳುವುದು ಕಾಲ ಒಂದೇ ರೀತಿ ಇರುವುದಿಲ್ಲ ಎಂದು. ಎಲ್ಲರಿಗೂ ಒಂದಲ್ಲ ಒಂದು ದಿನ ಒಳ್ಳೆಯ ಕಾಲ ಬಂದೇ ಬರುತ್ತದೆ ‌ಆದರೆ ಅದಕ್ಕಾಗಿ ನಿರಂತರವಾದ ಅಧ್ಯಯನ, ಪರಿಶ್ರಮ ಅತ್ಯಗತ್ಯ.- ಡಾ.ಲಕ್ಷ್ಮೀ ಜಿ ಪ್ರಸಾದ


http://shikshanaloka.blogspot.in/2018/01/blog-post.html?m=1

Sunday 3 June 2018

ಬದುಕ ಬಂಡಿಯಲಿ 15 ಇಪ್ಪತ್ತರ ಬದಲು ಐವತ್ತರ ಗುರಿ ನೀಡಬೇಕಾಗಿತ್ತು ಛೆ! ©ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 15 ಇಪ್ಪತ್ತರ ಬದಲು ಐವತ್ತರ ಗುರಿ ನೀಡಬೇಕಾಗಿತ್ತು ಛೆ! ©ಡಾ.ಲಕ್ಷ್ಮೀ ಜಿ ಪ್ರಸಾದ

ಇಪ್ಪತ್ತರ ಬದಲು ಐವತ್ತರ ಗುರಿ ನೀಡಬೇಕಾಗಿತ್ತು ಛೆ! ಹೌದು ಈ ಮಾತನ್ನು ನಾನು ಸಾವಿರಕ್ಕೂ ಬಾರಿ ಮನಸಿನಲ್ಲೇ ಅಂದುಕೊಂಡಿದ್ದೇನೆ ..ಏನು ಇಪ್ಪತ್ತು ಯಾವ ಐವತ್ತು ಎಂದು ಕುತೂಹಲ ಇದೆಯೇ <ಹಾಗಾದರೆ ಮುಂದೆ ಓದಿ..

ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ತುಳು ಸಂಸ್ಕೃತಿ ಜನಪದದ ಕಡೆಗೆ ಆಸಕ್ತಳಾದೆ,ಹಾಗಾಗಿಯೇ ನಾನು ಎಂ ಫಿಲ್ ಪದವಿಯನ್ನು ಈಜೋ ಮಂಜೊಟ್ಟಿಗೋಣ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ಪಡೆದೆ .
ಇದು ಗದ್ದೆಯಲ್ಲಿ ಆರಾಧನೆ ಗೊಳ್ಳುವ ಉರವ ಮತ್ತು ಎರು ಬಂಟ ಎಂಬ ದೈವಗಳಿಗೆ ಸಂಬಂಧಿಸಿದ್ದು.

ನನ್ನ ತಂದೆ ಮನೆ ಕೋಳ್ಯೂರು ದೇವರ ಕಂಬಳ ಗದ್ದೆಯಲ್ಲಿ ಪ್ರತಿವರ್ಷ ಪೂಕರೆ ಆಗುತ್ತದೆ.ಅಲ್ಲಿ ಆಗ ಭೂತ ಕೋಲ ಕೂಡ ಆಗುತ್ತಾ ಇತ್ತು.ಅಲ್ಲಿ ಆರಾಧನೆ ಹೊಂದುವ ಎರಡು ಭೂತಗಳು ಯಾರು ಎಂದು ಹೆಸರು ಕೂಡ ನಮಗೆ ಗೊತ್ತಿರಲಿಲ್ಲ .
ನಾನು ನನ್ನ ಎಂ ಫಿಲ್ ಥೀಸಿಸ್ ಗಾಗಿಯೇ ಅಲ್ಲಿ ಮೊದಲಿಗೆ ಭೂತ ಕೊಳವನ್ನು ರೆಕಾರ್ಡ್ ಮಾಡಿ ಮಾಹಿತಿ ಸಂಗ್ರಹಿಸಿದೆ.
ಅಲ್ಲಿ ಭೂತ ಕಟ್ಟುವ ಅಪ್ಪಣ್ಣ ಅವರು ಅದು ಉರವ ಮತ್ತು ಎರು ಬಂಟ ಭೂತಗಳು ಎಂದು ತಿಳಿಸಿದರು.ಆದರೆ ಆ ದೈವಗಳ ಹಿನ್ನೆಲೆಯಾಗಲಿ ಕಥನವಾಗಲಿ ಅವರಿಗೆ ತಿಳಿದಿರಲಿಲ್ಲ.ಹಾಗಾಗಿ ನಾನು ತುಳು ವಿದ್ವಾಂಸರ ಸಂಶೋಧನಾ ಕೃತಿಗಳಲ್ಲಿ ಈ ದೈವಗಳ ಬಗ್ಗೆ ಮಾಹಿತಿಗಾಗಿ ಹುಡುಕಾಡಿದೆ .
ಆಗ ನನಗೆ ಒಂದು ಅಚ್ಚರಿ ಕಾದಿತ್ತು ,ಆ ಎರಡು ದೈವಗಳ ಹೆಸರು ಕೂಡ ವಿದ್ವಾಂಸರ ತುಳುನಾಡಿನ ಭೂತಗಳ ಪಟ್ಟಿಯಲ್ಲಿ ದಾಖಲಾಗಿರಲಿಲ್ಲ !ಆಗ ಮೊದಲ ಬಾರಿಗೆ ನನಗೆ ಇನ್ನು ಕೂಡ ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡುವ ವಿಚಾರಗಳು ತುಂಬಾ ಇವೆ ,ಈ ದೈವಗಳಂತೆ ಇನ್ನೂ ಕೂಡ ನೆಕ ದೈವಗಳ ಹೆಸರು ಕೂಡ ಸಂಗ್ರಹ ಆಗಿರಲಿಕ್ಕಿಲ್ಲ ಎಂದು ಮನವರಿಕೆಯಾಯಿತು .
ಮುಂದೆ ಎಂ ಫಿಲ್ ಅನಂತರ ಡಾಕ್ಟರೇಟ್ ಗಾಗಿ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರ ಕಾರ್ಯಕ್ಕಾಗಿ ತುಳುನಾಡಿನಾದ್ಯಂತ ಅಲೆದಾಡಿದೆ .ಆಗೆಲ್ಲ ಈ ತನಕ್ ಅಧ್ಯಯನವಾಗದ ಹೆಸರು ಕೂಡ ದಾಖಲಾಗದ ಅನೇಕ ದೈವಗಳ ಹೆಸರು ಸಿಕ್ಕಿದ್ದು ,ಈ ಬಗ್ಗೆ ಎಂದಾದರೂ samagra ಮಾಹಿತಿ ಸಂಗ್ರಹಿಸಬೇಕು ಎಂದು ಕೊಂಡಿದ್ದೆ .ಆಗ ನನ್ನ ಪಿಎಚ್ ಡಿ ಥೀಸಿಸ್ ಕಡೆಗೆ ಹೆಚ್ಚು ಗಮನ ಕೊಡಬೇಕಾದ ಅನಿವಾರ್ಯತೆ ಇದ್ದ ಕಾರಣ ಇಂಥ ದೈವಗಳ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ .ಆದರೆ ಎಂದಾದರೂ ಈ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಹಂಬಲವಿತ್ತು .
2009 ರಲ್ಲಿ ನಾನು ಪದವಿ ಪೂರ್ವ ಕಾಲೇಜ್ ಉಪನ್ಯಾಸಕಿಯಾಗಿ ಆಯ್ಕೆಯಾದಾಗ ನನ್ನ ಹಂಬಲ ಮತ್ತೆ ಗರಿಗೆದರಿತು .ಹಾಗಾಗಿಯೇ ನಾನು ಬೆಳ್ಳಾರೆ ಯನ್ನು ಆಯ್ಕೆಮಾಡಿಕೊಂಡು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೆ ಕನ್ನಡ ಉಪನ್ಯಾಸಕಿಯಾಗಿ ಹೋದೆ .
ಅಲ್ಲಿಗೆ ಹೋದ ತುಸು ಸಮಯದಲ್ಲಿಯೇ ನನಗೆ ನನ್ನ ಮೊದಲ ಡಾಕ್ಟರೆಟ್ ಪದವಿ ಸಿಕ್ಕಿತು .
ಅದೇ ಸಮಯದಲ್ಲಿಯೇ(2010 ಫೆಬ್ರುವರಿ ತಿಂಗಳಲ್ಲಿ ಎಂದು ನೆನಪು )ಕರ್ಣಾಟಕ ತುಳು ಅಕಾಡೆಮಿ ಯು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಮ್ಮ ಬೆಳ್ಳಾರೆ ಕಾಲೇಜ್ ನಲ್ಲಿ ತುಳು ಮಿನದನ ಎಂಬ ಸುಳ್ಯ ತಾಲೂಕು ಮಟ್ಟದ ಕಾರ್ಯಕ್ರಮ ಏರ್ಪಡಿಸಿತು .
ಅದಾಗಲೇ ನಾನು ಸ್ಥಳಿಯರಿಗೆ  ಮಾತ್ರವಲ್ಲ ತುಳು ವಿದ್ವಾಂಸರ ಅರಿವಿಗೆ ಬಾರದೆ ಇದ್ದ ಬೆಳ್ಳಾರೆ ಸುತ್ತ ಮುತ್ತಲಿನ ಅಜ್ಜಿ ಭೂತ ,ಮೂವ,ಮಾಲಿಂಗರಾಯ,ದಾಲ್ಸುರಾಯ,ಅಡ್ಯಂತಾಯ ,ಕುಕ್ಕೆತ್ತಿ ಬಳ್ಳು ಮೊದಲಾದ ಅಪರೂಪದ ದೈವಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದೆ .ಅದನ್ನು ಬೆಳ್ಳಾರೆಯ ಜನತೆಗೆ ತಿಳಿಸಲು ಹಾಗೂ ಈ ರೀತಿಯ ಅಲಕ್ಷಿತ ಅಪರೂಪದ ಉಪದೈವಗಳ ಅಧ್ಯಯನ ಮಾಡುವಂತೆ ಪ್ರೇರೇಪಿಸಲು ಇದು ಸರಿಯಾದ ಸರಿಯಾದ ಅವಕಾಶ ಎಂದು ಅರಿತ ನಾನು ಆ ಕಾರ್ಯಕ್ರಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತುಳು ನಾಡಿನ ಬಹುಶ್ರುತ ವಿದ್ವಾಂಸರೂ ನನಗೆ ಸಂಶೋಧನೆಗೆ ಪ್ರೇರಣೆ ಕೊಟ್ಟು ಮಾರ್ಗ ದರ್ಶನ ಮಾಡಿರುವ ನನ್ನ ಆತ್ಮೀಯರೂ ಆಗಿದ್ದ ಡಾ.ಅಮೃತ ಸೋಮೇಶ್ವರ ಅವರಲ್ಲಿ "ನನಗೆ ಒಂದು ಪ್ರಬಂಧ ಮಂಡನೆಗೆ ಅವಕಾಶವನ್ನು ಕೊಡುವಂತೆ ಕೇಳಿದೆ .
ಆಗ ಅವರು ತುಳು ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು .
ಮರುದಿವಸ ನಾನು ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಫೋನ್ ಮಾಡಿದೆ .ಆಗ ಅವರು ನಿಮ್ಮನ್ನು ಕವಿ ಗೋಷ್ಠಿಗೆ ಹಾಕಿದ್ದೇವೆ ಎಂದರು !
ನನಗೆ ಹೃದಯಘಾತ ಆಗಲು ಸ್ವಲ್ಪ  ಮಾತ್ರ ಬಾಕಿ ಇತ್ತು ,ಅಷ್ಟು ಗಾಬರಿಯಾದೆ !ಯಾಕೆಂದರೆ ನನಗೆ ಮಾತೃ ಭಾಷೆ ಕನ್ನಡದಲ್ಲಿಯೇ  ಕವಿತೆ ಬರೆಯಲು ತಿಳಿದಿಲ್ಲ !ಇನ್ನು ತುಳುವಿನಲ್ಲಿ ..!
ಅಂತೂ ಹೇಗೋ ಸುಧಾರಿಸಿಕೊಂಡು ನನಗೆ ಕವಿ ಗೋಷ್ಠಿ ಬೇಡ ,ನನಗೆ ವಿಚಾರ ಗೋಷ್ಠಿಯಲ್ಲಿ ಅವಕಾಶ ಕೊಡಿ ಎಂದು ಕೇಳಿದೆ .
ಆಗ ಅವರು ಕೊಟ್ಟದ್ದನ್ನು ಮಾಡಬೇಕು ಎಂದು ಹೇಳಿದರು !ಅಯ್ಯೋ ದೇವರೇ ಇವರು ತುಳು ಮಿನದನ ಮಾಡುತ್ತಿದ್ದಾರೆಂದು ನಾನು ಇದ್ದಕ್ಕಿದ್ದಂತೆ ಕವಿಯಾಗಲು ಸಾಧ್ಯವೇ !
ಅದಾಗದು ಎಂದು ಹೇಳಿದೆ .ನೀವು ಅವಕಾಶ ಕೊಡುವುದಾದರೆ ವಿಚಾರ ಸಂಕಿರಣದಲ್ಲಿ ಕೊಡಿ ಎಂದು ಹೇಳಿದೆ .
ಆಗ ಅವರು ಅದರಲ್ಲಿ ವಿಚಾರ ಸಂಕಿರಣದಲ್ಲಿ ಸ್ಥಳಿಯರಿಗೆ ಅವಕಾಶವಿಲ್ಲ ಎಂದು ಹೇಳಿದರು !

ಹೀಗೂ ಉಂಟೆ ?ತುಳು ಭಾಷೆ ಸಂಸ್ಕೃತಿ ಜಾನಪದ ಗಳ ಅಭಿವೃದ್ಧಿಗೆಂದೇ ಸ್ಥಾಪಿತವಾದ ತುಳು ಅಕಾಡೆಮಿ ಯ ಅಧ್ಯಕ್ಷರು ಸ್ಥಳಿಯರಿಗೆ ಅವಕಾಶ ಇಲ್ಲವೆಂದು ಹೇಳಿದರೆ ಅದಕ್ಕೆ ಅರ್ಥವಿದೆಯೇ ?

ನನಗೂ ಛಲ ಬಂತು !ಆ ಕಾರ್ಯಕ್ರಮದಲ್ಲಿ ಸ್ಥಳೀಯ ವಿದ್ವಾಂಸರಾದ ಡಾ.ನರೇಂದ್ರ ರೈ ದೇರ್ಲರು ಇದ್ದಿದ್ದು ನನಗೆ ಗೊತ್ತಿತ್ತು .ಹಾಗಾಗಿ ನಾನು ನರೇಂದ್ರ ರೈ ದೆರ್ಲರು ಸ್ಥಳೀಯರಲ್ಲವೇ ?ಎಂದು ಕೇಳಿದೆ .

ಅದಕ್ಕೆ ಪಾಲ್ತಾಡಿಯವರು "ಅವರೆಲ್ಲಿ ನೀವೆಲ್ಲಿ ?ಅವರು ಇಪ್ಪತ್ತು ಪುಸ್ತಕ ಬರೆದಿದ್ದಾರೆ ಗೊತ್ತಿದೆಯ? "ಎಂದು ಕೇಳಿದರು.
ಹೌದು ಅದು ಒಪ್ಪಿಕೊಳ್ಳಬೇಕಾದ ಮಾತು ,ದೇರ್ಲರ ವಿದ್ವತ್ ಮಟ್ಟಿಗೆ ಎರಡು ಮಾತು ನನ್ನಲ್ಲೂ ಇಲ್ಲ .ಆದರೆ ಸುಳ್ಯ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡನೆ ಮಾಡಲು ನನ್ನ ಅರ್ಹತೆ ಧಾರಾಳ ಸಾಕಿತ್ತು ,ಯಾಕೆಂದರೆ ಅದಾಗಲೇ ನಾನು ಮೊದಲ  ಡಾಕ್ಟರೇಟ್ ಪಡೆದಿದ್ದು ಎರಡನೇ ಡಾಕ್ಟರೇಟ್ ಪದವಿಗೆ ಥೀಸಿಸ್ ಸಿದ್ಧ ಪಡಿಸಿದ್ದೆ ಅಲ್ಲದೆ ಸುಮಾರು ಹತ್ತು-ಹನ್ನೆರಡು ಪುಸ್ತಕಗಳೂ ,ಸುಮಾರು 20-30 ಲೇಖನಗಳೂ ಪ್ರಕಟವಾಗಿದ್ದವು .9-1೦ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲೂ ಪ್ರಬಂಧ ಮಂಡಿಸಿದ ಅನುಭವವಿತ್ತು .
ಹಾಗಾಗಿ ನಾನು ಅದನ್ನೇ ಹೇಳಿದೆ ,"ನಾನು ಅವರಷ್ಟು ವಿದ್ವಾಂಸೆ ಅಲ್ಲವಾದರೂ ಈ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸುವಷ್ಟು ಅರ್ಹತೆ ಹಾಗೂ  ಸಾಮರ್ಥ್ಯ ನನ್ನಲ್ಲಿದೆ ಈಗಾಗಲೇ ನಾನು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ ಅನುಭವವಿದೆ" ಎಂದು ಹೇಳಿದೆ .ಆಗ ಅವರು "ನಿಮಗೆ ಹೆಂಗಸರಿಗೆ ರೇಷ್ಮೆ ಸೀರೆ ಉಟ್ಟು ಮೆರೆಯಲು ಸ್ಟೇಜ್ ಬೇಕು ಅಷ್ಟೇ ತಾನೇ !ಬೇಕಾದರೆ ಕವಿಗೋಷ್ಠಿಗೆ ಬನ್ನಿ" ಎಂದು ಹೇಳಿದರು ,ಅದಕ್ಕೆ ನಾನು ಇಲ್ಲ ನಾನು ಕವಿ ಗೋಷ್ಠಿಗೆ ಬರುವುದಿಲ್ಲ ,ನಾನು ಇನ್ನು ಐದು ವರ್ಷಸಮಯ ಕೊಡಿ  , 20 ಪುಸ್ತಕ ಬರೆದು ಪ್ರಕಟಿಸಿ ಬರುತ್ತೇನೆ ,ಆಗ ಬೆಳ್ಳಾರೆ ಯಲ್ಲಿ ಮತ್ತೆ ತುಳು ಮಿನದನ ಮಾಡುತ್ತೀರಾ ?ಅಥವಾ ನೀವು ಆಗಲೂ ಅಧ್ಯಕ್ಷರಾಗಿರುತ್ತೀರಾ? ಮನಸಿಲ್ಲದಿದ್ದರೆ ಕೊಡುವುದಿಲ್ಲ ಎಂದು ಹೇಳಿ ಅದು ಬಿಟ್ಟು ಬೇರೆ ಮಾತು ಬೇಡ "ಎಂದು ಕೇಳಿ ಫೋನ್ ಕಟ್ ಮಾಡಿದ್ದೆ .



ಅದು ಇರಲಿ  ಅಂದು ಪಾಲ್ತಾಡಿಯವರಲ್ಲಿ ನಾನು 20 ಪುಸ್ತಕ ಬರೆದು ಪ್ರಕಟಿಸುತ್ತೇನೆ ಐದು ವರ್ಷದ ಒಳಗೆ ಎಂದಿದ್ದೆ !ಹೌದು ಅಂದು ಹೇಳಿದಂತೆಯೇ ಮಾಡಿದೆ ನಂತರ 3 ವರ್ಷಗಳ ಒಳಗೆ ನನ್ನ 20 ಪುಸ್ತಕಗಳೂ ಪ್ರಕಟವಾದವು !

 2013 ನವೆಂಬರ್ನಲ್ಲಿ ನನ್ನ 20 ನೆಯ ಪುಸ್ತಕ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್ ಡಿ ಮಹಾ ಪ್ರಬಂಧ ) ಪ್ರಕಟವಾಯಿತು

ಪಾಲ್ತಾಡಿ ಯವರು ಹೇಳಿದ ಗುರಿ 20 ರ ಗುರಿ ಈಡೇರುವ ತನಕ ನಿಲ್ಲಿಸದೆ ಒಂದಿನಿತೂ ವಿರಮಿಸದೆ ಕ್ಷೇತ್ರ ಕಾರ್ಯ ಮಾಡಿದೆ ಬರೆದೆ ಪ್ರಕಟಿಸಿದೆ .
 ,ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡುತ್ತಿರುವ ನನಗೆ ಅವಕಾಶ ನೀಡಿ  ಬೆಂಬಲಿಸುವುದನ್ನು  ತುಳು ಅಕಾಡೆಮಿ ಮಾಡಬೇಕಾಗಿತ್ತು ,ಅದನ್ನು ಮಾಡದೇ ಇದ್ದದ್ದು ಯಾರಿಗೂ ತಪ್ಪು ಎನಿಸಲೇ ಇಲ್ಲ  ,ಆದರೆ  ಈ ಬೆಳ್ಳಾರೆ ಯಲ್ಲಿ ನಾನು ಒಂದು ಅವಕಾಶ ಕೇಳಿದ್ದು ಆಗ ಅವಮಾನಿಸಿ ಮಾತಾಡಿದ್ದಕ್ಕೆ ಪ್ರತಿ ಉತ್ತರ ನೀಡಿದ್ದು ದೊಡ್ಡ ಅಪರಾಧ ಎನಿಸಿತು !
ಅದರ ಪರಿಣಾಮ ನಾನು ಸಂಶೋಧಕಿಯಾಗಿ ಗುರುತಿಸಲ್ಪಡಲಿಲ್ಲ,ಬದಲಿಗೆ ಅಹಂಕಾರಿಯಾಗಿ ಪರಿಗಣಿಸಲ್ಪಟ್ಟು,ತುಳು ಅಕಾಡೆಮಿಯ ಎಲ್ಲ ಕಾರ್ಯಕ್ರಮಗಳಿಂದಲೂ ಹೊರಗೆ ಉಳಿಯಬೇಕಾಯಿತು ಅಥವಾ ಹೊರಗೆ ಇರಿಸಿದರು ಎಂಬುದು ಹೆಚ್ಚ್ಚು ಸರಿ !
ಜೊತೆಗೆ ನನ್ನ ತುಳು ಸಂಶೋಧನಾ ಕಾರ್ಯಕ್ಕೆ ಮನ್ನಣೆ ಸಿಗದ ಕಾರಣ ನಾನು ಕೆಲಸ ಮಾಡುವ ಸಂಸ್ಥೆಯಲ್ಲೂ ಅವಗಣನೆಗೆ ಒಳಗಾದೆ !

ಹಾಗೆ ನೋಡಿದರೆ ಪಾಲ್ತಾಡಿಯವರು ಕೆಟ್ಟ ವ್ಯಕ್ತಿ ಏನೂ ಅಲ್ಲ ಅನೇಕರಿಗೆ ಬೆಂಬಲ ಕೊಟ್ಟ ಸಹೃದಯರೇ ಆಗಿದ್ದರು .ಇದೆಲ್ಲ ಆಗಿ ಐದು ವರ್ಷಗಳ ನಂತರ ಇತ್ತೀಚೆಗೆ ನಾನು ಭಾಗವಹಿಸಿದ್ದ ಮಂಗಳೂರು ತಾಲೂಕು ತುಳು ಮಿನದನ ಕಾರ್ಯಕ್ರಮಕ್ಕೆ ಬಂದಿದ್ದ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಪಾಲ್ತಾಡಿಯವರು ನನಗೆ ಮಾತಿಗೆ ಸಿಕ್ಕರು ,ಆಗ ನಾನು ಹಿಂದೆ ಬೆಳ್ಳಾರೆಯಲ್ಲಿ ನೀವು ಯಾಕೆ ಅವಕಾಶ ಕೊಡಲಿಲ್ಲ ?ತುಳು ಅಧ್ಯಯನ ಆಸಕ್ತರಿಗೆ ಬೆಂಬಲ ಕೊಡಬೇಕಾದ್ದು ಅಕಾಡೆಮಿಯ ಜವಾಬ್ದಾರಿ ಕೂಡ  ತಾನೇ ಎಂದು ಕೇಳಿದೆ .ಆಗ ಅವರು ಆಗ ಆದ ಪ್ರಮಾದವನ್ನು ಒಪ್ಪಿಕೊಂಡು ಹಾಗೆ ಆಗಬಾರದಿತ್ತು ಆದರೆ ಅಲ್ಲಿ ನಿಮಗೆ ಅವಕಾಶ ಕೊಡದೆ ಇರುವುದಕ್ಕೆ  ನಿಮ್ಮ್ಮ ಸಂಸ್ಥೆಯ ಸಹೋದ್ಯೋಗಿಗಳ ಬಲವಾದ ವಿರೋಧವೂ ಕಾರಣವಾಗಿತ್ತು ಎಂದು ಹೇಳಿ ನಂತರ ನಮಗೆ ಬಂಟ್ವಾಳ ದಲ್ಲಿ ಆಗುವಾಗ ಅವಕಾಶ ಕೊತ್ತಿದೆವು ಅಲ್ವ ಎಂದು ಹೇಳಿದರು !
ಆದರೆ ಬಂಟ್ವಾಳದಲ್ಲಿಯೂ ಅವರು ವಿರೋಧ ವ್ಯಕ್ತ ಪಡಿಸಿದ್ದರು ,ಅದರ ಹಿನ್ನೆಲೆ ಹೀಗಿದೆ
ಅದಾಗಿ ಸ್ವಲ್ಪ ಸಮಯದ ನಂತರ ಬಂಟ್ವಾಳ ತಾಲೂಕಿನಲ್ಲಿ ತುಳು ಅಕಾಡೆಮಿ ದ್ರಾವಿಡ ಜಾನಪದ ಮೇಳ ಎಂಬ ಒಂದು ಕಾರ್ಯಕ್ರಮ ಆಯೋಜಿಸಿತು ,ಆಗ ಮತ್ತೆ ಅಲ್ಲ್ಲಿನ ಸಂಘಟಕರನ್ನು ಸಂಪರ್ಕಿಸಿ ನನಗೆ ಒಂದು ಅವಕಾಶ ಕೊಡಿ ಎಂದು ಕೋರಿದೆ .
ಆಗ ಕೂಡ ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿಯವರು ಬಲವಾಗಿ ವಿರೋಧಿಸಿದ ಬಗ್ಗೆ ಆಗ ಅಕಾಡೆಮಿ ಸದಸ್ಯರಾಗಿದ್ದ ಅಶೋಕ ಶೆಟ್ಟಿ ಅವರು ತಿಳಿಸಿದ್ದರು ,ನಂತರ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಕಾರಣಕ್ಕೆ ಮನಸಿಲ್ಲದ ಮನಸಿನಲ್ಲಿ ಅಲ್ಲಿ "ಪಾಡ್ದನೊಡು ಮೂಡಿ ಬತ್ತಿ ಪೊಣ್ಣು" ಎಂಬ ವಿಷಯದಲ್ಲಿ ಪ್ರಬಂಧ ಮಂಡನೆ ಮಾಡಲು ಅವಕಾಶ ಕೊಟ್ಟರು .ಅದನ್ನು ಬಳಸಿಕೊಂಡು ಅತ್ಯುತ್ತಮವಾಗಿ ಪ್ರಬಂಧ ಮಂಡನೆ ಮಾಡಿ ಸೈ ಎನಿಸಿಕೊಂಡೆ ಆದರೂ ಮುಂದೆ ನನಗೆ ಅವಕಾಶ ನೀಡಲಿಲ್ಲ

2013 ರಲ್ಲಿ ಸವಣೂರಿನಲ್ಲಿ ಅಖಿಲ ಭಾರತ ತುಳು ಸಮ್ಮೇಳನ ಆಯಿತು ,ಅದಕ್ಕೆ ಒಂದು ಅಹ್ವಾನ ಪತ್ರ ಕೂಡ ನನಗೆ ಕಳುಹಿಸಿಲ್ಲ. ಅದಕ್ಕೆ ಎಂದಲ್ಲ ಇಂದಿನ ತನಕವೂ ಯಾವುದೇ ಒಂದು ತುಳು ಅಕಾಡೆಮಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಪತ್ರಿಕೆ ಕಳುಹಿಸುವುದೇ ಇಲ್ಲ ಯಾಕೆಂದರೆ ಇನ್ನೂ ನಾನು ತುಳು ಅಕಾಡೆಮಿ ಪದಾಧಿಕಾರಿಗಳ ದೃಷ್ಟಿಯಲ್ಲಿ ತುಳು ಸಂಶೋಧಕಿಯಲ್ಲ !
ಇದಕ್ಕೆ ಕೇವಲ ಪಾಲ್ತಾಡಿಯವರು ಕಾರಣರಲ್ಲ ಖಂಡಿತ ಎಂಬುದು ನನಗೆ ಈಗ ಮನವರಿಕೆಯಾಗಿದೆ .ಯಾಕೆಂದರೆ ಅವರ ನಂತರ ಬೇರೆ ಅಧ್ಯಕ್ಷರು ಬಂದಾಗಲೂ ನನಗೆ ಯಾವ ಬೆಂಬಲವೂ ಸಿಗಲಿಲ್ಲ.ಅದರಲ್ಲಿಯೇ ಸ್ಪಷ್ಟವಾಗುತ್ತದೆ ಇದರಲ್ಲಿ ಬೇರೆ ಪದಾಧಿಕಾರಿಗಳ ಕೈವಾಡ ಇದೆಯೆಂಬುದು !
ಇದರೊಟ್ಟಿಗೆ ಇನ್ನೊಂದು ವಿಚಾರವೂ ನೆನಪಾಗುತ್ತದೆ !
2012 ಅಥವಾ 2013 ರಲ್ಲಿ ಇರಬೇಕು ,ತುಳು ಅಕಾಡೆಮಿಯು ತುಳು ಭಾಷೆ ಸಂಸ್ಕೃತಿಗೆ ಸಂಬಂಧಿಸಿ ಸಂಶೋಧನೆ ಮಾಡಲು ಇಚ್ಚಿಸುವ ಐವರಿಗೆ ಒಂದು ಲಕ್ಷ ರು ಸಂಶೋಧನಾ ಸಹಾಯ ಧನ ಕೊಡುವ ಬಗ್ಗೆ ತಿಳಿಸಿ ಆಸಕ್ತರು ಅರ್ಜಿ ಸಲ್ಲಿಸಲು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು ,ಆಗ ನಾನು ಅರ್ಜಿ ಸಲ್ಲಿಸಲು ಇಚ್ಚಿಸಿ ಆ ಬಗ್ಗೆ ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಗಳಿಗೆ ಫೋನ್ ಮಾಡಿದೆ ಆಗ ಅವರು ಅವರು ಅಧ್ಯಕ್ಷರಾದ ಪಾಲ್ತಾಡಿ ಯವರಿಗೆ ಫೋನ್ ಕೊಟ್ಟರು .ಆಗ ಅವರು ಸರ್ಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಹೇಳಿದರು ,ಹಾಗಾಗಿ ನಾನು ಅರ್ಜಿಸಲ್ಲಿಸಲಿಲ್ಲ !
ಒಂದು ಗಮ್ಮತ್ತು ನೋಡಿ ..ಒಂದೆರಡು ತಿಂಗಳು ಕಳೆದು ಪತ್ರಿಕೆಯಲ್ಲಿ ಪೆರುವಾಜೆ ಸರ್ಕಾರಿ ಪದವಿ ಕಾಲೇಜ್ ಉಪನ್ಯಾಸಕ ದ.ನರೇಂದ್ರ ರೈ ದೇರ್ಲ ಸೇರಿದಂತೆ ಐವರಿಗೆ ತಲಾ ಒಂದು ಲಕ್ಷ ಸಂಶೋಧನಾ ಸಹಾಯ ಧನ ಸಿಕ್ಕಿದ ವಿಚಾರ ಬಂತು !
ನಾನು ವಿಚಾರಿಸುವಾಗ ಸರ್ಕಾರಿ ಉದ್ಯೋಗಿಗಳಿಗೆ ಅವಕಾಶವಿಲ್ಲ ಎಂದವರು ನನ್ನಂತೆಯೇ  ಸರ್ಕಾರಿ ಉದ್ಯೋಗಿ ಯಾಗಿರುವ ದೇರ್ಲರಿಗೆ  ಸಂಶೋಧನಾ ಸಹಾಯ ಧನ ನೀಡಿದ್ದರು !

ಈಗ ಇಪ್ಪತ್ತರ ಗುರಿ ತಲುಪಿದ್ದೇನೆ,ಅಕಾಡೆಮಿ ಅಧ್ಯಕ್ಷರು ಬದಲಾದರು, ಮತ್ತೆ ಬೆಳ್ಳಾರೆಯಲ್ಲಿ ತುಳು ಅಕಾಡೆಮಿ ಯ ಕಾರ್ಯಕ್ರಮಗಳು ಆಗಿವೆ ಅದರಿಂದಲೂ ನನ್ನನ್ನು ಹೊರಗೆ ಇರಿಸಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ ?  ಇಂದಿನವರೆಗೂ ತುಳು ಅಕಾಡೆಮಿ ನನಗೆ ನನ್ನ ಸಂಶೋಧನೆಯ ಆಸಕ್ತಿಯ ವಿಚಾರವಾದ ಉಪದೈವಗಳ ಬಗ್ಗೆ ಮಾತನಾಡಲು ಕರೆದಿಲ್ಲ,ತುಳು ವಿದ್ವಾಂಸರ ಪಟ್ಟಿಯಲ್ಲಿ ನಾನಿನ್ನೂ ಸೇರಿಲ್ಲ ,ಯಾಕೆಂದರೆ ನಾನು ಯಾರ ಚೀಲವನ್ನೂ ಹಿಡಿದುಕೊಂಡು ಓಲೈಸಿಕೊಂದು ಹೋಗಲಾರೆ !ಹಾಗಾಗಿ ಅಂದಿನಿಂದ ಇಂದಿನವರೆಗೂ ನಾನು ನನ್ನ ಸಂಶೋಧನೆಗೆ ಯಾರ ಸಹಾಯವನ್ನೂ ಆಶಿಸಲಿಲ್ಲ ,ನಾನು ಸ್ವತಂತ್ರವಾಗಿಯೇ ಅಧ್ಯಯನ ಮಾಡಿದೆ !
 ೆರಡು(ಅಧ್ಯಕ್ಷೆಯಾಗಿ ಜಾನಕಿ ಬ್ರಹ್ಮಾವರ ಅವರು ಬಂದಮೇಲೆ ಒಂದು ಮಂಗಳೂರು ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಡಿ ಕೆ ಚೌಟರ ಮಿತ್ತ ಬೈಲು ಯಮುನಕ್ಕೆ ಕಾದಂಬರಿ ಬಗ್ಗೆ ಮಾತನಾಡಲು ಕರೆದಿದ್ದು ನಾನು ಹೋಗಿ ಮಾತನಾಡಿ ಬಂದಿದ್ದೇನೆ )


ಅಂದು ಸ್ಥಳಿಯರಿಗೆ ಅವಕಾಶವಿಲ್ಲ ಎಂದು ಅವರು ಹೇಳಲು ಕಾರಣವೇನು ಇಂದು ನನಗೆ ಅರಿವಾಗಿದೆ ,ಅಲ್ಲಿ ನನಗೆ ಅವಕಾಶ ಕೊಡಬಾರದು ಎಂಬ ನಿರ್ಬಂಧ ನನ್ನ  ಸಹೋದ್ಯೋಗಿ ಗಳಿಂದ ಉಂಟಾಗಿತ್ತು ಅಂತೆ !ಹೊಟ್ಟೆ ಕಿಚ್ಚು ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆನೆ !ಅಂದು ಆರಂಭಿಸಿದ ಕಿರುಕುಳ ಮುಂದು ವರಿಯುತ್ತಲೇ ಬಂದಿದೆ,ಇಂದಿನ ವರೆಗೂ ,ಅದನ್ನು ಇನ್ನೊಂದು ದಿನ ಬರೆಯುತ್ತೇನೆ ..

ಅದಿರಲಿ ,ಇಪ್ಪತ್ತರ ಗುರಿ ತಲುಪಿ ನಾಲ್ಕು ವರ್ಷಗಳು ಆಗುತ್ತಾ ಬಂತು ,ಒಂದೇ ಒಂದು ಪುಸ್ತಕ ಬರೆದಿಲ್ಲ ಪ್ರಕಟಿಸಿಲ್ಲ ,ಯಾಕೋ ಏನೋ ಬರೆಯುವ ಪ್ರಕಟಿಸುವ ಮೂಡ್ ಹೊರಟು ಹೋಗಿದೆ ,ಹಾಗಾಗಿ ಈಗ ನನಗೆ ಅವರು ಇಪ್ಪತ್ತರ ಬದಲು ಐವತ್ತರ ಗುರಿ ನೀಡಿರುತ್ತಿದ್ದರೆ ಛೆ !ಎಂದೆನಿಸುತ್ತದೆ ,ಹಾಗೊಂದು ವೇಳೆ ಅವರು ಹೇಳಿರುತ್ತಿದ್ದರೆ ನಾನು ಖಂಡಿತವಾಗಿಯೂ 50 ಪುಸ್ತಕ ಪ್ರಕಟವಾಗುವ ವರೆಗೂ ವಿರಮಿಸುತ್ತ ಇರಲಿಲ್ಲ!ಖಂಡಿತ !

ಹಾಗೆಂದು ನನ್ನ ಕಾರ್ಯವನ್ನು ನಾನು ನಿಲ್ಲಿಸುತ್ತೇನೆ ಎಂದಲ್ಲ ,ಸಂಶೋಧನೆಯನ್ನು ನಾನು ನಂತರವೂ ಮುಂದುವರಿಸಿದ್ದೇನೆ ,ಪುಸ್ತಕ ಬರೆಯುದು ಪ್ರಕಟಿಸುವ ಬದಲು ಬ್ಲಾಗ್ ನಲ್ಲಿ ಬರೆದು ಎಲ್ಲರಿಗೂ ಸಿಗುವ ಹಾಗೆ ಮಾಡಿದ್ದೇನೆ ,ಮುಂದೆ ಸಂದರ್ಭ ಸಿಕ್ಕಾಗ ಪ್ರಕಟಿಸಬೇಕು ಎಂದು ಇದೆ


ನನ್ನ ಸಂಶೋಧನಾ ಸಾಹಿತ್ಯಿಕ ಕೃತಿಗಳುಗಳು ಇನ್ನು ಪ್ರಕಟವಾಗುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಮುಂದೆ ಒಂದಿನ ನನ್ನ ಆತ್ಮ ಚರಿತ್ರೆ ಖಂಡಿತ ಬರೆದು ಪ್ರಕಟಿಸುತ್ತೇನೆ ಯಾಕೆಂದರೆ ನನ್ನ ಕಾಲೇಜ್ ಸಹೋದ್ಯೋಗಿ ಗಳು ,ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ,ತುಳು ಅಕಾಡೆಮಿ ಬೆಳ್ಳಾರೆ ಚೊಕ್ಕಾಡಿ ಪಂಜ ಸೀಮಾ ಹವ್ಯಕ ಪರಿಷತ್ ನ ಅಧ್ಯಕ್ಷರುಗಳು,ನನ್ನ ಸಂಬಂಧಿಕರು ಹೀಗೆ ಹತ್ತು ಹಲವು ಜನರು ಅದರ ಪುಟಗಳನ್ನೂ ತುಂಬಲು ಸಾಕಷ್ಟು ವಸ್ತುಗಳನ್ನು ಕೊಟ್ಟಿದ್ದಾರೆ !!ಅದಕ್ಕಾಗಿಯಾದರೂ ಬರೆಯಬೇಕು ಎಂದುಕೊಂಡಿದ್ದೇನೆ !
© ಡಾ.ಲಕ್ಷ್ಮೀ ಜಿ ಪ್ರಸಾದ
http://laxmipras.blogspot.com/2015/10/15.html?m=1

ಬದುಕ ಬಂಡಿಯಲಿ 14 ಇವೆಲ್ಲವೂ ನನ್ನ ಸ್ವಂತದ್ದು !© ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 14 ಇವೆಲ್ಲವೂ ನನ್ನ ಸ್ವಂತದ್ದು !© ಡಾ.ಲಕ್ಷ್ಮೀ ಜಿ ಪ್ರಸಾದ

ತುಳು ಸಂಸ್ಕೃತಿ ಭೂತಾರಾಧನೆ ಕುರಿತು ಅಧ್ಯಯನ ಮಾಡುವಾಗ ಇಂತಹದೊಂದು ಪ್ರಶ್ನೆ ನನಗೆ ಎದುರಾಗಬಹುದು ಎಂದು ನಾನು ಊಹೆ ಕೂಡ ಮಾಡಿರಲಿಲ್ಲ.
ಅನೇಕರು ನನ್ನಲ್ಲಿ ಕೇಳುವ ಪ್ರಶ್ನೆಗಳು ಇವು
 ,ಈ ಭೂತಗಳ ಫೋಟೋಗಳು ನಿಮಗೆ ಎಲ್ಲಿಂದ ಸಿಕ್ಕುತ್ತವೆ ? ಸಾವಿರದ ಐನೂರು ಹೆಸರುಗಳನ್ನು ಸಂಗ್ರಹಿಸಿ ಕೊಟ್ಟವರಾರು ? ಈ ಮಾಹಿತಿಗಳು ಎಲ್ಲಿಂದ ಸಿಕ್ಕಿತ್ತು ? ವಿಕಿಪೀಡಿಯದಿಂದ ಪಡೆದಿರಾ ?
ಹೌದು !ಭೂತಗಳ ಫೋಟೋಗಳ ಮೇಲೆ ಹೆಸರು ಇವೆಯಲ್ಲ ?ಯಾರದೆಂದು ಕೂಡ ಹಾಕುತ್ತೆನಲ್ಲ ಎಂದು ಉತ್ತರಿಸಿದರೆ ಅದಲ್ಲ .ಡಾ.ಲಕ್ಷ್ಮೀ ಜಿ ಪ್ರಸಾದ ಎಂದು ನೀವು ಹಾಕುತ್ತೀರಲ್ಲ ಆ ಫೋಟೋಗಳು ನಿಮಗೆ ಎಲ್ಲಿಂದ ಸಿಕ್ತು ?ಯಾರು ಕೊಟ್ಟದ್ದು?ಎಂಬ ಮರು ಪ್ರಶ್ನೆ ಎದುರಾಗುತ್ತದೆ.

ಬೇರೆಯವರು ತೆಗೆದ ಫೋಟೋ ನಮ್ಮ ಹೆಸರನ್ನು ಹಾಕಿಕೊಳ್ಳಲು ಸಾಧ್ಯವೇ ?!ನಾನು ಸ್ವತಹ ಸೆರೆ ಹಿಡಿದ ಚಿತ್ರಗಳು ಎಂದರೆ ಅನೇಕರಿಗೆ ನಂಬಿಕೆ ಇಲ್ಲ !
ಸಾಮಾನ್ಯವಾಗಿ ಭೂತಾರಾಧನೆ ನಡು ರಾತ್ರಿ ನಡೆಯುತ್ತದೆ ,
ಏಕಾಂಗಿಯಾಗಿ ಯಾರ ಸಹಾಯವಿಲ್ಲದೆ ಭೂತಗಳ ಕುರಿತು ರೆಕಾರ್ಡ್ ಮಾಡಿ ಸಮೀಪದಿಂದ ಮಾಹಿತಿ ಕಲೆ ಹಾಕುವುದು ತುಸು ಕಷ್ಟದ ವಿಚಾರ ,ಹಾಗಾಗಿಯೇ ಹೆಚ್ಚಿನವರು ಈಗಾಗಲೇ ಸಂಗ್ರಹವಾಗಿರುವ ಮಾಹಿತಿಯ ವಿಶ್ಲೇಷಣೆಯನ್ನು ಆಧರಿಸಿ ಸಂಶೋಧನೆಗೆ ಮುಂದಾಗುವುದು ಕಾಣಿಸುತ್ತಿದೆ.ಸ್ತ್ರೀಯರಂತು ಈ ವಿಭಾಗದ ಅಧ್ಯಯನಕ್ಕೆ ಕೈ ಹಾಕುವ ಸಾಹಸಕ್ಕೆ ಹೋಗುವುದಿಲ್ಲ ಎನ್ನುವುದೂ ಸತ್ಯವೇ .
ಹಾಗಾಗಿ ಈ ಬಗ್ಗೆ ಅಧ್ಯಯನ ಮಾಡಿರುವ ಸ್ತ್ರೀಯರ ಸಂಖ್ಯೆ ಬೆರಳೆಣಿಕೆಯಷ್ಟು ಕೂಡ ಇಲ್ಲ ಎನ್ನುವುದು ವಾಸ್ತವ .ಹಾಗೆಂದು ಸ್ತ್ರೀಯರು ಈ ಬಗ್ಗೆ ಅಧ್ಯಯನ ಮಾಡಿಯೇ ಇಲ್ಲ ಎಂದು ಹೇಳುವಂತಿಲ್ಲ .ಮಾರ್ಥಾ ಆಸ್ಟನ್ ಒಂದಿಗೆ ಅಧ್ಯಯನನ್ಕ್ಕಾಗಿ ಸುತ್ತಿದ ಡಾ.ಲೀಲಾ ಕೆ ,ತುಳುನಾಡ ಆಲಡೆಗಳ ಬಗ್ಗೆ ಅಧ್ಯಯನ ಮಾಡಿರುವ ಡಾ.ಇಂದಿರಾ ಹೆಗಡೆಯವರೂ ಆನುಷನ್ಗಿಕವಾಗಿ ಭೂತಾರಾಧನೆಯ ಕುರಿತೂ ಅಧ್ಯಯನ ಮಾಡಿದ್ದಾರೆ.ಇನ್ನು ಒಬ್ಬಿಬ್ಬರು ಇರಬಹುದು.
ಇದು ಸ್ತ್ರೀಯರಿಗೆ ಅಸಾಧ್ಯ ಖಂಡಿತಾ ಅಲ್ಲ ,ಸ್ವಲ್ಪ ಜಾಗರೂಕತೆ ,ಮುನ್ನೆಚ್ಚರಿಕೆ ,ಒಳ್ಳೆಯ ಸಂವಹನ ಕಲೆ ,ಎಲ್ಲಕ್ಕಿಂತ ಹೆಚ್ಚಾಗಿ ತುಳು ಸಂಸ್ಕೃತಿ ಹಾಗೂ ಭೂತಾರಾಧನೆ ಕುರಿತಂತೆ ತೀವ್ರ ಸೆಳೆತ ಇದ್ದರೆ ಯಾರೂ ಕೂಡ ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಬಹುದು.
ಹಾಗಾಗಿಯೇ ನನಗೆ ಈ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಸಾಧ್ಯವಾಯಿತು .ನಾನೇ ಸ್ವತಹ ಮಾಡಿದ್ದರೂ ಅನೇಕರಿಗೆ ನಂಬಿಕೆ ಇಲ್ಲದಾದಾಗ ಮಾತ್ರ ತುಸು ಖೇದವಾಗುತ್ತದೆ. ಮಿಲಿಟರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡಿರುವ ಸ್ತ್ರೀಯರಿಗೆ ಭೂತಾರಾಧನೆಯ ಕ್ಷೇತ್ರದ ಅಧ್ಯಯನ ಅಸಾಧ್ಯವೇ ?ಹೆಂಗಸರ ಸಾಮರ್ಥ್ಯದ ಬಗ್ಗೆ ಅಥವಾ ನನ್ನ ಬಗ್ಗೆ ಇಷ್ಟು ಅಪನಂಬಿಕೆಯೇಕೆ ಜನರಿಗೆ ಎಂದು ನನಗೆ ಅರ್ಥವಾಗುತ್ತಿಲ್ಲ !ಆದ್ದರಿಂದಲೇ ನಾನು ಪ್ಲೀಸ್ ನಂಬಿ ..ಇವೆಲ್ಲವೂ ನನ್ನ ಸ್ವಂತದ್ದು ! ಎಂದು ಹೇಳಬೇಕಾಯಿತು .
ಇನ್ನೂ ಕೆಲವರದ್ದು ನಮಗೆ ಗೊತ್ತಿಲ್ಲದೆ ಇರುವ ಮಾಹಿತಿ ಇವರಿಗೇಗೆ ಸಿಗಲು ಸಾಧ್ಯ ? ನಮಗೆ ತಿಳಿಯದ ಭೂತಗಳ ಹೆಸರು ಇರಲು ಹೇಗೆ ಸಾಧ್ಯ ? ಎಂಬ ವಿತ್ತಂಡ ವಾದವೂ ಇದೆ.ಅಧ್ಯಯನ ಮಾಡಿದ ಎಲ್ಲರಿಗೂ ಇಂತಹ ಅಪರೂಪದ ಮಾಹಿತಿಗಳು ದೊರೆತಸವು.ಆದರೆ ಛಲ ಬಿಡದೆ ನಿರಂತರ ಯತ್ನ ಮಾಡುತ್ತಾ ಇರಬೇಕು ಅಷ್ಟೇ
ಇನ್ನೂ ಕೆಲವರದು ಇದಕ್ಕೆ ರೆಫರೆನ್ಸ್ ಇಲ ಎಂಬ ಆರೋಪ ! ಹೌದು ,ಅಪರೂಪದ ಕನ್ನಡ ಬೀರ,ಅಚ್ಚು ಬಂಗೇತಿ,ಅಕ್ಕಚ್ಚು,ಅಜ್ಜಿ ಭೂತ,ಕುಕ್ಕೆತ್ತಿ ಬಳ್ಳು,ನೆಲ್ಲೂರಾಯ,ಬಾಣಿಯೆತ್ತಿ,ಪುರುಷ ಭೂತ ಮೊದಲಾದ ಅನೇಕ ದೈವಗಳ ಬಗ್ಗೆ ನಾನೇ ಮೊದಲಿಗೆ ಬರೆದವಳು. ಇಂತಹ ನೂರೈವತ್ತು ಇನ್ನೂರಕಿಂತ  ಹೆಚ್ಚಿನ ದೈವಗಳ ಬಗ್ಗೆ ಬೇರೆ ವಿದ್ವಾಂಸರ ಕೃತಿಗಳಲ್ಲಿ ಒಂದು ಗೆರೆಯ ಮಾಹಿತಿ ಕೂಡ ಇಲ್ಲ,ಈ ಹೆಸರುಗಳು ಕೂಡ ಇಲ್ಲ .ನಾನು ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ಮಾಹಿತಿಯನ್ನು ಅಧರಿಸಿ ಬರೆದ ಬರಹಗಳು ಇವು.ಹಾಗಾಗಿ ಇವುಗಳಿಗೆ ರೆಫರೆನ್ಸ್ ಇರುವುದಿಲ್ಲ
ಹಾಗೆಂದು ನಾನು ಸಾವಿರದೊಂದು ಗುರಿಯೆಡೆಗೆ ಬಳಸಿದ ಎಲ್ಲ ಫೋಟೋಗಳು ನನ್ನದಲ್ಲ ,ಅನೇಕ ತುಳು ಸಂಸ್ಕೃತಿ ಆಸಕ್ತರು ತೆಗೆದ ಫೋಟೋಗಳನ್ನು ಅವರ ಅನುಮತಿಯೊಂದಿಗೆ ಅವರವರ ಹೆಸರು ಉಲ್ಲೇಖಿಸಿ ಬಳಸಿದ್ದೇನೆ .ಧರ್ಮ ದೈವ .ಜೀವಿತ್ ಶೆಟ್ಟಿ ,ಸಂಕೇತ ಪೂಜಾರಿ ,ಪವನ್ ಕೆ ಎಸ ,ಭರತ್ ಬಿ ಭಂಡಾರಿ ,ರಾಜಗೋಪಾಲ ಹೆಬ್ಬಾರ್ ನೆರಿಯ ,ಯಶ್ವಿನ್ ,ನಮ್ಮ ಮರ್ನೆ ಗರೋಡಿ ಮೊದಲಾದವರ ಅದ್ಭುತ ಫೋಟೋಗಳನ್ನು ಅಗತ್ಯವಿದ್ದಾಗ ಬಳಸಿಕೊಂಡಿದ್ದೇನೆ . ಹಾಗೆ ನೋಡಿದರೆ ಒಳ್ಳೆಯ ಫೋಟೋಗಳುಸಿಕ್ಕಾಗ ನನ್ನ ಬರವಣಿಗೆಯ ವೇಗ ಹೆಚ್ಚಾಗುತ್ತದೆ.ಕೆಲವೊಂದು ಮಾಹಿತಿಯನ್ನು ಕೂಡ ಬೇರೆಯವರು ನೀಡಿದ್ದು ಅಲ್ಲಿ ಕೂಡ ಮಾಹಿತಿ ಕೃಪೆ ಎಂದು ಹಾಕಿ ನೀಡಿದವರ ಹೆಸರನ್ನು ಸ್ಮರಿಸಿ ಅದರ ಕ್ರೆಡಿಟ್ ಅನ್ನು ಅವರಿಗೆ ಸಲ್ಲಿಸಿದ್ದೇನೆ.

ಇರಲಿ ನನ್ನ ಅಧ್ಯಯನದ ಕುರಿತು ನಂಬಿಕೆ ಇರುವ ತುಳು ಸಂಸ್ಕೃತಿ ಬಗ್ಗೆ ಆಸಕ್ತರು/ ಸಹೃದಯಿಗಳು ನನ್ನ ಪೇಜ್ ಮತ್ತು ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಬೇಕಾಗಿ ವಿನಂತಿ.ನನ್ನ ಕೆಲವು ಫೋಟೋಸ್ ಇಲ್ಲಿ ಕೊಟ್ಟಿದ್ದೇನೆ

 ಹಾಸನ ,ಸಕಲೇಶಪುರ,ಕೊಡುಗು ,ಮಡಿಕೇರಿ ,ಶಿವಮೊಗ್ಗ ,ತೀರ್ಥ ಹಳ್ಳಿ ,ಕಳಸ, ಕೊಲ್ಲೂರು ಗಳಲ್ಲಿ ಕೆಲವೆಡೆ ತುಳು ಭೂತ /ದೈವಗಳ ಆರಾಧನೆ ಇದೆ .ಆದರೆ ಅದು ಇಲ್ಲಿಂದ ಹೋಗಿ ಅಲ್ಲಿ ನೆಲೆಯಾದವರು ನಡೆಸಿಕೊಂಡು ಬರುತ್ತಾ ಇರುವುದು ಆಗಿರಬೇಕು ,ಭೂತಗಳ ಬಗ್ಗೆ ಭಯ ಬೇಡ ,ತುಳು ಭೂತ ಪದಕ್ಕೆ ಕನ್ನಡ/ಸಂಸ್ಕೃತದ ದ ಭೂತ ಪದದ ಅರ್ಥವಿಲ್ಲ ,ಇಲ್ಲಿ ಭೂತ ದೈವ ಮತ್ತು ದೇವರು ಸಮಾನಾರ್ಥಕ ಪದಗಳು ,ತಮ್ಮನ್ನು ಮಣ್ಣಿನ ಸತ್ಯಗಳು ಎಂದು ಕರೆದುಕೊಂಡಿರುವ ದೈವಗಳು ಶಿಷ್ಟ ರಕ್ಷಕ ,ದುಷ್ಟ ಶಿಕ್ಷಕ ಶಕ್ತಿಗಳು ,ತುಳು ಸಂಶೋಧನೆಯ ಆರಂಭ ಕ್ರಿಶ್ಚಿಯನ್ ಮೆಶಿನರಿಗಳಿಂದ ಆಗಿದ್ದು ,ಆಗ ಆ ಕಾಲಕ್ಕೆ ಅವರಿಗೆ ಮಾಹಿತಿ ಕೊಟ್ಟವರು ಆಗ ತುಳು ಬೂತೋ ಪದವನ್ನು ಕನ್ನಡ/ಸಂಸ್ಕೃತದ ಭೂತ ಪದವೆಂದು ಭಾವಿಸಿ ಭೂತ ಪ್ರೇತ ಪಿಶಾಚಿ ಎಂಬ ಅರ್ಥವನ್ನು ನೀಡಿದ್ದಾರೆ ,ಆದ್ದರಿಂದ ತುಳುವರ ಭೂತಾರಾಧನೆಯನ್ನು ಹೊರ ಜಗತ್ತು ಭಯಾನಕ ,devil worship ಎಂದು ಭಾವಿಸುವಂತೆ ಆಯಿತು ,ಆದರೆ ವಾಸ್ತವದಲ್ಲಿ ಭೂತ ಕೋಲವೊಂದು ಧಾರ್ಮಿಕ ಆರಾಧನಾ ರಂಗ ಭೂಮಿಯಾಗಿದ್ದು ನೊಂದವರಿಗೆ ಸಾಂತ್ವನ ಹೇಳುವ ,ಮೂರು ಕಾಲಕ್ಕೆ ಸತ್ವನ್ನು ಗೆಲ್ಲಿಸಿಕೊಡುತ್ತೇನೆ ಎಂದು ನುಡಿಯುವ ದೈವ ಮಾತನಾಡದೆ ಇರುವ ದೇವರಿಗಿಂತ ಆಪ್ತವಾಗುತ್ತದೆ ಎಂಬುದು ನನ್ನ ಕ್ಷೇತ್ರ ಕಾರ್ಯದ ಅನುಭವ ,ದೈವ್ದದಲ್ಲಿ ತಮ್ಮ ಕಷ್ಟವನ್ನು ,ತಮಗಾದ ಅನ್ಯಾಯವನ್ನು ,ಜಗಳವನ್ನು ನಿವೇದಿಸುವ ತುಳುವರು ದೈವದ ನುಡಿಯನ್ನು ನಂಬಿ ನೆಮ್ಮದಿಯನ್ನು ಕಾಣುತ್ತಾರೆ .ಅನೇಕ ಜನರ ಜಗಳವನ್ನು ವಿವಾದಗಳನ್ನು ದೈವ ಗಳು ಪರಿಹರಿಸಿಕೊಟ್ಟಿವೆ ,ಅಲೌಕಿಕ ನೆಲೆಯನ್ನು ಬಿಟ್ಟು ಲೌಕಿಕ ನೆಲೆಯಲ್ಲಿ ನೋಡುವಾಗಲೂ ದೈವಗಳ ಅಭಿವ್ಯಕ್ತಿ ಬಹಳ ಸುಂದರ ಮತ್ತು ಮನೋಜ್ಞವಾದುದು ,ಜೀವಮಾನದಲ್ಲಿ ಒಮ್ಮೆಯಾದರೂ ಭೂತ ಕೋಲ ನೋಡದಿದ್ದರೆ ನಾವು ಏನೋ ಕಳಕೊಂಡಂತೆ !ಒಮ್ಮೆ ನಮ್ಮ ತುಳುನಾಡಿಗೆ  ಬನ್ನಿ
http://laxmipras.blogspot.com/2014/10/blog-post_23.html?m=1
http://laxmipras.blogspot.com