Thursday 17 June 2021

 ದೊಡ್ಡವರ ದಾರಿ 78 :ಸೌಜನ್ಯದ ಪ್ರತೀಕವಾಗಿರುವ  ಡಾ.ಪದ್ಮನಾಭ ಮರಾಠೆ


 ನಾನು ನಿನ್ನೆ ಸಂಜೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಪ್ರಕಟಣೆಯ ಪೂರ್ವದಲ್ಲಿ ಮುಂಗಡ ಬುಕ್ಕಿಂಗ್ ಆರಂಭಿಸಿದ ಬಗ್ಗೆ ತಿಳಿಸಿ ಪುಸ್ತಕ ಬೇಕಾದವರಿಗೆ ನನ್ನ ವಾಟ್ಸಪ್ ನಂಬರ್ ನೀಡಿ  ಸಂಪರ್ಕಿಸಲು ತಿಳಿಸಿದ್ದೆ,


ಅನೇಕರು ಮೆಸೇಜ್ ಮಾಡಿ ನಮಸ್ತೆ ಮೇಡಂ/ ಅಕ್ಕ‌ ಎಂದು ಆರಂಭಿಸಿ ಪುಸ್ತಕ ಬೇಕು ಎಂದಿದ್ದರು


.ಪ್ರತಿ ನಮಸ್ಕರಿಸಿ ಪೇ ಮೆಂಟ್ ಮಾಡುವ ವಿಧಾನವನ್ನು ಕೇಳಿ ಮಾಹಿತಿ ನೀಡಿ ಅವರ ಹೆಸರು ವಿಳಾಸ ತಿಳಿಸಲು ಹೇಳುತ್ತಿದ್ದೆ‌.


ಹಾಗೆ ನಿನ್ನೆ ಒಬ್ಬರು ನಮಸ್ತೆ ಪುಸ್ತಕ ಬೇಕಿತ್ತು ಎಂದರು.ಎಲ್ಲರಿಗೆ ಮಾಡುವಂತೆ ಪ್ರತಿ ನಮಸ್ಕರಿಸಿ  ಗೂಗಲ್ ,ಪೋನ್ ಪೇ ಮೂಲಕ ಪೇ ಮಾಡಲು ತಿಳಿಸಿದೆ‌


ಅದಿಲ್ಲದಿದ್ಧರೆ ನನ್ನ ಬ್ಯಾಂಕ್ ಖಾತೆ ನಂಬರ್ ಕೊಡುತ್ತೇನೆ ಎಂದೆ .ಅವರು ಗೂಗಲ್ ಪೋನ್ ಪೆ ಇಲ್ಲದ ಕಾರಣ ( ಬಹುಶಃ ಅವರ ಊರಲ್ಲಿ ಸರಿಯಾದ ಮೊಬೈಲ್  ನೆಟ್ವರ್ಕ್ ಸಿಗುದಿಲ್ಲ.ನೆಟ್ವರ್ಕ್ ಇಲ್ಲದೇ ಇದ್ದರೆ ಪೋನ್ ಪೆ ಗೂಗಲ್ ಕೆಲಸ ಮಾಡುದಿಲ್ಲ) ಬ್ಯಾಂಕ್ ಖಾತೆ ಡಿಟೇಲ್ಸ್ ಕಳುಹಿಸಲು ಹೇಳಿದರು.ಅಂತೆಯೇ ನಾನು ನೀಡಿದೆ 


ಮತ್ತೆ ಹೆಸರು ಮತ್ತು ವಿಳಾಸ ಕಳುಹಿಸಲು ಸೂಚಿಸಿದೆ‌.


ಬೇರೆ ಕೆಲಸಕ್ಕೆ ಹೋದೆ.ಸ್ವಲ್ಪಹೊತ್ತು ಬಿಟ್ಟು ವಾಟ್ಸಪ್ ತೆರೆದೆ.

ಪದ್ಮನಾಭ ಮರಾಠೆ..ಎಂಬ ಹೆಸರು ,ವಿಳಾಸ ಬರೆದಿದ್ದರು.

.ಡಿಪಿ ನೋಡಿದೆ.ಹೌದು.ಪುಸ್ತಕ ಬೇಕೆಂದಿದ್ದವರು ನನ್ನ ಸಂಸ್ಕೃತ ಎಂಎ ಗುರುಗಳಾದ ಡಾ.ಪದ್ಮನಾಭ ಮರಾಠೆಯವರಾಗಿದ್ದರು.

ಅವರ ನಂಬರ್ ನನ್ನಲ್ಲಿ ಇತ್ತು‌


ಮೊಬೈಲ್ ಕಳೆದು ಹೋಗಿ ಅವರ ನಂಬರ್ ನನ್ನಲ್ಲಿ ಕಳೆದು ಹೋಗಿತ್ತು.ಹಾಗಾಗಿ ಶುರುವಿಗೆ ಮೆಸೇಜ್ ಮಾಡಿದಾಗ ನಾನು ಯಾರೆಂದು ಗಮನಿಸಿರಲಿಲ್ಲ 


ನನ್ನ ಗುರುಗಳೆಂದ ಮಾತ್ರಕ್ಕೆ ಅವರು ವಯಸ್ಸಿನಲ್ಲಿ ನನಗಿಂತ ತೀರಾ ಹಿರಿಯರೇನೂ ಅಲ್ಲ‌ ಅದರೆ ಜ್ಞಾನವೃದ್ದರು

ನಾನು ಕಟೀಲಿನಲ್ಲಿ ಸಂಸ್ಕೃತ ಎಂಎ ಶುರುವಾಗಿ ಮೂರನೆಯ ವರ್ಷ ಎಂದರೆ ಮೂರನೆಯ ಬ್ಯಾಚ್ ಗೆ ಸೇರಿದವಳು.

ನಮಗೆ ಉಪನ್ಯಾಸಕರಾಗಿ  ಬಹು ದೊಡ್ಡ ವಿದ್ವಾಂಸರಾದ ಡಾ.ನಾರಾಯಣ ಭಟ್ ,ಡಾ.ಜಿ ಎನ್ ಭಟ್ ಮತ್ತು ಆಗಷ್ಟೇ ಅಲ್ಕಿಯೇ  ಎಂಎ ಪಾಸಾದ ಪದ್ಮನಾಭ ಮರಾಠೆ ನಾಗರಾಜ್ ಇದ್ದರು.


ನಾನು ಎಂಎಗೆ ಬಹು ದೊಡ್ಡು ವಿದ್ವಾಂಸರಾದ ಹಿರಿಯರಾದ ಬಿಳಿಯ ಗಡ್ಡದ ರೇಷ್ಮೆ ಜುಬ್ಬ ಧರಿಸಿದ  ಬುದ್ದಿವಂತರ ಚೀಲ ಹಾಕಿದ ಸಿನೇಮಾಗಳಲ್ಕಿ ತೋರಿಸುತ್ತಿದ್ದ ರೀತಿಯ ಪ್ರೊಫೆಸರ್ ಗಳನ್ನು  ನಿರೀಕ್ಷೆ ಮಾಡಿದ್ದೆ.


ಪದ್ಮ‌ನಾಭ ಮರಾಠೆ ಮತ್ತು ನಾಗರಾಜ್ ಅಲ್ಲಿಯೇ ಮೊದಲ ಬ್ಯಾಚ್ ನಲ್ಲಿ ಎಂಎ ಓದಿ ಆಗಷ್ಟೇ ಎಂಎ ಎರಡನೇ ವರ್ಷದ ಅಂತಿಮ ಪರೀಕ್ಷೆ ಬರೆದವರು‌.ಫಲಿತಾಂಶ ಬಂದಿತ್ತೋ ಇಲ್ಲವೋ ನೆನಪಿಲ್ಲ ನನಗೆ.

ಪದ್ಮನಾಭ ಮರಾಠೆಯವರಿಗೆ ಮೊದಲ ರ‌್ಯಾಂಕ್ ಬಂದು ಗೋಲ್ಡ್ ಮೆಡಲು ಪಡೆದಿದ್ದರು.


ನಾಗರಾಜ್ ಉಜಿರೆಯಲ್ಲಿ ನನಗಿಂತ ಎರಡು ವರ್ಷ ಸೀನಿಯರ್ ಆಗಿದ್ದರು.ಅವರಿಗೆ ನನ್ನ  ಪರಿಚಯ ಇರಲಿಲ್ಲ‌.ಆದರೆ ನನಗೆ ಇತ್ತು.


ಇವರಿಬ್ಬರು ಹೆಚ್ಚು ಕಡಿಮೆ ನಮ್ಮದೇ ವಯಸ್ಸಿನವರಾಗಿದ್ದರು. ನಮಗೂ ಅವರಿಗೂ ಒಂದೆರಡು ವರ್ಷಗಳ ವಯಸ್ಸಿನ ಅಂತರ ಅಷ್ಟೇ ಇವರೆಂತ ಪಾಠ ಮಾಡಿಯಾರು ಎಂದು ನನಗೆ ಶುರುವಿಗೆ ಅನಿಸಿತ್ತು.

ನಾನು ಬಿಎಸ್ಸಿ ಮಾಡಿ ನಂತರ ಎಂ ಎ ಯಲ್ಲಿ ಆರ್ಟ್ಸ್ ಎಂದರೆ ಸಂಸ್ಕೃತವನ್ನು ತಗೊಂಡವಳು.


ಈ ವಿಜ್ಞಾನದ ವಿದ್ಯಾರ್ಥಿಗಳಿಗೆ ತಾವು ಅರ್ಟ್ಸ್ ,ಕಾಮರ್ಸ್  ವಿದ್ಯಾರ್ಥಿಗಳಿಗಿಂತ  ಜಾಣರು ಎಂಬ ಶ್ರೇಷ್ಠತೆಯ ವ್ಯಸನ ಇರುತ್ತದೆ.ನಾನು ಅದಕ್ಕೆ ಹೊರತಾಗಿರಲಿಲ್ಲ


ಹಾಗಾಗಿ ಬಿಎ ಬಿಕಾಂ( ನಾಗರಾಜರು ಬಿಕಾಂ ಮಾಡಿ ಸಂಸ್ಕೃತ ಎಂಎ ಮಾಡಿದವರು )  ಮಾಡಿ ಸಂಸ್ಕೃತ ಎಂಎ ಯನ್ನು ಆಗಷ್ಟೇ ಮುಗಿಸಿದ ಇವರಿಬ್ಬರ ಬಗ್ಗೆ ನನಗೆ ಮನಸಿನ ಒಳಗೆ ನಗು ಇತ್ತು.ಇವರೆಂತ ಎಂಎ ಗೆ ಪಾಠ ಮಾಡುದು ಎಂದು


ನಮಗಿಂತ ಗಿಡ್ಡ ಕಾಣುತ್ತಿದ್ದ ( ಕಾಣಿತ್ತದ್ದದ್ದು ಮಾತ್ರ ನಮಗಿಂತ ಎತ್ತರ ಇದ್ದರು  ಗಾತ್ರದಲ್ಲಿ ಮಾತ್ರವಲ್ಲ ಜ್ಞಾನದಲ್ಲಿಯೂ )ಇನ್ನೂ ಮೀಸೆ ಸರಿಯಾಗಿ ಬಾರದ, ಕ್ರಾಪ್ ಬಾಚಿದ  ಸಣ್ಣ ಹುಡುಗರಂತಿದ್ದ ಇವರಿಬ್ಬರನ್ನು  ನೋಡಿದಾಗ ಇವರೆಂತ ಪ್ರೊಫೆಸರ್ಗಳು ,,ಎಂತ ಪಾಠ ಮಾಡಿಯಾರು ಎನಿಸಿತ್ತು.

 ಆದರೆ ನನ್ನ ಊಹೆ ತಪ್ಪಾಗಿತ್ತು 

ಆದರೆ ಕಾಲೇಜು ಶುರುವಾಗಿ ಪಾಠ ಪ್ರವಚನಗಳು ಶುರುವಾದಾಗ ಪದ್ಮ ನಾಭ ಮರಾಠೆಯವರ ಪಾಂಡಿತ್ಯದ ಅರಿವಾಯಿತು.ಸಣ್ಣ ವಯಸ್ಸಿನ ಚಿಗುರು ಮೀಸೆಯ ಹುಡುಗರೂ ಪ್ರೊಫೆಸರ್ ಗಳಂತೆ ಪ್ರೌಢವಾಗಿ ಪಾಠ ಮಾಡಬಲ್ಲರು ಎಂದು ನನಗೆ ಮನವರಿಕೆ ಆಯಿತು.

ಆ ಸಮಯದಲ್ಲಿಯೇ ಅವರು ಎನ್ ಇ ಟಿ ಪಾಸಾಗಿದ್ದರು‌‌.ಆಗ ಎನ್ ಇ ಟಿ ಆದವರಿಗೆ ಸರ್ಕಾರಿ ಕಾಲೇಜಿನಲ್ಲಿ ಸುಲಭದಲ್ಲಿ ಕೆಲಸ ಸಿಗುತ್ತಾ ಇತ್ತು.ಇವರಿಗೆ ಊರು ಮನೆ ತೋಟ ತಂದೆ ತಾಯಿಯರನ್ನು ಬಿಟ್ಟು ಬೇರೆಡೆ ಹೋಗಲು ಇಷ್ಟವಿರಲಿಲ್ಲ.ಹಾಗೆ ಎಲ್ಲೂ ಯತ್ನ ಮಾಡಲಿಲ್ಲ.ಇಲ್ಲದಿದ್ದರೆ ಈಗ ಯುನಿವರ್ಸಿಟಿಯ ಪ್ರೊಫೆಸರ್ ಆಗಿ ಡೀನ್ ಆಗಿರುತ್ತಿದ್ದರು  ಆ ಹುದ್ದೆಗೆ ಇರುವ ಅರ್ಹತೆ ಅವರಲ್ಲಿ ಇತ್ತು.

1996 ರಲ್ಲಿ ಶಿಕಾರಿ ಪುರ ಸರ್ಕಾರಿ ಪಿಯು ಕಾಲೇಜಿಗೆ ಅಯ್ಕೆ ಆಗಿದ್ದರೂ ಅದನ್ನು ಬಿಟ್ಟಿದ್ದರು 


ಈಗಲೂ ಅವರು ಕಟೀಲು ಸಂಸ್ಕೃತ ಸ್ನಾತಕೋತ್ತರ ಕೇಂದ್ರದ ಸಂಸ್ಕೃತ ಪ್ರೊಫೆಸರೇ ಆಗಿದ್ದಾರೆ.

ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.


ಎನ್ ಇ ಟಿ ಅಂತ ಒಂದು ಪರೀಕ್ಷೆ ಇದೆ ಇದನ್ನು ಪಾಸ್ ಮಾಡಿದರೆ ಮಾತ್ರ ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಲು  ಸಾಧ್ಯ ಎಂಬುದನ್ನು ನಮಗೆ ತಿಳಿಸಿದವರು ಮರಾಠೆ ಸರ್ ನಮಗೆ‌.ಕೇವಲ ಪಠ್ಯದ ವಿಚಾರವಲ್ಲ.ಇತರ ವಿಚಾರಗಳ ಬಗ್ಗೆ ಕೂಡ ನಮಗೆ ತಿಳಿಸುತ್ತಾ ಇದ್ದರು.ಅನೇಕ ವಿಚಾರಗಳಲ್ಲಿ‌ಅವರಿಗೆ ಪ್ರೌಢಿಮೆ ಇತ್ತು 

ಒಂದು ಸಂಗತಿ ಹೇಳ್ತೇನೆ.ದೀಪದಿಂದ ಮಾತ್ರ ಇನ್ನೊಂದು  ದೀಪವನ್ನು ಬೆಳಗಲು ಸಾಧ್ಯ‌

ರ‌್ಯಾಂಕ್ ಎಂಬುದು ಬರಿಯ ಸರ್ಟಿಫೀಕೇಟ್ ಮಾತ್ರ ಪರೀಕ್ಷೆ  ಅಂಕ ಗಳಿಕೆ ಎಂದರೆ ಬರಿಯ ನೆನಪಿನ ಶಕ್ತಿಯ ಪರೀಕ್ಷೆ ಎನ್ನುವುದು ಸಿನಿಕತನ 

ಏಕಾಗ್ರತೆ ಇರುವವರಿಗೆ ಪರಿಶ್ರಮ‌ಪಡುವವರಿಗೆ  ಮಾತ್ರ ಉತ್ತಮ ಅಂಕ ಗಳಿಸಲು ಸಾದ್ಯವಾಗುತ್ತದೆ  ರ‌್ಯಾಂಕ್ ಬರುತ್ತದೆ .ಅಂತಹವರು ವೃತ್ತಿ ಜೀವನದಲ್ಲೂ ಹಾಗೆಯೇ ಇರುತ್ತಾರೆ

ಓರ್ವ ರ‌್ಯಾಂಕ್ ವಿಜೇತನಿಗೆ / ಪ್ರತಿಭಾವಂತನಿಗೆ ಉತ್ತಮ ಅಂಕ ಗಳಿಸುದು ಹೇಗೆ ಎಂಬ ವಿಚಾರ ಗೊತ್ತಿರುತ್ತದೆ .ಅಂತಹವರು ಶಿಕ್ಷಕ ವೃತ್ತಿಗೆ ಬಂದರೆ ತಮ್ಮ ವಿದ್ಯಾರ್ಥಿಗಳಿಗೂ ಅದನ್ನು ಹೇಳಿಕೊಡ್ತಾರೆ.

ನಾನು ಉತ್ತಮ ಅಂಕ ಗಳಿಸುದು ಹೇಗೆ ಎಂಬುದನ್ನು ಪದ್ಮನಾಭ ಮರಾಠೆಯವರಿಂದ ಕಲಿತೆ 

ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಪಡೆದದ್ದು ಮಾತ್ರವಲ್ಲದೆ ಕನ್ನಡ ಎಂಎ ಯಲ್ಲಿ ಕೂಡ ರ‌್ಯಾಂಕ್ ಗಳಿಸಿದೆ..

ಈಗ ನನ್ನ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸುವ ಬಗೆಯನ್ನು ಹೇಳಿಕೊಡ್ತೇನೆ‌.ಆದರೆ ಈ ಕೌಶಲ್ಯವನ್ನು ನಾನು ಗುರುಗಳಾದ ಪದ್ಮನಾಭ ಮರಾಠೆಯವರಿಂದಲೇ ಕಲ್ತದ್ದು ತರಗತಿಗೆ ತುಂಬಾ ತಯಾರಾಗಿ ಬರುತ್ತಾ  ಇದ್ದರು‌.

ಬಹಳ ವಿದ್ವತ್ ಪೂರ್ಣವಾದ ಪಾಠ ಅವರದು. 

ಈಗಲೂ ಅವರು ಹೇಳುತ್ತಿದ್ದ ಸುಭಾಷಿತಗಳನ್ನು ನಾನು ಭಾಷಣ ಮಾಡುವಾಗ ,ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಬಳಸುತ್ತೇನೆ.

ವಿದ್ಯಾರ್ಥಿನಿಯಾಗಿದ್ದಾಗ ನಾನು ಅವರ ಪ್ರಿಯ ಶಿಷ್ಯೆ ಆಗಿರಲಿಲ್ಲ..ನಾನು ಸಣ್ಣಾಗಿಂದಲೂ ಅತ್ಯುತ್ಸಾಹದ ಸ್ವಭಾವದವಳು..ನೇರ ಬೀಡು ಬೀಸು ಸ್ವಭಾವ,ಪೆಟ್ಟೊಂದು ತುಂಡೆರಡು ಎಂಬಂತೆ ಮಾತು.

ಅಲ್ಲದೆ ನನಗೆ ಎಂಎ ಗೆ ಸೇರುವ ಮೊದಲೇ ಮದುವೆಯಾಗಿದ್ದು ಉಳಿದವರ ಹಾಗೆ ಇರಲು ನನಗೆ ಆಗುತ್ತಿರಲಿಲ್ಲ.

1996 ಮೇಯಲ್ಲಿ ದ್ವಿತೀಯ ಎಂಎ ಪರೀಕ್ಷೆ ಬರೆದ ನಂತರ ದೀರ್ಘ ಸಮಯದ ನಂತರ ಇಪ್ಪತ್ತನಾಲ್ಕು ವರ್ಷಗಳ  ನಂತರ  2015 ರಲ್ಲಿ ನಾನು ಪದ್ಮನಾಭ ಮರಾಠೆಯವರನ್ನು ಕಟೀಲಿನಲ್ಲಿ  ಭೇಟಿಯಾದೆ ,ಕಟೀಲಿನಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರು 

.ನನ್ನನ್ನು  ಸಭಾ ಕಾರ್ಯಕ್ರಮ ಒಂದರ  ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಹ್ವಾನಿಸಿದ್ದು ನಾನು ಹೋಗಿದ್ದೆ.

ಆಗ ಅಲ್ಲಿ ಪದ್ಮನಾಭ ಮರಾಠೆಯವರನ್ನು ನಾನು ಆಕಸ್ಮಿಕವಾಗಿ ಭೇಟಿ ಮಾಡಿದೆ.ಆಗ

ನನಗೂ ನಲವತ್ತ ಮೂರು ವರ್ಷ ಆಗಿತ್ತು ಮರಾಠೆಯವರಿಗೂ  ನಲುವತ್ತೈದು ನಲುವತ್ತಾರು ಾಗಿದ್ದಿರಬಹುದು

ಇಬ್ಬರನ್ನೂ ಬದುಕಿನ ಅನುಭವ ಮಾಗಿಸಿತ್ತು .

ಬಹಳ ಮುಕ್ತವಾಗಿ ಮಾತನಾಡಿದೆವು.ಆಗ ಅವರು ಒಂದು ಮಾತು ಹೇಳಿದರು.ನಾವೂ ಆಗಷ್ಟೇ ಎಂಎ ಮುಗಿಸಿ ಉಪನ್ಯಾಸಕರಾದವರು.ನಾವು ಹೇಳಿದ ದಾರಿಯಲ್ಲಿಯೇ ವಿದ್ಯಾರ್ಥಿಗಳು ಸಾಗಬೇಕು ಎಂದು ಆಶಿಸಿದ್ದೆವು.ಈಗ ಹಾಗಲ್ಲ‌‌ನಾವು ಹೇಳಿದ ದಾರಿಯಲ್ಲಿ ವಿದ್ಯಾರ್ಥಿಗಳು ಹೋಗದಿದ್ದರೆ ಅವರು ಹೋದ ದಾರಿಯಲ್ಲಿ ನಾವು ಹೋದರಾಯಿತು ,ಹೇಗೋ ಒಂದು ಸರಿ ದಾರಿಯಲ್ಲಿ ನಡೆದರಾಯಿತು ಎಂದಿದ್ದರು.

ನನಗೂ ಅದು ಹೌದೆನಿಸಿತ್ತು.

ಇದಾದ ನಂತರ ನಾನುಯಾವುದೋ ಮಾಹಿತಿಗಾಗಿ  ಒಮ್ಮೆಕರೆ ಮಾಡಿ ಮಾತಾಡಿದ್ದೆ..ನನ್ನ ಫೇಸ್ ಬುಕ್ ಸ್ನೆಹಿತರಾಗಿದ್ದರೂ ಅವರು ಪೇಸ್ ಬುಕ್ ನಲ್ಲಿ‌ ಅಷ್ಟೊಂದು ಆಕ್ಟೀವ್ ಆಗಿ ಇರಲಿಲ್ಲ‌.ಹಾಗಾಗಿ ಅವರು ನನ್ನ ಪೋಸ್ಟ್ ಗಳನ್ನು ನನ್ನ ಅಧ್ಯಯನವನ್ನು ಗಮನಿಸುತ್ತಾರೆ ಎಂಬ ಊಹೆಯೂ ಇರಲಿಲ್ಲ

ಹಾಗಾಗಿ ನಮಸ್ತೆ ಪುಸ್ತಕ ಬೇಕು ಎಂದು ಮೆಸೇಜ್ ಮಾಡಿದಾಗಲೂ ನಾನವರನ್ನು ಗಮನಿಸಿರಲಿಲ್ಲ

ಅವರು ಹೆಸರು ಮತ್ತು ವಿಳಾಸ ಕಳುಹಿಸಿದಾಗಲೇ ನನಗೆ ತಲೆಗೆ ಹೋದದ್ದು ಅವರು ನನ್ನ ಸಂಸ್ಕೃತದ ಗುರುಗಳೆಂದು.

ಅವರೀಗ ದೊಡ್ಡ ಸಂಸ್ಕೃತ ವಿದ್ವಾಂಸರು .ಆದರೂ ನಾನವರ ವಿದ್ಯಾರ್ಥಿನಿ ಎಂಬ ಅಭಿಮಾನ ಜೊತೆಗೆ ತುಳು ಸಂಸ್ಕೃತಿ ಕುರಿತಾದ ಒಲವಿನಿಂದ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಪಾವತಿ ಮಾಡಿದ್ದಾರೆ.

ಅಧ್ಯಯನ ಶೀಲರು ಜೀವನವಿಡೀ ಹಾಗೆಯೆ ಇರ್ತಾರೆ ಎಂಬುದಕ್ಕೆ ಒಂದು ನಿದರ್ಶನವಾಗಿದ್ದಾರೆ.

ಇನ್ನೊಂದು ವಿಚಾರ ನಾನು ಗಮನಿಸಿದ್ದು..ನಾನು ಅವರ ವಿದ್ಯಾರ್ಥಿನಿ ವಯಸ್ಸಿನಲ್ಲೂ ,ಅನುಭವದಲ್ಲೂ ಜ್ಞಾನದಲ್ಲಿಯೂ ಕಿರಿಯಳು.ಹಾಗಾಗಿ ಅವರು ನಮಸ್ತೆ ಎನ್ನಬೇಕಿರಲಿಲ್ಲ.

ಲಕ್ಷ್ಮೀ ನನಗೊಂದು ಪುಸ್ತಕ ಬೇಕು ಎನ್ನ ಬಹುದಿತ್ತು.ಅದರೆ  ಎಲ್ಲರಿಗೂ ,ಅವರ ವಿದ್ಯಾರ್ಥಿನಿಗೂ ಕೂಡ ಗೌರವ ನೀಡುವ  ಅವರ ಸೌಜನ್ಯದ ವ್ಯಕ್ತಿತ್ವ  ಇಲ್ಲಿ ಎದ್ದು ಕಾಣುತ್ತದೆ‌.ಇದು ನಾವು ಅವರಿಂದ ಕಲಿಯಬೇಕಾದ ಅಂಶ ಎಂದು ನನಗನಿಸಿತು


शुभाशिषः सन्तु भवत्याः संशोधनाध्ययने ಎಂದು ಹಾರೈಸಿದ ಗುರುಗಳಾದ ಪದ್ಮ ನಾಭ ಮರಾಠೆಯವರಿಗೆ ವಂದಿಸಿದ್ದೇನೆ 

ಅವರು ವಿದ್ಯಾರ್ಥಿಗಳಿಗೆ ತೋರುವ ಗೌರವಾದರಗಳನ್ನು ನಾನೂ ಮುಂದಕ್ಕೆ ಅಳವಡಿಸಿಕೊಳ್ಳುವೆ

Tuesday 8 June 2021

ದೊಡಗಡವರ ದಾರಿ -77 ಬಹು ಎತ್ತರದ ವ್ಯಕ್ತಿತ್ವದ ಡಾ.ಬಿಎ ವಿವೇಕ ರೈ


 ದೊಡ್ಡವರ ದಾರಿ - ಎತ್ತರದ ವ್ಯಕ್ತಿತ್ವದ ಡಾ.ಬಿ ಎ ವಿವೇಕ ರೈ 

ಲಜ್ಷ್ಮೀಯವರೇ ನಮಸ್ಕಾರ ಎಂದಾಗ ಒಂದು ಕ್ಷಣ ನಾನು ಗಲಿಬಿಲಿಗೊಳಗಾಗಿದ್ದೆ 

ನಾನು ಕನ್ನಡ ಎಂಎಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿದ್ದಲ್ಲ.ಹಾಗಾಗಿ ಇಲ್ಲಿನ ಪ್ರಾಧ್ಯಾಪಕರ ನೇರ ಪರಿಚಯ ನನಗಿರಲಿಲ್ಲ.ಆದರೂ ಡಾ.ಬಿ ಎ ವಿವೇಕ ರೈ  ಬಗ್ಗೆ ಬಹಳ ಗಂಭೀರ ಸ್ವಭಾವದವರು ,ಬಹಳ ಸಮತೂಕದ ವ್ಯಕ್ತಿತ್ವದವರು ,ಅರ್ಹತೆ ಯಾರಲ್ಲಿಯೆ ಇದ್ದರೂ ಗುರುತಿಸುತ್ತಾರೆ ಇತ್ಯಾದಿ ಕೇಳಿ ತಿಳಿದಿದ್ದೆ


ನನ್ನ ಮೊದಲನೆಯ ಡಾಕ್ಟರೇಟ್ ಅಧ್ಯಯನ ಶುರು ಮಾಡಿದ ಸಂದರ್ಭದಲ್ಲಿ ನನಗೆ ಅವರನ್ನೊಮ್ಮೆ ಭೇಟಿ ಮಾಡಿ ಒಂದಷ್ಟು  ಮಾರ್ಗದರ್ಶನ ಪಡೆಯಬೇಕೆನಿಸಿತ್ತು.ಆಗ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ  ಉಪ ಕುಲಪತಿಗಳಾಗಿದ್ದರು.

ಹಾಗೆ ಮೈಸೂರಿಗೆ ಹೋಗಿ ಭೇಟಿಯಾಗಲು ಯತ್ನ ಮಾಡಿದ್ದೆ.ಅದರೆ ಅವರು ಬಹಳ ಬ್ಯುಸಿ ಇದ್ದರು.ಹಾಗಾಗಿ ಮಾತನಾಡಲಾಗಲಿಲ್ಕ.


ಅದಾಗಿ ಸುಮಾರು ಹತ್ತು ವರ್ಷಗಳ  ನಂತರ ಅವರನ್ನು ನಾನು ಬೆಂಗಳೂರಿನಲ್ಲಿ  ಪುಸ್ತಕ ಬಿಡುಗಡೆ ಕಾರ್ಯಕ್ರಮ ಒಂದರಲ್ಲಿ ಭೇಟಿಯಾಗಿದ್ದೆ.ಆಗ ನನ್ನ ಎರಡೂ ಡಾಕ್ಟರೇಟ್ ಪದವಿಗಳು ಕೂಡ ಸಿಕ್ಕಿ ಆಗಿತ್ತು.ಮಾತನಾಡುವದ್ದು ಏನೂ ಇರಲಿಲ್ಲ.ಒಂದು ಅವರ ಜೊತೆ ಪೋಟೋ ತೆಗೆಸಿಕೊಂಡಿದ್ದೆ ಅಷ್ಟೇ

ನನಗೆ ಯಾರಲ್ಲೂ ಅತಿ ವಿನಯ ಪ್ರದರ್ಶಿಸಿ ಓಂಗುವ ಅಭ್ಯಾಸವಿಲ್ಲ.ನನಗೇನಾದರೂ ಅಗತ್ಯದ ಕೆಲಸ ಇದ್ದರೇ ಆ  ಕೆಲಸದ ಬಗ್ಗೆ ಮಾತ್ರ ಮಾತಾಡ್ತೇನೆ.ಬೇರೆ ನೀನೇ ಇಂದ್ರ ಚಂದ್ರ ಎಂದು ಹಾಡಹೊಗಳುವ ಅಭ್ಯಾಸವಿಲ್ಲ‌.ನನಗೆ ಪುಸ್ತಕ ಬೇಕಿದ್ದರೆ ಖರೀದಿಸುತ್ತೇನೆ‌.ದುಡ್ಡು ಕೊಟ್ಟು ಖರೀದಿಸಿದ ಪುಸ್ತಕದದ ಮೇಲೆ ಹಸ್ತಾಕ್ಷರ ಪಡೆವ ಅಭ್ಯಾಸ ನಾನಿಟ್ಟುಕೊಂಡಿಲ್ಲ.


ಇದರ ನಡುವೆ ನಾನು ಮಂಗಳೂರು ಯುನಿವರ್ಸಿಟಿಯ ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ನನ್ನ ಆತ್ಮೀಯರಾದ ಸ್ವಂತ ಅಣ್ಣನಂತೆ ಇರುವ ರಾಮಚಂದ್ರ ಭಟ್ ಅವರಲ್ಲಿ ಅಲ್ಲಿ ನೀಡಿದ API ಆಧಾರಿತ ಅಂಕಗಳನ್ನು ಪ್ರಶ್ನಿಸಬಹುದು ಎಂದು ಸಲಹೆ ನೀಡಿದ್ದರು.ಶೈಕ್ಷಣಿಕ ಅರ್ಹತೆ,ಎಂ ಎ ಮಾರ್ಕ್ಸ್  ಎನ್ ಇ ಟಿ ಡಾಕ್ಟರೇಟ್ ) ಮತ್ತು ಸಂಶೋಧನಾ ಪ್ರಕಟಣೆಗಳಿಗೆ ಸಂಬಂಧಿಸಿದ 57  ಅಂಕಗಳನ್ನು ಸಂದರ್ಶನಕ್ಕೆ ಮೊದಲೇ ನೀಡುತ್ತಾರೆ.ಇದರಲ್ಲಿ ಧನಂಜಯ ಕುಂಬಳೆ ಅವರಿಗೆ ಸಂಶೋಧನಾ ಪ್ರಕಟಣೆಯ ವಿಭಾಗದಲ್ಲಿ ಕೇವಲ ಎರಡು ಪುಸ್ತಕ ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಗ್ರಂಥ ಆಗಿತ್ತು.ಹಾಗಾಗಿ ಅವರಿಗೆ ಈ ವಿಭಾಗದ ಇಪ್ಪತ್ತು ಅಂಕಗಳಲ್ಲಿ ಐದು ಮಾತ್ರ ನೀಡಬೇಕಿತ್ತು.ಆದರೆ ಪೂರ್ಣಾಂಕ  20 ಅನ್ನು ನೀಡಿದ್ದರು.ನನ್ನದು ಹದಿನೇಳು ಪುಸ್ತಕಗಳಿದ್ದ ಕಾರಣ ಹೇಗೂ ಪೂರ್ಣಾಂಕ  20 ಬಂದಿತ್ತು.ಆದರೆ ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹದಿನೈದು ಅಂಕ ಹೆಚ್ಚು ನೀಡಿದ್ದು ನನಗೆ ಗೊತ್ತಾಯಿತು.ಬಹುಶಃ ವಿವೇಕ ರೈಗಳಿಗೆ ಮೊದಲೇ ಗೊತ್ತಿತ್ತೋ ಅಥವಾ ವೀಸಿಯಾಗಿ ನಿವೃತ್ತರಾದ ಅವರಿಗೆ ಇದರ ಕಲ್ಪನೆ ಇತ್ತೋ ಗೊತ್ತಿಲ್ಲ.ಅಂತಹದೊಂದು ಸಂದರ್ಭವನ್ನು ಊಹಿಸಿ   ಸಲಹೆ ನೀಡಿದ್ದಂತೂ ನಿಜ

ಅಂತೆಯೇ ಅದನ್ನು ನಾನಲ್ಲಿ ಪ್ರಶ್ನಿಸಿದೆ.ಸರಿ ಇಲ್ಲ ಎನಿಸಿದರೆ ಕೋರ್ಟಿಗೆ ಹೋಗಿ ಎಂಬ ಸಿದ್ದ ಉತ್ತರ ತಯಾರಾಗಿತ್ತು.ಅದೇ ಉತ್ತರ ಬಂತು

ಹಾಗೆ ಹೇಳುವಾಗಲೇ ಅಲ್ಲಿ‌ವರಿಗೆ ಕೋರ್ಟಿಗೆ ಹೋಗಿ ಗೆಲ್ಲಲು ಆಗುವುದಿಲ್ಲ ಎಂಬ ಸಂಗತಿ ಗೊತ್ತಿತ್ತು.ಯಾಕೆಂದರೆ ಕೋರ್ಟ್ ಅರ್ಹತೆಯನ್ನು ನಿರ್ಧರಿಸುದು ಆಯ್ಕೆ ಸಮಿತಿ ಅದರಲ್ಲಿ ಇಂಟರ್ಫಿಯರ್ ಆಗಲು ಕಾನೂನಿನಲ್ಲಿ ಅವಕಾಶ ಇಲ್ಲ‌ಎಂಬ ಒಂದೇ ಮಾತಿನಲ್ಲಿ ನಮಗೆ ಹೆಚ್ಚು ಅರ್ಹತೆ ಇದೆ ಎಂಬ ವಾದವನ್ನು ತಳ್ಳಿ ಹಾಕುತ್ತದೆ.

ಇದು ಅಲ್ಲಿನ ಆಯ್ಕೆ ಕಮಿಟಿಯ ಮುಖ್ಯಸ್ಥರಾಗಿದ್ದ ಡಾ.ಚಿನ್ನಪ್ಪಗೌಡ ಹಾಗೂ ಇತರರಿಗೆ ಗೊತ್ತಿದ್ದಿರಬಹುದು‌ ಯಾಕೆಂದರೆ ಮಂಗಳೂರು ಯುನಿವರ್ಸಿಟಿ ಪ್ರಾಧ್ಯಾಪಕ ಹುದ್ದೆಗೆ ಅಯ್ಕೆಯಾದಾಗ ಅವರಿಗಿಂತ ಹೆಚ್ಚು ಅರ್ಹತೆ ಇದ್ದವರು ( ಇವರಿಗೆ ಪಿಎಚ್ ಡಿ ಆಗಿರಲಿಲ್ಲವಂತೆ ,ಅವರಿಗೆ ಆಗಿತ್ತಂತೆ ) ಒಬ್ಬರು ಕೋರ್ಟಿಗೆ ಹೋಗಿದ್ದರಂತೆ.ಆಗಲೂ ಅರ್ಜತೆಯನ್ನು ನಿರ್ಧರಿಸುದು ಅಯ್ಕೆ ಸಮಿತಿ ಕೋರ್ಟಿಗೆ ಇಂಟಫಿಯರ್ ಆಗಲು ಆಗುದಿಲ್ಲ ಎಂಬ ತೀರ್ಪು ಬಂದಿತ್ತಂತೆ‌ಇದು ನಿಜವಾ ಸುಳ್ಳಾ ಗೊತ್ತಿಲ್ಲ.ಆದರೆ ಐವತ್ತು ಅರುವತ್ತು ಲಕ್ಷ ಲಂಚ ತಗೊಂಡರೂ ಧೈರ್ಯವಾಗಿ ಇರುವ ವಿಸಿ ,ಪ್ರೊಫೆಸರ್ ಗಳನ್ನು ಕಾಣುವಾಗ ಇದು ನಿಜವಿರಬಹುದೆನಿಸುತ್ತದೆ‌ ಮಂಗಳೂರು ಯುನಿವರ್ಸಿಟಿ ಕನ್ನಡ ವಿಭಾಗ ನೇಮಕಾತಿಯಲ್ಲಿ  ಅನ್ಯಾಯವಾಗಿದೆ ಎಂದು ನಾನು ಕೋರ್ಟಿಗೆ ಹೋದಾಗಲೂ ಇದೇ ಉತ್ತರ ಸಿಕ್ಕಿತ್ತು.ಭ್ರಷ್ಟರ ಕೂದಲು ಕೂಡ ಕೊಂಕಲಿಲ್ಲ


ಇರಲಿ..ಆದರೆ ಇಂತಹದ್ದೊಂದರ ಸೂಚನೆ ಡಾ.ಬಿಎ ವಿವೇಕ ರೈಗಳಿಗಿದ್ದೇ ಅವರು ಈ ಬಗ್ಗೆ ಸಲಹೆ ನೀಡಿರಬಹುದು


ಅವರಿಗೆ ನನ್ನ ಪರಿಚಯ ಇದ್ದಿರಲಾರದು‌ನನ್ನ ಬಗ್ಗೆ ,ನನ್ನ ಅಧ್ಯಯನದ ಬಗ್ಗೆ ತಿಳಿದಿರಲಾರದು ಎಂದೇ ನಾನು ಭಾವಿಸಿದ್ದೆ


ಕಾಂತಾವರ ಕನ್ನಡ ಸಂಘದ  ಮೂಲಕ ನಾಡಿಗೆ ಗಣನೀಯವಾದ  ಕೊಡುಗೆ ನೀಡಿದವರ ಬಗ್ಗೆ ನಾಡಿಗೆ ನಮಸ್ಕಾರ ಸರಣಿಯಲ್ಲಿ ಡಾ.ನಾ.ಮೊಗಸಾಲೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದು ಇತ್ತೀಚೆಗೆ ಎರಡು ವರ್ಷಗಳ ಮೊದಲು ನನ್ನ ಬಗ್ಗೆಯೂ ತುಳು ಸಂಸ್ಕೃತಿಯ ಸಂಶೋಧಕಿ ಲಕ್ಷ್ಮೀ ಜಿ ಪ್ರಸಾದ್ ವಾರಣಾಸಿ ಎಂಬ   ಪುಸ್ತಕ ಪ್ರಕಟಿಸಿದರು.

ಅದರ ಬಿಡುಗಡೆ ಸಮಾರಂಭಕ್ಕೆ ನಾನು ಕಾಂತಾವರಕ್ಕೆ ಹೋಗಿದ್ದೆ.


ಹಿಂದಿನ ದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರು ತಲುಪಿ ಸ್ನೇಹಿತೆಯ ಮನೆಗೆ ಹೋಗಿ ಸ್ನಾನ ಗೀನ‌ ಮುಗಿಸಿ ತಿಂಡಿ ತಿಂದು ಬಾಡಿಗೆ ಕಾರು ಮಾಡ ಹೊರಟಿದ್ದೆ.ಅರ್ಧ ದಾರಿ ತಲುಪುವಾಗ ಕಾರು ಹಾಳಾಗಿ ನಿಂತಿತು.ಅಲ್ಲಿಂದ ಬಸ್ ಹಿಡಿದು ಕಾಂತಾವರ ಕನ್ನಡ ಭವನ ತಲುಪುವಾಗ ಹನ್ನೊಂದು ಗಂಟೆ ಆಗಿತ್ತು.


ಎದುರಿಗೆ ಸಿಕ್ಕಿದ ಹಿರಿಯರಾದ ಡಾ.ನಾ ಮೊಗಸಾಲೆಯವರು ಬಹಳ ಪ್ರೀತಿಯಿಂದ ಸ್ವಾಗತಿಸಿ ತಿಂಡಿ ತಿಂದು  ಕಾಫಿ ಕುಡಿದು ಬನ್ನಿ ಎಂದು ಒಳಗೆ ಕಳುಹಿಸಿದರು.


ರಣ ಬಿಸಿಲಿಗೆ ಬಂದ ನನಗೆ ಒಳ ಹೊಕ್ಕಾಗ ಏನೂ ಕಾಣಿಸುತ್ತಿರಲಿಲ್ಲ.ಕೆಪ್ ಮುಪ್ಪಾಗಿ ಆ ಕಡೆ ಈ ಕಡೆ ನೋಡುತ್ತಿದ್ದೆ.


ಆಗ ಲಕ್ಷ್ಮಿಯವರಿಗೆ ನಮಸ್ಕಾರ ಎಂಬ ಗಂಭೀರವಾದ ದ್ವನಿ ಕೇಳಿಸಿತು.ಯಾರೆಂದು ನೋಡಿದರೆ ಉಪ್ಪರಿಗೆ ಮೆಟ್ಟಲಿನಿಂದ ಇಳಿದು ಬರುತ್ತಿದ್ದ ಡಾ ವಿವೇಕ್ ರೈ ಮತ್ತಿರರನ್ನು ನೋಡಿದೆ‌‌‌‌.ಹಾಗಂದಿದ್ದು ವಿವೇಕ ರೈಗಳೆಂದು ಅರ್ಥ ಮಾಡಿಕೊಂಡು ಅವರಿಗೆ ನಮಸ್ಕರಿಸಿದೆ.


ನನಗೆ ತುಂಬಾ ಅಚ್ಚರಿ ಆಗಿತ್ತು ಆಗ.ನನ್ನ ಮುಖ ಪರಿಚಯ ಬಿಡಿ ಹೆಸರು ಕೂಡ ಅವರಿಗೆ ತಿಳಿದಿರಲಾರರು ಎಂದು ನಾನು ಭಾವಿಸಿದ್ದೆ.


ಬಹಳ ದೊಡ್ಡ ವ್ಯಕ್ತಿ ಅವರು .ಯುನಿವರ್ಸಿಟಿಯ ವಿಸಿಯಾಗಿ ನಿವೃತ್ತರಾದವರು.ವಿದೇಶೀ ವಿಶ್ವ ವಿದ್ಯಾಲಯಗಳ ಆಹ್ವಾನಿತ ಅತಿಥಿ ಉಪನ್ಯಾಸಕರಾಗಿ ಬಲು ದೊಡ್ಡ ಗೌರವಕ್ಕೆ ಪಾತ್ರರಾದವರು...ಅವರೆಲ್ಲಿ..ಸಾಮಾನ್ಯ ಉಪನ್ಯಾಸಕಿಯಾಗಿರುವ ನಾನೆಲ್ಲಿ ? 


ಹಾಗಾಗಿ ಅವರೇ ಲಕ್ಷ್ಮೀಯವರಿಗೆ ನಮಸ್ಕಾರ ಎಂದಾಗ ಒಂದು ಕ್ಷಣ ಗಲಿಬಿಲಿಗೆ ಒಳಗಾಗಿದ್ದೆ.


ನಂತರ ನಾನು ಕಾಫಿ ಕುಡಿಯಲು ಹೋದೆ ಅಲ್ಲಿ ಈ ಪುಸ್ತಕದ ಸಂಪಾದಕರಾದ ಡಾ.ಜನಾರ್ದನ ಭಟ್ ಲೇಖಕರಾದ ಗುಣಾಜೆ ರಾಮಚಂದ್ರ ಭಟ್ ಸಿಕ್ಕರು.

ನಂತರ ಸಭಾ ಕಾರ್ಯಕ್ರಮ,ಪುಸ್ತಕ ಬಿಡುಗಡೆಯನ್ನು ತುಕಾರಾಮ ಪೂಜಾರಿಯವರು ಮಾಡಿದರು ( ಕಾಲನ ನಡೆ ಬಹಳ ವಿಚಿತ್ರವಾದುದು ,ಈ ಬಗ್ಗೆ ಇನ್ನೊಂದಿನ ಬರೆಯುವೆ  )

ನಂತರ ಮೀಯಪದವು ಪ್ರೌಢ ಶಾಲೆಯ ರಾಜಾರಾಮ‌ಮಾಸ್ಟ್ರು ತಮ್ಮ  ಕಾರಿನಲ್ಲಿ ಮನೆಗೆ ತನಕ ಬಿಟ್ಟರು .


ಈ ವಿಚಾರವನ್ನು ಮರೆತೇ ಬಿಟ್ಟಿದ್ದೆ ಕೂಡ‌.ನಿನ್ನೆ ಫ್ಯಾಕ್ಟ್ ಚೆಕ್ ಒಂದರಲ್ಲಿ ನಮ್ಮ‌ ಪ್ರಧಾನಿ ಯವರಾದ ನರೇಂದ್ರ ಮೋದಿಯವರು ಸಾಮಾಜಿಕ ಕಾರ್ಯಕರ್ತೆ ಮೊಂಡಲ್  ಅವರಿಗೆ ನಮಸ್ಕರಿಸಿದ ಫೋಟೋ ನೋಡಿದೆ


ಆ ಬಗ್ಗೆ ಮೊಂಡಲ್  ಅವರು ನರೇಂದ್ರ ಮೋದಿಯವರಿಗೆ ನಾನು ನಮಸ್ಕರಿಸಿದೆ ಆಗ ನೀವು ಏನು ಮಾಡುತ್ತೀರಿ ಎಂದು ವಿಚಾರಿಸಿದರು.ಆಗ ನಾನು ಸಮಾಜ ಸೇವಾ ಕಾರ್ಯಕರ್ತೆ ಎಂದೆ.ಆಗ ಅವರು ಕೈಮುಗಿದರು.

ಆಗ ನನಗೆಷ್ಟು ಸಂತಸವಾಯಿತೆಂದು ನನ್ನ ನಗುತ್ತಿರುವ ಫೋಟೋ ನೋಡಿದರೆ ತಿಳಿಯಬಹುದು ಎಂದಿದ್ದ ಬಗ್ಗೆ ವಿವರಣೆ ಇತ್ತು


ಹೌದು‌.ದೊಡ್ಡವರು ಯಾವಾಗಲೂ ಹಾಗೆಯೇ..ಅರ್ಹತೆಯನ್ನು ಗುರುತಿಸಿ ಅವರಿಗೆ ತಲೆಬಾಗುತ್ತಾರೆ.


ಆಗ ನನಗೆ ಡಾ.ಬಿ ಎ ವಿವೇಕ ರೈಗಳು ಕಾಂತಾವರದಲ್ಲಿ  ಅವರಾಗಿಯೇ  ಕರೆದು ನಮಸ್ಕರಿಸಿದ್ದು ನೆನಪಾಯಿತು.


ದೊಡ್ಡವರ ನಡೆ ಯಾವಾಗಲೂ ಹಾಗೆಯೇ..ಅನೂಹ್ಯವಾದದ್ದು.

ದೊಡ್ಡವರು ಯಾವಾಗಲೂ ಒಳಿತನ್ನು ಗುರುತಿಸಿ ಗೌರವಿಸುತ್ತಾರೆ.


ಅವರು ನಮಗೆ ನಮಸ್ಕರಿಸಿದ್ದಾರೆ ಎಂದರೆ ನಾವು ದೊಡ್ಡವರು ಎಂದರ್ಥವಲ್ಲ.ಅವರಿಗೆ ಎಳೆಯರಲ್ಲಿನ ಅರ್ಹತೆಯನ್ನು ಗುರುತಿಸಿ ಗೌರವಿಸುವ ಉದಾರ ಹೃದಯ ಇದೆ ಎಂದು ಅರ್ಥ ಅಷ್ಟೇ‌


ಡಾ.ಬಿ ಎ ವಿವೇಕ ರೈಗಳು ಎಷ್ಟು ಎತ್ತರದ ವ್ಯಕ್ತಿ ಎಂದಿದರಲ್ಲಿ ಅರ್ಥವಾಗುತ್ತದೆ.ಆ ಪೊಂಜೋವಿನ ಪಾತೆರನ್ ಎಂಕುಲು ಲೆಕ್ಕೊಗ್ ದೀಪುಜ್ಜ ( ಅ ಹೆಂಗಸಿನ ಮಾತನ್ನು ನಾನು ಲೆಕ್ಕಕ್ಕೆ ತಗೊಳ್ಳುದಿಲ್ಲ ) ಸರ್ಟಿಫಿಕೇಟ್ ಗಳು ಮಾನದಂಡವಲ್ಲ ಎಂಬವರ ನಡುವೆ ಇವರು ಭಿನ್ನರಾಗಿ ನಿಲ್ಲುತ್ತಾರೆ.


ಭ್ರಷ್ಟರಿಗೆ ನನ್ನ ಮೂರು ಎಂಎ ಎರಡು ಡಾಕ್ಡರೇಟ್ ಪದವಿಗಳ,ಇನ್ನೂರರಷ್ಡು ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳ ಬಗೆಗಿನ ಸರ್ಟಿಫಿಕೇಟ್ ಗಳು ಮಾನದಂಡವಲ್ಲ.ಪ್ರಕಟಿತ ಇಪ್ಪತ್ತು ಪುಸ್ತಕಗಳು,ಬರಹಗಳು ಮಾನದಂಡವಲ್ಲ‌ಹಾಗಾದರೆ ಆಯ್ಕೆ ಸಮಿತಿಯವರ ಮಾನ ದಂಡ ಯಾವುದು ? ಮಾನವೂ ಇಲ್ಲ..ದಂಡವೇ ಎಲ್ಲ..ದುಡ್ಡು,ಜಾತಿ ,ಇನ್ಪ್ಲೂಯೆನ್ಸ್ ಅಷ್ಟೇ ಎಲ್ಲ 


ಮಾನ ಇರುವ ಹಿರಿಯರಿಗೆ ಅರ್ಹತೆ ಕಾಣಿಸುತ್ತದೆ ಎಂಬುದಕ್ಕೆ ವಿವೇಕ ರೈಗಳೇ ಸಾಕ್ಷಿ 

ತುಳು ಜಾನಪದ ಸಂಸ್ಕೃತಿ ಅದರಲ್ಲೂ ನಡು ರಾತ್ರಿ ನಡೆವ ಭೂತ ಕೋಲವನ್ನು ರೆಕಾರ್ಡ್ ಮಾಡಿ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕುದು ಎಷ್ಟು ಕಷ್ಟದ ವಿಚಾರ ಹೇಳುದು ಮೂಲತಃ ಜಾನಪದ ಸಂಶೋಧಕರಾದ ಅವರಿಗೆ ಅರಿವಿತ್ತು.ಫ್ಯಾನ್ ಅಡಿಯಲ್ಲಿ ಕುಳಿತು ಯಾರದೊ ಕೃತಿ ಬಗ್ಗೆ ಬರೆದು ಡಾಕ್ಟರೇಟ್ ಪದವಿ ಪಡೆವದಕ್ಕೂ ಕ್ಷೇತ್ರ ಕಾರ್ಯದ ಆಧಾರಿತ ಅಧ್ಯಯನಕ್ಕೂ ಅಜಗಜಾಂತರವಿದೆ.ಅದರ ಮಹತ್ವವನ್ನು ಡಾ.ವಿವೇಕ ರೈಗಳು ಗುರುತಿಸಿದ್ದರು 


ಡಾ.ಲಕ್ಷ್ಮೀ ಜಿ ಪ್ರಸಾದ್