Tuesday 29 December 2020

ನನಗೂ ಆತ್ಮವಿದೆ..ಅದಕ್ಕೂ ಒಂದು ಕತೆಯಿದೆ: ತಾಯಿಯನ್ನೂ ಅಪಶಕುನ ಎಂದಿದ್ದರು

 ಸತೀ ಪದ್ದತಿ ಮುಸ್ಲಿಂ ಅಕ್ರಮಣಕಾರರಿಂದಾಗಿ ಬಂತು.ಅವರ ದೌರ್ಜನ್ಯಕ್ಕೆ ಹೆದರಿ ವಿಧವೆಯರು ಗಂಡನ ಚಿತೆಗೆ ಹಾರಿ ಸಾಯುತ್ತಿದ್ದರು ಇತ್ಯಾದಿಯಾಗಿ ನಾನೂ ಓದಿದ್ದೆ.ನಂತರ ಅದು ಸಂಪ್ರದಾಯವಾಯಿತು ಎಂದು


ಇಲ್ಲೊಂದು ಪ್ರಶ್ನೆ ಇದೆ.ಮುಸ್ಲಿಂ ಅಕ್ರಮಣಗಾರರು ವಿಧವೆಯರನ್ನು ಮಾತ್ರ ಹೊತ್ತೊಯ್ಯುತ್ತಿದ್ದರೇ? ಸೋತ ಅರಸನ ಪಾಳಯದ ಗಂಡನಿರುವ ಸ್ತ್ರೀಯರನ್ನು ,ವಿವಾಹ ವಾಗದ ಹುಡುಗಿಯರನ್ನು ಸೆಳೆದೊಯ್ಯುತ್ತಿರಲಿಲ್ಲವೇ? ಅವರುಗಳೇಕೆ ವಿದವಾ ಸ್ತ್ರೀಯರಂತೆ ಚಿತೆಗೆ ಹಾರಿ ಸಾಯಲಿಲ್ಲ? 

ತಮ್ಮ ತಮ್ಮ ಹೆಂಡತಿಯರನ್ನು ಗಂಡ ಕಾಯುತ್ತಿದ್ದನೇ ? ಹಾಗಾದರೇಕೆ ಗಂಡನನ್ನು ಕಳೆದುಕೊಂಡ ತಮ್ಮ ಅಕ್ಕ ತಂಗಿಯರನ್ನು ಕಾಯಲಿಲ್ಲ.ತಮ್ಮ ಹೆಂಡತಿ‌ಮಕ್ಕಳನ್ನು ಕಾಯುವ ಸಾಮರ್ಥ್ಯ ಇರುವವರಿಗೆ ತಮ್ಮ‌ ಅಕ್ಕ ತಂಗಿಯರನ್ನು ಮುಸ್ಲಿಂ ಅಕ್ರಮಣಗಾರರು ಸೆಳೆದೊಯ್ಯದಂತೆ ಕಾಪಾಡುವ ಸಾಮರ್ಥ್ಯ ಇರಲಿಲ್ಲವೇ? ಮನಸ್ಸಿರಲಿಲ್ಲವೇ ? 

ಹೆಣ್ಣನ್ನು ಕದ್ದೊಯ್ಯುವಾಗ ತಡೆದು ಯುದ್ದ ಮಾಡಿ ಮರಣವನ್ನಪ್ಪಿದ ವೀರರ ಬಗ್ಗೆ ಉಲ್ಲೇಖಗಳಿವೆ.ಇವರು ವಿಧವೆಯರ ರಕ್ಷಣೆಗಾಗಿ ಹೋರಾಡಿದವರೇ ? ಈ ಬಗ್ಗೆ ಸ್ಪಷ್ಟತೆ ಇಲ್ಲ.

ಈ  ಪೆಣ್ಣುಬ್ಬಯಲ್,ತರುಗೋಳ್  ಗಳ ಉಲ್ಲೇಖ ಇತಿಹಾಸದಲ್ಲಿದೆ.

ಇದನ್ನು ಗಮನಿಸುವಾಗ ಸತಿ ಪದ್ದತಿಗೆ ಕೇವಲ‌ ಮುಸ್ಲಿಂ ಆಕ್ರಮಣಕಾರರು ಮಾತ್ರ ಕಾರಣವಲ್ಲ ಎಂದೆನಿಸುತ್ತದೆ.

ವಿಧವೆಯರಿಗೆ ಸಮಾಜದಲ್ಲಿ ಭದ್ರತೆ ಇರಲಿಲ್ಲ.ಒಂದೊಮ್ಮೆ ಸತಿಯಾಗದೆ ಉಳಿದರೆ ತಲೆಬೋಳಿಸಿ‌ ವಿರೂಪಗೊಳಿಸಿ  ಕೆಂಪು ಮಡಿ ಬಟ್ಟೆ ಉಡಿಸುತ್ತಿದ್ದರು.

ಇದಕ್ಕೆ ಅವಳ ಮೇಲೆ ಯಾರ ಕಾಮುಕರ ಕಣ್ಣು ಬೀಳದಿರಲಿ ಮಾಡುದು ಎಂಬ ಸಮರ್ಥನೆಯ ಮಾತುಗಳನ್ನೂ ಕೇಳಿದ್ದೇವೆ.

ಕಾಮುಕರ ಕಣ್ಣು ವಿಧವಾ ಸ್ತ್ರೀಯರ ಮೇಲೆ ಮಾತ್ರ ಬೀಳುತ್ತದೆಯಾ ? ಇತರ ಮುತ್ತೈದೆಯರ ಮೇಲೇಕೆ ಬೀಳುವುದಿಲ್ಲ.ಯಾಕೆಂದರೆ ವಿಧವೆಯರನ್ನು ಏನು ಮಾಡಿದರೂ ಕೇಳುವವರಿರಲಿಲ್ಲ ಅಷ್ಟೇ.

ಕಾಮುಕರು ಎಲ್ಲೋ ದೂರದ ದೇಶದಿಂದ ಬಂದವರಲ್ಲ.

ಅದೇ ಊರಿನವರು ಅದೇ ಮನೆಯವರು.

ತಪ್ಪು ಕಾಮದ ಕಾಮಾಲೆ ಹತ್ತಿದ ಗಂಡಸಿದು‌.ಶಿಕ್ಷೆ ಹೆಣ್ಣಿಗೆ

ಇನ್ನು ವಿಧವಾ ಸ್ತ್ರೀ ಕೂಡ ಮನುಷ್ಯಳೇ..ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣಿಗೂ ದೈಹಿಕ ವಾಂಛೆಗಳಿರುತ್ತವೆ.ಹಾಗಾಗಿ ಕೆಲವು ವಿಧವಾ ಸ್ತ್ರೀಯೂ   ಎಡವಿರಬಹುದು.

ಮರು ಮದುವೆಯ ಮುಕ್ತ ಅವಕಾಶ ಇದ್ದಿದ್ದರೆ ಈ ಯಾವ ಸಮಸ್ಯೆಗಳೂ ಇರುತ್ತಿರಲಿಲ್ಲ.

ಇಂದಿಗೂ ಮರು ಮದುವೆಯಾದ ಹೆಣ್ಣನ್ನು ಕುಹಕದಿಂದ ನೋಡುವವರಿದ್ದಾರೆ ಎಂಬುದು ದುರಂತ.

ರಾಜಾರಮ ಮೋಹನ ರಾಯರ ಸತತ ಯತ್ನದುಂದಾಗಿ ಸತಿ ಪದ್ದತಿ ನಿಷೇಧದ ನಂತರ ವಿಧವೆಯರ ಪರಿಸ್ಥಿತಿ ಕಾಲಾಂತರದಲ್ಲಿ ಸುಧಾರಿಸುತ್ತಾ ಬಂತು.

ಸತಿಯಾಗದೆ ಇದ್ದವರು ತಲೆ ಬೋಳಿಸಿ ಮಡಿ ಅಜ್ಜಿಯಾಗಿ ಯಾರ್ಯಾರ ಸೇವೆ ಮಾಡುತ್ತಾ ಒಪ್ಪೊತ್ತು ಸಪ್ಪೆ ಊಟ ಉಂಡು ಬದುಕಬೇಕಾಗಿತ್ತು.ಇಂತಹ ಎರಡು ಮೂರು ಮಡಿ ಅಜ್ಜಿಯರನ್ನು ನಾನು ಸಣ್ಣಾಗಿರುವಾಗ ನೋಡಿದ್ದೆ‌ ಎಂದರೆ ಮೂವತ್ತು ಮುವತ್ತೈದು ವರ್ಷಗಳ ಹಿಂದೆ ಕೂಡ ಇಂತಹ ಹೀನಾಯ ಸ್ಥಿತಿ ವಿಧವಾ ಸ್ತ್ರೀಗೆ ಇತ್ತು. 

ಕಾಲಕ್ರಮೇಣ ತಲೆ ಬೋಳಿಸಿ ಮಡಿ ಮಾಡುದು ಕಡಿಮೆಯಾಯಿತು.

ಆದರೆ ವಿದವಾ ಸ್ತ್ರೀಯನ್ನು ಅಪಶಕುನ ಎಂದು ಭಾವಿಸುತ್ತಿದ್ದರು.ಈ ಬಗ್ಗೆ ಪ್ರಸಾದ್ ಹೇಳಿದ ಒಂದು ವಿಚಾರ ನೆನಪಾಗುತ್ತದೆ.

ಅದನ್ನು ಕೇಳಿ ಎಷ್ಟೋ ದಿನ ಅ ಪಾಪದ ಅಜ್ಜಿಗಾಗಿ ಮನ ಮರುಗಿತ್ತು.

ಪ್ರಸಾದರ ಹತ್ತಿರದ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಇದು.

ಅ ತಾಯಿಗೆ ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಗಂಡನ ಆಸ್ತಿ ಇತ್ತು.ಹಾಗಾಗಿ ಹೇಗೋ ನಾಲ್ಕು ಗಂಡು ಮಕ್ಕಳನ್ನು ಮೂರು ಹೆಣ್ಣು ಮಕ್ಕಳನ್ನು ದೊಡ್ಡ ಮಾಡಿದ್ದರು.

ಮಕ್ಕಳು ದೊಡ್ಡವರಾಗಿ ಪಾಲು ಪಂಚಾಯತಿಗೆ ಆಗಿ ಆಸ್ತಿ ಪಾಲಾಯಿತು.ತಾಯಿಗೆಂದು ಒಂದು ತುಂಡು ಭೂಮಿ ಇಡಲಿಲ್ಲ.ನಂತರ ಆ ವೃದ್ಧ ತಾಯಿ ಸಣ್ಣ ಮಗನ ಜೊತೆ ಇದ್ದರು.ಸಣ್ಣ ಮಗನ ಮದುವೆಯಾದ ನಂತರ ಸೊಸೆ ಉಪೇಕ್ಷೆ ಮಾಡಿದಳೋ ಅಥವಾ

ಅ ತಾಯಿಗೆ ದೊಡ್ಡ ಮಗನ ಮನೆಯಲ್ಲಿ ಸಾಯಬೇಕೆಂಬ  

ಹಂಬಲವೋ ಗೊತ್ತಿಲ್ಲ.ಅಲ್ಲೇ ಒಂದುವರೆ ಕಿಮೀ ದೂರದ ದೊಡ್ಡ ಮಗನ ಜೊತೆ ಇದ್ದರು.

ದೊಡ್ಡಮಗನಿಗೆ ಹೆಣ್ಣು ಗಂಡು ಮಕ್ಕಳಾಗಿ ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದರು.

ಹಾಗೆ ಮಗನ ಮಗಳನ್ನು ನೋಡಲು ಗಂಡಿನ ಕಡೆಯವರು ನೋಡಲು ಬರುವವರಿದ್ದರು.

ಮನೆಯಲ್ಲಿ ಸಂಭ್ರಮದ ವಾತಾವರಣ.

ಈ ಬಿಳಿಸೀರೆ ಉಡುವ ವಿಧವೆ ವೃದ್ದತಾಯಿಗೂ ಅದು ಸಂಭ್ರಮದ ವಿಚಾರವೇ.ಆಕೆಯೂ ಸಂಭ್ರಮದಿಂದ ಮನೆಯನ್ನು ಸ್ವಚ್ಛ ಮಾಡಿ ಸಿದ್ಧಪಡಿಸುತ್ತಿದ್ದರು.

ಆಗ ಮಗ ಬಂದವನೇ ತಾಯಿಯನ್ನು ಎಳೆದುಕೊಂಡು ಹೋಗಿ ಒಂದು ಬೇಡದ ಸಾಮಾನುಗಳನ್ನು ತುಂಬುವ ಕತ್ತಲೆಯ  ಕೊಠಡಿಯಲ್ಲಿ ಕೂಡು ಹಾಕಿ ಬಾಗಿಲು ಹಾಕಿ ಹೊರಗಿನಿಂದ ಬೀಗ ಹಾಕಿದ.

ವಿಧವೆ ತಾಯಿ ಹೊರಗೆ ಬಂದು ಕಾಣಿಸಿದರೆ ಅಪಶಕುನವಂತೆ.ಅದಕ್ಕಾಗಿ ಕೂಡಿ ಹಾಕಿದ..

ಯಾರೋ ಅಪಶಕುನ ಎಂದು ಅವಮಾನಿಸುದು ಬೇರೆ.ತಾನು ಹೊತ್ತು ಹೆತ್ತ ಮಗನೇ ಅಪಶಕುನ ಎಂದಾಗ ಆ ತಾಯಿಗೆ ಹೇಗಾದೀತು..ಅಬ್ಬಾ ಕ್ರೌರ್ಯವೇ.

ಆ ಹುಡುಗಿಯನ್ನು ನೋಡಲು ಬಂದವರು ತಾಯಿ ಎಲ್ಲಿ ಎಂದು ವಿಚಾರಿಸಿದಾಗ ಕೂಡಿ ಹಾಕಿದ ಕತ್ತಲೆಯ ಕೋಣೆಯಿಂದ ವೃದ್ಧ ತಾಯಿಯನ್ನು ಹೊರಗೆ ಕರೆದುಕೊಂಡು ಬಂದರು.

ಅ ಮಗಳಿಗೆ ಮದುವೆಯಾಯಿತು‌

ನಂತರದ ಮಗಳಿಗೂ ಮದುವೆಯಾಯಿತು.ಆ ತಾಯಿಯ ನಿಟ್ಟುಸಿರಿನ ಬಿಸಿ ತಾಗಿತೋ,ಆತನ ಪಾಪದ ಕೊಡ ತುಂಬಿತೋ,ಆ ಹೆಣ್ಣು ಮಗಳ ದುರದೃಷ್ಟವೋ ಏನೋ ತಿಳಿಯದು.

ಆಕೆಗೆ ಮದುವೆಯಾಗಿ ವರ್ಷದೊಳಗೆ ಗಂಡ ತೀರಿ ಹೋದ.ಅ ಸಮಯಕ್ಕೆ ಆಕೆ ತುಂಬು ಗರ್ಭಿಣಿ.ಹಾಗಾಗಿ ಅವಳಿಗೆ ವಿಷಯವನ್ನು ತಿಳಿಸಲಿಲ್ಲ.ಒಂದೆರಡು ದಿನಕ್ಕೆ ಹೆಣ್ಣು‌ಮಗು ಹುಟ್ಟಿತು.ತಂದೆಯ ಮುಖವನ್ನೇ ಕಾಣದ ಆ ಮೊಮ್ಮಗುವನ್ನು ,ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಮಗಳನ್ನು ಯಾವ ಕೊರತೆಯೂ ಕಾಡದಂತೆ  ಸಾಕಿದರು.

ತಾಯಿಯನ್ನು ವಿಧವೆ ಅಪಶಕುನ ಎಂದು ಕೀಳಾಗಿ ಕಂಡವನಿಗೆ ದಿನಾಲೂ ಗಂಡನನ್ನು ಕಳೆದುಕೊಂಡು ದುಃಖಿಸುವ ಮಗಳನ್ನು ಕಾಣುವ ದುರಂತ ಬಂದೊದಗಿತ್ತು.

ಅವಳ ಮಗಳೂ ಈಗ ದೊಡ್ಡವಳಾಗಿದ್ದಾಳೆ.ಅಜ್ಜನ ನಂತರ ಸೋದರ ಮಾವಂದಿರು ತಮ್ಮ ಮಕ್ಕಳಿಗಿಂತ ಪ್ರೀತಿಯಿಂದ ಇವಳನ್ನು ಸಾಕಿದ್ದಾರೆ.ಆದರೂ ಅವಳ ಮದುವೆಯಂದು ಅವಳ ತಂದೆ ತಾಯಿಯ ಸ್ಥಾನದಲ್ಲಿ ಕುಳಿತವರು ಆಕೆಯ ವಿದ್ಯಾರ್ಥಿಯ ತಂದೆ ತಾಯಿ.

ಯಾರೋ ಆಕೆಯನ್ನು ಧಾರೆ ಎರೆದುಕೊಡಬೇಕಾಗಿ ಬಂದುದರ ಹಿನ್ನೆಲೆ ನನಗೆ ಗೊತ್ತಿಲ್ಲ.ಅವರೊಳಗೆ ಏನಿತ್ತೋ ಗೊತ್ತಿಲ್ಲ.

ಈಕೆ ಈಗ ವಿದೇಶದಲ್ಲಿ ಗಂಡ ಮತ್ತು ಎರಡು ಮಕ್ಕಳ ಜೊತೆಗಿದ್ದಾಳೆ‌.ಆಕೆಯ ತಾಯಿ ಮತ್ತೆ ತಂದೆಯ ಮನೆಯಲ್ಲೇ ಇದ್ದಾರೆ.ಅಣ್ಣಂದಿರೂ ಈಗ ಅಳಿದಿದ್ದಾರೆ.

ಅಣ್ಣಂದಿರ ಮಕ್ಕಳು ಮತ್ತು ಅವಿವಾಹಿತ ತಂಗಿಯ ಜೊತೆಗಿದ್ದಾರೆ.

ಇರುವುದರಲ್ಲಿ ಒಳ್ಳೆಯ ಗುಣದ ಮಗಳಿರುವುದು ಒಂದು ಸಂತಸದ ವಿಚಾರ.ಒಂದೊಮ್ಮೆ ಮಗಳೂ ಇಲ್ಲದಿರುತ್ತಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು..

ಮಕ್ಕಳೂ ಇಲ್ಲದ ,ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಅಣ್ಣ ತಮ್ಮಂದಿರ ಆಶ್ರಯದಲ್ಲಿರುವ  ಅನೇಕ ವಿಧವಾ ಸ್ತ್ರೀಯರು ಈಗಲೂ ಇದ್ದಾರೆ.

ಇತ್ತೀಚೆಗೆ ಗಂಡನನ್ನು ಕಳೆದುಕೊಂಡ ಸಣ್ಣ ವಯಸ್ಸಿ‌ ಹುಡುಗಿಯರಿಗೆ ಮತ್ತೆ ಮದುವೆ ಮಾಡುತ್ತಿರುವುದು ನಮಾಜ ಪರಿವರ್ತನೆಯ ಒಂದು ಧನಾತ್ಮಕ ಅಂಶವಾಗಿದೆ.


 



Sunday 27 December 2020

 


ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆ ಇದೆ .


ಕೆಲವೊಮ್ಮೆ ಅದೃಷ್ಟ ಕಾಯುತ್ತದೆ


ಪೇಟೆಯಲ್ಲಿ ಮನೆ ಕಟ್ಟುವಾಗ ಅಕ್ಕ ಪಕ್ಕದವರ ಕಿರಿ ಕಿರಿ ತುಂಬಾ ಇರುತ್ತದೆ.ನೀವು ಮನೆ ಕಟ್ಟುವಾಗ ನಿಮಗೆ ಏನೂ ಸಮಸ್ಯೆ ಆಗಿಲ್ಲವೇ? ಎಂದು ಅನೇಕರು ಕುತೂಹಲದಿಂದ ಕೇಳಿದ್ದಾರೆ.

ನಮಗೂ ಸಮಸ್ಯೆಗಳು ಬಂದಿವೆ.

ನಾವು ಮನೆ ಕಟ್ಟಲು ಗುದ್ದಲಿ ಪೂಜೆ ಮಾಡಿ ಮೇಸ್ತ್ರಿ ಕೆಲಸದವರಲ್ಲಿ ಹೇಳಿ ಪಾರಿಜಾತ ಸಂಪಿಗೆ ಮರ ಕಡಿದು ಇತರ ಗಿಡ ಬಳ್ಳಿಗಳನ್ನು ಕಡಿದು ಸಿದ್ದ ಮಾಡುತ್ತಿದ್ದರು


ಆಗ ಒಂದು ಅಚ್ಚರಿಯ ಘಟನೆ ನಡೆಯಿತು.

ಎರಡು ಕಾರು ಬಂದು ನಮ್ಮ ಮನೆ ಕೌಂಪೌಂಡ್ ಬಳಿ ಬಂದು ನಿಂತಿತು

ಅದರಿಂದ ಏಳೆಂಟು 30-35 ವರ್ಷದ ಜವ್ವನಿಗರು ಇಳಿದರು.

ಕೌಂಪೌಂಡ್ ಗೇಟಿಗೆ  ನಾವು ಯಾವಾಗಲೂ ಬೀಗ ಹಾಕಿರ್ತಿದ್ದೆವು.ಆ ದಿನ ಕೂಡಾ ಬೀಗ ಹಾಕಿತ್ತು.

ಗೇಟ್ ಲಾಕ್ ತೆಗೆಯಿರಿ ಎಂದರು !

 ಯಾಕೆ  ಎಂದು ಕೇಳಿದೆ

ಈ ಸೈಟನ್ನು ನಮಗೆ ಮಾರಾಟ ಮಾಡಿದ್ದಾರೆ ,ನಾವು ಅಳೆಯಬೇಕು ಎಂದರು.ಅಳೆಯುವ ಟೇಪ್ ಅವರ ಕೈಯಲ್ಲಿ ಇತ್ತು.

ಇದು ನಮ್ಮಮನೆ ಇದನ್ನು ನಾವು ಯಾರಿಗೂ ಮಾರಾಟ ಮಾಡಿಲ್ಲ.ಕಳೆದ ಹತ್ತು ವರ್ಷಗಳಿಂದ ಇಲ್ಲಿ ನಾವಿದ್ಷೇವೆ ಎಂದೆ.

ಇಲ್ಲ.ಇಲ್ಲ‌ ಇದು ನಾವು ಕೊಂಡುಕೊಂಡ ಸೈಟು ಎಂದು ಕಾಂಪೌಂಡು ಹತ್ತಿ ಒಳಬರಲು ಹೊರಟರು.

ಆಗ ನಾನು "ನೋಡಿ..ಇದು ನಿಮಗೆ ಮಾರಾಟವಾಗಿದ್ದರೆ ದಾಖಲೆ ತೋರಿಸಿ..ಸುಮ್ಮನೇ ಒಳಗೆ ಬಂದರೆ ಪೋಲೀಸ್ ಗೆ ಕರೆ ಮಾಡುತ್ತೇವೆ "ಎಂದೆ.

ನನ್ನ ದ್ವನಿ ಸ್ವಲ್ಪ ದೊಡ್ಡದೇ ..

ಗೋಡೆ ಹತ್ತಿದಾತ ಅ ಕಡೆಗೆ ಇಳಿದ.ಮತ್ತೆ ಸ್ವಲ್ಪ ದೂರ ಹೋಗಿ ಅವರವರೊಳಗೇ ಏನೋ ಗುಸುಗುಸು ಮಾತನಾಡಿಕೊಂಡರು‌.ಕಾರು ಹತ್ತಿ ಹೋದರು.

ಅ ವ್ಯಕ್ತಿಗಳನ್ನು ನಾನು ಆ ಪ್ರದೇಶದಲ್ಲಿ ಮೊದಲೂ ನೋಡಿರಲಿಲ್ಲ‌.ನಂತರ ಇಂದಿನ ತನಕ ನಾನು ನೋಡಿಲ್ಲ

ಅವದ್ಯಾರು..ಯಾಕೆ ಬಂದಿದ್ದರು ? ಇಂದಿಗೂ ಕುತೂಹಲಕರವಾಗಿಯೇ ಉಳಿದಿದೆ ನಮಗೆ.


ಈ ಪ್ರದೇಶದಲ್ಲಿ ಮನೆ ಕಟ್ಟುವಾಗ ಮೊದಲು ಸೈಟು ಮಾರಾಟ ಮಾಡಿದವರ ಮಕ್ಕಳು ಬಂದು ನಮ್ಮ ಅಜ್ಜ/ ತಂದೆಗೆ ಮೋಸ ಮಾಡಿ ನೀವುಗಳು ಕಡಿಮೆ ದುಡ್ಡಿಗೆ ಸೈಟ್ ತಗೊಂಡಿದ್ದೀರಿ.ಅ ದುಡ್ಡು ಹಿಂದೆ ಕೊಡ್ತೇವೆ.ನಮ್ಮಜಾಗ ನಮಗೆ ಕೊಡಿ ಎಂದು ಗಲಾಟೆ ಮಾಡಿ ಸ್ವಲ್ಪ ದುಡ್ಡು ವಸೂಲಿ ಮಾಡುತ್ತಾರೆ ಎಂದು ಹೇಳುದು ಕೇಳಿದ್ದೆ.

ಬಹುಶಃ ನಾವು ಹತ್ತು ವರ್ಷದಿಂದ ಅಲ್ಲಿರುವುದು ಗೊತ್ತಿಲ್ಲದೇ ಅಥವಾ ಸ್ವಲ್ಪ ಹೆಸರಿಸಿ ದುಡ್ಡು ವಸೂಲಿಗೆ ಬಂದವರೋ ಅಥವಾ ಬೇರೆ ಯಾವುದೊ ಸೈಟನ್ನು ಖರೀದಿಸಿ ಇದನ್ನು ಗೊಂದಲ ಮಾಡಿಕೊಂಡರೊ ಗೊತ್ತಿಲ್ಲ.

ಆದರೆ ಸೈಟನ್ನು ನೋಡಿ ಅಳೆಯದೇ ಯಾರಾದರೂ ಖರಿದಿಸುತ್ತಾರಾ? ಏನೋ ನನಗೆ ಗೊತ್ತಾಗುತ್ತಿಲ್ಲ.



ಅದಾಗಿ ಪಕ್ಕದ ಮನೆಯವರ ಕಿರಿಕಿರಿ ಶುರು ಆಯಿತು.

ನಮ್ಮ ಸೈಟಿನ ಎಡ ಬಾಗದ ಸೈಟಿನ ಮನೆ ಮಲ್ಲಮ್ಮ ಎಂಬವರದು.ಇವರು ಸ್ವಲ್ಪ ಕಿರಿಕ್ ಪಾರ್ಟಿ.

ಅಕ್ಕ ಪಕ್ಕ ಸದಾ ಗಲಾಟೆ.ಇವರು ಜಗಳಾಡದ ವ್ಯಕ್ತಿಗಳು ಅಲ್ಲಿರಲಿಲ್ಲ.

ನಮ್ಮ ಹತ್ತಿರ ಅಷ್ಟಾಗಿ ಜಗಳ ಮಾಡಿರಲಿಲ್ಲ.ಅದಕ್ಕೆ ಕಾರಣ ಇತ್ತು.ಅವರಿಗೆ ಸುಮಾರು ಉಚಿತವಾಗಿ ನಾವು ನೀರನ್ನು ಕೊಟ್ಟಿದ್ದೆವು‌

ನಂತರ cmc ನೀರು ಬಂದಾಗ ಕೂಡ ನಮ್ಮ ಜಾಗದಲ್ಲಿ  ನೀರಿನ ಪೈಪ್ ಹಾಕಲು ನಾವು ಬಿಟ್ಟಿದ್ದೆವು


ಇಷ್ಟೆಲ್ಲ ಉಪಕಾರ ಪಡೆದವರು ಕೂಡಾ ನಮ್ಮ ಮನೆ ಕಟ್ಟುವಾಗ ಕಿರಿಕ್ ತೆಗೆದರು.

ಅವರು ಪೂರ್ತಿ ಸೈಟಿನಲ್ಲಿ ಮನೆ ಕಟ್ಟಿದ್ದರು‌.ಒಂದು ಇಂಚು ಜಾಗ ಕೂಡ ಬಿಟ್ಟಿಲ್ಲ.ನಾವು ಮೂರು ಅಡಿ ಬಿಟ್ಟು ಕಟ್ಟಿ ಎಂದು ಗಲಾಟೆ.

ನಾವು ಅಲ್ಲಿ ಬಿಟ್ಟರೆ ಇನ್ನೊಂದು ಕಡೆಯವರು ಕೂಡಾ ಬಿಡಿ ಎಂದು ಹೇಳುವುದಿಲ್ಲವೇ? ಇನ್ನೊಂದು ಕಡೆ ರಾಮ ಮೂರ್ತಿ ಎಂಬವರ ಕಮರ್ಷಿಯಲ್ ಕಾಂಪ್ಲೆಕ್ಸ್  ಇದೆ.ಅವರು ನಮ್ಮ ಕಡೆಗೆ ನಾಲ್ಕಡಿಯಷ್ಟು ಜಾಗ ಬಿಟ್ಟುಕಟ್ಟಿದ್ದರು.ಅವರದು ಡಬಲ್ ಸೈಟಾದ ಕಾರಣ ಮೂರಡಿ ಬಿಟ್ಟರೂ ಸಮಸ್ಯೆ ಆಗುವುದಿಲ್ಲ.

ನಾವು ಎರಡು ಕಡೆ ಮೂರು ಮೂರು ಅಡಿ ಬಿಟ್ಟರೆ ಉಳಿದ 24 ಅಡಿಯಲ್ಲಿ ಒಂದು ಸಣ್ಣ ಶಾಪ್ ಮತ್ತು ಒಂದು ಕಾರು ನಿಲ್ಲಿಸುವಷ್ಟು ದೊಡ್ಡ ಪಾರ್ಕಿಂಗ್ ಮಾಡಲು ಸಾಧ್ಯ ಅಷ್ಟೆ.ಮೇಲೆ ಕೂಡಾ ಎರಡು ಶಾಪ್ ಹಾಕಬಹುದು ಅಷ್ಟೇ

ಹಾಗಾಗಿ ನಾವು ಜಾಗಬಿಡಲು ತಯಾರಿರಲಿಲ್ಲ.ಹಿಂಭಗದ ಮನೆಯ ಭಾಗದಲ್ಲಿ ಮೂರಡಿ ಸುತ್ತಲೂ ಬಿಟ್ಟಿದ್ದೇವೆ.


ಎದುರು ಗಡೆ ಅಂಗಡಿ ಹಾಕಿರುವಲ್ಲಿ ಬಿಡಲಿಲ್ಲ.

ಮೊದಲು ಅವರು ಅವರ ಮನೆಯ ಕಿಟಕಿ ಇರುವಲ್ಲಿಒಂದೂವರೆ ಅಡಿ ಅಗಲ ಬಿಡಬೇಕು ಎಂದರು.

ಸರಿ ಚರ್ಚೆ ಬೇಡ ಎಂದು ಒಪ್ಪಿದೆ

ಅದರೆ ಮೇಲೆ ಮೋಲ್ಡ್ ಹಾಕಿದಾಗ ಅಲ್ಲೂ ಬಿಡಬೇಕೆಂದು ತಕರಾರು ಮಾಡಿದರು.

ನಾವು ಒಪ್ಪದ್ದಕ್ಕೆ ಬಿಬಿಎಂಪಿಗೆ ದೂರು ಕೊಟ್ಟರು.

ಬಿಬಿಎಂಪಿಯವರು ಬಂದಾಗ ಅವರು ಒಂದಿಂಚು ಕೂಡಾ ಬಿಟ್ಟಿಲ್ಲ.ನಾವ್ಯಾಕೆ ಬಿಡಬೇಕು ಎಂದು ಕೇಳಿದೆ.

ಇಬ್ಬರಿಗೂ ನೊಟಿಸ್ ಕೊಡ್ತೇವೆ ಎಂದು ಬಿಬಿಎಂಪಿಯವರು ಹೊರಟು ಹೋದರು‌

ಇತ್ತ ಮೇಸ್ತ್ರಿಗೆ ಅ ಕಡೆ ಅವರ ಗೋಡೆಗೆ ತಾಗದಂತೆ ಸ್ವಲ್ಪ ಜಾಗಬಿಟ್ಟು ಗೋಡೆ ಕಟ್ಟಲು ಹೇಳಿದೆ‌.ಅಗ ಆಕೆ ಕಟ್ಟದಂತೆ  ಅಡ್ಡ ಬಂದರು.ಇದನ್ನು ನಾನು ಅರವಿಂದ್ ರೆಕಾರ್ಡ್ ಮಾಡಿದೆವು.ಅದು ಗೊತ್ತಾಗಿ ಆಕೆ ನನ್ನ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಬಂದರು‌.ಇದೂ ಕೂಡಾ ಅರವಿಂದ್ ನ‌ ಮೊಬೈಲ್ ನಲ್ಲಿ ರೆಕಾರ್ಡ್ ಆಯಿತು

ದಾಖಲೆ ಸಿಕ್ಕ ತಕ್ಷಣವೇ ಹೋಗಿ ಪೋಲೀಸ್ ಸ್ಟೇಶನ್ ನಲ್ಲಿ ದೂರು ಕೊಟ್ಟೆವು.

ಕ್ರಿಮಿನಲ್ ಕೇಸ್ ಬೀಳುತ್ತದೆ ಎಂದಾಗ ಬಿಸಿ ಆಯಿತು ಆಕೆಗೆ,ಜೊತೆಗೆ ಇದ್ದ ಆಕೆಯ ಅಣ್ಣನ ಮಗನಿಗೆ

ನಂತರ ಕ್ಷಮಾಯಾಚನೆ ಪತ್ರ ಬರೆದುಕೊಟ್ಟರು.

ಮನೆಗೆ ಬಂದು ಅರ್ದ ಅಡಿ ಬಿಟ್ಡು ಗೋಡೆ ಕಟ್ಟಲು ಮೇಸ್ತ್ರಿಗೆ ಹೇಳಿದೆ.ಯಾಕೆಂದರೆ ಅವರ ಗೋಡೆಗೆ ತಾಗಿದಾಗ ಡ್ಯಾಮೇಜ್ ಅಗಿದೆ ಎಂದು ಕೋರ್ಟಿಗೆ ಹೋಗಿ ಸ್ಟೇ ತಂದರೆ ನಮ್ಮ ಕೆಲಸ ಹಾಳಾಗುತ್ತದೆ.

ಮುಂದೆ ಸಮಯ ನೋಡಿ ಅ ಗೋಡೆ ತೆಗೆದು ಹಿಂದೆಹಾಕಿ ಕಟ್ಟುದೆಂದು ನಿರ್ಧರಿಸಿದೆ.

ಅಂತೂ ಅ ಕಡೆಯ ಸಮಸ್ಯೆ ಪರಿಹಾರ ಆಗಿತ್ತು.

ನಮ್ಮ ಅದೃಷ್ಟಕ್ಕೆ ಇನ್ನೊಂದು ಕಡೆಯವರು ನಾವು ಮನೆ ಕಟ್ಟಲು ಸುರು ಮಾಡಿದ ಸಮಯದಲ್ಲಿ ವಿದೇಶಕ್ಕೆ ಮೂರು ತಿಂಗಳ ಪ್ರವಾಸ ಹೋಗಿದ್ದರು.

ಅವರು ಬರುವಷ್ಟರಲ್ಲಿ ಗೋಡೆ ಹಾಕಿ ಆಗಿತ್ತು.ಆದ ನಂತರ ಏನು ಮಾಡುದು ? ಹಾಗಾಗಿ ಅಸಮಧಾನ ಆಗಿದ್ದರೂ ಏನೂ ತೋರಿಸಿಕೊಳ್ಳಲಿಲ್ಲ.


ನಮ್ಮ‌ಕಟ್ಟಡ ಮೇಲೆ ಬಂದಾಗ ಈ  ಕಡೆಯ ಮನೆಯವರಿಗೆ ಗಾಳಿ ಬೆಳಕಿಲ್ಲದೆ ಮನೆ ಕಗ್ಗತ್ತಲಾಯಿತು‌.ಯಾಕೆಂದರೆ ಅವರು ಒಂದಿಂಚೂ ಜಾಗ ಬಿಟ್ಟಿರಲಿಲ್ಲ.ನಾವೂ ಬಿಡದ ಕಾರಣ ಅವರಿಗೆ ಗಾಳಿ ಬೆಳಕಿಲ್ಲದಾಯಿತು‌.ಹಾಗಾಗಿ ಅವರು ಮನೆ ಖಾಲಿ ಮಾಡಿ ಬೇರೆಡೆ ಹೋದರು.

ಅವರು ಮನೆ ಖಾಲಿ ಮಾಡುತ್ತಲೇ ನಾವು ಗೋಡೆಯನ್ನು ತೆಗೆದು ಅರ್ಧ ಅಡಿ ಬಿಟ್ಟ ಜಾಗದಷ್ಟುಹಿಂದೆ ಹಾಕಿ ಕಟ್ಟಲು ನಿರ್ಧರಿಸಿದೆವು‌

ಹಗಲು ಮಾಡಿದರೆ ಯಾರಾದರೂ ನೋಡಿ ಅವರಿಗೆ ಪೋನ್ ಮೂಲಕ ಹೇಳುವ ಸಾಧ್ಯತೆ ಇತ್ತು.ಅಕೆ ಹೈ ಕೋರ್ಟ್ ನಲ್ಲಿ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡ್ತಾರೆ.ಕ್ಷಣದಲ್ಲಿ ಪೋಲಿಸ್ ಕರೆಸಿ ನಿಲ್ಲಿಸುವ ಸಾಮರ್ಥ್ಯ ಇರುವವರು.

ಹಾಗಾಗಿ ರಾತ್ರಿ ಮಾಡಲು ನಿರ್ದರಿಸಿದೆವು.ನಮ್ಮ ಮನೆ ಉಳ್ಳಾಲು ಮುಖ್ಯ ರಸ್ತೆಯಲ್ಲಿ ಇರುವ ಕಾರಣ ಅಕ್ಕ ಪಕ್ಕ ಎದುರುಗಡೆ ಅಂಗಡಿಗಳೇ ಇವೆ‌

ಅಂಗಡಿಗಳನ್ನು ಬಾಗಿಲು ಹಾಕಿ ಹೋಗುವ ತನಕ ಕಾದೆವು.

ರಾತ್ರಿ ಹತ್ತ ಹತ್ತೂವರೆ ಆಗುವಾಗ ಅಂಗಡಿಗಳೆಲ್ಲ ಮುಚ್ಚಿದವು


ಮತ್ತೆ ಗೋಡೆಯನ್ನು ಮೆಷಿನ್ ನಲ್ಲಿ ಕತ್ತರಿಸುವ ಒಡೆಯುವ ಕೆಲಸ ಶುರು ಮಾಡಿದರು.

ಭಯಂಕರ ಶಬ್ದ ಅದರದ್ದು.ನಮ್ಮ ಮನೆ ಹಿಂಬಾಗದ ಸೈಟಿನಲ್ಲಿ ಒಂದು ಮನೆ ಎರಡು ಸೈಟ್ ದೂರದಲ್ಲಿ ಇನ್ನೊಂದು ಮನೆ,ಅದರ ಆ ಕಡೆಗೆ ಒಂದು ಈ ಪಕ್ಕದ ಮನೆಯವರ ಅಕ್ಕನ‌ಮಗಳ ಮನೆ ,ಈ ಕಡೆ ಎದುರು ಗಡೆ ಒಂದು ಮನೆ ಇತ್ತು.

ಇಷ್ಟು ಮನೆಗಳಿಗೆ ಕಿವಿ ಮುಚ್ಚಿದರೂ ಕೇಳಿಸುವ ಕರ್ಕಶ ಶಬ್ದ ಅಗುತ್ತಿತ್ತು.

ಇಲ್ಲಿ ಹಿಂದಿನಮನೆ ಎದುರುಗಡೆಯ ಮನೆಗಳಿಗೆ ಬೆಸಿಗೆಯಲ್ಲಿ ಸಿ ಎಮ್ ಸಿ ನೀರು ಸರಿಯಾಗಿ ಬರದೇ ಇದ್ದಾಗ ಪೈಪ್ ಹಾಕಿ ನೀರು ಕೊಡುತ್ತಿದ್ದೇವೆ ನಾವು ಪ್ರತಿ ಬೇಸಿಗೆ ಬಂದಾಗ

ನಾಲ್ಕೈದು  ವರ್ಷಗಳ ಮೊದಲು ಎದುರುಗಡೆ ಮನೆಯವರ ತೋಟಕ್ಕೆ ಬೆಂಕಿ ಬಿದ್ದಾಗ ಅರವಿಂದ ನೋಡಿದ್ದ‌  ಮನೆಯವರು ಹೊರಗಡೆ ಹೊಗಿದ್ದರು‌.ಅಗ ಅಕ್ಕ ಪಕ್ಕದವರನ್ನು ಸೇರಿಸಿ ನೀರು ಹಾಕಿ ಬೆಂಕಿ ಹರಡದಂತೆ ಅರವಿಂದ ತಡೆದಿದ್ದ.

ಶಬ್ದ ಆದಾಗ ಏನೆಂದು ನೋಡಲು ಬಂದವರು ನಾವಿರುದನ್ನು ನೋಡಿ  ಮುಲಾಜಿಗೆ ಸಿಕ್ಕಿ ಏನು ಹೇಳದೆ ಹಿಂದೆ ಹೋದರು.

ಪಕ್ಕದ ಮನೆಯವರ ಅಕ್ಕನ ಮಗಳ ಮನೆಯವರಿಗೂ ಇವರಿಗೂ ಸರಿ ಇರಲಿಲ್ಲ.ಹಾಗಾಗಿ ಅವರೂ ಮಾತನಾಡಲಿಲ್ಲ

ಅಂತೂ ಇಂತೂ ಬೆಳಗಾಗುವಷ್ಟರಲ್ಲಿ ಗೋಡೆ ಒಡೆದು ತೆಗೆದು ಹೊಸ ಗೋಡೆ ಅರ್ಧದಷ್ಟು ಕಟ್ಟಿ ಆಗಿತ್ತು.

ಅದೃಷ್ಟವಶಾತ್ ಆಕೆಗೆ ಸುದ್ದಿ ತಲುಪಲಿಲ್ಲ.ಇತ್ತ ಸಾವಕಾಶ ಗೋಡೆ ಕಟ್ಟಿದೆವು.

ಅದೃಷ್ಟವಶಾತ್ ಪ್ರತಿ ದಿನ ಬೀಟ್ ಗೆ ಬರುವ ಪೋಲೀಸ್ ಆ ದಿನ ಬಂದಿರಲಿಲ್ಲ.ಬಂದರೂ ಏನೂ ಮಾಡಲಾಗುವುದಿಲ್ಲ.ರಾತ್ರಿ ಕೆಲಸ ಮಾಡಬಾರದು ಎಂದಿಲ್ಲ.ಆದರೂ ಸದ್ದು ಬರಯವ ಕಾರಣ ತಕರಾರು ಮಾಡುತ್ತಿದ್ದರೋ ಏನೋ ..ಅದರೆ ಅ ದಿನ ಬರದೇ ಇದ್ದ ಕಾರಣ ಸಮಸ್ಯೆ ಆಗಲಿಲ್ಲ.ಅ ಗೋಡೆ ಪ್ಲಾಸ್ಟರಿಂಗ್ ಮಾಡಿರಲಿಲ್ಲ ಹಾಗಾಗಿ ದೊಡ್ಡ ಖರ್ಚು ಕೂಡ ಆಗಲಿಲ್ಲ

ಎಲ್ಲೆಡೆ ನಮ್ಮನ್ನು ದೇವರು ಕಾಪಾಡಿದ 


ಇದಾಗಿ ತಿಂಗಳ ನಂತರ ಅಕೆಯ ಮಗ ಬಂದವನು ನಾವು ಗೋಡೆಯನ್ನು ಹಿಂದೆ ಹಾಕಿದ್ದು ನೋಡಿ " ಅಂಟಿ.ನಮ್ಮನ್ನ ಕೇಳದೆ ಗೋಡೆ ಕಟ್ಟಿದ್ದು ಯಾಕೆ ? " ಎಂದು ಕೇಳಿದ.

ನಮ್ಮ ಜಾಗದಲ್ಲಿ ಗೋಡೆ ಕಟ್ತೇವೆ ತೆಗೆಯುತ್ತೇವೆ..ನಿನಗ್ಯಾಕೆ ಹೇಳಬೇಕು ? ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದೆ..ಸುಮ್ಮನಾದ 


ಗೋಡೆ ಕಟ್ತಾ ಇರುವಾಗಲೇ ಬಾಡಿಗೆಗೆ ಜನ ಬಂದರು.

ದೇವರ ದಯೆಯಿಂದ ಏನೂ ಸಮಸ್ಯೆಯಾಗಲಿಲ್ಲ.


 ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆ ಇದೆ.

ಮನೆ  ಮನೆ ಕಥೆ ..

1994 ಸೆಪ್ಟಂಬರಿನಲ್ಲಿ ನನ್ನ ಓದಿನ ವಿಚಾರದಲ್ಲಿ ಮನೆ ಮಂದಿಯನ್ನು ಎದುರು ಹಾಕಿಕೊಂಡು ಖಾಲಿ ಕೈಯಲ್ಲಿ‌ ಮನೆ ಬಿಟ್ಟು ಕಟೀಲಿಗೆ ಬಂದಿದ್ದೆವು.ಆ ದಿನ ಅಮವಾಸ್ಯೆ ಆಗಿತ್ತು  ಆದರೆ ಅಮವಾಸ್ಯೆ ಕೂಡಾ ನಮಗೆ ಅಮೃತ ಗಳಿಗೆ ಫಲ ನೀಡಿತ್ತು. 


1998 ರಲ್ಲಿ ಮಂಗಳೂರಿನಲ್ಲಿ ನಾವೊಂದು ಪ್ಲಾಟ್ ತಗೊಂಡಿದ್ದೆವು.ನೋಡಲು ತುಂಬಾ ಚೆನ್ನಾಗಿತ್ತು‌


ಆ ಪ್ಲಾಟನ್ನು ಮೊದಲು ಬುಕ್ ಮಾಡಿದವರ ತಾಯಿಗೆ ಕ್ಯಾನ್ಸರ್ ಬಂತು ಹಾಗೆ ದುಡ್ಡು ಹೊಂದಿಸಲಾಗಲಿಲ್ಲ ಎಂದು ನಮಗೆ ಮಾರಿದ್ದರು. ಈ ವಿಚಾರ ನಮಗೆ ಮತ್ತೆ ಗೊತ್ತಾಯಿತು.

ಅದಕ್ಕೆ ಸರಿಯಾಗಿ ನಮಗೆ ಈ ಮನೆ  ತಗೊಂಡ ಮೇಲೆ ತುಂಬಾ ನಷ್ಟ ಬಂತು.ಅದು ದಕ್ಷಿಣ ದಿಕ್ಕಿನ ಬಾಗಿಲಿನ ಮನೆ.ಅದು ದೋಷಕರ ಎಂದು ಯಾರೊ ಹೇಳಿದರು.ಅದು ಗ್ರೌಂಡ್ ಪ್ಲೋರ್ ಅಗಿದ್ದು ಅದಕ್ಕೆ ಇನ್ನೊಂದು ಹಿಂದಿನ ಬಾಗಿಲು ಇತ್ತು 

ನಡುವೆ ಒಂದೆಡೆ ಬಾಗಿಲು ಹಾಕಿ ಮುಚ್ಚಿದರೆ ಹಾಲು ಮತ್ತು ಒಂದು ರೂಮು ,ಒಂದು ಡೈನಿಂಗ್ ಹಾಲ್ ಕಿಚನ್ ಮತ್ತು ರೂಮು,ಬಾತ್ ರೂಮು  ಬೇರೆ ಮಾಡುವ ಹಾಗೆ ಇತ್ತು.ನಾವು ಹಾಗೆ ಮಾಡಿ ಎದುರಿನ ಭಾಗ ಓದುವ ಹುಡುಗರಿಗೆ ಬಾಡಿಗೆಗೆ ಕೊಟ್ಟೆವು.


ಈ ಮನೆ ತಗೊಳ್ಳುವಾಗಲೇ ಇದನ್ನು ಎರಡು ಭಾಗ ಮಾಡಿ ಬಾಡಿಗೆ ಕೊಡಬಹುದು ಎಂದು ಯೋಚಿಸಿಯೇ ತಗೊಂಡಿದ್ದೆವು.

ಈ ಮನೆ ತಗೊಂಡಾಗ ಇಷ್ಟು ದೊಡ್ಡ ಮನೆಯ ಅಗತ್ಯ ಇರಲಿಲ್ಲ ಎಂದು ಕೊಂಕಾಡಿದ ನೆಂಟರೂ ಇದ್ದರು.


ಅವರು ನಮ್ಮ ಈಗಿನ ಮನೆ ನೋಡಿದರೆ ಏನನ್ನುತ್ತಿದ್ದರೊ ಗೊತ್ತಿಲ್ಲ.ಅವರಿನ್ನು ನೋಡಿಲ್ಲ.


ನಮ್ಮನ್ನು ಯಾವುದಕ್ಕು ಆಗದವರೆಂದುಕೊಂಡಿದ್ದರೋ ಏನೋ ಗೊತ್ತಿಲ್ಲ.

ಒಮ್ಮೆ ಮಾತಿನ ನಡುವೆ ನಾದಿನಿ ಕೈಯಲ್ಲಿ ಸಣ್ಣ ಪೋರ್ಟೆಬಲ್ ಟಿವಿಯನ್ನು ತೋರಿಸಿ ಸಣ್ಣ ಟಿವಿ ಕೂಡ ಇದೆ ಕಡಿಮೆಗೆ ಸಿಗುತ್ತದೆ ಎಂದು ಸಲಹೆ ನೀಡಿದ್ದಳು.ನಮಗೆ ದೊಡ್ಡ ಟಿವಿ ಖರೀದಿಸಲು ಸಾದ್ಯವಾಗಲಾರದು ಎಂದು ಕೊಂಡಿದ್ದರೋ ಏನೊ‌


ಇರಲಿ

ವಾಸ್ತು ದೋಷ ಇದೆಯೋ ಇಲ್ಲವೋ ಗೊತ್ತಿಲ್ಲ..ನಮ್ಮ ಅರಿವಿಗೆಟುಕದ ಅನೇಕ ವಿಚಾರಗಳಿರುತ್ತದೆ.ಇವನ್ನೆಲ್ಲ ಇದೆಯೋ ಇಲ್ಲವೊ ಎಂದು ಪರೀಕ್ಷಿಸುವ ಜಿದ್ದು ನಮಗಿಲ್ಲ.ನಮ್ಮ ಬದುಕು ಪ್ರಯೋಗ ಶಾಲೆಯಲ್ಲ.ಹಾಗಾಗಿ ನಾವು ಹಿಂದಿನ ಉತ್ತರ ದಿಕ್ಕಿನ ಬಾಗಿಲಿನಿಂದ ಓಡಾಡಿದೆವು.


ನಂತರ ಕಾಕತಾಳೀಯವೋ ಎಂಬಂತೆ  ನಾವು ಸುಧಾರಿಸಿದೆವು.

ಆದರೆ ಅ ಅಪಾರ್ಟ್ ಮೆಂಟು ಕಟ್ಟಿಸಿ ಮಾರಿದವರು   ಬಹಳ ಕಳಪೆ ಮಾಡಿ ದ್ರೋಹ ಮಾಡಿದ್ದರು.( ಈ ಬಗ್ಗೆ ದೊಡ್ಡ ಕಥೆಯೇ ಇದೆ.ಜನ್ನೊಂದಿನ ತಿಳಿಸುವೆ ) 


ನೆಲಕ್ಕೆ ಬಿಳಿಯ ಬಣ್ಣದ ಮೊಸಾಯಿಕ್ ಹಾಸಿದ್ದರು.ಅದರ ಅಡಿಯಿಂದ ನೀರೆಳೆದು ಅಥವಾ ಇನ್ನೇನೋ ಕಾರಣಕ್ಕೆ ಕಪ್ಪು ಕಲೆ ಹರಡಿ ಕೊಳಕು ಕಾಣುತ್ತಿತ್ತು.


 ಆ ಮನೆಯ ಕರೆಂಟ್ ಸ್ವಿಚ್ ಗಳೆಡೆಯಿಂದ ಒರಳೆ / ಗೆದ್ದಲು ಬರಲು ಶುರು ಆಯಿತು.ಹಾಗಾಗಿ ಅದನ್ನು ನಾವು ತಗೊಂಡ ಬೆಲೆಗೆ ಮಾರಾಟ ಮಾಡಿದ್ದೆವು.( ಆದರೆ ಅಷ್ಟು ಸಮಯ ನಮಗೆ ಬಾಡಿಗೆ ಬಂದದ್ದರಿಮದ ಒಟ್ಟಾರೆರೆಯಾಗಿ ಲೆಕ್ಕ ಹಾಕುವಾಗ ಲಾಭವೇ ಅಗಿತ್ತು )ಇರುವ ವಿಚಾರವನ್ನು ನಾವು ಮುಚ್ಚಿಟ್ಟಿರಲಿಲ್ಲ.ಅವರಿಗೆ ವಾಸ್ತು ಬಗ್ಗೆ ನಂಬಿಕೆ ಇರಲಿಲ್ಲ.

ಮೊಸಾಯಿಕ್ ಮೇಲೆ ಟೈಲ್ಸ್ ಅತವಾ ಗ್ರಾನೈಟ್ ಹಾಸಿ ನೆಲದ ಕಲೆಯ ಸಮಸ್ಯೆಯನ್ನು ಬಗೆಹರಿಸಬಹುದೆಂದು ಕಡಿಮೆ ಬೆಲೆಗೆ ಸಿಕ್ಕ ಮನೆಯನ್ನು  ಅವರು ಖರೀದಿಸಿದ್ದರು.


ಆದರೆ ಅವರು ಕೂಡಾ ಅದನ್ನು ಬೇರೆಯವರಿಗೆ ಮಾರಾಟ ಮಾಡಿದರು.ಅವರ ಕೈಯಿಂದ ತಗೊಂಡವರು ಮತ್ತೆ ಮಾರಾಟ ಮಾಡಿದ್ದರು.ಯಾಕೆಂದು ಗೊತ್ತಿಲ್ಲ.


ಆಗ ತಗೊಂಡವರ ಮಗಳ ಗಂಡ ಅಕ್ಸಿಡೆಂಟ್ ನಲ್ಲಿ ತೀರಿ ಹೋದರು..


ಆ ಮನೆಯ ದಕ್ಷಿಣ ಬಾಗಿಲಿಗೆ ಏನು ದೋಷವೋ ಗೊತ್ತಿಲ್ಲ.

ಆದರೆ ನಮ್ಮ‌ಮನೆಗೆ ಸೇರಿದ ಇನ್ನೊಂದು ಮನೆ ಇದೆ.ಅದು ದಕ್ಷಿಣ ಬಾಗಿಲಿನ ಮನೆಯಲ್ಲ.

ಅಲ್ಲಿ ಕೂಡಾ ದುರಂತಗಳ ಸರಮಾಲೆಯೇ ನಡೆದಿದೆ.

ಅದನ್ನು ಮೊದಲು ತಗೊಂಡವರು ಬೇರೊಬ್ಬರಿಗೆ ಮಾರಾಟ ಮಾಡಿದ್ದರು.ಅಲ್ಲಿ ತಗೊಂಡವರ ವಯಸ್ಸಾದ ತಂದೆ ತಾಯಿ ಇದ್ದರು .ಅವರ ಇಬ್ಬರು ಮಕ್ಕಳು ಒಬ್ಬರಾದ ನಂತರ ಇನ್ನೊಬ್ಬರು ಸಣ್ಣ ವಯಸ್ಸಿನಲ್ಲಿಯೇ ಈ ವೃದ್ದ ತಂದೆ ತಾಯಿಯರ ಕಣ್ಣೆದುರೇ ಸಾವನ್ನಪ್ಪಿದ್ದರು.

.ಇಷ್ಟೆಲ್ಲ ನೋಡಿದ ಮೇಲೂ ವಾಸ್ತುವನ್ನು ತೀರಾ ಅಲ್ಲಗಳೆಯುವುದು ಹೇಗೆ ಅಲ್ವಾ ?

ಅದರೆ ನಮ್ಮ ಮನೆಯ ಅರ್ಧ ಭಾಗದಲ್ಲಿ  ಬಾಡಿಗೆಗೆ ಇದ್ದ ಹುಡುಗರಿಗೆ ಯಾವುದೇ ಸಮಸ್ಯೆ ಬಂದಿರಲಿಲ್ಲ .

ಅವರ ನಂತರ ಒಂದು  ದಂಪತಿಗಳು ಒಂದು ವರ್ಷ ಇದ್ದರು.ಅವರಿಗೂ ಏನೂ ಸಮಸ್ಯೆ ಆಗಲಿಲ್ಲ


ಹಾಗಾಗಿ ವಾಸ್ತುದೋಷ ಎಂಬುದನ್ನು ಹೇಗೆ ನಂಬುದು ? ಏನೇ ಅದರೂ ವಿಷ ಪರೀಕ್ಷೆ ಯಾಕೆ ? ವಾಸ್ತು ಪ್ರಕಾರ ಕಟ್ಟಿಸಿದರೆ ಸಮಸ್ಯೆ ಇಲ್ಲ ಹಾಗಾಗಿ ನಾವು ಈಗಿನ ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸಿದ್ದೇವೆ .

ನಮಗೆ ವಾಸ್ತುವುನ ಬಗ್ಗೆ ಸಲಹೆ ಕೊಟ್ಟವರು ನೆಲಮಂಗಲ ಕಾಲೇಜಿನ ಹಿರಿಯ ಸಹೊದ್ಯೋಗಿ ಪ್ರಭಾಕರ ಸರ್.

ಇದು ಪಶ್ಚಿಮದಿಂದ ಪೂರ್ವಕ್ಕೆ ತಗ್ಗಾಗಿರುವ ,ಉತ್ತರದಿಮದ ದಕ್ಷಿಣಕ್ಕೆ ನೀರು ಹರಿದು ಹೋಗುವ ಸೈಟ್.ಬಹಳ ಅದೃಷ್ಟ ತರುತ್ತದೆ.ಇದನ್ನು ಎಂದಿಗೂ ಮಾರಾಟಮಾಡಬೇಡಿ ಎಂದೂ ಅವರು ಹಿತನುಡಿದಿದ್ದರು.

ನಾವು ಈ ಜಾಗವನ್ನು ಮಾರಾಟ ಮಾಡಿ ನೆಲಮಂಗಲ ಸಮೀಪ ಜಾಗ ಕೊಂಡು ಮನೆ ಕಟ್ಟಿಸುವ ಬಗ್ಗೆ ಅಲೋಚಿಸುತ್ತಿದ್ದೆವು.ಈ ಸಮಯದಲ್ಲಿ ನಮ್ಮ ಸೈಟಿನ ವಾಸ್ತುವನ್ನು ನೋಡಿ ಮಾರಾಟ ಮಾಡಬೇಡಿ,ಕೆಳಗೆ ಕಮರ್ಷಿಯಲ್ ಮಾಡಿ ಮೇಲ್ಭಾಗ ಮನೆ ಕಟ್ಟಲು ಪ್ರಭಾಕರ ಸರ್ ತಿಳಿಸಿದ್ದರು.

ಹಾಗೆ ಅವರ ಸಲಹೆಯಂತೆ ವಾಸ್ತುವಿಗೂ ಧಕ್ಕೆ ಆಗದಂತೆ ನಾನೇ ಪ್ಲಾನ್ ಹಾಕಿ ಅದಕ್ಕನುಗುಣವಾಗಿ ಕಟ್ಟಿಸಿದೆವು..

ವಾಸ್ತುವೋ,ದೇವರ ದಯವೋ ಗೊತ್ತಿಲ್ಲ ಈ ಸೈಟಿನಲ್ಲಿ 2003 ರಲ್ಲಿ ನಾವು ಮಂಗಳೂರಿನಲ್ಲಿ ಇದ್ದಾಗಲೇ ಮನೆ ಕಟ್ಟದಿದ್ದರೆ ಜಾಗ ಹೋಗುತ್ತದೆ ಎಂದು ಸಣ್ಣದೊಂದು ಎರಡು ಕೊಠಡಿಯ ಮನೆ ಕಟ್ಟಿದ್ದೆವು.ಅದಕ್ಕೆ ಎರಡು  ಬಾಗಿಲು ಗಳಿದ್ದವು.ಒಂದು ಉತ್ತರ ದಿಕ್ಕಿಗೆ ,ಮುಖ್ಯ ಬಾಗಿಲು ಪೂರ್ವ - ದಕ್ಷಿಣ ದಿಕ್ಕಿನಲ್ಲಿತ್ತು‌

ಆ ಮನೆಯನ್ನು ಕೆಡವದೆ ಸುತ್ತ ಪಿಲ್ಲರ್ ಹಾಕಿ ಎತ್ತರಿಸಿ  ಈಗಿನ ಮನೆ ಕಟ್ಟಿದೆವು.ಆ ಮನೆಯ  ಪೂರ್ವ ಬಾಗಿಲನ್ನು ತೆಗೆದು ಗೋಡೆ ಹಾಕಿ ಉತ್ತರದ ಬಾಗಿಲನ್ನು ಪ್ರವೇಶ ದ್ವಾರ ಮಾಡಿದೆವು.

 ಈ ಮನೆಗೆ ಬಂದ  ನಂತರ ನಮಗೆ  ಯಾವುದಕ್ಕೂ  ಕೊರತೆ  ಕಾಡಿಲ್ಲ..

ಕೊನೆ ತನಕ ದೇವರು ಇದೇ ರೀತಿ ನಡೆಸಿದರೆ ಸಾಕು ಎಂಬ ಪ್ರಾರ್ಥನೆ ನಮ್ಮದು‌.

Saturday 26 December 2020

ಇದನ್ನು ಕಾಕತಾಳೀಯವೆಂದು ಹೇಗೆ ಒಪ್ಪುದು ?

 

ಇದನ್ನು ಕಾಕತಾಳೀಯವೆಂದು ಹೇಗೆ ಒಪ್ಪುದು ?

ನನಗೆ ಎಷ್ಟೋ ಸಲ ಆಶ್ಚರ್ಯ ಆಗುತ್ತದೆ ಅಷ್ಟೊಂದು ಸಣ್ಣ ಹರಳು( ಕಲ್ಲಿನ ತುಂಡು?/) ಹೇಗೆ ಪರಿಣಾಮ ಬೀರುತ್ತದೆ ಎಂದು..

2001 ರಲ್ಲಿ ನನಗೆ ಇದರ ಮಿರಾಕಲ್ ನ ಅನುಭವಾಯಿತು
ನನಗೆ 1998 - 2001 ರ ವರೆಗೆ ಅಗಾಗ ಗಂಟಲು ಸೋಂಕಿನ ನ ಸಮಸ್ಯೆತೀವ್ರವಾಗಿ ಕಾಡುತ್ತಿತ್ತು.

ಒಮ್ಮೆ ಆಂಟಿ ಬಯಾಟಿಕ್ಸ್ ತಗೊಂಡು ಕೋರ್ಸ್ ಮುಗಿಸಿ ನಿಲ್ಲಿಸಿ ಹತ್ತು ಹದಿನೈದು ದಿನಕ್ಕೆ ಮತ್ತೆ ಗಂಟಲು ನೋವು..
ಡಾ.ವಿಷ್ಣು ಕಣಿಯೂರು,ಡಾ.ಕಿಶೋರ್ ಕುಮಾರ್ ಶೆಟ್ಟಿ ಮೊದಲಾದ ಇ ಎನ್ ಟಿ ತಜ್ಞರ ಬಳಿ ಚಿಕಿತ್ಸೆ ಪಡೆದೆ

ಕೊನೆಗೆ ಅದು ದ್ವನಿ ಪೆಟ್ಟಿಗೆಗೆ ಮತ್ತೆ ಮತ್ತೆ ಸೋಂಕು  ಆಗುತ್ತಿರುವುದು..ಅದಕ್ಕಾಗಿ ಏನೊ ಸರ್ಜರಿ / ಲೇಸರ್ ಚಿಕಿತ್ಸೆ  ಏನೊ ಹೇಳಿದರು.ಇಲ್ಲಾಂದರೆ ಮಲ್ಟಿಪಲ್ ರೆಸಿಸ್ಟೆನ್ಸ್ ಡೆವಲಪ್ ಅಗಬಹುದು ಇತ್ಯಾದಿ ಎಂತದೊ ಆಗುತ್ತದೆ ಎಂದರು
ಅವರುಗಳು ಹೇಳಿದ್ದು ಪೂರ್ತಿ ಯಾಗಿ ನನಗೆ ಅರ್ಥವಾಗಲಿಲ್ಲ

ಆದರೆ ಧ್ವನಿ‌ ಹೋಗ ಬಹುದು ಎಂದಿದ್ದು ಮಾತ್ರ ಅರ್ಥವಾಗಿತ್ತು.

ಧ್ವನಿ‌ ಇಲ್ಲದೇ ನಾನು ಬದುಕುದು ಹೇಗೆ ? ನಾನು ಟೀಚರ್..ಅದು ಬಿಟ್ಟರೆ ಯಾವ ಕೆಲಸವೂ ಗೊತ್ತಿಲ್ಲ
ಹಾಗಾಗಿ ಆ ಚಿಕಿತ್ಸೆಗೆ ನಾನು ಒಪ್ಪಿರಲಿಲ್ಲ.

ಆ ಸಮಯದಲ್ಲಿ ನನ್ನ  ಗುರುಗಳು ನಮ್ಮ ಮನೆಗೆ ಬಂದರು
ನನಗೆ ಗಂಟಲು ನೋವಿನಲ್ಲಿ ಮಾತನಾಡಲು ಆಗುತ್ತಿರಲಿಲ್ಲ..ಚಳಿ ಜ್ವರ ಬೇರೆ
ಆಗ ಅವರು ನನ್ನ ಜಾತಕ ಕೇಳಿದರು ,
ಬರೆದು ಕೊಟ್ಟೆ ( ನನ್ನ ಜಾತಕ ನೆನಪಿತ್ತು)
ಅವರು ನೋಡಿ ನೀನೆಂಥ  ಕಲ್ತದ್ದು..ಪುಸ್ತಕದ ಬದನೆ ಕಾಯಿಯಾ ? ಎಂದು ಬೈದು  ಮುತ್ತಿನ‌ ಓಲೆ ಮಾಡಿ  ಧರಿಸಲು ಹೇಳಿದರು

ಅದೂ ಒಂದು ನೋಡುವ ಎಂದು ಬಹಳ ನಂಬಿಗಸ್ಥರಾದ  ಉಮೇಶ್ ಅಚಾರ್ ಅವರಿಗೆ  ಹೇಳಿ‌ ಮುತ್ತಿನೋಲೆ ಮಾಡಿಸಿ ಹಾಕಿದೆ

ಅದಾಗಿ ಎರಡು ದಿನಕ್ಕೆ ಕೇರಳ ಸ್ಟ್ರೈಕಿನ ಕಾರಣಕ್ಕೆ ನನ್ನಸಣ್ಣ ತಮ್ಮ  ಸಣ್ಣ ತಮ್ಮ ಎಂ ಎಸ್ ಡಬ್ಲು ಪರೀಕ್ಷೆ ಇರುವ ಕಾರಣ ನಮ್ಮ ಮನೆಗೆ ಬಂದ
:ನನ್ನ ಗಂಟಲು ನೋವು  ನೋಡಿ ಸಿಡಾಲ್ ಅಂತ ಒಂದು ಮಾತ್ರೆ ಇದೆ ಅದನ್ನು ತಗೊಂಡರೆ ಒಮ್ಮೆಗೆ ಕಡಿಮೆ ಆಗುತ್ತದೆ ಎಂದ
ಯಾರೇನು ಹೇಳಿದರೂ ತಗೊಳ್ಳುವ ಸ್ಥಿತಿಗೆ ನಾನು ತಲುಪಿದ್ದೆ
ಪ್ರಸಾದ್ ಗೆ ಪೋನ್ ಮಾಡಿ ಸಿಡಾಲ್ ಎರಡು ಮಾತ್ರೆ ತರಲು ಹೇಳಿದೆ.ಅವರಿಗೆ ಸಿಡಾಲ್ ಅಂತ ಕೇಳಿಸಿ ಊರಿಡೀ ಹುಡುಕಾಡಿ ಕೊನೆಗೆ ಗಣೇಶ್ ಮೆಡಿಕಲ್ಸ್ ನಿಂದ ತಂದರು
ಅದರಲ್ಲಿ zydone ಎಂದು ಹೆಸರಿತ್ತು
ನನಗೆ ಸಿಟ್ಟು ಬಂತು
ಮೊದಲೇ ಗಂಟಲು ನೊವಿನಲ್ಲಿ ಊಟ ಕೂಡ ಮಾಡಲಾಗುತ್ತಿರಲಿಲ್ಲ.
ಒಂದು ಲೋಟ ಹಾಲು ಕುಡಿದು"ಎಂತ ಬೇಕಾದರೂ ಆಗಲಿ "ಎಂದು ಆ ಮಾತ್ರೆ ತಗೊಂಡು ಮಲಗಿದೆ
ಗಂಟಲು ನೋವಿಗೆ ಯಾವಾಗಲು ನೆರಕುತ್ತಿದ್ದವಳು ಅ ದಿನ ಚಂದ ನಿದ್ರೆ
ಪ್ರಸಾದ್ ಗೆ ಭಯ
ಅದು ಎಂತ ಮಾತ್ರೆಯೋ ಏನೊ..ಕಿಡ್ನಿದೋ ಹಾರ್ಟಿದೋ ಅಗಿದ್ದರೆ ಎಂದು. ಅವರು ಆಗಾಗ ಎದ್ದು ನನ್ನ ಮೂಗಿನಹತ್ರಿರ ಬೆರಳು ಹಿಡಿಯುದು..😀
ಉಸಿರಾಡುವಳೋ ಇಲ್ಲವೊ ಎಂಬ ಆತಂಕ ಅವರಿಗೆ.
"ಎಂತ ಮಲಗಿ ಸಾಯಲು ಬಿಡುದಿಲ್ಲ 'ಎಂದು ಅವರ ಕೈಗೆ ಬಡಿದು ತಿರುಗಿ ಮಲಗಿದ್ದೆ‌
ಮರುದಿನ ಏಳುವಾಗ ಅರ್ಧಾಂಶ ನೋವು ಕಡಿಮೆ ಆಗಿತ್ತು.
ಮರುದಿನ ಇನ್ನೊಂದು ಮಾತ್ರೆ ತಿಂದೆ
ಅದರ ಮರುದಿನಕ್ಕಾಗುವಾಗ ಪೂರ್ತಿಯಾಗಿ ನೋವು ಗುಣ ಆಯ್ತು
ಅದಾಗಿ ಒಂದೆರಡು ತಿಂಗಳಾದರೂ ನೋವು ಬರಲಿಲ್ಲ
ಹಾಗಾದರೆ ಅ ಮಾತ್ರೆ ನಾಲ್ಕು  ತಂದಿಡುವ .ಮುಂದೆ ಗಂಟಲು ನೋವು ಬಂದರೆ ಇರಲಿ ಎಂದು ಪ್ರಸಾದ್ ಗೆ ಹೇಳಿದೆ
ಪ್ರಸಾದ್ ಅದೇ ಮೆಡಿಕಲ್ ಶಾಪಿಗೆ ಹೋಗಿ ಕೇಳಿದರು ಜಿಡಾಲ್  ಕೊಡಿ ಎಂದು
ಅಂತಹ ಮಾತ್ರೆಯೇ ಇಲ್ಲ ಎಂದರು
ಆಗ "ಎರಡು ತಿಂಗಳ ಮೊದಲು ತಗೊಂಡು ಹೋಗಿದ್ದೇನೆ " ಎಂದಾಗ ಕಂಪ್ಯೂಟರ್ ನಲ್ಲಿ ಚೆಕ್ ಮಾಡಿ ಕೂಡ ಅಂತಹದ್ದು ನಮ್ಮಮೆಡಿಕಲ್ ಶಾಪಿಗೆ ಬಂದೇ ಇಲ್ಲ ಎಂದರಂತೆ
ಆಗ  ಇದ್ದ ಕೆಲಸದ ಹುಡುಗ ಬಿಟ್ಟು ಹೋಗಿದ್ದ.ಹಾಗಾಗಿ
ಯಾರಲ್ಲಿ‌ ಕೇಳುದು ? ಸುಮ್ಮನಾದೆವು
ಅಂದು ಗುಣವಾದ ಗಂಟಲು ನೋವು ಇಂದಿಗೂ ಇಲ್ಲ ಮಾತ್ರವಲ್ಲ ನಮಗೆ ಕೆಲಸ ಮನೆ ಬದುಕು ಎಲ್ಲ  ಆಗಿ ನಾವು ಮೇಲೆ ಬಿದ್ದೆವು.
ಇದು ಕೇವಲ ಕಾಕತಾಳೀಯ ಎಂದು ಹೇಗೆ ಒಪ್ಪುದು ? ಅಷ್ಟರ ತನಕ ಇದ್ದ ನೋವು ಮಾಯವಾದದ್ದು ಹೇಗೆ? ತನ್ನಿಂತಾನಾಗಿಯೇ ದೇಹದಲ್ಲಿ ಇದ್ದಕ್ಕಿದ್ದಂತೆ ರೋಗ ನಿರೋಧಕ ಶಕ್ತಿ ಉಂಟಾಯಿತಾ?
ದೇವರೊಬ್ಬನೇ ಬಲ್ಲ.

Thursday 24 December 2020

ಮುಖಬದಲಾಯಿಸುದು ಹೇಗೆ

 ನನ್ನ ಮುಖವನ್ನು ಹೇಗೆ ಬದಲಾಯಿಸಲಿ ?


ಇಂದು ಬೆಳಗ್ಗೆ ನೆಲಮಂಗಲಕ್ಕೆ ಹೋಗುವಾಗ ಓರ್ವ ಸಾಮಾಜಿಕ ಕಾರ್ಯಕರ್ತೆ ಶೋಭಾ ಎನ್ನುವ ಹಿರಿಯ ಮಹಿಳೆಯ  ಪರಿಚಯ ಆಯಿತು .ಮಾತಿನ ನಡುವೆ ಎಲ್ಲಿ ಕೆಲಸ ಮಾಡುತಿದ್ದೀರಿ ಎಂದು ಕೇಳಿದರು .ನೆಲಮಂಗಲ ಪಿಯು ಕಾಲೇಜ್ ನಲ್ಲಿ ಎಂದು ಹೇಳಿದೆ .

ಮತ್ತೆ ಅವರು ಏನು ಓದಿದ್ದೀರಿ ಎಂದು ಕೇಳಿದರು ,ನಾನು ಡಾಕ್ಟರೇಟ್ ಎಂದು ಹೇಳಿದೆ .ಆಗ ಅವರು ಸ್ವಲ್ಪ ಗೊಂದಲಕ್ಕೆ ಒಳಗಾಗಿ ಪುನಃ ಏನು ಓದಿದ್ದೀರಿ ಎಂದು ಕೇಳಿದರು ಆಗ ನಾನು ಮತ್ತೆ ಎಂ ಎ ಪಿ ಎಚ್ ಡಿ ಎಂದು ಹೇಳಿದೆ .ಆಗ ಅವರಿಗೆ ಅದನ್ನು ನಂಬಲು ಸ್ವಲ್ಪ ಕಷ್ಟ ಆದಂತೆ ಅನಿಸಿತು .ಮತ್ತೆ ಪುನಃ ನೀವು ಎಲ್ಲಿ ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದರು .ಮತ್ತೆ ಪುನಃ ನಾನು ನೆಲಮಂಗಲ ಪಿ ಯು ಕಾಲೇಜ್  ಕನ್ನಡ ಉಪನ್ಯಾಸಕಿ ಎಂದು ಹೇಳಿದೆ .

ಆಗ ಅವರು ಅಚ್ಚರಿಯಿಂದ ನೀವು ಲೆಕ್ಚರರ್ ಆ ?ಎಂದು ಕೇಳಿ ನಿಮ್ಮನ್ನು ನೋಡುವಾಗ ಹಾಗೆ ಅನಿಸುದಿಲ್ಲ ನೀವು ಅಷ್ಟು ಓದಿದ್ದೀರಿ ಎಂದು ಗೊತ್ತಾಗುದಿಲ್ಲ ಎಂದು ಹೇಳಿದರು ಅನಂತರ ನಾನೇನು ಭಾವಿಸುತ್ತೇನೋ ಎಂದು ಅವರಿಗೆ ಅನ್ನಿಸಿರಬೇಕು ಮತ್ತೆ ಪುನಃ ನೀವು ತುಂಬಾ ಸಿಂಪಲ್ ಆಗಿದ್ಡೀರಲ್ಲ ಅದಕ್ಕೆ ನೀವು ಲೆಕ್ಚರರ್ ಎಂದು ಗೊತ್ತಾಗಲಿಲ್ಲ ತಪ್ಪು ತಿಳಿಯಬೇಡಿ ಎಂದು ಹೇಳಿದರು 


ಇಂಥ ಅನುಭವ ನನಗೆ ಈ ಹಿಂದೆ ಕೂಡ ಬೇರೆ ಬೇರೆ ರೀತಿಯಲ್ಲಿ ಆಗಿದೆ .ಕಳೆದ ವರ್ಷ ಸರ್ಕಾರದ ಆದೇಶದ ಮೇರೆಗೆ ನಾವು ಸುಮಾರು ಸಾವಿರದ ಮುನ್ನೂರು ಪಿ ಯು ಕಾಲೇಜ್ ಉಪನ್ಯಾಸಕರು ಬಿಎಡ್ ಓದಬೇಕಾಗಿ ಬಂತು .ಹಾಗಾಗಿ ನಾನು ಕೆಂಗೇರಿ ಯ ಎಸ್  ಜೆ ಬಿ  ಬಿಎಡ್ ಕಾಲೇಜ್ ಗೆ ಸೇರಿದೆ .

ಅಲ್ಲಿ ಸೇರಿದ ಕೆಲ ದಿನಗಳ ನಂತರ ನನ್ನದೊಂದು ಶಿಕ್ಷಣ ಸಂಬಂಧಿ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು .ಅದರಲ್ಲಿ ನನ್ನ ಫೋಟೋ ಮತ್ತು ಹೆಸರು ಡಾ.ಲಕ್ಷ್ಮೀ ಜಿ ಪ್ರಸಾದ ಎಂದು ಇತ್ತು ಕೂಡ .


ಆ ಲೇಖನ ಪ್ರಕಟವಾದ ದಿನ ನಾನು ಕಾಲೇಜ್ ಗೆ ಹೋದಾಗ ಅಲ್ಲಿ ಅನೇಕ ವಿದ್ಯಾರ್ಥಿಗಳು ಕನ್ನಡ ಪ್ರಭ ಪತ್ರಿಕೆ ಓದುತ್ತಾ ಇದ್ದ್ದರು .

ನನ್ನ ಪ್ರಕಟಿತ ಲೇಖನವನ್ನೇ ಓದುತ್ತಾ ಇದ್ದರು ಕೆಲವರು ಅದನ್ನು ನೋಡಿ ಖುಷಿ ಆಗಿ ಓಹ್ ನನ್ನ ಲೇಖನ ಓದುತ್ತಾ ಇದ್ದೀರಾ ?ಹೇಗಿದೆ ಎಂದು ಕೇಳಿದೆ 

ಆಗ ಅಲ್ಲಿನ ವಿದ್ಯಾರ್ಥಿನಿ ಒಬ್ಬಳು ನಿಮ್ಮ ಲೇಖನವಾ ?ಯಾವುದು ?ಎಲ್ಲಿದೆ ಎಂದು ಕೇಳಿದಳು .ಆಗ ನಾನು ನೀವುಗಳು ಓದುತ್ತಾ ಇರುವ ಲೇಖನ ನನ್ನದು ಎಂದು ಹೇಳಿದೆ 

ಆಗ ಅಲ್ಲಿದ್ದ ವಿದ್ಯಾರ್ಥಿಗಳು ಲೇಖನದಲ್ಲಿನ ನನ್ನ ಫೋಟೋ ಮತ್ತು ನನ್ನ ಮುಖ ವನ್ನು ಮಿಕ ಮಿಕ ನೋಡಿದರು 

ಆನಂತರ ಸಂಶಯದಿಂದ ಲೇಖಕಿ ಹೆಸರು  ಲಕ್ಷ್ಮೀ ಜಿ ಪ್ರಸಾದ್ ಎಂದು ಇದೆಯಲ್ಲ ಎಂದು ಕೇಳಿದರು .ಅವರ ಸಂಶಯ ಸರಿಯಾದದ್ದೇ ಯಾಕೆಂದರೆ ದಾಖಲೆಗಳಲ್ಲಿ ನನ್ನ ಹೆಸರು ಲಕ್ಷ್ಮೀ ವಿ ಎಂದೇ ಇರುವುದು ,ಆಗ ನಾನು ಲಕ್ಷ್ಮೀ ಜಿ ಪ್ರಸಾದ್ ಎಂಬುದು ನನ್ನ ಪೆನ್ ನೇಮ್ ಎಂದು ಹೇಳಿದೆ .


ಆಗ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿ ಡಾ.ಎಂದು ಇದೆಯಲ್ಲ ಎಂದು ಹೇಳಿದ .ಹೌದು ನಾನು ಪಿಎಚ್ ಡಿ ಪದವಿ ಪಡೆದಿದ್ದೇನೆ ಹಾಗಾಗಿ ಡಾ.ಎಂದು ಹಾಕಿಕೊಳ್ಳುತ್ತೇನೆ ಎಂದು ಹೇಳಿದೆ .


ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿರುವ ಫೋಟೋ ಬೇರೆ ಉಂಟಲ್ಲ ಹೇಳಿದ !ಹೌದು ನನ್ನ ಫೋಟೋ ಅದೇ ರೀತಿ ಬರುವುದು ಎಂದು ಸ್ಪಷ್ತೀಕರಿಸಿದೆ .

ಯಾಕೋ ಏನೋ ಅಲ್ಲಿದ್ದ 10 -20 ಬಿಎಡ ವಿದ್ಯಾರ್ಥಿಗಳಿಗೆ ನಾನು ಆ ಲೇಖನ ಬರೆದದ್ದು ಎಂದು ನಂಬಿಕೆ ಬರಲಿಲ್ಲ ಎಂದು ನನಗೆ ಅರ್ಥವಾಯಿತು .

ಅಷ್ಟರಲ್ಲಿ ನನ್ನ ಹಾಗೆ ಸರ್ಕಾರಿ ಪಿ ಯು ಕಾಲೇಜ್ ಉಪನ್ಯಾಸಕರಾಗಿದ್ದು ಬಿ ಎಡ್ ಓದಲು ಬಂದಿದ್ದ ನಾಗರಾಜ್  ಅಷ್ಟು ಗೊತ್ತಾಗಲ್ವ ನಿಮಗೆ ಅದು ಲಕ್ಷ್ಮೀ ಮೇಡಂ ದೇ ಲೇಖನ ಎಂದು ಅಲ್ಲಿ ಸ್ಪಷ್ಟಪಡಿಸಿದರು .

ಅನಂತರ ಆ ವಿದ್ಯಾರ್ಥಿಗಳು ಅವರ ಮುಖ ನೋಡಿದ್ರೆ ಅವರು ಬರೀತಾರೆ ಅಂತ ಅನಿಸಲ್ಲ ಅಲ್ವ ?ಎಂದು ಮಾತಾಡಿಕೊಂಡರು ಎಂದು ನನಗೆ ತಿಳಿಯಿತು 


ಇದೇ ಕೊನೆ ನಾನು ಎಂದಿಗೂ ಯಾರು ನನ್ನ ಲೇಖನ ಓದುತ್ತಾ ಇದ್ದರೂ ಕೂಡ ಅದು ನನ್ನ ಲೇಖನ ಎಂದು ಹೇಳುವ ಅಧಿಕ ಪ್ರಸಂಗ ಮಾಡುದೇ ಇಲ್ಲ !

ಇಂಥ ಅನೇಕ ಅನುಭವಗಳು ನನಗೆ ಆಗಿವೆ 

ಯಾಕೆ ಹೀಗೆ ?ನನ್ನ ಮುಖದಲ್ಲಿ ಹಾಳು ಕಳೆ ಸುರಿಯುತ್ತಿದೆಯೇ ?ನನ್ನ ಮುಖವನ್ನು ಬದಲಾಯಿಸುದು ಹೇಗೆ ?ನನಗಂತೂ ಗೊತ್ತಾಗುತ್ತಿಲ್ಲಪ್ಪ ನಿಮಗೇನಾದರೂ ಗೊತ್ತಾದರೆ ತಿಳಿಸಿ pls


pls view my blog http://laxmipras.blogspot.com

ದೊಡ್ಡವರೆಲ್ಲ ಜಾಣರಲ್ಲ

 ನನ್ನ ಆತ್ಮ ಕಥೆ ಬೆಳೆಯುತ್ತಿದೆ..


ದೊಡ್ಡವರೆಲ್ಲ ಜಾಣರಲ್ಲ..ತಮ್ಮ ಸ್ನೇಹಿತರು ಸಹೋದ್ಯೋಗಿಗಳು ಏನು ಮಾಡಿದರೂ ಸರಿ..ಅದನ್ನು ಖಂಡಿಸಲು ತಯಾರಿಲ್ಲ..


ಈ ದೊಡ್ಡವರೆಲ್ಲ ಹೀಗೆಯಾ ? ನಾ.ದಾ ಶೆಟ್ಟಿಯವರ ಬಗ್ಗೆ ನನಗೆ ಅಪಾರ ಗೌರವ ಇದೆ.ಆದರೆ ಇಷ್ಟು ದಿನ ಏನು ಮಾಡುತ್ತಿದ್ದರು ಎಂಬುದು ನನ್ನ ಪ್ರಶ್ನೆ..ಯಾಕೋ ದೊಡ್ಡವರೆಲ್ಲ ಹೀಗೆಯೇ ಏನೋ ಎಂಬ ಕಹಿ ಭಾವ ಉಂಟಾಗಿದೆ ನನಗೆ..


ನಾ.ದಾ ಶೆಟ್ಟಿ ಯವರುಫೇಸ್ ಬುಕ್ನಲ್ಲಿ‌  ನನ್ನ ಮತ್ತು ಪವನಜ ಇಬ್ಬರ ಸ್ನೇಹಿತರು .


ಹಾಗಾಗಿ ನನ್ನ ಮತ್ತು ಪವನಜರ ವಾಲಿನಲ್ಲಿ ಹಾಕುವ ಎಲ್ಲಾ ಪೋಸ್ಟ್ ಗಳೂ ಇವರಿಗೆ ಸಿಗುತ್ತದೆ.ಇವರು ಫೇಸ್ ಬುಕ್  ನೋಡುತ್ತಾರೆ ಎಂಬುದಕ್ಕೆ ಈವತ್ತು ಪೇಸ್ ಬುಕ್ ನಲ್ಲಿ ಹಾಕಿದ ಯು ಟ್ಯೂಬ್ ಲಿಂಕ್ ಅನ್ನು ತೆರೆದು ಕೇಳಿ ಕಮೆಂಟ್ ಮಾಡಿದ್ದಾರೆ ಎಂಬುದು ಸಾಕ್ಷಿ ಆಗಿದೆ.


ಜುಲೈ 22 ರಿಂದ ಇಂದಿನವರೆಗೂ ಅನೇಕ ಬಾರಿ ನನ್ನ ಬರಹವನ್ನು ಯಥಾವತ್ ಕಾಪಿ ಮಾಡಿ ವಿಶ್ವನಾಥರು ವಿಕಿಪೀಡಿಯ ಕ್ಕೆ ಹಾಕಿದ ಬಗ್ಗೆ ಚರ್ಚೆ ನಡೆದಿದೆ .


ನಾನು ಅದು ನನ್ನ ಬರಹದ ಯಥಾವತ್ ಕಾಪಿ ಹಾಗಾಗಿ ಅವರದು ಕೃತಿ ಚೌರ್ಯ ಎಂಬುದಕ್ಕೆ ಸ್ಪಷ್ಟ ದಾಖಲೆಗಳನ್ನು ಕೊಟ್ಟಿದ್ದೇನೆ‌.


ಇಷ್ಟು ದಿನ ಸುಮ್ಮನಿದ್ದವರು ಈಗ ಇವರ ಹಳೆಯ ಸಹೋದ್ಯೋಗಿ ವಿಶ್ವನಾಥ ಬದಿಕಾನ  ಹಾಗೂ ಸ್ನೇಹಿತ ಪವನಜ ಮತ್ತವರ ಬೆಂಬಲಿಗರ ಮೇಲೆ ಬಲವಾದ ಕೇಸ್ ಆಗಿದೆ ಎಂದಾದ ಮೇಲೆ ಎರಡೂ ಕಡೆಯವರನ್ನು ಕೂಡಿಸಿ ಮಾತನಾಡಿಸಿದರೆ ಸತ್ಯ ಹೊರಗೆ ಬರುತ್ತಿತ್ತು ಎಂದು ನನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಕಮೆಂಟ್ ಮಾಡಿದ್ದಾರೆ..


ಇಷ್ಟು ದಿನ ಇವರೆಲ್ಲ ಏನು ಮಾಡುತ್ತಿದ್ದರು ? ನನ್ನ ಬರಹವನ್ನು ಕೃತಿ ಚೌರ್ಯ ಮಾಡಿದ್ದಲ್ಲದೆ, ಅದನ್ನು  ಆಕ್ಷೇಪ ಮಾಡಿದ ನನ್ನನ್ನು ಅವಹೇಳನ ಮಾಡಿದಾಗ ಏನು ಮಾಡುತ್ತಿದ್ದರು..? 


ಇವರುಗಳ ಸತ್ಯ ಪರೀಕ್ಷೆಗೆ ಹಾಜರಾಗಿ  ನನ್ನ ಬರಹ ಎಂದು ಸಾಬೀತು ಮಾಡುವ ಅಗತ್ಯ ನನಗಿಲ್ಲ...

ಮೊನ್ನೆ ನೋಡಿದರೆ ತನ್ನ ನಾಲ್ಕು ಸಾಲಿನ ಕವಿತೆಯನ್ನು ಯಾರೋ  ಕೃತಿ ಚೌರ್ಯ ಮಾಡಿದ್ದಾರೆ ಎಂದು ಆಕ್ಷೇಪ ಮಾಡಿದ ಡುಂಡಿರಾಜರು ತನ್ನ ಸ್ನೇಹಿತ ವಿಶ್ವನಾಥ ಬದಿಕಾನ ಮಾಡಿದ ನನ್ನ ಒಂದು ಸಾವಿರಕ್ಕಿಂತ ಹೆಚ್ಚಿನ ಸಂಶೋಧನಾ ಬರಹವನ್ನು ಯಥಾವತ್ ಕಾಪಿ ಮಾಡಿ ಕೃತಿ ಚೌರ್ಯ ಮಾಡಿದ್ದನ್ನು ,ಅದನ್ನು ಸಮರ್ಥನೆ ಮಾಡಿ ನನ್ನನ್ನು ನಿಂದಿಸಿದ ತನ್ನ ಸ್ನೇಹಿತ ಪವನಜರನ್ನು ಒಂದು ಮಾತಿನಲ್ಲಿ ಖಂಡಿಸಲು ತಯಾರಿಲ್ಲ.


ಈಗ ನೋಡಿದರೆ ನಾನು ತುಂಬಾ ಗೌರವ ಇರಿಸಿದ್ದ ನಾ ದಾ ಶೆಟ್ಟಿಯವರು ಹೀಗೆ ಕಮೆಂಟ್ ಮಾಡಿದ್ದಾರೆ..

ಇವರು ನನ್ನ ಮೂಲ ಬರಹವನ್ನು ಓದಿಲ್ಲವಂತೆ..ವಿಶ್ವನಾಥರು ಕದ್ದು ಹಾಕಿದ ವಿಕಿಪೀಡಿಯ ಬರಹವನ್ನು ಓದಿಲ್ಲ..ಇದ್ಯಾವುದೂ ಮಾಡದೇ ಇವರುಗಳ ಮಾತು ಕೇಳಿ  ತನ್ನ ಸ್ನೇಹಿತರ ಪರ ನಿಂತು ಜಾನಪದಕ್ಕೆ ಕಾಪಿ ರೈಟ್ ಇಲ್ಲ ಎಂಬ ವಿತ್ತಂಡ ಮಾಡಿದ್ದಾರೆ 


ದ್ವಂದ್ವ ನಿಲುವಿನ, ಮುಖ ನೋಡಿ ಮಣೆ ಹಾಕುವ ಈ ದೊಡ್ಡವರ ಸಹವಾಸವೇ ಆಗದಪ್ಪ..

ಇವರಿಬ್ಬರೂ ನನ್ನ ಆತ್ಮ ಕಥೆಯಲ್ಲಿ ಋಣಾತ್ಮಕ ಪಾತ್ರಗಳಾಗಿ ಬಂದ ಬಗ್ಗೆ ನನಗೆ ಖೇದವಿದೆ‌..

Nada Shetty

ನನಗೂ ಈ ಮಾತು ಬರೆಯಲು ಬಹಳ ಬೇಸರವಾಗುತ್ತಿದೆ..ಆದರೆ ನಿಮ್ಮಗಳ ಇಷ್ಟು ದಿನದ ಮೌನ,ಇಷ್ಟಾಗಿಯೂ ನನ್ನ ಬರಹದ ಬಗ್ಗೆ ಅಪನಂಬಿಕೆ ತೋರಿದ್ದು ನನ್ನನ್ನು ಇಷ್ಟು ಖಾರವಾಗಿ ಬರೆಸಿದೆ‌

ಕ್ಷಮಿಸಿ.


 ನನಗೆ ಸತ್ಯ ಪರೀಕ್ಷೆಯ ಅಗತ್ಯವಿಲ್ಲ‌.ಯಾಕೆಂದರೆ ಅದು ನನ್ನ ಬರಹ.ಅಪರೂಪದ ಇಷ್ಟರ ತನಕ ಎಲ್ಲೂ ಹೆಸರು ಕೂಡ ದಾಖಲಾಗದ ಜನಪದ ಕುಣಿತವಿದು.ತುಳು ಜನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಎಂಫಿಲ್, ಪಿಎಚ್ ಡಿ ಪಡೆದ ವಿದ್ವಾಂಸರ ಪ್ರಬಂಧಗಳಲ್ಲಿ ಕೂಡ ಇದರ ಉಲ್ಲೇಖ ಇಲ್ಲ..ಇನ್ನೂ ಮಾಹಿತಿ ಎಲ್ಲಿಂದ ? 


ನನ್ನದು ಜಾನಪದ ಹಾಡಿನ ಸಂಗ್ರಹವಲ್ಲ..ಈ ಕುಣತದ ಕುರಿತಾದ ಬರಹವದು..ಈ ಹಾಡನ್ನು ಕುಣಿತವನ್ನು..ಅದನ್ನು ಊರೂರು ಅಲೆದು ಎಲ್ಲಿದೆ ಎಂದು ತಿಳಿದು ಅಲ್ಲಿ ಹೋಗಿ  ಹಾಡಿನ ಒಂದೊಂದು ಭಾಗವನ್ನು ಬೇರೆ ಬೇರೆ ಕಲಾವಿದರಿಂದ ಗೌರವ ಧನ ಕೊಟ್ಟು ಹಾಡಿಸಿ ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅನುವಾದಿಸಿ ವಿಶ್ಲೇಷಣೆ ಮಾಡಿ ಸಾಂಸ್ಕೃತಿಕ ಪದ ಕೋಶ ತಯಾರಿಸಿ  ಕುಣಿತದ ಬಗ್ಗೆ ಅಧ್ಯಯನ ಮಾಡಿ ಲೇಖನವಾಗಿ ಬರೆದು ಪ್ರಕಟಿಸಿದವಳು ನಾನು..


ಯಾರಿಗೋ ಕದ್ದು ತನ್ನ ಹೆಸರಿನಲ್ಲಿ ಹಾಕಿ ಮೆರೆಯಲು ಹಾಕಿದ್ದಲ್ಲ‌ ಅದು..ಹಾಗಾಗಿ ನನ್ನ ಬರಹಕ್ಕೆ ಕಾಪಿ ರೈಟ್ ಇಟ್ಟುಕೊಂಡಿದ್ದೇನೆ.


ಜನರ ಸಮುದಾಯದಲ್ಲಿ ಜನಜನಿತವಾಗಿರುವ ಸಾಮಾನ್ಯ ಜನಪದ ಹಾಡುಗಳಿಗೆ ಕಾಪಿ ರೈಟ್ ಇಲ್ಲ ..ಆದರೆ ಜನಪದ ಕುಣಿತಕ್ಕೆ ಸಂಬಂಧಿಸಿದ ಅಧ್ಯಯನಾತ್ಮಕ ಬರಹಕ್ಕೆ ಕಾಪಿ ರೈಟ್ ಇದೆ..


ನೀವು  ಜಾನಪದ ಬರಹಕ್ಕೆ ಕಾಪಿ ರೈಟ್ ಇಲ್ಲ ಎನ್ನುವುದಾದರೆ ನಿಮ್ಮ‌ ಪ್ರಕಾರ ತುಳು ಜನಪದಕ್ಕೆ ಸಂಬಂಧಿಸಿದ ಡಾ.ಚಿನ್ನಪ್ಪ ಗೌಡರ  ಪಿ ಎಚ್ ಡಿ ಪ್ರಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನ, ಡಾ.ವಿವೇಕ ರೈಗಳ ಪಿ ಎಚ್ ಡಿ ಪ್ರಬಂಧ ತುಳು ಜನಪದ ಸಾಹಿತ್ಯ ಎಂಬ ಮಹಾ ಪ್ರಬಂಧಕ್ಕೆ ಕೂಡ ಕಾಪಿ ರೈಟ್ ಇಲ್ಲ ಎಂದಾಗುತ್ತದೆ.. 


ಯಾಕೆಂದರೆ ಅದೆಲ್ಲ‌ ಜಾನಪದ ಹಾಡು ಆರಾಧನೆ ಕುಣಿತಗಳನ್ನು  ಆದರಿಸಿ ಬರೆದದ್ದು .. ಅದಕ್ಕೆ ಕಾಪಿ ರೈಟ್ ಇದೆ ಎಂದಾದರೆ ನನ್ನ ಬರಹಕ್ಕೂ ಕಾಪಿ ರೈಟ್ ಇದೆ..


ಯಾಕೆಂದರೆ ಇದು ಸಂಗ್ರಹವಲ್ಲ..ಬರಹ


..ನಿಮ್ಮ ಪ್ರಕಾರ ಜಾನಪದ ಹಾಡನ್ನು ಕುಣಿತವನ್ನು ಅಧ್ಯಯನ ಮಾಡಿದ ಬರಹಕ್ಜೆ ಕಾಪಿರೈಟ್ ಇಲ್ಲ ಎಂದಾದರೆ ತುಳು ಜನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಮಹಾ ಪ್ರಬಂಧ ರಚಿಸಿ ಡಾಕ್ಟರೇಟ್ ಪದವಿ ಪಡೆದ ಪಾಲ್ತಾಡಿಯವರ ಮಹಾ ಪ್ರಬಂಧ ಕ್ಕೂ ಕಾಪಿ ರೈಟ್ ಇಲ್ಲ..


ಕಾಪಿ ರೈಟ್ ಇಲ್ಲ ಜಾನಪದ ಕ್ಕೆ ಡಾಕ್ಟರೇಟ್ ಕೊಡುವುದು ತಪ್ಪು ನಿಮ್ಮ‌ಪ್ರಕಾರ..ವಿತ್ತಂಡ ವಾದ ಬಿಟ್ಟು ಅರ್ಥ ಮಾಡಿಕೊಳ್ಳಿ.


.ಅವರದು  ಅನೇಕ ಜನಪದ ಕುಣಿತಗಳನ್ನು ರೆಕಾರ್ಡ್ ಮಾಡಿ ಅಧ್ಯಯನ ಮಾಡಿ ಬರೆದ ಮಹಾ ಪ್ರಬಂಧ.


 ನನ್ನದು  ಒಂದು ಅಪರೂಪದ ಇಷ್ಟರ ತನಕ ಯಾರೂ ಅಧ್ಯಯನ ಮಾಡದ ಒಂದು ಅಪರೂಪದ ಜನಪದ ಕುಣಿತದ ಬಗ್ಗೆ ಅಧ್ಯಯನ ಮಾಡಿ ಬರೆದ ಸಂಶೋಧನಾ ಪ್ರಬಂಧ..ಅಷ್ಟೇ ವ್ಯತ್ಯಾಸ..


ಡಾ.ಬಿ ಎ ವಿವೇಕ ರೈ ,ಡಾ.ಚಿನ್ನಪ್ಪ ಗೌಡ,ಡಾ.ಪಾಲ್ತಾಡಿಯವರ ಪಿಎಚ್ ಡಿ ಮಹಾ ಪ್ರಬಂಧ ಕ್ಕೆ ಕಾಪಿ ರೈಟ್ ಇರುವುದಾದರೆ ನನ್ನ ಸಂಶೋಧನಾ ಬರಹ ಬೈಲ ಮಾರಿ ನಲಿಕೆಗೆ ಕಾಪಿ ರೈಟ್ ಇದೆ..


ನಿಮ್ಮ ಸ್ನೇಹಿತರ ಸಮರ್ಥನೆ ಗಾಗಿ ಪೊಳ್ಳು ವಾದ ಮಾಡಬೇಡಿ..


ಕದ್ದದ್ದನ್ನು ಸಮರ್ಥನೆ ಮಾಡುವ ನಿಮ್ಮ ಮತ್ತು ನಿಮ್ಮಂತಹವರ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ..


ಪವನಜ ಮತ್ತು ವಿಶ್ವನಾಥರಿಗೆ ಕೆಲವು ಪ್ರಶ್ನೆ ಗಳನ್ನು ಕೇಳಿದ್ದೆ,ಅವರಿಬ್ಬರೂ ಒಂದಕ್ಕೂ ಉತ್ತರಿಸಿಲ್ಲ..ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ತರಿಸಿ ಸರ್‌.ಸತ್ಯ ಹೊರಗೆ ಬರಿಸಲು..ನನಗೆ ಸತ್ಯ ಹೊರಗೆ ಬರಿಸುವ ಅಗತ್ಯ ಇಲ್ಲ..ಯಾಕೆಂದರೆ ನನಗೆ ಗೊತ್ತು ಅದು ನನ್ನ ಬರಹ ಎಂದು.. ಅದರೂ ನೀವು ಸಲಹೆ ಕೊಟ್ಟ ಕಾರಣ ಆ ಪ್ರಶ್ನೆ ಗಳನ್ನು ಯಥಾವತ್ ಇಲ್ಲಿ ಹಾಕುವೆ,ಉತ್ತರ ತರಿಸಿ ನಂತರ ಸತ್ಯವನ್ನು ಹೊರಗೆ ತೆಗೆಯಿರಿ .


(ವಿಶ್ವನಾಥ ಬದಿಕಾನ  vishwanatha badikana  ಅವರೇ..ಪವನಜ ಅವರೇ ‌‌ ನಿಮ್ಮಿಬ್ಬರಿಗೆ ಅಂತಃ ಸಾಕ್ಷಿ ಎಂಬುದು ಇದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿ (ಪವನಜ  pavanaja ub ಅವರೇ ಇದನ್ನು ಓದಿ ಗಮನವಿಟ್ಟು,ಮತ್ತೆ ನನ್ನ ಬಗ್ಗೆ ಇರುವ ದ್ವೇಷಕಾರಿ ಕೆಟ್ಡದಾಗಿ ಬರೆಯಿರಿ..)


1 ನೀವು ವಿಕಿಪೀಡಿಯಕ್ಕೆ  2016 ರಲ್ಲಿ ಹಾಕಿದ ಬೈಲ ಮಾರಿ ನಲಿಕೆ ಕುರಿತಾದ ಬರಹದ ಮೂಲ ಯಾವುದು? 


2 ಪವನಜರು ನೀವು ಜಾನಪದ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ ಓದಿ ವಿಕಿಪೀಡಿಯ ಕ್ಕೆ ಹಾಕಿದ್ದಾರೆ ಎಂದು ಬರೆದಿದ್ದಾರೆ‌,ನೀವು ಅದನ್ನು ಓದಿ ಬರೆದಿದ್ದರೆ ನನ್ನ ಲೆಖನ ನನ್ನ ಹೆಸರು ಮತ್ತು ಜಾನಪದ ಕರ್ನಾಟಕ ಜರ್ನಲ್ ನ ಉಲ್ಲೇಖ ಯಾಕೆ ಹಾಕಿಲ್ಲ?

( ಈಗ ಇರುವದ್ದು ಮೊನ್ನೆ ಭರತೇಶ್ ಅಲಸಂಡೆ ನ

ಮಜಲು ಸೇರಿಸಿದ ಉಲ್ಲೇಖ ಇದರಲ್ಲೂ ಪ್ರಕಟವಾಗಿದೆ ಎಂದು ಅವರಿಗೆ ಕೂಡ ತಿಳಿಸಿದವಳು ನಾನೇ) 


2 ನೀವು ಅಲ್ಲಿ ಮೂಲವಾಗಿ ಬ್ಯೂಟಿ ಅಫ್ ತುಳು ನಾಡು ಪೇಸ್ ಬುಕ್ ಲಿಂಕ್ ಹಾಕಿದ್ದಿರಿ..ನನ್ನ  ಬರಹವನ್ನು ಬ್ಯೂಟಿ ಆಫ್ ತುಳುನಾಡು ತಮ್ಮ ಪುಟದಲ್ಲಿ ಹಾಕಿದ್ದು ಅದರಲ್ಲಿ courtesy ಎಂದು ಬರೆದು ನನ್ನ  ಹೆಸರು ಮತ್ತು ಬ್ಲಾಗ್ ಲಿಂಕ್ ಹಾಕಿದ್ದು ಅವರ ಬರಹ ಅಲ್ಲ ಎಂಬುದನ್ನು ಸೂಚಿಸಿದ್ದರು ಆದರೂ ನೀವು ಬ್ಯೂಟಿ ಆಫ್ ತುಳುನಾಡು ಪೇಸ್ ಬುಕ್ ನ ಲಿಂಕ್ ಹಾಕಿದಿರಿ ಯಾಕೆ ? ನಿನ್ನೆ ತನಕ ಅದೇ ಲಿಂಕ್ ಇತ್ತಲ್ಲ..


3 ನೀವು ಕಾಪಿ ಮಾಡದೆ ನನ್ನ ಸಿಂಗಲ್ ಸೋರ್ಸ್ ಬರಹವನ್ನು ಜಾನಪದ ಕಾರ್ನಾಟಕದಲ್ಲಿ ಓದಿ ಅರ್ಥ ಮಾಡಿಕೊಂಡು ಬರೆದದ್ದಾದರೆ ನನ್ನ ಬರಹದ ಯಥಾವತ್ ಕಾಪಿ ಯಾಕೆ ಇದೆ ತಪ್ಪುಗಳ ಸಹಿತ? ಫ್ರಶ್ನಾರ್ಥಕ ಚಿಹ್ನೆ ,ಸಂಖ್ಯೆಗಳ ಸಹಿತ ? ಏನವು ಪ್ರಶ್ನಾರ್ಥಕ ಚಿಹ್ನೆ ? ಸಂಖ್ಯೆ,? ನಾನು ಜಾನಪದ ಕರ್ನಾಟಕಕ್ಕೆ ಬರೆದ ಬರಹಗಳಲ್ಲಿ ಈ ಚಿಹ್ನೆ ಮತ್ತು ಸಂಖ್ಯೆಗಳು ಏನೆಂಬ ವಿವರಣೆ ಇದೆ..ಬ್ಲಾಗ್ ನಲ್ಲಿ ಬರೆದಿಲ್ಲ, ಟೈಪಿಂಗ್ ತಪ್ಪುಗಳು ಜಾನಪದ ಕರ್ನಾಟಕದಲ್ಲಿ ಇಲ್ಲ ಯಾಕೆಂದರೆ ಅದು ನಾನು ಟೈಪ್ ಮಾಡಿದ್ದಲ್ಲ ,ನಾನು ಕೈ ಬರಹದಲ್ಲಿ ಕಳುಹಿಸಿದ ಬರಹ ಅದು.ಬ್ಲಾಗ್ ನಲ್ಲಿ  ನಾನು ಟೈಪಿಸುವಾಗ ಟೈಪಿಂಗ್ ಎರರ್ ಗಳು ಅಗಿವೆ,ಅದೇ  ಮೂವತ್ತಕ್ಕಿಂತ ಹೆಚ್ಚಿನ ಅದೇ ತಪ್ಪುಗಳು,ಅದೇ ಸಂಖ್ಯೆಗಳು ,ಅದೇ ಫ್ರಶ್ನಾರ್ಥಕ ಚಿಹ್ನೆ ಅದೇ ಜಾಗದಲ್ಲಿ ನೀವು ಟೈಪ್ ಮಾಡುವಾಗಲೂ ಹಾಕಿದಿರಾ ? ಯಾಕೆ ? ವಿವರಣೆ ಯಾಕಿಲ್ಲ‌? ಯಾಕೆಂದರೆ ನನ್ನ ಬ್ಲಾಗ್ ನಲ್ಲಿ ಇರಲಿಲ್ಲ ಹಾಗಾಗಿ ಕಾಪಿ ಮಾಡುವಾಗ ಅದೇ ತಪ್ಪುಗಳು ಅದೇ ಸಂಖ್ಯೆಗಳು ಅದೇ ಚಿಹ್ನೆಗಳು ಅಲ್ಲಿ ಬಂತು..ಅದಕ್ಕೆ ವಿವರಣೆ ಬರಲಿಲ್ಲ..😀 ಅದು ಮಕ್ಕಿ ಕಾ ಮಕ್ಕಿ ಕಾಪಿ,ನೊಣ ಪ್ರತಿ..😀😁


4 ನೀವು ಹಾಕಿದ ಹಾಡಿನಲ್ಲಿ ಅಲ್ಲಲ್ಲಿ ಕೆಲವು ಸಂಖ್ಯೆಗಳಿವೆ ಏನವು ? ಯಾಕೆ ಆ ಸಂಖ್ಯೆಗಳನ್ನು ಹಾಕಿದಿರಿ? 


5 ಈ ಲೇಖನ ಜಾನಪದ ಕರ್ನಾಟಕದಲ್ಲಿ ಒಂದಕ್ಷರ ತಪ್ಪಿಲ್ಲದೆ ಬಂದಿದೆ,ಮತ್ತು ಬೇರೆ ತರನಾಗಿ ಇದೆ,ನೀವು ಹಾಕಿದ ಬರಹ ನನ್ನ ಬ್ಲಾಗ್ ಬರಹದ ಯಥಾವತ್ ಕಾಪಿ ಇದೆಯಲ್ಲ..? ನಡು ನಡುವೆ ಆದ ಟೈಪಿಂಗ್ ತಪ್ಪುಗಳು ಕೂಡ ನನ್ನ ಬ್ಲಾಗ್ ನಲ್ಲಿ ಇರುವಂತೆಯೇ ಇದೆಯಲ್ಲ ಯಾಕೆ ? 


6 ಕದ್ದು ಬಳಸಿದಾಗ ಕೊನೆಯ ಪಕ್ಷ ಎಲ್ಲಿಂದ ಕಾಪಿ ಮಾಡಿದ್ದೀರಿ ಅವರ ( ನನ್ನ) ಹೆಸರು ಬ್ಲಾಗ್ ಲಿಂಕ್  ಹಾಕಬಹುದಿತ್ತಲ್ಲ..ಬೇರೆಯವರ ಫೇಸ್ ಬುಕ್ ಲಿಂಕ್ ಹಾಕಿದ್ದಿರಲ್ಲ..ನಿನ್ನೆ ತನಕ ಅದೊಂದೇ ಉಲ್ಲೇಖ ಇತ್ತಲ್ವಾ? 


7 ಕಾಂತು ಅಜಿಲರು ಸಂಗ್ರಹಿಸಿ ದ ನಲಿಕೆ ಪದ ಎಂದು ಇನ್ನೊಂದು ಉಲ್ಲೇಖ ಹಾಕಿದ್ದೀರಿ,ಯಾವ ಕಾಂತು ಅಜಿಲರು,ಯಾವ ಊರಿನವರು ,ಅವರ ವಿಳಾಸ ತಿಳಿಸುತ್ತೀರಾ? ಯಾಕೆಂದರೆ ಅವರ ಮೂಲಕ ಗೌರವ ಧನ ನೀಡಿ  ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅಸ್ಪಷ್ಟತೆ ಇರುವಲ್ಲಿ ಊಹಾ ಪಾಠ ಹಾಕಿ ಅನುವಾದಿಸಿ, ಬೈಲ ಮಾರಿ ನಲಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಲೇಖನ ಬರೆದವಳು ನಾನು ಹಾಗಾಗಿ ನನಗೆ ಅವರು ಯಾರೆಂದು ಗೊತ್ತು ? ನಿಮಗೆ ಅವರು ಯಾವಾಗ ಹೇಗೆ ಕೊಟ್ಟರು ತಿಳಿಸುವಿರಾ? 


ಅಲ್ಲಿ ಕಾಂತು ಅಜಿಲರು ಸಂಗ್ರಹಿಸಿ ಕೊಟ್ಟ ಹಾಡು ಎಂದು ಉಲ್ಲೇಖದಲ್ಲಿ ಹಾಕಿದ್ದೀರಲ್ಲ .. ಕಾಂತು ಅಜಿಲರು ಯಾರು ? ಅಜಿಲರಸರ ಸಂತತಿಯವರಾ? 

ನಾನು ಯಾರಿಂದ ಗೌರವ ಧನ ಕೊಟ್ಟು ರೆಕಾರ್ಡ್ ಮಾಡಿ ಸಂಗ್ರಹಿಸಿದ್ದೆ ಎಂದು ಬರೆಯುವಾಗ ತಪ್ಪಿ ಕಾಂತು ಅಜಿಲ ಎಂದು ಬರೆದಿದ್ದೆ ಅದನ್ನು ಕೂಡ ಹಾಗೆಯೇ ಕಾಪಿ ಮಾಡಿದ್ದೀರಿ ಅಲ್ವಾ? ಅವರ ನಿಜವಾದ ಹೆಸರು ಏನು ತಿಳಿಸಿ ? ನಿಮಗೆ ಯಾವಾಗ ಹೇಗೆ ಕೊಟ್ಟರು ತಿಳಿಸ್ತೀರಾ ? 


8 ಅಲ್ಲಿ ಅನುವಾದದಲ್ಲಿ ನಡು ನಡುವೆ ನಾನು ಫ್ರಶ್ನಾರ್ಥಕ ಚಿಹ್ನೆ ಹಾಕಿದ್ದೆ,ನೀವು ಹಾಕಿದ್ದರಲ್ಲೂ ನಾನು ಹಾಕಿದ ಸ್ಥಳಗಳಲ್ಲಿಯೇ  ಅದು ಇದೆ ,ಯಾಕೆ ಹಾಕಿದಿರಿ? ಸಂಖ್ಯೆ ಗಳನ್ನು ಯಾಕೆ ನಾನು ಹಾಕಿದ ಕಡೆಗಳಲ್ಲಿಯೇ ಇದೆ ಯಾಕೆ ? ಅದೇಕೆ ಎಂದು ನಾನು ಜಾನಪದ ಕರ್ನಾಟಕದ ನನ್ನ ಬರಹದಲ್ಲಿ ಟಿಪ್ಪಣಿ ಯಲ್ಲಿ ಬರೆದಿದ್ದೆ,ಬ್ಲಾಗ್ ನಲ್ಲಿ ಹಾಕುವಾಗ ಬಿಟ್ಟು ಹೋಗಿತ್ತು.ನಾನು ಸಂಖ್ಯೆಗಳನ್ನು ಹಾಕಿದ್ದಕ್ಕೆ  ಕಾರಣ ತಿಳಿಸಿದೆ,ನೀವು ಕೂಡ ನಾನು ಹಾಕಿದೆಡೆಗಳಲ್ಲಿಯೇ ಅದೇ ಸಂಖ್ಯೆಗಳನ್ನು ಹಾಕಿದ್ದೀರಲ್ಲ ಯಾಕೆ ? ಕಾಪಿ ಮಾಡುವಾಗ ಅದೇ ತಪ್ಪುಗಳು ಸಂಖ್ಯೆಗಳು ಕೂಡ ಬಂತು ಅಷ್ಟೇ ..ಉತ್ತರ ತಾನೇ ಬೇರೆ ಉತ್ತರ ಇದೆಯಾ? ಬೇರೆ ಇದ್ದರೆ ತಿಳಿಸಿ..ಅದು ಬಿಟ್ಟು ನನ್ನ ನಿಂದನೆ ಮಾಡುದಲ್ಲ..


9 ಟ಼ೈಪಿಂಗ್್್ ್್ ಮಾಡುವಾಗ ಈತರಹದ ತಪ್ಪುಗಳು ನನ್ನ ಬರಹದಲ್ಲಿ ಅನೇಕೆಡೆಗಳಲ್ಲಿ ಆಗಿದೆ..ಅದೇ ತಪ್ಪುಗಳು   ನನ್ನಲ್ಲಿ ಇರುವಂತೆಯೇ ನೀವು  ಬರೆದದ್ದರಲ್ಲೂ ಆಗಿವೆ ಯಾಕೆ ? 

ಎಲ್ಲಕ್ಕಿಂತ ದೊಡ್ಡ ತಪ್ಪಿದೆ..ಅದೇನೆಂದು ಈಗ ಹೇಳುವುದಿಲ್ಲ..ನೀವು ಬರೆದ ಹಾಡನ್ನು ಕಾಂತು ಅಜಲರಿಗೆ ಒಮ್ಮೆ ತೋರಿಸಿ,ಏನು ತಪ್ಪು ಎಂದು ಅವರು ಹೇಳುತ್ತಾರೆ.


10 ಕದ್ದ ಮೇಲೆ ತಪ್ಪನ್ನು ಒಪ್ಕಿಕೊಳ್ಳುವ ಬದಲು ನನ್ನ ಮೇಲೆಯೇ ಅರೋಪ ಮಾಡ್ತಿರಲ್ಲ‌.ನೀವಿಬ್ಬರು ನಾ ಇಕೆ ಆಗಲ್ವಾ ? ಇಷ್ಟು ದೊಡ್ಡ ಹುದ್ದೆಯಲ್ಲಿ ಇದ್ದುಕೊಂಡು..


11 ಪವನಜ ರಿಗೆ ನಾಲ್ಕು ವರ್ಷಗಳ ಹಿಂದೆ ನನ್ನ ಬರಹವನ್ನು ಯಥಾವತ್ ಕಾಪಿ ಮಾಡಿ ವಿಕಿಪೀಡಿಯ ಕ್ಕೆ ನೀವು ಹಾಕಿದ್ದು ತಪ್ಪೆನಿಸಲಿಲ್ಲ..ವಿಕಿಪೀಡಿಯ ನಿಯಮಕ್ಕೆ ವಿರೋಧ ಎನಿಸಲಿಲ್ಲ..ನನ್ನ ಬರಹಕ್ಕೆ ಯಾರದೋ ಫೇಸ್ ಬುಕ್ ಲಿಂಕ್ ಕೊಟ್ಟದ್ದು ಕಳೆದ ನಾಲ್ಕು ವರ್ಷಗಳಲ್ಲಿ ತಪ್ಪೆನಿಸಲಿಲ್ಲ..ಯಾವುದರಿಂದ ಕಾಪಿ ಮಾಡಿ ಬರೆದಿದ್ದೀರೋ ಅವರ ಬ್ಲಾಗ್ ಲಿಂಕ್ ಹಾಕುದು ತಪ್ಪೆನಿಸಿದೆ..

ಅಲ್ಲದೇ ನನ್ನದೇ ತಪ್ಪೆಂಬಂತೆ ಬಿಂಬಿಸಲಲು ಹೊರಟಿದ್ದೀರಿ,ನಾಚಿಗೆ ಆಗಲ್ವಾ ‌ನಿಮ್ಮಿಬ್ಬರಿಗೆ ? ಅಂತಃ ಸಾಕ್ಷಿ ಚುಚ್ಚುದಿಲ್ವಾ ? ಕದ್ದಿದ್ದಲ್ಲದೇ  ಮೂಲವನ್ನು ಮುಚ್ಚಿಟ್ಟು ಬೇರೆಯವರ ಲಿಂಕ್ ಕೊಟ್ಟು ಅದನ್ನು ಸಮರ್ಥನೆ ಮಾಡುವಾಗ‌...ಕೋರ್ಟ್‌ ನಲ್ಲೂ ಇದೇ ಸುಳ್ಳನ್ನು ಸಮರ್ಥನೆ ಮಾಡುತ್ತೀರಾ ? ನಿಮ್ಮ ಜೊತೆಗೆ ಪವನಜ ಕೂಡ ಕೋರ್ಟಿಗೆ ಬಂದು ಯಾರದೋ ಬರಹ ಯಥಾವತ್  ಕಾಪಿ ಮಾಡಿ ವಿಕಿಪೀಡಿಯದಲ್ಲಿ ಹಾಕಬ ಹುದು ಎಂದು ಸಾಕ್ಷಿ ನುಡಿಯುತ್ತಾರಾ ಕೇಳಿ ನೋಡಿ..

ಆಸಕ್ತರು ನಾನು ಹೇಳಿದ ವಿಚಾರಗಳನ್ನು ವೆರಿಫೈ ಮಾಡಬಹುದು ಅದಕ್ಕಾಗಿ ನನ್ನ ಬ್ಲಾಗ್ ಬರಹವ ಲಿಂಕ್ ಕೊಟ್ಟಿದ್ದೇನೆ ,ಇಲ್ಲಿ ವಿವರಣೆಗಳನ್ನು ಯಥಾವತ್ ಒಂದು ಶಬ್ದ ಬದಲಾಯಿಸದೆ ತುಳುವಿನಲ್ಲಿ ಹಾಕಿದ್ದಾರೆ.ಉಳಿದಂತೆ ಮೂಲ ತುಳು ಹಾಡು ಮತ್ತು ಅನುವಾದ ಅದರಲ್ಲನ ಟೈಪಿಂಗ್ ಎರರ್ ಸಂಖ್ಯೆ ಫ್ರಶ್ನಾರ್ಥಕ ಚಿಹ್ನೆಗಳೊಂದಿಗೆ ಇರುವ ಹಾಗೆಯೇ ಹಾಕಿದ್ದಾರೆ ,ಅವರ upload ಮಾಡಿ ನಿನ್ನೆ ತನಕ ಬದಲಾಗದೇ ಇದ್ದ ಬರಹದ ಸ್ಕ್ರೀನ್ ಶಾಟ್ ಅನ್ನು ವಿಕಿಪೀಡಿಯ ಎಡಿಟ್ ಹಿಸ್ಟರಿ ಮೂಲಕ ತೆಗೆದು ಇಲ್ಲಿ ಹಾಕಿದ್ದೇನೆ ನೋಡಿ 

ಡಾ.ಲಕ್ಷ್ಮೀ ಜಿ ಪ್ರಸಾದ.

ಕನ್ನಡ ಉಪನ್ಯಾಸಕರು. 

ಸರ್ಕಾರಿ ಪಿಯು ಕಾಲೇಜು

ಬೆಂಗಳೂರು 


https://laxmipras.blogspot.com/2013/02/baila-maari-nalke-rare-folk-dance-of.html?m=1


https://laxmipras.blogspot.com/2013/02/baila-maari-nalke-rare-folk-dance-of.html?m=1


https://m.facebook.com/story.php?story_fbid=2186258434832779&id=100003459322515

Wednesday 23 December 2020

ನನಗೂ ಆತ್ಮವಿದೆ

 ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ


ಎರಡು ವರ್ಷದ ಮೊದಲು‌ ಐ ಎಂ ಎ ವಂಚನೆ ಬೆಳಕಿಗೆ ಬಂದ ಸಂದರ್ಭದಲ್ಲಿ  ನೆಲಮಂಗಲ ಕಾಲೇಜಿನ ಸಹೋದ್ಯೋಗಿಗಳಾದ ಸಯೀದಾ ಮೇಡಂ ಮತ್ತು ಜಗದೀಶ್ ಮುಂದಿನದು ಕಣ್ವ ಎಂದು ಭವಿಷ್ಯ ನುಡಿದಿದ್ದರು..

ಈಗ ಹಾಗೆಯೇ ಆಗಿದೆ..

ಪದೇ ಪದೇ ವಂಚನೆಯ ಪ್ರಕರಣಗಳು ಕಾಣುತ್ತಿದ್ದರೂ ಮತ್ತೆ ಮತ್ತೆ ಅತಿಯಾಸೆಗೆ ಬಲಿಯಾಗಿ ಇದ್ದುದನ್ನು ಜನ ಕಳೆದುಕೊಳ್ಳುತ್ತಾರೆ

ಈ ವಿಚಾರ ಬಂದಾಗ ಇನ್ನೊಂದು ವಿಷಯ ನೆನಪಾಯ್ತು

ಬಹುಶಃ 2001-2002 ನೇ ಇಸವಿ ಎಂದು ನೆನಪು

ಪ್ರಸಾದ್ ಮಣಿಪಾಲ ಪೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.


ಕಂಪೆನಿಯ ಆಗು ಹೋಗುಗಳನ್ನು ಗಮನಿಸುತ್ತಿದ್ದ ಅವರಿಗೆ ಅಪಾಯದ ಸೂಚನೆ ಸಿಕ್ಕಿತ್ತು.

ಹಾಗಾಗಿ ಅವರ ಮೇಲಿನ ನಂಬಿಕೆಯಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ದುಡ್ಡು ಕಟ್ಟಿದವರಿಗೆ ತೆಗೆಸಿಕೊಟ್ಟರು.


ಇನ್ನು ಅನೇಕ ಪರಿಚಿತರು ಅವರಾಗಿಯೇ ಬಂದು ಕಟ್ಟಿದವರಿದ್ದರು.ಅವರುಗಳಿಗೂ ಸೂಕ್ಷ್ಮವಾಗಿ ಠೇವಣಿ ಹಿಂತೆಗೆಯುವಂತೆ ಸಲಹೆ ನೀಡಿದರು.


ನನ್ನ ಮಾವ ಮೈದುನರೂ ಕೂಡ ಮಣಿಪಾಲ್ ಪೈನಾನ್ಸ್ ಹಾಗೂ ಮಣಿಪಾಲ್ ಅಪೆಕ್ಸ್ ? ನಲ್ಲಿ ದುಡ್ಡಿಟ್ಟದ್ದು ನಮಗೆ ಗೊತ್ತಿತ್ತು.ಹಾಗಾಗಿ ಅವರಿಗೂ ಹಿಂತೆಗೆಯುವಂತೆ  ಪ್ರಸಾದ್ ಹೇಳಿದ್ದರು.ಇನ್ನು ಅನೇಕ ಬಂಧುಗಳಿಗೂ ಹೇಳಿದ್ದರು.

ಅವರೆಲ್ಲ ಅವರು ದುಡ್ಡು ಇಟ್ಟಿದ್ದ ಮಣಿಪಾಲ್ ಪೈನಾನ್ಸ್,ಅಪೆಕ್ಸ್ ನ ಬ್ರಾಂಚ್ ಮ್ಯಾನೇಜರ್ ಅಲ್ಲಿ,ಇದು ಮುಳುಗುತ್ತದೆಯಂತೆ ಹೌದೇ ಎಂದು ಹೋಗಿ ಕೇಳಿದರು.

ಹೌದೆಂದು ಹೇಳಿದರೆ ಅವರುಗಳ ಕೆಲಸ ಉಳಿಯುತ್ತದಾ? ಯಾರಾದರೂ ಹಾಗೆ ಹೇಳುವರೇ? ಛೆ..ಛೆ ಇಲ್ಲ ಎಂದು ಹೇಳಿದರು.


ಇತ್ತ ಪ್ರಸಾದ್ ಕೆಲಸಕ್ಕೆ ರಾಜಿನಾಮೆ ನೀಡಿದರು.

ಅಗ ಮನೆ ಮಂದಿ ಬಂಧು ಬಳಗದವರೆಲ್ಲ‌ ಅವನನ್ನು ಕೆಲಸದಿಂದ ತೆಗೆದಿರಬೇಕು.ಅದಕ್ಕೆ ಅ ಕಂಪೆನಿ ಮುಳುಗುತ್ತದೆ ಎಂದಿದ್ದಾನೆ..ಪೈಗಳು ಹಾಗೆಲ್ಲಜನರಿಗೆ ಮೋಸ ಮಾಡುವವರಲ್ಲ ಎಂದು ನಮ್ಮ ಕಿವಿಗೆ ಬೀಳುವಂತೆ ಆಡಿಕೊಂಡರು.

ರಾಜಿನಾಮೆ ನೀಡಿದ ತಿಂಗಳೊಳಗೆ ಪ್ರಸಾದ್ ಗೆ ಬರಬೇಕಾದ ಪಿ ಎಪ್ ಇನ್ನಿತರ ದುಡ್ಡು ಕೈ ಸೆರಿತು.

ಅದೇ ಸಮಯದಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ರೀಜನಲ್ ಮ್ಯಾನೇಜರರಾಗಿದ್ದ ನನ್ನ ತಂದೆಯ ಶಿಷ್ಯ ವರ್ಗದವರೊಬ್ಬರು ನಮ್ಮ ತಂದೆ ಮನೆಗೆ ಬಂದಿದ್ದರು.


ಆಗ ನನ್ನ ಅಮ್ಮಮಣಿಪಾಲ್ ಪೈನಾನ್ಸ್ ಮುಳುಗುವ ಲಕ್ಷಣ ಉಂಟಂತೆ ಅಲ್ವಾ? ನನ್ನ ಅಳಿಯ ಹಾಗಾಗಿ ರಾಜಿನಾಮೆ ಕೊಟ್ಟಿದ್ದಾನೆ ಎಂದರು.

ಆಗ ಅವರು ಇಲ್ಲವೇ ಇಲ್ಲ ಎಂದು ಪ್ರಸಾದರಿಗೆ ಕೆಲಸ ಹೋದದ್ದು ಎಂಬಂತೆ ನಗಾಡಿದರಂತೆ

ಇದಾಗಿ ಎರಡು ತಿಂಗಳೊಳಗೆ ಒಂದಿನ ಇದ್ದಕ್ಕಿದ್ದಂತೆ ಯಾವ ಸೂಚನೆಯೂ ಇಲ್ಲ ಮಣಿಪಾಲ್ ಪೈನಾನ್ಸ್ ಬಾಗಿಲು ಹಾಕಿತ್ತು.

ಠೇವಣಿ ಇಟ್ಟವರಿಗೆ ಪಂಗ ನಾಮ.

ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಹೋಯಿತು ಜೊತೆಗೆ  ಪಿಎಪ್ ಇನ್ನಿತರ  ದುಡ್ಡೂ ಬರಲಿಲ್ಲ. ಆ ರೀಜನಲ್ ಮ್ಯಾನೇಜರ್ ಗೂ ಕೂಡಾ.


ನಮ್ಮ ಮಾವ ಮೈದುನರಿಗೂ ಹೋಯಿತು.ನಮ್ಮ ಬಂಧುಗಳಲ್ಲಿ ಅನೇಕರು ದುಡ್ಡು ಕಳಕೊಂಡಿದ್ದರು.

ಇಷ್ಟೆಲ್ಲ ಆಗುವಾಗ ಇದರ ಸೂಚನೆ ಆರು ತಿಂಗಳ ಮೊದಲೇ ಪ್ರಸಾದ್ ಗೆ ಹೇಗೆ ಗೊತ್ತಾಯಿತು ಎಂದು ನನಗೆ ಕುತೂಹಲ ಉಂಟಾಯಿತು‌.

ಕೇಳಿದೆ.

" ವೆರಿ ಸಿಂಪಲ್..ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಯಾವುದೇ ಸರಿಯಾದ ದಾಖಲೆ ಇಲ್ಲದೇ ಕೋಟಿ ಗಟ್ಟಲೆ ಸಾಲ ಕೊಡುತ್ತಿದ್ದರು.ಅದರಲ್ಲಿ ಅರ್ಧಾಂಶ ಮ್ಯಾನೇಜ್ ಮೆಂಟಿನವರ ಮನೆಗೆ ಹೋಗುತ್ತಾ ಇತ್ತು.ಅದು ಹಿಂದೆ ವಸೂಲಿ ಮಾಡಲಿರುವ ಸಾಲವಲ್ಲ.ಕೊಡುದು ಜನರ ದುಡ್ಡು. ಮ್ಯಾನೆಜ್ ಮೆಂಟಿನರ ಮನೆಗೆ ಬರುವ ಅರ್ಧಾಂಶ ದುಡ್ಡು ಅವರ ಸ್ವಂತಕ್ಕೆ.ಇನ್ನರ್ಧ ಸಾಲ ತಗೊಂಡವರಿಗೆ..ಜನರಿಗೆ ಚೆಂಬು " ಎಂಬುದು ಗೊತ್ತಾಗಿ ಬಾಗಿಲು ಹಾಕುವ ಮೊದಲೇ ಕೆಲಸಕ್ಕೆ ರಾಜಿನಾಮೆ ನೀಡಿ ನನಗೆ ಬರಬೇಕಾದ ಎಲ್ಲವನ್ನು ಪಡೆದುಕೊಂಡೆ ಅಷ್ಟೇ ಎಂದರು

ಮತ್ತೇನೋ ಜನರು ದೂರು ಕೊಟ್ಟು ಕೋರ್ಟಿಗೆ ಹೋಗಿದ್ದರು.ದುಡ್ಡು ಸಿಕ್ಕಿತೋ ಏನೋ ಗೊತ್ತಿಲ್ಲ

ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ ಎಂದು ಜನರಿಗೇಕೆ ಅರ್ತವಾಗುದಿಲ್ಲವೋ ಗೊತ್ತಾಗುತ್ತಿಲ್ಲ.

ವಿದ್ಯಾವಂತರಾದ ಸರ್ಕಾರಿ ಕಾಲೇಜಿನ ಉಪನ್ಯಾಸಕರೇ ಚೀಟಿಗೆ ದುಡ್ಡು ಕಟ್ಟುದನ್ನು ನೋಡಿದ್ದೇನೆ.

ಇನ್ನು ಇತರರನ್ನು ಹೇಳುದೆಂತ? 



Saturday 12 December 2020

ದೊಡ್ಡವರ ದಾರಿ- ನಿತ್ಯೋತ್ಸಾಹಿ ಶಕುಂತಲಾ ಸಾಂತ್ರಾಯ

 ದೊಡ್ಡವರ ದಾರಿ 


ನನಗೆಂದೂ ಕೆಲಸ ಕಷ್ಟದ್ದು ಎನಿಸಲಿಲ್ಲ ಎಂದ ನಿತ್ಯೋತ್ಸಾಹಿ ಶಕುಂತಲಾ ಶಾಂತ್ರಾಯ


ನನಗೆಂದೂ ಕೆಲಸ ಕಷ್ಟದ್ದು  ಎನಿಸಲಿಲ್ಲ  ಎಂದರು ಅವರು..ಹೌದು ಅದಕ್ಕೆ ಅವರು ವಿಶೇಷ ವ್ಯಕ್ತಿ.

ಶಿಕ್ಷಕರು ವರ್ಗಾವಣೆಯಾಗಿ ಹೋಗುವಾಗ ಮಕ್ಕಳು ಬಿಗಿದಪ್ಪಿ ಹೋಗಬೇಡಿ ಎಂದು ಅತ್ತದ್ದನ್ನು ನಾವುಗಳು ನೋಡಿರ್ತೇವೆ..ನೆಲಮಂಗಲದಿಂದ ವರ್ಗವಾಗಿ ಬೆಂಗಳೂರಿನ ಬ್ಯಾಟರಾಯನಪುರ ಸರ್ಜಾರಿ ಪಿಯು ಕಾಲೇಜಿಗೆ ಬಂದಾಗ ನಮ್ಮ ವಿದ್ಯಾರ್ಥಿಗಳು ಅತ್ತು ನನ್ನನ್ನು ಕಂಗಾಲು ಮಾಡಿದ್ದರು.ಮಕ್ಕಳು ಹಾಗೆಯೇ .ಶಿಕ್ಷಕರನ್ನು ತುಂಬಾ ಹಚ್ಚಿಕೊಳ್ತಾರೆ.ನಾವು ನಮ್ಮ ಅನುಕೂಲಕ್ಕಾಗಿ ವರ್ಗಾವಣೆ ಪಡೆದು  ಬೇರೆಡೆ ಹೋಗುವಾಗ ನಮ್ಮನ್ನು ಬಹಳ ಪ್ರೀತಿಸುವ ಮಕ್ಕಳು ದುಃಖಿಸುತ್ತಾರೆ..ಇದರ ಅನುಭವ ನನ್ನಂತೆ ಅನೇಕ ಶಿಕ್ಷಕರಿಗೆ ಅಗಿರುತ್ತದೆ.


ಆದರೆ ಶಾಲೆಯ ಮುಖ್ಯಸ್ಥರೊಬ್ಬರು ನಿವೃತ್ತರಾದಾಗ ಸಹೋದ್ಯೋಗಿಗಳು ಅತ್ತು ದುಃಖಿಸಿದ  ಪ್ರಕರಣ ಬಹಳ ಅಪರೂಪದ್ದು.ಮುಖ್ಯಸ್ಥರಲ್ಲಿ  ತನ್ನ ಕೈ ಕೆಳಗಿನವರಿಗೆ ವಿನಾಕಾರಣ ತೊಂದರೆ ಕೊಡುವವರೇ ಹೆಚ್ಚು.ಅದರಲ್ಲೂ ನನ್ನಂತೆ ಇತರ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದರೆ ಮತ್ಸರ ಪಟ್ಟು ಕಿರುಕುಳ ನೀಡುತ್ತಾರೆ‌

ಆದರೆ ಈ ಮುಖ್ಯಸ್ಥರು ಹಾಗಲ್ಲ..ಪ್ರತಿಬೆ ಯಾರಲ್ಲಿದ್ದರೂ ಗುರುತಿಸುವವರೇ ಆಗಿದ್ದರು‌.ತನ್‌ನ ಸಹೋದ್ಯೋಗಿಗಳನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಗೌರವದಿಂದ ಕಾಣ್ತಿದ್ದರು.ಅವರೇ ಶಕುಂತಲಾ ಸಾಂತ್ರಾಯ.

ಮಂಗಳೂರಿನ ಚಿನ್ಮಯ ವಿದ್ಯಾಸಂಸ್ಥೆ ಹುಟ್ಟಿ ಅಂದಾಜು ನಲುವತ್ತು ವರ್ಗಳಾಗಿದೆ .

ನಾನು ಅಲ್ಲಿ 2000-2004 ತನಕ ನಾಲ್ಕು ವರ್ಷ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ‌

ಆಗ ಮಂಗಳೂರಿನಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳಿರಲಿಲ್ಲ.ಅಲೋಷಿಯಸ್,ಕೆನರಾ,ಅಗ್ನೆಸ್ ಬಹು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟರೆ ಇವಕ್ಕೆ ಸಡ್ಡು ಹೊಡೆವಂತೆ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದ ಶಿಕ್ಷಣ ಸಂಸ್ಥೆ ಚಿನ್ಮಯ ಶಾಲೆ.

ಇದನ್ನು ಪ್ರಾರಂಭಿಸಿದವರು ಯಾರೆಂದು ನನಗೆ ಸರಿಯಾಗಿ ಗೊತ್ತಿಲ್ಲ.ಇಲ್ಲಿನ ಅರುಣಾ ಮಿಸ್ ತಿಳಿಸಿದಂತೆ ಯಾವುದೋ ಸೋರುವ ಹಳೆಯ ಕಟ್ಟಡದಲ್ಲಿ ಈ ಶಾಲೆ ಸುರು ಅಗಿತ್ತು.ಮಳೆ ಬರುವಾಗ ಅಲ್ಲಲ್ಲಿ ನೀರು ಸೋರುತ್ತಿತ್ತು.ಆಗ ಶಿಕ್ಷಕರು ಅಲ್ಲೆಲ್ಲ ಬಕೆಟ್ ಪಾತ್ರ ಚೊಂಬು ಇಡುತ್ತಿದ್ದರಂತೆ..ಮಂಗಳೂರಿಗೂ ಮಳೆಗೂ ಬಿಡಲಾಗದ ನಂಟು..ವರ್ಷದ ಆರು ತಿಂಗಳ ಕಾಲ ..

ಸುರಿವ ಮಳೆಯ ನಡುವೆ ಸೋರುವ ಹಳೆಯ ಕಟ್ಟಡದಲ್ಲಿ ಇದ್ದುಕೊಂಡೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ ಹೆಗ್ಗಳಿಕೆ ಈ ಶಾಲೆಯ ಶಿಕ್ಷಕರದು.

ಈ ಶಾಲೆ ಒಂದು ಟ್ರಸ್ಟ್ ಮೂಲಕ ನಡೆಯುತ್ತಿದೆ.ಟ್ರಸ್ಟ್ ನ ಸಸಸ್ಯರಿಗೇನೂ ಶಾಲೆಯ ಪ್ರಗತಿ ಬಗ್ಗೆ ವೈಯುಕ್ತಿಕ ಕಾಳಜಿ ಇರಲಿಲ್ಲ


ಆದರೂ ಈ ಶಿಕ್ಷಣ ಸಂಸ್ಥೆ ಸ್ವಂತ ಕಟ್ಟಡಕ್ಕೆ ಬರುವಷ್ಟು ಆದಾಯವನ್ನು ಗಳಿಸಿದೆ.ಬಹುಶಃ ಇದಕ್ಕೆ ಜಾಗ ಒದಗಿಸಿದವರು ಗಣೇಶ ಬೀಡಿಯ ಗಣಪತಿ ಪೈ ಗಳಿರಬೇಕು.(ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ‌)

ಇಲ್ಲಿ ಶಿಕ್ಷಕರಿಗೆ ವೇತನ ಕಡಿಮೆ ಇತ್ತು.ಹೆಚ್ಚು ಕೊಡುವಷ್ಟು ಅದಾಯ ಇರಲಿಲ್ಲ 

ಡೊನೇಶನ್ ಹಾವಳಿ ಈ ಸಂಸ್ಥೆಯಲ್ಲಿ ಇರಲಿಲ್ಲ.ಫೀಸ್ ಕೂಡಾ ತುಂಬಾ ಇರಲಿಲ್ಲ.ಬರುತ್ತಿದ್ದವರೆಲ್ಲ ಬಡ ಮಧ್ಯಮ ವರ್ಗದ ಮಕ್ಕಳೇ.

ಕೆ ಜಿ ತರಗತಿಯಿಂದ ಶುರುವಾಗಿ ಹತ್ತನೇ ತರಗತಿ ತನಕ ತಲುಪಿ ಸತತವಾಗಿ ಉತ್ತಮ ಫಲಿತಾಂಶ ಪಡೆದು ಚಿನ್ಮಯ ಶಾಲೆ ಹೆಸರಾಗಿತ್ತು.ಬಡ ಮದ್ಯಮ ವರ್ಗಕ್ಕೆ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೈ ಗೆಟುಕುವಂತೆ ಮಾಡಿತ್ತು


ಈ ಶಾಲೆಯನ್ನು ಆರಂಭದಿಂದ ಇಪ್ಪತ್ತೈದು ವರ್ಷಗಳಕಾಲ ಸಮರ್ಥವಾಗಿ ಸಮತೋಲನದಿಂದ ನಡೆಸಿದವರು ಶಕುಂತಲಾ ಸಾಂತ್ರಾಯ ಅವರು.

ಆರಂಭದಲ್ಲಿ ವಿಮಲಾ ಮೇಡಂ ಮುಖ್ಯೋಪಾಧ್ಯಾಯಿನಿ ಆಗಿದ್ದರು.ನಂತರ ಅವರು ಬೇಡ ಎಂದ ಕಾರಣ ಶಕುಂತಲಾ ಸಾಂತ್ರಾಯ ಮುಖ್ಯೋಪಾಧ್ಯಾಯಿನಿ ಆಗಿದ್ದರು.

ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರಾಗುವುದು ಸುಲಭದ ಕೆಲಸವಲ್ಲ.ಅದು ತಂತಿ ಮೇಲಿ‌ನ ನಡಿಗೆ‌

ಒಂದೆಡೆ ಮ್ಯಾನೇಜ್ ಮೆಂಟಿನವರ ಕಿರಿಕಿರಿ,ಮತ್ತೊಂದೆಡೆ ಹೆತ್ತವರ ಕಿರಿಕಿರಿ..ಮಗದೊಂದೆಡೆ ಶಿಕ್ಷಣ ಇಲಾಕೆಯ ತರಹಾವರಿ ನಿಯಮಾವಳಿಗಳು.ಜೊತೆಗೆ ಶಿಕ್ಷಕರ ಸಮಸ್ಯೆಗಳು.

ಇವೆಲ್ಲವನ್ನೂ ಬಹಳ ಸಮರ್ಥವಾಗಿ ನಿಭಾಯಿಸುತ್ತಾ ದೀರ್ಘ ಕಾಲ ಎಂದರೆ ಇಪ್ಪತ್ತೈದು ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಆ ಸಂಸ್ಥೆಗಾಗಿ ಹಗಲು ರಾತ್ರಿ ದುಡಿದವರು ಶ್ರೀಮತಿ ಶಕುಂತಲಾ ಸಾಂತ್ರಾಯ.ಇವರ ಜೊತೆ ಕೈ ಜೋಡಿಸಿದವರು ಹಿರಿಯ ಶಿಕ್ಷಕರಾದ ಶ್ರೀಮತಿ  ಅರುಣಾ,ಶ್ರೀಮತಿ ಶಾಂತಾ,ಶ್ರೀಮತಿ ಮೋಹಿನಿ,ಕು ಶೋಭಾ,ಶ್ರಿಮತಿ ಪೂರ್ಣಿಮಾ ಶ್ರೀಮತಿ ಶುಭಾ ,ಶ್ರೀಮತಿ  ಅನುರಾಧಾ ಶ್ರಿಮತಿ ವಿಜಯಲಕ್ಷ್ಮೀ  , ಸ್ರೀಮತಿ ಶ್ರೀಮತಿ ಲ್ಯಾನೆಟ್ ,ಶೈಲಜಾ ,ಪ್ರತಿಮ್ ಕುಮಾರ, ,ಸುಜಾತಾ,ಕೃಷ್ಣ ಉಪಾಧ್ಯಾಯ( ಈಗ ಮಧುಸೂದನ್ ಕುಶೆ ಕಾಲೆಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾರೆ) ಮೊದಲಾದ ಶಿಕ್ಷಕರು.ಜೊತೆಗೆ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದವರು  ಬೋಧಕೇತರ ಸಿಬ್ಬಂದಿಗಳಾಗಿದ್ದ ಶ್ರೀಮತಿ ವೀಣಾ,ಮತ್ತು ಶ್ರೀಮತಿ ಸಂಧ್ಯಾ. 

ನಾನು  ಸರ್ರ್ಕಾರಿ ಉದ್ಯೋಗಕ್ಕೆ ಸೇರುವ ಮೊದಲು ಶ್ರೀರಾಮ ಶಾಲೆ ಕಲ್ಲಡ್ಕ,ಕೆನರಾ ಪ್ರೌಢ ಶಾಲೆ,ಅಲೋಷಿಯಸ್ ಕಾಲೇಜು,ಎವಿಎಸ್ ಕಾಲೇಜು, ಕಮಲಾ ಕಾಲೇಜು ಗಳಲ್ಲಿ ಕೆಲಸ ಮಾಡಿರುವೆ‌.ಜೂನಿಯರ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಪ್ರಿನ್ಸಿಪಾಲ್ ಆಗಿಯೂ ಕೆಲಸ ಮಾಡಿರುವೆ‌

ಸರ್ಕಾರಿ ಉದ್ಯೋಗ ದೊರೆತಾಗ ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ಸರ್ಕಾರಿ ಪಿಯು ಕಾಲೇಜಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಬ್ಯಾಟರಾಯನ ಪುಟ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಲಸ ಮಾಡಿರುವೆ.


ಬೇರೆಡೆ ನನಗೆ ಹೆಚ್ಚಿನ ವೇತನ ಇತ್ತು.ಅದರೆ ಯಾವತ್ತಿಗು ಮರೆಯಲಾಗದಂತೆ ನನ್ನ ಮನಸ್ಸಿನಲ್ಲಿ ನನಗೆ ಅಚ್ಚೊತ್ತಿ ನಿಂತದ್ದು ಚಿನ್ಮಯ ಶಾಲೆಯ ವಾತಾವರಣ.

ಇಲ್ಲಿನ ಶಿಕ್ಷಕರು ಯಾರೂ ಸಿರಿವಂತರಲ್ಲ..ಹೆಚ್ಚು ಕಡಿಮೆ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಇಲ್ಲಿನ ವೇತನ ಕೂಡಾ ಅಷ್ಟಕ್ಕಷ್ಟೇ ಹೇಳುವಂತೆ ಇರಲಿಲ್ಲ.ಆದರೆ ಇಲ್ಲಿನ ಶಿಕ್ಷಕರ ಅನುವಿನ ಬಾಂಧವ್ಯ ಪರಸ್ಪರ ಹೊಂದಾಣಿಕೆ ಯಾರೂ ಕೂಡ ಮೆಚ್ಚುವದ್ದು.

ಇವರೆಲ್ಲರಿಗೆ ಶಾಲೆಯ ಮೇಲೆ ಇದ್ದ ಪ್ರೀತಿ,ಶಾಲೆಯನ್ನು ಅಭಿವೃದ್ಧಿ ಮಾಡುವ ಉತ್ಸಾಹ  ಅಪ್ರತಿಮವಾದುದು.

ಈ ಶಾಲೆಯ ವಾರ್ಷಿಕೋತ್ಸವ ನೋಡಿದರೆ ಇಲ್ಲಿನ ಶಿಕ್ಷಕರ ತಾದಾತ್ಮ್ಯತೆ ಗೊತ್ತಾಗುತ್ತದೆ.ಪ್ರತಿ ತರಗತಿಯ ಶಿಕ್ಷಕರು ತಮ್ಮ‌ಮಕ್ಕಳಿಗೆ ಹೇಳಿ ಕೊಟ್ಟು ಡ್ಯಾನ್ಸ್,ನಾಟಕ ಮಾಡಿಸುತ್ತಿದ್ದರು.ಒಂದಕ್ಕೊಂದು ಒಳ್ಳೆಯ ಕಾರ್ಯಕ್ರಮಗಳು ಇರುತ್ತಿದ್ದವು.

ಇವರಲ್ಲಿ ಬಹಳ ನೆನಪಾಗುವವರು ಅರುಣಾ ಮತ್ತು ಶಾಂತಾ ಅಚಾರ್..ಅರುಣಾ ಮೇಡಂ ಪ್ರತಿ ವರ್ಷ ನಾಟಕ ಮಾಡಿಸುವ ಜವಾಬ್ದಾರಿ ಹೊರುತ್ತಿದ್ದರು.ಮಕ್ಕಳನ್ನು ಸಿದ್ದ ಪಡಿಸುತ್ತಿದ್ದರು.ವಿವಿಧ ಸ್ಪರ್ಧೆಗಳಿಗೆ ಮಕ್ಕಳನ್ನು ಸಜ್ಜು ಗೊಳಿಸುವ ಕೆಲಸ ಇವರದು.ಇವರಿಗೆ ಹಾಡುಗಳನ್ನು ಹೇಳಿ ಕೊಡುತ್ತಾ ಇದ್ದವರು ಶಾಂತಾ ಆಚಾರ್.ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆ ಪಾಸಾದ ಸಂಗೀತ ವಿದ್ವಾಂಸರು.

ಇವರಿಬ್ಬರಿಂದಾಗಿ ಚಿನ್ಮಯ ಶಾಲೆಯ ಮಕ್ಕಳು ಎಲ್ಲೆಡೆ ಬಹುಮಾನ ಗಳಿಸುತ್ತಿದ್ದರು.ಇದರಿಂದಾಗಿ ಶಾಲೆಗೆ ಹೆಸರು ಬಂತು.ಜೊತೆಗೆ ಎಲ್ಲ ಶಿಕ್ಷಕರೂ ಅಹರ್ನಿಶ ದುಡಿಯುತ್ತಿದ್ದ ಕಾರಣ ಉತ್ತಮ ಫಲಿತಾಂಶ ಕೂಡಾ ಬರ್ತಿತ್ತು ಹೆಚ್ಚಾಗಿ 100% ರಿಸಲ್ಟ್ ಬರ್ತಿತ್ತು.ಶಕುಂತಲಾ ಸಾಂತ್ರಾಯರಿಗೆ ಕುಡಾ ಬರೆಯುವ ಹವ್ಯಾಸವಿದ್ದು ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದರು‌.ಅವರ ಕವಿತೆಗಳಿಗೆ ರಾಗ ಹಾಕಿ ಶಾಂತಾ ಆಚಾರ್ ಮಕ್ಕಳಿಗೆ ಹೇಳಿಕೊಡ್ತಾ ಇದ್ದರು.


ಇದರಿಂದಾಗಿ ಬಹು ಖ್ಯಾತಿ ಪಡೆದ ಅಲೋಷಿಯಸ್,ಕೆನರಾ ಅಗ್ನೆಸ್ ಶಿಕ್ಷಣ ಸಂಸ್ಥೆಗಳಂತೆ ಚಿನ್ಮಯ ಶಾಲೆ ಕೂಡಾ ತನ್ನದೇ ಅಸ್ತಿತ್ವವನ್ನು ಪಡೆಯಿತು.

 ಇದಕ್ಕೆ ಶಿಕ್ಷಕರ ಸಾಮೂಹಿಕ ಯತ್ನದ ಜೊತೆಗೆ ಶಕುಂತಲಾ ಸಾಂತ್ರಾಯರ ಸಮರ್ಥ ನಾಯಕತ್ವ ಕೂಡ ಕಾರಣವಾಗಿದೆ.ಈ ಶಾಲೆಯಲ್ಲಿ ದುಡಿಯುತ್ತಿದ್ದ ಹೆಚ್ಚಿನ ಶಿಕ್ಷಕರು ಆರ್ಥಿಕವಾಗಿ ಬಲಿಷ್ಟರಾಗಿರಲಿಲ್ಲ.ನಮಗೆ ದುಡಿಯುವುದು ಅನಿವಾರ್ಯ ಆಗಿತ್ತು.ಆದರೆ ಶಕುಂತಲಾ ಸಾಂತ್ರಾಯರ ಪತಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ಆರ್ಥಿಕವಾಗಿ ಬಲಿಷ್ಠರಾಗಿದ್ದರು.ಹಾಗಾಗಿ ಶಕುಂತಲಾ ಸಾಂತ್ರಾಯರಿಗೆ ದುಡಿಯುವ ಅಗತ್ಯ ಇರಲಿಲ್ಲ.

2004 ರಲ್ಲಿ ಸುದೀರ್ಘ ಇಪ್ಪತ್ತೈದು ವರ್ಷಗಳ ನಂತರ ನಿವೃತ್ತರಾದರು‌ಆಗ ನಾವೆಲ್ಲರೂ ಅವರನ್ನು ಮತ್ತೆ ಒಂದೆರಡು ವರ್ಷಮುಂದುವರಿಸುವಂತೆ ಶಾಲಾ ಟ್ರಸ್ಟ್ ನಲ್ಲಿ ಕೇಳಿದ್ದೆವು.ಅದಕ್ಕೆ ಅವರುಗಳು ಒಪ್ಪಿರಲಿಲ್ಲ.

2004 ರಲ್ಲಿ ಸಾಂತ್ರಾಯ ಅವರು ನಿವೃತ್ತರಾದಾಗ ಅಲ್ಲಿ‌ ವಿದ್ಯಾರ್ಥಿಗಳು ಮಾತ್ರವಲ್ಲ ನಾನು ಸೇರಿದಂತೆ ಶಿಕ್ಷಕಿಯರು ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದರು .ನಮ್ಮಲ್ಲಿ  ಅಷ್ಡು ಅಟ್ಯಾಚ್ ಮೆಂಟ್ ಆದರೆ ಶಕುಂತಲಾ ಸಾಂತ್ರಾಯ ಅವರು ಮಾತ್ರ ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಿದ ಸಂತೃಪ್ತಿಯಿಂದ  ಇದ್ದರು.

ಬೇರೆಯವರಲ್ಲಿನ ಗುಣವನ್ನು ಮೆಚ್ಚುವ,ಪ್ರೋತ್ಸಾಹಿಸುವ ಗುಣ ಶಕುಂತಲಾ ಸಾಂತ್ರಾಯರಲ್ಲಿ ಇತ್ತು.

ಆಗ ಮಂಗಳೂರಿನ ಖಾಸಗಿ ಸಿಟಿ ಚಾನೆಲ್ ಬಹಲ ಪ್ರಸಿದ್ದವಾಗಿದ್ದು ಪ್ರತಿ ಅದಿತ್ಯವಾರ ಉದಯವಾಣಿಯ ಮನೋಹರ ಪ್ರಸಾದ್ ಜನಮನ ಎಂಬ ಶೀರ್ಷಿಕೆಯಡಿ 

ಬೇರೆ ಬೇರೆ ಕ್ಷೇತ್ರದಲ್ಲಿ ಪರಿಣತರಾದವರನ್ನು ಅತಿಥಿಯಾಗಿ ಕರೆದು ಎರಡು ಗಂಟೆಯ ನೇರ ಪ್ರಸಾರ ಕಾರ್ಯಕ್ರಮ ನಡೆಸುತ್ತಿದ್ದರು.ಇದರಲ್ಲಿ ಪೋನ್ ಮೂಲಕ ಪ್ರೇಕ್ಷಕರು ಭಾಗವಹಿಸುತ್ತಿದ್ದರು.ಆಗಿನ ಕಾಲಕ್ಕೆ ಬಹು ಖ್ಯಾತವಾದ ಕಾರ್ಯಕ್ರಮ ಅದು‌.

2003 ಮಾರ್ಚ್ ಮೊದಲ ವಾರ  ಮಕ್ಕಳನ್ನು ಪರೀಕ್ಷೆಗೆ ಸಿದ್ದ  ಪಡಿಸುವುದು ಹೇಗೆ ಎಂಬ ಬಗ್ಗೆ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಚಿನ್ಮಯಾ ಶಾಲೆಯ ಹಿರಿಯ ಶಿಕ್ಷಕರ ಬಗ್ಗೆ ಶಕುಂತಲಾ ಸಾಂತ್ರಾಯ ಅವರಲ್ಲಿ ವಿಚಾರಿಸಿದರು.ಆಗ ನಾನು ಕಿರಿಯಳಾಗಿದ್ದರೂ ಕೂಡಾ ಬರವಣಿಗೆಯ ಹವ್ಯಾಸವಿದ್ದ,ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕ ಲೇಖನಗಳನ್ನು ಬರೆದಿದ್ದ ನನ್ನ  ಹೆಸರನ್ಬು ಸೂಚಿಸಿದ್ದರು.

ನಂತರ ನಾನು ಮತ್ತು ನಮ್ಮ ಶಾಲೆಯ ಗಣಿತ ಮೇಸ್ಟ್ರಾಗಿದ್ದ ಕೃಷ್ಣ ಉಪಾಧ್ಯಾಯರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದೆವು.ನಮಗಾದ ಮಟ್ಟಿಗೆ ಮಾಹಿತಿ ನೀಡಿದೆವು.ಕಾರ್ಯಕ್ರಮ ಚೆನ್ನಾಗಿ ಬಂದಿದೆ ಎಂದುನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದರು.

ಈ ಕಾರ್ಯಕ್ರಮಕ್ಕೆ ನನ್ನನ್ನು ಕರೆದಾಗ ಆರಂಭದಲ್ಲಿ ನಾನು ಹಿಂದೇಟು ಹಾಕಿದ್ದೆ.ಆಗ ಶಕುಂತಲಾಸಾಂತ್ರಾಯ ಅವರೇ ನನಗೆ ನಿಮ್ಮ ಬಗ್ಗೆ ನಂಬಿಕೆ ಇದೆ..ಯಾವ ರೀತಿ ಬರೆಯುತ್ತೀರಿ ಅದೇ ರೀತಿ ಮಾತನಾಡಿದರಾಯಿತು ಹೋಗಿ ಭಾಗವಹಿಸಿ.ಇಂತಹ  ಅವಕಾಶಕ್ಕಾಗಿ ತುಂಬಾ ಜನ ಕಾಯ್ತಾರೆ .ಅವಕಾಶ ಬಂದಾಗ ಹಿಂದೇಟು ಹಾಕಬಾರದು.ದೈರ್ಯವಾಗಿ ಹೋಗಿ ಎಂದು ಬೆಂಬಲ ನೀಡಿದ್ದರು.

ಅವರು ನಿವೃತ್ತರಾದ ಮೇಲೆ ಅವರನ್ನು ನಾನು ಭೇಟಿ ಮಾಡಿಲ್ಲ.ತುಂಬಾ ದಿನಗಳಿಂದ ಅವರಲ್ಲಿ ಮಾತನಾಡಬೇಕು ಎಂದು ಅಲೋಚಿಸುತ್ತಿದ್ದೆ.ಅದರೆ ಅವರ ಪೋನ್ ನಂಬರ್ ಸಿಗಲಿಲ್ಲ.


ಈವತ್ತು ಒಂದು ಯೋಚನೆ ತಲೆಗೆ ಹೊಳೆಯಿತು.ಅವರ ಸಣ್ಣಮಗ ಮಹೇಶ್ ಇ ಎನ್ ಟಿ ಡಾಕ್ಟರ್.ಅವರ ಹೆಸರು ಹಾಕಿ ಗೂಗಲ್ ಸರ್ಚ್ ಕೊಟ್ಟೆ.ಅವರ ನಂಬರ್ ಸಿಕ್ತು.ಪೋನ್ ಮಾಡಿದಾಗ 

ಅವರ ಪತ್ನಿ ( ಅವರು ಕುಡಾ ಇ ಎನ್ ಟಿ ತಜ್ಞವೈದ್ಯೆ) ಕರೆ ಸ್ವೀಕರಿಸಿದರು.ನನ್ನ ಸಂಕ್ಷಿಪ್ತ ಪರಿಚಯ ಹೇಳಿ ಶಕುಂತಲಾ ಸಾಂತ್ರಾಯರ ನಂಬರ್ ಕೇಳಿದೆ.ಅವರು ಕೊಟ್ಟರು .ತಕ್ಷಣವೇ ಪೋನ್ ಮಾಡಿದೆ.ಶಕುಂತಲಾ ಮೇಡಂ ಅವರಲ್ಲಿ ಸುಮಾರು ಹೊತ್ತು ಮಾತನಾಡಿದೆ

ಮಾತಿನ ನಡುವೆ " ನಿಮಗೆ ಕೆಲಸ ಮಾಡುವ ಅನಿವಾರ್ಯತೆ ಇರಲಿಲ್ಲ‌.ಯಾಕೆ ಕಡಿಮೆ ವೇತನದಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಿರಿ ಎಂದು ಕೇಳಿದೆ.ಅಗ ಅವರು ಬದುಕಿಗೆ ದುಡ್ಡೆ ಮುಖ್ಯವಲ್ಲ.ನಮಗೆ ನಮ್ಮದೇ ಆದ ಅಸ್ತಿತ್ವ ಬೇಕು.ಹಾಗಾಗಿ ನಾನು ಶಿಕ್ಷಕಿಯಾಗಿ ಕೆಲಸ ಮಾಡಿದೆ.ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ಬಂದಾಗ ದೈರ್ಯವಾಗಿ ಸ್ವೀಕರಿಸಿದೆ,ಯಶಸ್ಸು ಕೂಡಾ ಸಿಕ್ಕಿತು.ಈ ಯಶಸ್ಸಿನಲ್ಲಿ ಅಹರ್ನಿಶ ದುಡಿದ ಶಿಕ್ಷಕ ಶಿಕ್ಷಕಿಯರ  ,ಸಿಬ್ಬಂದಿಗಳ ಪಾಲೂ ಇದೆ.ಎಲ್ಲಕ್ಕಿಂತ ಹೆಚ್ಚಾಗಿ ದೇವರ ದಯೆ " ಎಂದರು.

ಒಂದೆಡೆ ಮ್ಯಾನೆಜ್ ಮೆಂಟ್ ನವರ ಕಿರಿಕಿರಿ,ಇನ್ನೊಂದೆಡೆ ಹೆತ್ತವರ ಕಿರಿಕಿರಿ,ಇಲಾಖೆಯ ನೀತಿ ನಿಯಮಗಳ ಪಾಲನೆ ಇವೆಲ್ಲವನ್ನು ನಿಬಾಯಿಸುದು ಕಷ್ಟ ಎನಿಸಲಿಲ್ವಾ ಎಂದು ಕೇಳಿದೆ.ಅಗ ಅವರು " ಸಮಸ್ಯೆಗಳು ಎದುರಾಗುತ್ತಿದ್ದವು.ಇಲ್ಲವೆಂದಲ್ಲ ಅದರೆ ನನಗೆ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ನಿರ್ವಹಿಸುವುದು ಕಷ್ಟ ಎಂದು ಒಮ್ಮೆ ಕೂಡ ಅನಿಸಿಯೇ ಇಲ್ಲ ' ಎಂದರು

ಹೌದು,ಕೆಲಸವನ್ನು ಇಷ್ಟ ಪಟ್ಟು ಮಾಡಿದರೆ ಎಷ್ಟೇ ಕಷ್ಟದ ಕೆಲಸ ಕೂಡಾ ಕಷ್ಟ ಎನಿಸುದಿಲ್ಲ.ಅದಕ್ಕಾಗಿಯೇ ಶಕುಂತಲಾ ಸಾಂತ್ರಾಯರು ವಿಶಿಷ್ಟರಾಗಿ ಕಾಣ್ತಾರೆ.ಈಗಲೂ ಕೂಡಾ ಅದೇ ಉತ್ಸಾಹ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.


(ಚಿತ್ರ: ಚಿನ್ಮಯ ಶಾಲೆಯಲ್ಲಿ ಬಹುಮಾನ ಪಡೆದ ಸಂದರ್ಭ ,ಇದರಲ್ಲಿರುವವರು ಅತಿಥಿಯಾಗಿ ಬಂದವರು ಮತ್ತು ನಾನು,ಶಕುಂತಲಾ ಸಾಂತ್ರಾಯ ಚಿತ್ರ ನನ್ನಲ್ಲಿ ಇಲ್ಲ‌,ಮುಂದಿನ ಬಾರಿ ಊರಿಗೆ ಬಮದಾಗ ಅವರ ಮನೆಗೆ ಬರಲು ಕರೆದಿದ್ದಾರೆ.ಅಗ ಹೋಗಿ ಅವರೊಂದಿಗೆ ಪೋಟೋಹಿಡಿದು ಬರ್ತೇನೆ)


Sunday 8 November 2020

ನಿಜವಾಗಿಯೂ ನಡೆದದ್ದೇನು?

 ನಿಜವಾಗಿಯೂ  ನಡೆದದ್ದೇನು?


 ನಾನು ಎರಡನೇ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ನನಗೆ ಮದುವೆ ಆಯಿತು.ಮುಂದಿನ ಓದಿನ ಕಾರಣಕ್ಕಾಗಿ ಮನೆ ಮಂದಿಯ ವಿರೋಧ ಇತ್ತು.ಹಾಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಮನೆ ಬಿಟ್ಟು ಹೊರ ನಡೆದಿದ್ದವು.

ಅನೆನ ಏಳು ಬೀಳುಗಳ ಜೊತೆಗೆ ಒಂದು ಕೆಲಸ ಹಿಡಿದು ಮನೆ ಖರೀದಿಸಿ ಮಂಗಳೂರಿನಲ್ಲಿ ನಾವು ಬದುಕುತ್ತಿದ್ದೆವು.

ಈ ನಡುವೆ ಅತ್ತೆಯವರ ಕಣ್ಣೀರಿಗೆ ಸೋತು ಮನೆ ಮಂದಿಯ ಜೊತೆಗೆ ರಾಜಿ ಮಾಡಿಕೊಂಡಿದ್ದೆವು.ಆದರೆ ಇದೆಲ್ಲ ಹೊರ ಜಗತ್ತಿನ ಕಣ್ಣಿಗೆ ಮಣ್ಣು ಹಾಕುವದ್ದು ಅಷ್ಟೇ, 

ಒಳಗಿನಿಂದ ಹೊಟ್ಟೆ ಕಿಚ್ಚು ಆರೋಪಗಳು ಇದ್ದದ್ದೇ..ನಮ್ಮ ಕುಟುಂಬದಲ್ಲಿ ಓದಿ ಸರಿಯಾದ ಕೆಲಸ ಹಿಡಿದವರಿರಲಿಲ್ಲ.ಪ್ರಸಾದ್ ಮತ್ತು ನಾನು ಇಬ್ಬರೂ ಕೂಡ ಓದಿ ಒಳ್ಳೆಯ ಕೆಲಸ ಹಿಡಿದು ಮಂಗಳೂರಿನಲ್ಲಿ ಮನೆ ತಗೊಂಡದ್ದು ಉಳಿದವರ ಕಣ್ಣು ಕೆಂಪಾಗಲು ಕಾರಣವಾಗಿತ್ತು.

ನನ್ನ ಮಗನಿಗೆ ಒಂದು ಅಂದಾಜು ಎರಡು ಎರಡೂವರೆ ವರ್ಷ..ಅಗಷ್ಟೇ ಬಾಲ ಭಾಷೆಯಲ್ಲಿ ಮಾತನಾಡಲು ಕಲಿತಿದ್ದ.

ಇಂತಹ ಸಮಯದಲ್ಲಿ ನಮ್ಮ ಮನೆಯಲ್ಲಿ ನಾಗ ಪ್ರತಿಷ್ಠೆ ನಂತರ ಇನ್ನೇನೋ ಕಾರ್ಯಕ್ರಮ ಇತ್ತು.ಹಾಗಾಗಿ ಎರಡು ದಿನಗಳ ಮೊದಲೇ ಊರಿಗೆ ಹೋದೆವು.

ಕಾರ್ಯಕ್ರಮದ ಹಿಂದಿನ ದಿನವೇ ಸಂಬಂಧಿಕರು ,ಕುಟುಂಬದವರೆಲ್ಲ ಬಂದು ಸೇರಿದ್ದರು.ಎಲ್ಲರೂ ಏನೇನೋ ಕೆಲಸ ಹಚ್ಚಿಕೊಂಡು ಮರುದಿನದ ಕಾರ್ಯಕ್ರಮಕ್ಕೆ ಸಜ್ಜು ಮಾಡುತ್ತಿದ್ದರು.ನನಗೆ ಮಗನನ್ನು ಕಾಯುವುದೇ ಕೆಲಸ ಆಗಿತ್ತು.ವಿಪರೀತ ತುಂಟ.ಹಳ್ಳಿ ಅಲ್ವಾ? ಕೆರೆ ಬಾವಿಗಳಿವೆ‌

ಇವನೆಲ್ಲಿ ಅಲ್ಲಿ ಹೋಗಿ ಬಗ್ಗಿದರೆ ಎಂಬ ಆತಂಕ..

ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಕ್ಕಳೆಲ್ಲ ಆಟ ಅಡುತ್ತಿದ್ದರು‌‌.

ನನ್ನ ಮಗನೂ ಕೂಡ ಅವರ ಜೊತೆ ಇದ್ದ‌.ಆ ಗುಂಪಿನಲ್ಲಿ ಸ್ವಲ್ಪ ಹಿರಿಯಳಾದ ಬಾವನವರ ಮಗಳಿಗೆ ಅರವಿಂದನ ಮೇಲೆ ಒಂದು ಕಣ್ಣು ಇರುವಂತೆ ತಿಳಿಸಿ ಸ್ನಾನಕ್ಕೆ ಹೋಗಿದ್ದೆ..

ಸೋಪು ಹಚ್ಚಿಕೊಳ್ಳುವಷ್ಟರಲ್ಲಿ ಮಗ ಬೇಡಾ ಬೇಡಾ..ಅಮ್ಮಾ ಎಂದು ದೊಡ್ಡಕ್ಕೆ ಬೊಬ್ಬೆ ಹೊಡೆಯಿವುದು ಕೇಳಿಸಿತು.

ಗಾಬರಿಯಲ್ಲಿ ಹಾಗೆಯೇ ಬಟ್ಟೆ ಹಾಕಿಕೊಂಡು ಹೊರಗೆ ಅರವಿಂದ್ ಎಂತಾತು ಎಂದು ದೊಡ್ಡದಾಗಿ  ಓಡಿ ಅಂಗಳಕ್ಕೆ ಬಂದೆ..ಆಗ ಒಬ್ಬರು ಹತ್ತಿರದ ನೆಂಟರು ಬಾವಿ ಕಟ್ಟೆ ಕಡೆಯಿಂದ ವೇಗವಾಗಿ ಓಡಿದ್ದು ನೋಡಿದೆ.ಮಗ ಅಲ್ಲಿ ಅಳುತ್ತಾ ಇದ್ದ.ಏನೆಂದು ಕೇಳಿದೆ.ಅವನು ತನ್ನದೇ ಬಾಲ ಭಾಷೆಯಲ್ಲಿ ಯಾರೋ ಅವನನ್ನು ಎತ್ತಿ ಬಾವಿಗೆ ಹಾಕಲು ಹೊರಟದ್ದನ್ನು ಹೇಳಿದ..

ನಂಬಲು ಅಸಾಧ್ಯವಾದ ವಿಚಾರ.. ಆದರೆ ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇಇಲ್ಲ..ಹಾಗೆಂದು ಸಣ್ಣ ‌ಮಗುವಿನ ಮಾತಿನ ಮೇಲೆ ಈ ಬಗ್ಗೆ ಯಾರನ್ನಾದರೂ ಆಕ್ಷೇಪ ಮಾಡಲು ಸಾಧ್ಯವೇ? 

ನನ್ನ ಅಮ್ಮ ನನಗೆ "ನೋಡು ದಾಯಾದಿ‌ ಮತ್ಸರ ಎಂಬುದು ಬಹಳ ಅಪಾಯಕಾರಿ.ಊರ ಕಡೆ ಬಂದರೆ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು" ಎಂದು ಸದಾ ಹೇಳುತ್ತಿದ್ದರು.

ಅಲ್ಲಿ ಬಾವಿ ಕಟ್ಟೆ ಕಡೆಯಿಂದ ಓಡಿ ಬಂದವರೂ ದಾಯಾದಿಗಳೇ‌..ನಿಜಕ್ಕೂ ಮಗನನ್ನು ಎತ್ತಿ ಬಾವಿಗೆ ಹಾಕಲು ಹೊರಟರೇ.ಅಲ್ಲಿ ಯಾರೂ ಇರಲಿಲ್ಲ.

ಮನೆ ಮಂದಿ ಮಕ್ಕಳೆಲ್ಲ ತೆಂಕ ಜಾಲಿನಲ್ಲಿ ಇದ್ದರು.ಅಲ್ಲದೆ ಚಪ್ಪರ ಹಾಕಿ ಬದಿ ಕಟ್ಟಿದ ಕಾರಣ ಬಾವಿ ಇರುವ ಜಾಗ ಯಾರಿಗೂ ಕಾಣುವಂತೆ ಇರಲಿಲ್ಲ. ನಾನು ಸ್ನಾನಕ್ಕೆ ಹೋಗುತ್ತಲೇ ಅಡುವ ಮಕ್ಕಳ‌ ನಡುವಿನಿಂದ ಇವನನ್ನು ಎತ್ತಿಕೊಂಡು ಹೋದರೇ..? 

ಇಲ್ಲೊಂದು ಗೊಂದಲವಿದೆ‌.ಅರವಿಂದ ಬಾವಿಗೆ ಎತ್ತಿ ಹಾಕಲು ಹೊರಟದ್ದು ಎಂದು ಒಬ್ಬರ ಹೆಸರನ್ನು ಹೇಳಿದ್ದ‌‌.ನಾನು ಹೊರಬರುವಾಗ ನೋಡಿದ  ಬಾವಿ ಕಟ್ಟೆ ಕಡೆಯಿಂದ ಓಡಿ ಬಂದ ವ್ಯಕ್ತಿ ಆ ಹೆಸರಿನವರಲ್ಲ.ಮತ್ತು ಅಡುತ್ತಿರುವ ಮಕ್ಕಳ ನಡುವಿನಿಂದ ತಿಂಡಿ ಕೊಡ್ತೇನೆ ಬಾ ಎಂದು ಎತ್ತಿಕೊಂಡು ಹೋದ ವ್ಯಕ್ತಿ ಮತ್ತು ಅಲ್ಲಿ ಓಡಿ ಬಂದ ವ್ಯಕ್ತಿ ಬೇರೆ ಬೆರೆಯವರಾಗಿದ್ದರು. .ಅದರೆ ಅರವಿಂದ ಹೆಸರು  ಹೇಳಿದ ವ್ಯಕ್ತಿ ಯೇ ಅವನನ್ನು ಮಕ್ಕಳ ನಡುವಿನಿಂದ ಎತ್ತಿಕೊಂಡು ಹೋದ ಬಗ್ಗೆ ನಂತರ ನಾನು ಮಕ್ಕಳಿಂದ ಮೆಲ್ಲಗೆ ಕೇಳಿ ಕನ್ಫರ್ಮ್ ಮಾಡಿದ್ದೆ.ಹಾಗಾಗಿ ಅಲ್ಲಿ ಇಬ್ಬರು ಸೇರಿ ಇವನನ್ನು ಎತ್ತಿ ಬಾವಿಗೆ ಹಾಕಲು ಟ್ರೈ ಮಾಡಿದರೇ..ಅ ಇನ್ನೊಬ್ಬ ನಾನು ನೊಡುವ ಮೊದಲೇ ಅಲ್ಲಿಂದ ಓಡಿ ಹೋಗಿದ್ದರೇ‌‌..? ದೇವರೊಬ್ಬರಿಗೇ ಗೊತ್ತು...

ಅದೇ ಕೊನೆ..ನಾನು ಅರವಿಂದ ದೊಡ್ಡವನಾಗುವ ತನಕ ಎಲ್ಲೇ ಹೋದರೂ ಅದರಲ್ಲೂ ನಮ್ಮ ಸ್ವಂತ ಊರಿಗೆ ಹೋದರೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.ಸ್ನಾಕ್ಕೆ ಹೋಗುವಾಗ ಮಗನನ್ನು ಪ್ರಸಾದರ ಸುಪರ್ದಿಗೆ ಕೊಟ್ಡೇ ಹೋಗುತ್ತಿದ್ದೆ.ಯಾರಲ್ಲೂ ಹೇಳಲೂ ಆಗದ ಹೇಳದೇ ಇರಲೂ ಆಗದ ಪರಿಸ್ಥಿತಿ ಅದು..

ಮಕ್ಕಳನ್ನು ದೊಡ್ಡ ಮಾಡುವುದೆಂದರೆ ಸಣ್ಣ ಮಾತಲ್ಲ..ಅವರಾಗಿ ಬಾವಿಗೋ ಕೆರೆಗೊ ಬಿದ್ದರೂ ಬೇರೆಯವರು ಹೊಟ್ಟೆಕಿಚ್ಚಿನಿಂದ ಎತ್ತಿ ಹಾಕಿದರೂ ಅಪಾಯವೇ..

ಆಟ ಆಡುವಾಗ ಸಂಪಿಗೆ ,ಕೆರೆ ಬಾವಿಗೆ ಬಿದ್ದು ಸತ್ತ ಮಕ್ಕಳ ಬಗ್ಗೆ ಕೇಳುವಾಗೆಲ್ಲ ಈ ವಿಚಾರ ನನಗೆ ನೆನಪಾಗುತ್ತದೆ. ಹೆಚ್ಚಿನದು ಅಕಸ್ಮಿಕ ಅಗಿರಬಹುದು‌ .ಕೆಲವೊಂದು ಯಾರೋ ಹೊಟ್ಟೆ ಕಿಚ್ಚಿನವರು ದೂಡಿ ಹಾಕಿದ್ದೂ ಇರಬಹುದು ಅಲ್ವಾ? .ದಾಯಾದಿ ಮತ್ಸರವಂತೂ ಬಹಳ ಅಪಾಯಕಾರಿ.

ಅಂದು ಭೀಮಸೇನನಿಗೆ ವಿಷದ ಲಡ್ಡು ಕೊಟ್ಟ ಕಥೆ ,ಅರಗಿನ ಮನೆಯನ್ನು ಸುಟ್ಟ ಕಥೆ ಮಹಾಭಾರತದಲ್ಲಿ ಓದಿರ್ತೇವೆ..ಅಲ್ಲಿ ಇಲ್ಲಿ ಇಂತಹ ವಿಚಾರಗಳು ನಡೆದಿರುತ್ತವೆ.

ಕಥೆಗಳೆಲ್ಲ ನೂರಕ್ಕೆ ನೂರು ಕಾಲ್ಪನಿಕವಲ್ಲ.

ಎಲ್ಲೋ ನಡೆದ ನಡೆಯಬಹುದಾದ ವಿಚಾರಗಳ ಎಳೆ ಅದರಲ್ಲಿ ಇರುತ್ತದೆ.

ಅಂದು ನಿಜಕ್ಕೂ ನಮ್ಮ ಮನೆಯಲ್ಲಿ ನಡೆದದ್ದೇನು ಎಂದು ಇಂದಿಗೂ ನನಗೆ ಗೊಂದಲದಲ್ಲಿಯೇ ಇದೆ.ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇ ಇರಲಿಲ್ಲ. ಮತ್ತು ಇವನು ಕೊಸರಾಡಿದ್ದಕ್ಕೆ ಸಾಕ್ಷಿಯಾಗಿ ಅಂಗಿ ಹರಿದಿತ್ತು.ಚಡ್ಡಿ ಜಾರಿತ್ತು ಬೇಡಾ ಎಂದು .ಬೊಬ್ಬೆ ಹಾಕಿದ್ದು ನನಗೂ ಕೇಳಿಸಿಯೇ ಓಡಿ ಬಂದದ್ದು ನಾನು


ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ

 ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ 


ಮನೆ ಹಿಂದಿನ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ನಾಲ್ಕೈದು ಮಕ್ಕಳು ಐ ಸ್ಪೈಸ್ ? ಆಟ ಅಡುದನ್ನು ನೋಡಿದೆ‌ನಾವೂ ಹುಗ್ಗಾಟ ಆಡುತ್ತಿದ್ದ, ನಂತರ ನಿಜವಾಗಿ ನಡೆದ  ಕಥೆಯೊಂದನ್ನು  ಕೇಳಿ ಆಸಕ್ತಿ ಕಳೆದುಕೊಂಡ ವಿಚಾರ ನೆನಪಾಯಿತು‌


ನಾನು ಅಜ್ಜನ ಮನೆಯಲ್ಲಿ ಬೆಳೆದವಳು.

ನಮ್ಮ ಅಜ್ಜನ ಮನೆ ಕಾಸರಗೋಡಿನ ಮೀಯಪದವು ಸಮೀದ ಹೊಸಮನೆ.ಸುಮಾರು ಇನ್ನೂರು ವರ್ಷಗಳ ಹಳೆಯ ಮನೆ ಇದು.ಆಗಿನ ಕಾಲಕ್ಕೆ ಎರಡು ಅಂತಸ್ತಿನ ಉಪ್ಪರಿಗೆ ಮನೆ( ಎರಡು ಮಾಳಿಗೆಯ ಮನೆ) ಇದರಲ್ಲಿ ಮೇಲಿನ ಮಾಡಿನಲ್ಲಿ( ಮಾಳಿಗೆ ಯಲ್ಲಿ) ಒಂದು ದೋಣಿಯಾಕಾರದ ಮರದ ದೊಡ್ಡ ವಸ್ತು ಇತ್ತು‌ ಬಹುಶ ಃ ಹಳೆಯ ದೋಣಿ ಇರಬಹುದೋ ಏನೋ. ಅದರಲ್ಲಿ ಏನೇನೋ ಪುಸ್ತಕಗಳು ಇದ್ದವು.ಕೆಲವು ತಾಳೆ ಗರಿ ಗ್ರಂಥಗಳು ಕೂಡ ಇದ್ದವೆಂದು ಅನಿಸುತ್ತದೆ. ಆಗ ಅದರ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಈಗ ಇವು ಒರಳೆ ಹಿಡಿದು ಹಾಳಾಗಿದೆಯೋ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.

ನಾವು ಹುಗ್ಗಾಟ ಆಡಲು ಇಲ್ಲಿ ಅಡಗಿ ಕುಳಿತುಕೊಳ್ಳುತ್ತಾ ಇದ್ದೆವು.ಈ ಮಾಳಿಗೆಯಲ್ಲಿ ದೊಡ್ಡ ದೊಡ್ಡ  ಮಣ್ಣಿನ ಹಂಡೆಗಳಿದ್ದವು.

ಈ ಹಂಡೆಗಳಲ್ಲಿ ನಾವು ಅಡಗಿ ಕುಳಿತುಕೊಳ್ಳುತ್ತಿದ್ದೆವು..

ಇದನ್ನು ಗಮನಿಸಿದ ಅಜ್ಜಿ ನಮಗೆ ಜೋರು ಮಾಡಿ ಹಂಡೆಗಳನ್ನೆಲ್ಲ ಕವುಚಿ ಹಾಕಿದ್ದರು ನಮ್ಮನ್ನು ಎರಡನೆಯ ಮಾಳುಗೆಗೆ ಹೋಗದ ಹಾಗೆ ಜೋರು ಮಾಡಿದ್ದರು‌

.ಬಹುಶಃ ನಾವು ಒಡೆದು ಹಾಕಬಹುದು ಎಂದು ಹೀಗೆ ಮಾಡಿರಬಹುದು ಎಂದು ನಾವು ಊಹಿಸಿದ್ದೆವು.


ಆದರೆ ಅದಕ್ಕೆ ಬೇರೆಯೇ ಒಂದು ದೊಡ್ಡ ದುಃಖದ ದುರಂತದ ಕಾರಣವಿತ್ತು‌.ಅದರ ಹಿಂದೆ ಒಂದು ದುರಂತದ ಕಥೆ ಇತ್ತು 

ಇದನ್ನು ನಮ್ಮ ಅಜ್ಜನ ತಂಗಿ ಪೆಲತ್ತಡ್ಕದ ಅಜ್ಜಿ ಒಮ್ಮೆ ಹೇಳಿದ್ದರು.

ನಮ್ಮ ಹಳ್ಳಿಗಳಲ್ಲಿ ಆಗ ಹೀಗೇ ಅಲ್ಲೊಂದು ಇಲ್ಲೊಂದು ಮಾಳಿಗೆ ಮನೆಗಳಿರುತ್ತಿದ್ದವು.

ಇಂತಹದ್ದೇ ಒಂದು ಮನೆಯಲ್ಲಿ ಮಕ್ಕಳೆಲ್ಲ ಸೇರಿ   ಹುಗ್ಗಾಟ  ಆಡುತ್ತಿದ್ದರು.ಹುಗ್ಗಾಟ ಎಂದರೆ ಹುಡುಕುವ ಆಟ.ಇದರಲ್ಲಿ ಮನೆಯ ಅಂಗಳ ಒಂದು ತುದಿಯಲ್ಲಿ ಒಬ್ಬರು  ಕಣ್ಣನ್ನು ಕೈಯಲ್ಲಿ ಮುಚ್ಚಿ ಕುಳಿತಿರುತ್ತಾರೆ‌.ಉಳಿದವರೆಲ್ಲ ಓಡಿ ಹೋಗಿ ಅಡಗಿ ಕುಳಿತುಕೊಳ್ಳುತ್ತಾರೆ.ಅಡಗಿದ ನಂತರ ಇಲ್ಲಿ ಕಣ್ಣು ಮುಚ್ಚಿದವರು ಕಣ್ಣಾ ಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಇತ್ಯಾದಿ ದೊಡ್ಡದಾಗಿ ಹಾಡುತ್ತಿದ್ದರು.ಅಡಗಿದವರು ಕೂ ಹಾಕಿ ರೆಡಿ ಎಂಬುದನ್ನು ಸೂಚಿಸುತ್ತಿದ್ದರು.ಆ ಹುಡುಗಿ/ ಗ ಒಬ್ಬೊಬ್ಬರನ್ನೇ ಹುಡುಕಿ ಹಿಡಿಯಬೇಕು‌.ಸಿಕ್ಕಿದವರು ಉಳಿದವರನ್ನು ಹುಡುಕಲು ಸಹಾಯ ಮಾಡುತ್ತಾರೆ‌.ಇವರು ಆಗಾಗ ಕೂ ಹಾಕುತ್ತಾರೆ‌.ಅಡಗಿ ಕುಳಿತವರು ಕೂಡ ಹುಡುಕುವವರು ದೂರ ಹೋದಾಗ ಕೂ ಹಾಕಿ ತಮ್ಮ ಇರವನ್ನು ಸೂಚಿಸುತ್ತಾರೆ.ಮತ್ತೆ ಅವರು ಹುಡುಕುತ್ತಾರೆ‌ ಹೀಗೇ ಎಲ್ಲರನ್ನೂ ಹಿಡಿದ ನಂತರ ಶರುವಿಗೆ ಸಿಕ್ಕವನು ಈಗ ಮತ್ತೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು.ಉಳಿದವರೆಲ್ಲ ಅಡಗಿ ಕುಳಿತುಕೊಳ್ಳುತ್ತಾರೆ‌

ಹೀಗೇ ಒಂದು ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ಅಕ್ಕ ಪಕ್ಕದ ಮಕ್ಕಳು ಅ ಮನೆಯ ಏಳೆಂಟು ಮಕ್ಕಳ ಜೊತೆಗೆ ಸೇರಿ ಹುಗ್ಗಾಟ ಆಡುತ್ತಿದ್ದರು.

ಆಟದ ನಡುವೆಯೇ ಮನೆ ಮಂದಿ ತಿಂಡಿಗೋ ಊಟಕ್ಕೋ ಕರೆದರು.ತಿಂದು ಬೇರೆ ಏನೆನೋ ಆಟ ಆಡಿದರು‌ .ರಾತ್ರಿಯಾಗುತ್ತಲೇ ಎಲ್ಲರೂ ಅವರರವ ಮನೆ ಸೇರಿಕೊಂಡರು.ಆಟ ಆಡುವಾಗ  ಆ ಮನೆಯ ಐದು ವರ್ಷದ ಚಿಕ್ಕ ಹುಡುಗಿ ಕೂಡ ಇದ್ದಳು.

ರಾತ್ರಿ ಹೊತ್ತು ಊಟದ ವೇಳೆಯಲ್ಲಿ ಈ ಹುಡುಗಿ ಇಲ್ಲದ್ದು ಮನೆಯವರ ಗಮನಕ್ಕೆ ಬಂತು.ಅಕ್ಕ ಪಕ್ಕದ ಸ್ನೆಹಿತರ ಮನೆಗೆ ಹೋಗಿರಬಹುದು ಎಂದು ಮನೆ ಮಂದಿ ಅಲ್ಲೆಲ್ಲ ಹೋಗಿ ಹುಡುಕಾಡಿದರು.ಎಲ್ಲೂ ಇಲ್ಲ.ಕೆರೆ ಬಾವಿ ಎಲ್ಲ ಬಗ್ಗಿ ನೋಡಿದರು.ಎಲ್ಲಾದರೂ ಕಾಲು ಜಾರಿ ಬಿದ್ದಿರಬಹುದೋ ಏನೋ ಎಂದು.. ಎಲ್ಲೂ ಇಲ್ಲ..

ಊರ ಜನರೆಲ್ಲಾ ಸೇರಿ ಹುಡುಕಾಡಿದರೂ ಸಿಗಲಿಲ್ಲ.

ಹುಡುಗಿ ಕಾಣೆ ಆದಳು..ಆಗೆಲ್ಲ  ನಿತ್ಯ ಕರ್ಮಕ್ಕೆ ಗುಡ್ಡೆಗೆ ಇಲ್ಲವೇ ತೋಡಿಗೆ ಹೋಗುತ್ತಿದ್ದರು‌ ಹಾಗೆ ಈ ಹುಡುಗಿ ಗುಡ್ಡೆಗೆ ಹೋಗಿದ್ದು ಹುಲಿಯೋ ಕತ್ತೆ ಕಿರುಬನೋ ಹಿಡಿರಬಹುದೇ ಎಂದು ಹುಡುಕಾಡಿದರು.ಅಥವಾ ತೋಡನ ನೀರಿಗೆ ಕೊಚ್ಚಿಕೊಂಡು ಹೋದಳೇ ಎಂದು ಹುಡುಕಿದರು.ಎಲ್ಲೂ ಅವಳ ದೇಹ ಕೂಡ ಸಿಗಲಿಲ್ಲ.

ಅನೇಕ ದಿನಗಳ ಕಾಲ ಮನೆಯವರು ಹುಡುಕಾಡಿದರು..ಸಿಗಲಿಲ್ಲ ‌ನಿದಾನಕ್ಕೆ ಈ ವಿಚಾರವನ್ನು ಊರವರು ಮರೆತರು‌.ಹೆತ್ತ ತಂದೆ ತಾಯಿಗೆ ಮರೆಯಲಾದೀತೇ..ಆದರೂ ಉಳಿದ ಮಕ್ಕಳಿಗಾಗಿ ನೋವು ನುಂಗಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು.

ಇದಾಗಿ ಎಷ್ಟೋ ವರ್ಷಗಳ  ಮೂವತ್ತು ನಲುವತ್ತು ವರ್ಷಗಳ  ನಂತರ   ಮೇಲಿನ ಎರಡನೇ ಮಾಳಿಗೆಯಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಹಂಡೆಗಳನ್ನು ಬಟ್ಟೆ ತುಂಬಿಸಿ ಇಡುವ ಸಲುವಾಗಿ ತೊಳೆದು ಇಡಬೇಕೆಂದು ಕೆಳಗೆ ತಂದರು

ಅಲ್ಲಿದ್ದ ನಾಲ್ಕೈದು ಹಂಡೆಗಳು ತೆರೆದೇ ಇದ್ದವು‌.ಒಂದರ ಮುಚ್ಚಳ ಗಟ್ಟಿಯಾಗಿ ಹಾಕಿತ್ತಂತೆ.ಮುಚ್ಚಳ ತೆಗೆಯಲು ಆಗದಷ್ಟು ಗಟ್ಟಿ ಇತ್ತಂತೆ‌‌ ಕೆಳಗೆ ತಂದು ನೋಡುವಾ ಎಂದು ಮುಚ್ಚಳ ಸಹಿತವಾಗಿ ಆ ಹಂಡೆಯನ್ನು ಹೊತ್ತು ಕೆಳಗೆ ತಂದರಂತೆ.ಏನು ಮಾಡಿದರೂ ಅದರ ಮುಚ್ಚಳ ತೆರೆಯಲು ಆಗಲಿಲ್ಲ

ಈ ಹಂಡೆಯನ್ನು ತರುವಾಗ ಅದರೊಳಗೆ ಏನೋ ಇದ್ದ ಹಾಗೆ ಅನಿಸಿತ್ತು‌.ಹಾಗಾಗಿ ಕುತೂಹಲದಿಂದ ಆ ಮುಚ್ಚಳವನ್ನು ಒಡೆದು ತೆಗೆದರಂತೆ..

ಏನು ಹೇಳುದು ? ಅದರೊಳಗೆ ಒಂದು ಮನುಷ್ಯನ ಕುಳಿತ ಭಂಗಿಯ  ಅಸ್ತಿಪಂಜರ ಇತ್ತಂತೆ.ಅದು ಆ ಕಾಣೆಯಾದ ಹುಡುಗಿಯದಾಗಿತ್ತು..

ಹುಗ್ಗಾಟ ಆಡುವಾಗ ಈ ಹುಡುಗಿ ಹಂಡೆಯ ಒಳಗೆ ಕುಳಿತುಕೊಂಡು ಮುಚ್ಚಳ ಹಾಕಿಕೊಂಡಿರಬಹುದು ಅಥವಾ ಇವಳನ್ನು ಬೇರೆ ಮಕ್ಕಳು ಒಳಗೆ ಕುಳಿತುಕೊಳ್ಳಿಸಿ ಹೊರಗಿನಿಂದ ಮುಚ್ಚಳ ಹಾಕಿದ್ದು ಮರೆತಿರಬಹುದು..

ಏನಾಯಿತು.. ದೇವರೊಬ್ಬನೇ ಬಲ್ಲ..ಆ ಹುಡಿಗಿ ಕುಳಿತಿದ್ದ ಹಂಡೆಯ ಮುಚ್ಚಳ ಬಹಳ ಗಟ್ಟಿಯಾಗಿ ಕುಳಿತಿದ್ದು ಹುಡುಗಿ ಕೂ ಹಾಕಿದ್ದು ಯಾರಿಗೂ ಕೇಳಿಸಿರಲಾರದು.ಅ ಅದರೊಳಗೆ ಗಾಳಿ ಸಾಲದೆ ಕೂಡಲೇ ಸತ್ತಿರಲೂ ಸಾಕು.

ಎರಡನೇ ಮಾಳಿಯಲ್ಲಿ ಹಳೆಯ ಸಾಮಾನುಗಳ ಜೊತೆ ಇದ್ದ ಕಾರಣ ಇವಳಲ್ಲಿ ಅವಿತಿರಬಹುದು ಎಂಬ ಊಹೆ ಯಾರಿಗೂ ಬಂದಿರಲಾರದು.ಅಥವಾ ಹೀಗೊಂದು ಆಗಬಹುದು ಎಂದು ಯಾರೂ ಊಹೆ ಮಾಡಿರಲಾರರು.

ಒಟ್ಟಿನಲ್ಲಿ ಆ ಹುಡುಗಿ ಸತ್ತದ್ದು ನಿಜವಂತೆ.

ಎರಡನೆಯ ಮಾಳಿಗರಯಲ್ಲಿ ಇದ್ದ ಕಾರಣ ,ಅಲ್ಲಿಗೆ ಯಾರೂ ಹೋಗದಿರುವ ಕಾರಣ ಹೆಣ ಕೊಳೆತಾಗಲೂ ಗಮನಕ್ಕೆ ಬರಲಿಲ್ಲವೆನೋ ಅಥವಾ ಹಳ್ಳಿ ಮನೆಗಳಲ್ಲಿ ಕೆಲವೊಮ್ಮೆ ಹೆಗ್ಗಣ ,ಹಾವುಗಳು ಕೊಳೆತು ವಾಸನೆ ಬರುತ್ತಿದ್ದುದು ಸಾಮಾನ್ಯ ವಿಚಾರ ‌ಹಾಗೆಯೇ ಎಂದು ಭಾವಿಸಿರಬಹುದೋ ಏನೋ..

ಇದು ನಮ್ಮ ಅಜ್ಜನ ಪಿಜ್ಜನ ( ಅಜ್ಜನ ಅಜ್ಜನ ತಂದೆ)ಕಾಲದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಎಂದು ಪೆಲತ್ತಡ್ಕದ  ಅಜ್ಜಿ ನಮಗೆ ಹೇಳಿದ್ದರು‌

ಈ ನಿಜ ಘಟನೆ ಎಲ್ಲೋ ನಡೆದದ್ದು ನಮ್ಮ ಅಜ್ಜಿಗೂ ಗೊತ್ತಿದ್ದಿರಬೇಕು‌ ಅದಕ್ಕಾಗಿ ನಮ್ಮನ್ನು ಎರಡನೇ ಮಾಳಿಗೆಗೆ ಹತ್ತಲು ಬಿಡುತ್ತಿರಲಿಲ್ಲ.ಹಂಡೆಯನ್ನೆಲ್ಲ ಕವುಚಿ ಹಾಕಿದ್ದರು.

ನಮ್ಮ ಪೆಲತ್ತಡ್ಕದ ಅಜ್ಜಿ ಈ ಕಥೆ ಹೇಳಿದ ಮೇಲೆ  .ಮತ್ತು ಈ ಆಟದಲ್ಲಿ ನಾವು ಆಸಕ್ತಿ ಕಳೆದುಕೊಂಡಿದ್ದೆವು.ಯಾವಾಗಾದರೊಮ್ಮೆ ಆಡುವಾಗ 

 ಸಣ್ಣ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಿದ್ದೆವು‌.

ಪಾಪ ಹಂಡೆಯೊಳಗೆ ಸತ್ತ ಆ ಹುಡುಗಿ ಎಷ್ಟು ಭಯ ಪಟ್ಟಿದ್ದಳೋ,ಬೊಬ್ಬೆ ಹಾಕಿದ್ದಳೋ ಹಸಿವು ಬಾಯಾರಿಕೆಯಿಂದ ನರಳಿದಳೋ,ಗಾಳಿ ಸಾಲದೆ ಒದ್ದಾಡಿದಳೋ..ಅಜ್ಜಿ ಈ ನಿಜವದ  ಕಥೆ ಹೇಳಿದಾಗ ಅಂದು ನಾವೆಲ್ಲ ದುಃಖಿಸಿ ದುಃಖಿಸಿ ಅತ್ತಿದ್ದೆವು.ನಮ್ಮ ಜೊತೆಗೆ ಅಜ್ಜಿ ಕೂಡ ಕಣ್ಣೀರು ಹಾಕಿದ್ದರು‌. ನೆನೆದರೆ ಈಗಲೂ ಕಣ್ಣು ಹನಿಗೂಡುತ್ತದೆ‌.

ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು .ಇತ್ತೀಚೆಗೆ ಮಾಳಿಗೆಯಿಂದ ಮಗುವೊಂದು ಬಿದ್ದು ಸಾವನ್ನಪ್ಪಿದ ವಿಚಾರ ಓದಿದ್ದೆ‌‌..ನಾನು ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗ ಐದನೆಯ ತರಗತಿಯ ಮಗುವೊಂದು ಐದು ಫ್ಲೋರ್ ನ ಫ್ಲಾಟ್ ನಿಂದ ಆಡುತ್ತಾ ಅಡುತ್ತಾ ಬಿದ್ದ ಚೆಂಡನ್ನು ತೆಗೆಯಲು ನೆರಳಿಗಾಗಿ ಹಾಸಿದ್ದ ಶೀಟ್ ಮೇಲೆ ಕಾಲಿಟ್ಟು ಬಿದ್ದು ಸಾವನ್ನಪ್ಪಿದ ದುರಂತ ನಡೆದಿತ್ತು.ನೀರಿನ ಸಂಪಿಗೆ ಬೀಳುದು,ಆಡಲು ಹೋಗಿ ಕೆರೆ ನದಿಯಲ್ಲಿ ಮುಳಗುವ ವಿಚಾರಗಳನ್ನು ಕೇಳುತ್ತಲೇ ಇರ್ತೇವೆ‌.ಅದಕ್ಕಾಗಿ ನಾವು ಸದಾ ಜಾಗ್ರತೆಯಿಂದ ಇರಬೇಕು.

https://shikshanaloka.blogspot.com/2020/11/blog-post_7.html?m=1

ಚಿತ್ರ : ಇಂಟರ್ನೆಟ್ ನಿಂದ

Saturday 7 November 2020

ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ

 

ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ 

ಮನೆ ಹಿಂದಿನ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ನಾಲ್ಕೈದು ಮಕ್ಕಳು ಐ ಸ್ಪೈಸ್ ? ಆಟ ಅಡುದನ್ನು ನೋಡಿದೆ‌ನಾವೂ ಹುಗ್ಗಾಟ ಆಡುತ್ತಿದ್ದ, ನಂತರ ನಿಜವಾಗಿ ನಡೆದ  ಕಥೆಯೊಂದನ್ನು  ಕೇಳಿ ಆಸಕ್ತಿ ಕಳೆದುಕೊಂಡ ವಿಚಾರ ನೆನಪಾಯಿತು‌


ನಾನು ಅಜ್ಜನ ಮನೆಯಲ್ಲಿ ಬೆಳೆದವಳು.

ನಮ್ಮ ಅಜ್ಜನ ಮನೆ ಕಾಸರಗೋಡಿನ ಮೀಯಪದವು ಸಮೀದ ಹೊಸಮನೆ.ಸುಮಾರು ಇನ್ನೂರು ವರ್ಷಗಳ ಹಳೆಯ ಮನೆ ಇದು.ಆಗಿನ ಕಾಲಕ್ಕೆ ಎರಡು ಅಂತಸ್ತಿನ ಉಪ್ಪರಿಗೆ ಮನೆ( ಎರಡು ಮಾಳಿಗೆಯ ಮನೆ) ಇದರಲ್ಲಿ ಮೇಲಿನ ಮಾಡಿನಲ್ಲಿ( ಮಾಳಿಗೆ ಯಲ್ಲಿ) ಒಂದು ದೋಣಿಯಾಕಾರದ ಮರದ ದೊಡ್ಡ ವಸ್ತು ಇತ್ತು‌ ಬಹುಶ ಃ ಹಳೆಯ ದೋಣಿ ಇರಬಹುದೋ ಏನೋ. ಅದರಲ್ಲಿ ಏನೇನೋ ಪುಸ್ತಕಗಳು ಇದ್ದವು.ಕೆಲವು ತಾಳೆ ಗರಿ ಗ್ರಂಥಗಳು ಕೂಡ ಇದ್ದವೆಂದು ಅನಿಸುತ್ತದೆ. ಆಗ ಅದರ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಈಗ ಇವು ಒರಳೆ ಹಿಡಿದು ಹಾಳಾಗಿದೆಯೋ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.

ನಾವು ಹುಗ್ಗಾಟ ಆಡಲು ಇಲ್ಲಿ ಅಡಗಿ ಕುಳಿತುಕೊಳ್ಳುತ್ತಾ ಇದ್ದೆವು.ಈ ಮಾಳಿಗೆಯಲ್ಲಿ ದೊಡ್ಡ ದೊಡ್ಡ  ಮಣ್ಣಿನ ಹಂಡೆಗಳಿದ್ದವು.

ಈ ಹಂಡೆಗಳಲ್ಲಿ ನಾವು ಅಡಗಿ ಕುಳಿತುಕೊಳ್ಳುತ್ತಿದ್ದೆವು..

ಇದನ್ನು ಗಮನಿಸಿದ ಅಜ್ಜಿ ನಮಗೆ ಜೋರು ಮಾಡಿ ಹಂಡೆಗಳನ್ನೆಲ್ಲ ಕವುಚಿ ಹಾಕಿದ್ದರು ನಮ್ಮನ್ನು ಎರಡನೆಯ ಮಾಳುಗೆಗೆ ಹೋಗದ ಹಾಗೆ ಜೋರು ಮಾಡಿದ್ದರು‌

.ಬಹುಶಃ ನಾವು ಒಡೆದು ಹಾಕಬಹುದು ಎಂದು ಹೀಗೆ ಮಾಡಿರಬಹುದು ಎಂದು ನಾವು ಊಹಿಸಿದ್ದೆವು.


ಆದರೆ ಅದಕ್ಕೆ ಬೇರೆಯೇ ಒಂದು ದೊಡ್ಡ ದುಃಖದ ದುರಂತದ ಕಾರಣವಿತ್ತು‌.ಅದರ ಹಿಂದೆ ಒಂದು ದುರಂತದ ಕಥೆ ಇತ್ತು 

ಇದನ್ನು ಒಮ್ಮೆ ನಮ್ಮ ಅಜ್ಜನ ತಂಗಿ ಪೆಲತ್ತಡ್ಕದ ಅಜ್ಜಿ ಒಮ್ಮೆ ಹೇಳಿದ್ದರು.

ನಮ್ಮ ಹಳ್ಳಿಗಳಲ್ಲಿ ಆಗ ಹೀಗೇ ಅಲ್ಲೊಂದು ಇಲ್ಲೊಂದು ಮಾಳಿಗೆ ಮನೆಗಳಿರುತ್ತಿದ್ದವು.

ಇಂತಹದ್ದೇ ಒಂದು ಮನೆಯಲ್ಲಿ ಮಕ್ಕಳೆಲ್ಲ ಸೇರಿ   ಹುಗ್ಗಾಟ  ಆಡುತ್ತಿದ್ದರು.ಹುಗ್ಗಾಟ ಎಂದರೆ ಹುಡುಕುವ ಆಟ.ಇದರಲ್ಲಿ ಮನೆಯ ಅಂಗಳ ಒಂದು ತುದಿಯಲ್ಲಿ ಒಬ್ಬರು  ಕಣ್ಣನ್ನು ಕೈಯಲ್ಲಿ ಮುಚ್ಚಿ ಕುಳಿತಿರುತ್ತಾರೆ‌.ಉಳಿದವರೆಲ್ಲ ಓಡಿ ಹೋಗಿ ಅಡಗಿ ಕುಳಿತುಕೊಳ್ಳುತ್ತಾರೆ.ಅಡಗಿದ ನಂತರ ಇಲ್ಲಿ ಕಣ್ಣು ಮುಚ್ಚಿದವರು ಕಣ್ಣಾ ಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಇತ್ಯಾದಿ ದೊಡ್ಡದಾಗಿ ಹಾಡುತ್ತಿದ್ದರು.ಅಡಗಿದವರು ಕೂ ಹಾಕಿ ರೆಡಿ ಎಂಬುದನ್ನು ಸೂಚಿಸುತ್ತಿದ್ದರು.ಆ ಹುಡುಗಿ/ ಗ ಒಬ್ಬೊಬ್ಬರನ್ನೇ ಹುಡುಕಿ ಹಿಡಿಯಬೇಕು‌.ಸಿಕ್ಕಿದವರು ಉಳಿದವರನ್ನು ಹುಡುಕಲು ಸಹಾಯ ಮಾಡುತ್ತಾರೆ‌.ಇವರು ಆಗಾಗ ಕೂ ಹಾಕುತ್ತಾರೆ‌.ಅಡಗಿ ಕುಳಿತವರು ಕೂಡ ಹುಡುಕುವವರು ದೂರ ಹೋದಾಗ ಕೂ ಹಾಕಿ ತಮ್ಮ ಇರವನ್ನು ಸೂಚಿಸುತ್ತಾರೆ.ಮತ್ತೆ ಅವರು ಹುಡುಕುತ್ತಾರೆ‌ ಹೀಗೇ ಎಲ್ಲರನ್ನೂ ಹಿಡಿದ ನಂತರ ಶರುವಿಗೆ ಸಿಕ್ಕವನು ಈಗ ಮತ್ತೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು.ಉಳಿದವರೆಲ್ಲ ಅಡಗಿ ಕುಳಿತುಕೊಳ್ಳುತ್ತಾರೆ‌

ಹೀಗೇ ಒಂದು ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ಅಕ್ಕ ಪಕ್ಕದ ಮಕ್ಕಳು ಅ ಮನೆಯ ಏಳೆಂಟು ಮಕ್ಕಳ ಜೊತೆಗೆ ಸೇರಿ ಹುಗ್ಗಾಟ ಆಡುತ್ತಿದ್ದರು.

ಆಟದ ನಡುವೆಯೇ ಮನೆ ಮಂದಿ ತಿಂಡಿಗೋ ಊಟಕ್ಕೋ ಕರೆದರು.ತಿಂದು ಬೇರೆ ಏನೆನೋ ಆಟ ಆಡಿದರು‌ .ರಾತ್ರಿಯಾಗುತ್ತಲೇ ಎಲ್ಲರೂ ಅವರರವ ಮನೆ ಸೇರಿಕೊಂಡರು.ಆಟ ಆಡುವಾಗ  ಆ ಮನೆಯ ಐದು ವರ್ಷದ ಚಿಕ್ಕ ಹುಡುಗಿ ಕೂಡ ಇದ್ದಳು.

ರಾತ್ರಿ ಹೊತ್ತು ಊಟದ ವೇಳೆಯಲ್ಲಿ ಈ ಹುಡುಗಿ ಇಲ್ಲದ್ದು ಮನೆಯವರ ಗಮನಕ್ಕೆ ಬಂತು.ಅಕ್ಕ ಪಕ್ಕದ ಸ್ನೆಹಿತರ ಮನೆಗೆ ಹೋಗಿರಬಹುದು ಎಂದು ಮನೆ ಮಂದಿ ಅಲ್ಲೆಲ್ಲ ಹೋಗಿ ಹುಡುಕಾಡಿದರು.ಎಲ್ಲೂ ಇಲ್ಲ.ಕೆರೆ ಬಾವಿ ಎಲ್ಲ ಬಗ್ಗಿ ನೋಡಿದರು.ಎಲ್ಲಾದರೂ ಕಾಲು ಜಾರಿ ಬಿದ್ದಿರಬಹುದೋ ಏನೋ ಎಂದು.. ಎಲ್ಲೂ ಇಲ್ಲ..

ಊರ ಜನರೆಲ್ಲಾ ಸೇರಿ ಹುಡುಕಾಡಿದರೂ ಸಿಗಲಿಲ್ಲ.

ಹುಡುಗಿ ಕಾಣೆ ಆದಳು..ಆಗೆಲ್ಲ  ನಿತ್ಯ ಕರ್ಮಕ್ಕೆ ಗುಡ್ಡೆಗೆ ಇಲ್ಲವೇ ತೋಡಿಗೆ ಹೋಗುತ್ತಿದ್ದರು‌ ಹಾಗೆ ಈ ಹುಡುಗಿ ಗುಡ್ಡೆಗೆ ಹೋಗಿದ್ದು ಹುಲಿಯೋ ಕತ್ತೆ ಕಿರುಬನೋ ಹಿಡಿರಬಹುದೇ ಎಂದು ಹುಡುಕಾಡಿದರು.ಅಥವಾ ತೋಡನ ನೀರಿಗೆ ಕೊಚ್ಚಿಕೊಂಡು ಹೋದಳೇ ಎಂದು ಹುಡುಕಿದರು.ಎಲ್ಲೂ ಅವಳ ದೇಹ ಕೂಡ ಸಿಗಲಿಲ್ಲ.

ಅನೇಕ ದಿನಗಳ ಕಾಲ ಮನೆಯವರು ಹುಡುಕಾಡಿದರು..ಸಿಗಲಿಲ್ಲ ‌ನಿದಾನಕ್ಕೆ ಈ ವಿಚಾರವನ್ನು ಊರವರು ಮರೆತರು‌.ಹೆತ್ತ ತಂದೆ ತಾಯಿಗೆ ಮರೆಯಲಾದೀತೇ..ಆದರೂ ಉಳಿದ ಮಕ್ಕಳಿಗಾಗಿ ನೋವು ನುಂಗಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು.

ಇದಾಗಿ ಎಷ್ಟೋ ವರ್ಷಗಳ  ಮೂವತ್ತು ನಲುವತ್ತು ವರ್ಷಗಳ  ನಂತರ   ಮೇಲಿನ ಎರಡನೇ ಮಾಳಿಗೆಯಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಹಂಡೆಗಳನ್ನು ಬಟ್ಟೆ ತುಂಬಿಸಿ ಇಡುವ ಸಲುವಾಗಿ ತೊಳೆದು ಇಡಬೇಕೆಂದು ಕೆಳಗೆ ತಂದರು

ಅಲ್ಲಿದ್ದ ನಾಲ್ಕೈದು ಹಂಡೆಗಳು ತೆರೆದೇ ಇದ್ದವು‌.ಒಂದರ ಮುಚ್ಚಳ ಗಟ್ಟಿಯಾಗಿ ಹಾಕಿತ್ತಂತೆ.ಮುಚ್ಚಳ ತೆಗೆಯಲು ಆಗದಷ್ಟು ಗಟ್ಟಿ ಇತ್ತಂತೆ‌‌ ಕೆಳಗೆ ತಂದು ನೋಡುವಾ ಎಂದು ಮುಚ್ಚಳ ಸಹಿತವಾಗಿ ಆ ಹಂಡೆಯನ್ನು ಹೊತ್ತು ಕೆಳಗೆ ತಂದರಂತೆ.ಏನು ಮಾಡಿದರೂ ಅದರ ಮುಚ್ಚಳ ತೆರೆಯಲು ಆಗಲಿಲ್ಲ

ಈ ಹಂಡೆಯನ್ನು ತರುವಾಗ ಅದರೊಳಗೆ ಏನೋ ಇದ್ದ ಹಾಗೆ ಅನಿಸಿತ್ತು‌.ಹಾಗಾಗಿ ಕುತೂಹಲದಿಂದ ಆ ಮುಚ್ಚಳವನ್ನು ಒಡೆದು ತೆಗೆದರಂತೆ..

ಏನು ಹೇಳುದು ? ಅದರೊಳಗೆ ಒಂದು ಮನುಷ್ಯನ ಅಸ್ತಿಪಂಜರ ಇತ್ತಂತೆ.ಅದು ಆ ಕಾಣೆಯಾದ ಹುಡುಗಿಯದಾಗಿತ್ತು..

ಹುಗ್ಗಾಟ ಆಡುವಾಗ ಈ ಹುಡುಗಿ ಹಂಡೆಯ ಒಳಗೆ ಕುಳಿತುಕೊಂಡು ಮುಚ್ಚಳ ಹಾಕಿಕೊಂಡಿರಬಹುದು ಅಥವಾ ಇವಳನ್ನು ಬೇರೆ ಮಕ್ಕಳು ಒಳಗೆ ಕುಳಿತುಕೊಳ್ಳಿಸಿ ಹೊರಗಿನಿಂದ ಮುಚ್ಚಳ ಹಾಕಿದ್ದು ಮರೆತಿರಬಹುದು..

ಏನಾಯಿತು.. ದೇವರೊಬ್ಬನೇ ಬಲ್ಲ..ಆ ಹುಡಿಗಿ ಕುಳಿತಿದ್ದ ಹಂಡೆಯ ಮುಚ್ಚಳ ಬಹಳ ಗಟ್ಟಿಯಾಗಿ ಕುಳಿತಿದ್ದು ಹುಡುಗಿ ಕೂ ಹಾಕಿದ್ದು ಯಾರಿಗೂ ಕೇಳಿಸಿರಲಾರದು.ಅ ಅದರೊಳಗೆ ಗಾಳಿ ಸಾಲದೆ ಕೂಡಲೇ ಸತ್ತಿರಲೂ ಸಾಕು.

ಎರಡನೇ ಮಾಳಿಯಲ್ಲಿ ಹಳೆಯ ಸಾಮಾನುಗಳ ಜೊತೆ ಇದ್ದ ಕಾರಣ ಇವಳಲ್ಲಿ ಅವಿತಿರಬಹುದು ಎಂಬ ಊಹೆ ಯಾರಿಗೂ ಬಂದಿರಲಾರದು.ಅಥವಾ ಹೀಗೊಂದು ಆಗಬಹುದು ಎಂದು ಯಾರೂ ಊಹೆ ಮಾಡಿರಲಾರರು.

ಒಟ್ಟಿನಲ್ಲಿ ಆ ಹುಡುಗಿ ಸತ್ತದ್ದು ನಿಜವಂತೆ.

ಎರಡನೆಯ ಮಾಳಿಗೆಯಲ್ಲಿ ಇದ್ದ ಕಾರಣ ,ಅಲ್ಲಿಗೆ ಯಾರೂ ಹೋಗದಿರುವ ಕಾರಣ ಹೆಣ ಕೊಳೆತಾಗಲೂ ಗಮನಕ್ಕೆ ಬರಲಿಲ್ಲವೆನೋ ಅಥವಾ ಹಳ್ಳಿ ಮನೆಗಳಲ್ಲಿ ಕೆಲವೊಮ್ಮೆ ಹೆಗ್ಗಣ ,ಹಾವುಗಳು ಕೊಳೆತು ವಾಸನೆ ಬರುತ್ತಿದ್ದುದು ಸಾಮಾನ್ಯ ವಿಚಾರ ‌ಹಾಗೆಯೇ ಎಂದು ಭಾವಿಸಿರಬಹುದೋ ಏನೋ..

ಇದು ನಮ್ಮ ಅಜ್ಜನ ಪಿಜ್ಜನ ಕಾಲದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಎಂದು ಪೆಲತ್ತಡ್ಕದ  ಅಜ್ಜಿ ನಮಗೆ ಹೇಳಿದ್ದರು‌

ಈ ನಿಜ ಘಟನೆ ಎಲ್ಲೋ ನಡೆದದ್ದು ನಮ್ಮ ಅಜ್ಜಿಗೂ ಗೊತ್ತಿದ್ದಿರಬೇಕು‌ ಅದಕ್ಕಾಗಿ ನಮ್ಮನ್ನು ಎರಡನೇ ಮಾಳಿಗೆಗೆ ಹತ್ತಲು ಬಿಡುತ್ತಿರಲಿಲ್ಲ.ಹಂಡೆಯನ್ನೆಲ್ಲ ಕವುಚಿ ಹಾಕಿದ್ದರು.

ನಮ್ಮ ಪೆಲತ್ತಡ್ಕದ ಅಜ್ಜಿ ಈ ಕಥೆ ಹೇಳಿದ ಮೇಲೆ  ಈ ಆಟದಲ್ಲಿ ನಾವು ಆಸಕ್ತಿ ಕಳೆದುಕೊಂಡಿದ್ದೆವು.ಯಾವಾಗಾದರೊಮ್ಮೆ ಆಡುವಾಗ 

 ಸಣ್ಣ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಿದ್ದೆವು‌.


ಪಾಪ ಹಂಡೆಯೊಳಗೆ ಸತ್ತ ಆ ಹುಡುಗಿ ಎಷ್ಟು ಭಯ ಪಟ್ಟಿದ್ದಳೋ,ಬೊಬ್ಬೆ ಹಾಕಿದ್ದಳೋ ಹಸಿವು ಬಾಯಾರಿಕೆಯಿಂದ ನರಳಿದಳೋ,ಗಾಳಿ ಸಾಲದೆ ಒದ್ದಾಡಿದಳೋ..ಅಜ್ಜಿ ಈ ನಿಜವಾದ  ಕಥೆ ಹೇಳಿದಾಗ ಅಂದು ನಾವೆಲ್ಲ ದುಃಖಿಸಿ ದುಃಖಿಸಿ ಅತ್ತಿದ್ದೆವು.ನಮ್ಮ ಜೊತೆಗೆ ಅಜ್ಜಿ ಕೂಡ ಕಣ್ಣೀರು ಹಾಕಿದ್ದರು‌. ನೆನೆದರೆ ಈಗಲೂ ಕಣ್ಣು ಹನಿಗೂಡುತ್ತದೆ‌.

ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು .ಇತ್ತೀಚೆಗೆ ಮಾಳಿಗೆಯಿಂದ ಮಗುವೊಂದು ಬಿದ್ದು ಸಾವನ್ನಪ್ಪಿದ ವಿಚಾರ ಓದಿದ್ದೆ‌‌..ನಾನು ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗ ಐದನೆಯ ತರಗತಿಯ ಮಗುವೊಂದು ಐದು ಫ್ಲೋರ್ ನ ಫ್ಲಾಟ್ ನಿಂದ ಆಡುತ್ತಾ ಅಡುತ್ತಾ ಬಿದ್ದ ಚೆಂಡನ್ನು ತೆಗೆಯಲು ನೆರಳಿಗಾಗಿ ಹಾಸಿದ್ದ ಶೀಟ್ ಮೇಲೆ ಕಾಲಿಟ್ಟು ಬಿದ್ದು ಸಾವನ್ನಪ್ಪಿದ ದುರಂತ ನಡೆದಿತ್ತು.ನೀರಿನ ಸಂಪಿಗೆ ಬೀಳುದು,ಆಡಲು ಹೋಗಿ ಕೆರೆ ನದಿಯಲ್ಲಿ ಮುಳಗುವ ವಿಚಾರಗಳನ್ನು ಕೇಳುತ್ತಲೇ ಇರ್ತೇವೆ‌.ಅದಕ್ಕಾಗಿ ನಾವು ಸದಾ ಜಾಗ್ರತೆಯಿಂದ ಇರಬೇಕು.

ಡಾ.ಲಕ್ಷ್ಮೀ ಜಿ ಪ್ರಸಾದ 

Thursday 5 November 2020

ಕೆರೆಕೋಡಿಯ ಸುರಂಗದ ನೀರು ಮತ್ತು ಅಣ್ಣ ತಂದು ಕೊಡುತ್ತಿದ್ದ ಚಾಕೊಲೇಟ್ ನ ಸವಿ

 ಕೆರೆಕೋಡಿಯ ಸುರಂಗದ ನೀರು ಮತ್ತು ಅಣ್ಣ ತಂದು  ಕೊಡುತ್ತಿದ್ದ ಚಾಕೊಲೇಟ್ ನ ಸವಿ 


ನಾನು ಹೆಚ್ಚು ಅಜ್ಜನ ಮನೆಯಲ್ಲಿ ಬೆಳೆದವಳು.ನನ್ನ ಅಜ್ಜ ಹೊಸಮನೆ  ಈಶ್ವರ ಭಟ್ಟರಿಗೆ ನನ್ನ ಅಮ್ಮ ಮತ್ತು ದೊಡ್ಡಮ್ಮ ಇಬ್ಬರೇ ಮಕ್ಕಳು.

ದೊಡ್ಡಮ್ಮನ ಮಗಳು  ಅಕ್ಕ ಪಾರ್ವತಿ ,ಅಣ್ಣ ರಾಧಾ ಕೃಷ್ಣ ಭಟ್,ದೊಡ್ಡಮ್ಮನ ಎರಡನೇ ಮಗಳು ಜಯಲಕ್ಷ್ಮಿ ( ಶಶಿ) ,ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು  ಅಜ್ಜನ ಮನೆಯಿಂದ ಶಾಲೆಗೆ ಹೋಗುತ್ತಿದ್ದೆವು.

ನಮ್ಮ ಅಜ್ಜನ‌ ಮನೆಯಲ್ಲಿ ಎಮ್ಮೆ ,ದನಗಳನ್ನು ಸಾಕುತ್ತಿದ್ದರು.ಸಾಕಷ್ಟು ಹಾಲು ಸಿಗುತ್ತಿತ್ತು .ಮನೆವಾರ್ತೆಗೆ ಮಿಕ್ಕಿದ್ದನ್ನು ಮುಂದಿಲದವರ ಹೋಟೆಲ್ ಗೆ ಮಾರಾಟ ಮಾಡುತ್ತಿದ್ದರು.

ಬೆಳಗ್ಗೆ ಶಾಲೆಗೆ ಹೋಗುವಾಗ ಹಾಲು ತಗೊಂಡು ಅಣ್ಣ ಹೋಟೆಲ್ ಗೆ ಕೊಡುತ್ತಿದ್ದ.ನಮಗೆ ಶಾಲೆಗೆ ಹೋಗಲು ಎರಡು ದಾರಿ ಇತ್ತು.ಒಂದು ಗುಡ್ಡದಲ್ಲಿ ಹೋಗಿ ಕೆರೆಕೋಡಿ ಮಾಸ್ಟ್ರ ಗುಡ್ಡೆಯ ದಾರಿಯಲ್ಲಿ ಸಾಗಿ ಮೀಯಪದವು ತಲುಪುದು.ಇನ್ನೊಂದು ಶೇಡಿ ಗುಡ್ಡೆ ಹತ್ತಿ ಮೀಯಪದವು ತಲುಪುದು

ನಾವು ಬೆಳಗ್ಗೆ ಹೋಗುವಾಗ ಕೆರೆ ಕೋಡಿ ಗುಡ್ಡೆಯ ದಾರಿ ಆಯ್ಕೆ ಮಾಡುತ್ತಿದ್ದೆವು.ಈ ಕೆರೆಕೋಡಿ ಮಾಸ್ಟ್ರ ಜಾಗದಲ್ಲಿ ಇರುವ ಗುಡ್ಡೆಯಲ್ಲಿ ಒಂದು ಸುರಂಗ ಇತ್ತು.ಈಗಲೂ ಇರಬಹುದೋ ಏನೋ.

ಅದರಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ಕೂಡ ಸ್ವಚ್ಛವಾದ ನೀರು ಬರುತ್ತಿತ್ತು.ಅದನ್ನು ಒಂದು ಗುಂಡಿಗೆ ಬಂದು ಬೀಳುವಂತೆ ಮಾಡಿದ್ದರು.ಅಲ್ಲಿಂದ ಪೈಪಿನ ಮೂಲಕ ಅವರ ಮನೆಗೆ ನೀರು ಹೋಗುತ್ತಾ ಇತ್ತು.

ಈ ನೀರು ಬಹಳ ರುಚಿ.ನೋಡಿದ ತಕ್ಷಣವೇ ಕುಡಿಯಬೇಕು ಎನಿಸುವಷ್ಟು ಸ್ವಚ್ಛ.

ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ಇಲ್ಲಿ ಬರುತ್ತಿದ್ದೆವು.ನೀರು ಕುಡಿಯಲು ಅಲ್ಲ.ಅದಕ್ಕೆ ಬೇರೆಯೇ ಕಾರಣ ಇದೆ.ಈಗ ನೆನಪಾಗಿ  ನಗು ಬರುತ್ತದೆ.

ನಮ್ಮ ಅಜ್ಜಿ ಬಹಳ ಪ್ರಾಮಾಣಿಕ ಮಹಿಳೆ.ಹಾಗಾಗಿ ಹೋಟೆಲಿಗೆ ಕೊಡುವ ಹಾಲಿನ ಒಂದು ತೊಟ್ಟು ಕೂಡ ನೀರು ಸೇರಿಸುತ್ತಿರಲಿಲ್ಲ..

ನಾವು ಮಕ್ಕಳು ಮಾತ್ರ ಚಾಕೊಲೇಟ್ ನ ಆಸೆಗೆ  ದ್ರೋಹ ಮಾಡುತ್ತಿದ್ದೆವು.ದಾರಿಯಲ್ಲಿ ಸಿಗುವ ಈ ಸುರಂಗದ ನೀರನ್ನು ತೆಗೆದು ಅಜ್ಜಿ ಅಳೆದು ಕೊಟ್ಟ ಹಾಲಿನ ಪಾತ್ರೆಗೆ ಒಂದು ಕುಡ್ತೆಯಷ್ಟು ಹಾಕುತ್ತಿದ್ದೆವು.

ಅಜ್ಜಿ ಹಾಲು ತುಂಬಿಸಿ ಕೊಡುವ ಅಲ್ಯೂಮಿನಿಯಂ ಬುತ್ತಿ ಪಾತ್ರದ ಮುಚ್ಚಳದಲ್ಲಿ‌ ಎಂಟು ಸಲ ನೀರು ತುಂಬಿ ಹಾಕಿದರೆ ಒಂದು ಕುಡ್ತೆ ಆಗುತ್ತಿತ್ತು.ಇದನ್ನು ಮನೆಯಲ್ಲಿ ಅಳೆದು  ದೊಡ್ಡಮ್ಮನ ಮಗ ಅಣ್ಣ ಕಂಡುಕೊಂಡಿದ್ದ. 

ನಾವು ಹತ್ತು ಮುಚ್ಚಳ ನೀರು ಹಾಕುತ್ತಿದ್ದೆವು.ಹೋಟೆಲಿಗೆ ಹಾಲು ಕೊಡುವಾಗ ಅಜ್ಜಿ ಹೇಳಿದ ಅಳತೆಗೆ ಒಂದು ಕುಡ್ತೆ ಹೆಚ್ಚು ಸೇರಿಸಿ ಹೇಳುತ್ತಿದ್ದೆವು.ಆಗ ಹಾಲು ಕೊಟ್ಟ ತಕ್ಷಣವೇ ದುಡ್ಡು ಕೊಡುತ್ತಿದ್ದರು.ಅವರು ಅಳೆದು ನೋಡಿದರೆ ನಾವು ಹೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಹಾಲು ಇರ್ತಿತ್ತು‌.ಯಾಕೆಂದರೆ ನಾವು ಎಂಟು ಮುಚ್ಚಳದ ಬದಲು ಹತ್ತು‌ ಮುಚ್ಚಳ ನೀರು ಸೇರಿಸುತ್ತಿದ್ದೆವಲ್ಲ.

ಹೀಗೆ ಒಂದು ಕುಡ್ತೆ ಹೆಚ್ಚು ಮಾಡಿದಾಗ ನಮಗೆ ಒಂದು ಕುಡ್ತೆ ಹಾಲಿನ ದುಡ್ಡು ಹೆಚ್ಚುವರಿಯಾಗಿ ಸಿಗುತ್ತಿತ್ತು. ಈ ದುಡ್ಡಿನಲ್ಲಿ  ಅಣ್ಣ ಚಾಕೊಲೇಟ್ ಬಿಸ್ಕತ್ತು ಗಳನ್ನು ಅಂಗಡಿಯಿಂದ ಖರೀದಿಸಿ ಸಮಪಾಲು ಮಾಡಿ ಒಂದು ಪಾಲು ತಾನಿಟ್ಟುಕೊಂಡು ಉಳಿದದ್ದನ್ನು ನಮಗೆ ಹಂಚುತ್ತಿದ್ದ‌‌‌.ಹಂಚುವಾಗ ಅಣ್ಣನಲ್ಲಿ ಸ್ವಲ್ಪವೂ ಪಕ್ಷಪಾತ ಇರಲಿಲ್ಲ ‌ತನ್ನ ಸ್ವಂತ  ಅಕ್ಕ ತಂಗಿಯರಂತೆಯೇ ನನ್ನನ್ನು ಕಾಣುತ್ತಿದ್ದ.ಆಟದಲ್ಲಿ ಇರಬಹುದು ,ತಿಂಡಿಕೊಡುವಾಗ ಇರಬಹುದು.. ಅಣ್ಣನಿಗೆ ನಮ್ಮ ನಡುವೆ ಒಂದಿನಿತು ಬೇಧ ಭಾವವಿರಲಿಲ್ಲ(.ಅವರು ಅಂದು ಬಾಲಕನಿದ್ದಾಗ  ಹೇಗೆಯೋ ಇಂದು ಕೂಡ ಹಾಗೆಯೇ ಇದ್ದಾರೆ .ಅವರ ಸ್ವಂತ ಅಕ್ಕ ತಂಗಿಯರಲ್ಲಿ ಇರುವಂತಹದೇ ಪ್ರೀತಿ ಚಿಕ್ಕಮ್ಮನ ಮಕ್ಕಳಾದ ನಮ್ಮಲ್ಲಿ ಕೂಡ)

ಮನೆಯಲ್ಲಿ ಅಜ್ಜಗೆ ಅಜ್ಜನಿಗೆ ಈ ವಿಚಾರ ತಿಳಿಯದಂತೆ ನಾವು ಜಾಗ್ರತೆ ವಹಿಸಿದ್ದೆವು.ಅಜ್ಜಿ ಗಟ್ಟಿಯಾದ ಹಾಲನ್ನೇ ಕೊಡುತ್ತಿದ್ದರು.ಹದಿನೈದು ಇಪ್ಪತ್ತು ಕುಡ್ತೆ ಗಟ್ಟಿ ಹಾಲಿಗೆ ಒಂದು ಕುಡ್ತೆ ನೀರು ಸೇರಿಸಿದ್ದು ಹೋಟೆಲಿನವರ ಗಮನಕ್ಕೂ ಬರುತ್ತಿರಲಿಲ್ಲ ‌ಯಾಕೆಂದರೆ  ಎಮ್ಮೆ ಹಾಲು ತುಂಬಾ ದಪ್ಪ ಇರುತ್ತದೆ.ಒಂದು ಲೀಟರ್ ಗೆ ಒಂದು ಕುಡ್ತೆ ನೀರು ಹಾಕಿದರೂ ಕೂಡ ನೀರು ಹಾಕುದ್ದಾರೆ ಎಂದು ಗೊತ್ತಾಗದಷ್ಟು ಗಟ್ಟಿ ಹಾಲು ಅದು.ಇನ್ನೂ ನಮ್ಮ ಅಜ್ಜಿ ದಿನಕ್ಕೆ ಎರಡು ಎರಡೂವರೆ ಲೀಟರ್ ಹಾಲು ಹೋಟೆಲಿಗೆ ಮಾರುತ್ತಿದ್ದರು.ಅವರು ಒಂದು ತೊಟ್ಟು ನೀರು ಹಾಕುತ್ತಿರಲಿಲ್ಲ.ಹಾಗಾಗಿ ನಾವು ಒಂದು ಕುಡ್ತೆ ನೀರು ಸೇರಿಸುದರಿಂದ ಹಾಲು ತೆಳು ಎಂದೆನಿಸುತ್ತಿರಲಿಲ್ಲ‌.ಕೆರೆಕೋಡಿಯ ಸುರಂಗದ ಶುದ್ದ ನೀರನ್ನು ಸೇರಿಸುತ್ತಿದ್ದ ಕಾರಣ ಆರೋಗ್ಯ ಹಾಳಾಗುವ ಸಾಧ್ಯತೆಯೇ ಇರಲಿಲ್ಲ.


.ನಾನು ಅಜ್ಜನ ಮನೆಯಲ್ಲಿ ದೊಡ್ಡಮ್ಮನ ಮಕ್ಕಳ ಜೊತೆಗೆ ಬೆಳೆದ ಕಾರಣ ನನಗೂ ಅವರಲ್ಲಿ ನನ್ನ ಸ್ವಂತ ಅಣ್ಣ ಅಕ್ಕ ತಮ್ಮಂದಿರಲ್ಲಲಿ ಇರುವಷ್ಟೇ ಫ್ರೀತಿ ಸೆಳೆತ.

ಅದರಲ್ಲೂ ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು ಗಳಸ್ಯ ಕಂಠಸ್ಯ..

ಒಂದೇ ಒಂದು ಸಲ ನಮ್ಮೊಳಗೆ ಯಾವುದೇ ವಿಚಾರಕ್ಕೆ ಜಗಳವಾದದ್ದಿಲ್ಲ..ನಾವಿಬ್ಬರೂ ದೊಡ್ಡ ಕಸಂಟುಗಳು.ಜಗಳಗಂಟಿಯರು.ಆದರೆ ನಮ್ಮೊಳಗೆ ಬಹಳ ಸ್ನೇಹ‌.ಒಗ್ಗಟ್ಟು.. ನಾವು ಅಣ್ಣ ಅಕ್ಕ ತಮ್ಮ ತಂಗಿಯರ ಜೊತೆಗೆ ಜಗಳವಾಡದ ದಿನವೇ ಇಲ್ಲ..ಅಷ್ಟು ಕುಖ್ಯಾತರು.

ಎಲ್ಲೇ ಹೋಗಲಿ, ನಾವು ಇಬ್ಬರು ಜೊತೆಗೆ ಹೋಗುದು ಬರುವುದು ಮಾಡುತ್ತಿದ್ದೆವು‌.

ನಾನು ಪಿಯುಸಿ ಓದುತ್ತಿದ್ದಾಗ ಅಜ್ಜ ತೀರಿ ಹೋದರು.ನಮ್ಮ ಮನೆಗಳ ನಡುವೆ ಆಸ್ತಿ ವುವಾದ ಹುಟ್ಟಿತು.ಒಂದಷ್ಟು ಜನರು ನ್ಯಾಯವಾಗಿ ಪರಿಹರಿಸುವ ಬದಲು ಸಣ್ಣ ಬೆಂಕಿಗೆ ತುಪ್ಪ ಎರೆದು ಗಾಳಿ ಹಾಕಿ ದೊಡ್ಡದು ಮಾಡಿದರು..

ಆದರೆ ಅದು ತುಂಬಾ ಸಮಯ ನಡೆಯಲಿಲ್ಲ ನಾವು ಮತ್ತೆ ರಾಜಿಯಾದೆವು.

ಈ ನಡುವಿನ ಸಮಯದಲ್ಲಿ ನಮಗೆ ಹೋಗುದು ಬರುವ ಸಂಬಂಧ ಇರಲಿಲ್ಲ. ಅದರೆ ನಾವಿಬ್ಬರು ( ನಾನು ಮತ್ತು ರಾಜೇಶ್ವರಿ) ಎಂದಿನಂತೆ ಕಾಲೇಜಿನಲ್ಲಿ ಸಿಕ್ಕಾಗ ಪಟ್ಟಾಂಗ ಹೊಡೆಯುತ್ತಿದ್ದೆವು.

ಮನೆಗಳ ನಡುವಿನ ಆಸ್ತಿಯ ವುವಾದ ನಮ್ಮ ಮನಗಳನ್ನು ಒಡೆಯುವಷ್ಟು ಗಟ್ಟಿಯಾಗಿರಲಿಲ್ಲ.ಅಥವಾ ನಮ್ಮ ಮನಸ್ಸನ್ನು ಒಡೆಯುವುದು ಸುಲಭದ ವಿಚಾರವಾಗಿರಲಿಲ್ಲ.ಅಷ್ಟೂ ಸಾಂಗತ್ಯ ನಮ್ಮೊಳಗೆ..ಮತ್ತೆ ಬಾಲ್ಯಕ್ಕೆ ಇಳಿದು ಮಕ್ಕಳಾಗಿ ನಲಿಯಬೇಕೆನಿಸುತ್ತದೆ ನನಗೆ‌.

ಇನ್ನೂ ಅನೇಕ ಹೇಳಲು ಇದೆ.ಇನ್ನೊಂದು ದಿನ ಬರೆಯುವೆ‌

ಲಕ್ಷ್ಮೀ ಜಿ ಪ್ರಸಾದ


Friday 30 October 2020

ನನಗೂ ಆತ್ಮವಿದೆ ..ಅದಕ್ಕೂ ಒಂದು ಕಥೆ ಇದೆ - ಬಿ ಸೀರೆಯ ಹಿಂದೆಯೂ ಒಂದು ಕಥೆ ಇದೆ - ಡಾ.ಲಕ್ಷ್ಮೀ ಜಿ ಪ್ರಸಾದ್


 ಬಿಳಿ ಸೀರೆಯ ಹಿಂದೆಯೂ ಒಂದು ಕಥೆ ಇದೆ


ಅದು ನಮ್ಮ ಬದುಕಿನ ಸಂಕ್ರಮಣ. ಕಾಲ..ಆಗಷ್ಟೇ ಸಂಸ್ಕೃತ ಎಂಎ ಓದು ಮುಗಿಸಿ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಟೀಚರ್ ಆಗಿ ಸೇರಿಕೊಂಡಿದ್ದೆ‌

ಆಗ ನಮ್ಮ ಎಂಎ ರಿಸಲ್ಟ್ ಬಂತು.ನಾನು ಮೊದಲ ರ‌್ಯಾಂಕ್ ಪಡೆದಿದ್ದೆ.

ಮತ್ತೆ ಸ್ವಲ್ಪ ಸಮಯ ಕಳೆದಾಗ ಘಟಿಕೋತ್ಸವ ಬಂತು.

ರ‌್ಯಾಂಕ್ ಪಡೆದವರಿಗೆ ಯುನಿವರ್ಸಿಟಿ ಯಿಂದ ವಿಶೇಷ ಅಹ್ವಾನ ಬರುತ್ತದೆ.ಹಾಗೆಯೇ ನನಗೂ ಬಂತು.


ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ ನೋಡಿ..

ರ‌್ಯಾಂಕ್ ತೆಗೆದವರು ಪ್ರಮಾಣ  ಪತ್ರ ಪಡೆಯಲು 400-500₹ ಪ್ರತ್ಯೇಕ ಶುಲ್ಕ ನೀಡಬೇಕು. ಆಗ ನನಗೆ ತಿಂಗಳಿಗೆ ಸಿಗುತ್ತಿದ್ದ ವೇತನ 750₹.

ಅದರಲ್ಲಿ ಮಂಗಳೂರಿನಿಂದ ಕಲ್ಲಡ್ಕಕ್ಕೆ ಹೋಗಿ ಬರುವ ಚಾರ್ಜ್ ಕಳೆದರೆ ನನಗೆ ಉಳಿಯುತ್ತಿದ್ದದು 300₹ .

ಪ್ರಸಾದರಿಗೂ ಸಣ್ಣ ಸಂಬಳದ ಕೆಲಸ ಇದ್ದದ್ದು

ಸ್ನಾತಕೋತ್ತರ. ಪದವಿ ಪ್ರಮಾಣ ಪತ್ರ  ರ‍್ಯಾಂಕ್  ಪ್ರಮಾಣ ಪತ್ರ  ಮತ್ತು ಚಿನ್ನದ ಪದಕ ಪಡೆಯಕು ಪಡೆಯಲು ನಾನು 900₹ ತುಂಬಬೇಕಿತ್ತು.

ಇದನ್ನು ಹೊಂದಿಸಲು ನಾವು ಬಹಳ ಕಷ್ಟ ಪಡಬೇಕಾಯಿತು.

ಅಂತೂ ರ‌್ಯಾಂಕ್ ಪಡೆದ ಸಂಭ್ರಮದಲಿ ಈ ಕಷ್ಟವನ್ನು ಸಹಿಸಿಕೊಂಡೆವು.ಚಿನ್ನದ ಪದಕ ಪಡೆಯುವ ಸುವರ್ಣ ಕ್ಷಣವನ್ನು ಕಾಯುತ್ತಾ ಇದ್ದೆ‌.

ಘಟಿಕೋತ್ಸವಕ್ಕೆ ಒಂದು ವಾರ ಇರುವಾಗ ನನಗೆ ವಿಶೇಷ ಆಹ್ವಾನ ಪತ್ರ ಬಂತು.ಅದರಲ್ಲಿ ಬಿಳಿ ಸೀರೆ/ ಚೂಡಿದಾರ್ ಧರಿಸಿ ಬರಬೇಕು ಎಂದು ತಿಳಿಸಿದ್ದರು.

ತಲೆಗೆ ಬಂಡೆ ಕಲ್ಲು ಬಿದ್ದ ಅನುಭವ ಆಯಿತು.ಯಾಕೆಂದರೆ ನನ್ನಲ್ಲಿ ಬಿಳಿ ಸೀರೆ ಇರಲಿಲ್ಲ. ಅಮ್ಮ ಅಕ್ಕನಲ್ಲೂ ಇರಲಿಲ್ಲ. ಅನ್ಯರ ಬಳಿ ಕೇಳಲು ಸ್ವಾಭಿಮಾನ ಬಿಡಲಿಲ್ಲ.ಒಂದೊಮ್ಮೆ ಸೀರೆ ಸಿಕ್ಕರೂ  ಲಂಗ,ರವಿಕೆ ಹೊಲಿಸಿಕೊಳ್ಬೇಕು.ಅದಕ್ಕೂ ದುಡ್ಡು ಬೇಕು‌‌ಹೊಸ ಸೀರೆ ತೆಗೆಯಲೂ ದುಡ್ಡು ಬೇಕು..ದುಡ್ಡಿಗೆ ಎಲ್ಲಿ  ಹೋಗುದು ? 

ಏನು ಮಾಡುದು ? ನನ್ನದೊಂದು ಹಳೆಯ ಸೀರೆ ಇತ್ತು.ಅದು ಬಿಳಿ ಯಲ್ಲಿ ಕಡು ಗುಲಾಬಿ ಬಣ್ಣದ ಹೂವುಗಳಿದ್ದ ಸೀರೆ.ಅದು ಎರಡು ಕಡೆ ಹರಿದಿತ್ತು.

ಸರಿ ಅದನ್ನು ಉಡುವ ಎಂದು ಹರಿದ ಭಾಗದಲ್ಲಿ ಕೈಯಿಂದ ಹೊಲಿಗೆ ಹಾಕಿದೆ.

ಅದಕ್ಕೆ ರವಿಕೆ ಕಡು ಗುಲಾಬಿ ಬಣ್ಣದ್ದೇ ಇದ್ದದ್ದು‌

ಬೇರೆ ದಾರಿ ಇಲ್ಲದೇ ಅದೇ ಸೀರೆ ರವಿಕೆ ಉಟ್ಟುಕೊಂಡು ಹೋದೆ

ಅಲ್ಲಿ ಮೊದಲು ನಾವು ಬಂದದ್ದನ್ನು ರಿಜಿಸ್ಟರ್ ಮಾಡಬೇಕಿತ್ತು.ಆಗ ಅಲ್ಲಿ ಬಿಳಿ ಸೀರೆ ಉಟ್ಟುಕೊಂಡು ಬಂದರೆ ಮಾತ್ರ ಸ್ಟೇಜ್ ಗೆ ಬಿಡುವುದು ಎಂದರು.

ನನ್ನಲ್ಲಿ ಬೇರೆ ಬಿಳಿ ಸೀರೆ ಇಲ್ಲ ಎಂದೆ.ಅದೆಲ್ಲ ನಮಗೆ ಗೊತ್ತಿಲ್ಲ.ಇದು ಯುನಿವರ್ಸಿಟಿ ನಿಯಮ ಎಂದರು.

ನಂತರ ನನ್ನ ಹೆಸರು ಅಂಟಿಸಿ ಕಾದಿರಿಸಿದ  ಕುರ್ಚಿ ಬಳಿ ಹೋದೆ.ಅಲ್ಲಿ ಮೇಲ್ವಿಚಾರಣೆ ಮಾಡುತ್ತಾ ಇದ್ದವರು.ಬಿಳಿ ಸೀರೆ ಉಡದ ಕಾರಣ. ನನ್ನನ್ನು ಅಲ್ಲಿ ಕೂರಲು ಬಿಡಲಿಲ್ಲ.

ಬಡವಾ ನೀ ಮಡುಗಿದಾಂಗೆ ಇರಬೇಕು ಎಂದು ಸಾಮಾನ್ಯರು ಹಾಕಿದ ಖುರ್ಚಿಯಲ್ಲಿ  ಹೋಗಿ ಕುಳಿತೆ.

ಹೆಸರು ಕರೆದರೆ ವೇದಿಕೆಗೆ ಹೋಗಿ ರ‌್ಯಾಂಕ್ ಸರ್ಟಿಫಿಕೇಟ್  ಮತ್ತು ಚಿನ್ನದ ಪದಕ ತಗೊಳ್ಳಲು ವೇದಿಕೆಗೆ ಹೋಗುದು ಬಿಡದೇ ಇದ್ದರೆ ಹಿಂದೆ ಬರುವುದು ಎಂದು ನಿರ್ಧಾರ ಮಾಡಿದ್ದೆ.ಆದರೂ ಗಣ್ಯರಿಂದ ಗೋಲ್ಡ್ ಮೆಡಲ್  ಪಡೆಯಲು ಆಗದೇ ಹೋಗಬಹುದು ಎಂಬ ಆತಂಕ ಇತ್ತು.

ಒಬ್ಬರಾಗಿ ಒಬ್ಬರ ರ‌್ಯಾಂಕ್ ಮತ್ತು ಚಿನ್ನದ ಪದಕ ವಿಜೇತರ ಹೆಸರು ಕರೆಯತೊಡಗಿದರು.ನನಗೆ ವೇದಿಕೆ ಏರಲು ಬಿಡಲಾರರು ಎಂಬ ಆತಂಕದಿಂದ ಎದೆ ಬಡಬಡ ಹೊಡೆದುಕೊಳ್ತಾ ಇತ್ತು.

ನನ್ನ ಹೆಸರನ್ನು ಕೂಡ ಕರೆದರು.ಕೂಡಲೇ ಕುಳಿತಲ್ಲಿಂದ ಎದ್ದು ವೇದಿಕೆ ಕಡೆಗೆ ಧಾವಿಸಿದೆ.ಅಲ್ಲಿ ವೇದಿಕೆ ಏರುವ ಜಾಗದ ಬಳಿ ಇದ್ದವರು ನನ್ನನ್ನು ಬಿಳಿ ಸೀರೆ ಯಾಕೆ ಉಟ್ಟಿಲ್ಲ ಎಂದು ತಡೆದರು.ಆಗ ನನಗೆ ನನ್ನ ಶೋಚನೀಯ ಸ್ಥಿತಿಗೆ ಅಳು ಬಂತು.ಆಗ ವೇದಿಕೆ ಮೇಲೆ ಇದ್ದ ಅತಿಥಿಗಳೊಬ್ಬರು ಇರಲಿ ಅಡ್ಡಿಯಿಲ್ಲ..ನಾವು ಸೀರೆಗೆ ಮೆಡಲ್ ಕೊಡುವುದಲ್ಲ..ಅವರ ಪರಿಶ್ರಮ ಕ್ಕೆ ಕೊಡುವ ಪುರಸ್ಕಾರ ..ಮೇಲೆ ಬಿಡಿ..ಎಂದರು‌

ಮೇಲೆ ಹೋದೆ.ನನಗೆ ಭಾವನೆಗಳನ್ನು ನಿಯಂತ್ರಿಸಲು ಬಹಳ ಕಷ್ಟ ಆಗುತ್ತಿತ್ತು.

ಮೆಡಲ್ ಅನ್ನು ಅಳುತ್ತಲೇ ಪಡೆದೆ..ಆಗ ನನ್ನನ್ನು ವೇದಿಜೆಗೆ ಕರೆದ ಆ ಗಣ್ಯ ವ್ಯಕ್ತಿ ಅಳುವ ಕ್ಷಣವಲ್ಲ.ಇದು ಹೆಮ್ಮೆ ಪಡಬೇಕಾದ ಘಳಿಗೆ ,ಶುಭವಾಗಲಿ ಎಂದು ಹಾರೈಸಿದರು..

ಆಗ ನಮ್ಮಲ್ಲಿ ಕೆಮರಾ ಎಲ್ಲಿ ಇತ್ತು? ಫೋಟೋ ಗ್ರಾಫರ್ ಗೆ ಮೊದಲೇ ದುಡ್ಡು ಕೊಟ್ಟು ವ್ಯವಸ್ಥೆ ಮಾಡದರೆ ಪೋಟೋ ತೆಗೆದು ಕಲುಹಿಸುವ ವ್ಯವಸ್ಥೆ ಅಲ್ಲಿತ್ತು.ಆದರೆ ಅದಕ್ಕೂ ದುಡ್ಡು ಬೇಕಲ್ಲ..ಹಾಗಾಗಿ ನನಗೆ ಯಾರ ಕೈಯಿಂದ ರ‌್ಯಾಂಕ್ ಸರ್ಟಿಫಿಕೇಟ್  ಮತ್ತು ಗೋಲ್ಡ್ ಮೆಡಲ್ ಪಡೆದೆ,ನನ್ನನ್ನು ಸಹೃದಯತೆಯಿಮದ ವೇದಿಕೆಗೆ ಕರೆದ ಗಣ್ಯ ವ್ಯಕ್ತಿ ಯಾರೆಂದು ನನಗೆ ತಿಳಿದಿಲ್ಲ.

ಶಿಕ್ಷಣ ಸಚಿವರಾಗಿದ್ದ ವಿಶ್ವನಾಥ ? ಎಂಬವರಿಂದ ಗೋಲ್ಡ್ ಮೆಡಲು ಪಡೆದದ್ದು ಎಂದು ನೆನಪು.

ದೇವರು ದೊಡ್ಡವನು..ಮುಂದೆ ಒಳ್ಳೆಯ ಕಾಲವನ್ನು ಒದಗಿಸಿಕೊಟ್ಟ.

ಇದಾಗಿ ಹದಿಮೂರು ವರ್ಷಗಳ ನಂತರ  ಮೊದಲ ಡಾಕ್ಟರೇಟ್  ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ದಿಂದ ಪಡೆದೆ.ಆಗಲೂ ಬಿಳಿ ಸೀರೆ ಉಡಬೇಕಿತ್ತು.ಅದಕ್ಕಾಗಿ ಒಂದು ಬಿಳಿ ಸೀರೆ ಖರೀದಿಸಿ ರವಿಕೆ ಹೊಲಿಸಿ ಉಟ್ಟುಕೊಂಡು ಹೋಗಿದ್ದೆ..

 ಅನೇಕರು ಡಾಕ್ಟರೇಟ್ ಹಾಗೂ ರ‌್ಯಾಂಕ್ ಗೋಲ್ಡ್ ಮೆಡಲು ಪಡೆಯಲು ಬಂದಿದ್ದರು


ಅದರಲ್ಲಿ ಅನೇಕರು ಬಿಳಿ ರೇಷ್ಮೆ ಸೀರೆ ಉಟ್ಟು ಕೊಂಡು ಅದಕ್ಕೆ ಮ್ಯಾಚಿಂಗ್ ಆಗಿ ಮುತ್ತಿನ ಬಳೆ ಸರ. ನೆಕ್ಲೆಸ್ ಧರಿಸಿ ಬಂದಿದ್ದರು..

ಆಗ ನನಗೂ ಹಾಗೆಯೆ ಮಾಡಬಹುದಿತ್ತು ಎನಿಸಿತು.. ಆಗ ನಾನು ಎರಡನೇ ಡಾಕ್ಟರೇಟ್  ಪದವಿಗಾಗಿ ಪ್ರಬಂಧ ಸಿದ್ಷತೆ ಮಾಡುತ್ತಾ ಇದ್ದೆ‌.

ಮುಂದಿನ ಬಾರಿ ಪಿ ಎಚ್ ಡಿ ಪಡೆಯುವಾಗ ಅದಕದಕಾಗಿಯೇ ಚೆಂದದ ಬಿಳಿ ರೇಷ್ಮೆ ಸೀರೆ ಖರೀದಿಸಿ,ಮುತ್ತಿನ ಬಳೆ ಮುತ್ತಿನ ಹಾರ ಧರಿಸಿಕೊಂಡು ಹೋಗಬೇಕು ಎಂದು ನಿರ್ಧರಿಸಿದೆ

ಆ ಅವಕಾಶ ನನಗೆ ತಪ್ಪಿ ಹೋಯಿತು. ಕುಪ್ಒಂ ದ್ರಾವಿಡ ಯುನಿವರ್ಸಿಟಿ ಯ ಘಟಿಕೋತ್ಸವದ ದಿನ ನಾನು ಬಿ ಎಡ್ ಪರೀಕ್ಷೆ ಬರೆಯಬೇಕಿತ್ತು.ಹಾಗಾಗಿ ನನಗೆ ಹೋಗಕಾಗಲಿಲ್ಲ.

ನಾನು ಸಜ್ಜನ ರಾಜಕಾರಣಿ ಡಾ.ವಿ ಎಸ್ ಆಚಾರ್ಯರಿಂದ ಮೊದಲ ಡಾಕ್ಟರೇಟ್ ಪದವಿ ಪಡೆದದ್ದು,ಅವರು ನನ್ನನ್ನು ತುಳು ಭಾಷೆಯಲ್ಲಿ ಮಾತನಾಡಿಸಿದ್ದು ಇನ್ನೂ  ಕಣ್ಣಿಗೆ ಕಟ್ಟುತ್ತಿದೆ ನನಗೆ.

- ಡಾ.ಲಕ್ಷ್ಮೀ ಜಿ ಪ್ರಸಾದ 


Tuesday 11 August 2020

ಬರಹದ ಮಾನದಂಡ ಯಾವುದು ?

ಬರಹವನ್ನು ಅಳೆಯುವ ಮಾನದಂಡ ಯಾವುದು ? ಒಂದು ಬರಹ ಎಲ್ಲಿ ಪ್ರಕಟವಾಗುತ್ತದೆ ಎಂಬುದು ಮುಖ್ಯವಲ್ಲ..ಫೇಸ್ ಬುಕ್ ಬ್ಲಾಗ್ ನಲ್ಲಿ ಪ್ರಕಟಿಸಿದ ಕಾರಣಕ್ಕೆ ಕೃತಿ ಕಳಪೆಯಾಗುವುದಿಲ್ಲ ,ನವ ಕರ್ನಾಟಕ ಸಪ್ನಾ,ಅಂಕಿತದಂತಹ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ ಕಾರಣಕ್ಕೆ ಶ್ರೇಷ್ಠವಾಗುವುದಿಲ್ಲ.. ಅಂತರ್ಜಾಲ ತಾಣಗಳ ಮೂಲಕ ಪ್ರಕಟಿಸುವುದು ಇತ್ತೀಚೆಗಿನ ಹೊಸ ದಾರಿ.. ನನ್ನ ಕೃತಿಗಳು ಪ್ರಕಾಶನದ ಮೂಲಕ ಪ್ರಕಟಗೊಂಡಿವೆ.ಹೆಚ್ಚಂದರೆ ಒಂದು ಸಾವಿರ ಪ್ರತಿ ಪ್ರಿಂಟ್ ಮಾಡುತ್ತಾರೆ.ಅದರಲ್ಲಿ ಹೆಚ್ಚಿನದು ಲೈಬ್ರರಿ ಗಳಿಗೆ ಹೋಗಿ ಮೂಲೆಯಲ್ಲಿ ಧೂಳು ಹಿಡಿದುಕೊಂಡು ಬಿದ್ದಿರುತ್ತದೆ , ಅದೇ ವಿಚಾರಗಳನ್ನು ನಾನು ಬ್ಲಾಗ್ ನಲ್ಲಿ ಹಾಕಿದ್ದು,ದೇಶ ವಿದೇಶಗಳ ಮೂರು ಲಕ್ಷ ಎಪ್ಪತ್ತೈದು ಸಾವಿರಕ್ಕಿಂತ ಹೆಚ್ಚಿನ ಆಸಕ್ತ ಓದುಗರನ್ನು ತಲುಪಿದೆ, ಬಹುಶಃ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಹಾಕಿದ್ದು ಕೂಡಾ ಒಂದೆಡೆಯಿಂದ ಇನ್ನೊಂದೆಡೆಗೆ ಶೇರ್ ಆಗುತ್ತಾ ಲಕ್ಷಕ್ಕಿಂತ ಹೆಚ್ಚು ಜನರಿಗೆ ತಲುಪಿರುವ ಸಾಧ್ಯತೆ ಇದೆ. ಬರೆಯುವ ಉದ್ದೇಶವೇ ಜನರು ಓದಬೇಕೆಂಬುದು. ಅಂತರ್ಜಾಲದಲ್ಲಿ ಹೆಚ್ಚು ಓದುಗರನ್ನು ತಲುಪುತ್ತದೆ. ಉತ್ತಮವಾದ್ದು ಆದರೆ ಎಲ್ಲೆಡೆ ಶೇರ್ ಆಗುತ್ತದೆ‌.ಇನ್ನಷ್ಟು ಹೆಚ್ಚಿನ ಓದುಗರನ್ನು ತಲುಪುತ್ತದೆ . ಆದರೆ ಕಾಲನ ವೇಗಕ್ಕೆ ಹೆಜ್ಜೆ ಹಾಕಲಾಗದವರು ಮಾತ್ರ ಬದಲಾವಣೆಯನ್ನು ಸ್ವಿಕರಿಸದೆ ಫೇಸ್ ಬುಕ್ ಸಾಹಿತ್ಯ ,ಬ್ಲಾಗ್ ಬರಹ ಎಂದು ಹೀಗಳೆಯುತ್ತಾರೆ‌. ಪುಸ್ತಕಗಳ ರೂಪದಲ್ಲಿ ಪ್ರಕಟವಾದ ಮಾತ್ರಕ್ಕೆ ಅದರ ಗುಣ ಮಟ್ಟ ಹೆಚ್ಚಾಗುದಿಲ್ಲ.. ಫೇಸ್ ಬುಕ್ ,ಬ್ಲಾಗ್ ನಲ್ಲಿ ಹಾಕಿದ ಮಾತ್ರಕ್ಕೆ ಗುಣಮಟ್ಟ ಕಡಿಮೆ ಆಗುವುದಿಲ್ಲ.. ಒಂದು ಗಮ್ಮತ್ತಿನ ವಿಚಾರ ಹೇಳ್ತೇನೆ,ನನ್ನ ಬ್ಲಾಗ್ ಬರಹಗಳನ್ನು ಯಥಾವತ್ ಆಗಿ ವಿಕಿಪೀಡಿಯಕ್ಕೆ ಹಾಕಿದ್ದು ,ನಾನು ಈ ಬಗ್ಗೆ ಆಕ್ಷೇಪ ಮಾಡಿದ್ದು ನಿಮಗೆಲ್ಲ ಗೊತ್ತು.ಬ್ಲಾಗ್ ಬರಹ ಆಗುತ್ತದೆ ,ಬ್ಲಾಗ್ ಲಿಂಕ್ ಉಲ್ಲೇಖದಲ್ಲಿ ಹಾಕಲು ಆಗುವುದಿಲ್ಲವಂತೆ.. ಒಂದೊಮ್ಮೆ ನಾನು ಇದನ್ನು ಬ್ಲಾಗ್ ನಿಂದ ತೆಗೆದು ವೆಬ್ ಗೆ ಹಾಕಿದರೆ ಆಗ ವೆಬ್ ನ ಉಲ್ಲೇಖ ಕೊಡಲು ಆಗುತ್ತದೆ ಅಂತೆ...ಇದೆಲ್ಲ ಕಾಲದ ಜೊತೆಯಲ್ಲಿ ಹೆಜ್ಜೆ ಹಾಕಲಾಗದವರ ಮೂರ್ಖತನ ಅಷ್ಟೇ .. ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವಧ್ಯಂ| ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ ಮೂಢಃ ಪರಪ್ರತ್ಯಯನೇಯ ಬುದ್ದಿಃ|| ಕಾವ್ಯವು ಪ್ರಾಚೀನ ಎಂಬ ಕಾರಣಕ್ಕೆ ಶ್ರೇಷ್ಠವಲ್ಲ,ಹೊಸತು ಎಂಬುದಕ್ಕೆ ಕನಿಷ್ಠವಲ್ಲ ಸಜ್ಜನರು ಪರೀಕ್ಷಿಸಿ ತಿಳಿಯುತ್ತಾರೆ ಮೂಢರು ಇತರರು ಹೇಳಿದ್ದನ್ನು ನಂಬುತ್ತಾರೆ.- ಕಾಳಿದಾಸ ಅಂದು ಕವಿ ಕಾಳಿದಾಸ ಪ್ರಾಚೀನ ಅರ್ವಾಚೀನ ಎಂಬುದು ಕಾವ್ಯದ ಯೋಗ್ಯತೆಯನ್ನು ಅಳೆಯುವ ಮಾನದಂಡ ಅಲ್ಲ ಎಂದಿದ್ದಾನೆ‌.ಇಂದು ಎಲ್ಲಿ ಪ್ರಕಟವಾಗುತ್ತದೆ ಎಂಬುದು ಕಾವ್ಯದ ಸತ್ವವನ್ನು ಅಳೆಯುವ ಮಾನದಂಡವಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ.- ಡಾ.ಲಕ್ಷ್ಮೀ ಜಿ ಪ್ರಸಾದ ಶ್ರೀನಾಥ ರಾಯಸಂ ಅವರ ಬರಹದಿಂದ ಪ್ರೇರಣೆಗೊಂಡು ನಾನು ಬರೆದಿರುವ ಬರಹವಿದು, ಅವರ ಬರಹವನ್ನು ಇಲ್ಲಿ ಓದಬಹುದು https://m.facebook.com/story.php?story_fbid=4180498492021174&id=100001831931254

Monday 10 August 2020

ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ

ನನಗೆ ಈ ವಿಚಾರ ನೆನಪಾದಾಗೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ.. 1988 ರಲ್ಲಿ ನಾನು ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪಾಸಾದೆ‌.ಅಳಿದೂರಲ್ಲಿ ಉಳಿದವರೇ ರಾಜ ಎಂಬ ಹಾಗೆ 70% ಬಂದದ್ದು ದೊಡ್ಡ ಸಾಧನೆಯೇ.. ನನ್ನ ಅಕ್ಕನಿಗೆ ಒಳ್ಳೆಯ ಮಾರ್ಕ್ಸ್ ಬಂದಿದ್ದರೂ ಕಾಲೇಜಿಗೆ ಕಳುಹಿಸಿರಲಿಲ್ಲ. ನಮ್ಮೂರಲ್ಲಿ ಆಗಷ್ಟೇ ಹುಡುಗಿಯರು ಕಾಲೇಜಿಗೆ ಹೋಗಲು ಶುರು ಮಾಡಿದ್ದರಷ್ಟೇ..ಪಾಸಾಗುದೇ ನೂರರಲ್ಲಿ ಹತ್ತಿಪ್ಪತ್ತು ಮಕ್ಕಳು.ಅದರಲ್ಲಿ ಹುಡುಗಿಯರ ಸಂಖ್ಯೆ ಬೆರಳೆಣಿಕೆಯಷ್ಟು. ಕಾಲೇಜಿಗೆ ಹೋಗುವವರು ಒಬ್ಬರೋ ಇಬ್ಬರೋ ಅಷ್ಟೇ, ಪದವಿಗೆ ಕಾಲಿಡುವಷ್ಟರಲ್ಲಿ‌ ಮದುವೆ ಹಾಗಾಗಿ ಪದವಿ ಪೂರ್ಣಗೊಳಿಸುತ್ತಿದ್ದವರ ಸಂಖ್ಯೆ ಐನೂರರಲ್ಲಿ ಒಬ್ಬರಾದರೆ ಸ್ನಾತಕೋತ್ತರ ಪದವಿ ಗಳಿಸುತ್ತಿದ್ದ ಹುಡುಗಿಯರು ಸಾವಿರದಲ್ಲಿ ಒಬ್ಬರು ಅಷ್ಟೇ, ಅಂತಹ ಅದೃಷ್ಟ ಶಾಲಿಗಳಲ್ಲಿ ನಾನು ಕೂಡ ಒಬ್ಬಳು ಎಂಬ ಸಂತಸ ನನ್ನದು ನನ್ನ ಕಾಲೇಜು ಓದಿಗೆ ಮನೆಯಲ್ಲಿ ಅಪ್ಪ ಅಮ್ಮನ ಪೂರ್ಣ ಒತ್ತಾಸೆ ಇತ್ತು. ನನ್ನ ತಂದೆಯವರಿಗೆ ತಮ್ಮ ಮಕ್ಕಳು ಮೊದಲ ರ‌್ಯಾಂಕ್ ತೆಗೆಯಬೇಕು ಎಂಬ ಮಹದಾಸೆ..ದುರದೃಷ್ಟಕ್ಕೆ ನನಗೆ ಒಂದೆರಡು ಮಾರ್ಕ್ ಗೆ ಮೊದಲ ಸ್ಥಾನ ತಪ್ಪಿ ಹೋಗುತ್ತಿತ್ತು.ಪ್ರತೀಬಾರಿ ಮಾರ್ಕ್ ಕಾರ್ಡ್ ತಂದಾಗಲೂ ತಂದೆಯವರು ರ‌್ಯಾಂಕಾ( ಅದರ ಅರ್ಥ ಮೊದಲ ರ‌‌‌್ಯಾಂಕಾ ಎಂದು) ಎಂದು ಕೇಳುತ್ತಿದ್ದರು.ನಾನು ಅಲ್ಲ ಎರಡನೇ ರ‌್ಯಾಂಕ್ ಎಂದು ಸಪ್ಪೆಯಾಗಿ ಹೇಳುದು ಮಾಮುಲಾಗಿತ್ತು.ತಂದೆ ತಾಯಿ ಅದಕ್ಕಾಗಿ ನಮ್ಮನ್ನು ಎಂದೂ ಬೈದದ್ದು ಇಲ್ಲ.. ಹಾಗೆ ನೋಡಿದರೆ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಬರಲು ತಂದೆಯವರ ಕನಸೇ ಕಾರಣ.ನನಗೆ ತಂದೆಯವರ ಕನಸನ್ನು ( ಅದು ನನ್ನ ಕನಸು ಕೂಡ ಅಗಿತ್ತು) ಅದು ಕೊನೆಯ ಅವಕಾಶವಾಗಿತ್ತು. ನಾನು ಬಿಎಸ್ಸಿ ಮಾಡಿದ್ದು ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿತವಳು.ನಾನು ಕಟೀಲಿನಲ್ಲಿ ಎಂಎ ಗೆ ಸೇರಿದಾಗ ಅಲ್ಲಿ ನನಗೆ ಪ್ರಬಲ ಪ್ರತಿಸ್ಪರ್ಧಿಗಳಿದ್ದರು. ಸಂಸ್ಕೃತ ವನ್ನು ಐಚ್ಛಿಕವಾಗಿ ಕಲಿತು ಪದವಿಯಲ್ಲಿ ರ‌್ಯಾಂಕ್ ತೆಗೆದ ರಮಿತಾ ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು. ಆದರೆ ಮನೆ ಮಂದಿಯನ್ನೆಲ್ಲ‌ ಎದುರು ಹಾಕಿಕೊಂಡು ವಿವಾಹದ ನಂತರ ಕಲಿಯ ಹೊರಟ ನನಗೆ ಮಾಡು ಇಲ್ಲವೇ ಮಡಿ ಎಂಬ ಚಾಲೆಂಜ್ ಆಗಿತ್ತು ಅದು..ಏನೊ ದೇವರ ದಯೆ..ತಂದೆಯವರ ಮೊದಲ ರ‌್ಯಾಮಕಿನ ಕನಸು ಈಡೇರಿತ್ತು. .ಇರಲಿ ನಾನೀಗ ಹೇಳಲು ಹೊರಟ ವಿಚಾರ ಇದಲ್ಲ. ಸಂಬಂಧಿಕರಲ್ಲಿ ಅನೇಕ ಹೆಣ್ಣುಮಕ್ಕಳು ಹೈಸ್ಕೂಲ್ ಮೆಟ್ಟಿಲು ಹತ್ತದವರು ಇದ್ದರು.ಮನೆಯಲ್ಲಿ ಬೆಂಬಲ ಇಲ್ಲದ ಕಾರಣವೋ ಇನ್ನೇನು ಕಾರಣವೋ ತಿಳಿಯದು.ಇವರೆಲ್ಲ ಕಲಿಕೆಯಲ್ಲಿ ಕೂಡ ಹಿಂದಿದ್ದರು. ಇವರೆಲ್ಲ ಕಾಲೇಜಿಗೆ ಹೋಗುವವರ ಬಗ್ಗೆ ಮರ್ಯಾದೆ ಇಲ್ಲದವರು ಎಂಬ ಭಾವನೆಯನ್ನು ಸಮಾಜದಲ್ಲಿ ಬಿತ್ತಿದ್ದರು.ಕಾಲೇಜಿಗೆ ಹೋಗುವ ಹುಡುಗಿಯರು ಹಾದರ ಮಾಡಲು ಹೋಗುವವರು ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇತ್ತು. ಬಹಳ ನಾಚಿಕೆಯ ವಿಚಾರ ಏನೆಂದರೆ ನಾವು ಕೂಡ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಸೀನಿಯರ್ ಹುಡುಗಿಯರು ಒಬ್ಬಿಬ್ಬರು ಕಾಲೇಜಿಗೆ ಹೋಗುತ್ತಿದ್ದು ಅವರುಗಳ ಬಗ್ಗೆ ಜನರು ಕೆಟ್ಟದಾಗಿ ಹೇಳುತ್ತಿದ್ದುದನ್ನು ನಾನು ಕೂಡ ನಂಬಿದ್ದೆ . ಅವಳ ರೇಟ್ ರಿಕ್ಷಾ ಸ್ಟ್ಯಾಂಡ್ ಬಳಿ ನಿಂತ ಎಲ್ಲರಿಗೂ ಗೊತ್ತಂತೆ.ಕಾಲೇಜು ಬಿಡುವುದನ್ನೇ ರಿಕ್ಷಾದವರು ಕಾಯ್ತಾ ಇದ್ದರಂತೆ..ಆ ಹೋಟೆಲಿನಲ್ಲಿ ಯಾರ್ಯಾರೋ ಇವರಿಗೆ ಕಾಯ್ತಾರಂತೆ...ಇತ್ಯಾದಿ ತೀರಾ ಕೊಳಕು ವಿಚಾರಗಳು..ಊರಿಡೀ ಕೆಲಸದವರು ಅವರಿವರು ಎಲ್ಲರೂ ನಮಗಿಂತ ಮೊದಲು ಕಾಲೇಜಿಗೆ ಹೋದ ಹುಡುಗಿಯರ ಬಗ್ಗೆ ವರ್ಣರಂಜಿತವಾಗಿ ತಾವೇ ನೋಡಿದವರಂತೆ ಹೇಳುತ್ತಿದ್ದರು.ನಾನು ಕೂಡ ಅದನ್ನು ನಂಬಿದ್ದೆ.ಅದಕ್ಕೆ ಸರಿಯಾಗಿ ಕೆಲವು ಹುಡುಗಿಯರು ಬಸ್ ಡ್ರೈವರ್ ಕಂಡಕ್ಟರ್ ಗಳಲ್ಲಿ ಚೆಲ್ಲು ಚೆಲ್ಲಾಗಿ ವರ್ತಿಸುತ್ತಿದ್ದರು ಬೇರೆ. ಯಾವಾಗ ನಾನು ಕಾಲೇಜಿಗೆ ಕಾಲಿಟ್ಟನೋ ಇದೆಲ್ಲವೂ ಸುಳ್ಳೆಂದು ಖಚಿತವಾಗಿ ತಿಳಿಯಿತು. ಆದರೆ ನಮ್ಮ ಬಗ್ಗೆಯೂ ಜನ ಹಾಗೇ ಅಡಿಕೊಂಡಿರ್ತಾರೆ.ಇತರರು ಅದನ್ನು ನಂಬಿರಲೂ ಸಾಕು.ಕಾಲೇಜಿಗೆ ಹೋಗುವ ನಮ್ಮನ್ನು ಕುಹಕದ ದೃಷ್ಟಿಯಿಂದ ನೋಡುತ್ತಿದ್ದಿದು ನಮಗೆ ಅರಿವಾಗುತ್ತಿತ್ತು. ಆದರೆ ನಾವು ಅಸಹಾಯಕರು.ಈ ಬಗ್ಗೆ ಏನಾದರೂ ಮನೆಯಲ್ಲಿ ಹೇಳಿದರೆ ಕಾಲೇಜಿಗೆ ಹೋಗುದೇ ಬೇಡ ಎಂದು ನಿಲ್ಲಿಸಿದರೆ ಎಂಬ ಆತಂಕ.. ನಮ್ಮ ಮೊದಲು ಕಾಲೇಜಿಗೆ ಕಾಲಿಟ್ಟ ನಮ್ಮ ಸೀನಿಯರ್ ಹುಡುಗಿಯರ ಬಗ್ಗೆ ಜನ ಕಾ್ಟಿದ ಕಥೆಯನ್ನು ನಾನೂ ನಂಬಿದ ಬಗ್ಗೆ ಅವರುಗಳ ಬಗ್ಗೆ ಕುಹಕದಿಂದ ಮಾತನಾಡಿದ ಬಗ್ಗೆ ನನಗೆ ನಂತರ ತುಂಬಾ ಪಶ್ಚಾತ್ತಾಪ ಆಗಿದೆ.ಆದರೆ ಹನ್ನೆರಡು ಹದಿನಾಲ್ಕರ ವಯಸ್ಸು.. ಸತ್ಯಾಸತ್ಯತೆಯನ್ನು ಅರಿಯುವ ಪ್ರಾಯ ಅಲ್ಲ..ಎಂದು ಸಮಾಧಾನ ಪಟ್ಟುಕೊಳ್ಳಲು ಯತ್ನ ಮಾಡುವೆನಾದರೂ ನನ್ನ ವರ್ತನೆ ಬಗ್ಗೆ ನೆನಪಾದಾಗ ನಾಚಿಕೆ ಆಗಿ ತಲೆ ತಗ್ಗಿಸುವ ಹಾಗೆ ಆಗುತ್ತದೆ.. ಊರವರೆಲ್ಲ ಹೇಳುದನ್ನು ಕೇಳಿ ನಾನು ಸಹಪಾಠಿಗಳಲ್ಲಿ ಅದನೇ ಹೇಳಿದ್ದೆ..ಮತ್ತು ನಾವೆಲ್ಲ ಕಾಲೇಜಿಗೆ ಮುಂದೆ ಹೋದಾಗ ಹಾಗೆ ಮಾಡದೇ ಕಲಿಯಬೇಕು ಎಂದಿದ್ದೆ ..ಛೇ‌. ಸದ್ಯ ಈಗ ಕಾಲ ಬದಲಾಗಿದೆ,ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ಪಡುವ ಕಾಲ ಬಂದಿದೆ ಎಂಬುದು ಸಂತಸದ ವಿಚಾರ. ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ಈ ವಿಚಾರ ನೆನಪಾಯಿತು.

Saturday 8 August 2020

ಕಾಡಿದ ಕೊಕ್ಕಳಿಕೆ

ಕಾಡಿದ ಕೊಕ್ಕಳಿಕೆ..ಅವರ ಮಾತಿನಿಂದ ದೂರವಾಗಿತ್ತು‌ ನಾನು ಚಿಕ್ಕಂದಿನಿಂದಲೇ ನೇರವಾದ ಮಾತಿನವಳು..ಅದರ ಮಾತು ಹೇಳಿರೆ ಖಡಕ್ ಪೆಟ್ಟೊಂದು ತುಂಡೆರಡು ಅಂತ ನನ್ನ ಅಜ್ಜ ಬೇರೆಯವರಲ್ಲಿ ನನ್ನ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು.ಆಗ ಹಾಗೆಂದರೇನು ? ಯಾಕೆ ಹಾಗೆ ಹೇಳ್ತಾರೆ..ನನ್ನ ಯಾವ ಮಾತಿನ ಬಗ್ಗೆ ಹಾಗೆ ಹೇಳುತ್ತಿದ್ದರು ? ನನಗೂ ಗೊತ್ತಿಲ್ಲ‌. ಇದನ್ನು ಹೊರ ಜಗತ್ತು ಕೂಡ ಗುರುತಿಸಿತ್ತು ಎಂದು ಗೊತ್ತಾದದ್ದು ನನಗೆ ಮದುವೆ ನಿಶ್ಚಿತವಾದಾಗ. ನನ್ನ ಅತ್ತೆಯವರ ತಂಗಿ ಮನೆ ಕೊಡಂಗೆ,ನನ್ನ ತಂದೆ ಮನೆ ಹತ್ತಿರ,ತಂದೆಯವ ಶಿಷ್ಯ ವರ್ಗದ ಮನೆ ಅದು,ನಮ್ಮ ಮನೆಗಳ ನಡುವೆ ತುಂಬಾ ಸ್ನೇಹ ಆತ್ಮೀಯತೆ ಇತ್ತು ಅವರು ನನ್ನ ಬಗ್ಗೆ ಹುಡುಗನ( ಪ್ರಸಾದ್) ಮನೆಯವರಲ್ಲಿ ಹುಡುಗಿ ಯಾವ ವಿಷಯದಲ್ಲೂ ತೆಗೆದು ಹಾಕುವಂತಿಲ್ಲ ಬಹಳ ಜಾಣೆ? ( ಈ ಬಗ್ಗೆ ನನಗೆ ತುಂಬಾ ಸಂಶಯ 😀) ಎಂತಹ ಪರಿಸ್ಥಿತಿ ಬಂದರೂ ನಿಬಾಯಿಸಿಕೊಂಡು ಹೋಗುವ ಸಾಮರ್ಥ್ಯ ಇರುವವಳು.ಆದರೆ ಮಾತು ಮಾತ್ರ ಖಡಕ್,ಪೆಟ್ಟೊಂದು ತುಂಡೆರಡು ಅಂತ ಅಂದಿದ್ದರಂತೆ.ಈ ವಿಚಾರ ನನಗೆ ಗೊತ್ತಾದಾಗ ಕೂಡ ಯಾಕೆ ಹೇಗೆ ಹೇಳ್ತಾರೆ ಎಂದು ನನಗೆ ಗೊತ್ತಾಗಿರಲಿಲ್ಲ. ನಾನು ಮಾತು ಬೇಗ ಕಲಿತಿದ್ದೆನಂತೆ. ಮತ್ತು ನನ್ನ ಮಾತು ಚಿಕ್ಕ ಮಗುವಿರುವಾಗಲೇ ಸ್ಪಷ್ಟ, ಕೊಂಞೆ ಇರಲಿಲ್ಲ ಎಂದು ಅಮ್ಮ ಹೇಳಿದ್ದರು ಒಮ್ಮೆ ಶಾಲಾ,ಕಾಲೇಜುಗಳಲ್ಲಿ ಭಾಷಣ ನಾಟಕ ಅದು ಇದು ಎಂದು ಭಾಗವಹಿಸಿ ಅಗೊಂದು ಈಗೊಂದು ಬಹುಮಾನ ಸಿಗುತ್ತಾ ಇತ್ತು ಕೂಡ. ನನಗೆಲ್ಲೂ ಮಾತನಾಡಲು ಕಷ್ಟವಾದದ್ದು ನೆನಪಿಲ್ಲ.ನಾನು ಮಾತಿನ ನಿರರ್ಗಳತೆ ಕಾರಣಕ್ಕಾಗಿ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನನಗೆ ಸಿಗುತ್ತಾ ಇತ್ತು‌ ನನ್ನ ತಂದೆ ತಾಯಿಯರು ಚೆಂದುಳ್ಳೆ ಚೆಲುವ ಚೆಲುವತಿಯರಾದ ಕಾರಣ ನಾನು ಅವರಷ್ಟು ಚಂದ ಅಲ್ಲದಿದ್ದರೂ ಸುಮಾರಾಗಿ ಇದ್ದೆ.ಅದು ನನ್ನ ತಲೆಯಲ್ಲಿ ಸ್ವಲ್ಪ ಇತ್ತು. ಹಾಗಾಗಿ ಇರುವುದರಲ್ಲಿ ಚಂದದ ಅಂಗಿ ಹಾಕಿಕೊಂಡು ನಿರೂಪಣೆ ಹಾಗೂ ಇನ್ನಿತರ ಸಂದರ್ಭದಲ್ಲಿ ವೇದಿಕೆ ಏರಿ ಸ್ವಲ್ಪ ಹೆಮ್ಮೆಯ ನಗು ಬೀರುತ್ತಿದ್ದುದು ಸತ್ಯ. ಪಿಯುಸಿ ಮತ್ತು ಡಿಗ್ರಿಯಲ್ಲಿ ನಾನು ವಿಜ್ಞಾನ ತಗೊಂಡು ಇಂಗ್ಲೀಷ್ ನಲ್ಲಿ ಬರೆಯಬೆಕಾದ ಕಾರಣ ನಾನು ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿದ್ದೆ,ಮರ್ಯಾದೆಗಾಗಿ ಬಾಯಿ ಪಾಠ ಮಾಡಿ ಪಾಸಾಗಿದ್ದೆ. ನಂತರ ಎಂಎ ಓದುವಾಗ ಮತ್ತೆ ಕಲಿಕೆಯಲ್ಲಿ ಮುಂದೆ ಬಂದೆ. ಈ ಎಲ್ಲ ದಿನಗಳಲ್ಲಿ ಎಂದೂ ನನಗೆ ಯಾರಲ್ಲಿ ಮಾತನಾಡುವಾಗ ಕೂಡ ಮಾತಿನಲ್ಲಿ ತೊದಲುವಿಕೆ,ಕೊಕ್ಕಳಿಕೆ ಇರಲಿಲ್ಲ. ಸಂಸ್ಕೃತ ಎಂಎಯಲ್ಲಿ ಮೊದಲ ರ‍್ಯಾಂಕ್ ತೆಗೆದೆ.ಫಲಿತಾಂಶ ಬರುವ ಮೊದಲೇ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದೆ. ನಂತರ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ತು. ಆದರೆ 1999 ರಲ್ಲಿ ಯುನಿಪಾರ್ಮ್ ವರ್ಕಲೊಡ್ ನಿಯಮ ಜಾರಿಯಾದಾಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಗಳು ಹನ್ನೆರಡು ಅವಧಿಯ ಬದಲು ಹದಿನಾರು ಅವಧಿ ಕೆಲಸ ಮಾಡಬೇಕಾಗಿ ಬಂತು. ಅಗ ನನ್ನಂತಹ ತಾತ್ಕಾಲಿಕ ನೆಲೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದ ಅನೇಕರು ವರ್ಕ್ ಲೋಡ್ ಇಲ್ಲದೆ ಕೆಲಸ ಕಳೆದುಕೊಳ್ಳಬೇಕಾಗಿ ಬಂತು. ಅದೇ ಸಮಯದಲ್ಲಿ ಮಂಗಳೂರಿನ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದರು. ನಾನು ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಆಯ್ಕೆ ಆಗಿ ಸಂಸ್ಕೃತ ಶಿಕ್ಷಕಿಯಾಗಿ ಅಲ್ಲಿ ಕೆಲಸಕ್ಕೆ ಸೇರಿದೆ. ಜೊತೆಗೆ ಸಂತ ಅಲೋಶಿಯಸ್ ಸಂದ್ಯಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಈ ಸಮಯದಲ್ಲಿ ಸಂಸ್ಕೃತೋತ್ಸವ ಬಂತು. ಚಿನ್ಮಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಸ್ಕೃತ ಅಭಿಮಾನಿಯಾಗಿದ್ದು ಸಂಸ್ಕೃತೋತ್ಸವದ ನಿಮಿತ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಮ್ಮ ಚಿನ್ಮಯ ಶಾಲೆಯಲ್ಲಿ ನಡೆಸಲು ಅನುಮತಿ ನೀಡಿದರು. ಸ್ಪರ್ಧೆಗಳು ಒಂದು ಅದಿತ್ಯವಾರ ನಡೆದವು.ನನಗೆ ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ನೀಡಿದ್ದರು. ಈ ಸಮಯದಲ್ಲಿ ಆಗ ಸಂಸ್ಕೃತ ಸಂಘದ ಅಧ್ಯಕ್ಷರಾಗಿದ್ದ ವಾಸುದೇವ ರಾವ್ ( ಎಂದು ನೆನಪು) ಡಾ.ಜಿ ಎನ್ ಭಟ್,ಡಾ.ಶಿಕಾರಿ ಪುರ ಕೃಷ್ಣ ಮೂರ್ತಿ ಮೊದಲಾದವರು ನಮ್ಮ ಶಾಲೆಗೆ ಬಂದಿದ್ದರು.ಆಗ ವಾಸುದೇವ ರಾವ್ (?) ನನ್ನಲ್ಲಿ ಯಾವುದೋ ವಿಚಾರ ಕೇಳಿದರು. ನನಗೆ ಗೊತ್ತಿರುವ ವಿಚಾರವೇ..ಆದರೆ ನನಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗಲಿಲ್ಲ..ಮೊದಲ ಬಾರಿಗೆ ತೀರಾ ಪದಗಳು ಸಿಗದೆ ಒದ್ದಾಡಿದೆ..ಕೊನೆಗೂ ನಾನು ಏನು ಹೇಳಲು ಹೊರಟಿದ್ದೆ ಎಂದವರಿಗೆ ಅರ್ಥವಾಗಲಿಲ್ಲ ಕಾಣಬೇಕು.ಆಗ ಅವರು ಯಾರೊ ಒಂದು ವಿಜ್ಞಾನಿ/ ಪ್ರೊಫೆಸರ್ ಉದಾಹರಣೆ ಕೊಟ್ಟು ಅವರು ಹೀಗೆ ಮಾತಾಡುತ್ತಾರೆ ( ಏನೇನೋ ? ) ಎಂದು ಹೇಳಿದರು. ಆ ದಿನ ಮನೆಗೆ ಬಂದು ಅಲೋಚಿಸಿದೆ..ಯಾಕೆ ಹೀಗಾಯ್ತು..ಎಂದೂ ನನಗೆ ಉಗ್ಗಳಿಗೆ/ ಕೊಕ್ಕಳಿಗೆ ,ತೊದಲುವಿಕೆ ಇರಲಿಲ್ಲವಲ್ಲ ಎಂದು.. ಅಷ್ಟೇ ಆ ಬಗ್ಗೆ ಮತ್ತೆ ತಲೆಕೆಡಿಸಿಕೊಳ್ಳಲಿಲ್ಲ. ಆ ವರ್ಷ ಸಂಸ್ಕೃತೋತ್ಸವದ ನಿರೂಪಣೆ ನನಗೆ ನೀಡಿದರು.ನಾನು ಡಾ.ಜಿ ಎನ್ ಭಟ್ ಅವರ ವಿದ್ಯಾರ್ಥಿನಿ ಅಗಿದ್ದು ಅವರಿಗೆ ನಾನು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಬಗ್ಗೆ ಗೊತ್ತಿದ್ದು ನಂಬಿಕೆ ಮೇಲೆ ನನಗೆ ಜವಾಬ್ದಾರಿ ನೀಡಿದ್ದರು ಅ ವರ್ಷ ಸಂಸ್ಕೃತ ಸಂಘದ ರಜತಮಹೋತ್ಸವ ಅಗಿದ್ದು ತುಂಬಾ ಜನ ಕೂಡ ಬಂದಿದ್ದರು. ಓಹ್.. ನಾನು ಸಾಮಾನ್ಯವಾಗಿ ಬರೆದು ನಿರೂಪಣೆ ಮಾಡುವುದಿಲ್ಲ, ನೇರವಾಗಿ ಮಾಡುವ ಕ್ರಮ..ಆ ಬಾರಿ ಮುಂಜಾಗ್ರತಾ ಕ್ರಮವಾಗಿ ಬರೆದು ತಯಾರಾಗಿದ್ದೆ.ದೊಡ್ಡ ಕಾರ್ಯಕ್ರಮ ,ಸಂಸ್ಕೃತ ಭಾಷೆಯಲ್ಲಿ ತಪ್ಪು ಆಗಬಾರದು ಎಂಬ ಕಾರಣಕ್ಕಾಗಿ ಬಹುಶಃ ನನ್ನ ಜೀವನದಲ್ಲಿ ಅತ್ಯಂತ ಕಳಪೆಯಾಗಿ ತೊದಲಿಕೊಂಡು ಏನೇನೋ ಒದರಿ..ತಪ್ಪು ತಪ್ಪಾಗಿ ನಿರೂಪಣೆ ಮಾಡಿದ್ದು ಅದೇ ಮೊದಲು ಮತ್ತೆ ಕೊನೆ( ಇನ್ನಾಗಲಾರದು ಅಂತಹ ತಪ್ಪು ಎಮಬ ನಂಬಿಕೆಯಿಂದ) ಬರೆದು ಇರುವುದನ್ನು ಕೂಡ ನೆಟ್ಟಗೆ ಓದಲಾಗಲಿಲ್ಲ.. ಅಂತೂ ಹೇಗೋ ಮುಗಿಯಿತು. ಆ ದಿನ ಮತ್ತೆ ತಲೆಕೆಡಿಸಿಕೊಂಡೆ ..ಯಾಕೆ ಹೀಗಾಯ್ತು ಎಂದು.. ಈಗ ಶುರುವಾದ ಸಮಸ್ಯೆ ನನಗೆ ಬೇರೆ ಸಮಯದಲ್ಲಿ ಕೂಡ ಕಾಡಲಾರಂಭಿಸಿತು.. ಮಾತನಾಡುವಾಗ ಬೇಕಾದ ಪದಗಳು ಬಾಯಿಗೆ ಬಾರದೆ ಒದ್ದಾಟ ಅಗುದು,ತೊದಲುವಿಕೆ,ಕೊಕ್ಕಳಿಕೆ..ಈ ಮೂರೂ ಕೂಡ ಮಕ್ಕಳಿಗೆ ಪಾಠ ಮಾಡುವಾಗ,ಸಹೋದ್ಯೋಗಿಗಳಲ್ಲಿ ಮಾತನಾಡುವಾಗ ಇರುತ್ತಿರಲಿಲ್ಲ. ಬೇರೆಡೆ ಮಾತನಾಡುವಾಗ ಈ ಸಮಸ್ಯೆ ‌...ಆದರೂ ಯಾಕೆಂದು ಗೊತ್ತಾಗಲಿಲ್ಲ... ಆದರೆ ಈ ಸಮಸ್ಯೆ ಯಿಂದ ಹೊರಗೆ ಬರಬೇಕು ಎಂದು ಸದಾ ಯತ್ನ ಮಾಡುತ್ತಿದ್ದೆ. ಎರಡು ಮೂರು ವರ್ಷ ಈ ಸಮಸ್ಯೆ ಮುಂದುವರಿಯಿತು. ಈ ಸಮಯದಲ್ಲಿ ನಾನು ಬಜಾಜ್ ಅಲಾಯನ್ಸ್ ಇನ್ಷೂರೆನ್ಸ್ ಕಂಪೆನಿಯಲ್ಲಿ ಏಜೆಂಟ್ ಆಗಿ ಸೇರಿಕೊಂಡೆ‌ ಆಗ ಕಂಪೆನಿ ಕಡೆಯಿಂದ ನಮಗೆ ಮಾತಿನ ಕಲೆ ಬಗ್ಗೆ ತರಬೇತಿ ಕಾರ್ಯಾಗಾರ ಇತ್ತು‌ ಅಲ್ಲಿ ನನಗೆ ಮಾತಿನ ಸಮಸ್ಯೆ ಆಗಲಿಲ್ಲ. ನಂತರ ಪ್ರೀ ಸಮಯದಲ್ಲಿ ಅಲ್ಲಿಗೆ ಬಂದ ತರಬೇತು ದಾರರಲ್ಲಿ ನಾನು ನನ್ನ ಮಾತಿನ ಸಮಸ್ಯೆ ಬಗ್ಗೆ ಹೇಳಿದೆಆಗ ನನಗೆ ಮಾತಿನ ಸಮಸ್ಯೆ ಕಾಡಿತು‌.(ಅವರ ಹೆಸರು ಮರೆತು ಹೋಗಿದೆ ಈಗ ) ಅವರು ಬಹಳ ಸಹೃದಯತೆಯಿಂದ ,ತಾಳ್ಮೆಯಿಂದ ನನ್ನ ಮಾತುಗಳನ್ನು ಕೇಳಿಸಿಕೊಂಡರು. ಸಮಸ್ಯೆಯ ಮೂಲದ ಬಗ್ಗೆ ಅರ್ಥ ಮಾಡಿಕೊಂಡರು. "ಲಕ್ಷ್ಮೀ ನಿಮಗೆ ಏನೂ ಸಮಸ್ಯೆ ಇಲ್ಲ..ಜಸ್ಟ್ ನಿಮಗೆ ಕೀಳರಿಮೆ ಬಾಧಿಸುತ್ತಿದೆ ಅಷ್ಟೇ, ನಿಮ್ಮ ಬಗ್ಗೆ ಬೇರೆಯವರ ಜೊತೆಯಲ್ಲಿ ಹೋಲಿಸಿಕೊಂಡು ಕೀಳರಿಮೆಯಿಂದ ಒದ್ದಾಡುತ್ತಿದ್ದೀರಿ.ಅದರಿಂದಾಗಿ ನಿಮಗಿಂತ ದೊಡ್ಡ ಹುದ್ದೆಯಲ್ಲಿ ,ದೊಡ್ಡ ಸ್ಥಾನದಲ್ಲಿ ಇರುವವರಲ್ಲಿ ಮಾತನಾಡುವಾಗ ಈ ಸಮಸ್ಯೆ ಕಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ಸ್ಥಾನ ಮಾನ ಗೌರವ ಇದೆ..ನೀವು ಯಾವ ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ..ಹೇಗೆ ಮಾಡುತ್ತೀರಿ ಎಂಬುದು ಮುಖ್ಯ.. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಕೃತಿ ಬರೆದ ಗಣಪತಿ ರಾವ್ ಐಗಳು ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು.ಇಂದು ಅವರ ಹೆಸರು ಕೃತಿ ಯನ್ನು ಉಲ್ಲೇಖಿಸದೆ ದಕ್ಷಿಣ ಕನ್ನಡದ ಇತಿಹಾಸ ಬಗ್ಗೆ ಮಾತನಾಡಲು ಬರೆಯಲು ಆಗುವುದಿಲ್ಲ. ಯುನಿವರ್ಸಿಟಿ ಗಳ ರೆಫರೆನ್ಸ್ ಪುಸ್ತಕ ಅದು. ಅದೇ ರೀತಿ ಪ್ರಸ್ತುತ ಪೂ ಶ್ರೀನಿವಾಸ ಭಟ್ ವೆಂಕಟರಾಜ ಪುಣಿಚಿತ್ತಾಯರ ಮೊದಲಾದ ಅನೇಕ ದೊಡ್ಡ ವಿದ್ವಾಂಸರು ಶಾಲಾ ಶಿಕ್ಷಕರು. ಯುನಿವರ್ಸಿಟಿ ಗಳಲ್ಲಿ ಇರುವವರು ಮಾತ್ರ ವಿದ್ವಾಂಸರಲ್ಲ.ನಿಮಗೆ ಬರೆಯುವ ಸಾಮರ್ಥ್ಯ ಇದೆ.ಹೂವಿಗೆ ಪರಿಮಳ ಇದ್ದರೆ ಅದರ ಅಸ್ತಿತ್ವ ಹೊರ ಜಗತ್ತಿಗೆ ಅರಿವಾಗಿಯೇ ಆಗುತ್ತದೆ ಅದು ಎಲ್ಲೇ ಇದ್ದರೂ..ಎಷ್ಟೋ ಜ‌ನ ರ‌್ಯಾಂಕ್ ವಿಜೇತರಿಗೆ ಕೆಲಸ ಸಿಗದೆ ಕೂಲಿ ಕೆಲಸ ಮಾಡುತ್ತಿದ್ದಾರೆ.ನಿಮಗೆ ಬಹಳ ಪ್ರತಿಷ್ಠಿತ ಚಿನ್ಮಯ ಪ್ರೌಢ ಶಾಲೆಯಲ್ಲಿ ಕೆಲಸ ಇದೆ..ಕೀಳರಿಮೆ ಯಾಕೆ..ತಲೆಯಿಂದ ಅದನ್ನು ಮೊದಲು ಹೊರಗೆ ಹಾಕಿ ಎಂದು ಅರ್ಧ ಗಂಟೆ ತಿಳುವಳಿಕೆ ಹೇಳಿದರು‌ ಹೌದು ಅಂದೇ ಕೊನೆ..ಮತ್ತೆಂದೂ ನನಗೆ ಮಾತಿನ ಸಮಸ್ಯೆ ಕಾಡಲಿಲ್ಲ..ಮುಂದೆ ಕಾಡುವುದೂ ಇಲ್ಲ.. ನಾನು ಕೀಳರಿಮೆಯಿಂದ ಹೊರಗೆ ಬಂದಿದ್ದೆ. ದೇವರು ದೊಡ್ಡವನು..ನಂತರ ನನಗೆ ಯಾವುದೇ ಕೊರತೆ ಮಾಡಲಿಲ್ಲ.. ಒಳ್ಳೆಯ ಉದ್ಯೋಗ ಮನೆ ಬದುಕು ,ಘನತೆಯ ಜೀವನ ಎಲ್ಲವನ್ನೂ ಕರುಣಿಸಿದ . ಈಗಲೂ ದೊಡ್ಡ ದೊಡ್ಡ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅತಿಥಿಯಾಗಿ,ಉಪನ್ಯಾಸ ನೀಡಲು ಹೋದಾಗ ನನ್ನ ಜೊತೆಗೆ ಆಹ್ವಾನಿತರಾದವರಲ್ಲಿ ದೊಡ್ಡ ದೊಡ್ಡ ಇಂಜಿಯರ್ಸ್ ಡಾಕ್ಟರ್ಸ್ ಪ್ರೊಫೆಸರ್ ಗಳು ಇರ್ತಾರೆ.ಅವರು ಒಳಗೆ ಬರುವಾಗಲೇ ಓಡಿ ಹೋಗಿ ಸ್ವಾಗತಿಸುವ ಹೂ ಬುಕ್ಕೆ ಕೊಡುವ ಜನರಿರ್ತಾರೆ.ಅವರ ಸುತ್ತ ಜನರು ಇರುತ್ತಾರೆ‌ ನಾನು ಒಂದು ಮೂಲೆಯಲ್ಲಿ ಅಬ್ಬೇಪಾರಿಯಂತೆ ಕುಳಿತಿರುತ್ತೇನೆ‌ ಆದರೆ ನನಗೆ ಕೀಳರಿಮೆ ಕಾಡುವುದಿಲ್ಲ..ಇದು ವೇದಿಜೆ ಏರಿ ಸರದಿಯಲ್ಲಿ ನನ್ನ ಕೈಗೆ ಮೈಕ್ ಬರುವ ತನಕ ಮಾತ್ರ ಈ ಸ್ಥಿತಿ ಎಂದು ನನಗೆ ಆತ್ಮವಿಶ್ವಾಸ ಇರುತ್ತದೆ.ನಂತರ.ವೇದಿಕೆ ಇಳಿದು ಬರುವಷ್ಟರಲ್ಲಿ ನಾನು ನಾನೇ ಆಗಿರುತ್ತೇನೆ.ಅನೇಕೆಡೆಗಳಲ್ಲಿ ಸಮಯ ಮಿತಿಯ ಕಾರಣಕ್ಕಾಗಿ ನಾನು ಮಾತನ್ನು ಮೊಟಕು ಗೊಳಿಸಿದರೆ ಸಭಿಕರಿಂದ ಪೂರ್ಣ ಮಾಹಿತಿ ನೀಡುವಂತೆ ಒತ್ತಡ ಬಂದಿದ್ದು ಮಾತನ್ನು ಮುಂದುವರಿಸಿದ ಅನೇಕ ಸಂದರ್ಭಗಳಿವೆ‌ ಅಗೆಲ್ಲ ಉತ್ತಮ ವಾಙ್ಮಯತೆಯನ್ನು ನೀಡಿದ ವಾಗ್ದೇವಿಯನ್ನು ಸ್ಮರಿಸುತ್ತೇನೆ. ಬರವಣಿಗೆ ,ವಾಙ್ಮಯತೆ God gift ಎಲ್ಲರಿಗೂ ಒಲಿಯುವುದಿಲ್ಲ.ಪ್ರತಿಯೊಂದು ವ್ಯಕ್ತಿಯಲ್ಲಿ ಒಂದಲ್ಲ ಒಂದು ಸಾಮರ್ಥ್ಯ ಇರುತ್ತದೆ.ಇದು ದೇವರ ಕೊಡುಗೆ ಆದರೆ ವಿಷಯ ಜ್ಞಾನವನ್ನು ಪಡೆದುಕೊಂಡು ಪರಿಶ್ರಮದಿಂದ ಮುಂದುವರಿಸುದು,ಅದರಲ್ಲಿ ಪರಿಣತಿಯನ್ನು ಪಡೆಯುವುದು ನಮ್ಮ ಕೈಯಲ್ಲಿದೆ‌. ಪ್ರತಿಭೆ,ಪ್ರಾಮಾಣಿಕತೆ,ಪರಿಶ್ರಮ ಮೂರು ಇದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹೆಸರಿಗಾಗಿ ಕೆಲಸ ಮಾಡಲು ಆಗುವುದಿಲ್ಲ ಒಳ್ಳೆಯ ಕೆಲಸ ಮಾಡಿದರೆ ಹೆಸರು ತನ್ನಿಂತಾನಾಗಿಯೇ ಬರುತ್ತದೆ. ಇಂದು ಭುವನೇಶ್ವರಿ ಮೇಡಂ ಸಂಸ್ಕೃತೋತ್ಸವದಲ್ಲಿ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಬಗ್ಗೆ ತಿಳಿಸಿದಾಗ ಇವೆಲ್ಲ ನೆನಪಾಯಿತು ನನಗೆ. .ಚಿಕ್ಕಂದಿನಿಂದಲೇ ನೇರ ಮಾತು ಎಂದು ಹೇಗೆ ಗುರುತಿಸಿರಬಹುದು? ನನ್ನ ಯಾವ ಮಾತುಗಳಿಂದ ನನ್ನನ್ನು ನೇರ ಮಾತು ಎಂದು ಗುರುತಿಸಿದರೋ ನನಗೆ ಗೊತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯ ಮೇಷ್ಟ್ರು ಕೊಮ್ಮ ತಿಮ್ಮಣ್ಣ ಮಾಸ್ಟ್ರು ನನ್ನ ತಂದೆಯವರಲ್ಲಿ ' ಅವಳನ್ನು ಮುಂದೆ ಲಾ ಓದಿಸಿ ಎಂದಿದ್ದರಂತೆ. ಯಾಕೆ ? ನಾನು ಹೇಗೆ ಮಾತಾಡುತ್ತಿದ್ದೆ ಎಂದು ನನಗೆ ಚೂರೂ ಗೊತ್ತಿಲ್ಲ.. ಈ ಬಗ್ಗೆ ಅಮ್ಮನಲ್ಲಿ ಒಂದು ದಿನ ಕೇಳಿದ್ದೆ.ಅದಕ್ಕೆ ಅಮ್ಮ ಒಂದು ಉದಾಹರಣೆ ತಿಳಿಸಿದರು. ನಾನಾಗ ಇನ್ನೂ ಚಿಕ್ಕ ಹುಡುಗಿ,ಆಗಷ್ಟೇ ಮಾತಾಡಲು ಕಲಿತಿದ್ದೆ,ಎಲ್ಲ ಅಕ್ಷರಗಳ ಉಚ್ಚಾರಣೆ ಬರುತ್ತಿರಲಿಲ್ಲವಂತೆ. ನನ್ನ ಚಿಕ್ಕಪ್ಪನ ಮಗಳ ಸಂಧ್ಯಾ ನನಗಿಂತ ಐದಾರು ತಿಂಗಳ ದೊಡ್ಡವಳು.ನಮಗೆ ಮಕ್ಕಳಿಗೆ ಕಾಫಿ ಕೊಡ್ತಿರಲಿಲ್ಲ .ಹಾಗಾಗಿ ಕಾಫಿ ಬೇಕು ಎಂದು ನಮ್ಮಿಬ್ಬರ ಹಠ ಚಿಕ್ಕಪ್ಪನ ಮಗಳ ಸಂಧ್ಯಾ ಅವಳ ಅಮ್ಮನಲ್ಲಿ ಎಂದರೆ ಚಿಕ್ಕಮ್ಮನಲ್ಲಿ ಕಾಫಿ ಬೇಕು ಎಂದು ಕೇಳಿದ್ದಕ್ಕೆ ಕೊಡಲಿಲ್ಲ. ಆಗ ಅವಳು ನನ್ನ ಅಮ್ಮನಲ್ಲಿ ಕಾಫಿ ಕೇಳಿದಳಂತೆ.ನನ್ನ ಅಮ್ಮನೂ ಖಾಲಿ ಆಗಿದೆ,ನಾಳೆ ಕೊಡ್ತೇನೆ ಎಂದು ಹಾಲು ಕೊಟ್ಟು ಪುಸಲಾಯಿಸಿದ್ದಾರೆ.ಅದಕ್ಕೆ ಅವಳು ದೊಡ್ಡಮ್ಮ ಕೊಳಕ್ಕಿ ಎಂದು ತನ್ನ ಬಾಲ ಭಾಷೆಯಲ್ಲಿ ನನ್ನ ಅಮ್ಮನಿಗೆ ಹೇಳಿದ್ದಾಳೆ.ಆಗ ಅಲ್ಲೇ ಇದ್ದ ನಾನು " ದೊಡ್ಡಮ್ಮ ಕೊಕ್ಕಿ ಅಲ್ಲ..ಇಕ್ಕಮ್ಮ ಕೊಕ್ಕಿ ' ಎಂದು ನಾನು ತಕ್ಷಣವೇ ಹೇಳಿದೆನಂತೆ.ಅಲ್ಲಿ ಇದ್ದ ನನ್ನ ತಂದೆ ,ತಾಯಿ, ಅಜ್ಜಿ ಚಿಕ್ಕಪ್ಪ ,ಚಿಕ್ಕಪ್ಪ "ಅಬ್ಬಾ ಇದು ಸಾಮನ್ಯದ ಕೊಕ್ಕೆಚ್ಚಿ ಅಲ್ಲ "ಎಂದು ನಗಾಡಿದರಂತೆ.ಸಾಮಾನ್ಯವಾಗಿ ಬೇರೆ‌ ಮಕ್ಕಳಾದರೆ ನೀನು ಕೊಳಕ್ಕಿ ಎನ್ನುತ್ತಿದ್ದರು ಎಂದು ಅಮ್ಮ ಹೇಳಿದ್ದರು. ಅಷ್ಟತಾನೇ ಎಂದು ಕೊಂಡೆ‌ ಈಗ್ಗೆ ಆರೇಳು ವರ್ಷಗಳ ಮೊದಲು ತಾಯಿ ಮನೆಗೆ ಹೋಗಿದ್ದಾಗ ಒಂದು ವಿಷಯ ಗಮನಿಸಿದೆ. ತಮ್ಮನ ಸಣ್ಣ ಮಗಳು ಅಭೀಷ್ಟಾ ಬಹಳ ಕರುಣಾಮಯಿ,ಮನುಷ್ಯ ಪ್ರೀತಿ ಇರುವ ಜಾಣೆ. ಆದರೆ ಗಟ್ಟಿ ನಿಲುವು ಸಣ್ಣಾಗಿರುವಾಗಲೇ‌.‌ ಅವಳೇನಾದರೂ ಕಂಬ ದಳಿ ಹತ್ತಿ ಉಪದ್ರ ಮಾಡುತ್ತಿದ್ದರೆ ಅವಳನ್ನು ಅವಳನ್ನು ಅದರಿಂದ ಹೊರಗೆ ತರುದು ಸಣ್ಣ ವಿಚಾರ ಅಲ್ಲ..ಬೈದು ಜೋರು ಮಾಡುವ ವಯಸ್ಸಲ್ಲ..ಇನ್ನೂ ಎರಡು ಮೂರು ವರ್ಷದ ಮಗು. ಬಾ..ನೀನು ಒಪ್ಪಕ್ಕ ಅಲ್ಲದಾ..ನಿನಗೆ ಗೊಂಬೆ ಕೊಡ್ತೆ..ಎಂದು ಮಂಗಾಡಿಸಲು ಹೋದರೆ ಆನು ಒಪ್ಪಕ್ಕ ಅಲ್ಲ ಕೊಕ್ಕಿ..ಎಂದು ಒಪ್ಪಿಕೊಂಡು ತಂಟೆ ಮುಮದುವರಿಸುತ್ತಾ ಇದ್ದಳು.ನಾನು ಒಪ್ಪಕ್ಕ ಅಲ್ಲ ಕೊಳಕ್ಕಿ ಎಂದು ಬಿಟ್ಟರೆ ಮತ್ತೆ ಪುಸಲಾಯಿಸುವ ಮಾತೇ ಇಲ್ಲವಲ್ಲ..ಅವಳನ್ನು ಹೊಗಳಿ ಪುಸಲಾಯಿಸಲು ಸಾಧ್ಯವೇ ಇಲ್ಲ..ಇದನ್ನು ನೋಡುತ್ತಿದ್ದ ಅಮ್ಮ " ನೋಡು ಹೀಗೆಯೇ ಇದ್ದೆ,ಹೊಗಳಿಯೂ ಸರಿ ಮಾಡಲು ಸಾಧ್ಯವಿಲ್ಲ, ಬೈದೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಿನ್ನ ಬಗ್ಗೆ ಅಜ್ಜ ಪೆಟ್ಟೊಂದು ತುಂಡೆರಡು ಎಂದು ಅಜ್ಜ ಹೇಳ್ತಾ ಇದ್ದದ್ದು ಎಂದು ಹೇಳಿ ನಗಾಡಿದರು.. ಓ ಹಾಗಾದರೆ ನಾನು ಸಣ್ಣಾಗಿರುವಾಗ ಸುಮಾರಾಗಿ ಹೇಗೆ ಇದ್ದೆ ಎಂದು ನನಗೆ ಸ್ವಲ್ಪ ಅರ್ಥ ಆಯಿತು.

Thursday 13 February 2020

ನನಗೂ ಆತ್ಮವಿದೆ : ಆಲದ ಮರಗಳು ಬೇರೆರಗಿಡಗಳ‌್ನು ಬೆಳೆಯಲು ಬಿಡುವುದಿಲ್ಲ

ರೇಡಿಯೋ ದಿನಾಚರಣೆಯ ಶುಭಾಶಯಗಳು.

ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.

ನನ್ನ ಬರವಣಿಗೆಯ ಆರಂಭಿಕ ದಿನಗಳಲ್ಲಿ ನನ್ನ ಬರವಣಿಗೆಯ ಅಭಿವ್ಯಕ್ತಿಗೆ ರೇಡಿಯೋ ಸಹಾಯ ಮಾಡಿದೆ‌..
 ಮಂಗಳೂರು ಆಕಾಶವಾಣಿಯಲ್ಲಿ ನನ್ನ ಮೂರು ನಾಲ್ಕು ಭಾಷಣಗಳು,ಐದಾರು ಕಥೆಗಳು ಪ್ರಸಾರವಾಗಿವೆ‌.
ಇನ್ನೊಂದು ಗಮ್ಮತ್ತಿದ ವಿಚಾರ ಹೇಳ್ತೇನೆ
ಬಹುಶಃ 1997 ಜನವರಿ ಪೆಬ್ರವರಿ ಇರಬಹುದು.
ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ ‌.ಸಮಯ ಸಿಕ್ಕಾಗೆಲ್ಲ‌ ಅಲ್ಲಲ್ಲಿ  ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಿದ್ದೆ‌.
ಒಂದಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶಿಕಾರಿ ಪುರ ಕೃಷ್ಣ ಮೂರ್ತಿಯವರು ನಾನು ನಡೆದುವ ಸಂಭಾಷಣಾ ಶಿಬಿರದ ಪಾಠಗಳ ಪಠ್ಯವನ್ನು ವಿಭಜಿಸಿ ಅರ್ಧ ಗಂಟೆಯ 52 ವಿಭಾಗಗಳನ್ನಾಗಿ ಮಾಡಿಕೊಡಲಯ ಹೇಳಿದರು‌.ಆಕಾಶವಾಣಿಗೆ ಬೇಕು ಎಂದರು ‌.ಸರಿ ಎಂದು ಎರಡು ಮೂರು ದಿನ ಕುಳಿತು 52 ಕಂತು ಅರ್ಧ ಗಂಟೆಗಾಗುವಷ್ಟು ಸಂಭಾಷಣೆ ಬರೆದು ಕೊಟ್ಟೆ.
ಇದಾಗಿ ಒಂದು ಮೂರು ನಾಲ್ಕು ತಿಂಗಳ ನಂತರ ಆಕಾಶವಾಣಿಯಲ್ಲಿ ಒಂದು ದಿನದ  ಸಂಸ್ಕೃತ ಪಾಠ ಮಾಡುವಂತೆ ಆಹ್ವಾನಿಸಿ ನನಗೆ ಪತ್ರ ಬಂದು ಪಾಠ .ಯಾವ ಅಂಶವನ್ನು ಹೊಂದಿರಬೇಕು ಎಂದು ಕೂಡ ತಿಳಿಸಿದ್ದರು.
ನಾನು ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮಾದರಿಯಲ್ಲಿ ಬರೆದು ಅಭ್ಯಾಸ ಮಾಡಿಸಿ ರೆಕಾರ್ಡಿಂಗ್ ಗೆ ಹೋದೆ.
ಅಲ್ಲಿ ಶರಭೇಂದ್ರ ಸ್ವಾಮಿಯವರಲ್ಲಿ ಮಾತಿನ ನಡುವೆ ರೇಡಿಯೋ ಸಂಸ್ಕೃತ ಪಾಠದ ಪಠ್ಯವನ್ನು ನಾನು ತಯಾರಿಸಿ ಕೊಟ್ಟ ಬಗ್ಗೆ ಹೇಳಿದೆ.ಆಗ ನೋಡಬೇಕಿತ್ತು ಅವರ ಮುಖದಲ್ಲಿ ನನ್ನ ಬಗೆಗಿನ ಅಪನಂಬಿಕೆ..ನನ್ನನ್ನು ವಿಚಿತ್ರವಾಗಿ  ನೋಡುತ್ತಾ
ಶಿಕಾರಿಪುರ ಕೃಷ್ಣ ಮೂರ್ತಿ,ಜಿ ಎನ್ ಭಟ್ ಮೊದಲಾದವರೆಲ್ಲ ಸೇರಿ ತಯಾರಿಸಿದ ಪಠ್ಯ ಇದು ಎಂದರು‌.
ಆಗ ಪಠ್ಯ ತಯಾರಿಸಿದ ನನ್ನ ಬಗ್ಗೆ ಒಂದಕ್ಷರವನ್ನು ಕೂಡ ಹೇಳದೆ ದೊಡ್ಡವರು ಅದರ ಕ್ರೆಡಿಟ್‌ ಅನ್ನು ತಾವೇ ಪಡೆದುಕೊಂಡಿದ್ದಾರೆ ಎಂದು ನನಗೆ ಅರ್ಥವಾಯಿತು.
ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.