Saturday 4 May 2019

ನನ್ನೊಳಗೂ ಒಂದು ಆತ್ಮವಿದೆ : ಭಾಗ 11 ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ


ಚಿತ್ರ : 1997 ರಲ್ಲಿ ಹವ್ಯಕ ಮಹಾ ಸಭೆಯಲ್ಲಿ ಅದೇ ನಾಟಕವನ್ನು ಮಾಡಿದ್ದು,ಸುಬ್ಬನ ಪಾತ್ರದಲ್ಲಿ ನಾನು ಮತ್ತು ಸುಬ್ಬಿಯ ಪಾತ್ರದಲ್ಲಿ ಪುಷ್ಪಕ್ಕ( ಖ್ಯಾತ ಡೆಂಟಿಸ್ಟ್ ಖಂಡಿಗೆ ಡಾ.ಕೃಷ್ಣ ಭಟ್ ಅವರ ಮಡದಿ)
ನನ್ನೊಳಗೂ ಒಂದು ಆತ್ಮವಿದೆ : ಭಾಗ 11
ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ
ಇಂದು ಫೇಸ್ ಬುಕ್ ಮೂಲಕ ಗೆಳೆಯರಾದ ಜಯಲಕ್ಷ್ಮಿ ಅವರು ತಾವು ಸ್ವಾಮೀಜಿಯವರು ನೀಡಿದ ನಿಂಬೆಹಣ್ಣು ಮತ್ತು ಭರವಸೆಯ ನುಡಿ ನಂಬಿ ಓದಿ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ವಿಚಾರವನ್ನು ಹಂಚಿಕೊಂಡಿದ್ದರು‌.ತಕ್ಷಣವೇ ನನಗೂ ಇಂತಹ ಒಂದು ಪ್ರೇರಣೆ ಸಿಕ್ಕಿದ್ದು ನೆನಪಾಯಿತು.
ಆಗ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ ಎಂದು ನೆನಪು.ನಾನು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆ ಮೀಯಪದವಿನಲ್ಲಿ ಪಡೆದಿದ್ದೆ.ನನ್ನ ಅಜ್ಜನ ಮನೆ ಮೀಯಪದವು ಶಾಲೆಗೆ ಹತ್ತಿರದಲ್ಲಿ ಇದೆ.ಹಾಗಾಗಿ ಎರಡನೇ ತರಗತಿಯಿಂದ ನಾಲ್ಕನೇ ತರಗತಿ ತನಕ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಓದಿ ನಂತರ ಅಜ್ಜನ ಮನೆಯಿಂದ ಮೀಯಪದವು ಶಾಲೆಗೆ ಹೋಗಿದ್ದೆ.ಅಲ್ಲಿ ತನಕ ಸಾಮಾನ್ಯ ಹಳ್ಳಿ ಬೆಪ್ಪು ತಕ್ಕಡಿಯಾಗಿದ್ದ ನನ್ನ ಬದುಕಿನಲ್ಲಿ ಬಹು ದೊಡ್ಡ ತಿರುವು ಸಿಕ್ಕಿತು. ಅಷ್ಟರ ತನಕ ನಾನು ಕಲಿಕೆಯಲ್ಲಿ ಕೂಡ ತೀರಾ ಜಾಣ ವಿದ್ಯಾರ್ಥಿನಿ ಅಲ್ಲ.ತರಗತಿಯಲ್ಲಿ ಇದ್ದ ಹದಿನಾರು ಹದಿನೇಳು ಮಂದಿಯಲ್ಲಿ ನನಗೆ ಆರೋ ಏಳನೆಯದೋ ರ‍‍್ಯಾಂಕ್ ಬರುತ್ತಾ ಇತ್ತು.ಆರೋಗ್ಯ ಸರಿ ಇಲ್ಲದ ಕಾರಣ ಯಾವುದೇ ಆಟಗಳಲ್ಲಿ ಭಾಗವಹಿಸುತ್ತಾ ಇರಲಿಲ್ಲ ( ಈ ಬಗ್ಗೆ ಇನ್ನೊಂದು ದಿನ ಬರೆಯುವೆ) ಅಥವಾ ನನ್ನನ್ನು ಸೇರಿಸಿಕೊಳ್ಳುತ್ತಾ ಇರಲಿಲ್ಲ ಎಂದರೆ ಸರಿಯಾದೀತು.
ಐದನೇ ತರಗತಿಗೆ ಬರುವಷ್ಟರಲ್ಲಿ ನನ್ನ ತಲೆ ಹುಣ್ಣಿನ ಸಮಸ್ಯೆ ಪರಿಹಾರವಾಗಿತ್ತು‌.ಸಾವಿನ ದವಡೆಯಿಂದ ಪಾರಾಗಿದ್ದೆ‌.
ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ವಿಧಾನವೇ ಬೇರೆ,ಅಲ್ಲಿಯ ಶಿಕ್ಷಕರು ಇತರರಂತಲ್ಲ.ನಾಲಿಗೆ ಎಳೆದರೂ ಒಂದಕ್ಷರ ಬಾರದ,ಒಂದು ಹೆಜ್ಜೆ ಹಾಕಲು ಅರಿಯದ ನಮಗೆ ನಾಟಕ ಭಾಷಣ ಏಕಪಾತ್ರಾಭಿಯ ,ನೃತ್ಯ ಹೇಳಿಕೊಟ್ಡು ಬಾಲಕಲೋತ್ಸವಕ್ಕೆ ಕರೆದೊಯ್ದು ನಮಗೆ ವೇಷಭೂಷಣ ಹಾಕಿಸಿ,ಬಣ್ಣ ಹಾಕಿ ಸ್ಪರ್ಧೆಯಲ್ಲಿ ಗೆಲ್ಲುವ ಹಾಗೆ ಮಾಡುತ್ತಿದ್ದರು.ನಮಗೆ ಬಹುಮಾನ ಬಂದಾಗ ನಮ್ಮ ಶಿಕ್ಷಕರಾದ ಸರೋಜಿನಿ ಟೀಚರ್ ಶ್ರೀಧರ್ ಮಾಷ್ಟ್ರು, ಶ್ರೀನಿವಾಸ ಮಾಷ್ಟ್ರು, ವಸಂತ ಮಾಷ್ಟ್ರು ಪುಷ್ಪವಲ್ಲಿ ಟೀಚರ್ ,ನಾವಡ ಮಾಷ್ಟ್ರು ಸೇರಿದಂತೆ ಎಲ್ಲರೂ ತಮಗೆ ರಾಷ್ಟ್ರ ಪ್ರಶಸ್ತಿ ಬಂದ ಹಾಗೆ ಸಂಭ್ರಮಿಸುತ್ತಾ ಇದ್ದರು.ನಾನು ಏಳನೇ ತರಗತಿಯಲ್ಲಿ ಇದ್ದಾಗ ಪಿಳ್ಳಂಗೋವಿಯ ಚೆಲುವ ಕೃಷ್ಣನ.. ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಹೇಳಿ ಕೊಟ್ಟು ಬಾಲಕಲೋತ್ಸವದಲ್ಲಿ ಬಹುಮಾನ ಬರುವಂತೆ ಮಾಡಿದ್ದರು.ಈ ನೃತ್ಯದಲ್ಲಿ ನಾನು ಕೃಷ್ಣನ ಪಾತ್ರವನ್ನು ಮಾಡಿದ್ದೆ.ಈಗೆಲ್ಲ ಕೃಷ್ಣ ವೇಷ ಧರಿಸಿದ ಮುದ್ದು ಪುಟಾಣಿಗಳನ್ನು ನೋಡುವಾಗೆಲ್ಲ ನಾನು ಹೀಗೆ ಕಂಡಿರಬಹುದೇ ಹಾಗೆ ಇದ್ದೆನಾ ಎಂದು ಯೋಚಿಸುತ್ತೇನೆ.ಆಗ ಫೋಟೋ ಗಿಟೋ ತೆಗೆಯಲು ಯಾರಲ್ಲಾದರೂ ಕ್ಯಾಮರಾ ಇದ್ದರೆ ತಾನೇ ? ನಾನು ಕೊನೆಯ ಪಕ್ಷ ಕನ್ನಡಿಯಲ್ಲಿ ಕೂಡ ಮುಖ ನೋಡಿಕೊಂಡಿಲ್ಲ ಅಥವಾ ನೋಡಿದ್ದರೂ ಈಗ ನನಗೆ ನೆನಪಿನಲ್ಲಿ ಉಳಿದಿಲ್ಲ. ಆ ದಿನ ನೃತ್ಯ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿದ ಬೇರೆ ಶಾಲೆಯ ಹುಡುಗಿ ವೇದಿಕೆ ಪಕ್ಕ ಇದ್ದಳು.ಅವಳ ಮುಖ ನನಗೆ ನೆನಪಿದೆ ಅವಳು ತುಂಬಾ ಮುದ್ದಾಗಿ ಕಾಣುತ್ತಿದ್ದಳು. ನನಗೆ ಮುಖಕ್ಕೆ ಬಣ್ಣ ಹಾಕಿ ಕೃಷ್ಣ ವೇಷ ಹಾಕಿದ ಶ್ರೀನಿವಾಸ ಮಾಷ್ಟ್ರು, ಸರೋಜ ಟೀಚರ್ ಅವಳನ್ನು ನೋಡಿ ನಮ್ಮ ಕೃಷ್ಣನಿಗೆ ಅವಳು ಸರಿಗಟ್ಟಲಾರಳು ಎಂದು ಮೆಲ್ಲಗೆ ಮಾತಾಡಿಕೊಂಡಿದ್ದರು.ಅದು ಕೇಳಿ ನನಗೆ ಬಹಳ ಖುಷಿ ಆಗಿತ್ತು. ನಾನು ತುಂಟ  ಕೃಷ್ಣನಾಗಿ ನಗುತ್ತಾ ನೃತ್ಯ ಮಾಡಬೇಕೆಂದು ಸರೋಜಾ ಟೀಚರ್ ಹೇಳಿದ್ದರು.ಆದರೆ ಕೃಷ್ಣ ಹೇಗೆ ನಗುತ್ತಾನೆ ಎಂಬ ಬಗ್ಗೆ ಚಿತ್ರದಲ್ಲಿ ಕೂಡ ನನಗೆ ನೋಡಿ ಗೊತ್ತಿರಲಿಲ್ಲ. ನಾನು ನನ್ನ ಚೆಟ್ಟು ಹಲ್ಲು ಕಾಣುವ ಹಾಗೆ ನಗುವ ಅಭಿನಯ ಮಾಡುತ್ತಿದ್ದೆ.ಕೊನೆಗೆ ಸರೋಜಾ ಟೀಚರ್ ಕೃಷ್ಣ ಮುಗುಳು ನಗಬೇಕು ಅದು ಹೀಗೆ ಎಂದು ಅವರು ಮುಗುಳು ನಗುವಿನ ಅಭಿನಯವನ್ನು ಮಾಡಿ ತೋರಿಸಿ ನನಗೆ ಕಲಿಸಿದ್ದರು.
ವಸಂತ ಮಾಷ್ಟ್ರು ಮತ್ತು ಸರೋಜಾ ಟೀಚರ್ ತಾಳ ಟಂಕಿ ಜೊತೆಯಲ್ಲಿ ಹಾಡಿದ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡಿಗೆ ಹೆಜ್ಜೆ ಹಾಕಿ ನಾವು ಬಹುಮಾನ ಪಡೆದೆವು.ನನ್ನ ಜೊತೆಯಲ್ಲಿ ಗೋಪಿಕಾ ಸ್ತ್ರೀಯರಾಗಿ ಹೇಮ ಮಾಲಿನಿ,ಕೃಷ್ಣ ವೇಣಿ,ಹರಿಣಾಕ್ಷಿ ಮತ್ತು ಇನ್ನೊಬ್ಬಳು ( ಹೆಸರು ಮರೆತು ಹೋಗಿದೆ) ಹೆಜ್ಜೆ ಹಾಕಿದ್ದರು.ಆಗ ನಾವು ಬಹುಮಾನ ಪಡೆದೆವೆಂದು ಬೀಗಿದ್ದೆವು.ಆದರೆ ಈಗ ಗೊತ್ತಾಗುತ್ತಿದೆ..ಅದು ನಮಗೆ ಸಿಕ್ಕ ಬಹುಮಾನವಲ್ಲ..ಅದರ ಗರಿಮೆ ನಮ್ಮ ಶಿಕ್ಷಕರಿಗೆ ಸೇರಿದ್ದು ಎಂದು. ಜೊತೆಗೆ ಅದೇ ವರ್ಷ ಶಾಲೆಯ ವಾರ್ಷಕೋತ್ಸವದಲ್ಲಿ  ಯಮ ಗರ್ವ ಭಂಗ ನಾಟಕವನ್ನು ನಮಗೆ ಹೇಳಿಕೊಟ್ಟು ಮಾಡಿಸಿದ್ದರು.ಅಂದು ಮತ್ತೊಮ್ಮೆ ವಾರ್ಷಕೋತ್ಸವದಲ್ಲಿ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡಿಗೆ ಮತ್ತೆ ಕೃಷ್ಣ ನಾಗಿ ಹೆಜ್ಜೆ ಹಾಕಿದೆ.ಕೊನೆಯಲ್ಲಿ ಗೋಪಿಕಾ ಸ್ತ್ರೀ ಯರ ನಡುವೆ ಕೊಳಲು ಹಿಡಿದು ನಿಂತ ಅಭಿನಯ ಇತ್ತು.ಅಂದು ವಾರ್ಷಿಕೋತ್ಸವಕ್ಕೆ ಬಂದ ನನ್ನ ಅಣ್ಣ ನಂತರ ನೀನು ಕೊನೆಯಲ್ಲಿ ಕೃಷ್ಣ ಕೊಳಲು ಊದುವ ಭಂಗಿಯಲ್ಲಿ ಗೋಪಿಕಾ ಸ್ತ್ರೀ ಯರ ನಡುವೆ ನಂತದ್ದು ಭಾರೀ ಚಂದ ಕಾಣುತ್ತಾ ಇತ್ತು..ನನಗೆ ಈಗಲೂ ಕಣ್ಣಿಗೆ ಕಾಣುತ್ತಿದೆ ಎಂದು ಹೇಳಿದ್ದ.ಅದೆಲ್ಲ ನೆನಪಾಗುವಾಗ ನಾನು ಕೃಷ್ಣ ನಾಗಿ ಹೇಗೆ ಕಾಣಿಸಿದ್ದೆ ಎಂಬ ಕುತೂಹಲ ನನಗೆ ಆಗಾಗ ಕಾಡುತ್ತದೆ.
ಯಮ ಗರ್ವ ಭಂಗ ನಾಟಕದಲ್ಲಿ ನಾನು ಬಲರಾಮನಾಗಿ ಗೆಳತಿ ಹೇಮಮಾಲಿನಿ( ಈಗ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ) ಕೃಷ್ಣ ನಾಗಿ ಅಭಿನಯಿಸಿದ್ದೆವು.
ಜೊತೆಗೆ ಆಟೋಟ ಸ್ಪರ್ಧೆಗಳಲ್ಲಿ ಕೂಡ ತರಬೇತಿ ನೀಡಿ ನಮ್ಮನ್ನು ಸ್ಪರ್ಧೆಗೆ ಕರೆದೊಯ್ಯುತ್ತಾ ಇದ್ದರು.ಹಾಗಾಗಿ ನಾನು ಡಿಸ್ಕ್ ಎಸೆತ ಮತ್ತು ಎತ್ತರ ಜಿಗಿತದಲ್ಲಿ ಹಲವಾರು ಬಹುಮಾನ ಪಡೆದಿದ್ದೆ.
ಏಳನೇ ತರಗತಿಯಲ್ಲಿ ಓದುತ್ತಿರುವಾಗ ಬಹುಶಃ ಓಣಂ ರಜೆಯ ಸಂದರ್ಭದಲ್ಲಿ ನಾವು ಅಜ್ಜನ ಮನೆಯಲ್ಲಿ ಆಟಕ್ಕಾಗಿ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚಿಸಿ ಅಭಿನಯಿಸಿದ್ದೆ.ಇದು ಗೊತ್ತಾಗಿ ವಸಂತ ಮಾಷ್ಟ್ರು ನನ್ನಲ್ಲಿ ಆ ನಾಟಕವನ್ನು ಅಭಿನಯಿಸಿ ತೋರಿಸುವಂತೆ ಶಾಲೆಯಲ್ಲಿ ಹೇಳಿದ್ದರು‌.ನಾನೆ ರಚಿಸಿದ ಕಾರಣ ನಾಟಕದಲ್ಲಿನ  ಆರೂ ಪಾತ್ರಗಳ ಸಂಭಾಷಣೆ ನನಗೆ ಬಾಯಿಗೆ ಬರುತ್ತಿತ್ತು. ಇಡೀ ನಾಟಕವನ್ನು ನಾನೊಬ್ಬಳೇ ಏಕ ಪಾತ್ರಾಭಿನಯದ ಮಾದರಿಯಲ್ಲಿ ಅಭಿನಯಿಸಿ ತೋರಿಸಿ ಅವರಿಂದ ಮೆಚ್ಚುಗೆ ಪಡೆದಿದ್ದೆ.ಇದಾಗಿ ಮೂವತ್ತು ವರ್ಷಗಳ ನಂತರ ಅದೇ ನಮ್ಮ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿ ರಚಿಸಿ ಹಠಮಾರಿ ಹುಡುಗಿ  ಯಃಕಶ್ಚಿತ್ ಲಕ್ಷ್ಮೀ  ಡಾ.ಲಕ್ಷ್ಮೀ ಜಿ ಪ್ರಸಾದ ಆಗಿ ಬದಲಾಗಲು ಪ್ರೇರಣೆ ನೀಡಿದ  ಶಿಕ್ಷಕರಿಗೆ ಅರ್ಪಣೆ ಮಾಡಿದ್ದೆ.
ನಾನು ಎಂಟನೇ ತರಗತಿಗೆ ಶ್ರೀ ವಾಣಿ ವಿಜಯ ಹೈಸ್ಕೂಲ್  ಕೊಡ್ಲ ಮೊಗರಿಗೆ ಸೇರಿ ತಾಯಿ ಮನೆಯಿಂದ ಶಾಲೆಗೆ ಹೋಗುತ್ತಿದ್ದೆ.
ಇಲ್ಲಿ ನಾನು ಆ ನಾಟಕವನ್ನು ಯುವಜನೋತ್ಸವದ ಸ್ಪರ್ಧೆಯಲ್ಲಿ ಮಾಡಿದೆ.ವಾಣಿ ವಿಜಯ ಪ್ರೌಢ ಶಾಲೆಯ ವಾತಾವರಣ ಮೀಯಪದವು ಶಾಲೆಗಿಂತ ತುಂಬಾ ಭಿನ್ನವಾಗಿತ್ತು.ಇಲ್ಲಿ ನಮಗೆ ಯಾವುದಕ್ಕೂ ಬೆಂಬಲ ಇರಲಿಲ್ಲ. ಬಹುಶಃ ಸರ್ಕಾರದ ಆದೇಶ ಇದ್ದ ಕಾರಣ ಯುವಜನೋತ್ಸವ ಮಾಡಿ ಒಂದಷ್ಟು ಸ್ಪರ್ಧೆಗಳನ್ನು ಕಷ್ಟದಲ್ಲಿ ನಡೆಸುತ್ತಾ ಇದ್ದರು.ಇಲ್ಲಿ ನಮಗೆ ತರಬೇತಿ ಪ್ರೋತ್ಸಾಹ ಎಂತದೂ ಇರಲಿಲ್ಲ. ಆದರೂ ನಾನು ಒಂದು ತಂಡ ಕಟ್ಟಿ ನಾಟಕದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.ಇಲ್ಲಿ ಹುಡುಗಿಯರು ವೇದಿಕೆ ಏರಲು ಹಿಂದೇಟು ಹಾಕುತ್ತಿದ್ದರು. ಅಂತೂ ಇಂತೂ ಕೆಲವರ ಮನ ಒಲಿಸಿ ನಾಟಕ ಹೇಳಿಕೊಟ್ಟು ಸಿದ್ಧ ಪಡಿಸಿದ್ದೆ.ನಮಗೆ ಅಭ್ಯಾಸ ಮಾಡಲು ಕೂಡ ಶಾಲಾ ಅವಧಿಯಲ್ಲಿ ಅವಕಾಶ ಇರಲಿಲ್ಲ. ಶಾಲೆ ಮುಗಿದ ನಂತರ ನಾವು ಬಯಲಿನಲ್ಲಿ ನಿಂತು ಅಭ್ಯಾಸ ಮಾಡಿದ್ದೆವು.ಶಾಲೆಯ ಕೊಠಡಿಯ ಒಳಗಡೆ ಅದಕ್ಕೆಲ್ಲ ಅವಕಾಶ ಇರಲಿಲ್ಲ. ಜೊತೆಗೆ  ಶರವು  ಮಹಾ ಗಣಪತಿ ಹಾಡಿಗೆ ಒಂದು ಪೂಜಾ ನೃತ್ಯಕ್ಕೂ ಹೆಜ್ಜೆ ಜೋಡಿಸಿ ತಯಾರಾಗಿದ್ದೆ.ನಾನು ಮೀಯಪದವು ಶಾಲೆಯಲ್ಲಿ ಇದ್ದಾಗ ಬೇರೆ ಮಕ್ಕಳಿಗೆ ಅಲ್ಲಿನ ಶಿಕ್ಷಕರು ಕಲಿಸಿದ್ದ ಒಂದು ಜಿಪ್ಸಿಗಳೆ ನಿಮ್ಮ ನಾವು ಮೊದಲು ಕಂಡಾಗ ಎಂಬ ಹಾಡಿನ ನೃತ್ಯವನ್ನು ಅಲ್ಲಿಯೇ ಐದು ಆರನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಹುಡುಗಿಯರಿಗೆ ಹೇಳಿ ಕೊಟ್ಟು ಸ್ಪರ್ಧೆಗೆ ತಯಾರು ಮಾಡಿದ್ದೆ. ಈ ಹುಡುಗಿಯರ ಹೆಸರು ಮರೆತು ಹೋಗಿದೆ ಒಬ್ಬಳು ನಮ್ಮ ಮನೆ ಪಕ್ಕದ ನಳಿನಿ ಇರಬೇಕು ಜೊತೆಗೆ ರಾಜೇಶ್ವರಿ ಎಂಬ ಇನ್ನೊಂದು ಹುಡುಗಿಗೆ ಒಂದು ಪೂಜಾ ನೃತ್ಯ ಹೇಳಿ ಕೊಟ್ಟಿದ್ದೆ.
ಯುವಜನೋತ್ಸವದ ಮೊದಲ ಹಂತ ಶಾಲೆಯ ಒಳಗೆ ಸ್ಪರ್ಧೆ. ಇಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನ ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಕರೆದು ಕೊಂಡು ಹೋಗಬೇಕಿತ್ತ ಎಂದು ನೆನಪು. ವಾಣಿ ವಿಜಯ ಹೈಸ್ಕೂಲ್ ನಲ್ಲಿ ಶಾಲೆಯ ಒಳಗೆ ಯುವಜನೋತ್ಸವ‌ ಮಾಡಿ ಸ್ಪರ್ಧೆ ನಡೆಸಿ ಬಹುಮಾನ ಕೊಡುತ್ತಾ ಇದ್ದದ್ದೇ ಕಷ್ಟದಲ್ಲಿ. ಇನ್ನು ನಮಗೆ ತರಬೇತಿಯನ್ನು ನೀಡಿ ಅಂತರ್ಶಾಲಾ ಸ್ಪರ್ಧೆಗೆ ಕರೆದೊಯ್ಯುವ ಮಾತೆಲ್ಲಿ ?
ಇರಲಿ ನನಗಾಗ ಇದನ್ನೆಲ್ಲ ಅರ್ಥಮಾಡಿಕೊಳ್ಳುವ ವಯಸ್ಸಲ್ಲ.ಮೀಯಪದವು ಶಾಲೆಯ ಹಾಗೇ ಇಲ್ಲೂ ಎಂದು ಭಾವಿಸಿದ್ದೆ‌.ಮೊದಲಿನಿಂದಲೂ ನಾನು ಒಂಚೂರು ಅತ್ಯುತ್ಸಾಹದ ಹುಡುಗಿ ಆಗಿದ್ದೆ ಕಾಣಬೇಕು.
ಯುವಜನೋತ್ಸವಕ್ಕೆ ಎರಡು ದಿನ ಇರುವಾಗ ಸುಬ್ಬಿ ಪಾತ್ರ ಮಾಡಿದ ಹುಡುಗಿ ಶೋಭಾ ನಾನು ನಾಟಕದಲ್ಲಿ ಮಾಡುವುದಿಲ್ಲ ಎಂದು ನಿರಾಕರಿಸಿದಳು.ಆಗ ಸುಬ್ಬನ ಸ್ನೇಹಿತನ ಪಾತ್ರವನ್ನು ಅಭ್ಯಾಸ ಮಾಡಿದ್ದ ಹೇಮಾಳಿಗೆ ಸುಬ್ಬಿ ಪಾತ್ರದ ಎಲ್ಲ ಸಂಭಾಷಣೆ ಬಾಯಿಗೆ ಬರುತ್ತಾ ಇತ್ತು‌‌.ಅವಳು ಸುಬ್ಬಿ ಪಾತ್ರ ಮಾಡಲು ಒಪ್ಪಿದಳು. ನನ್ನದ ಸುಬ್ಬ ಪಾತ್ರ .ಸ್ನೇಹಿತರ ಜಾಗಕ್ಕೆ ಇಬ್ಬರನ್ನು ಹೇಗೋ ಹುಡುಕಾಡಿ ಹೊಂದಾಣಿಕೆ ಮಾಡಿದೆವು.ಇಲ್ಲಿ ನನ್ನಂತೆ ಉತ್ಸಾಹದ ಹುಡುಗಿ ( ಈಗ ತಕ್ಷಣಕ್ಕೆ ಹೆಸರು ಬಾಯಿಗೆ ಬರುತ್ತಾ ಇಲ್ಲ) ಈಗ ಸುಂಕದ ಕಟ್ಟೆಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾರೆ.ನಾನು ಕೇರಳ ತುಳು ಅಕಾಡೆಮಿಯ ಕಾರ್ಯಕ್ರಮ ದಲ್ಲಿ ಇತ್ತೀಚೆಗೆ ಭೇಟಿ ಮಾಡಿ ಮಾತಾಡಿರುವೆ‌
 ಹೇಮಾಳಿಗೆ ಒಂದು ಕೊರವಂಜಿ ನೃತ್ಯ ಕೂಡ ಹೇಳಿ ಕೊಟ್ಟಿದ್ದೆ.ಅಂತೂ ಇಂತೂ ಯುವಜನೋತ್ಸವದ ಸ್ಪರ್ಧೆಯಲ್ಲಿ ನಮ್ಮ ನಾಟಕ ಪ್ರಥಮ ಬಹುಮಾನ ಪಡೆಯಿತು. ಸ್ಪರ್ಧಿಸಿದ್ದು ನಮ್ಮದು ಸೇರಿ ಮೂರು ತಂಡ ಅಷ್ಟೇ ,ಹುಡುಗಿಯರ ತಂಡ ನಮ್ಮದು ಮಾತ್ರ .ಜೊತೆಗೆ ನನ್ನ ಪೂಜಾ ನೃತ್ಯ ಮತ್ತು ಹೇಮಾಳ ಕೊರವಂಜಿ ನೃತ್ಯಕ್ಕೆ ಬೇರೆ ಸ್ಪರ್ಧಿಗಳು ಇರಲಿಲ್ಲ, ನಮಗೆ ಫಸ್ಟ್ ಸೆಕೆಂಡ್ ಬಹುಮಾನ ಕೊಟ್ಟರು.ಜಿಪ್ಪಿಗಳೆ ನಾವು ನಿಮ್ಮ ಮೊದಲು ಕಂಡಾಗ ಹಾಡಿಗೆ ನಾನು ಹೇಳಿ ಕೊಟ್ಟ ನೃತ್ಯವನ್ನು ಆ ಇಬ್ಬರು ಸಣ್ಣ ಹುಡುಗಿಯರು ಮಾಡಿದರು.ಅವರಿಗೂ ಬೇರೆ ಸ್ಪರ್ಧಿಗಳೇ ಇರಲಿಲ್ಲ, ಬಹುಶಃ ಅವರಿಗೆ ವಿಶೇಷ ಬಹುಮಾನ ಕೊಟ್ಟಿಬಹುದು.ಅಥವಾ ಮೊದಲ ಬಹುಮಾನ ಎಂದೇ ಕೊಟ್ಟಿದ್ದರೋ ಏನೋ ಗೊತ್ತಿಲ್ಲ.
ಇದು ಬಿಟ್ಟರೆ ಕಂಠ ಪಾಠ ಸ್ಪರ್ದೆ ಇತ್ತು‌.ಇದಕ್ಕೆ ಹತ್ತು ಹನ್ನೆರಡು ಜನ ಸ್ಪರ್ಧಿಗಳು ಇರುತ್ತಿದ್ದರು. ನಾನು ಈ ವಿಭಾಗದಲ್ಲೂ ಬಹುಮಾನ ಪಡೆದಿದ್ದೆ‌
ಅಂದಿನ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಬಂದಿದ್ದ ಅಲ್ಲಿನ ನಿವೃತ್ತ ಹಿಂದಿ ಶಿಕ್ಷಕರೂ ಸಾಹಿತಿಗಳೂ ಆಗಿದ್ದ ವಿಶ್ವೇಶ್ವರ ಭಟ್ ನಮ್ಮ ನಾಟಕವನ್ನು ನೋಡಿದ್ದು ಸಮಾರೋಪ ಭಾಷಣದಲ್ಲಿ ಇಂದು ಸುಬ್ಬನ ಪಾತ್ರ ವಹಿಸಿದ ಹುಡುಗಿಗೆ ದೊಡ್ಡ ಭವಿಷ್ಯ ಇದೆ   ಎಂದು ನನ್ನ ಕುರಿತು ಮೆಚ್ಚುಗೆಯ ಮಾತನ್ನು ಹೇಳಿದರು.

ಇದು ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಅವರಿಗೆ ನಾನು ಯಾರೆಂದು ಗೊತ್ತಿರಲಿಲ್ಲ. ಸುಬ್ಬನ ಪಾತ್ರವನ್ನು ಮಾತ್ರ ನೋಡಿದ್ದರು.ನನ್ನ ಹೆಸರು ಗೊತ್ತಿಲ್ಲದ ಕಾರಣ ಪಾತ್ರದ ಹೆಸರು ಹೇಳಿ ಮೆಚ್ಚುಗೆ ಮಾತು ಹೇಳಿದ್ದರು.ಎಲ್ಲಾ ಶಿಕ್ಷಕರೂ,ವಿದ್ಯಾರ್ಥಿಗಳೂ ದೊಡ್ಡದಾಗ ಕ್ಲಾಪ್ ಹಾಕಿದರು.
ಸಭೆಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತು ಕೇಳುತ್ತಿದ್ದ ನನಗೆ ರೋಮಾಂಚನವಾಯಿತು.
ಹೌದು ಅವರು ಹೇಳಿದ ಮಾತನ್ನು ಗಟ್ಟಿಯಾಗಿ ನೆಚ್ಚಿಕೊಂಡೆ.ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ.ಅಂದರೆ ನಾನು ಎಲ್ಲರಂತೆ ಸಾಮಾನ್ಯ ಳಾಗಿ ಇರುವುದಿಲ್ಲ, ನನಗೆ ದೊಡ್ಡ ಭವಿಷ್ಯ ಇದೆ ಎಂದು ನಾನು ನಂಬಿದೆ‌.
ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ
ಹುಡುಗಿ ಏನು ಓದಿದರೇನು ? ಅವಳಿಗೆ ಒಲೆ ಬೂದಿ ಗೋರುವ ಕೆಲಸ ತಪ್ಪದು ಎಂಬ ಮಾತು ನಮ್ಮಲ್ಲಿ ಪ್ರಚಲಿವಿತ್ತು.ಆದರೆ ಅಂದು ನಾನು ಕೇವಲ ಒಲೆ ಬೂದಿ ಗೋರಲು ಲಾಯಕ್ಕಾದವಳಾಗಿ ಉಳಿಯುವಿದಿಲ್ಲ..ನಾನು ಮುಂದೆ ತುಂಬಾ ಓದಬೇಕು ,ನನಗೆ ದೊಡ್ಡ ಭವಿಷ್ಯ ಸಿಗುತ್ತದೆ ಎಂದು ನಿರ್ಧರಿಸಿದೆ..
ಎಸ್ ಎಸ ಎಲ್ ಸಿಯಲ್ಲಿ ಫಸ್ಟ್ ಕ್ಲಾಸ್ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದೆ.ಮುಂದೆ ಓದಿದೆ. ಇಂದು ದೊಡ್ಡ ಭವಿಷ್ಯ ಸಿಗದೇ ಇದ್ದರೂ ಕೂಡ ನಾನು ನನ್ನತನವನ್ನು ಪಡೆಯುವಷ್ಟು ಭವಿಷ್ಯವನ್ನು ಪಡೆದೆ.
ಈ ನಾಟಕ ನಡೆಯುವಾಗ ಒಂದು ಪ್ರಮಾದ ಆಗಿ ಸಭೆಯಲ್ಲಿದ್ದವರೆಲ್ಲ ನಗಾಡಿದ್ದರು.ಸುಬ್ಬನಿಗೆ ಇಬ್ಬರು ಸ್ನೇಹಿತರಯ.ಅವರು ಬಂದಾಗ ವೆಲ್ ಕಂ್ ಮೈ ಫ್ರೆಂಡ್ಸ್,ಪ್ಲೀಸ್ ಬಿ ಸೀಟೆಡ್ ಎಂದು ಹೇಳಿದಾಗ ಅವರು ಕುಳಿತುಕೊಳ್ಳಬೇಕೆಂದು ಹೇಳಿಕೊಟ್ಟಿದ್ದೆ.ಆದರೆ ಅವರಿಗೆ ಕುಳಿತುಕೊಳ್ಳಲು ಅಲ್ಲಿ ಒಂದು ಖುರ್ಚಿ ಮಾತ್ರ ಇತ್ತು.ಇಬ್ಬರೂ ಒಂದೇ ಕುರ್ಚಿಯಲ್ಲಿ  ಕುಳಿಯರು.ಅದು ಎರಡು ಕೈ ಇರುವ ಹಳೆಯ ಮರದ ಕುರ್ಚಿ. ಮುರಿಯದ್ದು ನಮ್ಮ ಪುಣ್ಯ! ನಂತರ ಅವರು ಎದ್ದು ನಿಂತು ಮಾತನಾಡಲು ಇದೆ.ಏಳ ಹೊರಟಾಗ ಟೈಟ್ ಆಗಿ ಇಬ್ಬರಿಗೂ ಏಳಲಾಗುತ್ತಿಲ್ಲ..ಇವರ ಪರಿಸ್ಥಿತಿ ನೋಡಿ ಸಭೆಯ ಮಂದಿದ ಜೊತೆಯಲ್ಲಿ ಇವರುಗಳು ನಗುತ್ತಿದ್ದಾರೆ.ನನಗೋ ಆತಂಕ ಸಿಟ್ಟು.ಕುರ್ಚಿಯ ಹಿಂಭಾಗ ನಿಂತು ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ಒಬ್ಬಳ ಬೆನ್ನಿಗೆ ಕುಟ್ಟಿದೆ.ಒಬಗಬಳು ಎದ್ದಳು.ಅಲ್ಲಿಗೆ ಸಮಸ್ಯೆ ಪರಿಹಾರ ಆಯ್ತು.ಅವರಿಬ್ಬರೂ ಏಕ ಕಾಲಕ್ಕೆ ಮೇಲೇಳಳು ಯತ್ನ ಮಾಡಿದ್ದರಿಂದ ಹೀಗಾಗಿತ್ತು.ತಪ್ಪು ನನ್ನದೇ ನಾನು ಅವರಿಗೆ ಕುಳಿಕೊಳ್ಳಲು ಎರಡು ಕುರ್ಚಿ ಇಡಬೇಕಾಗಿತ್್ತಯ.ಮೊದಲ ಬಾರಿಗೆ ವೇದಿಕೆ ಏರಿದ ಅವರಿಗೆ ಗೊಂದಲ ಆದದ್ದು ಸಹಜ..ನಕ್ಕದ್ದು ಮಾತ್ರ ಆಗ ತೀವ್ರ ಕೋಪ ಯರಿಸಿತ್ತು.ಆದರೆ ಸುಬ್ಬನಾಗಿ ವೇದಿಕೆ ಮೇಲೆ ಇದ್ದೆ ..ತೋರಿಸುವ ಹಾಗೆ ಇರಲಿಲ್ಲ.. ಈಗ ನೆನೆದರೆ ನಗು ಬರುತ್ತಿದೆ..ಅಂತೂ ಇಂತೂ ನಾಟಕ ಮಾಡಿ ಮೊದಲ ಬಹುಮಾನ ಪಡೆದು ಸ್ವರ್ಗ ಸಿಕ್ಕಂತೆ ಬೀಗಿದ್ದೆವು ನಾವು.

Thursday 2 May 2019

ನನ್ನೊಳಗೂ ಒಂದು ಆತ್ಮವಿದೆ ಭಾಗ 10 ಕಿವಿ ಕೇಳಿಸುತ್ತಿದ್ದರೂ ನನಗೆ ಕಿವಿ ಕೇಳಿಸುವುದಿಲ್ಲ ಎಂದ ಅಕ್ಕಮ್ಮಜ್ಜಿಯ ಪ್ರೀತಿಯನ್ನು ಹೇಗೆ ತಾನೇ ಮರೆಯಲಿ



ಚಿತ್ರ ಕೃಪೆ : ಅಂತರ್ಜಾಲ
ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದಿನ ಮಾತಿದು.ನನ್ನ ಓದಿನ ಕಾರಣಕ್ಕೆ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡು ಎಕ್ಕಾರಿನ ಒಂದು ರೂಮಿನ ಮೋಟು ಗೋಡೆಯ  ಗೆದ್ದಲು ಹಿಡಿದ ಮಣ್ಣಿನ ಮನೆಯನ್ನು ನೂರ ಐವತ್ತು ರುಪಾಯಿ ಬಾಡಿಗೆಗೆ ಹಿಡಿದಿದ್ದೆವು.ಅದಕ್ಕಿಂತ ಒಳ್ಳೆಯ ಮನೆ ನಮ್ಮ ಬಜೆಟ್ ಗೆ ಸಿಕ್ಕಲು ಸಾಧ್ಯವಿರಲಿಲ್ಲ. ಈ ಮನೆಯಲ್ಲಿ ಇದ್ದದ್ದು  ಒಂದು ಕೊಠಡಿ ಸುಮಾರು ಎಂಟಡಿ ಅಗಲ ಹತ್ತು ಹನ್ನೆರಡಡಿ ಉದ್ದ ಇದ್ದಿರಬಹುದು. ಅದರ ಒಂದು ತುದಿಯಲ್ಲಿ ಮೂರಡಿ ಎತ್ತರಕ್ಕೆ ಒಂದು ಸಣ್ಣ ಗೋಡೆ.ಅದರ ಆಕಡೆ ಅಡಿಗೆ ಮನೆ,ಅದಕ್ಕೆ ತಾಗಿಕೊಂಡು ಸ್ನಾನದ ಮನೆ.ಇದು ಮೂರುಅಡಿ ಉದ್ದ ಮೂರಡಿ ಅಗಲ ಇದ್ದಿರಬಹುದು.
ನಮ್ಮ ಈ ಮನೆಯ ಎತ್ತರ ಸುಮಾರು ಎಂಟು ಹತ್ತಡಿ ಇದ್ದಿರಬಹುದು. ಆದರೆ ಗೋಡೆ ಮಾತ್ರ ಆರಡಿ ಎತ್ತರ ಇತ್ತು.ಒಂದು ಕುರ್ಚಿ ತಗೊಂಡು ಹತ್ತಿ ಆಕಡೆಗೆ ಇಣುಕಿದರೆ ಆ ಕಡೆಯ ಇಳಿಸಿ ಕಟ್ಟಿದ ಜೋಪಡಿ ಕಾಣುವಂತೆ ಇತ್ತು.ಆದರೆ ಹತ್ತಿ ನೊಡಲು ನಮ್ಮಲ್ಲಿ ಖುರ್ಚಿಯಾಗಲಿ ಮಂಚವಾಗಲೀ ಇರಲಿಲ್ಲ. ಹಾಗಾಗಿ ಅಲ್ಲಿ ಏನಿದೆ ಎಂದು ಸುಮಾರು ಸಮಯ ಗೊತ್ತಿರಲಿಲ್ಲ. ಅಲ್ಲಿ ಒಂದು ಅಜ್ಜಿ ಮತ್ತು ಅವರ ಬುದ್ಧಿ ಮಾಂದ್ಯ ಮಗ ವಾಸಮಾಡುತ್ತಿದ್ದರು.ಆ ಮಗನಿಗೆ ಅಮವಾಸ್ಯೆ ಹತ್ತಿರ ಬಂದಂತೆಲ್ಲ ಕೋಪ ಆಕ್ರೋಶ ಹೆಚ್ಚಾಗುತ್ತಾ ಇತ್ತು ಏನೇನೋ ಕೂಗಾಡುತ್ತಾ ಇದ್ದ.
ಅದಿರಲಿ.ನಮ್ಮದು ಅರ್ಧ ಗೋಡೆಯ ಮನೆ ಆದ ಕಾರಣ ಸಣ್ಣ ಸದ್ದಾದರೂ ಆ ಕಡೆಗೆ ಕೇಳುವಂತೆ ಇತ್ತು..ನಾವು ಅಲ್ಲಿಗೆ ಬಂದು ಒಕ್ಕಲಾದ ಒಂದೆರಡು ದಿನಗಳಲ್ಲೇ ಅಕ್ಕಮ್ಮಜ್ಜಿ ತನ್ನ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಬಹಳ ಇಷ್ಟವಾದರು.ಅವರು ಮಾತನಾಡುತ್ತಾ ನನಗೆ ಕಿವಿ ಕೇಳಿಸುವುದಿಲ್ಲ ಮಗಾ.ಇನ್ನು ನನ್ನ ‌ಮಗ ಮಲಗಿದ ತಕ್ಷಣ ನಿದ್ದೆ ಮಾಡುತ್ತಾನೆ.ಅವನಿಗೇನೂ ಗೊತ್ತಿಲ್ಲ ಸಣ್ಣ ಮಗುವಿನ ಬುದ್ಧಿ  ಅವನದು( ಇದು ಸತ್ಯದ ವಿಚಾರವೇ ಆಗಿತ್ತು) ಆದರೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದು ಶುದ್ಧ ಸುಳ್ಳು.ಆದರೆ ಹೊಸತಾಗಿ ಮದುವೆಯಾಗಿ ಬಂದು ಸಂಸಾರ ಹೂಡಿದ  ನಮಗೆ ಸಂಕೋಚವಾಗಬಾರದೆಂಬ ಸದುದ್ದೇಶದಿಂದ ಅವರು ಹಾಗೆ ಹೇಳಿದ್ದರು.
ಅಕ್ಕಮ್ಮಜ್ಜಿ ಬಹಳ ಸಹೃದಯಿ. ಆಗಾಗ ನಮ್ಮ ಮನೆ ಅಂಗಳ ಗುಡಿಸಿ ಮನೆಗೆ ಹತ್ತಿದ ಗೆದ್ದಲು ತೆಗೆಯಲು ಸಹಾಯ ಮಾಡುತ್ತಿದ್ದರು ‌.ನಮ್ಮ ‌ಮನೆಯ ಓನರ್ ನಾಗವೇಣಿ ಅಮ್ಮನವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಅವರ ಮೊದಲ ‌ಮಗ ಬುದ್ಧಿ ಮಾಂದ್ಯ.ಆದರೆ ಎರಡನೇ ಮಗ ಮುಂಬಯಿಯಲ್ಲಿ  ಒಳ್ಳೆಯ ಕೆಲಸದಲ್ಲಿ ಇದ್ದ ,ಒಳ್ಳೆಯ ಆದಾಯವೂ ಇತ್ತು.ಆತ ತನ್ನ ತಾಯಿಯನ್ನು ಎಂದರೆ ಅಕ್ಕಮ್ಮಜ್ಜಿ ಯನ್ನು ಮುಂಬಯಿಗೆ ಕರೆದುಕೊಂಡು ಹೋಗಲು ತಯಾರಿದ್ದ ಆದರೆ ಬುದ್ಧಿ ಮಾಂದ್ಯನಾದ ಅಣ್ಣನನ್ನು ಕರೆದುಕೊಂಡು ಹೋಗಲು ತಯಾರಿರಲಿಲ್ಲ.ಆತನನ್ನು ನೋಡಿಕೊಳ್ಳುವ ಸಲುವಾಗಿ ಅಕ್ಕಮ್ಮಜ್ಜಿ ಎಕ್ಕಾರಿನಲ್ಲಿ ಕೂಲಿ ಮಾಡುತ್ತ ಇಳಿಸಿ ಕಟ್ಟಿದ ಅಡಿಕೆ ಮರದ ಸೋಗೆಯ ಜೋಡಿಯಲ್ಲಿ ದೊಡ್ಡ ‌ಮಗನೊಂದಿಗೆ ಬದುಕುತ್ತಾ ಇದ್ದರು.ನಾನಿರುವ ತನಕ ಮಗನನ್ನು ಬೀದಿ ಪಾಲಾಗಲು ಬಿಡುವುದಿಲ್ಲ ,ಮುಂದೆ ದೇವರು ಇಟ್ಟಂತೆ ಆಗುತ್ತದೆ ಎಂದು ಹೇಳುತ್ತಾ ಇದ್ದರು.ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ದೊಡ್ಡದಾಗಿ ನೋವಿನಿಂದ ನರಳಿದ ದೊಡ್ಡ ‌ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದ.ಅದೇ ಜೋಪಡಿಯ ಈ ಕಡೆ ಇದ್ದ ನಾವು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಎದೆ ಬಡಿತ ,ಮತ್ತು ನಾಡಿ ಬಡಿತ ನಿಂತಿತ್ತು. ಆರಂಭದಲ್ಲಿ ಎದೆ ಬಡಿದು ಅತ್ತ ಅಕ್ಕಮ್ಮಜ್ಜಿ ನಂತರ ನಾನು ಇರುವಾಗಲೇ ಮಗ ಸತ್ತಿದ್ದು ಒಳ್ಳೆದಾಯಿತು‌.ಇಲ್ಲವಾದರೆ ನನ್ನ ನಂತರ  ಊಟ ತಿಂಡಿ,ಸ್ನಾನ ಆಸರೆ ಇಲ್ಲದೆ ಹುಣ್ಣಾಗಿ ಸಾಯಬೇಕಿತ್ತು.ನನ್ನನ್ನು ಸಣ್ಣ ಮಗ ನೋಡಿಕೊಂಡಾನು ಎಂದು ಸಮಾಧಾನ ಮಾಡಿಕೊಂಡಿದ್ದರು.ನಂತರ ದೊಡ್ಡ ಮಗನ ಅಂತ್ಯ ಸಂಸ್ಕಾರಕ್ಕೆ ಬಂದ ಸಣ್ಣ ‌ಮಗ ಎಕ್ಕಾರು ನಾಗವೇಣಿ ಅಮ್ಮನವರಿಗೆ " ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ " ಎಂದು ಮಾತು ಕೊಟ್ಟು ಮುಂಬಯಿಗೆ ಕರೆದುಕೊಂಡು ಹೋಗಿದ್ದ.ಮುಂದೇನಾತು ತಿಳಿಯದು.ಬಹುಶಃ ಮಗ ಚೆನ್ನಾಗಿ ನೋಡಿಕೊಂಡಿರಬಹುದು.ಕೆಲ ತಿಂಗಳ ಹಿಂದೆ ಹೊಸತಾಗಿ ಸಂಸಾರ ಹೂಡಿದ ಆತ್ಮೀಯರಾದ ಪರಶುರಾಮ ಯತ್ನಾಳ್( ಹೈ ಕೋರ್ಟ್ ನ್ಯಾಯವಾದಿ) ಮನೆಗೆ ಹೋಗಬೇಕೆಂದು ಕೊಂಡಾಗ ಅಕ್ಕಮ್ಮಜ್ಜಿ ಮತ್ತು ತೀರಾ ಕಡಿಮೆ ಬಾಡಿಗೆಗೆ ಮನೆ ಕೊಟ್ಟ  ನಾಗವೇಣಿ ಅಮ್ಮನವರ ಸಹೃದಯತೆ ನೆನಪಾಗಿಇದನ್ನು  ಬರೆದಿದ್ದೆ,ಈಗ ಆತ್ಮಕಥೆ ಗೆ ಜೋಡಿಸಿರುವೆ - ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪದವಿ ಪೂರ್ವ ಕಾಲೇಜು

ನನ್ನೊಳಗೂ ಒಂದು ಆತ್ಮವಿದೆ ಭಾಗ 9 ಆತ್ಮ ಕಥೆಯೆಂದರೆ ಬರಿಯ ಗೋಳಲ್ಲ


ಇತ್ತೀಚೆಗೆ ಫಲಿತಾಂಶಗಳು ಅಂತರ್ಜಾಲದ ಮೂಲಕ ಮಕ್ಕಳಿಗೆ ಸಿಗುತ್ತವೆ‌.ನಮ್ಮ ಕಾಲದಲ್ಲಿ ಹಾಗಿರಲಿಲ್ಲ.
ನಮ್ಮ ಹತ್ತನೇ ತರಗತಿಯ ಪಬ್ಲಿಕ್ ಪರೀಕೆಯ ಫಲಿತಾಂಶದ ದಿನ ಹೇಗೋ ನಮಗೆ ಗೊತ್ತಾಗುತ್ತಾ ಇತ್ತು.ನಮ್ಮ ಮನೆಗೆ ಪತ್ರಿಕೆ ತರಿಸುತ್ತಾ ಇರಲಿಲ್ಲ. ಬಹುಶಃ ಹೆಡ್ ಮಾಷ್ಟ್ರು ತರಿಸ್ತಾ ಇದ್ರೋ ಏನೋ.ಅದರ ಮೂಲಕ ನಮ್ಮ ಫಲಿತಾಂಶದ / ಪಾಸ್ ಫೈಲ್ ದಿನ ಗೊತ್ತಾಗುತ್ತಾ ಇದ್ದಿರಬಹುದು .ಬಾಯಿ ಮಾತಿನ ಮೂಲಕ ನನಗೂ ಗೊತ್ತಾಗಿತ್ತು.ನನ್ನ ತಂದೆ ತಾಯಿ ಅಕ್ಕ ಅಣ್ಣನಿಗೆ ನನ್ನ ಬಗ್ಗೆ ತುಂಬಾ ನಂಬಿಕೆ ಇತ್ತು.ಹಾಗಾಗಿ ಅವರು ನನ್ನಷ್ಟು ಆತಂಕಕ್ಕೆ ಒಳಗಾಗಿರಲಿಲ್ಲ‌.ಆದರೆ ನನಗೆ ಗಣಿತದ ಎರಡನೇ ಪತ್ರಿಕೆ  ಮತ್ತು ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ತುಂಬಾ ಆತಂಕ ಇತ್ತು.ವಾಸ್ತವವಾಗಿ ಗಣಿತ ನನ್ನ ಆಸಕ್ತಿಯ ವಿಚಾರ.ಆದರೆ ಒಂಬತ್ತನೇ ತರಗತಿಯಲ್ಲಿ ನಡೆದ ಒಂದು ವಿಚಾರದಿಂದ ನಾನು ಶಾಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೆ.ಅದರ ಪರಿಣಾಮವಾಗಿ ನಾನು ಕಲಿಕೆಯಲ್ಲಿ ತುಸು ಹಿಂದೆ ಬಿದ್ದಿದ್ದೆ.ಅದರಲ್ಲೂ ಗಣಿತದಲ್ಲಿ ಹಿಂದೆ ಬಿದ್ದಿದ್ದೆ.ಬಹುಶಃ ನಾನು ಹೋಮ್ ವರ್ಕ್ ಮಾಡುತ್ತ ಇರಲಿಲ್ಲ. ಮಾಡದ ಬಗ್ಗೆ ವಿಚಾರಿಸುವ ಮೇಷ್ಟ್ರು ಗಳು ನಮ್ಮ ವಾಣಿವಿಜಯ ಹೈಸ್ಕೂಲ್ ನಲ್ಲಿ ಒಬ್ಬಿಬ್ಬರು ಮಾತ್ರ ಇದ್ದರು.ನಮ್ಮ ಕೆಮೆಷ್ಟ್ರಿ ಮಾಷ್ಟ್ರು ಅಮೈ ಸುಬ್ರಹ್ಮಣ್ಯ ಭಟ್ ಒಳ್ಳೆಯ ಶಿಕ್ಷಕರಾಗಿದ್ದರು‌.ಜೊತೆಗೆ ದಿನ ದಿನ ಕಲಿತುಕೊಂಡು ಬರುವುದು ನಮಗೆ ಅನಿವಾರ್ಯ ಆಗಿತ್ತು. ಬಹುಶಃ ಅವರ ಕೆಮೆಷ್ಟ್ರಿ ವಿಷಯದಲ್ಲಿ ಯಾರೂ ಫೈಲ್ ಅಗುತ್ತಾ ಇರಲಿಲ್ಲ ‌ಅಂತೆಯೇ ಫಿಸಿಕ್ಸ್ ಪಾಠ ಮಾಡುತ್ತಿದ್ದ ಅಮೈ ಕೃಷ್ಣ ಮಾಷ್ಡ್ರು ಕೂಡ ಶಿಸ್ತಿನ ಸಿಪಾಯಿ. ದಿನ ನಿತ್ಯ ಹಿಂದಿನ ದಿನದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದರು.ಅವರು ಕಷ್ಟದ ವಿಚಾರವನ್ನು ಕೂಡ ಬಹಳ ಸುಲಭ ಎನಿಸುವಂತೆ ಲೀಲಾಜಾಲವಾಗಿ ನಮಗೆ ಅರ್ಥ ಮಾಡಿಸುತ್ತಿದ್ದರು.ಹಾಗಾಗಿ ಇವೆರಡು ವಿಷಯಗಳಲ್ಲಿ ನನಗೆ ಉತ್ತಮ ಅಂಕಗಳು ಬರುತ್ತಾ ಇದ್ದವು.ಸಮಾಜ ಶಾಸ್ತ್ರಕ್ಕೆ ತೊಟ್ಟೆತ್ತೋಡಿ ಮಾಸ್ಟರ್ ಇದ್ದರು‌.ಅವರು ಪಾಪದ ಮಾಷ್ಟ್ರು ಹಾಗಾಗಿ ನಾವು ನೋಟ್ಸ್ ಬರೆಯುತ್ತಾ ಇದ್ದೇವಾ ಓದುತ್ತಾ ಇದ್ದೇವಾ ಎಂಬುದನ್ನು ಗಮನಿಸಿ ಎರಡೇಟು ಬೆನ್ನಿಗೆ ಕೊಡುತ್ತಾ ಇರಲಿಲ್ಲ ಜೊತೆಗೆ ನನಗೆ ಆಗ ಇತಿಹಾಸ ಭೂಗೋಳ ಇತ್ಯಾದಿ ಆಸಕ್ತಿಯ ವಿಚಾರಗಳು ಆಗಿರಲಿಲ್ಲ. ಇವುಗಳ ನಡುವೆ ಕಬ್ಬಿಣದ ಕಡಲೆಯಾದದ್ದು ಇಂಗ್ಲಿಷ್.ನಿಜಕ್ಕೂ ನಾನು ಸಂಸ್ಕೃತ ಉಪನ್ಯಾಸಕಿಯಾಗಿ ಅಲೋಶಿಯಸ್ ಕಾಲೇಜಿಗೆ ಸೇರುವ ತನಕವೂ is was ಗಳ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ಅಲ್ಲಿ ಸಂಸ್ಕೃತ ವನ್ನು ಇಂಗ್ಲಿಷ್ ಮಾಧ್ಯಮ ದಲ್ಲಿ ಪಾಠ ಮಾಡಬೇಕಿತ್ತು.ಆಗ ಪ್ರಸಾದ್ ಮತ್ತು ಹಿಂದಿ ಉಪನ್ಯಾಸಕಿ ಜೂಡಿ ಮೇಡಂ ನನಗೆ ಸ್ವಲ್ಪ ಇಂಗ್ಲಿಷ್ ಹೇಳಿಕೊಟ್ಟರು .ನಮ್ಮ ಶಾಲೆಯ ಇಂಗ್ಲಿಷ್ ಶಿಕ್ಷಕರು ಕನ್ನಡದಲ್ಲಿ ಇಂಗ್ಲಿಷ್ ಅನ್ನು ಒಂದಿನಿತೂ ಕನ್ನಡದಲ್ಲಿ ಹೇಳದ ಕಾರಣ ಇಂಗ್ಲಿಷ್ ಪಾಠಗಳಲ್ಲಿ ಏನು ಕಥೆ ಇತ್ತು, ವಿಷಯ ಇತ್ತು ಎಂಬುದೇ ನನಗೆ ಗೊತ್ತಿರಲಿಲ್ಲ. ಆಗಿನ್ನೂ ಗೈಡ್ ಗಳು ಬಂದಿರಲಿಲ್ಲವೋ ಅಥವಾ ನಮಗೆ ಅಂತಹದ್ದೊಂದು ಇದೆ ಎಂದು ಗೊತ್ತಿರಲಿಲ್ಲವೋ ಏನೋ ಒಟ್ಟಿನಲ್ಲಿ ನಮಗೆ ಗೈಡ್‌ ಸಿಕ್ಕಿರಲಿಲ್ಲ.
ಇಂಗ್ಲಿಷ್ ಎರಡನೇ ಪತ್ರಿಕೆಯನ್ನು ಅಮೈ ಕೃಷ್ಣ ‌ಮಾಷ್ಟ್ರು ಪಾಠ ಮಾಡಿದ್ದರು. ಹಾಗಾಗಿ ಕಥೆ ಸುಮಾರಾಗಿ ಅರ್ಥವಾಗಿತ್ತು.ಟಾಲ್ ಸ್ಟಾಯ್ ಯ ಯಾವುದೋ ಒಂದು ನೀಳ್ಗಥೆಯನ್ನು ಎರಡನೇ ಪತ್ರಿಕೆಗೆ ಸಿಲಬಸ್ ಮಾಡಿದ್ದರು. ಕಥೆ ಅರ್ಥವಾದ ಕಾರಣ ಪ್ರಶ್ನೆಗಳಿಗೆ ಉತ್ತರ ಬರೆಯಬಲ್ಲವಳಾಗಿದ್ದೆ..ಆದರೆ ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ಆತಂಕ ಇತ್ತು.
ಫಲಿತಾಂಶದ ದಿನ ಬೆಳಗ್ಗೆಯೇ ನಾವೆಲ್ಲ ಹೋಗಿ ಶಾಲೆಯಲ್ಲಿ ಕಾಯುತ್ತಾ ಇದ್ದೆವು.ತರಗತಿ ಪರೀಕ್ಷೆಗಳಲ್ಲಿ ಸುಮಂಗಲ,ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮತ್ತು ನಾನು ಪ್ರತಿಸ್ಪರ್ಧಿ ಗಳಾಗಿದ್ದೆವು.ಸಾಮಾನ್ಯವಾಗಿ ಸುಮಂಗಲ ‌ಮೊದಲ ಸ್ಥಾನ ಪಡೆಯುತ್ತಿದ್ದಳು.ಎರಡನೇ ಸ್ಥಾನಕ್ಕಾಗಿ ನಿಶಾ ಮತ್ತು ನನ್ನೊಳಗೆ ಪೈಪೋಟಿ ಇತ್ತು.ಸುಮಂಗಲ ಸುಶಿಕ್ಷಿತರ ಮನೆ ಹುಡುಗಿಯಾಗಿದ್ದಳು.ನಿಶಾನ ತಂದೆ ಯಾವುದೋ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹಾಗಾಗಿ ಅವರಿಗೆ ಮನೆಯಿಂದ ಕಲಿಕೆಗೆ ಹೆಚ್ಚಿನ ಬೆಂಬಲ ಇತ್ತು.
ಫಲಿತಾಂಶದ ದಿನ ನಾವೆಲ್ಲ ಹೆಡ್ ಮಾಷ್ಟ್ರು ಕೊಠಡಿಯ ಹೊರಗೆ ಜಾತಕ ಪಕ್ಷಿಗಳಂತೆ ಕಾಯುತ್ತಾ ಇದ್ದೆ.ಆಗ ಹೆಚ್ಚು ಬಸ್ ಗಳು ಇರಲಿಲ್ಲ. ನಮ್ಮ ಹೆಡ್ ಮಾಷ್ಟ್ರು ಕಾಸರಗೋಡಿಗೆ ಹೋಗಿ ಫಲಿತಾಂಶವನ್ನು ಕಟ್ಟೆತ್ತಲ ಬಸ್ಸಿನಲ್ಲಿ ತರಬಹುದು ಎಂದು ಕಾಯುತ್ತಾ ಇದ್ದೆವು.ಅದು ಬರುವಾಗ ಮಧ್ಯಾಹ್ನ ಆಗುತ್ತಾ ಇತ್ತು..
ಆ ದಿನದ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗುತ್ತಾ ಇತ್ತು.ಅಂತೂ ಇಂತೂ ಕಟ್ಟತ್ತಲ ಬಸ್ ಬಂತು .ನಮ್ಮ ಹೆಡ್ ಮಾಷ್ಟ್ರು ಒಂದು ದೊಡ್ಡ ಫೈಲ್ ಅನ್ನು ಹಿಡಿದುಕೊಂಡು ಬಂದು ಅವರ ಕೊಠಡಿ ಹೊಕ್ಕರು.ನಮ್ಮಲ್ಲಿ ಪಿನ್ ಡ್ರಾಪ್ ಸೈಲೆನ್ಸ್.. ಒಳಗಿನಿಂದ ಸುಮಂಗಲ, ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮೊದಲಾದವರ ಹೆಸರುಗಳನ್ನು ಹೇಳಿದ್ದು ಕೇಳಿಸಿತು.ನನ್ನ ಹೆಸರು ಹೇಳಿದ್ದು ಕೇಳಿಸಲಿಲ್ಲ.ನನ್ನ ಎದೆ ನನಗೇ ಕೇಳಿಸುವಷ್ಟು ದೊಡ್ಡದಾಗಿ ಬಡಿದುಕೊಳ್ಳುತ್ತಾ ಇತ್ತು.ಮತ್ತೆ ಸ್ವಲ್ಪ ಹೊತ್ತಿನಲ್ಲಿ ರಿಸಲ್ಟ್ ನಲ್ಲಿ ಪಾಸಾದವರ ಪಟ್ಟಿಯನ್ನು ಹೆಡ್ ಮಾಷ್ಟ್ರು ಕೊಠಡಿಯ ಹೊರಭಾಗದ ನೋಟೀಸ್ ಬೋರ್ಡ್ ಗೆ ತಂದು ಅಂಟಿಸಿದರು.
ಅಬ್ಬಾ!ಬಚಾವ್ ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾದವರ ಪಟ್ಟಿಯಲ್ಲಿ ಇದ್ದೆ.ಆಗ ನನಗಾದ ಸಂತಸವನ್ನು ವರ್ಣಿಸಲಾರೆ.ಅದು ಶಬ್ದಾತೀತವಾದುದು! ಈಗಿನಂತೆ ಆಗ ಫಲಿತಾಂಶ ಬಂದ ದಿನವೇ ನಮಗೆ ಅಂಕಗಳು ಗೊತ್ತಾಗುತ್ತಿರಲಿಲ್ಲವೆಂದು ಕಾಣುತ್ತದೆ.ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದರೂ ನನಗೆ ಎಷ್ಟು ಅಂಕಗಳು ಬಂದಿವೆ ಎಂದು ತಿಳಿದಿರಲಿಲ್ಲ. ಜೊತೆಗೆ ನಮ್ಮೊಳಗೆ ಸ್ಪರ್ಧೆ ಇತ್ತಲ್ಲ! ಹಾಗಾಗಿ ಯಾರು ಫಸ್ಟ್ ,ಸೆಕೆಂಡ್, ಥರ್ಡ್ ಎಂದು ತಿಳಿಯುವ ಕುತೂಹಲ ಕೂಡ ಇತ್ತು.
ಹೊರಗಡೆ ಹಾಕಿದ ಫಲಿತಾಂಶದ ಪಟ್ಟಿಯಲ್ಲಿ ಸುಮಂಗಲ, ನಿಶಾ,ವಿಜಯರ ಹೆಸರಿನ ಮುಂದೆ ಒಂದು ಸಣ್ಣ ಟಿಕ್ ಮಾರ್ಕ್ ಇತ್ತು.ಹಾಗಾಗಿ ಮೊದಲ ಮೂರು ಸ್ಥಾನ ಅವರಿಗೆ ಸಿಕ್ಕಿದೆ ಎಂದು ನಾವುಗಳು ಉಹಿಸಿದೆವು.ನನಗೊಂಚೂರು ಪೆಚ್ಚು ಕೂಡ ಆಯಿತು. ಮೊದಲ ಸ್ಥಾನ ಗಳಿಸಬೇಕೆಂದು  ಕೊನೆ ಗಳಿಗೆಯಲ್ಲಿ ಹಗಲು ರಾತ್ರಿ ಓದಿದ್ದೆ.ನನ್ನ ತಂದೆ ತಾಯಿ ಅಷ್ಟೊಂದು ಓದಿದವರಲ್ಲ ಹಾಗಾಗಿ ಗಣಿತ ಮತ್ತು ಇಂಗ್ಲಿಷ್ ಅನ್ನು ನನಗೆ ಅರ್ಥ ಮಾಡಿಸುವವರು ಇರಲಿಲ್ಲ. ಸುಮಂಗಲ, ನಿಶಾ,ವಿಜಯರಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಹೇಳಿ ಕೊಡುವವರು ಇದ್ದರು.
ಹಾಗಾಗಿ ಅವರುಗಳೇ ಮೊದಲ ಮೂರು ಸ್ಥಾನ ಗಳಿಸಿರಬಹುದೆಂದು ಊಹಿಸಿದೆ.
ಹಾಗೆಯೇ ಮನೆಗೆ ಬಂದು ಹೇಳಿದೆ ಕೂಡ. ಕೇವಲ ಟಿಕ್ ಮಾರ್ಕ್ ಇತ್ತು ಅನ್ನುವ ಕಾರಣಕ್ಕೆ ಅವರಿಗೇ ಮೊದಲ ಮೂರು ಸ್ಥಾನ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನನ್ನ ತಂದೆ ತಾಯಿ ನನಗೆ ಧೈರ್ಯ ತುಂಬಿದರು.ಮರುದಿನ ಮಾರ್ಕ್ಸ್ ತಿಳಿಸುತ್ತೇವೆ ಎಂದು ಹೇಳಿದ್ದರು. ಹಾಗೆ ಬೆಳಗ್ಗೆಯೇ ಶಾಲೆಗೆ ಹೋದೆ.
ನನ್ನ ಊಹೆ ತಪ್ಪಾಗಿತ್ತು‌.ನಿರೀಕ್ಷೆಯಂತೆ ಸುಮಂಗಲಳಿಗೆ‌ ಮೊದಲ ಸ್ಥಾನ ಬಂದಿತ್ತು.ನಾನು ಎರಡನೇ ಸ್ಥಾನ ಪಡೆದಿದ್ದೆ.ಮತ್ತು  ಆಗಿನ ಕಾಲಕ್ಕೆ ಉತ್ತಮ ಅಂಕಗಳನ್ನು (408/600) ಪಡೆದಿದ್ದೆ.ಮನೆಯಲ್ಲಿ ಸಂಭ್ರಮವೋ ಸಂಭ್ರಮ.ನನ್ನ ಫಲಿತಾಂಶವನ್ನು ಹೇಳುವ ಸಲುವಾಗಿಯೇ ನನ್ನ ತಂದೆಯವರು ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬಂದಿದ್ದರು!
ಕೇರಳದ ಫಲಿತಾಂಶ ತಡವಾಗಿ ಬರುತ್ತದೆ ಕರ್ನಾಟಕ ರಾಜ್ಯದ ಫಲಿತಾಂಶ ಬೇಗ ಬರುತ್ತಾ ಇತ್ತು‌.ಹಾಗಾಗಿ ನಾವು‌ ಮೊದಲೇ ಅರ್ಜಿ ತಂದು ಇಡಬೇಕಾಗಿತ್ತಂತೆ ಈ ವಿಚಾರ ನಮಗೆ ಗೊತ್ತಿರಲಿಲ್ಲ. ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ನನಗೆ ಮಂಗಳೂರಿನ ಗವರ್ನಮೆಂಟ್ ಕಾಲೇಜಿನ ಅರ್ಜಿ ತಂದು ಕೊಟ್ಟರು.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಡ್ಮಿಶನ್ ಗೆ ಯತ್ನ ಮಾಡಿದೆನಾದರೂ ನನಗೆ ಅಲ್ಲಿ ಸೀಟ್ ಸಿಗಲಿಲ್ಲ. ಇದಾಗಿ ಆರೇ ವರ್ಷಗಳಲ್ಲಿ ನಾನು ಅದೇ ಸಂತ ಅಲೋಶಿಯಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಹುದ್ದೆಗೆ ಅಯ್ಕೆಯಾಗಿ ಉಪನ್ಯಾಸಕಿ ಆದ್ದು ನನ್ನ ಬದುಕಿನ ಒಂದು ಅವಿಸ್ಮರಣೀಯ ಘಟನೆ ಅಂದು ಕಲಿಕೆಗೆ ಅವಕಾಶ ಸಿಗದಿದ್ದರೂ ನಂತರ ಅದೇ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಸಲು ಅರ್ಹತೆ ಪಡೆದು ಕಲಿಸಿದ್ದು ಬದುಕಿನಲ್ಲಿ ಹೀಗೂ ಆಗುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು.
ಬೇರೆಡೆ ಸೀಟ್ ಸಿಗದ ಕಾರಣ ಗವರ್ನಮೆಂಟ್ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜಿಗೆ) ಸೇರಿದೆ
ನಮ್ಮ ತರಗತಿಯಲ್ಲಿ ತೊಂಬತ್ತೊಂಬತ್ತು ಶೇಕಡಾ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ಓದಿದವರಾಗಿದ್ದರು.ಆದರೆ ಇಲ್ಲಿನ ಉಪನ್ಯಾಸಕರು ಮಾತ್ರ ಸಾಕ್ಷಾತ್ ಇಂಗ್ಲೆಂಡ್ ನಿಂದ ಉದುರಿದವರ ಹಾಗೆ ಇದ್ದರು‌.ಒಂದಕ್ಷರ ಕನ್ನಡದಲ್ಲಿ ಹೇಳುತ್ತಿರಲಿಲ್ಲ.ಪರಿಣಾಮ ಹತ್ತನೆಯ ತರಗತಿಯಲ್ಲಿ ವಿಜ್ಞಾನ ದಲ್ಲಿ 99% ಅಂಕಗಳನ್ನು
ಗಳಿಸಿದ್ದ ನಾನು ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದುಳಿದೆ.
ಪ್ರಥಮ ಪಿಯುಸಿ ಕಿರು ಪರೀಕ್ಷೆಯಲ್ಲಿ ( ಕೆಮೆಷ್ಟ್ರಿ) ಯಲ್ಲಿ ನಾನೊಂದು ಪ್ರಶ್ನೆಯ ಅರ್ಥವನ್ನು ಕನ್ನಡದಲ್ಲಿ ತಿಳಿಸಲು ಅಲ್ಲಿ ಇನ್ವಿಜಲೇಷನ್ ಮಾಡುತ್ತಿದ್ದ ಪಟಿಕಲ್ ಶಿವರಾಮ ಭಟ್ ಎಂಬ ಉಪನ್ಯಾಸಕರಲ್ಲಿ ಕೇಳಿದೆ.ನಾನು ಉತ್ತರವನ್ನು ಕೇಳಿದ್ದಲ್ಲ‌.ಪ್ರಶ್ನೆಯ ಕನ್ನಡ ರೂಪವನ್ನು ಕೇಳಿದ್ದು.ಅದು ಹೇಳಲಾಗುವುದಿಲ್ಲ ಎಂದವರು ಹೇಳಿದರು! ಆದರೆ ವಿಜ್ಞಾನ ವನ್ನು ಕನ್ನಡ ಮಾಧ್ಯಮ ದಲ್ಲಿ ಕೂಡ ಬರೆಯಲು ಅವಕಾಶ ಇದೆ ಎಂದು ಗೊತ್ತಾದದ್ದು ನನಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದಾಗಲೇ.ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಇದ್ದವು.ಪಿಯುಸಿ ಅಂತಿಮ ಪರೀಕ್ಷೆ ಯ ಪ್ರಶ್ನೆ ಪತ್ರಿಕೆ  ಕನ್ನಡ ಮತ್ತು ಇಂಗ್ಲಿಷ್  ಭಾಷೆಗಳಲ್ಲಿ ಇರುವಾಗ ಪ್ರಥಮ ಪಿಯುಸಿ ಯ ಕಿರು ಪರೀಕ್ಷೆಯಲ್ಲಿ ನಾನು ಕೇಳಿದ ಒಂದು ಪ್ರಶ್ನೆ ಯ ಕನ್ನಡ ಅನುವಾದವನ್ನು ತಿಳಿಸುವುದು ಅಪರಾಧವಾಗುತ್ತಿರಲಿಲ್ಲ.ಅರ್ಥವಾಗದ ಭಾಷೆಯಲ್ಲಿ ಪಾಠ ಕೇಳುವುದು ಎಂತ ಹಿಂಸೆ ಗೊತ್ತಾ ? ಕ್ಷಣ ಕ್ಷಣ ಕೂಡ ಯುಗವಾಗಿ ಬಿಡುತ್ತದೆ.ಪಾಠ ಯಾವಾಗ ನಿಲ್ಲಿಸುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ.ನಿಮಿಷ ನಿಮಿಷಕ್ಕೂ ವಾಚು ನೋಡುತ್ತಾ ಇದ್ದೆ.ಸುಮ್ಮನೇ ಅರ್ಥವಾಗದ್ದನ್ನು ಕೇಳುವಾಗ ಟಾಯ್ಲೆಟ್ ಗೆ ಹೋಗಬೇಕು ಎಂದು ಅನಿಸುವುದು,ಬೆನ್ನು ನೋವಾಗುವುದು..ಹೀಗೆ ಹೊತ್ತು ಕಳೆಯಲಾಗದೆ ಒದ್ದಾಡುತ್ತಾ ಇದ್ದೆ.ನಮ್ಮ ತರಗತಿಯಲ್ಲಿ ಹೆಚ್ಚಿನವರು ಹತ್ತನೇ ತರಗತಿಯಲ್ಲಿ ವಿಜ್ಞಾನ ದಲ್ಲಿ 80% ಕ್ಕಿಂತ ಹೆಚ್ಚು ಅಂಕಗಳು ಪಡೆದವರೇ ಆಗಿದ್ದರು.
ಹೀಗೆ ಇಂಗ್ಲಿಷ್ ಭಾಷೆಯಲ್ಲಿ ಪಾಠ ಮಾಡಿದ್ದು ಅರ್ಥವಾಗದ್ದರ ಪರಿಣಾಮ
ದ್ವಿತೀಯ ಪಿಯುಸಿ ಯಲ್ಲಿ  ಹತ್ತನೇ ತರಗತಿ ತನಕ ನನ್ನ ಇಷ್ಟದ ಸಬ್ಜೆಕ್ಟ್ ಕೆಮೆಷ್ಟ್ರಿ ಮತ್ತು ಗಣಿತದಲ್ಲಿ ಫೈಲ್ ಆಗಿದ್ದೆ.ನಾನು ಮಾತ್ರವಲ್ಲ ಒಬ್ಬಿಬ್ಬರು ಬಿಟ್ಟರೆ ಉಳಿದವರೆಲ್ಲ ಫೈಲ್ ಆಗಿದ್ದರು.ಬಹುಶಃ 1% ಕ್ಕಿಂತಲೂ ಕಡಿಮೆ ಫಲಿತಾಂಶ ಇದ್ದಿರಬಹುದು. ಇಷ್ಟಾದರೂ ಅಲ್ಲಿನ ಉಪನ್ಯಾಸಕರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲವೇ? ಈಗ ನಲುವತ್ತು ಶೇಕಡಾ ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಅವರ ವಿಚಾರಣೆ ಇರುತ್ತದೆ,ಭಡ್ತಿ ಕಡಿತ ಮಾಡುತ್ತಾರೆ‌
ಇತ್ತ
ನನ್ನ ಮೇಲೆ ತುಂಬಾ ಭರವಸೆ ಇಟ್ಟಿದ್ದ ಹೆತ್ತವರಿಗೆ ಭ್ರಮೆ ನಿರಸನವಾಯಿತು.ಬೈಗಳ ಸುರಿ ಮಳೆಯಾಯಿತು.
ಅದೇ ಕ್ಷಣ ಓದಲು ಕುಳಿತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಹೇಗೋ ಬಾಯಿಪಾಠ ಮಾಡಿ ಎರಡೂ ವಿಷಯಗಳಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ತೆಗೆದೆ.
ಡಿಗ್ರಿಗೆ ಸೇರುವಾಗ ಆರ್ಟ್ಸ್ ತೆಗೆದುಕೊಳ್ಳಬೇಕೆಂದು ಬಯಸಿ ತಂದೆಯವರ ಜೊತೆಯಲ್ಲಿ ಕೆನರಾ ಕಾಲೇಜಿಗೆ ಹೋಗಿ ಸೀಟ್ ಕೇಳಿದೆ.ಮರು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಇದ್ದವು.ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದವು ಹಾಗಾಗಿ ಸೀಟ್ ಕೊಡಲು ಫ್ರಾಂಶುಪಾಲರು ಒಪ್ಪಿದರು‌.ಎಷ್ಟೋ ಫೀಸ ನ್ನು( ಎಷ್ಟು ಕೇಳಿದ್ದರೆಂದು ನನಗೆ ನೆನಪಿಲ್ಲ) ಕೊಡಬೇಕೆಂದು ಹೇಳಿದರು.ಆಗ ನನ್ನ ತಂದೆಯವರು ನಮಗೆ ಅಷ್ಟು ಫೀಸ್ ಕೊಡಲು ಕಷ್ಟವಾಗುತ್ತದೆ. ನಮಗೆ ಎರಡು ಖಂಡಿ ಅಡಿಗೆ ಆಗುವುದು.ಇದರಲ್ಲಿ ಐದು ಜನರ ಓದು ಆಗಬೇಕು, ದೊಡ್ಡ ಮಗಳ ಮದುವೆಯ ಸಾಲ ಇದೆ ಎಂದು ಹೇಳಿ ಫೀಸ್ ಕಡಿಮೆ ಮಾಡಲು ವಿನಂತಿಸಿದರು.ಆಗ ಪ್ರಾಂಶುಪಾಲರು ನನ್ನ ತಂದೆಯವರನ್ನು ಗದರಿದ್ದು ನನಗೆ ಭಯವಾದದ್ದು ಈಗಲೂ ನೆನಪಿದೆ,ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದು ದೊಡ್ಡ ದನಿಯಲ್ಲಿ ದಟ್ಟಿಸಿ ಕೇಳಿದ್ದರು ಅವರು.ಅಧಿಕಾರ ದುಡ್ಡು ‌ಮನುಷ್ಯನಲ್ಲಿ ಎಂತಹ ದರ್ಪ ತರುತ್ತದೆ ಎಂಬುದರ ಪ್ರತ್ಯಕ್ಷ ಅನುಭವ ಆದದ್ದು ನನಗೆ ಆಗಲೇ..ಅವರಿಗೆ ನಮ್ಮ ತಂದೆಯವರನ್ನು ಗದರುವ ಹಕ್ಕೇನಿತ್ತು ? ಫೀಸ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದಾದರೆ ಅದನ್ನು ಹಾಗೆಯೇ ಹೇಳಬಹುದಿತ್ತು.ಏನು ಮಾಡುವುದು ? ಬಡತನ ಎಲ್ಲ ಅನುಭವವನ್ನು ಮಾಡಿಸುತ್ತದೆ.ನಂತರ ನನ್ನ ತಂದೆಯವರನ್ನು ಅವಮಾನಿಸಿದ   ಆ ಕಾಲೇಜು ಬೇಡವೆಂದು  ನಾನು ನಿರ್ಧರಿಸಿದೆ. ಮತ್ತು ಗವರ್ನಮೆಂಟ್ ಕಾಲೇಜಿಗೆ ಸೇರಿ ಪದವಿಯಲ್ಲಿ ಆರ್ಟ್ಸ್ ತೆಗೆದುಕೊಂಡು ಓದುವುದೆಂದು ಆಲೋಚಿಸಿದ್ದೆ. ಆ ಪ್ರಾಂಶುಪಾಲರ ಪೂರ್ಣ ಹೆಸರು ನನಗೆ ನೆನಪಿಲ್ಲ.. ಉಪಾಧ್ಯಾಯ ಎಂದೇನೋ ಇತ್ತು‌.ಮುಂದೆ ಕಟೀಲಿನಲ್ಲಿ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‍‍್ಯಾಂಕ್ ತೆಗೆದಿದ್ದಾಗ ,ವಾರ್ಷಿಕೋತ್ಸವದಲ್ಲಿ ಅವರು ಅತಿಥಗಳಾಗಿ ಆಹ್ವಾನಿಸಲ್ಪಟ್ಟಿದ್ದು  ನನಗೆ ವಿಠಲ್ ರಾವ್ ಸ್ಮಾರಕ ಚಿನ್ನದ ಪದಕವನ್ನು ಕೂಡ ಕೊಟ್ಟಿದ್ದರು ಎಂದು ನೆನಪು‌.
ನಂತರ ನಾನು ಉಜಿರೆಯಲ್ಲಿ ಎಸ್ ಡಿ ಎಂ ಸಿ ಕಾಲೇಜಿನಲ್ಲಿ  ಮನಸಿಲ್ಲದ ಮನಸಿನಲ್ಲಿ ಬಿಎಸ್ಸಿ ಓದಿದೆ
ಅದು ಕೂಡ ಆಕಸ್ಮಿಕವಾಗಿ.
ನನ್ನ ತಮ್ಮ ಈಶ್ವರ ಭಟ್ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ತೆಗೆದಿದ್ದ.ಇವನನ್ನು ಉಜಿರೆ ಕಾಲೇಜಿಗೆ ಸೇರಿಸುವ ಸಲುವಾಗಿ ಸೀಟ್ ಕೇಳಲು ನಮ್ಮ ಸಂಬಂಧಿಕರಾದ ಅಲ್ಲಿನ ಫಿಸಿಕ್ಸ್ ಪ್ರಾಧ್ಯಾಪಕರಾದ ಗಣಪಯ್ಯ ಅವರನ್ನು ಅಣ್ಣ ಹೋಗಿ ಭೇಟಿ ಮಾಡಿದ.ಆಗ ಅವರು ಅಕ್ಕ ತಂಗಿಯರು ಏನು ಮಾಡುತ್ತಿದ್ದಾರೆ ಎಂದು ವಿಚಾರಿಸಿದರು‌.ಆಗ ಅಣ್ಣ ನನ್ನ ವಿಚಾರ ಹೇಳಿದ‌.ಆಗ ಅವರು ಅವಳೂ ಇಲ್ಲಿ ಬರಲಿ ಎಂದು ಹೇಳಿದರು‌.ವಿಜ್ಞಾನಕ್ಕೆ ಹೆಚ್ಚು ಸ್ಕೋಪ್ ಇದೆ ಹಾಗಾಗಿ ಬಿಎಸ್ಸಿ ಓದು ಎಂದು ತಿಳಿಸಿ ನನಗೆ ಬಿಎಸ್ಸಿ ಗೆ ಸೀಟ್ ಕೊಡಿಸಿದರು ‌ಅಲ್ಲೂ ಭಾಷೆಯದೇ ತೊಡಕು ನನಗೆ .ಅಂತೂ ಪಾಸಾಗಿ  ಸೀಟ್ ಕೊಡಿಸಿದ ಅವರ ಮರ್ಯಾದೆ ಉಳಿಸಿದ್ದೆ‌.
ಅಲ್ಲಿಂದ ನಾನು ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ. ಹಲವು ಅಡ್ಡಿ ಆತಂಕಗಳ ನಡುವೆಯೂ ಸಂಸ್ಕೃತ ಎಂಎಗೆ ಸೇರಿದೆ.ನನಗಲ್ಲಿ ರ‍‍್ಯಾಂಕ್ ತೆಗೆಯುವ ಗುರಿ ಇತ್ತು‌.ಆದರೆ ಅದನ್ನು ತಲುಪುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ‌.
ಅಲ್ಲಿ ಪದವಿಯಲ್ಲಿ ಸಂಸ್ಕೃತ ವನ್ನು ಮೇಜರ್ ವಿಷಯವಾಗಿ ತಗೊಂಡು ರ‍‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ರಮಿತಾ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಅವರ ಸಂಸ್ಕೃತ ಭಾಷೆ ಮತ್ತು ವಿಷಯದ ಕುರಿತಾದ ಜ್ಞಾನ ನೋಡಿ ನಾನು ಕಂಗಾಲಾಗಿದ್ದೆ.ಹಾಗಾಗಿ ಲೈಬ್ರರಿ ಯಿಂದ ಪುಸ್ತಕಗಳನ್ನು ತಂದು ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೆ..ಕಾಲು ವಾರ್ಷಿಕ ಪರೀಕ್ಷೆಗಳಲ್ಲಿಯೇ ಇತರರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದೆ.
ಆಗ ನನಗೆ ಮದುವೆಯಾಗಿತ್ತು.ಇತರೆ ಸಹಪಾಠಿಗಳು ಅವಿವಾಹಿತರಾಗಿದ್ದರು.ಆದರೆ ಇದೇನೂ ನಮ್ಮಲ್ಲಿ ಅಂತರ ತರಲಿಲ್ಲ. ನೀತಾ,ಕಮಲಾಯನಿ ನನಗೆ ಹೆಚ್ಚು ಆಪ್ತರಾಗಿದ್ದರು‌.ನನ್ನ ಸಹಪಾಠಿ ಗಳಿಗೆ ವಿವಾಹಾನಂತರದ ಬದುಕಿನ ಬಗ್ಗೆ ಒಂಚೂರು ‌ಕುತೂಹಲ ,ಆತಂಕ ಇತ್ತು‌.ಒಳ್ಳೆಯ ಗಂಡ ಸಿಕ್ಕಿದರೆ ಬದುಕು ಸ್ವರ್ಗ ಎಂಬುದನ್ನು ಸೂಕ್ಷ್ಮ ವಾಗಿ ತಿಳಿಸಿ ಅವರ ಕುತೂಹಲವನ್ನು ತಣಿಸಿ ಆತಂಕವನ್ನು ದೂರ ಮಾಡಿದ್ದೆ‌.ನಾನು ಸತ್ಯವನ್ನು ಹೇಳಿದ್ದೆ.ಪ್ರಸಾದ್ ಬಹಳ ಸಹೃದಯಿ ಆದ ಕಾರಣ ಬಡತನವಿದ್ದರೂ ಕೂಡ ನಮ್ಮ ಬದುಕು ಸ್ವರ್ಗ ಸದೃಶವೇ ಆಗಿತ್ತು ಆಗ.ಆಗ ಮಾತ್ರವಲ್ಲ ಈಗಲೂ ಸಿರಿವಂತಿಕೆ ಬಂದ ಮೇಲೆ ಕೂಡ, ಆದರೆ ಕಳೆದ ದಿನಗಳನ್ನು ನಾನು ಮರೆತಿಲ್ಲ ಹಾಗಾಗಿ ಬಡವರನ್ನು ಅಥವಾ ಯಾರನ್ನೂ ಕೂಡ ತಾತ್ಸಾರದಿಂದ ಕಾಣುವುದಿಲ್ಲ.
ಸಂಸ್ಕೃತ ಎಂಎ ಓದುವಾಗ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಎಲ್ಲರೂ ಬಡ ಮಧ್ಯಮ ಕುಟುಂಬದವರೇ ಆಗಿದ್ದೆವು.ವರ್ಷವಿಡೀ ಎರಡು ಮೂರು ಪ್ರತಿ ಡ್ರೆಸ್ ಗಳಲ್ಲೇ ಕಳೆದಿದ್ದೆವು.ಎಲ್ಲರೂ ಹಾಗೇ ಇದ್ದ ಕಾರಣ ನಮಗೆ ಅದೊಂದು ಕೊರತೆಯಾಗಿ ಕಾಣಿಸಿರಲಿಲ್ಲ.ಎಲ್ಲರಲ್ಲೂ ಸಾಧನೆಯ ಕನಸಿತ್ತು.
ನಮಗೆ ಮಧ್ಯಾಹ್ನ ಕಟೀಲಿನಲ್ಲಿ ದೇವಸ್ಥಾನದಲ್ಲಿ ಸುಗ್ರಾಸ ಭೋಜನದ ವ್ಯವಸ್ಥೆ ಇತ್ತು‌.ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇತ್ತು.ಮಧ್ಯಾಹ್ನ ಪೂಜೆಯಾದ ನಂತರದ ಊಟಕ್ಕೆ ಕಾದರೆ ಪ್ರಸಾದದ ಊಟ ಇತ್ತು‌ ಬ್ರಾಹ್ಮಣರಿಗೆ ಒಳಗೆ ಬೇರೆ ವ್ಯವಸ್ಥೆ ಇತ್ತು‌ ನಮ್ಮಲ್ಲಿ ಹೆಚ್ಚನವರು ಬ್ರಾಹ್ಮಣ ರಾದ ಕಾರಣ ನಾವು ಪೂಜೆಯ ಬಳಿಕದ ಪ್ರಸಾದದ ಊಟಕ್ಕೆ ಕಾಯುತ್ತಿದ್ದೆವು‌.ದಿನಾಲು ಪಾಯಸ ಇರುತ್ತಿತ್ತು. ಅಲ್ಲಿ ಒಂದು ಸಾರು ಮಾಡುತ್ತಿದ್ದರು.. ಅಷ್ಟು ರುಚಿಯಾದ ಸಾರನ್ನು ನಾನು ಬೇರೆಲ್ಲೂ ಉಂಡಿಲ್ಲ‌ಅಲ್ಲಿನ ಉಪ್ಪಿನಕಾಯಿಯೂ ಅಷ್ಟೇ, ಅತ್ಯದ್ಭುತ! ಪ್ರತಿ ಶುಕ್ರವಾರ ಗಂಜಿ ಇತ್ತು ಅದು ಕುಡ ಬಹಳ ರುಚಿಯಾದುದು‌ ಇನ್ನೂ ಚಂಡಿಕಾ ಹೋಮ ಏನಾದರೂ ವಿಶೇಷ ಇದ್ದರೆ ಪಾಯಸದ ಜೊತೆಗೆ ಸ್ವೀಟ್ ಕೂಡ ಇರುತ್ತಿತ್ತು ‌ಜೊತೆಗೆ ನಮಗೆ ಊಟ ದಕ್ಷಣೆಯಾಗಿ ಎರಡು ರುಪಾಯಿ ಐದು ರುಪಾಯಿ ಸಿಗುತ್ತಾ ಇತ್ತು‌.ಇಪ್ಪತ್ತೈದು ವರ್ಷಗಳ ಹಿಂದೆ ಎರಡು ರುಪಾಯಿ ಐದು ರುಪಾಯಿ ಗಳಿಗೆ ತುಂಬಾ ಬೆಲೆ ಇತ್ತು‌  ಹಾಗಾಗಿ ಆ ದಿನ ನಮಗೆ ಖುಷಿಯೋ ಖುಷಿ..ನಮ್ಮ ತರಗತಿಗಳನ್ನು ದೇವಸ್ಥಾನದ ಊಟದ ಸಮಯಕ್ಕೆ ಹೊಂದಾಣಿಕೆ ಮಾಡಿದ್ದೆವು.ಉಪನ್ಯಾಸಕರಾದ ನಾಗರಾಜ್ ಮತ್ತು ಪದ್ಮನಾಭ ಮರಾಠೆ ನಮ್ಮ ಜೊತೆಯಲ್ಲಿ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದರು ‌ಕೆಲವೊಮ್ಮೆ ಊಟ ಭಾರವಾಗಿ ತರಗತಿ ಬೇಡ ಎಂದರೆ ಅವರುಗಳು ಒಪ್ಪುತ್ತಿದ್ದರು‌.ಆಗ ಬಹಳ ಖುಷಿಯಿಂದ ಮನೆಗೆ ಬಂದು ನಿದ್ರೆ ಮಾಡುತ್ತಿದ್ದೆ ನಾನು,ಕಟೀಲಿನಲ್ಲಿ ಎರಡು ವರ್ಷ ಭರ್ಜರಿಯಾಗಿ  ರುಚಿಯಾದ ಸುಗ್ರಾಸ ಭೋಜನ ಸವಿದದ್ದು ನನ್ನ ಬದುಕಿನ ಸುವರ್ಣ ಗಳಿಗೆಗಳು.
ಮೊದಲ ವರ್ಷ ಎಂಎ ಯಲ್ಲೂ ಅಷ್ಟೇ, ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದೆವು.ಆದಿನಗಳು ಇಂದಿಗೂ ಸ್ಮರಣೀಯವಾಗಿವೆ
ಮೊದಲ ವರ್ಷದ ಕೊನೆಯಲ್ಲಿ ಡಾ.ಜಿ ಎನ್ ಭಟ್ಟರ ಪ್ರಯತ್ನದಿಂದಾಗಿ  ನಮಗೆಲ್ಲ ಒಂದೊಂದು ಸಾವಿರ ರುಪಾಯಿ ಸ್ಕಾಲರಚ ಶಿಪ್ ಬಂದಿತ್ತು.ಆರ್ಥಿಕ ತೊಂದರೆ ಇರುವಾಗ ಇಷ್ಟು ದೊಡ್ಡ ಮೊತ್ತ ಸ್ಕಾಲರ್ ಶಿಪ್ ದುಡ್ಡು ಬಂದಾಗ ಆದ ಸಂತಸವನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ‌.ಅ ಒಂದು ಸಾವಿರ ರುಪಾಯಿ ಗಳನ್ನು ಕೈಯಲ್ಲಿ ಹಿಡಿದುಕೊಂಡು ಅತ್ತು ಬಿಟ್ಟಿದ್ದೆ.ಉಳಿದವರದೂ ಅದೇ ಅವಸ್ಥೆ  .ಮೊದಲ  ವರ್ಷ ಎರಡನೇ ಎರಡು ಚೂಡಿದಾರ್ ನಲ್ಲಿ ಕಳೆದಿದ್ದೆ.ಅಲ್ಲಲ್ಲಿ ಹರಿದು ತೇಪೆ ಹಾಕಿದ್ದೆ‌‌.ಹಾಗಾಗಿ ಬಂದ ದುಡ್ಡಿನಲ್ಲಿ ಎರಡು ಡ್ರೆಸ್ ತೆಗೆದುಕೊಂಡು ಉಳಿದ ಹಣದಲ್ಲಿ ಬೇಕಾದ ಪುಸ್ತಕಗಳನ್ನು ಖರೀದಿಸಿದ್ದೆ‌.ಜೊತೆಯಲ್ಲಿ ನನಗೆ ಬಹಳ ಇಷ್ಟವಾದ ಮೈಸೂರು ಪಾಕನ್ನು ಸ್ವಲ್ಪ ಖರೀದಿಸಿ ತಿಂದಿದ್ದೆವು