Tuesday 27 August 2019

ನನ್ನೊಳಗೂ ಒಂದು ಆತ್ಮವಿದೆ..ಮೊದಲಬಾರಿಗೆ ಸಿಡಿದೆದ್ದ ಸ್ವಾಭಿಮಾನ© ಡಾ.ಲಕ್ಷ್ಮೀ ಜಿ ಪ್ರಸಾದ


ಮೊದಲ ಬಾರಿಗೆ ಸಿಡಿದೆದ್ದ ಸ್ವಾಭಿಮಾನ
ನನಗೊತ್ತು.. ಇದನ್ನು ಬರೆದರೆ ಅದು ಅವರದೇ ಸಂಗತಿ ಎಂದು ಅವರಿಗೆ ಗೊತ್ತಾಗುತ್ತದೆ ಅಂತ..ಅವರಿಗೆ ಬೇಸರವಾಗಬಹುದೋ ನನ್ನ ಬಗ್ಗೆ ಕೋಪ ಉಕ್ಕಿ ಬಂದೀತೋ ಗೊತ್ತಿಲ್ಲ.. ಅದೇನೇ ಇದ್ದರೂ ಅವರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ.. ಹಾಗಾಗಿ ಅವರ ಹೆಸರನ್ನು ಮತ್ತು ನನಗೆ ಮತ್ತು ಅವರಿಗಿರುವ ಹತ್ತಿರದ ಸಂಬಂಧವನ್ನು ಇಲ್ಲಿ ಮುಚ್ಚಿಡುತ್ತೇನೆ‌.ಹಾಗೆಂದು ಈ ವಿಚಾರವನ್ನೇ ಮುಚ್ಚಿಟ್ಟರೆ ಆತ್ಮ ಸಾಕ್ಷಿಯಾಗಿ ಬರೆಯುವ ಆತ್ಮಕಥೆಗೆ ಅರ್ಥ ಇಲ್ಲ
ಸಣ್ಣ ಮಕ್ಕಳಿಗೂ ಭಾವನೆಗಳಿರುತ್ತವೆ..ಅವರಿಗೂ ಸ್ವಾಭಿಮಾನ ಇರುತ್ತದೆ..ಅವರವರ ಭಾವನೆಗಳನ್ನು ಹಿರಿಯರು ಕೂಡ ಗೌರವಿಸಬೇಕು.ಮಕ್ಕಳಲ್ಲಿ ಬೇಧ ಮಾಡಬಾರದು..ಮಾಡಿದರೆ ಅದೆಂದೂ ಮಕ್ಕಳ ಮನಸಿನಿಂದ ಅಳಿಸಿ ಹೋಗುವುದಿಲ್ಲ..ಇದಕ್ಕೆ ನಾನೇ ಸಾಕ್ಷಿ
ಅದ್ಯಾಕೋ ಏನೋ ಗೊತ್ತಿಲ್ಲಪ್ಪ..ನಾನು ಚಿಕ್ಕಂದಿನಿಂದಲೇ ತಾರತಮ್ಯದ ಬಿಸಿಯನ್ನು ಅನುಭವಿಸುತ್ತಲೇ ಬೆಳೆದು ಬಂದೆ.ನಾನು ಚಿಕ್ಕವಳಿದ್ದಾಗ ನಮ್ಮದು ಕೂಡು ಕುಟುಂಬ. ಅಜ್ಜಿ ,ನಮ್ಮ ತಂದೆ,ತಾಯಿ ನಾವು ನಾಲ್ಕು ಜನ ಮಕ್ಕಳು ( ಕೊನೆಯ ತಮ್ಮ ಆಸ್ತಿ ಪಾಲಾದ ನಂತರನಮ್ಮ  ಹೊಸ ಮನೆಯಲ್ಲಿಯೇ ಬೆಳೆದವನು),ದೊಡ್ಡ ಚಿಕ್ಕಪ್ಪ,ಚಿಕ್ಕಮ್ಮ ಅವರ ಮಗಳು ಸಂಧ್ಯಾ ಸಣ್ಣ ಚಿಕ್ಕಪ್ಪ ಒಟ್ಟಿಗೆ ಇದ್ದೆವು.ದೊಡ್ಡ ಚಿಕ್ಕಪ್ಪನವರಿಗೆ ಒಬ್ಬಳೇ ಮಗಳು ಸಂಧ್ಯಾ. ನನಗಿಂತ ಐದಾರು ತಿಂಗಳು ದೊಡ್ಡವಳು. ನನಗ್ಯಾಕೋ ಮನೆ ಮಂದಿ ಎಲ್ಲ ಅವಳನ್ನೇ ಮುದ್ದು ಮಾಡುತ್ತಿದ್ದರು ಎಂದು ನನಗೆ ಅನಿಸುತ್ತಾ ಇತ್ತು.
ನನಗೆ ಐದು ವರ್ಷ ಆಗುವಾಗ
ನಮ್ಮ ಮನೆಯಲ್ಲಿ ಆಸ್ತಿ ಪಾಲಾಗಿ ನಮ್ಮ ತಂದೆ ಮಣ್ಣಿನ ಮನೆಯೊಂದನ್ನು ಕಟ್ಟಿ ಬೇರೆ ಬಿಡಾರ ಹೂಡಿದ್ದೆವು
ನಮ್ಮ ಹತ್ತಿರದ ಸಂಬಂಧಿ ದೊಡ್ಡ ವಿದ್ವಾಂಸರು ಆಗಿದ್ದರು. ಅವರೆಂದರೆ ನನಗೆ ಜೀವ ಆಗಿತ್ತು.ನನ್ನ ತಂದೆಯವರಿಗೂ ತುಂಬಾ ಪ್ರೀತಿ‌ಅವರ ಹೆಸರು ಹೇಳಿದರೆ ಮತ್ತೆ ನಮ್ಮ ತಂದೆಯವರಿಗೆ ಬಾಯಾರಿಕೆಗೆ ನೀರು ಬೇಡ. ಅಷ್ಟು ಅಭಿಮಾನ ಅವರ ಬಗ್ಗೆ. ಹಾಗಾಗಿಯೋ ಏನೋ ನಮಗೂ ಅವರ ಬಗ್ಗೆ ತುಂಬಾ ಪ್ರೀತಿ. ಅವರು ಯಾವಾಗ ಊರಿಗೆ ಬರುತ್ತಾರೆ ಎಂಬುದನ್ನು ಜಾತಕ ಪಕ್ಷಿಯಂತೆ ಕಾಯುತ್ತಾ ಇದ್ದೆವು.ಬರುವಾಗ ಏನಾದರೂ ತಿಂಡಿ ತರುತ್ತಿದ್ದರೋ ಏನೋ ನನಗೆ ಈಗ ನೆನಪಾಗುತ್ತಿಲ್ಲ..
ಒಂದು ಬಾರಿ ಬಂದಾಗ ನನಗೆ ಒಂದು ಉಣ್ಣೆಯ ಫ್ರಾಕ್ ತಂದು ಕೊಟ್ಟಿದ್ದರು‌.ಅಕ್ಕನಿಗೆ ಒಂದು ಉಣ್ಣೆಯ ರವಕೆ ,ಅಣ್ಣನಿಗೆ ಒಂದು ಸ್ವೆಟರ್ ತಂದಿದ್ದರು. ತಮ್ಮಂದಿರು ತೀರಾ ಚಿಕ್ಕವರು ಹಾಗಾಗಿ ಏನೂ ತಂದಿರಲಿಲ್ಲ.ಅವರು ಕೊಟ್ಟ ಉಣ್ಣೆಯ ಹಳದಿ ಬಣ್ಣದ ಕೆಂಪು ಅಂಚಿನ ಉದ್ದ ಕೈ ಯ ಫ್ರಾಕ್ ತುಂಬಾ ಚಂದ ಇತ್ತು‌‌.ಬಡವರಾಗಿದ್ದ ನಮಗೆ ಹೊಸ ಅಂಗಿ ತೆಗೆಯುತ್ತಿದ್ದುದು ಕೋಳ್ಯೂರು  ಜಾತ್ರೆಗೆ ಮಾತ್ರ.ಇನ್ನೂ ಬೆಲೆ ಬಾಳುವ ಉಣ್ಣೆಯ ಅಂಗಿಯನ್ನು ನಾವು ಕಂಡೇ ಇರಲಿಲ್ಲ. ಹಾಗಾಗಿ ನನಗೆ ಬಹಳ ಸಂತಸವಾಗಿತ್ತು.....ಅವರು ತಂದು ಕೊಟ್ಟ ಅಂಗಿ ಎಂದು ಬಹಳ ಹೆಮ್ಮೆಯಿಂದ ಹಾಕಿ ತಿರುಗಾಡಿದ್ದೆ.
ಆ ಸಮಯದಲ್ಲಿ ನಮಗೆ ಮತ್ತು ದೊಡ್ಡ ಚಿಕ್ಕಪ್ಪನವರಿಗೆ ಯಾವುದೋ ವಿಷಯಕ್ಕೆ ವಿವಾದ ಆಗಿ ಹೋಗಿ ಬರುವುದು ಇರಲಿಲ್ಲ. ಇದಾಗಿ ಎರಡು ವರ್ಷಗಳ ನಂತರ ನಮಗೆ ರಾಜಿಯಾಯಿತು.ಎರಡೂ ಮನೆಗಳ ಮಂದಿ ಹೋಗಿ ಬರುತ್ತಿದ್ದೆವು.
ಇಂತಹ ಒಂದು ದಿನ ನಾನು ಆ ಉಣ್ಣೆಯ ಫ್ರಾಕ್ ಅನ್ನು ಧರಿಸಿದ್ದೆ‌.ಅದನ್ನು ನೋಡಿದ ನನ್ನ ಚಿಕ್ಕಪ್ಪನ ಮಗಳು ಸಂಧ್ಯಾ " ಇದು ..ಅವರು ನನಗೆ ತಂದು ಕೊಟ್ಟ ಅಂಗಿ,ಆದರೆ ನನ್ನ ತಂದೆ ಅದನ್ನು ಬೇಡ ಎಂದು ಹೇಳಿ ಹಿಂದೆ ಕೊಟ್ಟರು.( ಆ ಸಮಯದಲ್ಲಿ  ಸಂಧ್ಯಾಳ ತಂದೆ( ನನ್ನದೊಡ್ಡ ಚಿಕ್ಕಪ್ಪ) ಮತ್ತು ಅವರ ನಡುವೆ ಏನೋ ವೈಮನಸ್ಸು ಇತ್ತು )ಅದನ್ನು ನಾವು ಬೇಡ ಎಂದು ಹಿಂದೆ ಕೊಟ್ಟ ನಂತರ ನಿನಗೆ ಕೊಟ್ಟಿದ್ದಾರೆ " ಎಂದು ಹೇಳಿದಳು.
ಓಹ್ ಎದೆಗೆ ಬೆಂಕಿ ಬಿದ್ದ ಅನುಭವ...ನಾಚಿಕೆ ಅವಮಾನದಿಂದ ಕುಗ್ಗಿ ಹೋದೆ‌.ಬೇರೆಯವರು ಬೇಡ ಎಂದದ್ದನ್ನು ,ಬಿಸಾಡುವ ಬದಲು ನನಗೆ ಕೊಟ್ಟರೇ ? ಸಂಧ್ಯಾ ಮತ್ತು ನಾನು ಹೆಚ್ಚು ಕಡಿಮೆ ಒಂದೇ ವಯಸ್ಸಿನವರು.ಅವರಿಗೆ ನಾವಿಬ್ಬರೂ ಸಮಾನ ಹತ್ತಿರದ ಸಂಬಂಧಿಗಳು.ಇಬ್ಬರೂ ಅಣ್ಣನ ಮಕ್ಕಳೇ.
ಹಾಗಿರುವಾಗ ಅವಳಿಗೆ ಮಾತ್ರ ಫ್ರಾಕ್ ತಂದರೇ ? ನಾನು ಲೆಕ್ಕಕ್ಕಿಲ್ಲದವಳಾಗಿದ್ದೆನೇ ? ಈ ಪ್ರಶ್ನೆಗೆ ನನಗೆ ಅಂದು ಉತ್ತರ ಸಿಕ್ಕಿರಲಿಲ್ಲ...ಇಂದೂ ಉತ್ತರ ಸಿಕ್ಕಿಲ್ಲ...ಆ ಕ್ಷಣಕ್ಕೆ ನಾನೇಕೆ ಆ ಫ್ರಾಕ್ ಅನ್ನು ತಗೊಂಡೆನೋ ಎಂದು ಪಶ್ಚಾತ್ತಾಪವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ‌ .ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿತ್ತು ನನಗೆ ಹಳೆಯ ಅಂಗಿ ಯಲ್ಲಿ ಇರುವುದು ಎಂದಿಗೂ ಅವಮಾನ ಎನಿಸಿರಲಿಲ್ಲ..
ಆದರೆ ನಮ್ಮಿಬ್ಬರ ನಡುವೆ ತಾರತಮ್ಯ ಮಾಡಿ ಚಿಕ್ಕಪ್ಪನ ಮಗಳಿಗೆ ಮಾತ್ರ ಫ್ರಾಕ್ ತಂದದ್ದು ಮಾತ್ರವಲ್ಲದೆ ಅವರು ಬೇಡವೆಂದು ನಿರಾಕರಿಸಿದ್ದನ್ನು ಕೊಟ್ಟದ್ದನ್ನು ನಾನು ಗೊತ್ತಿಲ್ಲದೆ ತೊಟ್ಟೆನಲ್ಲ ಎಂಬುದನ್ನು ಇಂದಿಗೂ ನೆನೆದರೆ ನನ್ನ ಎದೆಯಲ್ಲಿ ಬೆಂಕಿ ಏಳುತ್ತದೆ.
ಅದು ಅವಳು ನಿರಾಕರಿಸಿದ್ದನ್ನು ನನಗೆ ಕೊಟ್ಟದ್ದು ಎಂದು ಗೊತ್ತಿದ್ದರೆ ನಾನು ಖಂಡಿತವಾಗಿಯೂ ತೆಗೆದುಕೊಳ್ಳುತ್ತಿರಲಿಲ್ಲ.ನನ್ನ ತಂದೆ ತಾಯಿ ಗೂ ಈ ವಿಚಾರ ಗೊತ್ತಿರಲಿಲ್ಲ. ಗೊತ್ತಾಗಿದ್ದರೆ ಅವರು ಕೂಡ ಬೇಡ ಎಂದು ನಿರಾಕರಿಸುತ್ತಿದ್ದರು.
ನನಗೆ ಈಗಲೂ ಅರ್ಥವಾಗದ ವಿಚಾರ ಇದು.ನಾನು ಅವಳು ಒಂದೇ ವಯಸ್ಸಿನವರಾದರೂ ನನಗೇಕೆ ಫ್ರಾಕ್ ತರಲಿಲ್ಲ ? ನಾನು ಲೆಕ್ಕಕ್ಕಿಲ್ಲದವಳಾಗಿದ್ದೆನೇ ? ಇನ್ನೂ ನನ್ನ ಮೇಲೆ ಏನಾದರೂ ಕೋಪ ಇತ್ತಾ ಎಂದರೆ ನನಗಿನ್ನೂ ಆಗ ಆರು ವರ್ಷ,ನನ್ನ ‌ಮೇಲೆ ಏನು ದ್ವೇಷ ಇರಲು ಸಾಧ್ಯ ? ಅಥವಾ ನಾನೇನು ಅನ್ಯಾಯ ಮಾಡಿರಲು ಸಾಧ್ಯ ?
ಇದನ್ನು ಗಮನಿಸುವಾಗ ಅವಳನ್ನು ಹೆಚ್ಚು ಮುದ್ದು ಮಾಡುತ್ತಿದ್ದರೆಂದು ನನಗೆ ಅನಿಸುತ್ತಾ ಇದ್ದದ್ದು ಸತ್ಯವಿರಬೇಕೆಂದು ನನಗೆ ಅನಿಸುತ್ತದೆ. ಒಂದು ಸಣ್ಣ ಫ್ರಾಕ್ ತರುವಲ್ಲಿ ತಾರತಮ್ಯ ಮಾಡಿದವರು ಇತರ ವಿಚಾರಗಳಲ್ಲಿ ತಾರತಮ್ಯ ಮಾಡಿದ್ದರೆ ಅದರಲ್ಲಿ ಅಸಹಜವಾದ್ದು ಏನೂ ಇಲ್ಲ.
ಆದರೆ ಈ ತಾರತಮ್ಯ ನನ್ನನ್ನು ಚಿಕ್ಕಂದಿನಿಂದಲೇ ಕಾಡಿದ್ದು ಸತ್ಯ.ಈ ಘಟನೆ ನನ್ನ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದು ಕೂಡ ಅಷ್ಟೇ ಸತ್ಯವಾದ ವಿಚಾರ.ಅಂದೇ ಅಂದುಕೊಂಡಿದ್ದೆ ನಾನು ಓದಿ ಒಳ್ಳೆಯ ಸ್ಥಾನ ಪಡೆದು ಎಲ್ಲರೆದುರು ತಲೆಯೆತ್ತಿ ನಡೆಯಬೇಕು ಎಂದು.
ದೇವರ ದಯೆಯಿಂದ ಇಂದಿಗೆ ಅದು ಸಾಧ್ಯವಾಗಿದೆ ಕೂಡ .ಅದಕ್ಕಾಗಿ ನಾನು ನನಗೆ ವಿದ್ಯೆ ಕೊಡಿಸಿ ಸ್ವಂತ ಕಾಲಮೇಲೆ ನಿಂತು, ಸ್ವಾಭಿಮಾನದಿಂದ ಬದುಕುವಂತೆ ಮಾಡಿದ ನನ್ನ ಹೆತ್ತವರಿಗೆ ನಾನು ಯಾವತ್ತಿಗೂ ಋಣಿಯಾಗಿದ್ದೇನೆ.
ಈ ತಾರತಮ್ಯ ನಾನು ದೊಡ್ಡವಳಾದ ನಂತರ ಇತ್ತೀಚೆಗೆ  ಅವರ ಮಗಳ ಮದುವೆ ಸಮಯದಲ್ಲೂ ಕೂಡ ಅವರಿಂದಲೇ ಮತ್ತೆ  ನಡೆದಿದೆ.ಈಗ ನನಗೆ ಬೇಸರವಿಲ್ಲ ಯಾಕೆಂದರೆ ಕೊಟ್ಟವರ ಕೈ ಯಾವಾಗಲೂ ಮೇಲೆ,ತಗೊಂಡವರ ಕೈ ಯಾವಾಗಲೂ ಕೆಳಗೆ,ನನಗೆ ಏನೂ ಕೊಡದೇ ಇದ್ದರೆ ನನಗೆ ಸಂತಸ ಯಾಕೆಂದರೆ ನನ್ನ ಕೈ ಕೆಳಗಾಗುವುದಿಲ್ಲ ಅಲ್ವಾ ?

Sunday 25 August 2019

ನನ್ನೊಳಗೂ ಒಂದು ಆತ್ಮವಿದೆ..13 ..ಒಂದು ಕಾಶಿ ಇನ್ನೊಂದು ಕಾಶಿಗೆ ಹೊರಟದ್ದನ್ನು ನೋಡಿದ್ದೀರಾ ?



ಒಂದು ಕಾಶಿ ಇನ್ನೊಂದು ಕಾಶಿಯನ್ನು ನೋಡಲು ಹೋಗುವ ಬಗ್ಗೆ ಕೇಳಿದ್ದೀರಾ ?
“ಕಾಸಿಗಿ ಹೋಗುದಕ ಏಸೊಂದು ದಿನಬೇಕು/
, ತಾಸ್ ಹೊತ್ತಿನ ಹಾದಿ ತೌರೂರು ಮನೆಯಲ್ಲಿ/
ಕಾಶಿ ಕುಂತವಳೆ ... ಕಾಸಿ ಕುಂತವ್ಳೆ ಹಡೆದವ್ವ
ನನ್ನಮ್ಮನೇ ಒಂದು ಕಾಶಿ..ಅವರೀಗ ಕಾಶಿಗೆ ಹೋಗಿದ್ದಾರೆ
ನನ್ನಮ್ಮ ,ಅಣ್ಣ ಅಕ್ಕ ಬಾವ ,ತಮ್ಮ ತಮ್ಮನ ಹೆಂಡತಿ ಮಕ್ಕಳು ಮೊನ್ನೆ ಕಾಶಿಗೆ ಹೊರಟರು.ಅಕ್ಕ ಬಾವ ತಮ್ಮ ತಮ್ಮನ ಮಡದಿ ಮಕ್ಕಳು ಮಂಗಳೂರಿನಿಂದ ವಿಮಾನ ಹತ್ತಿ ಇಪ್ಪತ್ತೆರಡನೆಯ ತಾರೀಕಿನಂದು ಸಂಜೆ ಬೆಂಗಳೂರಿನ ನಮ್ಮ ಮನೆಗೆ ಬಂದರು.ಅಮ್ಮ ಹದಿನೈದು ದಿನ ಮೊದಲೇ ನಮ್ಮ ಮನೆಗೆ ಬಂದಿದ್ದರು.ಮಗ ಊರಿಗೆ ಹೋದವನು ಒತ್ತಾಯ ಮಾಡಿ ಅಮ್ಮನನ್ನು ನಮ್ಮನೆಗೆ ಕರೆದುಕೊಂಡು ಬಂದಿದ್ದ.
ಇಪ್ಪತ್ತಮೂರನೇ ತಾರೀಕಿನಂದು ಬೆಳಗೆ ಎಂಟೂವರೆಯ ವಿಮಾನದಲ್ಲಿ ಕಾಶಿಗೆ( ವಾರಾಣಸಿ) ಹೋಗಲು ಸೀಟ್ ಬುಕ್ ಆಗಿತ್ತು.
ಅಕ್ಕ ಬಾವ ತಮ್ಮ ಮಕ್ಕಳೆಲ್ಲ ಸೇರಿದ್ದರಿಂದ ಬಹಳ ಸಂಭ್ರಮದ ವಾತಾವರಣ.
ತಮ್ಮನ ಮಕ್ಕಳಿಗೆ ಪಿಜ್ಜಾ ತಿನ್ನುವ ಆಸೆ ಅಯಿತು.ಆದರೆ ಮರುದಿನದಿಂದ ಐದು ದಿನಗಳ ಕಾಲ ಪ್ರಯಾಣ ಇದ್ದ ಕಾರಣ ತಮ್ಮ ಬೇಡ ಎಂದು ಹೇಳಿದರು.ಸೊಸೆಯ ಮುಖ ಚಿಕ್ಕದಾಯಿತು.ಆಗ ನಾನು ಮುಂದಿನ ಬೇಸಗೆ ರಜೆಯಲ್ಲಿ ಹದಿನೈದು ದಿನ ಇರುವಂತೆ ಬಾ..ಇಡೀ ಬೆಂಗಳೂರು ಸುತ್ತಿಸುತ್ತೇನೆ ಬೇಕಾದ್ದು ತೆಗೆದು ಕೊಡುತ್ತೇನೆ ಎಂದು ಸಮಾಧಾನ ಮಾಡಿದೆ.
‌ಮರುದಿವಸ ನಾಲ್ಕೂವರೆಗೆ ವಿಮಾನ ನಿಲ್ದಾಣಕ್ಕೆ ಹೋಗಲು ಕಾರನ್ನು ಬರುವಂತೆ ಹೇಳಿದ್ದೆವು.
‌ಮರು ದಿನದ ತಿಂಡಿ ಎಲ್ಲ ಮೊದಲೇ ಸಿದ್ಧ ಪಡಿಸಿದ್ದೆವು..
‌ಮರು ದಿನ ಮೂರು ಗಂಟೆಗೆ ಏಳ ಬೇಕಿದ್ದರಿಂದ ಬೇಗ ಬೇಗನೆ ಊಟ ಮಾಡಿ ಮಲಗಿ ಎಂದು ಅಮ್ಮ ಗದರಿದರೂ ನಮ್ಮ ಅಕ್ಕ ತಮ್ಮಂದಿರ ಮಾತು ಹರಟೆ ತಮಾಷೆ ಸುಲಭಕ್ಕೆ ಕೊನೆಗಾಣುವಂತಿರಲಿಲ್ಲ.ಅಂತೂ ಇಂತೂ ಒಮಬತ್ತೂವರೆಗೆ ಎಲ್ಲರಿಗೆ ಚಾಪೆ ಹಾಸಿ ಮಲಗಲು ವ್ಯವಸ್ಥೆ ಮಾಡಿದೆ, ಎಲ್ಲರೂ ಬೆಳಕು ನಂದಿಸಿ ಹಾಸಿಗೆಯಲ್ಲಿ ಬಿದ್ದು ಕೊಂಡೆವು.ಅವರಿಗೆಲ್ಲಾ ಪ್ರಯಾಣ ಮಾಡಿ ಬಂದು ಸುಸ್ತಾಗಿ ನಿದ್ರೆ ಬಂದಿರಬಹುದು
‌ಆದರೆ ನನಗೆ ಮಾತ್ರ ಒಂದಿನಿತು ನಿದ್ದೆ ಕಣ್ಣಿಗೆ ಹತ್ತಲಿಲ್ಲ..ಕಣ್ಣಿಗೆ ಕಾಣುತ್ತಾ ಇದ್ದದ್ದು ಒಂದೇ ದೃಶ್ಯ... ನಾನೂ ಕಾಶಿಗೆ ಬರುತ್ತೇನೆ ಎಂದು ದುಃಖಿಸಿ ದುಃಖಿಸಿ ಅಳುತ್ತಿದ್ದ ಮೂರು ನಾಲ್ಕು ವರ್ಷದ ಸಣ್ಣ ಹುಡುಗಿಯ ಚಿತ್ರ...ಆ ಹುಡುಗಿ ಬೇರೆ ಯಾರೂ ಅಲ್ಲ..ನಾನೇ ಆಗಿದ್ದೆ.
‌ನಾನು ಚಿಕ್ಕವಳಿದ್ದಾಗ ಅಂದರೆ ಸುಮಾರು ನಲುವತ್ತೆರಡು ವರ್ಷಗಳ ಮೊದಲು ನಮ್ಮ ಕುಟುಂಬವಿಡೀ ಕಾಶಿಗೆ ಹೋಗಿತ್ತು.ಸಂಸಾರದ ಜವಾಬ್ದಾರಿ ಹಾಗೂ ಎಳೆಯ ಮಕ್ಕಳಿರುವ ಕಾರಣದಿಂದಾಗಿ ನನ್ನ ತಂದೆ ತಾಯಿ ಮತ್ತು ನಾವು ಐದು ಜನ ಮಕ್ಕಳು ಮಾತ್ರ ಹೋಗಿರಲಿಲ್ಲ..
‌ನನಗೆ ಬೇರೆ ಯಾರು ಹೊದರೂ ಅಷ್ಟೊಂದು ದುಃಖ ಆಗುತ್ತಿರಲಿಲ್ಲವೋ ಏನೋ..ನನ್ನ ಜೊತೆ ಜೊತೆಗೇ ಬೆಳೆದ ನನಗಿಂತ ಕೆವಲ ಐದಾರು ತಿಂಗಳು ದೊಡ್ಡವಳಾದ ಚಿಕ್ಕಪ್ಪನ ಮಗಳು ಸಂಧ್ಯಾ ನನ್ನನ್ನು ಬಿಟ್ಟು  ಕಾಶಿಗೆ ಹೋಗುವುದು ಸಹಿಸಲಾಗದ ವಿಚಾರವಾಗಿತ್ತು.ಚಿಕ್ಕಪ್ಪ ಚಿಕ್ಕಮ್ಮ ಹೋಗುವ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದರು ಅದೇನು ಅಸಹಜ ವಿಚಾರವಲ್ಲ
‌ಆದರೆ ಅಷ್ಟೆಲ್ಲ ಯೋಚಿಸುವಷ್ಟು ನಾನು ದೊಡ್ಡವಳಾಗಿರಲಿಲ್ಲ.ಹಾಗಾಗಿ ಒಂದೇ ಸಮನೆ ನಾನೂ ಕಾಶಿಗೆ ಬರುತ್ತೇನೆ ಎಂದು ಹಠ ಮಾಡುತ್ತಿದ್ದೆ
ನನ್ನಲ್ಲಿ ಇರುವುದರಲ್ಲಿ ಒಂದು ಚಂದದ  ಕೆಂಪುಬಣ್ಣದ ಫ್ರಾಕ್ ಹಾಕಿ ಸಿದ್ಧಳಾಗಿದ್ದೆ.ಯಾರೇನೂ ಹೇಳಿ ಸಮಾಧಾನ ಮಾಡಿದರೂ ನಾನು ಕೇಳುವ ಪರಿಸ್ಥಿತಿ ಯಲ್ಲಿ ಇರಲಿಲ್ಲ ಯಾಕೆಂದರೆ ಸಂಧ್ಯಾ ಹೋಗುತ್ತಿದ್ದಾಳಲ್ಲ‌! ಮತ್ತೆ ನನ್ನನ್ಯಾಕೆ ಕರೆದುಕೊಂಡು ಹೋಗಬಾರದು ಎಂಬುದೊಂದೇ ಪ್ರಶ್ನೆ ನನ್ನದು‌ಆಗ ಅಜ್ಜಿ ಅವಳ ತಂದೆ ತಾಯಿ ಹೋಗುತ್ತಾರೆ ಹಾಗಾಗಿ ಅವಳನ್ನು ಕರೆದುಕೊಂಡು ಹೋಗುತ್ತಾರೆ...ನೀನು ನಿನ್ನ ತಂದೆ ತಾಯಿ ಹೋದಾಗ ಅವರ ಜೊತೆಯಲ್ಲಿ ಹೋಗು ಕಾಶಿಗೆ ಹೋಗುದೆಂದರೆ ಸಣ್ಣ ವಿಚಣರವಲ್ಲ..ಅದಕ್ಕೆ ಪುಣ್ಯ ಬೇಕು ಎಂದು ಏನೇನೋ ಹೇಳಿದರು...ಅದೆಲ್ಲ ಅರ್ಥ ಆಗುವ ವಯಸ್ಸು ನನ್ನದಲ್ಲ.ನನಗೆ ಕಾಶಿ ಎಂದರೇನು ? ಎಂದು ಕೂಡ ಗೊತ್ತಿರಲಿಲ್ಲ. ನನ್ನ ಒಬ್ಬ ಚಿಕ್ಕಪ್ಪ ರಾಮಕೃಷ್ಣ ಭಟ್ ಕಾಶಿಯಲ್ಲಿ ಪ್ರೊಫೆಸರ್ ಆಗಿದ್ದರು‌.ಅವರೆಂದರೆ ನನಗೆ ತುಂಬಾ ಇಷ್ಟ ಹಾಗಾಗಿ ಇವರೆಲ್ಲ ಅವರ ಮನೆಗೆ ಹೋಗುತ್ತಾರೆ ಎಂದು ಭಾವಿಸಿದ್ದೆ.ಹಾಗಾಗಿ ಸಂಧ್ಯನ ಜೊತೆಗೆ ನನಗೂ ಕಾಶಿ ಅಪ್ಪಚ್ಚಿ ಮನೆಗೆ ಹೋಗಬೇಕೆಂದಿತ್ತು.
ಬಹುಶಃ ಇವರೆಲ್ಲ ಬೆಳಗಿನ ಜಾವ ಮನೆ ಬಿಟ್ಟಿರಬಹುದು ಮಂಗಳೂರು ತನಕ ಕಾರು ಅಥವಾ ಜೀಪಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಹೋಗಿದ್ದಿರಬಹುದು.
ಇವರನ್ನು ಕಳಹಿಸಿಕೊಡುವುದಕ್ಕಾಗಿ ಇರಬಹುದು ನನ್ನ ಸೋದರತ್ತೆ ಮುಂಡ್ರಕಜೆ ಅತ್ತೆ ಬಂದಿದ್ದರು.ಇವರೆಲ್ಲ ಹೊರಡುವಾಗ ನಾನು ಅತ್ತು ಕರೆದು ಗಲಾಟೆ ಮಾಡುತ್ತೇನೆಂದು ಇರಬಹುದು, ಅತ್ತೆ ನನ್ನನ್ನು ಮುದ್ದು ಮಾಡಿ ನಾನು ನೀನು ಒಟ್ಟಿಗೆ ಕಾಶಿಗೆ ಹೋಗುವ ಆಯ್ತಾ ಎಂದು ಮುದ್ದು ಮಾಡಿ ಕೈ ಹಿಡಿದು ಗುಡ್ಡ ಹತ್ತಿ ಎಲ್ಲಿಗೋ ಕರೆದುಕೊಂಡು ಹೋದರು.ಅಲ್ಲಿ ನಾಯಿ ಬೆಕ್ಕುಗಳ ಕಥೆ ಹೇಳಿದರು.ಇಲ್ಲಿ ನನ್ನ ಅತ್ತೆ ಬಗ್ಗೆ ಒಂದೆರಡು ಮಾತು ಬರೆಯಲೇ ಬೇಕು.ನನ್ನತ್ತೆ ಹೆಚ್ಚೇನೂ ಓದಿದವರಲ್ಲ..ಆದರೆ ಹಳ್ಳಿ ಮದ್ದುಗಳ ಕುರಿತು ಅಪಾರ ಜ್ಣಾನವಿದೆ.ಅವರ ಮನೆಗೆ ಬಂದು ಅನೆಕರು ಔಷಧಿ ತಗೊಂಡು ಹೋಗಿ ಗುಣಮುಖರಾಗುತ್ತಿದ್ದರು.ಬಂದವರಿಗೆಲ್ಲ ಉಚಿತವಾಗಿ ಔಷಧ ಕೊಡುತ್ತಿದ್ದದಲ್ಲದೆ ಊಟ ತಿಂಡಿಯನ್ನು ಕೂಡ ಬಡಿಸುತ್ತಿದ್ದರು.ಆ ಬಗ್ಗೆ ಅವರಿಗೆ ಒಂದಿನಿತು ಬೇಸರವಿರಲಿಲ್ಲ.ಅವರಿಗೆ ಅನೇಕ ಕಥೆಗಳು ಗೊತ್ತಿದ್ದವು. ಹೆಣ್ಣು ನಾಯಿ ಎರಡು ಮನುಷ್ಯ ಶಿಶುಗಳನ್ನು ಮರಿ ಹಾಕುವುದು ,ಅವರು ದೊಡ್ಡವರಾದ ಮೇಲೆ ದೊಡ್ಡವಳು ತಾಯಿ ನಾಯಿ ಬಾಗಿಲಿಗೆ ಬಂದಾಗ ಕಲ್ಲು ಬಿಸಾಡಿ ಓಡಿಸುವುದು,ಚಿಕ್ಕವಳು ಆದರದಿಂದ ನೋಡಿಕೊಳ್ಳುವುದು ಅವಳಿಗೆ ತಾಯಿ ನಾಯಿ ನಿಧಿಯನ್ನು ತೋರಿಸುವುದು..ಇತ್ಯಾದಿ ಅನೇಕ ಜಾನಪದ ಕಥೆಗಳ ಭಂಡಾರವೇ ಅತ್ತೆಯ ಬಾತಿಯೊಳಗೆ ಅಡಗಿತ್ತು.
ಹೀಗೆ ಅತ್ತೆ ಕಥೆ ಹೇಳುತ್ತಾ ನನ್ನನ್ನು ಮಂಗಡಿಸಿ( ಸಮಾಧಾನ ) ಮಾಡಿ ಮನೆಗೆ ಹಿಂದಿರುಗುವಷ್ಟರಲ್ಲಿ ಮನೆ ಇಡೀ ಖಾಲಿ ಆಗಿತ್ತು.ಎಲ್ಲರೂ ಕಾಶಿಗೆ ಹೋಗಿ ಆಗಿತ್ತು.ನಾನು ಮಂಗ ಆದ್ದು ಗೊತ್ತಾಗಿ ಮತ್ತೆ ಅತ್ತು ಗೋಳಾಡಿದೆ.ಆಗ ಅಮ್ಮ ನಾವು ಕೂಡ ಮುಂದೆ ಕಾಶಿಗೆ ಹೋಗುವ ಎಂದು ಸಮಾಧಾನ ಮಾಡಿದರು.
ಅವರೆಲ್ಲ ಕಾಶಿಗೆ ಹೋಗಿ ಬಂದರು..ಅಮ್ಮನಿಗೊಂದು ಪಟ್ಟೆ ಸೀರೆ ತಂದಿದ್ದರು..ನನಗೂ ಏನಾದರೂ ಹೊಸ ಅಂಗಿ ತಂದಿರಬಹುದೇ ಎಂದು ಆಸೆ ಗಣ್ಣಿನಿಂದ ತಂದ ವಸ್ತುಗಳನ್ನು ನೊಡುತ್ತಾ ಕಾಯುತ್ತಿದ್ದೆ..ಕಾದದ್ದೇ ಬಂತು ಅಷ್ಟೇ !
ಕಾಲ ಒಂದೇ ತರಹ ಇರುವುದಿಲ್ಲ..1996 ,ರಲ್ಲಿ ನಾನು ಕಾಶಿ ಹರಿದ್ವಾರ ಹೃಶೀಕೇಶ ಮೊದಲಾದೆಡೆ ಹೋಗಿ ಬಂದೆ ಆಗಲೂ ನನಗೆ ನನ್ನನ್ನು ಬಿಟ್ಟು ಹೊದ ನೆನಪು ಕಾಡಿತ್ತು.
ತಂದೆ ಇರುವಾಗಲೇ ನಮಗೆಲ್ಲ ಕಾಶಿಗೆ ಹೋಗಿ ಬರಬೇಕೆಂದು ಇತ್ತು‌..ಆದರೆ ಯಾಕೋ ಕಾಲ ಕೂಡಿ ಬರಲಿಲ್ಲ.. ತಂದೆಯವರು ಅನಿರೀಕ್ಷಿತವಾಗಿ ಸಡನ್ ಆಗಿ ತೀರಿ ಹೋದರು‌.ಆಗ ಅವರ ಅಸ್ಥಿಯನ್ನು ಗಂಗೆಯಲ್ಲಿ ಹಾಕುವ ಸಲುವಾಗಿ ಶುದ್ಧೀಕರಿಸಿ ಎತ್ತಿಟ್ಟಿದ್ದೆವು.
ನಿನ್ನೆ ತಂದೆಯವರ ಏಳನೇ ವರ್ಷದ ತಿಥಿ ಇದನ್ನು ಪ್ರಯೋಗದಲ್ಲಿ ಮಾಡಿದರು.( ನನಗೆ ಇವರೊಂದಿಗೆ ಕಾಶಿಗೆ ಹೋಗಲಾಗಲಿಲ್ಲ)
ಈ ಬಾರಿ ಕಾಶಿಗೆ ಹೊರಡುವಾಗ ಅಮ್ಮ ಬಹಳ ಭಾವುಕರಾಗಿದ್ದರು.ಹಿಂದೆ ತಾನನುಭವಿಸಿದ ಅವಮಾನ ತಿರಸ್ಕಾರಗಳು ಮಾಡಿರಬಹುದು ಜೊತೆಗೆ ಅಪ್ಪನ ನೆನಪೂ ಆಗಿರಬಹುದು.
ಮೊದಲೊಂದು ಕಾಲವಿತ್ತು‌ಜನರು ನಡೆದು ಕೊಂಡು ಕಾಶಿಗೆ ಹೋಗುತ್ತಿದ್ದರು‌
ನನ್ನ  ಅಜ್ಜಿ ಚಿಕ್ಕಪ್ಪ ನವರೆಲ್ಲ  ರೈಲಿನಲ್ಲಿ ಕಾಶಿಗೆ ಹೋಗಿದ್ದರೆ ಇಂದು ಅಮ್ಮ ವಿಮಾನದಲ್ಲಿ ಹೋಗಿದ್ದಾರೆ.
ಕಾಲ ಎಲ್ಲರ ಕಾಲನ್ನೂ ಎಳೆಯುತ್ತದೆ ,ಯಾರನ್ನೂ ಬಿಡುವುದಿಲ್ಲ..ಕಾಲದ ಚಕ್ರ ಮೇಲೆ ಕೆಳಗೆ ಹೋಗುತ್ತಲೇ ಇರುತ್ತದೆ.ಕಷ್ಟ ಬಂದಾಗ ಕುಗ್ಗದೆ ಸಿರಿ ಬಂದಾಗ ಹಿಗ್ಗದೆ ಬಾಳನ್ನು ಹದದಿಂದ ಬಾಳುವುದು ಮನುಷ್ಯ ಧರ್ಮ.ನನ್ನಮ್ಮ ಕಾಶಿಗೆ ಹೋಗುವ ಮುನ್ನ ಎರಡು ಸಾವಿರ ರುಪಾಯಿ ನನ್ನ ಕೈಗಿತ್ತು ಮೊನ್ನೆಯಷ್ಟೇ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಇರುವ ಮನೆ ಕೆಲಸದ ಅಜ್ಜಿಗೆ ಕೊಡು ಎಂದು ಹೇಳಿ ಕೊಟ್ಟರು.
ಮಾನವೀಯತೆಗಿಂತ ದೊಡ್ಡ ಧರ್ಮ ಬೇರೆ ಇಲ್ಲ ..ಕಾಶಿಗೆ ಹೋದದ್ದಕ್ಕಿಂತ ಸಾವಿರ ಪಟ್ಟು ಪುಣ್ಯ ಸಂಚಯವನ್ನು ಅಮ್ಮ ಇಲ್ಲಿಯೇ ಗಳಿಸಿ ಹೋದರು.ಸದಾ ಕಷ್ದಲ್ಲಿರುವವರಿಗಾಗಿ ಮರುಗುವ ತನ್ನ ಕೈಲಾದ ಸಹಾಯ ಮಾಡುವ ಅಮ್ಮನಿಗೆ ಕಾಶಿಗೆ ಹೋಗಿ ಆಗಬೇಕಾದ್ದು ಏನೂ ಇಲ್ಲ..ಅಮ್ಮನೇ ಒಂದು ಕಾಶಿ ..ಅದೇನೇ ಇರಲಿ  ಅಲ್ಲಿವಿಶ್ವನಾಥನ ದರ್ಶನದಿಂದ ಬದುಕು ಸಾರ್ಥಕವಾಗಲಿ ಎಂದು ಆಶಿಸುವೆ