Thursday 24 May 2018

ಬದುಕೆಂಬ ಬಂಡಿಯಲಿ - 10 ಸಿಂಚನಾಳ ಐಎಎಸ್ ಕನಸು ಈಡೇರಲಿ © ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕೆಂಬ ಬಂಡಿಯಲಿ - 10 ಸಿಂಚನಾಳ  ಐಎಎಸ್ ಕನಸು ಈಡೇರಲಿ © ಡಾ.ಲಕ್ಷ್ಮೀ ಜಿ ಪ್ರಸಾದ
ಸುಮಾರು ಐದು ತಿಂಗಳ ಹಿಂದಿನ ವಿಚಾರವಿದು.ನನ್ನ ವಿದ್ಯಾರ್ಥಿನಿ  ಸಿಂಚನಾ ( ಹೆಸರು ಬದಲಾಯಿಸಿರುವೆ)ಅವರ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಬರುತ್ತಿದ್ದಳು.ದೂರದ ಹಳ್ಳಿಯಲ್ಲಿ ಇರುವ ತಂದೆ ತಾಯಿ ಇವಳನ್ನು ಇರಿಸಿಕೊಂಡಿದ್ದಕ್ಕಾಗಿ ಆ ಬಂಧುಗಳಿಗೆ ತಿಂಗಳಿಗೆ ಏಳೆಂಟು ಸಾವಿರ ದುಡ್ಡು ಕೊಡುತ್ತಿದ್ದರು.ಅಥವಾ ಹಳ್ಳಿಯ ಮುಗ್ದರಾದ ಅವರಿಂದ ಈ ಬಂಧುಗಳು ಕಿತ್ತುಕೊಳ್ಳುತ್ತಿದ್ದರು ಎನ್ನುವುದು ಸರಿಯಾಗಬಹುದೇನೋ.ಅವಳ ತಂದೆ ಮಾತಿನ ನಡುವೆ ಕಾಲೇಜಿಗೆ ಕಟ್ಟಲೆಂದು ಮೂವತ್ತು ಸಾವಿರ ಪಡೆದುಕೊಂಡ ಬಗ್ಗೆ ಹೇಳಿದ್ದರು.ಆಗ ನಾನು ನಮ್ಮದು ಸರಕಾರಿ ಕಾಲೇಜು.ಇಲ್ಲಿ ಹುಡುಗಿಯರಿಗೆ ಕೇವಲ ಇನ್ನೂರು ಇನ್ನೂರೈವತ್ತು ಮಾತ್ರ ಪೀಸ್ ಇದೆ‌.ಅದನ್ನು ಆರಂಭದಲ್ಲಿ ದಾಖಲಾತಿ ಮಾಡುವಾಗ ಕಟ್ಟಿಸಿಕೊಳ್ಳುತ್ತಾರೆ ಎಂದು ಹೇಳಿದಾಗ ಅವರಿಗೆ ನಂಬಿಕೆ ಬಂದಿರಲಿಲ್ಲ ‌
ನಮ್ಮಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಾ ಇದ್ದವು.ಈ ವಿದ್ಯಾರ್ಥಿನಿ ಮೊದಲ ಮೂರು ಪರೀಕ್ಷೆಗಳಿಗೆ ಬಂದಿದ್ದಳು.ನಂತರದ ಪರೀಕ್ಷೆ ಗಳಿಗೆ ಗೈರುಹಾಜರಾಗಿದ್ದಳು.ಇದು ನನ್ನ ಗಮನಕ್ಕೆ ಬಂದು ಅವಳ ಸ್ನೇಹಿತೆಯರಲ್ಲಿ ವಿಚಾರಿಸಿದೆ‌.ಆಗ ಮೂರನೆಯ ಪರೀಕ್ಷೆ ಬರೆದವಳು ನಂತರ ಎಲ್ಲಿ ಹೋಗಿದ್ದಾಳೆಂದು ತಿಳಿಯದು ಎಂದು ಹೇಳಿದರು. ಒಬ್ಬಾಕೆ " ಅವಳ ಸಂಬಂಧಿಕರು ಮನೆ ಕೆಲಸ ಮಾಡದ್ದಕ್ಕೆ ಅವಳನ್ನು ರಾತ್ರಿ  ಮನೆಯಿಂದ ಹೊರಗೆ ಹಾಕಿದ್ದಾರಂತೆ‌.ನಂತರ ಎಲ್ಲಿ ಹೋಗಿದ್ದಾಳೆ,ಏನಾಗಿದೆ ಎಂದು ತಿಳಿದಿಲ್ಲ ಎಂದು ತಿಳಿಸಿದರು‌
ಅದೇ ಹೊತ್ತಿಗೆ ಅವಳ ಸಂಬಂಧಿಕರ ಮನೆಯ ಭಾರೀ ಜೋರಿನ ಮಹಿಳೆಯೊಬ್ಬರು( ಅವಳ ದೊಡ್ಡಮ್ಮನ ಮಗಳು ಅಕ್ಕ ಎಂದು ನಂತರ ತಿಳಿಯಿತು )  ಕಾಲೇಜಿಗೆ ಬಂದು ಆ ಹುಡುಗಿ ಪರೀಕ್ಷೆಗೆ ಬಂದಿದ್ದಾಳಾ ಎಂದು ವಿಚಾರಿಸಿದರು.ಅವರಿಗೂ ಅವಳು ಎಲ್ಲಿಗೆ ಹೋಗಿದ್ದಾಳೆ ಎಂದು ತಿಳಿದಿರಲಿಲ್ಲ.
ಆಗ ನಾನು‌ ಮತ್ತಷ್ಟು ಅವಳ ಬಗ್ಗೆ ಅವರ ಸಹಪಾಠಿಗಳಲ್ಲಿ ವಿಚಾರಿಸಿದೆ‌.ಅವಳು ಎಲ್ಲಿದ್ದಾಳೆಂಬ ಮಾಹಿತಿ ಸಿಕ್ಕರೆ ತಿಳಿಸಿ ಎಂದು ಹೇಳಿ ನನ್ನ ಮೊಬೈಲ್ ನಂಬರ್ ಕೊಟ್ಟೆ‌.ಅವಳು ಸಿಕ್ಕರೆ ನನ್ನ ನಂಬರ್ ಅವಳಿಗೆ ಕೊಡಲು ತಿಳಿಸಿದೆ.
ಅದೇ ದಿನ ರಾತ್ರಿ ಆ ವಿದ್ಯಾರ್ಥಿನಿ ನನಗೆ ಕರೆ ಮಾಡಿದಳು.ಅವಳ ಸ್ನೆಹಿತೆ ಹೇಳಿದ್ದು ಸತ್ಯವಾಗಿತ್ತು.ಇವಳು ನೆಂಟರ ಮನೆಯಲ್ಲಿ ಎಲ್ಲಾ ಕೆಲಸ ಮಾಡಿ ಕಾಲೇಜಿಗೆ ಬರಬೇಕಾಗಿತ್ತು.ಪೂರ್ವ ಸಿದ್ಧತಾ ಪರೀಕ್ಷೆ ಇದ್ದ ಕಾರಣ ಇವಳು ಮನೆ ಮಂದಿಯ ಬಟ್ಟೆಗಳನ್ನು ಒಗೆಯಲಿಲ್ಲ.ಅದಕ್ಕೆ ಬೈದು ಹೊಡೆದು ಮನೆಯಿಂದ ಹೊರಗೆ ಹಾಕಿದ್ದರು‌.ರಾತ್ರಿ ಹೊತ್ತಿನಲ್ಲಿ ಏನು ಮಾಡುವುದೆಂದು ತಿಳಿಯದೆ ತಂದೆಗೆ ಪೋನ್ ಮಾಡಿದಾಗ ಊರಿಗೆ ಬರಲು ತಿಳಿಸಿದರು‌.ಊರಿಗೆ ಹೋದರೆ ಮತ್ತೆ ಹಿಂದೆ ಬರಲು ಸಾಧ್ಯವಿಲ್ಲ, ತನ್ನ ವಿದ್ಯಾಭ್ಯಾಸ ನಿಂತು ಹೋಗುತ್ತದೆ ಎಂದು ಹೆದರಿದ ಹುಡುಗಿ ಶಿವಮೊಗ್ಗದಲ್ಲಿ ಇರುವ  ತನ್ನ ಸೋದರತ್ತೆ ಮನೆಗೆ ಹೋಗಿದ್ದಾಳೆ. ಅಲ್ಲಿಂದ ನನಗೆ ಕರೆ ಮಾಡಿದ್ದಳು .ಆಗ ನಾನು ದ್ವಿತೀಯ ಪಿಯುಸಿ ಗೆ ಖಾಸಗಿಯಾಗಿ ಕಟ್ಟು .ಮತ್ತೆ ಪರೀಕ್ಷೆ ಸಮಯದಲ್ಲಿ ಬಂದು ಪರೀಕ್ಷೆ ಬರೆ ಎಂದು ಸಲಹೆ ಕೊಟ್ಟೆ‌.ಒಂದೆರಡು ದಿನಗಳ ಒಳಗೆ ಖಾಸಗಿಯಾಗಿ ಕಟ್ಟುವವರು ದಾಖಲೆಗಳನ್ನು ನೀಡಿ ಶುಲ್ಕ ಕಟ್ಟಬೇಕಿತ್ತು.ಹಾಗಾಗಿ ಕೂಡಲೇ ಕಾಲೇಜಿಗೆ ಬಂದು ಶುಲ್ಕ ಪಾವತಿ ಮಾಡಿ ದಾಖಲೆಗಳನ್ನು ನೀಡಲು ಹೇಳಿದೆ‌.ಅವಳು ಅದಕ್ಕೆ ಒಪ್ಪಿದ್ದಳು.ಆದರೆ ಎರಡು ಮೂರು ದಿನ ಕಳೆದರೂ ಅವಳ ಪತ್ತೆ ಇಲ್ಲ. ಖಾಸಗಿಯಾಗಿ ಕಟ್ಟುವ ಸಮಯ ಕಳೆದು ಹೋಯಿತು.
ಮೂರನೆಯ ದಿನ ರಾತ್ರಿ ಅವಳ ತಂದೆ ಮತ್ತೆ ನನಗೆ ಕರೆ ಮಾಡಿ" ಅವರ ಮಗಳು ಸಿಂಚನಾ ( ಹೆಸರು ಬದಲಿಸಿದೆ)  ನನ್ನ ಮನೆಗೆ ಬಂದಿರುವಳೇ ಎಂದು ವಿಚಾರಿಸಿದರು‌.ಆಗ ನಾನು ನಮ್ಮ ‌ಮನೆಗೆ ಬಂದಿಲ್ಲ. ಆದರೆ ಎರಡು ದಿನ ಮೊದಲು ಅವಳ ಸೋದರತ್ತೆ ಮನೆಯಿಂದ ಫೋನ್ ಮಾಡಿದ್ದನ್ನು ತಿಳಿಸಿದೆ.ಆಗ ಅವರು ಅವಳು ಆ ದಿನ ಬೆಳಗ್ಗೆ ಸಿವಮೊಗ್ಗದ ಅತ್ತೆ ಮನೆಯಿಂದ ಮನೆಯವರಿಗೆ ತಿಳಿಸದೆ ಎಲ್ಲೋ ಹೋಗಿದ್ದಾಳೆ‌.ಎಲ್ಲಿಗೆ ಹೋಗಿದ್ದಾಳೆ ಎಂದು ತಿಳಿದಿಲ್ಲ ಅದಕ್ಕಾಗಿ ನನಗೆ ಪೋನ್ ಮಾಡಿದ್ದೆಂದು ತಿಳಿಸಿದರು‌.ಅವಳು ಎಲ್ಲಿದ್ದಾಳೆಂದು ಗೊತ್ತಾದರೆ ತಿಳಿಸುತ್ತೇನೆ ಎಂದು ಹೇಳಿದೆ.
ಈ ಹುಡುಗಿ ಏನು ಅಪಾಯ ಮಾಡಿಕೊಳ್ಳುವಳೋ,ಏನಾದರೂ ಅಪಾಯಕ್ಕೆ ಸಿಲುಕಿರುವಳೋ ಏನೋ ಎಂದು ಆತಂಕವಾಯಿತು‌.ಅವಳಿಗೆ ಕರೆ ಮಾಡಿದರೆ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದು ಬರುತ್ತಾ ಇತ್ತು.

ಮರುದಿನ ಕಾಲೇಜಿನಲ್ಲಿ ಅವಳ ಸ್ನೇಹಿತೆಯರಲ್ಲಿ ವಿಚಾರಿಸಿದೆ .ಆಗ ಅವಳ ಸ್ನೇಹಿತೆ ಕಾವ್ಯಾ " ನಿನ್ನೆ ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಅವಳು ನೆಲಮಂಗಲ ಬಸ್ ಸ್ಟಾಪ್ ಬಂದು ಯಾರಲ್ಲೋ ಪೋನ್ ಕೇಳಿ ಇವಳಿಗೆ ಫೋನ್ ಮಾಡಿದ್ದಾಳೆ.ನಂತರ ಕಾವ್ಯಾ ಮತ್ತು ಅವಳ ತಾಯಿ ಆಟೋ ಮಾಡಕೊಂಡು ಬಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ವಿಚಾರವನ್ನು ತಿಳಿಸಿದಳು.
ಇವಳು ಕಾವ್ಯಾಳ ಫೋನ್ ನಿಂದ ತಂದೆಗೆ ಕರೆ ಮಾಡಿ ಮಾತನಾಡಲು ಯತ್ನ ಮಾಡಿದಾಗ ಅವರು ಕರೆಯನ್ನು ಕೋಪದಿಂದ ಅರ್ಥದಲ್ಲಿ ಕಟ್ ಮಾಡಿದ್ದಾರೆ.ನಂತರ ಕಾವ್ಯಾ ಪೋನ್ ಗೆ ಕರೆ ಮಾಡಿ ಅವಳನ್ನು ಯಾಕೆ ಇರಿಸಿಕೊಂಡಿದ್ದೀರಿ ? ಕಿಡ್ನ್ಯಾಪ್ ಕೇಸು ಹಾಕುತ್ತೇವೆಂದು ಜೋರು ಮಾಡಿದ್ದಾರೆ.
ಆಗ ನಾನು ಕಾವ್ಯಾ ಮತ್ತು  ವಿದ್ಯಾರ್ಥಿನಿ ಸಿಂಚನಾ  ಇಬ್ಬರನ್ನೂ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದೆ‌. ಅದೃಷ್ಟವಶಾತ್ ವೃತ್ತ ನಿರೀಕ್ಷಕರಾದ ಶಿವಣ್ಣ ಅವರು ಇದ್ದರು‌.ಅವರಲ್ಲಿ ವಿಷಯ ತಿಳಿಸಿ ಏನು ಮಾಡುವುದೆಂದು ಕೇಳಿದೆ.ಆಗ ಅವರು ಆ ವಿದ್ಯಾರ್ಥಿನಿ ತಂದೆಯಲ್ಲಿ ಮಾತನಾಡಿ ಸರ್ಕಾರಿ ಹಾಸ್ಟೆಲ್ ಗೆ ಸೇರಿಸಲು ಯತ್ನ ಮಾಡುವ,ಅಷ್ಟರ ತನಕ ಅವಳು ಅವಳ ಸ್ನೇಹಿತೆ ಕಾವ್ಯಾ ಮನೆಯಲ್ಲೇ ಇರಲಿ ಎಂದು ಹೇಳಿದರು.ಅವಳ ತಂದೆಗೆ ಕರೆ ಮಾಡಿ ಮರುದಿನ ಬರಲು ಹೇಳಿದರು.ಅವರು ಒಪ್ಪಲಿಲ್ಲ ‌.ಆ ಹೊತ್ತಿಗಾಗುವಾಗ ಹೊಡೆದು ಬಡಿದು ಹೊರ ಹಾಕಿದ ಸಂಬಂಧಿಕರು " ಅವಳು ಲವ್ ಮಾಡಿ ಯಾರ ಜೊತೆಯಲ್ಲೋ ಓಡಿ ಹೋಗಲು ತಯಾರಾಗಿದ್ದಳು.ಅದನ್ನು ತಡೆದು ನಾವು ಜೋರು ಮಾಡಿದ್ದೇವೆ‌.ಅದಕ್ಕೆ ಅವಳು‌ ಮನೆ ಬಿಟ್ಟು ಹೋಗಿದ್ದಾಳೆ ಎಂದು ಕಟ್ಟು ಕಥೆ ಕಟ್ಟಿ ಅವಳ ತಂದೆ ತಾಯಿ ತಲೆಕೆಡಿಸಿದ್ದರು.ಹಾಗಾಗಿ ನಮ್ಮ ಮಾತು ಕೇಳದ ಅವಳಿಗೂ ನಮಗೂ ಸಂಬಂಧ ಇಲ್ಲವೆಂದು ಹೇಳಿ‌ ಪೋನ್ ಕರೆ ಕಟ್ ಮಾಡಿದ್ದರು.ಆಗ ಅವಳನ್ನು ಹಾಸ್ಟೆಲ್ ಗೆ ಸೇರಿಸುವಂತೆ ಶಿವಣ್ಣ ಅವರು ತಿಳಿಸಿದರು.
ವರ್ಷದ ನಡುವೆ ಸರಕಾರಿ ಹಾಸ್ಟೆಲ್ ಗೆ ಸೇರುವುದು ಸುಲಭದ ವಿಚಾರವಲ್ಲ‌.ಈ ನಿಟ್ಟಿನಲ್ಲಿ ತಹಸಿಲ್ದಾರ್ ರಮೇಶ್ ಅವರ ಸಹಾಯ ಕೇಳಿದೆ‌.ಅವರು ಅವಳನ್ನು ಸೇರಿಸಿಕೊಳ್ಳುವಂತೆ ಹಾಸ್ಟೆಲ್ ನ ಅಧಿಕಾರಿಗಳಿಗೆ ಪೋನ್ ಮಾಡಿ ಹೇಳಿ ಒಂದು ಪತ್ರ ಕೂಡ ಕೊಟ್ಟರು‌.
ಅಲ್ಲಿಗೆ ಹೋಗಿ ಮಾತನಾಡುವಾಗ ಅವಳ ಸಂಬಂಧಿಕರ ಪೋನ್ ನಂಬರ್ ಕೇಳಿದರು. ಹಾಸ್ಟೆಲ್ ಅಧಿಕಾರಿಗಳು ಅವರಿಗೆ ಪೋನ್ ಮಾಡಿದಾಗ ಮತ್ತೆ ಅವರು ಅದೇ ಕಥೆಯನ್ನು ಹೇಳಿದರು.ಲವ್ ಮಾಡಿ ಓಡಿ ಹೋಗಲು ತಯಾರಾಗಿ ಮನೆಯಿಂದ ಹೊರಗೆ ಬಂದಿದ್ದಾಳೆಂದು ಅವರು ಹೇಳಿದ ಕಟ್ಟು ಕಥೆ ನಂಬಿದ ಅವರು ಅವಳಿಗೆ ಹಾಸ್ಟೆಲ್ ನಲ್ಲಿ ಇರಲು ಅವಕಾಶ ನೀಡಲಿಲ್ಲ ‌.ಇಷ್ಟಾಗುವಾಗ ಮತ್ತೆ ಒಂದೆರಡು ದಿನ ಕಳೆದಿತ್ತು.ಆದಷ್ಟು ಬೇಗನೆ ಅವಳಿಗೆ ಒಂದು ಹಾಸ್ಟೆಲ್ ವ್ಯವಸ್ಥೆ ಮಾಡಬೇಕಾಗಿತ್ತು.ಹಾಗಾಗಿ ಮಕ್ಕಳ ಹಕ್ಕು ದೂರವಾಣಿ10978 ಗೆ ಕರೆ ಮಾಡಿ ಸಹಾಯ ಕೇಳುವುದು ಎಂದು ನಿರ್ಧರಿಸಿದೆ.ಅಷ್ಟರಲ್ಲಿ ನಮ್ಮ ಕಾಲೇಜಿನಲ್ಲಿ ‌ಮಕ್ಕಳ‌ಹಕ್ಕಿನ ಬಗ್ಗೆ ನೆಲಮಂಗಲದ ಮಕ್ಕಳ ಸಹಾಯ ವಾಣಿ ಕೇಂದ್ರದ ಎನ್ ಜಿ ಒ ವತಿಯಿಂದ ಒಂದು ಕಾರ್ಯಕ್ರಮ ಮಾಡಿದರು‌.ಆಗ ಅ ಎನ್ ಜಿ ಒ ದ ನಿರ್ದೇಶಕರಲ್ಲಿ ಈ ವಿದ್ಯಾರ್ಥಿನಿ ಸಮಸ್ಯೆ ಬಗ್ಗೆ ತಿಳಿಸಿ ಅವಳಿಗೆ ಉಳಿದುಕೊಳ್ಳಲು ಒಂದು ವ್ಯವಸ್ಥೆ ಮಾಡಿ‌ಕೊಡಿ ಎಂದು ಕೇಳಿದೆ‌.ಆಯಿತು ಎಂದು ನನ್ನ ಪೋನ್ ನಂಬರ್ ತಗೊಂಡು ಹೋದವರದ್ದು ಮತ್ತೆ ಎರಡು ದಿನ ಕಳೆದರೂ ಸುದ್ದಿಯೇ ಇಲ್ಲ. ನಾನು ಕರೆ‌ಮಾಡಿದರೆ  ಮಕ್ಕಳ ಹಕ್ಕು ಕಾರ್ಯಾಗಾರದಲ್ಲಿ ಇದ್ದೇನೆ.ಮತ್ತೆ ಕರೆ ಮಾಡಿ ಎಂಬ ಉತ್ತರ.
ಮತ್ತೆ ಕೊನೆಗೆ 1098 ಗೆ ಕರೆ ಮಾಡಿದೆ‌.ಆಗ ಅವರು ನೆಲಮಂಗಲ ಮಕ್ಕಳ ಸಹಾಯವಾಣಿಗೆ ಸಂಬಂಧಿಸಿದ ಅದೇ ಎನ್ ಜಿ ಒ ನಿರ್ದೇಶಕರನ್ನು ಸಂಪರ್ಕಿಸುವಂತೆ ತಿಳಿಸಿದರು‌.ಆಗ ನಾನು ಅವರಿಗೆ ಎರಡು ಮೂರು ದಿವಸಗಳ ಹಿಂದೆಯೇ ತಿಳಿಸಿದ್ದೇವೆ‌.ಅವರಿಗಿಂತ ಮೇಲಿನ ಅಧಿಕಾರಿಗಳ ನಂಬರ್ ಕೊಡಿ ಎಂದು ಹೇಳಿದೆ.ಆಗ ಅವರು ದಿನೇಶ್ ಎಂಬವರ ನಂಬರ್ ನೀಡಿದರು.ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ‌.ಅವರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಒಬ್ಬರು ಕೌನ್ಸಿಲರ್ ಅನ್ನು ಕರೆದುಕೊಂಡು ಬಂದು ಇವಳಲ್ಲಿ ಮಾತನಾಡಿ ವಿಷಯ ಅರ್ಥ ಮಾಡಿಕೊಂಡರು‌.ಅವಳ ತಂದೆಯ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಿದೆನಾದರೂ ಏನೂ ಪ್ರಯೋಜನವಾಗಲಿಲ್ಲ. ಅವರ ನೆಂಟರು ಹೇಳಿದ ಕಟ್ಟು ಕಥೆ ನಂಬಿರುವ ಅವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿ ಯಲ್ಲಿ ಇರಲಿಲ್ಲ. ಕೊನೆಗೆ CWC ಯಿಂದ ಅವಳ ತಂದೆಗೆ ಕರೆ ಮಾಡಿ ಬರುವಂತೆ ತಿಳಿಸಿದರು‌‌.ಎನ್ ಜಿ ಒ ಇಂದ ಯಾರೋ‌ ಒಬ್ಬರು ಬಂದು ನನ್ನ ವಿದ್ಯಾರ್ಥಿನಿಯಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಬಸ್ ನಿಲ್ದಾಣ ಕ್ಕೆ ಬರಲು ತಿಳಿಸಿದರು.
ಮೊದಲೇ ಅವಳ ಸಂಬಂಧಿಕರು ಅವಳಿಗೆ ಹೊಡೆದು ಬಡಿದು ಮಾಡಿದ್ದಾರೆ‌.ಈಗ ತಂದೆ ತಾಯಿಯರು ಅವಳಿಗೆ ವಿರುದ್ಧವಾಗಿದ್ದಾರೆ‌‌.ಇಂತಹ ಇಕ್ಕಟ್ಟಿನ ಸಮಯದಲ್ಲಿ ಅವಳನ್ನು ಎನ್ ಜಿ ಒ ಕಾರ್ಯಕರ್ತರ ಜೊತೆ ಒಬ್ಬಳೇ ಕಳಹಿಸಲು ಮನಸು ಒಪ್ಪಲಿಲ್ಲ ‌.ಈ ಬಗ್ಗೆ ನಮ್ಮ ಕಾಲೇಜು ಪ್ರಾಂಶುಪಾಲರಲ್ಲಿ ತಿಳಿಸಿದಾಗ ಈ ಸಮಸ್ಯೆಯ ಅರಿವಿದ್ದ ಅವರು ನನ್ನನ್ನು ಕೂಡ ಅವಳ ಜೊತೆಗೆ ಹೋಗಲು ತಿಳಿಸಿದರು ‌
ಮರುದಿನ ಎಂಟೂವರೆಗೆ ನಾನು ನೆಲಮಂಗಲ ಬಸ್ ನಿಲ್ದಾಣ ಕ್ಕೆ ಬಂದೆ‌.ಅವಳು ಅವಳ ಸ್ನೇಹಿತೆ ಕಾವ್ಯ ಜೊತೆಯಲ್ಲಿ ಎಂಟೂ ಮುಕ್ಕಾಲಕ್ಕೆ ಬಂದಳು.
ಒಂಬತ್ತು ಗಂಟೆಗೆ ಬರಲು ಹೇಳಿದ ಎನ್ ಜಿ ಒ ಕಾರ್ಯರ್ತರು ಹತ್ತೂವರೆಯಾದರೂ ಬರಲಿಲ್ಲ ‌ಅಂತೂ ಇಂತೂ ಅನೇಕ ಬಾರಿ ಕರೆ ಮಾಡಿದ ನಂತರ ಹನ್ನೊಂದು ಗಂಟೆ ಹೊತ್ತಿಗೆ ಓರ್ವ ಮಹಿಳಾ ಕಾರ್ಯ ಕರ್ತೆ ಮತ್ತೆ ಓರ್ವ ಪುರುಷ ಕಾರ್ಯಕರ್ತರು ಬಂದರು‌.ಸ್ವಲ್ಪ ಹೊತ್ತಾದ ಮೇಲೆ ದಿನೇಶ್ ಅವರು ಬಂದರು.ಇವಳ ತಂದೆಯನ್ನು ನೆಲಮಂಗಲ ಬಸ್ ನಿಲ್ದಾಣ ಕ್ಕೆ ಬರಲು ಹೇಳಿದ್ದರೂ ಅವರು ಕಾಲೇಜಿಗೆ ಹೋಗಿದ್ದರು‌.ಮತ್ತೆ ಅವರಿಗೆ ಪೋನ್ ಮಾಡಿ ಬಸ್ ನಿಲ್ದಾಣ ಕ್ಕೆ ಬರಲು ದಿನೇಶ್ ಅವರು ತಿಳಿಸಿದಾಗ ಅವಳ ತಂದೆ ತಾಯಿ ಅವಳು ಉಳಿದುಕೊಂಡಿದ್ದ  ಮನೆಯ ಅವಳ ದೊಡ್ಡಮ್ಮನ ಮಗಳು ಮತ್ತು ಅವಳ ಗಂಡ ಬಂದರು‌.ಬಸ್ ನಿಲ್ದಾಣ ದಲ್ಲಿ ಇವಳನ್ನು ನೋಡಿದ ತಕ್ಷಣವೇ ಅವಳನ್ನು ಬೈದು ಹೊಡೆದು ಎಳೆದಾಡಿದರು‌.ಅವಳ ನೆಂಟರ ಕ್ರೂರತನ ಬಗ್ಗೆ ನನಗೆ ಗೊತ್ತಿತ್ತು‌ ಆದರೆ ಎನ್ ಜಿ ಒ ಅವರಿಗೆ ಇದು ಹೀಗಾಗಬಹುದು ಎಂಬ ನಿರೀಕ್ಷೆ ಇರಲಿಲ್ಲ ‌ನಾನು ತಕ್ಷಣವೇ ಪೋಲೀಸರಿಗೆ ಕರೆ ಮಾಡಲು ಪೋನ್ ತೆಗೆದೆ‌.ಆಗ ಅವಳ ದೊಡ್ಡಮ್ಮನ ಮಗಳು ( ಸುಮಾರಾಗಿ ತಾಟಕಿಯಂತೆ ಇದ್ದಳು!) ನನ್ನ ಕೈಯಿಂದ ಮೊಬೈಲ್‌ ಕಿತ್ತುಕೊಂಡಳು.ಇನ್ನೂ ಅಲ್ಲಿ ನಿಂತರಾಗದೆಂದು ವಿದ್ಯಾರ್ಥಿನಿ ಯನ್ನು ಎಳೆದುಕೊಂಡು ಅಲ್ಲೇ ಇದ್ದ ಅಟೋ ಹತ್ತಿ ಪೋಲಿಸ್ ಸ್ಟೇಷನ್ ಬಿಡಲು ಹೇಳಿದೆ‌
ಎನ್ ಜಿ ಒ ದ ಕಾರ್ಯಕರ್ತರು ಮತ್ತು ದಿನೇಶ್ ಅವರು ಪೋಲಿಸ್ ಸ್ಟೇಷನ್ ಗೆ ಬಂದರು.
ಇಷ್ಟಾಗುವಾಗ ಎನ್ ಜಿ ಒ ದ ನಿರ್ದೇಶಕ ಕೂಡ ಬಂದರು‌.ಬಂದು  ಅವಳ ತಂದೆ ತಾಯಿ ನೆಂಟರ ಜೊತೆ ಸೇರಿಕೊಂಡು ವಿದ್ಯಾರ್ಥಿನಿ ಯನ್ನು ನಾನು ಅಪಹರಣ ಮಾಡಿದ್ದೇನೆಂದು ದೂರು ಕೊಡುತ್ತೇನೆ ಎಂದು ನನ್ನನ್ನು ಹೆದರಿಸಲು ಬಂದರು.ಆಯಿತು ಕೊಡಿ ಎಂದು ಹೇಳಿದೆ‌.ನಾನು ಮೊದಲೇ ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣ ಅವರಲ್ಲಿ ಮಾತನಾಡಿದ್ದು  ಅವರ ಸೂಚನೆಯಂತೆ ಅವಳು ಅವಳ ಸ್ನೇಹಿತೆ ಕಾವ್ಯಾ ಮನೆಯಲ್ಲಿ ಇರುವುದು ಅವರಿಗೆ ತಿಳಿದಿರಲಿಲ್ಲ. ಮಕ್ಕಳ ಪರ ನಿಲ್ಲ ಬೇಕಾಗಿದ್ದ ಎನ್ ಜಿ ಒ ನಿರ್ದೇಶಕ ಅವಳಿಗೆ ವಿರೊಧವಾಗಿದ್ದ! ಇವರು ದೂರು ಕೊಡಲು ಹೋಗಿ ಛೀಮಾರಿ ಹಾಕಿಸಿಕೊಂಡರು‌.ಅಲ್ಲಿಮದ ಬಸ್ ಹತ್ತಿ ಸಿ ಡಬ್ಲ್ಯು ಸಿ ಗೆ ಬಂದೆವು‌
ಅಲ್ಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದೆ‌.ಅವರು ವಿದ್ಯಾರ್ಥಿನಿ ಯಲ್ಲಿ ಮಾತನಾಡಿದಾಗ ಅವಳು ಓದನ್ನು ಮುಂದುವರೆಸಲು ಸಹಾಯ ಕೇಳಿದಳು.
ನಂತರ ಅವಳ ತಂದೆ ತಾಯಿಯ ಹತ್ತಿರ ಮಾತನಾಡಿ ಮಗಳನ್ನು ಯಾರ್ಯಾರದೋ ಮನೆಯಲ್ಲಿ ಬಿಟ್ಟಿರುವುದು ತಪ್ಪು ‌‌ ಅವಳಿಗೆ ಬೈದು ಹೊಡೆದು ಮಾಡಿರುವುದು ತಪ್ಪು ಅವಳನ್ನು ಓದಿಸುವ ಜವಾಬ್ದಾರಿ ನಿಮ್ಮದು‌.ನೀವು ಓದಿಸದೆ ಇದ್ದರೆ ನಾವು ಅವಳಿಗೆ ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಹೇಳಿದರು.ನಂತರ ಅವಳ ನೆಂಟರು ಇನ್ನು ಬೈದು ಹೊಡೆದು ಮಾಡುವುದಿಲ್ಲ ಎಂದು ಬರೆದುಕೊಟ್ಟರು‌.ಹಾಗಾಗಿ ಇವಳು ಮತ್ತೆ ಅವರ ಮನೆಯಲ್ಲಿ ಎರಡು ಮೂರು ತಿಂಗಳು ಇದ್ದು ಪಿಯುಸಿ ಓದು ಮುಗಿಸಲು ಒಪ್ಪಿದಳು.
ಅಲ್ಲೇನೋ ಅವಳ ಸಂಬಂಧಿಕರು ಬೈದು ಹೊಡೆದು ಮಾಡುವುದಿಲ್ಲ ಎಂದು ಒಪ್ಪಿದ್ದರೂ ಕೂಡ ನಂತರ ಕೂಡ ಬೈಗಳು,ಸಣ್ಣಪುಟ್ಟ ಹೊಡೆತ ಇವಳಿಗೆ ಬೀಳುತ್ತಿದ್ದ ಬಗ್ಗೆ ನನಗೆ ಅವಳು ತಿಳಿಸಿದಳು‌.ಅಗ ನಾನು ಇನ್ನೇನು ಒಂದು ತಿಂಗಳಿಗೆ ಕಾಲೇಜು ಮುಗಿಯುತ್ತದೆ‌.ಸ್ವಲ್ಪ ತಾಳ್ಮೆಯಿಂದ ಇರು ಎಂದು ತಿಳಿ ಹೇಳಿದೆ‌
ಅಂತೂ ಇಂತೂ ಹೇಗೋ ಪಿಯುಸಿ ಪರೀಕ್ಷೆ ಬರೆದಳು.
ಸಾಕಷ್ಟು ಜಾಣ ವಿದ್ಯಾರ್ಥಿನಿ ಅವಳು‌.ನಾವು ಡಿಸ್ಟಿಂಕ್ಷನ್ ಬರಬಹುದೆಂದು ಊಹಿಸಿದ್ದೆವು.ಆದರೆ ತಂದೆ ತಾಯಿಯರ ನಿರ್ಲಕ್ಷ್ಯ, ಬಂಧುಗಳ ಹೊಡೆತ ಬಡಿತ,ಓಡಿ ಹೋಗಿದ್ದಾಳೆ ಎಂಬ ಆರೋಪಗಳಿಂದ ಹುಡುಗಿ ಚಿಂತಿಸಿ ಹೈರಾಣವಾಗಿ ಬಿಟ್ಟಿದ್ದಳು.ಆದ್ದರಿಂದ ನಾವು ನಿರೀಕ್ಷಿಸಿದಷ್ಟು ಅಂಕಗಳು ಅವಳಿಗೆ ಬಂದಿಲ್ಲ .ಆದರೂ ಈ ಎಲ್ಲಾ ಸಮಸ್ಯೆಗಳ ನಡುವೆಯೂ 600 ರಲ್ಲಿ 358 ಅಂಕಗಳನ್ನು ತೆಗೆದಿದ್ದಾಳೆ.ಸಿ ಡಬ್ಲೂ ಸಿ ಯಲ್ಲಿ ಅವಳ ತಂದೆ ಅವಳನ್ನು ಊರಿನಲ್ಲಿ ಡಿಗ್ರಿ ಕಾಲೇಜಿಗೆ ಸೇರಿಸಿ‌ ಮುಂದೆ ಓದಿಸುತ್ತೇನೆ ಎಂದು ಬರವಣಿಗೆಯ ಮೂಲಜ ಮಾತು ಕೊಟ್ಟಿದ್ದಾರೆ‌.ಇವಳಿಗೂ ಓದಿ ಮುಂದೆ ಐಎಎಸ್ ಮಾಡುವ ಕನಸಿದೆ‌.ಮುಂದೆ ಏನಾಗುತ್ತದೋ ಗೊತ್ತಿಲ್ಲ
ಅವಳ ತಂದೆ ಒಪ್ಪಿಕೊಂಡಂತೆ ಓದಿಸಲಿ,ಅವಳು ಅವಳ ಕನಸಿನಂತೆ ಐಎಎಸ್ ಅಧಿಕಾರಿ ಆಗಲಿ ಎಂದು ಹಾರೈಸುವೆ‌

No comments:

Post a Comment