Sunday 28 May 2017

ದೊಡ್ಡವರ ದಾರಿ: ನಮ್ಮ ಕಾರಂತ ಮಾವ ©ಡಾ ಲಕ್ಷ್ಮೀ ಜಿ ಪ್ರಸಾದ್

ನಮ್ಮ ಬದುಕಿನಲ್ಲಿ ಬಹು ದೊಡ್ಡ ಆತ್ಮೀಯತೆಯನ್ನು  ತೋರಿಸಿದವರು ನಮ್ಮ ಆತ್ಮೀಯರಾದ ನಮ್ಮ ತಂದೆ ಮನೆ ಪಕ್ಕದ ಮನೆಯ ಕಾರಂತ ಮಾವ ಎಂದೇ ನಾವು ಕರೆಯುತ್ತಾ ಇದ್ದ ಕೋಳ್ಯೂರು ಆನಂದ ಕಾರಂತರದು.ನನ್ನ ತಂದೆ ಮತ್ತು ಅವರ ನಡುವಿನ ಸ್ನೇಹ ಎಲ್ಲ ಉಪಮೆಗಳನ್ನು ಮೀರಿದ್ದು ಅದನ್ನು ಬಣ್ಣಿಸಲು ಪದಗಳಿಲ್ಲ .ಅದರಲ್ಲಿ ಹೊಟ್ಟೆಕಿಚ್ಚು ಮತ್ಸರದ ಲವಲೇಶವೂ ಇರಲಿಲ್ಲ.
1978 ರಲ್ಲಿ ಎಂದರೆ ಮೂವತ್ತೊಂಬತ್ತು ವರ್ಷಗಳ ಹಿಂದೆ ನನ್ನ ತಂದೆಯ ಹಿರಿ ಮನೆಯಲ್ಲಿ ಆಸ್ತಿ ಪಾಲಾಗಿ ಅಲ್ಲಿಂದ ಒಂದು ಪರ್ಲಾಂಗು ದೂರದಲ್ಲಿ ಕೋಳ್ಯೂರು ದೇವಾಲಯದ ಸಮೀಪ ಹೊಸ ಮನೆ ಕಟ್ಟಿ ನೆಲೆಯಾದಾಗ ಬೆಂಬಲ ಕೊಟ್ಟವರು ನಮ್ಮ ನೆರೆ ಮನೆಯವರಾದ ಆನಂದ ಕಾರಂತರು .ನಮ್ಮ ತಂದೆ ತುಂಬಾ ಮುಗ್ದ ರು ಜನರು ಸಾಕಷ್ಟು ಮೋಸ ವಂಚನೆ ಮಾಡುತ್ತಿದ್ದರೆ ನಮ್ಮ ರಕ್ಷಣೆಗೆ ನಿಂತವರು ಕಾರಂತ ಮಾವ .
ಅವರ ತೋಟದ ಪಕ್ಕದಲ್ಲಿ ನಮ್ಮ ಸಣ್ಣ ತೋಟ ಇದ್ದು ಅದರಲ್ಲಿ ಅಡಿಕೆ ತೆಂಗು ಕಳ್ಳರ ಪಾಲಾಗದೆ ಒಂದಿನಿತು ನಮಗೆ ಉಳಿದಿದ್ದರೆ ಅದಕ್ಕೆ ಕಾರಣ ಕಾರಂತ ಮಾವ.ಅವರ ಮನೆಯಿಂದಲೇ ನಮ್ಮ ತೋಟ ಗದ್ದೆ ಅವರಿಗೆ ಕಾಣಿಸುತ್ತಾ ಇತ್ತು .ಅಲ್ಲಿಂದಲೇ ಒಂದು ಅವಾಜ್ ಹಾಕಿದರೆ ಅಡಿಕೆ ತೆಂಗು‌ಕದಿಯಲು ಬಂದವರು ಓಡಿ ಹೋಗುತ್ತಿದ್ದವರು ಮತ್ತೆ ವರ್ಷ ಕಳೆದರೂ ಆ ಕಡೆಗೆ ತಲೆ ಇಟ್ಟು ಮಲಗುತ್ತಿರಲಿಲ್ಲ .
ನಮ್ಮ ತಂದೆ ಹೊಸ ಮನೆ ಕಟ್ಟ ಹೊರಟಾಗ ಒಂದು ನಯಾ ಪೈಸೆ ದುಡ್ಡು ಅವರಲ್ಲಿ ಇರಲಿಲ್ಲ. ಪೂರ್ತಿಯಾಗಿ ಸಾಲದಿಂದ ಮನೆ ಕಟ್ಟುವಾಗ ದುಡ್ಡು ಕೊರತೆಯಾಗಿ ಮನೆಗೆ ಬಾಗಿಲು ಇರಿಸಲೇ ಸಾಧ್ಯವಾಗಿರಲಿಲ್ಲ. ಇನ್ನು ಸ್ನಾನದ ಮನೆ ಕಟ್ಟುವುದು ಎಲ್ಲಿಂದ ಬಂತು ? ಈ ಸಂದರ್ಭದಲ್ಲಿ ನನ್ನ ತಂದೆ ಹಾಗೂ ಅಣ್ಣ ತಮ್ಮಂದಿರು ತೆರೆದ ಬಯಲಿನಲ್ಲಿ ಮರದ ಅಡಿಯಲ್ಲಿ ನೀರು ಕಾಸಿ ಬಿಸಿ ಮಾಡಿ ಸ್ನಾನ ಮಾಡುತ್ತಿದ್ದರು ನನ್ನ ಅಮ್ಮ ಅಕ್ಕ ನನಗೆ ಸ್ನಾನದ ಮನೆ ಇಲ್ಲದ್ದು ದೊಡ್ಡ ಸಮಸ್ಯೆ ಆಗಿತ್ತು .ಆಗ ನಮಗೆ ಬೆಂಬಲ ನೀಡಿದವರು ಆನಂದ ಕಾರಂತ ಮಾವ ಮತ್ತು ಅವರ ಮಡದು.ನಮಗೆ ಅವರ ಬಚ್ಚಲು ಮನೆಯಲ್ಲಿ ಸ್ನಾನ ಮಾಡಲು ಅವರು ತಿಳಿಸಿದರು ನಮ್ಮ ಮನೆಯಲ್ಲಿ ಸ್ವಲ್ಪ ದುಡ್ಡು ಹೊಂದಿಸಿ ಬಚ್ಚಲು ಮನೆ ಕಟ್ಟುವ ತನಕ ನಾವು ಕಾರಂತ ಮಾವನ ಮನೆಯ ಬಚ್ಚಲಯ ಮನೆಯಲ್ಲಿ ಅವರು ಕಾಯಿಸಿ ಇಟ್ಟ ನೀರಿನಲ್ಲಿ ಸ್ನಾನ ಮಾಡುತ್ತಿದ್ದೆವು ಅದಲ್ಲದೇ ಆ ಕಾಲದಲ್ಲಿ ನಮ್ಮ ಊರಿನ ಯಾರ ಮನೆಯಲ್ಲಿ ಯೂ ಶೌಚಾಲಯ ಇರಲಿಲ್ಲ. ಎಲ್ಲರೂ ಚೆಂಬು ಹಿಡಿದುಕೊಂಡು ಗುಡ್ಡೆಗೆ ಹೋಗ ಬೇಕಾಗಿತ್ತು. ಹೊಸ ಮನೆ ಕಟ್ಟಿ ಬಂದ ನಮಗೆ ಒಂದು ಅಂಗೈ ಅಗಲದಷ್ಟು ಕೂಡ ಗುಡ್ಡೆ ಅಥವಾ ಬೇರೆ ಜಾಗ ಇರಲಿಲ್ಲ ಆಗ ನಾವೆಲ್ಲರೂ ಹೋದದ್ದು ಅವರ ಗುಡ್ಡೆಗೆ.ಅವರೂ ಏನು ತುಂಬಾ ಜಾಗ ಇರುವ ಸಿರಿವಂತ ರಲ್ಲ ಆದರೆ ಅವರ ಹೃದಯ ಶ್ರೀಮಂತಿಗೆ ಯಾವುದೇ ಕೊರತೆ ಇರಲಿಲ್ಲ .ಬೇರೆ ಯಾರೇ ಆದರೂ ನಮ್ಮ ಜಾಗಕ್ಕೆ ಬರಬೇಡಿ ಎಂದು ಹೇಳುತ್ತಿದ್ದರು.ಆದರೆ ಒಂದೇ ಒಂದು ಮಾತು ಕೂಡಾ ಅವರು ಆ ಬಗ್ಗೆ ಹೇಳಿರಲಿಲ್ಲ.
ಇದಾಗಿ ಕಾಲಚಕ್ರ ತಿರುಗತೊಡಗಿತು.ನನ್ನ ಅಣ
 ಅಮೇರಿಕಕ್ಕೆ ಹೋದ ಮೇಲೆ ನಮ್ಮ ಮನೆಯ ಪರಿಸ್ಥಿತಿ ಸುಧಾರಣೆ ಆಯಿತು.ನಮ್ಮ ಮನೆಗೆ ರಸ್ತೆ ಇಲ್ಲದ್ದು ದೊಡ್ಡ ಕೊರತೆ ಆಗಿತ್ತು. ರಸ್ತೆ ಬರಬೇಕಾದರೆ ಕಾರಂತ ಮಾವ ರಸ್ತೆಗೆ ಜಾಗ ಬಿಡಬೇಕಿತ್ತು .ಬುಲ್ ಡೋಜರ್ ತಂದು ರಸ್ತೆ ಮಾಡಲು ಹೊರಟಾಗ ಎಲ್ಲರೂ ನಮಗೆ ಹೊಟ್ಟೆ ಕಿಚ್ಚಿನಿಂದ  ಅಡ್ಡಿ ಮಾಡಿದವರೇ.ಆದರೂ ಆಗಲೂ ಜಾಗ ಬಿಟ್ಟು ಕೊಟ್ಟು ಪೂರ್ಣ ಬೆಂಬಲ ನೀಡಿದವರು ಕಾರಂತ ಮಾವ ಅದರಿಂದಾಗಿ ಅವರ ಮನೆಗೂ ರಸ್ತೆ ಬಂತು ಇಂದು ನಾವುಗಳು ಈ ರಸ್ತೆಯಲ್ಲಿ ಕಾರು ಬೈಕು ಅಟೋಗಳಲ್ಲಿ ಹೋಗುವಂತಾಗಲು ಕ ಅಂದಿನ ಅವರ ಔದಾರ್ಯತೆಯೇ ಕಾರಣ.ಅವರು ಬೆಂಬಲ ಕೊಡದೆ ಇದ್ದರೆ ರಸ್ತೆ ನಿರ್ಮಾಣ ಅಸಾಧ್ಯವಾಗಿರುತ್ತಿತ್ತು.ರಸ್ತೆ ಇಲ್ಲದೇ ಇದ್ದರೆ ನನ್ನತಮ್ಮ ಹಾಗೂ ಕಾರಂತ ‌ಮಾವನ ಮಕ್ಕಳು ಕಾರು ತೆಗೆಯಲು ಸಾಧ್ಯವೇ ಇರುತ್ತಿರಲಿಲ್ಲ


 ಕಾರಂತ ಮಾವನಿಗೆ ಚಿಕ್ಕಂದಿನಿಂದಲೇ ಪೋಲಿಯೋ ಪೀಡಿತರಾದ ಅವರ ಒಂದು ಕಾಲೂ ಊನ ಗೊಂಡಿದ್ದರೂ ಅವರು ತೆಂಗಿನ ಮರ ಹತ್ತುತ್ತಾ ಇದ್ದರು .ಮೊದಲ ವರ್ಷ ನಮ್ಮ ತಂದೆಯವರಿಗೆ ಬೈ ಹುಲ್ಲಿನ ಮುಟ್ಟೆ / ಬಣವೆ ಹಾಕಲು ತಿಳಿಯದೆ ಇದ್ದಾಗ ಸ್ವತಃ ಕಾರಂತ ಮಾವನೇ ಬಂದು ನಿಂತು ಹಾಕಿಸಿಕೊಟ್ಟಿದ್ದರು.
ಆ ಮನೆಗೆ ಬಂದಾಗ ನನ್ನ ಸಣ್ಣ ತಮ್ಮ  ಗಣೇಶ ಎರಡು ತಿಂಗಳ ಸಣ್ಣ  ಮಗು.ಒಂದು ದಿನ ರಾತ್ರಿ ಹುಷಾರಿಲ್ಲದೆ ಆದಾಗ ನಡು ರಾತ್ರಿ ನಮ್ಮ ಮನೆಗೆ ಬಂದು ಔಷದ ಮಾಡಿ ಕೊಟ್ಡದ್ದು ಈಗಲೂ ನೆನಪಿದೆ .ಅದೇ ರೀತಿ ಒಂದು ದಿನ ಈ ನನ್ನ ಸಣ್ಣ ತಮ್ಮ ಎರಡು ವರ್ಷದ ಮಗು ಇದ್ದಾಗ ಮನೆಯಿಂದ ಕಾಣೆಯಾದಾಗ ಮನೆ ಮಂದಿ ಎಲ್ಲ ಗಾಭರಿಕೊಂಡು ಹುಡುಕಾಡಿದೆವು.ಆಗ ಕೂಡ ಕಾರಂತ ಮಾವ ಮತ್ತು ಅವರ ಕುಟುಂಬ ದವರೆಲ್ಲರೂ ಕಾಣೆಯಾದ ನನ್ನ ತಮ್ಮನನ್ನು ಗಾಭರಿಯಿಂದ ಹುಡುಕಾಡಿದ್ದರು.ಕೊನೆಗೆ ಹತ್ತಿರದ ಕೆರೆ ಭಾವಿ ನೋಡಿಯೂ ಮಗು ಸಿಗದೆ ಕೊನೆಗೆ ನಮ್ಮ ಅಜ್ಜನ ಮನೆಗೆ ಹೋಗುವ ದಾರಿಯಲ್ಲಿ ಅವನು ಪತ್ತೆಯಾದ ಅದು ಬೇರೆ ವಿಚಾರ.ಆದರೆ ಮನೆಯವರಂತೆಯೇ ಕಾಳಜಿ ವಹಿಸಿದ ಕಾರಂತ ಮಾವನ ಪ್ರೀತಿ ಅಪಾರವಾದುದು.

ಗಾಂಧಿಯವರ ಕಾಲಕ್ಕೆ ಎಲ್ಲೆಡೆ ಚರಕದ ಚಕ್ರ ತಿರುಗುವುದು ನಿಂತು ಹೋಯಿತು. ಆದರೆ ನಮ್ಮ ಕಾರಂತ ಮಾವ ಈಗ ಕೂಡ ಚರಕವನ್ನು ತಿರುಗಿಸಿ ಹತ್ತಿಯಿಂದ ನೂಲು ಮಾಡಿ ಉತ್ತಮ ಗುಣಮಟ್ಟದ ಜನಿವಾರ ತಯಾರಿ ಮಾಡುತ್ತಿದ್ದರು.ಇವರು ತಯಾರಿಸಿದ ತುಂಬಾ ಶುದ್ಧಾವಾಗಿದ್ದು ಉತ್ತಮ ಗುಣಮಟ್ಟ ಹೊಂದಿದ್ದು ಅವರು ತಯಾರಿಸಿದ  ಜನಿವಾರಕ್ಕೆ ಸಾಕಷ್ಟು ಬೇಡಿಕೆ ಇದೆ .
ಅವರು ರುದ್ರ ಚಮೆ ಪವಮಾನ ಮತ್ತು ದೇವರ ಪೂಜೆಯ ಮಂತ್ರಗಳನ್ನು ಊರಿನ ಎಲ್ಲರಿಗೂ ಉಚಿತವಾಗಿ ಹೇಳಿಕೊಡುತ್ತಾ ಇದ್ದರು.ಹಾಗಾಗಿ ಎಲ್ಈಲಿಗೆ ಗುರು ಸದೃಶರಾಗಿದ್ದರು .ಈಗ ಕೋಳ್ಯೂರು ದೇವಾಲಯದ ಅರ್ಚಕರಾಗಿರುವ ರವಿ ಹೊಳ್ಳರೂ ಕೂಡಾ ಇವರ ವಿದ್ಯಾರ್ಥಿ ಯೇ .
ಅವರಿಗೆ ಮೂರು ಗಂಡು ಮಕ್ಕಳು ಮತ್ತು ಒಬ್ಬಳು ‌ಮಗಳು .ನಾನು ನನ್ನ ಅಣ್ಣ ತಮ್ಮಂದಿರು ಅವರ ಜೊತೆ ಆಡಿ ಬೆಳೆದವರು.ಅಲ್ಲಿಯೇ ಪಕ್ಕದಲ್ಲಿ ದೇವಸ್ಥಾನದ ದೊಡ್ಡ ಕೆರೆ ಇದ್ದು ಬೇಸಿಗೆ ಕಾಲ ಚಳಿಗಾಲ ಮಳೆಗಾಲ ಎಂಬ ಬೇಧ ವಿಲ್ಲ ದೆ ನಾವು ಅದರಲ್ಲಿ ಈಜಾಡಿ ಆನಂದಿಸುತ್ತಾ ಇದ್ದೆವು.ಎರಡು ತೆಂಗಿನ ಕಾಯಿಯನ್ನು ಕಟ್ಟಿ ಅದರ ಸಹಾಯದಿಂದ ಈಜಲು ಕಲಿಸಿದವರೂ ನಮಗೆ ಕಾರಂತ ಮಾವನೇ.
ಕೋಳ್ಯೂರು ದೇವಾಲಯದ ಇತಿಹಾಸದ ಬಗ್ಗೆ ಕೂಡ ನನಗೆ ಮಾಹಿತಿ ನೀಡಿದವರು ಅವರೇ
ಪ್ರಸ್ತುತ ಅವರ ಅರೋಗ್ಯ ಹಾಳಾಗಿದ್ದು ಅವರು ಗುಣಮುಖರಾಗಿ ನೂರು ವರ್ಷ ಬಾಳಲಿ ಎಂದು ಹಾರೈಸುವೆ 

No comments:

Post a Comment