Wednesday 6 June 2018

ಬದುಕ ಬಂಡಿಯಲಿ 18- ನಾಲ್ಕು ತೆಂಗಿನ ಸಸಿ ನೆಡಬೇಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 18- ನಾಲ್ಕು ತೆಂಗಿನ ಸಸಿ ನೆಡಬೇಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ

ನಾಲ್ಕು ತೆಂಗಿನ‌ಸಸಿ ನೆಡಬೇಕಿತ್ತು.
©ಡಾ ಲಕ್ಷ್ಮೀ ಜಿ ಪ್ರಸಾದ
ಅಂದು2009  ಸೆಪ್ಟೆಂಬರ್ 24 ನೆಯ ತಾರೀಖು, ನನಗೆ ತೀರದ ಸಂಭ್ರಮ. ಹಿಂದಿನ ದಿನವಷ್ಟೇ ಬೆಳ್ಳಾರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕನ್ನಡ ಉಪನ್ಯಾಸಕಿಯಾಗಿ ಪಿಯು ಇಲಾಖೆ ನಿರ್ದೇಶಕರ ಆದೇಶ ಪತ್ರ ದೊರೆತಿತ್ತು .ತುಳು ಸಂಸ್ಕೃತಿ ಯ ಅಧ್ಯಯನ ಕ್ಕಾಗಿ ಬೆಂಗಳೂರು ಸುತ್ತ ಮುತ್ತ ಅವಕಾಶ ಇದ್ದರೂ ಕೂಡ ಬೆಳ್ಳಾರೆಯನ್ನೆ ಅಧ್ಯಯನ ದ ದೃಷ್ಟಿಯಿಂದ ಆಯ್ಕೆ ಮಾಡಿದ್ದೆ .ನನಗೆ ಬೇಕಾದ ಸ್ಥಳದಲ್ಲಿ ಯೇ ಉದ್ಯೋಗ ಅವಕಾಶ ಸಿಕ್ಕಿದ್ದು ತುಂಬಾ ಸಂತಸ ತಂದಿತ್ತು .24 ರ ರಾತ್ರಿ ಎಂಟು ಗಂಟೆಯ ರೈಲಿಗೆ ಟಿಕೆಟ್ ಬುಕ್ ಮಾಡಿಸಿದ್ದೆ ಹಾಗಾಗಿ ಆರು ಗಂಟೆ ವೇಳೆಗೆ ಗಂಟು ಮೂಟೆ ಕಟ್ಟಿಕೊಂಡು ಮೆಜೆಸ್ಟಿಕ್ ಗೆ ಹೊರಟಿದ್ದೆ .ಮೈಸೂರು ಸೆಟಲೈಟ್ ತನಕ ಬಸ್ ಸಿಕ್ಕಿತು ಅಲ್ಲಿಗೆ ತಲುಪುವಷ್ಟರಲ್ಲಿ ಜೋರಾದ ಮಳೆ ರಸ್ತೆ ಇಡೀ ನೀರು ತುಂಬಿ ಹರಿಯತ್ತಿತ್ತು .ಅಟೋಗಳೇ ಇರಲಿಲ್ಲ ಒಂದೆರಡು ಬಂದರೂ ನಿಲ್ಲಿಸಲಿಲ್ಲ ಕೊನೆಗೂ ಒಂದು ಅಟೋ ನಿಂತಿತು ರೈಲ್ವೆ ನಿಲ್ದಾಣ ಬಿಡಲು ಹೇಳಿದೆ ಅರುವತ್ತು ರುಪಾಯಿ ಕೊಡಬೇಕು ಎಂದರು ಅರುವತ್ತೇನು ಆರುನೂರು ಹೇಳಿದ್ದರೂ ಕೊಟ್ಡು ಹೋಗುವ ಅನಿವಾರ್ಯತೆ ನನಗಿತ್ತು ಸುಮಾರು ನಲವತ್ತು ಐವತ್ತು ಮೀಟರ್ ಹಾಕಿದರೂ ಬೀಳುತ್ತಾ ಇತ್ತು ಹಾಗಾಗಿ ಒಪ್ಪಿ ಅಟೋ ಹತ್ತಿದೆ .ಅಟೋ ತುಂಬಾ ಹಳೆಯದಾಗಿತ್ತು ನೀರಿನ ಸೆಳವಿಗೆ ಅಲ್ಲಲ್ಲಿ ಆಫ್ ಆಗುತ್ತಾ ಇತ್ತು ಒಂದೆರಡು ಕಡೆ ಅಟೋವಾಲಾ ಇಳಿದು ಅಟೋ ದೂಡಿ ಸ್ಟಾರ್ಟ್ ಮಾಡಿದ್ದರು .ಆಗಲೇ ನಾನು ಅವರನ್ನು ಗಮನಿಸಿದ್ದು .ಬಿಳಿ ಗಡ್ಡದ ಸುಮಾರು ಎಪ್ಪತ ವಯಸ್ಸಿನ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.ಅಟೋ ಮುಂದೆ ಸಾಗುತ್ತಿದ್ದಂತೆ ಅಟೋ ಹಳತಾಗಿದೆ ಅಮ್ಮ ಹಾಗಾಗಿ ಆಗಾಗ್ಗೆ ಕೈ ಕೊಡುತ್ತಿದೆ ಎಂದು ತಮ್ಮ ಕಷ್ಟ ವನ್ನು ಹೇಳಿಕೊಂಡರು .ಆಗ ನಾನು ನೀವೇಕೆ ಈ ವಯಸ್ಸಿನಲ್ಲಿ ದುಡಿಯುತ್ತೀರಿ ಮಕ್ಕಳಿಗೆ ಕೆಲಸ ಸಿಕ್ಕಿಲ್ಲವೇ ಎಂದು ಕೇಳಿದೆ. ಆಗ ಅವರು ಒಂದು ದೊಡ್ಡ ನಿಟ್ಟುಸಿರು ಬಿಟ್ಟು " ನನಗೆ ನಾಲ್ಕು ಜನ ಗಂಡುಮಕ್ಕಳು ಎಲ್ಲರನ್ನೂ ದುಡಿದು ಅಟೋ ಓಡಿಸುತ್ತಾ ಸಾಲ ಸೋಲ ಮಾಡಿ ಓದಿಸಿದೆ ಎಲ್ಲರೂ ಒಳ್ಳೆಯ ಕೆಲಸದಲ್ಲಿ ಇದ್ದಾರೆ ಆದರೆ ನಾನು‌ಮಾಡಿದ ಸಾಲವನ್ನು ತೀರಿಸಲು ನಾನು ದುಡಿಯುತ್ತಿರುವೆ ಅವರೆಲ್ಲರೂ ಅವರವರ ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದಾರೆ ನನಗೆ ದುಡಿಯದೆ ಬೇರೆ ವಿಧಿಯಿಲ್ಲ ನಾನು ನಾಲ್ಕು ಜನ ಮಕ್ಕಳನ್ನು ಸಾಕುವ ಬದಲು ನಾಲ್ಕು ತೆಂಗಿನ ಸಸಿ ನೆಡುತ್ತಿದ್ದರೆ ಈಗ ದುಡಿದು ಮನೆಗೆ ಹೋದಾಗ ಕುಡಿಯಲು ಎಳನೀರು ಕೊಡುತ್ತಾ ಇದ್ದವು ಎಂದು ಹೇಳಿ ಕಣ್ಣೀರು ಒರಸಿಕೊಂಡರು.ನನ್ನ ಕಣ್ಣಂಚೂ ತೇವವಾಯಿತು ಅಷ್ಟರಲ್ಲಿ ರೈಲ್ವೆ ಸ್ಟೇಷನ್ ತಲುಪಿದೆವು ಇಳಿದು ದುಡ್ಡು ಕೊಟ್ಟು ನನ್ನ ಜಗತ್ತಿಗೆ ಪ್ರವೇಶ ಮಾಡಿದೆ ಇಂದು ಮತ್ತೆ ಇದು ನೆನಪಾಯಿತು ಇದು ಕಲ್ಪನೆಯಲ್ಲ ನಿಜವಾದ ಕಥೆ/ ವ್ಯತೆ ಇದು ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

No comments:

Post a Comment