Monday 4 June 2018

ಬದುಕ ಬಂಡಿಯಲಿ 16 ಕಾಲವನ್ನು ಕಂಡವರಿಲ್ಲ © ಡಾ.ಲಕ್ಷ್ಮೀ ಜಿ ಪ್ರಸಾದ

ಕಾಲವನ್ನು ಕಂಡವರಿಲ್ಲ..ಸಂಪತ್ತು ಅಧಿಕಾರ ಇದ್ದಾಗ ಕೈಲಾದ ಸಹಾಯ ಮಾಡಬೇಕು..ಏನಂತೀರಿ?
- ಡಾ.ಲಕ್ಷ್ಮೀ ಜಿ ಪ್ರಸಾದ

ಇಂದು ಉತ್ತರ ಪತ್ರಿಕೆ ತಿದ್ದುತ್ತಾ ಬಿಗ್ ಬಾಸ್  ಅಂತಿಮ ಕಾರ್ಯಕ್ರಮ ನೋಡುತ್ತಾ ಇದ್ದೆ.ಅದರಲ್ಲಿ ಗೆದ್ದವರಿಗೆ 50 ಲಕ್ಷ ರು ಬಹುಮಾನ ಅಂತ ಗೊತ್ತಾಯಿತು. ಅಲ್ಲಿ ಅಂತಿಮವಾಗಿ ಆಯ್ಕೆಯಾದ ಇಬ್ಬರಲ್ಲಿ ಒಬ್ಬರಾದ ದಿವಾಕರ್ ಅವರಿಗೆ ಇದು ದೊಡ್ಡ ಕೊಡುಗೆಯೇ ಅಗಬಲ್ಲದು. ಆದರೆ ಬಿಗ್ ಬಾಸ್ ಎಂಬುದು ಒಂದು ವ್ಯಕ್ತಿತ್ವದ ಸ್ಪರ್ಧೆ.ಅದರಲ್ಲಿ ಯಾರು ಉತ್ತಮವಾಗಿ ನಿರ್ವಹಣೆ ಮಾಡಿರುತ್ತಾರೋ ಅವರೇ ಗೆಲ್ಲಬೇಕು.ಸ್ಪರ್ಧೆಯಲ್ಲಿ ಸ್ಪರ್ಧಿಯ ಹಿನ್ನೆಲೆ ಮುಖ್ಯವಾಗಬಾರದು.
ಬಹುಶಃ ಚಂದನ್ ಶೆಟ್ಟಿ ನಿರ್ವಹಣೆ ಚೆನ್ನಾಗಿದ್ದಿರ ಬೇಕು( ನಾನು ಒಂದೇ ಒಂದು ಎಪಿಸೋಡ್ ಕೂಡ ನೋಡಿಲ್ಲ, ಈವತ್ತು ಮಾತ್ರ ನೋಡಿದ್ದು ) ಹಾಗಾಗಿ ಚಂದನ್ ಶೆಟ್ಟಿ ಗೆದ್ದಿದ್ದಾರೆ.
ವಿನ್ನರ್ ಗೆ 50 ಲಕ್ಷ ರುಪಾಯಿ ಬಹುಮಾನ ಇದ್ದಾಗ ರನ್ನರ್ ಗೆ ಕನಿಷ್ಠ ಪಕ್ಷ 25 ಲಕ್ಷ ರುಪಾಯಿ ನಗದು ಬಹುಮಾನ ಇಡಬೇಕಿತ್ತು ಎಂದೆನಿಸಿತು ನನಗೆ.ಮತ್ತು ದಿವಾಕರ್ ಗೆ ಅದು ಆರ್ಥಿಕ ಬಲವಾಗಿ ಬಿಗ್ ಬಾಸ್ ಗೆ ಬಂದದ್ದಕ್ಕೆ ಒಂದು ಕೊಡುಗೆಯಾಗಿರುತ್ತಿತ್ತು.
ಅದಿರಲಿ
ನಾನು ಹೇಳ ಹೊರಟಿದ್ದು ಅದಲ್ಲ .ಸುಮಾರು ಹದಿನೈದು ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ವನ್ನು ಅಮಿತಾ ಬಚ್ಚನ್ ನಡೆಸಿಕೊಡುತ್ತಾ ಇದ್ದರು.ಅದರಲ್ಲಿ ಒಬ್ಬ   ಮನೆ ಮನೆಗೆ  ಬಟ್ಟೆಯ ವ್ಯಾಪಾರಿ( ಕಟ್ಟನ್ನು ಹೊತ್ತುಕೊಂಡು ಹೋಗಿ ವ್ಯಾಪಾರ ಮಾಡುವ ವ್ಯಕ್ತಿ ಎಂದು ನೆನಪು)  14 ಪ್ರಶ್ನೆಗಳಿಗೆ ಉತ್ತರಿಸಿ 50 ಲಕ್ಷ ಗೆದ್ದಿದ್ದರು.15 ನೇ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹೊರಬಂದರೆ 50 ಲಕ್ಷ ರುಪಾಯಿ ಅವರಿಗೆ ಸಿಗುತ್ತದೆ.15 ನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿದರೆ ಅವರಿಗೆ ಕೇವಲ 3.50 ಲಕ್ಷ ಮಾತ್ರ ಸಿಗುತ್ತದೆ. ಈ ಹಂತದಲ್ಲಿ ಅವರಿಗೆ ಹದಿನೈದನೇ ಪ್ರಶ್ನೆಯನ್ನು ಕೇಳಿದರು.ಇವರು ಏನನ್ನೋ ಉತ್ತರಿಸಿದರು‌.ಅದನ್ನು ನಿಶ್ಚಿತ ಗೊಳಿಸುವ ಮೊದಲು ಅಮಿತಾ ಬಚ್ಚನ್ ಅವರು ಈಗ ಕೂಡ ನಿಮಗೆ ಸ್ಪರ್ಧೆಯಿಂದ ಹೊರಬಂದು 50 ಲಕ್ಷ ರುಪಾಯಿ ಪಡೆದುಕೊಳ್ಳಬಹುದು.ಸ್ಪರ್ಧೆಯಲ್ಲಿ ಮುಮದುವರಿದರೆ ಉತ್ತರ ಸರಿಯಾಗಿದ್ದರೆ ಮಾತ್ರ ಒಂದು ಕೋಟಿ ರುಪಾಯಿ ಸಿಗುತ್ತದೆ. ಉತ್ತರ ತಪ್ಪಾದರೆ  ಕೇವಲ ಮೂರೂವರೆ ಲಕ್ಷ ಮಾತ್ರ ಸಿಗುತ್ತದೆ. ಒಮ್ಮೆ ಆಲೋಚಿಸಿ ನೋಡಿ ಎಂದು ನುಡಿದರು.ಆಗ ಆ ಸ್ಪರ್ಧಿ ಸ್ಪರ್ದೆಯಿಂದ ಹೊರ ಸರಿದರು.ನಂತರ ಅವರು ಕೊಟ್ಟ ಉತ್ತರ ಸರಿಯಿದೆಯೇ ಎಂದು ನೋಡಿದಾಗ ಅದು ತಪ್ಪಾಗಿತ್ತು‌.ಒಂದೊಮ್ಮೆ ಅವರು ಸ್ಪರ್ಧೆಯಿಂದ ಹಿಂದೆ ಸರಿಯದೆ ಇರುತ್ತದ್ದರೆ ಅವರು 46.5 ಲಕ್ಷ ರುಪಾಯಿ ಗಳನ್ನು ಕಳೆದುಕೊಳ್ಳುತ್ತಿದ್ದರು.ಅಮಿತಾಭ್ ಸಲಹೆಯನ್ನು ಸ್ವೀಕರಿಸಿ ಅವರು 50 ಲಕ್ಷ ರುಪಾಯಿಗಳನ್ನು ಪಡೆದುಕೊಂಡಿದ್ದರು.ಆಗ ಅವರು ಮತ್ತು ಅವರ ಮಡದಿ ವೇದಿಕೆಯಲ್ಲಿ ಅಮಿತಾಭ್ ಕಾಲು ಮುಟ್ಟಿ ನಮಸ್ಕರಿಸಿದ್ದರು.
ಈ ಬಗ್ಗೆ ಮರುದಿನ ಚಿನ್ನಯ ಶಾಲೆಯಲ್ಲಿ ( ಆಗ ನಾನು ಅಲ್ಲಿ ಸಂಸ್ಕೃತ ಶಿಕ್ಷಕಿ ಆಗಿದ್ದೆ) ನಾನು, ನಮ್ಮ ಗಣಿತದ ಮೇಷ್ಟ್ರು ಕೃಷ್ಣ ಉಪಾಧ್ಯಾಯ ಮೊದಲಾದವರು ಚರ್ಚಿಸಿದೆವು‌ಅವರಿಗೆ ಅಷ್ಟು ದೊಡ್ಡ ಮೊತ್ತವನ್ನು ಉಳಿಸಿಕೊಟ್ಟ,ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಹಿರಿಯರಾದ ಅಮಿತಾ ಬಚ್ಚನ್ ಕಾಲಿಗೆ ಬಿದ್ದು ನಮಸ್ಕರಿಸಿದ್ದರಲ್ಲಿ ನನಗೇನೂ ತಪ್ಪು ಕಂಡಿಲ್ಲ ಎಂದು ಹೇಳಿದೆ.ಆಗ 50 ಲಕ್ಷ ರುಪಾಯಿ ಎಂದರೆ ನನ್ನ ಜೀವಮಾನ ದುಡಿದರೂ ನನಗೆ ಅಷ್ಟು ದೊಡ್ಡ ಮೊತ್ತ ಗಳಿಸಲು ಅಸಾಧ್ಯ ಎಂದು ನಾನು ಭಾವಿಸಿದ್ದೆ.ಅದನ್ನು ಪಕ್ಕದಲ್ಲೇ ಕುಳಿತಿದ್ದ ಕೃಷ್ಣ ಉಪಾಧ್ಯಾಯರಲ್ಲೂ ಹೇಳಿದ್ದೆ.ಆಗ ಅವರು ಕೂಡ ಅದನ್ನು ಹೌದೆಂದು ಒಪ್ಪಿಕೊಂಡಿದ್ದರು‌.ಆಗ ನನ್ನ ತಿಂಗಳ ಸಂಬಳ ಮೂರು ಸಾವಿರ ಇತ್ತು.ವರ್ಷಕ್ಕೆ ಮೂವತ್ತಾರು ಸಾವಿರ. ಅದರಂತೆ ಮೂವತ್ತು ವರ್ಷಗಳ ಕಾಲ ದುಡಿದರೆ ಸುಮಾರು ಹತ್ತು ಹನ್ನೊಂದು ಲಕ್ಷ ರುಪಾಯಿ ಅಗುತ್ತಾ ಇತ್ತು‌ಹಾಗಾಗಿ ಐವತ್ತು ಲಕ್ಷದ ದುಡ್ಡನ್ನು ಊಹೆ ಮಾಡುವುದೂ ನಮಗೆ ಅಸಾಧ್ಯ ಆಗಿತ್ತು.
ಆದರೆ ಕಾಲ ಒಂದೇ ರೀತಿ ಇರುವುದಿಲ್ಲ. ಪ್ರಸ್ತುತ ನನ್ನ ವೇತನ ಲೆಕ್ಕ ಹಾಕಿದರೆ  ಏಳೆಂಟು ವರ್ಷದಲ್ಲಿ  50 ಲಕ್ಷ ತಲುಪಬಹುದು. ನಿವೃತ್ತಿ ಆಗುವ ತನಕದ ವೇತನ ಒಟ್ಟು  ಲೆಕ್ಕ ಹಾಕಿದರೆ ಒಂದು ಎರಡು ಕೋಟಿ ಆಗಬಹುದು.ಈಗಾಗಲೇ ನಾನು ಗಳಿಸಿದ ವೇತನ ಲೆಕ್ಕ ಹಾಕಿದರೆ ಒಟ್ಟು ಮೊತ್ತ ಮೂವತ್ತು ಲಕ್ಷ ದಷ್ಟು ಆಗಿರಬಹುದು .ಹಾಗಂತ ಅದ್ಯಾವುದೂ ಉಳಿದಿಲ್ಲ .ಅದು ಬೇರೆ ವಿಚಾರ.
ಈಗ ಕೃಷ್ಣ ಉಪಾಧ್ಯಾಯರು ಮಂಗಳೂರಿನ ಮಧುಸೂದನ ಕುಶೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ನನಗಿಂತ ಹೆಚ್ಚಿನ ವೇತನ ಅವರಿಗಿರಬಹುದು .ದಿವಾಕರ್ ಕೂಡ ಮುಂದೊಂದು ದಿನ ಕೋಟ್ಯಧೀಶ ಆಗಬಹುದು.
ಹಾಗಾಗಿ ಒಂದು ಮಾತು ಹೇಳಬಯಸುವೆ.ಕಾಲವನ್ನು ಕಂಡವರಿಲ್ಲ ಆಳು ಅರಸಾಗಬಹುದು.ಅರಸ ಆಳಾಗಬಹುದು.ದುಡ್ಡು ಅಧಿಕಾರ ಶಾಶ್ವತವಲ್ಲ.ಇವುಗಳು ಇದ್ದಾಗ ನಾಲ್ಕು ಜನರಿಗೆ ಕೈಲಾದ ಸಹಾಯ ಮಾಡಬೇಕು. ಕೊಡುವುದರಲ್ಲಿ ಕೂಡ ತೃಪ್ತಿ ಕಾಣಬೇಕು.ಆಗಲೇ ಬದುಕಿಗೊಂದು ಸಾರ್ಥಕತೆ ಉಂಟಾಗುತ್ತದೆ
ಕಾಲ ಒಂದೇ ತರನಾಗಿ ಇರುವುದಿಲ್ಲ. ನಾನು ಚಿನ್ಮಯ ಶಾಲೆ ಶಿಕ್ಷಕಿ ಆಗಿದ್ದಾಗ ಮಂಗಳೂರು ಸಂಸ್ಕೃತ ಸಂಘ ಮಂಗಳೂರಿನ ಶಾಲಾ ಕಾಲೇಜು ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿದ್ದೆವು.ಆಗ ಸಂಸ್ಕೃತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬಂದಿದ್ದರು.ಅವರೆಲ್ಲ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದವರು‌.ನಾನೋರ್ವ ರ‌್ಯಾಂಕ್ ವಿಜೇತೆ ಆಗಿದ್ದರೂ ಖಾಸಗಿ ಶಾಲೆಯಲ್ಲಿ ಪುಡಿಕಾಸಿಗಾಗಿ ದುಡಿಯುತ್ತಾ ಇದ್ದೇನೆ ಎಂಬ ಕೀಳರಿಮೆ ನನ್ನಲ್ಲಿ ಇತ್ತು ಎಂದು ಕಾಣಿಸುತ್ತದೆ.ಬಂದ ಪದಾಧಿಕಾರಿಗಳು ಯಾರೂ ನನ್ನನ್ನು ಕೀಳಾಗಿ ಕಂಡಿಲ್ಲ ಆದರೂ ಅವರಲ್ಲಿ ಮಾತನಾಡುವಾಗ ನಾನು ತುಂಬಾ ತೊದಲುತ್ತಾ ಇದ್ದೆ.ಶಬ್ದಗಳು ಸಿಗದೆ ತಡವರಿಸಿ ಏನೇನೋ ಹೇಳುತ್ತಾ ಇದ್ದೆ.ಆಗ ಸಂಸ್ಕೃತ ಸಂಘದ ಅಧ್ಯಕ್ಷರಾಗಿ ಇದ್ದವರು( ಅವರ ಹೆಸರು ವಾಸುದೇವ ರಾವ್ ಎಂದು ನೆನಪು) ಯಾರೋ ಒಬ್ಬ ಪ್ರೊಫೆಸರ್ ಹೆಸರು ಹೇಳಿ ಅವರು ಕೂಡ ನನ್ನ ಹಾಗೆ ತೊದಲುತ್ತಾ ಮಾತಾಡುತ್ತಾರೆಂದು ಹೇಳಿದ್ದರು.
ನಾನು ಶಾಲಾ ದಿನಗಳಲ್ಲಿಯೇ ನಾಟಕ ಏಕಪಾತ್ರಾಭಿನಯ,ಭಾಷಣಗಳಲ್ಲಿ ರಾಜ್ಯ ಮಟ್ಟದ ಬಹುಮಾನ ಪಡೆದವಳು.ಒಳ್ಳೆಯ ಮಾತುಗಾತಿ ಎಂದು ಕೂಡ ಹೆಸರು ಪಡೆದಿದ್ದೆ.ಉತ್ತಮ ಕಾರ್ಯಕ್ರಮ ನಿರೂಪಕಿಯಾಗಿಯೂ ಹೆಸರಿತ್ತು.ಆದರೆ ಅದೇ ವರ್ಷದ ಸಂಸ್ಕೃತ ಸಂಘದ ವಾರ್ಷಿಕೋತ್ಸವದ ನಿರೂಪಣೆಯ ಜವಾಬ್ದಾರಿ ನನಗೆ ನೀಡಿದ್ದು ಹಲವಾರು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಸಂಸ್ಕೃತ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ನಾನು ನಿರೂಪಣೆ ಮಾಡುವಾಗ ಮತ್ತೆ ಮಾತಿಗೆ ಶಬ್ದಗಳು ಸಿಗದೆ ತೊಳಲಾಡಿದ್ದೆ.ಮೊದಲು ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಆಗಿದ್ದು ಮಗ ಹುಟ್ಟಿದಾಗ ಬೇರೆ ದಾರಿ ಇಲ್ಲದೆ ಅಲ್ಲಿ ಕೆಲಸ ಬಿಟ್ಟಿದ್ದೆ.ಮಗನಿಗೆ ಒಂದು ವರ್ಷವಾದಾಗ ಮತ್ತೆ ನಮ್ಮ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿ ಕೆಲಸಕ್ಕೆ ಹೋಗಬೇಕಾಯಿತು. ಆಗ ಚಿನ್ಮಯ ಪ್ರೌಢಶಾಲೆ ಯಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆ ದೊರೆತಿತ್ತು.ನಂತರ ಒಂದೆರಡು ವರ್ಷಗಳಲ್ಲಿ ಮತ್ತೆ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆ ಖಾಲಿಯಿದ್ದು ,ಪ್ರಾಂಶುಪಾಲರಾದ ಸ್ವಿಬರ್ಟ್ ಡಿಸಿಲ್ವಾ ಅವರು ಫೋನ್ ಮಾಡಿ ಕರೆಸಿ ಸಂಸ್ಕೃತ ಉಪನ್ಯಾಸಕ ಹುದ್ದೆಯನ್ನು ನೀಡಿದರು.ಅಲ್ಲಿ ಮತ್ತೆ ಒಂದು ವರ್ಷ ಕೆಲಸ ಮಾಡುವಷ್ಟರಲ್ಲಿ ಪ್ರಸಾದ್ ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ತು .ಹಾಗಾಗಿ ನಾನು ಅಲೋಶಿಯಸ್ ಕಾಲೇಜು ಉಪನ್ಯಾಸಕ ಹುದ್ದೆಯನ್ನು ಬಿಟ್ಟು ಬೆಂಗಳೂರಿಗೆ ಬಂದೆ.ಆದರೆ ಇಲ್ಲಿ ನನ್ನ ಅರ್ಹತೆಗೆ ಅನುಗುಣವಾಗಿ ಉಪನ್ಯಾಸಕ ಹುದ್ದೆ ಸಿಕ್ಕಿದ ಕಾರಣ ಸಮಸ್ಯೆಯಾಗಲಿಲ್ಲ.ನಂತರ ಸರ್ಕಾರಿ ಹುದ್ದೆಯೂ ದೊರೆಯಿತು.ನನ್ನ ಅಧ್ಯಯನವನ್ನು ಜನರು ಗುರುತಿಸಿದರು‌.ದೇಶದ ಎಲ್ಲೆಡೆಗಳಿಂದ ಉಪನ್ಯಾಸ ನೀಡಲು ಆಹ್ವಾನಿಸುತ್ತಾರೆ‌.ಇಂದು ಲಕ್ಷ ಜನರು ಸೇರಿದ ವೇದಿಕೆಯಲ್ಲಿ ಕೂಡ ಯಾವುದೇ ಅಳುಕಿಲ್ಲದೆ ನಿರರ್ಗಳವಾಗಿ ಉಪನ್ಯಾಸ ನೀಡುತ್ತೇನೆ.
ಕೆಲವೊಮ್ಮೆ ಸಮಯ ಕಡಿಮೆ ಇದ್ದಾಗ ಸಂಘಟಕರು ವಿಷಯವನ್ನು ಮೊಟಕು ಗಲಿಸಲು ಸೂಚಿಸುತ್ತಾರೆ‌ ಅದರಮತೆ ನಾನು ನಿಲ್ಲಿಸಿದಾಗ ಸಭಾಸದರು ಮಾತು ಮುಂದುವರಿಸಿ ಎಂದು ಹೇಳಿ ಅವರುಗಳ ಕೋರಿಕೆಗೆ ಸಂಘಟಕರು ನನ್ನಲ್ಲಿ ಪೂರ್ತಿಯಾಗಿ ಮಾತಾಡುವಂತೆ ಹೇಳಿದ ಸಂದರ್ಭಗಳೂ ಇವೆ. ಕಳೆದ ವರ್ಷ ಕಂಬಳ ಪರವಾದ ಪ್ರತಿಭಟನಾ ಸಭೆಯಲ್ಲಿ ನಾನು ಮಾತು ನಿಲ್ಲಿಸ ಹೋದಾಗ ಜನರು ಪೂರ್ತಿಯಾಗಿ ಹೇಳಿ ಎಂದು ವಿನಂತಿಸಿ ಮಾತು ಮುಂದುವರಿಸಿದ್ದೆ.   ಆದರೆ ಅಂದೇಕೆ  ಸಂಸ್ಕೃತ ಸಂಘದ ವಾರ್ಷಿಕೋತ್ಸವದ ನಿರೂಪಣೆಯಲ್ಲಿ ಹಾಗೇಕೆ ತಡವರಿಸಿದೆ ? ಕೀಳರಿಮೆ ಅಷ್ಟೊಂದು ಪ್ರಭಾವ ಬೀರಿತ್ತಾ ಆಶ್ಚರ್ಯ ಆಗುತ್ತಿದೆ ಈಗ‌
ಅದಕ್ಕೆ ಹೇಳುವುದು ಕಾಲ ಒಂದೇ ರೀತಿ ಇರುವುದಿಲ್ಲ ಎಂದು. ಎಲ್ಲರಿಗೂ ಒಂದಲ್ಲ ಒಂದು ದಿನ ಒಳ್ಳೆಯ ಕಾಲ ಬಂದೇ ಬರುತ್ತದೆ ‌ಆದರೆ ಅದಕ್ಕಾಗಿ ನಿರಂತರವಾದ ಅಧ್ಯಯನ, ಪರಿಶ್ರಮ ಅತ್ಯಗತ್ಯ.- ಡಾ.ಲಕ್ಷ್ಮೀ ಜಿ ಪ್ರಸಾದ


http://shikshanaloka.blogspot.in/2018/01/blog-post.html?m=1

No comments:

Post a Comment