Sunday 2 December 2018

ದೊಡ್ಡವರ ದಾರಿ 62 ಪ್ರೀತಿಯ ಮೇಷ್ಟ್ರು ಡಾ.ಭೈರಮಂಗಲ ರಾಮೆಗೌಡ © ಡಾ.ಲಕ್ಷ್ಮೀ ಜಿ ಪ್ರಸಾದ

ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು - ಡಾ.ಭೈರಮಂಗಲ‌ ರಾಮೇಗೌಡ© ಡಾ.ಲಕ್ಷ್ಮೀ ಜಿ ಪ್ರಸಾದ
ತುಂಬಾ ಸಮಯದಿಂದ ಭೈರಮಂಗಲ ರಾಮೇಗೌಡರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಸೋಮಾರಿತನ ಒಂಚೂರು ಕೆಲಸದ ಒತ್ತಡ,ಬರೆಯುವ ಮೂಡ್ ನ ಕೊರತೆಯ ಕಾರಣದಿಂದಾಗಿ ಬರೆಯಲಾಗಲಿಲ್ಲ.
ರಾಮೇಗೌಡು ಬಹಳ ಜನಪ್ರಿಯ ಕನ್ನಡ ಪ್ರಾಧ್ಯಾಕರು.ಅವರ ವಿದ್ಯಾರ್ಥಿಗಳು ಅವರನ್ನು ತುಂಬಾ ನೆಚ್ಚಕೊಂಡಿದ್ದಾರೆ.
ತುಂಬಾ ಜನ ಉಪನ್ಯಾಸಕರಿದ್ದಾರೆ.ಆದರೆ ಇವರ ವಿದ್ಯಾರ್ಥಿಗಳು ಮಾತ್ರ ಇವರನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ. ಯಾರು ಕೂಡ ರಾಮೇಗೌಡರ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದಿಲ್ಲ .ಯಾಕೆ ? ಹೆಚ್ಚು ಕಡಿಮೆ ವರ್ಷದ ‌ಮುನ್ನೂರ ಅರುವತ್ತೈದು ದಿನಗಳಲ್ಲಿ ಕೂಡ ಅವರು ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪನ್ಯಾಸಕಾರರಾಗಿ ಆಹ್ವಾನಿಸಲ್ಪಡುತ್ತಾರೆ .ಇಷ್ಟು ಜನರ ಪ್ರೀತಿಯನ್ನು ಹೇಗೆ ಗಳಿಸಿದರು? ಯಾರಿಗಾದರೂ ಮನದಲ್ಲಿ  ಮೂಡಬಹುದಾದ ಪ್ರಶ್ನೆ ಇದು.ಆದರೆ ನನಗೆ ಇದಕ್ಕೆ ಉತ್ತರ ಗೊತ್ತು. ಮೊದಲಿಗೆ ಅವರ ಪ್ರಗಲ್ಭ ಪಾಂಡಿತ್ಯ ಇದಕ್ಕೆ ಕಾರಣ.
ಜೊತೆಗೆ ಅವರ ಸಜ್ಜನಿಕೆ,ಉದಾತ್ತತೆ,ವಿದ್ಯಾರ್ಥಿ ಪ್ರಿಯತೆ ಕಾರಣವಾಗಿದೆ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಪದವಿ ಕಾಲೇಜು ಕನ್ನಡ ಉತ್ತರ ಪತ್ರಿಕೆ ‌ಮೌಲ್ಯ ಮಾಪನದಲ್ಲಿ ನನಗೆ ಅವರು ಡಿಸಿ ಆಗಿದ್ದರು. ಮೌಲ್ಯ ಮಾಪನ ಆರಂಭದಲ್ಲಿ ಅರ್ಧ ಕಾಲು ಅಂಕಗಳನ್ನು ಕೊಡಬೇಡಿ‌.ಉದಾಹರಣೆಗೆ "ಎರಡುವರೆ ಅಂಕ ಕೊಡುವ ಬದಲು ಎರಡು ಅಥವಾ ‌ಮೂರು ಕೊಡಿ. ನಾನು ಅರ್ಧ ಅಂಕವನ್ನು ಬಿಡುವ ಬದಲು ವಿದ್ಯಾರ್ಥಿಗಳಿಗೆ  ಅದನ್ನು ಕೊಡುತ್ತೇನೆ. ನಾನು‌ಮಾಡುವ ಹಾಗೆಯೇ ನೀವು‌ ಮಾಡಬೇಕೆಂದಿಲ್ಲ.ಆಯ್ಕೆ ನಿಮ್ಮದು " ಎಂದು ತಮ್ಮ ವಿದ್ಯಾರ್ಥಿ ಸ್ನೇಹಿ ನಿಲುವನ್ನು ತಿಳಿಸಿದ್ದರು.ಒಂದಿನಿತು ಕೂಡ ಅವರಲ್ಲಿ ಅಧಿಕಾರದ ಮಾತಿರಲಿಲ್ಲ.ನಾನಾಗ ಒಂದು ಕಥಾ ಸಂಕಲನ ಮತ್ತು ಒಂದು ಲೇಖನ ಹೀಗೆ ಎರಡು ಪುಸ್ತಕಗಳನ್ನು ಪ್ರಕಟಿಸಬೇಕೆಂದು ಆಲೋಚಿಸುತ್ತಾ ಇದ್ದೆ.ಈ ಬಗ್ಗೆ ಅವರಲ್ಲಿ ಸಲಹೆ ಕೇಳಿದಾಗ ‌ಲಕ್ಷ್ಮೀ‌ಪ್ರಿಂಟರ್ಸ್ ನ ವಿಳಾಸ ನೀಡಿ ಪ್ರಕಟಿಸಿ ,ಮುನ್ನೂರು ಪುಸ್ತಕಗಳನ್ನು ಪುಸ್ತಕ ಪ್ರಾಧಿಕಾರ ಗ್ರಂಥಾಯಗಳಿಗೆ ನೀಡಲು ಖರೀದಿಸುತ್ತದೆ.ಹಾಗಾಗಿ ಮಾರಾಟ ಆಗದಿದ್ದರೆ ಎಂಬ ಚಿಂತೆ ಬೇಡ,ಧೈರ್ಯವಾಗಿ ಪ್ರಕಟಿಸಿ" ಎಂದು ಬೆಂಬಲದ ಮಾತುಗಳನ್ನು ಆಡಿದ್ದರು. ಆಗಾಗಲೇ ಅವರು ತುಂಬಾ ಪ್ರಸಿದ್ಧರಾಗಿದ್ದರು.ನನ್ನಂತ ಬಾಲಂಗೋಚಿಯ ಪುಸ್ತಕ ಪ್ರಕಟನೆಯ ಕನಸನ್ನು ತಿರಸ್ಕಾರದಿಂದ ಕಾಣದೆ ಬೆಂಬಲಿಸಿದ್ದರು.ಆಗಲೇ ನನಗೆ ಅವರೇಕೆ ದೊಡ್ಡವರು ಎಂದರಿವಾಗಿತ್ತು.
ನಂತರ ಸುಮಾರು ಹನ್ನೆರಡು ವರ್ಷಗಳ ನಂತರ ನನಗೆ ಫೇಸ್ ಬುಕ್ ನಲ್ಲಿ ನನಗೆ ಕಾಣಲು ಸಿಕ್ಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ.ಅದನ್ನು ಸ್ವೀಕರಿಸಿಯಾರೆಂಬ ನಂಬಿಕೆ ನನಗಿರಲಿಲ್ಲ .ಆದರೆ ನನ್ನ ಊಹೆ ಹುಸಿಯಾಗಿ ಅವರು ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದರು.
ಫೇಸ್ ಬುಕ್ ನಲ್ಲಿ ನಾನು ಭಾಗವಹಿಸಿದ ಅತಿಥಿಯಾಗಿ ಕಾರ್ಯಕ್ರಮಗಳನ್ನು ,ಪಡೆದ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿಕೊಂಡಾಗ ಅವರು ಪ್ರತಿಕ್ರಿಯೆ ನೀಡಿ ಬೆಂಬಲ ನೀಡಿದರು‌.
ಪೇಸ್ ಬುಕ್ ನಲ್ಲಿ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಇರುತ್ತಾರೆ.ತಾವು ಪಡೆದ ಪ್ರಶಸ್ತಿ ಸನ್ಮಾನಗಳ ಬಗ್ಗೆ ಹಾಕಿಕೊಳ್ಳುತ್ತಾರೆ.ಎಲ್ಲರ ಅಭಿನಂದನೆಗಳನ್ನು ಸ್ವೀಕರಿಸುತ್ತಾರೆ‌.ಆದರೆ ಬೇರೆಯವರ ಸಾಧನೆಗಳನ್ನು ಗುರುತಿಸುವ ಅವರಿಗೆ ಒಂದು ಬೆಂಬಲದ ಮಾತನ್ನು ಹೇಳಬೇಕು ಎಂಬುದನ್ನು ಮರೆತುಬಿಡುತ್ತಾರೆ. ಹಾಗೆ ಮಾಡಿದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಾರೋ ಏನೋ ನನಗೆ ತಿಳಿಯದು.ಅಥವಾ ಬೇರೆಯವರ ಏಳಿಗೆ ಇವರಿಗೆ ಸಹ್ಯವಾಗುವುದಿಲ್ಲವೋ ಏನೋ ನನಗೆ ಅರ್ಥವಾಗುವುದಿಲ್ಲ.
ಇಂತಹವರ ನಡುವೆ ಭೈರಮಂಗಲ ರಾಮೇಗೌಡ ಸರ್ ತುಂಬಾ ಭಿನ್ನವಾಗಿ ಕಾಣಿಸುತ್ತಾರೆ.ತಮ್ಮ ಎಡೆಬಿಡದ ಕಾರ್ಯಗಳ ನಡುವೆಯೂ ಚಿಕ್ಕವರಿಗೆ ಪ್ರೋತ್ಸಾಹ ನೀಡುತ್ತಾರೆ‌.ಹಾಗಾಗಿಯೇ ಅವರು ದೊಡ್ಡವರು‌. ಸಮಾಜದಲ್ಲಿ ದೊಡ್ಡವರೆಂದು ಗುರುತಿಸಲ್ಪಡುವುದು ಸಣ್ಣ ವಿಚಾರವಲ್ಲ.ದೊಡ್ಡ ಗುಣ ಇದ್ದರೆ ಮಾತ್ರ ವಿದ್ವಾಂಸರು ಹಿರಿಯರು ದೊಡ್ಡವರೆಂದು ಗುರುತಿಸಲ್ಪಡುತ್ತಾರೆ .ಅದಕ್ಕೆ ಡಾ.ಭೈರಮಂಗಲ ರಾಮೆಗೌಡರು ನಿದರ್ಶನವಾಗಿದ್ದಾರೆ.
©ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment