Sunday 21 March 2021

ಬದುಕ ಬಂಡಿಯಲಿ‌‌- ಇವರಿಗೆಲ್ಲ ಏನು ಸಿಗುತ್ತದೆ?- ಡಾ.ಲಕ್ಷ್ಮೀ ಜಿ ಪ್ರಸಾದ್

 ಇವರಿಗೆಲ್ಲ ಏನು ಸಿಗುತ್ತದೆ ?


ಕೆಲ ಸಮಯದ ಮೊದಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗೆ ತೀರ್ಪುಗಾರಳಾಗಿ ಯವನಿಕೆಗೆ ಹೋಗಿದ್ದೆ..ಅಲ್ಲಿ ಯುವ ರಂಗ ಕರ್ಮಿ ..ಮತ್ತು ಹಿರಿಯ ನಾಟಕ ನಿರ್ದೇಶಕರಾದ ..

 ಇನ್ನಿಬ್ಬರು ತೀರ್ಪುಗಾರರಾಗಿ ಆಗಮಿಸಿದ್ದರು

( ಇವರಿಬ್ಬರ ಹೆಸರನ್ನು ಉದ್ದೇಶ ಪೂರ್ವಕವಾಗಿ ಅಡಗಿಸಿಟ್ಟಿರುವೆ.ಇನ್ನು ನಾಟಕ ರಂಗಮಂದಿರಗಳ ಒಳಗನ್ನು ಹೇಳಿದ್ದಾರೆಂದು ಇವರಿಗೆ ಮುಂದೆ ಅವಕಾಶವನ್ನೇ ಕೊಡದೆ ಸತಾಯಿಸಿದರೆ ಕಷ್ಟ)


ಫ್ರೀ ಸಿಕ್ಕ ಸಮಯದಲ್ಲಿ ನಾಟಕ ಮನೆಯ ಒಳಗು ಹೊರಗಿನ ಬಗ್ಗೆ ಮಾತನಾಡಿದೆವು.ರಂಗ ಶಂಕರ ಮತ್ತಿತರ ಕಡೆ ನಾಟಕ ಪ್ರದರ್ಶನಕ್ಕೆ ಮೊದಲೇ ಅರ್ಜಿ ಸಲ್ಲಿಸಬೇಕು.ಅಲ್ಲಿ ಮಾರಾಟವಾಗುವ ಟಿಕೇಟ್ ಗಳ‌25%  ಆಯಾಯ ರಂಗಮಂದಿರಗಳಿಗೆ ಹೋಗುತ್ತದೆ.ಅದಲ್ಲದೆ ಒಂದಷ್ಡು ಉಚಿತ ಟಿಕೇಟ್ ಗಳನ್ನು ಕೊಡಬೇಕಾಗುತ್ತದೆ.


ನೆರಳು ಬೆಳಕು ಇನ್ನಿತರ ವ್ಯವಸ್ಥೆಯನ್ನು ಇವರುಗಳೇ ಮಾಡಿಕೊಳ್ಳಬೇಕು.

ಇಲ್ಲಿನ ಅವ್ಯವವಸ್ಥೆ ಬಗ್ಗೆ ಕಮಕ್ ಕಿಮಕ್ ಎನ್ನದೇ ಮೌನವಾಗಿರಬೇಕು.ಒಂದಿನಿತೇನಾದರೂ ಅಸಮಧಾನ ಸೂಚಿಸಿದರೆ ಮುಗಿಯಿತು.ಮುಂದೆ ಇವರ ತಂಡಕ್ಕೆ ಅವಕಾಶವೇ ಕೊಡುವುದಿಲ್ವಂತೆ.

ಇವೆಲ್ಲದರ ನಡುವೆ ತುಂಬ ಜನ ಬಂದರೆ ಅಡ್ಡಿ ಇಲ್ಲ.


ಕಲಾವಿದರನ್ನು ಒಟ್ಟು ಹಾಕಿ ಅಭ್ಯಾಸ ಮಾಡಿಸುದು ಒಂದು ಸಾಹಸವೇ ಸರಿ.

ದಾಕ್ಷಾಯಿಣಿ ಭಟ್ ಅವರು ಪ್ರತಿಜ್ಞಾ ಯೌಗಂಧರಾಯಣ ನಾಟಕದ ಅಭ್ಯಾಸ ಮಾಡಿಸುವುದನ್ನು‌ ನಾನು ನೋಡಿದ್ದೆ.ಯಾವುದೋ ಪಾರ್ಕಿನ ಬದಿಯಲ್ಕಿ ಸೊಳ್ಳೆಗಳ ಕಾಟದ ನಡುವೆ  ಒಂದಷ್ಟು ಕಲಾಸಕ್ತರನ್ನು ಸೇರಿಸಿ ಅಭ್ಯಾಸ ಮಾಡಿಸುತ್ತಿದ್ದರು.

ಇಷ್ಟೆಲ್ಲಾ ಕಷ್ಟದಿಂದ ತಾಲೀಮು ನಡೆಸಿ ಹಿಂದಿನ ದಿನ ಕೈಕೊಡುವ ಕಲಾವಿದರೂ ಇರುತ್ತಾರಂತೆ.ಅಥವಾ ಹಿಂದಿನ ದಿನ ದುಡ್ಡಿನ ಬೇಡಿಕೆ ಇಡುವವರೂ ಇರ್ತಾರಂತೆ.


ಅದು ಸರಿ ಇಷ್ಟೆಲ್ಲ ಕಷ್ಟ ಪಡುವ ನಿಮಗೆ ಸ್ವಲ್ಪವಾದರೂ ಲಾಭ ಬರುತ್ತದಾ? ಎಂದು ಕೇಳಿದೆ ನಾನು.ಆಗ ಅವರಿಬ್ಬರು ಮುಖ ಮುಖ ನೋಡಿಕೊಂಡರು.ಒಂದು ವಿಷಾದದ ನಗು ಅವರ ಮುಖದಲ್ಲಿ ಸಣ್ಣಕೆ ಕಾಣಿಸಿಕೊಂಡಿತು


ಎಂತ ? ಯಾಕೆ ನಗು ? ನಾನೇನಾದರೂ ತಪ್ಪು ಕೇಳಿದೆನಾ? ಸುಮ್ಮನೆ ಕುತೂಹಲಕ್ಕಾಗಿ ಕೇಳಿದೆ ಸಷ್ಟೇ ಎಂದೆ..


'ನೀವು ಕೇಳಿದ್ದರಲ್ಲಿ‌ . ತಪ್ಪೇನೂ‌ ಇಲ್ಲ ಮೇಡಂ.ನಮಗೆ ಲಾಭ ಬರುದು ಬಿಡಿ.ಖರ್ಚಾದ ದುಡ್ಡು ಬಂದರೆ ಅದೇ ನಮ್ಮ‌ಪುಣ್ಯ ಎಂದು ಒಟ್ಟಿಗೇ ಇಬ್ಬರೂ ಹೇಳಿದರು.


ಮತ್ತೆ ಕೈಯಿಂದ ದುಡ್ಡು ಹಾಕಿ ನೀವ್ಯಾಕೆ ನಾಟಕ ಮಾಡಿಸ್ರೀರಿ ಎಂದು ನಾನು ಕೇಳಿದೆ.ಅಷ್ಟರಲ್ಲಿ ನಮ್ಮನ್ನು ಆಯೋಜಕರು ಕರೆದರು.ಮಾತು ಬೇರೆ ದಿಕ್ಕಿಗೆ ಸಾಗಿತು.

ಒಂದೊಮ್ಮೆ ಮಾತು ಅದೇ ದಿಕ್ಕಿನಲ್ಲಿ ಇದ್ದರೂ ಅವರಿಗೆ ಹೇಳಲು ಉತ್ತರ ಇರಲಿಲ್ಲ

ಆದರೆ ನನಗದರ ಉತ್ತರ ಗೊತ್ತಾಗಿದೆ.ಅದುವೇ ತೀರದ ಸೆಳೆತ.ಇವರೆಲ್ಲ‌ ನಷ್ಟ ಮಾಡಿಕೊಂಡಾದರೂ ಒಳ್ಳೊಳ್ಳೆಯ ನಾಟಕ ಪ್ರದರ್ಶನಗಳನ್ನು‌ ಮಾಡುತ್ತಾರೆ.


ಆ ದಿನ ಮನೆಗೆ ಬಂದು ಪ್ರಸಾದ್ ಹತ್ರ  ಇವರೆಲ್ಲ ಕೈಯಿಂದ ದುಡ್ಡು ಹಾಕಿ ನಾಟಕ ಪ್ರದರ್ಶನ ಮಾಡಿಸುವ ವಿಚಾರವನ್ನು ನಾನು ಹೇಳಿದೆ.ಕೈಯಿಂದ ದುಡ್ಡು ಹಾಕಿ ಕಷ್ಟ ಪಡುದು ಯಾಕೆ ? ಕಲೆ ಸಂಸ್ಕೃತಿಯ ಉಳಿಕೆಯ ಜವಾಬ್ದಾರಿ ಇವರದು ಮಾತ್ರವಾ ? ಸರಕಾರಕ್ಕೆ ಯಾವುದೂ ಇಲ್ಲವೇ ? ಎಂದು ವಿಷಾದದಿಂದ ಹೇಳಿದೆ


ಅರವಿಂದ್ ಸುಮ್ಮನೇ ಮೊಬೈಲ್ ಗುರುಟಿಕೊಂಡು ಇದ್ದ.ನನ್ನೆಡೆಗೆ ನೋಡಿ ನಕ್ಕು ಮತ್ತೆ ನೀನೆಂತಕೆ ಹಗಲು ರಾತ್ರೆ ಊಟ ತಿಂಡಿ ಬಿಟ್ಟುಊರೂರು ಅಲೆದು  ಕೈಯಿಂದ ಖರ್ಚು ಮಾಡಿ ,ಕಲಾವಿದರಿಗೆ ಸಂಭಾವನೆ ಕೊಟ್ಡು ಭೂತಕೋಲ‌ ಪಾಡ್ದನ ಜನಪದ ಹಾಡುಗಳನ್ನು ರೆಕಾರ್ಡ್ಮಾಡಿದ್ದು.? ಅದನ್ನು ಸಾವಿರ ಸಲ ಕೇಳಿ ಬರೆದದ್ದು( ಲಿಪ್ಯಂತರ ಮಾಡಿದ್ದು) ಅನುವಾದಿಸಿ ಸ್ವತಃ ಪ್ರಕಟಿಸಿದ್ದು.ನಿನಗೆ ಹಾಕುದ ದುಡ್ಡು ಬಂದಿದೆಯಾ ? ಎಂದ.


ಹ್ಹೂ..ಅದೂ ಹೌದು..ಇದೂ ಒಂದು ಸೆಳೆತ..ತೀರದ ದಾಹ..ಯಾರೋ ಓದಿ  ಮೆಚ್ಚುತ್ತಾರೆಂದು ಮಾಡುದಲ್ಲ.ನನಗಾಗಿಯೇ ಮಾಡಿದ್ದು.ಹಾಗಾಗಿ ಯುನಿವರ್ಸಿಟಿಯಾಗಲೀ ಅಕಾಡೆಮಿಗಳಾಗಲೀ ಸಹಾಯ ಮಾಡಿಲ್ಲ ಎಂದು ಹೇಳುವಂತೆ ಇಲ್ಲ.ಅವರ್ಯಾರೂ ಕಷ್ಟ ಪಟ್ಟು ಇದನ್ನು ಮಾಡು ಎಂದಿಲ್ಲ..


ನಾನಾಗಿಯೇ ಇಷ್ಟ ಪಟ್ಟು ಮಾಡಿದ್ದು.ಅದರ  ನೋವು ನಲಿವು ಕಷ್ಟ ನಷ್ಟ ಎಲ್ಲವೂ ನನ್ನದೇ..ಕೃತಿ ಚೋರರಿಗೆ ಮತ್ತದರ ಸಮರ್ಥಕರಿಗೆ ಇದರ ಹಿಂದಿನ ಬವಣೆಯ ಅರಿವಾಗದು


ನಮ್ಮಲ್ಲಿ ಸೃಜನ ಶೀಲತೆ ,ವಿಷಯ ಸಂಗ್ರಹ ಬರವಣಿಗೆಯ ಕೌಶಲ ಇದ್ದರೆ ಒಂದು ಕಥೆ ಕಾದಂಬರಿ ಲೇಖನವನ್ನು ಮನೆಯಲ್ಲಿ ಫ್ಯಾನ್ ಅಡಿಯಲ್ಲಿ ಕುಳಿತು ಬರೆಯಬಹುದು .ಅದಕ್ಕೆ ಒಂದು ಪೆನ್ ಕೆಲವು ಹಾಳೆಗಳ ಖರ್ಚು ಮಾತ್ರ ಬೀಳುತ್ತದೆ


ಆದರೆ ಭೂತಗಳ ಬಗ್ಗೆ ಅಧ್ಯಯನವೆಂದರೆ ಹಾಗಲ್ಲ.ಭೂತಕೋಲ ನಡೆಯುವ ಸಮಯಕ್ಕೇ ಹೋಗಿ ಅನೇಕ ವಿಧಿನಿಷೇದಗಳನ್ನು ಅನುಸರಿಸಿನಿಯಮಗಳಿಗೆ ಚ್ಯುತಿಯಾಗದಂತೆ,ಜನರ ಧಾರ್ಮಿನ ಭಾವನೆಗಳಿಗೆ ಘಾಸಿಯಾಗದಂತೆ  ಸದ್ದುಗದ್ದಲದ ನಡುವೆಯೇ ರೆಕಾರ್ಡ್ ಮಾಡಬೇಕು.


ಕಲಾವಿದರಿಗೆ ಸಂಭಾವನೆ ಕೊಡಬೇಕು.ಇಷ್ಟಾಗಿಯೂ ಅವರಲ್ಲಿ‌ ಮಾಹಿತಿ ಸಿಗುತ್ತದೆ ಎಂಬ ಖಾತರಿ ಇಲ್ಲ.ಆಧುನಿಕತೆಯ ಪ್ರಭಾವ ಅವರ ಮೇಲೂ ಆಗಿದೆ.ಹೆಚ್ಚಿನ ಯುವ ಕಲಾವಿದರಿಗೆ ಅಬ್ಬರದ ಕುಣಿತ ಮಾತ್ರ ಗೊತ್ತು.ಮೂಲ ವೇಷಭೂಷಣವಾಗಲೀ ಪಾಡ್ದನವಾಗಲೀ ಮೂಲ ಕಥೆಯಾಗಲೀ ತಿಳಿದಿಲ್ಲ.ಯಾರೋ ಚಾಣಾಕ್ಷರು ಕಟ್ಟದ ಪುರಾಣಮೂಲದ ಕಥೆಯನ್ನೇ ಅವರುಗಳೂ ಹೇಳುತ್ತಾರೆ.


ಇನ್ನು ಪಾಡ್ದನ ರೆಕಾರ್ಡಿಂಗ್ ಲಿಪ್ಯಂತರ ಅನುವಾದ ಸಾಂಸ್ಕೃತಿಕ‌ ಪದಕೋಶ ತಯಾರಿ‌ ಮತ್ತು ಪ್ರಕಟಣೆ ತುಂಬಾ ಪರಿಶ್ರಮ ಬೇಡುವ ಕಾರ್ಯ.

  

ಪಾಡ್ದನಗಾರರು ಅಭ್ಯಾಸ ಬಲದಿಂದ ಹಾಡುತ್ತಾರೆ ಮೊದಲು ನೇಜಿ‌ನೆಡುವಾಗ ಹಾಕುವಾಗ ಇನ್ನಿತರ ಸಂದರ್ಭದಲ್ಲಿ ಹಾಡುತ್ತಿದ್ದರು.ಈಗ ಅದೆಲ್ಲ ಬಿಟ್ಡು ಹೋಗಿ ಇವರಿಗೂ ಪಾಡ್ದನ ಹಾಡುವ ಅಭ್ಯಾಸ ಬಿಟ್ಟು ಹೋಗಿರುತ್ತದೆ.ನೆನಪು ಮಾಡಿಕೊಂಡು ಹಾಡುತ್ತಾರೆ.ನಡುವೆ ಸಣ್ಣ ಸದ್ದು ( ಡಿಸ್ಟರ್ಬೆನ್ಸ್) ಬಂದರೂ ಅವರಿಗೆ ಹಾಡುತ್ರಿರುವ ಭಾಗ ಮರೆತು ಹೋಗುತ್ತದೆ.

ಅದಕ್ಕಾಗಿ ನಾನು ಪಾಡ್ದನಗಾರರನ್ನು ಮನೆಗೆ ಕರೆಸಿ ,ಮನೆ ಮಂದಿಯನ್ನೆಲ್ಲಾ ಹೊರಗೆ ಕಳುಹಿಸಿ ಮನೆಯಲ್ಲಿ ಅಘೋಷಿತ ಕರ್ಫ್ಯೂ ಹಾಕಿ ಹಾಡಿಸಿ ರೆಕಾರ್ಡ ಮಾಡುತ್ತೇನೆ.

ಪಾಡ್ದನಗಾರರಿಗೆ ತಾವು ಹಾಡಿರುವುದರಲ್ಲಿ ಅನೇಕ ಪದಗಳ ಸ್ಪಷ್ಟತೆ ಇರುವುದಿಲ್ಲ.ಅವುಗಳ ಅರ್ಥವೂ ತಿಳಿದಿರುವುದಿಲ್ಲ


ಹಾಗಾಗಿಯೇ ಲಿಪ್ಯಂತರ ದೊಡ್ಡ ಸವಾಲು ಅದಕ್ಕಾಗಿಯೇ ಪಾಡ್ದನ ಸಂಗ್ರಹ ಮಾಡಿ ಅನುವಾದಿಸಿ ಪ್ರಕಟಿಸುವ ಯತ್ನಕ್ಕೆ  ಯಾರೂ ಕೈ ಹಾಕುದಿಲ್ಲ


ಅನೇಕ ಬಾರಿ ಹಾಕಿಕೇಳಿ ಅರ್ಥ ಮಾಡಿಕೊಂಡು ಅರ್ಥವಾಗದ ಅಸಗಪಷ್ಟಪದಗಳಿರುವಲ್ಲಿ ಊಹಾ ಪಾಠ ಸೇರಿಸಿ ಅನುವಾದಿಸಿ ಸಾಂಸ್ಕೃತಿಕ ಪದಕೋಶ ತಯಾರಿಸುವಲ್ಲಿ ಸಾಕಾಗಿ ಹೋಗಿರುತ್ತದೆ.ಇವನ್ನು ಪ್ರಕಾಶಕರು ಯಾರೂ ಪ್ರಕಟಿಸಲು ಮುಂದಾಗುವುದಿಲ್ಲ. ಪ್ರಕಟಿಸಿದರೆ ಕೊಂಡುಕೊಳ್ಳುವವರೂ ಇಲ್ಲ

ಒಂದಷ್ಟು ಪ್ರತಿಗಳನ್ನು ಗ್ರಂಥಾಲಯ ಕೊಂಡುಕೊಳ್ಳುತ್ರದೆ.ಅಲ್ಲಾದರೂ ಇವನ್ನು ಓದುವವರಿದ್ದಾರೆಯೇ ದೇವರೇ ಬಲ್ಲ


ನಾನು ಇಷ್ಟರ ತನಕ ಎಲ್ಲೂ ದಾಖಲಾಗದ ಚಂದ ಬಾರಿ ರಾಧೆ ಗೋಪಾಲ,ರುಕ್ಮುಣಿ ಬಾಲೆ ಗೋಪಾಕ,ಬಾಲೆ ಪದ್ಮಕಗಕ,ಬಾಲೆ ಚಂದಕ್ಕ ,,ಬಾಲೆ ರಂಗಮೆ ,ಕರಿಯ ಕನ್ಯಾ ಮದನು ,ಶಿರಾಡಿ ದೈವದ ಪಾಡ್ದನ ಚಾಮುಂಡಿ ಪಾಡ್ದನ ಈಶ್ವರ ದೇವರ ಪಾಡ್ದನ,ಬಾಕುಡತಿ ಪಾಡ್ದನ ಸೇರಿದಂತೆ ನೂರಕ್ಕೂ ಹೆಚ್ಚಿನ ಅಪರೂಪದ ಪಾಡ್ದನಗಳನ್ನು ಸಂಗ್ರಹಿಸಿರುವೆ.‌ಐವತ್ತರಷ್ಡು ಪಾಡ್ದನಗಳನ್ನು‌ ಲಿಪ್ಯಂತರ ಮಾಡಿ ಅನುವಾದಿಸಿ ಸಾಂಸ್ಕೃತಿಕ ಪದಕೋಶ ತಯಾರಿಸಿ ಪ್ರಕಟಿಸಿರುವೆ.

ಇಲ್ಲೆಲ್ಲ ನನಗೆ ದೈಹಿಕ ಮಾನಸಿಕ ಶ್ರಮದ ಜೊತೆಗೆ ಆರ್ಥಿಕವಾಗಿಯೂ ಸಾಕಷ್ಟು ದುಡ್ಡು ಖರ್ಚಾಗಿದೆ.


ಕೆಲವೊಮ್ಮೆ ಇದೆಲ್ಲ ಯಾಕೆ ಬೇಕಿತ್ತು ? ಎಲ್ಲರಂತೆ ಸೀರೆ ಚಿನ್ನ ಹಾಕಿ ಮದುವೆ ಉಪನಯನ ಆರತಕ್ಷತೆ ಮನೆ ಮಕ್ಕಳು‌ ಎಂದು ಎಂಜಾಯ್ ಮಾಡಬಹುದಿತ್ತು ಎಂದೆನಿಸುತ್ತದೆ.ಆಗ ನನ್ನ ಬರಹವನ್ನು ಕದಿಯುದು ಅದನ್ನು ಆಕ್ಷೇಪ ಮಾಡಿದರೆ ನಮ್ಮನ್ನೇ ನಿಂಸಿಸುದು ಅದಕ್ಕಾಗಿ ಕೋರ್ಟ್ ಕಛೇರಿ ಅಲೆದಾಟ ಇವ್ಯಾವುದೂ ಇರ್ತಿರಲಿಲ್ಲ.ಬರೆದರೆ ತಾನೇ ಕದಿಯುದು ? 


ಆದರೆ ಈ ಪರಿಶ್ರಮದಲ್ಲಿ ಸಿಗುವ ಸಂತೃಪ್ತಿ ನನಗೆ ಬೇರೆ ಯಾವುದರಲ್ಲಿಯೂ ಸಿಗುತ್ತಿರಲಿಲ್ಲ ಎಂಬುದು ಖಂಡಿತಾ .

ನನಗೆ ಸರ್ಕಾರಿ ಕೆಲಸ ಸಿಕ್ಕಾಗ ಅಮ್ಮ' ಕೆಲಸ ಆಯ್ತು ಪಿಎಚ್ ಡಿ ಆಗಿದೆ.ಇನ್ನು ಭೂತ ಕೋಲ‌ ಪಾಡ್ದನ ಅದು ಇದು ಬಿಟ್ಟು ನೆಮ್ಮದಿಯಿಂದ ಇರು‌ ಹಾಗೂ ಬೇಕಿದ್ದರೆ ಕಥೆಕಾದಂಬರಿ ನಾಟಕ ಬರೆದರೆ ಸಾಕು" ಎಂದಿದ್ದರು


ಆದರೆ ನನಗೆ ನೆಮ್ಮದಿ ಇದರಲ್ಲಿಯೇ ಇದ್ದರೆ ಎಂತ ಮಾಡುದು ?ಹಾಗೆ ನೋಡಿದರೆ ನನಗೆ ಕಥೆ ಲೇಖನಗಳನ್ನು ಬರೆಯುವ ಅಭ್ಯಾಸ ಇತ್ತು.ನನ್ನ ನಲುವತ್ತರಷ್ಟು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಮನೆಯಂಗಳದಿ ಹೂ ಎಂಬ ಕಥಾ ಸಂಕಲನ ಕೂಡ ಪ್ರಕಟವಾಗಿದೆ

ಇನ್ನೂರರಷ್ಟು ಲೇಖನಗಳು ಕೂಡ ಪ್ರಕಟವಾಗಿವೆ.


ಆದರೆ ತುಳು ಅಧ್ಯಯನದೆಡೆಗೆ ನನ್ನ ಗಮನವನ್ನು ಕೇಂದ್ರೀಕರಿಸಿ ಇವನ್ನೆಲ್ಲ ಬಿಟ್ಟುಬಿಟ್ಟೆ.


ನಾನಿಟ್ಟ ಹೆಜ್ಜೆ ತಪ್ಪೋ ಸರಿಯೋ..ನನಗೂ ಗೊತ್ತಿಲ್ಲ.

  ಡಾ.ಜಿ ಎಸ್ ಶಿವ ರುದ್ರಪ್ಪನವರು ಹೇಳಿದಂತೆ " ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ.ಅದು ಅನಿವಾರ್ಯ ಕರ್ಮ ಎನಗೆ'

 ಆದರೂ ಬ್ಗಾಗನ್ನು ತೆರೆದಾಗ ಮೂರೂವರೆ ನಾಲ್ಕು ಲಕ್ಷದಷ್ಟು ದೇಶ ವಿದೇಶಗಳ ಜನರು ಓದಿದ್ದಾರೆಂದು ತಿಳಿವಾಗ ನನ್ನ ಕೆಲಸ ಒಂದಿನಿತು ಸಾರ್ಥಕತೆಯನ್ನು ಪಡೆದಿದೆ ಎಂಬ ಆತ್ಮತೃಪ್ತಿ,ಸಂತಸ ಉಂಟಾಗುದಂತೂ ನಿಜ.


ಯಾರೋ ನಮ್ಮ ಬರಹಗಳನ್ನು ಓದಿದರೆ ನಮಗೆ ಸ್ವರ್ಗ ಸಿಗುತ್ತದಾ? ಇಲ್ಲ..ಆದರೂ ಏನೋ ಸಂತಸ ಅಷ್ಟೇ


ಬಹುಶಃ ಕೈಯಿಂದ ಖರ್ಚು ಮಾಡಿ ಮಾಡುವ ಎಲ್ಲ‌ ಕಲಾವಿದರಿಗೂ ನಾಟಕಕಾರರಿಗೂ ಸಮಾಜ ಸೇವಕರಿಗೂ  ಇದೇ ಸಂತಸ ಸಿಗುತ್ತದೆ ಅಷ್ಟೇ..ಬೇರೇನೂ ಇಲ್ಲ..


 '

No comments:

Post a Comment