Sunday 7 January 2024

ಆತ್ಮ ಕಥೆಯ ಬಿಡಿ ಭಾಗಗಳು:ಅಮ್ಮಂದಿರು ಕೈಲಾಗುವಾಗಲೇ ದುಡ್ಡು ತೆಗೆದಿರಿಸಿಕೊಳ್ಳಿ

 ನನಗೂ ಆತ್ಮವಿದೆ  ಅದಕ್ಕೂ ಒಂದು ಕಥೆ ಇದೆ

ಅಮ್ಮಂದಿರೇ ಕೈ ನಡೆಯುವಾಗಲೇ ದುಡ್ಡು ನಿಮ್ಮ ಹೆಸರಿನಲ್ಲಿರಿಸಿಕೊಳ್ಳಿ- ಡಾ.ಲಕ್ಷ್ಮೀ ಜಿ ಪ್ರಸಾದ 


ತಾಯವ್ನ ಬೈಬ್ಯಾಡ ತಿಳಿಗೇಡಿ ನನತಮ್ಮ

ಬಾಳದಿನದಾಕಿ ಹಡೆದವ್ವನ ಬೈದರ

ಭಾಳ ಮರುಗ್ಯಾಳ ಮನದಾಗ ||


ಯಾರು ಇದ್ದರೂ ನನ್ನ ತಾಯವ್ವನ ಹೋಲ್ಹರು

ಸಾವಿರ ಕೊಳ್ಳಿ ಒಲಿಯಾಗ ಇದ್ದರ

ಜ್ಯೋತಿ ನಿನ್ಯಾರ ಹೋಲರ ||


ನಮ್ಮ‌ಪರಿಚಯದ  ಎಲ್ಲಮ್ಮ ಆಂಟಿ ಮಾತಿನ ನಡುವೆ  ಅವರ ಸ್ನೇಹಿತರೊಬ್ಬರ ನಡೆದ ಕಥೆಯನ್ನು  ಹೇಳಿದ್ದರು.

ಅವರ ಸ್ನೇಹಿತೆಯ ಗಂಡ ಒಳ್ಳೆಯ ಕೆಲಸದಲ್ಲಿದ್ದರು

ಒಬ್ಬ ಮಗ ಒಂದು ಮಗಳ‌ ಚಂದದ ಸಂಸಾರ

ಮಗ ಮತ್ತು ಮಗಳಿಗೆ ಸೈಟು ತೆಗೆದುಕೊಟ್ಟಿದ್ದರು

ಮಗನ ಹೆಸರಿನ ಸೈಟಿನಲ್ಲಿ ಡುಪ್ಲೆಕ್ಸ್ ಮನೆ ಕಟ್ಟಿ ಅರಾಮಾಗಿ ಬದುಕುತ್ತಿದ್ದರು.ಮಗ ಮಗಳಿಗೆ ಮದುವೆಯಾಗಿ ಸೊಸೆ ಅಳಿಯ ಬಂದರು

ಹೀಗೇ ದಿನ ಉರುಳುತ್ತಿರುವಾಗ ಒಂದು ರಾತ್ರಿ ಹೃದಯಾಘಾತ ಆಗಿ ಅಸ್ಪತ್ರೆಗೆ ತಲುಪುವ ಮೊದಲೇ ಗಂಡ ತೀರಿಕೊಂಡರು

ಮೊದಲಿನಿಂದಲೂ ದುಡ್ಡಿನ ವ್ಯವಹಾರ ಗಂಡನೇ ನೋಡಿಕೊಳ್ತಾ ಇದ್ದಿದ್ದು.ಹೆಂಡತಿಗೆ ಒಂದಿನಿತು ಹೊರಗಿನ ವ್ಯವಹಾರದ ತಿಳುವಳಿಕೆ ಇಲ್ಲ.ತಂದೆ ಸತ್ತಾಗ ಬಂದ ದುಡ್ಡೆಲ್ಲವನ್ನು ಮಗ ಅಮ್ಮನ ಸಹಿ ಹಾಕಿಸಿಕೊಂಡು ಪಡೆದ.ಇದರಿಂದಾಗಿ ಮಗಳಿಗೆ ಕೋಪ ಬಂತು.ತಾಯಿಯಕಡೆ ತಿರುಗಿ ನೋಡಲಿಲ್ಲ.

ತಂದೆ ಸತ್ತ ಕೆಲವೇ ದಿನಕ್ಕೆ ಮಗನಿಗೆ ತಾಯಿ ಭಾರವಾಗತೊಡಗಿದಳು.ಅವಳಲ್ಲಿದ್ದ ಆಭರಣಗಳನ್ನು ಚೂರಿ ತೋರಿಸಿ ಹೆದರಿಸಿ ಕಿತ್ತುಕೊಂಡು ಹೊರ ಹಾಕಿದರು.ಗಂಡ ಹೆಂಡತಿಯ ಹೆಸರಿನಲ್ಲಿ ಏನನ್ನೂ ಮಾಡಿಟ್ಟಿರಲಿಲ್ಲ.ನಂತರ ಆ ತಾಯಿ ಯಾರ್ಯಾರದೋ ಮನೆಯ ಅಡಿಗೆ ಕೆಲಸಕ್ಕೆ ಹೋಗಿ ಎಂಟು ನೂರು ರುಪಾಯಿಯ ಶೀಟಿನ ಮನೆಯಲ್ಲಿ ಬದುಕುವಂತಾಯಿತು.

ಇದೇ ರೀತಿ ಅವರ ಇನ್ನೊಂದು ಸ್ನೇಹಿತರ ಕಥೆಯೂ ಹೇಳಿದ್ದರು

ಬಹುಶಹ ಈ ಸ್ನೇಹಿತೆಗೆ ಒಂದು ಸಣ್ಣ ಸರ್ಕಾರಿ ಕೆಲಸ ಇತ್ತು.ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ತಂದೆ ತಾಯಿಯನ್ನು ಕಳೆದುಕೊಂಡ ಸಂಬಂಧಿಕರ ಹೆಣ್ಣು ಮಗುವನ್ನು ಮಗಳಂತೆ ಸಾಕಿ ಓದಿಸಿದರು.ತಮಗಾಗಿ ದುಡ್ಡು ಉಳಿಸಿಕೊಳ್ಳಲಿಲ್ಲ  ಅ ಸಾಕು ಮಗಳಿಗೆ ಮದುವೆಯಾಯಿತು.ಈಗ ಈ ಸಾಕುತಾಯಿಗೆ ನೆಲೆಯಿಲ್ಲದಾಯಿತು

ಅವರು ರಿಟೈರ್ಡ್ ಆದರು‌‌.ನಂತರ ಬರುವ ಪೆನ್ಷನ್ ನಲ್ಲಿ ಒಂದು ಸಣ್ಣ ಬಾಡಿಗೆ ಮನೆ ಹಿಡಿದು ಬದುಕುತ್ತಿದ್ದಾರೆ.ಇನ್ನೊಂದು ನನ್ನ ಸಂಬಂಧಿಕರದೇ ಉದಾಹರಣೆ

ಮಗಳು ಹುಟ್ಟಿ ಕಣ್ಣು ತೆರೆಯುವ ಮೊದಲೇ ಗಂಡ ತೀರಿ ಹೋಗಿದ್ದ.ಇವರೇಕೆ ಮುಂದೆ ಓದಿ ಸರಿಯಾದ ಕೆಲಸ ಹಿಡಿಯಲಿಲ್ಲ ಎಂದು ನನಗೆ ಗೊತ್ತಿಲ್ಲ.ಮಗಳು ಬಹಳ ಜಾಣೆ.ಇಂಜನಿಯರಿಂಗ್ ಓದಿ ಮದುವೆಯಾದಳು.ಅದು ಅತ್ತೆ ಮಾವ ಮೈದುನಂದಿರು ಇರುವ ಕೂಡು ಕುಟುಂಬ.ಈ ತಾಯಿಗೆ ಯಾಕೋ ಅಲ್ಲಿ ಸರಿ ಹೋಗಲಿಲ್ಲ.ನಂತರ ಪುನಃತಂದೆ ಮನೆ ಸೇರಿದರು‌ಅದೃಷ್ಟಕ್ಕೆ ಸ್ವಲ್ಪ ಪಿತ್ರಾರ್ಜಿತ ಆಸ್ತಿಯೂ ಇದೆ.ಇರಲು ತಂದೆ ಮನೆ ಇದೆ..ಹೇಗೋ ನಡೆದಿರಬಹುದು ಅವರ ಬದುಕು.

ಹೀಗೆ ಸುತ್ತ ಮುತ್ತ ಅನೇಕ ಘಟನೆಗಳ ಬಗ್ಗೆ ಕೇಳ್ತಾ ಇದ್ದೇವೆ.ತಂದೆ ತಾಯಿಯರ ಮನೆ ಆಸ್ತಿ ಪಾಸ್ತಿ ದುಡ್ಡನ್ನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ತಂದೆ ತಾಯಿಯರನ್ನು ನೋಡಿಕೊಳ್ಳದೆ ಇರುವ ಅನೇಕ ಮಕ್ಕಳಿದ್ದಾರೆ.ಇಂತಹ ವಿಷಯಗಳಲ್ಲಿ ಮಗಳು ಮಗನೆಂಬ ಬೇಧ ಇಲ್ಲ

ತಂದೆ ತಾಯಿಯರನ್ನು ಕೆಲಸದಾಳಿನಂತೆ ದುಡಿಸಿಕೊಳ್ಳುವ ಅವರು ಕೆಲಸ ಮಾಡಲಾಗದಷ್ಟು ಅಶಕ್ತರಾದಾಗ ಹೊರಗೆ ಹಾಕುವ ಮಗಳಂದಿರೂ ಇದ್ದಾರೆ

ಹಾಗಾಗಿ ತಂದೆ ತಾಯಂದಿರು ಸ್ವಲ್ಪ ಎಚ್ಚತ್ತುಕೊಳ್ಳಬೇಕಿದೆ.ಸರ್ವಸ್ವವನ್ನೂ ಮಕ್ಕಳಿಗೆ ಕೊಡದೆ ತಮ್ಮ ವೃದ್ಧಾಪ್ಯದ ದಿನಗಳಿಗಾಗಿ ಇರಿಸಿಕೊಳ್ಳಬೇಕು.ಮಕ್ಕಳಿಗೆ ಎಜುಕೇಶನ್ ಕೊಡಿಸಬೇಕು ಅಷ್ಟೇ..ಹಾಗೆಂದು ವಿಪರೀತ ಸಾಲ ಮಾಡಿಕೊಂಡು ಓದಿಸುವುದಲ್ಲ.ಅವರು ತೆಗೆದ ಅಂಕಗಳಿಗೆ ಯಾವುದು ಸಿಗುತ್ತದೋ ಅದನ್ನಷ್ಟೇ ಓದಿಸಬೇಕು.

ಎಷ್ಟೇ ತ್ಯಾಗ ಮಾಡಿ ಕಷ್ಟ ಪಟ್ಟು ಬೆಳೆಸಿದರೂ ಮಕ್ಕಳಿಗೆ ಆ ಬಗ್ಗೆ ಒಂದಿನಿತೂ ಕೃತಜ್ಞತೆ ಇರುವುದಿಲ್ಲ.ತಾವು ತಂದೆ ತಾಯಿಗೆ ಮಾಡಿದ್ದೇ ಹೆಚ್ಚೆಂಬ ಭಾವ ಇರುತ್ತದೆ

ಸಾಮಾನ್ಯವಾಗಿ ತಂದೆ ಇರುವ ತನಕ ಸಮಸ್ಯೆ ಅಗುದಿಲ್ಲ.ಯಾಕೆಂದರೆ ದುಡ್ಡು ಅಸ್ತಿ ಎಲ್ಲ ತಂದೆ ಹೆಸರಲ್ಲಿ ಇರುತ್ತದೆ.ತಂದೆ ತೀರಿ ಹೋದ ನಂತರ ಉಳಿಯುವ ತಾಯಿಯ ಹೆಸರಲ್ಲಿ ಯಾವುದೇ ಆಸ್ತಿಪಾಸ್ತಿ ದುಡ್ಡಿಲ್ಲದೇ ಇರುವಾಗ ಸಮಸ್ಯೆ ಶುರುವಾಗುತ್ತದೆ.ತಾಯಿ‌ ಮುಟ್ಟಿದ್ದು ಮಾತನಾಡಿದ್ದು.ಉಸಿರೆಳೆದದ್ದು ಎಲ್ಲದರಲ್ಲಿಯೂ ತಪ್ಪುಗಳು ಕಾಣಿಸುತ್ತವೆ.

ಎಷ್ಟೇ ಪ್ರೀತಿಯಿಂದ ತಮಗಾಗಿ ಏನು ಇರಿಸಿಕೊಳ್ಳದೆಯೇ ಮಕ್ಕಳನ್ನು ಸಾಕಲಿ

ವಯಸ್ಸಾದಾಗ ನನ್ನನ್ನು ಹೆತ್ತದ್ದು ಯಾಕೆ ಸಾಕಿದ್ದು ಯಾಕೆ ಓದಿಸಿದ್ದು ಯಾಕೆ ,ನಿನ್ನಿಂದಾಗಿ ನನ್ನ ಬದುಕು ಹಾಳಾಯಿತು ಎಂಬ ಮಕ್ಕಳ ಸಂಖ್ಯೆ ಹೆಚ್ಚಿದೆ


ದುಡ್ಡಿದ್ದರೆ ಇಂದು ಪೇ ಮಾಡಿ ಇರುವ ವೃದ್ಧಾಶ್ರಮಗಳಲ್ಲಿ ಆರಾಮಾಗಿ ಇರಬಹುದು.ಮಗಳು ಅಳಿಯ ಮಗ ಸೊಸೆಯಂದಿರ ಗಂಟು ಹಾಕಿದ ಮುಖ ನೋಡಿಕೊಂಡು ಬೈದರೂ ಬಡಿದರೂ ಅನುಭವಿಸಿಕೊಂಡು ಇರುವ ಅಗತ್ಯವಿಲ್ಲ.ತಮ್ಮದೇ ವಯಸ್ಸಿನ ಸ್ನೇಹಿತರ ಜೊತೆಗೆ ಆರಾಮಾಗಿ ಬದುಕಬಹುದು.

ಹಾಗಾಗಿ ಅಮ್ಮಂದಿರು ತಮಗೆ ಅರುವತ್ತು ವರ್ಷದ ನಂತರದ ಜೀವನಕ್ಕೆ ಬೇಕಾದಷ್ಟು ದುಡ್ಡನ್ನು ತಮ್ಮ ಹೆಸರಿನಲ್ಲಿಯೇ ಇರಿಸಿಕೊಳ್ಳಬೇಕು

ಮಕ್ಕಳು ಒಳ್ಳೆಯವರೇ ಆಗಿದ್ದರೂ ಅವರಿಗೆ ಭಾರವೆನಿಸಬೇಕಿಲ್ಲ.ತಮ್ಮ ಕೈಲಾದಷ್ಟು ದಿನ ಸ್ವತಂತ್ರವಾಗಿ ಬದುಕಿ ಕೈಲಾಗದಾಗ ಪೇ ಮಾಡುವ ವೃದ್ಧಾಶ್ರಮಕ್ಕೆ ಹೋಗಬಹುದು.ಅಥವಾ ಮಕ್ಕಳೇ ನೋಡಿಕೊಳ್ಳುದಾದರೆ ಅವರ ಜೊತೆಗೂ ಇರಬಹುದು.ಆದರೆ ದುಡ್ಡಿದ್ದರೆ ಬೈದರೂ ಬಡಿದರೂ ಅವರ ಜೊತೆಗೇ ಬದುಕುವ ಅನಿವಾರ್ಯತೆ ಇರುವುದಿಲ್ಲ.ಹಾಗಾಗಿ ಎಚ್ಚತ್ತುಕೊಳ್ಳಬೇಕಿದೆ.

ಇದಲ್ಲದೆ ಇತ್ತೀಚೆಗಿನ ಇನ್ನೊಂದು ಸಮಸ್ಯೆ ಮಕ್ಕಳೆಲ್ಲ ವಿದೇಶದಲ್ಲಿ ನೆಲೆಸುವದ್ದು.ಊರಿನಲ್ಲಿರುವ ವೃದ್ಧ ತಂದೆ ತಂದೆ ತಾಯಿಗೆ ಬೇಕಾದದ್ದನ್ನು ತಂದುಕೊಡುವವರಿಲ್ಲ.ಆರೋಗ್ಯ ಹಾಳಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿಲ್ಲದ ದುಸ್ಥಿತಿ.ಅಡುಗೆ ಮಾಡಿ ಕೊಡುವವರಿಲ್ಲ.

ಇದಕ್ಕೂ ಪೇ ಮಾಡುವ ವೃದ್ಧಾಶ್ರಮಗಳೇ ಸದ್ಯಕ್ಕೆ ಕಾಣಿಸುವ ಪರಿಹಾರ.

ನಾನಿವತ್ತು ಅಕ್ಕನ ಜೊತೆ ಮಾತನಾಡುವಾಗ ಮಕ್ಕಳು ಚೆನ್ನಾಗಿ ನೋಡಿಕೊಂಡಿರುವ ತಲೆಮಾರಿನಲ್ಲಿ ನನ್ನ ಅಮ್ಮನದೇ ಕೊನೆ ಇರಬಹುದು ಎಂದು ಹೇಳಿದೆ.

ತಮ್ಮ‌ತಮ್ಮನ ಹೆಂಡತಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಿದ್ದಾರೆ.ಅಮೇರಿಕಾದಲ್ಲಿನ ಅಣ್ಣ ಮತ್ತು ದೊಡ್ಡ ತಮ್ಮ ದುಡ್ಡು ಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ

ಮುಂದೆ ನಮ್ಮ ಮಕ್ಕಳಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಅವರು ಚೆನ್ನಾಗಿ ನೋಡಿಕೊಂಡರೆ ನಮ್ಮ ಪುಣ್ಯ

ಆದರೆ ನಾವ್ಯಾಕೆ ಅವರಿಗೆ ಭಾರವಾಗಬೇಕು.ನಮ್ಮ‌ಕೈಲಾದಷ್ಟು ದಿನ ಸ್ವತಂತ್ರವಾಗಿದ್ದು.ಮಕ್ಕಳಿಗೂ ಸ್ವತಮತ್ರವಾಗಿ ಬದುಕಲು ಅನುವು ಮಾಡಿಕೊಡುದು ಒಳ್ಳೆಯದಲ್ವಾ? ಕೈಲಾಗದೇ ಇರುವ ಪ್ರಸಂಗ ಬಂದರೆ ಮುಂದಿನದು ನೋಡಿಕೊಂಡರಾಯಿತು.ಆದರೆ ನಾವು ರಿಟೈರ್ಮೆಮಟಿನ ನಂತರದ ಬದುಕಿಗೆ ಬೇಕಾದಷ್ಟು  ದುಡ್ಡು ಹೊಂದಿಸಿಟ್ಟಿರಬೇಕು

ಸಾಕಷ್ಟು ಲೈಫ್ ಇನ್ಷುರೆನ್ಸ್ ಮಾಡಿಸಿ ಇಡುವುದು ಒಳ್ಳೆಯದು.ತಿಂಗಳು ತಿಂಗಳು ಕಟ್ ಆಗುವಾಗ ನಮಗೇನೂ ಅದೊಂದು ಹೊರೆ ಎನಿಸುವುದಿಲ್ಲ.ಆದರೆ ಕಡ್ಡಾಯವಾಗಿ ಸೇವಿಂಗ್ ಅಗಿರುತ್ತದೆ‌.ನಮಗೆ ಅರುವತ್ತು ಎಪ್ಪತ್ತು ವರ್ಷಗಳಾಗುವಾಗ ಪಾಲಿಸಿ‌ ಮೆಚ್ಯೂರ್ ಅಗಿ ನಮಗೆ ಸಾಕಷ್ಟು ದುಡ್ಡು ಬರುತ್ತದೆ.ಜೊತೆಗೆ ಆರೋಗ್ಯ ವಿಮೆಯನ್ನೂ ಮಾಡಿಸಿರಬೇಕು.ಒಮ್ಮೆ ಆರೋಗ್ಯ ಸಮಸ್ಯೆ ಬಂದ ನಂತರೆ ಜೀವ ವಿಮೆ ಅಥವಾ ಆರೋಗ್ಯ ವಿಮೆ ಮಾಡಿಸಲು ಆಗುವುದಿಲ್ಲ.ಅದಕ್ಕಾಗಿ ಸಣ್ಣ ವಯಸ್ಸಿನಲ್ಲಿ ಆರೋಗ್ಯವಂತ ರಾಗಿ ಇರುವಾಗಲೇ ಮಾಡಿಸಿರಬೇಕು.ಜೊತೆಗೆ ಪೋಸ್ಟಲ್ ಡಿಪಾರ್ಟ್ ಮೆಂಟಿನಲ್ಲಿ ಸೇವಿಂಗ್ ಮಾಡಿಡಬಹುದು.

ಏನೇ ಆದರೂ ಅರುವತ್ತರ ನಂತರದ ಬದುಕಿಗೆ ನಮ್ಮಲ್ಲಿ ಸಾಕಷ್ಟು ದುಡ್ಡಿರಬೇಕು.


ನನ್ನ ಸ್ನೇಹಿತೆಯೊಬ್ಬಳ ತಂದೆ ತೀರಿ ಹೋಗಿ ತಾಯಿಯ ಕೈಯಲ್ಲಿ ದುಡ್ಡು ಇತ್ತು.ಮಗನಿಗೆ ಒಳ್ಳೆಯ ಕೆಲಸ ಇತ್ತು.ಈ ನನ್ನ ಸ್ನೇಹಿತೆ ಮಗಳಿಗೆ ಡೈವರ್ಸ್ ಆಗಿತ್ತು.ಅವಳ ಬಾಡಿಗೆ ಮನೆಗೆ ಹೋಗಿದ್ದಾಗ  ಬೆಂಗಳೂರಿನಲ್ಲಿ ಮನೆ ಕಟ್ಟಿಸಿಕೊಡುವ ವಿಚಾರ ಬಂತು.ಆಗಪೋನ್ ಕರೆ ಬಂದು  ನನ್ನ ಸ್ನೆಹಿತೆ ಮನೆಯ ಹೊರಗೆ ಹೋಗಿದ್ದಳು.ನಾನು ಮಾತಿ‌ ನಡುವೆ ನೀವು ಸಾಕಷ್ಟು ದುಡ್ಡು ದುಡ್ಡು ಇರಿಸಿಕೊಳ್ಳಿ ಎಂದಿದ್ದೆ.ನಂತರ ಒಂದಿನ ಅವರು ಮಾತ್ರ ನಮ್ಮನೆಗೆ ಬಂದು ಮಾತನಾಡಿದರು.ತಮ್ಮಲ್ಲಿರುವ 80% ದುಡ್ಡು ಕೊಟ್ಟರೆ ಮಾತ್ರ ಮಗಳಿಗೆ ಮನೆ ಆಗಲು ಸಾಧ್ಯ.ಆದರೆ ನಂತರ ನನ್ನ ಕೈಯಲ್ಲಿ ಹತ್ತು ಲಕ್ಷ ಉಳಿಯುತ್ತದೆ ಅಷ್ಟೇ ..ಏನು ಮಾಡುದು ಎಂದಿದ್ದರು.ಆಗ ನಾನು ಅರ್ಧಾಂಶ ಇಟ್ಟುಕೊಂಡು ಉಳಿದ ಅರ್ಧಾಂಶದಲ್ಲಿ ಸೈಟ್ ತೆಗೆಯಿರಿ.ಅದು ನಿಮ್ಮ ಹೆಸರಿನಲ್ಲಿಯೇ ಇರಲಿ‌.ನಂತರ ಸಾಲ ಮಾಡಿ ಅವರು ತಾಯಿ ಮತ್ತು ಮಗ( ನನ್ನ ಸ್ನೇಹಿತೆ ಮತ್ತು ಅವರ ಮಗ)ಮನೆ ಕಟ್ಟಿಕೊಳ್ಳಲಿ ಎಂದೆ.ಅವರು ಹಾಗೆಯೇ ಮಾಡಿದ್ದರು.ನಂತರ ಯಾಕೋ ಮಗಳ ಮನೆಯಲ್ಲಿಯೂ ಸರಿ ಹೋಗದೆ ಕೆಲ ವರ್ಷ ಗಂಡ ಕಟ್ಟಿಸಿದ್ದ ಮನೆಯಲ್ಲಿ ಅಡಿಗೆಗೆ ಕೆಲಸಕ್ಕೆ ಕೆಲಸದವರನ್ನು ಇರಿಸಿಕೊಂಡು ಸ್ವತಂತ್ರವಾಗಿ ಬದುಕಿದ್ದರು.ತೀರಾ ಓಡಾಡಲು ಆಗದೇ ಇದ್ದಾಗ ಪೈಡ್ ವೃದ್ಧಾಶ್ರಮಕ್ಕೆ ಹೋಗಿದ್ದರು.ಮಕ್ಕಳು ಅಗಾಗ ಮನೆಗೆ ಕರೆ ತರ್ತಾ ಇದ್ದರು.ಅಲ್ಲಿಗೂ ಹೋಗ್ತಾ ಇದ್ದರು.

ಅವರು ವೃದ್ಧಾಶ್ರಮವನ್ನು ಇಷ್ಟ ಪಡುತ್ತಾ ಇದ್ದರು.ಒಂದಿನ ಮಗ ಕರೆದುಕೊಂಡು ಬಂದಿರುವಾಗ ಮಗನ ಮಡಿಲಲ್ಲಿ ಪ್ರಾಣ ಬಿಟ್ಟಿದ್ದರು.


ಮಕ್ಕಳಲ್ಲೂ ನಾನು ಹೇಳುವುದಿಷ್ಟೇ..ವಯಸ್ಸಾದ ತಂದೆ ತಾಯಿಯರನ್ನು ಮಾತು ಮಾತಿಗೆ ಹಂಗಿಸಿ ಕಣ್ಣೀರು ಹಾಕುವಂತೆ ಮಾಡಬೇಡಿ.ಎಲ್ಲ ತಂದೆ ತಾಯಂದಿರೂ ತಮಗಾಗಿ ಏನೂ ಇರಿಸದೆ ಮಕ್ಕಳಿಗಾಗಿ ತಮ್ಮ ಆಸೆ ಅಕಾಂಕ್ಷೆಗಳನ್ಮು ತ್ಯಾಗ ಮಾಡಿರ್ತಾರೆ.ಲೋಪ ದೋಷಗಳಿಲ್ಲದ ಮನುಷ್ಯರಿಲ್ಲ.ನಮ್ಮಲ್ಲಿ ಇತರರಿಗಿಂತ ನೂರು ಪಟ್ಟು ಹೆಚ್ಚು ಇರ್ತದೆ.ನಮಗೆ ನಮ್ಮ ಬೆನ್ನು ಕಾಣುವುದಿಲ್ಲ ಅಷ್ಟೇ..ನಾವು ನಮ್ಮ ಮೂಗಿನ ನೇರಕ್ಕೆ ಅಲೋಚಿಸುತ್ತೇವೆ ಅಷ್ಟೇ..


ನಿಮಗೆ ಸಾಧ್ಯವಾದರೆ ನೀವೇ ಚೆನ್ನಾಗಿ ನೋಡಿಕೊಳ್ಳಿ.ಅವರಿಗೆ ತಾವು ಮಕ್ಕಳಿಗೆ ಭಾರ ಆಗಿದ್ದೇವೆ ಎಂಬ ಭಾವ ಬರದಂತೆ ನೋಡಿಕೊಳ್ಳಬೇಕು.ಆಗದೇ ಇದ್ದರೆ ಸಾಕಷ್ಟು ಸೌಲಭ್ಯಗಳಿರುವ  ಪೇ ಮಾಡುವ ವೃದ್ಧಾಶ್ರಮಗಳಿಗೆ ಸೇರಿಸಿ ಇಲ್ಲವೇ ಅವರಿಗೆ ಸ್ವತಂತ್ರವಾಗಿ ಬದುಕುವಂತೆ ವ್ಯವಸ್ಥೆ ಮಾಡಿಕೊಡಿ..ಹುಟ್ಟುವಾಗ ಆರಿಂಚು ಉದ್ದ ಇರುವ ಮಗು ಗಾಳಿಯಲ್ಲಿ ಬೆಳೆದು ಆರಡಿ ಆಗುವುದಿಲ್ಲ.ಅವರನ್ನು ಅಷ್ಟು ದೊಡ್ಡ ಮಾಡಲು ತಂದೆ ತಾಯಿ ಕಷ್ಟ ಪಟ್ಟಿರುತ್ತಾರೆ.ಮಕ್ಕಳಿಗೂ ಕರ್ತವ್ಯ ಇದೆ ಇದನ್ನು ಮರೆಯಬಾರದು.

ದೂರದಲ್ಲಿದ್ದರೆ ದಿನಕ್ಕೊಮ್ಮೆಯಾದರೂ  ತಂದೆ ತಾಯಿಯರಿಗೆ  ಅಜ್ಜ ಅಜ್ಜಿಯರಿಗೆ ಫೋನ್ ಮಾಡಿ ಊಟ ಮಾಡಿದೆಯಾ ತಿಂಡಿ ತಿಂದೆಯಾ ಎಂದು ವಿಚಾರಿಸಿ.ಹೆತ್ತವರಂತೆಯೇ ಅಜ್ಜ ಅಜ್ಜಿ ಕೂಡ ನಿಮಗಾಗಿ ತ್ಯಾಗ ಮಾಡಿರ್ತಾರೆ ಮರೆಯಬೇಡಿ..ಅವರನ್ನು ಪ್ರೀತಿಯಿಂದ ಕಾಣಿ..ಅಜ್ಜ ಅಜ್ಜಿಯರನ್ನು ಹೆತ್ತವರಂತೆಯೇ ಕಾಣಬೇಕು.ಅವರನ್ನು ನಿರ್ಲಕ್ಷ್ಯ ಮಾಡಿದರೆ ಮನದೊಳಗೆ ನೊಂದುಕೊಳ್ತಾರೆ.ಅವರ ಮನದ ನೋವಿನ ಕಾವು ನಮಗೆ ತಟ್ಟಬಹುದು..ಅವರೆಲ್ಲ ಶಾಶ್ವತರಲ್ಲ..ಬದುಕಿರುವಾಗ ಚಂದಕೆ ನೋಡಿಕೊಳ್ಳಬೇಕು.ಬದುಕಿರುವಷ್ಟೂ ದಿನ ಹಂಗಿಸಿ ಕಣ್ಣೀರು ಹಾಕಿಸಿ ನಂತರ ಬಹಲ ವೈಭವದ ಬೊಜ್ಜ ಮಾಡಿದರೆ ಏನೂ ಪ್ರಯೋಜನವಿಲ್ಲ..ಪ್ರೀತಿ ಗೌರವವನ್ನು ಬಾಯಿ ಬಿಟ್ಟು ಆಡಿ ತೋರಿಸಬೇಕು.ನಿಮ್ಮಿಂದಾಗಿಯೇ ನಾನು ಈ ಉತ್ತಮ ಸ್ಥಿತಿಗೆ ಬಂದೆ ಎಂದು ಹೆತ್ತವರಿಗೆ ಅಜ್ಜ ಅಜ್ಜಿಯರಿಗೆ ಹೇಳಬೇಕು..ಮನದಲ್ಲಿ ಪ್ತೀತಿ ಇದೆ ಎಂದರೆ ಸಾಲದು..ಒಂದು ಸೀರೆಯೋ ಶಲ್ಯವೋ ಸ್ವೆಟರೋ ತೆಗೆದುಕೊಡಬೇಕು.ಆಗ ಅವರಿಗೆ ತಮ್ಮ ಮಕ್ಕಳು ಮೊಮ್ಮಕ್ಕಳು ತಂದುಕೊಟ್ಟಿದ್ದಾರೆ ಎಂದು ತಮ್ಮ ಸರೀಕರಲ್ಲಿ ಹೇಳಿಕೊಂಡು ಹೆಮ್ಮೆ ಪಡ್ತಾರೆ..ಅವರು ಅವರಿಗಾಗಿ ಏನನ್ನೂ ಬಯಸುವುದಿಲ್ಲ.ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಲುತ್ತಿದ್ದಾರೆ ಎಂದು ತೋರಿಸಲು ಇಂತಹದ್ದನ್ನು ಮನದೊಳಗೆ ಬಯಸಿರುತ್ತಾರೆ

No comments:

Post a Comment