Saturday 25 August 2018

ಬದುಕ ಬಂಡಿಯಲಿ‌23 :ನನ್ನ ‌ಮೊದಲ ಉಪನ್ಯಾಸ ಡಾ.ಲಕ್ಷ್ಮೀ ಜಿ ಪ್ರಸಾದ ‌


ನನ್ನ ‌ಮೊದಲ‌ ಉಪನ್ಯಾಸ ..
ನಾನು ಸುಮಾರು ಇನ್ನೂರೈವತ್ತು   ಇನ್ನೂರೆಂಬತ್ತು ಉಪನ್ಯಾಸಗಳನ್ನು ಬೇರೆ ಬೇರೆ ವಿಷಯಗಳ ಬಗ್ಗೆ  ನೀಡಿದ್ದೇನೆ‌.
ನನ್ನ ಮೊದಲ ಉಪನ್ಯಾಸ ರಕ್ಷಾ ಬಂಧನ ದ ಕುರಿತು  ಕಲ್ಲಡ್ಕ ಶಾಲೆಯಲ್ಲಿ ಆಗಿತ್ತು .ಆಗ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ಬಗ್ಗೆ ,ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿದ್ದೆ‌.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ನಾನು ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಇದ್ದೆ‌.ಆಗಷ್ಟೇ ಎರಡನೇ ವರ್ಷದ ಎಂಎ ಪರೀಕ್ಷೆ ಮುಗಿಸಿ ಕೆಲಸಕ್ಕೆ ಸೇರಿದ್ದೆ‌.ಫಲಿತಾಂಶ ಇನ್ನೂ ಬಂದಿರಲಿಲ್ಲ.
 ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ನಿಮಿತ್ತ ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಉಪನ್ಯಾಸ ನೀಡಲು ಯಾರನ್ನೋ ಆಹ್ವಾನಿಸಿದ್ದು ,ಆ ದಿನ ಬೆಳಗ್ಗೆ ಅವರಿಗೆ ಬರಲಾಗುವುದಿಲ್ಲ ಎಂದು ಯಾರಲ್ಲೋ ಹೇಳಿಕಳುಹಿಸಿದ್ದರು.ಆಗ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದು ಯಾರು ಎಂಬ ಸಮಸ್ಯೆ ಉಂಟಾಯಿತು‌.ಆಗ ಅಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದ ಗೋಪಾಲ್ ರಾವ್ ಅವರು ನನ್ನಲ್ಲಿ ರಕ್ಷಾ ಬಂಧನದ ಬಗ್ಗೆ ಅರ್ಧ ಗಂಟೆ ಮಾತನಾಡಿ ಎಂದು ಹೇಳಿದರು‌.ಆರಂಭದಲ್ಲಿ ನಾನು ಹಿಂದೇಟು ಹಾಕಿದೆ‌.ಆಗ ಅಲ್ಲಿ ಶಿಕ್ಷಕಿಯಾಗಿದ್ದ ಸಂಧ್ಯಾ ಮಾತಾಜಿ ಹಾಗೂ ಐತಪ್ಪ ಮಾಸ್ಟರ್ ಅವರು ಒತ್ತಾಸೆಯಾಗಿ ನಿಂತು ಧೈರ್ಯ ತುಂಬಿದರು‌."ನೀವು‌ಮುಂದೆ ಕಾಲೇಜು ಉಪನ್ಯಾಸಕರಾಗಲಿರುವವರು. ಮೈಕ್ ಹಿಡಿದು ನಾಲ್ಕು ಮಾತಾಡಲು ಹಿಂದೇಟು ಹಾಕಿದರೆ ಹೇಗೆ? ಬರೆಯುವ ಹವ್ಯಾಸ ನಿಮಗಿದೆ.ಅಂತೆಯೇ ಉಪನ್ಯಾಸ ನೀಡುವುದಕ್ಕೂ ಅಭ್ಯಾಸಮಾಡಿಕೊಳ್ಳಿ.ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಂಧ್ಯಾ ಮಾತಾಜಿ ಹೇಳಿದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತದೆ.ನಂತರ ರಕ್ಷಾ ಬಂಧನಕ್ಕೆ ಸಂಬಂಧಿಸಿದ ಎರಡು ‌ಮೂರು ಕಥೆಗಳನ್ನು ನನಗೆ ಹೇಳಿಕೊಟ್ಟು ಭಾಷಣಕ್ಕೆ ತಯಾರಾಗಲು ನನಗೆ ಸಹಾಯ ಮಾಡಿದರು .
ಅಂತೂ ಇಂತೂ ಸಭಾ ಕಾರ್ಯಕ್ರಮದಲ್ಲಿ ಇಪ್ಪತ್ತು ನಿಮಿಷ ಮಾತನಾಡಿದೆ‌.ನಾನು ನೀಡಿದ  ಮೊದಲ ಉಪನ್ಯಾಸವದು.ಚೆನ್ನಾಗಿ ಮಾತನಾಡಿದ್ದೇನೆ ಎಂದು ಮುಖ್ಯೋಪಾಧ್ಯಾಯರು ಮತ್ತು ಉಳಿದ ಅಧ್ಯಾಪಕರು ಮೆಚ್ಚುಗೆಯನ್ನು ತಿಳಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.
ಅದಕ್ಕೂ ಮೊದಲು ನಾನು ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಯಲ್ಲಿ ಭಾಷಣ ಮಾಡಿ ಬಹುಮಾನ ಪಡೆದುಕೊಂಡಿದ್ದೆ‌.ಆದರೆ ಸ್ಪರ್ಧೆಯಲ್ಲಿ ಐದು ಹತ್ತು ನಿಮಿಷ ಮಾತನಾಡುವುದಕ್ಕೂ ತುಂಬಿದ ಸಭೆಯಲ್ಲಿ ಭಾಷಣ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.
ಈ ನಿಟ್ಟಿನಲ್ಲಿ ನನಗೆ ಉಪನ್ಯಾಸ ನೀಡಲು ಅವಕಾಶ ನೀಡಿ,ನಾನು ಕೂಡ ಉಪನ್ಯಾಸ ನೀಡಬಲ್ಲೆ ಎಂಬ ಧೈರ್ಯವನ್ನು ತುಂಬಿದ ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ  ಗೋಪಾಲ್ ರಾವ್ ಮತ್ತು ಅಧ್ಯಾಪಕರನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುವೆ .
ಇದಕ್ಕೂ ಒಂದು ವರ್ಷದ  ಮೊದಲು ನಮ್ಮ ಊರು ಕೋಡಪದವಿನಲ್ಲಿ ಕೃಷ್ಣಾಷ್ಟಮಿ  ಮತ್ತು ರಕ್ಷಾ ಬಂಧನ ಹಬ್ಬದ ನಿಮಿತ್ತ ಒಂದು ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಅದರಲ್ಲಿ ಒಂದು ಉಪನ್ಯಾಸ ನೀಡುವಂತೆ ಮಾತಾಜಿಯವರು ತಿಳಿಸಿದ್ದರು.ಆದರೆ  ಸ್ಥಳೀಯರಾಗಿ  ಬಲಿಷ್ಠರಾಗಿದ್ದ  ನಮ್ಮ ಹತ್ತಿರದ ಸಂಬಂಧಿಯೊಬ್ಬರು ( ಪ್ರಸಾದರ ದೊಡ್ಡಪ್ಪನ ಮಗ) ಇದು ಗೊತ್ತಾಗಿ ಹೊಟ್ಟಿಕಿಚ್ಚಿನಿಂದ ನನಗೆ ಅಲ್ಲಿ  ನೀಡಿದ ಅವಕಾಶ ವನ್ನು ತಪ್ಪಿಸಿ ,ಆ ದಿನ ಉಪನ್ಯಾಸ ನೀಡಲು ಬೇರೆ ಯಾರನ್ನೋ ಕರೆಸಿದ್ದರು. ಈ ಬಗ್ಗೆ ನನ್ನ ಅತ್ತೆಯವರೇ "ಅಬ್ಬಾ ಇವರುಗಳ ಮತ್ಸರವೇ !ಎಂದು ಉದ್ಗರಿಸಿದ್ದರು. ಸಾಮಾನ್ಯವಾಗಿ ನನ್ನ ಅತ್ತೆಯವರು ಅವರ ಕಡೆಯವರನ್ನು(  ನನ್ನ ಗಂಡನ ಮನೆ ಸಂಬಂಧಿಕರನ್ನು ) ಬಿಟ್ಟುಕೊಡುತ್ತಿರಲಿಲ್ಲ.ಆದರೆ ಈ ವಿಷಯದಲ್ಲಿ ಅವರಿಗೆ ಕೂಡ ನಮ್ಮ ಸಂಬಂಧಿಕರ ಹೊಟ್ಟೆಕಿಚ್ಚಿನ ಅರಿವಾಗಿತ್ತು.
ಇಲ್ಲಿ ತಪ್ಪಿದ ಅವಕಾಶ ಮತ್ತೆ ನನಗೆ ಕಲ್ಲಡ್ಕ ಶಾಲೆಯಲ್ಲಿ ದೊರೆತಿತ್ತು .ಜಗತ್ತು ಬಹಳ ವಿಶಾಲವಾಗಿದೆ‌.ಕೊಲ್ಲುವ ಶಕ್ತಿಗಿಂತ ಕಾಯುವ ದೇವರು ಬಲಿಷ್ಠನಾಗಿರುತ್ತಾನೆ.ಕಾಲೆಳೆಯುವ ಮಂದಿ ಕೆಲವರಿದ್ದರೆ ಬೆಂಬಲಕೊಡುವವರು ನೂರಾರು ಜನರಿರುತ್ತಾರೆ ಎಂಬುದು ಮೊದಲ ಬಾರಿಗೆ ನನಗೆ ಇಲ್ಲಿಯೇ ಅರಿವಾದದ್ದು.ಹಾಗಾಗಿಯೇ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ನಿಲುವನ್ನು ಆಧರಿಸಿ ಉಪನ್ಯಾಸ ನೀಡಿದ್ದೆ .

No comments:

Post a Comment