Tuesday 9 December 2014

ಬಿಗಿ ನಿಯಮಗಳಿರದೆ ಸಂಶೋಧನೆಗಿರದು ಮನ್ನಣೆ: ಕನ್ನಡ ಪ್ರಭ 06 ಡಿಸೆಂಬರ್ 2014



 
ಅಧ್ಯಾಪನ ಮತ್ತು ಅಧ್ಯಯನ ಈ ಎರಡು ಕೂಡ ಶಿಕ್ಷಕರಿಗೆ  ಕಣ್ಣುಗಳು ಇದ್ದಂತೆ .ಇವು ಶಿಕ್ಷಕರಿಗೆ ಅತ್ಯಗತ್ಯವಾದ ವಿಚಾರಗಳು .ಆದರೆ ಎರಡನ್ನೂ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಕ್ಷಕರ ಸಂಖ್ಯೆ ಮಾತ್ರ ತೀರಾ ಕಡಿಮೆ ಇದೆ .ಇರುವ ಕೆಲವೇ ಮಂದಿಗಾದರೂ  ಬೆಂಬಲ ಇದೆಯೇ ಕೇಳಿದರೆ ಸೂಕ್ತ ಉತ್ತರ ನೀಡುವುದು ಕಷ್ಟಕರ .
ಪದವಿ ಕಾಲೇಜ್ ಹಾಗೂ ವಿಶ್ವ ವಿದ್ಯಾಲಯಗಳ ಉಪನ್ಯಾಸಕರಿಗೆ ಸಂಶೋಧನಾ ಕಮ್ಮಟಗಳಲ್ಲಿ ,ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಮತ್ತು ಪ್ರಬಂಧ ಮಂಡನೆ ಮಾಡಲು ಓ.ಓ.ಡಿ(O.O.D) ಸೌಲಭ್ಯವಿರುತ್ತದೆ .ಪ್ರಸ್ತುತ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಈ ರೀತಿಯ ಯಾವುದೇ ರೀತಿಯ ಸೌಲಭ್ಯ ಲಭ್ಯವಿಲ್ಲ.
“ನಿಮ್ಮನ್ನು ಅಪಾಯಿಂಟ್ ಮಾಡಿದ್ದು ಸಂಶೋಧನೆ ,ಪ್ರಬಂಧ ಮಂಡನೆ ಅಂಥ ಅಲ್ಲಿ ಇಲ್ಲಿ ತಿರುಗಾಡೋದಿಕ್ಕಲ್ಲ” ಎಂದು ಟೇಬಲ್ ಗೆ ಪೆನ್ನು ಕುಟ್ಟಿ ಹೇಳುವ ಈ ಮಾತನ್ನು ಸಂಶೋಧಕರು ತಮ್ಮ ಸಂಶೋಧನಾ ಚಟುವಟಿಕೆಗಳಿಗಾಗಿ ಅವರ  ಖಾತೆಯಲ್ಲಿ ಉಳಿದಿರುವ ರಜೆಯನ್ನು  (ಸಿ ಎಲ್) ನೀಡುವಂತೆ ಪ್ರಾಂಶುಪಾಲರಲ್ಲಿ/ಮೇಲಧಿಕಾರಿಗಳಲ್ಲಿ ಕೇಳುವಾಗ  ಕೇಳಬೇಕಾಗುತ್ತದೆ.!
ಪಿಎಚ್.ಡಿ ಅಧ್ಯಯನ ಮಾಡುವುದಕ್ಕಾಗಿ ಗುಣ ಮಟ್ಟ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಆಯ್ದ ಕೆಲವರಿಗೆ ಮೂರು ವರ್ಷಗಳ ರಜೆ ಸಿಗುತ್ತದೆ .ಇದು ಬಿಟ್ರೆ ಪದವಿ ಗಳಿಕೆಗೆ ಹೊರತಾದ ಸಂಶೋಧನೆಗಾಗಿ ಯಾರಿಗೂ ಹೆಚ್ಚಿನ ರಜೆಯ ಸೌಲಭ್ಯವಿರುವುದಿಲ್ಲ .ಇರುವ ಹದಿನೈದು ರಜೆ ( ಸಿ ಎಲ್) ಗಳಲ್ಲಿಯೇ ಎಲ್ಲ ಸಂಶೋಧನಾ ಕಾರ್ಯವನ್ನು ಹೊಂದಿಸಬೇಕಾಗುತ್ತದೆ .ಇತರರು ಮದುವೆ ,ಆರತಕ್ಷತೆ ,ಉಪನಯನ ಇನ್ನಿತರ ಕಾರ್ಯಗಳಿಗೆ ತಮ್ಮ ಹದಿನೈದು ರಜೆ (ಸಿಎಲ್) ಗಳನ್ನು ಬಳಸಿದರೆ ಸಂಶೋಧನೆಯಲ್ಲಿ ತೊಡಗಿ ಕೊಂಡಿರುವ ಉಪನ್ಯಾಸಕರು ಈ ರಜೆಗಳನ್ನು ಸಂಶೋಧನೆಗಾಗಿ ಬಳಸಿಕೊಳ್ಳುತ್ತಾರೆ .ಅಂಥಹ ಒಂದು ರಜೆಯನ್ನು ಕೇಳಿದಾಗಲೂ ಸಂಶೋಧಕ ಉಪನ್ಯಾಸಕರು  ನಾನಾ ರೀತಿಯ ಉತ್ತರಗಳನ್ನು ಕೇಳಬೇಕಾಗುತ್ತದೆ ಎಂಬುದು ವಾಸ್ತವ
ಆದರೂ ಖಾತೆಯಲ್ಲಿ ಉಳಿದಿರುವ ರಜೆಯನ್ನು ಕೊಡಬೇಕಾಗುತ್ತದೆ .ಆಗಲೂ ಚಂದ್ರಮತಿ ತನ್ನ ಒಡೆಯನಲ್ಲಿ ಕಾಡಿನಲ್ಲಿ ಹಾವು ಕಡಿದು ಮೃತ ಗೊಂಡ ಮಗನ ಸಂಸ್ಕಾರ ಮಾಡಿ ಬರಲು ಅನುಮತಿ ಕೇಳಿದಾಗ ಮನೆಯೊಡೆಯ  “.ಹರಿಯದಿರ್ದುದನೆಯ್ದೆ ಗೆಯ್ದು ಹೋಗು” ಉಳಿದ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿ ಹೋಗು “ಎಂದು ಹೇಳುವಂತೆ ಸಂಶೋಧನಾ ಕಾರ್ಯಕ್ಕಾಗಿ ಮೊದಲೇ ಎಚ್ಚರಿಕೆಯಿಂದ ಕಾಲೇಜ್ ನ ಎಲ್ಲ ಕೆಲಸಗಳನ್ನು ಮುಗಿಸಿ ರಜೆ ಕೇಳಿದಾಗಲೂ “ಎಲ್ಲ ಕೆಲಸವನ್ನು ಮುಗಿಸಿ ಮತ್ತೆ ಹೋಗಿ” ಎಂಬ ಎಚ್ಚರಿಕೆಯ  ಮಾತು ಕಾದಿರುತ್ತದೆ!
ಮದುವೆ ಆರತಕ್ಷತೆ ಮೊದಲಾದ ಇತರ ಕೆಲಸಗಳಿಗಾಗಿ ರಜೆ ಹಾಕುವ ಇತರ ಉಪನ್ಯಾಸಕರಿಗೆ ಈ ಎಚ್ಚರಿಕೆಯ ಮಾತುಗಳು ಇರುವುದಿಲ್ಲ ! ಅಷ್ಟರ ಮಟ್ಟಿಗೆ ಸಂಶೋಧನೆ ಎಂಬುದು ವ್ಯಂಗ್ಯದ ಹಗುರದ ವಸ್ತು ವಾಗಿದೆ ಎನ್ನುವುದು ವಾಸ್ತವಕ್ಕೆ ಹಿಡಿದ ಕೈಗನ್ನಡಿ .
ಹಾಗಂತ ಎಲ್ಲ ಪ್ರಾಂಶುಪಾಲರು/ಮೇಲಧಿಕಾರಿಗಳು ಹೀಗಿರುತ್ತಾರೆ ಎಂದರ್ಥವಲ್ಲ. ,ಪ್ರೋತ್ಸಾಹ ಕೊಟ್ಟು ಬೆಂಬಲಿಸುವ  ಕೆಲವು ಸಹೃದಯಿಗಳೂ ಇದ್ದಾರೆ. ಆದರೆ ಇಂಥವರ ಸಂಖ್ಯೆ ಕಡಿಮೆ ಇದೆ
ಕೆಲವು ವರ್ಷಗಳ ಮೊದಲು ನಾನು ಅನುದಾನಿತ ಪದವಿ ಕಾಲೇಜ್ ಒಂದರಲ್ಲಿ ಆಡಳಿತ ಮಂಡಳಿಯಿಂದ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡು ಕನ್ನಡ ಉಪನ್ಯಾಸಕಿಯಾಗಿ  ಕೆಲಸಮಾಡುತ್ತಿದ್ದೆ .ಆ ಸಮಯದಲ್ಲೇ ನಾನು ಪಿಎಚ್.ಡಿ ಪದವಿಗಾಗಿ ಸಂಶೋಧನಾ ಅಧ್ಯಯನ ನಡೆಸುತ್ತಿದ್ದೆ, ಜೊತೆಗೆ ಬರವಣಿಗೆಯ ಹವ್ಯಾಸವೂ ಇತ್ತು . ಕನ್ನಡ ವಿಭಾಗದಲ್ಲಿ  ಇನ್ನೊಬ್ಬ ಉಪನ್ಯಾಸಕರು ಕಾದಂಬರಿಗಳನ್ನು ಬರೆಯುವ ಹವ್ಯಾಸ ಹೊಂದಿದ್ದು ಅದಾಗಲೇ ಅವರ ಕೆಲವು ಕಾದಂಬರಿಗಳು ಪ್ರಕಟವಾಗಿದ್ದವು. ಅಲ್ಲಿನ ಪ್ರಾಂಶುಪಾಲರಿಂದ ನಮಗೆ ಪ್ರೋತ್ಸಾಹವಿತ್ತು .ಆದರೆ ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರು ಆಗಾಗ  “ಈ ಸಂಶೋಧಕರು, ಬರಹಗಾರರು ಇದ್ದಾರಲ್ಲ ,ಇವರುಗಳು ಭೂಮಿಗೆ ಭಾರ ,ಇವರುಗಳನ್ನು ಬಾಣಲೆಯಲ್ಲಿ ಹಾಕಿ ಹುರಿಯಬೇಕು ಇಲ್ಲವೇ ಬೆಣಚು ಕಲ್ಲು ಹಾಕಿ ಉಜ್ಜಬೇಕು ”ಎಂದು ನಮ್ಮೆದುರಿನಲ್ಲಿಯೇ ಸಂಶೋಧಕರನ್ನು ಬರಹಗಾರರನ್ನು ಆಡಿಕೊಳ್ಳುತ್ತಿದ್ದರು !
“ಸಂಶೋಧಕ ಪ್ರವೃತ್ತಿ ಇರುವ ಉಪನ್ಯಾಸಕರು ಏನೆಲ್ಲಾ ಕಿರುಕುಳ ಅವಹೇಳನವನ್ನು ಸಹಿಸಬೇಕಾಗುತ್ತದೆ” ಎಂದು ತಿಳಿಸಲು  ಇದೊಂದು ಉದಾಹರಣೆಯೇ ಸಾಕು.
ಇದು ತನಕ “ಸಂಶೋಧನೆ ಎಂಬುದು ಉಪನ್ಯಾಸಕರು ಮಾಡಲೇ ಬೇಕಾದ ಕಾರ್ಯ,
ಉಪನ್ಯಾಸಕರಿಗೆ ಸಂಶೋಧನೆ ಮಾಡುವ ಸಲುವಾಗಿಯೇ ವಾರಕ್ಕೆ ಹದಿನಾರು  ಗಂಟೆಗಳ ಬೋಧನಾ ಕಾರ್ಯ ಹಾಕಿರುತ್ತಾರೆ .ಇನ್ನು ಆರು ಗಂಟೆಗಳಷ್ಟು ಕಾಲ ಅವರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ ಬೇಕೆಂಬ”  ವಿಚಾರದ ಅರಿವೇ ಹೆಚ್ಚಿನ ಮಂದಿಗೆ ಇರಲಿಲ್ಲ.
ಇತ್ತೀಚೆಗೆ ಸಂಶೋಧನೆ ಮಾಡದೆ ಇರುವ ಉಪನ್ಯಾಸಕರು ವಾರಕ್ಕೆ ಇಪ್ಪತ್ತೆರಡು ಗಂಟೆ ಪಾಠ ಮಾಡ ಬೇಕೆಂಬ ಆದೇಶವನ್ನು ಸರ್ಕಾರ ಹೊರಡಿಸಿದಾಗಲೆ ಈ ವಿಚಾರ ಎಲ್ಲರಿಗೆ ಅರಿವಾದದದ್ದು.
.ಪ್ರಸ್ತುತ ಈ ಆದೇಶ ಪದವಿ ಕಾಲೇಜ್ ಗಳ ಉಪನ್ಯಾಸಕರಿಗೆ ಸಂಬಂಧಿಸಿದ್ದು  ಆಗಿದೆಯಾದರೂ ಸಂಶೋಧನೆ ಎನ್ನುವುದು ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಏನೂ ವರ್ಜ್ಯವಾದ ವಿಚಾರವಲ್ಲ, ಯಾಕೆಂದರೆ ಮೊದಲು ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣ ಒಟ್ಟಿಗೆ ಇತ್ತು .
 ಈ ಆದೇಶವನ್ನು ಸರ್ಕಾರ ಹಿಂದೆ ಪಡೆಯುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.ಇದು ಜಾರಿಗೆ ಬಂದಿದ್ದರೆ ನಿಜಕ್ಕೂ ಒಳ್ಳೆಯದಿತ್ತು ಎಂದೆನಿಸುತ್ತದೆ.ಒಂದಷ್ಟು ಉಪನ್ಯಾಸಕರು ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಇದು ಪ್ರೇರಣೆಯಾಗುತ್ತಿತ್ತು.ಮತ್ತು ಈಗಾಗಲೇ ಸಂಶೋಧನೆಯಲ್ಲಿ ತೊಡಗಿಕೊಂಡವರಿಗೆ ತುಸು ಮನ್ನಣೆ ದೊರೆಯುತ್ತಿತ್ತು.
ಅದು ಏನೇ ಇರಲಿ ,ಉಪನ್ಯಾಸಕರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳ ಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ಸರ್ಕಾರದ ಈ ಆದೇಶ ಸೂಚಿಸಿದೆ.
ಸಂಶೋಧನೆಯ ಅಗತ್ಯತೆಯ ಅರಿವಿಲ್ಲದಿರುವಿಕೆ ಹಾಗೂ ಸಂಶೋಧಕ ಉಪನ್ಯಾಸಕರಿಗೂ ಉಳಿದವರಿಗೂ ಯಾವುದೇ ಸೌಲಭ್ಯಗಳಲ್ಲಿ ವ್ಯತ್ಯಾಸ ಇಲ್ಲದೆ ಇರುವ ಕಾರಣದಿಂದಲೋ ಏನೋ ಸಂಶೋಧನೆ ಯಲ್ಲಿ ತೊಡಗಿಸಿಕೊಂಡ ಉಪನ್ಯಾಸಕರಿಗೆ ಈ ತನಕ ಯಾವುದೇ ವಿಶೇಷ ಬೆಂಬಲವಿರಲಿಲ್ಲ.
ಸಾಮಾನ್ಯವಾಗಿ ಸಂಶೋಧಕ ಉಪನ್ಯಾಸಕರ  ಬಗ್ಗೆ ಇತರರಿಗೆ ಒಲವಿರುವುದಿಲ್ಲ ,ತಾವು ಏನನ್ನು ಮಾಡದಿದ್ದರೂ ಬೇರೆಯವರು ಮಾಡ ಹೊರಟಾಗ ಕಾಲು ಎಳೆಯುವುದು ಸಾಮಾನ್ಯವಾದ ವಿಚಾರ .ಬೇರೆಯವರ ಸಾಧನೆ ಯಶಸ್ಸನ್ನು ತಮ್ಮ ಸೋಲು ಎಂದು ಭಾವಿಸುವ ಮಂದಿಯೂ ಇರುತ್ತಾರೆ .
 ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡೇ ತಮ್ಮ ಇತರ ಸಂಶೋಧನಾ ಚಟುವಟಿಕೆಗಳನ್ನು ಮಾಡುತ್ತಿದ್ದರೂ ಅವರು ಸುಮ್ಮನೆ ಅಲ್ಲಿ ಇಲ್ಲಿ ಸುತ್ತುತ್ತಾರೆ ಎಂಬ ಹಗುರು ಭಾವನೆ ಅನೇಕರಿಗೆ.ಸಿಲಬಸ್ ಮುಗಿಸುವ ಉಪನ್ಯಾಸಕರ ನಡುವೆ ಇವರ ಕಾರ್ಯಕ್ಕೆ ಯಾವುದೇ ಮನ್ನಣೆ ಇಲ್ಲ.
ಅವರು ಹೆಸರಿಗಾಗಿ ಮಾಡುತ್ತಾರೆ ಎಂಬ ಆಕ್ಷೇಪ ಬೇರೆ !ತಮ್ಮ ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಕುರಿತು ಒಲವು ಮೂಡಿಸುವ ಯತ್ನ ಮಾಡಿದರೆ ಅದಕ್ಕೂ” ಸುಮ್ಮನೆ ಕೊರೀತಾರೆ.ಎಲ್ಲ ಹೆಸರಿಗಾಗಿ ಮಾಡುತ್ತಾರೆ”ಎಂಬ ಹಗುರದ ಮಾತುಗಳು ಕೇಳಿ ಬರುತ್ತವೆ.
ಆದರೆ ಹೆಸರಿಗಾಗಿಯೇ ಇರಲಿ ಪದವಿ ಗಳಿಕೆಗಾಗಿಯೇ ಇರಲಿ ಅಥವಾ ಇನ್ನೇನಕ್ಕಾಗಿಯೇ ಇರಲಿ ಮಾಡಿದ ಸಂಶೋಧನೆಗೆ ಅದರದೇ ಆದ ಮಹತ್ವವಿದೆ .
ಸಂಶೋಧನೆ ಎನ್ನುವುದು ಅಷ್ಟು ಸುಲಭದ ವಿಚಾರವಲ್ಲ .
ಸಂಶೋಧನೆ ಎಂದರೆ ಶೋಧಿಸು ,ಶುದ್ಧ ಗೊಳಿಸು ಎಂದರ್ಥ.ಕಾಲಾಂತರದಲ್ಲಿ ಹೊಸತರ ಶೋಧನೆ ,ಅನ್ವೇಷಣೆ ಎಂಬ ವಿಶಾಲ ಅರ್ಥ ಪ್ರಾಪ್ತಿಯಾಗಿದೆ .ಅದೊಂದು ನಿರಂತರ  ಹುಡುಕಾಟ .ಅರ್ಥ ಏನೇ ಇರಲಿ ಸಂಶೋಧನೆ ಎಂಬುದು ಸುಲಭದ ಮಾತಲ್ಲ ಅನೇಕ ಸವಾಲುಗಳು ಸಂಶೋಧನೆ ಮಾಡುವವರಿಗೆ ಎದುರಾಗುತ್ತವೆ .ಸಂಶೋಧಕರಿಗೆ ಸೃಜನ ಶೀಲತೆ ಮತ್ತು ತೀಕ್ಷ್ನ ವಿಚಕ್ಷಣಾ ಗುಣ ,ಸತತ ಯತ್ನ ,ನಿರಂತರ ಅಧ್ಯಯನಶೀಲತೆ ,ಸೂಕ್ಷ್ಮತೆ,ವಿಚಾರ ಶೀಲತೆಗಳು ಇರಬೇಕಾಗುತ್ತವೆ.
“ನಾವು ಚಿಕ್ಕವರಿದ್ದಾಗ ಬೆಟ್ಟ ಗುಡ್ಡ ಹತ್ತಿ ಜೇನು ನೊಣಗಳನ್ನು ಹುಡುಕಾಡುತ್ತಾ ಅಲೆಯುತ್ತಿದ್ದೆವು .ಜೇನು ನೊಣಗಳ ಬೆನ್ಹತ್ತಿ ಜೇನು ಗೂಡು ಎಲ್ಲಿದೆ ಎಂದು ಪತ್ತೆ ಮಾಡಲು ಅವುಗಳ ಹಿಂದೆ ಮುಳ್ಳು ಕಂಟಿ ಯನ್ನು ಹಾರಿ ಎದ್ದು ಬಿದ್ದು ಓಡುತ್ತಿದ್ದೆವು,ಎಲ್ಲ ಸಂದರ್ಭಗಳಲ್ಲೂ ಜೇನು ಗೂಡು ಸಿಗುತ್ತೆ ಅಂತ ಹೇಳಲು ಆಗುವುದಿಲ್ಲ .ಕೆಲವೊಮ್ಮೆ ಸಿಗುತ್ತದೆ ಕೆಲವೊಮ್ಮೆ ಸಿಗುವುದಿಲ್ಲ .ಆದರೆ ಅದರ ಹುಡುಕಾಟವೇ ಒಂದು ಸಂಭ್ರಮ .ಸಂಶೋಧನೆ ಕೂಡ ಹಾಗೆಯೇ,ಅದು ಒಂದು ಹುಡುಕಾಟ ಅದರಲ್ಲಿಯೇ ಸಂಶೋಧಕನಿಗೆ ಸಂತಸವಿರುತ್ತದೆ ”ಎಂದು ಖ್ಯಾತ ಸಂಶೋಧಕರಾದ ಡಾ.ಚಿದಾನಂದ ಮೂರ್ತಿಗಳು ಹೇಳಿದ್ದಾರೆ.
“ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ ಜನಪದ ಅಂಶ  ( folk items)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ.. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ಮನಸ್ಸಿದ್ದರೆ ಮಾರ್ಗಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ.ಜಾತ್ರೆಯಂತಹ ಸಂದರ್ಭದಲ್ಲಿ ಪಲ್ಲಕಿಒಂದು ಜನಪದ ಅಂಶವಾದರೆ ಅಡ್ಡಪಲ್ಲಕಿಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಕೂಡ ಸಂಶೋಧಕರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.  
ಎಂದು ಖ್ಯಾತ ಜಾನಪದ ಸಂಶೋಧಕರಾದ ಡಾ.ವಾಮನ ನಂದಾವರ ಅವರು ಹೇಳುತ್ತಾರೆ.
ಸಂಶೋಧನೆ ಎಂದರೆ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ .ಆದ್ದರಿಂದ ಸಂಶೋಧನೆಯ ವಿಧಾನಗಳು ಕೂಡಾ ಭಿನ್ನವಾಗಿರುತ್ತದೆ. ವಿಷಯ ಹಾಗೂ ಉದ್ದೇಶಗಳನ್ನು ಆಧರಿಸಿ ಅನೇಕ ವಿಧಾನಗಳು ಇರುತ್ತವೆ.ವಿಷಯ ಆಥವಾ ವಸ್ತುವನ್ನು ಆಧರಿಸಿ ಐತಿಹಾಸಿಕ ವರ್ಣಾತ್ಮಕ ವಿಧಾನ,ಮತ್ತು ಪ್ರಾಯೋಗಿಕ ಎಂದೂ,ಉದ್ದೇಶವನ್ನು ಆಧರಿಸಿ ಮೂಲ ಭೂತ ,ಆನ್ವಯಿಕ ,ಮತ್ತು ಕ್ರಿಯಾ ಸಂಶೋಧನೆ ಎಂದು ಹಲವಾರು ಅನೇಕ ಸಂಶೋಧನಾ ವಿಧಾನಗಳಿವೆ.
ಯಾವುದೇ ವಿಧದ ಸಂಶೋಧನೆ ಆಗಿದ್ದರೂ ಅವುಗಳ ವಿಷಯ ಹಾಗೂ ಉದ್ದೇಶಗಳ ಸ್ವರೂಪಕ್ಕೆಅನುಗುಣವಾಗಿವಿಶ್ಲೇಷಣೆ,ಅವಲೋಕನ,ಅಧ್ಯಯನ,ಊಹೆ,ಕ್ಷೇತ್ರಕಾರ್ಯ,ಸಂದರ್ಶನ,ಪ್ರಯೋಗ,ಪ್ರಶ್ನಾವಳಿ ,ವ್ಯಕ್ತಿತ್ವ ಪರೀಕ್ಷೆ ಈಗಾಗಲೇ ನಡೆದ ಅಧ್ಯಯನ ಮತ್ತು ಅದರ ಫಲಿತಗಳ ಸಂಗ್ರಹ ,ಮಾಹಿತಿ ಸಂಗ್ರಹ ಮೊದಲಾದ ಅನೇಕ ತಂತ್ರಗಳನ್ನು ಬಳಸಿಕೊಂಡು ಸಂಶೋಧನಾ ಅಧ್ಯಯನ ಮಾಡಬೇಕಾಗುತ್ತದೆ. ಪ್ರತಿಯೊಂದು ಸಂಶೋಧನೆಯೂ ವಿಶಿಷ್ಟವಾಗಿದ್ದು ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರತ್ಯೇಕ ಗುಣಲಕ್ಷಣಗಳಿರುತ್ತವೆ.ಆದ್ದರಿಂದ ಎಲ್ಲ ಉಪಾಧಿಗಳ ಜೊತೆಗೆ ತನ್ನದೇ ಆದ ಒಂದು ತಂತ್ರವನ್ನು  ಅಳವಡಿಸಿಕೊಳ್ಳಬೇಕಾಗುತ್ತದೆ.ಹಾಗಾದಾಗ ಮಾತ್ರ ಅದು ಉತ್ತಮ ಸಂಶೋಧನೆ ಎನಿಸಿಕೊಳ್ಳುತ್ತದೆ.
ಸಂಶೋಧನೆ ಮಾಡುವಾಗ ನಮ್ಮಲ್ಲಿ ಪೂರ್ವ ನಿರ್ಧಾರಿತ ಮನಸ್ಸಿರಬಾರದು. "ಮೊದಲೇ ನಿರ್ಧಾರವನ್ನು ತಲೆಯಲ್ಲಿ ತುಂಬಿ ಅದಕ್ಕೆ ಆಧಾರಗಳನ್ನು ಹೊಂದಿಸುವುದೋ ಅರ್ಥೈಸುವುದೋ ವಿಮರ್ಶೆಯಲ್ಲ, ಅದು ಸಂಶೋಧನೆಯೂ ಅಲ್ಲ. ಸತ್ಯವನ್ನು ತಿಳಿಯಲು ಮೊದಲು ಮಠೀಯ ಆವೇಶಗಳಿಂದ ಹೊರಬಂದು ಚಿಂತಿಸುವುದು ತೀರ ಅವಶ್ಯ" ಎಂದು ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ .
ಸಂಶೋಧನೆಗೆ ನಿರಂತರ ಅಧ್ಯಯನ ಏಕಾಗ್ರತೆ ಅತ್ಯಗತ್ಯ.ನಾನಾ ಕ್ಷೇತ್ರಗಳಲ್ಲಿ ನಡೆದ ಸಂಶೋಧನೆಗಳ ತಿಳುವಳಿಕೆ ಸಂಶೋಧಕರಿಗೆ  ಇರಬೇಕಾಗುತ್ತದೆ.ಅದಕ್ಕಾಗಿ ಆತನ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳ ಅಧ್ಯಯನ ಮಾಡಬೇಕು . ಸಂಶೋಧನೆಗಳಿಗೆ ಸಂಬಂಧಿಸಿದ ಚರ್ಚೆ ,ವಿಶ್ಲೇಷಣೆ, ,ಶ್ರೇಷ್ಠ ಸಂಶೋಧಕರು ಅನುಸರಿಸುವ ಮಾರ್ಗ ,ಅವರ ವಿಶ್ಲೇಷಣಾ ವಿಧಾನ,ಮೊದಲಾದವುಗಳನ್ನು ಗಮನಿಸಿ ತನ್ನದೇ ಆದ ಮಾರ್ಗವನ್ನು ಗುರುತಿಸಿಕೊಳ್ಳಬೇಕು.
“ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು . ಜೊತೆಗೆ ಧೈರ್ಯವೂ ಬೇಕು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ” ಎಂದು ಖ್ಯಾತ ಜಾನಪದ ಸಂಶೋಧಕರಾದ ಡಾ.ವಾಮನ ನಂದಾವರ ಅವರು ಹೇಳುತ್ತಾರೆ.
ಆದ್ದರಿಂದಲೇ ಎಲ್ಲರಿಗೂ ಸಂಶೋಧನೆ ಮಾಡಲು ಸಾಧ್ಯವಾಗುವುದಿಲ್ಲ .ಅದಕ್ಕಾಗಿಯೇ ಉಪನ್ಯಾಸಕ ಹುದ್ದೆಗೆ ಆಯ್ಕೆ ಮಾಡುವಾಗಲೇ ಸಂಶೋಧನೆಯಲ್ಲಿ ಈಗಾಗಲೇ ತೊಡಗಿಸಿಕೊಂಡವರನ್ನು ಆಯ್ಕೆ ಮಾಡಿದರೆ ಉನ್ನತ ಮಟ್ಟದ ಸಂಶೋಧನಾ ಕಾರ್ಯಗಳು ನಡೆಯಲು ಸಾಧ್ಯ .
2006 ರಲ್ಲಿ ಪದವಿ ಕಾಲೇಜ್ ಗಳಿಗೆ ನಡೆದ ನೇಮಕಾತಿಯಲ್ಲಿ ಪಿಎಚ್.ಡಿ ಪಡೆದು ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿದ ಅಭ್ಯರ್ಥಿಗಳು ಇದ್ದಾಗಲೂ ಅವರನ್ನೆಲ್ಲ ಬಿಟ್ಟು ಕೇವಲ ಎಂ ಫಿಲ್ ಆದ ಅನೇಕರನ್ನು ಆಯ್ಕೆ ಮಾಡಲಾಗಿದೆ .ಯು  ಜಿ ಸಿ ಯು ಪದವಿ ಕಾಲೇಜ್ ಗಳ ನೇಮಕಾತಿಗೆ ಅರ್ಹತೆಯಾಗಿ ಎಂ ಫಿಲ್ ,ಪಿಎಚ್ ಡಿ ಅಥವ ನೆಟ್/ಸ್ಲೆಟ್ ಎಂದು ಕನಿಷ್ಠ ಅರ್ಹತೆಯನ್ನು ನಿಗದಿ ಪಡಿಸಿತ್ತು. ಆದರೆ ಆಯ್ಕೆ ಮಾಡುವಾಗ ಪಿಎಚ್.ಡಿ ಪದವಿ ಗಳಿಕೆಯ ನಂತರವೂ ನಿರಂತರವಾಗಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರಿಗೆ ಅವಕಾಶ ನೀಡಬಹುದಿತ್ತು.
ಇನ್ನು ಸದ್ಯದಲ್ಲಿಯೇ ನಡೆಸಲಾಗುತ್ತದೆ ಎಂದು ಹೇಳುವ ಪದವಿ ಕಾಲೇಜ್ ಉಪನ್ಯಾಸಕರ  ನೇಮಕಾತಿಯಲ್ಲಿಯೂ ಸಂಶೋಧನೆಗೆ ಯಾವುದೇ ಆದ್ಯತೆ ಇಲ್ಲ .ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತಿದೆ.ಆಯ್ಕೆಗೆ ಭ್ರಷ್ಟಾಚಾರಕ್ಕೆ ಎಡೆಯಿಲ್ಲದ ಇದೊಂದು ಎಲ್ಲರಿಗೂ ಸಮಾನ ಅವಕಾಶ ಕೊಡುವ ಪಾರದರ್ಶಕ ಪದ್ಧತಿಯಾಗಿದ್ದರೂ ಸಂಶೋಧನೆಗೆ ಇಲ್ಲಿ ಯಾವುದೇ ಆದ್ಯತೆ ಇಲ್ಲ ಎನ್ನುವುದು ಕೂಡ ಸತ್ಯ .
ಸಂಶೋಧನೆಯ ಗಂಧ ಗಾಳಿಯೇ ಇಲ್ಲದವರನ್ನು ಉಪನ್ಯಾಸಕರನ್ನಾಗಿ ತೆಗೆದು ಕೊಂಡು ಸಂಶೋಧನೆ ಮಾಡಿ ಎಂದರೆ ವಿರೋಧ ಬಾರದೆ ಇರುತ್ತದೆಯೇ ?(ಸಂಶೋಧನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಉಪನ್ಯಾಸಕರಿಗೆ ಈ ಮಾತುಗಳು  ಅನ್ವಯವಾಗುವುದಿಲ್ಲ ) ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವೇ ?ಇನ್ನು ಮುಂದಾದರು ಉಪನ್ಯಾಸಕರನ್ನು ಆಯ್ಕೆ ಮಾಡುವಾಗ ಸಂಶೋಧನೆಯಲ್ಲಿ ನಿರತರಾದವರಿಗೆ ಆದ್ಯತೆ ಕೊಟ್ರೆ ಉನ್ನತ ಮಟ್ಟದ ಸಂಶೋಧನೆ ನಡೆದು ಒಳ್ಳೆಯ ಫಲಿತಗಳು ಬಂದಾವು .
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ,ಸುಳ್ಯ ತಾಲೂಕು ,ದ,ಕ ಜಿಲ್ಲೆ 

No comments:

Post a Comment