Monday, 15 December 2025

ಆತ್ಮ‌ಕಥೆಯ ಬಿಡಿ ಭಾಗಗಳು

 ಆತ್ಮ ಕಥೆಯ ಬಿಡಿ ಭಾಗಗಳು


ಪೇಟೆಯಲ್ಲಿ ಬಾಡಿಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು..


ಹೌದು  31 ವರ್ಷಗಳ ಹಿಂದೆ  ನಾನಿದನ್ನು ಸತ್ಯವಾಗಿಯೂ ನಂಬಿದ್ದೆ.ಬಾಡಿಗೆಗೆ ಮನೆ ಸಿಗದಿದ್ದರೇನು ಮಾಡುವುದು ಎಂದು ತುಂಬಾ ಆತಂಕಕ್ಕೆ ಒಳಗಾಗಿದ್ದೆ 

ಎರಡನೆಯ ವರ್ಷ ಪದವಿ ಓದುತ್ತಿರುವಾಗ ಮದುವೆಯಾಯಿತು‌ ಅಂತಿಮ ವರ್ಷ ಅಂತೂ ಆಡಿಕೂಡಿ ಡೋಲಾಯಮಾನ ಸ್ಥಿತಿಯಲ್ಲಿಯೇ ಕಳೆಯಿತು

ಮುಂದೇನು ? ಎಂಬ ಪ್ರಶ್ನೆ ನನ್ನೆದುರು ಬೃಹದಾಕಾರವಾಗಿ ಬೆಳೆದು ನಿಂತು ಕಾಡುತ್ತಿತ್ತು

ಬಿಎಸ್ ಸಿ ಓದುವಾಗ ಅಂತಹ ಜಾಣೆ ನಾನಾಗಿರಲಿಲ್ಲ.ಆದರೆ ಹತ್ತನೆಯ ತರಗತಿ ತನಕ ಜಾಣ ವಿದ್ಯಾರ್ಥಿನಿಯೆಂದೇ ಗುರುತಿಸಿಕೊಂಡವಳು ನಾನು

ನಂತರ ವಿಜ್ಣಾನ ನನಗೆ ಕಷ್ಟವಾಯಿತೋ ಇಂಗ್ಲಿಷ್ ಬಾರದೆ ಪಾಠ ತಲೆಗೇ ಹೋಗದೆ ಕಲಿಕೆಯಲ್ಲಿ ಹಿಂದುಳಿದೆನೋ ಗೊತ್ತಿಲ್ಲ

ಆದರೂ ಬಿಎಸ್ ಸಿಯಲ್ಲಿ ಒಂದೇ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿರಲಿಲ್ಲ

ಮುಂದೆ ಎಂ ಎಸ್ಸಿ ಆಗದೆಂದು ಅನಿಸಿತ್ತು.ಮತ್ತೆ ಆರ್ಟ್ಸ್ ತಗೊಂಡರೆ ರ‌್ಯಾಂಕ್ ತೆಗೆದು ಯಶಸ್ವಿಯಾದೇನೆಂಬ ಆತ್ಮವಿಶ್ವಾಸ ನನಗಿತ್ತು

ಹಾಗಾಗಿಯೇ ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ

ಕೋಡ ಪದವು ಸಮೀಪದ ನಮ್ಮ ಮನೆಯಿಂದ ಕಟೀಲಿಗೆ ನಿತ್ಯ ಹೋಗಿ ಬರುವದ್ದು ಆಗದ ಮಾತು ಜೊತೆಗೆ ಉನ್ನತ ಕಲಿಕೆಗೆ ಮನೆ ಮಂದಿ ಬಂಧು ಬಳಗದವರಿಂದ ತೀವ್ರ ವಿರೋಧವಿತ್ತು

ಆದರೂ ನಾನು ನನ್ನ ಮೈದುನನಿಗೆ ' ನಾನು ಓದಿ ಒಳ್ಳೆಯ ಕೆಲಸ ಹಿಡಿದರೆ ನಮಗೆ ಆಸ್ತಿಯಲ್ಲಿ ಪಾಲು ಬೇಕಾಗಿ ಬರಲಾರದು.ಇಲ್ಲಿಯೇ ಇದ್ದು ಇರುವ ತುಂಡು ಭೂಮಿಯನ್ನು ಹಂಚಿಕೊಂಡು ತಲೆಗೆಳೆದರೆ ಕಾಲಿಗೆ ಬರದಂತಹ ಬದುಕು ಯಾಕೆ ? ಹಾಗಾಗಿ ನನ್ನ ಕಲಿಕೆಗೆ ವಿರೋಧವೇಕೆ ಎಂದಿದ್ದೆ

ಆಗಿನ ಕಾಲಘಟ್ಟ.ಹೇಳಿಕೊಡುವವರು ಅನೇಕರಿದ್ದರು

ಹಾಗಾಗಿ ವಿರೋಧ ಶಮನವಾಗಲಿಲ್ಲ.ಮನೆ ಮಂದಿ ಬಂಧು ಬಳಗವನ್ನು ಎದುರು ಹಾಕಿಕೊಂಡು ಮುಂದೆ ಓದಲು ನಿರ್ಧರಿಸಿದೆ

ಪ್ರಸಾದರನ್ನು ಒಪ್ಪಿಸಿದೆ

ಆಗ ಮೊದಲ ಬಾರಿಗೆ ಬಾಡಿಗೆ ಮನೆಗೆ ಹೋಗಬೇಕಾದ ಪ್ರಸಂಗ ಬಂತು.ಆಗ ನಮ್ಮ ನೆರೆಕರೆಯ ಮಂದಿಯ ಮಕ್ಕಳು ಮಂಗಳೂರಿನಲ್ಲಿದ್ದರು.ಅವರೆಲ್ಲ ಪೇಟೆಯಲ್ಲಿ ಬಾಡಿಗೆಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು.ಪೇಟೆಯ ಅರಿವಿಲ್ಲದ ನಾನೂ ಇದು ಇರಬಹುದೇನೋ ಎಂದು ಭಯ ಪಟ್ಟಿದ್ದೆ

ಅದೃಷ್ಟವಶಾತ್ ನಮ್ಮ ಆದಾಯಕ್ಕೆ ಸರಿ ಹೊಂದುವ ಮಣ್ಣಿನ ಮೋಟು ಗೋಡೆಯ ಒಂದು ಕೊಠಡಿಯ ಮನೆ ನಮಗೆ ಕಟೀಲು ಸಮೀಪದ ಎಕ್ಕಾರಿನ ನಾಗವೇಣಿ ಅಮ್ಮನವರು ಒದಗಿಸಿದರು.

ನಂತರ ಒಂದು ವರ್ಷದೊಳಗೆ ಪ್ರಸಾದರಿಗೆ ಒಳ್ಳೆಯ ಕೆಲಸ ಸಿಕ್ತು. ನನ್ನ ಸೋದರ ಮಾವಂದಿರ ಪರಿಚಯದಲ್ಲಿ ಮಂಗಳೂರಿನ ವಿಜಯ ಪೆನ್ ಮಾರ್ಟ್ ( ಪೆನ್ನಿನ ಅಂಗಡಿಯ )ಶಾಮಣ್ಣನ  ಸಹಾಯದಿಂದ ಮಂಗಳೂರಿನ ವಿಜಯ ನಿವಾಸದ ಬಾಡಿಗೆ ಮನೆ ಸಿಕ್ತು 


ಮತ್ತೊಂದು ವರ್ಷದಲ್ಲಿ ಬಿಜೈ ಯಲ್ಲಿ ಶ್ರೇಯಸ್ ಅಪಾರ್ಟ್ ಮೆಂಟಿನಲ್ಲಿ ಒಂದು ಮನೆಯನ್ನು ಖರೀದಿಸಿದೆವು.

ಮುಂದೆ ಬೆಂಗಳೂರಿಗೆ ಶಿಪ್ಟ್ ಆಗುವಾಗ ಇದನ್ನು ಮಾರಾಟ ಮಾಡಿದೆವು


ಮಂಗಳೂರಿನಲ್ಲಿರುವಾಗಲೇ 2002-03 ರಲ್ಲಿ ಬೆಂಗಳೂರಿನ ಈಗಿನ ಸೈಟಿನಲ್ಲಿ ಸಣ್ಣದೊಂದು ಮನೆ ಕಟ್ಟಿಸಿದ್ದೆವು

2007 ರಿಂದ 2019 ರ ವರೆಗೆ ಅದೇ ಸಣ್ಣ ಮನೆಯಲ್ಲಿ ಇದ್ದೆವು‌ ನಂತರ ಅದನ್ನು ರಿನೊವೇಟ್ ಮಾಡಿ ಈಗಿನ ಮನೆಯ ಸ್ವರೂಪಕ್ಕೆ ತಂದೆವು.


ಇಷ್ಟಾಗಿಯೂ ಊರಲ್ಲಿ ನನಗೆ ಮನೆ ಇಲ್ಲ ಎಂಬ ಕೊರಗು ಸದಾ  ಕಾಡುತ್ತಿತ್ತು.ಹಾಗಾಗಿ ನವ ಚೇತನ ಟೌನ್ ಶಿಪ್ ನಲ್ಲಿ ಸಣ್ಣದೊಂದು ಮನೆ ತಗೊಂಡು  ಒಕ್ಕಲು ಮಾಡಿದೆವು.


ಸಧ್ಯಕ್ಕೆ ಊರ ಕಡೆ ಶಿಪ್ಟ್ ಆಗುವ ಯೋಚನೆ ಇಲ್ಲ.ಎಂದಾದರೂ ಹೋಗುವುದಾದರೆ ಇರಲಿ ಎಂದೆನಿಸ್ತು.ನವ ಚೇತನ ಟೌನ್ ಶಿಪ್ ನ ಸುವ್ಯವಸ್ಥೆ ನೋಡಿ ಖುಷಿಯಾಗಿ ತಗೊಂಡೆವು


ನಾವು ಮನೆ ಬಿಟ್ಟು ಹೊರ ನಡೆದ ನಂತರ ತಗೊಂಡ/ ಕಟ್ಟಿಸಿದ ನಾಲ್ಕನೆಯ ಮನೆ ಇದು.


ಯಾಕೋ 30  ವರ್ಷಗಳ ಹಿಂದೆ ನಮ್ಮ ನೆರೆಕರೆಯವರೊಬ್ಬರು ಪೇಟೆಯಲ್ಲಿ ಮನೆ ಬಾಡಿಗೆಗೇ ಸಿಗುವುದಿಲ್ಲ ಎಂದು ಹೆದರಿಸಿದ್ದು ನೆನಪಾಯಿತು 


ಬಾಡಿಗೆಗೆ ಮಾತ್ರವಲ್ಲ.ಇರಲು ಅಂಗೈ ಅಗಲದಷ್ಟಾದರೂ  ಮನೆ ಎಂಬ ಸ್ವಂತ ಸೂರನ್ನು ಒದಗಿಸಿದ ದೈವ ದೇವರುಗಳ ಕೃಪೆ ಅಪಾರ 🙏


 ಗಂಡ ಹೆಂಡತಿ ಇಬ್ಬರೂ ದುಡಿದು ಆಡಂಬರವಿಲ್ಲದೆ ಸರಳವಾಗಿ ಬದುಕಿದರೆ ಸಣ್ಣದೊಂದು ಮನೆ ಕಟ್ಟಿಕೊಳ್ಳುದು ತೀರ ಅಸಾಧ್ಯವಾದುದಲ್ಲ

.ಆದರೆ ಹೆಚ್ಚಿನ ಜನರು ತುಸು ಆದಾಯ ಬರುವಷ್ಟರಲ್ಲಿ ಆಡಂಬರದ ಬದುಕಿಗೆ ಮಾರು ಹೋಗಿ ಬೆಲೆಬಾಳುವ  ಕಾರು ಗೀರು ರಾಯಲ್ ಎನ್ಪೀಲ್ಡ್ ಬೈಕು ಐಫೋನ್ ಮೊದಲಾದವುಗಳ ಅಗತ್ಯವಿಲ್ಲದೇ ಇದ್ದಾಗಲೂ ಅವರಿವರಲ್ಲಿ ಇದೆ ಎಂದು ತಗೊಳ್ತಾರೆ.ಬಾಹ್ಯಾಡಂಬರದ ಶೋಕಿಯ ದೊಡ್ಡ ಬಾಡಿಗೆ ಮನೆಗೆ ಹೋಗ್ತಾರೆ .ವಿಪರೀತ ಸೀರೆ ಡ್ರೆಸ್ ಗಳನ್ನು ತಗೊಳ್ತಾರೆ ಆಗ ಅವರಲ್ಲಿ ದುಡ್ಡು ಉಳಿಯುವುದೇ ಇಲ್ಲ. 


ನನ್ನ ಕೆಲವು ವಿದ್ಯಾರ್ಥಿಗಳು 30-35,000₹ ವೇತನದ ಕೆಲಸ ಸಿಗುತ್ತಲೇ ಹೆಚ್ಚು ಬೆಲೆಯ ಕಾರು  ಐಫೋನ್ ತೆಗೆದುಕೊಳ್ಳುದನ್ನು ಗಮನಿಸಿದ್ದೇನೆ.ಹೀಗೆ ಬಾಹ್ಯಾಡಂಬರದ ವಸ್ತುಗಳ ಹಿಂದೆ ಹೋದರೆ ಇವರು ಮನೆ ತಗೊಳ್ಳಲು ದುಡ್ಡು ಉಳಿಸುದು ಹೇಗೆ ಎಂದೆನಿಸಿತ್ತು ನನಗೆ‌


ಬದಲಿಗೆ ಸಣ್ಣ ಮನೆಯಲ್ಲಿದ್ದುಕೊಂಡು ಸರಳವಾಗಿ ಬದುಕಿ ವ್ಯವಸ್ಥಿತವಾಗಿ ಉಳಿತಾಯ ಮಾಡಿಕೊಂಡು ಬಂದರೆ ಒಂದಷ್ಟು ಸಾಲ ಮಾಡಿ ಮನೆ ಕಟ್ಟಿಕೊಳ್ಳಬಹುದು‌.

ಇರಲು ಮನೆ ಆದರೆ ನಂತರ ನಿದಾನಕ್ಕೆ ಕಾರು ಗೀರಿನಂಥಹ ಆಡಂಬರದ ವಸ್ತುಗಳನ್ನು ತೆಗೆದುಕೊಳ್ಳಬಹುದು

ಇದು ನನ್ನ ಅಭಿಪ್ರಾಯ 

ಎಲ್ಲರೂ ಹೀಗೆಯೇ ಯೋಚಿಸಬೇಕಿಲ್ಲ..ಲೋಕೋ ಭಿನ್ನರುಚಿಃ ಅಲ್ಲವೇ

.ಅಂದ ಹಾಗೆ ನಾನು ಅಂದು ಹೇಳಿದ  ಕಲಿತು ಒಳ್ಳೆಯ ಕೆಲಸ ಸಿಕ್ಕರೆ ನಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಪಾಲು ಬೇಡ ಹಂಚಿಕೊಂಡು ತುಂಡು ಮಾಡುವುದೇಕೆ ಎಂಬ ಮಾತಿಗೆ ಈಗಲೂ ಬದ್ಧಳಿದ್ದೇನೆ ,ನಾವು ಪಾಲು ತೆಗೆದುಕೊಂಡಿಲ್ಲ.

ಆತ್ಮ‌ಕಥೆಯ ಬಿಡಿ ಭಾಗಗಳು 50

 ಆತ್ಮ‌ಕಥೆಯ ಬಿಡಿ ಭಾಗಗಳು


ಯಾರೆಲ್ಲ ಸಣ್ಣಾಗಿರುವಾಗ ಬಜೆಂಟು  ಹೆಕ್ಕಿದ್ದೀರಿ? 


ಪಾಸಾದರೆ ಶಾಲೆ ಇಲ್ಲವಾದರೆ ಬಜಂಟು ಹೆಕ್ಕುವ ಖಾಯಂ ಕಾಯಕ 


ಎಪ್ರಿಲ್ ಹತ್ತರ  ಪಾಸು ಫೇಲಿನ ದಿನವೆಂಬ ಭಯ ಆತಂಕದ ದಿನ ಇದರ ನಿರ್ಧಾರ ಆಗುತ್ತಿತ್ತು‌.


ಹೌದು..ಪ್ರತಿವರ್ಷ ಎಪ್ರಿಲ್ ಹತ್ತಕ್ಕೆ ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಾಲೆಯ ಬೋರ್ಡ್ ನಲ್ಲಿ ಹಾಕ್ತಿದ್ದರು.ಎಪ್ರಿಲ್  ಮೊದಲ ದಿನಾಂಕದಿಂದಲೇ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗುತ್ತಿತ್ತು.ಪಾಸ್ ಪೇಲ್ ದಿನ ಹತ್ತಿರ ಬಂದ ಹಾಗೇ ಊಟ ತಿಂಡಿ ಸೇರುತ್ತಿರಲಿಲ್ಲ.ನಮ್ಮಂತೆಯೇ ನಮ್ಮ ಹೆತ್ತವರಿಗೂ ಇದೇ ಆತಂಕ.

ಚೆನ್ನಾಗಿ ಕಲಿಯದವರನ್ನು ಫೇಲಾದವರನ್ನು "ಹೋಗು ಬಜೆಂಟ್ ಹೆರ್ಕು " ಎಂದು ಬೈಉವ ವಾಡಿಕೆ ಇತ್ತು.ಆದರೆ ಪಾಸಾಗುತ್ತಿದ್ದ ನಾವು ಕೂಡ ಬೇಸಗೆಯಲ್ಲಿ ಬಜಂಟ್ ಹೆಕ್ಕುತ್ತಿದ್ದೆವು.

ಬಜಂಟು ಎಂದರೆ ಒಣ ಸೆಗಣಿ.ಬೇಸಗೆಯ ಸಮಯದಲ್ಲಿ ನಾವು‌ಮಕ್ಕಳೆಲ್ಲ ಗುಡ್ಡವೆಲ್ಲ ಬಜೆಂಟಿಗಾಗಿ ಹುಡುಕುತ್ತಿದ್ದೆವು.ಮೇಯಲು ಬಿಟ್ಟ ಹಸುಗಳು ಹಾಕಿದ ಒಣ ಸೆಗಣಿ ಸಿಕ್ತಾ ಇತ್ತು.

ಇದನ್ನು ಮಳೆಗಾಲದಲ್ಲಿ ಒಲೆ ಉರಿಸಲು ಬಳಸುತ್ತಾ ಇದ್ದರು.

ನಾವು ಏಳೆಂಟು ಸಮ ವಯಸ್ಸಿನ ಮಕ್ಕಳು ಒಂದೊಂದು ಗೋಣಿ ಚೀಲ ಹಿಡಿದುಕೊಂಡು ಬಜಂಟು ಹೆಕ್ಕಲು ಹೋಗುತ್ತಿದ್ದೆವು.ಅದು ನಮಗೆ ಬೇಸರ ತರುವ ಕೆಲಸವಾಗಿರಲಿಲ್ಲ.ಗುಡ್ಡಗಾಡಿನ ಚೂರಿ ಮುಳ್ಳಿನ ಹಣ್ಣ ಮುಳ್ಳಣ್ಣು ಕಿಸ್ಕಾರದ ಹಣ್ಣು ಚಬುಳಕ ಮೊದಲಾದ  ಕಾಡು ಹಣ್ಣುಗಳನ್ನು ಅಯ್ದು ತಿಂದುಕೊಂಡು ಕಾಡು ಹರಟೆ ಹೊಡೆದುಕೊಂಡು ಬಹಳ ಖುಷಿಯಿಂದ ಈ ಕೆಲಸ ಮಾಡ್ತಿದ್ದೆವು ಎಂಬುದು ಬೇರೆ ವಿಚಾರ.

ಅಕಸ್ಮಾತ್ತಾಗಿ ಐರೋಳು ಬಳ್ಳಿ ,ಕಾನಕಲ್ಲಡೆ ಕಾಯಿ ಸಿಕ್ಕರೆ ಬಹಳ ಸಂಭ್ರಮ ನಮಗೆ

ಅದರೂ ಫೇಲಾದವರು ಬಜಂಟು ಹೆಕ್ಕಲು ಲಾಯಕ್ಕು ಎಂಬ ಮಾತು ಆಗ ಇತ್ತು ಈಗ ಈ ಬಜೆಂಟಿಗೆ cow dung cake ಎಂಬ ಚಂದದ ಹೆಸರಿದೆ.ಸಿಕ್ಕಾಪಟ್ಟೆ ಬೆಲೆಯೂ ಇದೆ 


ಇರಲಿ


ಆಗೆಲ್ಲ ಫೇಲ್ ಆದರೆ ಮರು ಪರೀಕ್ಷೆ ಇರುತ್ತಿರಲಿಲ್ಲ.ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಇರಬೇಕು.ಅದು ನಮಗೆ ಬಹಳ ಅವಮಾನಕರ ವಿಚಾರ.ಹಾಗಾಗಿ ಪಾಸಾಗದಿದ್ದರೆ ಎಂಬ ಆತಂಕ ಕಾಡುತ್ತಿತ್ತು.


ಕೆಲವೊಮ್ಮೆ ಜಾಣ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಅವರೂ ಕೂಡ ಫೇಲ್ .ನಂತರದ ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು.


ಈ ಅವಮಾನ ಸ್ವೀಕರಿಸಲು ತಯಾರಿಲ್ಲದ ಮಕ್ಕಳ ವಿದ್ಯಾಭ್ಯಾಸ ಇದೇ ಕಾರಣಕ್ಕಾಗಿ ಅಲ್ಲಿಗೇ ನಿಂತು ಹೋಗುತ್ತಿತ್ತು.


ನನಗೆ ನೆನಪಿನಲ್ಲಿರುವಂತೆ ನನ್ನ ಸಹಪಾಠಿಗಳಾಗಿದ್ದ  ಇಬ್ಬರು ಜಾಣ ವಿದ್ಯಾರ್ಥಿಗಳ ಶಿಕ್ಷಣ ಹೀಗೆ ಅರ್ಧದಲ್ಲಿಯೇ ಮೊಟಕಾಗಿತ್ತು


ಒಂದು ನನ್ನ ಬಾಲ್ಯ ಸ್ನೇಹಿತೆ ಯಶೋದಾಳದು.ಅವಳು ಎಂಟನೇ ತರಗತಿಯ ಅಂತಿಮ /ವಾರ್ಷಿಕ ಪರೀಕ್ಷೆಯಲ್ಲಿ ಒಂದೆರಡು ವಿಷಯಗಳಿಗೆ ಗೈರು ಹಾಜರಾಗಿದ್ದಳು.


ಅವಳೂ ನಾನೂ ಒಟ್ಟಿಗೆ ಕೋಳ್ಯೂರಿನಿಂದ ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಗೆ  ನಡೆದುಕೊಂಡು ಹೋಗಿ ಬರುತ್ತಿದ್ದೆವು.ಎರಡು ಗುಡ್ಡ ಹತ್ತಿ ಇಳಿಯಬೇಕು.ಸುಮಾರು ನಾಲ್ಕೈದು ಮೈಲು ನಡೆಯಬೇಕಿತ್ತು.


ಅಗಿ‌ನ್ನೂ ನನಗೆ ಸರಿಯಾಗಿ ನೆನಪಿದೆ

ಸುಮಾರು ಎಂಟು ಎಂಟೂವರೆ ಗಂಟೆ ಹೊತ್ತಿಗೆ ಅವಳು ನಮ್ಮ ಮನೆಗೆ ಬರ್ತಿದ್ದಳು.ಅವಳನ್ನೇ ಕಾಯುತ್ತಿರುವ ನಾನು ಕೂಡಲೇ ಮೆಟ್ಟಿಳಿದು ಮನೆಯ ಗದ್ದೆಯ ಬದುವಿನಲ್ಲಿ ಸಾಗಿ.ತೋಡಿನ ಸಂಕ ದಾಟಿ ಅಂಗಡಿ ಎದುರು ಎತ್ತರಕ್ಕೆ ಹತ್ತಿ ಸಾಗುತ್ತಿದ್ದೆವು.

 1986 ಮಾರ್ಚ್ ಕೊನೆಯ ವಾರ.ಪ್ರೌಢ ಶಾಲೆಯಲ್ಲಿ ಅಂತಿಮ ಪರಿಕ್ಷೆಗಳು ನಡೆಯುತ್ತಿದ್ದವು.

.ನಮಗೆ ಆಗ ಹನ್ನೆರಡು ಪರೀಕ್ಷೆಗಳಿದ್ದವು.ಕನ್ನಡ ಎರಡು ಪತ್ರಿಕೆಗಳು,ವಿಜ್ಞಾನ ಮೂರು ಪತ್ರಿಕೆಗಳು,ಗಣಿತ ಎರಡು ಪತ್ರಿಕೆಗಳು ,ಸಮಾಜ ಶಾಸ್ತ್ರ ಎರಡು ಪತ್ರಿಕೆಗಳು ,ಹಿಂದಿ ಒಂದು ಪತ್ರಿಕೆ.


ಕೊನೆಯ ಒಂದೆರಡು ಪರೀಕ್ಷೆಗಳು ಉಳಿದಿದ್ದವು

ಆ ದಿನ ಯಶೋಧಾ ಎಂಟೂವರೆ ಕಳೆದರೂ ನಮ್ಮ‌ಮನೆಗೆ ಬಂದಿರಲಿಲ್ಲ.ಅವಳ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಮನೆ ಇತ್ತು.


ಅವಳು ಬಾರದ ಕಾರಣ ನಾನೇ ಅವಳ ಮನೆಗೆ ಹೋದೆ.ಅವಳು ಚಳಿಗೆ ನಡುಗುತ್ತಾ ಕಂಬಳಿ ಹೊದ್ದು ಮಲಗಿದ್ದಳು.

"ನಮ್ಮ ಯಶೋಧೆಗೆ  ಮೈಯಲ್ಲಿ ಬಿದ್ದಿದೆ( ಚಿಕನ್ ಪಾಕ್ಸ್ ) .ಅವಳು ಪರೀಕ್ಷೆಗೆ ಬರುದಿಲ್ಲ‌.ನೀನು ಹೋಗು ವಿದ್ಯಾ ,( ನನ್ನನ್ನು ಮನೆಯಲ್ಲಿ,ಊರಲಿ ವಿದ್ಯಾ ಎಂದು ಕರೆಯುತ್ತಾರೆ )ಒಂದು ವಾರ ಮನೆಗೆ ಬರಬೇಡ.ನಿನಗೂ ಹರಡುತ್ತದೆ " ಎಂದು ಹೇಳಿದರು


ಆಗ ಅಯ್ಯೋ..ಅವಳು ಫೇಲ್ ಆಗ್ತಾಳಲ್ಲ ಎಂದು ನನಗೆ ಆತಂಕ ಆಯಿತು.

ನಂತರ ಒಬ್ಬಳೇ ನಡೆದುಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆದೆ.

ನಿರೀಕ್ಷೆಯಂತೆಯೇ ಯಶೋಧಾ ಫೇಲ್ ಆಗಿದ್ದಳು.

ಅದರ ಪರಿಣಾಮವಾಗಿ ಜಾಣೆಯಾಗಿದ್ದ ಅವಳ ಓದು ಅಲ್ಲಿಗೇ ನಿಂತಿತು.ಅವಳು ಮುಂದೆ ಓದಲಿಲ್ಲ.

ನಂತರ ದೊಡ್ಡವಳಾಗಿ ಮದುವೆಯಾದ ನಂತರ ಕಾಸಗಿಯಾಗಿ ಕಟ್ಟಿ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಮಾಡಿದ್ದಾಳೆ.


ಇದೇ ರೀತಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿರುವಾಗ ರವೀಂದ್ರ ಎಂಬ ಹುಡುಗನಿಗೂ ಆರೋಗ್ಯ ಸಮಸ್ಯೆ ಬಂದು‌ಪರೀಕ್ಷೆ ಬರೆಯಲಾಗಲಿಲ್ಲ.ಫೇಲಾದ ಕಾರಣ ನಂತರ ಅವನೂ ವಿದ್ಯಾಭ್ಯಾಸ ಮುಂದುವರಿಸಲಿಲ್ಲ


ಈಗ ಒಂದರಿಂದ ಒಂಬತ್ತರ ತನಕ ಫೇಲ್ ಮಾಡುದೇ ಇಲ್ಲ.ಹಾಗಾಗಿ ನಮ್ಮಷ್ಟು ಆತಂಕ ಈಗಿನ‌ಮಕ್ಕಳಿಗೆ ಇರಲಾರದೋ ಏನೋ


ನನಗೆ ಈಗ ನಗು ಬರುವ ವಿಚಾರ ಒಂದಿದೆ.ನಾನು ಸಾಮಾನ್ಯವಾಗಿ ತರಗತಿಯಲ್ಲಿ‌ ಮೊದಲ‌ ಇಲ್ಲವೇ ಎರಡನೇ Rank ತೆಗೆಯುತ್ತಿದ್ದೆ.ನನ್ನನ್ನೂ ಫೇಲ್ ಮಾಡಿದರೆ ಮತ್ತೆ ಶಿಕ್ಷಕರು ಎಂತ ಮಾಡುದು ? ಪಾಠ ಮಾಡಲು ವಿದ್ಯಾರ್ಥಿಗಳು ಬೇಡವೇ?ಮಕ್ಕಳೇ ಇಲ್ಲದಿದ್ದರೆ ಶಾಲೆಯಲ್ಲು ಅವರೆಂತ ಬಜೆಂಟ್ ಹೆಕ್ಕುದಾ ? ಆದರೆ ನನಗೆ ಆಗ ಈ ವಿಚಾರ ಎಲ್ಲ ಗೊತ್ತಿರಲಿಲ್ಲ.ಇತರ ಸಾಮಾನ್ಯ ಮಾರ್ಕ್ಸ್ನ ವಿದ್ಯಾರ್ಥಿಗಳಂತೆ ಪಾಸ್ ಫೇಲಿನ ದಿನವನ್ನು ಆತಂಕದಿಂದ ಎದುರು ನೋಡುತ್ತಿದ್ದೆ.


ಎಪ್ರಿಲ್ ಹತ್ತನೆಯ ತಾರೀಕಿನಂದು ಎಲ್ಲ ದೇವರುಗಳೂ ನೆನಪಿಗೆ ಬರ್ತಿದ್ದರು.ಅವರನ್ನೆಲ್ಲ ನೆನೆದು ನನ್ನನ್ನು ಪಾಸು ಮಾಡಿಸು ಎಂದು ಬೇಡಿಕೊಳ್ಳುತ್ತಿದ್ದೆ

ಎಂದಿಗಿಂತ ಬೇಗನೆ ಎದ್ದು ದೇವರಿಗೆ ಹೆಚ್ಚು ಹೂ ಕೊಯ್ದು ಇಡುತ್ತಿದ್ದೆ.ನಂತರ ಸ್ನಾನ ಮಾಡಿ ದೇವರಿಗೆ ಹೊಡಾಡಿ( ನಮಸ್ಕರಿಸಿ) ಶಾಲೆಗೆ ಹೋಗುತ್ತಿದ್ದೆ.ಅಲ್ಲಿ ಬೋರ್ಡ್ ನಲ್ಲಿ ಫೇಲಾದವರ ಹೆಸರನ್ನು ಹಾಕ್ತಾ ಇದ್ದರು.

ಶಾಲೆ ಸಮೀಪಿಸಿದಂತೆಲ್ಲ‌ ಎದೆ ಇತರರಿಗೆ  ಕೇಳುವಷ್ಡು ದೊಡ್ಡದಾಗಿ ಡಬ್ ಡಬ್ ಬಡಿಯುತ್ತಾ ಇತ್ತು.ಹೇಗೋ ಹೋಗಿ ಫೇಲಾದವರ ಲಿಸ್ಟ್  ಅನ್ನು ಎರಡೆರಡು ಸಲ ಓದಿ‌ ನನ್ನ ಹೆಸರು ಅದರಲ್ಲಿ ಇಲ್ಲದಿರುವುದನ್ನು ನೋಡಿ ಖಚಿತ ಗೊಳಿಸಿ ಬದುಕಿದೆಯಾ ಬಡಜೀವವೇ..ನಾನು ಪಾಸು ಎಂದು ಕುಣಿದಾಡಿಕೊಂಡು ಮನೆಗೆ ಬರ್ತಾ ಇದ್ದೆ.ಪಾಸಾದ ಇತರರೂ ಹೀಗೇ ಸಂಭ್ರಮದಿಂದ ಜೊತೆಯಾಗುತ್ತಿದ್ದರು.

ಫೇಲ್ ಆದವರು ಬಿಕ್ಕಿ ಬಿಕ್ಕಿ ಅಳ್ತಾ ಇದ್ದದ್ದು ಈಗಲೂ ನನ್ನ ಕಣ್ಣಿಗೆ ಕಟ್ತಿದೆ.ಅವರ ಬಗ್ಗೆ ನನಗೆ ಪಾಪ ಎನಿಸುತ್ತಿತ್ತು.ಯಾಕೆಂದರೆ ಫೇಲಾದ ಮಕ್ಕಳಿಗೆ ಮನೆಯಲ್ಲು ಕೂಡ ಪೆಟ್ಡು ಕಾದಿರ್ತಾ ಇದ್ದದ್ದು ನನಗೆ ಗೊತ್ತಿತ್ತು


ಇನ್ನು ಹತ್ತನೇ ತರಗತಿಯ ಫಲಿತಾಂಸದ ದಿನದ ಬಗ್ಗೆ ಹೇಳುದೇ ಬೇಡ..ಅಷ್ಡು ಆತಂಕದ ಕ್ಷಣಗಳವು.ಆ ಬಗ್ಗೆ ಇನ್ನೊಂದಿನ ಬರೆಯುವೆ