Tuesday, 4 January 2022

ನನಗೂ ಆತ್ಮವಿದೆ ಅದಕ್ಕೂ ಒಂದು ಕಥೆ ಇದೆ. ಕಟೀಲಿನ ಉಚಿತ ಊಟವೂ ಮತ್ರು ಸಂಸ್ಕೃತ ಪಾಠವೂ

 ನನಗೂ ಆತ್ಮವಿದೆ ಅದಕ್ಕೂ ಒಂದು ಕಥೆ ಇದೆ.


ಕಟೀಲಿನ  ಉಚಿತ ಊಟವೂ ಸಂಸ್ಕೃತ  ಪಾಠವೂ

ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವಗಳಿವು

1994 ರ ಅಗಸ್ಟ್ ನಲ್ಲಿ ಕಟೀಲಿನಲ್ಲಿ ಸಂಸ್ಕೃತ ಎಂಎಗೆ ಸೇರಿದ್ದೆ.ಅದಾಗಲೇ ನನಗೆ ಪ್ರಸಾದರೊಂದಿಗೆ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು

ನನ್ನ ಕಲಿಕೆಗೆ ಮನೆ ಮಂದಿಯಿಂದ ತೀವ್ರ ವಿರೋಧ ಬಂದಕಾರಣ ಎಲ್ಲರನ್ನೂ ಎದುರು ಹಾಕಿಕೊಂಡು ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಿದ್ದೆ

ಕಟೀಲು ಕಾಲೇಜು ಪ್ರಿನ್ಸಿಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರಿಂದಾಗಿ ಎಕ್ಕಾರಿನ ನಾಗವೇಣಿ‌ ಅಮ್ಮ ನಮಗೊಂದು ಬಾಡಿಗೆ ಮನೆ ಒದಗಿಸಿದ್ದರು.ಅದು ಮೋಟು ಗೋಡೆಯ ಮಣ್ಣಿನ‌ಮನೆ

ಪೂರ್ತಿ ಒರಳೆ ಹತ್ತಿದ ಮನೆ.ನಮಗೋ ನಮ್ಮ ಆದಾಯಕ್ಕೆ ಒಂದು ಮನೆಯಂತಹದ್ದು ಸಿಕ್ಕಿದರೆ ಸಾಕಿತ್ತು

ಬೆಂಗಳೂರಿನಲ್ಲಿದ್ದ ಕೆಲಸವನ್ನು ಬಿಟ್ಟು ಪ್ರಸಾದ್ ಊರಿಗೆಬಂದಿದ್ದರು.ನಂತರ ನನ್ನ ಕಲಿಕೆಯ ಕಾರಣಕ್ಕೆ ಮನೆಯಲ್ಲಿ ವಿವಾದ ಉಂಟಾದಾಗ ಮತ್ತೆ ಮಂಗಳೂರಿನ ವೆಟರ್ನರಿ ಶಾಪೊಂದರಲ್ಲಿ ತಿಂಗಳಿಗೆ 800₹ ವೇತನಕ್ಕೆ ಅರೆಕಾಲಿಕ ಕೆಲಸಕ್ಕೆ ಸೇರಿದ್ದರು

ಕಟೀಲಿನಿಂದ ಮಂಗಳೂರಿಗೆ ಹೋಗಿಬರಲು ತಿಂಗಳಿಗೆ 300₹ ಖರ್ಚಾಗುತ್ತಿತ್ತು.ಉಳಿದ ಐದು ನೂರು ರುಪಾಯಿಗಳಲ್ಲಿ ಮನೆ ಬಾಡಿಗೆ ಕಟ್ಟಿಉಳಿದ ಊಟ ತಿಂಡಿಯಖರ್ಚನ್ನು ನಿಭಾಯಿಸಬೇಕಿತ್ತು

ನಮ್ಮ‌ ಅದೃಷ್ಟಕ್ಕೆ ಎಕ್ಕಾರಿನ ಮನೆಯನ್ನು ನಾಗವೇಣಿ‌ ಅಮ್ಮ 150₹ ಬಾಡಿಗೆಗೆ ಕೊಟ್ಟರು.

800₹ ನಲ್ಲಿ 30+-150=450  ಕಳೆದು ಉಳಿದ 350 ರಲ್ಲಿ ಇಡೀ ತಿಂಗಳು ಕಳೆಯಬೇಕಿತ್ತು.ಅದರಲ್ಲಿ ದಿನಕ್ಕೆ ಒಂದೂವರೆ ರುಪಾಯಿಯಂತೆ ತಿಂಗಳಿಗೆ  37.50₹ ನನಗೆ ಎಕ್ಕಾರಿನಿಂದ ಕಟೀಲಿಗೆ ಹೋಗಿ ಬರಲು ಬಸ್ಸಿಗೆ ಖರ್ಚಾಗುತ್ತಿತ್ತು.

ಈ ಕಷ್ಟಕಾಲದಲ್ಲಿ ನನಗೆ ಸಹಾಯಕ್ಕೆ ಬಂದದ್ದು ಕಟೀಲಿನ ಮಧ್ಯಾಹ್ನದ ಊಟ

ಕಟೀಲು ವಿದ್ಯಾ ಸಂಸ್ಥೆಯಲ್ಲಿ ಓದುವ ಎಲ್ಲ ಮಕ್ಕಳಿಗೂ ಉಚಿತ ಊಟದ ವ್ಯವಸ್ಥೆ ಇತ್ತು

ಇದಲ್ಲದೆ ಕಟೀಲು ದೇವಾಲಯದಲ್ಲಿಯೂ ನಮಗೆ ಊಟ ಮಾಡಲು ಅವಕಾಶವಿತ್ತು.ಸಂಸ್ಕೃತ ಓದುತ್ತಿದ್ದವರಲ್ಲಿ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಬ್ರಾಹ್ಮಣರಾಗಿದ್ದು ದೇವಾಲಯದಲ್ಲಿನ ಬ್ರಾಹ್ಮಣರ ಪಂಕ್ತಿಗೆ ಹೋಗಬಹುದಿತ್ತು.ನಿತ್ಯವೂ ಪಾಯಸದ ಊಟ.ಆಗಾಗ ಯಾರಾದರೂ ಚಂಡಿಕಾ ಹೋಮವನ್ನೋ ಇನ್ನೇನೋ ವಿಶೇಷ ಪೂಜೆಗಳಿದ್ದರೆ ಪಾಯಸ ಮಾತ್ರವಲ್ಲದೆ ಹೋಳಿಗೆ ಲಾಡು ಮೊದಲಾದ ಸಿಹಿ ಭಕ್ಷ್ಯಗಳೂ ಇರುತ್ತಿದ್ದವು.ಜೊತೆಗೆ ನಮಗೆ ಎರಡು ರುಪಾಯಿ ಐದು ರುಪಾಯಿ ಊಟ ದಕ್ಷಿಣೆ ಸಿಗುತ್ತಿತ್ತು.ವಾರಕ್ಕೊಂದಾದರೂ ಇಂತಹ ಊಟ ದಕ್ಷಿಣೆ ಸಿಗುತ್ತಿತ್ತು.ನಮಗೆ ಬಹಳ ಖುಷಿ ಆಗುತ್ತಿತ್ತು.ಆಗಿನ ಐದು ರುಪಾಯಿಗೆ ತುಂಬಾ ಬೆಲೆ ಇತ್ತು.ಸಂಸ್ಕೃತ ಓದಲು ಬಂದ ನಾವ್ಯಾರೂ ಸಿರಿವಂತರಾಗಿರಲಿಲ್ಲ.ಒಂದೇ ದೋಣಿಯ ಪಯಣಿಗರಾಗಿದ್ದೆವು.ಹಾಗಾಗಿ ಚಂಡಿಕಾ ಹೋಮ‌ಇದ್ದ ದಿನ ನಮಗಾಗುತ್ತಿದ್ದ ಸಂತೋಷ ವರ್ಣನಾತೀತ

ಅದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.ಈ ಮಧ್ಯಾಹ್ನದ ಊಟದ ವ್ಯವಸ್ಥೆ ನಮಗೆ ಬಹಳಷ್ಟು ಉಪಕಾರ ಮಾಡಿತ್ತು.ಒಂದು ಹೊತ್ತು ಹೊಟ್ಟೆ ತುಂಬಾ ಉಣ್ಣುದಕ್ಕೆ ಅಡ್ಡಿ ಇರಲಿಲ್ಲ.ಅಲ್ಲಿ ಅಸ್ರಣ್ಣರು ಮತ್ತಿತರರು ನಮಗೆ ಒತ್ತಾಯ ಮಾಡಿ ಪಾಯಸ ಇನ್ನಿತರ ಊಟದ ವಸ್ತುಗಳನ್ನು ಬಡಿಸುತ್ತಿದ್ದರು.ಅವರ ಪ್ರೀತಿಯನ್ನು ಮರೆಯಲಾಗದು

ಕಟೀಲಿನ ಸಾರಿನ ಪರಿಮಳ ನೆನಪಾದರೆ ನನಗೆ ಮನೆಯಲ್ಕಿ ಮಾಡಿದ ಸಾರು ಸಾಂಬಾರಿನ ರುಚಿ ಪೇಲವೆನಿಸುತ್ತದೆ.ಅಲ್ಲಿ ಒಂದು ಉಪ್ಪಿನಕಾಯಿ ರೀತಿಯ ವ್ಯಂಜನ ಬಡಿಸುತ್ತಿದ್ದರು.ಅದ್ಭುತ ರುಚಿ ಅದು.ಅಷ್ಡು ರುಚಿಯಾದ ವಸ್ತುವನ್ನು ನಾನು ಬೇರೆಲ್ಲೂ ತಿಂದಿಲ್ಲ.ಇನ್ನು ಪ್ರತಿ ಶುಕ್ರವಾರ ಗಂಜಿ ಪ್ರಸಾದ ಇರುತ್ತಿತ್ತು.ಇದನ್ನು ಗೋದಿಯಿಂದ ಹಾಲು ಹಾಕಿ ಬೇಯಿಸಿ ತಯಾರಿಸುತ್ತಿದ್ದರೆಂದು ನೆನಪು.ಬಹಳ ರುಚಿಯಾದ ಗಂಜಿ ಇದು.ಇದಕ್ಕಾಗಿ ಶುಕ್ರವಾರ ಆಗುವುದನ್ನೇ ನಾನು ಕಾಯುತ್ತಿದ್ದೆ

ದೇವಾಲಯದ ಉಟದ ಸಮಯ ಒಂದೇ ಇರುತ್ತಿರಲಿಲ್ಲ.ಶುಕ್ರವಾರ ತಡ ಆಗುತ್ತಿತ್ತು.ನಮ್ಮ ಉಪನ್ಯಾಸಕರಾದ ಪದ್ಮನಾಭ ಮರಾಠೆ ಮತ್ತು ನಾಗರಾಜರೂ ದೇವಾಲಯಕ್ಕೆ ಊಟಕ್ಕೆಬರುತ್ತಿದ್ದರು.ಹಾಗಾಗಿ ಉಟದ ಸಮಯಕ್ಕೆ ಸರಿಯಾಗಿ ಪಾಠದ ಸಮಯ ಹೊಂದಾಣಿಕೆ ಆಗುತ್ತಿತ್ತು.ಕೆಲವೊಮ್ಮೆ ಹೊಟ್ಟೆ ಬಿರಿವಷ್ಟು ಉಂಡ ದಿನ ನಮಗೆ ತರಗತಿಗೆ ಹೋಗಲು ಇಷ್ಟವಿರುತ್ತಿರಲಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮನ್ನು ಬಿಟ್ಡು ಬಿಡುತ್ತಿದ್ದರು‌.ನಾನುಮನೆಗೆ ಬಂದು ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದೆ

ನಾನು ಬಿಎಸ್ಸಿ ಮಾಡಿ ನಂತರ ಸಂಸ್ಕೃತ ಎಂಎ ಗೆ ಸೇರಿದ್ದು.ವಿಜ್ಣಾನದ ಕಷ್ಟದ ಪಾಠಗಳು ಶಿಸ್ತನ್ನು ಬಯಸುವ ಪ್ರಯೋಗ ತರಗತಿಗಳಿಂದ ನಾನು ಸೋತು ಸುಣ್ಣವಾಗಿದ್ದೆ.ನಂತರ ಎಂಎ ಗೆ ಸೇರಿದಾಗ ಕಲಿಕೆ ಎಷ್ಟು ಸುಲಭದ್ದು ಎನಿಸಿತ್ತು.ಡಾ.ಕೆ ನಾರಾಯಣ ಭಟ್ಟರು ಅದ್ವಿತೀಯ ವಿದ್ವಾಂಸರು‌.ಪ್ರಗಲ್ಭ ಪಂಡಿತರು.ಅವರ ಪಾಠ ಕೇಳುದೊಂದು ಭಾಗ್ಯವೇ ಸರಿ..ಜೊತೆಗೆ ಪದ್ಮನಾಭ ಮರಾಠೆಯವರು ಆಗಷ್ಟೇ ಎಂ ಎ ಮುಗಿಸಿದ ಎಳೆಯರಾಗಿದ್ದರೂ ಪಾಂಡಿತ್ಯಕ್ಕೆ ಕೊರತೆ ಇರಲಿಲ್ಲ.ಡಾ.ಜಿ ಎನ್ ಭಟ್ಟರೂ ಅದ್ವಿತೀಯ ವಿದ್ವಾಂಸರು.ಆದರೆ ಅಲಂಕಾರ ಶಾಸ್ತ್ರ( ಕಾವ್ಯ ಮೀಮಾಂಸೆ) ಪಾಠ ಮಾಡುತ್ತಿದ್ದರು.ವೇದಾಂತವನ್ನು ಐಚ್ಛಿಕ ವಿಷಯವಾಗಿ ತಗೊಮಡಿದ್ದ ಕಾರಣ ನನಗೆ ಕಾವ್ಯ ಮೀಮಾಂಸೆ ಒರಲಿಲ್ಲ.ಹಾಗಾಗಿ ಡಾ.ಜಿ ಎನ್ ಭಟ್ಟರ ಪಾಠ ಕೇಳುವ ಅವಕಾಶ ನನಗಿರಲಿಲ್ಲ

ಬಹುಶಃ ಇಲ್ಲಿನ ಉತ್ತಮ ಉಪನ್ಯಾಸಕರಿಂದಾಗಿ ಸಂಸ್ಕೃತವನ್ನು ನಾನು ಬಹಳಷ್ಟು ಇಷ್ಟ ಪಟ್ಟು ಕಲಿತೆ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತ ಕಲಿತು Rank ಪಡೆದಿದ್ದ ರಮಿತಾ ಶ್ರೀದೇವಿ‌ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಪದವಿಯಲ್ಲಿ ಎರಡು ವರ್ಷ ದ್ವಿತೀಯ ಭಾಷೆಯಾಗಿ ಸಂಸ್ಕೃತ ಕಲಿತ ನನಗೆ ಎಂಎ ಯಲ್ಲಿ ಈ Rank ವಿಜೇತರ ಜೊತೆಗಿನ ಸ್ಪರ್ಧೆ ಸುಲಭದ್ದಾಗಿರಲಿಲ್ಲ.ಆದರೆ ನಾನು ಓದಿ Rank ತೆಗೆದು ಒಳ್ಳೆಯ ಕೆಲಸವನ್ನು ಗಳಿಸಲೇ ಬೇಕೆಂದು ನಿರ್ಧರಿಸಿ ಎಂಎ ಗೆ ಸೇರಿದವಳು.ಹಾಗಾಗಿ ದಿನಕ್ಕೆ ಕಡಿಮೆ ಎಂದರೂ ಎಂಟು ಗಂಟೆ ಓದುತ್ತಿದ್ದೆ.ಆದ್ದರಿಂದ ನನಗೆ ಮೊದಲ Rank ಪಡೆಯಲು ಸಾಧ್ಯವಾಯಿತು

ಇಂದಿಗೂ ನಾನೇನಾದರೂ ನನ್ನ ಭಾಷಣ ಚಂದ ಆದರೆ ಅದಕ್ಕೆ ಕಾರಣ ಇಲ್ಲಿನ ಸಂಸ್ಕೃತ ಕಲಿಕೆ ಮತ್ತು ಉಪನ್ಯಾಸಕರು‌.ನಮ್ಮಲ್ಲಿ ಸೆಮಿನಾರ್ ಮಾಡಿಸಿ ಹೊರ ಜಗತ್ತನ್ನು ಸಮರ್ಥವಾಗಿ ಎದುರಿಸಿ ಗೆಲ್ಲವಂತೆ ನಮ್ಮನ್ನು ತಯಾರು .ಮಾಡಿದ್ದರು.

ಪ್ರಸಾದರ ವೇತನದಲ್ಲಿ ನಮಗೆ ಒಂದು ಹೊತ್ತು ಮಾತ್ರ ಊಟ ಮಾಡಲು ಸಾಧ್ಯವಿತ್ತು

ಆದರೆ ಕಟೀಲಿನ ಮದ್ಯಾಹ್ನದ ಊಟ ಎರಡು ಹೊತ್ತೂ ಊಟ ಸಿಗುವಂತೆ ಮಾಡಿತ್ತು.ಮತ್ತು ಅದು ಬಹಳ ರುಚಿಕರವಾದ ಊಟ ಕೂಡ.ಹಾಗಾಗಿ ನಾನು ಕಟೀಲಿನಲ್ಲಿ ಎರಡು ವರ್ಷ ಹೊಟ್ಟೆ ತುಂಬಾ ಉಂಡದ್ದನ್ನೂ ಪಾಠ ಕೇಳಿದ್ದನ್ನೂ ಜೀವನವಿಡೀ ಮರೆಯಲಾಗದು.

ನಾನು ಎರಡನೇ ವರ್ಷ ಎಂಎಗೆ ಬರುವಷ್ಟರಲ್ಲಿ ಪ್ರಸಾದರಿಗೆ ಮಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತ್ತು.ಹಾಗಾಗಿ ಮುಂದೆ ಅಂತಹ ಸಮಸ್ಯೆ ಏನೂ ಆಗಲಿಲ್ಲ

ಉಚಿತ ಊಟ ತಿಂಡಿಗಳು ಮಕ್ಕಳನ್ನು ಹಾಳು ಮಾಡುವುದಿಲ್ಲ

ಬದಲಿಗೆ ಮಕ್ಕಳೆಡೆಗಿನ ಉದಾರತೆ ತರಗತಿಗೆ ಹಾಜರಾಗದೇ ಇದ್ದರೂ ಪೃಇಕ್ಷೆ ಬರೆಯಲು ಬಿಡುವುದು,ಫಲಿತಾಂಶಕ್ಕಾಗಿ ತೀರಾ ಉದಾರವಾಗಿ‌ಮೌಲ್ಯ ಮಾಪನ ಮಾಡುದು.ಪಾಸ್ ಮಾಡುದು ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿ

ಉಚಿತ ಉಟ ಕೊಟ್ಟರೆ ಹಾಲಾಗುವುದಾದರೆ ನಾವೆಲ್ಲ ಹಾಳಾಗಿ ಎಕ್ಕುಟ್ಟಿ ಹೋಗಿರುತ್ತಿದ್ದೆವು

ಆದರೆ ನಾವ್ಯಾರೂ ಉಚಿತ ಊಟ ಸಿಕ್ಕ ಕಾರಣಕ್ಕೆ ಹಾಳಾಗಿಲ್ಲ.ನನ್ನ ಸಹಪಾಠಿಗಳೆಲ್ಲರೂ ಅವರವರ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ.ಅವಿನಾಶ ಪುತ್ತೂರಿನಲ್ಲಿ ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.ಗಜಾನನ ಮರಾಠೆ ,ರಮೇಶ ಆಚಾರ್ಯ ಡಾ.ಈಶ್ವರ ಪ್ರಸಾದ್  ಕಮಲಾಯಿನಿಯರು ಉತ್ತಮ ಶಿಕ್ಷಕ/ ಉಪನ್ಯಾಸಕರಾಗಿ ಹೆಸರು ಗಳಿಸಿದ್ದಾರೆ

ರಮಿತಾ ಭಾಷೆಯೇ ತಿಳಿಯದ ಊರು ವಯನಾಡಿನ ಮಲೆಯಾಳ ಕಲಿತು ತನ್ನದೇ ಅದ ಸಣ್ಣ ಉದ್ಯಮ‌ನಡೆಸುತ್ತಿದ್ದಾರೆ.

ನನ್ನ ಸಹಪಾಠಿ ನೀತಾ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ.ಆದರೆ ಮುಂದೆ ತುಂಬಾ ಓದಿ ಉತ್ತಮ ಕೆಲಸದಲ್ಲಿದ್ದಾರೆ ಎಂದು ಕೇಳಿರುವೆ.

ಉಚಿತ ಊಟ ಬಡ ಮಕ್ಕಳಿಗೆ ಅಗತ್ಯವಾಗಿ ನೀಡಬೇಕಾದದ್ದೇ..ಆದರೆ ಪಾಠಕ್ಕಿಂತ ಊಟ ಉಪಾಹಾರ ಹಾಲು ಮೊಟ್ಟೆ ಸಕಾಲದಲ್ಲಿ ಬೇಯಿಸಿ ಕೊಡುವ ಕೆಲಸದಲ್ಲಿ ಮುಳುಗಿ ಹೋಗುವ ಶಿಕ್ಷಕರಿಗೆ ಪಾಠ ಮಾಡಲು ಸಮಯವಿಲ್ಲದಂತಾಗಬಾರದು ಅಷ್ಟೇ..

ದಿನೇ ದಿನೇ ಶಿಕ್ಷಣ ಮಟ್ಟ ಕುಸಿಯುತ್ತಿದೆ.ಮೊದಲು ಕಾಗುಣಿತ ಗೊತ್ತಿಲ್ಲದ ಹತ್ತನೆಯ ತರಗತಿಯಮಕ್ಕಳು ಪಾಸಾಗಿ ಪಿಯು ಗೆ ಬರುತ್ತಿದ್ದರೆ ಈಗ ಅಕ್ಷರ ಮಾಲೆಯ ಬರವಣಿಗೆಯನ್ನೇ ಅರಿಯದವರು ಬರುತ್ತಿದ್ದಾರೆ.ಸರಳವಾಕ್ಯಗಳನ್ನು ಮಾಡಲು ಬರೆಯಲು ತಿಳಿಯದವೇ ಹೆಚ್ಚಾಗಿದ್ದಾರೆ

ಊಟ ತಿಂಡಿ ಹಾಲು ಹಣ್ಣು ನೀಡುವಷ್ಟೇ ಕಾಳಜಿಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ನನಗನಿಸುತ್ತದೆ

- ಡಾ.ಲಕ್ಷ್ಮೀ ಜಿ ಪ್ರಸಾದ್ .


Saturday, 1 January 2022

ಆ ಹೆಂಗಸಿನ ಮಾತನ್ನು ನಾವು ಲೆಕ್ಕಕ್ಕಿಡುವುದಿಲ್ಲ( ಗಣನೆಗೆ ತೆಗೆದುಕೊಳ್ಳುವುದಿಲ್ಲ)

 ನನಗೂ ಆತ್ಮವಿದೆ..ಅದಕ್ಕೂ ಕಥೆಯಿದೆ 


ಆ ಪೊಂಜೋವಿನ ಪಾತೆರನು ಎಂಕ್ಲು ಲೆಕ್ಕೊಗು ದೀಪುಜ್ಜ..

ಆ ಹೆಂಗಸಿನ ಮಾತನ್ನು ನಾವು ಲೆಕ್ಕಕ್ಕಿಡುವುದಿಲ್ಲ( ಗಣನೆಗೆ ತೆಗೆದುಕೊಳ್ಳುವುದಿಲ್ಲ)..ಇದನ್ನು ಯಾರೋ ಆಶಿಕ್ಷಿತರು ಹೇಳಿದ್ದಲ್ಲ.ಮಂಗಳೂರು ಯುನಿವರ್ಸೊಟಿಯಲ್ಲಿ ಕನ್ನಡ ಎಂಎ ಓದಿದ ತುಳು ಅಧ್ಯಯನಗಾರ ಹೇಳಿದ್ದು...

ಯಾಕೆ ? ಯಾಕೆಂದರೆ ತಾವು ಕಟ್ಟುವ ಬಣ್ಣದ ಸುಳ್ಳುಗಳನ್ನು ಆಕೆ ಸಾಕ್ಷಿ ಸಹಿತವಾಗಿ ಸುಳ್ಳೆಂದು ಸಿದ್ಧ ಪಡಿಸಿ ಸತ್ಯವನ್ನು ಜಗತ್ತಿಗೆ ಕಾಣಿಸುತ್ತಾರೆ..

ಹಾಗಾಗಿ ಆ ಪೊಂಜೋವಿನ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ..ತಗೊಂಡರೆ ಸತ್ಯವನ್ನು ಒಪ್ಪಬೇಕಾಗುತ್ತದೆ.ಈ ವ್ಯಕ್ತಿ  ತುಳುವಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ..ಆದರೆ ಅನ್ಯರ ಅಧ್ಯಯನವನ್ನು ಕೀಳಾಗಿ ಕಾಣುವ ಮನೋಭಾವ ಈತನ ಎಲ್ಲ ಗುಣಕ್ಕೂ ಕಪ್ಪುಚುಕ್ಕೆ ತಂದಿದೆ..ನಾನು ನನ್ನಷ್ಟಕ್ಕೆ ಬ್ಲಾಗಿನಲ್ಲಿ ನನಗೆ ಸಿಕ್ಕ ದೈವಗಳ ಪಟ್ಟಿಯನ್ನು ಹಾಕಿದ್ದೆ

ಆಗ ಅದನ್ನು ಅಕಾರಾದಿಯಾಗಿ ಜೋಡಿಸುವ ತಂತ್ರಜ್ಞಾನ ನನಗೆ ತಿಳಿದಿರಲಿಲ್ಲ.( ಈಗಲೂ ತಿಳಿದಿಲ್ಲ) ಅಕಾರಾದಿಯಾಗಿ ಇಲ್ಲದೇ ಇದ್ದಾಗ ಕೆಲವು ಹೆಸರುಗಳು ರಿಪೀಟ್ ಆಗಿದ್ದಿರಬಹುದು.ಇದನ್ನಾತ ಮಹಾನ್ ಅಪರಾಧ ಎಂಬಂತೆ ತುಳು ಪತ್ರಿಕೆಯೊಂದರ ಅಂಕಣದಲ್ಲಿ ಬರೆದಿದ್ದರು..ಈ ವ್ಯಕ್ತಿ ನನ್ನ ಅನೇಕ ಬ್ಲಾಗ್ ಬರಹಗಳನ್ನು ತನ್ನ ಹೆಸರಿನಲ್ಲಿ ಹಾಕಿಕೊಂಡಿದ್ದರು.ಆಗ ಅಲ್ಲಿನ ತಪ್ಪುಗಳು ಚಂದ ಕಂಡಿತ್ತು

.ಕದಿಯುವಾಗ ಕಾಣದ ದೋಷಗಳು ಅಂಕಣ ಬರೆಯುವಾಗ ಕಾಣಿಸಿತ್ತು.ನಂತರ ಹೆಸರುಗಳು ಸೃಷ್ಟಿ ಮಾಡಿದ್ದು ಎಂದು ಬರೆದಿದ್ದರು..

ಈಗ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ 1228 ದೈವಗಳ ಬಗ್ಗೆ ಮಾಹಿತಿ ನೀಡಿರುವೆ..ಇವರಲ್ಲಿ ಸುಮಾರು ಸುಮಾರು 600-700 ದೈವಗಳ ಫೋಟೋ ಕೂಡ ಸಂಗ್ರಹಿಸಿ ನೀಡಿರುವೆ.ಹೆಸರುಗಳನ್ನು ಸೃಷ್ಟಿಸಬಹುದು ಕಥೆಗಳನ್ನು ಸೃಷ್ಟಿಸಬಹುದು.‌ದೈವಗಳ ಕೋಲವನ್ನೂ ಸೃಷ್ಟಿಸಿದೆನಾ? ಫೋಟೋವನ್ನೂ ಸೃಷ್ಟಿಸಿದೆನಾ ? ಅವರೇ ಉತ್ತರಿಸಬೇಕು.

ಇಂತಹ ಮಹಾನ ಪ್ರಭೃತಿಯೇ ಆ ಹೆಂಗಸಿನ ಮಾತನ್ನು ಲೆಕ್ಕಕ್ಕಿಡುವುದಿಲ್ಲ ಎಂದದ್ದು

ಓರ್ವ ಸ್ತ್ರೀ ಅಧ್ಯಯನಗಾರಳಾಗಿ ನಾನು ಪುರುಷಾಹಂಕಾರದ ಇಂತಹ ಅನೇಕ ಮಾತುಗಳನ್ನು ಕೇಳಿದ್ದೇನೆ..ಲಕ್ಷಿಸದೆಯೇ ಮುಂದುವರಿದೆ.

ಬ್ಲಾಗ್ ತೆರೆದೆ ಬರೆದೆ..ಅದರ ಪರಿಣಾಮವಾಗಿಯೇ ತುಳು ಅಧ್ಯಯನಗಾರ ತಾವು ಲೆಕ್ಕಕ್ಕಿಡುವುದಿಲ್ಲ ಎಂಬ ಹೆಂಗಸಾದ  ನನ್ನ ಮಾತನ್ನು ಡಾ.ಕೆ ಎನ್ ಗಣೇಶಯ್ಯ ಲೆಕ್ಕಕ್ಕೆ ತಗೊಂಡರು ..ಪರಿಣಾಮವಾಗಿ ನಾನು ಲಕ್ಷ್ಮೀ ಪೋದ್ದಾರ್ ಆದೆ.

ನಾನು ಕನಸಲ್ಲೂ ಊಹಿಸದೇ ಇರುವ ವಿಚಾರವದು..ಬಹು ಪ್ರಸಿದ್ಧ ಕಾದಂಬರಿಕಾರರಾದ ಗಣೇಶಯ್ತನವರ ಪ್ರಸಿದ್ಧ ಕಾದಂಬರಿಯಲ್ಲಿ ನಾನೊಂದು ಜೀವಂತ ಪ್ರಮುಖ ಪಾತ್ರವಾಗಿ ಬಂದಿರುವೆ ಎಂಬುದು ನಾನೆಂದಿಗೂ ಮರೆಯಲಾಗದ ರೋಮಾಂಚನ ನೀಡಿದ ವಿಚಾರ

ಯಾರಿಗೆ ತಾನೇ ಕಥಾ ನಾಯಕಿಯಾಗುವುದು,ಕಥೆಯ ಕೇಂದ್ರವಾಗುವುದು ಇಷ್ಟವಾಗದ ವಿಚಾರ?..ಎಲ್ಲರೂ ಇಷ್ಟ ಪಡುವ ಬಯಸುವ ವಿಚಾರವಿದು..ನನ್ನ ವಿಚಾರದಲ್ಲಿ ಇದು ಸಂಭವಿಸಿದೆ..

ಯಾಕೋ ಗೊತ್ತಿಲ್ಲ..ನನ್ನ ಬದುಕಿನಲ್ಲಿ ಇಂತಹ ಅನೇಕ ಅನೂಹ್ಯ ವಿಚಾರಗಳು ಘಟಿಸಿವೆ..ಅದಕ್ಕಾಗಿಯೇ ಆತ್ಮಕಥೆ ಬರೆಯಲು ನಿರ್ಧರಿಸಿ ಶುರು ಮಾಡಿರುವೆ.

ಅದಿರಲಿ ನಾನು ಲಕ್ಷ್ಮೀ ಪೋದ್ದಾರ್ ಆದದ್ದನ್ನು ಡಾ.ಗಣೇಶಯ್ತ ಹೀಗೆ ವಿವರಿಸಿದ್ದಾರೆ..ಇನ್ನು ಪೂರ್ಣ ಮಾಹಿತಿಗೆ ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಓದಬಹುದು.

"ನಗರದ ಬಸದಿಕೇರಿಯಲ್ಲಿರುವ ಪೂಜಾ ಮಂಟದ ಬಳಿ ನಡೆತುವ ಜಟ್ಟಿಗರ ಪೂಜೆಯನ್ನು ಕಾದಂಬರಿಯ ಪ್ರಮುಖ ವಸ್ತುವಾಗಿರಿಸಿಕೊಂಡು  ಬರೆಯುವ ಉದ್ದೇಶದಿಂದ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದ ಎಂಬವರು ಬ್ಲಾಗೊಂದರಲ್ಲಿ ಬರೆದ ಜಟ್ಟಿಗ ಭೂತಾರಾಧನೆಯ ವಿವರಗಳು ನಾನು ಕಲ್ಪಿಸಿದ್ದ ಕೊಂಡಿ ಕೇವಲ ಊಹೆಯಲ್ಲ ಎನ್ನುವುದಕ್ಕೆ ಪ್ರಮುಖ ಆಧಾರ ದೊರಕಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆ ಹೇಳುವ ಮಾಧ್ಯಮವಾಗಿ ಬಳಸಲು ಅನುವು ಮಾಡಿಕೊಟ್ಟವು ಕೂಡಾ.ತಕ್ಷಣ ಭೂತಾರಾಧನೆಯ ಬಗ್ಗೆಯೇ ಅಧ್ಯಯನ ಮಾಡಿ ಪಿಎಚ್ ಡಿ ಪಡೆದಿರುವ ಹಲವು ಪುಸ್ತಕಗಳನ್ನೂ ಬರಹಗಳನ್ನೂ ಬರೆದಿರುವ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಟ್ಟಿರುವ ಲಕ್ಷ್ಮೀ ಪ್ರಸಾದರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳಿಗಾಗಿ ಚರ್ಚಿಸಲು ಸಮಯ ಕೋರಿದಾಗ ತಾವಾಗಿಯೇ ಮನೆಗೆ ಬಂದು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು  ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖ ಪಾತ್ರವಾಗಿ ರೂಪುಗೊಳ್ಳತೊಡಗಿದರು.ಹಾಗೆಂದೇ ಅವರು ಡಾ.ಲಕ್ಷ್ಮೀ ಪೋದ್ದಾರ್ ಆಗಿ ಕಾಣಿಸಿಕೊಂಡರು.ನಂತರ ಅವರು ಹಲವಾರು ಸಲಹೆಗಳನ್ನೂ ಪಾಡ್ದನಗಳ ತುಳು ಕನ್ನಡ ರೂಪಾಂತರವನ್ನೂ ನೇತ್ರಾಣಿ ಜಟ್ಟಿಗರ ಫೋಟೋವನ್ನೂ ಒದಗಿಸಿಕೊಟ್ಟಿದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು.ಬಳ್ಳಿ ಕಾಳ ಮೆಣಸು ಸಂಪೂರ್ಣವಾಗಿ ಸಂಸ್ಕಾರಗೊಂಡು ಬಿಳಿಯ ಮೆಣಸಾಯಿತು- ಡಾ.ಕೆ ಎನ್ ಗಣೇಶಯ್ಯ ( ತಮ್ಮ ಬಳ್ಳಿ ಕಾಳ ಬಳ್ಳಿ ಕಾದಂಬರಿಯ ಕುರಿತಾಡಿದ ಮಾತುಗಳ ಉದೃತ ಭಾಗ) 

ಲಕ್ಷ್ಮೀ ಪೋದ್ದಾರ್ ಆದ ನನ್ನನ್ನು ಗಣೇಶಯ್ಯನವರ ಕಾದಂಬರಿ ಮೂಲಕ ಸಾವಿರಾರು ಜನ ಗುರುತಿಸಿದ್ದಾರೆ.ನನ್ನ ತುಳು ಅಧ್ಯಯನದ ಫಲಿತವನ್ನು ಪಡೆದಿದ್ದಾರೆ ಎಂಬುದು ನನಗೆ ನಿಜಕ್ಕೂ ಹೆಮ್ಮೆ ತರುವ ವಿಚಾರ..ಅದೂ ನಾವು ಲೆಕ್ಕಕ್ಕಿಡುವುದಿಲ್ಲ ಎಂದು ತುಳು ಅಧ್ಯಯನಗಾರನೊಬ್ಬನಿಂದ ನಿಂದಿಸಲ್ಪಟ್ಟ ಮಹಿಳೆಯ ಮಾತೇ ಕಾದಂಬರಿಗೆ ಪ್ರಮುಖ ಆಧಾರ ಆಗುದು..ಹಿರಿಯ ವಿದ್ವಾಂಸರಾದ ಡಾ.ಕೆ ಎನ್ ಗಣೇಶಯ್ಯ ಆ ಮಹಿಳೆಯ ಬರಹವನನ್ನು ಗೌರವದಿಂದ ಕಂಡು ಅದರೊಳಗಿನ ಸತ್ಯವನ್ನು ಪರಿಗಣಿಸಿ ಚಾರಿತ್ರಿಕ  ಕಾದಂಬರಿ ಬರೆಯುದು ಎಲ್ಲವೂ ಕಾಕತಾಳೀಯವೇ..ಕಾಲನ ಅನೂಹ್ಯ ನಡೆಯೇ..ನನಗೂ ಗೊತ್ತಿಲ್ಲ..ತೇ ನ ವಿನಾ ತೃಣಮಪಿ ನ ಚಲತಿ( ದೇವರ ಆಶಯದ ಹೊರತಾಗಿ ಹುಲುಕಡ್ಡಿಯೂ ಅಲುಗಾಡುವುದಿಲ್ಲ) 

ಅವಹೇಳನಕ್ಕೆ ಗುರಿಯಾಗಿಸಿ ಅಳಿಸಿ ಕಾಡುವವನೂ ಅವನೇ..ಪುರಸ್ಕರಿಸಿ ಚಂದ ನೋಡುವವನೂ ಅವನೇ ಅಲ್ಲವೇ..ಮುಂದೇನು ಕಾಡುವನೋ ಇಲ್ಲ ಅನುಗ್ರಹಿಸುವನೋ ಗೊತ್ತಿಲ್ಲ..ತ್ವಮೇವ  ಶರಣಂ ಮಮ‌

ಇಂದಿಗೆ ಸರಿಯಾಗಿ 5 ವರ್ಷಗಳ ಹಿಂದೆ 01-01-2017 ರಂದು ಈ ಪುಸ್ತಕ ಬಿಡುಗಡೆಯಾಯಿತು.

Saturday, 18 December 2021

ನನಗೂ ಆತ್ಮವಿದೆ ಆ ಪುಣ್ಯಾತ್ಮನ ನಾಲಿಗೆಯಲ್ಲಿ ಮಚ್ಚೆ ಇತ್ತಾ ?

 ನನಗೂ ಆತ್ಮವಿದೆ 


ಆ ಪುಣ್ಯಾತ್ಮನ ನಾಲಿಗೆಯಲ್ಲಿ ಮಚ್ಚೆ ಇತ್ತಾ ?


ಯಾವ ಶುಭ ಘಳಿಗೆಯಲ್ಲಿ ಆ ಪುಣ್ಯಾತ್ಮ ಆ ಮಾತನ್ನು ಆಡಿದರೋ ಏನೋ..ಅಸ್ತು ದೇವತೆಗಳು ಅಸ್ತು ಎಂದಿರಬೇಕು ಖಂಡಿತಾ

2008-09 ರ ಶೈಕ್ಷಣಿಕ ವರ್ಷದಲ್ಲಿ ನಾವು ಬೆಂಗಳೂರಿನ ಬ್ಯಾಂಕ ಕಾಲನಿಯ  ಬಾಡಿಗೆ ಮನೆಯಿಂದ ಈಗಿರುವ ಮನೆಗೆ ವಾಸ್ತವ್ಯವವನ್ನು ಬದಲಾಯಿಸಿದೆವು.ಮೊದಲು ಕೆಲಸ ಮಾಡುತ್ತಿದ್ದ ಕಾಲೇಜು ಮನೆಯಿಂದ ಬಹಳ ದೂರ ಆಯಿತು 

ಹಾಗಾಗಿ ಮನೆಗೆ ಸಮೀಪದ ಕಾಲೇಜುಗಳಲ್ಲಿ ಕನ್ನಡ ಖಾಲಿ ಹುದ್ದೆ ಇದೆಯಾ ಎಂದು ವಿಚಾರಿಸುತ್ತಿದ್ದೆ.

ಇಲ್ಲಿಯೇ ಉಳ್ಳಾಲು ಕ್ರಾಸ್ ಸಮೀಪದ ಐಶ್ವರ್ಯ ಕಾಲೇಜಿನಲ್ಲಿ  ( ಈಗ ಇದು ಮುಚ್ಚಿದೆ) ಕನ್ನಡ ಹುದ್ದೆ ಇರುವುದು ತಿಳಿಯಿತು.

ಅರ್ಜಿ ಬರೆದುಕೊಂಡು ಸರ್ಟಿಪಿಕೇಟ್ ಗಳ ಜೆರಾಕ್ಸ್ ಇರಿಸಿಕೊಂಡು ಹೋದೆ.ಅದು ನಾಗರಾಜ ಎಂಬ ವೈದ್ಯರು ನಡೆಸುತ್ತಿದ್ದ ಕಾಲೇಜಾಗಿತ್ತು.ಶ್ರೀ ಲಕ್ಷ್ಮೀ ಎಂಬವರು  ನಾಮಕಾವಸ್ತೆ ಪ್ರಿನ್ಸಿಪಾಲರಾಗಿದ್ದರು.ಅಲ್ಲಿ ಎಂ ಡಿ ಎಂಬ ಬೋರ್ಡ್ ಹಾಕಿಕೊಂಡಿದ್ದ ಪ್ರಸಾದ್ ಎಂಬವರ ಮಾತೇ ಅಂತಿಮ.ಅವರನ್ನೇ ಭೇಟಿ ಮಾಡಿದೆ.ಮಾರ್ಕ್ಸ್ ಕಾರ್ಡನ್ನೆಲ್ಲ ನೋಡಿದರು.ಫಿಎಚ್ ಡಿ ಮಾಡ್ತಿದ್ದೀರಾ ,ಎಲ್ಲಿ ತನಕ ಬಂದಿದೆ ಎಂದು ಕೇಳಿದರು.ಪ್ರಬಂಧ ಸಿದ್ದವಾಗಿದೆ.ಇನ್ನು ಸಲ್ಲಿಸಿ ಮೌಖಿಕ ಪರೀಕ್ಷೆ ಎದುರಿಸಿದರೆ ಆಯಿತು ಎಂದೆ..ಸರ್ಟಿಪೀಕೇಟ್ ಗಳನ್ನು ನೋಡುತ್ತಾ..ಓ ಎನ್ ಇ ಟಿಯೂ ಪಾಸ್ ಮಾಡಿದ್ದೀರಿ..ನೀವೆಲ್ಲ ಇಲ್ಲಿ ಎಷ್ಟು ದಿನ ನಿಲ್ತೀರಾ ? ಸರ್ಕಾರಿ ಕೆಲಸ ಸಿಕ್ಕು ಬಿಟ್ಟು ಹೋಗ್ತೀರಿ ಎಂದರು.ಅವರು ಹಾಗೆ ಅಂದ ಘಳಿಗೆ ನಿಜಕ್ಕೂ ಶುಭ ಘಳಿಗೆಯೇ ಇರಬೇಕು.ಅಸ್ತು ದೇವತೆಗಳು ಆಶೀರ್ವದಿಸಿರಬೇಕು

ಆ ಕಾಲದಲ್ಲಿ ಪಿಯು ಡಿಗ್ತಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಸಂದರ್ಶನ  ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು.ಸಂದರ್ಶನ ಇರುವಲ್ಲಿ ಎಲ್ಕೆಡೆ ದುಡ್ಡೇ ಮಾನದಂಡ..ಇನ್ಪ್ಲೂಯೆನ್ಸೇ ಅರ್ಹತೆ..ಹಾಗಾಗಿ ಇವೆರಡು ಇಲ್ಲದ ನನ್ನಂತಹವರಿಗೆ ಸರ್ಕಾರಿ ಕಾಲೇಜು ಉಪನ್ಯಾಸಕ ಕೆಲಸ ಗಗನ ಕುಸುಮವಾಗಿತ್ತು.

ಆದರೆ ಅವರು ಆ ಮಾತನ್ನು ಹೇಳಿದ ದಿನವೇ ಲಿಖಿತ  ಪರೀಕ್ಷೆ ಮೂಲಕ ಪಿಯು ಕಾಲೇಜಿಗೆ ಉಪನ್ಯಾಸಕರ ಅಯ್ಕೆ ಎಂದು ಆದೇಶವಾಯಿತು.ಅದಕ್ಕೂ ಮೊದಲು ತುಂಬಾ ಸಮಯದಿಂದ ಅನೇಕರು ಈ ಬೇಡಿಜೆಯನ್ನು ಇರಿಸಿದ್ದರು.ನಾನೂ ಪತ್ರಿಕೆಯಲ್ಲಿ ಬರೆದು ಪತ್ರಾಂದೋಲನ ಮಾಡಿದ್ದೆ.ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ.ಯಾವುದೂ ಪ್ರಯೋಜನ ಆಗಿರಲಿಲ್ಲ


ಅಂದು ಅನೇಕರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಲಿಖಿತ ಪರೀಕ್ಷೆ ಮೂಲಕ ಅಯ್ಕೆ ಎಂದು ಆದೇಶ ಮಾಡಿತು.ನಂತರ  ಪರೀಕ್ಷೆ ದಿನಾಂಕದ ಘೋಷಣೆ ಅಯಿತು

ಆ ಕಾಲೇಜಿಗೆ ಸೇರಿ ಹೆಚ್ಚು ಸಮಯ ಆಗಿರಲಿಲ್ಲ.ಪರೀಕ್ಷೆಯ ದಿನಾಂಕ ಘೋಷಣೆಯಾದ ಕೂಡಲೇ ಕಾಲೇಜಿಗೆ ರಾಜೀನಾಮೆ ಕೊಟ್ಟು ಹಗಲು ರಾತ್ರಿ ಓದಿದೆ.ಉತ್ತಮ ಅಂಕಗಳು ಬಂದು ಯಾರ ಪ್ರಭಾವ ದುಡ್ಡು ಇಲ್ಲದೆ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದೆ.

ಈಗಲೂ ಇದು ನಿಜವಾ ? ಕನಸಾ ಎಂದೆನಿಸುತ್ತದೆ.

ದುಡ್ಡು ಪ್ರಬಾವ ಇಲ್ಲದ ಸಾಮಾನ್ಯ ಜನರಿಗೆ ದುರ್ಲಭವಾಗಿದ್ದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ನನಗೆ ಸಿಕ್ಕಿದ್ದು ನಿಜಕ್ಕೂ ಪವಾಡವೇ ಸರಿ‌.

ಇದು ನೆನಪಾದಾಗೆಲ್ಲ ಐಶ್ವರ್ಯ ಕಾಲೇಜಿನ ಎಂಡಿ ಆಗಿದ್ದ  ಸತ್ಯ ಪ್ರಸಾದ್ ಅವರು ಹೇಳಿದ ಮಾತು ನೆನಪಾಗುತ್ತದೆ.

ಈಗ ಅವರೆಲ್ಲಿದ್ದಾರೆ ಎಂದು ಗೊತ್ತಿಲ್ಲ.ಆ ಕಾಲೇಜು ಮುಚ್ಚಿದೆ.ಎಂದಾದರು ಒಂದಿನ ಅವರನ್ನು ಭೇಟಿ ಮಾಡಿ ನಿಮ್ಮ ನಾಲಿಗೆಯಲ್ಲಿ ಮಚ್ಚೆ ಇದೆಯಾ ಎಂದು ಕೇಳಿ ಸ್ವೀಟ್ ಕೊಡಬೇಕೆಂದಿರುವೆ.ನಾಲಿಗೆಯಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಹೇಳುವ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಪ್ರಚಲಿತವಿದೆ.ಏನೇ ಆದರೂ ಅರ್ಹತೆಯನ್ನು ನೋಡಿ ಮೆಚ್ಚಿ ಅವರಾಡಿದ ಮಾತುಗಳನ್ನು ಮರೆಯಲಾಗದು ಖಂಡಿತಾ 

ಡಾ.ಲಕ್ಷ್ಮೀ ಜಿ ಪ್ರಸಾದ್ 


ನನ್ನ ಆತ್ಮಕ್ಕೂ ಒಂದು ಕಥೆಯಿದೆ ಆಕೆ ಅವಳೇ ಇರಬಹುದಾ?


 ನನ್ನ ಆತ್ಮಕ್ಕೂ ಒಂದು ಕಥೆಯಿದೆ

ಆಕೆ ಅವಳೇ ಇರಬಹುದಾ?

ಬೆಳಗ್ಗೆ ಕಾಲೇಜಿಗೆ ಹೋಗ್ತಾ ರಾಜರಾಜೇಶ್ವರಿ ದ್ವಾರದ  ಬಳಿಯ  ಸಿಗ್ನಲ್ ಬಳಿ ಓರ್ವ ನನ್ನದೇ ವಯಸ್ಸಿನ ಮಹಿಳೆಯನ್ನು ನೋಡಿದೆ..ತಕ್ಷಣವೇ ಅವರನ್ನು ಎಲ್ಲೋ ನೋಡಿದ ಹಾಗೆ ಅನಿಸ್ತು.ಯಾರು ಏನೆಂದು ನೆನಪಾಗಲಿಲ್ಲ..ಈವತ್ತು ನನಗೆ ಪರೀಕ್ಷಾ ಕಾರ್ಯ ಇರಲಿಲ್ಲ.ಹಾಗಾಗಿ ಆಕೆ ಯಾರೆಂಬ ವಿಚಾರ ಕಾಡ್ತಾ ಇತ್ತು.

ಯಾಕೋ ಆ ಮುಖ ತುಂಬಾ ಪರಿಚಿತ ಎಂದೆನಿಸುತ್ತಿತ್ತು.ಆದರೆ ಯಾರೆಂದು ನೆನಪಾಗುತ್ತಾ ಇಲ್ಲ.ಮನೆಗೆ ಬಂದು ಏನೋ ಓದುತ್ತಿರುವಾಗ  ವಿಚಾರಗಳ ಬಗ್ಗೆ ಸುರೇಶ್ ಎಂಬವರು ಫೋನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ,ಸಂಸ್ಕೃತಿ ಬಗ್ಗೆ ಮಾಹಿತಿ ಕೇಳಿದರು.ಆಗ ಅವರು ರೆಫರ್ ಮಾಡಲು ಪುಸ್ತಕಗಳ ಹೆಸರನ್ನು ತಿಳಿಸಿ ಎಂದರು.ಆಗ ಗಣಪತಿರಾವ ಐಗಳ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಕೃತಿಯನ್ನು ಸೂಚಿಸಿದೆ.

ಹಾಗೆ ಆ ಪುಸ್ತಕವನ್ನು ಇನ್ನೊಮ್ಮೆ ಓದಬೇಕೆಂದು ನನಗನಿಸಿತು.ಅಷ್ಟೇ..ನನಗೆ ತಕ್ಷಣ ಪವಿತ್ರ ? ನೆನಪಾದಳು..ಹೌದು ಬೆಳಗ್ಗೆ ನೋಡಿದ ಮಹಿಳೆ ಪವಿತ್ರಾಳಂತಿದ್ದರು.ಪವಿತ್ರ ನನ್ನದೇ ವಯಸ್ಸಿನವರು.ಒಂದೆರಡು ವರ್ಷ ದೊಡ್ಡವರು.ನಾನು ಪ್ರಥಮ ಪಿಯುಸಿ ಓದುತ್ತಿರುವಾಗ ಭೇಟಿಯಾದ ಹುಡುಗಿ.ಬಹುಶಃ ಅವಳಾಗ ಪದವಿ ಓದುತ್ತಾಇದ್ದಳು.ಕೆನರಾ ಕಾಲೇಜಿನ ವಿದ್ಯಾರ್ಥಿನಿ ಎಂದ ನೆನಪು..

ನಾನು ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ( ಈಗಿನ ವಿಶ್ವ ವಿದ್ಯಾಲಯ ಕಾಲೇಜು)  ಪಿಯುಸಿ ಓದಿದ್ದೆ.ಆಗ ಮಂಜೇಶ್ವರ ತನಕ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದೆ.ಮಂಜೇಶ್ವರ ಕಾಸರಗೋಡು ಕುಂಬಳೆ ಉಪ್ಪಳ ಮೊದಲಾದ ಪ್ರದೇಶಗಳಿಂದ ಅನೇಕ ವಿದ್ಯಾರ್ಥಿಗಳು ಮಂಗಳೂರಿಗೆ ಅದೇ ರೈಲಿನಲ್ಲಿ ಓದಲು ಬರುತ್ತಿದ್ದರು


ಒಂದಿನ ನನಗೆ ರೈಲಿನಲ್ಲಿ ಪರಿಚಿತಳಾದವಳು ಆ ಹುಡುಗಿ.ಆಕೆಯ ಹೆಸರು ಪವಿತ್ರ ಎಂದು ನೆನಪು.ಒಂದಿನ ಮಾತನಾಡುತ್ತಾ ತಾನು ಬಹು ದೊಡ್ಡ ವಿದ್ವಾಂಸರಾದ ಗಣಪತಿರಾವ್ ಐಗಳ ಹತ್ತಿರದ ಸಂಬಂಧಿ.ಅವರು ನನಗೆ ಮುತ್ತಜ್ಜನಾಗ ಬೇಕು ಎಂದಿದ್ದಳು

ನನಗೆ ಗಣಪತಿರಾವ ಐಗಳ ಹೆಸರು ಕೂಡ ಕೇಳಿ ಗೊತ್ತಿರಲಿಲ್ಲ.ಹಾಗಾಗಿ ಯಾರು ಅವರು ಎಂದು ಕೇಳಿದೆ.ಆಗ ಅವಳು ಅವರು  ಶಾಲೆಯಲ್ಲಿ ಮೇಷ್ಟ್ರಾಗಿದ್ದರು.ಅವರು ತುಂಬಾ ಪುಸ್ತಕಗಳನ್ನು ಬರೆದಿದ್ದಾರೆ.ದೊಡ್ಡ ಇತಿಹಾಸಜ್ಞರು ಅವರು.ಅವರ ಜ್ಞಾನಕ್ಕೆ ಅವರಿಗೆ ಯಾವುದೇ ಸರಿಯಾದ ಮನ್ನಣೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಬಹಳ ಬೇಸರದಿಂದ ಹೇಳಿದ್ದಳು.ಅವಳಿಗೆ ಆ ಬಗ್ಗೆ ಬಹಳ ಬೇಸರ ಇತ್ತು

ನನಗೆ ಆಗ ಅದೆಲ್ಲ ಅರ್ಥ ಆಗಲಿಲ್ಲ.ಅರ್ಹತೆಗೆ ಮನ್ನಣೆ ಯಾಕೆ ಸಿಗಲಿಲ್ಲ ಎಂಬ ವಿಚಾರವೆಲ್ಲ ಅರ್ಥವಾಗುವಷ್ಟು ಪ್ರೌಢತೆ ನನ್ನಲ್ಲಿರಲಿಲ್ಲ.ಅಲ್ಲದೇ ಆಗ ನಾನು ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದು ಇತಿಹಾಸದ ಬಗ್ಗೆ ಆಸಕ್ತಿಯಾಗಲೀ ತಿಳುವಳಿಕೆಯಾಗಲೀ ನನಗೆ ಇರಲಿಲ್ಲ.

ಇದಾಗಿ ಸುಮಾರು ಹದಿನೈದು ವರ್ಷಗಳ ನಂತರ ಗಣಪತಿರಾವ ಐಗಳ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಎಂಬ ಗ್ರಂಥವನ್ನು  ಓದಿದೆ.ಆಗ ಅವರ ವಿದ್ವತ್ ಬಗ್ಗೆ ತಿಳಿಯಿತು.ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ತಿಳಿಯಲು ಇದೇ ಪುಸ್ತಕ ಪ್ರಮುಖ ಆಕರವಾಗಿದೆ.ಅಷ್ಟು ಮಾಹಿತಿ ಸಂಗ್ರಹಕ್ಕಾಗಿ ಬಸ್ ಕಾರುಗಳೂ ಇಲ್ಲದ ಆ ಕಾಲದಲ್ಲಿ  ಎಷ್ಟು ಕಷ್ಟ ಪಟ್ಟಿರಬಹುದೆಂದು ಊಹಿಸಿದರೆ ಅಬ್ಬಾ ಎನಿಸುತ್ತದೆ.ಅವರು ಬಂಟ್ವಾಳದ  ಶಾಲೆಯಲ್ಲಿ ಮೇಷ್ಟ್ರಾಗಿದ್ದರು.ಇವರ ಕಾಲ  1881-1944

ಅವರ ಕಾಲದಲ್ಲಿ ಅವರ ಅಧ್ಯಯನಕ್ಕೆ ಆ ಹುಡುಗಿ ಹೇಳಿದಂತೆ ಸೂಕ್ತ ಮನ್ನಣೆ ದೊರೆತಿರಲಿಲ್ಲವೇ ? 

ಈ ಬಗ್ಗೆ ನನಗೆ ತಿಳಿದಿಲ್ಲ.ಅವರ ಕಾಲದಲ್ಲಿ ಅವರ ಅಧ್ಯಯನಕ್ಕೆ ಸೂಕ್ತ ಮನ್ನಣೆ ಸಿಕ್ಕೋ ಇಲ್ಲವೋ ಗೊತ್ತಿಲ್ಲ ಆದರೆ ಈಗ ಮಾತ್ರ ಅವರ ಕೃತಿಯನ್ನು ಓದದೆಯೇ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ಅರಿಯಲು ಸಾಧ್ಯವಿಲ್ಲ.

ಹಾಗಾಗಿ ಗಣಪತಿರಾವ ಐಗಳು ಅಜರಾಮರ 

ನನಗೆ ಬೆಳಗ್ಗೆ ಆ ಮಹಿಳೆಯನ್ನು ನೋಡಿದಾಗ ಅವರಾರೆಂದು ನೆನಪಿಗೆ ಬರುತ್ತಿದ್ದರೆ ನಾನು ಖಂಡಿತವಾಗಿಯೂ ಕಾರು ನಿಲ್ಲಿಸಿ ಇಳಿದು ಮಾತನಾಡುತ್ತಿದ್ದೆ

ಗಣಪತಿರಾವ ಐಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದಿತ್ತು.ಆಗ ನೆನಪೇ ಬಾರದ ಬಗ್ಗೆ ಈಗ ಬೇಸರವಾಗುತ್ತಿದೆ..

ಕಾಯಕ್ಕಳಿವುಂಟು ಕಾಯಕಕ್ಕೆ ಅಳಿವಿಲ್ಲ..ಕಾಯ ಇರುವಷ್ಟು ಸಮಯ ನಮ್ಮಲ್ಲಿ ಹೊಟ್ಟೆಕಿಚ್ಚಿನಿಂದ ಸೂಕ್ತ ಸ್ಥಾನಮಾನ ಸಿಗದಂತೆ ತಡೆಯುವವರೂ ಕಿರುಕುಳ ಕೊಡುವವರು,ತುಳಿಯುವವರೂ ಇರುತ್ತಾರೆ.ನಮ್ಮ ನಂತರ ನಮಗೆ ಕಿರುಕುಳ ಕೊಟ್ಟವರೂ ಇಲ್ಲವಾಗುತ್ತಾರೆ‌.ನಂತರದ ತಲೆಮಾರು ಬರುವಾಗ  ನಮ್ಮ ಅದ್ಯಯನದ ಕೃತಿಗಳು ಮಾತ್ರ ಮಾತನಾಡುತ್ತವೆ ಅಲ್ಲವೇ..

Sunday, 5 September 2021

 

ನನ್ನ ಆತ್ಮಕ್ಕೂ ಕಥೆಯಿದೆ 

ಕೊನೆಯ ಚೆಂಚಿನ ಮಕ್ಕಳ ಕಷ್ಟ ಒಂದೆರಡಲ್ಲ.


 ನಾನು ಹತ್ತನೆಯ ತರಗತಿ ತನಕ ಜಾಣ ವಿದ್ಯಾರ್ಥಿನಿ ಎಂದೇ ಹೆಸರು ಮಾಡಿದ್ದೆ.ಶಾಲೆಗೆ ಎರಡನೆಯವಳಾಗಿ ಹತ್ತನೆಯ ತರಗತಿಯಲ್ಲಿ ಪ್ರಥಮ ಪಾಸಾಗಿದ್ದೆ .ಆಗಿನ ಕಾಲಕ್ಕೆ ಅದು ಒಳ್ಳೆಯ ಅಂಕಗಳೇ.ಹಾಗಾಗಿ ಅಲ್ಕಿಯ ತನಕ ನನಗೆ ಕೊನೆಯ ಚೆಂಚಿನ‌ಮಕ್ಕಳ ಕಷ್ಟದ ಅರಿವು ಇರಲಿಲ್ಲ.

ಪ್ರೌಢ ಶಾಲೆಯಲ್ಲಿ ಓದುವಾಗ ವಿಜ್ಞಾನ ನನ್ನ ಆಸಕ್ತಿಯ ವಿಷಯವಾಗಿತ್ತು.ಹಾಗಾಗಿ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡೆ

ನಾನು ಮಂಗಳೂರು ಸರ್ಕಾರಿ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜು) ಪಿಯುಸಿಗೆ ಸೇರಿದ್ದೆ.ಅಲೋಷಿಯಸ್ ಕಾಲೇಜಿನಲ್ಲಿ ಸೀಟು ಪಡೆಯಲು ಯತ್ನ ಮಾಡಿದ್ದು ಸಿಕ್ಕಿರಲಿಲ್ಲ.

ನಾನು ಕಾಸರಗೋಡಿನ ಗಡಿನಾಡ ಕನ್ನಡತಿ.ಸಹಜವಾಗಿ ಕನ್ನಡದ ಬಗ್ಗೆ ಒಲುಮೆ ಇತ್ತು.ಆದರೂ ಐದರಿಂದ ಏಳನೆಯತರಗತಿ ತನಕ ಓದಿದ್ದ ಸಂಸ್ಕೃತವೂ ಪ್ರಿಯವಾದ ಭಾಷೆ ಆಗಿತ್ತು.ಹಾಗಾಗಿ ಪಿಯುಸಿಯಲ್ಲಿ ಎರಡನೆಯ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದೆ


ಕಾಸರಗೋಡಿನ ಕಾಲೇಜಿನಲ್ಲಿ ಮಲೆಯಾಲ ಭಾಷೆಯಲ್ಲಿ 

ಪಾಠ ಮಾಡುತ್ತಾರೆ.ಒಂದು ಭಾಷೆಯಾಗಿ ಕೂಡ ಮಲೆಯಾಳವನ್ನು ಕಲಿಯದ ನಮಗೆ ಕಷ್ಟವಾಗಬಹುದೆಂಬ ಕಾರಣಕ್ಕೆ ನಾವೆಲ್ಲ ಹತ್ತನೆಯ ತರಗತಿಯ ನಂತರ ಓದಲು ಮಂಗಳೂರಿಗೆ ಹೋಗುತ್ತಿದ್ದೆವು.

ಇಲ್ಲಿ ಕನ್ನಡದಲ್ಲಿ ಪಾಠ ಮಾಡುತ್ತಾರೆ ಎಂದು ನಾನು ಊಹಿಸಿದ್ದೆ..

ಅಬ್ಬಾ‌.ಇಲ್ಲಿನ ಉಪನ್ಯಾಸಕರ ಹೃದಯ ಹೀನತೆಯೇ ಎಂದು ಈಗಲೂ ನನಗನಿಸುತ್ತದೆ.

..ನಾವು ವಿದ್ಯಾರ್ಥಿಗಳೆಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರಾಗಿದ್ದೆವು.ಆದರೂ ಒಂದಕ್ಷರ ಕೂಡ ಕನ್ನಡದಲ್ಲಿವಿವರಣೆ ನೀಡುತ್ತಿರಲಿಲ್ಲ‌.ನಮ್ಮ ಸಂಸ್ಕೃತದ ಉಪನ್ಯಾಸಕರಾಗಿದ್ದ ಲಕ್ಷ್ಮೀ ನಾರಾಯಣ ಭಟ್ಟರು ಮಾತ್ರ ಕನ್ನಡದಲ್ಲಿ ವಿವರಿಸುತ್ತಿದ್ದರು‌.ಹಾಗಾಗಿ ಸಂಸ್ಕೃತದಲ್ಲಿ ನಾನು ಉತ್ತಮ ಅಂಕಗಳನ್ನು ಗಳಿಸಿದ್ದೆ.

 ಒಬ್ಬಿಬ್ಬರು ಪಾಸಾದರೆ ಅದೇ ದೊಡ್ಡ ವಿಚಾರ.

ಮನೆಯಲ್ಲಿ ರುಬ್ಬು ಕಲ್ಲು ಇಲ್ವಾ ? ಅದೇ ಕೆಲಸ ಮಾಡಲು ಲಾಯಕ್ಕು ಎಂದು ಬೈಯುವಾಗ ಮಾತ್ರ ಕನ್ನಡ ಭಾಷೆ ಬಳಕೆ ಇತ್ತು.ಮಾತನಾಡುತ್ತಿರಲಿಲ್ಲ.ಇದರ ಪರಿಣಾಮವಾಗಿ ಹೆಚ್ಚು ಕಡಿಮೆ ಎಲ್ಲರೂ ಪೈಲ್ ಆಗ್ತಿದ್ದೆವು.ಈ ತರಹ 1% ಕ್ಕಿಂತಲೂ ಕಡಿಮೆ ಪಲಿತಾಂಶ ಬಂದರೂ ಇಲ್ಲಿನ ಉಪನ್ಯಾಸಕರನ್ನು ಕೇಳುವವರು ಯಾರೂ ಇರುತ್ತಿರಲಿಲ್ಲವೇ ? ಇವರಂತೆಯೇ ನಾನು ಕೂಡ ಈಗ ಸರ್ಕಾರಿ ಕಾಲೇಜಿನ ಉಪನ್ಯಾಸಕಿ.ನಾವೆಲ್ಲ ಸಹೊದ್ಯೋಗಿಗಳು ಒಂದೇ ಒಂದು ವಿದ್ಯಾರ್ಥಿ ಫೈಲ್ ಆಗಬಾರದೆಂದು 100% ಪಲಿತಾಂಶಕ್ಕಾಗಿ ಹರಸಾಹಸ ಪಡ್ತೇವೆ.ಕೇವಲ100% ನ ಹೆನ್ಮೆಗಾಗಿಯಲ್ಲ.ಕಲಿಕೆಯಲ್ಲಿ ಹಿಮದುಳಿಯುವ ಮಗು ಕೂಡ ಪಾಸಾಗಿ ಎಲ್ಲರಮತೆ ಕಲಿತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದೇ ನಮ್ಮ ಆಶಯವಾಗಿದೆ.ಹಾಗಾಗಿ ಯಾರು ಕಲಿಕೆಯಲ್ಲಿ ಹಿಂದೆ ಇದ್ದಾರೆ ಎಮಬುದನ್ನು ಗಮನಿಸಿ ಅವರಿಗೆ ವಿಶೇಷ ಗಮನ ಕೊಡ್ತೇವೆ.ಜೊತೆಗೆ ಎಲ್ಲ ಮಕ್ಕಲೂ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡಲು ಇಡೀ ವರ್ಷ ಯತ್ನ ಮಾಡುತ್ತೇವೆ.

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶವಿದೆ.ಇದು ಗೊತ್ತಾದದ್ದು ನನಗೆ ದ್ವಿತೀಯ ಪಿಯುಸಿ ಅಂತಿಮಪರಿಕ್ಷೆಯ ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ಕೂಡ ಇದ್ದಾಗ.

ನಾವೇನೊ ವಿದ್ಯಾರ್ಥಿಗಳು..ನಮಗಿದು ಗೊತ್ತಿರಲಿಲ್ಲ.ಆದರೆ ಉಪನ್ಯಾಸಕರಿಗೆ  ಗೊತ್ತಿತ್ತು ತಾನೇ ? 

ಪ್ರಥಮ ಪಿಯುಸಿ ಕಿರು ಪರೀಕ್ಷೆ ಇರಬೇಕು‌.ಕೆಮೆಷ್ಟ್ರಿಯಲ್ಲಿ ಒಂದು ಪ್ರಶ್ನೆ ಗೆ ಅರ್ಥವನ್ನು ನಾನು ಕನ್ನಡದಲ್ಲಿ ಹೇಳಲು ಕೇಳಿದೆ.ಹೇಳಲಾಗುವುದಿಲ್ಲ‌.ಅಷ್ಟೂ ಗೊತ್ತಾಗದಿದ್ದರೆ ಕಲಿಯಲು ಯಾಕೆ ಬರುದು? ಮನೆಯಲ್ಲಿ ರುಬ್ಬು ಕಲ್ಲು ಇಲ್ವಾ ಎಂದು ಅವಹೇಳನ ಮಾಡಿದ್ದರು.ಅವರ ಹೆಸರು ನನಗೆ ನೆನಪಿದೆ.ಹೇಳುದಿಲ್ಲ ಅಷ್ಟೇ.

ಇಷ್ಟು ಮಕ್ಕಳ ಭವಿಷ್ಯ ಹಾಳಾಗುದನ್ನು ನೋಡುತ್ತಾ ಇದ್ದರೂ ಸ್ವಲ್ಪ ಕನ್ನಡದಲ್ಲಿಯೂ ವಿವರಿಸಿ ನಮ್ಮನ್ನು ಪಾಸಾಗುವಂತೆ ಮಾಡುವ ಯತ್ನವನ್ನು ಇಲ್ಲಿ‌ ಉಪನ್ಯಾಸಕರು ಮಾಡಲೇ ಇಲ್ಲ.ದ್ವಿತೀಯ ಪಿಯುಸಿಯಲ್ಲಿ ಕಿರು ಪರೀಕ್ಷೆ ಮದ್ಯವಾರ್ಷಿಕ ಪರೀಕ್ಷೆ ಪ್ರಿಪರೇಟರಿ ಯಾವುದೂ ಮಾಡಿಯೇ ಇಲ್ಲ.ನಾವು ನೇರವಾಗಿ ಅಂತಿಮ ಪರೀಕ್ಷೆಯನ್ನು ಬರೆದಿದ್ದೆವು.ಒಬ್ಬಿಬ್ಬರು ಬಿಟ್ಟರೆ ಉಳಿದವರೆಲ್ಲರೂ ಪೈಲ್ ಆಗಿದ್ದೆವು.ಹಾಗೆಂದು ನಾವು ಯಾರೂ ದಡ್ಡರಾಗಿರಲಿಲ್ಲ.ಹತ್ತನೆಯ ತರಗತಿ ತನಕ ಜಾಣರೆಂದೇ ಗುರುತಿಸಲ್ಪಟ್ಟವರು ನಾವು.ಇಲ್ಲಿ ಇಂತಹ ದುರಂತಕ್ಕೆಡೆಯಾದೆವು. ಒಬ್ಬಿಬ್ಬರು ಮತ್ತೆ ಪರೀಕ್ಷೆಗೆ ಕಟ್ಟಿ ಪಾಸಾಗಿ ಡಿಗ್ರಿ ಓದಿದ್ದಾರೆ.ಹೆಚ್ಚಿನವರ ವಿದ್ಯಾಭ್ಯಾಸ ಅಲ್ಲಿಗೇ ಮೊಟಕಾಗಿತ್ತು‌‌.

ಹತ್ತನೆಯ ತರಗತಿಯಲ್ಲಿ ಡಿಸ್ಟಿಂಕ್ಷನ್ ತೆಗೆದ ಅನೇಕರು ಪಿಯುಸಿಯಲ್ಲಿ ಫೇಲಾಗಿ ಮತ್ತೆ ಕಟ್ಟಿಯೂ ಪಾಸ್ ಮಾಡಲಾಗದೆ ಗ್ಯಾರೇಜ್ ಗಳಲ್ಲಿ ಪಿಟ್ಟರ್ ಗಳಾಗಿದ್ದರು.ಹುಡುಗಿಯರನ್ನು ಹೆತ್ತವರು ಮದುವೆ ಮಾಡಿ ಕೈ ತೊಳೆದುಕೊಂಡಿದ್ದರು.

ಪಿಯು ನಂತರ ನಾನು ಬಿಎ ಓದಲು ಬಯಸಿ ಕೆನರಾ ಕಾಲೇಜಿಗೆ ಅರ್ಜಿ ಸಲ್ಲಿಸಿದೆ.ನಾನು ತಂದೆಯ ಜೊತೆಗೆ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರಲ್ಲಿ ಮಾತನಾಡಲು ಹೋದೆ.ಆಗ ಅವರೆಷ್ಟೋ( 40,000₹?) ಡೊನೇಶನ್  ಕೇಳಿದರು

ಆಗ ನಮ್ಮ ತಂದೆಯವರು ನಮಗೆ ಎರಡು ಖಂಡಿ ಅಡಿಗೆ ಆಗುದು.ಅಷ್ಟು ಡೊನೇಶನ್ ಕೊಡಲು ಕಷ್ಟವಾಗುತ್ತದೆ ಎಂದರು.ಅಗ ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದವರು ಗದರಿ ಮಾತನಾಡಿದರು.ಆ ಪ್ರಿನ್ಸಿಪಾಲ್ ಹೆಸರು ಉಪಾಧ್ಯಾಯ ಎಂದೇನೋ ಇತ್ತೆಂದು ನೆನಪು.ಆಗ ಸರ್ಕಾರಿ ಉದ್ಯೋಗಿಗಳಿಗೆ ಬಹಳ ಅಹಂಕಾರವಿತ್ತೆಂದು ತೋರುತ್ತದೆ‌.ನಂತರದ ದಿನಗಳಲ್ಲಿ ಸಾಪ್ಟ್ವೇರ್ ಇಂಜನಿಯರ್ ಗಳ ದಂಡು ಹರಿದು ಬಂದು ಲಕ್ಷ ಗಟ್ಟಲೆ ಸಂಬಳ ಪಡೆದಾಗ ಇವರದೆಲ್ಲ ಅಟ್ಟಹಾಸ ಸ್ವಲ್ಪ ಕಡಿಮೆಯಾಯಿತೆನಿಸುತ್ತದೆ.ಮೊದಲೆಲ್ಲ ಅನುದಾನಿತ ಶಾಲೆಯ ಶಿಕ್ಷಕರು,ಬ್ಯಾಮಕಿನ ಸಿಬ್ಬಂದಿಗಳು ಇತರ ಸರ್ಕಾರಿ ಉದ್ಯೋಗಿಗಳು ತಾವು ಇತರರಿಗಿಂತ ಭಿನ್ನವಾಗಿ ಸ್ವರ್ಗದಲ್ಲಿ ಇರುವವರಂತೆ ವರ್ತಿಸುತ್ತಿದ್ದರು.ಇದು ನನ್ನೊಬ್ಬಳ ಮಾತಲ್ಲ.ಆ ಕಾಲದ ಅನೇಕರು ಹೀಗೆಯೇ ಅಭಿಪ್ರಾಯ ಪಟ್ಟಿದ್ದಾರೆ.ನಾನು‌ಮದುವೆತಾದ ಸಮಯದಲ್ಲಿ ಯಾವುದೊ ನೆಂಟರ ಮದುವೆಗೆ ಹೋಗಿದ್ದೆ.ಅಲ್ಲಿಗೆ ಅನುದಾನಿತ  ವಿಟ್ಲ ಪಿಯು ಕಾಲೇಜಿನ ಉಪನ್ಯಾಸಕರ ಮಡದಿ ಬಂದಿದ್ದರು.ಆಗ ಅವರು ಲೆಕ್ಚರ್ ನ ಹೆಂಡತಿ  ಎಂದು ಬಹಳ ಗೌರವದಿಮದ ಹೆಂಗಸರು ಅವರಿಗೆ ಕುಳಿತುಕೊಳ್ಳಲು ಜಾಗ ಬಿಟ್ಟು ಕೊಟ್ಟಿದ್ದರು.ಅದನ್ನು ನೋಡಿಯೇ ನಾನೂ ಉಪನ್ಯಾಸಕಿಯಾಗುದೆಂದು ನಿರ್ಧರಿಸಿದ್ದೆ.


ಇರಲಿ

 ಹಳ್ಳಿಯ ಜನರನ್ನು ತಿರಸ್ಕಾರದಿಂದ ಕಾಣುವ ಕೆನರಾ ಕಾಲೇಜು ಬೇಡವೆನಿಸಿ ಮತ್ತೆ ಸರ್ಕಾರಿ ಕಾಲೆಜಿಗೇ ಹೋಗುವುದರಲ್ಲಿದ್ದೆ.ಅಷ್ಟರಲ್ಲಿ ನನ್ನ ತಮ್ಮ ಈಶ್ವರ ಭಟ್ ಗೆ ಉಜಿರೆ ಕಾಲೇಜಿನಲ್ಲಿ ನಮ್ಮ ಸಂಬಂಧಿಕರಾದ ಅಲ್ಲಿನ ಭೌತಶಾಸ್ತ್ರ ಉಪನ್ಯಾಸಕರಾಸ   ಗಣಪಯ್ಯಾವರು ಸೀಟ್ ಕೊಡಿಸಿದ್ದರು.ಇವನ ಅಡ್ಮಿಷನ್ ಗೆ ಹೋಗಿದ್ದಾಗ ನಮ್ಮ ತಂದೆಯವರಲ್ಲಿ ನಾನೇನು ಮಾಡಿತ್ತಿರುವೆ ಎಂದು ಕೇಳಿ ಅವರಾಗಿ ಉಜಿರೆ ಕಾಲೆಜಿನಲ್ಲಿ ಬಿಎಸ್ಸಿಗೆ ಸೀಟು ಕೊಡಿಸಿದ್ದರು.ನಾನು ಬಿಎಗೆ ಸೇರುತ್ತೇನೆ ಎಂದಾಗ ಇಲ್ಲಿ ಒಳ್ಳೆಯ ಉಪನ್ಯಾಸಕರಿದ್ದಾರೆ.ಸಮಸ್ಯೆ ಆಗದು ಎಂದಯ ಬಿಎಸ್ಸಿಗೆ ಸೇರಿಸಿದರು

ಪಿಯು ಪಾಠಗಳ ಬೇಸ್ ಅರ್ಥವಾಗದ ಕಾರಣ ಬಿಎಸ್ಸಿಯ ಪಾಠಗಳೂ ನನಗೆ ಸರಿಯಾಗಿ ಅರ್ಥವಾಗಲಿಲ್ಲ.ಜೊತೆಗೆ ಇಂಗ್ಲಿಷ್ ಭಾಷೆಯ ಸಮಸ್ಯೆ

ಒಮ್ಮೆ ಫಿಸಿಕ್ಸ್ ಪ್ರಾಕ್ಟಿಕಲ್ ಮಾಡುತ್ತಾ ಕೇಶವ ಭಾರತಿ ಎಂಬ ಉಪನ್ಯಾಸಕರು ಬಿಎಸ್ಸಿ ಅಷ್ಟು ಕಷ್ಟವೆನಿಸುದಾದರೆ ಮುಂದೆ ಡಿಗ್ರಿಯಲ್ಲಿ ಕಲಿತ ಭಾಷೆಗಳಲ್ಲಿ ಎಂಎ ಮಾಡಲು ಆಗುತ್ತದೆ ಎಂದು ತಿಳಿಸಿದ್ದರು

ಕೊನೆಯ ಬೆಂಚಿನ ಹುಡುಗಿಯಾದಾಗ ಎದುರಿಸಿದ ಅವಮಾನ ,ಹೀಯಾಳಿಕೆ ಕೀಳರಿಮೆ ನನ್ನನ್ನು ಹದಗೆಡಿಸಿದ್ದವು.

ಈಗ ಸಂಸ್ಕೃತ ಎಂಎ ಮಾಡಲು ಆಗುತ್ತದೆ ಎಂಬ ವಿಚಾರ ಗೊತ್ತಾಗಿ ಮತ್ತೆ ಭರವಸೆ ಹುಟ್ಟಿತು.

ಹೇಗೋ ಬಿಎಸ್ಸಿ ಪಾಸಾಗಿ ಮುಂದೆ ಎಂಎ ಮಾಡಬಹುದೆನಿಸಿತು.ಆಗ ಅಲ್ಲಿಯೇ ಇದ್ದ ಸಹಪಾಠ ರವಿರಾಜನಲ್ಲಿ ನಾನು ಮುಂದೆ ಈ ಸಯನ್ಸ್ ಓದಿ ಜಸ್ಟ್ ಪಾಸಾಗುವ ಬದಲಯ ಎಂಎಗೆ ಸೇರಿ ರ‌್ಯಾಂಕ್ ತೆಗೆಯುತ್ತೇನೆ ಎಂದಿದ್ದೆ.ಅದನ್ನು ಕೇಳಿಸಿಕೊಂಡಿದ್ದ ಕೇಶವ ಭಾರತಿಯವರು ಗುಡ್ ಲಕ್ಷ್ಮೀ,ಯು ಕ್ಯಾನ್ ಎಂದು ಬೆಂಬಲದ  ಮಾತನಾಡಿದ್ದರು

ಅಂತೂ ಇಂತೂ ಬಿಎಸ್ಸಿ ಮುಗಿಸಿ ಸಂಸ್ಕೃತ ಎಂಎಗೆ ಓದಿ ಮೊದಲ ರ‌್ಯಾಂಕ್ ತೆಗೆದು ಯಶಸ್ಸನ್ನು ಗಳಿಸಿದ್ದೆ.ಮತ್ತೆ ಕೊನೆಯ ಬೆಂಚಿನಿಂದ ಮೊದಲ ಬೆಂಚಿಗೆ ಬಂದಿದ್ದೆ

ಕೊನೆಯ ಬೆಂಚಿನವರು ಎದುರಿಸುವ ಅವಮಾನ ಕಷ್ಟಗಳು ಒಂದೆರಡಲ್ಲ.ನೊಟ್ಸಿಗೆ ಇತರರನ್ನು ಗೋಗರೆಯಬೇಕು.ಅವರಿಗೆ ಸದಾ ಡೊಂಕು ಸಲಾಮು ಹಾಕಬೇಕು ಪ್ರಾಕ್ಟಿಕಲ್ ಗಳಿಗೂ ಅವರದೇ ಸಹಾಯ ಬೇಕು‌

ಅದಕ್ಕಾಗಿ ನಾನು ಜಾಣ ಮಕ್ಕಳಿಗೆ ಅಗಾಗ ಸ್ವಿಟ್ಸ್ ಹೂವನ್ನೆಲ್ಲ ತಗೊಂಡು ಹೋಗಿ ಕೊಟ್ಟು ಸಂತೋಷಪಡಿಸುತ್ತಿದ್ದೆ

ಇನ್ನು ಉಪನ್ಯಾಸಕರ ಅವಜ್ಞೆಯನ್ನು ಎದುರಿಸಬೇಕು.ನಾವೆಲ್ಲ ಏನಿದ್ದರೂ ಮದುವೆಯಾಗಿ ಎರಡು ಮಕ್ಕಳ ಹೆತ್ತು ಅಡಿಗೆ ಮಾಡಲು ಮಾತ್ರ ಯೋಗ್ಯರೆಂದು ಭಾವಿಸಿದ್ದು ಅವರ ನಿರ್ಲಕ್ಷ್ಯದ ನೋಟ ನಮಗೆ ಅರಿವಿಗೆ ಬರುತ್ತಿತ್ತು.ಪ್ರಶ್ನೆ ಕೇಳಿದಾಗ ಉತ್ತರ ಗೊತ್ತಿದ್ದರೂ ಹೇಳಲಾಗದ ಕೀಳರಿಮೆ ಕಾಡುತ್ತಿತ್ತು.ಏನು ಮಾಡುದು

.ಅನುಭವಿಸಲೇ ಬೇಕಿತ್ತು

ನನ್ನ ಈ ಅನುಭವವೇ ಕಾರಣವೋ ಏನೊ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ನನಗೆ ವಿಶೇಷ ಒಲವು.ಅವರನ್ನು ಹೇಗಾದರೂ ಮಾಡಿ ಪಾಸಾಗುವಂತೆ,ಒಳ್ಳೆಯ ಅಂಕ ಗಳಿಸುಂತೆ ,ಅವರಲ್ಲಿ ಆತ್ಮ ವಿಶ್ವಾಸ ಹುಟ್ಟುವಂತೆ ಮಾಡುತ್ತೇನೆ .

ಮಕ್ಕಳು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವುದು ಸಹಜ.ಚೀಟಿ ಇಟ್ಟು ಬರೆಯುವುದು,ಪುಸ್ತಕ ಪೆನ್ನು ಕಳ್ಳತನ ಮಾಡುವ ಕೆಲವು ಮಕ್ಕಳೂ ಇರ್ತಾರೆ.ಅವರ ತಪ್ಪನ್ನು ಅವರಿಗೆ ಮನವರಿಕೆ ಮಾಡಿ ಸರಿ ದಾರಿಯಲ್ಲಿ ನಡೆಸುತ್ತೇನೆಯೇ ಹೊರತು ಅವರನ್ನು ಕಳ್ಳ ಕಾರನ್ನು ರೌಡಿಗಳನ್ನು ಕಾಣುವಂತೆ ಕಂಡು ಅವರು ಇನ್ನಷ್ಟು ಉಡಾಫೆಗಳಾಗುವಂತೆ ಮಾಡುವುದಿಲ್ಲ.ಸಣ್ಣ ತಪ್ಪು ಮಾಡಿದವರಿಗೆ ಹೆಚ್ಚು ಗಮನ ಕೊಡುವ ಅಗತ್ಯವಿರುತ್ತದೆ ಕೆಲವರು ಗಮನ ಸೆಳೆಯುವ ಸಲುವಾಗಿಯೇ ಉಡಾಫೇ ಮಾಡುತ್ತಾರೆ.ಎಂತಹ ಉಡಾಫೆ ಮಕ್ಕಳೂ ನನ್ನ ತರಗತಿಯಲ್ಲಿ ಒಂದೆರಡು ವಾರಗಳಲ್ಲಿ ಎಲ್ಲರಂತಾಗುತ್ತಾರೆ.ಅಗತ್ಯವಾದಲ್ಲಿ ತೋರಿಕೆಯ ಕಠಿಣತೆಯನ್ನೂ  ತೋರಿಸಬೇಕಾಗುತ್ತದೆ.ನಂತರ ಪ್ರೀತಿಯಿಂದ ಮಕ್ಕಳ‌ಮನಸನ್ನು ಗೆಲ್ಲಬೇಕಾಗುತ್ತದೆ ಎಂಬುದನ್ನು ಅನುಭವದಿಂದ ಕಂಡುಕೊಂಡಿರುವೆ‌



Wednesday, 1 September 2021

ಬದುಕ ಬಂಡಿ,ನಾನು ಹೀಗಿದ್ದಿರಬಹುದೇ ?

 ನಾನು ಹೀಗಿದ್ದಿರಬಹುದೇ ?

ಕೃಷ್ಣಾಷ್ಟಮಿಯಂದು ರಾತ್ರಿ ಕೃಷ್ಣ ಕಾಣಿಸುತ್ತಾನೆಂದೇ ನಾನು ನಂಬಿದ್ದೆ..

ನಮ್ಮಲ್ಲಿ ಕೃಷ್ಣಾಷ್ಟಮಿ ಬಗ್ಗೆ ಒಂದು ನಂಬಿಕೆ ಪ್ರಚಲಿತವಿತ್ತು‌.ಅಂದು ಕೃಷ್ಣನಿಗಾಗಿ ಪಾಯಸ ಉಂಡೆ ಮಾಡಿಕೊಂಡು ರಾತ್ರಿ ಚಂದ್ರನಿಗಾಗಿ ಕಾಯುತ್ತಾ ಇದ್ದರು‌.ರಾತ್ರಿ ಚಂದ್ರನಲ್ಲಿ ಕೃಷ್ಣ ಕೊಳಲನೂದುತ್ತಾ ಕಾಣಿಸುತ್ತಾನೆ ಎಂದು ಹಿರಿಯರು ಹೇಳುತ್ತಾ ಇದ್ದರು.ಚಿಕ್ಕಂದಿನಲ್ಲಿ ನಾನದನ್ನು ನಂಬಿದ್ದೆ.ಚಂದ್ರನಲ್ಲಿ ಕೃಷ್ಣ ಕೊಳಲನೂದುತ್ತಾ ಬರುವುದನ್ನು ನೋಡಬೇಕೆಂಬ ಆಸೆಯಿಂದ ರಾತ್ರಿ ಸುಮಾರು ಹೊತ್ತಿನವರೆಗೆ ಎಚ್ಚರದಿಂದ ಇರುತ್ತಿದ್ದೆ‌.ಆದರೆ ಹನ್ನೆರಡು ಗಂಟೆ ಆಗುವಷ್ಟರಲ್ಲಿ ನನಗೆ ನಿದ್ದೆ ಬಂದಿರುತ್ತಿತ್ತು.ಮತ್ತೆ ಮರುದಿನ ಬೆಳಿಗ್ಗೆ ಎದ್ದು"  ಛೇ ಕೃಷ್ಣನನ್ನು ನೋಡಲಾಗಲಿಲ್ಲವಲ್ಲ! ಮುಂದಿನ ವರ್ಷ ಕಾದು ಕುಳಿತು ನೋಡಬೇಕೆಂದು ನಿರ್ಧಾರ ಮಾಡುತ್ತಾ ಇದ್ದೆ..ಮತ್ತೆ ಇದೇ ಕಥೆ ಪುನರಾವರ್ತನೆ ಆಗುತ್ತಾ ಇತ್ತು.

ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಬಾಲಕಲೋತ್ಸವದಲ್ಲಿ ನೃತ್ಯ ಸ್ಪರ್ಧೆಯಲ್ಲಿ  ನಮ್ಮ ಮೀಯಪದವು ವಿದ್ಯಾ ವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ತಂಡ ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ಹಾಡಿಗೆ ನೃತ್ಯ ಮಾಡಿದ್ದು ಅದರಲ್ಲಿ ಗೋಪಿಕಾ ಸ್ತ್ರೀಯರೊಂದಿಗಿನ ತುಂಟ ಕೃಷ್ಣನಾಗಿ ನಾನು ಹೆಜ್ಜೆ ಹಾಕಿದ್ದೆ.ನೃತ್ಯ ಹೇಳಿಕೊಡುವಾಗ ನಮ್ಮ ಶಿಕ್ಷಕರಾದ ವಸಂತ ಮಾಸ್ಟರ್ ಮತ್ತು ಸರೋಜಾ ಟೀಚರ್ ಕೃಷ್ಣ ನಗುತ್ತಾ ಇರಬೇಕೆಂದು ಹೇಳುತ್ತಿದ್ದರು..ನಾನು ಕೃತಕವಾಗಿ ನನ್ನ ಚೆಟ್ಟು ಹಲ್ಲು ಪೂರ್ತಿಯಾಗಿ ಕಾಣುವಂತೆ ಹಲ್ಲು ಬಿಡುತ್ತಿದ್ದೆ.ಸ್ಪರ್ಧೆಯ ದಿನ ಸರೋಜಾ ಟೀಚರ್ ಹಾಗಲ್ಲ ಕೃಷ್ಣನಂತೆ ಮುಗುಳು ನಗು ಬರಬೇಕೆಂದು ಹೇಳಿದರು.. ಆಗ ಮತ್ತೆ ನಾನು ಒಮ್ಮೆಯೂ ಕೂಡ ಕೃಷ್ಣಾಷ್ಟಮಿಯಂದು ರಾತ್ರಿ ಕಾದು ಕುಳಿತು ಕೃಷ್ಣ ಹೇಗೆ ನಗುತ್ತಾನೆಂದು ನೋಡದ ಬಗ್ಗೆ ಪೇಚಾಡಿದ್ದೆ.ಮತ್ತೆ ಟೀಚರೇ ನಮಗೆ ಸ್ವಲ್ಪ ತುಟಿಯಗಲಿಸಿ ಹಲ್ಲು ಕಾಣದಂತೆ ಹೇಗೆ ಮುಗುಳು ನಗು ಬರಬೇಕೆಂದು ಹೇಳಿಕೊಟ್ಟರು..ಅಂತೂ ಇಂತೂ ನಮ್ಮ ಶಾಲೆಯ ತಂಡಕ್ಕೆ ಬಾಲಕಲೋತ್ಸವದಲ್ಲಿ ಬಹುಮಾನ ಬಂದಿತ್ತು...

ಏಳನೇ ತರಗತಿಯ ವಿದ್ಯಾರ್ಥಿನಿಗೆ ಅಷ್ಟೂ ಗೊತ್ತಿರಲ್ವಾ ? ಅಂತ ಆಕ್ಷೇಪ ಮಾಡಬೇಡಿ..ಮೂವತ್ತೆರಡು ಮೂವತ್ತಮೂರು ವರ್ಷದ ಹಿಂದೆ ನಮ್ಮ ಬಾಲ್ಯ ಹಾಗೆಯೇ ಇತ್ತು..ಆ ಮುಗ್ಧತನ ,ಆ ನಂಬಿಕೆ ಹಾಗೆಯೇ ಉಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಈಗ ಅನಿಸುತ್ತದೆ ..

ಅದು ಸರಿ  ನೃತ್ಯ ದಲ್ಲಿ ಕೃಷ್ಣನಾಗಿ ಹೆಜ್ಜೆ ಹಾಕಿದಾಗ ನಾನು ಹೇಗೆ ಕಾಣಿಸುತ್ತಿದ್ದೆ ? ಎರಡು ಬಾರಿ ನಾನು ಈ ನೃತ್ಯವನ್ನು ಮಾಡಿದ್ದೆ,ಮೊದಲನೆಯ ಐಲ ಶಾಲೆಯಲ್ಲಿ ನಡೆದ ಬಾಲಕಲೋತ್ಸವದಲ್ಲಿ, ಎರಡನೆಯ ಬಾರಿ ಅದೇ ವರ್ಷ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ .

ಆದರೆ ಎರಡು ಬಾರಿ ಕೃಷ್ಣನ ವೇಷ ಧರಿಸಿದಾಗ ಕೂಡ ನಾನು ಕನ್ನಡಿಯಲ್ಲಿ ನನ್ನ ಮುಖವನ್ನು ನೋಡಿಕೊಂಡಿರಲಿಲ್ಲ..ಆ ಕಾಲದಲ್ಲಿ ಫೋಟೋ ತೆಗೆಯುದೆಲ್ಲ  ಇರಲಿಲ್ಲ.. ಹಾಗಾಗಿ ಕೃಷ್ಣನಾಗಿ ನಾನು ಹೇಗಿದ್ದೆ ? ವಾರ್ಷಿಕೋತ್ಸವದಲ್ಲಿ ಆ ನೃತ್ಯ ನೋಡಿದ ನನ್ನಣ್ಣ  ಕೃಷ್ಣ ಭಟ್ ವಾರಣಾಸಿ( ಪ್ರಸ್ತುತ ಅಮೇರಿಕಾನಿವಾಸಿ)" ಕೊನೆಯಲ್ಲಿ ನೀನು ಕೊಳಲು ಹಿಡಿದು ಗೋಪಿಕಾ ಸ್ತ್ರೀ ಯರ ನಡುವೆ ನಿಂತಿದ್ದೆಯಲ್ಲ..ತುಂಬಾ ಚಂದ ಕಂಡಿದ್ದೆ ಎಂದು ಹೇಳಿದ್ದು ನನಗೆ ಯಾವಾಗಲೂ ನೆನಪಾಗುತ್ತದೆ.ಕೃಷ್ಣ ವೇಷ ಭೂಷಣ ಧರಿಸಿದ ಮುದ್ದು ಪುಟಾಣಿಗಳನ್ನು ನೋಡುವಾಗ ನಾನು ಹೀಗಿದ್ದರಬಹುದಾ ? ಎಂದು ಕಲ್ಪಿಸಿಕೊಳ್ಳುತ್ತೇನೆ‌‌..ಮತ್ತೆ ನಾನು ಇಷ್ಟು ಮುದ್ದಾಗಿರಲಿಕ್ಕಿಲ್ಲ ಎಂದುಕೊಳ್ಳುತ್ತೇನೆ‌..ನಮ್ಮ ಶಾಲೆಯ ಮದಂಗಲ್ಲು ಶ್ರೀನಿವಾಸ ಮಾಸ್ಟರ್ ಸಿಕ್ಕಾಗೆಲ್ಲ  ಕೊಳಲು ಹಿಡಿದ ಕೃಷ್ಣನ ಮುದ್ರೆಯನ್ನು ತೋರುತ್ತಾ ಎಂತ ಕೃಷ್ಣ ಕೂಸು ಎಂತ ಮಾಡುತ್ತಾ ಇದ್ದೆ ಈಗ ಎಂದು ಕೇಳುತ್ತಿದ್ದರು ..ಅವರು ಕೂಡ ನಮಗೆ ನೃತ್ಯ ,ನಾಟಕಾಭಿಯ ಮೊದಲಾದವುಗಳನ್ನು ಹೇಳಿಕೊಟ್ಟಿದ್ದರು‌.ನನಗೆ ಮುಖಕ್ಕೆ ಬಣ್ಣ ಹಾಕಿ ಕೃಷ್ಣನನ್ನಾಗಿ ಮಾಡಿದವರು ಕೂಡ ಅವರೇ 


Friday, 2 July 2021

ಯಮರಾಜನಿಗೊಂದು ತ್ಯಾಂಕ್ಸ್ ಹೇಳಲಿಕ್ಕಿದೆ

 ಅದು 2015 ರ ನವೆಂಬರ್ ತಿಂಗಳಿನ ಒಂದು ದಿನ

ಮಗ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಾಇದ್ದ.ಮಧ್ಯಾವಧಿ ರಜೆಯಲ್ಲಿ ಹಾಸ್ಟೆಲಿನಿಂದ ಮನೆಗೆ ಬಂದಿದ್ದ.

ಆಗ ನಾವು ಮೊದಲಿದ್ದ ಸಣ್ಣ ಮನೆಯಲ್ಲಿ ಇದ್ದೆವು

ಎರಡು ಬೆಡ್ ರೂಮಿನ ಸಣ್ಣ ಮನೆ.ಒಂದು ಬೆಡ್ ರೂಮ್ ನಮ್ಮ ಪುಸ್ತಕಗಳನ್ಮು ಇನ್ನಿತರ ವಸ್ತುಗಳನ್ನು ತುಂಬಿಡುವ ಜಾಗವಾಗಿತ್ತು.

ಇನ್ನೊಂದು ರೂಮು,ಹಾಲ್ ಮಾತ್ರ ಬಳಕೆಗೆ ಸಿಗುತ್ತಾ ಇತ್ತು

ಪ್ರಸಾದ್ ಮತ್ತು ಮಗ ಹಾಲಿನಲ್ಲಿ ಮಲಗಿ ನಡು ರಾತ್ರಿ ತನಕ ಪಟ್ಟಾಂಗ ಹೊಡೆಯುತ್ತಾ ಇದ್ದರು

ರಾತ್ರಿ ಹನ್ನೆರಡು ಕಳೆದಾಗ ಮಾತನಾಡಿದ್ದು ಸಾಕು..ಮಲಗಿ ಇನ್ನು..ಜೀವನ ಇಡೀ ಇದೆ ಮಾತನಾಡಲು ಎಂದು ಸ್ವಲ್ಪ ಗದರಿ ಹೇಳಿದೆ ಅದಕ್ಕೆ ಮೊದಲು ಮಲಗಿ ಮಲಗಿ ಇನ್ನು ಎಂದು ಹೇಳಿ ಹೇಳಿ  ಸಾಕಾಗಿತ್ತು.ಒಂದೆರಡು ಕ್ಷಣ ಮಾತು ನಿಲ್ಲಿಸ್ತಾ ಇದ್ದರು ನಂತರ ಪಿಸು ಮಾತು ಶುರುವಾಗಿ ಜೋರಾಗುತ್ತಾ ಇತ್ತು

ಹಾಗಾಗಿ ನಾ‌ನೂ ಸ್ವಲ್ಪ ಕೃತಕ ಕೋಪ ತರಿಸಿಕೊಂಡು ತುಸು ಗಟ್ಟಿಯಾಗಿಯೇ ಹೇಳಿದೆ.ಇಬ್ಬರೂ ಮಾತು ನಿಲ್ಲಿಸಿದರು

ನನಗೂ ನಿದ್ರೆ ಬಂತು.

ಕಣ್ಣಿಗೆ ನಿದ್ರೆ ಹಿಡಿದು ಹೆಚ್ಚು ಹೊತ್ತಾಗಿರಲಿಲ್ಲ.ಏನೋ ವಿಚಿತ್ರ ಸದ್ದು ಕೇಳಿಸಿ ಎಚ್ಚರಾಯಿತು.ಅಷ್ಟರಲ್ಲಿ ಮಗ ಲೈಟ್ ಹಾಕಿ ಅಮ್ಮ ಅಪ್ಪನಿಗೆ ಏನೋ ಆಗಿದೆ ಬಾಎಂದು ಕೂಗಿ ಕರೆದ.

ನೋಡಿದರೆ ಪ್ರಸಾದ್ ಗೆ ಎಚ್ಚರವಿರಲಿಲ್ಲ.ಬಾಯಿಯಲ್ಲಿ ರಕ್ತ ಬಂದಿತ್ತು.ಎದೆಗೆ ಕಿವಿಗೊಟ್ಟರೆ ಹೃದಯ ಬಡಿತದ ಸದ್ದು ಕೇಳಲಿಲ್ಲ.ಉಸಿರಾಡುತ್ತಲೂ ಇರಲಿಲ್ಲ.ಮಗ ಕೂಡಲೇ ಎದೆ ಒತ್ತಿ ಸಿಪಿಆರ್ ಕೊಟ್ಟ ಜೊತೆಗೆ ಒಂದು ಬದಿಗೆ ಮಲಗಿಸಿದಾಗ ಬಾಯಿಯಿಮದ ರಕ್ತ ಎಲ್ಲ ಹೊರಗೆ ಬಂತು

ಮತ್ತೆ ಪುನಃ ಮಗ ಸಿಪಿ ಆರ್ ಜೊತೆಗೆ ಬಾಯಿ ಮೂಲಕ ಉಸಿರು ನೀಡಿದ.ನಾಲ್ಕೈದು ನಿಮಿಷ ಮಾಡುತ್ತಲೇ ಇದ್ದ.

ಈ ಹೊತ್ತಿನಲ್ಲಿ ಸಮೀಪ ಪಾರ್ಟಿಸ್ ಹಾಸ್ಪಿಟಲ್ ನ ಅಂಬುಲೆನ್ಸ್ ಗೆ ಕರೆ ಮಾಡಲು ಹೊರಟರೆ ನಂಬರೇ ಸಿಗುತ್ತಾ ಇಲ್ಲ

ಆತಂಕದ ಕ್ಷಣದಲ್ಲಿ ಕಣ್ಣು ಕತ್ತಲಾಗುದು ಮೈಂಡಗ ಬ್ಲಾಂಕ್ ಆಗುದೆಂದರೆ ಏನೆಂದು ಆಗಲೇ ಗೊತ್ತಾದದ್ದು ನನಗೆ

ನಂತರ ಅರವಿಂದನೆ 108 ಕ್ಕೆ ಕರೆ ಮಾಡು ಎಂದ.ಅವನು ನಿರಂತರ ಬಾಯಿ ಮೂಲಕ ಉಸಿರಾಟ ಮತ್ತು ಸಿಪಿಆರ್ ಕೊಡುತ್ತಲೇ ಇದ್ದ

ದುರದೃಷ್ಟಕ್ಕೆ ಕರೆಂಟ್ ಬೇರೆ ಹೋಯ್ತು..ಏನಾಗ್ತಿದೆ ಎಂದು ಕಾಣಲಾರದಾಯಿತು.ಅಂತೂ ಕತ್ತಲಲ್ಲಿ ಪರದಾಡಿ ಮೊಬೈಲ್ ಹುಡುಕಿ ತರುವಷ್ಟರಲ್ಲಿ ಪ್ರಸಾದ್ ದೊಡ್ಡದಾಗಿ ಸದ್ದು ಮಾಡಿ ಉಸಿರೆಳೆದುಕೊಂಡರು.ನಂಯರ ಉಸಿರಾಡಲು ಶುರು ಮಾಡಿದರು‌.ಎದೆ ಕೂಡ ಅದಾಗಿಯೇ ಬಡಿಯಲು ಆರಂಭಿಸಿತು.

ಸ್ವಲ್ಪ ಹೊತ್ತಿಗೆ ಮನೆ ಎದುರಿನ ರಸ್ತೆಯಲ್ಲಿ ಬಂದ ಆಂಬುಲೆನ್ಸ್  ಮನೆ ದಾಟಿ ಮುಂದೆ ಹೋಯಿತು

ಅರವಿಂದ ಓಡಿ ಹೋಗಿ ಅದನ್ನು ಹಿಂದೆ ತರಲು ಹೋದ

ಪ್ರಸಾದರಿಗೆ ಎಚ್ಚರ ಬಂದ ಹಾಗೆ ಅನಿಸಿ ಅವರ ಮುಖಕ್ಕೆ ಮೊಬೈಲ್ ಲೈಟ್ ಹಾಕಿದೆ..ಪ್ಚೀ.ಎಂದು ತುಸು ರೇಗಿ ಇನ್ನೊಂದು ಬದಿಗೆ ಮುಖ ಮಾಡಿ ಮಲಗಿದರು.

ಅವರಿಗೆ ಎಚ್ಚರ ಬಂದದ್ದು ಕನ್ಫರ್ಮ್ ಆಯಿತು

ಅಷ್ಟರಲ್ಲಿ ಅಂಬುಲೆನ್ಸ್ ನಿಂದ ಸಿಸ್ಟರ್ ಬಂದು ಪರಿಕ್ಷಿಸಿದರು.ಏನಾಯಿತು ಕೇಳಿದರೆ ಪ್ರಸಾದ್ ಉತ್ತರಿಸಲಿಲ್ಲ.ತಿರುಗಿ ಮಲಗಿದರು.

ನಂತರ ಅವರಿಗೆ ವಿಷಯ ತಿಳಿಸಿ ಮತ್ತೆ ಪುನಃ ಹಾಗೆ ಆದರೆ ಕಷ್ಟ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿ ಬರುವ ಎಂದು ಹೇಳಿದೆವು

ಅವರೇ ಬಂದು ಅಂಬುಲೆನ್ಸ್ಏರಿದರು.ನಾನು ಸಿಕ್ಕಿದ ಡ್ರೆಸ್ ಹಾಕಿಕೊಂಡು ಮಗನ ಜೊತೆ ಹೋದೆ

ಎಮರ್ಜೆನ್ಸ್ ಕೇರ್ ಗೆ ಹೋಗಿ ವಿಷಯ ತಿಳಿಸಿದೆವು

ಪ್ರಸಾದರಿಗೆ ಏನಾಗಿತ್ತು ಎಂದು ಗೊತ್ತಾಗಿರಲಿಲ್ಲ

ಈಗ ನೋಡುವಾಗ ಯಾವುದೇ ಸಮಸ್ಯೆ ಕಾಣ್ತಿಲ್ಲ ಸಿಟಿ ಸ್ಕಾನ್ ಇನ್ನಿತರ ಟೆಸ್ಟ್ ಮಾಡಿ ನೊಡ್ತೇವೆ ಎಂದು ಅಬ್ಸರ್ ವೇಷನ್ ಗಾಗಿ ಐಸಿಯುಗೆ ಶಿಪ್ಟ್ ಮಾಡಿದರು

ನಾನು ಮಗ ಹೊರಗೆ ಕಾಯ್ತಾ ಇದ್ದೆವು

ಅರ್ಧ ಒಂದು ಗಂಟೆಯ ನಂತರ ವೈದ್ಯರು ಕರೆದು ಸಿಟಿ ಸ್ಕಾನಿಂಗ್ ನಾರ್ಮಲ್ ಇದೆ‌.ನಾಳೆ ಹೃದಯ ತಜ್ಞರು ನರ ರೋಗ ತಜ್ಞರು ಬಂದು ನೋಡ್ತಾರೆ ಎಂದರು.ಅಲ್ಲಿಯೇ ಕಾಯುವ ಲಾಂಜ್ ನಲ್ಲಿ ಒಂದು ಸಣ್ಣ ಕಾಟ್ ನಲ್ಲಿ ನಾನು‌ ಮಗ ಕೈಕಾಲು ಮುದುರಿಕೊಂಡು ಮಲಗಿದೆವು

ಆತಂಕ ಕಡಿಮೆಯಾಗಿ ಸಣ್ಣಕೆ ಕಣ್ಣಿಗೆ ನಿದ್ರೆ ಹತ್ತಿತ್ತು.

ಅಷ್ಟರಲ್ಲಿ ಗಾರ್ಡ್ ಬಂದು ಎಬ್ಬಿಸಿದರು.ಏನು ಎಂದು ಕೇಳಿದೆ.ತಾಯಿ ಮಗನಾ ಕೇಳಿದರು ನಮ್ಮಿಬ್ಬರನ್ನು ನೋಡುತ್ತಾ ..ಹೌದೆಂದೆ...ಸರಿ ಸರಿ ಮಲಗಿ ಎಂದು ಹೊರಗೆ ಹೋದರು.ಮಗ ಪಿಯುಸಿ ಓದುತ್ತಿದ್ದರೂ ಭರ್ತಿಯಾಗಿ ಬೆಳದಿದ್ದು 24 -25 ರ ಯುವಕನಂತೆ ಕಾಣುತ್ತಿದ್ದ.ನನ್ನ ಕಾಲ ಬುಡದಲ್ಲಿ ಮುದುರಿ‌ಮಲಗಿದ್ದ ಗಾರ್ಡ್ ಗೆ ಏನೋ ಗೊಂದಲವಾಗಿ ಎಬ್ಬಿಸಿದ್ದಿರಬೇಕು

ಅಷ್ಟರಲ್ಲಿ ಬೆಳಕಾಯಿತು

ಪ್ರಸಾದ್ ಅಫೀಸಿಗೆ ಸುದ್ದಿ ತಿಳಿಸಿದೆ ಅವರ ಬಾಸ್ ಆಫೀಸಿನ ಇಬ್ಬರು ಸ್ಟಾಫನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು

ಬೇರೆ ಬೇರೆ ತಜ್ಣ ವೈದ್ಯರುಗಳೆಲ್ಲ ಬಂದು ನಾನಾವಿಧ ಪರೀಕ್ಷೆಗಳನ್ನು ಮಾಡಿದರು.

ಎಲ್ಲವೂ ನಾರ್ಮಲ್.ಎರಡು ದಿನಗಳಲ್ಲಿ‌ಮನೆಗೆ ಬಂದೆವು.

ಆ ದಿನ ಆದದ್ದೇನು ಎಂದು ವೈದ್ಯರಿಗೂ ಗೊತ್ತಾಗಿರಲಿಲ್ಲ.

ಅದೇ ಮೊದಲು‌ಮತ್ತು ಕೊನೆ..ಮತ್ತೆ ಆಗಲಿಲ್ಲ

ಆದರೆ ಒಂದು ಕಾಕತಾಳೀಯ ವಿಚಾರ ನಡೆದಿತ್ತು

ಈ ಘಟನೆ ನಡೆದ ಮರುದಿನ ಪ್ರಸಾದರದೇ ವಯಸ್ಸಿನ ದೊಡ್ಡ ಮಾವನವರ ಮಗ ಮೈದುನ ಅಶೋಕ ಭಟ್ ಪಂಜಿಗದ್ದೆ  ಆಕ್ಸಿಡೆಂಟಿನಲ್ಲಿ ತೀರಿ ಹೋಗಿದ್ದ 

ಯಮರಾಯ ಗೊಂದಲವಾಗಿ ನಮ್ಮನೆಗೆ ಬಂದು ಇವನಲ್ಲ ಎಂದರಿತು ಹಿಂದೆ ಹೋಗಿ ಮೈದುನನ ಆಯುಷ್ಯ ಮುಗಿದಿದೆ ಎಂದವನ ಪ್ರಾಣವನ್ನು ಹಿಡಿದುಕೊಂಡು ಹೋದನೇ ?

ಅದೇನೇ ಇರಲಿ‌‌.ನಮ್ಮನ್ನು ಬಿಟ್ಟು ಹೋದ ಯಮರಾಜನಿಗೆ ನಮನ..

ಮುಂದೆ ಎಂದಾದರೂ ಬರುವನಲ್ಲ..ಆಗವನಿಗೆ ಒಂದು ತ್ಯಾಂಕ್ಸ್ ಹೇಳಲಿಕ್ಕಿದೆ.ಅಕಾಲದಲ್ಲಿ ಕೊಂಡೊಯ್ಯದೆ ಬದುಕಲು ಬಿಟ್ಟದ್ದಕ್ಕಾಗಿ

ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ಎಲ್ಲರೂ ಸಾಯಲೇ ಬೇಕು.ಅದು ವಿಧಿ ನಿಯಮ ಅದನ್ನು ಮೀರಲು ಸಾಧ್ಯವಿಲ್ಲ.ಅದರೆ ಮಕ್ಕಳು ಮರಿಗಳ ಜವಾಬ್ದಾರಿ ಕಳೆದಕೊಳ್ಳುವ ತನಕ ಬದುಕುದೂ ಕೂಡ ನಮ್ಮ ಕರ್ತವ್ಯ.

ಅದಕ್ಕಾಗಿ ಕಾಲ‌ಕಾಲಕ್ಕೆ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು.ಅಗತ್ಯವಿದ್ದರೆ ತಜ್ಣ ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳಬೇಕು

ನಿಯತವಾದ ವ್ಯಾಯಾಮ ಹಿತ ಮಿತವಾದ ಆಹಾರ ಸ್ವೀಕರಿಸಬೇಕು

ಎಲ್ಲವನ್ನು  ಮಾಡಿದರೂ ಕೆಲವೊಮ್ಮೆ ಉಹಿಸದೇ ಇದ್ದದ್ದು ಘಟಿಸಿಹೋಗುತ್ತದೆ.ಆಗ ಉಳಿದವರು ಯಾರೂ ಈ ಭೂಮಿಯಲ್ಲಿ ಶಾಶ್ವತರಲ್ಲ. ಬದುಕನ್ನು ಧೈರ್ಯವಾಗಿ ಎದುರಿಸಬೇಕು.