ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆಯಿದೆ
..ಆದರ್ಶಗಳ ಬೆಂಬತ್ತಿದೆ ಕಲ್ಲಡ್ಕದ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ
1996ರ ಎಪ್ರಿಲ್ ಮೇ ತಿಂಗಳಿನಲ್ಲಿ ನಮ್ಮ ಅಂತಿಮ ವರ್ಷದ ಸಂಸ್ಕೃತ ಎಂಎ ಪರೀಕ್ಷೆ ನಡೆಯಿತು
ಪರೀಕ್ಷೆಗೆ ಮೊದಲೇ ಕೆಲಸದ ಹುಡುಕಾಟ ಶುರು ಮಾಡಿದ್ದೆ.ಒಂದೆಡೆ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ.ಇನ್ನೊಂದೆಡೆ ಸಂಸ್ಕೃತ ಎಂಎ ಓದಲು ಹೊರಟಾಗ ಎಂಎ ಮಾಡಿದವರು ನಾಯಿ ಸಂತೆ ಇದ್ದಾರೆ..ಕೆಲಸ ಎಲ್ಲಿ ಸಿಗುತ್ತದೆ ಎಂಬ ಮಾತು ಎದುರಾಗಿತ್ತು.ಮೃತ ಭಾಷೆ ಕಲಿತೇನು ಮಾಡುತ್ತಿ ಎಂಬ ಮಾತುಗಳೂ ಬಂದಿದ್ದವು.ಜೊತೆಗೆ ಕೆಲಸ ಹಿಡಿದು ಗೆಲ್ಲಲೇಬೇಕೆಂಬ ದೃಢ ನಿರ್ಧಾರದಿಂದ ಮನೆಯಿಂದ ಕಾಲು ಹೊರಗಿಟ್ಟವಳು ನಾನು..
ಈ ಸಂದರ್ಭದಲ್ಲಿ ನಮಗೆ ಸಂಸ್ಕೃತ ಪ್ರಶಿಕ್ಷಣ ಶಿಬಿರದಲ್ಲಿ ಶಿಕ್ಷಕಿಯಾಗಿದ್ದ ಯಶೋದಾ ಭಗಿನಿ ( ಹೆಸರು ಸರಿಯಾಗಿ ನೆನಪಿಲ್ಲ) ನನಗೆ ಆತ್ಮೀಯರಾಗಿದ್ದರು.ಅವರು ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆ ಖಾಲಿ ಇರುವ ಬಗ್ಗೆ ತಿಳಿಸಿ ಕಲ್ಲಡ್ಕ ಪ್ರಭಾಕರ ಭಟ್ರ ಬಳಿಗೆ ಕರೆದುಕೊಂಡು ಹೋದರು.
ಕಲ್ಲಡ್ಕ ಪ್ರಭಾಕರ ಭಟ್ರ ಬಗ್ಗೆ ನಾನು ಪದವಿ ಓದುತ್ತಿರುವಾಗಲೇ ನನ್ನ ಎಳೆಯ ಗೆಳತಿ ಮಂಗಳಾಳ ಬಾಯಿಯಿಂದ ಬಹಳಷ್ಟು ಕೇಳಿದ್ದೆ.ನೂರಾರು ಕರಸೇವಕರನ್ನು ಸಾವಿನ ದವಡೆಯಿಂದ ಅವರು ಪಾರು ಮಾಡಿದ್ದು ಸೇರಿದಂತೆ ಹಲವು ಕಥೆಗಳನ್ನು ಹೇಳಿದ್ದಳು.ಜೊತೆಗೆ ನನ್ನ ಅತ್ತೆಯವರು ಪ್ರಭಾಕರ ಭಟ್ ಮತ್ತು ಕಮಲಕ್ಕನ ದೊಡ್ಡ ಅಭಿಮಾನಿಯಾಗಿದ್ದರು.ಹಾಗಾಗಿ ಸಹಜವಾಗಿಯೇ ನನಗೆಅವರ ಬಗ್ಗೆ ಭಕ್ತಿ ಗೌರವ ಇತ್ತು.
ಆ ದಿನ ಪರಿಚಯವಾಯಿತು.ಅವರ ಕ್ಲಿನಿಕಿನಲ್ಲಿಯೇ ಒಂದೆರಡು ಪ್ರಶ್ನೆ ಕೇಳಿ ಸಂದರ್ಶನ ಮಾಡಿ ಮರುದಿನದಿಂದ ಬರಲು ಹೇಳಿದರು.
ಮರುದಿನವೇ ಹೋಗಿ ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದ ಸಂಸ್ಕೃತ ಶಿಕ್ಷಕಿಯಾಗಿ ಸೇರಿದೆ.ನನ್ನ ವೇತನ ತಿಂಗಳಿಗೆ 750₹ ಅದರಲ್ಲಿ ಕಲ್ಲಡ್ಕಕ್ಕೆ ಹೋಗಿ ಬರಲು ಬಸ್ಸಿಗೆ ಸಾಕಷ್ಟು ಖರ್ಚಾಗುತ್ತಿತ್ತು.ಖರ್ಚು ಕಳೆದು 300₹ ನನಗೆ ಉಳಿಯುತ್ತಿತ್ತು.
ಅಲ್ಲಿ ಮುಖ್ಯೋಪಾಧ್ಯಾಯರಾಗಿ ಗೋಪಾಲರಾವ್ ಇದ್ದರು.ಬಹಳ ಸಹೃದಯಿ ಇವರು.ಸಂಧ್ಯಾ ಮಾತಾಜಿ ಸೇರಿದಂತೆ ( ಉಳಿದವರ ಹೆಸರು ನೆನಪಿಲ್ಲ) ಏಳೆಂಟು ಶಿಕ್ಷಕರಿದ್ದರು.
ನಾನು 1 ಜುಲೈ 1996 ರಂದು ಸೇರಿದೆ.ಎರಡನೇ ತಾರೀಕಿನಂದು ಅಲ್ಲಿನ ಅಷ್ಟ ಕುಟೀರಗಳ ಉದ್ಘಾಟನೆ ಇತ್ತು.ಅಲ್ಲಿ ಶಿಕ್ಷಕರಿಗೆ ಯುನಿಪಾರ್ಮ್ ಇತ್ತು.ನೀಲಿ ಸೀರೆ ಬಿಳಿ ರವಿಕೆ ತೊಡಬೇಕಿತ್ತು.ಮರುದಿನವೇ ಕಾರ್ಯಕ್ರಮ ಇದ್ದ ಕಾರಣ ನಾನು ಯುನಿಪಾರ್ಮ್ ನಲ್ಲಿಯೇ ಹೋಗಬೇಕಾಗಿತ್ತು.ಅಷ್ಟು ಬೇಗ ಒಂದೇ ದಿನದಲ್ಲಿ ಸೀರೆ ಎಲ್ಲಿಮದ ತರುದು...ಅದಕ್ಕೂ ಅಲ್ಲಿ ಪರಿಹಾರೋಪಾಯ ಸಿಕ್ಕಿತು.ಸಂಧ್ಯಾ ಮಾತಾಜಿ ಅವರ ಹಳೆಯ ಯುನಿಪಾರ್ಮ್ ನೀಲಿ ಸೀರೆ ತರ್ತೇನೆ.ಬಿಳಿ ರವಕೆ ಇದ್ದರಾಯಿತು ಎಂದರು.ಅದೃಷ್ಟಕ್ಕೆ ಬಿಳಿ ರವಿಕೆ ನನ್ನಲ್ಲಿ ಇತ್ತು.ಅಂತೂ ಬಿಳಿ ರವಿಕೆಗೆ ಹೊಂದುವ ಬೇರೆ ಸೀರೆ ಉಟ್ಡುಕೊಂಡು ಬಂದು ಶಾಲೆಯಲ್ಲಿ ಅವರು ತಂದು ಕೊಟದಟ ಹಳೆಯ ನೀಲಿ ಸೀರೆ ಉಟ್ಟು ಕಾರ್ಯಕ್ರಮದಂದು ತಯಾರಾದೆ.ಎಂದೂ ಅಕ್ಕಮತ್ತು ಅಮ್ಮನ ಹೊರತಾಗಿ ಅನ್ಯರ ಸೀರೆ ಬಟ್ಟೆ ಉಡದ ನಾನು ಅನಿವಾರ್ಯವಾಗಿ ಕೆಲಸಕ್ಕಾಗಿ ಅನ್ಯರ ಹಳೆಯ ಸೀರೆ ಉಟ್ಟೆ.ಆದರೆ ಅದನ್ನು ಕೊಟ್ಟ ಸಂಧ್ಯಾ ಮಾತಾಜಿ ನನಗೆ ಹಿರಿಯಕ್ಕನಂತೆಯೇ ನಂತರ ಆತ್ಮೀಯರಾಗಿದ್ದು ಅನ್ಯರ ಹಳೆಯ ಸೀರೆಯುಟ್ಟೆ ಎಂಬ ನೋವನ್ನು ದೂರ ಮಾಡಿತ್ತು
ಆಗ ಆ ಶಾಲೆಗೆ ಏನೇನೂ ಆದಾಯವಿರಲಿಲ್ಲ.ತೀರಾ ಕಡಿಮೆ ವೇತನ ಆದರೂ ಅಲ್ಲಿದ್ದ ಶಿಕ್ಷಕರ ಬದ್ದತೆ ಮರೆಯಲಾಗದ್ದು.
ಜೊತೆಗೆ ಅಲ್ಲಿನ ಶಿಸ್ತಿನ ವಾತಾವರಣ ,ಕಲ್ಲಡ್ಕ ಪ್ರಭಾಕರ ಭಟ್ ಕಮಲಕ್ಕನವರ ನಡವಳಿಕೆ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ.
ಇಂದಿಗೂ ನಾನು ನನ್ನ ಆದರ್ಶವನ್ನು ಬಿಟ್ಟು ಒಂದಿಂಚೂ ಕದಲದೇ ಇರುವುದಕ್ಕೆ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ನಾಲ್ಕೈದು ತಿಂಗಳು ಕೆಲಸ ಮಾಡಿದ್ದು ಕಾರಣ.ಅಚಲ ದೇಶ ಪ್ರೇಮ ,ದೇಶ ಭಾಷೆ ಸಂಸ್ಕೃತಿ ಕುರಿತಾದ ಪ್ರೀತಿ ಅನ್ಯಾಯದ ವಿರುದ್ಧ ದ್ವನಿಯೆತ್ತುವ ಬಗೆಯೇ ಮೊದಲಾದವುಗಳ ಪಾಠವನ್ನು ನಾನಿಲ್ಲಿ ಕಲಿತೆ
ನಂತರ 1997 ಜನವರಿಯಲ್ಲಿ ನನಗೆ ಮಂಗಳೂರಿನ ನಮ್ಮ ಮನೆ ಸಮೀಪದ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಾರ್ಟ್ ಟೈಮ್ ಕೆಲಸ ಸಿಕ್ತು ಹಾಗಾಗಿ ನಾನು ಕಲ್ಲಡ್ಕ ಶಾಲೆಯಿಂದ ನಿರ್ಗಮಿಸಿದೆ
ನನ್ನ ಮೊದಲ ಭಾಷಣವನ್ನು ಕೂಡ ಮಾಡಿದ್ದು ನಾನು ಇಲ್ಲಿಯೇ.ನಾನಲ್ಲಿದ್ದಾಗ ರಕ್ಷಾ ಬಂಧನದಂದು ನನಗೇ ಭಾಷಣ ಮಾಡಲು ಅಲ್ಲಿನ ಮುಖ್ಯೋಪಾಧ್ಯಾಯರಾಗಿದ್ದ ಗೋಪಾಲರಾಯರು ತಿಳಿಸಿ ನನಗೊಂದು ವೇದಿಕೆಯನ್ನು ನೀಡಿದ್ದರು.
ನಾನು ಬಿಟ್ಡು ಬಂದ ಕೊನೆಯ ದಿನ ಅವರೊಂದು ಮಾತು ಹೇಳಿದರು.ನಮ್ಮ ಕಡೆಯಿಂದ ಒಂದು ತಪ್ಪಾಗಿದೆ ಕ್ಷಮಿಸಬೇಕು ಆದರೆ .ನಾನು ಅಸಹಾಯಕ ಎಂದಿದ್ದರು.ಏನಾಗಿದೆ ಕೇಳಿದೆ..ನನಗೆ ಬೇಸರ ಆಗುವ ಒಂದೇ ಒಂದು ಸಣ್ಣ ವಿಚಾರವೂ ನಡೆದಿರಲಿಲ್ಲ
ಆಗವರು ಶಿಕ್ಷಕ ದಿನಾಚರಣೆಯಂದು ಸಂಸ್ಕೃತದಲ್ಲಿ ಮೊದಲ ರ್ಯಾಂಕ್ ಪಡೆದ ನಿಮ್ಮನ್ನು ನಾವು ಅಭಿನಂದಿಸಬೇಕಿತ್ತು.ಕಾರ್ಯಕ್ರಮಇಲ್ಲಿಯೇ ನಡೆದಿದ್ದರೆ ನಾನು ಖಂಡಿತಾ ಅಭಿನಂದನಾ ಕಾರ್ಯಕ್ರಮ ಇರಿಸುತ್ತಿದ್ದೆ
ಎಂದರು.ಶಿಕ್ಷಕ ದಿನಾಚರಣೆ ವಿವೇಕಾನಂದ ಕಾಲೇಜಿನಲ್ಲಿ ನಡೆದಿತ್ತು.ಯಾಕೆಂದು ನನಗೂ ಗೊತ್ತಿಲ್ಲ
ನನಗಷ್ಟರ ತನಕ ಆ ವಿಚಾರವೇ ತಲೆಗೆ ಹೋಗಿರಲಿಲ್ಲ.ಅಲ್ಲಿ ಕೆಲಸ ಮಾಡುತ್ತಿರಯವಾಗಲೇ ನಮ್ಮ ಎಂಎ ಫಲಿತಾಂಶ ಬಂದಿದ್ದು ನನಗೆ ಮೊದಲ ರ್ಯಾಂಕ್ ಬಂದಿತ್ತು.ಶಿಕ್ಷಣ ದಿನಾಚರಣೆಗೆ ಕೆಲ ದಿನಗಳ ಮೊದಲು ಫಲಿತಾಂಶ ಬಂದಿತ್ತು
ನನಗೆ ಕೆಲಸ ಸಿಕ್ಕಿದ್ದೇ ದೊಡ್ಡ ವಿಷಯವಾಗಿತ್ತು ಹಾಗಾಗಿ ಅಭಿನಂದನೆಯನ್ನೆಲ್ಲ ನಾನು ನಿರೀಕ್ಷೆಯೇ ಮಾಡಿರಲಿಲ್ಲ
ಹಾಗಾಗಿ ಗೋಪಾಲರಾಯರು ಹೇಳುವ ತನಕ ನನಗೆ ತಲೆಗೇ ಹೋಗಿರಲಿಲ್ಲ.ನಂತರ ನನಗೂ ಹೌದಲ್ವಾ ಎನಿಸಿತು
ಸಾಧನೆ ಮಾಡಿದ ಶಿಕ್ಷಕರನ್ನು ಶಿಕ್ಷಣ ದಿನಾಚರಣೆಯಂದು ಗೌರವಿಸುವ ಪದ್ಧತಿ ಎಲ್ಲೆಡೆ ಇದೆ
ಅಂದ ಹಾಗೆ ಕಲ್ಲಡ್ಕ ಶಿಕ್ಷಣ ಸಂಸ್ಥೆಯನ್ನು ಪರಿಚಯಿಸುವ ಮೊದಲ ಲೇಖನ ಬರೆದವಳೂ ನಾನೇ..ಇಲ್ಲಿನ ವಿಶಿಷ್ಟ ಶಿಕ್ಷಣ ದ ಮಾಹಿತಿಯನ್ನು ಸಂಸ್ಕೃತಿಗೊಂದು ಆಶಾ ಕಿರಣ ಎಂಬ ಶೀರ್ಷಿಕೆಯಲ್ಲಿ ಮಂಗಳ ಮತ್ತು ಹೊಸ ದಿಗಂತ ಪತ್ರಿಕೆಗಳಿಗೆ ಲೇಖನ ಬರೆದಿದ್ದು ಪ್ರಕಟವಾಗಿದ್ದವು.
ಇರಲಿ
ನಂತರ ನಾನು ಅಲೋಷಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಸೇರಿದೆ.ಆ ವರ್ಷ ವಾರ್ಷಿಕೋತ್ಸವದಂದು ರ್ಯಾಂಕ್ ವಿಜೇತ ಹಾಗೂ ಇತರ ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸಿದ್ದರು.ನನ್ನನ್ನೂ ಗೌರವಿಸಿದ್ದರು
ತಮ್ಮ ಶಿಕ್ಷಕರನ್ನು ಅಪಾರ ಗೌರವದಿಂದ ಕಾಣುವ ಸೈಂಟ್ ಅಲೋಷಿಯಸ್ ಕಾಲೇಜು ಬಗ್ಗೆ ಇನ್ನೊಂದು ದಿನ ಬರೆಯುವೆ ಬಾಯಿಯಲ್ಲಿ ಭಾಷಣ ಮಾಡುದು ಬೇರೆ ಕಾರ್ಯತಃ ಮಾಡಿ ತೋರಿಸುವುದು ಬೇರೆ..ಅಲೋಷಿಯಸ್ ಕಾರ್ಯತಃ ಮಾಡಿ ತೋರಿಸಿತ್ತು.
ಇಲ್ಲಿ ನನ್ನ ವೇತನ ತಿಂಗಳಿಗೆ 1500₹ ಮತ್ತು ಇದು ನಡೆದುಕೊಂಡು ಹೋಗಿ ಬರುವಷ್ಟು ಹತ್ತಿರ ಹಾಗಾಗಿ ಹೋಗಿ ಬರಲೆಂದು 1₹ ಕೂಡಾ ಖರ್ಚಿರಲಿಲ್ಲ.ವಾರಕ್ಕೆ ಮೂರು ದಿವಸದ ಕೆಲಸಕ್ಕೆ 1500₹ ಆಗ ನನಗೆ ನಿಜಕ್ಕೂ ದೊಡ್ಡದೆನಿಸಿ ಸಂತಸವಾಗಿತ್ತು.ಜೊತೆಗೆ ಬಹಳ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಅದು.ಅಲ್ಲಿನ ಉಪನ್ಯಾಸಕಿ ಎಂಬುದೇ ಬಹಳ ಹೆಗ್ಗಳಿಕೆಯ ವಿಚಾರ..
ಪಾಠ ಮಾಡುದು ಹೇಗೆ ? ಉತ್ತಮ ಫಲಿತಾಂಶ ತರುದು ಹೇಗೆ ? ವಿದ್ಯಾರ್ಥಿಗಳನ್ನು ಹತೋಟಿಗೆ ತರುವುದು ಹೇಗೆ ಮೊದಲಾದ ವಿಚಾರಗಳನ್ನು ನಾನಿಲ್ಲಿ ಕಲಿತೆ
ಈ ಬಗ್ಗೆ ಇನ್ನೊಂದಿನ ಬರೆಯುವೆ



