Sunday, 5 September 2021

 

ನನ್ನ ಆತ್ಮಕ್ಕೂ ಕಥೆಯಿದೆ 

ಕೊನೆಯ ಚೆಂಚಿನ ಮಕ್ಕಳ ಕಷ್ಟ ಒಂದೆರಡಲ್ಲ.


 ನಾನು ಹತ್ತನೆಯ ತರಗತಿ ತನಕ ಜಾಣ ವಿದ್ಯಾರ್ಥಿನಿ ಎಂದೇ ಹೆಸರು ಮಾಡಿದ್ದೆ.ಶಾಲೆಗೆ ಎರಡನೆಯವಳಾಗಿ ಹತ್ತನೆಯ ತರಗತಿಯಲ್ಲಿ ಪ್ರಥಮ ಪಾಸಾಗಿದ್ದೆ .ಆಗಿನ ಕಾಲಕ್ಕೆ ಅದು ಒಳ್ಳೆಯ ಅಂಕಗಳೇ.ಹಾಗಾಗಿ ಅಲ್ಕಿಯ ತನಕ ನನಗೆ ಕೊನೆಯ ಚೆಂಚಿನ‌ಮಕ್ಕಳ ಕಷ್ಟದ ಅರಿವು ಇರಲಿಲ್ಲ.

ಪ್ರೌಢ ಶಾಲೆಯಲ್ಲಿ ಓದುವಾಗ ವಿಜ್ಞಾನ ನನ್ನ ಆಸಕ್ತಿಯ ವಿಷಯವಾಗಿತ್ತು.ಹಾಗಾಗಿ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡೆ

ನಾನು ಮಂಗಳೂರು ಸರ್ಕಾರಿ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜು) ಪಿಯುಸಿಗೆ ಸೇರಿದ್ದೆ.ಅಲೋಷಿಯಸ್ ಕಾಲೇಜಿನಲ್ಲಿ ಸೀಟು ಪಡೆಯಲು ಯತ್ನ ಮಾಡಿದ್ದು ಸಿಕ್ಕಿರಲಿಲ್ಲ.

ನಾನು ಕಾಸರಗೋಡಿನ ಗಡಿನಾಡ ಕನ್ನಡತಿ.ಸಹಜವಾಗಿ ಕನ್ನಡದ ಬಗ್ಗೆ ಒಲುಮೆ ಇತ್ತು.ಆದರೂ ಐದರಿಂದ ಏಳನೆಯತರಗತಿ ತನಕ ಓದಿದ್ದ ಸಂಸ್ಕೃತವೂ ಪ್ರಿಯವಾದ ಭಾಷೆ ಆಗಿತ್ತು.ಹಾಗಾಗಿ ಪಿಯುಸಿಯಲ್ಲಿ ಎರಡನೆಯ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದೆ


ಕಾಸರಗೋಡಿನ ಕಾಲೇಜಿನಲ್ಲಿ ಮಲೆಯಾಲ ಭಾಷೆಯಲ್ಲಿ 

ಪಾಠ ಮಾಡುತ್ತಾರೆ.ಒಂದು ಭಾಷೆಯಾಗಿ ಕೂಡ ಮಲೆಯಾಳವನ್ನು ಕಲಿಯದ ನಮಗೆ ಕಷ್ಟವಾಗಬಹುದೆಂಬ ಕಾರಣಕ್ಕೆ ನಾವೆಲ್ಲ ಹತ್ತನೆಯ ತರಗತಿಯ ನಂತರ ಓದಲು ಮಂಗಳೂರಿಗೆ ಹೋಗುತ್ತಿದ್ದೆವು.

ಇಲ್ಲಿ ಕನ್ನಡದಲ್ಲಿ ಪಾಠ ಮಾಡುತ್ತಾರೆ ಎಂದು ನಾನು ಊಹಿಸಿದ್ದೆ..

ಅಬ್ಬಾ‌.ಇಲ್ಲಿನ ಉಪನ್ಯಾಸಕರ ಹೃದಯ ಹೀನತೆಯೇ ಎಂದು ಈಗಲೂ ನನಗನಿಸುತ್ತದೆ.

..ನಾವು ವಿದ್ಯಾರ್ಥಿಗಳೆಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರಾಗಿದ್ದೆವು.ಆದರೂ ಒಂದಕ್ಷರ ಕೂಡ ಕನ್ನಡದಲ್ಲಿವಿವರಣೆ ನೀಡುತ್ತಿರಲಿಲ್ಲ‌.ನಮ್ಮ ಸಂಸ್ಕೃತದ ಉಪನ್ಯಾಸಕರಾಗಿದ್ದ ಲಕ್ಷ್ಮೀ ನಾರಾಯಣ ಭಟ್ಟರು ಮಾತ್ರ ಕನ್ನಡದಲ್ಲಿ ವಿವರಿಸುತ್ತಿದ್ದರು‌.ಹಾಗಾಗಿ ಸಂಸ್ಕೃತದಲ್ಲಿ ನಾನು ಉತ್ತಮ ಅಂಕಗಳನ್ನು ಗಳಿಸಿದ್ದೆ.

 ಒಬ್ಬಿಬ್ಬರು ಪಾಸಾದರೆ ಅದೇ ದೊಡ್ಡ ವಿಚಾರ.

ಮನೆಯಲ್ಲಿ ರುಬ್ಬು ಕಲ್ಲು ಇಲ್ವಾ ? ಅದೇ ಕೆಲಸ ಮಾಡಲು ಲಾಯಕ್ಕು ಎಂದು ಬೈಯುವಾಗ ಮಾತ್ರ ಕನ್ನಡ ಭಾಷೆ ಬಳಕೆ ಇತ್ತು.ಮಾತನಾಡುತ್ತಿರಲಿಲ್ಲ.ಇದರ ಪರಿಣಾಮವಾಗಿ ಹೆಚ್ಚು ಕಡಿಮೆ ಎಲ್ಲರೂ ಪೈಲ್ ಆಗ್ತಿದ್ದೆವು.ಈ ತರಹ 1% ಕ್ಕಿಂತಲೂ ಕಡಿಮೆ ಪಲಿತಾಂಶ ಬಂದರೂ ಇಲ್ಲಿನ ಉಪನ್ಯಾಸಕರನ್ನು ಕೇಳುವವರು ಯಾರೂ ಇರುತ್ತಿರಲಿಲ್ಲವೇ ? ಇವರಂತೆಯೇ ನಾನು ಕೂಡ ಈಗ ಸರ್ಕಾರಿ ಕಾಲೇಜಿನ ಉಪನ್ಯಾಸಕಿ.ನಾವೆಲ್ಲ ಸಹೊದ್ಯೋಗಿಗಳು ಒಂದೇ ಒಂದು ವಿದ್ಯಾರ್ಥಿ ಫೈಲ್ ಆಗಬಾರದೆಂದು 100% ಪಲಿತಾಂಶಕ್ಕಾಗಿ ಹರಸಾಹಸ ಪಡ್ತೇವೆ.ಕೇವಲ100% ನ ಹೆನ್ಮೆಗಾಗಿಯಲ್ಲ.ಕಲಿಕೆಯಲ್ಲಿ ಹಿಮದುಳಿಯುವ ಮಗು ಕೂಡ ಪಾಸಾಗಿ ಎಲ್ಲರಮತೆ ಕಲಿತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದೇ ನಮ್ಮ ಆಶಯವಾಗಿದೆ.ಹಾಗಾಗಿ ಯಾರು ಕಲಿಕೆಯಲ್ಲಿ ಹಿಂದೆ ಇದ್ದಾರೆ ಎಮಬುದನ್ನು ಗಮನಿಸಿ ಅವರಿಗೆ ವಿಶೇಷ ಗಮನ ಕೊಡ್ತೇವೆ.ಜೊತೆಗೆ ಎಲ್ಲ ಮಕ್ಕಲೂ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡಲು ಇಡೀ ವರ್ಷ ಯತ್ನ ಮಾಡುತ್ತೇವೆ.

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶವಿದೆ.ಇದು ಗೊತ್ತಾದದ್ದು ನನಗೆ ದ್ವಿತೀಯ ಪಿಯುಸಿ ಅಂತಿಮಪರಿಕ್ಷೆಯ ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ಕೂಡ ಇದ್ದಾಗ.

ನಾವೇನೊ ವಿದ್ಯಾರ್ಥಿಗಳು..ನಮಗಿದು ಗೊತ್ತಿರಲಿಲ್ಲ.ಆದರೆ ಉಪನ್ಯಾಸಕರಿಗೆ  ಗೊತ್ತಿತ್ತು ತಾನೇ ? 

ಪ್ರಥಮ ಪಿಯುಸಿ ಕಿರು ಪರೀಕ್ಷೆ ಇರಬೇಕು‌.ಕೆಮೆಷ್ಟ್ರಿಯಲ್ಲಿ ಒಂದು ಪ್ರಶ್ನೆ ಗೆ ಅರ್ಥವನ್ನು ನಾನು ಕನ್ನಡದಲ್ಲಿ ಹೇಳಲು ಕೇಳಿದೆ.ಹೇಳಲಾಗುವುದಿಲ್ಲ‌.ಅಷ್ಟೂ ಗೊತ್ತಾಗದಿದ್ದರೆ ಕಲಿಯಲು ಯಾಕೆ ಬರುದು? ಮನೆಯಲ್ಲಿ ರುಬ್ಬು ಕಲ್ಲು ಇಲ್ವಾ ಎಂದು ಅವಹೇಳನ ಮಾಡಿದ್ದರು.ಅವರ ಹೆಸರು ನನಗೆ ನೆನಪಿದೆ.ಹೇಳುದಿಲ್ಲ ಅಷ್ಟೇ.

ಇಷ್ಟು ಮಕ್ಕಳ ಭವಿಷ್ಯ ಹಾಳಾಗುದನ್ನು ನೋಡುತ್ತಾ ಇದ್ದರೂ ಸ್ವಲ್ಪ ಕನ್ನಡದಲ್ಲಿಯೂ ವಿವರಿಸಿ ನಮ್ಮನ್ನು ಪಾಸಾಗುವಂತೆ ಮಾಡುವ ಯತ್ನವನ್ನು ಇಲ್ಲಿ‌ ಉಪನ್ಯಾಸಕರು ಮಾಡಲೇ ಇಲ್ಲ.ದ್ವಿತೀಯ ಪಿಯುಸಿಯಲ್ಲಿ ಕಿರು ಪರೀಕ್ಷೆ ಮದ್ಯವಾರ್ಷಿಕ ಪರೀಕ್ಷೆ ಪ್ರಿಪರೇಟರಿ ಯಾವುದೂ ಮಾಡಿಯೇ ಇಲ್ಲ.ನಾವು ನೇರವಾಗಿ ಅಂತಿಮ ಪರೀಕ್ಷೆಯನ್ನು ಬರೆದಿದ್ದೆವು.ಒಬ್ಬಿಬ್ಬರು ಬಿಟ್ಟರೆ ಉಳಿದವರೆಲ್ಲರೂ ಪೈಲ್ ಆಗಿದ್ದೆವು.ಹಾಗೆಂದು ನಾವು ಯಾರೂ ದಡ್ಡರಾಗಿರಲಿಲ್ಲ.ಹತ್ತನೆಯ ತರಗತಿ ತನಕ ಜಾಣರೆಂದೇ ಗುರುತಿಸಲ್ಪಟ್ಟವರು ನಾವು.ಇಲ್ಲಿ ಇಂತಹ ದುರಂತಕ್ಕೆಡೆಯಾದೆವು. ಒಬ್ಬಿಬ್ಬರು ಮತ್ತೆ ಪರೀಕ್ಷೆಗೆ ಕಟ್ಟಿ ಪಾಸಾಗಿ ಡಿಗ್ರಿ ಓದಿದ್ದಾರೆ.ಹೆಚ್ಚಿನವರ ವಿದ್ಯಾಭ್ಯಾಸ ಅಲ್ಲಿಗೇ ಮೊಟಕಾಗಿತ್ತು‌‌.

ಹತ್ತನೆಯ ತರಗತಿಯಲ್ಲಿ ಡಿಸ್ಟಿಂಕ್ಷನ್ ತೆಗೆದ ಅನೇಕರು ಪಿಯುಸಿಯಲ್ಲಿ ಫೇಲಾಗಿ ಮತ್ತೆ ಕಟ್ಟಿಯೂ ಪಾಸ್ ಮಾಡಲಾಗದೆ ಗ್ಯಾರೇಜ್ ಗಳಲ್ಲಿ ಪಿಟ್ಟರ್ ಗಳಾಗಿದ್ದರು.ಹುಡುಗಿಯರನ್ನು ಹೆತ್ತವರು ಮದುವೆ ಮಾಡಿ ಕೈ ತೊಳೆದುಕೊಂಡಿದ್ದರು.

ಪಿಯು ನಂತರ ನಾನು ಬಿಎ ಓದಲು ಬಯಸಿ ಕೆನರಾ ಕಾಲೇಜಿಗೆ ಅರ್ಜಿ ಸಲ್ಲಿಸಿದೆ.ನಾನು ತಂದೆಯ ಜೊತೆಗೆ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರಲ್ಲಿ ಮಾತನಾಡಲು ಹೋದೆ.ಆಗ ಅವರೆಷ್ಟೋ( 40,000₹?) ಡೊನೇಶನ್  ಕೇಳಿದರು

ಆಗ ನಮ್ಮ ತಂದೆಯವರು ನಮಗೆ ಎರಡು ಖಂಡಿ ಅಡಿಗೆ ಆಗುದು.ಅಷ್ಟು ಡೊನೇಶನ್ ಕೊಡಲು ಕಷ್ಟವಾಗುತ್ತದೆ ಎಂದರು.ಅಗ ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದವರು ಗದರಿ ಮಾತನಾಡಿದರು.ಆ ಪ್ರಿನ್ಸಿಪಾಲ್ ಹೆಸರು ಉಪಾಧ್ಯಾಯ ಎಂದೇನೋ ಇತ್ತೆಂದು ನೆನಪು.ಆಗ ಸರ್ಕಾರಿ ಉದ್ಯೋಗಿಗಳಿಗೆ ಬಹಳ ಅಹಂಕಾರವಿತ್ತೆಂದು ತೋರುತ್ತದೆ‌.ನಂತರದ ದಿನಗಳಲ್ಲಿ ಸಾಪ್ಟ್ವೇರ್ ಇಂಜನಿಯರ್ ಗಳ ದಂಡು ಹರಿದು ಬಂದು ಲಕ್ಷ ಗಟ್ಟಲೆ ಸಂಬಳ ಪಡೆದಾಗ ಇವರದೆಲ್ಲ ಅಟ್ಟಹಾಸ ಸ್ವಲ್ಪ ಕಡಿಮೆಯಾಯಿತೆನಿಸುತ್ತದೆ.ಮೊದಲೆಲ್ಲ ಅನುದಾನಿತ ಶಾಲೆಯ ಶಿಕ್ಷಕರು,ಬ್ಯಾಮಕಿನ ಸಿಬ್ಬಂದಿಗಳು ಇತರ ಸರ್ಕಾರಿ ಉದ್ಯೋಗಿಗಳು ತಾವು ಇತರರಿಗಿಂತ ಭಿನ್ನವಾಗಿ ಸ್ವರ್ಗದಲ್ಲಿ ಇರುವವರಂತೆ ವರ್ತಿಸುತ್ತಿದ್ದರು.ಇದು ನನ್ನೊಬ್ಬಳ ಮಾತಲ್ಲ.ಆ ಕಾಲದ ಅನೇಕರು ಹೀಗೆಯೇ ಅಭಿಪ್ರಾಯ ಪಟ್ಟಿದ್ದಾರೆ.ನಾನು‌ಮದುವೆತಾದ ಸಮಯದಲ್ಲಿ ಯಾವುದೊ ನೆಂಟರ ಮದುವೆಗೆ ಹೋಗಿದ್ದೆ.ಅಲ್ಲಿಗೆ ಅನುದಾನಿತ  ವಿಟ್ಲ ಪಿಯು ಕಾಲೇಜಿನ ಉಪನ್ಯಾಸಕರ ಮಡದಿ ಬಂದಿದ್ದರು.ಆಗ ಅವರು ಲೆಕ್ಚರ್ ನ ಹೆಂಡತಿ  ಎಂದು ಬಹಳ ಗೌರವದಿಮದ ಹೆಂಗಸರು ಅವರಿಗೆ ಕುಳಿತುಕೊಳ್ಳಲು ಜಾಗ ಬಿಟ್ಟು ಕೊಟ್ಟಿದ್ದರು.ಅದನ್ನು ನೋಡಿಯೇ ನಾನೂ ಉಪನ್ಯಾಸಕಿಯಾಗುದೆಂದು ನಿರ್ಧರಿಸಿದ್ದೆ.


ಇರಲಿ

 ಹಳ್ಳಿಯ ಜನರನ್ನು ತಿರಸ್ಕಾರದಿಂದ ಕಾಣುವ ಕೆನರಾ ಕಾಲೇಜು ಬೇಡವೆನಿಸಿ ಮತ್ತೆ ಸರ್ಕಾರಿ ಕಾಲೆಜಿಗೇ ಹೋಗುವುದರಲ್ಲಿದ್ದೆ.ಅಷ್ಟರಲ್ಲಿ ನನ್ನ ತಮ್ಮ ಈಶ್ವರ ಭಟ್ ಗೆ ಉಜಿರೆ ಕಾಲೇಜಿನಲ್ಲಿ ನಮ್ಮ ಸಂಬಂಧಿಕರಾದ ಅಲ್ಲಿನ ಭೌತಶಾಸ್ತ್ರ ಉಪನ್ಯಾಸಕರಾಸ   ಗಣಪಯ್ಯಾವರು ಸೀಟ್ ಕೊಡಿಸಿದ್ದರು.ಇವನ ಅಡ್ಮಿಷನ್ ಗೆ ಹೋಗಿದ್ದಾಗ ನಮ್ಮ ತಂದೆಯವರಲ್ಲಿ ನಾನೇನು ಮಾಡಿತ್ತಿರುವೆ ಎಂದು ಕೇಳಿ ಅವರಾಗಿ ಉಜಿರೆ ಕಾಲೆಜಿನಲ್ಲಿ ಬಿಎಸ್ಸಿಗೆ ಸೀಟು ಕೊಡಿಸಿದ್ದರು.ನಾನು ಬಿಎಗೆ ಸೇರುತ್ತೇನೆ ಎಂದಾಗ ಇಲ್ಲಿ ಒಳ್ಳೆಯ ಉಪನ್ಯಾಸಕರಿದ್ದಾರೆ.ಸಮಸ್ಯೆ ಆಗದು ಎಂದಯ ಬಿಎಸ್ಸಿಗೆ ಸೇರಿಸಿದರು

ಪಿಯು ಪಾಠಗಳ ಬೇಸ್ ಅರ್ಥವಾಗದ ಕಾರಣ ಬಿಎಸ್ಸಿಯ ಪಾಠಗಳೂ ನನಗೆ ಸರಿಯಾಗಿ ಅರ್ಥವಾಗಲಿಲ್ಲ.ಜೊತೆಗೆ ಇಂಗ್ಲಿಷ್ ಭಾಷೆಯ ಸಮಸ್ಯೆ

ಒಮ್ಮೆ ಫಿಸಿಕ್ಸ್ ಪ್ರಾಕ್ಟಿಕಲ್ ಮಾಡುತ್ತಾ ಕೇಶವ ಭಾರತಿ ಎಂಬ ಉಪನ್ಯಾಸಕರು ಬಿಎಸ್ಸಿ ಅಷ್ಟು ಕಷ್ಟವೆನಿಸುದಾದರೆ ಮುಂದೆ ಡಿಗ್ರಿಯಲ್ಲಿ ಕಲಿತ ಭಾಷೆಗಳಲ್ಲಿ ಎಂಎ ಮಾಡಲು ಆಗುತ್ತದೆ ಎಂದು ತಿಳಿಸಿದ್ದರು

ಕೊನೆಯ ಬೆಂಚಿನ ಹುಡುಗಿಯಾದಾಗ ಎದುರಿಸಿದ ಅವಮಾನ ,ಹೀಯಾಳಿಕೆ ಕೀಳರಿಮೆ ನನ್ನನ್ನು ಹದಗೆಡಿಸಿದ್ದವು.

ಈಗ ಸಂಸ್ಕೃತ ಎಂಎ ಮಾಡಲು ಆಗುತ್ತದೆ ಎಂಬ ವಿಚಾರ ಗೊತ್ತಾಗಿ ಮತ್ತೆ ಭರವಸೆ ಹುಟ್ಟಿತು.

ಹೇಗೋ ಬಿಎಸ್ಸಿ ಪಾಸಾಗಿ ಮುಂದೆ ಎಂಎ ಮಾಡಬಹುದೆನಿಸಿತು.ಆಗ ಅಲ್ಲಿಯೇ ಇದ್ದ ಸಹಪಾಠ ರವಿರಾಜನಲ್ಲಿ ನಾನು ಮುಂದೆ ಈ ಸಯನ್ಸ್ ಓದಿ ಜಸ್ಟ್ ಪಾಸಾಗುವ ಬದಲಯ ಎಂಎಗೆ ಸೇರಿ ರ‌್ಯಾಂಕ್ ತೆಗೆಯುತ್ತೇನೆ ಎಂದಿದ್ದೆ.ಅದನ್ನು ಕೇಳಿಸಿಕೊಂಡಿದ್ದ ಕೇಶವ ಭಾರತಿಯವರು ಗುಡ್ ಲಕ್ಷ್ಮೀ,ಯು ಕ್ಯಾನ್ ಎಂದು ಬೆಂಬಲದ  ಮಾತನಾಡಿದ್ದರು

ಅಂತೂ ಇಂತೂ ಬಿಎಸ್ಸಿ ಮುಗಿಸಿ ಸಂಸ್ಕೃತ ಎಂಎಗೆ ಓದಿ ಮೊದಲ ರ‌್ಯಾಂಕ್ ತೆಗೆದು ಯಶಸ್ಸನ್ನು ಗಳಿಸಿದ್ದೆ.ಮತ್ತೆ ಕೊನೆಯ ಬೆಂಚಿನಿಂದ ಮೊದಲ ಬೆಂಚಿಗೆ ಬಂದಿದ್ದೆ

ಕೊನೆಯ ಬೆಂಚಿನವರು ಎದುರಿಸುವ ಅವಮಾನ ಕಷ್ಟಗಳು ಒಂದೆರಡಲ್ಲ.ನೊಟ್ಸಿಗೆ ಇತರರನ್ನು ಗೋಗರೆಯಬೇಕು.ಅವರಿಗೆ ಸದಾ ಡೊಂಕು ಸಲಾಮು ಹಾಕಬೇಕು ಪ್ರಾಕ್ಟಿಕಲ್ ಗಳಿಗೂ ಅವರದೇ ಸಹಾಯ ಬೇಕು‌

ಅದಕ್ಕಾಗಿ ನಾನು ಜಾಣ ಮಕ್ಕಳಿಗೆ ಅಗಾಗ ಸ್ವಿಟ್ಸ್ ಹೂವನ್ನೆಲ್ಲ ತಗೊಂಡು ಹೋಗಿ ಕೊಟ್ಟು ಸಂತೋಷಪಡಿಸುತ್ತಿದ್ದೆ

ಇನ್ನು ಉಪನ್ಯಾಸಕರ ಅವಜ್ಞೆಯನ್ನು ಎದುರಿಸಬೇಕು.ನಾವೆಲ್ಲ ಏನಿದ್ದರೂ ಮದುವೆಯಾಗಿ ಎರಡು ಮಕ್ಕಳ ಹೆತ್ತು ಅಡಿಗೆ ಮಾಡಲು ಮಾತ್ರ ಯೋಗ್ಯರೆಂದು ಭಾವಿಸಿದ್ದು ಅವರ ನಿರ್ಲಕ್ಷ್ಯದ ನೋಟ ನಮಗೆ ಅರಿವಿಗೆ ಬರುತ್ತಿತ್ತು.ಪ್ರಶ್ನೆ ಕೇಳಿದಾಗ ಉತ್ತರ ಗೊತ್ತಿದ್ದರೂ ಹೇಳಲಾಗದ ಕೀಳರಿಮೆ ಕಾಡುತ್ತಿತ್ತು.ಏನು ಮಾಡುದು

.ಅನುಭವಿಸಲೇ ಬೇಕಿತ್ತು

ನನ್ನ ಈ ಅನುಭವವೇ ಕಾರಣವೋ ಏನೊ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ನನಗೆ ವಿಶೇಷ ಒಲವು.ಅವರನ್ನು ಹೇಗಾದರೂ ಮಾಡಿ ಪಾಸಾಗುವಂತೆ,ಒಳ್ಳೆಯ ಅಂಕ ಗಳಿಸುಂತೆ ,ಅವರಲ್ಲಿ ಆತ್ಮ ವಿಶ್ವಾಸ ಹುಟ್ಟುವಂತೆ ಮಾಡುತ್ತೇನೆ .

ಮಕ್ಕಳು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವುದು ಸಹಜ.ಚೀಟಿ ಇಟ್ಟು ಬರೆಯುವುದು,ಪುಸ್ತಕ ಪೆನ್ನು ಕಳ್ಳತನ ಮಾಡುವ ಕೆಲವು ಮಕ್ಕಳೂ ಇರ್ತಾರೆ.ಅವರ ತಪ್ಪನ್ನು ಅವರಿಗೆ ಮನವರಿಕೆ ಮಾಡಿ ಸರಿ ದಾರಿಯಲ್ಲಿ ನಡೆಸುತ್ತೇನೆಯೇ ಹೊರತು ಅವರನ್ನು ಕಳ್ಳ ಕಾರನ್ನು ರೌಡಿಗಳನ್ನು ಕಾಣುವಂತೆ ಕಂಡು ಅವರು ಇನ್ನಷ್ಟು ಉಡಾಫೆಗಳಾಗುವಂತೆ ಮಾಡುವುದಿಲ್ಲ.ಸಣ್ಣ ತಪ್ಪು ಮಾಡಿದವರಿಗೆ ಹೆಚ್ಚು ಗಮನ ಕೊಡುವ ಅಗತ್ಯವಿರುತ್ತದೆ ಕೆಲವರು ಗಮನ ಸೆಳೆಯುವ ಸಲುವಾಗಿಯೇ ಉಡಾಫೇ ಮಾಡುತ್ತಾರೆ.ಎಂತಹ ಉಡಾಫೆ ಮಕ್ಕಳೂ ನನ್ನ ತರಗತಿಯಲ್ಲಿ ಒಂದೆರಡು ವಾರಗಳಲ್ಲಿ ಎಲ್ಲರಂತಾಗುತ್ತಾರೆ.ಅಗತ್ಯವಾದಲ್ಲಿ ತೋರಿಕೆಯ ಕಠಿಣತೆಯನ್ನೂ  ತೋರಿಸಬೇಕಾಗುತ್ತದೆ.ನಂತರ ಪ್ರೀತಿಯಿಂದ ಮಕ್ಕಳ‌ಮನಸನ್ನು ಗೆಲ್ಲಬೇಕಾಗುತ್ತದೆ ಎಂಬುದನ್ನು ಅನುಭವದಿಂದ ಕಂಡುಕೊಂಡಿರುವೆ‌



Wednesday, 1 September 2021

ಬದುಕ ಬಂಡಿ,ನಾನು ಹೀಗಿದ್ದಿರಬಹುದೇ ?

 ನಾನು ಹೀಗಿದ್ದಿರಬಹುದೇ ?

ಕೃಷ್ಣಾಷ್ಟಮಿಯಂದು ರಾತ್ರಿ ಕೃಷ್ಣ ಕಾಣಿಸುತ್ತಾನೆಂದೇ ನಾನು ನಂಬಿದ್ದೆ..

ನಮ್ಮಲ್ಲಿ ಕೃಷ್ಣಾಷ್ಟಮಿ ಬಗ್ಗೆ ಒಂದು ನಂಬಿಕೆ ಪ್ರಚಲಿತವಿತ್ತು‌.ಅಂದು ಕೃಷ್ಣನಿಗಾಗಿ ಪಾಯಸ ಉಂಡೆ ಮಾಡಿಕೊಂಡು ರಾತ್ರಿ ಚಂದ್ರನಿಗಾಗಿ ಕಾಯುತ್ತಾ ಇದ್ದರು‌.ರಾತ್ರಿ ಚಂದ್ರನಲ್ಲಿ ಕೃಷ್ಣ ಕೊಳಲನೂದುತ್ತಾ ಕಾಣಿಸುತ್ತಾನೆ ಎಂದು ಹಿರಿಯರು ಹೇಳುತ್ತಾ ಇದ್ದರು.ಚಿಕ್ಕಂದಿನಲ್ಲಿ ನಾನದನ್ನು ನಂಬಿದ್ದೆ.ಚಂದ್ರನಲ್ಲಿ ಕೃಷ್ಣ ಕೊಳಲನೂದುತ್ತಾ ಬರುವುದನ್ನು ನೋಡಬೇಕೆಂಬ ಆಸೆಯಿಂದ ರಾತ್ರಿ ಸುಮಾರು ಹೊತ್ತಿನವರೆಗೆ ಎಚ್ಚರದಿಂದ ಇರುತ್ತಿದ್ದೆ‌.ಆದರೆ ಹನ್ನೆರಡು ಗಂಟೆ ಆಗುವಷ್ಟರಲ್ಲಿ ನನಗೆ ನಿದ್ದೆ ಬಂದಿರುತ್ತಿತ್ತು.ಮತ್ತೆ ಮರುದಿನ ಬೆಳಿಗ್ಗೆ ಎದ್ದು"  ಛೇ ಕೃಷ್ಣನನ್ನು ನೋಡಲಾಗಲಿಲ್ಲವಲ್ಲ! ಮುಂದಿನ ವರ್ಷ ಕಾದು ಕುಳಿತು ನೋಡಬೇಕೆಂದು ನಿರ್ಧಾರ ಮಾಡುತ್ತಾ ಇದ್ದೆ..ಮತ್ತೆ ಇದೇ ಕಥೆ ಪುನರಾವರ್ತನೆ ಆಗುತ್ತಾ ಇತ್ತು.

ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಬಾಲಕಲೋತ್ಸವದಲ್ಲಿ ನೃತ್ಯ ಸ್ಪರ್ಧೆಯಲ್ಲಿ  ನಮ್ಮ ಮೀಯಪದವು ವಿದ್ಯಾ ವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ತಂಡ ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ಹಾಡಿಗೆ ನೃತ್ಯ ಮಾಡಿದ್ದು ಅದರಲ್ಲಿ ಗೋಪಿಕಾ ಸ್ತ್ರೀಯರೊಂದಿಗಿನ ತುಂಟ ಕೃಷ್ಣನಾಗಿ ನಾನು ಹೆಜ್ಜೆ ಹಾಕಿದ್ದೆ.ನೃತ್ಯ ಹೇಳಿಕೊಡುವಾಗ ನಮ್ಮ ಶಿಕ್ಷಕರಾದ ವಸಂತ ಮಾಸ್ಟರ್ ಮತ್ತು ಸರೋಜಾ ಟೀಚರ್ ಕೃಷ್ಣ ನಗುತ್ತಾ ಇರಬೇಕೆಂದು ಹೇಳುತ್ತಿದ್ದರು..ನಾನು ಕೃತಕವಾಗಿ ನನ್ನ ಚೆಟ್ಟು ಹಲ್ಲು ಪೂರ್ತಿಯಾಗಿ ಕಾಣುವಂತೆ ಹಲ್ಲು ಬಿಡುತ್ತಿದ್ದೆ.ಸ್ಪರ್ಧೆಯ ದಿನ ಸರೋಜಾ ಟೀಚರ್ ಹಾಗಲ್ಲ ಕೃಷ್ಣನಂತೆ ಮುಗುಳು ನಗು ಬರಬೇಕೆಂದು ಹೇಳಿದರು.. ಆಗ ಮತ್ತೆ ನಾನು ಒಮ್ಮೆಯೂ ಕೂಡ ಕೃಷ್ಣಾಷ್ಟಮಿಯಂದು ರಾತ್ರಿ ಕಾದು ಕುಳಿತು ಕೃಷ್ಣ ಹೇಗೆ ನಗುತ್ತಾನೆಂದು ನೋಡದ ಬಗ್ಗೆ ಪೇಚಾಡಿದ್ದೆ.ಮತ್ತೆ ಟೀಚರೇ ನಮಗೆ ಸ್ವಲ್ಪ ತುಟಿಯಗಲಿಸಿ ಹಲ್ಲು ಕಾಣದಂತೆ ಹೇಗೆ ಮುಗುಳು ನಗು ಬರಬೇಕೆಂದು ಹೇಳಿಕೊಟ್ಟರು..ಅಂತೂ ಇಂತೂ ನಮ್ಮ ಶಾಲೆಯ ತಂಡಕ್ಕೆ ಬಾಲಕಲೋತ್ಸವದಲ್ಲಿ ಬಹುಮಾನ ಬಂದಿತ್ತು...

ಏಳನೇ ತರಗತಿಯ ವಿದ್ಯಾರ್ಥಿನಿಗೆ ಅಷ್ಟೂ ಗೊತ್ತಿರಲ್ವಾ ? ಅಂತ ಆಕ್ಷೇಪ ಮಾಡಬೇಡಿ..ಮೂವತ್ತೆರಡು ಮೂವತ್ತಮೂರು ವರ್ಷದ ಹಿಂದೆ ನಮ್ಮ ಬಾಲ್ಯ ಹಾಗೆಯೇ ಇತ್ತು..ಆ ಮುಗ್ಧತನ ,ಆ ನಂಬಿಕೆ ಹಾಗೆಯೇ ಉಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಈಗ ಅನಿಸುತ್ತದೆ ..

ಅದು ಸರಿ  ನೃತ್ಯ ದಲ್ಲಿ ಕೃಷ್ಣನಾಗಿ ಹೆಜ್ಜೆ ಹಾಕಿದಾಗ ನಾನು ಹೇಗೆ ಕಾಣಿಸುತ್ತಿದ್ದೆ ? ಎರಡು ಬಾರಿ ನಾನು ಈ ನೃತ್ಯವನ್ನು ಮಾಡಿದ್ದೆ,ಮೊದಲನೆಯ ಐಲ ಶಾಲೆಯಲ್ಲಿ ನಡೆದ ಬಾಲಕಲೋತ್ಸವದಲ್ಲಿ, ಎರಡನೆಯ ಬಾರಿ ಅದೇ ವರ್ಷ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ .

ಆದರೆ ಎರಡು ಬಾರಿ ಕೃಷ್ಣನ ವೇಷ ಧರಿಸಿದಾಗ ಕೂಡ ನಾನು ಕನ್ನಡಿಯಲ್ಲಿ ನನ್ನ ಮುಖವನ್ನು ನೋಡಿಕೊಂಡಿರಲಿಲ್ಲ..ಆ ಕಾಲದಲ್ಲಿ ಫೋಟೋ ತೆಗೆಯುದೆಲ್ಲ  ಇರಲಿಲ್ಲ.. ಹಾಗಾಗಿ ಕೃಷ್ಣನಾಗಿ ನಾನು ಹೇಗಿದ್ದೆ ? ವಾರ್ಷಿಕೋತ್ಸವದಲ್ಲಿ ಆ ನೃತ್ಯ ನೋಡಿದ ನನ್ನಣ್ಣ  ಕೃಷ್ಣ ಭಟ್ ವಾರಣಾಸಿ( ಪ್ರಸ್ತುತ ಅಮೇರಿಕಾನಿವಾಸಿ)" ಕೊನೆಯಲ್ಲಿ ನೀನು ಕೊಳಲು ಹಿಡಿದು ಗೋಪಿಕಾ ಸ್ತ್ರೀ ಯರ ನಡುವೆ ನಿಂತಿದ್ದೆಯಲ್ಲ..ತುಂಬಾ ಚಂದ ಕಂಡಿದ್ದೆ ಎಂದು ಹೇಳಿದ್ದು ನನಗೆ ಯಾವಾಗಲೂ ನೆನಪಾಗುತ್ತದೆ.ಕೃಷ್ಣ ವೇಷ ಭೂಷಣ ಧರಿಸಿದ ಮುದ್ದು ಪುಟಾಣಿಗಳನ್ನು ನೋಡುವಾಗ ನಾನು ಹೀಗಿದ್ದರಬಹುದಾ ? ಎಂದು ಕಲ್ಪಿಸಿಕೊಳ್ಳುತ್ತೇನೆ‌‌..ಮತ್ತೆ ನಾನು ಇಷ್ಟು ಮುದ್ದಾಗಿರಲಿಕ್ಕಿಲ್ಲ ಎಂದುಕೊಳ್ಳುತ್ತೇನೆ‌..ನಮ್ಮ ಶಾಲೆಯ ಮದಂಗಲ್ಲು ಶ್ರೀನಿವಾಸ ಮಾಸ್ಟರ್ ಸಿಕ್ಕಾಗೆಲ್ಲ  ಕೊಳಲು ಹಿಡಿದ ಕೃಷ್ಣನ ಮುದ್ರೆಯನ್ನು ತೋರುತ್ತಾ ಎಂತ ಕೃಷ್ಣ ಕೂಸು ಎಂತ ಮಾಡುತ್ತಾ ಇದ್ದೆ ಈಗ ಎಂದು ಕೇಳುತ್ತಿದ್ದರು ..ಅವರು ಕೂಡ ನಮಗೆ ನೃತ್ಯ ,ನಾಟಕಾಭಿಯ ಮೊದಲಾದವುಗಳನ್ನು ಹೇಳಿಕೊಟ್ಟಿದ್ದರು‌.ನನಗೆ ಮುಖಕ್ಕೆ ಬಣ್ಣ ಹಾಕಿ ಕೃಷ್ಣನನ್ನಾಗಿ ಮಾಡಿದವರು ಕೂಡ ಅವರೇ 


Friday, 2 July 2021

ಯಮರಾಜನಿಗೊಂದು ತ್ಯಾಂಕ್ಸ್ ಹೇಳಲಿಕ್ಕಿದೆ

 ಅದು 2015 ರ ನವೆಂಬರ್ ತಿಂಗಳಿನ ಒಂದು ದಿನ

ಮಗ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಾಇದ್ದ.ಮಧ್ಯಾವಧಿ ರಜೆಯಲ್ಲಿ ಹಾಸ್ಟೆಲಿನಿಂದ ಮನೆಗೆ ಬಂದಿದ್ದ.

ಆಗ ನಾವು ಮೊದಲಿದ್ದ ಸಣ್ಣ ಮನೆಯಲ್ಲಿ ಇದ್ದೆವು

ಎರಡು ಬೆಡ್ ರೂಮಿನ ಸಣ್ಣ ಮನೆ.ಒಂದು ಬೆಡ್ ರೂಮ್ ನಮ್ಮ ಪುಸ್ತಕಗಳನ್ಮು ಇನ್ನಿತರ ವಸ್ತುಗಳನ್ನು ತುಂಬಿಡುವ ಜಾಗವಾಗಿತ್ತು.

ಇನ್ನೊಂದು ರೂಮು,ಹಾಲ್ ಮಾತ್ರ ಬಳಕೆಗೆ ಸಿಗುತ್ತಾ ಇತ್ತು

ಪ್ರಸಾದ್ ಮತ್ತು ಮಗ ಹಾಲಿನಲ್ಲಿ ಮಲಗಿ ನಡು ರಾತ್ರಿ ತನಕ ಪಟ್ಟಾಂಗ ಹೊಡೆಯುತ್ತಾ ಇದ್ದರು

ರಾತ್ರಿ ಹನ್ನೆರಡು ಕಳೆದಾಗ ಮಾತನಾಡಿದ್ದು ಸಾಕು..ಮಲಗಿ ಇನ್ನು..ಜೀವನ ಇಡೀ ಇದೆ ಮಾತನಾಡಲು ಎಂದು ಸ್ವಲ್ಪ ಗದರಿ ಹೇಳಿದೆ ಅದಕ್ಕೆ ಮೊದಲು ಮಲಗಿ ಮಲಗಿ ಇನ್ನು ಎಂದು ಹೇಳಿ ಹೇಳಿ  ಸಾಕಾಗಿತ್ತು.ಒಂದೆರಡು ಕ್ಷಣ ಮಾತು ನಿಲ್ಲಿಸ್ತಾ ಇದ್ದರು ನಂತರ ಪಿಸು ಮಾತು ಶುರುವಾಗಿ ಜೋರಾಗುತ್ತಾ ಇತ್ತು

ಹಾಗಾಗಿ ನಾ‌ನೂ ಸ್ವಲ್ಪ ಕೃತಕ ಕೋಪ ತರಿಸಿಕೊಂಡು ತುಸು ಗಟ್ಟಿಯಾಗಿಯೇ ಹೇಳಿದೆ.ಇಬ್ಬರೂ ಮಾತು ನಿಲ್ಲಿಸಿದರು

ನನಗೂ ನಿದ್ರೆ ಬಂತು.

ಕಣ್ಣಿಗೆ ನಿದ್ರೆ ಹಿಡಿದು ಹೆಚ್ಚು ಹೊತ್ತಾಗಿರಲಿಲ್ಲ.ಏನೋ ವಿಚಿತ್ರ ಸದ್ದು ಕೇಳಿಸಿ ಎಚ್ಚರಾಯಿತು.ಅಷ್ಟರಲ್ಲಿ ಮಗ ಲೈಟ್ ಹಾಕಿ ಅಮ್ಮ ಅಪ್ಪನಿಗೆ ಏನೋ ಆಗಿದೆ ಬಾಎಂದು ಕೂಗಿ ಕರೆದ.

ನೋಡಿದರೆ ಪ್ರಸಾದ್ ಗೆ ಎಚ್ಚರವಿರಲಿಲ್ಲ.ಬಾಯಿಯಲ್ಲಿ ರಕ್ತ ಬಂದಿತ್ತು.ಎದೆಗೆ ಕಿವಿಗೊಟ್ಟರೆ ಹೃದಯ ಬಡಿತದ ಸದ್ದು ಕೇಳಲಿಲ್ಲ.ಉಸಿರಾಡುತ್ತಲೂ ಇರಲಿಲ್ಲ.ಮಗ ಕೂಡಲೇ ಎದೆ ಒತ್ತಿ ಸಿಪಿಆರ್ ಕೊಟ್ಟ ಜೊತೆಗೆ ಒಂದು ಬದಿಗೆ ಮಲಗಿಸಿದಾಗ ಬಾಯಿಯಿಮದ ರಕ್ತ ಎಲ್ಲ ಹೊರಗೆ ಬಂತು

ಮತ್ತೆ ಪುನಃ ಮಗ ಸಿಪಿ ಆರ್ ಜೊತೆಗೆ ಬಾಯಿ ಮೂಲಕ ಉಸಿರು ನೀಡಿದ.ನಾಲ್ಕೈದು ನಿಮಿಷ ಮಾಡುತ್ತಲೇ ಇದ್ದ.

ಈ ಹೊತ್ತಿನಲ್ಲಿ ಸಮೀಪ ಪಾರ್ಟಿಸ್ ಹಾಸ್ಪಿಟಲ್ ನ ಅಂಬುಲೆನ್ಸ್ ಗೆ ಕರೆ ಮಾಡಲು ಹೊರಟರೆ ನಂಬರೇ ಸಿಗುತ್ತಾ ಇಲ್ಲ

ಆತಂಕದ ಕ್ಷಣದಲ್ಲಿ ಕಣ್ಣು ಕತ್ತಲಾಗುದು ಮೈಂಡಗ ಬ್ಲಾಂಕ್ ಆಗುದೆಂದರೆ ಏನೆಂದು ಆಗಲೇ ಗೊತ್ತಾದದ್ದು ನನಗೆ

ನಂತರ ಅರವಿಂದನೆ 108 ಕ್ಕೆ ಕರೆ ಮಾಡು ಎಂದ.ಅವನು ನಿರಂತರ ಬಾಯಿ ಮೂಲಕ ಉಸಿರಾಟ ಮತ್ತು ಸಿಪಿಆರ್ ಕೊಡುತ್ತಲೇ ಇದ್ದ

ದುರದೃಷ್ಟಕ್ಕೆ ಕರೆಂಟ್ ಬೇರೆ ಹೋಯ್ತು..ಏನಾಗ್ತಿದೆ ಎಂದು ಕಾಣಲಾರದಾಯಿತು.ಅಂತೂ ಕತ್ತಲಲ್ಲಿ ಪರದಾಡಿ ಮೊಬೈಲ್ ಹುಡುಕಿ ತರುವಷ್ಟರಲ್ಲಿ ಪ್ರಸಾದ್ ದೊಡ್ಡದಾಗಿ ಸದ್ದು ಮಾಡಿ ಉಸಿರೆಳೆದುಕೊಂಡರು.ನಂಯರ ಉಸಿರಾಡಲು ಶುರು ಮಾಡಿದರು‌.ಎದೆ ಕೂಡ ಅದಾಗಿಯೇ ಬಡಿಯಲು ಆರಂಭಿಸಿತು.

ಸ್ವಲ್ಪ ಹೊತ್ತಿಗೆ ಮನೆ ಎದುರಿನ ರಸ್ತೆಯಲ್ಲಿ ಬಂದ ಆಂಬುಲೆನ್ಸ್  ಮನೆ ದಾಟಿ ಮುಂದೆ ಹೋಯಿತು

ಅರವಿಂದ ಓಡಿ ಹೋಗಿ ಅದನ್ನು ಹಿಂದೆ ತರಲು ಹೋದ

ಪ್ರಸಾದರಿಗೆ ಎಚ್ಚರ ಬಂದ ಹಾಗೆ ಅನಿಸಿ ಅವರ ಮುಖಕ್ಕೆ ಮೊಬೈಲ್ ಲೈಟ್ ಹಾಕಿದೆ..ಪ್ಚೀ.ಎಂದು ತುಸು ರೇಗಿ ಇನ್ನೊಂದು ಬದಿಗೆ ಮುಖ ಮಾಡಿ ಮಲಗಿದರು.

ಅವರಿಗೆ ಎಚ್ಚರ ಬಂದದ್ದು ಕನ್ಫರ್ಮ್ ಆಯಿತು

ಅಷ್ಟರಲ್ಲಿ ಅಂಬುಲೆನ್ಸ್ ನಿಂದ ಸಿಸ್ಟರ್ ಬಂದು ಪರಿಕ್ಷಿಸಿದರು.ಏನಾಯಿತು ಕೇಳಿದರೆ ಪ್ರಸಾದ್ ಉತ್ತರಿಸಲಿಲ್ಲ.ತಿರುಗಿ ಮಲಗಿದರು.

ನಂತರ ಅವರಿಗೆ ವಿಷಯ ತಿಳಿಸಿ ಮತ್ತೆ ಪುನಃ ಹಾಗೆ ಆದರೆ ಕಷ್ಟ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿ ಬರುವ ಎಂದು ಹೇಳಿದೆವು

ಅವರೇ ಬಂದು ಅಂಬುಲೆನ್ಸ್ಏರಿದರು.ನಾನು ಸಿಕ್ಕಿದ ಡ್ರೆಸ್ ಹಾಕಿಕೊಂಡು ಮಗನ ಜೊತೆ ಹೋದೆ

ಎಮರ್ಜೆನ್ಸ್ ಕೇರ್ ಗೆ ಹೋಗಿ ವಿಷಯ ತಿಳಿಸಿದೆವು

ಪ್ರಸಾದರಿಗೆ ಏನಾಗಿತ್ತು ಎಂದು ಗೊತ್ತಾಗಿರಲಿಲ್ಲ

ಈಗ ನೋಡುವಾಗ ಯಾವುದೇ ಸಮಸ್ಯೆ ಕಾಣ್ತಿಲ್ಲ ಸಿಟಿ ಸ್ಕಾನ್ ಇನ್ನಿತರ ಟೆಸ್ಟ್ ಮಾಡಿ ನೊಡ್ತೇವೆ ಎಂದು ಅಬ್ಸರ್ ವೇಷನ್ ಗಾಗಿ ಐಸಿಯುಗೆ ಶಿಪ್ಟ್ ಮಾಡಿದರು

ನಾನು ಮಗ ಹೊರಗೆ ಕಾಯ್ತಾ ಇದ್ದೆವು

ಅರ್ಧ ಒಂದು ಗಂಟೆಯ ನಂತರ ವೈದ್ಯರು ಕರೆದು ಸಿಟಿ ಸ್ಕಾನಿಂಗ್ ನಾರ್ಮಲ್ ಇದೆ‌.ನಾಳೆ ಹೃದಯ ತಜ್ಞರು ನರ ರೋಗ ತಜ್ಞರು ಬಂದು ನೋಡ್ತಾರೆ ಎಂದರು.ಅಲ್ಲಿಯೇ ಕಾಯುವ ಲಾಂಜ್ ನಲ್ಲಿ ಒಂದು ಸಣ್ಣ ಕಾಟ್ ನಲ್ಲಿ ನಾನು‌ ಮಗ ಕೈಕಾಲು ಮುದುರಿಕೊಂಡು ಮಲಗಿದೆವು

ಆತಂಕ ಕಡಿಮೆಯಾಗಿ ಸಣ್ಣಕೆ ಕಣ್ಣಿಗೆ ನಿದ್ರೆ ಹತ್ತಿತ್ತು.

ಅಷ್ಟರಲ್ಲಿ ಗಾರ್ಡ್ ಬಂದು ಎಬ್ಬಿಸಿದರು.ಏನು ಎಂದು ಕೇಳಿದೆ.ತಾಯಿ ಮಗನಾ ಕೇಳಿದರು ನಮ್ಮಿಬ್ಬರನ್ನು ನೋಡುತ್ತಾ ..ಹೌದೆಂದೆ...ಸರಿ ಸರಿ ಮಲಗಿ ಎಂದು ಹೊರಗೆ ಹೋದರು.ಮಗ ಪಿಯುಸಿ ಓದುತ್ತಿದ್ದರೂ ಭರ್ತಿಯಾಗಿ ಬೆಳದಿದ್ದು 24 -25 ರ ಯುವಕನಂತೆ ಕಾಣುತ್ತಿದ್ದ.ನನ್ನ ಕಾಲ ಬುಡದಲ್ಲಿ ಮುದುರಿ‌ಮಲಗಿದ್ದ ಗಾರ್ಡ್ ಗೆ ಏನೋ ಗೊಂದಲವಾಗಿ ಎಬ್ಬಿಸಿದ್ದಿರಬೇಕು

ಅಷ್ಟರಲ್ಲಿ ಬೆಳಕಾಯಿತು

ಪ್ರಸಾದ್ ಅಫೀಸಿಗೆ ಸುದ್ದಿ ತಿಳಿಸಿದೆ ಅವರ ಬಾಸ್ ಆಫೀಸಿನ ಇಬ್ಬರು ಸ್ಟಾಫನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು

ಬೇರೆ ಬೇರೆ ತಜ್ಣ ವೈದ್ಯರುಗಳೆಲ್ಲ ಬಂದು ನಾನಾವಿಧ ಪರೀಕ್ಷೆಗಳನ್ನು ಮಾಡಿದರು.

ಎಲ್ಲವೂ ನಾರ್ಮಲ್.ಎರಡು ದಿನಗಳಲ್ಲಿ‌ಮನೆಗೆ ಬಂದೆವು.

ಆ ದಿನ ಆದದ್ದೇನು ಎಂದು ವೈದ್ಯರಿಗೂ ಗೊತ್ತಾಗಿರಲಿಲ್ಲ.

ಅದೇ ಮೊದಲು‌ಮತ್ತು ಕೊನೆ..ಮತ್ತೆ ಆಗಲಿಲ್ಲ

ಆದರೆ ಒಂದು ಕಾಕತಾಳೀಯ ವಿಚಾರ ನಡೆದಿತ್ತು

ಈ ಘಟನೆ ನಡೆದ ಮರುದಿನ ಪ್ರಸಾದರದೇ ವಯಸ್ಸಿನ ದೊಡ್ಡ ಮಾವನವರ ಮಗ ಮೈದುನ ಅಶೋಕ ಭಟ್ ಪಂಜಿಗದ್ದೆ  ಆಕ್ಸಿಡೆಂಟಿನಲ್ಲಿ ತೀರಿ ಹೋಗಿದ್ದ 

ಯಮರಾಯ ಗೊಂದಲವಾಗಿ ನಮ್ಮನೆಗೆ ಬಂದು ಇವನಲ್ಲ ಎಂದರಿತು ಹಿಂದೆ ಹೋಗಿ ಮೈದುನನ ಆಯುಷ್ಯ ಮುಗಿದಿದೆ ಎಂದವನ ಪ್ರಾಣವನ್ನು ಹಿಡಿದುಕೊಂಡು ಹೋದನೇ ?

ಅದೇನೇ ಇರಲಿ‌‌.ನಮ್ಮನ್ನು ಬಿಟ್ಟು ಹೋದ ಯಮರಾಜನಿಗೆ ನಮನ..

ಮುಂದೆ ಎಂದಾದರೂ ಬರುವನಲ್ಲ..ಆಗವನಿಗೆ ಒಂದು ತ್ಯಾಂಕ್ಸ್ ಹೇಳಲಿಕ್ಕಿದೆ.ಅಕಾಲದಲ್ಲಿ ಕೊಂಡೊಯ್ಯದೆ ಬದುಕಲು ಬಿಟ್ಟದ್ದಕ್ಕಾಗಿ

ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ಎಲ್ಲರೂ ಸಾಯಲೇ ಬೇಕು.ಅದು ವಿಧಿ ನಿಯಮ ಅದನ್ನು ಮೀರಲು ಸಾಧ್ಯವಿಲ್ಲ.ಅದರೆ ಮಕ್ಕಳು ಮರಿಗಳ ಜವಾಬ್ದಾರಿ ಕಳೆದಕೊಳ್ಳುವ ತನಕ ಬದುಕುದೂ ಕೂಡ ನಮ್ಮ ಕರ್ತವ್ಯ.

ಅದಕ್ಕಾಗಿ ಕಾಲ‌ಕಾಲಕ್ಕೆ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು.ಅಗತ್ಯವಿದ್ದರೆ ತಜ್ಣ ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳಬೇಕು

ನಿಯತವಾದ ವ್ಯಾಯಾಮ ಹಿತ ಮಿತವಾದ ಆಹಾರ ಸ್ವೀಕರಿಸಬೇಕು

ಎಲ್ಲವನ್ನು  ಮಾಡಿದರೂ ಕೆಲವೊಮ್ಮೆ ಉಹಿಸದೇ ಇದ್ದದ್ದು ಘಟಿಸಿಹೋಗುತ್ತದೆ.ಆಗ ಉಳಿದವರು ಯಾರೂ ಈ ಭೂಮಿಯಲ್ಲಿ ಶಾಶ್ವತರಲ್ಲ. ಬದುಕನ್ನು ಧೈರ್ಯವಾಗಿ ಎದುರಿಸಬೇಕು.




 

Thursday, 17 June 2021

 ದೊಡ್ಡವರ ದಾರಿ 78 :ಸೌಜನ್ಯದ ಪ್ರತೀಕವಾಗಿರುವ  ಡಾ.ಪದ್ಮನಾಭ ಮರಾಠೆ


 ನಾನು ನಿನ್ನೆ ಸಂಜೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಪ್ರಕಟಣೆಯ ಪೂರ್ವದಲ್ಲಿ ಮುಂಗಡ ಬುಕ್ಕಿಂಗ್ ಆರಂಭಿಸಿದ ಬಗ್ಗೆ ತಿಳಿಸಿ ಪುಸ್ತಕ ಬೇಕಾದವರಿಗೆ ನನ್ನ ವಾಟ್ಸಪ್ ನಂಬರ್ ನೀಡಿ  ಸಂಪರ್ಕಿಸಲು ತಿಳಿಸಿದ್ದೆ,


ಅನೇಕರು ಮೆಸೇಜ್ ಮಾಡಿ ನಮಸ್ತೆ ಮೇಡಂ/ ಅಕ್ಕ‌ ಎಂದು ಆರಂಭಿಸಿ ಪುಸ್ತಕ ಬೇಕು ಎಂದಿದ್ದರು


.ಪ್ರತಿ ನಮಸ್ಕರಿಸಿ ಪೇ ಮೆಂಟ್ ಮಾಡುವ ವಿಧಾನವನ್ನು ಕೇಳಿ ಮಾಹಿತಿ ನೀಡಿ ಅವರ ಹೆಸರು ವಿಳಾಸ ತಿಳಿಸಲು ಹೇಳುತ್ತಿದ್ದೆ‌.


ಹಾಗೆ ನಿನ್ನೆ ಒಬ್ಬರು ನಮಸ್ತೆ ಪುಸ್ತಕ ಬೇಕಿತ್ತು ಎಂದರು.ಎಲ್ಲರಿಗೆ ಮಾಡುವಂತೆ ಪ್ರತಿ ನಮಸ್ಕರಿಸಿ  ಗೂಗಲ್ ,ಪೋನ್ ಪೇ ಮೂಲಕ ಪೇ ಮಾಡಲು ತಿಳಿಸಿದೆ‌


ಅದಿಲ್ಲದಿದ್ಧರೆ ನನ್ನ ಬ್ಯಾಂಕ್ ಖಾತೆ ನಂಬರ್ ಕೊಡುತ್ತೇನೆ ಎಂದೆ .ಅವರು ಗೂಗಲ್ ಪೋನ್ ಪೆ ಇಲ್ಲದ ಕಾರಣ ( ಬಹುಶಃ ಅವರ ಊರಲ್ಲಿ ಸರಿಯಾದ ಮೊಬೈಲ್  ನೆಟ್ವರ್ಕ್ ಸಿಗುದಿಲ್ಲ.ನೆಟ್ವರ್ಕ್ ಇಲ್ಲದೇ ಇದ್ದರೆ ಪೋನ್ ಪೆ ಗೂಗಲ್ ಕೆಲಸ ಮಾಡುದಿಲ್ಲ) ಬ್ಯಾಂಕ್ ಖಾತೆ ಡಿಟೇಲ್ಸ್ ಕಳುಹಿಸಲು ಹೇಳಿದರು.ಅಂತೆಯೇ ನಾನು ನೀಡಿದೆ 


ಮತ್ತೆ ಹೆಸರು ಮತ್ತು ವಿಳಾಸ ಕಳುಹಿಸಲು ಸೂಚಿಸಿದೆ‌.


ಬೇರೆ ಕೆಲಸಕ್ಕೆ ಹೋದೆ.ಸ್ವಲ್ಪಹೊತ್ತು ಬಿಟ್ಟು ವಾಟ್ಸಪ್ ತೆರೆದೆ.

ಪದ್ಮನಾಭ ಮರಾಠೆ..ಎಂಬ ಹೆಸರು ,ವಿಳಾಸ ಬರೆದಿದ್ದರು.

.ಡಿಪಿ ನೋಡಿದೆ.ಹೌದು.ಪುಸ್ತಕ ಬೇಕೆಂದಿದ್ದವರು ನನ್ನ ಸಂಸ್ಕೃತ ಎಂಎ ಗುರುಗಳಾದ ಡಾ.ಪದ್ಮನಾಭ ಮರಾಠೆಯವರಾಗಿದ್ದರು.

ಅವರ ನಂಬರ್ ನನ್ನಲ್ಲಿ ಇತ್ತು‌


ಮೊಬೈಲ್ ಕಳೆದು ಹೋಗಿ ಅವರ ನಂಬರ್ ನನ್ನಲ್ಲಿ ಕಳೆದು ಹೋಗಿತ್ತು.ಹಾಗಾಗಿ ಶುರುವಿಗೆ ಮೆಸೇಜ್ ಮಾಡಿದಾಗ ನಾನು ಯಾರೆಂದು ಗಮನಿಸಿರಲಿಲ್ಲ 


ನನ್ನ ಗುರುಗಳೆಂದ ಮಾತ್ರಕ್ಕೆ ಅವರು ವಯಸ್ಸಿನಲ್ಲಿ ನನಗಿಂತ ತೀರಾ ಹಿರಿಯರೇನೂ ಅಲ್ಲ‌ ಅದರೆ ಜ್ಞಾನವೃದ್ದರು

ನಾನು ಕಟೀಲಿನಲ್ಲಿ ಸಂಸ್ಕೃತ ಎಂಎ ಶುರುವಾಗಿ ಮೂರನೆಯ ವರ್ಷ ಎಂದರೆ ಮೂರನೆಯ ಬ್ಯಾಚ್ ಗೆ ಸೇರಿದವಳು.

ನಮಗೆ ಉಪನ್ಯಾಸಕರಾಗಿ  ಬಹು ದೊಡ್ಡ ವಿದ್ವಾಂಸರಾದ ಡಾ.ನಾರಾಯಣ ಭಟ್ ,ಡಾ.ಜಿ ಎನ್ ಭಟ್ ಮತ್ತು ಆಗಷ್ಟೇ ಅಲ್ಕಿಯೇ  ಎಂಎ ಪಾಸಾದ ಪದ್ಮನಾಭ ಮರಾಠೆ ನಾಗರಾಜ್ ಇದ್ದರು.


ನಾನು ಎಂಎಗೆ ಬಹು ದೊಡ್ಡು ವಿದ್ವಾಂಸರಾದ ಹಿರಿಯರಾದ ಬಿಳಿಯ ಗಡ್ಡದ ರೇಷ್ಮೆ ಜುಬ್ಬ ಧರಿಸಿದ  ಬುದ್ದಿವಂತರ ಚೀಲ ಹಾಕಿದ ಸಿನೇಮಾಗಳಲ್ಕಿ ತೋರಿಸುತ್ತಿದ್ದ ರೀತಿಯ ಪ್ರೊಫೆಸರ್ ಗಳನ್ನು  ನಿರೀಕ್ಷೆ ಮಾಡಿದ್ದೆ.


ಪದ್ಮ‌ನಾಭ ಮರಾಠೆ ಮತ್ತು ನಾಗರಾಜ್ ಅಲ್ಲಿಯೇ ಮೊದಲ ಬ್ಯಾಚ್ ನಲ್ಲಿ ಎಂಎ ಓದಿ ಆಗಷ್ಟೇ ಎಂಎ ಎರಡನೇ ವರ್ಷದ ಅಂತಿಮ ಪರೀಕ್ಷೆ ಬರೆದವರು‌.ಫಲಿತಾಂಶ ಬಂದಿತ್ತೋ ಇಲ್ಲವೋ ನೆನಪಿಲ್ಲ ನನಗೆ.

ಪದ್ಮನಾಭ ಮರಾಠೆಯವರಿಗೆ ಮೊದಲ ರ‌್ಯಾಂಕ್ ಬಂದು ಗೋಲ್ಡ್ ಮೆಡಲು ಪಡೆದಿದ್ದರು.


ನಾಗರಾಜ್ ಉಜಿರೆಯಲ್ಲಿ ನನಗಿಂತ ಎರಡು ವರ್ಷ ಸೀನಿಯರ್ ಆಗಿದ್ದರು.ಅವರಿಗೆ ನನ್ನ  ಪರಿಚಯ ಇರಲಿಲ್ಲ‌.ಆದರೆ ನನಗೆ ಇತ್ತು.


ಇವರಿಬ್ಬರು ಹೆಚ್ಚು ಕಡಿಮೆ ನಮ್ಮದೇ ವಯಸ್ಸಿನವರಾಗಿದ್ದರು. ನಮಗೂ ಅವರಿಗೂ ಒಂದೆರಡು ವರ್ಷಗಳ ವಯಸ್ಸಿನ ಅಂತರ ಅಷ್ಟೇ ಇವರೆಂತ ಪಾಠ ಮಾಡಿಯಾರು ಎಂದು ನನಗೆ ಶುರುವಿಗೆ ಅನಿಸಿತ್ತು.

ನಾನು ಬಿಎಸ್ಸಿ ಮಾಡಿ ನಂತರ ಎಂ ಎ ಯಲ್ಲಿ ಆರ್ಟ್ಸ್ ಎಂದರೆ ಸಂಸ್ಕೃತವನ್ನು ತಗೊಂಡವಳು.


ಈ ವಿಜ್ಞಾನದ ವಿದ್ಯಾರ್ಥಿಗಳಿಗೆ ತಾವು ಅರ್ಟ್ಸ್ ,ಕಾಮರ್ಸ್  ವಿದ್ಯಾರ್ಥಿಗಳಿಗಿಂತ  ಜಾಣರು ಎಂಬ ಶ್ರೇಷ್ಠತೆಯ ವ್ಯಸನ ಇರುತ್ತದೆ.ನಾನು ಅದಕ್ಕೆ ಹೊರತಾಗಿರಲಿಲ್ಲ


ಹಾಗಾಗಿ ಬಿಎ ಬಿಕಾಂ( ನಾಗರಾಜರು ಬಿಕಾಂ ಮಾಡಿ ಸಂಸ್ಕೃತ ಎಂಎ ಮಾಡಿದವರು )  ಮಾಡಿ ಸಂಸ್ಕೃತ ಎಂಎ ಯನ್ನು ಆಗಷ್ಟೇ ಮುಗಿಸಿದ ಇವರಿಬ್ಬರ ಬಗ್ಗೆ ನನಗೆ ಮನಸಿನ ಒಳಗೆ ನಗು ಇತ್ತು.ಇವರೆಂತ ಎಂಎ ಗೆ ಪಾಠ ಮಾಡುದು ಎಂದು


ನಮಗಿಂತ ಗಿಡ್ಡ ಕಾಣುತ್ತಿದ್ದ ( ಕಾಣಿತ್ತದ್ದದ್ದು ಮಾತ್ರ ನಮಗಿಂತ ಎತ್ತರ ಇದ್ದರು  ಗಾತ್ರದಲ್ಲಿ ಮಾತ್ರವಲ್ಲ ಜ್ಞಾನದಲ್ಲಿಯೂ )ಇನ್ನೂ ಮೀಸೆ ಸರಿಯಾಗಿ ಬಾರದ, ಕ್ರಾಪ್ ಬಾಚಿದ  ಸಣ್ಣ ಹುಡುಗರಂತಿದ್ದ ಇವರಿಬ್ಬರನ್ನು  ನೋಡಿದಾಗ ಇವರೆಂತ ಪ್ರೊಫೆಸರ್ಗಳು ,,ಎಂತ ಪಾಠ ಮಾಡಿಯಾರು ಎನಿಸಿತ್ತು.

 ಆದರೆ ನನ್ನ ಊಹೆ ತಪ್ಪಾಗಿತ್ತು 

ಆದರೆ ಕಾಲೇಜು ಶುರುವಾಗಿ ಪಾಠ ಪ್ರವಚನಗಳು ಶುರುವಾದಾಗ ಪದ್ಮ ನಾಭ ಮರಾಠೆಯವರ ಪಾಂಡಿತ್ಯದ ಅರಿವಾಯಿತು.ಸಣ್ಣ ವಯಸ್ಸಿನ ಚಿಗುರು ಮೀಸೆಯ ಹುಡುಗರೂ ಪ್ರೊಫೆಸರ್ ಗಳಂತೆ ಪ್ರೌಢವಾಗಿ ಪಾಠ ಮಾಡಬಲ್ಲರು ಎಂದು ನನಗೆ ಮನವರಿಕೆ ಆಯಿತು.

ಆ ಸಮಯದಲ್ಲಿಯೇ ಅವರು ಎನ್ ಇ ಟಿ ಪಾಸಾಗಿದ್ದರು‌‌.ಆಗ ಎನ್ ಇ ಟಿ ಆದವರಿಗೆ ಸರ್ಕಾರಿ ಕಾಲೇಜಿನಲ್ಲಿ ಸುಲಭದಲ್ಲಿ ಕೆಲಸ ಸಿಗುತ್ತಾ ಇತ್ತು.ಇವರಿಗೆ ಊರು ಮನೆ ತೋಟ ತಂದೆ ತಾಯಿಯರನ್ನು ಬಿಟ್ಟು ಬೇರೆಡೆ ಹೋಗಲು ಇಷ್ಟವಿರಲಿಲ್ಲ.ಹಾಗೆ ಎಲ್ಲೂ ಯತ್ನ ಮಾಡಲಿಲ್ಲ.ಇಲ್ಲದಿದ್ದರೆ ಈಗ ಯುನಿವರ್ಸಿಟಿಯ ಪ್ರೊಫೆಸರ್ ಆಗಿ ಡೀನ್ ಆಗಿರುತ್ತಿದ್ದರು  ಆ ಹುದ್ದೆಗೆ ಇರುವ ಅರ್ಹತೆ ಅವರಲ್ಲಿ ಇತ್ತು.

1996 ರಲ್ಲಿ ಶಿಕಾರಿ ಪುರ ಸರ್ಕಾರಿ ಪಿಯು ಕಾಲೇಜಿಗೆ ಅಯ್ಕೆ ಆಗಿದ್ದರೂ ಅದನ್ನು ಬಿಟ್ಟಿದ್ದರು 


ಈಗಲೂ ಅವರು ಕಟೀಲು ಸಂಸ್ಕೃತ ಸ್ನಾತಕೋತ್ತರ ಕೇಂದ್ರದ ಸಂಸ್ಕೃತ ಪ್ರೊಫೆಸರೇ ಆಗಿದ್ದಾರೆ.

ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.


ಎನ್ ಇ ಟಿ ಅಂತ ಒಂದು ಪರೀಕ್ಷೆ ಇದೆ ಇದನ್ನು ಪಾಸ್ ಮಾಡಿದರೆ ಮಾತ್ರ ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಲು  ಸಾಧ್ಯ ಎಂಬುದನ್ನು ನಮಗೆ ತಿಳಿಸಿದವರು ಮರಾಠೆ ಸರ್ ನಮಗೆ‌.ಕೇವಲ ಪಠ್ಯದ ವಿಚಾರವಲ್ಲ.ಇತರ ವಿಚಾರಗಳ ಬಗ್ಗೆ ಕೂಡ ನಮಗೆ ತಿಳಿಸುತ್ತಾ ಇದ್ದರು.ಅನೇಕ ವಿಚಾರಗಳಲ್ಲಿ‌ಅವರಿಗೆ ಪ್ರೌಢಿಮೆ ಇತ್ತು 

ಒಂದು ಸಂಗತಿ ಹೇಳ್ತೇನೆ.ದೀಪದಿಂದ ಮಾತ್ರ ಇನ್ನೊಂದು  ದೀಪವನ್ನು ಬೆಳಗಲು ಸಾಧ್ಯ‌

ರ‌್ಯಾಂಕ್ ಎಂಬುದು ಬರಿಯ ಸರ್ಟಿಫೀಕೇಟ್ ಮಾತ್ರ ಪರೀಕ್ಷೆ  ಅಂಕ ಗಳಿಕೆ ಎಂದರೆ ಬರಿಯ ನೆನಪಿನ ಶಕ್ತಿಯ ಪರೀಕ್ಷೆ ಎನ್ನುವುದು ಸಿನಿಕತನ 

ಏಕಾಗ್ರತೆ ಇರುವವರಿಗೆ ಪರಿಶ್ರಮ‌ಪಡುವವರಿಗೆ  ಮಾತ್ರ ಉತ್ತಮ ಅಂಕ ಗಳಿಸಲು ಸಾದ್ಯವಾಗುತ್ತದೆ  ರ‌್ಯಾಂಕ್ ಬರುತ್ತದೆ .ಅಂತಹವರು ವೃತ್ತಿ ಜೀವನದಲ್ಲೂ ಹಾಗೆಯೇ ಇರುತ್ತಾರೆ

ಓರ್ವ ರ‌್ಯಾಂಕ್ ವಿಜೇತನಿಗೆ / ಪ್ರತಿಭಾವಂತನಿಗೆ ಉತ್ತಮ ಅಂಕ ಗಳಿಸುದು ಹೇಗೆ ಎಂಬ ವಿಚಾರ ಗೊತ್ತಿರುತ್ತದೆ .ಅಂತಹವರು ಶಿಕ್ಷಕ ವೃತ್ತಿಗೆ ಬಂದರೆ ತಮ್ಮ ವಿದ್ಯಾರ್ಥಿಗಳಿಗೂ ಅದನ್ನು ಹೇಳಿಕೊಡ್ತಾರೆ.

ನಾನು ಉತ್ತಮ ಅಂಕ ಗಳಿಸುದು ಹೇಗೆ ಎಂಬುದನ್ನು ಪದ್ಮನಾಭ ಮರಾಠೆಯವರಿಂದ ಕಲಿತೆ 

ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಪಡೆದದ್ದು ಮಾತ್ರವಲ್ಲದೆ ಕನ್ನಡ ಎಂಎ ಯಲ್ಲಿ ಕೂಡ ರ‌್ಯಾಂಕ್ ಗಳಿಸಿದೆ..

ಈಗ ನನ್ನ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸುವ ಬಗೆಯನ್ನು ಹೇಳಿಕೊಡ್ತೇನೆ‌.ಆದರೆ ಈ ಕೌಶಲ್ಯವನ್ನು ನಾನು ಗುರುಗಳಾದ ಪದ್ಮನಾಭ ಮರಾಠೆಯವರಿಂದಲೇ ಕಲ್ತದ್ದು ತರಗತಿಗೆ ತುಂಬಾ ತಯಾರಾಗಿ ಬರುತ್ತಾ  ಇದ್ದರು‌.

ಬಹಳ ವಿದ್ವತ್ ಪೂರ್ಣವಾದ ಪಾಠ ಅವರದು. 

ಈಗಲೂ ಅವರು ಹೇಳುತ್ತಿದ್ದ ಸುಭಾಷಿತಗಳನ್ನು ನಾನು ಭಾಷಣ ಮಾಡುವಾಗ ,ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಬಳಸುತ್ತೇನೆ.

ವಿದ್ಯಾರ್ಥಿನಿಯಾಗಿದ್ದಾಗ ನಾನು ಅವರ ಪ್ರಿಯ ಶಿಷ್ಯೆ ಆಗಿರಲಿಲ್ಲ..ನಾನು ಸಣ್ಣಾಗಿಂದಲೂ ಅತ್ಯುತ್ಸಾಹದ ಸ್ವಭಾವದವಳು..ನೇರ ಬೀಡು ಬೀಸು ಸ್ವಭಾವ,ಪೆಟ್ಟೊಂದು ತುಂಡೆರಡು ಎಂಬಂತೆ ಮಾತು.

ಅಲ್ಲದೆ ನನಗೆ ಎಂಎ ಗೆ ಸೇರುವ ಮೊದಲೇ ಮದುವೆಯಾಗಿದ್ದು ಉಳಿದವರ ಹಾಗೆ ಇರಲು ನನಗೆ ಆಗುತ್ತಿರಲಿಲ್ಲ.

1996 ಮೇಯಲ್ಲಿ ದ್ವಿತೀಯ ಎಂಎ ಪರೀಕ್ಷೆ ಬರೆದ ನಂತರ ದೀರ್ಘ ಸಮಯದ ನಂತರ ಇಪ್ಪತ್ತನಾಲ್ಕು ವರ್ಷಗಳ  ನಂತರ  2015 ರಲ್ಲಿ ನಾನು ಪದ್ಮನಾಭ ಮರಾಠೆಯವರನ್ನು ಕಟೀಲಿನಲ್ಲಿ  ಭೇಟಿಯಾದೆ ,ಕಟೀಲಿನಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರು 

.ನನ್ನನ್ನು  ಸಭಾ ಕಾರ್ಯಕ್ರಮ ಒಂದರ  ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಹ್ವಾನಿಸಿದ್ದು ನಾನು ಹೋಗಿದ್ದೆ.

ಆಗ ಅಲ್ಲಿ ಪದ್ಮನಾಭ ಮರಾಠೆಯವರನ್ನು ನಾನು ಆಕಸ್ಮಿಕವಾಗಿ ಭೇಟಿ ಮಾಡಿದೆ.ಆಗ

ನನಗೂ ನಲವತ್ತ ಮೂರು ವರ್ಷ ಆಗಿತ್ತು ಮರಾಠೆಯವರಿಗೂ  ನಲುವತ್ತೈದು ನಲುವತ್ತಾರು ಾಗಿದ್ದಿರಬಹುದು

ಇಬ್ಬರನ್ನೂ ಬದುಕಿನ ಅನುಭವ ಮಾಗಿಸಿತ್ತು .

ಬಹಳ ಮುಕ್ತವಾಗಿ ಮಾತನಾಡಿದೆವು.ಆಗ ಅವರು ಒಂದು ಮಾತು ಹೇಳಿದರು.ನಾವೂ ಆಗಷ್ಟೇ ಎಂಎ ಮುಗಿಸಿ ಉಪನ್ಯಾಸಕರಾದವರು.ನಾವು ಹೇಳಿದ ದಾರಿಯಲ್ಲಿಯೇ ವಿದ್ಯಾರ್ಥಿಗಳು ಸಾಗಬೇಕು ಎಂದು ಆಶಿಸಿದ್ದೆವು.ಈಗ ಹಾಗಲ್ಲ‌‌ನಾವು ಹೇಳಿದ ದಾರಿಯಲ್ಲಿ ವಿದ್ಯಾರ್ಥಿಗಳು ಹೋಗದಿದ್ದರೆ ಅವರು ಹೋದ ದಾರಿಯಲ್ಲಿ ನಾವು ಹೋದರಾಯಿತು ,ಹೇಗೋ ಒಂದು ಸರಿ ದಾರಿಯಲ್ಲಿ ನಡೆದರಾಯಿತು ಎಂದಿದ್ದರು.

ನನಗೂ ಅದು ಹೌದೆನಿಸಿತ್ತು.

ಇದಾದ ನಂತರ ನಾನುಯಾವುದೋ ಮಾಹಿತಿಗಾಗಿ  ಒಮ್ಮೆಕರೆ ಮಾಡಿ ಮಾತಾಡಿದ್ದೆ..ನನ್ನ ಫೇಸ್ ಬುಕ್ ಸ್ನೆಹಿತರಾಗಿದ್ದರೂ ಅವರು ಪೇಸ್ ಬುಕ್ ನಲ್ಲಿ‌ ಅಷ್ಟೊಂದು ಆಕ್ಟೀವ್ ಆಗಿ ಇರಲಿಲ್ಲ‌.ಹಾಗಾಗಿ ಅವರು ನನ್ನ ಪೋಸ್ಟ್ ಗಳನ್ನು ನನ್ನ ಅಧ್ಯಯನವನ್ನು ಗಮನಿಸುತ್ತಾರೆ ಎಂಬ ಊಹೆಯೂ ಇರಲಿಲ್ಲ

ಹಾಗಾಗಿ ನಮಸ್ತೆ ಪುಸ್ತಕ ಬೇಕು ಎಂದು ಮೆಸೇಜ್ ಮಾಡಿದಾಗಲೂ ನಾನವರನ್ನು ಗಮನಿಸಿರಲಿಲ್ಲ

ಅವರು ಹೆಸರು ಮತ್ತು ವಿಳಾಸ ಕಳುಹಿಸಿದಾಗಲೇ ನನಗೆ ತಲೆಗೆ ಹೋದದ್ದು ಅವರು ನನ್ನ ಸಂಸ್ಕೃತದ ಗುರುಗಳೆಂದು.

ಅವರೀಗ ದೊಡ್ಡ ಸಂಸ್ಕೃತ ವಿದ್ವಾಂಸರು .ಆದರೂ ನಾನವರ ವಿದ್ಯಾರ್ಥಿನಿ ಎಂಬ ಅಭಿಮಾನ ಜೊತೆಗೆ ತುಳು ಸಂಸ್ಕೃತಿ ಕುರಿತಾದ ಒಲವಿನಿಂದ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಪಾವತಿ ಮಾಡಿದ್ದಾರೆ.

ಅಧ್ಯಯನ ಶೀಲರು ಜೀವನವಿಡೀ ಹಾಗೆಯೆ ಇರ್ತಾರೆ ಎಂಬುದಕ್ಕೆ ಒಂದು ನಿದರ್ಶನವಾಗಿದ್ದಾರೆ.

ಇನ್ನೊಂದು ವಿಚಾರ ನಾನು ಗಮನಿಸಿದ್ದು..ನಾನು ಅವರ ವಿದ್ಯಾರ್ಥಿನಿ ವಯಸ್ಸಿನಲ್ಲೂ ,ಅನುಭವದಲ್ಲೂ ಜ್ಞಾನದಲ್ಲಿಯೂ ಕಿರಿಯಳು.ಹಾಗಾಗಿ ಅವರು ನಮಸ್ತೆ ಎನ್ನಬೇಕಿರಲಿಲ್ಲ.

ಲಕ್ಷ್ಮೀ ನನಗೊಂದು ಪುಸ್ತಕ ಬೇಕು ಎನ್ನ ಬಹುದಿತ್ತು.ಅದರೆ  ಎಲ್ಲರಿಗೂ ,ಅವರ ವಿದ್ಯಾರ್ಥಿನಿಗೂ ಕೂಡ ಗೌರವ ನೀಡುವ  ಅವರ ಸೌಜನ್ಯದ ವ್ಯಕ್ತಿತ್ವ  ಇಲ್ಲಿ ಎದ್ದು ಕಾಣುತ್ತದೆ‌.ಇದು ನಾವು ಅವರಿಂದ ಕಲಿಯಬೇಕಾದ ಅಂಶ ಎಂದು ನನಗನಿಸಿತು


शुभाशिषः सन्तु भवत्याः संशोधनाध्ययने ಎಂದು ಹಾರೈಸಿದ ಗುರುಗಳಾದ ಪದ್ಮ ನಾಭ ಮರಾಠೆಯವರಿಗೆ ವಂದಿಸಿದ್ದೇನೆ 

ಅವರು ವಿದ್ಯಾರ್ಥಿಗಳಿಗೆ ತೋರುವ ಗೌರವಾದರಗಳನ್ನು ನಾನೂ ಮುಂದಕ್ಕೆ ಅಳವಡಿಸಿಕೊಳ್ಳುವೆ

Tuesday, 8 June 2021

ದೊಡಗಡವರ ದಾರಿ -77 ಬಹು ಎತ್ತರದ ವ್ಯಕ್ತಿತ್ವದ ಡಾ.ಬಿಎ ವಿವೇಕ ರೈ


 ದೊಡ್ಡವರ ದಾರಿ - ಎತ್ತರದ ವ್ಯಕ್ತಿತ್ವದ ಡಾ.ಬಿ ಎ ವಿವೇಕ ರೈ 

ಲಜ್ಷ್ಮೀಯವರೇ ನಮಸ್ಕಾರ ಎಂದಾಗ ಒಂದು ಕ್ಷಣ ನಾನು ಗಲಿಬಿಲಿಗೊಳಗಾಗಿದ್ದೆ 

ನಾನು ಕನ್ನಡ ಎಂಎಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿದ್ದಲ್ಲ.ಹಾಗಾಗಿ ಇಲ್ಲಿನ ಪ್ರಾಧ್ಯಾಪಕರ ನೇರ ಪರಿಚಯ ನನಗಿರಲಿಲ್ಲ.ಆದರೂ ಡಾ.ಬಿ ಎ ವಿವೇಕ ರೈ  ಬಗ್ಗೆ ಬಹಳ ಗಂಭೀರ ಸ್ವಭಾವದವರು ,ಬಹಳ ಸಮತೂಕದ ವ್ಯಕ್ತಿತ್ವದವರು ,ಅರ್ಹತೆ ಯಾರಲ್ಲಿಯೆ ಇದ್ದರೂ ಗುರುತಿಸುತ್ತಾರೆ ಇತ್ಯಾದಿ ಕೇಳಿ ತಿಳಿದಿದ್ದೆ


ನನ್ನ ಮೊದಲನೆಯ ಡಾಕ್ಟರೇಟ್ ಅಧ್ಯಯನ ಶುರು ಮಾಡಿದ ಸಂದರ್ಭದಲ್ಲಿ ನನಗೆ ಅವರನ್ನೊಮ್ಮೆ ಭೇಟಿ ಮಾಡಿ ಒಂದಷ್ಟು  ಮಾರ್ಗದರ್ಶನ ಪಡೆಯಬೇಕೆನಿಸಿತ್ತು.ಆಗ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ  ಉಪ ಕುಲಪತಿಗಳಾಗಿದ್ದರು.

ಹಾಗೆ ಮೈಸೂರಿಗೆ ಹೋಗಿ ಭೇಟಿಯಾಗಲು ಯತ್ನ ಮಾಡಿದ್ದೆ.ಅದರೆ ಅವರು ಬಹಳ ಬ್ಯುಸಿ ಇದ್ದರು.ಹಾಗಾಗಿ ಮಾತನಾಡಲಾಗಲಿಲ್ಕ.


ಅದಾಗಿ ಸುಮಾರು ಹತ್ತು ವರ್ಷಗಳ  ನಂತರ ಅವರನ್ನು ನಾನು ಬೆಂಗಳೂರಿನಲ್ಲಿ  ಪುಸ್ತಕ ಬಿಡುಗಡೆ ಕಾರ್ಯಕ್ರಮ ಒಂದರಲ್ಲಿ ಭೇಟಿಯಾಗಿದ್ದೆ.ಆಗ ನನ್ನ ಎರಡೂ ಡಾಕ್ಟರೇಟ್ ಪದವಿಗಳು ಕೂಡ ಸಿಕ್ಕಿ ಆಗಿತ್ತು.ಮಾತನಾಡುವದ್ದು ಏನೂ ಇರಲಿಲ್ಲ.ಒಂದು ಅವರ ಜೊತೆ ಪೋಟೋ ತೆಗೆಸಿಕೊಂಡಿದ್ದೆ ಅಷ್ಟೇ

ನನಗೆ ಯಾರಲ್ಲೂ ಅತಿ ವಿನಯ ಪ್ರದರ್ಶಿಸಿ ಓಂಗುವ ಅಭ್ಯಾಸವಿಲ್ಲ.ನನಗೇನಾದರೂ ಅಗತ್ಯದ ಕೆಲಸ ಇದ್ದರೇ ಆ  ಕೆಲಸದ ಬಗ್ಗೆ ಮಾತ್ರ ಮಾತಾಡ್ತೇನೆ.ಬೇರೆ ನೀನೇ ಇಂದ್ರ ಚಂದ್ರ ಎಂದು ಹಾಡಹೊಗಳುವ ಅಭ್ಯಾಸವಿಲ್ಲ‌.ನನಗೆ ಪುಸ್ತಕ ಬೇಕಿದ್ದರೆ ಖರೀದಿಸುತ್ತೇನೆ‌.ದುಡ್ಡು ಕೊಟ್ಟು ಖರೀದಿಸಿದ ಪುಸ್ತಕದದ ಮೇಲೆ ಹಸ್ತಾಕ್ಷರ ಪಡೆವ ಅಭ್ಯಾಸ ನಾನಿಟ್ಟುಕೊಂಡಿಲ್ಲ.


ಇದರ ನಡುವೆ ನಾನು ಮಂಗಳೂರು ಯುನಿವರ್ಸಿಟಿಯ ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ನನ್ನ ಆತ್ಮೀಯರಾದ ಸ್ವಂತ ಅಣ್ಣನಂತೆ ಇರುವ ರಾಮಚಂದ್ರ ಭಟ್ ಅವರಲ್ಲಿ ಅಲ್ಲಿ ನೀಡಿದ API ಆಧಾರಿತ ಅಂಕಗಳನ್ನು ಪ್ರಶ್ನಿಸಬಹುದು ಎಂದು ಸಲಹೆ ನೀಡಿದ್ದರು.ಶೈಕ್ಷಣಿಕ ಅರ್ಹತೆ,ಎಂ ಎ ಮಾರ್ಕ್ಸ್  ಎನ್ ಇ ಟಿ ಡಾಕ್ಟರೇಟ್ ) ಮತ್ತು ಸಂಶೋಧನಾ ಪ್ರಕಟಣೆಗಳಿಗೆ ಸಂಬಂಧಿಸಿದ 57  ಅಂಕಗಳನ್ನು ಸಂದರ್ಶನಕ್ಕೆ ಮೊದಲೇ ನೀಡುತ್ತಾರೆ.ಇದರಲ್ಲಿ ಧನಂಜಯ ಕುಂಬಳೆ ಅವರಿಗೆ ಸಂಶೋಧನಾ ಪ್ರಕಟಣೆಯ ವಿಭಾಗದಲ್ಲಿ ಕೇವಲ ಎರಡು ಪುಸ್ತಕ ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಗ್ರಂಥ ಆಗಿತ್ತು.ಹಾಗಾಗಿ ಅವರಿಗೆ ಈ ವಿಭಾಗದ ಇಪ್ಪತ್ತು ಅಂಕಗಳಲ್ಲಿ ಐದು ಮಾತ್ರ ನೀಡಬೇಕಿತ್ತು.ಆದರೆ ಪೂರ್ಣಾಂಕ  20 ಅನ್ನು ನೀಡಿದ್ದರು.ನನ್ನದು ಹದಿನೇಳು ಪುಸ್ತಕಗಳಿದ್ದ ಕಾರಣ ಹೇಗೂ ಪೂರ್ಣಾಂಕ  20 ಬಂದಿತ್ತು.ಆದರೆ ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹದಿನೈದು ಅಂಕ ಹೆಚ್ಚು ನೀಡಿದ್ದು ನನಗೆ ಗೊತ್ತಾಯಿತು.ಬಹುಶಃ ವಿವೇಕ ರೈಗಳಿಗೆ ಮೊದಲೇ ಗೊತ್ತಿತ್ತೋ ಅಥವಾ ವೀಸಿಯಾಗಿ ನಿವೃತ್ತರಾದ ಅವರಿಗೆ ಇದರ ಕಲ್ಪನೆ ಇತ್ತೋ ಗೊತ್ತಿಲ್ಲ.ಅಂತಹದೊಂದು ಸಂದರ್ಭವನ್ನು ಊಹಿಸಿ   ಸಲಹೆ ನೀಡಿದ್ದಂತೂ ನಿಜ

ಅಂತೆಯೇ ಅದನ್ನು ನಾನಲ್ಲಿ ಪ್ರಶ್ನಿಸಿದೆ.ಸರಿ ಇಲ್ಲ ಎನಿಸಿದರೆ ಕೋರ್ಟಿಗೆ ಹೋಗಿ ಎಂಬ ಸಿದ್ದ ಉತ್ತರ ತಯಾರಾಗಿತ್ತು.ಅದೇ ಉತ್ತರ ಬಂತು

ಹಾಗೆ ಹೇಳುವಾಗಲೇ ಅಲ್ಲಿ‌ವರಿಗೆ ಕೋರ್ಟಿಗೆ ಹೋಗಿ ಗೆಲ್ಲಲು ಆಗುವುದಿಲ್ಲ ಎಂಬ ಸಂಗತಿ ಗೊತ್ತಿತ್ತು.ಯಾಕೆಂದರೆ ಕೋರ್ಟ್ ಅರ್ಹತೆಯನ್ನು ನಿರ್ಧರಿಸುದು ಆಯ್ಕೆ ಸಮಿತಿ ಅದರಲ್ಲಿ ಇಂಟರ್ಫಿಯರ್ ಆಗಲು ಕಾನೂನಿನಲ್ಲಿ ಅವಕಾಶ ಇಲ್ಲ‌ಎಂಬ ಒಂದೇ ಮಾತಿನಲ್ಲಿ ನಮಗೆ ಹೆಚ್ಚು ಅರ್ಹತೆ ಇದೆ ಎಂಬ ವಾದವನ್ನು ತಳ್ಳಿ ಹಾಕುತ್ತದೆ.

ಇದು ಅಲ್ಲಿನ ಆಯ್ಕೆ ಕಮಿಟಿಯ ಮುಖ್ಯಸ್ಥರಾಗಿದ್ದ ಡಾ.ಚಿನ್ನಪ್ಪಗೌಡ ಹಾಗೂ ಇತರರಿಗೆ ಗೊತ್ತಿದ್ದಿರಬಹುದು‌ ಯಾಕೆಂದರೆ ಮಂಗಳೂರು ಯುನಿವರ್ಸಿಟಿ ಪ್ರಾಧ್ಯಾಪಕ ಹುದ್ದೆಗೆ ಅಯ್ಕೆಯಾದಾಗ ಅವರಿಗಿಂತ ಹೆಚ್ಚು ಅರ್ಹತೆ ಇದ್ದವರು ( ಇವರಿಗೆ ಪಿಎಚ್ ಡಿ ಆಗಿರಲಿಲ್ಲವಂತೆ ,ಅವರಿಗೆ ಆಗಿತ್ತಂತೆ ) ಒಬ್ಬರು ಕೋರ್ಟಿಗೆ ಹೋಗಿದ್ದರಂತೆ.ಆಗಲೂ ಅರ್ಜತೆಯನ್ನು ನಿರ್ಧರಿಸುದು ಅಯ್ಕೆ ಸಮಿತಿ ಕೋರ್ಟಿಗೆ ಇಂಟಫಿಯರ್ ಆಗಲು ಆಗುದಿಲ್ಲ ಎಂಬ ತೀರ್ಪು ಬಂದಿತ್ತಂತೆ‌ಇದು ನಿಜವಾ ಸುಳ್ಳಾ ಗೊತ್ತಿಲ್ಲ.ಆದರೆ ಐವತ್ತು ಅರುವತ್ತು ಲಕ್ಷ ಲಂಚ ತಗೊಂಡರೂ ಧೈರ್ಯವಾಗಿ ಇರುವ ವಿಸಿ ,ಪ್ರೊಫೆಸರ್ ಗಳನ್ನು ಕಾಣುವಾಗ ಇದು ನಿಜವಿರಬಹುದೆನಿಸುತ್ತದೆ‌ ಮಂಗಳೂರು ಯುನಿವರ್ಸಿಟಿ ಕನ್ನಡ ವಿಭಾಗ ನೇಮಕಾತಿಯಲ್ಲಿ  ಅನ್ಯಾಯವಾಗಿದೆ ಎಂದು ನಾನು ಕೋರ್ಟಿಗೆ ಹೋದಾಗಲೂ ಇದೇ ಉತ್ತರ ಸಿಕ್ಕಿತ್ತು.ಭ್ರಷ್ಟರ ಕೂದಲು ಕೂಡ ಕೊಂಕಲಿಲ್ಲ


ಇರಲಿ..ಆದರೆ ಇಂತಹದ್ದೊಂದರ ಸೂಚನೆ ಡಾ.ಬಿಎ ವಿವೇಕ ರೈಗಳಿಗಿದ್ದೇ ಅವರು ಈ ಬಗ್ಗೆ ಸಲಹೆ ನೀಡಿರಬಹುದು


ಅವರಿಗೆ ನನ್ನ ಪರಿಚಯ ಇದ್ದಿರಲಾರದು‌ನನ್ನ ಬಗ್ಗೆ ,ನನ್ನ ಅಧ್ಯಯನದ ಬಗ್ಗೆ ತಿಳಿದಿರಲಾರದು ಎಂದೇ ನಾನು ಭಾವಿಸಿದ್ದೆ


ಕಾಂತಾವರ ಕನ್ನಡ ಸಂಘದ  ಮೂಲಕ ನಾಡಿಗೆ ಗಣನೀಯವಾದ  ಕೊಡುಗೆ ನೀಡಿದವರ ಬಗ್ಗೆ ನಾಡಿಗೆ ನಮಸ್ಕಾರ ಸರಣಿಯಲ್ಲಿ ಡಾ.ನಾ.ಮೊಗಸಾಲೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದು ಇತ್ತೀಚೆಗೆ ಎರಡು ವರ್ಷಗಳ ಮೊದಲು ನನ್ನ ಬಗ್ಗೆಯೂ ತುಳು ಸಂಸ್ಕೃತಿಯ ಸಂಶೋಧಕಿ ಲಕ್ಷ್ಮೀ ಜಿ ಪ್ರಸಾದ್ ವಾರಣಾಸಿ ಎಂಬ   ಪುಸ್ತಕ ಪ್ರಕಟಿಸಿದರು.

ಅದರ ಬಿಡುಗಡೆ ಸಮಾರಂಭಕ್ಕೆ ನಾನು ಕಾಂತಾವರಕ್ಕೆ ಹೋಗಿದ್ದೆ.


ಹಿಂದಿನ ದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರು ತಲುಪಿ ಸ್ನೇಹಿತೆಯ ಮನೆಗೆ ಹೋಗಿ ಸ್ನಾನ ಗೀನ‌ ಮುಗಿಸಿ ತಿಂಡಿ ತಿಂದು ಬಾಡಿಗೆ ಕಾರು ಮಾಡ ಹೊರಟಿದ್ದೆ.ಅರ್ಧ ದಾರಿ ತಲುಪುವಾಗ ಕಾರು ಹಾಳಾಗಿ ನಿಂತಿತು.ಅಲ್ಲಿಂದ ಬಸ್ ಹಿಡಿದು ಕಾಂತಾವರ ಕನ್ನಡ ಭವನ ತಲುಪುವಾಗ ಹನ್ನೊಂದು ಗಂಟೆ ಆಗಿತ್ತು.


ಎದುರಿಗೆ ಸಿಕ್ಕಿದ ಹಿರಿಯರಾದ ಡಾ.ನಾ ಮೊಗಸಾಲೆಯವರು ಬಹಳ ಪ್ರೀತಿಯಿಂದ ಸ್ವಾಗತಿಸಿ ತಿಂಡಿ ತಿಂದು  ಕಾಫಿ ಕುಡಿದು ಬನ್ನಿ ಎಂದು ಒಳಗೆ ಕಳುಹಿಸಿದರು.


ರಣ ಬಿಸಿಲಿಗೆ ಬಂದ ನನಗೆ ಒಳ ಹೊಕ್ಕಾಗ ಏನೂ ಕಾಣಿಸುತ್ತಿರಲಿಲ್ಲ.ಕೆಪ್ ಮುಪ್ಪಾಗಿ ಆ ಕಡೆ ಈ ಕಡೆ ನೋಡುತ್ತಿದ್ದೆ.


ಆಗ ಲಕ್ಷ್ಮಿಯವರಿಗೆ ನಮಸ್ಕಾರ ಎಂಬ ಗಂಭೀರವಾದ ದ್ವನಿ ಕೇಳಿಸಿತು.ಯಾರೆಂದು ನೋಡಿದರೆ ಉಪ್ಪರಿಗೆ ಮೆಟ್ಟಲಿನಿಂದ ಇಳಿದು ಬರುತ್ತಿದ್ದ ಡಾ ವಿವೇಕ್ ರೈ ಮತ್ತಿರರನ್ನು ನೋಡಿದೆ‌‌‌‌.ಹಾಗಂದಿದ್ದು ವಿವೇಕ ರೈಗಳೆಂದು ಅರ್ಥ ಮಾಡಿಕೊಂಡು ಅವರಿಗೆ ನಮಸ್ಕರಿಸಿದೆ.


ನನಗೆ ತುಂಬಾ ಅಚ್ಚರಿ ಆಗಿತ್ತು ಆಗ.ನನ್ನ ಮುಖ ಪರಿಚಯ ಬಿಡಿ ಹೆಸರು ಕೂಡ ಅವರಿಗೆ ತಿಳಿದಿರಲಾರರು ಎಂದು ನಾನು ಭಾವಿಸಿದ್ದೆ.


ಬಹಳ ದೊಡ್ಡ ವ್ಯಕ್ತಿ ಅವರು .ಯುನಿವರ್ಸಿಟಿಯ ವಿಸಿಯಾಗಿ ನಿವೃತ್ತರಾದವರು.ವಿದೇಶೀ ವಿಶ್ವ ವಿದ್ಯಾಲಯಗಳ ಆಹ್ವಾನಿತ ಅತಿಥಿ ಉಪನ್ಯಾಸಕರಾಗಿ ಬಲು ದೊಡ್ಡ ಗೌರವಕ್ಕೆ ಪಾತ್ರರಾದವರು...ಅವರೆಲ್ಲಿ..ಸಾಮಾನ್ಯ ಉಪನ್ಯಾಸಕಿಯಾಗಿರುವ ನಾನೆಲ್ಲಿ ? 


ಹಾಗಾಗಿ ಅವರೇ ಲಕ್ಷ್ಮೀಯವರಿಗೆ ನಮಸ್ಕಾರ ಎಂದಾಗ ಒಂದು ಕ್ಷಣ ಗಲಿಬಿಲಿಗೆ ಒಳಗಾಗಿದ್ದೆ.


ನಂತರ ನಾನು ಕಾಫಿ ಕುಡಿಯಲು ಹೋದೆ ಅಲ್ಲಿ ಈ ಪುಸ್ತಕದ ಸಂಪಾದಕರಾದ ಡಾ.ಜನಾರ್ದನ ಭಟ್ ಲೇಖಕರಾದ ಗುಣಾಜೆ ರಾಮಚಂದ್ರ ಭಟ್ ಸಿಕ್ಕರು.

ನಂತರ ಸಭಾ ಕಾರ್ಯಕ್ರಮ,ಪುಸ್ತಕ ಬಿಡುಗಡೆಯನ್ನು ತುಕಾರಾಮ ಪೂಜಾರಿಯವರು ಮಾಡಿದರು ( ಕಾಲನ ನಡೆ ಬಹಳ ವಿಚಿತ್ರವಾದುದು ,ಈ ಬಗ್ಗೆ ಇನ್ನೊಂದಿನ ಬರೆಯುವೆ  )

ನಂತರ ಮೀಯಪದವು ಪ್ರೌಢ ಶಾಲೆಯ ರಾಜಾರಾಮ‌ಮಾಸ್ಟ್ರು ತಮ್ಮ  ಕಾರಿನಲ್ಲಿ ಮನೆಗೆ ತನಕ ಬಿಟ್ಟರು .


ಈ ವಿಚಾರವನ್ನು ಮರೆತೇ ಬಿಟ್ಟಿದ್ದೆ ಕೂಡ‌.ನಿನ್ನೆ ಫ್ಯಾಕ್ಟ್ ಚೆಕ್ ಒಂದರಲ್ಲಿ ನಮ್ಮ‌ ಪ್ರಧಾನಿ ಯವರಾದ ನರೇಂದ್ರ ಮೋದಿಯವರು ಸಾಮಾಜಿಕ ಕಾರ್ಯಕರ್ತೆ ಮೊಂಡಲ್  ಅವರಿಗೆ ನಮಸ್ಕರಿಸಿದ ಫೋಟೋ ನೋಡಿದೆ


ಆ ಬಗ್ಗೆ ಮೊಂಡಲ್  ಅವರು ನರೇಂದ್ರ ಮೋದಿಯವರಿಗೆ ನಾನು ನಮಸ್ಕರಿಸಿದೆ ಆಗ ನೀವು ಏನು ಮಾಡುತ್ತೀರಿ ಎಂದು ವಿಚಾರಿಸಿದರು.ಆಗ ನಾನು ಸಮಾಜ ಸೇವಾ ಕಾರ್ಯಕರ್ತೆ ಎಂದೆ.ಆಗ ಅವರು ಕೈಮುಗಿದರು.

ಆಗ ನನಗೆಷ್ಟು ಸಂತಸವಾಯಿತೆಂದು ನನ್ನ ನಗುತ್ತಿರುವ ಫೋಟೋ ನೋಡಿದರೆ ತಿಳಿಯಬಹುದು ಎಂದಿದ್ದ ಬಗ್ಗೆ ವಿವರಣೆ ಇತ್ತು


ಹೌದು‌.ದೊಡ್ಡವರು ಯಾವಾಗಲೂ ಹಾಗೆಯೇ..ಅರ್ಹತೆಯನ್ನು ಗುರುತಿಸಿ ಅವರಿಗೆ ತಲೆಬಾಗುತ್ತಾರೆ.


ಆಗ ನನಗೆ ಡಾ.ಬಿ ಎ ವಿವೇಕ ರೈಗಳು ಕಾಂತಾವರದಲ್ಲಿ  ಅವರಾಗಿಯೇ  ಕರೆದು ನಮಸ್ಕರಿಸಿದ್ದು ನೆನಪಾಯಿತು.


ದೊಡ್ಡವರ ನಡೆ ಯಾವಾಗಲೂ ಹಾಗೆಯೇ..ಅನೂಹ್ಯವಾದದ್ದು.

ದೊಡ್ಡವರು ಯಾವಾಗಲೂ ಒಳಿತನ್ನು ಗುರುತಿಸಿ ಗೌರವಿಸುತ್ತಾರೆ.


ಅವರು ನಮಗೆ ನಮಸ್ಕರಿಸಿದ್ದಾರೆ ಎಂದರೆ ನಾವು ದೊಡ್ಡವರು ಎಂದರ್ಥವಲ್ಲ.ಅವರಿಗೆ ಎಳೆಯರಲ್ಲಿನ ಅರ್ಹತೆಯನ್ನು ಗುರುತಿಸಿ ಗೌರವಿಸುವ ಉದಾರ ಹೃದಯ ಇದೆ ಎಂದು ಅರ್ಥ ಅಷ್ಟೇ‌


ಡಾ.ಬಿ ಎ ವಿವೇಕ ರೈಗಳು ಎಷ್ಟು ಎತ್ತರದ ವ್ಯಕ್ತಿ ಎಂದಿದರಲ್ಲಿ ಅರ್ಥವಾಗುತ್ತದೆ.ಆ ಪೊಂಜೋವಿನ ಪಾತೆರನ್ ಎಂಕುಲು ಲೆಕ್ಕೊಗ್ ದೀಪುಜ್ಜ ( ಅ ಹೆಂಗಸಿನ ಮಾತನ್ನು ನಾನು ಲೆಕ್ಕಕ್ಕೆ ತಗೊಳ್ಳುದಿಲ್ಲ ) ಸರ್ಟಿಫಿಕೇಟ್ ಗಳು ಮಾನದಂಡವಲ್ಲ ಎಂಬವರ ನಡುವೆ ಇವರು ಭಿನ್ನರಾಗಿ ನಿಲ್ಲುತ್ತಾರೆ.


ಭ್ರಷ್ಟರಿಗೆ ನನ್ನ ಮೂರು ಎಂಎ ಎರಡು ಡಾಕ್ಡರೇಟ್ ಪದವಿಗಳ,ಇನ್ನೂರರಷ್ಡು ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳ ಬಗೆಗಿನ ಸರ್ಟಿಫಿಕೇಟ್ ಗಳು ಮಾನದಂಡವಲ್ಲ.ಪ್ರಕಟಿತ ಇಪ್ಪತ್ತು ಪುಸ್ತಕಗಳು,ಬರಹಗಳು ಮಾನದಂಡವಲ್ಲ‌ಹಾಗಾದರೆ ಆಯ್ಕೆ ಸಮಿತಿಯವರ ಮಾನ ದಂಡ ಯಾವುದು ? ಮಾನವೂ ಇಲ್ಲ..ದಂಡವೇ ಎಲ್ಲ..ದುಡ್ಡು,ಜಾತಿ ,ಇನ್ಪ್ಲೂಯೆನ್ಸ್ ಅಷ್ಟೇ ಎಲ್ಲ 


ಮಾನ ಇರುವ ಹಿರಿಯರಿಗೆ ಅರ್ಹತೆ ಕಾಣಿಸುತ್ತದೆ ಎಂಬುದಕ್ಕೆ ವಿವೇಕ ರೈಗಳೇ ಸಾಕ್ಷಿ 

ತುಳು ಜಾನಪದ ಸಂಸ್ಕೃತಿ ಅದರಲ್ಲೂ ನಡು ರಾತ್ರಿ ನಡೆವ ಭೂತ ಕೋಲವನ್ನು ರೆಕಾರ್ಡ್ ಮಾಡಿ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕುದು ಎಷ್ಟು ಕಷ್ಟದ ವಿಚಾರ ಹೇಳುದು ಮೂಲತಃ ಜಾನಪದ ಸಂಶೋಧಕರಾದ ಅವರಿಗೆ ಅರಿವಿತ್ತು.ಫ್ಯಾನ್ ಅಡಿಯಲ್ಲಿ ಕುಳಿತು ಯಾರದೊ ಕೃತಿ ಬಗ್ಗೆ ಬರೆದು ಡಾಕ್ಟರೇಟ್ ಪದವಿ ಪಡೆವದಕ್ಕೂ ಕ್ಷೇತ್ರ ಕಾರ್ಯದ ಆಧಾರಿತ ಅಧ್ಯಯನಕ್ಕೂ ಅಜಗಜಾಂತರವಿದೆ.ಅದರ ಮಹತ್ವವನ್ನು ಡಾ.ವಿವೇಕ ರೈಗಳು ಗುರುತಿಸಿದ್ದರು 


ಡಾ.ಲಕ್ಷ್ಮೀ ಜಿ ಪ್ರಸಾದ್

Sunday, 9 May 2021

ದೊಡ್ಡವರ ದಾರಿ 76 : ಡಾ.ಜನಾರ್ದನ ಭಟ್

 


ದೊಡ್ಡವರ ದಾರಿ 76 : ಡಾ.ಜನಾರ್ದನ ಭಟ್ Janardana Bhat

ಸೋಂಕು ತಗುಲಿದಾಗ ನಿಮಗೆ ಮೊದಲು ನೆನಪಿಗೆ ಬಂದದ್ದು ಯಾರು ? ಇದು ಅನೇಕರು ನನ್ನಲ್ಲಿ ಕೇಳಿದ ಪ್ರಶ್ನೆ

ಕೊರೊನಾ ಲಕ್ಷಣ ಕಾಣಿಸಿಕೊಂಡಾಗ ನನಗೆ ಮೊದಲು ನೆನಪಾದದ್ದು ಅಮ್ಮ.
ನನಗೇನಾದರೂ ಆದರೆ ಅಮ್ಮನಿಗೆ ತಡೆಯಲಾಗದು ಎನಿಸಿತು.
ಜೊತೆಗೆ ಇನ್ನೊಂದು ವಿಚಾರ ತಲೆಗೆ ಬಂತು
ಕಳೆದ ಇಪ್ಪತ್ತು ವರ್ಷಗಳಿಂದ ಕ್ಷೇತ್ರ ಕಾರ್ಯ ಅಧ್ಯಯನ ಮಾಡಿ ಸಾವಿರಕ್ಕು ಹೆಚ್ಚಿನ ದೈವಗಳ ಮಾಹಿತಿ ಸಂಗ್ರಹ ಮಾಡಿದ್ದೆ.ಪ್ರಕಟಿಸುವುದಕ್ಕಾಗಿ ಬರೆದು ಕೂಡ ಆಗಿದೆ.ಅದರೆ ಅದಕ್ಕೆ ಅದನ್ನು ತಿದ್ದಿ ವ್ಯವಸ್ಥಿತವಾಗಿ ಜೋಡಿಸಿ ಸೂಕ್ತ ಫೋಟೋಗಳನ್ನು ಹಾಕುವ ಕೆಲಸ ಉಳಿದಿತ್ತು
ಜೊತೆಗೆ A4size ನ ಸಾವಿರದಷ್ಟು ಪುಟಗಳುಳ್ಳ ಪುಸ್ತಕದ ಪ್ರಕಟಣೆಗೆ ಎಂಟು ಹತ್ತು ಲಕ್ಷ ಖರ್ಚಿದೆ‌.

ಒಂದೊಮ್ಮೆ ನಾನಿಲ್ಲವಾದರೆ
ಇವನ್ನೆಲ್ಲ ಮಾಡಲು ಮಗ ಅರವಿಂದನಿಂದ ಸಾಧ್ಯವಿಲ್ಲ.
ನನ್ನ ಇಷ್ಡು ಸಮಯದ ಅಧ್ಯಯನ  ಮುಂದಿನ ತಲೆಮಾರಿಗೆ ತಲುಪದೇ ವ್ಯರ್ಥವಾಗುತ್ತದಲ್ಲ ಎಂಬ ಚಿಂತೆ ಕಾಡಿತು.
ಯಾವುದಕ್ಕೂ ಇರಲಿ ಎಂದು ಬರೆದಿಟ್ಟಿರುವ ವರ್್ಡ್ ಫೈಲನ್ನು ಮಗನಿಗೆ ಇ ಮೇಲ್ ಮಾಡಿದೆ.
ಆಗ ನನಗೆ ನಾನಿಲ್ಲದಿದ್ದರೂ ಈ ಕೆಲಸವನ್ನು ನಿಸ್ವಾರ್ಥದಿಂದ ಸಮರ್ಪಕವಾಗಿ ಹಿರಿಯ ಸಂಶೋಧಕರಾದ ನಿವೃತ್ತ ಪ್ರಾಾಂಶುಪಾಲರೂ ಐವತ್ತಕ್ಕಿಂತ. ಹೆಚ್ಚು ಪುಸ್ತಕಗಳನ್ನು ರಚಿಸಿ ಪ್ರರಕಟಿಸಿರು  ಡಾ.ಜನಾರ್ಧನ ಭಟ್ ಅವರು ಮಾಡಬಲ್ಲರು ಎಂದೆನಿಸಿತು.
ಅವರೊಂದು ಅದ್ಭುತ ವ್ಯಕ್ತಿ.ಹೇಗೆ ಅಷ್ಟನ್ನು ಬರೆಯುವರೊ ನನಗೆ ಗೊತ್ತಾಗುದಿಲ್ಲ.ಕೆಲವರಿಗೆ ದೇವರು ಹೆಚ್ಚಿನ ಸಾಮರ್ಥ್ಯ ಕೊಟ್ಟಿರ್ತಾನೆ
ಹಾಗೆ ಹಾಸ್ಪಿಟಲ್ ಗೆ ದಾಖಲಾಗಲು ಹೋಗುವ ಮೊದಲು‌ಡಾ.ಜನಾರ್ದನ ಭಟ್ ರಿಗೆ ಕರೆ ಮಾಡಿ ನನಗೆ ಕೊರೊನಾ ಪಾಸಿಟಿವ್ ಬಂದಿದ್ದು ಅಸ್ಪತ್ರೆಗೆ ದಾಖಲಾಗಬೇಕಿರುವ ಬಗ್ಗೆ ತಿಳಿಸಿದೆ.ಅಲ್ಲಿ‌ಮೊಬೈಲ್ ತಗೊಂಡು ಹೋಗಲು ಬಿಡುವರೊ ಇಲ್ಲವೊ ಗೊತ್ತಿಲ್ಲ.ಹಾಗಾಗಿ ಈಗಲೇ ರಿಕ್ವೆಷ್ಟ್ ಮಾಡುವೆ ಸರಗ,ಒಂದೊಮ್ಮೆ ನಾನು ಆಸ್ಪತ್ರೆಯಿಂದ ಜೀವಂತ ಬಾರದೇ ಇದ್ದರೆ ನನ್ನ ಪುಸ್ತಕವನ್ನು ಎಡಿಟ್ ಮಾಡಿ  ದುಡ್ಡು ಹೊಂದಿಸಿ ಪ್ರಕಟಿಸುವಿರಾ ? ಎಂದು ಕೇಳಿದೆ..ನೀವು ಹುಷಾರಾಗಿ ಬರ್ತೀರಿ ಎಂದು ದೃಢವಾಗಿ ಹೇಳಿದರು  ,ಒಂದೊಮ್ಮೆ ಬಾರದಿದ್ದರೆ ಪ್ರಕಟಿಸುತ್ತೀರಾ ಕೇಳಿದೆ  ಎಂದು ಹೇಳಿದೆ.ಆಗ ಅಯಿತು ಖಂಡಿತಾ ಪ್ರಕಟಿಸುತ್ತೇನೆ ,ಆದರೆ ಹಾಗಾಗುದಿಲ್ಲ‌‌.ಹುಷಾರಾಗು ಬಂದು ನೀವೇ ಅದನ್ನು ಪ್ರಕಟಿಸುತ್ತೀರಿ ಎಂದರು
ಅಬ್ಬಾ.. ಭಾರ ಇಳಿಸಿದ ಅನುಭವ ಆಯಿತು
ಮನಸ್ಸು ನಿರಾಳವಾಯಿತು.
ನೆಮ್ಮದಿಯಿಂದ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆದು ಹುಷಾರಾಗಿ ಬಂದೆ
ಈಗ ಬರೆದದ್ದನ್ನು ತಂಗಿಯಂತೆ ಇರುವ ಸ್ನೇಹಿತೆ ಶ್ರೀನಿಧಿ ಕರೆಕ್ಷನ್ ಹಾಕುತ್ತಿದ್ದಾರೆ.
ನಾನು ಅಲ್ಲಲ್ಲಿ ಬಿಟ್ಟು ಹೋಗಿರುದನ್ನು ತುಂಬಿಸುತ್ತಿದ್ದೇನೆ ನಾಗರಾಜ ಭಟ್ ,ರಾಜೇಂದ್ರ ಕುಮಾರ್ ಜೈನ್ ಗೌತಮ್ ಜೈನ್ ,ವಿಜಯ್ ಮೊದಲಾದವರು ಅಪರೂಪದ ಪೋಟೋಗಳನ್ನು ಒದಗಿಸಿದ್ದಾರೆ‌.ಇನ್ನು ಕೆಲವರಲ್ಲಿ ಕೇಳಿರುವೆ
ಇದನ್ನಲ್ಲ ಜೋಡಿಸುವಾಗ ಈ ಪುಸ್ತಕವನ್ನು ನಾನು ಪ್ರಕಟಿಸುವ ಬದಲು ಜನಾರ್ದನ ಭಟ್ ಅವರು ಪ್ರಕಟಿಸಿದರೆ ತುಂಬಾ ಚೆನ್ನಾಗಿ ಬರ್ತಿತ್ತು ಎಂದು ನನಗೆ ಅನಿಸಿದೆ.ಅವರ ಅನುಭವ ,ಕೌಶಲ ಬಹಳ ಹೆಚ್ಚಿನದು.
ಅವರಲ್ಲಿ ಸಲಹೆ ಪಡೆಯುವೆ
ನನ್ನ ಅಧ್ಯಯನಾತ್ಮ ಸಂಗ್ರಹ ಸಾವಿರಕ್ಕಿಂತ ಹೆಚ್ಚಿನ ದೈವಗಳ ಮಾಹಿತಿ ಇರುವ ಪುಸ್ತಕ ಪ್ರಕಟಿಸುವ ಮುನ್ನವೇ ನಾನು ಸತ್ತರೆ ಇದನ್ನಾರು ಪ್ರಕಟಿಸುವರು ಎಂಬ ಆತಂಕ ಕಾಡಿದಾಗ ದೃಡವಾಗಿ ಪ್ರಕಟಿಸುವೆ ಎಂದು ಲಕ್ಷ ಗಟ್ಟಲೆ ಖರ್ಚಿನ ತಲೆನೋವಿನ ಜವಾಬ್ದಾರಿಯನ್ನು ಹೊರಲು ಸಿದ್ದರಾಗಿದ್ದ ಜನಾರ್ದನ ಭಟ್ಟರ ಔನ್ನತ್ಯಕ್ಕೆ ಹಿರಿತನಕ್ಕೆ ಸಹೃದಯತೆಗೆ ನಾನು ಆಭಾರಿಯಾಗಿದ್ದೇನೆ

Saturday, 10 April 2021

ನನಗೂ ಆತ್ಮವಿದೆ..ಪಾಸು ಫೇಲೆಂಬ ಆತಂಕದ ದಿನದಂದು

 ಎಪ್ರಿಲ್ ಹತ್ತರ  ಪಾಸು ಫೇಲಿನ ದಿನವೆಂಬ ಭಯ ಆತಂಕದ ದಿನ 


ಹೌದು..ಪ್ರತಿವರ್ಷ ಎಪ್ರಿಲ್ ಹತ್ತಕ್ಕೆ ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಾಲೆಯ ಬೋರ್ಡ್ ನಲ್ಲಿ ಹಾಕ್ತಿದ್ದರು.ಎಪ್ರಿಲ್  ಮೊದಲ ದಿನಾಂಕದಿಂದಲೇ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗುತ್ತಿತ್ತು.ಪಾಸ್ ಪೇಲ್ ದಿನ ಹತ್ತಿರ ಬಂದ ಹಾಗೇ ಊಟ ತಿಂಡಿ ಸೇರುತ್ತಿರಲಿಲ್ಲ.ನಮ್ಮಂತೆಯೇ ನಮ್ಮ ಹೆತ್ತವರಿಗೂ ಇದೇ ಆತಂಕ.

ಚೆನ್ನಾಗಿ ಕಲಿಯದವರನ್ನು ಫೇಲಾದವರನ್ನು "ಹೋಗು ಬಜೆಂಟ್ ಹೆರ್ಕು " ಎಂದು ಬೈಉವ ವಾಡಿಕೆ ಇತ್ತು.ಆದರೆ ಪಾಸಾಗುತ್ತಿದ್ದ ನಾವು ಕೂಡ ಬೇಸಗೆಯಲ್ಲಿ ಬಜಂಟ್ ಹೆಕ್ಕುತ್ತಿದ್ದೆವು.

ಬಜಂಟು ಎಂದರೆ ಒಣ ಸೆಗಣಿ.ಬೇಸಗೆಯ ಸಮಯದಲ್ಲಿ ನಾವು‌ಮಕ್ಕಳೆಲ್ಲ ಗುಡ್ಡವೆಲ್ಲ ಬಜೆಂಟಿಗಾಗಿ ಹುಡುಕುತ್ತಿದ್ದೆವು.ಮೇಯಲು ಬಿಟ್ಟ ಹಸುಗಳು ಹಾಕಿದ ಒಣ ಸೆಗಣಿ ಸಿಕ್ತಾ ಇತ್ತು.

ಇದನ್ನು ಮಳೆಗಾಲದಲ್ಲಿ ಒಲೆ ಉರಿಸಲು ಬಳಸುತ್ತಾ ಇದ್ದರು.

ನಾವು ಏಳೆಂಟು ಸಮ ವಯಸ್ಸಿನ ಮಕ್ಕಳು ಒಂದೊಂದು ಗೋಣಿ ಚೀಲ ಹಿಡಿದುಕೊಂಡು ಬಜಂಟು ಹೆಕ್ಕಲು ಹೋಗುತ್ತಿದ್ದೆವು.ಅದು ನಮಗೆ ಬೇಸರ ತರುವ ಕೆಲಸವಾಗಿರಲಿಲ್ಲ.ಗುಡ್ಡಗಾಡಿಬ ಕಾಡು ಹಣ್ಣುಗಳನ್ನು ಅಯ್ದು ತಿಂದುಕೊಂಡು ಕಾಡು ಹರಟೆ ಹೊಡೆದುಕೊಂಡು ಬಹಳ ಖುಷಿಯಿಂದ ಈ ಕೆಲಸ ಮಾಡ್ತಿದ್ದೆವು ಎಂಬುದು ಬೇರೆ ವಿಚಾರ.ಅದರೂ ಫೇಲಾದವರು ಬಜಂಟು ಹೆಕ್ಕಲು ಲಾಯಕ್ಕು ಎಂಬ ಮಾತು ಆಗ ಇತ್ತು 


ಆಗೆಲ್ಲ ಫೇಲ್ ಆದರೆ ಮರು ಪರೀಕ್ಷೆ ಇರುತ್ತಿರಲಿಲ್ಲ.ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಇರಬೇಕು.ಅದು ನಮಗೆ ಬಹಳ ಅವಮಾನಕರ ವಿಚಾರ.ಹಾಗಾಗಿ ಪಾಸಾಗದಿದ್ದರೆ ಎಂಬ ಆತಂಕ ಕಾಡುತ್ತಿತ್ತು.


ಕೆಲವೊಮ್ಮೆ ಜಾಣ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಅವರೂ ಕೂಡ ಫೇಲ್ .ನಂತರದ ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು.


ಈ ಅವಮಾನ ಸ್ವೀಕರಿಸಲು ತಯಾರಿಲ್ಲದ ಮಕ್ಕಳ ವಿದ್ಯಾಭ್ಯಾಸ ಇದೇ ಕಾರಣಕ್ಕಾಗಿ ಅಲ್ಲಿಗೇ ನಿಂತು ಹೋಗುತ್ತಿತ್ತು.


ನನಗೆ ನೆನಪಿನಲ್ಲಿರುವಂತೆ ನನ್ನ ಸಹಪಾಠಿಗಳಾಗಿದ್ದ  ಇಬ್ಬರು ಜಾಣ ವಿದ್ಯಾರ್ಥಿಗಳ ಶಿಜ್ಷಣ ಹೀಗೆ ಅರ್ಧದಲ್ಲಿಯೇ ಮೊಟಕಾಗಿತ್ತು


ಒಂದು ನನ್ನ ಬಾಲ್ಯ ಸ್ನೇಹಿತೆ ಯಶೋದಾಳದು.ಅವಳು ಎಂಟನೇ ತರಗತಿಯ ಅಂತಿಮ /ವಾರ್ಷಿಕ ಪರೀಕ್ಷೆಯಲ್ಲಿ ಒಂದೆರಡು ವಿಷಯಗಳಿಗೆ ಗೈರು ಹಾಜರಾಗಿದ್ದಳು.


ಅವಳೂ ನಾನೂ ಒಟ್ಟಿಗೆ ಕೋಳ್ಯೂರಿನಿಂದ ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಗೆ  ನಡೆದುಕೊಂಡು ಹೋಗಿ ಬರುತ್ತಿದ್ದೆವು.ಎರಡು ಗುಡ್ಡ ಹತ್ತಿ ಇಳಿಯಬೇಕು.ಸುಮಾರು ನಾಲ್ಕೈದು ಮೈಲು ನಡೆಯಬೇಕಿತ್ತು.


ಅಗಿ‌ನ್ನೂ ನನಗೆ ಸರಿಯಾಗಿ ನೆನಪಿದೆ

ಸುಮಾರು ಎಂಟು ಎಂಟೂವರೆ ಗಂಟೆ ಹೊತ್ತಿಗೆ ಅವಳು ನಮ್ಮ ಮನೆಗೆ ಬರ್ತಿದ್ದಳು.ಅವಳನ್ನೇ ಕಾಯುತ್ತಿರುವ ನಾನು ಕೂಡಲೇ ಮೆಟ್ಟಿಳಿದು ಮನೆಯ ಗದ್ದೆಯ ಬದುವಿನಲ್ಲಿ ಸಾಗಿ.ತೋಡಿನ ಸಂಕ ದಾಟಿ ಅಂಗಡಿ ಎದುರು ಎತ್ತರಕ್ಕೆ ಹತ್ತಿ ಸಾಗುತ್ತಿದ್ದೆವು.

 1986 ಮಾರ್ಚ್ ಕೊನೆಯ ವಾರ.ಪ್ರೌಢ ಶಾಲೆಯಲ್ಲಿ ಅಂತಿಮ ಪರಿಕ್ಷೆಗಳು ನಡೆಯುತ್ತಿದ್ದವು.

.ನಮಗೆ ಆಗ ಹನ್ನೆರಡು ಪರೀಕ್ಷೆಗಳಿದ್ದವು.ಕನ್ನಡ ಎರಡು ಪತ್ರಿಕೆಗಳು,ವಿಜ್ಞಾನ ಮೂರು ಪತ್ರಿಕೆಗಳು,ಗಣಿತ ಎರಡು ಪತ್ರಿಕೆಗಳು ,ಸಮಾಜ ಶಾಸ್ತ್ರ ಎರಡು ಪತ್ರಿಕೆಗಳು ,ಹಿಂದಿ ಒಂದು ಪತ್ರಿಕೆ.


ಕೊನೆಯ ಒಂದೆರಡು ಪರೀಕ್ಷೆಗಳು ಉಳಿದಿದ್ದವು

ಆ ದಿನ ಯಶೋಧಾ ಎಂಟೂವರೆ ಕಳೆದರೂ ನಮ್ಮ‌ಮನೆಗೆ ಬಂದಿರಲಿಲ್ಲ.ಅವಳ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಮನೆ ಇತ್ತು.


ಅವಳು ಬಾರದ ಕಾರಣ ನಾನೇ ಅವಳ ಮನೆಗೆ ಹೋದೆ.ಅವಳು ಚಳಿಗೆ ನಡುಗುತ್ತಾ ಕಂಬಳಿ ಹೊದ್ದು ಮಲಗಿದ್ದಳು.

"ನಮ್ಮ ಯಶೋಧೆಗೆ  ಮೈಯಲ್ಲಿ ಬಿದ್ದಿದೆ( ಚಿಕನ್ ಪಾಕ್ಸ್ ) .ಅವಳು ಪರೀಕ್ಷೆಗೆ ಬರುದಿಲ್ಲ‌.ನೀನು ಹೋಗು ವಿದ್ಯಾ ,( ನನ್ನನ್ನು ಮನೆಯಲ್ಲಿ,ಊರಲಿ ವಿದ್ಯಾ ಎಂದು ಕರೆಯುತ್ತಾರೆ )ಒಂದು ವಾರ ಮನೆಗೆ ಬರಬೇಡ.ನಿನಗೂ ಹರಡುತ್ತದೆ " ಎಂದು ಹೇಳಿದರು


ಆಗ ಅಯ್ಯೋ..ಅವಳು ಫೇಲ್ ಆಗ್ತಾಳಲ್ಲ ಎಂದು ನನಗೆ ಆತಂಕ ಆಯಿತು.

ನಂತರ ಒಬ್ಬಳೇ ನಡೆದುಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆದೆ.

ನಿರೀಕ್ಷೆಯಂತೆಯೇ ಯಶೋಧಾ ಫೇಲ್ ಆಗಿದ್ದಳು.

ಅದರ ಪರಿಣಾಮವಾಗಿ ಜಾಣೆಯಾಗಿದ್ದ ಅವಳ ಓದು ಅಲ್ಲಿಗೇ ನಿಂತಿತು.ಅವಳು ಮುಂದೆ ಓದಲಿಲ್ಲ.

ನಂತರ ದೊಡ್ಡವಳಾಗಿ ಮದುವೆಯಾದ ನಂತರ ಕಾಸಗಿಯಾಗಿ ಕಟ್ಟಿ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಮಾಡಿದ್ದಾಳೆ.


ಇದೇ ರೀತಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿರುವಾಗ ರವೀಂದ್ರ ಎಂಬ ಹುಡುಗನಿಗೂ ಆರೋಗ್ಯ ಸಮಸ್ಯೆ ಬಂದು‌ಪರೀಕ್ಷೆ ಬರೆಯಲಾಗಲಿಲ್ಲ.ಫೇಲಾದ ಕಾರಣ ನಂತರ ಅವನೂ ವಿದ್ಯಾಭ್ಯಾಸ ಮುಂದುವರಿಸಲಿಲ್ಲ


ಈಗ ಒಂದರಿಂದ ಒಂಬತ್ತರ ತನಕ ಫೇಲ್ ಮಾಡುದೇ ಇಲ್ಲ.ಹಾಗಾಗಿ ನಮ್ಮಷ್ಟು ಆತಂಕ ಈಗಿನ‌ಮಕ್ಕಳಿಗೆ ಇರಲಾರದೋ ಏನೋ

ನನಗೆ ಈಗ ನಗು ಬರುವ ವಿಚಾರ ಒಂದಿದೆ.ನಾನು ಸಾಮಾನ್ಯವಾಗಿ ತರಗತಿಯಲ್ಲಿ‌ ಮೊದಲ‌ ಇಲ್ಲವೇ ಎರಡನೇ Rank ತೆಗೆಯುತ್ತಿದ್ದೆ.ನನ್ನನ್ನೂ ಫೇಲ್ ಮಾಡಿದರೆ ಮತ್ತೆ ಶಿಕ್ಷಕರು ಎಂತ ಮಾಡುದು ? ಪಾಠ ಮಾಡಲು ವಿದ್ಯಾರ್ಥಿಗಳು ಬೇಡವೇ?


ಆದರೆ ನನಗೆ ಆಗ ಈ ವಿಚಾರ ಎಲ್ಲ ಗೊತ್ತಿರಲಿಲ್ಲ.ಇತರ ಸಾಮಾನ್ಯ ಮಾರ್ಕ್ಸ್ನ ವಿದ್ಯಾರ್ಥಿಗಳಂತೆ ಪಾಸ್ ಫೇಲಿನ ದಿನವನ್ನು ಆತಂಕದಿಂದ ಎದುರು ನೋಡುತ್ತಿದ್ದೆ.

ಎಪ್ರಿಲ್ ಹತ್ತನೆಯ ತಾರೀಕಿನಂದು ಎಲ್ಲ ದೇವರುಗಳೂ ನೆನಪಿಗೆ ಬರ್ತಿದ್ದರು.ಅವರನ್ನೆಲ್ಲ ನೆನೆದು ನನ್ನನ್ನು ಪಾಸು ಮಾಡಿಸು ಎಂದು ಬೇಡಿಕೊಳ್ಳುತ್ತಿದ್ದೆ

ಎಂದಿಗಿಂತ ಬೇಗನೆ ಎದ್ದು ದೇವರಿಗೆ ಹೆಚ್ಚು ಹೂ ಕೊಯ್ದು ಇಡುತ್ತಿದ್ದೆ.ನಂತರ ಸ್ನಾನ ಮಾಡಿ ದೇವರಿಗೆ ಹೊಡಾಡಿ( ನಮಸ್ಕರಿಸಿ) ಶಾಲೆಗೆ ಹೋಗುತ್ತಿದ್ದೆ.ಅಲ್ಲಿ ಬೋರ್ಡ್ ನಲ್ಲಿ ಫೇಲಾದವರ ಹೆಸರನ್ನು ಹಾಕ್ತಾ ಇದ್ದರು.

ಶಾಲೆ ಸಮೀಪಿಸಿದಂತೆಲ್ಲ‌ ಎದೆ ಇತರರಿಗೆ  ಕೇಳುವಷ್ಡು ದೊಡ್ಡದಾಗಿ ಡಬ್ ಡಬ್ ಬಡಿಯುತ್ತಾ ಇತ್ತು.ಹೇಗೋ ಹೋಗಿ ಫೇಲಾದವರ ಲಿಸ್ಟ್  ಅನ್ನು ಎರಡೆರಡು ಸಲ ಓದಿ‌ ನನ್ನ ಹೆಸರು ಅದರಲ್ಲಿ ಇಲ್ಲದಿರುವುದನ್ನು ನೋಡಿ ಖಚಿತ ಗೊಳಿಸಿ ಬದುಕಿದೆಯಾ ಬಡಜೀವವೇ..ನಾನು ಪಾಸು ಎಂದು ಕುಣಿದಾಡಿಕೊಂಡು ಮನೆಗೆ ಬರ್ತಾ ಇದ್ದೆ.ಪಾಸಾದ ಇತರರೂ ಹೀಗೇ ಸಂಭ್ರಮದಿಂದ ಜೊತೆಯಾಗುತ್ತಿದ್ದರು.

ಫೇಲ್ ಆದವರು ಬಿಕ್ಕಿ ಬಿಕ್ಕಿ ಅಳ್ತಾ ಇದ್ದದ್ದು ಈಗಲೂ ನನ್ನ ಕಣ್ಣಿಗೆ ಕಟ್ತಿದೆ.ಅವರ ಬಗ್ಗೆ ನನಗೆ ಪಾಪ ಎನಿಸುತ್ತಿತ್ತು.ಯಾಕೆಂದರೆ ಫೇಲಾದ ಮಕ್ಕಳಿಗೆ ಮನೆಯಲ್ಲು ಕೂಡ ಪೆಟ್ಡು ಕಾದಿರ್ತಾ ಇದ್ದದ್ದು ನನಗೆ ಗೊತ್ತಿತ್ತು


ಇನ್ನು ಹತ್ತನೇ ತರಗತಿಯ ಫಲಿತಾಂಸದ ದಿನದ ಬಗ್ಗೆ ಹೇಳುದೇ ಬೇಡ..ಅಷ್ಡು ಆತಂಕದ ಕ್ಷಣಗಳವು.ಆ ಬಗ್ಗೆ ಇನ್ನೊಂದಿನ ಬರೆಯುವೆ

ಡಾ.ಲಕ್ಷ್ಮೀ ಜಿ ಪ್ರಸಾದ್