Saturday, 6 July 2019

ನನ್ನೊಳಗೂ ಒಂದು ಅತ್ಮವಿದೆ : 12 ಮನೆಯಲ್ಲಿ ರುಬ್ಬುವ ಕಲ್ಲಿದೆಯಾ ?

ಮನೆಯಲ್ಲಿ ರುಬ್ಬುವ ಕಲ್ಲು ಇದೆಯಾ ?
ಪ್ರತಿ ದಿವಸ ಹಿಂದಿನ ತರಗತಿಗಳಲ್ಲಿ ಆದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದು ನನ್ನ ಅಭ್ಯಾಸ,ಇಂದು ಕೂಡ ನಿನ್ನೆಯ ಆದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದೆ.ಕೆಲವರು ಉತ್ತರಿಸಲಿಲ್ಲ.,ಪ್ರಶ್ನೆ ಕೇಳಿದಾಗ ಉತ್ತರಿಸದೆ ಇದ್ದರೆ ಒಂಚೂರು ಗದರಬೇಕಾಗುತ್ತದೆ ಇಲ್ಲವಾದಲ್ಲಿ ‌ಮರುದಿನ ಕೂಡ ಹಾಗೆಯೇ ಪಠ್ಯವನ್ನು ಓದದೆಯೇ ಬರುತ್ತಾರೆ.ಮಕ್ಕಳನ್ನು ಏನಂತ ಜೋರು ಮಾಡುದು ?  ಯಾವಾಗಲೂ ಒಂದೇ ರೀತಿಯಲ್ಲಿ ಗದರಲು ಆಗುತ್ತಾ ? ಇವತ್ತು ಉತ್ತರಿಸದೆ ಇದ್ದವರು ಹುಡುಗಿಯರು.ಅವರಲ್ಲಿ ಮನೆಯಲ್ಲಿ ರುಬ್ಬುವ ಕಲ್ಲಿದೆಯಾ ಕೇಳಿದೆ, ಇಲ್ಲವೆಂದರು ! ಇದೆ  ಎಂದಿದ್ದರೆ  ಹೋಗಿ ರುಬ್ಬಿ ಅದೇ ಒಳ್ಳೆದು ಅದಕ್ಕೆ ಓದಿ ಬರೆದು ಮಾಡಬೇಕಿಲ್ಲ ಎಂದು ಜೋರು ಮಾಡಬಹುದಿತ್ತು..ಇನ್ನೆಂತ ಮಾಡುದು ? ಏನೋ ಒಂದು ಹೇಳಿ ಒಂಚೂರು ಗದರಿದೆ.
ಒಬ್ಬಿಬ್ಬರಿಗೆ  ಒಂಚೂರು ಅವಮಾನ ಎನಿಸಿ ಕಣ್ಣಲ್ಲಿ ಸ್ವಲ್ಪ ನೀರು ಬಂತು..ಅಂತಹವರು ಮರುದಿನ ಚೆನ್ನಾಗಿ ಓದಿಕೊಂಡು ಬರ್ತಾರೆ..ಜೋರು ಮಾಡಿದರೂ ಏನೂ ಆಗದ ಭಂಡತನ ಇರುವವರು ಇರ್ತಾರಲ್ಲ..ಇವರನ್ನು ಓದಿಸುವುದೇ ಕಷ್ಟದ ವಿಚಾರ..ಹಾಗಂತ ಬೈದ ಮಾತ್ರಕ್ಕೆ ಅವಮಾನ ಆದ ಮಾತ್ರಕ್ಕೆ ವಿದ್ಯಾರ್ಥಿಗಳು ಓದಿ ಒಳ್ಳೆಯ ಅಂಕ ಗಳಿಸುತ್ತಾರೆಂದೇನೂ ಇಲ್ಲ..ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿರುವುದು ನನಗೆ ನೆನಪಾಯಿತು..
ನಾನಾಗ ದ್ವಿತೀಯ ಪಿಯುಸಿ ಯಲ್ಲಿ ಓದುತ್ತಾ ಇದ್ದೆ‌.ನಮ್ಮಮಂಗಳೂರಿನ  ಸರ್ಕಾರಿ ಪಿಯು ಕಾಲೇಜಿನಲ್ಲಿ ( ಈಗಿನ ಯುನಿವರ್ಸಿಟಿ ಕಾಲೇಜು) ವಿಜ್ಞಾನದ ಉಪನ್ಯಾಸಕರು ಒಂದಿನಿತೂ ಕನ್ನಡದಲ್ಲಿ ಪಾಠ ಮಾಡುತ್ತಿರಲಿಲ್ಲ.. ಸಾಕ್ಷಾತ್ ಲಂಡನ್ ನಿಂದ ಉದುರಿದವರಂತೆ ಒಂದು ಪದ ಕನ್ನಡ ಬಳಸದೆ ಇಂಗ್ಲಿಷ್ ನಲ್ಲಿ ಪಾಠ ಮಾಡುತ್ತಿದ್ದರು. ಆದರೆ ಬೈಗಳು ಮಾತ್ರ ಕನ್ನಡದಲ್ಲಿ ಇರುತ್ತಾ ಇತ್ತು.ಹಾಗಾಗಿ ನನಗೆ ಹೆಬ್ಬಾರರು ಬೈದದ್ದು ನೆನಪಿದೆ..ಅವರೇನು ಪಾಠ ಮಾಡಿದ್ದರು ? ಏನು ಪ್ರಶ್ನೆ ಕೇಳಿದ್ದರು ಎಂದು ಗೊತ್ತಿಲ್ಲ.. ಇಂಗ್ಲಿಷ್ ‌ನಲ್ಲಿ ಪಾಠ ಮಾಡಿದ್ದು ಅರ್ಥ ಆಗಿದ್ದರೆ ತಾನೇ ಅವರೇನು ಕೇಳಿದ್ದರು ಎಂದು ಗೊತ್ತಾಗುವುದು !
ಒಂದು ದಿನ ನಮ್ಮ ಭೌತಶಾಸ್ತ್ರ ಉಪನ್ಯಾಸಕರಾದ ಹೆಬ್ಬಾರರು( ಅವರ ಪೂರ್ತಿ ಹೆಸರು ನೆನಪಾಗುತ್ತಾ ಇಲ್ಲ,ಅವರನ್ನು ಅವರ ಸರ್ ನೇಮ್ ನಲ್ಲಿ  ಹೆಬ್ಬಾರರು ಎಂದೇ ಕರೆಯುತ್ತಿದ್ದರು) ಏನೋ ಪ್ರಶ್ನೆ ಕೇಳಿದರು.ಎಲ್ಲರಂತೆ ನಾನು ಕೂಡ ನನ್ನ ಸರದಿ ಬಂದಾಗ ತಲೆ ತಗ್ಗಿಸಿ ನಿಂತೆ..ಆಗ ಹೆಬ್ಬಾರರು ಮನೆಯಲ್ಲಿ ರುಬ್ಬುವ ಕಲ್ಲಿದೆಯಾ  ಎಂದು  ಕನ್ನಡ ಭಾಷೆಯಲ್ಲಿ ಕೇಳಿದರು. ಇದೆ ಎಂದು ತಲೆಯಾಡಿಸಿದೆ‌..ಹಾಗಾದರೆ ಮನೆಗೆ ಹೋಗಿ ರುಬ್ಬಲು ಕಲಿ ಎಂದರು..ನನಗೆ ಆಗಲೇ ರುಬ್ಬಲು ಬರುತ್ತ ಇತ್ತು..ಹಾಗೆಂದು ನಾನು ಹೇಳಲಿಲ್ಲ.. ನಂತರ ಅವರು ಅವರ ಮಗನ ಬಗ್ಗೆ ಹೇಳಿದರು.ಅವರ ಮಗ ಕೂಡ ಪಿಯುಸಿ ಓದುತ್ತಾ ಇದ್ದ.ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಓದುತ್ತಾ ಇದ್ದ.ಆ ಬಗ್ಗೆ ತಿಳಿಸಿ  ಆ ಕಾಲೇಜಿನ  ಸ್ವರ್ಗ ಸದೃಶ ವಾತಾವರಣ, ಶಿಕ್ಷಣದ ಗುಣಮಟ್ಟದ ಬಗ್ಗೆ ಹೊಗಳಿದರು.
ಆಗ ನಾನು ಸಂತ ಅಲೋಶಿಯಸ್ ಕಾಲೇಜು ಹೇಳಿರಬಹುದು ? ಅಲ್ಲಿಯ ಶಿಕ್ಷಕರು ಹೇಳಿರಬಹುದು ? ಎಂದು ಆಲೋಚಿಸುತ್ತಾ ಇದ್ದೆ.ಆದರೆ ಅಲ್ಲಿಯ ಶಿಕ್ಷಕರ ಬಗ್ಗೆ ನನಗೆ ಊಹಿಸಲು ಸಾಧ್ಯವಾಗುತ್ತಾ ಇರಲಿಲ್ಲ. ನನಗೆ ಕೂಡ ಅಲ್ಲಿ ಪಿಯುಸಿಗೆ ಸೇರಬೇಕೆಂದಿದ್ದರೂ ಸೀಟು ದೊರೆತಿರಲಿಲ್ಲ.ಅವರು ಅಲೋಶಿಯಸ್ ಕಾಲೇಜನ್ನು ಹೊಗಳಿದಾಗ ನನಗೆ  ಸೀಟು ಸಿಗದ ಬಗ್ಗೆ ತುಂಬಾ ಬೇಸರ ಎನಿಸಿತ್ತು. "ಆ ಸ್ವರ್ಗ ಸದೃಶ ಕಾಲೇಜನ್ನು, ಅಲ್ಲಿನ ಶಿಕ್ಷಕರನ್ನು, ಪಾಠ ಮಾಡುವ ವಿಧಾನವನ್ನು ಒಮ್ಮೆಯಾದರೂ ನೋಡಬೇಕು" ಎಂದು ಆಸೆಯಾಗಿತ್ತು.
ಆಗ ಹೆಬ್ಬಾರರು ಬೈದಾಗ ನನಗೆ ಮರ್ಯಾದೆ ಹೋಗಿ ಕಣ್ಣೀರು ಬಂದಿತ್ತು‌.ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ತೆಗೆದು, ಡಿಗ್ರಿ ಆದರೂ ಅಲೋಶಿಯಸ್ ಕಾಲೇಜಿನಲ್ಲಿ ಓದಬೇಕು ಎಂದೆನಿಸಿತ್ತು ಆದರೆ ಅವರು ಹಾಗೂ ಇತರ ಉಪನ್ಯಾಸಕರು ಇಂಗ್ಲಿಷ್ ನಲ್ಲಿ ಮಾಡಿದ ವಿಜ್ಞಾನ ಪಾಠಗಳು ಅರ್ಥವೇ ಆಗಿರದ ಕಾರಣ ಉತ್ತಮ ಅಂಕಗಳನ್ನು ಗಳಿಸಲು ನನಗೆ ಸಾಧ್ಯವಾಗಿರಲಿಲ್ಲ.. ನಮ್ಮ ತರಗತಿಯಲ್ಲಿ 99% ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ಓದಿದವರೇ ಆಗಿದ್ದರು.ಆದರೂ ಕೂಡ ನಮಗೆ ಒಂದು ಪದ ಕೂಡ ಕನ್ನಡ ದಲ್ಲಿ ವಿವರಿಸದೆ ಇಂಗ್ಲಿಷ್ ನಲ್ಲಿ ಯಾಕೆ ಪಾಠ ಮಾಡುತ್ತಿದ್ದರು ? ಅದರ ಪರಿಣಾಮವಾಗಿ ಹತ್ತು ಶೇಕಡಾದಷ್ಟು ಫಲಿತಾಂಶ ಕೂಡ ಬರುತ್ತಿರಲಿಲ್ಲ.. ನಮ್ಮ ತರಗತಿಯಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಒಬ್ಬಿಬ್ಬರು ಪಾಸಾಗಿದ್ದರು.ಆದರೂ ಇವರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲವೇ ? ನನಗಂತೂ ಅರ್ಥವಾಗುತ್ತಿಲ.ಈಗ ನಮ್ಮ ಕಾಲೇಜು ಹಾಗೂ ಇತರ ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ಪಾಠ ಮಾಡುವಾಗ ಕನ್ನಡದಲ್ಲಿ ಕೂಡ ವಿವರಿಸಿ ಅರ್ಥ ಮಾಡಿಸುತ್ತಾರೆ.( ನಮ್ಮ ಕಾಲೇಜಿನ ವಿಜ್ಞಾನ ಉಪನ್ಯಾಸಕರು ಪಾಠ ಮಾಡುವಾಗ ಅವರು ಕನ್ನಡದಲ್ಲಿ ಕೂಡ ವಿವರಿಸುವುದನ್ನು ಕೇಳಿಸಿಕೊಂಡಿದ್ದೇನೆ)
ನಾನೇನೋ ಮುಂದೆ  ಹೇಗೋ ಬಿಎಸ್ಸಿ  ಓದಿದೆ.ನಂತರ ಸಂಸ್ಕೃತ ಎಂಎ ಓದಿ ಮೊದಲ ರ‍‍್ಯಾಂಕ್ ತೆಗೆದೆ.ನಂತರ ನಮ್ಮ ಉಪನ್ಯಾಸಕರಾದ  ಹೆಬ್ಬಾರರ ಮಗ ಓದಿದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಆಯ್ಕೆಯಾಗಿ ಮೂರು ನಾಲ್ಕು ವರ್ಷ ಕೆಲಸ ಮಾಡಿದೆ.ಹೌದು ಹೆಬ್ಬಾರರು ಹೇಳಿದ್ದು ನಿಜ ಅದು ವಿದ್ಯಾರ್ಥಿಗಳ ಪಾಲಿಗೆ ಸ್ವರ್ಗ ಸದೃಶ ವಾಗಿತ್ತು.ಆದರೆ
ಕಾಲೇಜು ಎಂದರೆ ನಾಲ್ಕು ಗೋಡೆಗಳ ಕಟ್ಟಡ ಮಾತ್ರವಲ್ಲ. ಉತ್ತಮ ಕಾಲೇಜು ಎಂದು ಹೆಸರು ಪಡೆಯಲು ಅಲ್ಲಿ‌ ಉಪನ್ಯಾಸಕರೇ ಕಾರಣ. ಸಂತ ಅಲೋಶಿಯಸ್ ಕಾಲೇಜಿಗೆ ಸೇರಿದ ತನ್ಮ ಮಗನ ಬಗ್ಗೆ ,ಕಾಲೇಜು ಬಗ್ಗೆ ಹೊಗಳಿ, ನಮ್ಮನ್ನು ಹೀಯಾಳಿಸುವ ಬದಲು  ನಮ್ಮ ಸರ್ಕಾರಿ ಕಾಲೇಜನ್ನು ಕೂಡ ಉಪನ್ಯಾಸಕರು ಮನಸ್ಸು ಮಾಡಿದ್ದರೆ ಸಂತ ಅಲೋಶಿಯಸ್ ಕಾಲೇಜಿಗೆ ಸಮನಾಗಿಸಲು ಸಾಧ್ಯವಿತ್ತು. ಬೈದದ್ದು,ರುಬ್ಬಲು ಯೋಗ್ಯ ಎಂದು ಹೀಯಾಳಿಸಿದ್ದು ತಪ್ಪಲ್ಲ.ವಿದ್ಯಾರ್ಥಿಗಳಲ್ಲಿ ಕೆಚ್ಚನ್ನು ಹುಟ್ಟಿಸಲು ಒಂಚೂರು ಅವಮಾನ ಮಾಡುದು ಅನಿವಾರ್ಯ. ಆದರೆ ಹೀಯಾಳಿಸುವುದರ ಜೊತೆಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಇಲ್ಲೇಕೆ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಕೂಡ ಆಲೋಚಿಸಿ,ನಮಗೆ ಅರ್ಥವಾಗುವಂತೆ ಕನ್ನಡದಲ್ಲಿಯು ವಿವರಿಸಿದ್ದರೆ ನಾವುಗಳು ಕೂಡ ಅವರ ಮಗನಂತೆಯೆ ಉತ್ತಮ ಅಂಕಗಳನ್ನು ಗಳಿಸುತ್ತಿದ್ದೆವು .ನಾನೇನೋ ಮುಂದೆ ನನ್ನ ಕ್ಷೇತ್ರವನ್ನು ಬದಲಿಸಿ,ಇಂಗ್ಲಿಷ್ ನ ಹಂಗಿಲ್ಲದ ಸಂಸ್ಕೃತ ಎಂಎ ಓದಿ ಯಶಸ್ಸು ಗಳಿಸಿದೆ..ಆದರೆ ಎಲ್ಲರೂ ಹಾಗಾಗಲು ಸಾಧ್ಯವೇ ? ದ್ವಿತೀಯ ಪಿಯುಸಿ ಯಲ್ಲಿ ನಮಗೆ ಅಂತಿಮ ಪರೀಕ್ಷೆ ಹೊರತು ಪಡಿಸಿದರೆ ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಯಾವದೂ ಇರಲಿಲ್ಲ.. ಪ್ರಥಮ ಪಿಯುಸಿಯಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಮಾಡಿದ್ದರು. ಅದರಲ್ಲಿ ಕೆಮೆಷ್ಟ್ರಿಯಲ್ಲಿ ಒಂದು ಪ್ರಶ್ನೆ ಯ ಅರ್ಥವನ್ನು ಕನ್ನಡದಲ್ಲಿ ತಿಳಿಸಲು ನಾನು ನಮ್ಮ ಕೆಮೆಷ್ಟ್ರಿ ಉಪನ್ಯಾಸಕ ರಾಗಿದ್ದ ಶಿವರಾಮ ಭಟ್ ಅವರಲ್ಲಿ ಕೇಳಿದೆ‌.ಹಾಗೆ ಹೇಳಲು ಆಗುವುದಿಲ್ಲ ಎಂದವರು ನಿರಾಕರಿಸಿದ್ದರು. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇರುತ್ತವೆ ಹಾಗಿರುವಾಗ ಪ್ರಥಮ ಪಿಯುಸಿಯಲ್ಲಿ ಒಂದು ಪ್ರಶ್ನೆಯ  ಕನ್ನಡ ಅನುವಾದ ತಿಳಿಸಿದ್ದರೆ ಅಪರಾಧವಾಗುತ್ತಿತ್ತೇ ? ಒಟ್ಟಿನಲ್ಲಿ ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಮಕ್ಕಳ ಪಾಲಿಗೆ ಇವರುಗಳು ಕಂಟಕರೇ ಆಗಿದ್ದರು ಎಂಬುದು ವಾಸ್ತವ
ಈವತ್ತು ಮಕ್ಕಳನ್ನು ಉತ್ತರ ಹೇಳದ್ದಕ್ಕೆ ಗದರಿದಾಗ ಇದು ನೆನಪಾಯಿತು. ನಾನು ಉತ್ತರ ಹೇಳದ ಮಕ್ಕಳಿಗೆ ಗದರಿದರೂ ಅವರು ಸೋಮಾರಿತನದಿಂದ ಓದದೆ ಬರುವ ಕಾರಣ ಉತ್ತರ ಹೇಳುತ್ತಿಲ್ಲವೋ ಅಥವಾ ನನ್ನ ಪಾಠ ಅರ್ಥವಾಗುತ್ತಿಲ್ಲವೋ ಎಂಬುದನ್ನು ಗಮನಿಸುತ್ತೇನೆ,ಉತ್ತರಿಸದ ಮಕ್ಕಳಿಗೆ ಮತ್ತೊಮ್ಮೆ ಹೇಳಿಕೊಟ್ಟು ಮರುದಿನ ಕಲಿತುಕೊಂಡು ಬರಬೇಕೆಂದು ತಾಕೀತು ಮಾಡುತ್ತೇನೆ..ಆ ಕಾರಣವೋ ಅಥವಾ ಈಗಿನ ಮಕ್ಕಳು ಓದುತ್ತಾರೋ ಗೊತ್ತಿಲ್ಲ ನನ್ನ ವಿಷಯದಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ ಎಂಬುದು ಮಾತ್ರ ಸತ್ಯ.
ಕೆಲವೊಮ್ಮೆ ನಮಗೆ  ಅರ್ಥವಾಗದ  ಭಾಷೆಯಲ್ಲಿ ಪಾಠ ಮಾಡಿ ಕಡಿಮೆ ಫಲಿತಾಂಶ ಬಂದಾಗ ನಿಮಗೆ ಒಂದು ಕ್ಷಣವಾದರೂ ನಮ್ಮಗಳ ಭವಿಷ್ಯ ಹಾಳಾಗುವ ಬಗ್ಗೆ ಒಂದು ಕ್ಷಣವಾದರೂ ಪಶ್ಚಾತ್ತಾಪ ಕಾಡಿಲ್ಲವೇ ಎಂದು ಕೇಳಬೇಕು ಎನಿಸುತ್ತದೆ. ಈಗ ಅವರುಗಳು ಎಲ್ಲಿದ್ದಾರೂ ತಿಳಿಯದು.
ಕೇಳಿ ಮಾಡುವುದಕ್ಕದರೂ ಏನಿದೆ ಅಂತ ಸುಮ್ಮನಾಗುತ್ತೇನೆ

Saturday, 4 May 2019

ನನ್ನೊಳಗೂ ಒಂದು ಆತ್ಮವಿದೆ : ಭಾಗ 11 ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ


ಚಿತ್ರ : 1997 ರಲ್ಲಿ ಹವ್ಯಕ ಮಹಾ ಸಭೆಯಲ್ಲಿ ಅದೇ ನಾಟಕವನ್ನು ಮಾಡಿದ್ದು,ಸುಬ್ಬನ ಪಾತ್ರದಲ್ಲಿ ನಾನು ಮತ್ತು ಸುಬ್ಬಿಯ ಪಾತ್ರದಲ್ಲಿ ಪುಷ್ಪಕ್ಕ( ಖ್ಯಾತ ಡೆಂಟಿಸ್ಟ್ ಖಂಡಿಗೆ ಡಾ.ಕೃಷ್ಣ ಭಟ್ ಅವರ ಮಡದಿ)
ನನ್ನೊಳಗೂ ಒಂದು ಆತ್ಮವಿದೆ : ಭಾಗ 11
ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ
ಇಂದು ಫೇಸ್ ಬುಕ್ ಮೂಲಕ ಗೆಳೆಯರಾದ ಜಯಲಕ್ಷ್ಮಿ ಅವರು ತಾವು ಸ್ವಾಮೀಜಿಯವರು ನೀಡಿದ ನಿಂಬೆಹಣ್ಣು ಮತ್ತು ಭರವಸೆಯ ನುಡಿ ನಂಬಿ ಓದಿ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ವಿಚಾರವನ್ನು ಹಂಚಿಕೊಂಡಿದ್ದರು‌.ತಕ್ಷಣವೇ ನನಗೂ ಇಂತಹ ಒಂದು ಪ್ರೇರಣೆ ಸಿಕ್ಕಿದ್ದು ನೆನಪಾಯಿತು.
ಆಗ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ ಎಂದು ನೆನಪು.ನಾನು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆ ಮೀಯಪದವಿನಲ್ಲಿ ಪಡೆದಿದ್ದೆ.ನನ್ನ ಅಜ್ಜನ ಮನೆ ಮೀಯಪದವು ಶಾಲೆಗೆ ಹತ್ತಿರದಲ್ಲಿ ಇದೆ.ಹಾಗಾಗಿ ಎರಡನೇ ತರಗತಿಯಿಂದ ನಾಲ್ಕನೇ ತರಗತಿ ತನಕ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಓದಿ ನಂತರ ಅಜ್ಜನ ಮನೆಯಿಂದ ಮೀಯಪದವು ಶಾಲೆಗೆ ಹೋಗಿದ್ದೆ.ಅಲ್ಲಿ ತನಕ ಸಾಮಾನ್ಯ ಹಳ್ಳಿ ಬೆಪ್ಪು ತಕ್ಕಡಿಯಾಗಿದ್ದ ನನ್ನ ಬದುಕಿನಲ್ಲಿ ಬಹು ದೊಡ್ಡ ತಿರುವು ಸಿಕ್ಕಿತು. ಅಷ್ಟರ ತನಕ ನಾನು ಕಲಿಕೆಯಲ್ಲಿ ಕೂಡ ತೀರಾ ಜಾಣ ವಿದ್ಯಾರ್ಥಿನಿ ಅಲ್ಲ.ತರಗತಿಯಲ್ಲಿ ಇದ್ದ ಹದಿನಾರು ಹದಿನೇಳು ಮಂದಿಯಲ್ಲಿ ನನಗೆ ಆರೋ ಏಳನೆಯದೋ ರ‍‍್ಯಾಂಕ್ ಬರುತ್ತಾ ಇತ್ತು.ಆರೋಗ್ಯ ಸರಿ ಇಲ್ಲದ ಕಾರಣ ಯಾವುದೇ ಆಟಗಳಲ್ಲಿ ಭಾಗವಹಿಸುತ್ತಾ ಇರಲಿಲ್ಲ ( ಈ ಬಗ್ಗೆ ಇನ್ನೊಂದು ದಿನ ಬರೆಯುವೆ) ಅಥವಾ ನನ್ನನ್ನು ಸೇರಿಸಿಕೊಳ್ಳುತ್ತಾ ಇರಲಿಲ್ಲ ಎಂದರೆ ಸರಿಯಾದೀತು.
ಐದನೇ ತರಗತಿಗೆ ಬರುವಷ್ಟರಲ್ಲಿ ನನ್ನ ತಲೆ ಹುಣ್ಣಿನ ಸಮಸ್ಯೆ ಪರಿಹಾರವಾಗಿತ್ತು‌.ಸಾವಿನ ದವಡೆಯಿಂದ ಪಾರಾಗಿದ್ದೆ‌.
ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ವಿಧಾನವೇ ಬೇರೆ,ಅಲ್ಲಿಯ ಶಿಕ್ಷಕರು ಇತರರಂತಲ್ಲ.ನಾಲಿಗೆ ಎಳೆದರೂ ಒಂದಕ್ಷರ ಬಾರದ,ಒಂದು ಹೆಜ್ಜೆ ಹಾಕಲು ಅರಿಯದ ನಮಗೆ ನಾಟಕ ಭಾಷಣ ಏಕಪಾತ್ರಾಭಿಯ ,ನೃತ್ಯ ಹೇಳಿಕೊಟ್ಡು ಬಾಲಕಲೋತ್ಸವಕ್ಕೆ ಕರೆದೊಯ್ದು ನಮಗೆ ವೇಷಭೂಷಣ ಹಾಕಿಸಿ,ಬಣ್ಣ ಹಾಕಿ ಸ್ಪರ್ಧೆಯಲ್ಲಿ ಗೆಲ್ಲುವ ಹಾಗೆ ಮಾಡುತ್ತಿದ್ದರು.ನಮಗೆ ಬಹುಮಾನ ಬಂದಾಗ ನಮ್ಮ ಶಿಕ್ಷಕರಾದ ಸರೋಜಿನಿ ಟೀಚರ್ ಶ್ರೀಧರ್ ಮಾಷ್ಟ್ರು, ಶ್ರೀನಿವಾಸ ಮಾಷ್ಟ್ರು, ವಸಂತ ಮಾಷ್ಟ್ರು ಪುಷ್ಪವಲ್ಲಿ ಟೀಚರ್ ,ನಾವಡ ಮಾಷ್ಟ್ರು ಸೇರಿದಂತೆ ಎಲ್ಲರೂ ತಮಗೆ ರಾಷ್ಟ್ರ ಪ್ರಶಸ್ತಿ ಬಂದ ಹಾಗೆ ಸಂಭ್ರಮಿಸುತ್ತಾ ಇದ್ದರು.ನಾನು ಏಳನೇ ತರಗತಿಯಲ್ಲಿ ಇದ್ದಾಗ ಪಿಳ್ಳಂಗೋವಿಯ ಚೆಲುವ ಕೃಷ್ಣನ.. ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಹೇಳಿ ಕೊಟ್ಟು ಬಾಲಕಲೋತ್ಸವದಲ್ಲಿ ಬಹುಮಾನ ಬರುವಂತೆ ಮಾಡಿದ್ದರು.ಈ ನೃತ್ಯದಲ್ಲಿ ನಾನು ಕೃಷ್ಣನ ಪಾತ್ರವನ್ನು ಮಾಡಿದ್ದೆ.ಈಗೆಲ್ಲ ಕೃಷ್ಣ ವೇಷ ಧರಿಸಿದ ಮುದ್ದು ಪುಟಾಣಿಗಳನ್ನು ನೋಡುವಾಗೆಲ್ಲ ನಾನು ಹೀಗೆ ಕಂಡಿರಬಹುದೇ ಹಾಗೆ ಇದ್ದೆನಾ ಎಂದು ಯೋಚಿಸುತ್ತೇನೆ.ಆಗ ಫೋಟೋ ಗಿಟೋ ತೆಗೆಯಲು ಯಾರಲ್ಲಾದರೂ ಕ್ಯಾಮರಾ ಇದ್ದರೆ ತಾನೇ ? ನಾನು ಕೊನೆಯ ಪಕ್ಷ ಕನ್ನಡಿಯಲ್ಲಿ ಕೂಡ ಮುಖ ನೋಡಿಕೊಂಡಿಲ್ಲ ಅಥವಾ ನೋಡಿದ್ದರೂ ಈಗ ನನಗೆ ನೆನಪಿನಲ್ಲಿ ಉಳಿದಿಲ್ಲ. ಆ ದಿನ ನೃತ್ಯ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿದ ಬೇರೆ ಶಾಲೆಯ ಹುಡುಗಿ ವೇದಿಕೆ ಪಕ್ಕ ಇದ್ದಳು.ಅವಳ ಮುಖ ನನಗೆ ನೆನಪಿದೆ ಅವಳು ತುಂಬಾ ಮುದ್ದಾಗಿ ಕಾಣುತ್ತಿದ್ದಳು. ನನಗೆ ಮುಖಕ್ಕೆ ಬಣ್ಣ ಹಾಕಿ ಕೃಷ್ಣ ವೇಷ ಹಾಕಿದ ಶ್ರೀನಿವಾಸ ಮಾಷ್ಟ್ರು, ಸರೋಜ ಟೀಚರ್ ಅವಳನ್ನು ನೋಡಿ ನಮ್ಮ ಕೃಷ್ಣನಿಗೆ ಅವಳು ಸರಿಗಟ್ಟಲಾರಳು ಎಂದು ಮೆಲ್ಲಗೆ ಮಾತಾಡಿಕೊಂಡಿದ್ದರು.ಅದು ಕೇಳಿ ನನಗೆ ಬಹಳ ಖುಷಿ ಆಗಿತ್ತು. ನಾನು ತುಂಟ  ಕೃಷ್ಣನಾಗಿ ನಗುತ್ತಾ ನೃತ್ಯ ಮಾಡಬೇಕೆಂದು ಸರೋಜಾ ಟೀಚರ್ ಹೇಳಿದ್ದರು.ಆದರೆ ಕೃಷ್ಣ ಹೇಗೆ ನಗುತ್ತಾನೆ ಎಂಬ ಬಗ್ಗೆ ಚಿತ್ರದಲ್ಲಿ ಕೂಡ ನನಗೆ ನೋಡಿ ಗೊತ್ತಿರಲಿಲ್ಲ. ನಾನು ನನ್ನ ಚೆಟ್ಟು ಹಲ್ಲು ಕಾಣುವ ಹಾಗೆ ನಗುವ ಅಭಿನಯ ಮಾಡುತ್ತಿದ್ದೆ.ಕೊನೆಗೆ ಸರೋಜಾ ಟೀಚರ್ ಕೃಷ್ಣ ಮುಗುಳು ನಗಬೇಕು ಅದು ಹೀಗೆ ಎಂದು ಅವರು ಮುಗುಳು ನಗುವಿನ ಅಭಿನಯವನ್ನು ಮಾಡಿ ತೋರಿಸಿ ನನಗೆ ಕಲಿಸಿದ್ದರು.
ವಸಂತ ಮಾಷ್ಟ್ರು ಮತ್ತು ಸರೋಜಾ ಟೀಚರ್ ತಾಳ ಟಂಕಿ ಜೊತೆಯಲ್ಲಿ ಹಾಡಿದ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡಿಗೆ ಹೆಜ್ಜೆ ಹಾಕಿ ನಾವು ಬಹುಮಾನ ಪಡೆದೆವು.ನನ್ನ ಜೊತೆಯಲ್ಲಿ ಗೋಪಿಕಾ ಸ್ತ್ರೀಯರಾಗಿ ಹೇಮ ಮಾಲಿನಿ,ಕೃಷ್ಣ ವೇಣಿ,ಹರಿಣಾಕ್ಷಿ ಮತ್ತು ಇನ್ನೊಬ್ಬಳು ( ಹೆಸರು ಮರೆತು ಹೋಗಿದೆ) ಹೆಜ್ಜೆ ಹಾಕಿದ್ದರು.ಆಗ ನಾವು ಬಹುಮಾನ ಪಡೆದೆವೆಂದು ಬೀಗಿದ್ದೆವು.ಆದರೆ ಈಗ ಗೊತ್ತಾಗುತ್ತಿದೆ..ಅದು ನಮಗೆ ಸಿಕ್ಕ ಬಹುಮಾನವಲ್ಲ..ಅದರ ಗರಿಮೆ ನಮ್ಮ ಶಿಕ್ಷಕರಿಗೆ ಸೇರಿದ್ದು ಎಂದು. ಜೊತೆಗೆ ಅದೇ ವರ್ಷ ಶಾಲೆಯ ವಾರ್ಷಕೋತ್ಸವದಲ್ಲಿ  ಯಮ ಗರ್ವ ಭಂಗ ನಾಟಕವನ್ನು ನಮಗೆ ಹೇಳಿಕೊಟ್ಟು ಮಾಡಿಸಿದ್ದರು.ಅಂದು ಮತ್ತೊಮ್ಮೆ ವಾರ್ಷಕೋತ್ಸವದಲ್ಲಿ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡಿಗೆ ಮತ್ತೆ ಕೃಷ್ಣ ನಾಗಿ ಹೆಜ್ಜೆ ಹಾಕಿದೆ.ಕೊನೆಯಲ್ಲಿ ಗೋಪಿಕಾ ಸ್ತ್ರೀ ಯರ ನಡುವೆ ಕೊಳಲು ಹಿಡಿದು ನಿಂತ ಅಭಿನಯ ಇತ್ತು.ಅಂದು ವಾರ್ಷಿಕೋತ್ಸವಕ್ಕೆ ಬಂದ ನನ್ನ ಅಣ್ಣ ನಂತರ ನೀನು ಕೊನೆಯಲ್ಲಿ ಕೃಷ್ಣ ಕೊಳಲು ಊದುವ ಭಂಗಿಯಲ್ಲಿ ಗೋಪಿಕಾ ಸ್ತ್ರೀ ಯರ ನಡುವೆ ನಂತದ್ದು ಭಾರೀ ಚಂದ ಕಾಣುತ್ತಾ ಇತ್ತು..ನನಗೆ ಈಗಲೂ ಕಣ್ಣಿಗೆ ಕಾಣುತ್ತಿದೆ ಎಂದು ಹೇಳಿದ್ದ.ಅದೆಲ್ಲ ನೆನಪಾಗುವಾಗ ನಾನು ಕೃಷ್ಣ ನಾಗಿ ಹೇಗೆ ಕಾಣಿಸಿದ್ದೆ ಎಂಬ ಕುತೂಹಲ ನನಗೆ ಆಗಾಗ ಕಾಡುತ್ತದೆ.
ಯಮ ಗರ್ವ ಭಂಗ ನಾಟಕದಲ್ಲಿ ನಾನು ಬಲರಾಮನಾಗಿ ಗೆಳತಿ ಹೇಮಮಾಲಿನಿ( ಈಗ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ) ಕೃಷ್ಣ ನಾಗಿ ಅಭಿನಯಿಸಿದ್ದೆವು.
ಜೊತೆಗೆ ಆಟೋಟ ಸ್ಪರ್ಧೆಗಳಲ್ಲಿ ಕೂಡ ತರಬೇತಿ ನೀಡಿ ನಮ್ಮನ್ನು ಸ್ಪರ್ಧೆಗೆ ಕರೆದೊಯ್ಯುತ್ತಾ ಇದ್ದರು.ಹಾಗಾಗಿ ನಾನು ಡಿಸ್ಕ್ ಎಸೆತ ಮತ್ತು ಎತ್ತರ ಜಿಗಿತದಲ್ಲಿ ಹಲವಾರು ಬಹುಮಾನ ಪಡೆದಿದ್ದೆ.
ಏಳನೇ ತರಗತಿಯಲ್ಲಿ ಓದುತ್ತಿರುವಾಗ ಬಹುಶಃ ಓಣಂ ರಜೆಯ ಸಂದರ್ಭದಲ್ಲಿ ನಾವು ಅಜ್ಜನ ಮನೆಯಲ್ಲಿ ಆಟಕ್ಕಾಗಿ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚಿಸಿ ಅಭಿನಯಿಸಿದ್ದೆ.ಇದು ಗೊತ್ತಾಗಿ ವಸಂತ ಮಾಷ್ಟ್ರು ನನ್ನಲ್ಲಿ ಆ ನಾಟಕವನ್ನು ಅಭಿನಯಿಸಿ ತೋರಿಸುವಂತೆ ಶಾಲೆಯಲ್ಲಿ ಹೇಳಿದ್ದರು‌.ನಾನೆ ರಚಿಸಿದ ಕಾರಣ ನಾಟಕದಲ್ಲಿನ  ಆರೂ ಪಾತ್ರಗಳ ಸಂಭಾಷಣೆ ನನಗೆ ಬಾಯಿಗೆ ಬರುತ್ತಿತ್ತು. ಇಡೀ ನಾಟಕವನ್ನು ನಾನೊಬ್ಬಳೇ ಏಕ ಪಾತ್ರಾಭಿನಯದ ಮಾದರಿಯಲ್ಲಿ ಅಭಿನಯಿಸಿ ತೋರಿಸಿ ಅವರಿಂದ ಮೆಚ್ಚುಗೆ ಪಡೆದಿದ್ದೆ.ಇದಾಗಿ ಮೂವತ್ತು ವರ್ಷಗಳ ನಂತರ ಅದೇ ನಮ್ಮ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿ ರಚಿಸಿ ಹಠಮಾರಿ ಹುಡುಗಿ  ಯಃಕಶ್ಚಿತ್ ಲಕ್ಷ್ಮೀ  ಡಾ.ಲಕ್ಷ್ಮೀ ಜಿ ಪ್ರಸಾದ ಆಗಿ ಬದಲಾಗಲು ಪ್ರೇರಣೆ ನೀಡಿದ  ಶಿಕ್ಷಕರಿಗೆ ಅರ್ಪಣೆ ಮಾಡಿದ್ದೆ.
ನಾನು ಎಂಟನೇ ತರಗತಿಗೆ ಶ್ರೀ ವಾಣಿ ವಿಜಯ ಹೈಸ್ಕೂಲ್  ಕೊಡ್ಲ ಮೊಗರಿಗೆ ಸೇರಿ ತಾಯಿ ಮನೆಯಿಂದ ಶಾಲೆಗೆ ಹೋಗುತ್ತಿದ್ದೆ.
ಇಲ್ಲಿ ನಾನು ಆ ನಾಟಕವನ್ನು ಯುವಜನೋತ್ಸವದ ಸ್ಪರ್ಧೆಯಲ್ಲಿ ಮಾಡಿದೆ.ವಾಣಿ ವಿಜಯ ಪ್ರೌಢ ಶಾಲೆಯ ವಾತಾವರಣ ಮೀಯಪದವು ಶಾಲೆಗಿಂತ ತುಂಬಾ ಭಿನ್ನವಾಗಿತ್ತು.ಇಲ್ಲಿ ನಮಗೆ ಯಾವುದಕ್ಕೂ ಬೆಂಬಲ ಇರಲಿಲ್ಲ. ಬಹುಶಃ ಸರ್ಕಾರದ ಆದೇಶ ಇದ್ದ ಕಾರಣ ಯುವಜನೋತ್ಸವ ಮಾಡಿ ಒಂದಷ್ಟು ಸ್ಪರ್ಧೆಗಳನ್ನು ಕಷ್ಟದಲ್ಲಿ ನಡೆಸುತ್ತಾ ಇದ್ದರು.ಇಲ್ಲಿ ನಮಗೆ ತರಬೇತಿ ಪ್ರೋತ್ಸಾಹ ಎಂತದೂ ಇರಲಿಲ್ಲ. ಆದರೂ ನಾನು ಒಂದು ತಂಡ ಕಟ್ಟಿ ನಾಟಕದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.ಇಲ್ಲಿ ಹುಡುಗಿಯರು ವೇದಿಕೆ ಏರಲು ಹಿಂದೇಟು ಹಾಕುತ್ತಿದ್ದರು. ಅಂತೂ ಇಂತೂ ಕೆಲವರ ಮನ ಒಲಿಸಿ ನಾಟಕ ಹೇಳಿಕೊಟ್ಟು ಸಿದ್ಧ ಪಡಿಸಿದ್ದೆ.ನಮಗೆ ಅಭ್ಯಾಸ ಮಾಡಲು ಕೂಡ ಶಾಲಾ ಅವಧಿಯಲ್ಲಿ ಅವಕಾಶ ಇರಲಿಲ್ಲ. ಶಾಲೆ ಮುಗಿದ ನಂತರ ನಾವು ಬಯಲಿನಲ್ಲಿ ನಿಂತು ಅಭ್ಯಾಸ ಮಾಡಿದ್ದೆವು.ಶಾಲೆಯ ಕೊಠಡಿಯ ಒಳಗಡೆ ಅದಕ್ಕೆಲ್ಲ ಅವಕಾಶ ಇರಲಿಲ್ಲ. ಜೊತೆಗೆ  ಶರವು  ಮಹಾ ಗಣಪತಿ ಹಾಡಿಗೆ ಒಂದು ಪೂಜಾ ನೃತ್ಯಕ್ಕೂ ಹೆಜ್ಜೆ ಜೋಡಿಸಿ ತಯಾರಾಗಿದ್ದೆ.ನಾನು ಮೀಯಪದವು ಶಾಲೆಯಲ್ಲಿ ಇದ್ದಾಗ ಬೇರೆ ಮಕ್ಕಳಿಗೆ ಅಲ್ಲಿನ ಶಿಕ್ಷಕರು ಕಲಿಸಿದ್ದ ಒಂದು ಜಿಪ್ಸಿಗಳೆ ನಿಮ್ಮ ನಾವು ಮೊದಲು ಕಂಡಾಗ ಎಂಬ ಹಾಡಿನ ನೃತ್ಯವನ್ನು ಅಲ್ಲಿಯೇ ಐದು ಆರನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಹುಡುಗಿಯರಿಗೆ ಹೇಳಿ ಕೊಟ್ಟು ಸ್ಪರ್ಧೆಗೆ ತಯಾರು ಮಾಡಿದ್ದೆ. ಈ ಹುಡುಗಿಯರ ಹೆಸರು ಮರೆತು ಹೋಗಿದೆ ಒಬ್ಬಳು ನಮ್ಮ ಮನೆ ಪಕ್ಕದ ನಳಿನಿ ಇರಬೇಕು ಜೊತೆಗೆ ರಾಜೇಶ್ವರಿ ಎಂಬ ಇನ್ನೊಂದು ಹುಡುಗಿಗೆ ಒಂದು ಪೂಜಾ ನೃತ್ಯ ಹೇಳಿ ಕೊಟ್ಟಿದ್ದೆ.
ಯುವಜನೋತ್ಸವದ ಮೊದಲ ಹಂತ ಶಾಲೆಯ ಒಳಗೆ ಸ್ಪರ್ಧೆ. ಇಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನ ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಕರೆದು ಕೊಂಡು ಹೋಗಬೇಕಿತ್ತ ಎಂದು ನೆನಪು. ವಾಣಿ ವಿಜಯ ಹೈಸ್ಕೂಲ್ ನಲ್ಲಿ ಶಾಲೆಯ ಒಳಗೆ ಯುವಜನೋತ್ಸವ‌ ಮಾಡಿ ಸ್ಪರ್ಧೆ ನಡೆಸಿ ಬಹುಮಾನ ಕೊಡುತ್ತಾ ಇದ್ದದ್ದೇ ಕಷ್ಟದಲ್ಲಿ. ಇನ್ನು ನಮಗೆ ತರಬೇತಿಯನ್ನು ನೀಡಿ ಅಂತರ್ಶಾಲಾ ಸ್ಪರ್ಧೆಗೆ ಕರೆದೊಯ್ಯುವ ಮಾತೆಲ್ಲಿ ?
ಇರಲಿ ನನಗಾಗ ಇದನ್ನೆಲ್ಲ ಅರ್ಥಮಾಡಿಕೊಳ್ಳುವ ವಯಸ್ಸಲ್ಲ.ಮೀಯಪದವು ಶಾಲೆಯ ಹಾಗೇ ಇಲ್ಲೂ ಎಂದು ಭಾವಿಸಿದ್ದೆ‌.ಮೊದಲಿನಿಂದಲೂ ನಾನು ಒಂಚೂರು ಅತ್ಯುತ್ಸಾಹದ ಹುಡುಗಿ ಆಗಿದ್ದೆ ಕಾಣಬೇಕು.
ಯುವಜನೋತ್ಸವಕ್ಕೆ ಎರಡು ದಿನ ಇರುವಾಗ ಸುಬ್ಬಿ ಪಾತ್ರ ಮಾಡಿದ ಹುಡುಗಿ ಶೋಭಾ ನಾನು ನಾಟಕದಲ್ಲಿ ಮಾಡುವುದಿಲ್ಲ ಎಂದು ನಿರಾಕರಿಸಿದಳು.ಆಗ ಸುಬ್ಬನ ಸ್ನೇಹಿತನ ಪಾತ್ರವನ್ನು ಅಭ್ಯಾಸ ಮಾಡಿದ್ದ ಹೇಮಾಳಿಗೆ ಸುಬ್ಬಿ ಪಾತ್ರದ ಎಲ್ಲ ಸಂಭಾಷಣೆ ಬಾಯಿಗೆ ಬರುತ್ತಾ ಇತ್ತು‌‌.ಅವಳು ಸುಬ್ಬಿ ಪಾತ್ರ ಮಾಡಲು ಒಪ್ಪಿದಳು. ನನ್ನದ ಸುಬ್ಬ ಪಾತ್ರ .ಸ್ನೇಹಿತರ ಜಾಗಕ್ಕೆ ಇಬ್ಬರನ್ನು ಹೇಗೋ ಹುಡುಕಾಡಿ ಹೊಂದಾಣಿಕೆ ಮಾಡಿದೆವು.ಇಲ್ಲಿ ನನ್ನಂತೆ ಉತ್ಸಾಹದ ಹುಡುಗಿ ( ಈಗ ತಕ್ಷಣಕ್ಕೆ ಹೆಸರು ಬಾಯಿಗೆ ಬರುತ್ತಾ ಇಲ್ಲ) ಈಗ ಸುಂಕದ ಕಟ್ಟೆಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾರೆ.ನಾನು ಕೇರಳ ತುಳು ಅಕಾಡೆಮಿಯ ಕಾರ್ಯಕ್ರಮ ದಲ್ಲಿ ಇತ್ತೀಚೆಗೆ ಭೇಟಿ ಮಾಡಿ ಮಾತಾಡಿರುವೆ‌
 ಹೇಮಾಳಿಗೆ ಒಂದು ಕೊರವಂಜಿ ನೃತ್ಯ ಕೂಡ ಹೇಳಿ ಕೊಟ್ಟಿದ್ದೆ.ಅಂತೂ ಇಂತೂ ಯುವಜನೋತ್ಸವದ ಸ್ಪರ್ಧೆಯಲ್ಲಿ ನಮ್ಮ ನಾಟಕ ಪ್ರಥಮ ಬಹುಮಾನ ಪಡೆಯಿತು. ಸ್ಪರ್ಧಿಸಿದ್ದು ನಮ್ಮದು ಸೇರಿ ಮೂರು ತಂಡ ಅಷ್ಟೇ ,ಹುಡುಗಿಯರ ತಂಡ ನಮ್ಮದು ಮಾತ್ರ .ಜೊತೆಗೆ ನನ್ನ ಪೂಜಾ ನೃತ್ಯ ಮತ್ತು ಹೇಮಾಳ ಕೊರವಂಜಿ ನೃತ್ಯಕ್ಕೆ ಬೇರೆ ಸ್ಪರ್ಧಿಗಳು ಇರಲಿಲ್ಲ, ನಮಗೆ ಫಸ್ಟ್ ಸೆಕೆಂಡ್ ಬಹುಮಾನ ಕೊಟ್ಟರು.ಜಿಪ್ಪಿಗಳೆ ನಾವು ನಿಮ್ಮ ಮೊದಲು ಕಂಡಾಗ ಹಾಡಿಗೆ ನಾನು ಹೇಳಿ ಕೊಟ್ಟ ನೃತ್ಯವನ್ನು ಆ ಇಬ್ಬರು ಸಣ್ಣ ಹುಡುಗಿಯರು ಮಾಡಿದರು.ಅವರಿಗೂ ಬೇರೆ ಸ್ಪರ್ಧಿಗಳೇ ಇರಲಿಲ್ಲ, ಬಹುಶಃ ಅವರಿಗೆ ವಿಶೇಷ ಬಹುಮಾನ ಕೊಟ್ಟಿಬಹುದು.ಅಥವಾ ಮೊದಲ ಬಹುಮಾನ ಎಂದೇ ಕೊಟ್ಟಿದ್ದರೋ ಏನೋ ಗೊತ್ತಿಲ್ಲ.
ಇದು ಬಿಟ್ಟರೆ ಕಂಠ ಪಾಠ ಸ್ಪರ್ದೆ ಇತ್ತು‌.ಇದಕ್ಕೆ ಹತ್ತು ಹನ್ನೆರಡು ಜನ ಸ್ಪರ್ಧಿಗಳು ಇರುತ್ತಿದ್ದರು. ನಾನು ಈ ವಿಭಾಗದಲ್ಲೂ ಬಹುಮಾನ ಪಡೆದಿದ್ದೆ‌
ಅಂದಿನ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಬಂದಿದ್ದ ಅಲ್ಲಿನ ನಿವೃತ್ತ ಹಿಂದಿ ಶಿಕ್ಷಕರೂ ಸಾಹಿತಿಗಳೂ ಆಗಿದ್ದ ವಿಶ್ವೇಶ್ವರ ಭಟ್ ನಮ್ಮ ನಾಟಕವನ್ನು ನೋಡಿದ್ದು ಸಮಾರೋಪ ಭಾಷಣದಲ್ಲಿ ಇಂದು ಸುಬ್ಬನ ಪಾತ್ರ ವಹಿಸಿದ ಹುಡುಗಿಗೆ ದೊಡ್ಡ ಭವಿಷ್ಯ ಇದೆ   ಎಂದು ನನ್ನ ಕುರಿತು ಮೆಚ್ಚುಗೆಯ ಮಾತನ್ನು ಹೇಳಿದರು.

ಇದು ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಅವರಿಗೆ ನಾನು ಯಾರೆಂದು ಗೊತ್ತಿರಲಿಲ್ಲ. ಸುಬ್ಬನ ಪಾತ್ರವನ್ನು ಮಾತ್ರ ನೋಡಿದ್ದರು.ನನ್ನ ಹೆಸರು ಗೊತ್ತಿಲ್ಲದ ಕಾರಣ ಪಾತ್ರದ ಹೆಸರು ಹೇಳಿ ಮೆಚ್ಚುಗೆ ಮಾತು ಹೇಳಿದ್ದರು.ಎಲ್ಲಾ ಶಿಕ್ಷಕರೂ,ವಿದ್ಯಾರ್ಥಿಗಳೂ ದೊಡ್ಡದಾಗ ಕ್ಲಾಪ್ ಹಾಕಿದರು.
ಸಭೆಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತು ಕೇಳುತ್ತಿದ್ದ ನನಗೆ ರೋಮಾಂಚನವಾಯಿತು.
ಹೌದು ಅವರು ಹೇಳಿದ ಮಾತನ್ನು ಗಟ್ಟಿಯಾಗಿ ನೆಚ್ಚಿಕೊಂಡೆ.ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ.ಅಂದರೆ ನಾನು ಎಲ್ಲರಂತೆ ಸಾಮಾನ್ಯ ಳಾಗಿ ಇರುವುದಿಲ್ಲ, ನನಗೆ ದೊಡ್ಡ ಭವಿಷ್ಯ ಇದೆ ಎಂದು ನಾನು ನಂಬಿದೆ‌.
ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ
ಹುಡುಗಿ ಏನು ಓದಿದರೇನು ? ಅವಳಿಗೆ ಒಲೆ ಬೂದಿ ಗೋರುವ ಕೆಲಸ ತಪ್ಪದು ಎಂಬ ಮಾತು ನಮ್ಮಲ್ಲಿ ಪ್ರಚಲಿವಿತ್ತು.ಆದರೆ ಅಂದು ನಾನು ಕೇವಲ ಒಲೆ ಬೂದಿ ಗೋರಲು ಲಾಯಕ್ಕಾದವಳಾಗಿ ಉಳಿಯುವಿದಿಲ್ಲ..ನಾನು ಮುಂದೆ ತುಂಬಾ ಓದಬೇಕು ,ನನಗೆ ದೊಡ್ಡ ಭವಿಷ್ಯ ಸಿಗುತ್ತದೆ ಎಂದು ನಿರ್ಧರಿಸಿದೆ..
ಎಸ್ ಎಸ ಎಲ್ ಸಿಯಲ್ಲಿ ಫಸ್ಟ್ ಕ್ಲಾಸ್ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದೆ.ಮುಂದೆ ಓದಿದೆ. ಇಂದು ದೊಡ್ಡ ಭವಿಷ್ಯ ಸಿಗದೇ ಇದ್ದರೂ ಕೂಡ ನಾನು ನನ್ನತನವನ್ನು ಪಡೆಯುವಷ್ಟು ಭವಿಷ್ಯವನ್ನು ಪಡೆದೆ.
ಈ ನಾಟಕ ನಡೆಯುವಾಗ ಒಂದು ಪ್ರಮಾದ ಆಗಿ ಸಭೆಯಲ್ಲಿದ್ದವರೆಲ್ಲ ನಗಾಡಿದ್ದರು.ಸುಬ್ಬನಿಗೆ ಇಬ್ಬರು ಸ್ನೇಹಿತರಯ.ಅವರು ಬಂದಾಗ ವೆಲ್ ಕಂ್ ಮೈ ಫ್ರೆಂಡ್ಸ್,ಪ್ಲೀಸ್ ಬಿ ಸೀಟೆಡ್ ಎಂದು ಹೇಳಿದಾಗ ಅವರು ಕುಳಿತುಕೊಳ್ಳಬೇಕೆಂದು ಹೇಳಿಕೊಟ್ಟಿದ್ದೆ.ಆದರೆ ಅವರಿಗೆ ಕುಳಿತುಕೊಳ್ಳಲು ಅಲ್ಲಿ ಒಂದು ಖುರ್ಚಿ ಮಾತ್ರ ಇತ್ತು.ಇಬ್ಬರೂ ಒಂದೇ ಕುರ್ಚಿಯಲ್ಲಿ  ಕುಳಿಯರು.ಅದು ಎರಡು ಕೈ ಇರುವ ಹಳೆಯ ಮರದ ಕುರ್ಚಿ. ಮುರಿಯದ್ದು ನಮ್ಮ ಪುಣ್ಯ! ನಂತರ ಅವರು ಎದ್ದು ನಿಂತು ಮಾತನಾಡಲು ಇದೆ.ಏಳ ಹೊರಟಾಗ ಟೈಟ್ ಆಗಿ ಇಬ್ಬರಿಗೂ ಏಳಲಾಗುತ್ತಿಲ್ಲ..ಇವರ ಪರಿಸ್ಥಿತಿ ನೋಡಿ ಸಭೆಯ ಮಂದಿದ ಜೊತೆಯಲ್ಲಿ ಇವರುಗಳು ನಗುತ್ತಿದ್ದಾರೆ.ನನಗೋ ಆತಂಕ ಸಿಟ್ಟು.ಕುರ್ಚಿಯ ಹಿಂಭಾಗ ನಿಂತು ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ಒಬ್ಬಳ ಬೆನ್ನಿಗೆ ಕುಟ್ಟಿದೆ.ಒಬಗಬಳು ಎದ್ದಳು.ಅಲ್ಲಿಗೆ ಸಮಸ್ಯೆ ಪರಿಹಾರ ಆಯ್ತು.ಅವರಿಬ್ಬರೂ ಏಕ ಕಾಲಕ್ಕೆ ಮೇಲೇಳಳು ಯತ್ನ ಮಾಡಿದ್ದರಿಂದ ಹೀಗಾಗಿತ್ತು.ತಪ್ಪು ನನ್ನದೇ ನಾನು ಅವರಿಗೆ ಕುಳಿಕೊಳ್ಳಲು ಎರಡು ಕುರ್ಚಿ ಇಡಬೇಕಾಗಿತ್್ತಯ.ಮೊದಲ ಬಾರಿಗೆ ವೇದಿಕೆ ಏರಿದ ಅವರಿಗೆ ಗೊಂದಲ ಆದದ್ದು ಸಹಜ..ನಕ್ಕದ್ದು ಮಾತ್ರ ಆಗ ತೀವ್ರ ಕೋಪ ಯರಿಸಿತ್ತು.ಆದರೆ ಸುಬ್ಬನಾಗಿ ವೇದಿಕೆ ಮೇಲೆ ಇದ್ದೆ ..ತೋರಿಸುವ ಹಾಗೆ ಇರಲಿಲ್ಲ.. ಈಗ ನೆನೆದರೆ ನಗು ಬರುತ್ತಿದೆ..ಅಂತೂ ಇಂತೂ ನಾಟಕ ಮಾಡಿ ಮೊದಲ ಬಹುಮಾನ ಪಡೆದು ಸ್ವರ್ಗ ಸಿಕ್ಕಂತೆ ಬೀಗಿದ್ದೆವು ನಾವು.

Thursday, 2 May 2019

ನನ್ನೊಳಗೂ ಒಂದು ಆತ್ಮವಿದೆ ಭಾಗ 10 ಕಿವಿ ಕೇಳಿಸುತ್ತಿದ್ದರೂ ನನಗೆ ಕಿವಿ ಕೇಳಿಸುವುದಿಲ್ಲ ಎಂದ ಅಕ್ಕಮ್ಮಜ್ಜಿಯ ಪ್ರೀತಿಯನ್ನು ಹೇಗೆ ತಾನೇ ಮರೆಯಲಿ



ಚಿತ್ರ ಕೃಪೆ : ಅಂತರ್ಜಾಲ
ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದಿನ ಮಾತಿದು.ನನ್ನ ಓದಿನ ಕಾರಣಕ್ಕೆ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡು ಎಕ್ಕಾರಿನ ಒಂದು ರೂಮಿನ ಮೋಟು ಗೋಡೆಯ  ಗೆದ್ದಲು ಹಿಡಿದ ಮಣ್ಣಿನ ಮನೆಯನ್ನು ನೂರ ಐವತ್ತು ರುಪಾಯಿ ಬಾಡಿಗೆಗೆ ಹಿಡಿದಿದ್ದೆವು.ಅದಕ್ಕಿಂತ ಒಳ್ಳೆಯ ಮನೆ ನಮ್ಮ ಬಜೆಟ್ ಗೆ ಸಿಕ್ಕಲು ಸಾಧ್ಯವಿರಲಿಲ್ಲ. ಈ ಮನೆಯಲ್ಲಿ ಇದ್ದದ್ದು  ಒಂದು ಕೊಠಡಿ ಸುಮಾರು ಎಂಟಡಿ ಅಗಲ ಹತ್ತು ಹನ್ನೆರಡಡಿ ಉದ್ದ ಇದ್ದಿರಬಹುದು. ಅದರ ಒಂದು ತುದಿಯಲ್ಲಿ ಮೂರಡಿ ಎತ್ತರಕ್ಕೆ ಒಂದು ಸಣ್ಣ ಗೋಡೆ.ಅದರ ಆಕಡೆ ಅಡಿಗೆ ಮನೆ,ಅದಕ್ಕೆ ತಾಗಿಕೊಂಡು ಸ್ನಾನದ ಮನೆ.ಇದು ಮೂರುಅಡಿ ಉದ್ದ ಮೂರಡಿ ಅಗಲ ಇದ್ದಿರಬಹುದು.
ನಮ್ಮ ಈ ಮನೆಯ ಎತ್ತರ ಸುಮಾರು ಎಂಟು ಹತ್ತಡಿ ಇದ್ದಿರಬಹುದು. ಆದರೆ ಗೋಡೆ ಮಾತ್ರ ಆರಡಿ ಎತ್ತರ ಇತ್ತು.ಒಂದು ಕುರ್ಚಿ ತಗೊಂಡು ಹತ್ತಿ ಆಕಡೆಗೆ ಇಣುಕಿದರೆ ಆ ಕಡೆಯ ಇಳಿಸಿ ಕಟ್ಟಿದ ಜೋಪಡಿ ಕಾಣುವಂತೆ ಇತ್ತು.ಆದರೆ ಹತ್ತಿ ನೊಡಲು ನಮ್ಮಲ್ಲಿ ಖುರ್ಚಿಯಾಗಲಿ ಮಂಚವಾಗಲೀ ಇರಲಿಲ್ಲ. ಹಾಗಾಗಿ ಅಲ್ಲಿ ಏನಿದೆ ಎಂದು ಸುಮಾರು ಸಮಯ ಗೊತ್ತಿರಲಿಲ್ಲ. ಅಲ್ಲಿ ಒಂದು ಅಜ್ಜಿ ಮತ್ತು ಅವರ ಬುದ್ಧಿ ಮಾಂದ್ಯ ಮಗ ವಾಸಮಾಡುತ್ತಿದ್ದರು.ಆ ಮಗನಿಗೆ ಅಮವಾಸ್ಯೆ ಹತ್ತಿರ ಬಂದಂತೆಲ್ಲ ಕೋಪ ಆಕ್ರೋಶ ಹೆಚ್ಚಾಗುತ್ತಾ ಇತ್ತು ಏನೇನೋ ಕೂಗಾಡುತ್ತಾ ಇದ್ದ.
ಅದಿರಲಿ.ನಮ್ಮದು ಅರ್ಧ ಗೋಡೆಯ ಮನೆ ಆದ ಕಾರಣ ಸಣ್ಣ ಸದ್ದಾದರೂ ಆ ಕಡೆಗೆ ಕೇಳುವಂತೆ ಇತ್ತು..ನಾವು ಅಲ್ಲಿಗೆ ಬಂದು ಒಕ್ಕಲಾದ ಒಂದೆರಡು ದಿನಗಳಲ್ಲೇ ಅಕ್ಕಮ್ಮಜ್ಜಿ ತನ್ನ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಬಹಳ ಇಷ್ಟವಾದರು.ಅವರು ಮಾತನಾಡುತ್ತಾ ನನಗೆ ಕಿವಿ ಕೇಳಿಸುವುದಿಲ್ಲ ಮಗಾ.ಇನ್ನು ನನ್ನ ‌ಮಗ ಮಲಗಿದ ತಕ್ಷಣ ನಿದ್ದೆ ಮಾಡುತ್ತಾನೆ.ಅವನಿಗೇನೂ ಗೊತ್ತಿಲ್ಲ ಸಣ್ಣ ಮಗುವಿನ ಬುದ್ಧಿ  ಅವನದು( ಇದು ಸತ್ಯದ ವಿಚಾರವೇ ಆಗಿತ್ತು) ಆದರೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದು ಶುದ್ಧ ಸುಳ್ಳು.ಆದರೆ ಹೊಸತಾಗಿ ಮದುವೆಯಾಗಿ ಬಂದು ಸಂಸಾರ ಹೂಡಿದ  ನಮಗೆ ಸಂಕೋಚವಾಗಬಾರದೆಂಬ ಸದುದ್ದೇಶದಿಂದ ಅವರು ಹಾಗೆ ಹೇಳಿದ್ದರು.
ಅಕ್ಕಮ್ಮಜ್ಜಿ ಬಹಳ ಸಹೃದಯಿ. ಆಗಾಗ ನಮ್ಮ ಮನೆ ಅಂಗಳ ಗುಡಿಸಿ ಮನೆಗೆ ಹತ್ತಿದ ಗೆದ್ದಲು ತೆಗೆಯಲು ಸಹಾಯ ಮಾಡುತ್ತಿದ್ದರು ‌.ನಮ್ಮ ‌ಮನೆಯ ಓನರ್ ನಾಗವೇಣಿ ಅಮ್ಮನವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಅವರ ಮೊದಲ ‌ಮಗ ಬುದ್ಧಿ ಮಾಂದ್ಯ.ಆದರೆ ಎರಡನೇ ಮಗ ಮುಂಬಯಿಯಲ್ಲಿ  ಒಳ್ಳೆಯ ಕೆಲಸದಲ್ಲಿ ಇದ್ದ ,ಒಳ್ಳೆಯ ಆದಾಯವೂ ಇತ್ತು.ಆತ ತನ್ನ ತಾಯಿಯನ್ನು ಎಂದರೆ ಅಕ್ಕಮ್ಮಜ್ಜಿ ಯನ್ನು ಮುಂಬಯಿಗೆ ಕರೆದುಕೊಂಡು ಹೋಗಲು ತಯಾರಿದ್ದ ಆದರೆ ಬುದ್ಧಿ ಮಾಂದ್ಯನಾದ ಅಣ್ಣನನ್ನು ಕರೆದುಕೊಂಡು ಹೋಗಲು ತಯಾರಿರಲಿಲ್ಲ.ಆತನನ್ನು ನೋಡಿಕೊಳ್ಳುವ ಸಲುವಾಗಿ ಅಕ್ಕಮ್ಮಜ್ಜಿ ಎಕ್ಕಾರಿನಲ್ಲಿ ಕೂಲಿ ಮಾಡುತ್ತ ಇಳಿಸಿ ಕಟ್ಟಿದ ಅಡಿಕೆ ಮರದ ಸೋಗೆಯ ಜೋಡಿಯಲ್ಲಿ ದೊಡ್ಡ ‌ಮಗನೊಂದಿಗೆ ಬದುಕುತ್ತಾ ಇದ್ದರು.ನಾನಿರುವ ತನಕ ಮಗನನ್ನು ಬೀದಿ ಪಾಲಾಗಲು ಬಿಡುವುದಿಲ್ಲ ,ಮುಂದೆ ದೇವರು ಇಟ್ಟಂತೆ ಆಗುತ್ತದೆ ಎಂದು ಹೇಳುತ್ತಾ ಇದ್ದರು.ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ದೊಡ್ಡದಾಗಿ ನೋವಿನಿಂದ ನರಳಿದ ದೊಡ್ಡ ‌ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದ.ಅದೇ ಜೋಪಡಿಯ ಈ ಕಡೆ ಇದ್ದ ನಾವು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಎದೆ ಬಡಿತ ,ಮತ್ತು ನಾಡಿ ಬಡಿತ ನಿಂತಿತ್ತು. ಆರಂಭದಲ್ಲಿ ಎದೆ ಬಡಿದು ಅತ್ತ ಅಕ್ಕಮ್ಮಜ್ಜಿ ನಂತರ ನಾನು ಇರುವಾಗಲೇ ಮಗ ಸತ್ತಿದ್ದು ಒಳ್ಳೆದಾಯಿತು‌.ಇಲ್ಲವಾದರೆ ನನ್ನ ನಂತರ  ಊಟ ತಿಂಡಿ,ಸ್ನಾನ ಆಸರೆ ಇಲ್ಲದೆ ಹುಣ್ಣಾಗಿ ಸಾಯಬೇಕಿತ್ತು.ನನ್ನನ್ನು ಸಣ್ಣ ಮಗ ನೋಡಿಕೊಂಡಾನು ಎಂದು ಸಮಾಧಾನ ಮಾಡಿಕೊಂಡಿದ್ದರು.ನಂತರ ದೊಡ್ಡ ಮಗನ ಅಂತ್ಯ ಸಂಸ್ಕಾರಕ್ಕೆ ಬಂದ ಸಣ್ಣ ‌ಮಗ ಎಕ್ಕಾರು ನಾಗವೇಣಿ ಅಮ್ಮನವರಿಗೆ " ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ " ಎಂದು ಮಾತು ಕೊಟ್ಟು ಮುಂಬಯಿಗೆ ಕರೆದುಕೊಂಡು ಹೋಗಿದ್ದ.ಮುಂದೇನಾತು ತಿಳಿಯದು.ಬಹುಶಃ ಮಗ ಚೆನ್ನಾಗಿ ನೋಡಿಕೊಂಡಿರಬಹುದು.ಕೆಲ ತಿಂಗಳ ಹಿಂದೆ ಹೊಸತಾಗಿ ಸಂಸಾರ ಹೂಡಿದ ಆತ್ಮೀಯರಾದ ಪರಶುರಾಮ ಯತ್ನಾಳ್( ಹೈ ಕೋರ್ಟ್ ನ್ಯಾಯವಾದಿ) ಮನೆಗೆ ಹೋಗಬೇಕೆಂದು ಕೊಂಡಾಗ ಅಕ್ಕಮ್ಮಜ್ಜಿ ಮತ್ತು ತೀರಾ ಕಡಿಮೆ ಬಾಡಿಗೆಗೆ ಮನೆ ಕೊಟ್ಟ  ನಾಗವೇಣಿ ಅಮ್ಮನವರ ಸಹೃದಯತೆ ನೆನಪಾಗಿಇದನ್ನು  ಬರೆದಿದ್ದೆ,ಈಗ ಆತ್ಮಕಥೆ ಗೆ ಜೋಡಿಸಿರುವೆ - ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪದವಿ ಪೂರ್ವ ಕಾಲೇಜು

ನನ್ನೊಳಗೂ ಒಂದು ಆತ್ಮವಿದೆ ಭಾಗ 9 ಆತ್ಮ ಕಥೆಯೆಂದರೆ ಬರಿಯ ಗೋಳಲ್ಲ


ಇತ್ತೀಚೆಗೆ ಫಲಿತಾಂಶಗಳು ಅಂತರ್ಜಾಲದ ಮೂಲಕ ಮಕ್ಕಳಿಗೆ ಸಿಗುತ್ತವೆ‌.ನಮ್ಮ ಕಾಲದಲ್ಲಿ ಹಾಗಿರಲಿಲ್ಲ.
ನಮ್ಮ ಹತ್ತನೇ ತರಗತಿಯ ಪಬ್ಲಿಕ್ ಪರೀಕೆಯ ಫಲಿತಾಂಶದ ದಿನ ಹೇಗೋ ನಮಗೆ ಗೊತ್ತಾಗುತ್ತಾ ಇತ್ತು.ನಮ್ಮ ಮನೆಗೆ ಪತ್ರಿಕೆ ತರಿಸುತ್ತಾ ಇರಲಿಲ್ಲ. ಬಹುಶಃ ಹೆಡ್ ಮಾಷ್ಟ್ರು ತರಿಸ್ತಾ ಇದ್ರೋ ಏನೋ.ಅದರ ಮೂಲಕ ನಮ್ಮ ಫಲಿತಾಂಶದ / ಪಾಸ್ ಫೈಲ್ ದಿನ ಗೊತ್ತಾಗುತ್ತಾ ಇದ್ದಿರಬಹುದು .ಬಾಯಿ ಮಾತಿನ ಮೂಲಕ ನನಗೂ ಗೊತ್ತಾಗಿತ್ತು.ನನ್ನ ತಂದೆ ತಾಯಿ ಅಕ್ಕ ಅಣ್ಣನಿಗೆ ನನ್ನ ಬಗ್ಗೆ ತುಂಬಾ ನಂಬಿಕೆ ಇತ್ತು.ಹಾಗಾಗಿ ಅವರು ನನ್ನಷ್ಟು ಆತಂಕಕ್ಕೆ ಒಳಗಾಗಿರಲಿಲ್ಲ‌.ಆದರೆ ನನಗೆ ಗಣಿತದ ಎರಡನೇ ಪತ್ರಿಕೆ  ಮತ್ತು ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ತುಂಬಾ ಆತಂಕ ಇತ್ತು.ವಾಸ್ತವವಾಗಿ ಗಣಿತ ನನ್ನ ಆಸಕ್ತಿಯ ವಿಚಾರ.ಆದರೆ ಒಂಬತ್ತನೇ ತರಗತಿಯಲ್ಲಿ ನಡೆದ ಒಂದು ವಿಚಾರದಿಂದ ನಾನು ಶಾಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೆ.ಅದರ ಪರಿಣಾಮವಾಗಿ ನಾನು ಕಲಿಕೆಯಲ್ಲಿ ತುಸು ಹಿಂದೆ ಬಿದ್ದಿದ್ದೆ.ಅದರಲ್ಲೂ ಗಣಿತದಲ್ಲಿ ಹಿಂದೆ ಬಿದ್ದಿದ್ದೆ.ಬಹುಶಃ ನಾನು ಹೋಮ್ ವರ್ಕ್ ಮಾಡುತ್ತ ಇರಲಿಲ್ಲ. ಮಾಡದ ಬಗ್ಗೆ ವಿಚಾರಿಸುವ ಮೇಷ್ಟ್ರು ಗಳು ನಮ್ಮ ವಾಣಿವಿಜಯ ಹೈಸ್ಕೂಲ್ ನಲ್ಲಿ ಒಬ್ಬಿಬ್ಬರು ಮಾತ್ರ ಇದ್ದರು.ನಮ್ಮ ಕೆಮೆಷ್ಟ್ರಿ ಮಾಷ್ಟ್ರು ಅಮೈ ಸುಬ್ರಹ್ಮಣ್ಯ ಭಟ್ ಒಳ್ಳೆಯ ಶಿಕ್ಷಕರಾಗಿದ್ದರು‌.ಜೊತೆಗೆ ದಿನ ದಿನ ಕಲಿತುಕೊಂಡು ಬರುವುದು ನಮಗೆ ಅನಿವಾರ್ಯ ಆಗಿತ್ತು. ಬಹುಶಃ ಅವರ ಕೆಮೆಷ್ಟ್ರಿ ವಿಷಯದಲ್ಲಿ ಯಾರೂ ಫೈಲ್ ಅಗುತ್ತಾ ಇರಲಿಲ್ಲ ‌ಅಂತೆಯೇ ಫಿಸಿಕ್ಸ್ ಪಾಠ ಮಾಡುತ್ತಿದ್ದ ಅಮೈ ಕೃಷ್ಣ ಮಾಷ್ಡ್ರು ಕೂಡ ಶಿಸ್ತಿನ ಸಿಪಾಯಿ. ದಿನ ನಿತ್ಯ ಹಿಂದಿನ ದಿನದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದರು.ಅವರು ಕಷ್ಟದ ವಿಚಾರವನ್ನು ಕೂಡ ಬಹಳ ಸುಲಭ ಎನಿಸುವಂತೆ ಲೀಲಾಜಾಲವಾಗಿ ನಮಗೆ ಅರ್ಥ ಮಾಡಿಸುತ್ತಿದ್ದರು.ಹಾಗಾಗಿ ಇವೆರಡು ವಿಷಯಗಳಲ್ಲಿ ನನಗೆ ಉತ್ತಮ ಅಂಕಗಳು ಬರುತ್ತಾ ಇದ್ದವು.ಸಮಾಜ ಶಾಸ್ತ್ರಕ್ಕೆ ತೊಟ್ಟೆತ್ತೋಡಿ ಮಾಸ್ಟರ್ ಇದ್ದರು‌.ಅವರು ಪಾಪದ ಮಾಷ್ಟ್ರು ಹಾಗಾಗಿ ನಾವು ನೋಟ್ಸ್ ಬರೆಯುತ್ತಾ ಇದ್ದೇವಾ ಓದುತ್ತಾ ಇದ್ದೇವಾ ಎಂಬುದನ್ನು ಗಮನಿಸಿ ಎರಡೇಟು ಬೆನ್ನಿಗೆ ಕೊಡುತ್ತಾ ಇರಲಿಲ್ಲ ಜೊತೆಗೆ ನನಗೆ ಆಗ ಇತಿಹಾಸ ಭೂಗೋಳ ಇತ್ಯಾದಿ ಆಸಕ್ತಿಯ ವಿಚಾರಗಳು ಆಗಿರಲಿಲ್ಲ. ಇವುಗಳ ನಡುವೆ ಕಬ್ಬಿಣದ ಕಡಲೆಯಾದದ್ದು ಇಂಗ್ಲಿಷ್.ನಿಜಕ್ಕೂ ನಾನು ಸಂಸ್ಕೃತ ಉಪನ್ಯಾಸಕಿಯಾಗಿ ಅಲೋಶಿಯಸ್ ಕಾಲೇಜಿಗೆ ಸೇರುವ ತನಕವೂ is was ಗಳ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ಅಲ್ಲಿ ಸಂಸ್ಕೃತ ವನ್ನು ಇಂಗ್ಲಿಷ್ ಮಾಧ್ಯಮ ದಲ್ಲಿ ಪಾಠ ಮಾಡಬೇಕಿತ್ತು.ಆಗ ಪ್ರಸಾದ್ ಮತ್ತು ಹಿಂದಿ ಉಪನ್ಯಾಸಕಿ ಜೂಡಿ ಮೇಡಂ ನನಗೆ ಸ್ವಲ್ಪ ಇಂಗ್ಲಿಷ್ ಹೇಳಿಕೊಟ್ಟರು .ನಮ್ಮ ಶಾಲೆಯ ಇಂಗ್ಲಿಷ್ ಶಿಕ್ಷಕರು ಕನ್ನಡದಲ್ಲಿ ಇಂಗ್ಲಿಷ್ ಅನ್ನು ಒಂದಿನಿತೂ ಕನ್ನಡದಲ್ಲಿ ಹೇಳದ ಕಾರಣ ಇಂಗ್ಲಿಷ್ ಪಾಠಗಳಲ್ಲಿ ಏನು ಕಥೆ ಇತ್ತು, ವಿಷಯ ಇತ್ತು ಎಂಬುದೇ ನನಗೆ ಗೊತ್ತಿರಲಿಲ್ಲ. ಆಗಿನ್ನೂ ಗೈಡ್ ಗಳು ಬಂದಿರಲಿಲ್ಲವೋ ಅಥವಾ ನಮಗೆ ಅಂತಹದ್ದೊಂದು ಇದೆ ಎಂದು ಗೊತ್ತಿರಲಿಲ್ಲವೋ ಏನೋ ಒಟ್ಟಿನಲ್ಲಿ ನಮಗೆ ಗೈಡ್‌ ಸಿಕ್ಕಿರಲಿಲ್ಲ.
ಇಂಗ್ಲಿಷ್ ಎರಡನೇ ಪತ್ರಿಕೆಯನ್ನು ಅಮೈ ಕೃಷ್ಣ ‌ಮಾಷ್ಟ್ರು ಪಾಠ ಮಾಡಿದ್ದರು. ಹಾಗಾಗಿ ಕಥೆ ಸುಮಾರಾಗಿ ಅರ್ಥವಾಗಿತ್ತು.ಟಾಲ್ ಸ್ಟಾಯ್ ಯ ಯಾವುದೋ ಒಂದು ನೀಳ್ಗಥೆಯನ್ನು ಎರಡನೇ ಪತ್ರಿಕೆಗೆ ಸಿಲಬಸ್ ಮಾಡಿದ್ದರು. ಕಥೆ ಅರ್ಥವಾದ ಕಾರಣ ಪ್ರಶ್ನೆಗಳಿಗೆ ಉತ್ತರ ಬರೆಯಬಲ್ಲವಳಾಗಿದ್ದೆ..ಆದರೆ ಇಂಗ್ಲಿಷ್ ಮೊದಲ ಪತ್ರಿಕೆ ಬಗ್ಗೆ ಆತಂಕ ಇತ್ತು.
ಫಲಿತಾಂಶದ ದಿನ ಬೆಳಗ್ಗೆಯೇ ನಾವೆಲ್ಲ ಹೋಗಿ ಶಾಲೆಯಲ್ಲಿ ಕಾಯುತ್ತಾ ಇದ್ದೆವು.ತರಗತಿ ಪರೀಕ್ಷೆಗಳಲ್ಲಿ ಸುಮಂಗಲ,ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮತ್ತು ನಾನು ಪ್ರತಿಸ್ಪರ್ಧಿ ಗಳಾಗಿದ್ದೆವು.ಸಾಮಾನ್ಯವಾಗಿ ಸುಮಂಗಲ ‌ಮೊದಲ ಸ್ಥಾನ ಪಡೆಯುತ್ತಿದ್ದಳು.ಎರಡನೇ ಸ್ಥಾನಕ್ಕಾಗಿ ನಿಶಾ ಮತ್ತು ನನ್ನೊಳಗೆ ಪೈಪೋಟಿ ಇತ್ತು.ಸುಮಂಗಲ ಸುಶಿಕ್ಷಿತರ ಮನೆ ಹುಡುಗಿಯಾಗಿದ್ದಳು.ನಿಶಾನ ತಂದೆ ಯಾವುದೋ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹಾಗಾಗಿ ಅವರಿಗೆ ಮನೆಯಿಂದ ಕಲಿಕೆಗೆ ಹೆಚ್ಚಿನ ಬೆಂಬಲ ಇತ್ತು.
ಫಲಿತಾಂಶದ ದಿನ ನಾವೆಲ್ಲ ಹೆಡ್ ಮಾಷ್ಟ್ರು ಕೊಠಡಿಯ ಹೊರಗೆ ಜಾತಕ ಪಕ್ಷಿಗಳಂತೆ ಕಾಯುತ್ತಾ ಇದ್ದೆ.ಆಗ ಹೆಚ್ಚು ಬಸ್ ಗಳು ಇರಲಿಲ್ಲ. ನಮ್ಮ ಹೆಡ್ ಮಾಷ್ಟ್ರು ಕಾಸರಗೋಡಿಗೆ ಹೋಗಿ ಫಲಿತಾಂಶವನ್ನು ಕಟ್ಟೆತ್ತಲ ಬಸ್ಸಿನಲ್ಲಿ ತರಬಹುದು ಎಂದು ಕಾಯುತ್ತಾ ಇದ್ದೆವು.ಅದು ಬರುವಾಗ ಮಧ್ಯಾಹ್ನ ಆಗುತ್ತಾ ಇತ್ತು..
ಆ ದಿನದ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗುತ್ತಾ ಇತ್ತು.ಅಂತೂ ಇಂತೂ ಕಟ್ಟತ್ತಲ ಬಸ್ ಬಂತು .ನಮ್ಮ ಹೆಡ್ ಮಾಷ್ಟ್ರು ಒಂದು ದೊಡ್ಡ ಫೈಲ್ ಅನ್ನು ಹಿಡಿದುಕೊಂಡು ಬಂದು ಅವರ ಕೊಠಡಿ ಹೊಕ್ಕರು.ನಮ್ಮಲ್ಲಿ ಪಿನ್ ಡ್ರಾಪ್ ಸೈಲೆನ್ಸ್.. ಒಳಗಿನಿಂದ ಸುಮಂಗಲ, ನಿಶಾ,ವಿಜಯ,ಸೂರ್ಯನಾರಾಯಣ, ಪ್ರಮೋದ್ ಮೊದಲಾದವರ ಹೆಸರುಗಳನ್ನು ಹೇಳಿದ್ದು ಕೇಳಿಸಿತು.ನನ್ನ ಹೆಸರು ಹೇಳಿದ್ದು ಕೇಳಿಸಲಿಲ್ಲ.ನನ್ನ ಎದೆ ನನಗೇ ಕೇಳಿಸುವಷ್ಟು ದೊಡ್ಡದಾಗಿ ಬಡಿದುಕೊಳ್ಳುತ್ತಾ ಇತ್ತು.ಮತ್ತೆ ಸ್ವಲ್ಪ ಹೊತ್ತಿನಲ್ಲಿ ರಿಸಲ್ಟ್ ನಲ್ಲಿ ಪಾಸಾದವರ ಪಟ್ಟಿಯನ್ನು ಹೆಡ್ ಮಾಷ್ಟ್ರು ಕೊಠಡಿಯ ಹೊರಭಾಗದ ನೋಟೀಸ್ ಬೋರ್ಡ್ ಗೆ ತಂದು ಅಂಟಿಸಿದರು.
ಅಬ್ಬಾ!ಬಚಾವ್ ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾದವರ ಪಟ್ಟಿಯಲ್ಲಿ ಇದ್ದೆ.ಆಗ ನನಗಾದ ಸಂತಸವನ್ನು ವರ್ಣಿಸಲಾರೆ.ಅದು ಶಬ್ದಾತೀತವಾದುದು! ಈಗಿನಂತೆ ಆಗ ಫಲಿತಾಂಶ ಬಂದ ದಿನವೇ ನಮಗೆ ಅಂಕಗಳು ಗೊತ್ತಾಗುತ್ತಿರಲಿಲ್ಲವೆಂದು ಕಾಣುತ್ತದೆ.ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದರೂ ನನಗೆ ಎಷ್ಟು ಅಂಕಗಳು ಬಂದಿವೆ ಎಂದು ತಿಳಿದಿರಲಿಲ್ಲ. ಜೊತೆಗೆ ನಮ್ಮೊಳಗೆ ಸ್ಪರ್ಧೆ ಇತ್ತಲ್ಲ! ಹಾಗಾಗಿ ಯಾರು ಫಸ್ಟ್ ,ಸೆಕೆಂಡ್, ಥರ್ಡ್ ಎಂದು ತಿಳಿಯುವ ಕುತೂಹಲ ಕೂಡ ಇತ್ತು.
ಹೊರಗಡೆ ಹಾಕಿದ ಫಲಿತಾಂಶದ ಪಟ್ಟಿಯಲ್ಲಿ ಸುಮಂಗಲ, ನಿಶಾ,ವಿಜಯರ ಹೆಸರಿನ ಮುಂದೆ ಒಂದು ಸಣ್ಣ ಟಿಕ್ ಮಾರ್ಕ್ ಇತ್ತು.ಹಾಗಾಗಿ ಮೊದಲ ಮೂರು ಸ್ಥಾನ ಅವರಿಗೆ ಸಿಕ್ಕಿದೆ ಎಂದು ನಾವುಗಳು ಉಹಿಸಿದೆವು.ನನಗೊಂಚೂರು ಪೆಚ್ಚು ಕೂಡ ಆಯಿತು. ಮೊದಲ ಸ್ಥಾನ ಗಳಿಸಬೇಕೆಂದು  ಕೊನೆ ಗಳಿಗೆಯಲ್ಲಿ ಹಗಲು ರಾತ್ರಿ ಓದಿದ್ದೆ.ನನ್ನ ತಂದೆ ತಾಯಿ ಅಷ್ಟೊಂದು ಓದಿದವರಲ್ಲ ಹಾಗಾಗಿ ಗಣಿತ ಮತ್ತು ಇಂಗ್ಲಿಷ್ ಅನ್ನು ನನಗೆ ಅರ್ಥ ಮಾಡಿಸುವವರು ಇರಲಿಲ್ಲ. ಸುಮಂಗಲ, ನಿಶಾ,ವಿಜಯರಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಹೇಳಿ ಕೊಡುವವರು ಇದ್ದರು.
ಹಾಗಾಗಿ ಅವರುಗಳೇ ಮೊದಲ ಮೂರು ಸ್ಥಾನ ಗಳಿಸಿರಬಹುದೆಂದು ಊಹಿಸಿದೆ.
ಹಾಗೆಯೇ ಮನೆಗೆ ಬಂದು ಹೇಳಿದೆ ಕೂಡ. ಕೇವಲ ಟಿಕ್ ಮಾರ್ಕ್ ಇತ್ತು ಅನ್ನುವ ಕಾರಣಕ್ಕೆ ಅವರಿಗೇ ಮೊದಲ ಮೂರು ಸ್ಥಾನ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನನ್ನ ತಂದೆ ತಾಯಿ ನನಗೆ ಧೈರ್ಯ ತುಂಬಿದರು.ಮರುದಿನ ಮಾರ್ಕ್ಸ್ ತಿಳಿಸುತ್ತೇವೆ ಎಂದು ಹೇಳಿದ್ದರು. ಹಾಗೆ ಬೆಳಗ್ಗೆಯೇ ಶಾಲೆಗೆ ಹೋದೆ.
ನನ್ನ ಊಹೆ ತಪ್ಪಾಗಿತ್ತು‌.ನಿರೀಕ್ಷೆಯಂತೆ ಸುಮಂಗಲಳಿಗೆ‌ ಮೊದಲ ಸ್ಥಾನ ಬಂದಿತ್ತು.ನಾನು ಎರಡನೇ ಸ್ಥಾನ ಪಡೆದಿದ್ದೆ.ಮತ್ತು  ಆಗಿನ ಕಾಲಕ್ಕೆ ಉತ್ತಮ ಅಂಕಗಳನ್ನು (408/600) ಪಡೆದಿದ್ದೆ.ಮನೆಯಲ್ಲಿ ಸಂಭ್ರಮವೋ ಸಂಭ್ರಮ.ನನ್ನ ಫಲಿತಾಂಶವನ್ನು ಹೇಳುವ ಸಲುವಾಗಿಯೇ ನನ್ನ ತಂದೆಯವರು ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬಂದಿದ್ದರು!
ಕೇರಳದ ಫಲಿತಾಂಶ ತಡವಾಗಿ ಬರುತ್ತದೆ ಕರ್ನಾಟಕ ರಾಜ್ಯದ ಫಲಿತಾಂಶ ಬೇಗ ಬರುತ್ತಾ ಇತ್ತು‌.ಹಾಗಾಗಿ ನಾವು‌ ಮೊದಲೇ ಅರ್ಜಿ ತಂದು ಇಡಬೇಕಾಗಿತ್ತಂತೆ ಈ ವಿಚಾರ ನಮಗೆ ಗೊತ್ತಿರಲಿಲ್ಲ. ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ನನಗೆ ಮಂಗಳೂರಿನ ಗವರ್ನಮೆಂಟ್ ಕಾಲೇಜಿನ ಅರ್ಜಿ ತಂದು ಕೊಟ್ಟರು.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಡ್ಮಿಶನ್ ಗೆ ಯತ್ನ ಮಾಡಿದೆನಾದರೂ ನನಗೆ ಅಲ್ಲಿ ಸೀಟ್ ಸಿಗಲಿಲ್ಲ. ಇದಾಗಿ ಆರೇ ವರ್ಷಗಳಲ್ಲಿ ನಾನು ಅದೇ ಸಂತ ಅಲೋಶಿಯಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಹುದ್ದೆಗೆ ಅಯ್ಕೆಯಾಗಿ ಉಪನ್ಯಾಸಕಿ ಆದ್ದು ನನ್ನ ಬದುಕಿನ ಒಂದು ಅವಿಸ್ಮರಣೀಯ ಘಟನೆ ಅಂದು ಕಲಿಕೆಗೆ ಅವಕಾಶ ಸಿಗದಿದ್ದರೂ ನಂತರ ಅದೇ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಸಲು ಅರ್ಹತೆ ಪಡೆದು ಕಲಿಸಿದ್ದು ಬದುಕಿನಲ್ಲಿ ಹೀಗೂ ಆಗುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು.
ಬೇರೆಡೆ ಸೀಟ್ ಸಿಗದ ಕಾರಣ ಗವರ್ನಮೆಂಟ್ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜಿಗೆ) ಸೇರಿದೆ
ನಮ್ಮ ತರಗತಿಯಲ್ಲಿ ತೊಂಬತ್ತೊಂಬತ್ತು ಶೇಕಡಾ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ಓದಿದವರಾಗಿದ್ದರು.ಆದರೆ ಇಲ್ಲಿನ ಉಪನ್ಯಾಸಕರು ಮಾತ್ರ ಸಾಕ್ಷಾತ್ ಇಂಗ್ಲೆಂಡ್ ನಿಂದ ಉದುರಿದವರ ಹಾಗೆ ಇದ್ದರು‌.ಒಂದಕ್ಷರ ಕನ್ನಡದಲ್ಲಿ ಹೇಳುತ್ತಿರಲಿಲ್ಲ.ಪರಿಣಾಮ ಹತ್ತನೆಯ ತರಗತಿಯಲ್ಲಿ ವಿಜ್ಞಾನ ದಲ್ಲಿ 99% ಅಂಕಗಳನ್ನು
ಗಳಿಸಿದ್ದ ನಾನು ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದುಳಿದೆ.
ಪ್ರಥಮ ಪಿಯುಸಿ ಕಿರು ಪರೀಕ್ಷೆಯಲ್ಲಿ ( ಕೆಮೆಷ್ಟ್ರಿ) ಯಲ್ಲಿ ನಾನೊಂದು ಪ್ರಶ್ನೆಯ ಅರ್ಥವನ್ನು ಕನ್ನಡದಲ್ಲಿ ತಿಳಿಸಲು ಅಲ್ಲಿ ಇನ್ವಿಜಲೇಷನ್ ಮಾಡುತ್ತಿದ್ದ ಪಟಿಕಲ್ ಶಿವರಾಮ ಭಟ್ ಎಂಬ ಉಪನ್ಯಾಸಕರಲ್ಲಿ ಕೇಳಿದೆ.ನಾನು ಉತ್ತರವನ್ನು ಕೇಳಿದ್ದಲ್ಲ‌.ಪ್ರಶ್ನೆಯ ಕನ್ನಡ ರೂಪವನ್ನು ಕೇಳಿದ್ದು.ಅದು ಹೇಳಲಾಗುವುದಿಲ್ಲ ಎಂದವರು ಹೇಳಿದರು! ಆದರೆ ವಿಜ್ಞಾನ ವನ್ನು ಕನ್ನಡ ಮಾಧ್ಯಮ ದಲ್ಲಿ ಕೂಡ ಬರೆಯಲು ಅವಕಾಶ ಇದೆ ಎಂದು ಗೊತ್ತಾದದ್ದು ನನಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದಾಗಲೇ.ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಇದ್ದವು.ಪಿಯುಸಿ ಅಂತಿಮ ಪರೀಕ್ಷೆ ಯ ಪ್ರಶ್ನೆ ಪತ್ರಿಕೆ  ಕನ್ನಡ ಮತ್ತು ಇಂಗ್ಲಿಷ್  ಭಾಷೆಗಳಲ್ಲಿ ಇರುವಾಗ ಪ್ರಥಮ ಪಿಯುಸಿ ಯ ಕಿರು ಪರೀಕ್ಷೆಯಲ್ಲಿ ನಾನು ಕೇಳಿದ ಒಂದು ಪ್ರಶ್ನೆ ಯ ಕನ್ನಡ ಅನುವಾದವನ್ನು ತಿಳಿಸುವುದು ಅಪರಾಧವಾಗುತ್ತಿರಲಿಲ್ಲ.ಅರ್ಥವಾಗದ ಭಾಷೆಯಲ್ಲಿ ಪಾಠ ಕೇಳುವುದು ಎಂತ ಹಿಂಸೆ ಗೊತ್ತಾ ? ಕ್ಷಣ ಕ್ಷಣ ಕೂಡ ಯುಗವಾಗಿ ಬಿಡುತ್ತದೆ.ಪಾಠ ಯಾವಾಗ ನಿಲ್ಲಿಸುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ.ನಿಮಿಷ ನಿಮಿಷಕ್ಕೂ ವಾಚು ನೋಡುತ್ತಾ ಇದ್ದೆ.ಸುಮ್ಮನೇ ಅರ್ಥವಾಗದ್ದನ್ನು ಕೇಳುವಾಗ ಟಾಯ್ಲೆಟ್ ಗೆ ಹೋಗಬೇಕು ಎಂದು ಅನಿಸುವುದು,ಬೆನ್ನು ನೋವಾಗುವುದು..ಹೀಗೆ ಹೊತ್ತು ಕಳೆಯಲಾಗದೆ ಒದ್ದಾಡುತ್ತಾ ಇದ್ದೆ.ನಮ್ಮ ತರಗತಿಯಲ್ಲಿ ಹೆಚ್ಚಿನವರು ಹತ್ತನೇ ತರಗತಿಯಲ್ಲಿ ವಿಜ್ಞಾನ ದಲ್ಲಿ 80% ಕ್ಕಿಂತ ಹೆಚ್ಚು ಅಂಕಗಳು ಪಡೆದವರೇ ಆಗಿದ್ದರು.
ಹೀಗೆ ಇಂಗ್ಲಿಷ್ ಭಾಷೆಯಲ್ಲಿ ಪಾಠ ಮಾಡಿದ್ದು ಅರ್ಥವಾಗದ್ದರ ಪರಿಣಾಮ
ದ್ವಿತೀಯ ಪಿಯುಸಿ ಯಲ್ಲಿ  ಹತ್ತನೇ ತರಗತಿ ತನಕ ನನ್ನ ಇಷ್ಟದ ಸಬ್ಜೆಕ್ಟ್ ಕೆಮೆಷ್ಟ್ರಿ ಮತ್ತು ಗಣಿತದಲ್ಲಿ ಫೈಲ್ ಆಗಿದ್ದೆ.ನಾನು ಮಾತ್ರವಲ್ಲ ಒಬ್ಬಿಬ್ಬರು ಬಿಟ್ಟರೆ ಉಳಿದವರೆಲ್ಲ ಫೈಲ್ ಆಗಿದ್ದರು.ಬಹುಶಃ 1% ಕ್ಕಿಂತಲೂ ಕಡಿಮೆ ಫಲಿತಾಂಶ ಇದ್ದಿರಬಹುದು. ಇಷ್ಟಾದರೂ ಅಲ್ಲಿನ ಉಪನ್ಯಾಸಕರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲವೇ? ಈಗ ನಲುವತ್ತು ಶೇಕಡಾ ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಅವರ ವಿಚಾರಣೆ ಇರುತ್ತದೆ,ಭಡ್ತಿ ಕಡಿತ ಮಾಡುತ್ತಾರೆ‌
ಇತ್ತ
ನನ್ನ ಮೇಲೆ ತುಂಬಾ ಭರವಸೆ ಇಟ್ಟಿದ್ದ ಹೆತ್ತವರಿಗೆ ಭ್ರಮೆ ನಿರಸನವಾಯಿತು.ಬೈಗಳ ಸುರಿ ಮಳೆಯಾಯಿತು.
ಅದೇ ಕ್ಷಣ ಓದಲು ಕುಳಿತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಹೇಗೋ ಬಾಯಿಪಾಠ ಮಾಡಿ ಎರಡೂ ವಿಷಯಗಳಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ತೆಗೆದೆ.
ಡಿಗ್ರಿಗೆ ಸೇರುವಾಗ ಆರ್ಟ್ಸ್ ತೆಗೆದುಕೊಳ್ಳಬೇಕೆಂದು ಬಯಸಿ ತಂದೆಯವರ ಜೊತೆಯಲ್ಲಿ ಕೆನರಾ ಕಾಲೇಜಿಗೆ ಹೋಗಿ ಸೀಟ್ ಕೇಳಿದೆ.ಮರು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಇದ್ದವು.ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದವು ಹಾಗಾಗಿ ಸೀಟ್ ಕೊಡಲು ಫ್ರಾಂಶುಪಾಲರು ಒಪ್ಪಿದರು‌.ಎಷ್ಟೋ ಫೀಸ ನ್ನು( ಎಷ್ಟು ಕೇಳಿದ್ದರೆಂದು ನನಗೆ ನೆನಪಿಲ್ಲ) ಕೊಡಬೇಕೆಂದು ಹೇಳಿದರು.ಆಗ ನನ್ನ ತಂದೆಯವರು ನಮಗೆ ಅಷ್ಟು ಫೀಸ್ ಕೊಡಲು ಕಷ್ಟವಾಗುತ್ತದೆ. ನಮಗೆ ಎರಡು ಖಂಡಿ ಅಡಿಗೆ ಆಗುವುದು.ಇದರಲ್ಲಿ ಐದು ಜನರ ಓದು ಆಗಬೇಕು, ದೊಡ್ಡ ಮಗಳ ಮದುವೆಯ ಸಾಲ ಇದೆ ಎಂದು ಹೇಳಿ ಫೀಸ್ ಕಡಿಮೆ ಮಾಡಲು ವಿನಂತಿಸಿದರು.ಆಗ ಪ್ರಾಂಶುಪಾಲರು ನನ್ನ ತಂದೆಯವರನ್ನು ಗದರಿದ್ದು ನನಗೆ ಭಯವಾದದ್ದು ಈಗಲೂ ನೆನಪಿದೆ,ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದು ದೊಡ್ಡ ದನಿಯಲ್ಲಿ ದಟ್ಟಿಸಿ ಕೇಳಿದ್ದರು ಅವರು.ಅಧಿಕಾರ ದುಡ್ಡು ‌ಮನುಷ್ಯನಲ್ಲಿ ಎಂತಹ ದರ್ಪ ತರುತ್ತದೆ ಎಂಬುದರ ಪ್ರತ್ಯಕ್ಷ ಅನುಭವ ಆದದ್ದು ನನಗೆ ಆಗಲೇ..ಅವರಿಗೆ ನಮ್ಮ ತಂದೆಯವರನ್ನು ಗದರುವ ಹಕ್ಕೇನಿತ್ತು ? ಫೀಸ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದಾದರೆ ಅದನ್ನು ಹಾಗೆಯೇ ಹೇಳಬಹುದಿತ್ತು.ಏನು ಮಾಡುವುದು ? ಬಡತನ ಎಲ್ಲ ಅನುಭವವನ್ನು ಮಾಡಿಸುತ್ತದೆ.ನಂತರ ನನ್ನ ತಂದೆಯವರನ್ನು ಅವಮಾನಿಸಿದ   ಆ ಕಾಲೇಜು ಬೇಡವೆಂದು  ನಾನು ನಿರ್ಧರಿಸಿದೆ. ಮತ್ತು ಗವರ್ನಮೆಂಟ್ ಕಾಲೇಜಿಗೆ ಸೇರಿ ಪದವಿಯಲ್ಲಿ ಆರ್ಟ್ಸ್ ತೆಗೆದುಕೊಂಡು ಓದುವುದೆಂದು ಆಲೋಚಿಸಿದ್ದೆ. ಆ ಪ್ರಾಂಶುಪಾಲರ ಪೂರ್ಣ ಹೆಸರು ನನಗೆ ನೆನಪಿಲ್ಲ.. ಉಪಾಧ್ಯಾಯ ಎಂದೇನೋ ಇತ್ತು‌.ಮುಂದೆ ಕಟೀಲಿನಲ್ಲಿ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‍‍್ಯಾಂಕ್ ತೆಗೆದಿದ್ದಾಗ ,ವಾರ್ಷಿಕೋತ್ಸವದಲ್ಲಿ ಅವರು ಅತಿಥಗಳಾಗಿ ಆಹ್ವಾನಿಸಲ್ಪಟ್ಟಿದ್ದು  ನನಗೆ ವಿಠಲ್ ರಾವ್ ಸ್ಮಾರಕ ಚಿನ್ನದ ಪದಕವನ್ನು ಕೂಡ ಕೊಟ್ಟಿದ್ದರು ಎಂದು ನೆನಪು‌.
ನಂತರ ನಾನು ಉಜಿರೆಯಲ್ಲಿ ಎಸ್ ಡಿ ಎಂ ಸಿ ಕಾಲೇಜಿನಲ್ಲಿ  ಮನಸಿಲ್ಲದ ಮನಸಿನಲ್ಲಿ ಬಿಎಸ್ಸಿ ಓದಿದೆ
ಅದು ಕೂಡ ಆಕಸ್ಮಿಕವಾಗಿ.
ನನ್ನ ತಮ್ಮ ಈಶ್ವರ ಭಟ್ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ತೆಗೆದಿದ್ದ.ಇವನನ್ನು ಉಜಿರೆ ಕಾಲೇಜಿಗೆ ಸೇರಿಸುವ ಸಲುವಾಗಿ ಸೀಟ್ ಕೇಳಲು ನಮ್ಮ ಸಂಬಂಧಿಕರಾದ ಅಲ್ಲಿನ ಫಿಸಿಕ್ಸ್ ಪ್ರಾಧ್ಯಾಪಕರಾದ ಗಣಪಯ್ಯ ಅವರನ್ನು ಅಣ್ಣ ಹೋಗಿ ಭೇಟಿ ಮಾಡಿದ.ಆಗ ಅವರು ಅಕ್ಕ ತಂಗಿಯರು ಏನು ಮಾಡುತ್ತಿದ್ದಾರೆ ಎಂದು ವಿಚಾರಿಸಿದರು‌.ಆಗ ಅಣ್ಣ ನನ್ನ ವಿಚಾರ ಹೇಳಿದ‌.ಆಗ ಅವರು ಅವಳೂ ಇಲ್ಲಿ ಬರಲಿ ಎಂದು ಹೇಳಿದರು‌.ವಿಜ್ಞಾನಕ್ಕೆ ಹೆಚ್ಚು ಸ್ಕೋಪ್ ಇದೆ ಹಾಗಾಗಿ ಬಿಎಸ್ಸಿ ಓದು ಎಂದು ತಿಳಿಸಿ ನನಗೆ ಬಿಎಸ್ಸಿ ಗೆ ಸೀಟ್ ಕೊಡಿಸಿದರು ‌ಅಲ್ಲೂ ಭಾಷೆಯದೇ ತೊಡಕು ನನಗೆ .ಅಂತೂ ಪಾಸಾಗಿ  ಸೀಟ್ ಕೊಡಿಸಿದ ಅವರ ಮರ್ಯಾದೆ ಉಳಿಸಿದ್ದೆ‌.
ಅಲ್ಲಿಂದ ನಾನು ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ. ಹಲವು ಅಡ್ಡಿ ಆತಂಕಗಳ ನಡುವೆಯೂ ಸಂಸ್ಕೃತ ಎಂಎಗೆ ಸೇರಿದೆ.ನನಗಲ್ಲಿ ರ‍‍್ಯಾಂಕ್ ತೆಗೆಯುವ ಗುರಿ ಇತ್ತು‌.ಆದರೆ ಅದನ್ನು ತಲುಪುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ‌.
ಅಲ್ಲಿ ಪದವಿಯಲ್ಲಿ ಸಂಸ್ಕೃತ ವನ್ನು ಮೇಜರ್ ವಿಷಯವಾಗಿ ತಗೊಂಡು ರ‍‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ರಮಿತಾ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಅವರ ಸಂಸ್ಕೃತ ಭಾಷೆ ಮತ್ತು ವಿಷಯದ ಕುರಿತಾದ ಜ್ಞಾನ ನೋಡಿ ನಾನು ಕಂಗಾಲಾಗಿದ್ದೆ.ಹಾಗಾಗಿ ಲೈಬ್ರರಿ ಯಿಂದ ಪುಸ್ತಕಗಳನ್ನು ತಂದು ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೆ..ಕಾಲು ವಾರ್ಷಿಕ ಪರೀಕ್ಷೆಗಳಲ್ಲಿಯೇ ಇತರರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದೆ.
ಆಗ ನನಗೆ ಮದುವೆಯಾಗಿತ್ತು.ಇತರೆ ಸಹಪಾಠಿಗಳು ಅವಿವಾಹಿತರಾಗಿದ್ದರು.ಆದರೆ ಇದೇನೂ ನಮ್ಮಲ್ಲಿ ಅಂತರ ತರಲಿಲ್ಲ. ನೀತಾ,ಕಮಲಾಯನಿ ನನಗೆ ಹೆಚ್ಚು ಆಪ್ತರಾಗಿದ್ದರು‌.ನನ್ನ ಸಹಪಾಠಿ ಗಳಿಗೆ ವಿವಾಹಾನಂತರದ ಬದುಕಿನ ಬಗ್ಗೆ ಒಂಚೂರು ‌ಕುತೂಹಲ ,ಆತಂಕ ಇತ್ತು‌.ಒಳ್ಳೆಯ ಗಂಡ ಸಿಕ್ಕಿದರೆ ಬದುಕು ಸ್ವರ್ಗ ಎಂಬುದನ್ನು ಸೂಕ್ಷ್ಮ ವಾಗಿ ತಿಳಿಸಿ ಅವರ ಕುತೂಹಲವನ್ನು ತಣಿಸಿ ಆತಂಕವನ್ನು ದೂರ ಮಾಡಿದ್ದೆ‌.ನಾನು ಸತ್ಯವನ್ನು ಹೇಳಿದ್ದೆ.ಪ್ರಸಾದ್ ಬಹಳ ಸಹೃದಯಿ ಆದ ಕಾರಣ ಬಡತನವಿದ್ದರೂ ಕೂಡ ನಮ್ಮ ಬದುಕು ಸ್ವರ್ಗ ಸದೃಶವೇ ಆಗಿತ್ತು ಆಗ.ಆಗ ಮಾತ್ರವಲ್ಲ ಈಗಲೂ ಸಿರಿವಂತಿಕೆ ಬಂದ ಮೇಲೆ ಕೂಡ, ಆದರೆ ಕಳೆದ ದಿನಗಳನ್ನು ನಾನು ಮರೆತಿಲ್ಲ ಹಾಗಾಗಿ ಬಡವರನ್ನು ಅಥವಾ ಯಾರನ್ನೂ ಕೂಡ ತಾತ್ಸಾರದಿಂದ ಕಾಣುವುದಿಲ್ಲ.
ಸಂಸ್ಕೃತ ಎಂಎ ಓದುವಾಗ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಎಲ್ಲರೂ ಬಡ ಮಧ್ಯಮ ಕುಟುಂಬದವರೇ ಆಗಿದ್ದೆವು.ವರ್ಷವಿಡೀ ಎರಡು ಮೂರು ಪ್ರತಿ ಡ್ರೆಸ್ ಗಳಲ್ಲೇ ಕಳೆದಿದ್ದೆವು.ಎಲ್ಲರೂ ಹಾಗೇ ಇದ್ದ ಕಾರಣ ನಮಗೆ ಅದೊಂದು ಕೊರತೆಯಾಗಿ ಕಾಣಿಸಿರಲಿಲ್ಲ.ಎಲ್ಲರಲ್ಲೂ ಸಾಧನೆಯ ಕನಸಿತ್ತು.
ನಮಗೆ ಮಧ್ಯಾಹ್ನ ಕಟೀಲಿನಲ್ಲಿ ದೇವಸ್ಥಾನದಲ್ಲಿ ಸುಗ್ರಾಸ ಭೋಜನದ ವ್ಯವಸ್ಥೆ ಇತ್ತು‌.ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇತ್ತು.ಮಧ್ಯಾಹ್ನ ಪೂಜೆಯಾದ ನಂತರದ ಊಟಕ್ಕೆ ಕಾದರೆ ಪ್ರಸಾದದ ಊಟ ಇತ್ತು‌ ಬ್ರಾಹ್ಮಣರಿಗೆ ಒಳಗೆ ಬೇರೆ ವ್ಯವಸ್ಥೆ ಇತ್ತು‌ ನಮ್ಮಲ್ಲಿ ಹೆಚ್ಚನವರು ಬ್ರಾಹ್ಮಣ ರಾದ ಕಾರಣ ನಾವು ಪೂಜೆಯ ಬಳಿಕದ ಪ್ರಸಾದದ ಊಟಕ್ಕೆ ಕಾಯುತ್ತಿದ್ದೆವು‌.ದಿನಾಲು ಪಾಯಸ ಇರುತ್ತಿತ್ತು. ಅಲ್ಲಿ ಒಂದು ಸಾರು ಮಾಡುತ್ತಿದ್ದರು.. ಅಷ್ಟು ರುಚಿಯಾದ ಸಾರನ್ನು ನಾನು ಬೇರೆಲ್ಲೂ ಉಂಡಿಲ್ಲ‌ಅಲ್ಲಿನ ಉಪ್ಪಿನಕಾಯಿಯೂ ಅಷ್ಟೇ, ಅತ್ಯದ್ಭುತ! ಪ್ರತಿ ಶುಕ್ರವಾರ ಗಂಜಿ ಇತ್ತು ಅದು ಕುಡ ಬಹಳ ರುಚಿಯಾದುದು‌ ಇನ್ನೂ ಚಂಡಿಕಾ ಹೋಮ ಏನಾದರೂ ವಿಶೇಷ ಇದ್ದರೆ ಪಾಯಸದ ಜೊತೆಗೆ ಸ್ವೀಟ್ ಕೂಡ ಇರುತ್ತಿತ್ತು ‌ಜೊತೆಗೆ ನಮಗೆ ಊಟ ದಕ್ಷಣೆಯಾಗಿ ಎರಡು ರುಪಾಯಿ ಐದು ರುಪಾಯಿ ಸಿಗುತ್ತಾ ಇತ್ತು‌.ಇಪ್ಪತ್ತೈದು ವರ್ಷಗಳ ಹಿಂದೆ ಎರಡು ರುಪಾಯಿ ಐದು ರುಪಾಯಿ ಗಳಿಗೆ ತುಂಬಾ ಬೆಲೆ ಇತ್ತು‌  ಹಾಗಾಗಿ ಆ ದಿನ ನಮಗೆ ಖುಷಿಯೋ ಖುಷಿ..ನಮ್ಮ ತರಗತಿಗಳನ್ನು ದೇವಸ್ಥಾನದ ಊಟದ ಸಮಯಕ್ಕೆ ಹೊಂದಾಣಿಕೆ ಮಾಡಿದ್ದೆವು.ಉಪನ್ಯಾಸಕರಾದ ನಾಗರಾಜ್ ಮತ್ತು ಪದ್ಮನಾಭ ಮರಾಠೆ ನಮ್ಮ ಜೊತೆಯಲ್ಲಿ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದರು ‌ಕೆಲವೊಮ್ಮೆ ಊಟ ಭಾರವಾಗಿ ತರಗತಿ ಬೇಡ ಎಂದರೆ ಅವರುಗಳು ಒಪ್ಪುತ್ತಿದ್ದರು‌.ಆಗ ಬಹಳ ಖುಷಿಯಿಂದ ಮನೆಗೆ ಬಂದು ನಿದ್ರೆ ಮಾಡುತ್ತಿದ್ದೆ ನಾನು,ಕಟೀಲಿನಲ್ಲಿ ಎರಡು ವರ್ಷ ಭರ್ಜರಿಯಾಗಿ  ರುಚಿಯಾದ ಸುಗ್ರಾಸ ಭೋಜನ ಸವಿದದ್ದು ನನ್ನ ಬದುಕಿನ ಸುವರ್ಣ ಗಳಿಗೆಗಳು.
ಮೊದಲ ವರ್ಷ ಎಂಎ ಯಲ್ಲೂ ಅಷ್ಟೇ, ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದೆವು.ಆದಿನಗಳು ಇಂದಿಗೂ ಸ್ಮರಣೀಯವಾಗಿವೆ
ಮೊದಲ ವರ್ಷದ ಕೊನೆಯಲ್ಲಿ ಡಾ.ಜಿ ಎನ್ ಭಟ್ಟರ ಪ್ರಯತ್ನದಿಂದಾಗಿ  ನಮಗೆಲ್ಲ ಒಂದೊಂದು ಸಾವಿರ ರುಪಾಯಿ ಸ್ಕಾಲರಚ ಶಿಪ್ ಬಂದಿತ್ತು.ಆರ್ಥಿಕ ತೊಂದರೆ ಇರುವಾಗ ಇಷ್ಟು ದೊಡ್ಡ ಮೊತ್ತ ಸ್ಕಾಲರ್ ಶಿಪ್ ದುಡ್ಡು ಬಂದಾಗ ಆದ ಸಂತಸವನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ‌.ಅ ಒಂದು ಸಾವಿರ ರುಪಾಯಿ ಗಳನ್ನು ಕೈಯಲ್ಲಿ ಹಿಡಿದುಕೊಂಡು ಅತ್ತು ಬಿಟ್ಟಿದ್ದೆ.ಉಳಿದವರದೂ ಅದೇ ಅವಸ್ಥೆ  .ಮೊದಲ  ವರ್ಷ ಎರಡನೇ ಎರಡು ಚೂಡಿದಾರ್ ನಲ್ಲಿ ಕಳೆದಿದ್ದೆ.ಅಲ್ಲಲ್ಲಿ ಹರಿದು ತೇಪೆ ಹಾಕಿದ್ದೆ‌‌.ಹಾಗಾಗಿ ಬಂದ ದುಡ್ಡಿನಲ್ಲಿ ಎರಡು ಡ್ರೆಸ್ ತೆಗೆದುಕೊಂಡು ಉಳಿದ ಹಣದಲ್ಲಿ ಬೇಕಾದ ಪುಸ್ತಕಗಳನ್ನು ಖರೀದಿಸಿದ್ದೆ‌.ಜೊತೆಯಲ್ಲಿ ನನಗೆ ಬಹಳ ಇಷ್ಟವಾದ ಮೈಸೂರು ಪಾಕನ್ನು ಸ್ವಲ್ಪ ಖರೀದಿಸಿ ತಿಂದಿದ್ದೆವು


Saturday, 27 April 2019

ನನ್ನೊಳಗೂ ಒಂದು ಆತ್ಮವಿದೆ8. ನನಗೂ ಗರ್ಭಿಣಿಯರಿಗೆ ಸಹಜವಾದ ಬಯಕೆ ಇತ್ತು © ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನೊಳಗೂ ಒಂದು ಆತ್ಮವಿದೆ..8
ನನಗೂ ಗರ್ಭಿಣಿಯರಿಗೆ ಸಹಜವಾದ  ಬಯಕೆ ಇತ್ತು..
ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಘಟನೆ ಇದು.
ಅದಕ್ಕಿಂತ ನಾಲ್ಕು ಐದು ವರ್ಷಗಳ ಮೊದಲು ನನ್ನ ಕಲಿಕೆಯ ಕಾರಣಕ್ಕೆ ಜಗಳವಾಗಿ ನಾವು ಮನೆ ಬಿಟ್ಟು ಹೊರಗಡೆ ನಡೆದಿದ್ದರೂ ನಂತರ ನಮಗೆ ರಾಜಿಯಾಗಿತ್ತು.ವರ್ಷದಲ್ಲಿ ಒಂದೆರಡು ಸಲ ಮನೆಗೆ ಬಂದು ಹೋಗುತ್ತಿದ್ದೆವು.ಏನಾದರೂ ಪೂಜೆ ಪುನಸ್ಕಾರ, ಅಜ್ಜ ಅಜ್ಜಿಯ ತಿಥಿಗಳಿಗೂ ಬಂದು ಹೋಗುತ್ತಿದ್ದೆವು.
ಹಾಗೆಯೆ ಒಂದು ದಿನ ಪ್ರಸಾದ್  ಅಜ್ಜಂದೋ ಅಜ್ಜಿದೋ ತಿಥಿ ಇತ್ತು. ನಮ್ಮ ಮದುವೆಯಾಗಿ ನಾಲ್ಕೈದು ವರ್ಷ ಗಳಾಗಿದ್ದವು.ನನಗೆ ಎರಡು ಮೂರು ಸಲ ಮೂರು ನಾಲ್ಕು ತಿಂಗಳಾಗಿ ಗರ್ಭ ಹೋಗಿತ್ತು.ಮತ್ತೆ ನಿಪುಣ ವೈದ್ಯರ ಚಿಕಿತ್ಸೆ ಪಡೆಯುತ್ತಾ ಇದ್ದೆ.
ಆ ದಿನ ಅಜ್ಜನ  ತಿಥಿಯ ದಿನಕ್ಕಾಗುವಾಗ ನನಗೆ ಪೀರಿಯಡ್ ನ  ದಿನ ಮುಂದೆ ಹೋಗಿ ಐದು ದಿನಗಳಾಗಿದ್ದವು.ನನಗೆ ಸಣ್ಣಗೆ ವಾಂತಿ ಬರುವ ಹಾಗೆ ಹಿಂಸೆ ಶುರುವಾಗಿತ್ತು.ಹಾಗಾಗಿ ಮತ್ತೆ ನನ್ನ ‌ಮಡಿಲಲ್ಲಿ ಒಂದು ಚಿಗುರು ಕುಡಿ ಹುಟ್ಟುವುದೇನೋ ಎಂಬ ಸಂಶಯ ಉಂಟಾಗಿತ್ತು.ಹಾಗಾಗಿ  ಬಸ್ ಪ್ರಯಾಣ ಮಾಡಿ ಊರಿಗೆ ಹೋಗಿ ಬರುವುದು ಬೇಡ ಎನಿಸಿತ್ತು.
ಅದಕ್ಕೂ ಹದಿನೈದು ದಿನ ಮೊದಲು ಪ್ರಸಾದರಿಗೆ ಫೋನ್ ಮಾಡಿದ ಅತ್ತೆಯವರು "ಸುಮನಿಗೆ ( ಮೈದುನನ ಹೆಂಡತಿ) ದಿನ ತಪ್ಪಿದೆ "  ಎಂದು ಹೇಳಿದ್ದರು.ಹಾಗೆಂದರೇನೆಂದು ಪ್ರಸಾದ್ ನನ್ನಲ್ಲಿ ಕೇಳಿದಾಗ ಅವಳು ಒಂದೂವರೆ ತಿಂಗಳ ಸಣ್ಣ ಗರ್ಭಿಣಿ ಇರಬಹುದು ಎಂದು ನನಗೆ ಅರ್ಥವಾಗಿದ್ದು ಅದನ್ನೇ ಪ್ರಸಾದ್ ಗೆ ಹೇಳಿದ್ದೆ.
ಇದಾಗಿ ತಿಥಿಗೆ ಬಾ ಎಂದು ಅತ್ತೆ ಪ್ರಸಾದರನ್ನು ಫೋನ್ ಮೂಲಕ ಕರೆದಿದ್ದು,ಆಗ ಫೋನ್ ನಲ್ಲಿ ಮಾತನಾಡುವಾಗ ಸುಮ ಸಣ್ಣ ಗರ್ಭಿಣಿ( ಎರಡು ತಿಂಗಳ) ಎಂದು ಹೇಳಿದ್ದರು.
ನಾನು ಪ್ರಯಾಣ ಬೇಡ ಎಂದು ನಿರ್ಧರಿಸಿದ ಕಾರಣ ಪ್ರಸಾದ್ ಒಬ್ಬರೇ ಊರಿಗೆ ಅಜ್ಜ/ ಅಜ್ಜಿ ತಿಥಿಗೆ ಹೋಗಿದ್ದರು. ಅದು ಜುಲೈ ಅಗಸ್ಟ್  ತಿಂಗಳು ಇರಬೇಕು. ಹಲಸಿನ ಹಣ್ಣಿನ ಕಾಲ ಮುಗಿಯತ್ತಾ ಬರುವ ಸಮಯ.ಮನೆಯಲ್ಲಿ ಆ ವರ್ಷದ ಕೊನೆಯ  ಒಂದು ಹಲಸಿನ ಹಣ್ಣು ಇತ್ತಂತೆ.ಸುಮ "ನಾನು ನಂತರ ಆದರೆ ತಿನ್ನುವೆ " ಎಂದು ಹೇಳಿದಳಂತೆ.ಅದಕ್ಕೆ ಆ ಹಣ್ಣನ್ನು ತುಂಡು ಮಾಡಲಿಲ್ಲ .ಅಪರೂಪಕ್ಕೆ ಬಂದ ಮಗ ಪ್ರಸಾದ್ ಗೂ ಸಿಗಲಿಲ್ಲ. ನಾವು ಮಂಗಳೂರಿನಲ್ಲಿ ಇದ್ದ ಕಾರಣ ನಮಗೂ ಹಲಸಿನ ಹಣ್ಣು ಸಿಗುವುದು ಅಪರೂಪ ಆಗಿತ್ತು. ಊರಲ್ಲಿ ರುಚಿಯಾದ ಹಣ್ಣನ್ನು ತಿಂದು ಅಭ್ಯಾಸವಾದ ನಮಗೆ ಪೇಟೆಯಲ್ಲಿ ಕೊರೆದು ಮಾರುವ ಹಲಸಿನ ತೊಳೆಯ ಬಗ್ಗೆ ಒಲವಿರಲಿಲ್ಲ .ಹಾಗಾಗಿ ನಾವು ಹಲಸಿನ ಹಣ್ಣು ಇಷ್ಟವೇ ಆಗಿದ್ದರೂ ಪೇಟೆಯಲ್ಲಿ ಮಾರುವುದನ್ನು ತೆಗೆದುಕೊಳ್ಳುತ್ತಿರಲಿಲ್ಲ.ನಾನು ಎಪ್ರಿಲ್ ಮೇ ರಜೆಯಲ್ಲಿ ಅಮ್ಮನ ಮನೆಗೆ  ಹೋಗಿದ್ದಾಗ ಯಥೇಚ್ಛವಾಗಿ ಹಲಸಿನ ಹಣ್ಣು ತಿನ್ನುತ್ತಿದ್ದೆ‌.ಬರುವಾಗ ನಮಗೆ ಅಮ್ಮ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡಿ ಕೊಡುತ್ತಿದ್ದರು.ಮಂಗಳೂರಿನ ಮನೆಗೆ ತಂದಾಗ ಪ್ರಸಾದರಿಗೆ ಹಲಸಿನ ಹಣ್ಣು ಮತ್ತು ಕೊಟ್ಟಿಗೆ( ಗಟ್ಟಿ) ಸಿಗುತ್ತಾ ಇತ್ತು ಅಷ್ಟೇ, ಹಾಗಾಗಿ ಹಲಸಿನ ಹಣ್ಣು ಅವರಿಗೆ ಇನ್ನೂ ಅಪರೂಪ.
ತಿಥಿ ‌ಮುಗಿಸಿ ಅದೇ ದಿನ ರಾತ್ರಿಯೇ ಮಂಗಳೂರಿನ ನಮ್ಮ ಮನೆಗೆ ಬಂದವರು " ಮನೆಯಲ್ಲಿ ವರ್ಷದ ಕೊನೆ ಹಲಸಿನ ಹಣ್ಣು ಇದ್ದದ್ದು.ಅದನ್ನು ಚೊಚ್ಚಲ ಗರ್ಭಿಣಿ ಸುಮಳಿಗಾಗಿ ಮೀಸಲಿರಿಸದ್ದು ಕೂಡ ಹೇಳಿದರು.
ಮಗನಿಗೆ ಹಲಸಿನ ಹಣ್ಣು ಬಹಳ ಇಷ್ಟ ಎಂದೂ ಗೊತ್ತಿದ್ದು ಅದರಿಂದ ಒಂದು ತುಂಡು ಕತ್ತರಿಸಿ ತೆಗೆದು ಪ್ರಸಾದರಿಗೆ ಕೊಡಬಹುದಿತ್ತು..ಒಬ್ಬರಿಗೇ ಇಡೀ ಹಣ್ಣು ಬೇಕಾಗುತ್ತಾ..ಅಂತ ನನಗೂ ಅನಿಸಿತು. ನಮಗೆ ಮಕ್ಕಳಾಗುವಲ್ಲಿ ನಿದಾನ ಆದದ್ದು ಮತ್ತು ಎರಡು ಮೂರು ಬಾರಿ ಗರ್ಭ ಹೋಗಿದ್ದು ಗೊತ್ತಿರುವ ಕಾರಣ ಮನೆ ಮಂದಿಗೆ ಮೈದುನನ ಮಡದಿ ಗರ್ಬಿಣಿಯಾದದ್ದು ತುಂಬಾ ಸಂಭ್ರಮದ ವಿಷಯವಾಗಿ ಇದ್ದಿರಬಹುದು.ಹಾಗಾಗಿ ಹಲಸಿನ ಹಣ್ಣನ್ನು ಅವಳಿಗಾಗಿ ಮೀಸಲಿರಿಸಿದ್ದು ತಪ್ಪೇನೂ ಅಲ್ಲ..ಆದರೆ ನನಗೆ ಯಾಕೋ ತಕ್ಷಣವೇ ಹಲಸಿನ ಹಣ್ಣು ಬೇಕೆನಿಸಿತು.ತುಂಬಾ ಆಶೆ ಅಯಿತು.ಮನೆಯಲ್ಲಿ ಹಲಸಿನ ಹಣ್ಣನ್ನು ಒಂದೊಮ್ಮೆ ಕೊರೆದಿದ್ದರೆ ಪ್ರಸಾದರಿಗೆ ನಾಲ್ಕು ಸೊಳೆ ಸಿಗುತ್ತಿತ್ತೇ ಹೊರತು ನನಗೆ ಸಿಗುತ್ತಿರಲಿಲ್ಲ.
ಆಗ ಫೋನ್ ನಮ್ಮಲ್ಲಿ ಇರಲಿಲ್ಲ. ಅಮ್ಮನಿಗೆ ಹೇಳಿದ್ದರೆ ಮನೆಯ ಮರದಲ್ಲಿ ಉಳಿದಿದ್ದರೆ ಹಲಸಿನ ಹಣ್ಣನ್ನು ತಮ್ಮನ ಮೂಲಕ ಕಳುಹಿಸಿಕೊಡುತ್ತಾ ಇದ್ದರು ಖಂಡಿತಾ.
ಆದರೆ ಫೋನ್ ಇಲ್ಲದ ನಾನು ಅಮ್ಮನಲ್ಲಿ ಕೇಳುವುದು ಹೇಗೆ? ಮರುದಿನವೇ ತಾಯಿ ‌ಮನೆಗೆ ಹೋಗ ಬೇಕು ಅನಿಸಿತು.
ಮತ್ತೆ  ಪೀರಿಯಡ್ ಮುಂದೆ ಹೋಗಿ ಐದು ದಿನ ಗಳಾಗಿವೆ ,ಪ್ರಯಾಣ ಒಳ್ಳೆಯದಲ್ಲ ಎಂದು ನೆನಪಾಗಿ ಆಸೆಗೆ ತಡೆ ಹಾಕಿಕೊಂಡೆ.
ಹೌದು ನಮ್ಮ ನಿರೀಕ್ಷೆ ನಿಜವಾಗಿತ್ತು.ಮಗ ಅರವಿಂದ ನ್ನ ಮಡಿಲಲ್ಲಿ ಕುಡಿಯೊಡೆದಿದ್ದ.ನಲುವತ್ತು ದಿನವಾದ ಮೇಲೆ ವೈದ್ಯರಲ್ಲಿ ಹೋದೆ. ಲ್ಯಾಬ್ ನಿಂದ ಬಂದ ವರದಿ ನೋಡಿ ಪರೀಕ್ಷಿಸಿದ ವೈದ್ಯೆ ಡಾ.ಮಾಲತಿ ಭಟ್ ಗರ್ಭಿಣಿಯಾಗಿರುವುದನ್ನು ಧೃಢ ಪಡಿಸಿದರು.ಇ ಮೊದಲು ಮೂರು ಬಾರಿ ಗರ್ಭಪಾತವಾದ ಕಾರಣ ಈ ಬಾರಿ  ತುಂಬಾ ಜಾಗ್ರತೆಯಿಂದ ಇರಬೇಕು. ಬೆಡ್ ರೆಸ್ಟ್ ತೆಗೆದುಕೊಳ್ಳಬೇಕೆಂದು ತಿಳಿಸಿದರು.ಅಷ್ಟಾಗುವಾಗ ನನಗೆ ತುಂಬಾ ವಾಂತಿ ಹಿಂಸೆ ಶುರುವಾಗಿತ್ತು.ನಮ್ಮ ಬಾಡಿಗೆ ಮನೆಯ ಓನರ್ ಮನೆಯಲ್ಲಿ ಫೋನ್ ಇತ್ತು.ಯಾವಾಗಲಾದರೊಮ್ಮೆ ಅಮ್ಮ ಅಲ್ಲಿಗೆ ಕರೆ ಮಾಡಿದರೆ ಓನರ್ ಮಡದಿ ಶೈಲಜಾ( ನನಗೆ ಒಳ್ಳೆಯ ಸ್ನೆಹಿತೆಯಾಗಿದ್ದರು) ನಮಗೆ ಫೋನ್ ಬಂದದ್ದನ್ನು ತಿಳಿಸುತ್ತಿದ್ದರು.ಅವರ ಮನೆಗೆ ( ಅವರ ಮನೆ ನಮ್ಮ ‌ಬಾಡಿಗೆ ಮನೆಯ ಪಕ್ಕದಲ್ಲಿ ಇತ್ತು) ಹೋಗಿ ಅಮ್ಮನಲ್ಲಿ ಮಾತನಾಡುತ್ತಾ ಇದ್ದೆ.
ಹೀಗೆ ಕೆಲವು ದಿನ ಕಳೆದಾಗ ಅಮ್ಮನ ಫೋನ್ ಬಂತು. ಆಗ ನಾನು ಅಮ್ಮನಿಗೆ ವಿಷಯ ತಿಳಿಸಿದೆ.ಮತ್ತು ನಮ್ಮ ‌ಮನೆಯಲ್ಲಿ ( ಅತ್ತೆ ಮನೆಯಲ್ಲಿ) ಸುಮಳಿಗಾಗಿ ಹಲಸಿನ ಹಣ್ಣನ್ನು ತೆಗೆದಿರಿಸಿದ ಬಗ್ಗೆಯೂ ಹೇಳಿದೆ.ಆಗ ಅಮ್ಮ ನಮ್ಮ ಮನೆ ತೋಟದ ಹಲಸಿನ ಮರದಲ್ಲಿ ಕೊನೆಯ ಒಂದು ಹಣ್ಣು ಇದೆ .ನಾಳೆಯೆ ಕೊಟ್ಟಿಗೆ ( ಕಡುಬು/ ಗಟ್ಟಿ) ಮಾಡಿ ನಿನಗೆ ಕಳುಹಿಸುತ್ತೇನೆ,ಸ್ವಲ್ಪ ಹಣ್ಣಿನ ಸೊಳೆಗಳನ್ನು ಕೂಡ ಗಣೇಶನ( ನನ್ನ ಸಣ್ಣ ತಮ್ಮ ,ಮಂಗಳೂರಿನ ರೋಷನಿ ನಿಲಯ ಕಾಲೇಜಿನಲ್ಲಿ ಎಂ ಎಸ್ ಡಬ್ಯೂ ಓದುತ್ತಾ ಇದ್ದರು) ಎಂದು ಹೇಳಿದರು.ಅಮ್ಮ ಹೇಳಿದಂತೆ ಮಾಡಿದರು.ಅಮ್ಮ ಕಳುಹಿಸುವ ಹಲಸಿನ ಹಣ್ಣಿನ ಕೊಟ್ಟಿಗೆ ಮತ್ತು ಹಲಸಿನ ಹಣ್ಣಿಗಾಗಿ ಜಾತಕ ಪಕ್ಷಿಯಂತೆ ಕಾದಿದ್ದೆ.ತಮ್ಮ ತಂದ ತಕ್ಷಣವೇ ತಿನ್ನಲು ಹೊರಟೆ..ಆದರೆ ನನಗೆ ಬಹಳ ಇಷ್ಟವಾಗಿದ್ದ ಹಲಸಿನ ಹಣ್ಣಿನ ಪರಿಮಳಕ್ಕೆ ಹೊಟ್ಟೆ ತೊಳಸಿ ಬಂತು. ವಾಂತಿ ಆಯಿತು. ತಿನ್ನಲಾಗಲಿಲ್ಲ.
. ಹಲಸಿನ ಹಣ್ಣು ತಿನ್ನಬೇಕೆನಿಸಿದರೂ ತಿನ್ನಲಾಗದ ಹಿಂಸೆ.
ಹೆಣ್ಣಿನ ಬದುಕೇ ವಿಚಿತ್ರ. ಮಗು ಬೇಕೆಂದು ಬಯಸಿ ಚಿಕಿತ್ಸೆ ಪಡೆದು ಗರ್ಭ ಧರಿಸಿದ್ದರೂ ಒಡಲಲ್ಲಿ ಕುಡಿ ಹುಟ್ಟಿದಾಗ ದೇಹಕ್ಕೆ ಒಗ್ಗದೆ ಆಗುವ ಹಿಂಸೆಯೇ ವಾಂತಿ.
ಅಂತೂ ಇಂತೂ ನಾಲ್ಕು ತಿಂಗಳಾಗುವಾಗ ವಾಂತಿ ಕಡಿಮೆಯಾಗಿತ್ತು.ನಂತರ ತಿನ್ನುವ ಚಪಲ / ಬಯಕೆ ಶುರು ಆಯ್ತು.
ನನಗೆ ಬೆಡ್ ರೆಸ್ಟ್ ಇತ್ತು.ಹಾಗಾಗಿ ಬೇಕಾದದ್ದನ್ನು ಮಾಡಿ ತಿನ್ನುವಂತೆ ಇರಲಿಲ್ಲ. ಪ್ರಸಾದರಿಗೆ ಮಾಮೂಲಿ‌ ಅನ್ನ ಸಾರು, ಸಾಂಬಾರ್ ಮಾಡಲು ಮಾತ್ರ ಬರುತ್ತಿತ್ತು. ನನಗೆ ಬೇಕು ಬೇಕಾದ ತಿಂಡಿಗೇನು ಮಾಡುದು? ಅಮ್ಮ ಆಗಾಗ ತಮ್ಮನ ಮೂಲಕ ಅದು ಇದು ಮಾಡಿ ಕಳಹಿಸುತ್ತಾ ಇದ್ದರು.ನನ್ನ ಅತ್ತೆ ಮನೆಯಲ್ಲಿ ಯಾವಾಗಲೂ ಸ್ವೀಟ್ ತಿಂಡಿ ಮಾಡುತ್ತಲೇ ಇರುತ್ತಿದ್ದರು.
ಪ್ರಸಾದ್ ಹೋಟೆಲಿನಿಂದ ಆಗಾಗ ತಂದು ಕೊಡುತ್ತಾ ಇದ್ದರು‌.ನನಗೆ ಬೇಕೆನಿಸಿದ ಸಿಹಿ ತಿಂಡಿಗಳನ್ನು ಬೇಕರಿಯಿಂದ ತಂದು ಕೊಡುತ್ತಾ ಇದ್ದರು.ಆದರೂ ನನಗೆ ವಿಪರೀತ ತಿನ್ನುವ ಚಪಲ ಆಗ. ಅತ್ತೆಯವರದು ದೊಡ್ಡ ಕೈ ..ಊರಿನರಿಗೆಲ್ಲಾ ಕರೆದು ಕರೆದು ಕೊಡುತ್ತಾ ಇದ್ದರು.ಹಾಗೆ ನನಗೂ  ಕಳುಹಿಸಿಯಾರೆಂದು ಒಂದು ದೂರದ ಆಸೆ ಇತ್ತು .ಮಾವ ಮೈದುನ ಆಗಾಗ ಮಂಗಳೂರಿಗೆ ಮಂಗಳೂರಿಗೆ ಏನೋ ಕೆಲಸದಲ್ಲಿ ಬರ್ತಾ ಇದ್ದರು‌.ಆಗೆಲ್ಲ ಮಂಗಳೂರಿನಲ್ಲಿ ಮನೆ ಮಾಡಿ ಇದ್ದ ಅತ್ತೆಯ ತಮ್ಮನ ಮನೆಗೆ( ಪ್ರಸಾದರ ಸೋದರ ಮಾವನ ಮನೆ) ಮನೆಯಲ್ಲಿ ಅತ್ತೆ ಮಾಡಿದ ಸ್ವೀಟ್,ಚಕ್ಕುಲಿ ತಿಂಡಿ ತಿನಿಸುಗಳನ್ನು ಕಳುಹಿಸುತ್ತಾ ಇದ್ದರು. ನಾನು ಗರ್ಭಿಣಿ ಎಂದು ಅತ್ತೆಗೆ ಮನೆ ಮಂದಿಗೆ ತಿಳಿದಿತ್ತು..ಹಾಗಾಗಿ ನನಗೂ ತಿಂಡಿ  ಕಳುಹಿಸಿ ಯಾರೆಂದು ಕಾಯುತ್ತಾ ಇದ್ದೆ.ಕಾದದ್ದೇ ಬಂತು ಅಷ್ಟೇ..
ಪ್ರಸಾದರ ದೊಡ್ಡ ಸೋದರ ಮಾವನ ಮನೆ ಮಂಗಳೂರಿನ ನಮ್ಮ ಮನೆಯ ಹತ್ತಿರವೇ ಇತ್ತು.ಅರ್ಧ ಕಿಲೋಮೀಟರ್ ದೂರ ಕೂಡ ಇರಲಿಲ್ಲ ಮತ್ತು ಸೋದರ ಮಾವ ಮತ್ತು ಅವರ ಮಡದಿ ದಿನ ನಿತ್ತ ನಮ್ಮ ಮನೆ ಎದುರಿಗಿನ ರಸ್ತೆಯಲ್ಲಿಯೇ ಓಡಾಡುತ್ತಿದ್ದರು.ಪ್ರಸಾದರ ಸೋದರ ಮಾವನ ಹೆಂಡತಿಗೆ ನಾನಾಬಗೆಯ ತಿಂಡಿ ತಿನಿಸುಗಳನ್ನು ಮಾಡಲು ಬರುತ್ತಿತ್ತು.. ಯಾವಾಗಲೂ ಮಾಡುತ್ತಿದ್ದರು ಕೂಡ.ಹಾಗೆ ನನಗೆ ಒಂದು ದಿನವಾದರೂ ತಂದು ಕೊಟ್ಟಾರೆಂದು ಕಾಯತ್ತಾ ಇದ್ದೆ..ಅಲ್ಲೂ ಅಷ್ಟೇ ಕಾದದ್ದೇ ಬಂತು .. ಒಂದು ತುಂಡು ತಿಂಡಿ ಕೂಡ ಒಂದು ದಿನವೂ ಬರಲಿಲ್ಲ ‌.ನಮ್ಮ ‌ಮನೆ ಓನರ್‌ ಮಡದಿ ಶೈಲಜಾ ನನಗಾಗಿ ಬೇರೆ ಬೇರೆ ತಿಂಡಿ ಮಾಡಿ ನನಗೆ ತಂದು‌ಕೊಡುತ್ತಾ ಇದ್ದರು.ಸ್ವಂತ ಅಕ್ಕ ತಂಗಿಯಂತೆ ನನ್ನನ್ನು ನೋಡಿಕೊಂಡಿದ್ದರು ಅವರು.ನನಗೆ ಇದ್ದ ಬಯಕೆ ಅವರ ಮೂಲಕ ಈಡೇರುತ್ತಾ ಇತ್ತು.ಜೊತೆಗೆ ಅಮ್ಮನ ಮನೆಯಿಂದ ಆಗಾಗ ತಿಂಡಿ ತಿನಿಸುಗಳು ತಮ್ಮನ ಮೂಲಕ ಬರ್ತಾ ಇತ್ತು.ಪ್ರಸಾದ್ ದಿನಾಲು ಆಫೀಸಿಂದ ಬರುವಾಗ ನನಗಾಗಿ  ಮಸಾಲೆ ದೋಸೆ, ಪಪ್ಸ್,ಗೋಭಿ ಮಂಚೂರಿ ಲಡ್ಡು ಹೋಳಿಗೆ ಮೊದಲಾದವನ್ನು ಕಟ್ಟಿಸಿಕೊಂಡು ಬರುತ್ತಾ ಇದ್ದರು.ಸಂಜೆಯಾದರೆ ಪ್ರಸಾದರ ಬರುವನ್ನೇ ಕಾಯುತ್ತಾ ಇದ್ದೆ.ನಾನು ಎದ್ದು ಓಡಾಡುವಂತೆ ಇದ್ದರೆ ಅದು ಮಾಡಿ ತಿನ್ನಬಹುದಿತ್ತು..ಇದು‌ಮಾಡಿ ತಿನ್ನಬಹುದಿತ್ತು ಎಂದು ಮನದಲ್ಲಿಯೇ ಮಂಡಿಗೆ ಮೆಲ್ಲುತ್ತಾ ಇದ್ದೆ..ಏನು ಮಾಡುದು..ಎಂಟು ತಿಂಗಳು ತುಂಬುವವರೆಗೂ ವೈದ್ಯರು ಬೆಡ್ ಹೇಳಿದ್ದರು.ದಿನ ಬಿಟ್ಟು ದಿನ ಏನೋ ಇಂಜೆಕ್ಷನ್ ತಗೊಳ್ಳಬೇಕಿತ್ತು. ನಮ್ಮ ಮನೆಗೆ ತುಂಬಾ ಹತ್ತಿರದಲ್ಲಿ ನಮ್ಮ ಆತ್ಮೀಯರಾದ  ಬಡೆಕ್ಕಿಲ ಡಾಕ್ಟರ್ ಅವರ ಮನೆ ಇತ್ತು.ಅವರು ಮನೆಗೆ ಬಂದು ನನಗೆ ಇಂಜೆಕ್ಷನ್ ಕೊಟ್ಟು ಹೋಗುತ್ತಿದ್ದರು.ಒಮ್ಮೊಮ್ಮೆ ಅವರ ಮಡದಿ ಲಲಿತಕ್ಕ ಮಾಡಿ ಕೊಟ್ಟ ತಿಂಡಿಯನ್ನು ಜೊತೆಯಲ್ಲಿ ತಂದು ಕೊಡುತ್ತಿದ್ದರು. ಆರು ತಿಂಗಳಾದಾಗ ನನಗೆ ವೈದ್ಯರು ನಿದಾನಕ್ಕೆ ಒಂದರೆಡು ನಿಮಿಷ ನಡೆಯಲು ಅನುಮತಿ ಕೊಟ್ಟಿದ್ದರು.ಹಾಗಾಗಿ ನಂತರ ನಾನೇ ಅವರ ಮನೆಗೆ ಹೋಗಿ ಇಂಜೆಕ್ಷನ್ ಹಾಕಿಸಿಕೊಂಡು ಮನೆಗೆ ಬರುತ್ತಿದ್ದೆ.ಹೀಗೆ ಏಳು ತಿಂಗಳ ಕಾಲ ದಿನ ಬಿಟ್ಟು ದಿನ ಇಂಜೆಕ್ಷನ್ ತಗೊಂಡಿದ್ದೆ‌.ಇಂಜೆಕ್ಷನ್ ‌ಮತ್ತು ಸಿರಿಂಜನ್ನು ಪ್ರಸಾದ್ ಮೆಡಿಕಲ್ ಶಾಪ್ ನಿಂದ ತಂದು‌ಕೊಡುತ್ತಿದ್ದರು..
ಏಳು ತಿಂಗಳ ಕಾಲ ಎರಡು ದಿನಕ್ಕೊಮ್ಮೆ ನನಗೆ ಇಂಜೆಕ್ಷನ್ ನೀಡಿದ ಬಡೆಕ್ಕಿಲ ಡಾಕ್ಟರ್ ನನ್ನಿಂದ ಒಂದು ನಯಾ ಪೈಸೆ ಪೀಸ್ ಕೂಡ ತೆಗೆದುಕೊಂಡಿಲ್ಲ..ಕಷ್ಟಕಾಲದಲ್ಲಿ ನೆರವಾದ ಅವರನ್ನು ಯಾವತ್ತಿಗೂ ನಾನು‌ ಮರೆಯಲಾರೆ.ಅವರ ಮಗ ನಂದ ಕಿಶೋರ್ ಈಗ ಖ್ಯಾತ ಯೂರೋಲಜಿಷ್ಟ್ ಆಗಿದ್ದಾರೆ‌.
ನಾನು ತಿಂಗಳಿಗೊಮ್ಮೆ  ಗೈನಕಾಲಜಿಷ್ಟ್  ಡಾ.ಮಾಲತಿ ಭಟ್ ಅವರನ್ನು  ಕಾಣಬೇಕಿತ್ತು.ಆಗೆಲ್ಲ ನನಗೆ ಜೊತೆಯಾದವರು  ಓನರ್ ಮಡದಿ ಸ್ನೇಹಿತೆ ಶೈಲಜಾ. ಬಾಡಿಗೆ ಕಾರಿನಲ್ಲಿ ಹೋಗಿ ಬರುತ್ತಿದ್ದೆವು.ಮನೆಯಿಂದ ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಎರಡು ಮೂರು ಕಿಮೀ ದೂರ  ಅಷ್ಟೇ, ಆದರೆ ಬೆಡ್ ರೆಸ್ಟ್ ಇದ್ದ ಕಾರಣ ಆಟೋ ದಲ್ಲಿ ಹೋಗುವಂತಿರಲಿಲ್ಲ..ದುಬಾರಿ ದುಡ್ಡು ನೀಡಿ ಕಾರಿನಲ್ಲಿ ಹೋಗಬೇಕಾಗಿತ್ತು‌.ಆದರೆ ಶೈಲಜಾ ಅವರ ಪರಿಚಯದ ಓರ್ವ  ಬಾಡಿಗೆಗೆ ಕಾರು ಓಡಿಸುವ  ಕಾರ್ ಡ್ರೈವರ್ ನಮಗೆ ಸ್ವಲ್ಪ  ಕಡಿಮೆ ಬಾಡಿಗೆ  ತಗೊಳ್ಳುತ್ತಾ ಇದ್ದರು.
ಹಾಗಾಗಿ ಅವರಿಗೆ ಶೈಲಜಾ ತಮ್ಮ ‌ಮನೆಯ ಲ್ಯಾಂಡ್‌ ಲೈನ್ ಪೋನ್ ನಿಂದ ಫೋನ್ ಮಾಡಿ ಬರಹೇಳುತ್ತಿದ್ದರು‌.ನಾವಿಬ್ಬರು ಹೋಗಿ ಬರುತ್ತಾ ಇದ್ದೆವು.
ಎಂಟು ತಿಂಗಳು ತುಂಬಿದ ನಂತರ ನನಗೆ ಕಾರಿನಲ್ಲಿ ಆಯಾಸವಾಗದಂತೆ ಮೂವತ್ತು ನಲುವತ್ತು ಕಿಮೀ ಪ್ರಯಾಣ ಮಾಡಬಹುದು, ಮನೆಯಲ್ಲೂ ಜಾಗರೂಕತೆಯಿಂದ ಓಡಾಡಬುದು ಎಂದು ಡಾಕ್ಟರ್ ತಿಳಿಸದ್ದರು.ನಮ್ಮಲ್ಲಿ ಗರ್ಬಿಣಿಗೆ ಗಂಡನ ಮನೆಯಲ್ಲಿ ಏಳು ತಿಂಗಳಿನಲ್ಲಿ ಕೋಡಿ ಹೋಮ/ ಸೀಮಂತ ಮಾಡುವ ಪದ್ಧತಿ ಇದೆ.ನಾನು ಈ ಬಗ್ಗೆ ಅತ್ತೆಯವರಲ್ಲಿ ಹೇಳಿದಾಗ ಅವರು ಅದಕ್ಕೆ ಒಪ್ಪಲಿಲ್ಲ. ಯಾಕೆಂದರೆ ಅವರ ಸಂಬಂಧಿಕರಲ್ಲಿ ಯಾರಿಗೋ ಒಬ್ಬರಿಗೆ ಸೀಮಂತ ಮಾಢಿದ ನಂತರ ಗರ್ಭಪಾತ ಆಯಿತಂತೆ! ಹಾಗೆ ನನಗೂ ಆದರೆ ಅವರಿಗೆ ಅವಮಾನವಂತೆ!
ನನ್ನ ಮೈದುನನ ಮಡದಿ ಕೂಡ ಚೊಚ್ಚಲ ಗರ್ಭಿಣಿ ಆಗಿದ್ದಳು ಎಂದು ಹೇಳಿದ್ದೆನಲ್ಲ
ಅವಳಿಗೆ ಮನೆಯಲ್ಲಿ ಭಾರೀ ವಿಜೃಂಭಣೆಯಿಂದ ಕೋಡಿ ಹೋಮ/ ಸೀಮಂತ ಮಾಡಿದರು.ಪ್ರಸಾದ್ ಹೋಗಿದ್ದರು.ಅವರ ಕೈಯಲ್ಲಿ ಕೂಡ ಮಾಡಿದ ಒಂದು ತುಂಡು ಸ್ವಿಟ್ ನನಗೆ ಕಳುಹಿಸಿರಲಿಲ್ಲ. ಗರ್ಭ ಪಾತವಾಗಿ ಅವಮಾನ ಪಡುವವರಿಗೆ ಸ್ವಿಟ್ ಕೊಡುವುದು ವೇಸ್ಟ್ ಎಂದು ಭಾವಿಸಿರಬಹುದು.
ನಂತರ ನನ್ನ ತಂದೆಯವರು ಅತ್ತೆ ಮಾವನ ಮನೆಗೆ ಹೋಗಿ ಮಗಳಿಗೆ ಕೋಡಿ ಹೋಮ ಮಾಡಿ ನಮ್ಮ ಮನೆಗೆ ( ತಮದೆ ಮನೆಗೆ) ಕಳುಹಿಸಿಕೊಡಿ ಎಂದು ಕ್ರಮಪ್ರಕಾರ ಕೇಳಿದಾಗ ಬೇರೆ  ವಿಧಿಯಿಲ್ಲದೆ ಕಾಟಾಚಾರಕ್ಕೆ ಯಾವ ಸಂಬಂಧಿಕರಿಗೂ ತಿಳಿಸದೆ ಸಣ್ಣಕೆ ಮನೆಯಲ್ಲಿ ಕೋಡಿ ಹೋಮ ಮಾಡಿದರು.ಹುಟ್ಟುವ ಮಸರಿಯಾಗಿ ಸ್ವೀಟ್  ಕೂಡ ಮಾಡಲಿಲ್ಲ. ನಂತರ ನಾನು ತಂದೆ ಮನೆಗೆ ಹೋಗಿ ಎರಡು ದಿನ ಇದ್ದು ಕಾರಿನಲ್ಲಿ ಮಂಗಳೂರಿನ ನಮ್ಮ ಮನೆಗೆ ಬಂದೆ.ಪ್ರಸವದ ನಂತರ ತಂದೆ ಮನೆಗೆ ಹೊಗುವುದು ಎಂದು ನಿರ್ಧರಿಸಿದೆ.
1998 ರ ಮೇ ತಿಂಗಳಿನ 14-15 ರ ಒಳಗೆ ಪ್ರಸವ ಆಗಬಹುದು, ಸಿಸೇರಿಯನ್ ಆಗಬೇಕು ಎಂದು ವೈದ್ಯರು ಮೊದಲೇ ಹೇಳಿದ್ದರು.ಮರುದಿವಸದಿಂದ ಅಮ್ಮ ನನ್ನ ಜೊತೆಯಲ್ಲಿ ಬಂದು ಇರುತ್ತೇನೆ ಎಂದು ಹೇಳಿದ್ದರು.
1998 ಎಪ್ರಿಲ್ 28 ರಂದು ಬೆಳಗಿನಿಂದ ನನಗೆ ಏನೋ ಹಿಂಸೆ ,ಪ್ರಸಾದ್ ಆ ದಿನ ಆಫೀಸ್ ಕೆಲಸದಲ್ಲಿ ಮಣಿಪಾಲ್  ಹೋಗಿದ್ದರು. ನಾನು ಶೈಲಜಾ ರಲ್ಲಿ ನನಗೆ ಏನೊ ಹಿಂಸೆ ಅಗುತ್ತಿದೆ ಎಂದು ಹೇಳಿದೆ.ಆಗ ಅವರು ನಾವು ಆಸ್ಪತ್ರೆಗೆ ಹೋಗಿ ಬರುವ ಎಂದು ಹೇಳಿ ಬಾಡಿಗೆ  ಕಾರಿನ ಡ್ರೈವರ್ ಗೆ ಫೋನ್ ಮಾಡಿ ಬರಲು ಹೇಳಿದರು.ಕಾರು ಬರುವಷ್ಟರಲ್ಲಿ  ಶೈಲಜಾ ಮನೆಗೆ ಯಾರೋ ನೆಂಟರು ಬಂದರು.ಆಗ ಶೈಲಜಾ ನೀವು ಕಾರಲ್ಲಿ ಹೋಗಿ ,ಸ್ವಲ್ಪ ಹೊತ್ತು ಬಿಟ್ಟು ( ಬಂದನೆಂಟರಲ್ಲಿ ಮಾತನಾಡಿ ಅವರಿಗೆ ಕಾಫಿ ಮಾಡಿ ಕೊಟ್ಟು ಅವರು ಹೋದ ಕೂಡಲೇ )  ನಾನು ಅಟೋದಲ್ಲಿ  ಆಸ್ಪತ್ರೆಗೆ ಬರುತ್ತೇನೆ ಎಂದು ನನ್ನನ್ನು ಕಾರು ಹತ್ತಿಸಿ ಕಳುಹಿಸಿದರು .
ನಾನು ಕಾರು ಇಳಿಯುತ್ತಿದ್ದಂತೆ ವೈದ್ಯರಾದ ಡಾ.ಮಾಲತಿ ಭಟ್ ಹೊರಗೆ ಹೋಗಲು ಅವರ ಕಾರಿನ ಬಳಿಗೆ ಬರುತ್ತಾ ಇದ್ದರು‌.ಪರಿಣತ ವೈದ್ಯರಾದ ಅವರು ನನ್ನನ್ನು ಒಂದು ಕ್ಷಣ ದಿಟ್ಟಿಸಿ ನೋಡಿದರು‌.ಮತ್ತೆ ಅವರು ಕಾರು ಹತ್ತದೆ ಒಳಗೆ ಬಾ ಎಂದು ನನ್ನನ್ನು ಕರೆದು  ಪರೀಕ್ಷಾ ಕೊಠಡಿಗೆ ಹೋದರು.ನನ್ನನ್ನು ಪರೀಕ್ಷೆ ಮಾಡಿದ  ತಕ್ಷಣವೇ ಅಲ್ಲಿನ ಮುಖ್ಯ ನರ್ಸಿಗೆ ಏನೋ ಹೇಳಿದರು‌, ಮಗುವಿನ ಹಾರ್ಟ್ ಬೀಟ್ ನಿದಾನವಾಗಿದೆ ..ಕೂಡಲೇ ಸಿಸೇರಿಯನ್  ಮಾಡಬೇಕು ಎಂದು ಹೇಳಿದರು.ಅಷ್ಟರಲ್ಲಿ ಶೈಲಜಾ ಬಂದಿದ್ದರು. ಅವರು ಸಹಿ ಮಾಡಿದರು. ಮುಖ್ಯ ನರಸ್ ನನ್ನನ್ನು ಅಪರೇಷನ್ ಕೊಠಡಿಗೆ ಕರೆದುಕೊಂಡು ಹೋದರು‌.ಏನೇನೋ ಇಂಜೆಕ್ಷನ್ ಕೊಟ್ಟರು.ಅಪರೇಷನ್ ಸಮಯದಲ್ಲಿ ಹಾಕುವ ಹಸಿರು ಗೌನ್ ಹಾಕಿದರು‌.ಅಪರೇಷನ್ ಟೇಬಲ್ ನಲ್ಲಿ ಮಲಗಿಸಿದರು‌.ಕಣ್ಣಗೆ ಮಂಪರು ಆವರಿಸಿ ಕಣ್ಣು‌ಮುಚ್ಚಿದೆ.ಪೂರ್ತಿಯಾಗಿ ಎಚ್ಚರ ತಪ್ಪಿರಬೇಕು..ಇದ್ದಕ್ಕಿದ್ದಂತೆ ಉಸಿರಾಟಕ್ಕೆ ತುಂಬಾ ಕಷ್ಟವಾಯಿತು ಎಚ್ಚರವಾಯಿತು.ಕಣ್ಣು ತೆರೆದು ನೋಡಿದಾಗ ಹಸಿರು ಬಟ್ಟೆ ತೊಟ್ಟಿದ್ದ ವೈದ್ಯರು ಮಸುಕು ಮಸುಕಾಗಿ ಕಾಣಿಸಿದರು.‌ಬೆನ್ನಲ್ಲಿಯೇ ತೀವ್ರ ಹೊಟ್ಟೆ ನೋವಾಗಿ ಅಮ್ಮಾ ಎಂದು ದೊಡ್ಡಕೆ ಬೊಬ್ಬೆ ಹಾಕಿದೆ..ಆಗ ವೈದ್ಯರು ನನ್ನ ಬಾಯಿಯನ್ನು ಬಲವಂತವಾಗಿ ತೆರೆದು  ಏನೋ ಟ್ಯೂಬನ್ನು ತುರುಕಿದರು‌ ತೀವ್ರ ನೋವಾಗುತ್ತಾ ಇತ್ತು.ನನ್ನನ್ನು ಒಂದಿನಿತು ಮಿಸುಕಾಡದಂತೆ ಸಿಸ್ಟರ್ ಗಳು ಗಟ್ಟಿಯಾಗಿ ಹಿಡಿದಿದ್ದರು. ಅವಳಿಗೆ ಎಚ್ಚರ ಅಗಿದೆ ಅನಾಸ್ತೇಶಿಯಾ ಜಾಸ್ತಿ ಮಾಡಿ ಅಂತ ಏನೋ ಹೇಳಿದು ಕೇಳಿಸಿತು..ಜೊತೆಗೆ ಉಸಿರಾಟಕ್ಕೆ  ಸ್ವಲ್ಪ ಅರಾಮ ಎನಿಸಿತು.ಇಷ್ಟೆಲ್ಲಾ ಹತ್ತು ಹದಿನೈದು ಸೆಕುಂಡ್ ಗಳ ಕಾಲದಲ್ಲಿ ಅಗಿತ್ತು‌.ಮತ್ತೆ ನನಗಡ ಮಂಪರು ಅವರಿಸಿ ನಿದ್ದೆ ಬಂತು..
ಮತ್ತೆ ಯಾರೋ ಒಬ್ಬರು ನನ್ನನ್ನು ಕುಲುಕಿ,ತಲೆಗೆ ಬಡಿದು ,ಕೈಗೆ ಚಿವುಟಿ ಲಕ್ಷ್ಮೀ ಕಣ್ಣು ತೆರೆಯಿರಿ..ಅಪರೇಷನ್ ಆಯಿತು. ನಿಮಗೆ‌ಮಗ ಹುಟ್ಟಿದ್ದಾನೆ ನೋಡಿ ಎಂದು ಮತ್ತೆ ಮತ್ತೆ ಹೇಳುತ್ತಾ ಇದ್ದರು..ಹೇಗೋ ಕಣ್ಣು ತೆರೆದೆ..ಮತ್ತೆ ಹಸಿರು ಗೌನ್ ತೊಟ್ಟ ವೈದ್ಯರು ಕಾಣಿಸಿದರು.ನಾನು ಹೇಳುದು ಕೇಳಿಸ್ತಿದೆಯಾ ? ನಿಮಗೆ  ಗಂಡು ಮಗು ಹುಟ್ಟಿದೆ ..ಕಣ್ಣು ‌ಮುಚ್ಚಬೇಡಿ..ನಿಮ್ಮ ಹೆಸರು ಹೇಳಿ ಎಂದು ಹೇಳಿದರು..ನಾಲಗೆ ತೊದಲುತ್ತಾ ಇತ್ತು..ಹೇಗೋ ಲಕ್ಷ್ಮೀ ಎಂದು ನನ್ನ ಹೆಸರು ಹೇಳಿದೆ.. ನನಗೆ ಉಸಿರಾಡಲು ತುಂಬಾ ಕಷ್ಟ ಅಗುತ್ತಾ ಇತ್ತು‌.ಅಲ್ಲಿ ಆ ವೈದ್ಯರು ಇನ್ಯಾರಿಗೋ ಅವರಿಗೆ ಎಚ್ಚರಾಗಿದೆ. ಆಕ್ಸಿಜನ್ ಕಂಟಿನ್ಯೂ ಮಾಡಿ‌..ಅವರಿಗೆ ಉಸಿರಾಟದ ತೊಂದರೆ ಇದೆ ಅಂತ ಮೊದಲೇ ಹೇಳ್ಬೇಕಿತ್ತು..ಎಂದೇನೋ ಹೇಳುತ್ತಾ ಇದ್ದರು.ಮತ್ತೆ  ನನ್ನ ಮುಖಕ್ಕೆ ಏನನ್ನೋ ಗಟ್ಟಿಯಾಗಿ ಹಿಡಿದರು( ಶ್ವಾಸಕೋಶಕ್ಕೆ ಆಕ್ಸಿಜನ್ ಟ್ಯೂಬ್  ಹಾಕಿದ್ದನ್ನು ತೆಗೆದು ಆಕ್ಸಿಜನ್  ಮಾಸ್ಕ್ ಹಾಕಿದ್ದು ಎಂದು ನನಗೆ ನಂತರ ಸಿಸ್ಟರ್ ಹೇಳಿ ತಿಳಿಯಿತು) ಮಂಪರು ಅವರಿಸಿ ಮತ್ತೆ ಕಣ್ಣು‌ಮುಚ್ಚಿದೆ.
ಈ ನಡುವೆ ಶೈಲಜಾ ಪ್ರಸಾದ್ ಆಪೀಸ್ ಗೆ ಫೋನ್ ಮಾಡಿ ಅವರನ್ನು ಬರಲು ಹೇಳಿದ್ದರು ನನ್ನ ಅಮ್ಮನ ಮನೆಗೂ ಪೋನ್ ಮಾಡಿ ವಿಷಯ ತಿಳಿಸಿದ್ದರು..ಪ್ರಸಾದ್ ಬಂದ ಮೇಲೆ (ಅವರ ಮನೆಗೆ ಯಾರೋ ಬಂದ ಕಾರಣ) ಮನೆಗೆ ಹೋಗಿದ್ದರು. ಸಿಸೇರಿಯನ್ ಮುಗಿಯುವಷ್ಟರಲ್ಲಿ ಪ್ರಸಾಸ್ ಆಸ್ಪತ್ರೆಗೆ ಬಂದಿದ್ದರು. ನನ್ನ ‌ಮಗ ಮುದ್ದು ಬೊಮ್ಮಟೆಯನ್ನು ಬಿಳ ಬಟ್ಟೆಯಲ್ಲಿ  ಬೆಚ್ವನೆ ಸುತ್ತಿ ಪ್ರಸಾದ್ ಕೈಗೆ ಸಿಸ್ಟರ್ ತಂದು ಕೊಟ್ಟಿದ್ದರು. ನನಗೆ ಉಸಿರಾಟದ ತೊಂದರೆ ಕಾಣಿಸಿದ ಕಾರಣ ಐಸಿಯುವಿಗೆ ಶಿಪ್ಟ್ ಮಾಡಿದ್ದರು.
ಪ್ರಸಾದ್ ಅವರ ಜೀವನದಲ್ಲಿ ಮೊದಲ ಬಾರಿಗೆ ಆಗಷ್ಟೇ ಹುಟ್ಟಿದ ಮಗುವನ್ನು ನೋಡಿದ್ದು ಮತ್ತು ಎತ್ತಿಕೊಂಡದ್ದು.ಅವರಿಗೆ ಮೊದಲು ಇವನು ಅತ್ತರೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲವಂತೆ.
ರಾತ್ರಿ ಅಗುವಷ್ಟರಲ್ಲಿ ಅಮ್ಮ ಮತ್ತು ತಮ್ಮ ಗಣೇಶ ಬಂದರು.
ನನ್ನ ಉಸಿರಾಟ ಸುಮಾರಾಗಿ ತಹಬದಿಗೆ ಬಂದು ಆಕ್ಸಿಜನ್ ಮಾಸ್ಕ್ ನೊಂದಿಗೆ  ನನ್ನನ್ನು ರಾತ್ರಿ ವಾರ್ಡ್ ಗೆ ಶಿಪ್ಟ್ ಮಾಡಿದರು‌.ಆಗಲೂ ಮಂಪರು ನನಗೆ. ಅಮ್ಮ ಮಗನನ್ನು ನನ್ನ ಮಗ್ಗುಲಲ್ಲಿ ಮಲಗಿಸಿದರು..ಮುದ್ದು ಬೊಮ್ಮಟೆ ಕಣ್ಣು ಮುಚ್ಚಿ ನಿದ್ರೆ ಮಾಡುತ್ತಾ ಇತ್ತು..
ನಾಳೆ ಮತ್ತೆ ಇಪ್ಪತ್ತು ವರ್ಷಗಳ ನಂತರದ ಎಪ್ರಿಲ್ 28 ಬರುತ್ತಿದೆ ..ಮಗನ ಬರ್ತ್ ಡೇ ನಾಳೆ....ಸಹೃದಯಿ ಮಗನನ್ನು ನನಗೆ ದಯಪಾಲಿಸಿ ಅಮ್ಮನ ಪದವಿಯನ್ನು ಕೊಟ್ಟ ದೇವರಿಗೆ ನಾನು ಆಭಾರಿಯಾಗಿದ್ದೇನೆ ಜೊತೆಗೆ ನೋಟ ಮಾತ್ರದಲ್ಲಿಯೇ ನನಗೆ ಏನೋ ಸಮಸ್ಯೆ ಆಗಿದೆ ಎಂಬುದನ್ನು ಗಮನಿಸಿ ಹೊರಗೆ ಹೋಗಲು ಕಾರಿನ ಬಳಿ ಬಂದು ,ಹಿಂದೆ ಹೋಗಿ ನನ್ನನ್ನು ಕರೆದು ಪರೀಕ್ಷಿಸಿ ತಕ್ಷಣವೇ ಸಿಸೇರಿಯನ್ ಮಾಡಿ ನನ್ನನ್ನು ನನ್ನ ಮಗನನ್ನು ಬದುಕಿಸಿ ಕೊಟ್ಟ ಡಾ.ಮಾಲತಿ ಭಟ್ ಅವರನ್ನು ಕೂಡ ಸದಾ ನೆನೆಯುತ್ತೇನೆ.
ಆದರೆ ನನಗೆ ಇಂದಿಗೂ ಒಂದು ಅರ್ಥವಾಗದ ವಿಚಾರ ಒಂದಿದೆ. ಮೈದುನನ ಮಡದಿಗಾಗಿ ಅಪರೂಪಕ್ಕೆ ಬಂದ ಮಗನಿಗೂ ಹಲಸಿನ ಹಣ್ಣನ್ನು ಕೊಡದೆ ಮೀಸಲಿರಿಸಿದ ಅತ್ತೆ ನನಗೂ ಬಯಕೆ ಇದೆ ಎಂಬುದನ್ನೇಕೆ ಮರೆತರು? ನನ್ನ ಅತ್ತೆಯವರು ನಮ್ಮ ಸಂಬಂಧಿಕರಲ್ಲಿ ಯಾರೇ ಬಸುರಿಯಾದರೂ ಅವರನ್ನು ಮನೆಗೆ  ಕರೆದು ಔತಣದ ಊಟ ತಯಾರು ಮಾಡಿ ಬಡಿಸುತ್ತಿದ್ದರು‌‌.ತಮ್ಮ ತಂಗಿಯರಿಗೆ ನೀಡದ ತಿಂಡಿ ತಿನಿಸುಗಳೇ ಇಲ್ಲ ..ಆದರೂ ಆ ಸಂಬಂಧಿಕರಿಗೆ  ಅತ್ತೆಯ ಸೊಸೆಗೆ( ನನಗೆ) ಏನಾದರೂ ತಿಂಡಿ ಮಾಡಿ  ಕೊಡಬೇಕೆಂದು ಅನಿಸಲಿಲ್ಲ..ಅತ್ತೆಯ ತಮ್ಮ ತಮ್ಮನ ಮಡದಿಯ ಮನೆ ನಮ್ಮ ಮನೆ ಹತ್ತಿರದಲ್ಲಿ ಇದ್ದು ದಿನಾಲೂ ಮನೆ ಮುಂದಿನ ರಸ್ತೆಯಲ್ಲಿ ಓಡಾಡುತ್ತಿದ್ದರೂ ಒಂದು ದಿನವಾದರೂ ತಮ್ಮ ಮನೆಗೆ ಒಂದು ಹೊತ್ತಿನ ಊಟಕ್ಕೆ ಕರೆಯಬೇಕೆನಿಸಲಿಲ್ಲ..? ತಿಂಡಿ ತಂದು ಕೊಡಬೇಕೆನಿಸಲಿಲ್ಲ ಯಾಕೆ ? ಅದಕ್ಕಿಂತ ಮೊದಲು ನನಗೆ ಎರಡು ಮೂರು ತಿಂಗಳಾಗಿ ಗರ್ಭ ಹೋಗಿತ್ತು.. ಹಾಗಾಗಿಯೂ ಈ ಬಾರಿಯೂ ಉಳಿಯಲಾರದೆಂಬ ತಾತ್ಸಾರ ಇತ್ತೇ ? ಒಂದೊಮ್ಮೆ ಗರ್ಭಪಾತವೇ ಅಗುವುದಾದರೂ ಕೂಡ ಸಹಜವಾದ ಬಯಕೆ ಆಗ ಕೂಡ ಇರುತ್ತದಲ್ಲ...ಅದಿವರಿಗೆ ಅರ್ಥವಾಗಿಲ್ಲವೇಕೆ? ಹೇಗೂ ಗರ್ಭ ಹೋಗುತ್ತದೆ,ಹಾಗಾಗಿ ಇವಳಿಗೆ ತಿಂಡಿ ತಿನಿಸುಗಳು ಕೊಟ್ಟರೆ ವೇಸ್ಟ್  ಎಂದು ಕೊಂಡರೇ ? ನನಗೆ ಇಂದಿಗೂ ಅರ್ಥವಾಗಿಲ್ಲ..ನನ್ನ  ಅಮ್ಮ ಅಕ್ಕನ ಹೊರತಾಗಿ ಯಾರೂ ನನಗ ಬಸುರಿ ಸಮ್ಮಾನ( ಔತಣ) ಬದಲಿಗೆ ತಿಂಡಿ ತಿನಿಸುಗಳನ್ನು ತಂದು ಕೊಟ್ಟದ್ದಿಲ್ಲ.
ಇರಲಿ ,ಕೊಡದಿದ್ದುದೇ ಒಳ್ಳೆಯದಾಯಿತು.
ಕೊಟ್ಟವರ ಕೈ ಯಾವಾಗಲೂ ಮೇಲೆ,ತಗೊಂಡವರ ಕೈ ಯಾವಾಗಲೂ ಕೆಳಗೆ ಇರುತ್ತದೆ.ಇವರುಗಳು ಕೊಡದ ಕಾರಣ ನನ್ನ ಕೈ ಕೆಳಗಾಗಲಿಲ್ಲ .ಹಾಗಾದಂತೆ ದೇವರು ಕಾದಿರಬೇಕು.ಈವತ್ತು ಹವ್ಯಕಾಂಗಣ ವಾಟ್ಸಪ್ ಗ್ರೂಪಿನಲ್ಲಿ  ಹಲಸಿನ ಹಣ್ಣಿನ ಚಿತ್ರ ಹಾಕಿದ್ಷರು.ನೋಡುತ್ತಲೇ ಇವೆಲ್ಲ ನೆನಪಾಗಿ ಬರೆದೆ..ಕಾಕತಾಳೀಯ ಎಂಬಂತೆ ಮಗನ ಹುಟ್ಟು ಹಬ್ಬ ನಾಳೆಯೇ ಇದೆ.
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ ,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ




Wednesday, 24 April 2019

ನನ್ನೊಳಗೂ ಒಂದು ಆತ್ಮವಿದೆ 7: ಒಂದೇ ಒಂದು ಬಾರಿ ಅತ್ತೆಯವರಿಂದ ಮೆಚ್ಚುಗೆ ಪಡೆದಿದ್ದೆ © ಡಾ.ಲಕ್ಷ್ಮೀ ಜಿ ಪ್ರಸಾದ


ನನಗೆ ಎರಡನೇ ವರ್ಷ ಬಿಎಸ್ಸಿ ಓದುತ್ತಿದ್ದಾಗಲೇ ಸುಮಾರಾಗಿ ಅಡಿಗೆ ಮಾಡಲು ಬರ್ತಾ ಇತ್ತು.ತಂದೆ ಮನೆಯಲ್ಲಿ ತುಂಬಾ ಶುದ್ಧದ ಆಚರಣೆ ಇದ್ದ ಕಾರಣ ಅಮ್ಮ ಹೊರಗೆ ಕುಳಿತಾಗ ತಿಂಗಳಲ್ಲಿ ಮೂರು ದಿನ ಅಡುಗೆ ಮಾಡುವುದು ನನಗೆ ಇಷ್ಟ  ಇಲ್ಲದೇ ಇದ್ದರೂ ಅನಿವಾರ್ಯ ಆಗಿತ್ತು.ರುಚಿಯಾಗದಿದ್ದರೆ ಬೇರೆಯವರ ಸಂಗತಿ ಬಿಡಿ,ನನಗೇ ಮೊದಲಿಗೆ ಊಟ ತಿಂಡಿ ಸೇರದೆ ಸೋಲುವವಳು ನಾನೇ..ಹಾಗಾಗಿ ಅಮ್ಮನಲ್ಲಿ ಕೇಳಿ ಕೇಳಿ ಮಾಡಿ ಮಾಡಿ ಸುಮಾರಾಗಿ ಚೆನ್ನಾಗಿಯೇ ಅಡುಗೆ ಮಾಡಲು ಬರ್ತಾ ಇತ್ತು..ಮದುವೆ ಆಗಿ ಬಂದ ಮೇಲೂ ನನಗೆ ಅಡುಗೆ ಮಾಡಲು ಇಷ್ಟ ಇತ್ತು..ಆದರೆ ಮನೆ ಮಂದಿ ಯಾಕೋ ನನ್ನನ್ನು ಗುಡಿಸಿ ಒರಸಲು,ತೋಟದಿಂದ ಸೋಗೆ ಎಳೆದು ತರಲು ,ಹುಲ್ಲು ಕಿತ್ತು ತರಲು ನೇಮಿಸಿದ ಹೆಣ್ಣಾಳಿನ ಹಾಗೆ ಸೊಸೆ ,ಹೆಣ್ಣಾಳಿಗೆ ಸಂಬಳ ಕೊಡಬೇಕು, ಇವಳಿಗೆ ಅದೂ ಅಗತ್ಯ ಇಲ್ಲ ಎಂದು ಭಾವಿಸಿದ್ದರು  ಕಾಣಬೇಕು.ನನ್ನನ್ನು ಅದೇ ರೀತಿಯ ಕೆಲಸಕ್ಕೆ ಹಚ್ಚುತ್ತಾ ಇದ್ದರು..ಜೊತೆಗೆ ಅತ್ತಿಗೆಯ ಹರಿದ ರವಕೆ ,ಹರಿದ ಚೂಡಿದಾರ್ ಪ್ಯಾಂಟ್ ಹೊಲಿಯಲು,ಅವಳ ತಲೆಯ ಹೇನು ಹೆಕ್ಕಿ ತೆಗೆದು  ಕುಟ್ಟುವ ಕೆಲಸವೂ ನನಗೆ ಮೀಸಲಾಗಿತ್ತು..ನಾನು ಚಿಕ್ಕಂದಿನಲ್ಲೇ ಅತ್ಯತ್ಸಾಹದ ಸ್ವಭಾವ.. ಹಾಗಾಗಿ ಚೆನ್ನಾಗಿ ಕೆಲಸ ಮಾಡಿ ಅತ್ತೆ ಮಾವ ಮನೆ ಮಂದಿಯಿಂದ ಮೆಚ್ಚುಗೆ ಪಡೆಯ ಬೇಕೆಂಬ ಹುಚ್ಚು ಬೇರೆ..ಆದರೆ ನನಗೆ ತಂದೆಯ ಮನೆಯಲ್ಲಿ ನಾನಾಗಿ ಸ್ವಂತ ಆಸಕ್ತಿಯಿಂದ ಯಾವಾಗಲಾದರೊಮ್ಮೆ,ಸೋಗೆ ಎಳೆದು ತರುವುದು,ಅಡಿಕೆ ಹೆಕ್ಕುವುದು ಹುಲ್ಲು ತರುವುದು ಬಿಟ್ಟರೆ ಹೆಚ್ಚು ಕಡಿಮೆ ಬೇರೆ ಮನೆ ಕೆಲಸವನ್ನು ಮಕ್ಕಳಲ್ಲಿ ನಮ್ಮ ತಂದೆ ತಾಯಿ ಮಾಡಿಸುತ್ತಾ ಇರಲಿಲ್ಲ.ದನದ ಹಾಲು ಕರೆಯುವ ಕೆಲಸವೂ ಅಷ್ಟೇ, ಯಾವಗಲಾದರೊಮ್ಮೆ ನನ್ನ ಆಸಕ್ತಿಯಿಂದ ನಾನಾಗಿ ಮಾಡುತ್ತಿದ್ದೆನೇ ಹೊರತು ಮನೆಯಲ್ಲಿ ಹೆಚ್ಚೇನೂ ಕೆಲಸವನ್ನು ಅಮ್ಮ ನಮ್ಮಲ್ಲಿ ಮಾಡಿಸುತ್ತಾ ಇರಲಿಲ್ಲ.. ನಮ್ಮ ಮದುವೆಯಾದ ನಾಲ್ಕನೇ ದಿನಕ್ಕೆ ಗಂಡನ ಮನೆಯಲ್ಲಿ ದಿಂಡು ಕಾರ್ಯ ಆಯಿತು ( ಒಂದು ಹೋಮ ಪೂಜೆ ಬಹುಶಃ ಶೋಭನಕ್ಕೆ ಸಂವಾದಿ ಕಾರ್ಯ )
ಅದಕ್ಕೆ ಮೊದಲೇ ನನ್ನಲ್ಲಿ ಅತ್ತೆಯವರು ಹಸು ಕರೆಯಲು ( ಹಾಲು ಹಿಂಡಲು) ಬರುತ್ತಾ ಎಂದು ಕೇಳಿದ್ದರು.. ತಂದೆ ಮನೆಯಲ್ಲಿ ನನಗೆ ಇಷ್ಟ ಬಂದ ದಿನ ಚಂದದ ಕರುವಿನಲ್ಲಿ ಆಟವಾಡುವ ಸಲುವಾಗಿ ಅಥವಾ ಹಸುವಿನ ಮೇಲೆ ಏನೋ ಒಂದು ಪ್ರೀತಿಗೆ ಹಾಲು ಹಿಂಡುತ್ತಿದ್ದೆನಲ್ಲ..ಅತ್ತೆ ಕೇಳಿದ್ದೇ ತಡ ಹ್ಹು ಬರುತ್ತೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದೆ..ಹೇಳಿದ್ದೇ ತಡ ಅಂತ ದಿಂಡಿನ ಮರುದಿನ ನನ್ನ ಅತ್ತೆಯವರು ಬೆಳಗ್ಗೆ ಬೇಗ ಎಬ್ಬಿಸಿ ದೊಡ್ಡ ಚೊಂಬು (ಅಥವಾ ಸಣ್ಣ ಕೊಡಪಾನ ಅನ್ನಬಹುದೋ ಏನೋ) ಹಸುಗಳ ಹಾಲು ಹಿಂಡಲು ಹೇಳಿದರು..ಆ ಚೊಂಬನ್ನು ನೋಡಿಯೇ ನನಗೆ ಗಾಭರಿ ಆಗಿತ್ತು..ನಮ್ಮ ತಂದೆ ಮನೆಯಲ್ಲಿ ಕರುವಾಗಿದ್ದನಿಂದ ನಾನೇ ಎತ್ತಿ ಮುದ್ದಾಡಿದ ಕರುವೇ ಗಡಸಾಗಿ( ಹೆಣ್ಣು ಹಸುವಾಗಿ ) ಕರು ಹಾಕಿದ ಹಸುಗಳ ಹಾಲನ್ನು ಹಿಂಡುತ್ತಿದ್ದೆ.ಊರ ಹಸುಗಳು ಹೆಚ್ಚು ಹಾಲುಕೊಡುವುದಿಲ್ಲ..ಮೂರು ನಾಲ್ಕು ಕುಡ್ತೆ ಹೆಚ್ಚಂದರೆ ಆರು ಕುಡ್ತೆ( ಒಂದು ಲೀಟರ್ ಅ ) ಹಾಲು ಕೊಡುತ್ತಾ ಇದ್ದವು.ಮತ್ತು ನಮ್ಮ ತಂದೆ ಮನೆಯಲ್ಲಿ ಏಕ ಕಾಲಕ್ಕೆ ಹಾಲು ಕೊಡುವ ಎರಡು ಮೂರು ಹಸುಗಳು ಇರುತ್ತಿರಲಿಲ್ಲ.. ಅಕಸ್ಮಾತ್ ಎಲ್ಲ ಗಡಸುಗಳೂ ಒಂದೇ ಸಮಯದಲ್ಲಿ ಅಪರೂಪಕ್ಕೆ ಒಂದಕ್ಕಿಂತ ಹೆಚ್ಚು ಹಾಲು ಕರೆಯುವ( ಹಿಂಡುವ) ಹಸು  ಇದ್ದರೂ ಇದ್ದರೂ ನಾನು ಕರೆಯತ್ತಾ ( ಹಾಲು ಹಿಂಡುತ್ತಾ ) ಇದ್ದಿದ್ದು  ಒಂದನ್ನು ಮಾತ್ರ..ಅದೂ ಅಮ್ಮ ಹಸುವನ್ನು ಹಟ್ಟಿಯಿಂದ ಹೊರಗಡೆ ತಂದು ಜಗಲಿಯಲ್ಲಿ ಕಟ್ಟಿದಾಗ ಮಾತ್ರ..ನನಗೋ ಸೆಗಣಿ ಅಂದರೆ ಆಗ ಮಾತ್ರವಲ್ಲ ಈಗ ಕೂಡ ತುಂಬಾ ಅಸಹ್ಯ..ಅದರ ವಾಸನೆ ಬಣ್ಣ ಎರಡೂ ನನಗಾಗಗದು..ಹಾಗಾಗಿ ಹೊರಗೆ ಜಗಲಿಯಲ್ಲಿ ಕಟ್ಟಿದಾಗ ಹಸುವಿನ ಸೆಗಣಿ ಮೆಟ್ಟಬೇಕಾಗಿ ಬರುವುದಿಲ್ಲ.. ಹಟ್ಟಿಯಲ್ಲಿ ಹಸುಗಳ ಸೆಗಣಿ ಇರುತ್ತದೆ..ಅದರ ಮೇಲೆ ಸ್ವಲ್ಪ ಸೊಪ್ಪು ಹಾಕಿ ಕಾಲಿಗೆ ಬಟ್ಟೆಗೆ ತಾಗದಂತೆ ಮಾಡಿ ಹಾಲು ಹಿಂಡುತ್ತಾರೆ.
ಅತ್ತಯವರು ನನಗೆ ದೊಡ್ಡ ಚೊಂಬು ಕೊಟ್ಟಾಗಲೇ ಹಸು ಅಷ್ಟು ಹಾಲು ಕೊಡುತ್ತೆ ಅಂತ ನನಗೆ ಅಂದಾಜು ಆದ್ದು. ಜರ್ಸಿ ಹಸುಗಳು ಮೂರು ನಾಲ್ಕು ಲೀಟರ್ ಹಾಲು ಕೊಡುತ್ತವೆ‌.ಅತ್ತೆ ಮನೆಯಲ್ಲಿ ಇದ್ದದ್ದು ಇಂತಹ ನಾಲ್ಕಾರು ದೊಡ್ಡ ಜಾತಿಯ ಜರ್ಸಿ ಹಸುಗಳು..ಹಾಲು ಹಿಂಡಲು ಬರುತ್ತೆ ಎಂದು ಒಪ್ಪಿಕೊಂಡು ಆಗಿತ್ತಲ್ಲಾ..ಬೇರೆ ವಿಧಿ ಇಲ್ಲದೆ ಸೆಗಣಿಯ ಮೇಲೆ ಹೇಗೋ ಕುಳಿತು ಹಾಲು ಹಿಂಡಲು ಶುರು ಮಾಡಿದೆ..ನಿಯಮಿತವಾಗಿ ಹಾಲು ಹಿಂಡಿ ಅಭ್ಯಾಸವಿಲ್ಲದ ನನಗೆ ದೊಡ್ಡ ಚೊಂಬಿ‌ನ. ಕಾಲಂಶದಷ್ಟು ಹಾಲು ಹಿಂಡುವಷ್ಟರಲ್ಲಿ ಕೈಗಳು ಸೋತು ಹೋದವು..ಪೂರ್ತಿ ಹಿಂಡಲು ಸಾಧ್ಯವಾಗದೆ ಕರುವನ್ನು ಹಾಲು ಕುಡಿಯಲು ಬಿಟ್ಟು ನಾನು ಎದ್ದು ನಾನು ಹಟ್ಟಿಯಿಂದ ಮನೆಗೆ ಬಂದೆ..(ಹಟ್ಟಿಗೂ ಮನೆಗೂ ಐವತ್ತು ಮೀಟರ್ ಗಳಷ್ಟು ಅಂತರ ಇತ್ತು ) ಇಷ್ಟು ಬೇಗ ಆಯ್ತಾ ? ಎಂದು ಅತ್ತೆ ತುಸು ಆಶ್ಚಯ್ರದಿಂದ  ಕೇಳಿ ನನ್ನ ಕೈಲ್ಲಿದ್ದ ಹಾಲಿನ ಚೊಂಬನ್ನು ತೆಗೆದುಕೊಂಡು ನೋಡಿದರು..ಹಾಲು ಇಷ್ಟೇ ಸಿಕ್ಕಿದ್ದಾ ಕೇಳಿದರು..ಕೈ  ನೋವಾಗಿ ಅರ್ಧದಲ್ಲೇ ಬಿಟ್ಟು ಬಂದೆ ಎಂದು ಹೇಳಲು ನನ್ನ ಸ್ವಾಭಿಮಾನಕ್ಕೆ ಪೆಟ್ಟಾಗಿ ( ನನಗೆ ಹಾಲು ಹಿಂಡಲು ಬರುತ್ತೆ ಎಂದು ಹಿಂದಿನ ದಿನವಷ್ಟೇ ಬಹಳ ಆತ್ಮವಿಶ್ವಾಸದಿಂದ ಹೇಳಿ ಕೊಂಡಿದ್ಸೆನಲ್ಲ)  ಹ್ಹೂ ಎಂದು ಹೂಗುಟ್ಟಿದೆ..ಅತ್ತೆ ತಕ್ಷಣವೇ ಕರುವನ್ನು ಹಾಲು ಕುಡಿಯಲು ಬಿಟ್ಟು ಬಂದೆಯಾ ? ಎಂದು ಗಾಭರಿ ಯಿಂದ ಕೇಳಿದರು.ಹೌದು ಎಂದು ಹೇಳಿದೆ. ಗಡಿಬಿಡಿಯಿಂದ ಅದೇ ಹಾಲಿನ ಚೊಂಬು ಹಿಡಿದುಕೊಂಡು ಹಟ್ಟಿಗೆ ಓಡಿದರು.. ಓಡಿ ಎಂತ ಪ್ರಯೋಜನ? ಕರು ಚಂದಕ್ಕೆ ಬಾಲ ಎತ್ತಿ ಯಥೇಚ್ಛವಾಗಿ ಹಾಲು ಕುಡಿದು ಸಂಭ್ರಮಿಸುತ್ತಾ ಇತ್ತು..ಆಗ ನನ್ನ ಅತ್ತೆಯವರ ಮುಖದ ಭಾವ ಈಗ ನೆನೆಸಿದರೆ ನಗು ಬರುತ್ತದೆ.😀 ನನ್ನ ಅತ್ಯುತ್ಸಾಹದ ಮಾತು ಕೇಳಿ ನನ್ನನ್ನು ನಾಲ್ಕು ಐದು ಲೀಟರ್ ಹಾಲು ಕೊಡುವ ಹಸುವಿನ ಹಾಲು ಹಿಂಡಲು ಹೇಳಿದ ತನ್ನ ಮೂರ್ಖತನಕ್ಕೆ ಪೆಚ್ಚಾದರೋ..ಹಾಲು ಸಿಗದ ಬಗ್ಗೆ ಚಿಂತೆ ಆಯಿತೋ( ದಿನ ನಿತ್ಯ ಕೆ ಎಮ್ ಸಿಗೆ ನಿಗಧಿತ ಪ್ರಮಾಣದ ಹಾಲು ಮಾರಾಟ ಮಾಡಬೇಕಾದ ನಿರ್ಬಂಧ ಇತ್ತು ,ಅಥವಾ ಇವರುಗಳು ಹಾಗೆ ನಿರ್ಬಂಧ ಹಾಕಿ ಕೊಂಡಿದ್ದರೋ ಗೊತ್ತಿಲ್ಲ!),ಕರುವಿಗೆ ಅಜೀರ್ಣ ಆದರೆ ಎಂದು ಭಯಪಟ್ಟರೋ..ಹಾಲು ಹಿಂಡಲು ಬರುತ್ತೆ ಎಂದ ನನ್ನ ಮೂರ್ಖತನಕ್ಕೆ ಮರುಕ ಉಂಟಾಯಿತೋ..ಸಂಬಂಧಿಕರೆಲ್ಲ ಸೊಸೆಗೆ ಹಾಲು ಹಿಂಡಲು ಬರುತ್ತಾ ಎಂದು ಕೇಳಿದರೆ ಹೇಗೆ ಉತ್ತರಿಸುವುದು ಎಂದು ಆತಂಕವಾಯಿತಾ..ಮನೆ ಮಂದಿಗೆ ಏನು ಹೇಳುವುದೆಂದು ತೋಚಲಿಲ್ಲವಾ ಗೊತ್ತಿಲ್ಲ.. ಅವರ ಮುಖದಲ್ಲಿ ಏಕ ಕಾಲದಲ್ಲಿ ಹರಡಿದ ಭಾವನೆಗಳನ್ನು ಊಹಿಸಲು ನನಗೆ ಆಗ ಮಾತ್ರವಲ್ಲ ಈಗಲೂ ಸಾಧ್ಯವಾಗುತ್ತಾ ಇಲ್ಲ..
ಅದಾಗಿ ನಾವು  ಒಂದೆರಡು ಅಲ್ಲಿ ಇಲ್ಲಿ ಔತಣಕ್ಕೆ ಹೋಗಿ ಬಂದೆವು.ನಂತರ ನಾನು ಕಾಲೇಜಿಗೆ ಹೊರಟು ನಿಂತೆ.ಇಂಗ್ಲಿಷ್ ಪರೀಕ್ಷೆ ಪ್ರಿಪರೇಟರಿ ಬರೆಯಲು ಬಾಕಿ ಇತ್ತು..ಒಂಚೂರು ಓದಿದ ಹಾಗೆ ಮಾಡಿ ಕಾಲೇಜಿಗೆ ಬಂದೆ.ಆಗ ನಾನು ಮತ್ತು ತಮ್ಮ ಈಶ್ವರ ಭಟ್ ಉಜಿರೆಯಲ್ಲಿ  ಪೆಜತ್ತಾಯರು ಓದುವ ಮಕ್ಕಳಿಗಾಗಿಯೇ ಕಟ್ಟಿಸಿದ ಸಾಲು ಕೊಠಡಿಗಳಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಬಾಡಿಗೆಗೆ ಇದ್ದು ಸ್ವತಃ ಅಡಿಗೆ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದೆವು.. .ಮೊದಲ ವರ್ಷ. ಮೆಸ್ ನಲ್ಲಿ ಇದ್ದೆವು..ಆದರೆ ತಿಂಗಳು ತಿಂಗಳು ಇನ್ನೂರು ಮುನ್ನೂರು ರೂಗಳಷ್ಟು ಮೆಸ್ ಗೆ ಕಟ್ಟಬೇಕಿತ್ತು .ಇಪ್ಪತ್ತೆಂಟು ವರ್ಷಗಳ ಹಿಂದಿನ ಸಂಗತಿ ಇದು.ನಮ್ಮಿಬ್ಬರ ಮೆಸ್ ಬಿಲ್ ಕೊಡಲು ನಮ್ಮ ತಂದೆ ತಾಯಿ ತುಂಬಾ ಕಷ್ಟಪಡಬೇಕಾಗುತ್ತದೆ ಎಂಬ ಅರಿವು ನಮಗಿತ್ತು..ಹಾಗಾಗಿ ಎರಡನೇ ಬಿಎಸ್ಸಿ ಯ ಆರಂಭದಲ್ಲೇ ಪೆಜತ್ತಾಯರ ಬಾಡಿಗೆ ಕೋಣೆಗೆ ನಾನು ಮತ್ತು ತಮ್ಮ ಬಂದಿದ್ದೆವು.ನಾನೇ ಸೀಮೆ ಎಣ್ಣೆ ಸ್ಟವ್ ನಲ್ಲಿ ಸಾರು ಪಲ್ಯ ಏನಾದರೂ ಮಾಡುತ್ತಿದ್ದೆ.ಅಕ್ಕಿಯನ್ನು ತೊಳೆದು ಕುದಿ ಬರಿಸಿ ನಾವೇ ರಟ್ಟಿನ ಪೆಟ್ಟಿಗೆಯಲ್ಲಿ ಬೈಹುಲ್ಲಿನ ಹಾಸಿಗೆ ತುಂಬಿ ತಯಾರು ಮಾಡಿದ  ದೇಶಿ  ಸ್ವಮೇಕ್ ಚೈನಾ ಪಾಟ್ ? 😀 ನಲ್ಲಿ ಇಟ್ಟು ಅನ್ನ ಬೇಯಿಸುತ್ತಾ ಇದ್ದೆವು.ವಾರಕ್ಕೊಮ್ಮೆ ಪೆಜತ್ತಾಯರ ಮನೆಗೆ ಹೋಗಿ   ಅವರ ತುರಿ ಮಣೆಯಲ್ಲಿ  ತೆಂಗಿನ ಕಾಯಿ ತುರಿದು( ನಮ್ಮ ತಂದೆ ಮನೆಯ ಸಣ್ಣ ತೋಟದಲ್ಲಿ ಕೆಲವು ತೆಂಗಿನ ಮರ ಇದ್ದು ನಾವು ರೂಮಿಗೆ ಸುಲಿದ ನಾಲ್ಕಾರು ತೆಂಗಿನ ಕಾಯಿ ತಗೊಂಡು ಹೋಗುತ್ತಾ ಇದ್ದೆವು) ಅವರ ರುಬ್ಬುವ ಕಲ್ಲಿನಲ್ಲಿ ರುಬ್ಬಿ ತಂದು ಸಾಂಬಾರ್ ಮಾಡುತ್ತಾ ಇದ್ದೆ‌.ಎರಡು ಮೂರು ದಿವಸ ಬೆಳಗ್ಗೆ ಸಂಜೆ ಕುದಿಸಿ ಬಳಸುತ್ತಾ ಇದ್ದೆವು..
ಉಜಿರೆಗೆ ಬಂದು ಈ ಕೊಠಡಿಗೆ ಪ್ರಸಾದ್ ಜೊತೆ ಬಂದೆ..ಅಷ್ಟೇ.. ಪ್ರಸಾದ್ ಮುಖ ನೋಡಬೇಕಿತ್ತು..😀 ಪ್ರಸಾದ್ ಮನೆಯವರು ಆಗಿನ ಕಾಲಕ್ಕೆ ಸಾಕಷ್ಟು ಸ್ಥಿತಿ ವಂತರಾಗಿದ್ದರು(  ಸಾಕಷ್ಟು ಸಿರಿವಂತರಾಗಿದ್ದರು) ಅತ್ತೆ ಮದುವೆ ಆಗಿ ಬಂದಾಗ ಹೆಚ್ಚೇನೂ ಇರಲಿಲ್ಲವಂತೆ..ಅತ್ತೆ ಮತ್ತು ಮಾವ ಸ್ವತಃ ಕೊಟ್ಟು ಪಿಕ್ಕಾಸು( ಹಾರೆ ಗುದ್ದಲಿ) ಹಿಡಿದು ಮಣ್ಣು ಸಮತಟ್ಟು ಮಾಡಿ ಅಡಕೆ ಬಾಳೆ ತೆಂಗು ಬೆಳೆಸಿದ್ದರಂತೆ( ಅತ್ತೆಯವರು ಯಾವಾಗಲೋ ಮಾತಿನ ನಡುವೆ ಹೇಳಿದ್ದರು).ಪ್ರಸಾದರಿಗೆ  ಹಾಗಾಗಿ ನಮ್ಮಷ್ಟು ಬಡತನವನ್ನು ಅನುಭವಿಸಿ ಗೊತ್ತಿರಲಿಲ್ಲ.. ಹಳೆಯ ಹೆಂಚಿನ ಸಣ್ಣ ಕೊಠಡಿ, ಒಂದೆಡೆ ನನ್ನ ಮತ್ತು ತಮ್ಮನ ಬಟ್ಟೆಗಳು ಚಾಪೆ,ಮತ್ತೊಂದೆಡೆ ನಮ್ಮ ಸ್ವಮೇಕ್ ದೇಸಿ ಚೈನಾಪಾಟ್..ಇನ್ನೊಂದು ಕಡೆ ಸೀಮೆ ಎಣ್ಣೆಯ ಸ್ಟೌ..
ಈ ಸಾಮಾನುಗಳ ನಡುವೆ ಮಲಗಲು ತೀರಾ ಕಡಿಮೆ ಜಾಗ ಇತ್ತು..ಒಂದು ವಾರ ನಾನು ತಮ್ಮ ಹೇಗೋ ಕೈಕಾಲು ಸುರುಟಿಕೊಂಡು ಮಲಗಿದ್ದೆವು..ನಂತರ ಪಕ್ಕದ ಕೊಠಡಿಯಲ್ಲಿ ನಮ್ಮ ಹಾಗೇ ಬಂದ ಹುಡುಗ ಇದ್ದ.( ಅವನ ಹೆಸರು ಮರೆತು ಹೋಗಿದೆ ಈಗ)ಅವನಿಗೆ ಮತ್ತು ನನ್ನ ತಮ್ಮನಿಗೆ ಸ್ನೇಹವಾಗಿ ಅವರಿಬ್ಬರೂ ಅವನ ಕೊಠಡಿಯಲ್ಲಿ ಮಲಗುತ್ತಿದ್ದರು..ಹಾಗಾಗಿ ನನಗೆ ಸ್ವಲ್ಪ ಆರಾಮವಾಗಿತ್ತು.
ಈ ಕೊಠಡಿ ನೋಡಿ ನಮ್ಮ ಪರಿಸ್ಥಿತಿ ಪ್ರಸಾದರಿಗೆ ಅರ್ಥವಾಗಿದ್ದಿರಬೇಕು.ನನ್ನ ಕೈಗೆ ಸ್ವಲ್ಪ ದುಡ್ಡು ಕೊಟ್ಟು ಅವರು ಹಿಂದೆ ಮನೆಗೆ ಬಂದು ‌ಮರುದಿನವೇ ಉದ್ಯೋಗ ನಿಮಿತ್ತ ಬೆಂಗಳೂರು ನಡೆದರು..
ಅಂತೂ ಇಂತೂ ಎರಡನೇ ಬಿಎಸ್ಸಿ ಅಂತಿಮ ಪರೀಕ್ಷೆಗಳನ್ನು ಬರೆದು ನಾನು ಅತ್ತೆ ಮನೆಗೆ ಬಂದೆ..ಮತ್ತೆ ಒಂದೆರಡು ದಿನದ ಒಳಗೆ ಪ್ರಸಾದ್ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು..ಅವರು ಹನುಮಂತ ನಗರದಲ್ಲಿ ಚಿಕ್ಕದೊಂದು ಮನೆ ಬಾಡಿಗೆಗೆ ಹಿಡಿದಿದ್ದರು.ರಾತ್ರಿ ಬಸ್ಸಿನಲ್ಲಿ ಬರುವಾಗ ಘಾಟಿ ಹತ್ತುವಾಗ ತುಂಬಾ ವಾಂತಿಯಾಗಿ ನನಗೆ ಬೆಳಗಿನ ಜಾವ ಮನೆಗೆ ತಲುಪುವಷ್ಟರಲ್ಲಿ ಸುಸ್ತಾಗಿ ಕಣ್ಣು ಕತ್ತಲಿಟ್ಟಿತ್ತು..ಬಂದು ಮುಖವನ್ನು ತೊಳೆದ ಹಾಗೆ ಮಾಡಿ ಬರುವಷ್ಟರಲ್ಲಿ ಪ್ರಸಾದ್ ಹಾಸಿಗೆ ಬಿಡಿಸಿ ಕೊಟ್ಟರು.. ನಾನು ಮಲಗಿದೆ..ಎಷ್ಟು ಹೊತ್ತಾಯಿತೋ ಗೊತ್ತಿಲ್ಲ.. ರೈಲು ಕೂ ಹಾಕಿದ ಹಾಗೆ ಭಯಾನಕ ಸದ್ದಾಗಿ ಗಾಭರಿಕೊಂಡು ಎಚ್ಚರಗೊಂಡೆ.ನನ್ನ ಗಾಭರಿ ನೋಡಿ ಪ್ರಸಾಸರಿಗೂ ಗಾಭರಿ ಏನಾಯ್ತು ಅಂತ..ಮತ್ತೆ ಪುನಃ ಅದೇ ಸದ್ದು..ಅಮ್ಮಾ ಎಂದು ಕಿರುಚಿದೆ..ಪ್ರಸಾದ್ ಓಡಿಕೊಂಡು ಬಂದು ಎಂತ ಎಂತಾಯಿತು ಎಂದು ಸಮಾಧಾನಿಸಿ ಕೇಳುವಷ್ಟರಲ್ಲಿ ಮತ್ತೆ ಅದೇ ಸದ್ದು.. ಮತ್ತೆ ಗಾಭರಿಯಾಗಿ ಆ ಕಡೆ ಈ ಕಡೆ ನೋಡಿದೆ..ಇರು ಕುಕ್ಕರ್ ಆಫ್ ಮಾಡಿ ಬರುತ್ತೇನೆ ಎಂದು ಪ್ರಸಾದ್ ಅಡಿಗೆ ರೂಮಿನ ಕಡೆ ಹೋದರು! ತಕ್ಷಣವೇ ಎಚ್ ಜಿ ರಾಧಾದೇವಿ,ಸಾಯಿಸುತೆ ಮೊದಲಾದವರ ಕಾದಂಬರಿಗಳಲ್ಲಿ ಕುಕ್ಕರ್ ಕೂ ಹಾಕಿದ ಬಗ್ಗೆ  ಓದಿದ್ದು ನೆನಪಾಯಿತು..ಹ್ಹಾ..ಹಾಗಾದರೆ ಆ ನನ್ನನ್ನು ಗಾಭರಿಗೊಳಿಸಿದ ಸದ್ದು ಅದೆಂದು ಅರ್ಥವಾಯಿತು..ಕುಕ್ಕರ್,ಮಿಕ್ಸಿ,ಗ್ಯಾಸ್ ಸ್ಟವ್,ಟಿವಿ ಡಿಶ್ ಇತ್ಯಾದಿ ಪದಗಳನ್ನು ಇವರುಗಳ ಕಾದಂಬರಿಗಳಲ್ಲಿ ಓದಿದ್ದೆ‌ಇವು ಶ್ರೀಮಂತರ ಮನೆಗಳಲ್ಲಿ ಇರುತ್ತದೆ ಅಂತ ಕೂಡ ಗೊತ್ತಿತ್ತು..ಆದರೆ ಅವು ಹೇಗಿರುತ್ತವೆ,ಕುಕ್ಕರ್ ಕೂ ಹಾಕುವುದೆಂದರೆ ಅಷ್ಟು ಜೋರಾದ ಸದ್ದು ಇರುತ್ತದೆ ಎಂಬ ಊಹೆ ಕೂಡ ನನಗಿರಲಿಲ್ಲ.. ಇನ್ನು ಉಪಯೋಗಿಸುವ ಬಗ್ಗೆ ಹೇಗೆ ಗೊತ್ತಿರುತ್ತದೆ ?ಹಾಗಾಗಿ  ಪ್ರಸಾದ್ ಬೆಳಗ್ಗೆಯೇ ಅಡಿಗೆ ಮಾಡಿಟ್ಟು ಗ್ಯಾಸ್ ಸ್ಟವ್ ಮುಟ್ಟಬೇಡ,ಗೊತ್ತಾಗದೆ ಬೆಂಕಿ ಹಿಡುದರೆ ಕಷ್ಟ, ನಾನು ಸಂಜೆ ಬರುವಾಗ ತಿಂಡಿ ಕಟ್ಟಿಸಿಕೊಂಡು  ಬರುತ್ತೇನೆ,ಈಗ ಮತ್ತು ಮಧ್ಯಾಹ್ನ ಊಟ ಮಾಡು ಎಂದು ಹೇಳಿ ಕುಕ್ಕರ್ ಮುಚ್ಚಳ ತೆರೆದು ಇಟ್ಟು ಹೋಗಿದ್ದರು‌..ಸಂಜೆ ಬೇಗನೇ ಬಂದರು.ಬರುವಾಗ ಎರಡು ಮಸಾಲೆ ದೋಸೆ ಕಟ್ಟಿಸಿಕೊಂಡೇ ಬಂದಿದ್ದರು.ಬಂದು ನನಗೆ ಕಾಫಿ ಮಾಡಿ ಕೊಟ್ಟು,( ನನ್ನ ತಾಯಿ ಮನೆಯಲ್ಲಿ ನಮಗೆಲ್ಲರಿಗೂ ಬೆಲ್ಲದ ಕಾಫಿ ಕುಡಿದು ಅಭ್ಯಾಸ) ಅವರು ಚಹಾ ಮಾಡಿಕೊಂಡು ಕುಡಿದರು. ಅಮೇಲೆ ನಿನಗೆ ತಿನ್ನಲು ಎಂತಾದರೂ ಬೇಕ? ಎಲ್ಲ ಇಲ್ಲಿ ಹತ್ರವೇ ಸಿಗುತ್ತದೆ..ಏನಾದರೂ ಬೇಕಿದ್ದರೆ ಹೇಳು ಎಂದರು..ತಕ್ಷಣವೇ ನಾನು ಮೊದಲ ವರ್ಷ ಬಿಎಸ್ಸಿ ಓದುವಾಗ ನಮ್ಮ ಮೆಸ್ ನಲ್ಲಿ ಇದ್ದ ಸಹಪಾಠಿ ಸಿರಿವಂತರ ಮನೆ ಮಗಳು ಸುಮನ್ ಪಪ್ಸ್ ಬಗ್ಗೆ ಹೇಳಿದ್ದು ನೆನಪಾಯಿತು. ಅವಳೊಂದು ಆದಿತ್ಯವಾರ  ನಾವೆಲ್ಲ ಉಜಿರೆ ಪೇಟೆಗೆ ಹೋಗಿ ಪಪ್ಸ್ ತಿಂದು ಬರುವ ಎಂದು ಹೇಳಿದ್ದಳು.ಅವಳನ್ನು ಹೊರತು ಪಡಿಸಿ ನಾನೂ ಸೇರಿದಂತೆ ಇತರೆ ಮೆಸ್ ನಲ್ಲಿ ಇದ್ದ ಹುಡುಗಿಯರಿಗೆ ಆ ಶಬ್ದವನ್ನೇ ಕೇಳಿ ಗೊತ್ತಿರಲಿಲ್ಲ.. ಅದೇನೆಂದು ಕೇಳಿದೆವು..ಅದು ಒಂತರಾ ಪಲ್ಯವನ್ನು ನಡುವೆ ಹಾಕಿ ಬ್ರೆಡ್ ಅನ್ನು ಹುರಿದ ಹಾಗೆ ಇರುತ್ತದೆ‌.ತುಂಬಾ ರುಚಿ ಇರುತ್ತದೆ ಎಂದು ಹೇಳಿದ್ದಳು. ಹಾಗೆ ನಾವೆಲ್ಲ‌ ಮೆಸ್ಸಿನ
ಕಾವೇರಿ ಆಂಟಿಯ ಅನುಮತಿ ಪಡೆದು ಕೈಯಲ್ಲಿ ಸ್ವಲ್ಪ ದುಡ್ಡು ಹಿಡಿದುಕೊಂಡು ಉಜಿರೆ ಪೇಟೆಯಲ್ಲಿ ಇದ್ದ ಒಂದೇ ಒಂದು ಬೇಕರಿಗೆ ಬಂದೆವು.ಅಲ್ಲಿ ಸುಮನ್ ಪಪ್ಸ್  ಕೊಡಿ ಎಂದು ಅಲ್ಲಿದ್ದವರಲ್ಲಿ ಕೇಳಿದವರು..ಬಹುಶಃ ಅಲ್ಲಿದ್ದವರು ಕೂಡ ಮೊದಲ ಬಾರಿಗೆ ಆ ಪದ ಕೇಳಿದ್ದರೋ ಏನೋ ಗೊತ್ತಿಲ್ಲ.. ಒಂಚೂರು ಪೆಚ್ಚು ಪೆಚ್ಚಾಗಿ ನಮ್ಮಲ್ಲಿ ಅದಿಲ್ಲ ,ಬೇರೆ ಏನು ಬೇಕು ಕೇಳಿದರು..ಹಾಗೆಲ್ಲ ಬೇಕರಿ ತಿಂಡಿ ತಿನ್ನುವಷ್ಟು ದುಡ್ಡು ನನ್ನಲ್ಲಿ ಇರಲಿಲ್ಲ, ನನ್ನ ತಂದೆ ತಾಯಿ ನನ್ನನ್ನು ಬಹಳ ಕಷ್ಟ ಪಟ್ಟು ಓದಿಸುತ್ತಿದ್ದಾರೆ ಎಂಬ ಅರಿವು ನನಗಿತ್ತು..ಹಾಗಾಗಿ ತಕ್ಷಣವೇ ನಾನು ಬೇರೇನು ಬೇಡವೆಂದೆ..ಸುಮನ್ ,ಸಲೀಲ,ಸಂಧ್ಯಾ ಬಿಟ್ಟರೆ ಉಳೊದವರೆಲ್ಲರ ಪರಿಸ್ಥಿತಿ ನನಗಿಂತ ಬೇರೆಯಾಗಿ ಇರಲಿಲ್ಲ.. ಹಾಗಾಗಿ ಅವರುಗಳು ಕೂಡ ಬೇಕರಿ ತಿಂಡಿ ಇಷ್ಟವಿದ್ದರೂ ಕೂಡ ನನ್ನಂತೆ ಬೇಡ ಎಂದರು‌.ನಾವ್ಯಾರೂ ಏನನ್ನೂ ತೆಗೆದುಕೊಳ್ಳದ ಕಾರಣ ಸುಮನ್ ಕೂಡ ಏನನ್ನು ತೆಗೆದುಕೊಳ್ಳದೆ ನಮ್ಮ ಜೊತೆ ಹಿಂತಿರುಗಿದಳು..ಸಾಕಷ್ಟು ವಿದ್ಯಾವಂತರ,ಸರ್ಕಾರಿ ಉದ್ಯೋಗದಲ್ಲಿದ್ದು ಸಿರಿವಂತರ ‌ಮಗಳಾದರೂ ಸುಮನ್ ನಮ್ಮೊಂದಿಗೆ ಹೊಂದಿಕೊಂಡಿದ್ದಳು..ಒಂದು ದಿನ ಕೂಡ ತಾನು ಸಿರಿವಂತೆ ಎಂಬಂತೆ ನಡೆದುಕೊಂಡಿರಲಿಲ್ಲ.. ಕಾಲೇಜಿಗೆ ಸೇರಿ ಒಂದೆರಡು ತಿಂಗಳುಗಳಲ್ಲಿಯೇ  ಚುರುಕಿನ ಹುಡುಗಿಯಾಗಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಳು.ಅವಳು ಪದವಿಯಲ್ಲಿ ಪತ್ರಿಕೋದ್ಯಮ ತೆಗೆದು ಕೊಂಡಿದ್ದು ನಿರಂಜನ ವಾನಳ್ಳಿಯವರು ಶುರು ಮಾಡಿದ,ಅಥವಾ ಮೊದಲೇ ಇದ್ದುದನ್ನು ಮುಂದುವರಿಸುತ್ತಾ ಇದ್ದ ಕೈ ಬರಹದ   ಕಾಲೇಜು ವಾಲ್ ಮ್ಯಾಗಜಿನ್ ( ಕೈ ಬರಹದ ಭಿತ್ತಿ ಪತ್ರಿಕೆ) ನಲ್ಲಿ ಲೇಖನಗಳನ್ನು ಬರೆಯುತ್ತಿದ್ದಳು.ಕವನಗಳನ್ನು ಬರೆಯುತ್ತಿದ್ದಳು.ಶ್ರೀಮಂತಿಕೆಯ ಜೊತೆಗೆ ಪ್ರತಿಭೆ,ಸಜ್ಜನಿಕೆ ಸೇರಿ ನಮ್ಮ ‌ಮೆಸ್ ನಲ್ಲಿ ಒಂದು ತನ್ನದೇ ಆದ ವಿಶಿಷ್ಠವಾದ ಸ್ಥಾನವನ್ನು ಗಳಿಸಿದ್ದಳು.ಬಹುಶಃ ಏಳನೆಯ ತರಗತಿಯಲ್ಲಿ ಇದ್ದಾಗ ನಾನು ನಾಟಕ ಬರೆದದ್ದು ಬಿಟ್ಟರೆ ಒಂಬತ್ತನೇ ತರಗತಿಯಲ್ಲಿ ಇದ್ದಾಗ ಒಂದು ಕಥೆ ಬರೆದು ಅಮ್ಮನಿಗೆ ಓದಿ ಹೇಳಿದ್ದೆ.ಚೆನ್ನಾಗಿದೆ ..ಆಗಾಗ ಬರೆಯುತ್ತಿರು ಎಂದು ಅಮ್ಮ ತುಂಬು ಪ್ರೋತ್ಸಾಹ ನೀಡಿದ್ದರೂ ಕೂಡ ನಂತರ ನಾನೇನನ್ನೂ ಬರೆದಿರಲಿಲ್ಲ..ಮೆಸ್ ನಲ್ಲಿ ಸುಮನ್ ನ ಕವಿತೆಗಳಿಗೆ ಬರಹಗಳಿಗೆ ಸಿಗುತ್ತಾ ಇದ್ದ ಮೆಚ್ಚುಗೆ ನನ್ನನ್ನು ಮತ್ತೆ ಬರೆಯಲು ಪ್ರೇರೇಪಿಸಿದೆವು.ನಾನು ನನ್ನಷ್ಟಕ್ಕೆ ರಫ್ ಪುಸ್ತಕದಲ್ಲಿ ಕಥೆಗಳನ್ನು, ಕವಿತೆಗಳನ್ನು ಬರೆಯತೊಡಗಿದೆ‌. ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿ ಇಂಗ್ಲಿಷ್ ಗೆ ಆದ್ಯತೆ ಕೊಡುವ ಬಗ್ಗೆ ಒಂದು ಒಂದು ಪುಟ್ಟ ಬರಹ ಬರೆದು ಸುಮನ್ ಗೆ ಕೊಟ್ಟಿದ್ದೆ.ಅದನ್ನು ಓದಿ ಚೆನ್ನಾಗಿದೆ ಎಂದ ಅವಳು ಅದನ್ನು ಕಾಲೇಜಿನ ಭಿತ್ತಿ ಪತ್ರಿಕೆಗೆ ನೀಡಿದ್ದಳು..ಆದೇ ಯಾಕೋ ಅದನ್ನು ನಿರಂಜನ ವಾನಳ್ಳಿ ಅಥವಾ ಇನ್ಯಾರೋ ಆ ಪತ್ರಿಕೆಯ ಜವಾಬ್ದಾರಿ ವಹಿಸಿದವರು ಅದನ್ನು ರಿಜೆಕ್ಟ್ ಮಾಡಿದರು.ಅದನ್ನು ತಿಳಿಸಿದ ಸುಮನ್ " ಇದು ನವೆಂಬರ್ ತಿಂಗಳು ಆಗಿದ್ದರೆ ಖಂಡಿತಾ ವಾಲ್ ಮ್ಯಾಗಜೀನ್ ನಲ್ಲಿ ಹಾಕುತ್ತಿದ್ದರು.ಈಗ ಸಕಾಲ ಅಲ್ಲ ಹಾಗಾಗಿ ಅದನ್ನು ರಿಜೆಕ್ಟ್ ಮಾಡಿರಬಹುದು..ಆದರೂ ಬರಹ ಚೆನ್ನಾಗಿದೆ " ಎಂದು ಹೇಳಿ ಬರೆಯುವ ನನ್ನ ಉತ್ಸಾಹ ಬತ್ತಿ ಹೋಗದಂತೆ ಮೆಚ್ಚುಗೆಯ ಮಾತನ್ನು ಆಡಿದ್ದಳು.ಬಹುಶಃ ಅವಳಿಗೆ ಅವಳ ವಯಸ್ಸನ್ನು ಮೀರಿದ ಪ್ರೌಢತೆ ಇತ್ತೆನಿಸುತ್ತದೆ ನನಗೆ.ಆದರೆ ಮೊದಲ ವರ್ಷ ಬಿಎ ಪರೀಕ್ಷೆ ಆಗುತ್ತಿದ್ದಂತೆ ಅವಳ ಮದುವೆ ಆಯಿತು.. ಅದಾಗಿ ಎಷ್ಟೋ ವರ್ಷಗಳ ನಂತರ ನಾನು 2009 ರಲ್ಲಿ ಬೆಳ್ಳಾರೆ ಯ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾದ ನಂತರ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನಕ್ಕೆ ಹೋಗಿದ್ದೆ‌.ಆಗ ನನಗೆ ಉಳಿದುಕೊಳ್ಳಲು ಪ್ರಕೃತಿ ಚಿಕಿತ್ಸೆ ಕಾಲೇಜಿನ. ಹಾಸ್ಟೆಲ್  ಮೆಸ್ ಗೆ ಹತ್ತಿರವಾಗಿತ್ತು.ಆಗ ನಾನು ಮೆಸ್ ಗೆ ಹೋಗಿ ಕಾವೇರಿ ಆಂಟಿ ಮತ್ತು ಮಾವ( ಆಗಷ್ಟೇ ಉಜಿರೆ ಹೈಸ್ಕೂಲ್ ನ ಇಂಗ್ಲಿಷ್ ಶಿಕ್ಷಕರಾಗಿ  ಸೇವೆಯಿಂದ ನಿ ವೃತ್ತಿ ಹೊಂದಿದ ವೆಂಕಟರಮಣ ಭಟ್ ಮಾಷ್ಟ್ರು) ಅವರನ್ನು ಭೇಟಿಯಾಗಿದ್ದೆ .ಆಗ ನನಗೆ ಸುಮನ್ ಗೆ ಕ್ಯಾನ್ಸರ್ ಆಗಿ ಗುಣ ಆಗಿ ಮತ್ತೆ ಪುನಃ  ಮರುಕಳಿಸಿದೆ ಎಂದು ಗೊತ್ತಾಯಿತು. ಅವಳ ನಂಬರ್ ತಗೊಂಡು ಫೋನ್ ಮಾಡಿ ಮಾತಾಡಿದೆ.ಎರಡನೇ ಬಾರಿಗೆ ಕ್ಯಾನ್ಸರ್ ಬಂದ ಬಗ್ಗೆ ಬಹಳ ಬೇಸರದಿಂದ ಹೇಳಿದಳು.ಮೊದಲ ಬಾರಿ ಬಂದದ್ದು ಗುಣ ಆಗಿದೆ ತಾನೇ ? ಈ ಬಾರಿಯೂ ಗುಣ ಆಗುತ್ತದೆ, ಸರಿಯಾಗಿ ಚಿಕಿತ್ಸೆ ಪಡೆ ಎಂದು ಧೈರ್ಯ ಹೇಳಿ ನೀನು ಉಜಿರೆಯಲ್ಲಿ ಮೊದಲ ವರ್ಷ ಬಿಎ ಓದುತ್ತಿದ್ದಾಗ ಕತೆ ಕವಿತೆಗಳನ್ನು ಬರೆಯುತ್ತಿದ್ದೆಯಲ್ಲ..ಈಗಲೂ ಬರೆಯುತ್ತಿದ್ದೀಯಾ ಎಂದು ಕೇಳಿದೆ.ಅಪರೂಪಕ್ಕೆ ಮೂಡ್ ಚೆನ್ನಾಗಿದ್ದಾಗ ಬರೆಯುತ್ತೇನೆ ಎಂದು ಹೇಳಿದಳು..

ಪುಸ್ತಕವಾಗಿ ಪ್ರಕಟವಾಗಿವೆಯಾ ಎಂದು  ಕುತೂಹಲದಿಂದ ಕೇಳಿದೆ..ಇಲ್ಲ.. ಪತ್ರಿಕೆಗಳಲ್ಲಿ ನಿನ್ನ ಲೇಖನಗಳು ಪ್ರಕಟವಾಗುತ್ತಿವೆಯಾ ?  ಲಕ್ಷ್ಮೀ ಜಿ ಪ್ರಸಾದ ಎನ್ನುವ ಹೆಸರಿನಲ್ಲಿ ಬರೆಯುತ್ತಿರುವುದು ನೀನಾ ಎಂದು ಕೇಳಿದಳು.ಹೌದು..ನಿನಗೆ ಹೇಗೆ ಗೊತ್ತಾಯಿತು ಎಂದು ಕೇಳಿದಾಗ " ನೀನು ಅಂದು‌ಮೆಸ್ ನಲ್ಲಿ ಇದ್ದಾಗ ಕನ್ನಡ ಭಾಷೆಯ ನಿರ್ಲಕ್ಷ್ಯ ದ ಬಗ್ಗೆ ಒಂದು ಸಣ್ಣ ಲೇಖನ ಬರೆದಿದ್ದೆಯಲ್ಲ..ಅದರ ವಿಸ್ತೃತ ರೂಪದ ಲೇಖನವನ್ನು ನಾನು ವಿಜಯ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಎಂಬ ಲೇಖನದಲ್ಲಿ ನೋಡಿದೆ.ಅದರಲ್ಲಿ ಲೇಖಕರ ಹೆಸರು ಲಕ್ಷ್ಮೀ ಜಿ ಪ್ರಸಾದ ಎಂದಿತ್ತು.ಬಹುಶಃ ಅದು ನಿನ್ನ ಲೇಖನವೇ ಇರಬೇಕೆಂದು ಊಹಿಸಿದೆ.ನಿನ್ನ ಬೇರೆ ಲೇಖನಗಳನ್ನು ಓದಿದ್ದೇನೆ,ಚೆನ್ನಾಗಿ ಬರೀತೀಯ..ನನಗೆ ಮದುವೆ ನಂತರ ಹೆಚ್ಚು ಬರೆಯಲಾಗಲಿಲ್ಲ‌‌.ಮಕ್ಕಳಾಗಲಿಲ್ಲ ಅದೇ ಕೊರಗಿನಲ್ಲಿ ಇದ್ದೆ .ನಂತರ ನಾವೊಂದು ಮಗುವನ್ನು ದತ್ತು ಪಡೆದು ಹ್ಯಾಪಿ ಆಗಿದ್ದೆವು‌ ಅಷ್ಟರಲ್ಲಿ ಕ್ಯಾನ್ಸರ್ ಬಂತು..ಅದು ಗುಣ ಆಗಿದೆ ಎಂದು ಉಸಿರುಬಿಡುವಷ್ಟರಲ್ಲಿ ಮತ್ತೆ ಈಗ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಹೇಳಿದಳು..ಆಗ ನೀನು ಚಿಕಿತ್ಸೆ ಪಡೆದು ಗುಣ ಪಡಿಸಿಕೋ ಜೊತೆಗೆ ನಿನ್ನ ಕವಿತೆಗಳನ್ನು ಪ್ರಕಟಿಸು..ನಾವಿದ್ದಾಗಲೂ ಇಲ್ಲದೇ ಇದ್ದಾಗಲೂ ನಾವು ಬರೆದ ಪುಸ್ತಕಗಳು ನಮ್ಮನ್ನು ಚಿರಸ್ಥಾಯಿಯಾಗಿಸುತ್ತವೆ‌.ಬರವಣಿಗೆಗೆ ಅಂತಹ ಶಕ್ತಿ ಇದೆ ಎಂದು ಹೇಳಿದೆ.ಆಗ ಅವಳು ನಿನ್ನ ಪುಸ್ತಕಗಳು ಪ್ರಕಟವಾಗಿದೆಯಾ ಎಂದು ಕೇಳಿದಳು.ಹೌದು ಎಂದು ಹೇಳಿ ಮೂರು ಪುಸ್ತಕಗಳು ಪ್ರಕಟವಾಗಿವೆ, ಈಗ ಐದು ಪುಸ್ತಕಗಳು ಅಚ್ಚಿನಲ್ಲಿ ಇವೆ ಎಂದು ತಿಳಿಸಿದೆ.ಬಹಳ ಸಂತೋಷಗೊಂಡ ಅವಳು " ಲಕ್ಷ್ಮೀ ನಿನಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು ಪುಸ್ತಕಗಳು ಲೇಖನಗಳು ಪ್ರಕಟವಾಗಿದ್ದು ಕೇಳಿ ತುಂಬಾ ಖುಷಿ ಆಯ್ತು..ನಾನು ಕೂಡ ನನ್ನ ಕವಿತೆಗಳನ್ನು ಪ್ತಕಟಿಸುತ್ತೇನೆ ಮತ್ತೆ ಕಳಹಿಸಿಕೊಡುತ್ತೇನೆ ಎಂದು ಉತ್ಸಾಹದಿಂದ ಹೇಳಿದಳು.ನಂತರ ಅವಳ ಕವನ ಸಂಕಲನ ಮತ್ತು ರಂಗೋಲಿ ಅಥವಾ ಚಿತ್ತಾರದ ಒಂದು ಪುಸ್ತಕ ಪ್ರಕಟವಾದ ಬಗ್ಗೆ  ಉಜಿರೆಯ ಇನ್ನೋರ್ವ ಮೆಸ್ ಮೇಟ್ ನಾಪೋಕ್ಲಿನ ವಿದ್ಯಾಳಿಂದ ತಿಳಿಯಿತು (  ಅವರು ಮತ್ತು ಅವರ ಪತಿ ಸುರೇಶ್ ಭಟ್ ( ಉಪನ್ಯಾಸಕರು) ಇಬ್ಬರೂ ಲೇಖಕರಾಗಿದ್ದು ಅವರ ಬರಹ ಗಳು ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತಿರುತ್ತವೆ,ವಿದ್ಯಾ ಮತ್ತೆ ನನಗೆ ಫೇಸ್ ಬುಕ್ ಸ್ನೇಹಿತೆಯಾಗಿದ್ದಾರೆ)
ನಂತರ ಒಂದೆರಡು ವರ್ಷದ ಬಳಿಕೆ  ಹೂ‌ ಮನಸಿನ ಹುಡುಗಿ ದೇವರ ಪಾದವನ್ನು ಸೇರಿದ್ದು ತಿಳಿದು ತುಂಬಾ ಸಂಕಟವಾಯಿತು.
ಅದಿರಲಿ ನನ್ನ ಕಥೆ ಎಲ್ಲಿಂದೆಲ್ಲಿಗೋ ಸಾಗಿದೆ ..ಮತ್ತೆ ಹಿಂದೆ ಬರುತ್ತೇನೆ‌.
ಬೇಸಗೆ ರಜೆ ಮುಗಿಯುತ್ತಿದ್ದಂತೆ ಅಂತಿಮ ವರ್ಷದ ಬಿಎಸ್ಸಿ ಪದವಿ ತರಗತಿಗಳು ಆರಂಭವಾದವು.ನಾನು ಬೆಂಗಳೂರಿನಿಂದ ಮನೆಗೆ ಬಂದು ಪುಸ್ತಕ ಬಟ್ಟೆ ಬರೆ ತೆಗೆದುಕೊಂಡು ಕಾಲೇಜು ಹೊರಟೆ,ಪ್ರಸಾದ್ ನನ್ನನ್ನು ಕಾಲೇಜು ಹಾಸ್ಟೆಲ್ ಗೆ ಸೇರಿಸಿದರು‌.ಹತ್ತನೇ ತರಗತಿ ತನಕ ಜಾಣ ವಿದ್ಯಾರ್ಥಿನಿ ಆಗಿದ್ದ ನಾನು ನಂತರ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದೆ.ಇಂಗ್ಲಿಷ್ ನಲ್ಲಿ ಮಾಡುವ ಪಾಠ ನನಗೆ ಅರ್ಥವಾಗದೇ ಇದ್ದದು ಇದಕ್ಕೆ ಪ್ರಮುಖ ಕಾರಣವಾಗಿತ್ತು.ಅಂತೂ ಇಂತೂ ಬಿಎಸ್ಸಿ ಪದವಿ ಅಂತಿಮ ವರ್ಷದ ಅಂತಿಮ ಪರೀಕ್ಷೆಗಳು ಮುಗಿದು ಮನೆಗೆ ಬಂದೆ.ಆಗಾಗಲೇ ಪ್ರಸಾದ್ ಬೆಂಗಳೂರಿನ ಕೆಲಸ ಬಿಟ್ಟು ಬಿಟ್ಟಿದ್ದರು‌.ಮನೆಯಲ್ಲಿ ಕೃಷಿ ನೋಡಿಕೊಳ್ಳಲು ಜನ ಸಾಕಾಗುತ್ತಿಲ್ಲ..ನೀನು ಕೆಲಸ ಬಿಟ್ಟು ಬಂದು ಬಿಡು ಎಂದು ಮಾವ ಹೇಳಿದ್ದರಂತೆ.ಅದಕ್ಕೆ ನನ್ನಲ್ಲಿ ಒಂದು ಮಾತು ಕೂಡ ತಿಳಿಸದೆ ಬೆಂಗಳೂರಿನಲ್ಲಿ ಇದ್ದ ಒಳ್ಳೆಯ ಕೆಲಸ ಬಿಟ್ಟು ಬಂದಿದ್ದರು.
ಈಗಂತೂ ನಾನು ಸಂಪೂರ್ಣವಾಗಿ ಮನೆ ಕೆಲಸದ ಆಳಾಗಿ ಬಿಟ್ಟೆ‌.ಬೆಳಗಾಗೆದ್ದು ಮನೆ ಗುಡಿಸಿ ಒರಸಿ ತೋಟಕ್ಕೆ ಹೋಗಿ ಹುಲ್ಲು ತಂದು ಸೋಗೆ ಎಳೆದು, ಗುಡ್ಡದಿಂದ ಒಣ ಕಟ್ಟಿಗೆ ತರುವ,ಹಸು ಕರೆಯುವ ಕೆಲಸಕ್ಕೆ ಮೀಸಲಾದೆ‌.ನನಗೆ ಒಂದು ಲೋಟ ಕಾಫಿ ಮಾಡಿಕೊಳ್ಳುವ ಸ್ವಾತಂತ್ರ್ಯ ವೂ ಇರಲಿಲ್ಲ. ಒಮ್ಮೆ ಅಣ್ಣ ಮತ್ತು ಚಿಕ್ಕಪ್ಪ ನಮ್ಮ ಮನೆಗೆ ಬಂದಿದ್ದರು.ಆ ದಿವಸ ನನಗೆ ಇತರೆ ಕೆಲಸದಿಂದ ವಿನಾಯತಿ ನೀಡಿ ಅಣ್ಣ ಚಿಕ್ಕಪ್ಪಂದಿರ ಹತ್ತಿರ ಮಾತನಾಡಲು ಬಿಟ್ಟು ಉದಾರತೆ ಮೆರೆದಿದ್ದರು ಮನೆ ಮಂದಿ.ಮಧ್ಯಾಹ್ನ  ಊಟ ಆದ ಮೇಲೆ ಅತ್ತೆ ಮಾವ ಮಲಗಿದ್ದರು.ಪ್ರಸಾದ್ ಮತ್ತು ಮೈದುನ ತೋಟದ ಕೆಲಸಕ್ಕೆ ಹೋಗಿದ್ದರು.ಆಗ ಚಿಕ್ಕಪ್ಪ "ಎನಗೊಂದು ಅರ್ಧ ಲೋಟೆ ಚಾಯ ಮಾಡಿ‌ಕೊಡು ಮಗಳೋ,ತಲೆ ಬೇನೆ ಅವುತ್ತು( ನನಗೆ ಅರ್ಧ ಲೋಟ ಚಹಾ ಮಾಡಿ ಕೊಡು ಮಗಳೇ,ತಲೆ ನೋವಾಗುತ್ತಿದೆ) ಎಂದು ಹೇಳಿದರು.ಆಗ ಅಣ್ಣನೂ ನನಗೂ ಒಂದು ಲೋಟ ಇರಲಿ ಎಂದ.ನಾನು ಮನೆ ಮಂದಿ ಏನು ಹೇಳುವರೋ ಎಂದು  ಹೆದರುತ್ತಾ ಹೋಗಿ ಗ್ಯಾಸ್ ಸ್ಟೌ ಹಚ್ಚಿ( ಆಗ ನಾನು ಸರಿಯಾಗಿ ಗ್ಯಾಸ್ ಸ್ಟೌ ,ಮಿಕ್ಸ್,ಕುಕ್ಕರ್ ಗಳ ಬಳಕೆಯನ್ನು ಪ್ರಸಾದರಿಂದ ಕಲಿತಿದ್ದೆ) ಅಲ್ಲೇ ಸಮೀಪದಲ್ಲಿ ಇದ್ದ ಹಾಲಿನ ಪಾತ್ರೆಯಿಂದ ಸ್ವಲ್ಪ ಹಾಲು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಸಕ್ಕರೆ ಚಹಾ ಪೌಡರ್ ಹಾಕಿ ಕುದಿಸಿ ಅಣ್ಣ ಮತ್ತು ಚಿಕ್ಕಪ್ಪನಿಗೆ ಚಹಾ ಮಾಡಿ ಕೊಟ್ಟೆ.
ಅತ್ತೆ ಯವರು ನಿದ್ರೆ ಮಾಡಿ ಎದ್ದು ಹೊರಗೆ  ಬರುವಾಗ ಅಣ್ಣ ಚಿಕ್ಕಪ್ಪ ಚಹಾ ಕುಡಿಯುತ್ತಾ ಇದ್ದರು..ಆಗ ನನ್ನ ಕಡೆ ಅವರು ಬೀರಿದ ದೃಷ್ಟಿ ನೆನೆದರೆ ಈಗಲೂ ನನಗೆ ಎದೆ ಡವ ಡವ ಆಗುತ್ತಿದೆ.ಅಣ್ಣ ಚಿಕ್ಕಪ್ಪ ಹೋಗುವ ತನಕ ಏನೂ ಹೇಳಲಿಲ್ಲ..
ಅವರು ಆ ಕಡೆ ಹೋಗುತ್ತಲೇ ಚಹಾ ಮಾಡುವ ಮೊದಲು ಕೇಳಿಲ್ಲ ಯಾಕೆ ? ಎಷ್ಟು ಹಾಲು ಇದೆ ಅಂತ ನೋಡಿಕೊಂಡು ಬಳಕೆ ಮಾಡಬೇಕು.. ಉಳಿದವರಿಗೆ ಚಹಾ ಮಾಡಲು ಹಾಲೆಲ್ಲಿದೆ..ಇತ್ಯಾದಿಯಾಗಿ ಹಲವಾರು ಆಖ್ಷೇಪಗಳನ್ನು ಮಾಡಿದರು.ಅದರ ನಂತರ ನಾನು ಅಡುಗೆ ಮನೆ ಕಡೆ ಕಾಲಿಡುವುದನ್ನೇ ಬಿಟ್ಟು ಬಿಟ್ಟಿದ್ದೆ.ನೀವೆಲ್ಲ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಈಗ ಇಷ್ಟು ಜೋರಿರುವ ನಾನು ನನ್ನ ಅತ್ತೆ ಮನೆಯಲ್ಲಿ ಹೆದರಿ ಇಲಿ ಮರಿಯ ಹಾಗೆ 😀
ಇದಾದ ನಂತರ ಒಂದು ದಿನ ಹಸು ಕರೆಯುವಾಗ ( ಆಗ ನನಗೆ ನಾಲ್ಕು ಐದು ಲೀಟರ್ ಹಾಲು ಹಿಂಡುವುದು ಅಭ್ಯಾಸ ಆಗಿತ್ತು) ಒಂದು ದೊಡ್ಡ ಹಸುವಿಗೆ ನನ್ನ ‌ಮೆಲೆ ಏನು ಕೋಪ ಬಂತೋ ಗೊತ್ತಿಲ್ಲ.. ಹಾಲು ಕರೆಯುವಾಗ ಒದೆದು ನನ್ನನ್ನು ಬೀಳಿಸಿತು.ಆಗ ಸಹಜವಾಗಿ ನಾನು ನೋವಿನಿಂದ ಚೀತ್ಕರಿಸಿದೆ.ಪ್ರಸಾದ್ ಅಲ್ಲೇ ಹತ್ತಿರ ಇದ್ದವರು ಓಡಿ ಬಳಿಗೆ ಬಂದರು.ಹಸುವಿಗೆ ಗಾಬರಿ ಆಗಿ ಅದರ ಎರಡೂ ಕೈಗಳನ್ನು ನನ್ನ ಎದೆ ಮೆಲೆ ಮೆಟ್ಟಿ ನಿಂತಿತು.ಪ್ರಸಾದ್ ಅದನ್ನು ಹೋಗೋ ದೂಡಿ ನನ್ನನ್ನು ಎಬ್ಬಿಸಿ ಹೊರಗೆ ಕರೆತಂದರು..ನನಗೆ ತುಂಬಾ ನೋವಾಗಿತ್ತು..ಅದಕ್ಕಿಂತ ಹೆಚ್ಚಾಗಿ ಸೆಗಣಿ ಮೈಗೆ ಹತ್ತಿಕೊಂಡದ್ದು ತುಂಬಾ ಹೇಸಿಗೆ ಆಗಿತ್ತು.ಕೈಯಲ್ಲಿ ಇದ್ದ ಚೊಂಬು ಬಿದ್ದು ಹೋಗಿ ಕರೆದ ಹಾಲು ಹಟ್ಟಿಗೆ ಚೆಲ್ಲಿತ್ತು‌.
ನಾನು ಬಂದು ಸೀದಾ ಬೆಸ್ನೀರು ಕೊಟ್ಟಗಗೆ( ಸ್ನಾನದ ಮನೆ) ಹೊಕ್ಕು ಸ್ನಾನ ಮಾಡಿ ಬೇರೆ ಸೀರೆ ಉಟ್ಟುಕೊಂಡು ಬಂದೆ( ಮದುವೆಯಾದ ಮೇಲೆ ನನಗೆ ಸೀರೆ ಕಡ್ಡಾಯವಾಗಿತ್ತು )
ಹೊರಗೆ ಬರುವಾಗ ನನ್ನ ಬಗ್ಗೆ "  ಏನೂಂತ ಇವಳನ್ನು ಬೆಳೆಸಿದ್ದಾರೋ ಇವಳ ತಂದೆ ತಾಯಿ.. ಒಂದು ನಯವಿನಯ ಇಲ್ಲ.. ನೆಟ್ಟಗೆ ಒಂದು ದನ ಕರೆಯಲು( ಹಾಲು ಹಿಂಡಲು) ಬರುವುದಿಲ್ಲ.. ನಾಲ್ಕು ಲೀಟರ್ ಹಾಲು ಹಾಳಾಯ್ತು. ಹೀಗೆಮನೆಯನ್ನು ‌ಮುಳುಗಿಸಿ ಬಿಡ್ತಾಳೆ.ಬಹಳ ಉಷಾರಿ( ಜಾಣೆ) ಅಂತ ಹೊಗಳುತ್ತಾರೆ.ಆದರೆ ಏನೊಂದೂ ಮಾಡಲು ಸೋಮಾರಿತನ ,ಏನೂ ಬಾರದ ದಡ್ಡಿ ಇದು ,ಶಂಖ ಕೂಡ ಊದಲು ಬರುವುದಿಲ್ಲ" ಇತ್ಯಾದಿಯಾಗಿ ನನ್ನ ಬಗ್ಗೆ ಅತ್ತೆ ಮಾವ ಬೈಯುತ್ತಾ ಇರುವುದು ಕೇಳಿಸಿತು..
ಆ ಕ್ಷಣ ನಾನು ನಿರ್ಧರಿಸಿ ಬಿಟ್ಟೆ..ಮುಂದೆ ನಾನು ಓದಬೇಕು ಎಂದು.. ನನ್ನನ್ನು ಅದು ತನಕ ಯಾರೂ
ದಡ್ಡಿ ಎಂದು ಹೇಳಿರಲಿಲ್ಲ..ಇಷ್ಟಕ್ಕೂ ನನ್ನದೇ ವಯಸ್ಸಿನ ಅತ್ತಿಗೆ ವೀಣಾಳಿಗೆ( ಪ್ರಸಾದ ತಂಗಿಗೆ) ಏನೂ ಬರುತ್ತಾ ಇರಲಿಲ್ಲ..
ತಕ್ಷಣವೇ ನಾನು ಅತ್ತೆ ಮಾವನ ಎದುರು ಹೋಗಿ ಹೇಳಿದೆ.ನಾನು  ಇನ್ನು ಹಸು‌ ಕರೆಯುವುದಿಲ್ಲ..ಹುಲ್ಲು ತರುವುದಿಲ್ಲ..ನಾನು ಮುಂದೆ ಸಂಸ್ಕೃತ ಎಂಎ ಓದುತ್ತೇನೆ " ಎಂದು ಸ್ಥಿರವಾಗಿ ಹೇಳಿದೆ‌.
ಇಲ್ಲಿ ಕೆಲಸ ಮಾಡುದು ಯಾರು ? ಎಂದು ಮಾವ ಕೋಪದಿಂದ ಕೇಳಿದರು.ಯಾರು ಬೇಕಾದರೂ ಮಾಡಿ ನನಗೆ ಗೊತ್ತಿಲ್ಲ.. ನಾನು ಮುಂದೆ ಓದುತ್ತೇನೆ ಎಂದು ಹೇಳಿದೆ.ನಾವು ಓದಿಸಿದರೆ ತಾನೇ ನೀನು ಓದುವುದು ಎಂದು ಅತ್ತೆ ಹೇಳಿದರು.
ನಾನು ಪ್ರಸಾದ್ ಹತ್ತರ ಕಡಾ ಖಂಡಿತವಾಗಿ ನಾನು ಮುಂದೆ ಓದಲೇ ಬೇಕು..ನೀವು ಓದಿಸಿದರೆ ಸರಿ..ಇಲ್ಲವಾದಲ್ಲಿ ತಂದೆ ಮನೆಗೆ ಹೋಗಿ ಓದುತ್ತೇನೆ ಎಂದು ನಿರ್ಧಾರಾತ್ಮಕವಾಗಿ ಹೇಳಿದೆ.ಅದಾಗಲೇ ಪ್ರಸಾದ್ ಕೂಡ ಮತ್ತೆ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದ್ದರು‌.ಮಂಗಳೂರಿನಲ್ಲಿ ಒಂದು ವೆಟರ್ನರಿ ಮೆಡಿಕಲ್ ಶಾಪ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರು. ತೀರಾ ಕಡಿಮೆ (ಎಂಟು ನೂರು ರುಪಾಯಿ ಎಂದು ನೆನಪು) ಸಂಬಳ .ಈ ಸಂಬಳದಲ್ಲಿ ಬೇರೆ ಮನೆ ಬಾಡಿಗೆ ಹಿಡಿದು ಬದುಕಲು ಅಸಾಧ್ಯ ಎಂದು  ಮನೆ ಮಂದಿಗೆ ಮಾತ್ರವಲ್ಲ ನಮಗೂ ಗೊತ್ತಿತ್ತು.."ಇಷ್ಟು ಕಡಿಮೆ ಸಂಬಳದಲ್ಲಿ ಬೇರೆ ಮನೆ ಮಾಡಿ ಹೇಗೆ ಅವಳನ್ನು ಓದಿಸ್ತಾನೆ ಅವನು ? ಒಮ್ಮೆ ಮನೆ ಬಿಟ್ಟು ಹೋದರೆ ಮತ್ತೆ ಮನೆ ಸೇರಿಸುವುದಿಲ್ಲ " ಇತ್ಯಾದಿ ಮಾತುಗಳನ್ನು ನನಗೆ ಕೇಳುವ ಹಾಗೆ ಹೇಳುತ್ತಿದ್ದರು.
ಅಂತೂ ಇಂತೂ ಬಿಎಸ್ಸಿ ರಿಸಲ್ಟ್ ಬಂತು ,ಪಾಸಾಗಿದ್ದೆ ಆದರೆ ಎಂ ಎಸ್ಸಿಗೆ ಸೇರುವಷ್ಟು ಮಾರ್ಕ್ಸ್ ಇರಲಿಲ್ಲ.ಹಾಗಾಗಿ ಸಂಸ್ಕೃತ ಎಂಎ ಗೆ ಸೇರುವುದೆಂದು ಒಂದು ದಿನ  ನಿರ್ಧರಿಸಿ ಕಟೀಲಿಗೆ ಬಂದು ವಿಚಾರಿಸಿ ಹೋಗಿದ್ದೆ‌.ನನಗೆ ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದ ಕಾರಣ ಸೀಟು ಕೊಡುತ್ತೇನೆ,ಮಾರ್ಕ್ಸ್ ಕಾರ್ಡ್ ತಗೊಂಡು ಬಾ,ಎಂದು ಹೇಳಿ ಕೊನೆಯ ದಿನಾಂಕವನ್ನು ಅಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರು ಹೇಳಿದರು.
ಇತ್ತ ಮನೆಯಲ್ಲಿ ಅಘೋಷಿತ ಕರ್ಫ್ಯೂ..ನನ್ನನ್ನು ನೋಡಿದರೆ ಉಗ್ರಗಾಮಿಯನ್ನು ನೋಡಿದ ಹಾಗೆ ಮಾಡುತ್ತಿದ್ದರು.ಮನೆಗೆ ಬಂದ ನೆಂಟರುಗಳು ಕೂಡ ಗಾಯಕ್ಕೆ ಉಪ್ಪು ಹಚ್ಚಿ ಉರಿ ಹೆಚ್ಚಾಗುವಂತೆ ಮಾಡಿತ್ತಿದ್ದರು..ಇನ್ನೇನು ಮರುದಿನ ಎಂಎಗೆ ಸೇರಲು‌ ಕೊನೆಯ ದಿನ ಎಂದಾಗ ಹಿಂದಿನ ದಿನ ಪ್ರಸಾದ್ ಹತ್ತಿರ ಹಠ ಹಿಡಿದು ಎಂಎ ಗೆ ಸೇರುವ ಸಲುವಾಗಿ ಉಜಿರೆಗೆ ಹೋಗಿ ಮಾರ್ಕ್ಸ್ ಕಾರ್ಡ್ ತಂದೆ‌..ಮುಂದಿನದನ್ನು ಈ ಹಿಂದೆಯೇ ಬರೆದಿರುವೆ.
ಇದಾಗಿ ವರ್ಷ ಗಳು ಉರುಳಿದವು.ಒಮ್ಮೆ ಮನೆ ಬಿಟ್ಟು ಹೊರ ನಡೆದರೂ ಮತ್ತೆ ರಾಜಿಯಾಯಿತು.ನಾವು ಯಾವಾಗಲಾದರೂ ಬಂದು ಹೋಗುತ್ತಿದ್ದೆವು.ನಾನು ಹಠ ಹಿಡಿದು ಓದಿ ರ‍್ಯಾಂಕ್ ತೆಗದು ಕೆಲಸಕ್ಕೆ ಸೇರಿದಾಗ ಅತ್ತೆಯವರಿಗೆ ನನ್ನ ಬಗ್ಗೆ ಮೆಚ್ಚುಗೆ ಮೂಡಿತ್ತು.
ಹೀಗೆ ಒಂದು ಬಾರಿ ಮನೆ ಹೋಗಿದ್ದಾಗ ಮಾವನವರು ಕೈತೋಟದಲ್ಲಿ ಬೆಳೆಸಿದ ಗುಂಡಗಿನ ನಾಲ್ಕೈದು ಬದನೆಕಾಯಿಗಳನ್ನು ಕೊಯ್ದು ತಂದಿಟ್ಟಿದ್ದರು.ಆಗ ಅತ್ತಿಗೆ ವೀಣಾ( ಪ್ರಸಾದ್ ತಂಗಿ) "ಅಬ್ಬೆ ಇದರ ಸುಟ್ಟು ಹಾಕಿ ಗೊಜ್ಜಿ ಮಾಡುತ್ತೀರಾ" ( ಅಮ್ಮ ಇದನ್ನು ಸುಟ್ಟು ಬದನೆ ಗೊಜ್ಜು ಮಾಡುತ್ತೀರಾ?) ( ಪ್ರಸಾದ್ ಮನೆಯಲ್ಲಿ ಮಕ್ಕಳು ತಾಯಿಗೆ ಅಬ್ಬೆ ಎಂದು ಕರೆದು ಬಹುವಚನದಲ್ಲಿ‌ಮಾತನಾಡುತ್ತಿದ್ದರು) ಎಂದು ಕೇಳಿದಳು.ಆಗ ಅತ್ತೆಯವರು ನನಗೆ ಬದನೆ ಗೊಜ್ಜು ಮಾಡಲು ಸರಿಯಾಗಿ ಗೊತ್ತಿಲ್ಲ ಎಂದು ಹೇಳಿದರು.ಆಗ ಅಲ್ಲೇ ಇದ್ದ ನಾನು "ಗೊಜ್ಜು ಮಾಡಲು ನನಗೆ ಬರುತ್ತದೆ, ನಾನು ಮಾಡಲಾ ? ಎಂದು ಕೇಳಿದೆ.ಆಗ ಅತ್ತೆ ಒಪ್ಪಿದರು.ಉಳಿದವರೆಲ್ಲ ನನ್ನತ್ತ ಒಂದು ತಿರಸ್ಕಾರದ ನೋಟ ಬೀರಿ ಎದ್ದು ಹೋದರು‌.ಬೆಸ್ನೀರು ಕೊಟ್ಟಗೆಯ( ಸ್ನಾನದ ಮನೆ) ಹಿಂಭಾಗ ನೀರು ಬಿಸಿ ಮಾಡಲು ದೊಡ್ಡದಾದ ಒಲೆ ಇತ್ತು.ಅಲ್ಲಿ ನಿಗಿ ನಿಗಿ ಕೆಂಡ ಇತ್ತು.ಎರಡು ಬದನೆಕಾಯಿಗಳನ್ನು ತೊಳೆದು ಒರಸಿ ಕೆಂಡದಲ್ಲಿ ಸುಟ್ಟು ಸಿಪ್ಪೆ ತೆಗೆದು  ಹಿಸುಕಿ,ಉಪ್ಪು,ಹುಳಿ,ಸ್ವಲ್ಪ ಬೆಲ್ಲ ಸ್ವಲ್ಪ ನೀರು ಹಾಕಿ ಕುದಿಸಿದೆ‌.ಹದ ಬಂತು ಅನಿಸಿದಾಗ ಬೆಳ್ಳುಳ್ಳಿ ಒಗ್ಗರಣೆ ಹಾಕಿದೆ ಎರಡು ಮೆಣಸು ಹುರಿದು ಹಿಸುಕಿ ಹಾಕಿ ಕದಡಿದೆ,ಘಮ್ ಅಂತ ಪರಿಮಳ ಬಂದಾಗ ಗೊಜ್ಜು ಸರಿಯಾಗಿ ಎಂದೆನಿಸಿ ಮುಚ್ಚಿ ಇಟ್ಟೆ.
ಮಧ್ಯಾಹ್ನ ಎಲ್ಲರೂ ಊಟಕ್ಕೆ ಕುಳಿತರು.ಗೊಜ್ಜು ನನಗೆ ನನಗೆ ಬೇಡ ಎಂದು ಮನೆ ಮಂದಿ ಹೇಳಿದರೂ ರುಚಿ ನೋಡಿ ಎಂದು ಅತ್ತೆ ಬಲವಂತದಿಂದ ಎಲ್ಲರ ಬಟ್ಟಲಿಗೂ ಒಂದೊಂದು ಚಮಚದಷ್ಟು ಬಳಸಿದರು.ಒಬ್ಬೊಬ್ಬರೇ ಸ್ವಲ್ಪ ನೆಕ್ಕಿ ನೋಡಿ‌ ಮತ್ತೆ ಹಾಕಿ ಕೊಂಡರು‌.ಬದನೆ ಗೊಜ್ಜು ನನಗೆ ಬಹಳ ಇಷ್ಟ ನಾನು ಹಾಕಿಕೊಂಡು ಉಂಡೆ,ಅತ್ತೆ ರುಚಿ ನೋಡಿ " ತುಂಬಾ ಲಾಯ್ಕ ಅಯಿದು( ತುಂಬಾ ಚೆನ್ನಾಗಿದೆ) ಎಂದು ನನ್ನ ಕೆಲಸದ ಬಗ್ಗೆ ಮೊದಲ ಮತ್ತು ಕನೆ ಬಾರಿಗೆ ಮೆಚ್ಚುಗೆಯ ಮಾತನಾಡಿದ್ದರು...ಈವತ್ತು ತೇಜಸ್ವಿನಿ ಪೇಸ್ ಬುಕ್ ನಲ್ಲಿ ಬದನೆ ಗೊಜ್ಜು ಮಾಡಿದ ರೀತಿಯನ್ನು ವಿವರಿಸಿ ಪೇಸ್ ಬುಕ್ ನಲ್ಲಿ ಹಾಕಿದ್ದನ್ನು ಓದುತ್ತಲೇ ನನಗೆ ಜೀವನದಲ್ಲಿ ಒಂದೇ ಒಂದು ಬಾರಿ ಅತ್ತಯವರ ಕೈಯಿಂಂದ ಪಡೆದದ್ದು ನೆನಪಾಗಿ ಇಷ್ಟೆಲ್ಲ ಬರೆದೆ 

ಬದುಕ ಬಂಡಿಯಲಿ : ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ‌ಮೇಲಧಿಕಾರಿಯಾಗಿ ಬರಲೆಂದು ಆಶಿಸುವೆ


ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ಮೇಲಧಿಕಾರಿಯಾಗಿ ಬಂದರೇ..

ಹೌದು ಒಂದೊಮ್ಮೆ ನನ್ನ ಆಶಯ ಈಡೇರಿದರೆ ಆ ಕ್ಷಣದ ನನ್ನ ಸಂತಸವನ್ನು ಅಳೆಯಲು ಯಾವ ಮಾಪಕವೂ ಇರಲಾರದು..
ನಮ್ಮ ಕಾಲೇಜಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಾ ಇದೆ.ನಮಗೆ ಮೇ ಎರಡರಿಂದ ಕಾಲೇಜು ಶುರುವಾಗಿದ್ದು ಕಾಲೇಜಿಗೆ ಬಂದಾಗ ಚುರುಕಾದ ಈ ಮಕ್ಕಳನ್ನು ನಮ್ಮ ಕಾಲೇಜು ವಠಾರದಲ್ಲಿ ನೋಡಿದೆ.
ಕಟ್ಟಡದ ಗಾರೆ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಖಳು ಇವರು.ದೊಡ್ಡ ಮಕ್ಕಳು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದರು.ಶಾಲೆ ಶುರುವಾದಾಗ ಇವರು ಶಾಲೆಗೆ ಹೋಗಬಹುದು ಎಂದು ಭಾವಿಸಿದ್ದೆ.ನಾವು ಉಪನ್ಯಾಸಕರು ಮುದ್ದಾದ ಈ ಮಕ್ಕಳಿಗೆ ನಾವು ತಂದಿದ್ದ ತಿಂಡಿ ತಿನಸು ಹಣ್ಣು ಬಿಸ್ಕೆಟ್ ಸ್ವಲ್ಪ ಭಾಗ ಕೊಡುತ್ತಾ ಇದ್ದೆವು.ದೊಡ್ಡ ಹುಡುಗಿಯರು ಸಣ್ಣವರಿಗೆ ತಿನ್ನಿಸಿ ತಾವೂ ತಿಂದು ಖುಷಿ ಪಡುವುದನ್ನು ನೋಡುವುದೇ ನಮಗೆ ಸಂಭ್ರಮ.ದೊಡ್ಡ ಮಕ್ಕಳೆಂದರೆ ಅಲ್ಲಿರುವವರಲ್ಲಿ ದೊಡ್ಡವರು ಅಷ್ಟೇ, ಇನ್ನೂ ಹತ್ತು ಹನ್ನೆರಡು ವರ್ಷದ ಪೋರಿಯರು ಇವರು.
ಮೇ ಇಪ್ಪತ್ತನಾಲ್ಕರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡವು.
ಈ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಚಿಕ್ಕವರನ್ನು ನೋಡಿಕೊಂಡು ಆಟವಾಡಿಕೊಂಡು ಇದ್ದರು.ಆಗ ನಾನು ಮಕ್ಕಳಲ್ಲಿ ನೀವು ಶಾಲೆಗೆ ಹೋಗುವುದಿಲ್ಲವೇ ಎಂದು ವಿಚಾರಿಸಿದೆ.ತಂಗಿಯರನ್ನು ( ಚಿಕ್ಕ ಮಕ್ಕಳು) ನೋಡಿಕೊಳ್ಳಲು ಯಾರೂ ಇಲ್ಲ ಹಾಗಾಗಿ ಶಾಲೆಗೆ ಹೋಗುತ್ತಾ ಇಲ್ಲ ಎಂದು ತಿಳಿಸಿದರು.ಇವರು ಕಳೆದ ವರ್ಷದ ತನಕ ದೂರದ ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ಓದಿದ್ದು ದೊಡ್ಡ ಹುಡುಗಿಯರು ಆರನೇ ತರಗತಿ ಪಾಸ್ ಆಗಿದ್ದರು. ಚಿಕ್ಕವಳು ಒಂದನೇ ತರಗತಿ ಓದಿದ್ದಳು.ಇನ್ನಿಬ್ಬರು ಒಂದೆರಡು ವರ್ಷದ ಕೈಗೂಸುಗಳು.
ಚಿಕ್ಕವರನ್ನು ನೋಡಿಕೊಳ್ಳುವುದಕ್ಕಾಗಿ ಇವರ ಓದು ನಿಂತರೆ ಹೇಗೆ ? ಏನು ಮಾಡುವುದೆಂದು ಯೋಚಿಸಿದೆ‌.ನಮ್ಮ ಕಾಲೇಜಿಗೆ ಸೇರಿದಂತೆ ಹೈಸ್ಕೂಲ್ ಮತ್ತು ಬಿ ಆರ್ ಸಿ ಕಛೇರಿ ಇದೆ. ನಾನು ಮತ್ತು ನಮ್ಮ ಕಾಲೇಜು ಉಪನ್ಯಾಸಕರಾದ ಶ್ರೀಶ ಮೇಡಂ ಮತ್ತು ಅನಿತಾ ಮೇಡಂ   ಅಲ್ಲಿ ಹೋಗಿ ಬಿಆರ್ ಸಿ ಅಧಿಕಾರಿಗಳಾದ ನರಸಿಂಹಯ್ಯ ಅವರಿಗೆ ಈ ಬಗ್ಗೆ ತಿಳಿಸಿ ಈ ಮಕ್ಕಳ ಓದಿಗೆ ಏನಾದರೂ ವ್ಯವಸ್ಥೆ ಮಾಡುವಂತೆ ಕೋರಿದೆವು.ಅವರು ತಕ್ಷಣವೇ ಅಲ್ಲಿನ ಶಿಕ್ಷಕರಾದ ಲೋಕೇಶ್ ಅವರನ್ನು ಕಳುಹಿಸಿಕೊಟ್ಟರು ‌.ಅವರು  ಬಂದು ಮಕ್ಕಳಲ್ಲಿ ಮಾತನಾಡಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವರ ಹೆತ್ತವರಿಗೆ ತಿಳುವಳಿಕೆ ನೀಡಿದರು‌.ಈ ಮಕ್ಕಳ ಹೆತ್ತವರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲು ಒಪ್ಪಿದ್ದಾರೆ.ಚಿಕ್ಕ ಮಕ್ಕಳನ್ನು ಅಂಗನವಾಡಿಗೆ ಸೇರಿಸುವಂತೆ ಲೋಕೇಶ್ ಅವರು ತಿಳಿಸಿದರು.
ಈ ಮಕ್ಕಳಲ್ಲಿ ಎಲ್ಲರೂ ಅಥವಾ ಕೊನೆ ಪಕ್ಷ ಒಬ್ಬರು ಓದಿ ಮುಂದೆ  ಐಎಎಸ್ ಮಾಡಿ ನಮ್ಮ ಮೇಲಧಿಕಾರಿಯಾಗಿ ಬಂದರೆ ಹೇಗಾಗಬಹುದು ಎಂದು ಊಹಿಸಿ ಸಂಭ್ರಮಿಸಿದೆ‌.ಈ ಮಕ್ಕಳು ನಮ್ಮ ಆಶಯದಂತೆ ಓದಿ ಮುಂದೆ ಐಎಎಸ್ ಐಪಿಎಸ್ ಅಧಿಕಾರಿ ಗಳಾಗಲಿ ಎಂದು ಹಾರೈಸುವೆ
Siri Reddy Anitha G Anu Shobha Lekhana Manjula R Prasad