Monday, 19 February 2018

ದೊಡ್ಡವರ ದಾರಿ 50 ಅಪಾರ ಮಾನವೀಯತೆಯ ಮಂಜುನಾಥ್


ದೊಡ್ಡವರ ದಾರಿ 50 ಅಪಾರ ಮಾನವೀಯತೆಯ ಸಹೃದಯಿ ಮಂಜುನಾಥ್
ಹತ್ತು ಹನ್ನೆರಡು ದಿನಗಳ ಮೊದಲು ಇದ್ದಕ್ಕಿದ್ದಂತೆ ಎಚ್ಚರ ತಪ್ಪಿ ಬಿದ್ದು ವಿಕ್ರಮ್ ಆಸ್ಪತ್ರೆಗೆ ದಾಖಲಾಗ ಬೇಕಾಯಿತು..ಅಲ್ಲಿ ಒಂದು ದಿನ ಇದ್ದು ನಾನಾ ಪರೀಕ್ಷೆಗಳನ್ನು ಮಾಡಿಸಿ ಡಿಸ್ಚಾರ್ಜ್ ಆಗಿ ಮನೆಗೆ ಬರುವಾಗ ವಿಪರೀತ ಮೈಕೈ ನೋವು.ಅದರಲ್ಲಂತೂ ಕಾಲು ಒಂದು ಹೆಜ್ಜೆ ಎತ್ತಿಡಲಾಗದಷ್ಟು ನೋವು.( ಈಗ ಗುಣ ಅಗಿದೆ)
ಪ್ರಥಮ ಪಿಯುಸಿ ಪರೀಕ್ಷೆಗಳು ಆರಂಭವಾದ ಕಾರಣ ರಜೆ ಹಾಕಿ ಮನೆಯಲ್ಲಿ ಕೂರುವಂತೆ ಇರಲಿಲ್ಲ. ಹಾಗಾಗಿ ಬಾಡಿಗೆ ಕಾರು ಹಿಡಿದು ಕಾಲೇಜಿಗೆ ಹೋದೆ.ಹೇಗೋ ವಿದ್ಯಾರ್ಥಿಗಳ ಸಹಾಯದಿಂದ ಕಾರು ಇಳಿದೆ.ಹೇಗೋ ಏನೋ ಬಲು ಕಷ್ಟದಿಂದ ರೂಮ್ ಸುಪರ್ವಿಶನ್ ಕೆಲಸ ಮಾಡಿದೆ‌
ಅಷ್ಟಾಗುವಾಗ ಹಿಂದೆ ಬರುವುದು ಹೇಗೆ ಎಂಬ ಸಮಸ್ಯೆ ಕಾಡಿತು‌.ಅಲ್ಲಿ ಜಿಯೋ ನೆಟ್ವರ್ಕ್ ದುರ್ಬಲ ಇರುವ ಕಾರಣ ಓಲಾ ,ಉಬರ್ ಗಳು ಸಂಪರ್ಕಕ್ಕೆ ಸಿಗುವುದಿಲ್ಲ.
ನಮ್ಮ ಕಾಲೇಜಿನಿಂದ ಬಸ್ ಸ್ಟಾಂಡ್ ಗೆ ಸುಮಾರು ಮುಕ್ಕಾಲು ಕಿಲೋ ಮೀಟರ್ ದೂರದ ಹಾದಿ ಇದೆ‌.ಇಲ್ಲಿ ಅಟೋ ಕೂಡ ಸಿಗುವುದಿಲ್ಲ.
ನಮ್ಮ ಕಾಲೇಜಿನ ಸಹೋದ್ಯೋಗಿಗಳಲ್ಲಿ ಅನೇಕರು ಬೈಕ್ ಸ್ಕೂಟರ್ ಮೇಲೆ ಬರುವವರಿದ್ದಾರೆ‌.ಅವರಲ್ಲಿ ಕೇಳಿದರೆ ಬಸ್ ಸ್ಟಾಂಡಿಗೆ ಬಿಡುತ್ತಾರೆ.ಆದರೆ ನನಗೆ ಬೈಕ್ ಏರಲು ಸಾಧ್ಯವಾಗದಷ್ಟು ನೋವು.
ಇನ್ನು ನಮ್ಮ ಕಾಲೇಜಿಗೆ ಕಾರಿನಲ್ಲಿ ಬರುವವರು ಇಬ್ಬರು ಉಪನ್ಯಾಸಕರು ಮಾತ್ರ‌.ಒಬ್ಬರು ಅನಿತಾ ಮೇಡಂ ಸಮಾಜ ಶಾಸ್ತ್ರ ಉಪನ್ಯಾಸಕಿ. ಇವರು ದೊಡ್ಡ ಬಳ್ಳಾಪುರದಿಂದ ಬರುತ್ತಾರೆ‌.ಅವರಲ್ಲಿ ನಾನು ಬಸ್ ಸ್ಟಾಂಡಿಗೆ ಬಿಡುತ್ತೀರಾ ಎಂದು ಕೆಳಿದೆ‌.ನಾನು ಬೆಂಗಳೂರು ಕಡೆಗೆ ಬರಬೇಕಾಗಿದ್ದು ಅವರು ಹೋಗುವ ಮಾರ್ಗ  ಮತ್ತು ಬಸ್ ಸ್ಟಾಂಡ್ ವಿರುಧ್ಧ ದಿಕ್ಕಿನಲ್ಲಿ ಇದೆ .ಅಲ್ಲದೆ ಅಲ್ಲಿ ರಸ್ತೆ ರಿಪೇರಿ ನಡೆಯುತ್ತಿದ್ದು ಸುತ್ತಾಕಿ ಬರಬೇಕಾಗಿತ್ತು‌.
ಇನ್ನೊಬ್ಬರು ಕಾರಿನಲ್ಲಿ ಬರುವವರು ಮಮತಾ ಮೇಡಂ,ಅವರನ್ನು ಅವರ ಪತಿ ಮಂಜುನಾಥ್ ಕಾರಿನಲ್ಲಿ ಕರೆ ತಂದು ಬಿಟ್ಟು ಮತ್ತೆ ಕರೆದುಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ನಿಯೋಜನೆ ಮೇರೆಗೆ ನಮ್ಮ ಕಾಲೇಜಿಗೆ ಜೀವ ಶಾಸ್ತ್ರ ಉಪನ್ಯಾಸಕಿಯಾಗಿ ಬಂದವರು‌ ಅವರು. ಹಾಗಾಗಿ ನನಗೆ ಅವರಲ್ಲಿ ಅಷ್ಟಾಗಿ ಸಲುಗೆ ಇರಲಿಲ್ಲ. ಆದರೆ ಅನಿತಾ ಮೇಡಂ ಅವರಲ್ಲಿ ಮಾತನಾಡುವಾಗ ಅವರೂ ಕೂಡ ಅಲ್ಲಿಯೇ ಇದ್ದು,ಅವರು ನನ್ನನ್ನು ಬಸ್ ಸ್ಟಾಂಡಿಗೆ ಬಿಡುತ್ತೇನೆ ಎಂದು ಹೇಳಿದರು.
ಹಾಗೆ ಅವರ ಜೊತೆ ಕಾರು ಹತ್ತಿ ಹೊರಟೆ‌.ಅವರ ಪತಿ ಮಂಜುನಾಥ್ ಕಾರು ಚಾಲನೆ ಮಾಡುತ್ತಿದ್ದರು. ಅವರು ಮಿಲಿಟರಿ ರಿಟೈರ್ಡ್ ಯೋಧರು‌.ಪ್ರಸ್ತುತ ಬಿಎಂಟಿಸಿ ಡಿಪ್ಪೋ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಹೋಗುವ ದಾರಿಯಲ್ಲಿ ಅವರ‌ಮನೆ ತಾವರೆಕೆರೆ ಕಡೆ ಇದೆ ಅಂತ ಗೊತ್ತಾಯಿತು. ಅಲ್ಲಿಂದ ನಮ್ಮ ಮನೆ ಕಡೆಗೆ ಸಾಕಷ್ಟು ಬಸ್ಸುಗಳಿವೆ ಹಾಗಾಗಿ ನಾನು ನನ್ನನ್ನು ತಾವರೆಕೆರೆಯಲ್ಲಿ ಬಿಡಲು ಹೇಳಿದೆ‌.
ತಾವರೆಕೆರೆ ಬಂದಾಗ ನನಗೆ ಕಾಲು ನೋವಿನಲ್ಲಿ ಇಳಿಯಲು ಸಾಧ್ಯವಾಗದೆ ಒದ್ದಾಡಿದೆ‌.ಆಗ ಅವರು ಕಾರು ನಿಲ್ಲಿಸಿ ಇಳಿದು ಬಂದು ನನಗೆ ಕಾರಿನಿಂದ ಇಳಿಯಲು ಸಹಾಯ ಮಾಡಿದರು.ಅದರಲ್ಲಿ ಅವರ ಪರಿಚಯದ ಚಾಲಕರಿದ್ದರು
ನಂತರ  ಬಿಎಂಟಿಸಿ ಬಸ್ ಗೆ ಕೈ ಹಿಡಿದು ನಿಲ್ಲಿಸಿದರು.ನಾನು ಬಸ್ ಹತ್ತುವ ತನಕ ಇದ್ದು ಬಸ್ ಹೊರಟ ಮೇಲೆ ಕಾರು ಹತ್ತಿ ಮನೆ ಕಡೆ ತಿರುಗಿಸಿದರು.
ಸ್ವಂತ ಅಣ್ಣ ತಮ್ಮಂದಿರು  ಕೂಡ ತನ್ನ ಅಕ್ಕ ತಂಗಿಯರನ್ನು ಈ ರೀತಿಯಲ್ಲಿ ಜಾಗ್ರತೆಯಿಂದ ಕರೆದೊಯ್ಯುವುದು ಇಂದಿನ ಕಾಲದಲ್ಲಿ ಅಪರೂಪ.( ನನ್ನ ಅಣ್ಣ ತಮ್ಮಂದಿರಿಗೆ ನನ್ನ ಬಗ್ಗೆ ಇಂತಹ ಕಾಳಜಿ ಇದೆ ) ಹಾಗಿರುವಾಗ ಅಷ್ಟೇನೂ ಪರಿಚಿತಳಲ್ಲದ ನನ್ನ ಬಗ್ಗೆ ಅವರು ತೋರಿದ ಮಾನವೀಯತೆ ನಿಜಕ್ಕೂ ಅನುಸರಣೀಯವಾದುದು.ಒಂದೇ  ಕಡೆಗೆ  ಹೋಗುವಾಗ ಕೂಡ ತಮ್ಮ ಸಂಬಂಧಿಕರನ್ನು,ಸಹೋದ್ಯೋಗಿಗಳನ್ನು ಜೊತೆಗೆ ಬನ್ನಿ ಎಂದು ಕರೆಯುವ ಸೌಜನ್ಯತೆ ಇಲ್ಲದೆ ಇರುವ ಅನೇಕರನ್ನು ನಾವು ಕಾಣುತ್ತೇವೆ.ಅಂತಹವರ ನಡುವೆ ಮಂಜುನಾಥ್ ವಿಶಿಷ್ಟರಾಗಿ ನಿಲ್ಲುತ್ತಾರೆ.ನಮ್ಮ ಕಾಲೇಜು ಉಪನ್ಯಾಸಕಿ‌ಮಮತಾ ಕೂಡ ಅವರಿಗೆ ಅನುರೂಪವಾದ ಮಡದಿ.ಅಂತಹದ್ದೇ ಮಾನವೀಯ ಅಂತಃಕರುಣೆಯ ವ್ಯಕ್ತಿತ್ವ ದವರು © ಡಾ‌.ಲಕ್ಷ್ಮೀ ಜಿ ಪ್ರಸಾದ

Sunday, 28 January 2018

ಬದುಕೆಂಬ ಬಂಡಿಯಲಿ ...3 ಕಾಲವನ್ನು ಕಂಡವರಿಲ್ಲ - ಡಾ.ಲಕ್ಷ್ಮೀ ಜಿ ಪ್ರಸಾದ












ಕಾಲವನ್ನು ಕಂಡವರಿಲ್ಲ..ಸಂಪತ್ತು ಅಧಿಕಾರ ಇದ್ದಾಗ ಕೈಲಾದ ಸಹಾಯ ಮಾಡಬೇಕು..ಏನಂತೀರಿ?

ಇಂದು ಉತ್ತರ ಪತ್ರಿಕೆ ತಿದ್ದುತ್ತಾ ಬಿಗ್ ಬಾಸ್  ಅಂತಿಮ ಕಾರ್ಯಕ್ರಮ ನೋಡುತ್ತಾ ಇದ್ದೆ.ಅದರಲ್ಲಿ ಗೆದ್ದವರಿಗೆ 50 ಲಕ್ಷ ರು ಬಹುಮಾನ ಅಂತ ಗೊತ್ತಾಯಿತು. ಅಲ್ಲಿ ಅಂತಿಮವಾಗಿ ಆಯ್ಕೆಯಾದ ಇಬ್ಬರಲ್ಲಿ ಒಬ್ಬರಾದ ದಿವಾಕರ್ ಅವರಿಗೆ ಇದು ದೊಡ್ಡ ಕೊಡುಗೆಯೇ ಅಗಬಲ್ಲದು. ಆದರೆ ಬಿಗ್ ಬಾಸ್ ಎಂಬುದು ಒಂದು ವ್ಯಕ್ತಿತ್ವದ ಸ್ಪರ್ಧೆ.ಅದರಲ್ಲಿ ಯಾರು ಉತ್ತಮವಾಗಿ ನಿರ್ವಹಣೆ ಮಾಡಿರುತ್ತಾರೋ ಅವರೇ ಗೆಲ್ಲಬೇಕು.ಸ್ಪರ್ಧೆಯಲ್ಲಿ ಸ್ಪರ್ಧಿಯ ಹಿನ್ನೆಲೆ ಮುಖ್ಯವಾಗಬಾರದು.
ಬಹುಶಃ ಚಂದನ್ ಶೆಟ್ಟಿ ನಿರ್ವಹಣೆ ಚೆನ್ನಾಗಿದ್ದಿರ ಬೇಕು( ನಾನು ಒಂದೇ ಒಂದು ಎಪಿಸೋಡ್ ಕೂಡ ನೋಡಿಲ್ಲ, ಈವತ್ತು ಮಾತ್ರ ನೋಡಿದ್ದು ) ಹಾಗಾಗಿ ಚಂದನ್ ಶೆಟ್ಟಿ ಗೆದ್ದಿದ್ದಾರೆ.
ವಿನ್ನರ್ ಗೆ 50 ಲಕ್ಷ ರುಪಾಯಿ ಬಹುಮಾನ ಇದ್ದಾಗ ರನ್ನರ್ ಗೆ ಕನಿಷ್ಠ ಪಕ್ಷ 25 ಲಕ್ಷ ರುಪಾಯಿ ನಗದು ಬಹುಮಾನ ಇಡಬೇಕಿತ್ತು ಎಂದೆನಿಸಿತು ನನಗೆ.ಮತ್ತು ದಿವಾಕರ್ ಗೆ ಅದು ಆರ್ಥಿಕ ಬಲವಾಗಿ ಬಿಗ್ ಬಾಸ್ ಗೆ ಬಂದದ್ದಕ್ಕೆ ಒಂದು ಕೊಡುಗೆಯಾಗಿರುತ್ತಿತ್ತು.
ಅದಿರಲಿ
ನಾನು ಹೇಳ ಹೊರಟಿದ್ದು ಅದಲ್ಲ .ಸುಮಾರು ಹದಿನೈದು ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ವನ್ನು ಅಮಿತಾ ಬಚ್ಚನ್ ನಡೆಸಿಕೊಡುತ್ತಾ ಇದ್ದರು.ಅದರಲ್ಲಿ ಒಬ್ಬ   ಮನೆ ಮನೆಗೆ  ಬಟ್ಟೆಯ ವ್ಯಾಪಾರಿ( ಕಟ್ಟನ್ನು ಹೊತ್ತುಕೊಂಡು ಹೋಗಿ ವ್ಯಾಪಾರ ಮಾಡುವ ವ್ಯಕ್ತಿ ಎಂದು ನೆನಪು)  14 ಪ್ರಶ್ನೆಗಳಿಗೆ ಉತ್ತರಿಸಿ 50 ಲಕ್ಷ ಗೆದ್ದಿದ್ದರು.15 ನೇ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹೊರಬಂದರೆ 50 ಲಕ್ಷ ರುಪಾಯಿ ಅವರಿಗೆ ಸಿಗುತ್ತದೆ.15 ನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿದರೆ ಅವರಿಗೆ ಕೇವಲ 3.50 ಲಕ್ಷ ಮಾತ್ರ ಸಿಗುತ್ತದೆ. ಈ ಹಂತದಲ್ಲಿ ಅವರಿಗೆ ಹದಿನೈದನೇ ಪ್ರಶ್ನೆಯನ್ನು ಕೇಳಿದರು.ಇವರು ಏನನ್ನೋ ಉತ್ತರಿಸಿದರು‌.ಅದನ್ನು ನಿಶ್ಚಿತ ಗೊಳಿಸುವ ಮೊದಲು ಅಮಿತಾ ಬಚ್ಚನ್ ಅವರು ಈಗ ಕೂಡ ನಿಮಗೆ ಸ್ಪರ್ಧೆಯಿಂದ ಹೊರಬಂದು 50 ಲಕ್ಷ ರುಪಾಯಿ ಪಡೆದುಕೊಳ್ಳಬಹುದು.ಸ್ಪರ್ಧೆಯಲ್ಲಿ ಮುಮದುವರಿದರೆ ಉತ್ತರ ಸರಿಯಾಗಿದ್ದರೆ ಮಾತ್ರ ಒಂದು ಕೋಟಿ ರುಪಾಯಿ ಸಿಗುತ್ತದೆ. ಉತ್ತರ ತಪ್ಪಾದರೆ  ಕೇವಲ ಮೂರೂವರೆ ಲಕ್ಷ ಮಾತ್ರ ಸಿಗುತ್ತದೆ. ಒಮ್ಮೆ ಆಲೋಚಿಸಿ ನೋಡಿ ಎಂದು ನುಡಿದರು.ಆಗ ಆ ಸ್ಪರ್ಧಿ ಸ್ಪರ್ದೆಯಿಂದ ಹೊರ ಸರಿದರು.ನಂತರ ಅವರು ಕೊಟ್ಟ ಉತ್ತರ ಸರಿಯಿದೆಯೇ ಎಂದು ನೋಡಿದಾಗ ಅದು ತಪ್ಪಾಗಿತ್ತು‌.ಒಂದೊಮ್ಮೆ ಅವರು ಸ್ಪರ್ಧೆಯಿಂದ ಹಿಂದೆ ಸರಿಯದೆ ಇರುತ್ತದ್ದರೆ ಅವರು 46.5 ಲಕ್ಷ ರುಪಾಯಿ ಗಳನ್ನು ಕಳೆದುಕೊಳ್ಳುತ್ತಿದ್ದರು.ಅಮಿತಾಭ್ ಸಲಹೆಯನ್ನು ಸ್ವೀಕರಿಸಿ ಅವರು 50 ಲಕ್ಷ ರುಪಾಯಿಗಳನ್ನು ಪಡೆದುಕೊಂಡಿದ್ದರು.ಆಗ ಅವರು ಮತ್ತು ಅವರ ಮಡದಿ ವೇದಿಕೆಯಲ್ಲಿ ಅಮಿತಾಭ್ ಕಾಲು ಮುಟ್ಟಿ ನಮಸ್ಕರಿಸಿದ್ದರು.
ಈ ಬಗ್ಗೆ ಮರುದಿನ ಚಿನ್ನಯ ಶಾಲೆಯಲ್ಲಿ ( ಆಗ ನಾನು ಅಲ್ಲಿ ಸಂಸ್ಕೃತ ಶಿಕ್ಷಕಿ ಆಗಿದ್ದೆ) ನಾನು, ನಮ್ಮ ಗಣಿತದ ಮೇಷ್ಟ್ರು ಕೃಷ್ಣ ಉಪಾಧ್ಯಾಯ ಮೊದಲಾದವರು ಚರ್ಚಿಸಿದೆವು‌ಅವರಿಗೆ ಅಷ್ಟು ದೊಡ್ಡ ಮೊತ್ತವನ್ನು ಉಳಿಸಿಕೊಟ್ಟ,ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಹಿರಿಯರಾದ ಅಮಿತಾ ಬಚ್ಚನ್ ಕಾಲಿಗೆ ಬಿದ್ದು ನಮಸ್ಕರಿಸಿದ್ದರಲ್ಲಿ ನನಗೇನೂ ತಪ್ಪು ಕಂಡಿಲ್ಲ ಎಂದು ಹೇಳಿದೆ.ಆಗ 50 ಲಕ್ಷ ರುಪಾಯಿ ಎಂದರೆ ನನ್ನ ಜೀವಮಾನ ದುಡಿದರೂ ನನಗೆ ಅಷ್ಟು ದೊಡ್ಡ ಮೊತ್ತ ಗಳಿಸಲು ಅಸಾಧ್ಯ ಎಂದು ನಾನು ಭಾವಿಸಿದ್ದೆ.ಅದನ್ನು ಪಕ್ಕದಲ್ಲೇ ಕುಳಿತಿದ್ದ ಕೃಷ್ಣ ಉಪಾಧ್ಯಾಯರಲ್ಲೂ ಹೇಳಿದ್ದೆ.ಆಗ ಅವರು ಕೂಡ ಅದನ್ನು ಹೌದೆಂದು ಒಪ್ಪಿಕೊಂಡಿದ್ದರು‌.ಆಗ ನನ್ನ ತಿಂಗಳ ಸಂಬಳ ಮೂರು ಸಾವಿರ ಇತ್ತು.ವರ್ಷಕ್ಕೆ ಮೂವತ್ತಾರು ಸಾವಿರ. ಅದರಂತೆ ಮೂವತ್ತು ವರ್ಷಗಳ ಕಾಲ ದುಡಿದರೆ ಸುಮಾರು ಹತ್ತು ಹನ್ನೊಂದು ಲಕ್ಷ ರುಪಾಯಿ ಅಗುತ್ತಾ ಇತ್ತು‌ಹಾಗಾಗಿ ಐವತ್ತು ಲಕ್ಷದ ದುಡ್ಡನ್ನು ಊಹೆ ಮಾಡುವುದೂ ನಮಗೆ ಅಸಾಧ್ಯ ಆಗಿತ್ತು.
ಆದರೆ ಕಾಲ ಒಂದೇ ರೀತಿ ಇರುವುದಿಲ್ಲ. ಪ್ರಸ್ತುತ ನನ್ನ ವೇತನ ಲೆಕ್ಕ ಹಾಕಿದರೆ  ಏಳೆಂಟು ವರ್ಷದಲ್ಲಿ  50 ಲಕ್ಷ ತಲುಪಬಹುದು. ನಿವೃತ್ತಿ ಆಗುವ ತನಕದ ವೇತನ ಒಟ್ಟು  ಲೆಕ್ಕ ಹಾಕಿದರೆ ಒಂದು ಎರಡು ಕೋಟಿ ಆಗಬಹುದು.ಈಗಾಗಲೇ ನಾನು ಗಳಿಸಿದ ವೇತನ ಲೆಕ್ಕ ಹಾಕಿದರೆ ಒಟ್ಟು ಮೊತ್ತ ಮೂವತ್ತು ಲಕ್ಷ ದಷ್ಟು ಆಗಿರಬಹುದು .ಹಾಗಂತ ಅದ್ಯಾವುದೂ ಉಳಿದಿಲ್ಲ .ಅದು ಬೇರೆ ವಿಚಾರ.
ಈಗ ಕೃಷ್ಣ ಉಪಾಧ್ಯಾಯರು ಮಂಗಳೂರಿನ ಮಧುಸೂದನ ಕುಶೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ನನಗಿಂತ ಹೆಚ್ಚಿನ ವೇತನ ಅವರಿಗಿರಬಹುದು .ದಿವಾಕರ್ ಕೂಡ ಮುಂದೊಂದು ದಿನ ಕೋಟ್ಯಧೀಶ ಆಗಬಹುದು.
ಹಾಗಾಗಿ ಒಂದು ಮಾತು ಹೇಳಬಯಸುವೆ.ಕಾಲವನ್ನು ಕಂಡವರಿಲ್ಲ ಆಳು ಅರಸಾಗಬಹುದು.ಅರಸ ಆಳಾಗಬಹುದು.ದುಡ್ಡು ಅಧಿಕಾರ ಶಾಶ್ವತವಲ್ಲ.ಇವುಗಳು ಇದ್ದಾಗ ನಾಲ್ಕು ಜನರಿಗೆ ಕೈಲಾದ ಸಹಾಯ ಮಾಡಬೇಕು. ಕೊಡುವುದರಲ್ಲಿ ಕೂಡ ತೃಪ್ತಿ ಕಾಣಬೇಕು.ಆಗಲೇ ಬದುಕಿಗೊಂದು ಸಾರ್ಥಕತೆ ಉಂಟಾಗುತ್ತದೆ
ಕಾಲ ಒಂದೇ ತರನಾಗಿ ಇರುವುದಿಲ್ಲ. ನಾನು ಚಿನ್ಮಯ ಶಾಲೆ ಶಿಕ್ಷಕಿ ಆಗಿದ್ದಾಗ ಮಂಗಳೂರು ಸಂಸ್ಕೃತ ಸಂಘ ಮಂಗಳೂರಿನ ಶಾಲಾ ಕಾಲೇಜು ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿದ್ದೆವು.ಆಗ ಸಂಸ್ಕೃತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬಂದಿದ್ದರು.ಅವರೆಲ್ಲ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದವರು‌.ನಾನೋರ್ವ ರ‌್ಯಾಂಕ್ ವಿಜೇತೆ ಆಗಿದ್ದರೂ ಖಾಸಗಿ ಶಾಲೆಯಲ್ಲಿ ಪುಡಿಕಾಸಿಗಾಗಿ ದುಡಿಯುತ್ತಾ ಇದ್ದೇನೆ ಎಂಬ ಕೀಳರಿಮೆ ನನ್ನಲ್ಲಿ ಇತ್ತು ಎಂದು ಕಾಣಿಸುತ್ತದೆ.ಬಂದ ಪದಾಧಿಕಾರಿಗಳು ಯಾರೂ ನನ್ನನ್ನು ಕೀಳಾಗಿ ಕಂಡಿಲ್ಲ ಆದರೂ ಅವರಲ್ಲಿ ಮಾತನಾಡುವಾಗ ನಾನು ತುಂಬಾ ತೊದಲುತ್ತಾ ಇದ್ದೆ.ಶಬ್ದಗಳು ಸಿಗದೆ ತಡವರಿಸಿ ಏನೇನೋ ಹೇಳುತ್ತಾ ಇದ್ದೆ.ಆಗ ಸಂಸ್ಕೃತ ಸಂಘದ ಅಧ್ಯಕ್ಷರಾಗಿ ಇದ್ದವರು( ಅವರ ಹೆಸರು ವಾಸುದೇವ ರಾವ್ ಎಂದು ನೆನಪು) ಯಾರೋ ಒಬ್ಬ ಪ್ರೊಫೆಸರ್ ಹೆಸರು ಹೇಳಿ ಅವರು ಕೂಡ ನನ್ನ ಹಾಗೆ ತೊದಲುತ್ತಾ ಮಾತಾಡುತ್ತಾರೆಂದು ಹೇಳಿದ್ದರು.
ನಾನು ಶಾಲಾ ದಿನಗಳಲ್ಲಿಯೇ ನಾಟಕ ಏಕಪಾತ್ರಾಭಿನಯ,ಭಾಷಣಗಳಲ್ಲಿ ರಾಜ್ಯ ಮಟ್ಟದ ಬಹುಮಾನ ಪಡೆದವಳು.ಒಳ್ಳೆಯ ಮಾತುಗಾತಿ ಎಂದು ಕೂಡ ಹೆಸರು ಪಡೆದಿದ್ದೆ.ಉತ್ತಮ ಕಾರ್ಯಕ್ರಮ ನಿರೂಪಕಿಯಾಗಿಯೂ ಹೆಸರಿತ್ತು.ಆದರೆ ಅದೇ ವರ್ಷದ ಸಂಸ್ಕೃತ ಸಂಘದ ವಾರ್ಷಿಕೋತ್ಸವದ ನಿರೂಪಣೆಯ ಜವಾಬ್ದಾರಿ ನನಗೆ ನೀಡಿದ್ದು ಹಲವಾರು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಸಂಸ್ಕೃತ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ನಾನು ನಿರೂಪಣೆ ಮಾಡುವಾಗ ಮತ್ತೆ ಮಾತಿಗೆ ಶಬ್ದಗಳು ಸಿಗದೆ ತೊಳಲಾಡಿದ್ದೆ.ಮೊದಲು ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಆಗಿದ್ದು ಮಗ ಹುಟ್ಟಿದಾಗ ಬೇರೆ ದಾರಿ ಇಲ್ಲದೆ ಅಲ್ಲಿ ಕೆಲಸ ಬಿಟ್ಟಿದ್ದೆ.ಮಗನಿಗೆ ಒಂದು ವರ್ಷವಾದಾಗ ಮತ್ತೆ ನಮ್ಮ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿ ಕೆಲಸಕ್ಕೆ ಹೋಗಬೇಕಾಯಿತು. ಆಗ ಚಿನ್ಮಯ ಪ್ರೌಢಶಾಲೆ ಯಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆ ದೊರೆತಿತ್ತು.ನಂತರ ಒಂದೆರಡು ವರ್ಷಗಳಲ್ಲಿ ಮತ್ತೆ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆ ಖಾಲಿಯಿದ್ದು ,ಪ್ರಾಂಶುಪಾಲರಾದ ಸ್ವಿಬರ್ಟ್ ಡಿಸಿಲ್ವಾ ಅವರು ಫೋನ್ ಮಾಡಿ ಕರೆಸಿ ಸಂಸ್ಕೃತ ಉಪನ್ಯಾಸಕ ಹುದ್ದೆಯನ್ನು ನೀಡಿದರು.ಅಲ್ಲಿ ಮತ್ತೆ ಒಂದು ವರ್ಷ ಕೆಲಸ ಮಾಡುವಷ್ಟರಲ್ಲಿ ಪ್ರಸಾದ್ ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ತು .ಹಾಗಾಗಿ ನಾನು ಅಲೋಶಿಯಸ್ ಕಾಲೇಜು ಉಪನ್ಯಾಸಕ ಹುದ್ದೆಯನ್ನು ಬಿಟ್ಟು ಬೆಂಗಳೂರಿಗೆ ಬಂದೆ.ಆದರೆ ಇಲ್ಲಿ ನನ್ನ ಅರ್ಹತೆಗೆ ಅನುಗುಣವಾಗಿ ಉಪನ್ಯಾಸಕ ಹುದ್ದೆ ಸಿಕ್ಕಿದ ಕಾರಣ ಸಮಸ್ಯೆಯಾಗಲಿಲ್ಲ.ನಂತರ ಸರ್ಕಾರಿ ಹುದ್ದೆಯೂ ದೊರೆಯಿತು.ನನ್ನ ಅಧ್ಯಯನವನ್ನು ಜನರು ಗುರುತಿಸಿದರು‌.ದೇಶದ ಎಲ್ಲೆಡೆಗಳಿಂದ ಉಪನ್ಯಾಸ ನೀಡಲು ಆಹ್ವಾನಿಸುತ್ತಾರೆ‌.ಇಂದು ಲಕ್ಷ ಜನರು ಸೇರಿದ ವೇದಿಕೆಯಲ್ಲಿ ಕೂಡ ಯಾವುದೇ ಅಳುಕಿಲ್ಲದೆ ನಿರರ್ಗಳವಾಗಿ ಉಪನ್ಯಾಸ ನೀಡುತ್ತೇನೆ.
ಕೆಲವೊಮ್ಮೆ ಸಮಯ ಕಡಿಮೆ ಇದ್ದಾಗ ಸಂಘಟಕರು ವಿಷಯವನ್ನು ಮೊಟಕು ಗಲಿಸಲು ಸೂಚಿಸುತ್ತಾರೆ‌ ಅದರಮತೆ ನಾನು ನಿಲ್ಲಿಸಿದಾಗ ಸಭಾಸದರು ಮಾತು ಮುಂದುವರಿಸಿ ಎಂದು ಹೇಳಿ ಅವರುಗಳ ಕೋರಿಕೆಗೆ ಸಂಘಟಕರು ನನ್ನಲ್ಲಿ ಪೂರ್ತಿಯಾಗಿ ಮಾತಾಡುವಂತೆ ಹೇಳಿದ ಸಂದರ್ಭಗಳೂ ಇವೆ. ಕಳೆದ ವರ್ಷ ಕಂಬಳ ಪರವಾದ ಪ್ರತಿಭಟನಾ ಸಭೆಯಲ್ಲಿ ನಾನು ಮಾತು ನಿಲ್ಲಿಸ ಹೋದಾಗ ಜನರು ಪೂರ್ತಿಯಾಗಿ ಹೇಳಿ ಎಂದು ವಿನಂತಿಸಿ ಮಾತು ಮುಂದುವರಿಸಿದ್ದೆ.   ಆದರೆ ಅಂದೇಕೆ  ಸಂಸ್ಕೃತ ಸಂಘದ ವಾರ್ಷಿಕೋತ್ಸವದ ನಿರೂಪಣೆಯಲ್ಲಿ ಹಾಗೇಕೆ ತಡವರಿಸಿದೆ ? ಕೀಳರಿಮೆ ಅಷ್ಟೊಂದು ಪ್ರಭಾವ ಬೀರಿತ್ತಾ ಆಶ್ಚರ್ಯ ಆಗುತ್ತಿದೆ ಈಗ‌
ಅದಕ್ಕೆ ಹೇಳುವುದು ಕಾಲ ಒಂದೇ ರೀತಿ ಇರುವುದಿಲ್ಲ ಎಂದು. ಎಲ್ಲರಿಗೂ ಒಂದಲ್ಲ ಒಂದು ದಿನ ಒಳ್ಳೆಯ ಕಾಲ ಬಂದೇ ಬರುತ್ತದೆ ‌ಆದರೆ ಅದಕ್ಕಾಗಿ ನಿರಂತರವಾದ ಅಧ್ಯಯನ, ಪರಿಶ್ರಮ ಅತ್ಯಗತ್ಯ.- ಡಾ.ಲಕ್ಷ್ಮೀ ಜಿ ಪ್ರಸಾದ


Wednesday, 17 January 2018

ದೊಡ್ಡವರ ದಾರಿ: 30: ಮಾತೃ ಹೃದಯದ ಕರ್ಮ ಯೋಗಿ ಎಚ್ ಬಿ ಎಲ್ ರಾವ್ © ಡಾ.ಲಕ್ಷ್ಮೀ ಜಿ ಪ್ರಸಾದ



ಲಕ್ಷ್ಮೀ ನಿನ್ನನ್ನೊಮ್ಮೆ ಈ ಸೀರೆ ಉಟ್ಟು ನೋಡಬೇಕೆಂದವರು ನನ್ನ ತಂದಗೆ ಸಮಾನರಾದ ಎಚ್ ಬಿ ಎಲ್ ರಾವ್ ಅವರು.ತಂದೆ ತಾಯಿಗಳಿಗೆ ತಾವು ಕೊಟ್ಟ ಹೊಸ ಸೀರೆಯನ್ನು ಮಗಳಿಗೆ ಉಡಿಸಿ‌ ಕಣ್ತುಂಬ ನೋಡುವ ಹಂಬಲವಿರುತ್ತದೆ.ಕಳೆದ ವರ್ಷ‌ ಮುಂಬಯಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭೂತಾರಾಧನೆಗ ಬಗ್ಗೆ ಪ್ರಬಂಧ ಮಂಡಿಸಲು ಹೋದಾಗ ಸನ್ಮಾನಿಸಿ ಒಂದು ಚೆಂದದ ಬೆಲೆ ಬಾಳುವ ರೇಷಿಮೆ ಸೀರೆಯನ್ನು ನನಗೆ ನೀಡಿದ್ದರು.ಅದು ಕಡಲಿನಲ್ಲಿ ದೇವಿಗೆ ಹರಿಕೆಯಾಗಿ ಬಂದು ದೇವಿಗೆ ಉಡಿಸಿದ ಸೀರೆ.ಕಟೀಲಿಗೆ ಹೋಗಿದ್ದಾಗ ಅವರಿಗೆ ಅಲ್ಲಿ ಅಸ್ರಣ್ಣರು ನೀಡಿದ್ದರು.ಅದನ್ನು ನನಗೆ ಅಭಿನಂದಿಸಿದ ಸಂದರ್ಭದಲ್ಲಿ ಎಚ್ ಬಿ ಎಲ್ ರಾವ್ ಅವರು ನನಗೆ ನೀಡಿದ್ದರು.
ನಿನ್ನೆ ಅವರ ಪ್ರಧಾನ ಸಂಪಾದನೆಯ,ಡಾ.ಕೆ ಎಲ್ ಕುಂಡಂತಾಯರ ಸಂಪಾದನೆಯ ,ನನ್ನ ಮುಸ್ಲಿಂ ಭೂತಗಳು, ಬ್ರಾಹ್ಮಣ ಭೂತಗಳು, ಕುಲೆ ಭೂತಗಳು, ಸರ್ಪ ಕೋಲ,ಕನ್ನಡಿಗ ಭೂತಗಳು, ಹನುಮಂತ ಕೋಲ ಎಂಬ ಆರು ಸಂಶೋಧನಾ ಲೇಖನಗಳು, ಮತ್ತು ನಾನು ಸಂಗ್ರಹಿಸಿದ 1435 ತುಳುನಾಡ ದೈವಗಳ ಹೆಸರಿನ ಪಟ್ಟಿ ಪ್ರಕಟವಾಗಿರುವ ಅಣಿ ಅರದಲ ಸಿಂಗಾರಕ್ಕೆ ಪುಸ್ತಕ. ಪ್ರಾಧಿಕಾರದಿಂದ ವರ್ಷದ ಅತ್ಯುತ್ತಮ ಪುಸ್ತಕ- ಪುಸ್ತಕ ಸೊಗಸು ಬಹುಮಾನ ಬಂದಿದ್ದು ಅದನ್ನು ಸ್ವೀಕರಿಸಲು ಎಚ್ ಬಿ ಎಲ್ ರಾವ್ ಬಂದಿದ್ದರು.ಹಾಗಾಗಿ ಅವರು ಕೊಟ್ಟ ಸೀರೆ ಉಟ್ಟು ಕೊಂಡು ಹೋಗಿದ್ದೆ.ಅವರ ಸಂತಸಕ್ಕೆ ಎಣೆ ಇರಲಿಲ್ಲ.
ಎರಡು ಮೂರು ವರ್ಷಗಳ ಮೊದಲು ನನ್ನ ‌ಮೊದಲ ಪಿಎಚ್ ಡಿ ಪ್ರಬಂಧ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಕೃತಿ ಪ್ರಕಟವಾಗಿದ್ದು ಅದನ್ನು ಖರೀದಿಸಿ ಓದಿದ ಎಚ್ ಬಿ ಎಲ್ ರಾವ್ ಅವರು ಪೋನ್ಅ ಮಾಡಿ ಪುಸ್ತಕ ಚೆನ್ನಾಗಿದೆ ಎಂದು ಅಭಿನಂದನೆ ತಿಳಿಸಿದ್ದರು.
ಪುಸ್ತಕ ಓದಿದ ಅನೇಕರು ಫೋನ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ.ಹಾಗಾಗಿ ನಾನು ಅವರನ್ನು ಮರೆತು ಬಿಟ್ಟಿದ್ದೆ.
ಇದಾಗಿ ಆರೇಳು  ತಿಂಗಳ ನಂತರ ‌ಮತ್ತೆ ಫೋನ್ ಮಾಡಿ ತಾನು ಮಂಗಳೂರಿಗೆ ಬರುವವರಿದ್ದು ಭೇಟಿಯಾಗುವ ಬಗ್ಗೆ ತಿಳಿಸಿದರು. ಆದರೆ ಅವರು ಬರುವ ದಿನ ಮಂಗಳೂರಿನಲ್ಲಿ ಒಂದು ಶೈಕ್ಷಣಿಕ ಕಾರ್ಯಾಗಾರದಲ್ಲಿ ಹಾಜರಿರುವುದು ನನಗೆ ಅನಿವಾರ್ಯ ವಾಗಿದ್ದ ಬಗ್ಗೆ ನಾನು ತಿಳಿಸಿದ್ದೆ.
ನಾನು ಕಾರ್ಯಾಗಾರದಲ್ಲಿ ಇದ್ದಾಗ ಅದರ ಆಯೋಜಕರೊಬ್ಬರು ನನ್ನನ್ನು ಕರೆದು ಮುಂಬಯಿಯಿಂದ ವಿದ್ವಾಂಸರೊಬ್ಬರು ನಿಮ್ಮನ್ನು ಭೇಟಿಯಾಗಲು ಬಂದಿದ್ದಾರೆ ಎಂದಾಗ ಅಚ್ಚರಿಯಾಗಿತ್ತು.
ಹೌದು ಎಚ್ ಬಿ ಎಲ್ ರಾವ್ ಅವರು ಬಂದು ಮಾತನಾಡಿಸಿ ಅವರ ಕನಸಿನ ಅಣಿ ಅರದಲ ಸಿರಿ ಸಿಂಗಾರ ಎಂಬ ಭೂತಾರಾಧನೆಗೆ ಸಂಬಂಧಿಸಿದ ಬೃಹತ್ ಗ್ರಂಥ ಹೊರತರುವ ಯೋಜನೆ ಬಗ್ಗೆ ಮಾತಾಡಿದರು.
ಇದಾದ ನಂತರ ಡಾ.ಜನಾರ್ದನ ಭಟ್ ಅವರು ನನ್ನನ್ನು ಸಂಪರ್ಕಿಸಿ ಅಣಿ ಅರದಲ ಸಿರಿ ಸಿಂಗಾರಕ್ಕೆ ಒಂದು ಲೇಖನವನ್ನು ಬರೆದು ಕೊಡಲು ತಿಳಿಸಿದರು.ಅಂತೆಯೇ ನಾನು ಸರ್ಪ ಕೋಲದ ಬಗ್ಗೆ ಲೇಖನ ಕಳಹಿಸಿದ್ದೆ.ಇದನ್ನು ಓದಿದ  ಸಂಪಾದಕರಾದಕೆ ಎಲ್ ಕುಂಡಂತಾಯರು ಪೋನ್ ಮಾಡಿ ಬೇರೆ ಬರಹಗಳನ್ನು ನೀಡಲು ಕೇಳಿದರು. ಆಗ ನಾನು ಬ್ರಾಹ್ಮಣ ಭೂತಗಳ ಬಗ್ಗೆ ಬರೆದು ಕಳುಹಿಸಿದೆ‌.ಅದನ್ನುಓದಿ ಮೆಚ್ಚಿದ ಅಣಿ ಅರದಲ ಸಿರಿ ಸಿಂಗಾರ ದ ಪ್ರಧಾನ ಸಂಪಾದಕರಾದ ಎಚ್ ಬಿ ಎಲ್ ರಾವ್ ಪೋನ್ ಮಾಡಿದರು.
ಹೀಗೆ ಅವರಲ್ಲಿ ಮಾತಾಡುತ್ತಾ ನನಗೆ ಆತ್ಮೀಯತೆ ಬೆಳೆಯಿತು.ಮೂಲತಃ ವಕೀಲರಾಗಿದ್ದ ಅವರು ನನ್ನ ವೃತ್ತಿ ಜೀವನದಲ್ಲಿ ಉಂಟಾದ  ಸಮಸ್ಯೆಗಳನ್ನು ಅರ್ಥ ಮಾಡಕೊಂಡು ಕಾನೂನಿನ ಮಾಹಿತಿ ನೀಡಿದರು.ಜೊತೆಗೆ ಮಂಗಳೂರು ಯುನಿವರ್ಸಿಟಿಯ ನೇಮಕಾತಿ ಯಲ್ಲಿ ನನಗೆ ಅನ್ಯಾಯ ವಾದ ಬಗ್ಗೆ, ಅದರ ವಿರುದ್ಧ ನಾನು ಕೋರ್ಟಿನಲ್ಲಿ ದಾವೆ ಹೂಡಿದ ಬಗ್ಗೆ ಮೆಚ್ಚುಗೆ ತಿಳಿಸಿ ಬೆಂಬಲ ನೀಡಿದ್ದರು. ಅವರು ಯಾವಾಗಲೂ ನನಗೆ ಒಂದು ಮಾತು ಹೇಳುತ್ತಾರೆ .ಲಕ್ಷ್ಮೀ ಒಂದು ತಿಳಿದುಕೋ,ಹೊಡೆದರೆ ಆನೆಗೆ ಹೊಡೆಯಬೇಕು ಇಲಿಗಲ್ಲ ಎಂದು ‌ಅದು ನನಗೆ ತುಂಬಾ ಇಷ್ಟವಾದ ಪ್ರೇರಣೆ ತುಂಬಿದ ಮಾತು ಕೂಡ.

ತಿಳಿಗೇಡಿಗಳು ಹೊಟ್ಟ ಕಿಚ್ಚಿನಿಂದಲೋ ಅಜ್ಞಾನದಿಂದಲೋ ಏನೋ ಹೇಳಿದರೆ ಅದನ್ನು ಅವಗಣನೆ ಮಾಡಲು ಅವರು ಹೇಳುತ್ತಿದ್ದರು.
ಎಚ್ ಬಿ ಎಲ್ ರಾವ್ ಬಗ್ಗೆ  ತಿಳಿಯುತ್ತಾ ಹೋದಂತೆ ನನಗೆ ಅಚ್ಚರಿ ಆಯಿತು‌ಅವರು ಸುಮಾರು 129 ಯಕ್ಷಗಾನ ಪ್ರಸಂಗಗಳನ್ನು ಸ್ವಂತ ಖರ್ಚಿನಲ್ಲಿ ಸಂಪಾದಿಸಿ ಮುದ್ರಿಸಿ ಪ್ರಕಟಮಾಡಿದ್ದಾರೆ.ಇತರೆ ಅನೇಕ ಕೃತಿಗಳು ಪ್ರಕಟಿಸಿದಗದಾರೆ.ಇವಾವೂ ಲಾಭಕ್ಕಾಗಿ ಮಾಡಿದ್ದಲ್ಲ.ಇನ್ನೂರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಮಾಡುವುದೆಂದರೆ ಸಾಮಾನ್ಯ ವಿಚಾರವಲ್ಲ.ವೃತ್ತಿಪರ ಪ್ರಕಾಶಕರಿಗೆ ಕೂಡ ಸವಾಲಾಗಿರುವ ವಿಚಾರವಿದು.ಹಾಗಿರುವಾಗ ಎಚ್ ಬಿ ಎಲ್ ರಾವ್ ಏಕಾಂಗಿಯಾಗಿ ಇದನ್ನು ಸಾಧಿಸಿದ ಬಗ್ಗೆ  ಅವರ ಸಾಹಿತ್ಯ ಸೇವೆಯ ಬಗ್ಗೆ.  ಯಾರಿಗಾದರೂ ಮೆಚ್ಚದೆ ಇರಲು ಸಾಧ್ಯವೇ ಇಲ್ಲ.ಅಂತಹ ಅಪೂರ್ವ ಕೊಡುಗೆ ಅವರದು

ಅಣಿ ಅರದಲ ಸಿರಿ ಸಿಂಗಾರ ಹೊರತರಲು ನಾಲ್ಕು ಐದು ಲಕ್ಷ ಖರ್ಚಾಗಿದೆ.ಆದರೆ ಅದೊಂದು ತುಳು ಸಂಸ್ಕೃತಿ ಗೆ ನೀಡಿದ ದೊಡ್ಡ ಕೊಡುಗೆಯಾಗಿದೆ.ಇದು ಅವರು ಪ್ರಕಟಿಸಿದ ಇನ್ನೂರನೇ ಕೃತಿ ಅಗಿದೆ.
ಎಂಬತ್ತೈದರ ಇಳಿ ವಯಸ್ಸಿನಲ್ಲಿ ಕೂಡ ಅವರ ಕಾರ್ಯೋತ್ಸಾಹ ನೋಡಿದಾಗ ನಮಗೆ ಇಂತಹವರೂ ಇದ್ದಾರೆಯೇ ಎಂದು ಆಶ್ಚರ್ಯ ವಾಗುತ್ತದೆ.ನಮ್ಮ ಸೋಮಾರಿತನಕ್ಕೆ ನಾಚಿಕೆಯಾಗುತ್ತದೆ.
ನನ್ನ ಬಗ್ಗೆ ಅವರಿಗೆ ಅನೇಕರು ಚಾಡಿ ಹೇಳಿದ್ದರು‌.ಅವರ ಹತ್ತಿರ ವ್ಯವಹರಿಸುವಾಗ ಜಾಗ್ರತೆ.ನಿಮ್ಮ ಮೇಲೂ ದೂರು ಕೊಟ್ಟಾರು ಎಂದು ನನ್ನ ಅಧ್ಯಯನದ ಅರಿವು ಇದ್ದವರೂ, ನಾನು ನನ್ನ ಹಿತೈಷಿ ಎಂದು ಭಾವಿಸಿದವರೊಬ್ಬರು ಅವರಿಗೆ ಹೇಳಿದ್ದರಂತೆ.ಅವರು ಯಾರೆಂದು ನನಗೆ ಅವರು ಹೇಳಿಲ್ಲ ಆದರೂ ನನಗೆ ಅವರಾರು ಎಂದು ತಿಳಿಯುವ ಕುತೂಹಲ ಇದೆ.ನಾನು ಹಿತೈಷಿ ಎಂದು ನಂಬಿದವರಲ್ಲಿ ಅವರಿಗೆ ಕಿವಿ ಚುಚ್ಚಲು ಹೋದವರು ಯಾರು?.ನನಗೆ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಅನೇಕರ ಪರಿಚಯವಾಗಿದ್ದಾರೆ.ಅನೇಕ ವಿದ್ವಾಂಸರ ಬೆಂಬಲ ನೀಡಿದ್ದಾರೆ.ಇವರನ್ನೆಲ್ಕ ನಾನು ನನ್ನ ಹಿತೈಷಿಗಳು ಎಂದು ಭಾವಿಸಿದ್ದೇನೆ‌.ಇವರ್ಯಾರೂ ಅಂತಹ ಕೆಲಸ ಮಾಡಲಾರರು.ನನ್ನ ಎದುರಿನಲ್ಲಿ ಚಂದಕ್ಕೆ ಮಾತಾಡುತ್ತಾ ಹಿಂದಿನಿಂದ ಕೆಟ್ಟದಾಗಿ ಬಿಂಬಿಸುತ್ತಿರುವವರು ಯಾರಿರಬಹುದು ?
ಜಗತ್ತೇ ಹಾಗೆ.ತಾವು ಬೇರೆಯವರಿಗೆ ಬೆಂಬಲ ಕೊಡದಿದ್ದರೂ ಬೇರೆಯವರು ಕೊಡುವಾಗ ಅಡ್ಡಕಾಲು ಹಾಕುತ್ತಾರೆ. ಪೂರ್ವಗ್ರಹ ಪೀಡಿತ ಮನಸುಗಳನ್ನು ಎಂದೂ ಸರಿ ಪಡಿಸಲಾರೆವು‌
ಆದರೆ ಯಾರ ಮಾತಿಗೂ ಕಿವಿಕೊಡದೆ ನನ್ನ ಅಧ್ಯಯನ ವನ್ನು ಮಾತ್ರ ನೋಡಿ ನಿರಂತರ ಬೆಂಬಲ ನೀಡುತ್ತಿದ್ದಾರೆ ಎಚ್ ಬಿ ಎಲ್ ರಾವ್ ಅವರು‌
ಅವರ ನೇರ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ
ಎಚ್ ಬಿ ಎಲ್ ರಾವ್ ಅವರು ಸಂಪಾದಿಸಿ ಪ್ರಕಟಿಸಿದ ಕೃತಿಗಳು






Thursday, 28 December 2017

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರಾರು ಮಂದಿಗೆ ಸಂಸ್ಕೃತ ಕಲಿಸಿದ  ಯಶೋದಾ ಭಗಿನಿ ಸಂಸ್ಕೃತ ಭಾರತಿ? ಯಿಂದ ಸಂಸ್ಕೃತ ಕಲಿಸಲು ನೇಮಿಸಲ್ಪಟ್ಟ ಸಂಸ್ಕೃತ ಶಿಕ್ಷಕಿ.ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಿ ಹತ್ತು ದಿನದ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸುವುದು ,ಸಂಸ್ಕೃತ ಪ್ರಚಾರ ಮಾಡುವ ಕೆಲಸ ಅವರದು.ಯಶೋದಾ ಭಗಿನಿಯಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಪ್ರಶಿಕ್ಷಕರನ್ನು ನೇಮಿಸಿದ್ದರು.ಆದರೆ ಯಶೋದಾ ಭಗಿನಿಯ ಸಂಸ್ಕೃತ ಪ್ರೀತಿ,ಅದನ್ನು ಪ್ರಚುರ ಪಡಿಸಲು ಯತ್ನಿಸಿದ ಪರಿ ಅನನ್ಯವಾದುದು.
ಭಾಷೆಯನ್ನು ಹೇಳಿಕೊಡುವುದೊಂದು ಕೌಶಲ್ಯ. ಇದು ಎಲ್ಲರಿಗೆ ಒಲಿಯುವುದಿಲ್ಲ.ಮತ್ತು ಇದನ್ನು ಯತ್ನ ಪೂರ್ವಕವಾಗಿ ಕಲಿಯಬೇಕಾಗುತ್ತದೆ.ಕಲಿಸುವ ಶಿಕ್ಷಕರಿಗೂ ಆ ಕೌಶಲ್ಯವಿರಬೇಕು.
ನಾನು ಪಿಯುಸಿ ,ಡಿಗ್ರಿಯಲ್ಲಿ ಸಂಸ್ಕೃತ ವನ್ನು ಒಂದು ಭಾಷೆಯಾಗಿ ಕಲಿತಿದ್ದೆ.ಸಂಸ್ಕೃತ ಎಂಎ ಪದವಿಯನ್ನು ಕೂಡ ಮೊದಲ ರ‍್ಯಾಂಕ್ ಮತ್ತು ಸುವರ್ಣ ಪದಕಗಳೊಂದಿಗೆ ಪಡೆದಿದ್ದೆ.ಆದರೂ ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸಲು,ಮಾತನಾಡಲು ತಿಳಿದಿರಲಿಲ್ಲ. ಯಾಕೆಂದರೆ  ಪಿಯುಸಿ ಮತ್ತು ಪದವಿಯ ಸಂಸ್ಕೃತ ಭಾಷೆಯ ಪರೀಕ್ಷೆ ಯಲ್ಲಿ ಹೆಚ್ಚಿನ ಭಾಗವನ್ನು ಕನ್ನಡದಲ್ಲಿ ಉತ್ತರಿಸಲು ಅವಕಾಶವಿತ್ತು.ಸಂಸ್ಕೃತ ಎಂಎ ಯಲ್ಲಂತೂ ಪೂರ್ತಿಯಾಗಿ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಅವಕಾಶವಿತ್ತು. ಇಲ್ಲೆಲ್ಲೂ ನಮಗೆ ಭಾಷೆಯನ್ನು ಕಲಿಸುವ ಯತ್ನ ನಡೆಯಲೇ ಇಲ್ಲ.ಕೇವಲ ಪಠ್ಯ ಓದಿ ಉತ್ತರಿಸಿದರೆ ಭಾಷೆ ಒಲಿಯುವುದಿಲ್ಲ .ಉದಾಹರಣೆಗೆ ಹೇಳುವುದಾದರೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯುವ  ಹೆಚ್ಚಿನ ಮಕ್ಕಳಿಗೆ ಹತ್ತನೇ ತರಗತಿ ಕಳೆದರೂ,ಪಿಯುಸಿ,ಡಿಗ್ರಿ, ಎಂಎ ಆದರೂ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ.ಕಾರಣವೇನೆಂದರೆ ಇಲ್ಲೆಲ್ಲೂ ಇಂಗ್ಲಿಷ್ ಮಾತನಾಡಲು ,ವ್ಯವಹರಿಸಲು ಹೇಳಿಕೊಡುವುದಿಲ್ಲ
ಅದೇ ಪರಿಸ್ಥಿತಿ ಸಂಸ್ಕೃತ ಎಂಎ ಓದಿದವರದ್ದು.
ಯಶೋದಾ ಭಗಿನಿ ನನಗೆ ಸಂಸ್ಕೃತದಲ್ಲಿ ಮಾತನಾಡಲು ,ಸಂಭಾಷಣಾ ಶಿಬಿರವನ್ನು ನಡೆಸಲು  ಅತ್ಯಂತ ಪ್ರೀತಿಯಿಂದ ತಾಳ್ಮೆಯಿಂದ  ಹೇಳಿಕೊಡದೆ ಇದ್ದರೆ ನಾನು ಕೂಡ ಹಾಗೆಯೇ ಇರುತ್ತಿದ್ದೆನೋ ಏನೋ.
ನಾವು ಸಂಸ್ಕೃತ ಎಂಎ ಅಂತಿಮ ಪರೀಕ್ಷೆ ಬರೆದ ನಂತರ ಎರಡು ವಾರಗಳ ಕಾಲ ನಮಗೆ ಸಂಸ್ಕೃತ ಭಾರತಿಯಿಂದ ಪ್ರಶಿಕ್ಷಣ ಶಿಬಿರ ನಡೆಸಿದರು.ಇದರ ಸಂಚಾಲಕಿ ಯಶೋದಾ ಭಗಿನಿ ಆಗಿದ್ದರು.ಎರಡು ವಾರಗಳಲ್ಲಿ ನಾವುಗಳು ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುವುದನ್ನು ಕಲಿತೆವು .ಇಲ್ಲಿ ಬೇರೆಯವರಿಗೆ ಸಂಸ್ಕೃತ ಸಂಭಾಷಣಾ ಶಿಬಿರ ಮಾಡಿ ಸಂಸ್ಕೃತ ಕಲಿಸುವ ವಿಧಾನವನ್ನು ಹೇಳಿಕೊಟ್ಟರು‌.ಯಶೋದಾ ಭಗಿನಿಯ ಮಾರ್ಗದರ್ಶನದಂತೆ ನಾನು ಕೂಡ ಅನೇಕ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು  ಉಚಿತವಾಗಿ ನಡೆಸಿದೆ.ಯಶೋದಾ ಭಗಿನಿ ಮಂಗಳೂರಿನಲ್ಲಿದ್ದ ಎರಡು ಮೂರು ವರ್ಷಗಳಲ್ಲಿ ಸುಮಾರು  ಮುನ್ನೂರು  ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಸಾವಿರಾರು ಮಂದಿಗೆ ಸಂಸ್ಕೃತ ವನ್ನು ಹೇಳಿಕೊಟ್ಟಿದ್ದರು.ನಿಜಕ್ಕೂ ಅವರು ಸಂಸ್ಕೃತದ ಸೇವೆಯನ್ನು ನಿರ್ವಂಚನೆಯಿಂದ ಮಾಡಿದ್ದರು.
ನಮ್ಮ ಸಂಸ್ಕೃತ ಪ್ರಶಿಕ್ಷಣ ಶಿಬಿರದ ಕೊನೆಯ ಸಮಾರೋಪ ಸಮಾರಂಭದಲ್ಲಿ ಸ್ವಾಗತ,ಧನ್ಯವಾದ,ಕಾರ್ಯಕ್ರಮ ನಿರೂಪಣೆಗಳ ಜವಾಬ್ದಾರಿಯನ್ನು ಪ್ರಶಿಕ್ಷಣಾರ್ಥಿಗಳಾದ ನಮಗೇ ನೀಡಿದ್ದರು.ನಾನು ನಿರೂಪಣೆ ಮಾಡುತ್ತೇನೆ ಎಂದಾಗ ನಮ್ಮಂತೆಯೇ ಪ್ರಶಿಕ್ಷಣಾರ್ಥಿಗಳಾಗಿ ಬಂದಿದ್ದ ನಮ್ಮ ಎಂ ಎ ತರಗತಿ ಉಪನ್ಯಾಸಕರೊಬ್ಬರು ಲಕ್ಷ್ಮೀ ಸ್ವಾಗತ ಮಾಡಲಿ,ನಿರೂಪಣೆ ಗಜಾನನ ಮರಾಠೆ ( ನನ್ನ ಸಹಪಾಠಿ)ಮಾಡಲಿ ಎಂದು ಹೇಳಿದರು‌.ಆಗ ಯಶೋದಾ ಭಗಿನಿ ಯಾಕೆ ಸ್ತ್ರೀಯರು ನಿರೂಪಣೆ ಮಾಡಿದರೆ ಆಗುವುದಿಲ್ಲವಾ ?ಎಂದು ಪ್ರಶ್ನಿಸಿದ್ದರು.
ನಂತರ ನಾನು ಸ್ವಾಗತ ನಿರೂಪಣೆ ಎರಡೂ ಬೇಡವೆಂದು ಹೇಳಿ ,ಪ್ರಶಿಕ್ಷಣ ಶಿಬಿರದ ಕುರಿತಾಗಿ ಅಭಿಪ್ರಾಯ ಮಂಡನೆಯ ಜವಾಬ್ದಾರಿಯನ್ನು ಪಡೆದೆ.
ಆಗಿನ್ನೂ ನನಗೆ ಇಪ್ಪತ್ತ ಮೂರು ವರ್ಷ.ಪ್ರೌಢಿಮೆ ತಾಳ್ಮೆ ಇಲ್ಲದ ವಯಸ್ಸದು‌ಮೊದಲೇ ಸ್ವಲ್ಪ ಕೋಪಿಷ್ಟೆ ನಾನು.ನಿರೂಪಣೆಯನ್ನು ನಾನು ಮಾಡುವುದು ಬೇಡವೆಂದು ಆ ಉಪನ್ಯಾಸಕರು ಹೇಳಿದ್ದು ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಆಗಿತ್ತು. ನನ್ನ ಅಭಿಪ್ರಾಯ ಹೇಳುವಾಗ ಇದರ ಛಾಯೆ ಸ್ವಲ್ಪ ಮಾತಿನಲ್ಲಿ ಕಾಣಿಸಿತ್ತು!
ಪೂರ್ಣ ಕುಂಭ ಸದ್ದು ಮಾಡುವುದಿಲ್ಲ .ಅಪೂರ್ಣಕುಂಭಗಳು  ಸದ್ದು ಮಾಡುತ್ತವೆ ಎಂದು ಹೇಳಿ ನನ್ನ ಕೋಪವನ್ನು ಹೊರ ಹಾಕಿದ್ದೆ. ಈ ಕಾರ್ಯಕ್ರಮದ ನಂತರ ಈ ಬಗ್ಗೆ ಪ್ರಸ್ತಾಪಿಸಿದ ಯಶೋದಾ ಭಗಿನಿ ಲಕ್ಷ್ಮೀ ನಿಮಗೆ ಅವಮಾನವಾಗಿದ್ದರೆ ಅದಕ್ಕೆ ಮಾತಿನಲ್ಲಿ ಉತ್ತರಕೊಡಬಾರದು.ಕೃತಿಯ ಮೂಲಕ ಉತ್ತರ ಕೊಡಬೇಕು, ನಿಮ್ಮಲ್ಲಿ ಅಪಾರ ಉತ್ಸಾಹವಿದೆ,ಸಾಮರ್ಥ್ಯವಿದೆ.ಇದನ್ನು ಬಳಸಿಕೊಂಡು ಬದುಕಿನಲ್ಲಿ ಯಶಸ್ಸು ಪಡೆಯಬೇಕು.ಸ್ತ್ರೀ ಯರು ಇಂತಹ ನೂರಾರು ಅವಮಾನಗಳನ್ನು ಎದುರಿಸುವುದು ಅನಿವಾರ್ಯ, ಯಾಕೆಂದರೆ ನಮ್ಮದು  ಪುರುಷ ಪ್ರಧಾನ ಸಮಾಜ,ಇಲ್ಲಿ ಮಹಿಳೆಯರಿಗೆ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕೂಡ ಹೋರಾಡಬೇಕಾಗುತ್ತದೆ.ಧೈರ್ಯದಿಂದ ಮುಂದಡಿ ಇಡಿ,ನಿಮ್ಮ ಒಳ್ಳೆಯ ಕಾರ್ಯಕ್ಕೆ ದೇವರ ಬೆಮಬಲ ಇರುತ್ತದೆ.ಎಲ್ಲೆಡೆ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ,ಸಂಸ್ಕೃತ ಭಾಷೆ ನಿಮ್ಮ ಕೈ ಹಿಡಿಯುತ್ತದೆ,ಸ್ಥಾನಕ್ಕೆ ಚ್ಯುತಿ ಬರಬಹುದು ಆದರೆ ಜ್ಞಾನಕ್ಕೆ ಎಂದೂ ಚ್ಯುತಿ ಬರಬಾರದು  ಎಂದು ತಿಳುವಳಿಕೆಯನ್ನು ನೀಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಭಾರತಿಯ ಮೀಟಿಂಗ್ ಒಂದರಲ್ಲಿ ಅದರ ನಿರ್ದೇಶಕರೊಬ್ಬರು " ಅವರು ಉಪನ್ಯಾಸಕರು, ಅವಳು ಯಃಕಶ್ಚಿತ್ ಲಕ್ಷ್ಮೀ, ನೀನು ಲಕ್ಷ್ಮೀ ಪರವಾಗಿ ನಿಂತದ್ದು ಸರಿಯಲ್ಲ ಎಂದು ಹೇಳಿದರಂತೆ.ಇದು ತಿಳಿದಾಗ ಯಶೋದಾ ಭಗಿನಿ ನನ್ನಿಂದಾಗಿ ಅವರ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳುವ ಹಾಗಾಯ್ತಲ್ಲಾ ಎಂದು ತುಂಬಾ ಬೇಸರವಾಗಿತ್ತು ನನಗೆ.ಅದರೆ ಯಶೋದಾ ಭಗಿನಿ ನನಗೆ ಈ ಬಗ್ಗೆ ಬೇಸರವಿಲ್ಲ ಯಾಕೆಂದರೆ ನಾನು ನ್ಯಾಯದ ಪರ ನಿಂತಿರುವೆ.ಆದರೂ ರ‍್ಯಾಂಕ್ ತೆಗೆಯುವ ಸಂಭವನೀಯ ವಿದ್ಯಾರ್ಥಿನಿ ನಿಮ್ಮ ಬಗ್ಗೆ ಯಃಕಶ್ಚಿತ್ ಲಕ್ಷ್ಮೀ ಎಂದು ಹೇಳಿ ನಿಮಗೆ ಹಿಂದಿನಿಂದ ಅವಹೇಳನ ಮಾಡಿದ್ದು ನನಗೆ ತುಂಬಾ ಬೇಸರವಾಗಿದೆ.ಲಕ್ಷ್ಮೀ ನೀವು ಪ್ರತಿಭಾವಂತರು. ನನ್ನಂತಾಗಬೇಡಿ.ಸ್ವ ಸಾಮರ್ಥ್ಯದಿಂದ,ಪ್ರಯತ್ನದಿಂದ ಮೇಲೆ ಬನ್ನಿ, ಇಂದು ನಿಮ್ಮನ್ನು ಯಃಕಶ್ಚಿತ್ ಅಂದವರೇ ಭೇಷ್ ಎಂದು ಮೆಚ್ಚುವಂತೆ ಸಾಧನೆ ಮಾಡಿ ತೋರಿಸಬೇಕು ಎಂದು ನನ್ನನ್ನು ಸಾಧನೆಯ ಹಾದಿಯತ್ತ ಹುರಿದುಂಬಿಸಿದ್ದರು‌.
ನಂತರ ಇದೇ ಪ್ತಕರಣದ ಕಾರಣ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರಂತೆ.ನಂತರ ಅವರು ಅದನ್ನು ಬಿಟ್ಟು ಯೋಗ್ಯ ವರನನ್ನು ಮದುವೆಯಾಗಿ ಇಬ್ಬರು ಅವಳಿ ಮಕ್ಕಳ ತಾಯಿಯಾಗಿ ಸಂತಸದ ಬದುಕನ್ನು ನಡೆಸುತ್ತಿದ್ದಾರೆ ಎಂದು ಯಾರೋ ಹೇಳಿದರು.ಅವರ ಪತಿ ವಿಧಾನ ಸೌಧದಲ್ಲಿ ಉದ್ಯೋಗಿಯಂತೆ.ಆದರೆ ಅವರನ್ನು ಈ ಇಪ್ಪತ್ತು ವರ್ಷಗಳಿಂದ ನನಗೆ ಭೇಟಿಯಾಗಲು ಅಗಿಲ್ಲ,ಅವರೆಲ್ಲಿದ್ದಾರೆ ಎಂದು ತಿಳಿದಿಲ್ಲ ನನಗೆ.
ಅವರಂದಂತೆ ನನ್ನನ್ನು ತುಂಬಿದ ಸಭೆಯಲ್ಲಿ ಯಃಕಶ್ಚಿತ್ ಎಂದು ಹೀಯಾಳಿಸಿದವರ ಬಾಯಿಂದಲೇ ಮೆಚ್ಚುಗೆಯ ಮಾತುಗಳನ್ನು ಪಡೆದಿದ್ದೇನೆ.
ಅವರನ್ನು ಭೇಡಿಯಸಗಬೇಕೆಂಬ ಆಸೆ ಇದೆ ಆದರೆ ಅವರು ಎಲ್ಲಿದ್ದಾರೆ ಎಂದು ತಿಳಿಯದಾಗಿದೆ.
ನಾಡಿದ್ದು ಶನಿವಾರ ಭಾಸ ಮಹಾಕವಿಯ ಪ್ರತಿಜ್ಞಾ ಯೌಗಂಧರಾಯಣಂ ಎಂಬ ಸಂಸ್ಕೃತ ನಾಟಕದ ಬಗ್ಗೆ ಉಪನ್ಯಾಸ ಕೊಡಲು ದಾಕ್ಷಾಯಿಣಿ ಭಟ್ ಅವರು ಕೇಳಿದ್ದಾರೆ.
‌ನಾನು 1997-2003 ತನಕ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆ.ನಂತರ  ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಕನ್ನಡ ಉಪನ್ಯಾಸಕಿ ಯಾಗಿ ಕೆಲಸ ಮಾಡುತ್ತಿದ್ದೇನೆ,ಹಾಗಾಗಿ ಸಂಸ್ಕೃತ ದ ಸಂಸರ್ಗವೇ ತಪ್ಪಿ ಹೋಗಿದೆ. ನನಗೆ ಸಂಸ್ಕೃತ ಭಾಷೆ ಮರೆತು ಹೋಗಿರಬಹುದೇನೋ ಎಂಬ ಸಂಶಯ ಕಾಡಿತ್ತು.ಆದರೆ ಭಾಸನ ಪ್ರತಿಜ್ಞಾ ಯೌಗಂಧರಾಯಣಂ ಓದುತ್ತಿದ್ದಂತೆ ನನಗೆ ಸಂಸ್ಕೃತ ಮರೆತು ಹೋಗಿಲ್ಲ ಎಂದು ಸ್ಪಷ್ಟವಾಯಿತು. ಬಹುಶಃ ಸಂಸ್ಕೃತ ಇಷ್ಟು ಗಟ್ಟಿಯಾಗಿ ನನ್ನಲ್ಲಿ ಉಳಿಯಲು ಯಶೋದಾ ಭಗಿನಿಯೆ ಕಾರಣವೆನಿಸಿ ಅವರ ನೆನಪಾಯಿತು.ಅವರನ್ನು ಎಂದಿಗೂ ಮರೆಯಲಾಗದು ನನಗೆ.

Sunday, 24 December 2017

ದೊಡ್ಡವರ ದಾರಿ 27 ಸ್ವಸಾಮರ್ಥ್ಯದಿಂದ ಉತ್ತುಂಗಕ್ಕೇರಿದ ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ © ಡಾ.ಲಕ್ಷ್ಮೀ ಜಿ ಪ್ರಸಾದ




ದೊಡ್ಡವರ ದಾರಿ: 27 - ಸ್ವ ಸಾಮರ್ಥ್ಯದಿಂದ ಉತ್ತುಂಗಕ್ಕೇರಿದ ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ

  ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ  ಮಾದರಿ ಮಹಿಳೆ  ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು  ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ  ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. "ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ "ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ‌ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ  ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ  ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ  ಸೇರಿದೆ.ಜೊತೆಗೆ ಅಲೋಷಿಯಸ್ ಸಂಜೆ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಿದೆ.  ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗಿನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆಯನ್ನು ಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು‌ ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ  ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು  ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ  ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ  ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ  ಪ್ರಾಥಮಿಕ ಶಾಲೆಯಿಂದ  ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ  ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .

http://shikshanaloka.blogspot.in/2017/12/27.html?m=1


ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು  ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ  ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ‌ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ  ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ  ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ  ಸೇರಿದೆ.ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗುನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆವಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು‌ ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ  ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು  ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ  ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ  ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ  ಪ್ರಾಥಮಿಕ ಶಾಲೆಯಿಂದ  ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ  ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .

Friday, 15 December 2017

ಉದಾತ್ತ ಮನಸಿನ ಪೂಜಾ ತಿಂಡಿ ಮನೆಯ ಸದಾಶಿವ ಶೆಟ್ಟಿ - ಡಾ.ಲಕ್ಷ್ಮೀ ಜಿ ಪ್ರಸಾದ



ಬೆಂಗಳೂರು ಯುನಿವರ್ಸಿಟಿ ಕ್ವಾರ್ಟರ್ಸ್ ಬಳಿ ಉಳ್ಳಾಲು ಮುಖ್ಯ ರಸ್ತೆಯ ಆರಂಭದಲ್ಲಿ ಒಂದು ಚಿಕ್ಕ ಹೋಟೆಲ್ ಇದೆ.ಹೆಸರು ಪೂಜಾ ತಿಂಡಿ ಮನೆ.ಇದು ಇತ್ತೀಚೆಗೆ ಎರಡು ಮೂರು ತಿಂಗಳ ಮೊದಲು ಆರಂಭವಾಯಿತು.ಇಲ್ಲಿ ಶುಚಿ ರುಚಿಯಾದ ಊಟ ತಿಂಡಿಗಳು ಕೈಗೆಡಕುವ ಬೆಲೆಯಲ್ಲಿ ಲಭ್ಯವಿವೆ.ರುಚಿ ಜೊತೆಗೆ ಶುಚಿತ್ವಕ್ಕೂ ಇಲ್ಲಿ ಆದ್ಯತೆ ಕೊಡುತ್ತಾರೆ. ನನಗೆ ಇಲ್ಲಿನ ತಿಂಡಿಗಳು ಇಷ್ಟವಾಗಿವೆ.ನಾನು ಇಲ್ಲಿನ ಖಾಯಂ ಗ್ರಾಹಕಿ  .ಊಟ ತಿಂಡಿಗಳನ್ನು ಶುಚಿ ರುಚಿಯಾಗಿ ನೀಡುವ ಹಲವು ಉಪಾಹಾರ ಮಂದಿರಗಳಿವೆ. ಆದರೆ ಇಲ್ಲಿ  ನನ್ನ ಗಮನ ಸೆಳೆದದ್ದು  ಇದರ ಮಾಲಿಕರ ವ್ಯಕ್ತಿತ್ವ,ಉದಾರತೆ.
ಒಂದು ದಿನ ಶನಿವಾರ ಮಧ್ಯಾಹ್ನ ನಾನು ಪೂಜಾ ತಿಂಡಿ‌ಮನೆಗೆ ತಿಂಡಿ ಕಟ್ಟಿಸಿಕೊಂಡು ಹೋಗಲು ಬಂದಿದ್ದೆ.ಆಗ ಅಲ್ಲಿಗೆ ವಯಸ್ಸಾದ ಓರ್ವ ಭಿಕ್ಷುಕಿ ಬಂದಳು.ಅವಳಲ್ಲಿ ಊಟ ಮಾಡುತ್ತೀಯಾ ಎಂದು ಸದಾಶಿವ ಶೆಟ್ಟಿ ಅವರು ಕೇಳಿ ಅವರಿಗೆ ಅನ್ನ ಸಾಂಬಾರ್ ಕಟ್ಟಿ ಕೊಟ್ಟು ಎರಡು ಬಜ್ಜಿಯನ್ನು ಕೂಡ ನೀಡಿದರು.ಆಕೆಯ ಕೈಯಿಂದ ದುಡ್ಡು ತಗೊಂಡಿರಲಿಲ್ಕ.ಆಗ ನಾನು ನಾನು ಯಾವಾಗಲೂ ಇವರಿಗೆ ಹೀಗೆ ಉಚಿತವಾಗಿ ಊಟ ಕೊಡುತ್ತೀರಾ ಎಂದು  ಕೇಳಿದೆ.ಆಗ ಅವರು ಹೌದು,ಇವರಿಗೆ ಮಾತ್ರವಲ್ಲ, ಹೀಗೆ ವಯಸ್ಸಾಗಿ ಭಿಕ್ಷೆ ಬೇಡುವವರು ಬಂದರೆ ಅವರಿಗೆಲ್ಲರಿಗೂ ಉಚಿತವಾಗಿ ಊಟ ನೀಡುತ್ತೇವೆ ಎಂದು ಹೇಳಿದರು.ಪ್ರತಿ ದಿನ  ಕನಿಷ್ಟ ಮೂರು  ನಾಲ್ಕು  ಇಂತಹವರು ಬರುತ್ತಾರೆ.ಅವರಿಗೆಲ್ಲರಿಗೂ ಇವರು ಉಚಿತವಾಗಿ ಊಟ ನೀಡುತ್ತಾರೆ.
ನಾನು ಯಾರಿಗೂ ದುಡ್ಡಿನ ರೂಪದಲ್ಲಿ ಭಿಕ್ಷೆ ನೀಡುವುದಿಲ್ಲ. ಆದರೆ ಊಟದ ಸಮಯದಲ್ಲಿ ಬಂದ ಯಾರಿಗೇ ಆದರೂ ಊಟ ನೀಡುತ್ತೇನೆ.ಎಷ್ಟೇ ಜನ ಬಂದರೂ ನೀಡುತ್ತೇನೆ " ಎಂದವರು ಹೇಳುತ್ತಾರೆ.
ಆದರ್ಶದ ಸಾವಿರ ಮಾತುಗಳನ್ನು ಆಡಬಹುದು. ಆದರೆ ಕಾರ್ಯರೂಪಕ್ಕೆ ತರುವುದು ಕಷ್ಟದ ವಿಚಾರ. ಕಟ್ಟದ ಮೇಲೆ ಕಟ್ಟದ ಮನೆ ಮೇಲೆ ಮನೆ ,ಸೈಟ್ ಗಳ ಕೊಂಡು ಕಟ್ಟುತ್ತಾ ಹತ್ತು ತಲೆಮಾರು ಉಂಡರೂ ಕರಗದಷ್ಟು ಆಸ್ತಿ ಕೂಡಿಟ್ಟರೂ ಇನ್ನೂ ಸಾಲದೆಂದು ದುಡ್ಡಿನ ಹಿಂದೆ ಸಾಗುವ ಜನರ ನಡುವೆ ಸದಾ ಶಿವ ಶೆಟ್ಟಿ ಯವರು ತಮ್ಮ ಉದಾರತೆಯಿಂದಾಗಿ ವಿಶಿಷ್ಟರಾಗಿ ಕಾಣುತ್ತಾರೆ.

ಮೋಜು ಮಸ್ತಿ ಯಲ್ಲಿ ಮುಳುಗಿರುವ ,ಗೊತ್ತು ಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಇವರೊಂದು ಮಾದರಿಯಾಗಿ ನಿಲ್ಲುತ್ತಾರೆ.

Wednesday, 6 December 2017

ನಾನು ಕೂಡ ಕಾದಂಬರಿಯ ಜೀವಂತ ಪಾತ್ರವಾದೆ - ಡಾ.ಲಕ್ಷ್ಮೀ ಜಿ ಪ್ರಸಾದ


ಲಕ್ಷ್ಮೀ ಪೊದ್ದಾರ್ c/o ಲಕ್ಷ್ಮಿ ಪ್ರಸಾದ್


ಡಾ ಕೆ ಎನ್ ಗಣೇಶಯ್ಯ ಅವರು ನಿಮಗೆ ಗೊತ್ತು.. ಅವರ ಬರವಣಿಗೆಯ ಶೈಲಿಯೂ ಗೊತ್ತು
ಕನ್ನಡಕ್ಕೆ ಹೊಸದೇ ಆದ ಬರವಣಿಗೆಯ ತಂತ್ರ ಪರಿಚಯಿಸಿದ ಹೆಮ್ಮೆ ಅವರದ್ದು
ನಾಗೇಶ್ ಹೆಗಡೆ ಅವರ ಶಹಭಾಷ್ ಗಿರಿಯಿಂದಾಗಿ ಹೊಸದೇ ಶೈಲಿಯೊಂದನ್ನು ರೂಢಿಸಿಕೊಂಡ ಗಣೇಶಯ್ಯ ಅವರು ಹೇಗೆ ಬರೆಯುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.
ಇತ್ತೀಚಿಗೆ ಹೊರಬಂದ ‘ಬಳ್ಳಿಕಾಳ ಬಳ್ಳಿ’ ಕೃತಿಯಲ್ಲಿ ತುಳು ಸಂಸ್ಕೃತಿಯ ಸಂಶೋಧಕಿ ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಪಾತ್ರ ಬದಲಾಗಿರುವ ರೀತಿ ನೋಡಿ.

ಡಾ ಲಕ್ಷ್ಮಿ ಜಿ ಪ್ರಸಾದ್ ಹೇಳುತ್ತಾರೆ-
ನಾನೆಂದೂ ಕಾದಂಬರಿ ಬರೆದಿಲ್ಲ
ಆದರೆ ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ
ಇಲ್ಲಿ ನನ್ನ ಪಾತ್ರ ಲಕ್ಷ್ಮೀ ಪೊದ್ದಾರ್ ಎಂಬ ತುಳು ಜಾನಪದ ಸಂಶೋಧಕಿಯದು
ನಾನು ಎಂದಾದರು ಒಂದು ದಿನ ಒಂದು ಕತೆ ಕಾದಂಬರಿಯ ಪಾತ್ರವಾಗಬಹುದು ಕನಸಲ್ಲಿ ಕೂಡ ಊಹಿಸಿರಲಿಲ್ಲ .
ನಾನು ಗಣೇಶಯ್ಯ ಅವರನ್ನು ಭೇಟಿಯಾಗಿದ್ದಾಗ ನನ್ನ ಪಾತ್ರ ಅವರ ಕಾದಂಬರಿಯಲ್ಲಿ ಬರುತ್ತೆ ಎಂದಾಗ ಒಂದೆಡೆ ತುಳುವಿನಿಂದ ಕನ್ನಡಕ್ಕೆ ಒಂದು ಪದ್ಯವನ್ನು ಅನುವಾದ ಮಾಡಿಕೊಡುವ ಚಿಕ್ಕ ಪಾತ್ರ ಇರಬಹುದು ಎಂದುಕೊಂಡಿದ್ದೆ
ಆದರೆ ಇಲ್ಲಿ ಲಕ್ಷ್ಮೀ ಪೋದ್ದಾರ್ ಗೆ ಪ್ರಮುಖ ಪಾತ್ರವಿದೆ
ನಾನು ಭೂತಾರಾಧನೆ ಬಗ್ಗೆ ಹೇಳುವ ವಿಚಾರಗಳನ್ನು ಲಕ್ಷ್ಮಿ ಪೋದ್ದಾರ್ ಮೂಲಕ ಕವಿ ಜನತೆಯ ಎದುರು ಇಟ್ಟಿದ್ದಾರೆ ಭೂತಾರಾಧನೆಯಲ್ಲಿ ಅಡಕವಾಗಿರುವ ಐತಿಹಾಸಿಕ ವಿಚಾರಗಳು ಕೂಡ ಕಾದಂಬರಿಗೆ ಆಕರವಾಗಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದಾರೆ.
ಅದಕ್ಕಾಗಿ ಗಣೇಶಯ್ಯ ಅವರಿಗೆ ಧನ್ಯವಾದಗಳು
ಈ ಹಿಂದೆ ಡಾ .ಅಮೃತ ಸೋಮೇಶ್ವರ ಅವರು ತುಳುವರ ಪಾಡ್ದನ ಹಾಗೂ ಭೂತಾರಾಧನೆ ಕುರಿತು ತಿಳಿಸಲು ನಾಟಕ ಕಾದಂಬರಿ ಕಥೆಗಳನ್ನು ರಚಿಸಿ ಜನರ ಮುಂದಿಡಬೇಕು ಎಂದು ಹೇಳಿದ್ದರು.
ಈಜೋ ಮಂಜೊಟ್ಟಿ ಗೋಣ ಪಾಡ್ದನ ಹಾಗೂ ಉರವ, ಎರಡು ಬಂಟ ದೈವಗಳ ಕಥಾನಕವನ್ನು ಆಧರಿಸಿ ನಾನು ಒಂದು ಸಣ್ಣ ನಾಟಕ ಬರೆದಿದ್ದು ನಮ್ಮ ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ಮಾಡುವ ಯತ್ನ ಮಾಡಿದ್ದೆ
ಆದರೆ ಇವೆಲ್ಲ ತುಳು ಸಂಸ್ಕೃತಿ ಯ ಅರಿವಿರುವವರಿಗೆ‌ ಮಾತ್ರ ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯ ಯಾಕೆಂದರೆ ಅಲ್ಲಿ‌ ತುಳುವಿನ ಭೂತ‌ಪದಕ್ಕೆ‌ಇರುವ ಅರ್ಥ ಆರಾಧನಾ ಸ್ವರೂಪದ ಬಗ್ಗೆ ಹೇಳಿಲ್ಲ ಬಹುಶಃ ‌ಮೊದಲ ಬಾರಿಗೆ ತುಳುನಾಡಿನ ಭೂತಾರಾಧನೆ ಬಗ್ಗೆ ಕನ್ನಡ ‌ಕಾದಂಬರಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿದವರು ಡಾ. ಗಣೇಶಯ್ಯ ಅವರೇ ಇರಬೇಕು
ಈ ಕಾದಂಬರಿಯಲ್ಲಿ ಚೌಂಡಿ ಮತ್ತು ಜಟ್ಟಿಗ/ ಜತ್ತಿಂಗ ದೈವಗಳ ಕಥಾನದಲ್ಲಿ ಚೆನ್ನ ಭೈರಾದೇವಿಯ ಇತಿಹಾಸದ ಎಳೆಯನ್ನು ಕಂಡುಕೊಂಡದ್ದು ಅವರ ತೀವ್ರ ವಿಚಕ್ಷಣಾ ಗುಣಕ್ಕೆ ಸಾಕ್ಷಿಯಾಗಿದೆ
ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾಗಿ ಸಾಕಷ್ಟು ಇತಿಹಾಸದ ಮಾಹಿತಿ ಇದೆ. ನಿಧಿ ಶೋಧದ ಕಥಾನಕ ಬಿಟ್ಟರೆ ಉಳಿದೆಲ್ಲವೂ ಅದರಲ್ಲಿ ಇರುವುದು ನಡೆದು ಹೋದ ಸತ್ಯ ಘಟನೆಗಳು

https://www.google.co.in/amp/avadhimag.com/%3fp=173110&amp=1