Tuesday, 11 August 2020

ಬರಹದ ಮಾನದಂಡ ಯಾವುದು ?

ಬರಹವನ್ನು ಅಳೆಯುವ ಮಾನದಂಡ ಯಾವುದು ? ಒಂದು ಬರಹ ಎಲ್ಲಿ ಪ್ರಕಟವಾಗುತ್ತದೆ ಎಂಬುದು ಮುಖ್ಯವಲ್ಲ..ಫೇಸ್ ಬುಕ್ ಬ್ಲಾಗ್ ನಲ್ಲಿ ಪ್ರಕಟಿಸಿದ ಕಾರಣಕ್ಕೆ ಕೃತಿ ಕಳಪೆಯಾಗುವುದಿಲ್ಲ ,ನವ ಕರ್ನಾಟಕ ಸಪ್ನಾ,ಅಂಕಿತದಂತಹ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ ಕಾರಣಕ್ಕೆ ಶ್ರೇಷ್ಠವಾಗುವುದಿಲ್ಲ.. ಅಂತರ್ಜಾಲ ತಾಣಗಳ ಮೂಲಕ ಪ್ರಕಟಿಸುವುದು ಇತ್ತೀಚೆಗಿನ ಹೊಸ ದಾರಿ.. ನನ್ನ ಕೃತಿಗಳು ಪ್ರಕಾಶನದ ಮೂಲಕ ಪ್ರಕಟಗೊಂಡಿವೆ.ಹೆಚ್ಚಂದರೆ ಒಂದು ಸಾವಿರ ಪ್ರತಿ ಪ್ರಿಂಟ್ ಮಾಡುತ್ತಾರೆ.ಅದರಲ್ಲಿ ಹೆಚ್ಚಿನದು ಲೈಬ್ರರಿ ಗಳಿಗೆ ಹೋಗಿ ಮೂಲೆಯಲ್ಲಿ ಧೂಳು ಹಿಡಿದುಕೊಂಡು ಬಿದ್ದಿರುತ್ತದೆ , ಅದೇ ವಿಚಾರಗಳನ್ನು ನಾನು ಬ್ಲಾಗ್ ನಲ್ಲಿ ಹಾಕಿದ್ದು,ದೇಶ ವಿದೇಶಗಳ ಮೂರು ಲಕ್ಷ ಎಪ್ಪತ್ತೈದು ಸಾವಿರಕ್ಕಿಂತ ಹೆಚ್ಚಿನ ಆಸಕ್ತ ಓದುಗರನ್ನು ತಲುಪಿದೆ, ಬಹುಶಃ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಹಾಕಿದ್ದು ಕೂಡಾ ಒಂದೆಡೆಯಿಂದ ಇನ್ನೊಂದೆಡೆಗೆ ಶೇರ್ ಆಗುತ್ತಾ ಲಕ್ಷಕ್ಕಿಂತ ಹೆಚ್ಚು ಜನರಿಗೆ ತಲುಪಿರುವ ಸಾಧ್ಯತೆ ಇದೆ. ಬರೆಯುವ ಉದ್ದೇಶವೇ ಜನರು ಓದಬೇಕೆಂಬುದು. ಅಂತರ್ಜಾಲದಲ್ಲಿ ಹೆಚ್ಚು ಓದುಗರನ್ನು ತಲುಪುತ್ತದೆ. ಉತ್ತಮವಾದ್ದು ಆದರೆ ಎಲ್ಲೆಡೆ ಶೇರ್ ಆಗುತ್ತದೆ‌.ಇನ್ನಷ್ಟು ಹೆಚ್ಚಿನ ಓದುಗರನ್ನು ತಲುಪುತ್ತದೆ . ಆದರೆ ಕಾಲನ ವೇಗಕ್ಕೆ ಹೆಜ್ಜೆ ಹಾಕಲಾಗದವರು ಮಾತ್ರ ಬದಲಾವಣೆಯನ್ನು ಸ್ವಿಕರಿಸದೆ ಫೇಸ್ ಬುಕ್ ಸಾಹಿತ್ಯ ,ಬ್ಲಾಗ್ ಬರಹ ಎಂದು ಹೀಗಳೆಯುತ್ತಾರೆ‌. ಪುಸ್ತಕಗಳ ರೂಪದಲ್ಲಿ ಪ್ರಕಟವಾದ ಮಾತ್ರಕ್ಕೆ ಅದರ ಗುಣ ಮಟ್ಟ ಹೆಚ್ಚಾಗುದಿಲ್ಲ.. ಫೇಸ್ ಬುಕ್ ,ಬ್ಲಾಗ್ ನಲ್ಲಿ ಹಾಕಿದ ಮಾತ್ರಕ್ಕೆ ಗುಣಮಟ್ಟ ಕಡಿಮೆ ಆಗುವುದಿಲ್ಲ.. ಒಂದು ಗಮ್ಮತ್ತಿನ ವಿಚಾರ ಹೇಳ್ತೇನೆ,ನನ್ನ ಬ್ಲಾಗ್ ಬರಹಗಳನ್ನು ಯಥಾವತ್ ಆಗಿ ವಿಕಿಪೀಡಿಯಕ್ಕೆ ಹಾಕಿದ್ದು ,ನಾನು ಈ ಬಗ್ಗೆ ಆಕ್ಷೇಪ ಮಾಡಿದ್ದು ನಿಮಗೆಲ್ಲ ಗೊತ್ತು.ಬ್ಲಾಗ್ ಬರಹ ಆಗುತ್ತದೆ ,ಬ್ಲಾಗ್ ಲಿಂಕ್ ಉಲ್ಲೇಖದಲ್ಲಿ ಹಾಕಲು ಆಗುವುದಿಲ್ಲವಂತೆ.. ಒಂದೊಮ್ಮೆ ನಾನು ಇದನ್ನು ಬ್ಲಾಗ್ ನಿಂದ ತೆಗೆದು ವೆಬ್ ಗೆ ಹಾಕಿದರೆ ಆಗ ವೆಬ್ ನ ಉಲ್ಲೇಖ ಕೊಡಲು ಆಗುತ್ತದೆ ಅಂತೆ...ಇದೆಲ್ಲ ಕಾಲದ ಜೊತೆಯಲ್ಲಿ ಹೆಜ್ಜೆ ಹಾಕಲಾಗದವರ ಮೂರ್ಖತನ ಅಷ್ಟೇ .. ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವಧ್ಯಂ| ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ ಮೂಢಃ ಪರಪ್ರತ್ಯಯನೇಯ ಬುದ್ದಿಃ|| ಕಾವ್ಯವು ಪ್ರಾಚೀನ ಎಂಬ ಕಾರಣಕ್ಕೆ ಶ್ರೇಷ್ಠವಲ್ಲ,ಹೊಸತು ಎಂಬುದಕ್ಕೆ ಕನಿಷ್ಠವಲ್ಲ ಸಜ್ಜನರು ಪರೀಕ್ಷಿಸಿ ತಿಳಿಯುತ್ತಾರೆ ಮೂಢರು ಇತರರು ಹೇಳಿದ್ದನ್ನು ನಂಬುತ್ತಾರೆ.- ಕಾಳಿದಾಸ ಅಂದು ಕವಿ ಕಾಳಿದಾಸ ಪ್ರಾಚೀನ ಅರ್ವಾಚೀನ ಎಂಬುದು ಕಾವ್ಯದ ಯೋಗ್ಯತೆಯನ್ನು ಅಳೆಯುವ ಮಾನದಂಡ ಅಲ್ಲ ಎಂದಿದ್ದಾನೆ‌.ಇಂದು ಎಲ್ಲಿ ಪ್ರಕಟವಾಗುತ್ತದೆ ಎಂಬುದು ಕಾವ್ಯದ ಸತ್ವವನ್ನು ಅಳೆಯುವ ಮಾನದಂಡವಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ.- ಡಾ.ಲಕ್ಷ್ಮೀ ಜಿ ಪ್ರಸಾದ ಶ್ರೀನಾಥ ರಾಯಸಂ ಅವರ ಬರಹದಿಂದ ಪ್ರೇರಣೆಗೊಂಡು ನಾನು ಬರೆದಿರುವ ಬರಹವಿದು, ಅವರ ಬರಹವನ್ನು ಇಲ್ಲಿ ಓದಬಹುದು https://m.facebook.com/story.php?story_fbid=4180498492021174&id=100001831931254

Monday, 10 August 2020

ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ

ನನಗೆ ಈ ವಿಚಾರ ನೆನಪಾದಾಗೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ.. 1988 ರಲ್ಲಿ ನಾನು ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪಾಸಾದೆ‌.ಅಳಿದೂರಲ್ಲಿ ಉಳಿದವರೇ ರಾಜ ಎಂಬ ಹಾಗೆ 70% ಬಂದದ್ದು ದೊಡ್ಡ ಸಾಧನೆಯೇ.. ನನ್ನ ಅಕ್ಕನಿಗೆ ಒಳ್ಳೆಯ ಮಾರ್ಕ್ಸ್ ಬಂದಿದ್ದರೂ ಕಾಲೇಜಿಗೆ ಕಳುಹಿಸಿರಲಿಲ್ಲ. ನಮ್ಮೂರಲ್ಲಿ ಆಗಷ್ಟೇ ಹುಡುಗಿಯರು ಕಾಲೇಜಿಗೆ ಹೋಗಲು ಶುರು ಮಾಡಿದ್ದರಷ್ಟೇ..ಪಾಸಾಗುದೇ ನೂರರಲ್ಲಿ ಹತ್ತಿಪ್ಪತ್ತು ಮಕ್ಕಳು.ಅದರಲ್ಲಿ ಹುಡುಗಿಯರ ಸಂಖ್ಯೆ ಬೆರಳೆಣಿಕೆಯಷ್ಟು. ಕಾಲೇಜಿಗೆ ಹೋಗುವವರು ಒಬ್ಬರೋ ಇಬ್ಬರೋ ಅಷ್ಟೇ, ಪದವಿಗೆ ಕಾಲಿಡುವಷ್ಟರಲ್ಲಿ‌ ಮದುವೆ ಹಾಗಾಗಿ ಪದವಿ ಪೂರ್ಣಗೊಳಿಸುತ್ತಿದ್ದವರ ಸಂಖ್ಯೆ ಐನೂರರಲ್ಲಿ ಒಬ್ಬರಾದರೆ ಸ್ನಾತಕೋತ್ತರ ಪದವಿ ಗಳಿಸುತ್ತಿದ್ದ ಹುಡುಗಿಯರು ಸಾವಿರದಲ್ಲಿ ಒಬ್ಬರು ಅಷ್ಟೇ, ಅಂತಹ ಅದೃಷ್ಟ ಶಾಲಿಗಳಲ್ಲಿ ನಾನು ಕೂಡ ಒಬ್ಬಳು ಎಂಬ ಸಂತಸ ನನ್ನದು ನನ್ನ ಕಾಲೇಜು ಓದಿಗೆ ಮನೆಯಲ್ಲಿ ಅಪ್ಪ ಅಮ್ಮನ ಪೂರ್ಣ ಒತ್ತಾಸೆ ಇತ್ತು. ನನ್ನ ತಂದೆಯವರಿಗೆ ತಮ್ಮ ಮಕ್ಕಳು ಮೊದಲ ರ‌್ಯಾಂಕ್ ತೆಗೆಯಬೇಕು ಎಂಬ ಮಹದಾಸೆ..ದುರದೃಷ್ಟಕ್ಕೆ ನನಗೆ ಒಂದೆರಡು ಮಾರ್ಕ್ ಗೆ ಮೊದಲ ಸ್ಥಾನ ತಪ್ಪಿ ಹೋಗುತ್ತಿತ್ತು.ಪ್ರತೀಬಾರಿ ಮಾರ್ಕ್ ಕಾರ್ಡ್ ತಂದಾಗಲೂ ತಂದೆಯವರು ರ‌್ಯಾಂಕಾ( ಅದರ ಅರ್ಥ ಮೊದಲ ರ‌‌‌್ಯಾಂಕಾ ಎಂದು) ಎಂದು ಕೇಳುತ್ತಿದ್ದರು.ನಾನು ಅಲ್ಲ ಎರಡನೇ ರ‌್ಯಾಂಕ್ ಎಂದು ಸಪ್ಪೆಯಾಗಿ ಹೇಳುದು ಮಾಮುಲಾಗಿತ್ತು.ತಂದೆ ತಾಯಿ ಅದಕ್ಕಾಗಿ ನಮ್ಮನ್ನು ಎಂದೂ ಬೈದದ್ದು ಇಲ್ಲ.. ಹಾಗೆ ನೋಡಿದರೆ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಬರಲು ತಂದೆಯವರ ಕನಸೇ ಕಾರಣ.ನನಗೆ ತಂದೆಯವರ ಕನಸನ್ನು ( ಅದು ನನ್ನ ಕನಸು ಕೂಡ ಅಗಿತ್ತು) ಅದು ಕೊನೆಯ ಅವಕಾಶವಾಗಿತ್ತು. ನಾನು ಬಿಎಸ್ಸಿ ಮಾಡಿದ್ದು ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿತವಳು.ನಾನು ಕಟೀಲಿನಲ್ಲಿ ಎಂಎ ಗೆ ಸೇರಿದಾಗ ಅಲ್ಲಿ ನನಗೆ ಪ್ರಬಲ ಪ್ರತಿಸ್ಪರ್ಧಿಗಳಿದ್ದರು. ಸಂಸ್ಕೃತ ವನ್ನು ಐಚ್ಛಿಕವಾಗಿ ಕಲಿತು ಪದವಿಯಲ್ಲಿ ರ‌್ಯಾಂಕ್ ತೆಗೆದ ರಮಿತಾ ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು. ಆದರೆ ಮನೆ ಮಂದಿಯನ್ನೆಲ್ಲ‌ ಎದುರು ಹಾಕಿಕೊಂಡು ವಿವಾಹದ ನಂತರ ಕಲಿಯ ಹೊರಟ ನನಗೆ ಮಾಡು ಇಲ್ಲವೇ ಮಡಿ ಎಂಬ ಚಾಲೆಂಜ್ ಆಗಿತ್ತು ಅದು..ಏನೊ ದೇವರ ದಯೆ..ತಂದೆಯವರ ಮೊದಲ ರ‌್ಯಾಮಕಿನ ಕನಸು ಈಡೇರಿತ್ತು. .ಇರಲಿ ನಾನೀಗ ಹೇಳಲು ಹೊರಟ ವಿಚಾರ ಇದಲ್ಲ. ಸಂಬಂಧಿಕರಲ್ಲಿ ಅನೇಕ ಹೆಣ್ಣುಮಕ್ಕಳು ಹೈಸ್ಕೂಲ್ ಮೆಟ್ಟಿಲು ಹತ್ತದವರು ಇದ್ದರು.ಮನೆಯಲ್ಲಿ ಬೆಂಬಲ ಇಲ್ಲದ ಕಾರಣವೋ ಇನ್ನೇನು ಕಾರಣವೋ ತಿಳಿಯದು.ಇವರೆಲ್ಲ ಕಲಿಕೆಯಲ್ಲಿ ಕೂಡ ಹಿಂದಿದ್ದರು. ಇವರೆಲ್ಲ ಕಾಲೇಜಿಗೆ ಹೋಗುವವರ ಬಗ್ಗೆ ಮರ್ಯಾದೆ ಇಲ್ಲದವರು ಎಂಬ ಭಾವನೆಯನ್ನು ಸಮಾಜದಲ್ಲಿ ಬಿತ್ತಿದ್ದರು.ಕಾಲೇಜಿಗೆ ಹೋಗುವ ಹುಡುಗಿಯರು ಹಾದರ ಮಾಡಲು ಹೋಗುವವರು ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇತ್ತು. ಬಹಳ ನಾಚಿಕೆಯ ವಿಚಾರ ಏನೆಂದರೆ ನಾವು ಕೂಡ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಸೀನಿಯರ್ ಹುಡುಗಿಯರು ಒಬ್ಬಿಬ್ಬರು ಕಾಲೇಜಿಗೆ ಹೋಗುತ್ತಿದ್ದು ಅವರುಗಳ ಬಗ್ಗೆ ಜನರು ಕೆಟ್ಟದಾಗಿ ಹೇಳುತ್ತಿದ್ದುದನ್ನು ನಾನು ಕೂಡ ನಂಬಿದ್ದೆ . ಅವಳ ರೇಟ್ ರಿಕ್ಷಾ ಸ್ಟ್ಯಾಂಡ್ ಬಳಿ ನಿಂತ ಎಲ್ಲರಿಗೂ ಗೊತ್ತಂತೆ.ಕಾಲೇಜು ಬಿಡುವುದನ್ನೇ ರಿಕ್ಷಾದವರು ಕಾಯ್ತಾ ಇದ್ದರಂತೆ..ಆ ಹೋಟೆಲಿನಲ್ಲಿ ಯಾರ್ಯಾರೋ ಇವರಿಗೆ ಕಾಯ್ತಾರಂತೆ...ಇತ್ಯಾದಿ ತೀರಾ ಕೊಳಕು ವಿಚಾರಗಳು..ಊರಿಡೀ ಕೆಲಸದವರು ಅವರಿವರು ಎಲ್ಲರೂ ನಮಗಿಂತ ಮೊದಲು ಕಾಲೇಜಿಗೆ ಹೋದ ಹುಡುಗಿಯರ ಬಗ್ಗೆ ವರ್ಣರಂಜಿತವಾಗಿ ತಾವೇ ನೋಡಿದವರಂತೆ ಹೇಳುತ್ತಿದ್ದರು.ನಾನು ಕೂಡ ಅದನ್ನು ನಂಬಿದ್ದೆ.ಅದಕ್ಕೆ ಸರಿಯಾಗಿ ಕೆಲವು ಹುಡುಗಿಯರು ಬಸ್ ಡ್ರೈವರ್ ಕಂಡಕ್ಟರ್ ಗಳಲ್ಲಿ ಚೆಲ್ಲು ಚೆಲ್ಲಾಗಿ ವರ್ತಿಸುತ್ತಿದ್ದರು ಬೇರೆ. ಯಾವಾಗ ನಾನು ಕಾಲೇಜಿಗೆ ಕಾಲಿಟ್ಟನೋ ಇದೆಲ್ಲವೂ ಸುಳ್ಳೆಂದು ಖಚಿತವಾಗಿ ತಿಳಿಯಿತು. ಆದರೆ ನಮ್ಮ ಬಗ್ಗೆಯೂ ಜನ ಹಾಗೇ ಅಡಿಕೊಂಡಿರ್ತಾರೆ.ಇತರರು ಅದನ್ನು ನಂಬಿರಲೂ ಸಾಕು.ಕಾಲೇಜಿಗೆ ಹೋಗುವ ನಮ್ಮನ್ನು ಕುಹಕದ ದೃಷ್ಟಿಯಿಂದ ನೋಡುತ್ತಿದ್ದಿದು ನಮಗೆ ಅರಿವಾಗುತ್ತಿತ್ತು. ಆದರೆ ನಾವು ಅಸಹಾಯಕರು.ಈ ಬಗ್ಗೆ ಏನಾದರೂ ಮನೆಯಲ್ಲಿ ಹೇಳಿದರೆ ಕಾಲೇಜಿಗೆ ಹೋಗುದೇ ಬೇಡ ಎಂದು ನಿಲ್ಲಿಸಿದರೆ ಎಂಬ ಆತಂಕ.. ನಮ್ಮ ಮೊದಲು ಕಾಲೇಜಿಗೆ ಕಾಲಿಟ್ಟ ನಮ್ಮ ಸೀನಿಯರ್ ಹುಡುಗಿಯರ ಬಗ್ಗೆ ಜನ ಕಾ್ಟಿದ ಕಥೆಯನ್ನು ನಾನೂ ನಂಬಿದ ಬಗ್ಗೆ ಅವರುಗಳ ಬಗ್ಗೆ ಕುಹಕದಿಂದ ಮಾತನಾಡಿದ ಬಗ್ಗೆ ನನಗೆ ನಂತರ ತುಂಬಾ ಪಶ್ಚಾತ್ತಾಪ ಆಗಿದೆ.ಆದರೆ ಹನ್ನೆರಡು ಹದಿನಾಲ್ಕರ ವಯಸ್ಸು.. ಸತ್ಯಾಸತ್ಯತೆಯನ್ನು ಅರಿಯುವ ಪ್ರಾಯ ಅಲ್ಲ..ಎಂದು ಸಮಾಧಾನ ಪಟ್ಟುಕೊಳ್ಳಲು ಯತ್ನ ಮಾಡುವೆನಾದರೂ ನನ್ನ ವರ್ತನೆ ಬಗ್ಗೆ ನೆನಪಾದಾಗ ನಾಚಿಕೆ ಆಗಿ ತಲೆ ತಗ್ಗಿಸುವ ಹಾಗೆ ಆಗುತ್ತದೆ.. ಊರವರೆಲ್ಲ ಹೇಳುದನ್ನು ಕೇಳಿ ನಾನು ಸಹಪಾಠಿಗಳಲ್ಲಿ ಅದನೇ ಹೇಳಿದ್ದೆ..ಮತ್ತು ನಾವೆಲ್ಲ ಕಾಲೇಜಿಗೆ ಮುಂದೆ ಹೋದಾಗ ಹಾಗೆ ಮಾಡದೇ ಕಲಿಯಬೇಕು ಎಂದಿದ್ದೆ ..ಛೇ‌. ಸದ್ಯ ಈಗ ಕಾಲ ಬದಲಾಗಿದೆ,ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ಪಡುವ ಕಾಲ ಬಂದಿದೆ ಎಂಬುದು ಸಂತಸದ ವಿಚಾರ. ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ಈ ವಿಚಾರ ನೆನಪಾಯಿತು.

Saturday, 8 August 2020

ಕಾಡಿದ ಕೊಕ್ಕಳಿಕೆ

ಕಾಡಿದ ಕೊಕ್ಕಳಿಕೆ..ಅವರ ಮಾತಿನಿಂದ ದೂರವಾಗಿತ್ತು‌ ನಾನು ಚಿಕ್ಕಂದಿನಿಂದಲೇ ನೇರವಾದ ಮಾತಿನವಳು..ಅದರ ಮಾತು ಹೇಳಿರೆ ಖಡಕ್ ಪೆಟ್ಟೊಂದು ತುಂಡೆರಡು ಅಂತ ನನ್ನ ಅಜ್ಜ ಬೇರೆಯವರಲ್ಲಿ ನನ್ನ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು.ಆಗ ಹಾಗೆಂದರೇನು ? ಯಾಕೆ ಹಾಗೆ ಹೇಳ್ತಾರೆ..ನನ್ನ ಯಾವ ಮಾತಿನ ಬಗ್ಗೆ ಹಾಗೆ ಹೇಳುತ್ತಿದ್ದರು ? ನನಗೂ ಗೊತ್ತಿಲ್ಲ‌. ಇದನ್ನು ಹೊರ ಜಗತ್ತು ಕೂಡ ಗುರುತಿಸಿತ್ತು ಎಂದು ಗೊತ್ತಾದದ್ದು ನನಗೆ ಮದುವೆ ನಿಶ್ಚಿತವಾದಾಗ. ನನ್ನ ಅತ್ತೆಯವರ ತಂಗಿ ಮನೆ ಕೊಡಂಗೆ,ನನ್ನ ತಂದೆ ಮನೆ ಹತ್ತಿರ,ತಂದೆಯವ ಶಿಷ್ಯ ವರ್ಗದ ಮನೆ ಅದು,ನಮ್ಮ ಮನೆಗಳ ನಡುವೆ ತುಂಬಾ ಸ್ನೇಹ ಆತ್ಮೀಯತೆ ಇತ್ತು ಅವರು ನನ್ನ ಬಗ್ಗೆ ಹುಡುಗನ( ಪ್ರಸಾದ್) ಮನೆಯವರಲ್ಲಿ ಹುಡುಗಿ ಯಾವ ವಿಷಯದಲ್ಲೂ ತೆಗೆದು ಹಾಕುವಂತಿಲ್ಲ ಬಹಳ ಜಾಣೆ? ( ಈ ಬಗ್ಗೆ ನನಗೆ ತುಂಬಾ ಸಂಶಯ 😀) ಎಂತಹ ಪರಿಸ್ಥಿತಿ ಬಂದರೂ ನಿಬಾಯಿಸಿಕೊಂಡು ಹೋಗುವ ಸಾಮರ್ಥ್ಯ ಇರುವವಳು.ಆದರೆ ಮಾತು ಮಾತ್ರ ಖಡಕ್,ಪೆಟ್ಟೊಂದು ತುಂಡೆರಡು ಅಂತ ಅಂದಿದ್ದರಂತೆ.ಈ ವಿಚಾರ ನನಗೆ ಗೊತ್ತಾದಾಗ ಕೂಡ ಯಾಕೆ ಹೇಗೆ ಹೇಳ್ತಾರೆ ಎಂದು ನನಗೆ ಗೊತ್ತಾಗಿರಲಿಲ್ಲ. ನಾನು ಮಾತು ಬೇಗ ಕಲಿತಿದ್ದೆನಂತೆ. ಮತ್ತು ನನ್ನ ಮಾತು ಚಿಕ್ಕ ಮಗುವಿರುವಾಗಲೇ ಸ್ಪಷ್ಟ, ಕೊಂಞೆ ಇರಲಿಲ್ಲ ಎಂದು ಅಮ್ಮ ಹೇಳಿದ್ದರು ಒಮ್ಮೆ ಶಾಲಾ,ಕಾಲೇಜುಗಳಲ್ಲಿ ಭಾಷಣ ನಾಟಕ ಅದು ಇದು ಎಂದು ಭಾಗವಹಿಸಿ ಅಗೊಂದು ಈಗೊಂದು ಬಹುಮಾನ ಸಿಗುತ್ತಾ ಇತ್ತು ಕೂಡ. ನನಗೆಲ್ಲೂ ಮಾತನಾಡಲು ಕಷ್ಟವಾದದ್ದು ನೆನಪಿಲ್ಲ.ನಾನು ಮಾತಿನ ನಿರರ್ಗಳತೆ ಕಾರಣಕ್ಕಾಗಿ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನನಗೆ ಸಿಗುತ್ತಾ ಇತ್ತು‌ ನನ್ನ ತಂದೆ ತಾಯಿಯರು ಚೆಂದುಳ್ಳೆ ಚೆಲುವ ಚೆಲುವತಿಯರಾದ ಕಾರಣ ನಾನು ಅವರಷ್ಟು ಚಂದ ಅಲ್ಲದಿದ್ದರೂ ಸುಮಾರಾಗಿ ಇದ್ದೆ.ಅದು ನನ್ನ ತಲೆಯಲ್ಲಿ ಸ್ವಲ್ಪ ಇತ್ತು. ಹಾಗಾಗಿ ಇರುವುದರಲ್ಲಿ ಚಂದದ ಅಂಗಿ ಹಾಕಿಕೊಂಡು ನಿರೂಪಣೆ ಹಾಗೂ ಇನ್ನಿತರ ಸಂದರ್ಭದಲ್ಲಿ ವೇದಿಕೆ ಏರಿ ಸ್ವಲ್ಪ ಹೆಮ್ಮೆಯ ನಗು ಬೀರುತ್ತಿದ್ದುದು ಸತ್ಯ. ಪಿಯುಸಿ ಮತ್ತು ಡಿಗ್ರಿಯಲ್ಲಿ ನಾನು ವಿಜ್ಞಾನ ತಗೊಂಡು ಇಂಗ್ಲೀಷ್ ನಲ್ಲಿ ಬರೆಯಬೆಕಾದ ಕಾರಣ ನಾನು ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿದ್ದೆ,ಮರ್ಯಾದೆಗಾಗಿ ಬಾಯಿ ಪಾಠ ಮಾಡಿ ಪಾಸಾಗಿದ್ದೆ. ನಂತರ ಎಂಎ ಓದುವಾಗ ಮತ್ತೆ ಕಲಿಕೆಯಲ್ಲಿ ಮುಂದೆ ಬಂದೆ. ಈ ಎಲ್ಲ ದಿನಗಳಲ್ಲಿ ಎಂದೂ ನನಗೆ ಯಾರಲ್ಲಿ ಮಾತನಾಡುವಾಗ ಕೂಡ ಮಾತಿನಲ್ಲಿ ತೊದಲುವಿಕೆ,ಕೊಕ್ಕಳಿಕೆ ಇರಲಿಲ್ಲ. ಸಂಸ್ಕೃತ ಎಂಎಯಲ್ಲಿ ಮೊದಲ ರ‍್ಯಾಂಕ್ ತೆಗೆದೆ.ಫಲಿತಾಂಶ ಬರುವ ಮೊದಲೇ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದೆ. ನಂತರ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ತು. ಆದರೆ 1999 ರಲ್ಲಿ ಯುನಿಪಾರ್ಮ್ ವರ್ಕಲೊಡ್ ನಿಯಮ ಜಾರಿಯಾದಾಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಗಳು ಹನ್ನೆರಡು ಅವಧಿಯ ಬದಲು ಹದಿನಾರು ಅವಧಿ ಕೆಲಸ ಮಾಡಬೇಕಾಗಿ ಬಂತು. ಅಗ ನನ್ನಂತಹ ತಾತ್ಕಾಲಿಕ ನೆಲೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದ ಅನೇಕರು ವರ್ಕ್ ಲೋಡ್ ಇಲ್ಲದೆ ಕೆಲಸ ಕಳೆದುಕೊಳ್ಳಬೇಕಾಗಿ ಬಂತು. ಅದೇ ಸಮಯದಲ್ಲಿ ಮಂಗಳೂರಿನ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದರು. ನಾನು ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಆಯ್ಕೆ ಆಗಿ ಸಂಸ್ಕೃತ ಶಿಕ್ಷಕಿಯಾಗಿ ಅಲ್ಲಿ ಕೆಲಸಕ್ಕೆ ಸೇರಿದೆ. ಜೊತೆಗೆ ಸಂತ ಅಲೋಶಿಯಸ್ ಸಂದ್ಯಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಈ ಸಮಯದಲ್ಲಿ ಸಂಸ್ಕೃತೋತ್ಸವ ಬಂತು. ಚಿನ್ಮಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಸ್ಕೃತ ಅಭಿಮಾನಿಯಾಗಿದ್ದು ಸಂಸ್ಕೃತೋತ್ಸವದ ನಿಮಿತ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಮ್ಮ ಚಿನ್ಮಯ ಶಾಲೆಯಲ್ಲಿ ನಡೆಸಲು ಅನುಮತಿ ನೀಡಿದರು. ಸ್ಪರ್ಧೆಗಳು ಒಂದು ಅದಿತ್ಯವಾರ ನಡೆದವು.ನನಗೆ ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ನೀಡಿದ್ದರು. ಈ ಸಮಯದಲ್ಲಿ ಆಗ ಸಂಸ್ಕೃತ ಸಂಘದ ಅಧ್ಯಕ್ಷರಾಗಿದ್ದ ವಾಸುದೇವ ರಾವ್ ( ಎಂದು ನೆನಪು) ಡಾ.ಜಿ ಎನ್ ಭಟ್,ಡಾ.ಶಿಕಾರಿ ಪುರ ಕೃಷ್ಣ ಮೂರ್ತಿ ಮೊದಲಾದವರು ನಮ್ಮ ಶಾಲೆಗೆ ಬಂದಿದ್ದರು.ಆಗ ವಾಸುದೇವ ರಾವ್ (?) ನನ್ನಲ್ಲಿ ಯಾವುದೋ ವಿಚಾರ ಕೇಳಿದರು. ನನಗೆ ಗೊತ್ತಿರುವ ವಿಚಾರವೇ..ಆದರೆ ನನಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗಲಿಲ್ಲ..ಮೊದಲ ಬಾರಿಗೆ ತೀರಾ ಪದಗಳು ಸಿಗದೆ ಒದ್ದಾಡಿದೆ..ಕೊನೆಗೂ ನಾನು ಏನು ಹೇಳಲು ಹೊರಟಿದ್ದೆ ಎಂದವರಿಗೆ ಅರ್ಥವಾಗಲಿಲ್ಲ ಕಾಣಬೇಕು.ಆಗ ಅವರು ಯಾರೊ ಒಂದು ವಿಜ್ಞಾನಿ/ ಪ್ರೊಫೆಸರ್ ಉದಾಹರಣೆ ಕೊಟ್ಟು ಅವರು ಹೀಗೆ ಮಾತಾಡುತ್ತಾರೆ ( ಏನೇನೋ ? ) ಎಂದು ಹೇಳಿದರು. ಆ ದಿನ ಮನೆಗೆ ಬಂದು ಅಲೋಚಿಸಿದೆ..ಯಾಕೆ ಹೀಗಾಯ್ತು..ಎಂದೂ ನನಗೆ ಉಗ್ಗಳಿಗೆ/ ಕೊಕ್ಕಳಿಗೆ ,ತೊದಲುವಿಕೆ ಇರಲಿಲ್ಲವಲ್ಲ ಎಂದು.. ಅಷ್ಟೇ ಆ ಬಗ್ಗೆ ಮತ್ತೆ ತಲೆಕೆಡಿಸಿಕೊಳ್ಳಲಿಲ್ಲ. ಆ ವರ್ಷ ಸಂಸ್ಕೃತೋತ್ಸವದ ನಿರೂಪಣೆ ನನಗೆ ನೀಡಿದರು.ನಾನು ಡಾ.ಜಿ ಎನ್ ಭಟ್ ಅವರ ವಿದ್ಯಾರ್ಥಿನಿ ಅಗಿದ್ದು ಅವರಿಗೆ ನಾನು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಬಗ್ಗೆ ಗೊತ್ತಿದ್ದು ನಂಬಿಕೆ ಮೇಲೆ ನನಗೆ ಜವಾಬ್ದಾರಿ ನೀಡಿದ್ದರು ಅ ವರ್ಷ ಸಂಸ್ಕೃತ ಸಂಘದ ರಜತಮಹೋತ್ಸವ ಅಗಿದ್ದು ತುಂಬಾ ಜನ ಕೂಡ ಬಂದಿದ್ದರು. ಓಹ್.. ನಾನು ಸಾಮಾನ್ಯವಾಗಿ ಬರೆದು ನಿರೂಪಣೆ ಮಾಡುವುದಿಲ್ಲ, ನೇರವಾಗಿ ಮಾಡುವ ಕ್ರಮ..ಆ ಬಾರಿ ಮುಂಜಾಗ್ರತಾ ಕ್ರಮವಾಗಿ ಬರೆದು ತಯಾರಾಗಿದ್ದೆ.ದೊಡ್ಡ ಕಾರ್ಯಕ್ರಮ ,ಸಂಸ್ಕೃತ ಭಾಷೆಯಲ್ಲಿ ತಪ್ಪು ಆಗಬಾರದು ಎಂಬ ಕಾರಣಕ್ಕಾಗಿ ಬಹುಶಃ ನನ್ನ ಜೀವನದಲ್ಲಿ ಅತ್ಯಂತ ಕಳಪೆಯಾಗಿ ತೊದಲಿಕೊಂಡು ಏನೇನೋ ಒದರಿ..ತಪ್ಪು ತಪ್ಪಾಗಿ ನಿರೂಪಣೆ ಮಾಡಿದ್ದು ಅದೇ ಮೊದಲು ಮತ್ತೆ ಕೊನೆ( ಇನ್ನಾಗಲಾರದು ಅಂತಹ ತಪ್ಪು ಎಮಬ ನಂಬಿಕೆಯಿಂದ) ಬರೆದು ಇರುವುದನ್ನು ಕೂಡ ನೆಟ್ಟಗೆ ಓದಲಾಗಲಿಲ್ಲ.. ಅಂತೂ ಹೇಗೋ ಮುಗಿಯಿತು. ಆ ದಿನ ಮತ್ತೆ ತಲೆಕೆಡಿಸಿಕೊಂಡೆ ..ಯಾಕೆ ಹೀಗಾಯ್ತು ಎಂದು.. ಈಗ ಶುರುವಾದ ಸಮಸ್ಯೆ ನನಗೆ ಬೇರೆ ಸಮಯದಲ್ಲಿ ಕೂಡ ಕಾಡಲಾರಂಭಿಸಿತು.. ಮಾತನಾಡುವಾಗ ಬೇಕಾದ ಪದಗಳು ಬಾಯಿಗೆ ಬಾರದೆ ಒದ್ದಾಟ ಅಗುದು,ತೊದಲುವಿಕೆ,ಕೊಕ್ಕಳಿಕೆ..ಈ ಮೂರೂ ಕೂಡ ಮಕ್ಕಳಿಗೆ ಪಾಠ ಮಾಡುವಾಗ,ಸಹೋದ್ಯೋಗಿಗಳಲ್ಲಿ ಮಾತನಾಡುವಾಗ ಇರುತ್ತಿರಲಿಲ್ಲ. ಬೇರೆಡೆ ಮಾತನಾಡುವಾಗ ಈ ಸಮಸ್ಯೆ ‌...ಆದರೂ ಯಾಕೆಂದು ಗೊತ್ತಾಗಲಿಲ್ಲ... ಆದರೆ ಈ ಸಮಸ್ಯೆ ಯಿಂದ ಹೊರಗೆ ಬರಬೇಕು ಎಂದು ಸದಾ ಯತ್ನ ಮಾಡುತ್ತಿದ್ದೆ. ಎರಡು ಮೂರು ವರ್ಷ ಈ ಸಮಸ್ಯೆ ಮುಂದುವರಿಯಿತು. ಈ ಸಮಯದಲ್ಲಿ ನಾನು ಬಜಾಜ್ ಅಲಾಯನ್ಸ್ ಇನ್ಷೂರೆನ್ಸ್ ಕಂಪೆನಿಯಲ್ಲಿ ಏಜೆಂಟ್ ಆಗಿ ಸೇರಿಕೊಂಡೆ‌ ಆಗ ಕಂಪೆನಿ ಕಡೆಯಿಂದ ನಮಗೆ ಮಾತಿನ ಕಲೆ ಬಗ್ಗೆ ತರಬೇತಿ ಕಾರ್ಯಾಗಾರ ಇತ್ತು‌ ಅಲ್ಲಿ ನನಗೆ ಮಾತಿನ ಸಮಸ್ಯೆ ಆಗಲಿಲ್ಲ. ನಂತರ ಪ್ರೀ ಸಮಯದಲ್ಲಿ ಅಲ್ಲಿಗೆ ಬಂದ ತರಬೇತು ದಾರರಲ್ಲಿ ನಾನು ನನ್ನ ಮಾತಿನ ಸಮಸ್ಯೆ ಬಗ್ಗೆ ಹೇಳಿದೆಆಗ ನನಗೆ ಮಾತಿನ ಸಮಸ್ಯೆ ಕಾಡಿತು‌.(ಅವರ ಹೆಸರು ಮರೆತು ಹೋಗಿದೆ ಈಗ ) ಅವರು ಬಹಳ ಸಹೃದಯತೆಯಿಂದ ,ತಾಳ್ಮೆಯಿಂದ ನನ್ನ ಮಾತುಗಳನ್ನು ಕೇಳಿಸಿಕೊಂಡರು. ಸಮಸ್ಯೆಯ ಮೂಲದ ಬಗ್ಗೆ ಅರ್ಥ ಮಾಡಿಕೊಂಡರು. "ಲಕ್ಷ್ಮೀ ನಿಮಗೆ ಏನೂ ಸಮಸ್ಯೆ ಇಲ್ಲ..ಜಸ್ಟ್ ನಿಮಗೆ ಕೀಳರಿಮೆ ಬಾಧಿಸುತ್ತಿದೆ ಅಷ್ಟೇ, ನಿಮ್ಮ ಬಗ್ಗೆ ಬೇರೆಯವರ ಜೊತೆಯಲ್ಲಿ ಹೋಲಿಸಿಕೊಂಡು ಕೀಳರಿಮೆಯಿಂದ ಒದ್ದಾಡುತ್ತಿದ್ದೀರಿ.ಅದರಿಂದಾಗಿ ನಿಮಗಿಂತ ದೊಡ್ಡ ಹುದ್ದೆಯಲ್ಲಿ ,ದೊಡ್ಡ ಸ್ಥಾನದಲ್ಲಿ ಇರುವವರಲ್ಲಿ ಮಾತನಾಡುವಾಗ ಈ ಸಮಸ್ಯೆ ಕಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ಸ್ಥಾನ ಮಾನ ಗೌರವ ಇದೆ..ನೀವು ಯಾವ ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ..ಹೇಗೆ ಮಾಡುತ್ತೀರಿ ಎಂಬುದು ಮುಖ್ಯ.. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಕೃತಿ ಬರೆದ ಗಣಪತಿ ರಾವ್ ಐಗಳು ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು.ಇಂದು ಅವರ ಹೆಸರು ಕೃತಿ ಯನ್ನು ಉಲ್ಲೇಖಿಸದೆ ದಕ್ಷಿಣ ಕನ್ನಡದ ಇತಿಹಾಸ ಬಗ್ಗೆ ಮಾತನಾಡಲು ಬರೆಯಲು ಆಗುವುದಿಲ್ಲ. ಯುನಿವರ್ಸಿಟಿ ಗಳ ರೆಫರೆನ್ಸ್ ಪುಸ್ತಕ ಅದು. ಅದೇ ರೀತಿ ಪ್ರಸ್ತುತ ಪೂ ಶ್ರೀನಿವಾಸ ಭಟ್ ವೆಂಕಟರಾಜ ಪುಣಿಚಿತ್ತಾಯರ ಮೊದಲಾದ ಅನೇಕ ದೊಡ್ಡ ವಿದ್ವಾಂಸರು ಶಾಲಾ ಶಿಕ್ಷಕರು. ಯುನಿವರ್ಸಿಟಿ ಗಳಲ್ಲಿ ಇರುವವರು ಮಾತ್ರ ವಿದ್ವಾಂಸರಲ್ಲ.ನಿಮಗೆ ಬರೆಯುವ ಸಾಮರ್ಥ್ಯ ಇದೆ.ಹೂವಿಗೆ ಪರಿಮಳ ಇದ್ದರೆ ಅದರ ಅಸ್ತಿತ್ವ ಹೊರ ಜಗತ್ತಿಗೆ ಅರಿವಾಗಿಯೇ ಆಗುತ್ತದೆ ಅದು ಎಲ್ಲೇ ಇದ್ದರೂ..ಎಷ್ಟೋ ಜ‌ನ ರ‌್ಯಾಂಕ್ ವಿಜೇತರಿಗೆ ಕೆಲಸ ಸಿಗದೆ ಕೂಲಿ ಕೆಲಸ ಮಾಡುತ್ತಿದ್ದಾರೆ.ನಿಮಗೆ ಬಹಳ ಪ್ರತಿಷ್ಠಿತ ಚಿನ್ಮಯ ಪ್ರೌಢ ಶಾಲೆಯಲ್ಲಿ ಕೆಲಸ ಇದೆ..ಕೀಳರಿಮೆ ಯಾಕೆ..ತಲೆಯಿಂದ ಅದನ್ನು ಮೊದಲು ಹೊರಗೆ ಹಾಕಿ ಎಂದು ಅರ್ಧ ಗಂಟೆ ತಿಳುವಳಿಕೆ ಹೇಳಿದರು‌ ಹೌದು ಅಂದೇ ಕೊನೆ..ಮತ್ತೆಂದೂ ನನಗೆ ಮಾತಿನ ಸಮಸ್ಯೆ ಕಾಡಲಿಲ್ಲ..ಮುಂದೆ ಕಾಡುವುದೂ ಇಲ್ಲ.. ನಾನು ಕೀಳರಿಮೆಯಿಂದ ಹೊರಗೆ ಬಂದಿದ್ದೆ. ದೇವರು ದೊಡ್ಡವನು..ನಂತರ ನನಗೆ ಯಾವುದೇ ಕೊರತೆ ಮಾಡಲಿಲ್ಲ.. ಒಳ್ಳೆಯ ಉದ್ಯೋಗ ಮನೆ ಬದುಕು ,ಘನತೆಯ ಜೀವನ ಎಲ್ಲವನ್ನೂ ಕರುಣಿಸಿದ . ಈಗಲೂ ದೊಡ್ಡ ದೊಡ್ಡ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅತಿಥಿಯಾಗಿ,ಉಪನ್ಯಾಸ ನೀಡಲು ಹೋದಾಗ ನನ್ನ ಜೊತೆಗೆ ಆಹ್ವಾನಿತರಾದವರಲ್ಲಿ ದೊಡ್ಡ ದೊಡ್ಡ ಇಂಜಿಯರ್ಸ್ ಡಾಕ್ಟರ್ಸ್ ಪ್ರೊಫೆಸರ್ ಗಳು ಇರ್ತಾರೆ.ಅವರು ಒಳಗೆ ಬರುವಾಗಲೇ ಓಡಿ ಹೋಗಿ ಸ್ವಾಗತಿಸುವ ಹೂ ಬುಕ್ಕೆ ಕೊಡುವ ಜನರಿರ್ತಾರೆ.ಅವರ ಸುತ್ತ ಜನರು ಇರುತ್ತಾರೆ‌ ನಾನು ಒಂದು ಮೂಲೆಯಲ್ಲಿ ಅಬ್ಬೇಪಾರಿಯಂತೆ ಕುಳಿತಿರುತ್ತೇನೆ‌ ಆದರೆ ನನಗೆ ಕೀಳರಿಮೆ ಕಾಡುವುದಿಲ್ಲ..ಇದು ವೇದಿಜೆ ಏರಿ ಸರದಿಯಲ್ಲಿ ನನ್ನ ಕೈಗೆ ಮೈಕ್ ಬರುವ ತನಕ ಮಾತ್ರ ಈ ಸ್ಥಿತಿ ಎಂದು ನನಗೆ ಆತ್ಮವಿಶ್ವಾಸ ಇರುತ್ತದೆ.ನಂತರ.ವೇದಿಕೆ ಇಳಿದು ಬರುವಷ್ಟರಲ್ಲಿ ನಾನು ನಾನೇ ಆಗಿರುತ್ತೇನೆ.ಅನೇಕೆಡೆಗಳಲ್ಲಿ ಸಮಯ ಮಿತಿಯ ಕಾರಣಕ್ಕಾಗಿ ನಾನು ಮಾತನ್ನು ಮೊಟಕು ಗೊಳಿಸಿದರೆ ಸಭಿಕರಿಂದ ಪೂರ್ಣ ಮಾಹಿತಿ ನೀಡುವಂತೆ ಒತ್ತಡ ಬಂದಿದ್ದು ಮಾತನ್ನು ಮುಂದುವರಿಸಿದ ಅನೇಕ ಸಂದರ್ಭಗಳಿವೆ‌ ಅಗೆಲ್ಲ ಉತ್ತಮ ವಾಙ್ಮಯತೆಯನ್ನು ನೀಡಿದ ವಾಗ್ದೇವಿಯನ್ನು ಸ್ಮರಿಸುತ್ತೇನೆ. ಬರವಣಿಗೆ ,ವಾಙ್ಮಯತೆ God gift ಎಲ್ಲರಿಗೂ ಒಲಿಯುವುದಿಲ್ಲ.ಪ್ರತಿಯೊಂದು ವ್ಯಕ್ತಿಯಲ್ಲಿ ಒಂದಲ್ಲ ಒಂದು ಸಾಮರ್ಥ್ಯ ಇರುತ್ತದೆ.ಇದು ದೇವರ ಕೊಡುಗೆ ಆದರೆ ವಿಷಯ ಜ್ಞಾನವನ್ನು ಪಡೆದುಕೊಂಡು ಪರಿಶ್ರಮದಿಂದ ಮುಂದುವರಿಸುದು,ಅದರಲ್ಲಿ ಪರಿಣತಿಯನ್ನು ಪಡೆಯುವುದು ನಮ್ಮ ಕೈಯಲ್ಲಿದೆ‌. ಪ್ರತಿಭೆ,ಪ್ರಾಮಾಣಿಕತೆ,ಪರಿಶ್ರಮ ಮೂರು ಇದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹೆಸರಿಗಾಗಿ ಕೆಲಸ ಮಾಡಲು ಆಗುವುದಿಲ್ಲ ಒಳ್ಳೆಯ ಕೆಲಸ ಮಾಡಿದರೆ ಹೆಸರು ತನ್ನಿಂತಾನಾಗಿಯೇ ಬರುತ್ತದೆ. ಇಂದು ಭುವನೇಶ್ವರಿ ಮೇಡಂ ಸಂಸ್ಕೃತೋತ್ಸವದಲ್ಲಿ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಬಗ್ಗೆ ತಿಳಿಸಿದಾಗ ಇವೆಲ್ಲ ನೆನಪಾಯಿತು ನನಗೆ. .ಚಿಕ್ಕಂದಿನಿಂದಲೇ ನೇರ ಮಾತು ಎಂದು ಹೇಗೆ ಗುರುತಿಸಿರಬಹುದು? ನನ್ನ ಯಾವ ಮಾತುಗಳಿಂದ ನನ್ನನ್ನು ನೇರ ಮಾತು ಎಂದು ಗುರುತಿಸಿದರೋ ನನಗೆ ಗೊತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯ ಮೇಷ್ಟ್ರು ಕೊಮ್ಮ ತಿಮ್ಮಣ್ಣ ಮಾಸ್ಟ್ರು ನನ್ನ ತಂದೆಯವರಲ್ಲಿ ' ಅವಳನ್ನು ಮುಂದೆ ಲಾ ಓದಿಸಿ ಎಂದಿದ್ದರಂತೆ. ಯಾಕೆ ? ನಾನು ಹೇಗೆ ಮಾತಾಡುತ್ತಿದ್ದೆ ಎಂದು ನನಗೆ ಚೂರೂ ಗೊತ್ತಿಲ್ಲ.. ಈ ಬಗ್ಗೆ ಅಮ್ಮನಲ್ಲಿ ಒಂದು ದಿನ ಕೇಳಿದ್ದೆ.ಅದಕ್ಕೆ ಅಮ್ಮ ಒಂದು ಉದಾಹರಣೆ ತಿಳಿಸಿದರು. ನಾನಾಗ ಇನ್ನೂ ಚಿಕ್ಕ ಹುಡುಗಿ,ಆಗಷ್ಟೇ ಮಾತಾಡಲು ಕಲಿತಿದ್ದೆ,ಎಲ್ಲ ಅಕ್ಷರಗಳ ಉಚ್ಚಾರಣೆ ಬರುತ್ತಿರಲಿಲ್ಲವಂತೆ. ನನ್ನ ಚಿಕ್ಕಪ್ಪನ ಮಗಳ ಸಂಧ್ಯಾ ನನಗಿಂತ ಐದಾರು ತಿಂಗಳ ದೊಡ್ಡವಳು.ನಮಗೆ ಮಕ್ಕಳಿಗೆ ಕಾಫಿ ಕೊಡ್ತಿರಲಿಲ್ಲ .ಹಾಗಾಗಿ ಕಾಫಿ ಬೇಕು ಎಂದು ನಮ್ಮಿಬ್ಬರ ಹಠ ಚಿಕ್ಕಪ್ಪನ ಮಗಳ ಸಂಧ್ಯಾ ಅವಳ ಅಮ್ಮನಲ್ಲಿ ಎಂದರೆ ಚಿಕ್ಕಮ್ಮನಲ್ಲಿ ಕಾಫಿ ಬೇಕು ಎಂದು ಕೇಳಿದ್ದಕ್ಕೆ ಕೊಡಲಿಲ್ಲ. ಆಗ ಅವಳು ನನ್ನ ಅಮ್ಮನಲ್ಲಿ ಕಾಫಿ ಕೇಳಿದಳಂತೆ.ನನ್ನ ಅಮ್ಮನೂ ಖಾಲಿ ಆಗಿದೆ,ನಾಳೆ ಕೊಡ್ತೇನೆ ಎಂದು ಹಾಲು ಕೊಟ್ಟು ಪುಸಲಾಯಿಸಿದ್ದಾರೆ.ಅದಕ್ಕೆ ಅವಳು ದೊಡ್ಡಮ್ಮ ಕೊಳಕ್ಕಿ ಎಂದು ತನ್ನ ಬಾಲ ಭಾಷೆಯಲ್ಲಿ ನನ್ನ ಅಮ್ಮನಿಗೆ ಹೇಳಿದ್ದಾಳೆ.ಆಗ ಅಲ್ಲೇ ಇದ್ದ ನಾನು " ದೊಡ್ಡಮ್ಮ ಕೊಕ್ಕಿ ಅಲ್ಲ..ಇಕ್ಕಮ್ಮ ಕೊಕ್ಕಿ ' ಎಂದು ನಾನು ತಕ್ಷಣವೇ ಹೇಳಿದೆನಂತೆ.ಅಲ್ಲಿ ಇದ್ದ ನನ್ನ ತಂದೆ ,ತಾಯಿ, ಅಜ್ಜಿ ಚಿಕ್ಕಪ್ಪ ,ಚಿಕ್ಕಪ್ಪ "ಅಬ್ಬಾ ಇದು ಸಾಮನ್ಯದ ಕೊಕ್ಕೆಚ್ಚಿ ಅಲ್ಲ "ಎಂದು ನಗಾಡಿದರಂತೆ.ಸಾಮಾನ್ಯವಾಗಿ ಬೇರೆ‌ ಮಕ್ಕಳಾದರೆ ನೀನು ಕೊಳಕ್ಕಿ ಎನ್ನುತ್ತಿದ್ದರು ಎಂದು ಅಮ್ಮ ಹೇಳಿದ್ದರು. ಅಷ್ಟತಾನೇ ಎಂದು ಕೊಂಡೆ‌ ಈಗ್ಗೆ ಆರೇಳು ವರ್ಷಗಳ ಮೊದಲು ತಾಯಿ ಮನೆಗೆ ಹೋಗಿದ್ದಾಗ ಒಂದು ವಿಷಯ ಗಮನಿಸಿದೆ. ತಮ್ಮನ ಸಣ್ಣ ಮಗಳು ಅಭೀಷ್ಟಾ ಬಹಳ ಕರುಣಾಮಯಿ,ಮನುಷ್ಯ ಪ್ರೀತಿ ಇರುವ ಜಾಣೆ. ಆದರೆ ಗಟ್ಟಿ ನಿಲುವು ಸಣ್ಣಾಗಿರುವಾಗಲೇ‌.‌ ಅವಳೇನಾದರೂ ಕಂಬ ದಳಿ ಹತ್ತಿ ಉಪದ್ರ ಮಾಡುತ್ತಿದ್ದರೆ ಅವಳನ್ನು ಅವಳನ್ನು ಅದರಿಂದ ಹೊರಗೆ ತರುದು ಸಣ್ಣ ವಿಚಾರ ಅಲ್ಲ..ಬೈದು ಜೋರು ಮಾಡುವ ವಯಸ್ಸಲ್ಲ..ಇನ್ನೂ ಎರಡು ಮೂರು ವರ್ಷದ ಮಗು. ಬಾ..ನೀನು ಒಪ್ಪಕ್ಕ ಅಲ್ಲದಾ..ನಿನಗೆ ಗೊಂಬೆ ಕೊಡ್ತೆ..ಎಂದು ಮಂಗಾಡಿಸಲು ಹೋದರೆ ಆನು ಒಪ್ಪಕ್ಕ ಅಲ್ಲ ಕೊಕ್ಕಿ..ಎಂದು ಒಪ್ಪಿಕೊಂಡು ತಂಟೆ ಮುಮದುವರಿಸುತ್ತಾ ಇದ್ದಳು.ನಾನು ಒಪ್ಪಕ್ಕ ಅಲ್ಲ ಕೊಳಕ್ಕಿ ಎಂದು ಬಿಟ್ಟರೆ ಮತ್ತೆ ಪುಸಲಾಯಿಸುವ ಮಾತೇ ಇಲ್ಲವಲ್ಲ..ಅವಳನ್ನು ಹೊಗಳಿ ಪುಸಲಾಯಿಸಲು ಸಾಧ್ಯವೇ ಇಲ್ಲ..ಇದನ್ನು ನೋಡುತ್ತಿದ್ದ ಅಮ್ಮ " ನೋಡು ಹೀಗೆಯೇ ಇದ್ದೆ,ಹೊಗಳಿಯೂ ಸರಿ ಮಾಡಲು ಸಾಧ್ಯವಿಲ್ಲ, ಬೈದೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಿನ್ನ ಬಗ್ಗೆ ಅಜ್ಜ ಪೆಟ್ಟೊಂದು ತುಂಡೆರಡು ಎಂದು ಅಜ್ಜ ಹೇಳ್ತಾ ಇದ್ದದ್ದು ಎಂದು ಹೇಳಿ ನಗಾಡಿದರು.. ಓ ಹಾಗಾದರೆ ನಾನು ಸಣ್ಣಾಗಿರುವಾಗ ಸುಮಾರಾಗಿ ಹೇಗೆ ಇದ್ದೆ ಎಂದು ನನಗೆ ಸ್ವಲ್ಪ ಅರ್ಥ ಆಯಿತು.

Thursday, 13 February 2020

ನನಗೂ ಆತ್ಮವಿದೆ : ಆಲದ ಮರಗಳು ಬೇರೆರಗಿಡಗಳ‌್ನು ಬೆಳೆಯಲು ಬಿಡುವುದಿಲ್ಲ

ರೇಡಿಯೋ ದಿನಾಚರಣೆಯ ಶುಭಾಶಯಗಳು.

ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.

ನನ್ನ ಬರವಣಿಗೆಯ ಆರಂಭಿಕ ದಿನಗಳಲ್ಲಿ ನನ್ನ ಬರವಣಿಗೆಯ ಅಭಿವ್ಯಕ್ತಿಗೆ ರೇಡಿಯೋ ಸಹಾಯ ಮಾಡಿದೆ‌..
 ಮಂಗಳೂರು ಆಕಾಶವಾಣಿಯಲ್ಲಿ ನನ್ನ ಮೂರು ನಾಲ್ಕು ಭಾಷಣಗಳು,ಐದಾರು ಕಥೆಗಳು ಪ್ರಸಾರವಾಗಿವೆ‌.
ಇನ್ನೊಂದು ಗಮ್ಮತ್ತಿದ ವಿಚಾರ ಹೇಳ್ತೇನೆ
ಬಹುಶಃ 1997 ಜನವರಿ ಪೆಬ್ರವರಿ ಇರಬಹುದು.
ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ ‌.ಸಮಯ ಸಿಕ್ಕಾಗೆಲ್ಲ‌ ಅಲ್ಲಲ್ಲಿ  ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಿದ್ದೆ‌.
ಒಂದಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶಿಕಾರಿ ಪುರ ಕೃಷ್ಣ ಮೂರ್ತಿಯವರು ನಾನು ನಡೆದುವ ಸಂಭಾಷಣಾ ಶಿಬಿರದ ಪಾಠಗಳ ಪಠ್ಯವನ್ನು ವಿಭಜಿಸಿ ಅರ್ಧ ಗಂಟೆಯ 52 ವಿಭಾಗಗಳನ್ನಾಗಿ ಮಾಡಿಕೊಡಲಯ ಹೇಳಿದರು‌.ಆಕಾಶವಾಣಿಗೆ ಬೇಕು ಎಂದರು ‌.ಸರಿ ಎಂದು ಎರಡು ಮೂರು ದಿನ ಕುಳಿತು 52 ಕಂತು ಅರ್ಧ ಗಂಟೆಗಾಗುವಷ್ಟು ಸಂಭಾಷಣೆ ಬರೆದು ಕೊಟ್ಟೆ.
ಇದಾಗಿ ಒಂದು ಮೂರು ನಾಲ್ಕು ತಿಂಗಳ ನಂತರ ಆಕಾಶವಾಣಿಯಲ್ಲಿ ಒಂದು ದಿನದ  ಸಂಸ್ಕೃತ ಪಾಠ ಮಾಡುವಂತೆ ಆಹ್ವಾನಿಸಿ ನನಗೆ ಪತ್ರ ಬಂದು ಪಾಠ .ಯಾವ ಅಂಶವನ್ನು ಹೊಂದಿರಬೇಕು ಎಂದು ಕೂಡ ತಿಳಿಸಿದ್ದರು.
ನಾನು ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮಾದರಿಯಲ್ಲಿ ಬರೆದು ಅಭ್ಯಾಸ ಮಾಡಿಸಿ ರೆಕಾರ್ಡಿಂಗ್ ಗೆ ಹೋದೆ.
ಅಲ್ಲಿ ಶರಭೇಂದ್ರ ಸ್ವಾಮಿಯವರಲ್ಲಿ ಮಾತಿನ ನಡುವೆ ರೇಡಿಯೋ ಸಂಸ್ಕೃತ ಪಾಠದ ಪಠ್ಯವನ್ನು ನಾನು ತಯಾರಿಸಿ ಕೊಟ್ಟ ಬಗ್ಗೆ ಹೇಳಿದೆ.ಆಗ ನೋಡಬೇಕಿತ್ತು ಅವರ ಮುಖದಲ್ಲಿ ನನ್ನ ಬಗೆಗಿನ ಅಪನಂಬಿಕೆ..ನನ್ನನ್ನು ವಿಚಿತ್ರವಾಗಿ  ನೋಡುತ್ತಾ
ಶಿಕಾರಿಪುರ ಕೃಷ್ಣ ಮೂರ್ತಿ,ಜಿ ಎನ್ ಭಟ್ ಮೊದಲಾದವರೆಲ್ಲ ಸೇರಿ ತಯಾರಿಸಿದ ಪಠ್ಯ ಇದು ಎಂದರು‌.
ಆಗ ಪಠ್ಯ ತಯಾರಿಸಿದ ನನ್ನ ಬಗ್ಗೆ ಒಂದಕ್ಷರವನ್ನು ಕೂಡ ಹೇಳದೆ ದೊಡ್ಡವರು ಅದರ ಕ್ರೆಡಿಟ್‌ ಅನ್ನು ತಾವೇ ಪಡೆದುಕೊಂಡಿದ್ದಾರೆ ಎಂದು ನನಗೆ ಅರ್ಥವಾಯಿತು.
ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.

Saturday, 30 November 2019

ಸುಬ್ಬಿ ಇಂಗ್ಲೀಷ್ ಕಲ್ತದ್ದು : ರಚನೆ : ಡಾ.ಲಕ್ಷ್ಮೀ ಜಿ ಪ್ರಸಾದ (ಮೂಲ : ಹವ್ಯಕ ಕನ್ನಡ ನಾಟಕ ಸುಬ್ಬಿ ಇಂಗ್ಲೀಷ್ ಕಲ್ತದು)



                                   ಸುಬ್ಬಿ ಇಂಗ್ಲೀಷ್ ಕಲ್ತದ್ದು
ನಾಟಕ ರಚನೆ : ಡಾ.ಲಕ್ಷ್ಮೀ ಜಿ ಪ್ರಸಾದ,ಕನ್ನಡ ಉಪನ್ಯಾಸಕರು,ಸರ್ಕಾರಿ ಪಿಯು ಕಾಲೇಜು, ಬ್ಯಾಟರಾಯನಪುರ ಬೆಂಗಳೂರು
                                       ದೃಶ್ಯ -1
(ಸುಬ್ಬಿ ಅಡಿಗೆ ಮಾಡಿಗೊಂಡು ಇರುವಾಗ ಫೋನ್ ರಿಂಗ್ ಆಗುತ್ತದೆ )
ಸುಬ್ಬಿ ; ಅಯ್ಯೋ ರಾಮ ದೇವರೇ ಇದೊಂದು ಫೋನ್ ಮೂರೂ ಹೊತ್ತು ಬೊಬ್ಬೆ ಹೊಡಕೊಂಡೇ   ಇರುತ್ತದೆ..ಒಂದು ಕೆಲಸ ಮಾಡಲು ಬಿಡುತ್ತಾ ಇಲ್ಲ..ಗಳಿಗೆಗೊಮ್ಮೆ ಫೋನ್ ಬರುತ್ತಾ ಇದ್ದರೆ ನಾನು ಅಡಿಗೆ ಮಾಡುದಾದರೂ ಹೇಗೆ (ಫೋನ್ ಎತ್ತಿ )ಹಲ್ಲೋ ಯಾರು ?..ಯಾರು ..?ಸರಿ ಕೇಳ್ತಿಲ್ಲ..ದೊಡ್ಡಕ್ಕೆ ಮಾತಾಡಿ ..ಅರೆ ನೀವು ಎಂತ ಹೇಳುವುದೆಂದು ಗೊತ್ತಾಗುತ್ತಾ ಇಲ್ಲೆಲ್ಲ ..(ಫೋನ್ ಇಡುತ್ತಾಳೆ )
ಅಯ್ಯೋ ದೇವರೇ ..ನನ್ನ ಕರ್ಮವೇ .?ಯಾರೋ ಇವರ ಫ್ರೆಂಡ್ ಗಳ ಫೋನ್ ಆಗಿರ ಬೇಕು !ಅವರಿಗೆ ಒಬ್ರಿಗೂ ನಮ್ಮ ಭಾಷೆ ಬರುವುಲ್ಲ,ಎಲ್ಲರು ಕೂಡ ಇಂಗ್ಲೀಷ್ ಹಿಂದಿ ಭಾಷೆಗಳಲ್ಲಿ ಮಾತಾಡುತ್ತಾರೆ‌ .ಯಾರೋ ಏನೋ..ಇನ್ನು ಆಗಿನಿಂದಲೇ ಮತ್ತೆ ಮತ್ತೆ ಫೋನ್ ಬರುತ್ತ ಇದೆ‌ ..ಅಯ್ಯೋ ರಾಮ ..ಪಲ್ಯ ಒಲೆಯಲಿ ಇಟ್ಡು ಬಂದಿರುವೆ ‌ತಳ ಹಿಡಿಯಿತೋ ಏನೊ ..ನೋಡುತ್ತೇನೆ..
(ಫೋನ್ ಮತ್ತೆ ರಿಂಗ್ ಆಗುತ್ತದೆ )
ಇನ್ನು ಪುನಃ ಯಾರಿಂದಪ್ಪಾ ಫೋನ್ ? ಇವರ ಫ್ರೆಂಡ್ಸ್ ಗಳಿಗೆ ಮಾಡಲು ಬೇರೆ ಕೆಲಸ ಇಲ್ವಾ ? ಮತ್ತೆ ಮತ್ತೆ ಫೋನ್ ಮಾಡಿ ಇಂಗ್ಲಿಷಿಲಿ ಏನೋ ಹೇಳ್ತಿದಾರೆ.ಅಲ್ಲ ಇವರಾದರೂ ಹೇಳಬಾರದಾ ರಾತ್ರಿ ಮಾತ್ರ ಫೋನ್ ಮಾಡಿ ನನ್ನ ಹೆಂಡತಿಗೆ ಇಂಗ್ಲಿಷ್ ಬರಲ್ಲ ಅಂತ.(ಫೋನ್ ಎತ್ತಿ)ಹಲ್ಲೋ ಯಾರು ?..(ಫೋನ್ ಇಟ್ಟು )ಮತ್ತೆ ಅದೇ ರಾಮಾಯಣ !ಯಾರೋ ಇವರ ಫ್ರೆಂಡ್ಸ್ ಇಂಗ್ಲಿಷಿನಲ್ಲಿ ಎಂತದೋ ಹೇಳ್ತಾ ಇರಬೇಕು ..ಎಂತ ಬೇಕಾದರೂ ಹೇಳಲಿ ..ನನಗೇನು  ? ಈ  ಫೋನಿನ ದೆಸೆಯಿಂದಾಗಿ ನನಗಂತು ನೆಮ್ಮದಿ ಇಲ್ಲ
(ಮತ್ತೆ ಫೋನ್ ರಿಂಗ್ ಆಗುತ್ತದೆ)
ಸುಬ್ಬಿ : ಇದು ಬೊಬ್ಬೆ ಹಾಕಿಕೊಂಡೆ ಇರಲಿ ನಾನಂತೂ ಇವತ್ತು  ಎತ್ತುವುದಿಲ್ಲ.. .ನನಗೆ ತುಂಬಾ ಕೆಲಸ ಇದೆ  (ಒಳ ಹೋಗುತ್ತಾಳೆ)
               (ಫೋನ್ ಮತ್ತೆ ಮತ್ತೆ ರಿಂಗ್ ಆಗುತ್ತದೆ )
ಸುಬ್ಬಿ : ಈವತ್ತು ಏನಾಗಿದೆ ಈ ಫೋನಿಗೆ?ಯಾರಿದು  ದಿನ ಇಡೀ  ಫೋನ್ ಮಾಡುತ್ತಾ ಇರುವುದು ಅಂತ   ಗೊತ್ತಾಗುತ್ತಾ ಇಲ್ಲವಲ್ಲ? ಇರಲಿ ಅವರಿಗೆ ಮಾಡುತ್ತೇನೆ.. (ಫೋನ್ ಎತ್ತಿ ) ಹಲ್ಲೋ ಯಾರದು ಇಡೀ ದಿನ ಫೋನ್ ಮಾಡುದು ?ನಿಮಗೆ ಬೇರೆಂಥ ಕೆಲಸ ಇಲ್ವಾ ?ಇಡಿ  ಫೋನ್ ..(ಬೈದು ಫೋನ್ ಇಟ್ಟು ಒಳಗೆ ಹೋಗುತ್ತಾಳೆ)
ಸುಬ್ಬಿ : (ಸ್ವಗತ) ಅಬ್ಬಾ !ಅಡಿಗೆ ಕೆಲಸ ಎಲ್ಲ ಮಗೀತಪ್ಪ !ಸ್ವಲ್ಪ ಹೊತ್ತು ಆರಾಮಾಗಿ ಕುಳಿತುಕೊಳ್ಳುವೆ ಇನ್ನು ..ಸಾಕಾಗಿ ಹೋಯ್ತು   ...ನನ್ನ ಗೆಳತಿಯರೆಲ್ಲ ಈಗ ಆರಾಮಾಗಿ ಶಾಲೆ ಕಾಲೇಜುಗಳಿಗೆ ಹೋಗಿ ಕೊಂಡು ಇರಬಹುದು  ..ನಾನು ಮಾತ್ರ ಮದುವೆ ಆಗಿ ಸೋತೆ ..ನಾನು ಹಠ ಮಾಡಿ ಮದುವೆ ಬೇಡ ,ನಾನು ಶಾಲೆಗೆ ಹೋಗುತ್ತೇನೆ ಎಂದು ಹೇಳಬೇಕಾಗಿತ್ತು ..ಭಾರೀ ದೊಡ್ಡ ತಪ್ಪು ಮಾಡಿದೆ ಅಂತ  ಎನಗೆ ಈಗ  ಅರ್ಥವಾಗಿದೆ ..ಛೆ !ಏನು ಮಾಡುದು ?
                             (ಟಕ್ ಟಕ್ ಬಾಗಿಲು ಬಡಿದ ಶಬ್ದ ಆಗುತ್ತದೆ )
ಓ ಯಾರೋ ಬಂದಿದಾರೆ ಅಂತ ಕಾಣುತ್ತದೆ  ಕಾಣೆಕ್ಕು ಬಾಗಿಲು ಬಡಿಯುತ್ತಾ ಇದ್ದಾರೆ. ಯಾರು ಅಂತ ನೋಡುತ್ತೇನೆ..
                                    (ಅಪ್ಪ ಅಮ್ಮ ಒಳ ಗೆ ಬರುತ್ತಾರೆ ) 
ಸುಬ್ಬಿ : ಓ !ಅಪ್ಪ ಅಮ್ಮ ..!ಬನ್ನಿ ಬನ್ನಿ ..ಬಾಯಾರಿಕೆಗೆ ಶರಬತ್ತು ತರ್ತೇನೆ ಬನ್ನಿ  ಕುಳಿತುಕೊಳ್ಳಿ
ಅಪ್ಪ :ಬಾಯಾರಿಕೆಗೆ ಎಂಥ ಬೇಡ ಮಗಳೇ
ಸುಬ್ಬಿ : ಈ ಬಿಸಿಲಿಗೆ ಬಂದಿದ್ದೀರಿ‌. ..ತಣ್ಣಗೆ ಪುನರ್ಪುಳಿ ಶರ್ಬತ್ತು  ಮಾಡಿ ತರುತ್ತೇನೆ.. ಆಗಬಹುದಲ್ಲಾ  ?ಸ್ವಲ್ಪ ಕುಡೀರಿ
ಅಮ್ಮ : ಸರಿ .ಒಂದು ಅರ್ಧರ್ಧ ಲೋಟ ಸಾಕು ಸುಬ್ಬಿ ..ಸುಬ್ಬ  ಇಲ್ವಾ ಮನೆಯಲ್ಲಿ ?
ಸುಬ್ಬಿ : ಇಲ್ಲಮ್ಮ ಅವರು ಆಫೀಸಿಗೆ ಹೋಗಿದ್ದಾರೆ, ಈಗ ಬರಬಹುದು,ಒಂದು ನಿಮಿಷ ಕೂತಿರಿ ಶರ್ಬತ್ತು  ಮಾಡಿ ತರುತ್ತೇನೆ..
(ಒಳ ಹೋಗಿ ಮಾಡಿ ತರುತ್ತಾಳೆ)
ಸುಬ್ಬಿ : (ಸರ್ಬತ್ತು ಕೊಡುತ್ತಾ ) ಅಲ್ಲ ..ನೀವು  ಎಂಥ ಹೀಂಗೆ ದಿಡೀರನೆ ಬಂದದ್ದು ?ನೀವು ಫೋನ್ ಮಾಡಿದರೆ ಇವರು ಕರೆದುಕೊಂಡು ಬರಲು ಬರ್ತಿದ್ರಲ್ವಾ ?ಬಸ್ ಸ್ಟಾಂಡ್ ನಿಂದ ಹೇಗೆ ಬಂದಿರಿ ?ದಾರಿ ಸರಿ ಸಿಕ್ಕಿತ್ತಾ ?ಎಂಥಕ್ಕೂ ಫೋನ್  ಮಾಡಿದ್ದರೆ ನಾನು ಇವರನ್ನು ಕಳುಹಿಸುತ್ತಿದ್ದೆ..
ಅಮ್ಮ : ಎಷ್ಟು ಸರ್ತಿ ಮಾರಾಯ್ತಿ ನಿನಗೆ ಫೋನ್ ಮಾಡುದು ?ಫೋನ್ ಮಾಡಿ ಮಾಡಿ ಸಾಕಾಯಿತು ..ನೀನು ಫೋನ್ ಎತ್ತಲೇ ಇಲ್ಲ ..ಕೊನೆಗೆ ಫೋನೆತ್ತಿ ನಾನು ಮಾತನಾಡುವ ಮೊದಲೇ " ನಿಮಗೇನು ಬೇರ ಕೆಲಸ ಇಲ್ವಾ ಫೋನ್ ಇಡಿ ಎಂದು ಹೇಳಿ ಬೈದು ಇಟ್ಟೆ ನೀನು ! ಎಂಥ ಕಥೆ ನಿನ್ನದು ?ಅಷ್ಟು ತಾಳ್ಮೆ ಇಲ್ಲದಿದ್ದರೆ ಹೇಗೆ ?
ಸುಬ್ಬಿ : ಅಯ್ಯೋ ದೇವರೇ ..ಅದು ಅಷ್ಟು ಸಲ ಫೋನ್ ಮಾಡಿದ್ದು ನೀವಾ!?ಬೆಳಗ್ಗಿನಿಂದ ಯಾರೋ ಮತ್ತೆ ಮತ್ತೆ  ಫೋನ್ ಮಾಡಿ ಇಂಗ್ಲಿಷಿನಲ್ಲಿ ಎಂಥದೋ ಹೇಳ್ತಾ ಇದ್ದರು .ಅದಕ್ಕೆ ಫೋನ್ ಎತ್ತಿರಲಿಲ್ಲ..ಮತ್ತೆ  ಮತ್ತೆ ಫೋನ್ ಬಂದಾಗ ಕೋಪ ಬಂದು ಹಾಗೆ ಹೇಳಿದ್ದು ಅಷ್ಟೇ!ಬೇಸರವಾಯಿತಾ ನಿಮಗೆ ?
ಅಮ್ಮ :ಮತ್ತೆ ಯಾರಿಗಾದರೂ ಬೇರವಾಗದ ಇರುತ್ತಾ? ಅಲ್ಲ ..ಸುಬ್ಬಿ ನೀನು ಅಷ್ಟು ತಾಳ್ಮೆ ಕಳೆದುಕೊಂಡರೆ ಹೇಗೆ?ನೋಡು.. ಈಗ ನೀನು ಸಣ್ಣ ಕೂಸು ಅಲ್ಲ ..ಎಲ್ಲರೊಟ್ಟಿಗೆ ನಯ ವಿನಯದಿಂದದ ಇರಬೆಕು ಗೊತ್ತಾಯ್ತಾ?
(ಮಾತಾಡುತ್ತ ಇರುವಾಗ ಸುಬ್ಬ ಒಳಗೆ ಬರುತ್ತಾನೆ )
ಸುಬ್ಬ  :ಹಾಗೆಯೇ ಹೇಳಿ ಅತ್ತೆ ..ನೀವು ಇವಳಿಗೆ ಸ್ವಲ್ಪ ಬುದ್ಧಿ ಹೇಳಿ ..ಇವಳ ಹತ್ರ  ಎಷ್ಟು ಸಲ ಹೇಳ್ತೇನೆ ಅಂತ ಇಲ್ಲ .ಸಿಡುಕಬಾರದು ಎಂದು  ,ಆದರೆ ನನ್ನ ಫ್ರೆಂಡ್ ಗಳ ಫೋನ್ ಬಂದರೆ ಸಾಕು ಇವಳಿಗೆ ಕೋಪ ಬರುತ್ತದೆ..
ಸುಬ್ಬಿ : ಹೌದು ಮತ್ತೆ ..ನಿಮ್ಮ ಫ್ರೆಂಡ್ಸ್  ಎಲ್ಲ ಇಂಗ್ಲಿಷ್‌ನಲ್ಲಿ ಮಾತಾಡುತ್ತಾರೆ..ನನಗೆ ಎಂತದು ತಲೆಬುಡ ಗೊತ್ತಾಗುವುದಿಲ್ಲ,ಮತ್ತೆ ಎಂಥ ಮಾಡುದು ನಾನು ?ನೀವು ನಿಮ್ಮ  ಫ್ರೆಂಡ್ ಗಳ ಹತ್ತಿರ ನನ್ನ ಹೆಂಡತಿಗೆ ಇಂಗ್ಲೀಷು ಬರಲ್ಲ ಅಂತ  ಹೇಳಿ ಅಂದ್ರೆ ನೀವು ಹೇಳುತ್ತಾ ಇಲ್ಲ.. ನಾನೇನು ಮಾಡಲಿ ?


ಸುಬ್ಬ :ಅದಕ್ಕೆ ನಾನು  ಹೇಳುದು  ಸ್ವಲ್ಪ ಇಂಗ್ಲೀಷು ಕಲಿ  ಅಂತ, ಕ್ಲಾಸಿಗೆ ಹೋಗಿ ಕಲಿ ಎಂದು ಆದರೆ ನಿನಗೆ ಕಲಿಯಲು  ಮನಸಿಲ್ಲ ..ನನ್ನ ಫ್ರೆಂಡ್ಸ್ ಗಳು ಯಾರಾದರೂ ಮನೆಗೆ ಬಂದರೆ ನಿನಗೆ ಇಂಗ್ಲೀಷು ಬರಲ್ಲ ಎಂದು ಗೊತ್ತಾದರೆ ನನಗೆ ಎಷ್ಟು ನಾಚಿಕೆ ಗೊತ್ತಾ ?ಅವರ ಹೆಂಡತಿಯರೆಲ್ಲ ಎಲ್ಲ ಡಬ್ಬಲ್ ಡಿಗ್ರಿ ಮಾಡಿದ್ದಾರೆ ಗೊತ್ತಾ ?
ಸುಬ್ಬಿ : ನೋಡಮ್ಮ ..ಇವರು ಹೀಗೆ ದಿನಾಲೂ ನಾನು ಓದಿಲ್ಲ ಎಂದು ನನ್ನ ಹಂಗಿಸುತ್ತಾರೆ!ಇವರಿಗೆ ಅಷ್ಟು ನಾಚಿಕೆ ಆಗುದಾದರೆ ನನ್ನ ಮದುವೆ ಆದ್ದು ಎಂಥಕೆ ? ಕೇಳಿ ..
ಸುಬ್ಬ :ಮದುವೆ ಆದ ಮೇಲೆ ನಿನಗೆ ಇಂಗ್ಲೀಷು ಕಲಿಸಬಹುದು ಎಂದು ಭಾವಿಸಿ ಮದುವೆ ಆದೆ ,ನಿನಗೆ ಕಲಿವ ಮನಸ್ಸೇ ಇಲ್ಲ ..
ಅಪ್ಪ : ಹೌದು ..ಮಗಳೇ ..ಏನೋ ಸೋದರತ್ತೆ ಮಗಳು ಎಂದು ಪ್ರೀತಿಯಿಂದ ಮದುವೆ ಆದ .ನೀನು ಚೂರು ಇಂಗ್ಲೀಷು ಕಲಿ ನಿನಗೆ ಇಂಗ್ಲೀಷು ಬಂದರೆ ಸಮಸ್ಯೆಯೇ ಇಲ್ಲಲ್ಲಾ..
ಅಮ್ಮ : ಸಾಕಿನ್ನು ಆ ವಿಚಾರ ..ಸುಬ್ಬಿ ..ಅಡಿಗೆ ಆಗಿದ ?ಆದರೆ ಊಟ ಮಾಡುವ ಎಲ್ಲರೂ. ಗಂಟೆ ಎರಡಾಯಿತು ..ಹಸಿವಾಗ್ತಿದೆ ..ಊಟ ಮಾಡುವ ..
ಅಪ್ಪ : ಸ್ಸರಿ..ಸ್ಸರಿ ..ಬಡಿಸಿ ..
(ಎಲ್ಲ ಒಳ ಹೋವುತ್ತವು)
(ಫೋನ್ ಮತ್ತೆ ರಿಂಗ್ ಆವುತ್ತು )
ಸುಬ್ಬ ;ಹಲೋ . S.Raja  is here
ಥೋಮಸ್; hello Mr S.Raja How are you ?Iam Thomas here
ಸುಬ್ಬ :Hello friend ,how are you ?when did you come from U S A?
ಥೋಮಸ್ : We arrived India yesterday,Tolin also came with me ,we are coming to your house today evening
ಸುಬ್ಬ :What a surprise visit !You are always welcome
ಥೋಮಸ್ : Thank you very much ,meet you on evening
ಸುಬ್ಬ : ok bye


ಸುಬ್ಬ : (ಸ್ವಗತ ) ಸಂಜೆ ನನ್ನ ಸ್ನೇಹಿತರು  ಬರ್ತಾರೆ !ನಾನು ನನ್ನ ಹೆಂಡತಿ ಡಬ್ಬಲ್ ಗ್ರಾಜುವೇಟ್ ಎಂದು ಹೇಳಿದ್ದೆ  ಅವರಲ್ಲಿ!ಈಗ ಎಂಥ ಮಾಡುದು ?(ಭಾರೀ ಚಿಂತೆಲಿ ತಲೆಗೆ ಕೈ ಕೊಟ್ಟು ಕೂರುತ್ತ )
ಅಪ್ಪ ; ಎಂಥ ಸುಬ್ಬ  ?ಯಾರದು ಫೋನ್ ?ಏನು ಸಮಾಚಾರ ?
ಸುಬ್ಬ : ಎಂಥ  ಹೇಳುದು ಮಾವ ? ಈಗ ಸಂಜೆ ನನ್ನ ಸ್ನೇಹಿತರು ಇಲ್ಲಿಗೆ ಬರ್ತಾರೆ ..ಅದೇ ಯೋಚನೆ ನನಗೆ ..!
ಅಪ್ಪ : ಅದಕ್ಕೆ ಅಷ್ಟು ತಲೆಬಿಸಿ   ಮಾಡಲು ಏನಿದೆ ?ನಿನ್ನ ಅತ್ತೆ ಮತ್ತು  ಸುಬ್ಬಿ ಸೇರಿ ಏನಾದರೂ ತಿಂಡಿ ,ಸಿಹಿ ಮಾಡಿಯಾರು ,ಬೇಕಾದರೆ ಬೆಕರಿಯಿಂದಲೂ ತರಬಹುದಲ್ವಾ?
ಸುಬ್ಬ : ಅಯ್ಯೋ ಅದೆಂತ ತೊಂದರೆ ಇಲ್ಲ ಮಾವ
ಅಪ್ಪ :ಮತ್ತೆ ಅವರು ಬರುವಾಗ ನಾವು ಇದ್ದರೆ ತೊಂದರೆ ಆಗುತ್ತಾ?ನಾವು ಬೇಕಿದ್ರೆ ಈಗಲೇ ಹೊರಡುತ್ತೇವೆ !
ರಾಜ : ಅಯ್ಯಯ್ಯೋ ನೀವು ಇರಿ ಮಾವ ,ನೀವು ಇದ್ದರೆ ಎಂಥ ತೊಂದರೆ ಇಲ್ಲೆ .ನನಗೆ ಸಮಸ್ಯೆ ಅಲ್ಲ ಮಾವ.
ಸುಬ್ಬ : ಮತ್ತೆ ಎಂತ ಯೋಚನೆ ಹೇಳು ?ಸರಿ ಮಾಡುವ ಎಲ್ಲ
ಸುಬ್ಬ ; ಅದೇ ಮಾವ ..ಅದೇ ನಮ್ಮ ಸುಬ್ಬಿಗೆ ಇಂಗ್ಲೀಷು ಬರುವುದಿಲ್ಲ ಅಲ್ವಾ,ಎನ್ನ ಸ್ನೇಹಿತರಿಗೆ ಕನ್ನಡ  ಬರುವುದಿಲ್ಲ.ಅವರು ಅಮೆರಿಕಾಲ್ಲಿ ಇರುವುದು‌..ಅವರು ಇಂಗ್ಲಿಷಿನಲ್ಲಿಯೇ ಮಾತಾಡುತ್ತಾರೆ‌.ಏನು ಮಾಡುದು ಈಗ .. ಗೊಂತ್ತಾಗುತ್ತಾ ಇಲ್ಲ ಎನಗೆ
ಅಮ್ಮ : ಅದಕ್ಕೇನಂತೆ ? ಆರಂಭದಲ್ಲೇ ನೀನು ನಿನ್ನ ಸ್ನೇಹಿತರ ಬಳಿ   ಸುಬ್ಬಿಗೆ ಇಂಗ್ಲೀಷು ಬರುವುದಿಲ್ಲ ಎಂದು ತಿಳಿಸಿ ಬಿಡು.
ಸುಬ್ಬ : ಅದಾಗದು ಅತ್ತೆ ..ನಾನೆ ನನ್ನ ಸ್ನೇಹಿತರ  ಬಳಿ ನನ್ನ ಹೆಂಡತಿ ಡಬ್ಬಲ್ ಡಿಗ್ರಿ ಓದಿದ್ದಾಳೆ ಎಂದು ಹೇಳಿದ್ದೆ ..ಈಗ ಎಂಥ ಎಂತ ಮಾಡುದು ?
ಸುಬ್ಬಿ : ಈಗ ಎಂಥ ಮಾಡುದು ?ಮತ್ತೆ ಸುಳ್ಳು ಹೇಳಿದ್ದು ಯಾಕೆ ?ಎಂಥ ಬೇಕಾದರೂ ಮಾಡಿ ನನಗೆ ಗೊತ್ತಿಲ್ಲ.
ಸುಬ್ಬ : (ಜೋರಾಗಿ ಕೋಪದಿಂದ)ಸುಬ್ಬಿ ಅದೆಲ್ಲ ನನಗೆ ಗೊತ್ತಿಲ್ಲ ..ನೀನು ಅವರ ಬಳಿ ಇಂಗ್ಲಿಷಿನಲ್ಲಿ ಮಾತನಾಡಬೇಕು ಅಷ್ಟೇ !
ಸುಬ್ಬಿ :ಅಲ್ಲಾರಿ  ಹೈ ಸ್ಕೂಲ್  ಮೆಟ್ಟಿಲು ಹತ್ತದ ನಾನು ಇಂಗ್ಲಿಷಿನಲ್ಲಿ ಹೇಗೆ  ಮಾತಾಡುದು ಹೇಳಿ ?
ಸುಬ್ಬ : ನಾನು ಹೇಳಿ ಕೊಡುತ್ತೇನೆ ..ಕಲಿ .
ಸುಬ್ಬಿ: ಅಲ್ಲಾರಿ ನಿಮ್ಮ ಸ್ನೇಹಿತರು ಸಂಜೆ  ಬರ್ತಾರೆ ..ಇನ್ನು ಒಂದೆರಡು ಗಂಟೆ ಒಳಗೆ ಅವರು ಬರುತ್ತಾರೆ..ಅಷ್ಟು ಕಡಿಮೆ ಸಮಯದಲ್ಲಿ ಇಂಗ್ಲಿಷ್ ಕಲಿಯಲು ಸಾಧ್ಯವೇ ?!ಏನು ಹೇಳ್ತಿದೀರಿ ನೀವು ಎಂದು  ಎನಗೆ ಅರ್ಥ ಆಗುತ್ತಾ ಇಲ್ಲ ನನಗೆ. ಎಂಥ ಮರ್ಲು ನಿಮ್ಮದು!
ಅಮ್ಮ : ಹೌದು ಸುಬ್ಬ  ..ಸುಬ್ಬಿ ಹೇಳುವುದರಲ್ಲಿಯೂ ಅರ್ಥ ಇದೆ ,ಒಂದೆರಡು ಗಂಟೆಯಲಿ ಇಂಗ್ಲೀಷು ಕಲಿಯಲು ಸಾಧ್ಯವೇ? ಅದೆಂತ ಮಕ್ಕಳಾಟವ?
ಸುಬ್ಬ : ಅದು ಹಾಗಲ್ಲ ಅತ್ತೆ ..ನನ್ನ  ಸ್ನೇಹಿತರಿಗೆ ಸುಬ್ಬಿ ಹತ್ತಿರ ಮಾತನಾಡುವದ್ದು ಏನಿರುತ್ತೆ   ಹೇಳಿ ?ಸುಮ್ಮನೆ ಶಿಷ್ಟಾಚಾರಕ್ಕಾಗಿ ಹೆಸರು ,ಊರು ಮಕ್ಕ ಳು,ವಯಸ್ಸು  ..ಕೇಳ್ತಾರೆ  ಅಷ್ಟೇ ?ಅವರು ಹೇಗೆ ಮಾತನಾಡುತ್ತಾರೆ ಎಂದು ನನಗೆ ಗೊತ್ತಿದೆ. ಬೇರೆ ಕಡೆ ನಾನು ಗಮನಿಸಿದ್ದೇನೆ.ಅವರು ಮಾತನಾಡುವುದನ್ನು. .ಅದಕ್ಕೆ ಒಂದೊಂದು ಶಬ್ದದಲ್ಲಿ ಉತ್ತರ ಹೇಳಿದರೆ ಆಯಿತು ಅದನ್ನು ನಾನು ಈಗ ಸುಬ್ಬಿಗೆ ಹೇಳಿ ಕೊಡ್ತೇನೆ. ಅದನ್ನು ಕಲಿಯಲು ಅರ್ಧ ಗಂಟೆ ಕೂಡ ಬೇಡ
ಅಪ್ಪ :ಹೌದು ಸುಬ್ಬಿ ,ಸುಬ್ಬ  ಹೇಳುವುದು  ಸರಿ ನೀನು ಅವನು ಹೇಳಿ ಕೊಟ್ಟ ಹಾಗೆ ಕಲಿ, ನಾವು ಆ ಕಡೆ ಇರ್ತೇವೆ
ಸುಬ್ಬಿ : ಹ್ಹೂ ಸರಿ .ಅಪ್ಪ ..
ಸುಬ್ಬ : ನೋಡು ಸುಬ್ಬಿ ಅವರು ಸುರುವಿಗೆ ನಿನ್ನ ಹೆಸರೇನು ಎಂದು ಕೇಳ್ತಾರೆ  ..ಏನು  ಹೇಳ್ತಿ ನೀನು ?
ಸುಬ್ಬಿ  :ನನ್ನ ಹೆಸರು ನಿಮಗೆ ಗೊತ್ತಲ್ವ ?
ಸುಬ್ಬ ;ನನಗೆ ಗೊತ್ತು ಆದರೆ ಅವರಿಗೆ ಗೊತ್ತಿಲ್ಲ ಅಲ್ವಾ
ಸುಬ್ಬಿ : ಓ ಹೌದು ..ನನ್ನ ಹೆಸರು ಸುಬ್ಬಲಕ್ಷ್ಮಮ್ಮ ಎಂದು ತಾನೇ   ಅದನ್ನೇ ಹೇಳ್ತೇನೆ..
ಸುಬ್ಬ : ಈ ಸುಬ್ಬಲಕ್ಷ್ಮಮ್ಮ ಶಾಂತಮ್ಮ ನಂಜುಡಮ್ಮ ಎಲ್ಲ ಹಳೆ ಹೆಸರು ಅದು ಆಗದು ..ಈಗ ನಾನು ಎನ್ನ ಹೆಸರು ಸುಬ್ಬ ರಾಜ ಹೇಳಿ ಇರುವುದನ್ನು ಎಸ್ .ರಾಜ ಎಂದು ಚಿಕ್ಕದು ಮಾಡಿ ಚಂದದ ಮಾಡಿಲ್ವಾ ?ಈಗ ಮನೆಯವರಿಗೆ  ಬಿಟ್ರೆ ಬೇರೆ ಯಾರಿಗೂ ನನ್ನ ಹೆಸರಿನ ಎಸ್ ಎಂದರೆ  ಸುಬ್ಬ ಎಂಬ ವಿಚಾರ ಗೊತ್ತಿಲ್ಲ ಅಲ್ವಾ ಗ?ಹಾಗೆ ನಿನ್ನ ಹೆಸರನ್ನು ಬೇರೆ ಮಾಡುವ ..ನೀನೊಂದು ಚೆಂದದ ಹೆಸರು ಹೇಳು .
ಸುಬ್ಬಿ :ಆಗಬಹುದು ..ಹಾಗಾದರೆ  ನಾನು ಯಾವ ಹೆಸರು ಹೇಳಬೇಕು?
ಸುಬ್ಬ :( ಯೋಚನೆ ಮಾಡಿ ) ಹ್ಹ ..ನೀನು ಚಂದನಾ ಎಂದು ಹೇಳು
ಸುಬ್ಬಿ :ಹ್ಹ  ಆಗಬಹುದು ಹೆಸರು ಚಂದ ಇದೆ ಇದು  ಚಂದನಾ ಕನ್ನಡ ವಾಹಿನಿ
ಸುಬ್ಬಿ :ತಲೆ ಹರಟೆ ಮಾಡಬೇಡ ,ಸುಮ್ಮನೆ ಇರು
ಸುಬ್ಬಿ :ಆಯಿತು ಮಾರಾಯರೇ ,ಏನು ಹೇಳಬೇಕು  ನಾನು? ಹೇಳಿ
ಸುಬ್ಬ :ನೀನು ಚಂದಕ್ಕೆ ಚಂದನಾ ಎಂದು ಹೇಳು
ಸುಬ್ಬ : ಚಂದಕ್ಕೆ ಚಂದನಾ
ಸುಬ್ಬಿ :ಅಯ್ಯೋ ರಾಮ !ಚಂದಕ್ಕೆ ಚಂದನಾ ಅಲ್ಲ ಮಾರಾಯ್ತಿ ಖಾಲಿ ಚಂದನಾ
ಸುಬ್ಬಿ : ಖಾಲಿ ಚಂದನಾ
ಸುಬ್ಬ :ಅಯ್ಯೋ ದೇವರೇ ನನ್ನ ಕರ್ಮ !ಒಮ್ಮೆ ಚಂದನಾ ಎಂದು ಹೇಳು ಮಾರಾಯ್ತಿ
ಸುಬ್ಬಿ :ಚಂದನಾ
ರಾಜ : ಪುನಃ ಹೇಳು
ಸುಬ್ಬಿ :ಚಂದನಾ
 ಸುಬ್ಬ : ಗುಡ್  ನಂತರ ನಿನ್ನ ಊರು ಯಾವುದು ಎಂದು ಕೇಳುತ್ತಾರೆ ,ಏನು  ಹೇಳುತ್ತಿ?
ಸುಬ್ಬಿ : ಕೊಡೆಯಾಲ ಎಂದು ಹೇಳುತ್ತೇನೆ ..
ಸುಬ್ಬ : ಹಾಗೆ ಬೇಡ ನೀನು ಸ್ಟೈಲ್ ಆಗಿ ಮ್ಯಾಂಗಲೋರ್  ಎಂದು ಹೇಳು
ಸುಬ್ಬಿ :ಮಾಂಗನೂರು
ಸುಬ್ಬ ಮಂಗನೂರು ಅಲ್ಲ ಮಾರಾಯ್ತಿ  ಮ್ಯಾಂಗಲೋರ್
ಸುಬ್ಬಿ : ಮ್ಯಾಂಗಲೋರ್
ಸುಬ್ಬ ;ಹಾಗೆ ಹೇಳು ಸರಿಯಾಯಿದು ,ನಂತರ ಅವರು ನಿನ್ನ ಹತ್ತಿರ ನಿನಗೆ ಎಷ್ಟು ಜನ ಮಕ್ಕಳು ಎಂದು ಕೇಳಬಹುದು ಆಗ  ಏನು  ಹೇಳುತ್ತಿ?
ಸುಬ್ಬಿ :ನಿಜವಾಗಿಯೂ ಇಲ್ಲಲ್ವ ,ಎಂಥ ಮಕ್ಕಳು ಇದ್ದಾರೆ ಎಂದು ಹೇಳಬೇಕಾ  ?
ಸುಬ್ಬ : ಬೇಡ ಬೇಡ ಇಲ್ಲ ಎಂದೇ ಹೇಳುವ ,ಇಲ್ಲ ಎಂಬುದನ್ನೇ ಇಂಗ್ಲಿಷಿಲಿ ನೋ ಎಂದು ಹೇಳು
ಸುಬ್ಬಿ : ಸ್ನೋ
ಸುಬ್ಬ ಸ್ನೋ ಅಲ್ಲ ಪೌಡರ್
ಸುಬ್ಬಿ : ಸ್ನೋ ಅಲ್ಲ ಪೌಡರ್
ಸುಬ್ಬ :ಅಯ್ಯೋ ರಾಮ !ನೋ ಎಂದು ಹೇಳು ಮಾರಾಯ್ತಿ
ಸುಬ್ಬಿ : ಸ್ನೋ
ಸುಬ್ಬ : ಅಯ್ಯೋ ಕರ್ಮವೇ !ಸ್ನೋ ಅಲ್ಲ ಮಾರಾಯ್ತಿ ನೋ ನೋ ಹೇಳಿ ಹೇಳಲು ಆಗುತ್ತಿಲ್ವಾ  ನಿನಗೆ ?ನಿನ್ನ ನಾಲಗೆಗೆ ಬೆಣಚುಕಲ್ಲು ಹಾಕಿ ಉಜ್ಜಬೇಕು ..(ಕೋಪ )
ಸುಬ್ಬಿ : (ಕೋಪದಿಂದ ) ಇಕೊಳ್ಳಿ  ನೀವು  ಇಂಗ್ಲೀಷು ಕಲಿಸಿ  ಕೊಡ್ತೇನೆ ಎಂದು ಹೇಳಿದ್ದಕ್ಕೆ ನಾನು ಕಲಿಯುತ್ತಾ ಇರುವುದು ನಿಮ್ಮ ಮರ್ಯಾದೆ ಉಳಿಸುವುದಕ್ಕಾಗಿ  !ಹ್ಹ ! ಬೈದರೆ ಜೋರು ಮಾಡಿದರೆ ನಾನು ಕಲಿಯಲಾರೆ,ಮತ್ತೆ ನಿಮಗೆ ನಾಚಿಕೆ ಆದರೆ ನನಗೆ ಗೊತ್ತಿಲ್ಲ !ಏನು ಬೇಕಾದರು ಮಾಡಿಕೊಳ್ಳಿ ನನಗೆ ತುಂಬಾ ಕೆಲಸ ಇದೆ ನಾನು ಒಳಗೆ ಹೋಗುತ್ತೇನೆ..(ಒಳ ಗೆ ಹೋಗಲು ತಯಾರಾಗುತ್ತಾಳೆ )
ಸುಬ್ಬ : ಅಯ್ಯಯ್ಯೋ ನಿಲ್ಲು ನಿಲ್ಲು .. ಹೋಗಬೇಡ  ಸುಬ್ಬಿ..ಬೈಯುದಿಲ್ಲ  ಮಾರಾಯ್ತಿ ಬಾ ,ನೋ ಹೇಳಿ ಹೇಳು
ಸುಬ್ಬಿ : ನೋ
ಸುಬ್ಬ:  ಸರಿ ಹಾಗೆ ಹೇಳು ,ಮುಂದೆ ಅವರು ನಿನ್ನ ವಯಸ್ಸು ಎಷ್ಟು ಎಂದು ಕೇಳಬಹುದು ಏನು ಹೇಳುತ್ತಿ ?
ಸುಬ್ಬಿ : ನಿಜವಾಗಿ ಹದಿನಾರು ಎಂಥ ಎಪ್ಪತ್ತಾರು ಎಂದು ಹೇಳಬೇಕ?
ಸುಬ್ಬ :ಬೇಡ ಆದರೆ 16 ಕೂಡ ಬೇಡ ನನ್ನ ಸ್ನೇಹಿತರೆಲ್ಲ   ಸಮ ವಯಸ್ಸಿನವರನ್ನೇ  ಮದುವೆ ಆಗಿದ್ದಾರೆ..ಹಾಗಾಗಿ ನೀನು ನನ್ನಿಂದ 10 ವರ್ಷ ಚಿಕ್ಕವಳು ಎಂದರೆ ನನಗೆ ಒಂಥರಾ ನಾಚಿಕೆ ಆಗುತ್ತದೆ. ಅದಕ್ಕೆ ನೀನು ಇಪ್ಪತ್ತಾರು ಎಂದು  ಹೇಳು .ಅದರ ಇಂಗ್ಲಿಷಿನಲ್ಲಿ  ಟ್ವೆಂಟಿ ಸಿಕ್ಸ್ ಎಂದು ಹೇಳು
ಸುಬ್ಬಿ : ಶುಂಟಿ ಮಿಕ್ಸ್
ಸುಬ್ಬ ;(ಸ್ವಗತ ) ಓ ದೇವರೇ ಇವಳಿಗೆ ಹೇಗಪ್ಪಾ  ಹೇಳಿಕೊಡುವುದು? (ಸುಬ್ಬಿ ಹತ್ತಿರ)ನಿನಗೆ ಸದಾ ಅಡಿಗೆ ಮನೆಯದೇ ಧ್ಯಾನ ಸುಬ್ಬಿ ಅದಕ್ಕೆ ಶುಂಟಿ ಮಿಕ್ಸ್ ಎಂದು ಬರುತ್ತದೆ‌ ಅದರ ಅಡುಗೆಗೆ ಇಟ್ಟುಕೋ  ,ಈಗ ಟ್ವೆಂಟಿ ಸಿಕ್ಸ್ ಎಂದು ಹೇಳು
ಸುಬ್ಬಿ :ಟ್ವೆಂಟಿ..
ಸುಬ್ಬ : ಹ್ಹ ಹ್ಹ ..ಹಾಗೆ ಟ್ವೆಂಟಿ ಸಿಕ್ಸ್
ಸುಬ್ಬಿ : ಟ್ವೆಂಟಿ ವಿಕ್ಸ್
ಸುಬ್ಬ: ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬಿ : ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬ : ಸುಬ್ಬಿ ಎನಗೆ ಕೋಪ ಬರಿಸಬೇಡ ,ಸರಿಯಾಗಿ ಹೇಳು,ಟ್ವೆಂಟಿ ಸಿಕ್ಸ್
ಸುಬ್ಬಿ  :ಟ್ವೆಂಟಿ ಸಿಕ್ಸ್
ಸುಬ್ಬ :ವೆರಿ ಗುಡ್ ,ಇಷ್ಟು ಹೇಳಿದರೆ ಸಾಕು !
ಸುಬ್ಬಿ : ಅದು ಸರಿ ..ಆದರೆ ನೀವು  ಹೇಳಿ ಕೊಟ್ಟ ರೀತಿಯಲ್ಲಿಯೇ ಪ್ರಶ್ನೆ ಕೇಳುತ್ತಾರೆ  ಎಂದು ಹೇಗೆ ಹೇಳುವುದು ?ಸುರುವಿಗೆ ಹೆಸರು ಕೇಳುವ ಬದಲು ಊರು ಯಾವುದು ಎಂದು ಕೇಳಿದರೆ ನನಗೆ ಹೇಗೆ ಗೊತ್ತಾಗುವುದು ..?
ಸುಬ್ಬ:  (ಯೋಚಿಸಿಗೊಂಡು ) ಹೌದಲ್ಲ  ..?!ಎಂಥ ಮಾಡುದೂ ಇದಕ್ಕೆ ..ಹ್ಹ ಒಂದು ಉಪಾಯ ಗೊತ್ತಾತಿತು  ..ಅವರು ನಿನ್ನ ಹೆಸರು ಕೇಳಿದಾಗನಾನು  ಹೀಗೆ ಕಣ್ಣು ಮುಚ್ಚುತ್ತೇನೆ‌ ಒಂದು ಕ್ಷಣ (ಕಣ್ಣು ಮುಚ್ಚಿ ತೋರುಸಕ್ಕು )ಆಗ ನೀನು ಚಂದನಾ ಎಂದು ಹೇಳು ,ಅವರು ಊರಿನ ಹೆಸರು ಕೇಳುವಾಗ ನಾನು ಕೈಯನ್ನು ಹೀಗೆ ಹಣೆಯ ಮೇಲೆ ಇಡುತ್ತೇನೆ (ಕೈ ಹಣೆಗೆ ಇಟ್ಟು ತೋರಿಸುತ್ತಾನೆ)ಅದನ್ನು ನೋಡಿ ನೀನು ಮ್ಯಾಂಗಲೋರ್ ಎಂದು ಹೇಳು .ಮಕ್ಕಳು ಎಷ್ಟು ಹೇಳಿ ಕೇಳುವಾಗ ನಾನು ಹೀಗೆ ಕೆಳಗೆ ನೋಡುತ್ತೇನೆ.,ನಿನ್ನ ವಯಸ್ಸು  ಕೇಳುವಾಗ ಹೀಗೆ ಕೈ ಎತ್ತುತ್ತೇನೆ ..ಅದನ್ನು ನೋಡಿ ಟ್ವೆಂಟಿ ಸಿಕ್ಸ್ ಎಂದು ಹೇಳು ..ಸರಿಯಾ .
ಸುಬ್ಬಿ :ಸರಿ ಅವರು ಮೊದಲು ಹೆಸರು ಕೆಳುತ್ತಾರೆ  ಆಗ  ನೀವು ಕಣ್ಣು ಮುಚ್ಚುತ್ತೀರಿ ,ನಾನು ಚಂದನಾ ಎಂದು ಹೇಳಬೇಕು,ನಿಂಗ ಹಣೆಲಿ ಕೈ ಮಡುಗಿರೆ ಉರ ಹೆಸರು ಹೇಳಕ್ಕೂ ಅನಂತರ ಕೈ ಎತ್ತುತ್ತೀರಿ.. ..ಅಲ್ಲ ಅಲ್ಲ ಕೆಳಗೆ ನೋಡುತ್ತೀರಿ  ಆಗ  ನೋ ಹೇಳಬೇಕು. ಅನಂತರ ಕೈ ಎತ್ತುತ್ತೀರಿ  ಆಗ ಟ್ವೆಂಟಿ ಮಿಕ್ಸ್ ಅಲ್ಲಲ್ಲ ಟ್ವೆಂಟಿ ಸಿಕ್ಸ್ ಹೇಳಬೇಕು  ಸರಿಯಾ ..
ಸುಬ್ಬ : ಹ್ಹ ಸರಿ ಇದೆ ,ನೋಡು ನೀನು ಮನಸ್ಸು ಮಾಡಿದರೆ ಎಲ್ಲ  ಆಗುತ್ತದೆ .ಆ ಮೇಲೆ ಅವರು ಬಂದ ಕೂಡಲೇ ಹಲೋ ಎಂದು ಹೇಳಬೇಕು ಹೇಗೆ?
ಸುಬ್ಬಿ : ಹಲ್ಲೋ
ಸುಬ್ಬ : ಹಲ್ಲು ನಿನ್ನ ಬಾಯಿಯಲ್ಲಿ ಇದೆ  ಹಲೋ ಎಂದು ಹೇಳಬೇಕು.
ಸುಬ್ಬಿ : ಹಲೋ
ಸುಬ್ಬ :ಮತ್ತೆ ಹೈ ಹೀಲ್ಡ್ ಚಪ್ಪಲಿ ಹಾಕಿ ಕೊಂಡು ಕೈಯಲ್ಲಿ ಕಾಫಿ ಹಿಡ್ಕೊಂಡು ಸ್ಟೈಲ್ ಆಗಿ ತಂದು ಕೊಡಬೇಕು
ಸುಬ್ಬಿ : ಅದೆಂತದು ಹೈ ಹೈ ಹೇಳಿದರೆ ?
ಸುಬ್ಬಿ : ಅದು ಎತ್ತರದ ಚಪ್ಪಲಿ ನಂತರ ಅವರು ಹೋಗುವಾಗ ಥ್ಯಾಂಕ್ಸ್ ಹೇಳಬೇಕು
ಸುಬ್ಬಿ : ಟಾಂಕಿಸ್
ಸುಬ್ಬ : ಟಾಂಕಿ ನೀರು ತುಂಬಿಸಿ‌ಇಡಲು ನಿನ್ನ ಹತ್ತಿರ ಇಟ್ಟುಕೋ ಈಗ ಥ್ಯಾಂಕ್ಸ್ ಎಂದು ಹೇಳು
ಸುಬ್ಬಿ : ಥ್ಯಾಂಕ್ಸ್ 
ಸುಬ್ಬ : ಸರಿ ನಾನು ಪೇಟೆಗೆ ಹೋಗಿ  ಹೈ ಹೀಲ್ಡ್ ತರ್ತೇನೆ ನಿನಗೆ ..ನೀನು ಎಲ್ಲ ನೆನಪು ಮಾಡಿಕ್ಕೊಂಡು ತಯಾರಾಗಿರು .
 (ಸುಬ್ಬ ಪೇಟೆಗೆ ಹೋಗುತ್ತಾನೆ )
ಸುಬ್ಬಿ : ಅಮ್ಮ ಅಮ್ಮಾ ಇಲ್ಲಿ ಬಾ .
ಅಮ್ಮ : ಎಂಥ ಸುಬ್ಬಿ
ಸುಬ್ಬಿ : (ಭಾರೀ ಸಂತಸದಿಂದ)ನೋಡು ಅಮ್ಮಾ ನನಗೆ ಎಷ್ಟು ಬೇಗ ಇಂಗ್ಲೀಷು ಬಂತು ಗೊತ್ತಾ ?
ಅಮ್ಮ : ಹ್ಹೂ ಗೊತ್ತಾಯಿತು, ನಮಗೆ ಅಲ್ಲಿಗೆ ಕೇಳಿಕೊಂಡು ಇತ್ತು ನಿನ್ನ ಕಲಿಕೆ ಏನಾದರು ಎಡವಟ್ಟು ಆಗದಿದ್ದರೆ ಸಾಕು....
ಸುಬ್ಬಿ : ಏನಾಗಲಿಕ್ಕಿಲ್ಲ  ಬಿಡು ..ನಾವು ಸ್ವಲ್ಪ ಸ್ವೀಟ್  ಮತ್ತೆ  ತಿಂಡಿ ಮಾಡುವ ಬಾ
(ಅಡಿಗೆ ಸಿದ್ಧತೆಯ ಅಭಿನಯ )
    (ಟಕ್ ಟಾಕ್ ಶಬ್ದ ..
ಸುಬ್ಬಿ ; ಓ ಇವರು ಬಂದರು ಎಂದು ಕಾಣುತ್ತೆ
(ಸುಬ್ಬ ಒಳಂಗೆ ಬತ್ತ )
ಸುಬ್ಬ :ಇಕೋ ಹೈ ಹೀಲ್ಡ್ ..ಹಾಕಿಕೋ..
ಸುಬ್ಬಿ : (ಜಾರಿ ಬೀಳುಲೇ ಆಗಿ )ಹ್ಹಾ ..
ಅಮ್ಮ : ಜಾಗ್ರತೆ ..ಜಾಗ್ರತೆ ..ಸರಿ ನೀನೆಲ್ಲ ಅಭ್ಯಾಸ ಮಾಡಿಕೋ ..ನಾನು ಒಳಗೆ  ತಿಂಡಿ ತಯಾರು ಮಾಡುತ್ತೇನೆ..
ಸುಬ್ಬ : ಎಲ್ಲ ನೆನಪಿದೆಯಲ್ಲ ಸುಬ್ಬಿ ..ಹೆಸರು ಹೇಳು ..
ಸುಬ್ಬಿ : ನೀವು ಕಣ್ಣು ಮುಚ್ಚಿಲ್ಲ ..
ಸುಬ್ಬ : ಹ್ಹ ಹ್ಹಾ ..ಕಣ್ಣು ಮುಚ್ಚಿದೆ
ಸುಬ್ಬಿ :ಚಂದನಾ
ಸುಬ್ಬ :ಊರು (ಹಣೆ ಮುಟ್ಟಿ )
ಸುಬ್ಬಿ:ಮ್ಯಾಂಗಲೋರ್
ಸುಬ್ಬ :ವೆರಿ ಗುಡ್ ಸುಬ್ಬಿ ,ಒಪ್ಪಕ್ಕ ನೀನು ..ಮಕ್ಕ ಳು(ತಲೆ ಕೆಳಗೆ ಹಾಕಿ )
ಸುಬ್ಬಿ: ಆ ..ಎಂತದಪ್ಪಾ ..ಹ್ಹ ಹ್ಹಾ ಟ್ವೆಂಟಿ ಸಿಕ್ಸ್ ಸರಿಯ ?
ಸುಬ್ಬ :ಅಲ್ಲ ಅಲ್ಲ ನೋ
ಸುಬ್ಬಿ : ಹೌದೌದು  ನನಗೆ ಮರೆತು ಹೋಯಿತು ..ನೋ
ಸುಬ್ಬ :ವಯಸ್ಸು ?
ಸುಬ್ಬಿ : ಟ್ವೆಂಟಿ ಸಿಕ್ಸ್ ..ಹೋಗುವಾ ಥ್ಯಾಂಕ್ಸ್ ಬರುವಾಗ ಹಲೋ ಸರಿ  ತಾನೇ?
ಸುಬ್ಬ :ಸರಿ ಇದೆ  ನಿನಗೆ ಮನಸ್ಸು ಆದರೆ ಎಲ್ಲ ಬರುತ್ತದೆ..ಆದರೆ ಮನಸ್ಸು ಆಗುವುದು  ಮಾತ್ರ ನಮ್ಮ ಮೋಡೆ ಕೋಣ ಕರು  ಹಾಕಿದಾಗ  .(ನಗು )
ಸುಬ್ಬಿ : ಇಕೊಳ್ಳಿ ಬೇಡ !
(ಬಾಗಿಲು ಟಕ ಟಕ್ ಟಕ್ ಶಬ್ದ )
ಸುಬ್ಬ :ಅವರು ಬಂದರು ಎಂದು ಕಾಣುತ್ತೆ ಸುಬ್ಬಿ ನೀನು ಒಳಗೆ ಇರು ನಾನು ಕರೆದಾಗ  ಬಾ ..
                                 (ಗೆಳೆಯರ ಪ್ರವೇಶ )
ಸುಬ್ಬ :welcome friends welcome ,please be seated
Friends :thanks
Eriend 1 :how are you Mr S .Raja ?
ಸುಬ್ಬ:Iam very fine ,thanks ,how are you dears ?
Friends :we are fine. thanks
Friend 1 :Your house is very beautiful.You must be proud of it
ಸುಬ್ಬ :thanks ,credit goes to my wife
Friend 2: By the by Mr.S.Raja,where is your wife ?
ಸುಬ್ಬ: just wait, I will call her..chandana ..chandana..
 ಸುಬ್ಬಿ : ಏನ್ರೀ  ..?ಹ್ಹ ಹ್ಹ ..!ಹಲ್ಲೂ ಹಲ್ಲೂ ..!!(ಸುಬ್ಬ ಕೋಪದಿಂದ ನೋಡುತ್ತಾನೆ ,ಗಾಭರಿ ಆಗಿ )ಅಲ್ಲ ಅಲ್ಲ ..ಥ್ಯಾಂಕ್ಸ್ ..ಥ್ಯಾಂಕ್ಸ್
(ಸುಬ್ಬ ನಾಚಿಕೆ ಆಗಿ ಹಣೆಗೆ ಕೈ ಹಿಡಿಯುತ್ತಾನೆ ಅದೇ ಹೊತ್ತಿಗೆ)
Friend 1:How are you Mrs Raja?May I know your name please
ಸುಬ್ಬಿ :(ಸುಬ್ಬ ಹಣೆಗೆ ಕೈಇಟ್ಟಿದ್ದನ್ನು  ನೋಡಿ) (ಸ್ವಗತ ) ಓ ಇವರು ಹಣೆಗೆ ಕೈ ಇಟ್ಟಿದ್ದಾರೆ  ಅಂದ್ರೇ  ಅವರು ಮೊದಲಿಗೆ ಊರ ಹೆಸರು ಕೇಳಿರಬೇಕು ..ಹಾಗಾಗಿ ಮ್ಯಾಂಗಲೋರ್ ಎಂದೇ ಹೆಳುತ್ತೇನೆ ..(ಪ್ರಕಾಶ ) ಮ್ಯಾಂಗಲೋರ್
(ಇದರ ಉತ್ತರ ಕೇಳಿ ತಲೆ ಕೆಟ್ಟು ಕಣ್ಣು ಮುಚ್ಚಿದ ಸುಬ್ಬ )
Friend 2 : (ಸಂಶಯದಿಂದ ಮುಖ ಮುಖ ನೋಡಿ )you are from which place ?
ಸುಬ್ಬಿ :( ಸುಬ್ಬ ಕಣ್ಣು ಮುಚ್ಚಿದ್ದರ ನೋಡಿಕ್ಕಿ  )ಚಂದನಾ
Friend 1 :She is very young
Friend 2 :How old are you Mrs Raja ?
 (ನಾಚಿಕೆಂದ ಸುಬ್ಬ ತಲೆತಗ್ಗಿಸಿ ನಿತ್ತಿದ್ದ  )
ಸುಬ್ಬಿ : (ಸುಬ್ಬ ತಲೆ ಕಂತು ಹಾಕಿದ್ದರ ನೋಡಿಕ್ಕಿ ) ನೋ
friend  2 : (ವಿಚಿತ್ರವಾಗಿ ನೋಡಿ ) Do you have any children ?
(ಸುಬ್ಬ ಒಳ ಹೋಗು ಹೇಳಿ ಸನ್ನೆ ಮಾಡಿದ )
ಸುಬ್ಬಿ : (ಸುಬ್ಬನ ಸನ್ನೆಯ ಕೈ ಎತ್ತಿದ್ದು   ಎಂದು ಭಾವಿಸಿ ) ಟ್ವೆಂಟಿ ಸಿಕ್ಸ್
friends :Oh my God!
ಸುಬ್ಬ : ಸುಬ್ಬಿ ಒಳಗೆ ಹೋಗು ಒಳಗೆ ಹೋಗು ಒಮ್ಮೆ..
Friends : Mr S. Raja Is your wife litle  mad ?! (ತಲೆ ಕೆಟ್ಟಿದ ಹೇಳುವಾಗೆ ಅಭಿನಯಿಸಿ ಕೇಳಿದರು )
ಸುಬ್ಬ :Sorry my friends sorry She doesn’t know English ,I forgotton to tell
Friends :ok its all right,we will come again ,It was nice to see you and your wife
ಸುಬ್ಬ : Thanks ,It is our pleasure
ಸುಬ್ಬಿ : ( ಗಡಿ ಬಿಡಿಲಿ ಒಳಗಿನಿಂದದ ಕಾಫಿ ರುವ ಬದಲು ಬದಲು ಚಪ್ಪಲಿ ಹಿಡ್ಕೊಂಡು ಬಂದು ) ಹಲೋ ಹಲೋ ..
Friends : What is this ?
ಸುಬ್ಬಿ : ಹೈ .. ಹೈ ..ಒಹ್ ಕಾಫಿ ತರುತ್ತೇನೆ.
Friends: ok..ok all right ,May God bless you ,see you again
                                           (ಹೋಗುತ್ತಾರೆ)
ಸುಬ್ಬ : ಅಲ್ಲ ಸುಬ್ಬಿ ನನ್ನ ಮರ್ಯಾದೆ ತೆಗೆದೆ ಅಲ್ವಾ  ..!ಛೆ ..
ಸುಬ್ಬಿ : ನಾನೇನು  ಮಾಡಿದೆ ?ಎಲ್ಲ ನೀವು ಹೇಳಿ ಕೊಟ್ಟ ಹಾಗೆ ನಿಮ್ಮ ಕೈ ಕಣ್ಣು ನೋಡಿಗೊಂಡೆ  ಹೇಳಿದ್ದೆ  ಅಷ್ಟು ಸರಿಯಾಗಿ ಮಾತಾಡಿನಾಡಿದ್ದೆ ಇಂಗ್ಲಿಷಿನಲ್ಲಿ !
ಸುಬ್ಬ : ಹೇಳಿದ್ದೇನೋ ನಾನು ಹೇಳಿ ಕೊಟ್ಟ ಹಾಗೆ,ಆದರೆ ಎಲ್ಲ ಉಲ್ಟಾ ಪಲ್ಟಾ ಹೇಳಿದ್ದೀಯ ,ಹೆಸರು ಕೇಳಿದರೆ ಊರು ,ಊರು ಕೇಳಿದರೆ ಹೆಸರು ,ವಯಸ್ಸು  ಕೇಳಿದರೆ ನೋ ಮಕ್ಕಳು ಎಷ್ಟು ಕೇಳಿದರೆ ೨೬ ಎಂದು ಹೇಳಿದೆ !ನೀನು ಬುದ್ಧಿವಂತೆ ಎಂದು ಭಾವಿಸಿ ಆನು ಮೋಸ ಹೋದೆ ..
ಸುಬ್ಬಿ :ಇಲ್ಲಲ್ಲಾ  ನಾನು ಎಲ್ಲ ಸರಿ ಹೇಳಿದ್ದೆನೆ !ನೀವು  ಶುರುವಿಗೆ ಹಣೆಗೆ ಕೈ ಇಟ್ರಿ ಆಗ ನಾನು ಊರು ಹೇಳಿದೆ ,ನಂತರ ನೀವು ಕಣ್ಣು ಮುಚ್ಚಿದಿರಿ,ಕಣ್ಣು ಮುಚ್ಚಿದರೆ ಹೆಸರು ಹೇಳು ಎಂದು ಹೆಳಿ ಕೊಟ್ಟದ್ದು ನೀವೇ ತಾನೇ ? ಹಾಗೆ ಹೇಳಿದೆ ನಾನು ..ನೀವು ತಲೆ ತಗ್ಗಿಸಿದಾಗ  ಟ್ವೆಂಟಿ ಸಿಕ್ಸ್  ಎಂದು ಹೇಳಿದ್ದೆ ಕೈ ಎತ್ತಿದಾಗ ನೋ ಹೇಳಿದ್ದೆ ಎಲ್ಲ ಸರಿಯಾಗಿಯೇ ಹೇಳಿದ್ದೇನೆ ನಾನು ನನ್ನ ಬೈಬೇಡಿ  ಸುಮ್ಮ ಸುಮ್ಮನೆ ..ಬೈಯಲು ನಾನೇನು  ತಪ್ಪು ಮಾಡಿರುವೆ ಹೇಳಿ  ..ಶುರುವಿಲಿ ರಜ್ಜ ಗಡಿ ಬಿಡಿ ಆಯಿತು ಅದು ಬಿಟ್ರೆ ಉಳಿದದ್ದೆಲ್ಲ ಸರಿ ಹೇಳಿಲ್ವಾ ನಾನು ?
ಸುಬ್ಬ :ಅಯ್ಯೋ ರಾಮ ದೇವರೇ !ನೀನು ಶುರುವಿಗೆ ಥ್ಯಾಂಕ್ಸ್ ಹೇಳಿದ್ದು ನೋಡಿ ತಲೆ ಕೆಟ್ಟು ಹಣೆ ಹಣೆ ಬಡ್ಕೊಂಡ್ರೆ ಅದನ್ನು ಹಣೆ ಮುಟ್ಟಿದ್ದು ಎಂದು ಭಾವಿಸುದ ?ಅಷ್ಟು ಗೊತ್ತಾಗುವುದಿಲ್ವ ನಿಂಗೆ ?ನಿನ್ನ ಹೆಡ್ಡು ಹೆಡ್ಡು ಬುದ್ಧಿಗೆ ನಾಚಿಕೆ ಆಗಿ ಕಣ್ಣು ಮುಚ್ಚಿದರೆ ಅದನ್ನು ಕಣ್ಣು ಮುಚ್ಚಿದ್ದು  ಎಂದು ತಿಳಿಯುದ ..?! ಛೆ ..ಎಲ್ಲ ನನ್ನ ಕರ್ಮ ! ಹಣೆ ಬರ ,,ಅಲ್ಲ ಸುಬ್ಬಿ ಅವರು ನಿನ್ನ mad .ಅ  ಕೇಳಿದರು  ಗೊತ್ತಾ ?
ಸುಬ್ಬಿ :ಅದೆಂತದು ಮೇ ಮೇ ಹೇಳ್ರೆ ?
(ಅಪ್ಪ ಅಮ್ಮ ದೂರಲ್ಲಿ ನಿಂತು ನೋಡುತ್ತಾ ಇದ್ದಾರೆ )
ಸುಬ್ಬ : ಇಲ್ಲಪ್ಪಾ ಇಲ್ಲ ಇನ್ನು ನಿನಗೆ ಇಂಗ್ಲೀಷು ಹೇಳಿ ಕೊಡಲು ನನ್ನಿಂದ  ಸಾಧ್ಯವಿಲ್ಲ !ನಿನಗೆ ಹೇಳಿಕೊಡಲು  ಆ ಬ್ರಹ್ಮನೇ ಬರಬೇಕಷ್ಟೇ  ..ನಿನ್ನಂತವರಿಗೆಇಂಗ್ಲೀಷು ಹೇಳಿ ಕೊಟ್ಟದಕ್ಕೆ ಚಪ್ಪಲಿಯಲ್ಲಿ ಹೊಡ್ಕೋಬೇಕು ನಾನು
ಸುಬ್ಬಿ : (ಕೈಯಲಿ ಇದ್ದ ಚಪ್ಪಲಿ ತೋರ್ಸಿ ) ಹೊಡಿಬೇಕಾ ?
ಅಮ್ಮ : (ಮುಂದೆ ಬಂದು ) ಎಂಥ ಸುಬ್ಬಿ ನಿನ್ನದು ಅವತಾರ ?ಗಂಡನಿಗೆ ಹೊಡೆಯಲು  ಚಪ್ಪಲಿ ತೋರಿಸುತ್ತೀಯ ?ನಾಚಿಕೆ ಆಗಲ್ವಾ ನಿನಗೆ ?ತಪ್ಪಾಯಿತು ಎಂದು ಹೇಳು  ಹೋಗು !
ಸುಬ್ಬ : ಅದಳ ತಪ್ಪಾಯಿತು ಬೇಡ ಏನೂ ಬೇಡ ..ನಾನಿನ್ನು ಒಂದು ಕ್ಷಣವು ಇವಳೊಟ್ಟಿಗೆ ಇರುವುದಿಲ್ಲ,ನಾನು ಈಗಲೇ ಮನೆ ಬಿಟ್ಟು ಹೋಗುತ್ತೇನೆ .. (ಕೋಪದಲ್ಲಿ ಹೊರಗೆ ಹೋಗಲು ಹೊರಟ  )
                                (ಸುಬ್ಬಿ ಅಳುತ್ತಾಳೆ)
ಅಪ್ಪ : ನಿಲ್ಲು ಸುಬ್ಬ ನಿಲ್ಲು ..(ಹೆಗಲಿಂಗೆ  ಕೈ ಹಾಕಿ ) ಎಂಥ ಸುಬ್ಬ ಇದು ಮಕ್ಕಳಾಟಿಕೆ ! ಇಷ್ಟು ಸಣ್ಣ ಕಾರಣಕ್ಕೆಲ್ಲ  ಕೋಪ ಮಾಡಿಗೊಂಡು ಮನೆ ಬಿಟ್ಟು ಹೋಗ್ತಾರಾ ?ಸುಬ್ಬಿ ಸ್ವಲ್ಪ ಹಠ ಮಾರಿ ಎಂಬುದು ಬಿಟ್ರೆ ಒಳ್ಳೆಯ ಗುಣದ ಹುಡುಗಿ ಅಲ್ವ ?ಇಷ್ಟಕ್ಕೂ ಇಂಗ್ಲೀಷ್ ಕಲಿಸಲು ಹೊರಟದ್ದು  ನೀನೇ ತಾನೇ ?ಇಂಗ್ಲೀಷು ಗೊತ್ತಿಲ್ಲದ  ಅವಳು  ನಿನ್ನ ನೋಡಿ ಉತ್ತರ ಕೊಟ್ಟಿದ್ದಾಳೆ ..ಏನೋ ಸ್ವಲ್ಪ ತಪ್ಪಾಗಿದೆ ಅದರಲ್ಲಿ ತಲೆ ಹೋಗುವಂತಹಾದ್ದು ಏನಿದೆ ?ಎಷ್ಟಾದರೂ ಸುಬ್ಬಿ ನಿನಗಾಗಿಯೇ ಹುಟ್ಟಿದ ಕೂಸು ಅಲ್ವಾ?ಅದಕ್ಕೆ ಈಗ ಇನ್ನೂ 16-17  ವರ್ಷ ಅಷ್ಟೇ ,ಅಜ್ಜಿಯ ಆಸೆ ತೀರಿಸಲೆಂದು   ತುಂಬಾ ಚಿಕ್ಕ ವಯಸ್ಸಿನ  ಅವಳಿಗೂ ನಿನಗೂ ಮದುವೆ ಮಾಡಿದ್ದು ತಾನೇ.. ನಿನಗೂ 25 -26 ವರ್ಷ ,,ಚಿಕ್ಕ ವಯಸ್ಸೇ ..ಆದರೆ ಅವಳು ಇನ್ನೂ ಸಣ್ಣವಳು ಅಲ್ವಾ ? ಅವಳಿಗೆ ಶಾಲೆಗೆ ಹೋಗುವ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿದ್ದು ನಮ್ಮ  ತಪ್ಪು ..ಆದರೆ ಮದುವೆ ಅಗಿ ಬಿಟ್ಟಿದೆ ಅಲ್ವ  ? ಕ್ಷಮಿಸಿ ಬಿಡು ,ಎಷ್ಟಾದರೂ ಅವಳು ನಿನ್ನ ಪ್ರೀತಿಯ ಹೆಂಡತಿ ಅಲ್ವಾ? ಅಲ್ಲಿ ನೋಡು .ಹೇಗೆ ಅಳುತ್ತಾ ಇದ್ದಾಳೆ ನೋಡು...ಹೋಗು ಅವಳನ್ನು ಸಮಾಧಾನ ಮಾಡು
ಸುಬ್ಬ : ನನ್ನದೇ ತಪ್ಪು ಸುಬ್ಬಿ  ಅಳಬೇಡ .ಇನ್ನು ನಿನ್ನ ಯಾವತ್ತಿಗೂ ಇಂಗ್ಲೀಷು ಬರಲ್ಲ ಎಂದು ಹಂಗಿಸುವುದಿಲ್ಲ ,ಬೈಯುವುದಿಲ್ಲ ,,ಖಂಡಿತಾ ..ಇಂಗ್ಲೀಷ್ ಭಾಷೆಯ ಭ್ರಮೆ ಬಿಟ್ಟು ಹೋಯಿತು ಎನಗೆ ,ನನ್ನ ಕ್ಷಮಿಸು ಚಿನ್ನ ..ಇನ್ನು ಅಳಬೇಡ‌.ನನ್ನದೇ ತಪ್ಪು.
ಸುಬ್ಬಿ : ಇಲ್ಲ ನನ್ನದು ಕೂಡ ತಪ್ಪು ಇದೆ. ನೀವು  ಅನೇಕ ಬಾರಿ   ಹೇಳಿದ್ದರೂ ಇಂಗ್ಲೀಷ್ ಮಾತನಾಡಲು ಕಲಿಸುವ ಕ್ಲಾಸ್ ಗೆ ಹೋಗಿ ಕಲಿಯದ್ದು ನನ್ನ ತಪ್ಪು .ನಾಳೆಯಿಂದಲೇ ನಾನು ಕ್ಲಾಸೆಗೆ ಹೋಗಿ ಕಲಿತ್ತೆ...
ಸುಬ್ಬ : ಬೇಡ ಸುಬ್ಬಿ ನನಗೆ ಈಗ ಇಂಗ್ಲೀಷಿನ ಭ್ರಮೆ ಪೂರ್ತಿ  ಬಿಟ್ಟು ಹೋಗಿದೆ,ಇಂಗ್ಲೀಷು ಬಾರದಿದ್ದರೆ ಏನೂ ತೊಂದರೆ ಇಲ್ಲ ,  ಅದು ನಾಚಿಕೆ ಹೇಳುವ ಭ್ರಮೆ ಬೇಡ .ಚಂದದ ನಮ್ಮ ಭಾಷೆ ಕನ್ನಡ ಕಸ್ತೂರಿ ಇರುವಾಗ  ಇಂಗ್ಲೀಷಿನ ಹಂಗು ನಮಗೆಂತಕೆ?ನಮ್ಮ ಜಗಳ ನೋಡಿ ಅತ್ತೆ ಮಾವ ಏನು ಭಾವಿಸಿದರೋ  ಏನೊ ?
ಸುಬ್ಬಿ : ಎಲ್ಲ ನೀವೇ ಮಾಡಿದ್ದು ..
ಸುಬ್ಬ : ಪುನಃ ಜಗಳ ಸುರು ಮಾಡಿದೆಯ ?ಜಗಳ ಸಾಕು ಇಲ್ಲಿ ಬಾ .
ಅಪ್ಪ : (ಅಮ್ಮನ ಹತ್ತಿರ ) ; ಅಬ್ಬ ..ಅವರು ರಾಜಿ ಆದರು ..ತಪ್ಪು ಅವರದ್ದಲ್ಲ ನಮ್ಮದೇ .ಈಗ ಕಾನೂನೇ ಇದೆ 18 ವರ್ಷಕ್ಕೆ ಮೊದಲು ಮದುವೆ ಮಾಡಬಾರದು ಎಂದು  .
ನಾವು  ಆಡುವ ಶಾಲೆಗೆ ಹೋಗುವ ಹದಿನಾಲ್ಕು ವರ್ಷಕ್ಕೆ ಸುಬ್ಬಿಯ ಮದುವೆ ಮಾಡಿದ್ದು ನಮ್ಮದು ಅಕ್ಷಮ್ಯ ಅಪರಾಧ  ಗೊತ್ತಾದರೆ  ನಮಗೆ ಜೈಲು ಆಗುತ್ತದೆ. .ಹಿರಿಯರ ಆಸೆ  ಈಡೇರಿಸಲು  ಎಂದು ನಾವು  ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಡಿ ಕುಣಿವ  ಕಾಲದಲ್ಲಿ ಮದುವೆ ಮಾಡ್ರೆಯ ಹೀಂಗೆಯ ಆಗುತ್ತದೆ .ಒಂದು ಕೆಲಸ ಮಾಡುವ ,ಸುಬ್ಬ ಹೇಗೂ ಬರುವ ತಿಂಗಳು ಅಮೆರಿಕಕ್ಕೆ ಹೋಗುತ್ತಾನೆ ಅಲ್ವಾ?ಅವನಿಗೆ  ಈಗ ಇವಳನ್ನು ಒಟ್ಟಿಗೆ ಕರಕೊಂಡು ಹೋಗಲು  ಆಗುವುದಿಲ್ಲ ಅಲ್ವಾ? ಅವನು ಮತ್ತೆ ಹಿಂದೆ  ಬರುವಾಗ ಎರಡು ಮೂರು ವರ್ಷಾಗುತ್ತದೆ ,ಅಷ್ಟು ಸಮಯ ಇನ್ನು ಸುಬ್ಬಿ ಶಾಲೆಗೆ ಹೋಗಿ ಕಲಿಯಲಿ ,ಮುಂದೆ ಕೂಡ ಅವಳು  ಓದಲಿ,ನಾವು ಮಾಡಿದ ತಪ್ಪನ್ನು  ಸ್ವಲ್ಪ  ಆದರೂ ಸರಿ ಮಾಡುವ
ಅಮ್ಮ :ಸರಿ  ಹಾಗೆ ಮಾಡುವ   
ಅಪ್ಪ : (ಸಭಿಕರ ಹತ್ತರೆ )..ನಮ್ಮನ್ನು   ನೋಡಿ ಆದರೂ ಇನ್ನು ಬೇರೆ ಯಾರೂ ಹುಡುಗಿಯರಿಗೆ  18 ವರ್ಷಕ್ಕೆ ಮೊದಲು ಮದುವೆ ಮಾಡಬಾರದು  ಎಂದು ಅರ್ಥ ಮಾಡಿಕೊಳ್ಳಲಿ ,ಇನ್ನು ನೀವು  ಆರೂ ಕೂಡಾ ನಾವು ಮಾಡಿದ  ಮಾಡಿದ ತಪ್ಪನ್ನು ಮಾಡಬೇಡಿ  ಆಯ್ತಾ  ?ಹೆಣ್ಣೊಂದು ಕಲಿತರೆ ಇಡೀ ಸಮಾಜವೇ ಕಲಿತಂತೆ..ಹೆಣ್ಣುಮಕ್ಕಳನ್ನು ಓದಿಸಿ. ಸ್ವಾಭಿಮಾನದಿಂದ .ಕಾಲ ಮೇಲೆ ನಿಲ್ಲುವ ಹಾಗೆ ಬೆಳೆಸಿ..ಹದಿನೆಂಟು ತುಂಬುವ ಮೊದಲೇ ಮದುವೆ ಮಾಡಬೇಡಿ..ಅವಳಿಗೆ ಬೆಳೆಯಲು ಅವಕಾಶ ಕೊಡಿ.ಹೆಣ್ಣು ಮಗು ಭಾರವಲ್ಲ..ಅವಳು ಮನೆಯ ಭಾಗ್ಯ ದೇವತೆ.. ಜಗತ್ತಿಗೆ ಬೆಳಕ ಕೊಡುವವಳು ಅವಳು..ಅವಳಿಗೆ  ಶಿಕ್ಷಣ ಕೊಟ್ಟು ಸ್ವಾಭಿಮಾನದಿಂದ ಬದುಕಲು ಅವಕಾಶ ಕೊಡೋಣ ..
                                     ಶುಭಂ

Saturday, 7 September 2019

ಗುಡ್ಡೆ ಅಜ್ಜನೇ ವಿಕ್ರಮನಿಗೆ ದಾರಿ ತೋರಿಸು

ದಾರಿ ತೋರಿಸುವ ಗುಡ್ಡೆ ಅಜ್ಜನೇ  ಇಲ್ಲಿಂದಲೇ ತಲೆ ಬಾಗುವೆ ..ದಾರಿ ತಪ್ಪಿದ ವಿಕ್ರಮನಿಗೆ ದಾರಿ ತೋರಿಸು..
ನನ್ನ ಅಜ್ಜನ ಮನೆ ಹತ್ತಿರ ಪೊಳ್ಳಕಜೆ( ಕಾಸರಗೋಡು ಜಿಲ್ಲೆಯ ಮೀಯಪದವು ಸಮೀಪದಲ್ಲಿ) ಎಂಬ ದುರ್ಗಾರಾಧನೆಯ ಪವಿತ್ರ ಸ್ಥಳ ಇದೆ‌.
ನನ್ನ ತಂದೆ ಮನೆ ಕೋಳ್ಯೂರಿನಿಂದ ಅಜ್ಜನ ಮನೆಗೆ ಇಲ್ಯಾಗಿಯೇ ಹೋಗಬೇಕು. ಈ ದಾರಿಯಲ್ಲಿ ಒಂದು ದೇರ ಸಿಗುತ್ತದೆ. ದೇರದ ಆರಂಭದಲ್ಲಿ ಒಂದು ದೊಡ್ಡ ಕುಂಟಾಲದ ಮರ,ಅದರಡಿಯಲ್ಲಿ ಗುಳಿಗನ ಕಲ್ಲು ಇದೆ‌.ಆ ದಾರಿಯಲ್ಲಿ ಹೋಗಿ ಬರುವವರೆಲ್ಲ ಅಲ್ಲೇ ಪೊದೆಲುಗಳಿಂದ ಹೂ ಅಥವಾ ಚಿಗುರು ಕೊಯ್ದು ಗುಳಿಗನ ಕಲ್ಲಿಗೆ ಹಾಕುವುದು ವಾಡಿಕೆ‌
ಒಂದು ದಿವಸ ನನ್ನ ಸಣ್ಣಜ್ಜಿ ಮತ್ತು ನಾನು ಈ ಕಾಡಿನ  ದಾರಿಯಲ್ಲಿ ಹೋಗುವಾಗ ದಾರಿ ತಪ್ಪಿದೆವು.ಯಾವ ಕಡೆ ಹೋಗಬೇಕೆಂದು ತಿಳಿಯಲಿಲ್ಲ.ಆಗ ನನ್ನ ಸಣ್ಣಜ್ಜಿ ನಾವು ಗುಳಿನ ಕಲ್ಲಿಗೆ ಚಿಗುರು  ಹಾಕಲಿಲ್ಲ.ಅದಕ್ಕೆ ನಮಗೆ ದಾರಿ ಗೊತ್ತಾಗುತ್ತಿಲ್ಲ ಎಂದು ಹೇಳಿ ಅಲ್ಲೇ ಸಮೀಪದ ಪೊದೆಗಳಲ್ಲಿ ಇದ್ದ ಕಿಸ್ಕಾರದ ಹೂಗಳನ್ನು ಕೊಯ್ದು ಒಂದು ಕಡೆ ಹಾಕಿ ಗುಳಿಗನಿಗೆ ಕೈ‌ಮುಗಿದರು.
ಅದು ನಿರ್ಜನ ಪ್ರದೇಶ, ಜನಸಂಚಾರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.ಆದರೂ ಆ ದಾರಿಯಲ್ಲಿ ಯಾರೋ ಒಬ್ಬರು ಸೊಪ್ಪಿನ ಕಟ್ಟ ಹೊತ್ತುಕೊಂಡು ಬಂದರು. ಅಜ್ಜ ಅಜ್ಜಿ ನಾವು  ದಾರಿ ತಪ್ಪಿದ ಬಗ್ಗೆ ತಿಳಿಸಿ ದಾರಿ ತೋರಿಸಲಯ ಹೇಳಿದರು. ಅವರು ನಮಗೆ ಯಾವ ಕಡೆ ಹೋಗಬೇಕೆಂದು ತಿಳಿಸಿ ಕಾಡಿನ ದಾರಿಯಲ್ಲಿ ದೇರ ಇಳಿದು ಹೋದರು.
ಅವರು ಸೂಚಿಸಿದಂತೆ ಸ್ವಲ್ಪ ದೂರ ನಡೆದಾಗ ನಾವು ಯಾವಾಗಲೂ ಓಡಾಡುತ್ತಿದ್ದ ದಾರಿ ಕಾಣಿಸಿತು ಅನಂತರ ಯಾವುದೇ ಸಮಸ್ಯೆ ಇಲ್ಲದೆ ಮನೆ ಸೇರಿದೆವು.
ನನ್ನ ಅಜ್ಜಿ ಆ ದಿನ ಅವರು ಚಿಕ್ಕಾಗಿದ್ದಾಗ ನಡೆದ ಒಂದು ವಿಚಾರ ಹೇಳಿದರು ‌.ಅವರು ಚಿಕ್ಕವರಿದ್ದಾಗ ಅವರು,ಅವರ ತಾಯಿ ಮತ್ತು  ಅಕ್ಕ ಆ ದಾರಿಯಲ್ಲಿ ಹೋಗುವಾಗ ಗುಳಿಗನ ಕಲ್ಲಿಗೆ ಹೂ ಹಾಕಲು ಮರೆತರಂತೆ.ಸ್ವಲ್ಪ ದೂರ ಹೋದಾಗ ಇವರಿಗೆ ದಾರಿ ತಪ್ಪಿತು .ದಟ್ಟ ಕಾಡಿನ ಆ ದೇರದಲ್ಲಿ ಯಾವ ಕಡೆ ಹೋಗಬೇಕೆಂದು ತಿಳಿಯಲಿಲ್ಲವಂತೆ‌.
ಆಗ ಅವರ ತಾಯಿಗೆ ತಾವು ಮಾಡಿದ ತಪ್ಪುನ ಅರಿವಾಗಿ ಅಲ್ಲೇ ಸಮೀಪದ ಗಿಡಗಳಲ್ಲಿ ಇದ್ದ ಕಿಸ್ಕಾರ ( ಕೇಪುಳ) ಹೂವನ್ನು ಕೊಯ್ದು ಒಂದು ಮರದ ಅಡಿಯಲ್ಲಿ ಇರುವ ಕಲ್ಲಿಗೆ ಹಾಕಿ ನಮ್ಮದು ತಪ್ಪಾಯಿತು ಗುಡ್ಡೆ ಅಜ್ಜ( ಆ ಗುಳಿಗನನ್ನು ಗುಡ್ಡೆ ಅಜ್ಜ ಎಂದು ಕರೆಯುತ್ತಾರೆ) ನಮಗೆ ದಾರಿ ತೋರಿಸು ಎಂದು ನಮಸ್ಕಾರ ಮಾಡಿದರಂತೆ.ನಮಸ್ಕಾರ ‌ಮಾಡಿ ತಲೆ ಎತ್ತಿ ನೋಡಿದರೆ ಅವರು ಅದೇ ಗುಳಿಗ ಬನದ ಎದುರೇ ನಿಂತಿದ್ದರಂತೆ.ಅಲ್ಲಿ ಅವರಿಗೆ ಹೋಗುವ ದಾರಿ ಇತ್ತು.ಅದರ ಮೂಲಕ ಮನೆ ಸೇರಿದರಂತೆ.ಅಲ್ಲಿಯ ಗುಳಿಗನಿಗೆ  ಪ್ರಾರ್ಥನೆ ಮಾಡಿದರೆ ದಾರಿ ತಪ್ಪಿದವರು,ದಾರಿ ತಪ್ಪಿದ ಹಸು ಕರುಗಳು ಸಿಗುತ್ತವೆ ಎಂಬ ನಂಬಿಕೆ ಇದೆ ‌.ಹಾಗಾಗಿ ನಾನು ಕೂಡ ನಮ್ಮ ಗುಡ್ಡೆ ಅಜ್ಜನಲ್ಲಿ ಚಂದ್ರನಲ್ಲಿಗೆ ಹೋಗುವಾಗ ದಾರಿ ತಪ್ಪಿದ ವಿಕ್ರಮನಿಗೆ ಸರಿ ದಾರಿ ತೋರುವಂತೆ ಪ್ರಾರ್ಥನೆ ಮಾಡಿರುವೆ‌.
ನಂಬಿಕೆಯ ಮೇಲೆ ಜಗತ್ತು ನಿಂತಿದೆ ..ಇನ್ನೇನು ಹೇಳಲಿ..

Wednesday, 4 September 2019

ನನ್ನೊಳಗೂ ಒಂದು ಆತ್ಮವಿದೆ.. ನಾನೇಕೆ ಆತ್ಮ ಕಥೆ ಬರೆಯಲು ಆರಂಭಿಸಿದೆ ? ಡಾ.ಲಕ್ಷ್ಮೀ ಜಿ ಪ್ರಸಾದ

ನಾನೇಕೆ ಆತ್ಮಕಥೆಯನ್ನು ಬರೆಯಲು ಆರಂಭಿಸಿದೆ ಗೊತ್ತಾ ?
  ನಾವ್ಯಾರೂ ಶಾಶ್ವತರಲ್ಲ..
ಆದರೂ ನಾಲ್ಕೈದು ವರ್ಷ ಮಾತ್ರ ಬದುಕಬಹುದು ..ಎಂದು ಖ್ಯಾತ ನ್ಯೂರಾಲಜಿಸ್ಟ್ ಒಬ್ಬರು ಹೇಳಿದಾಗ ನನಗಾದ ದಿಗ್ಭ್ರಮೆಯನ್ನು ಶಬ್ದಗಳಲ್ಲಿ ವರ್ಣಿಸಲಾಗದು...ನಾನು ಸಾಕಷ್ಟು ಧೈರ್ಯವಂತೆ..ಆದರೂ ಇನ್ನು ನಾಲ್ಕೈದು ವರ್ಷದ ಬದುಕು ಮಾತ್ರ ನನಗುಳಿದಿದೆ ಎಂದವರು ಹೇಳಿದಾಗ ಜಗತ್ತಿಡೀ ಶೂನ್ಯವಾಗಿ ಕಂಡದ್ದು ನಿಜ..
ಕೆಲ  ವರ್ಷಗಳ ಹಿಂದೆ ತೀವ್ರ ತಲೆ ನೋವು ಜ್ವರ ಬಂದಿತ್ತು‌.ಹತ್ತಿರದ ಡಾ.ರವಿ ಅವರ ಕ್ಲಿನಿಕ್ ಹೋಗಿ ಅವರು ಹೇಳಿದಂತೆ ಔಷಧ ತಗೊಂಡಿದ್ದರೂ ಕಡಿಮೆಯಾಗಿರಲಿಲ್ಲ..ಹಾಗಾಗಿ ತಜ್ಞ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಂಡು ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ನನ್ನ ಸರದಿಗಾಗಿ ಕಾಯುತ್ತಾ ಇದ್ದೆ.ಇದ್ದಕ್ಕಿದ್ದಂತೆ ಏನೋ ಕೆಟ್ಟ ವಾಸನೆ ಬಂದಂತಾಗಿ ಉಸಿರು ಸಿಕ್ಕಿ ಹಾಕೊಂಡಂತೆ ಆಗಿ ಹಿಂಸೆ ಆಯಿತು. ಅಷ್ಟೇ ನನಗೆ ಗೊತ್ತಾಗಿದ್ದು..
ನಂತರ ಎಚ್ಚರಾಗುವಾಗ ಐಸಿಯು ವಿನಲ್ಲಿದ್ದೆ‌.ಆರಂಭದಲ್ಲಿ ನಾನೆಲ್ಲಿದ್ದೇನೆ ಎಂದು ತಿಳಿಯದೆ ಗೊಂದಲ ಆಯಿತು ಅದು ಆಸ್ಪತ್ರೆ ಐಸಿಯು ಅಂತ ನನಗೆ ಗೊತ್ತಾಗಲು ಸುಮಾರು ಹೊತ್ರು ತಿಳಿಯಿತು. ನಾನು ನಾಲ್ಕೈದು ಗಂಟೆ ಪ್ರಜ್ಞೆ ಇಲ್ಲದೆ ಇದ್ದೆನೆಂದು ಮತ್ತೆ ತಿಳಿಯಿತು.
ಅಷ್ಟರೊಳಗೆ ರಕ್ತ ಪರೀಕ್ಷೆ, ಸಿಟಿ ಸ್ಕಾನಿಂಗ್  ಇತ್ಯಾದಿಗಳನ್ನು ಮಾಡಿದ್ದರು.ನಂತರ ಎಮ್ ಅರ್ ಐ ಸ್ಕಾನಿಂಗ್ ಆಯಿತು ‌.ನಂತರ ನ್ಯೂರಾಲಜಿ ವೈದ್ಯರು ಬಂದುಸಿಸ್ಟರ್ ಗಳಿಗೆ  ಏನೇನೋ ನಿರ್ದೇಶನ  ಮಾಡಿ  ಹೋದರು.
ನನಗೋ ಆತಂಕ.ಒಂದು ಸಣ್ಣ ಜ್ವರ  ತಲೆನೋವಿಗೆ ಇಷ್ಟೆಲ್ಲ ಪರೀಕ್ಷೆಗಳು ಯಾಕೆ ? ಒಂದಿನಿತು ಸುಸ್ತಾಗಿ ತಲೆ ಸುತ್ತಿ ಬಿದ್ದಿದ್ದರೆ ಅದಕ್ಕೆ ಐಸಿಯು ಎಂತಕೆ ? ಎಲ್ಲಕ್ಕಿಂತ ಹೆಚ್ಚಾಗಿ ನ್ಯೂರಾಲಜಿಷ್ಟು ಯಾಕೆ ಅಂತ ?
ಅಂತೂ ಇಂತೂ ಜ್ವರ ಬಿಟ್ಟು ಹುಷಾರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದೆ.ಮನೆಗೆ ಕಳಹಿಸುವಾಗ ಒಂದುವಾರ ಬಿಟ್ಟು ಅದೇ ನ್ಯೂರಾಲಜಿಸ್ಟ್ ಅನ್ನು ಕಾಣಬೇಕೆಂದು ಸೂಚಿಸಿದ್ದರು.ಒಂದು ವಾರದಲ್ಲಿ ಹೋಗಲಾಗಲಿಲ್ಲ ನನಗೆ .ಹತ್ತಿಪ್ಪತ್ತು ದಿನ ಕಳೆದು ಎಲ್ಲಾ ರಿಪೋರ್ಟ್ ಗಳನ್ನು ಹಿಡಿದುಕೊಂಡು ಹೋಗಿ ಅವರನ್ನು ಭೇಟಿಯಾದೆ.
ಅವರು ನಿಮಗೆ ಮರೆವು ಇದೆಯಾ ? ಬಸ್ ಇಳಿಯುವ ಸ್ಟಾಪ್ ಗೊತ್ತಾಗುತ್ತಾ ಇತ್ಯಾದಿಯಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು‌.ನನಗೆ ತಿಳಿದಂತೆ ಪ್ರಾಮಾಣಿಕ ಉತ್ತರ ನೀಡಿದೆ‌‌.ನಾನೋ ತುಂಬಾ ಬೇಜವಾಬ್ದಾರಿ ಹಾಗಾಗಿ ವಸ್ತುಗಳನ್ನೆಲ್ಲ ಎಲ್ಲೆಲ್ಲೋ ಇಟ್ಟು ಮರೆತು ಊರಿಡೀ ಹುಡುಕಾಡುತ್ತೇನೆ‌‌‌.ಹಾಗಾಗಿ ಮರೆವು ಇದೆ ಎಂದು ಹೇಳಿದೆ‌.ಅವರೇನು ಗ್ರಹಿಸಿದರೋ ಗೊತ್ತಿಲ್ಲ.. ಇಷ್ಟಕ್ಕೂ ನನಗೇನಾಗಿದೆ ? ಈಗ ಜ್ವರ ಇಲ್ಲ ಆರಾಮಾಗಿದ್ದೇನಲ್ಲ ಎಂದು ಕೇಳಿದೆ.ಎಮ್ ಅರ್ ಐ ಸ್ಕಾನಿಂಗ್ ರಿಪೋರ್ಟ್ ಗಳನ್ನು ಮತ್ತೆ ಮತ್ತೆ ನೋಡಿ ಮೆದುಳು ಸವೆದಿದೆ ಎಂದು ಏನೇನೋ ಹೇಳಿದರು.(  ಬೇರೆ ಸಂದರ್ಭದಲ್ಲಾಗಿದ್ದರೆ ಓ ಹಾಗಾದರೆ ನನಗೆ ಮೆದುಳು ಇದೆ ಅಂತ ಗೊತ್ತಾಗಿ ಸಂತಸ ಪಡುತ್ತಿದ್ದೆ  ,,😀 ಆದರೆ ಅಂದು ಆ ಪರಿಸ್ಥಿತಿ ಯಲ್ಲಿ ನಾನಿರಲಿಲ್ಲ )
ತುಂಬಾ ಆತಂಕಕ್ಕೆ ಒಳಗಾದೆ‌.ಮೆದುಳು ಸವೆದರೆ ಎಂತ ಮಾಡುವುದು ? ಅದಕ್ಕೆ ಔಷಧ ಇಲ್ಲವೇ ಎಂದು ಕೇಳಿದೆ.ಅವರು ಇಲ್ಲವೆಂಬಂತೆ ತಲೆ ಆಡಿಸುತ್ತಾ  ನಾಲ್ಕೈದು ವರ್ಷ ಬದುಕಬಹುದು ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು... ಒಂದಷ್ಟು ಹೊತ್ತು ಏನೂ ತೋಚದೆ ಸುಮ್ಮನಾದೆ..ಸ್ವಲ್ಪ ಹೊತ್ತಿಗೆ" ನಮ್ಮೂರ ಸುರೇಶಣ್ಣನವರಿಗೆ  ಖ್ಯಾತ ವೈದ್ಯರೊಬ್ಬರು ನೀವಿನ್ನು ಹೆಚ್ಚೆಂದರೆ ಆರು ತಿಂಗಳು ಬದುಕಬಹುದಷ್ಟೇ ಎಂದು ಹೇಳಿದ್ದರೂ ನಂತರ ಅವರು ಆಯರ್ವೇದ ವೈದ್ಯರ ಚಿಕಿತ್ಸೆ ಪಡೆದರು. ಆ ವೈದ್ಯರು ಹಾಗೆ ಹೇಳಿ ಹತ್ರು ಹದಿನೈದು ವರ್ಷಗಳ ನಂತರ ಕೂಡ ಸುರೇಶಣ್ಣ ಚೆನ್ನಾಗಿಯೇ ಬದುಕುತ್ತಿದ್ದಾರೆ " ಎಂಬುದು ನೆನಪಿಗೆ ಬಂದು ಸ್ವಲ್ಪ ಮಟ್ಟಿಗೆ ಧೈರ್ಯ ಬಂತು.ಜೊತೆಯಲ್ಲಿ
ಯಾವಾಗಲೋ ಓದಿದ್ದು ನೆನಪಾಯಿತು‌.ವಯಸ್ಸಾಗುತ್ತಾ ಎಲ್ಲರ ಮೆದುಳೂ ಸವೆಯುತ್ತದೆ ಅದರಲ್ಲಿ ವಿಶೇಷ ಏನಿಲ್ಲ ಎಂದು. ಅದನ್ನು ವೈದ್ಯರಲ್ಲಿ ಹಾಗೆಯೇ ಕೇಳಿದೆ‌‌.ನನಗೆ ನಲುವತ್ತೈದು ವರ್ಷ ಆಯಿತು.ಹಾಗಾಗಿ ಸ್ವಲ್ಪ ಮೆದುಳು ಸವೆದಿದ್ದರೆ ಅದು ಸಹಜ ತಾನೇ ಎಂದು. ಆಗ ಅವರು ನಿಮ್ಮ ಮೆದುಳು ಜಾಸ್ತಿ ಸವೆದಿದೆ ಎಂದರು. ಎಷ್ಟು ವರ್ಷ ಆದಷ್ಟು ಸವೆದಿದೆ ಎಂದು ಕೇಳಿದೆ.ಒಂದು ಇಪ್ಪತ್ತು ವರ್ಷದಷ್ಟು ಜಾಸ್ತಿ ಎಂದರೆ ಸುಮಾರು ಅರುವತ್ತೈದು ವರ್ಷ ಆಗುವಾಗ ಎಷ್ಟೋ ಅಷ್ಟು ಅಂದರು.
ಅಷ್ಟೆ ತಾನೇ ಡಾಕ್ಟರ್ ,ನೂರು ವರ್ಷ ಬದುಕುತ್ತಾರಲ್ಲಾ ? ಇನ್ನೂ ಮೂವತ್ತೈದು ವರ್ಷಗಳಷ್ಟು( 100-65 -35) ಕಾಲ ನನ್ನ ಮೆದುಳು ಕೆಲಸ ಮಾಡುತ್ತಲ್ಲಾ ? ನನಗೀಗ ನಲುವತ್ತೈದು ,ಇನ್ನೂ ಮೂವತ್ತೈದು ವರ್ಷ ಅಂದರೆ ಎಂಬತ್ತು ವರ್ಷ ತನಕ ನನಗೆ ಆಯುಸ್ಸು ಇದೆಯಲ್ಲ? ಎಂದು ತಕ್ಷಣವೇ ನಗುತ್ತಾ ಕೇಳಿದೆ.ನಾನು ಒಂಚೂರು ಹಾಗೆಯೇ ..ಎಂತಹ ಸಂದರ್ಭದಲ್ಲಿ ಕೂಡ ತೀರಾ ಗಾಂಭೀರ್ಯ ದಿಂದ ಇರಲು ಬರುವುದಿಲ್ಲ..
ಅವರು ಕೂಡ ಹ್ಹ ಹ್ಹಹ್ಹ ಎಂದು ಬಾಯಿ ತುಂಬಾ ನಕ್ಕರು.
ಇಂತಹ ಧನಾತ್ಮಕ ಮನೋಭಾವ ನಿಮ್ಮಲ್ಲಿದ್ದರೆ ಎಂಬತ್ತೇನು ನೂರು ವರ್ಷ ಬದುಕುತ್ತೀರಿ ,ಆದರೂ ಆರೋಗ್ಯದ ಬಗ್ಗೆ ಸ್ವಲ್ಪ ನಿಗಾ ವಹಿಸಿ ಎಂದು ಹೇಳಿ ಒಂದಷ್ಟು ಮೆಡಿಸಿನ್ ಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವಂತೆ ಬರೆದುಕೊಟ್ಟರು‌.
ಅಲ್ಲಿ ತಮಾಷೆ ಮಾಡಿ ನಗಾಡಿ ಎದ್ದು ಬಂದಿದ್ದರೂ ಅವರು ಇನ್ನೂ ನಾಲ್ಕೈದು ವರ್ಷ ಬದುಕಬಹುದಷ್ಟೇ ಎಂದು ಹೇಳಿದ್ದು ತಲೆ ಕೊರೆಯುತ್ತಾ ಇತ್ತು.
ಹಾಗಾಗಿ ಮತ್ತೆ ಇಬ್ಬರು ನರ ರೋಗ ತಜ್ಞರನ್ನು ಭೇಟಿ ಮಾಡಿದೆ‌‌
ಮತ್ತೊಮ್ಮೆ ಮೆದುಳಿನ  ಸಿಟಿ ಸ್ಕಾನಿಂಗ್ ,ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಿದರು‌.
ಮತ್ತೆ ರಿಪೋರ್ಟ್ ಗಳನ್ನು ನೋಡಿ,ನನ್ನನ್ನು ಪರೀಕ್ಷಿಸಿ ಒಂಚೂರು ಸಮಸ್ಯೆ ಇರುವುದಾದರೂ ಅಂತಹ ಕ್ರಿಟಿಕಲ್ ಏನೂ ಇಲ್ಲ..ಎಂದರು.
ಮತ್ತೆ ನಾನು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ.ನನಗೆ ಆ ಹಿಂದಿನ  ವೈದ್ಯರು ಹೇಳಿದಂತಹ ಗಹನವಾದ ಸಮಸ್ಯೆ ಇಲ್ಲದಿದ್ದರೂ ಒಂಚೂರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದೆ.ಅಲ್ಲಾ ನಲುವತ್ತೊಂಬತ್ತು ವರ್ಷ ಆದ ಮೇಲೆ ಹದಿನಾರು ವರ್ಷದ ಹುಡುಗಿ ಹಾಗೆ ಇರಬೇಕೆಂದರೆ ಇರಲಾಗುತ್ತದಾ ಅಲ್ವಾ ?

ಅದೇನೇ ಇರಲಿ, ಆ ವೈದ್ಯರು ನಾಲ್ಕೈದು ವರ್ಷ ಎಂದು ಹೇಳಿದ್ದು ಮಾತ್ರ ನನ್ನಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ‌.ಅಷ್ಟರ ತನಕ ನಾನು ನನಗಾಗಿ ಬದುಕಲೇ ಇಲ್ಲ..ನನಗೆ ಸೀರೆ ಚಿನ್ನ ಬಂಗಲೆ ಕಾರು  ಯಾವುದರ ವ್ಯಾಮೋಹ ಕೂಡ ಇಲ್ಲ..
ಆದರೂ ಯಾವುದೂ ಬೇಡವೆಂಬ ನಿರ್ಲಿಪ್ತತೆಯನ್ನು ತೊರೆದು ನಾನು ಬದುಕನ್ನು ಎಂಜಾಯ್ ಮಾಡಲು ಶುರು ಮಾಡಿರುವೆ‌‌.
ನನ್ನ ಕಲ್ಪನೆಗೆ ಅನುಗುಣವಾಗಿ ಚಂದದ ಮನೆಯನ್ನು ಕಟ್ಟಿಸಿದೆವು‌.ಮೊದಲಿಗೆ ಹೋಲಿಸಿದರೆ ಈ ಎರಡು ವರ್ಷಗಳಲ್ಲಿ ನಾನು ಹೆಚ್ಚು ಸೀರೆ,ಡ್ರೆಸ್ ಗಳನ್ನು ತೆಗೆದುಕೊಂಡಿರುವೆ. ಸದ್ಯದಲ್ಲೇಒಂದು  ಚಂದದ ಕಾರು ತಗೊಳ್ಳಬೇಕೆಂದಿರುವೆ‌.
ಮನೆ ಅಂಗಳದಲ್ಲಿ ನನಗಿಷ್ಟವಾದಂತೆ ಹೂಗಿಡಗಳನ್ನು ತರಕಾರಿ ಗಿಡಗಳನ್ನು ಹಾಕಿ ಆನಂದಿಸುತ್ತಿರುವೆ.
ನಾನು ನನಗಾಗಿ ಕೂಡ ಒಂದು ಸ್ವಲ್ಪ ಸಮಯವನ್ನು ಮೀಸಲಿಟ್ಟಿರುವೆ‌‌.
ಹಾಗೆಂದು ತೀರಾ ಸ್ವಾರ್ಥಿ ಆಗಿಲ್ಲ.ಎಲ್ಲ ಸುಖಗಳೂ ನನಗೇ ಸಿಗಬೇಕೆಂಬ ಹುಚ್ಚು ನನಗಿಲ್ಲ.
ಮೊದಲಿನಿಂದಲೂ ನಾನು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿದ್ದೆ‌.ಈಗಲೂ ಮುಂದುವರೆಸಿರುವೆ‌.
ನನ್ನ ಬದುಕಿನ ವಿಚಾರಗಳನ್ನು ಆಗೊಮ್ಮೆ ಈಗೊಮ್ಮೆ ಬ್ಲಾಗ್ ನಲ್ಲಿ ಬರೆಯುತ್ತಾ ಇದ್ದೆ‌.ಆತ್ಮಕಥೆ ಬರೆಯ ಬೇಕೆಂದು ಕೂಡ ಇದ್ದೆ‌.ಆದರೆ ಅದಕ್ಕೆ ಕನಿಷ್ಠ ಅರುವತ್ತು ವರ್ಷ ಆದರೂ ಆಗಬೇಕು.ಅನುಭವ ಆಗಬೇಕು.ಹಾಗಾಗಿ ನಂತರ ಬರೆಯುವುದು ಎಂದು ಕೊಂಡಿದ್ದೆ‌.ಆದರೆ ಯಾವಾಗ ವೈದ್ಯರ ಬಾಯಿಂದ ನಾಲ್ಕೈದು ವರ್ಷ ಎಂಬ ಮಾತು ಕೇಳಿದೆನೋ ನಾನು
ಬೇಗನೆ ನನ್ನ ಆತ್ಮಕಥೆ ಬರೆಯಬೇಕೆಂದು ಕೊಂಡೆ‌.
ಅವರೇನು ಹೇಳಿದರೋ ನಾನೇನು ಅರ್ಥ ಮಾಡಿಕೊಂಡೆನೋ ‌ಗೊತ್ತಿಲ್ಲ.ಅವರು ಹೈ ಪೈ ಇಂಗ್ಲಿಷ್ ನಲ್ಲಿ ಮಾತಾಡ್ತಿದ್ದರು.ನನಗೋ ಅಷ್ಟೇನೂ ಇಂಗ್ಲಿಷ್ ಜ್ಞಾನವಿಲ್ಲ.ನಾನು ಮತ್ತೊಮ್ಮೆ ಎರಡು ಮುರು ವರ್ಷಗಳ ನಂತರ ಕಂಡಾಗ ತಾವು ಹಾಗೆ ಹೇಳಿಯೇ ಇಲ್ಲ ಎಂದಿದ್ದರು.
ಇರಲಿ.
ನಂತರ ಬೆರೆ ಇಬ್ಬರು  ಮೂವರು ತಜ್ಞ ವೈದ್ಯರ ಅಭಿಪ್ರಾಯವನ್ನು ಪಡೆದು ಆ ವೈದ್ಯರದು ನನ್ನ ಸಮಸ್ಯೆಯ ಕುರಿತು  ತಪ್ಪು ಗ್ರಹಿಕೆ ಆಗಿತ್ತು ಎಂದು ತಿಳಿದುಕೊಂಡೆ.

ಇದಾಗಿ ಏಳು ವರ್ಷಗಳೇ ಕಳೆದು ಹೋಗಿವೆ ಈಗ .

ಆದರೂ ಸಾಯುವುದಕ್ಕೆ ಇಷ್ಟೇ ವಯಸ್ಸು ಎಂಬ ನಿಗದಿತ ಅವಧಿ ಇಲ್ಲ..ಯಾರು ಯಾವ ಕ್ಷಣಕ್ಕೂ ಸಾಯಬಹುದು.ಅದಕ್ಕೆ,ಮೆದುಳು ಸವೆತ, ಕ್ಯಾನ್ಸರ್, ಕಿಡ್ನಿ ಪೈಲೂರು,ಹಾರ್ಟ್ ಅಟ್ಯಾಕ್ ಮೊದಲಾದ ಗಹನ ಅರೋಗ್ಯ  ಸಮಸ್ಯೆಗಳೇ  ಆಗಬೇಕಿಲ್ಲ..ಆರೋಗ್ಯವಂತ ವ್ಯಕ್ತಿ ಕೂಡ ಮಾತನಾಡುತ್ತಲೇ ಕುಸಿದು ಜೀವ ಬಿಟ್ಟಿರುವ ಅನೇಕ ವೃತ್ತಾಂತ ಗಳನ್ನು ಕೇಳಿದ್ದೇವೆ,ವಿಡಿಯೋ ಗಳಲ್ಲಿ ನೋಡಿದ್ದೇವೆ.
ಇಷ್ಟಕ್ಕೂ ನಾವ್ಯಾರೂ ಈ ಭೂಮಿಯಲ್ಲಿ ಶಾಶ್ವತವಾಗಿ ಇರುವುದಿಲ್ಲ.. ಒಬ್ಬರ ಹಿಂದೆ ಒಬ್ಬರು ಸಾಗುತ್ತಲೇ ಇರುತ್ತೇವೆ.
ಅದಕ್ಕೂ ಮೊದಲು ಇಲ್ಲಿ ಹುಟ್ಟಿದ್ದರ ಗುರುತನ್ನು ನಾವು ಬಿಟ್ಟು ಹೋಗುವುದಕ್ಕಾಗಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕಿದೆ.
ಎಲ್ಲಕ್ಕಿಂತ ಹೆಚ್ಚು ನನ್ನ ಅಧ್ಯಯನದ ಸಾವಿರದ ಎಂಟು  ದೈವಗಳ ಮಾಹಿತಿ ಇರುವ ಬೃಹತ್ ಹೊತ್ತಗೆಯನ್ನು ಪ್ರಕಟಿಸಬೇಕಿದೆ 
ಇಷ್ಟನ್ನು ಅನಿಗ್ರಹಿಸಿದ ದೇವರು ಮುಂದೆಯೂ ಕೈ ಹಿಡಿದು ನಡೆಸುವನೆಂಬ ನಂಬಿಕೆಯಿಂದಿರುವೆ.