Thursday, 8 November 2018

ಬದುಕ ಬಂಡಿಯಲಿ ೨೭ ಸರಿಯಾದುದನ್ನು ಸರಿ ಎಂದು ಸಾಧಿಸಲೂ ಕಷ್ಟ ಪಡಬೇಕಾಯಿತು ©-ಡಾ.ಲಕ್ಷ್ಮೀ ಜಿ ಪ್ರಸಾದ

 ಬದುಕ ಬಂಡಿಯಲ್ಲಿ
ಮುಖ ಪುಟ ಸ್ನೇಹಿತರಾದ ಶ್ರೀನಿವಾಸ ಹೊಳ್ಳರು ಶುಭಾಶಯ ಎಂಬ ಪದದ ಅಪಪ್ರಯೋಗದ( ತಪ್ಪು ಬಳಕೆಯ) ಕುರಿತು ಒಂಚೂರು ತಮಾಷೆಯಾಗಿ ಒಂದು ಸಾಲಿನ ಹೇಳಿಕೆಯನ್ನು ಹಾಕಿದರು.ಆ ಬಗ್ಗೆ ಒಂದು ಸಣ್ಣ ಚರ್ಚೆ ಅಥವಾ ಅಭಿಪ್ರಾಯ ವಿನಿಮಯ ಕೂಡ ನಡೆಯಿತು. ಆಗ ನನಗೆ ನಾನು ಬಿಎಡ್ ಓದುವಾಗ ನಡೆದ ಒಂದು ಘಟನೆ ನೆನಪಾಯಿತು.
2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಆಯ್ಕೆಯಾದ ಸುಮಾರು 2400 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡುವಾಗ ನಾಲ್ಕು ವರ್ಷಗಳ ಒಳಗೆ ಬಿಎಡ್ ಪದವಿಯನ್ನು ಪಡೆಯಬೇಕೆಂಬ ನಿಬಂಧನೆಯನ್ನು ಹಾಕಿದ್ದರು.ಕೆಲಸ ಸಿಕ್ಕ ಸಂತಸದಲ್ಲಿ ಆಗ ನಾವ್ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಆದರೆ ಕೆಲಸಕ್ಕೆ ಸೇರಿ ಎರಡು ವರ್ಷಗಳಾದಾಗ  ಬಿಎಡ್ ಪಡೆದಿಲ್ಲವೆಂಬ ಕಾರಣಕ್ಕೆ  ನಾನೂ  ಸೇರಿದಂತೆ ಸುಮಾರು 1400 ಉಪನ್ಯಾಸಕರ ಪರೀಕ್ಷಾರ್ಥ ಖಾಯಂ ಪೂರ್ವ ಸೇವಾವಧಿಯನ್ನು ( probationary period)  ತೃಪ್ತಿಕರವೆಂದು ಘೋಷಣೆ ಮಾಡದೆ ಭಡ್ತಿಯನ್ನು ಇಲಾಖೆ ತಡೆ ಹಿಡಿದಾಗ ನಮಗೆಲ್ಲ ಈ  ನಿರ್ಬಂಧ ಉಂಟು ಮಾಡಿ ಸಮಸ್ಯೆಯ ಗಹನತೆ ಅರ್ಥವಾಯಿತು.
ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು,ನಾವುಗಳು ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳು,ಶಾಸಕರುಗಳಲ್ಲಿ ನಮ್ಮ ಸಮಸ್ಯೆಯನ್ನು ಬಗೆ ಹರಿಸುವಂತೆ ವಿನಂತಿಸಿದೆವು.ಆಗ ಸದಾನಂದ ಗೌಡರು ಮತ್ತು ಕಾಗೇರಿಯವರು ಮುಖ್ಯ ಮಂತ್ರಿ,ಶಿಕ್ಷಣ ಮಂತ್ರಿಗಳಾಗಿದ್ದರೆಂದು ನೆನಪು. ಈ ಬಗ್ಗೆ ಕೋರ್ಗೆ ಮೊರೆ ಹೋಗುವ ಯತ್ನ ವೂ ನಡೆಯಿತು. ಪ್ರತಿಭಟನೆ ಹೋರಾಟವೂ ಆಯಿತು.ಅಂತೂ ಇಂತೂ ನಾವು ಕೆಲಸಕ್ಕೆ ಸೇರಿ ನಾಲ್ಕು ವರ್ಷ ಅಗುತ್ತಾ ಬಂತು.ಈ ನಡುವೆ ಚುನಾವಣೆ ಬಂದು ಸರಕಾರ ಬದಲಾಗಿ ಸಿದ್ಧ ರಾಮಯ್ಯ ಅವರು ಮುಖ್ಯಮಂತ್ರಿಗಳಾದರು.ಸಜ್ಜನ ರಾಜಕಾರಣಿ ಎಂದೇ ಖ್ಯಾತರಾದ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾದರು.ನಮ್ಮ ಮನವಿ ,ಹೋರಾಟ,ಪ್ರತಿಭಟನೆ ಇತ್ಯಾಗಿ ನಡೆಯುತ್ತಲೇ ಇತ್ತು.ಕೊನೆಗೂ ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ನಮಗೆ ಒಂದು ವರ್ಷ  ಓದಿ ಬಿಎಡ್ ಪದವಿ ಪಡೆಯಲು ವೇತನ ಸಹಿತ ರಜೆಯನ್ನು ನೀಡಿದರು.
 ಸಂಸ್ಕೃತ, ಹಿಂದಿ,ಕನ್ನಡ ಮೂರು ಭಾಷೆಗಳ ಎಂಎ ಪದವಿ,ಎಂ ಫಿಲ್,ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ನಂತರ ನನ್ನ ನಲುವತ್ತನೇ ವಯಸ್ಸಿನಲ್ಲಿ ಕೆಲಸವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಎಡ್ ಪದವಿ ಓದಲು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದೆ.ಇಲ್ಲಿ ನನ್ನ ಹಾಗೆ  ಹತ್ತು ಜನ ಉಪನ್ಯಾಸಕರು ಬಿಎಡ್ ಗೆ ದಾಖಲಾತಿ ಪಡೆದಿದ್ದರು.ನನ್ನ ಹಾಗೆ ಡಾಕ್ಟರೇಟ್ ಪದವಿಯನ್ನು ಪಡೆದವರೂ,ನನಗಿಂತ ಹಿರಿಯರೂ ಕೂಡ ಆಗಿರುವ ಉಪನ್ಯಾಸಕರೂ ಇದ್ದರು.
ಆಗಷ್ಟೇ ಬಿಎ ಪದವಿ ಪಡೆದು ಬಂದಿರುವ ಇಪ್ಪತ್ತು ಇಪ್ಪತ್ತೊಂದು ವರ್ಷ ವಯಸ್ಸಿನ ( ನಮ್ಮ ಅರ್ಧದಷ್ಟು ವಯಸ್ಸಿನ ) ಎಳೆಯರೊಂದಿಗೆ ಕುಳಿತು,ಅವರ ಮಟ್ಟಕ್ಕೆ ಅನುಗುಣವಾಗಿ ರಚಿತವಾದ ಪಠ್ಯಕ್ರಮವನ್ನು ಓದುವುದು ನಮಗೆ ಒಂದಿನಿತು ಇಕ್ಕಟ್ಟನ್ನು ತಂದಿಟ್ಟಿತು.ಆರಂಭದಲ್ಲಿ ಅಲ್ಲಿನ ಉಪನ್ಯಾಸಕರು ನಮ್ಮನ್ನು ಇತರ ಸಾಮಾನ್ಯ ವಿದ್ಯಾರ್ಥಿಗಳಂತೇ ಪರಿಗಣಿಸಿ ಪಾಠ ಮಾಡ ಹೊರಟಾಗ ಸಾಕಷ್ಟು ಚರ್ಚೆಗಳು ನಡೆದವು. ( ನಂತರದ ದಿನಗಳಲ್ಲಿ ನಮ್ಮ ಅಭಿಪ್ರಾಯ, ಅನುಭವ,ವಿದ್ವತ್ ಗಳಿಗೆ ಅವರೂ ಮನ್ನಣೆ ನೀಡಿದರು)
ಈ ಸಂದರ್ಭದಲ್ಲಿ ಯಾವುದೋ ಒಂದು ಕಾರ್ಯಕ್ರಮ ( ಕನ್ನಡ ರಾಜ್ಯೋತ್ಸವ ಎಂದು ನೆನಪು) ಅಯೋಜನೆ ಆಯಿತು. ನಾವುಗಳು ಕಾಲೇಜನ್ನೆಲ್ಲಾ ಸಿಂಗರಿಸಿದೆವು.ಕೆಲವು ವಿದ್ಯಾರ್ಥಿಗಳು ವೇದಿಕೆಯ ಹಿಂದಿನ  ಕಪ್ಪು ಹಲಗೆಯಲ್ಲಿ ಕಾರ್ಯಕ್ರಮದ ಬಗ್ಗೆ ಬರೆದು ಶುಭಾಷಯಗಳು ಎಂದು ಬರೆದಿದ್ದರು.ಅದನ್ನು ಗಮನಿಸಿದ ನಾನು ಅಲ್ಲಿದ್ದ ವಿದ್ಯಾರ್ಥಿಗಳಿಗೆ( ಅವರು ನಮ್ಮ ಸಹಪಾಠಗಳು ಕೂಡ ಆಗಿದ್ದರು) ಶುಭಾಷಯ ತಪ್ಪು ಬಳಕೆ,ಶುಭಾಶಯ ಎಂಬುದು ಸರಿಯಾದ ರೂಪ ಎಂದು ತಿಳಿಸಿ ಅದನ್ನು ಅಲ್ಲಿ ಶುಭಾಶಯಗಳು ಎಂದು ಸರಿ ಪಡಿಸಿಸಿದೆ.
ನಂತರ ಬೇರೆ ಕೆಲಸಕ್ಕೆ ಹೋದೆ.ಇನ್ನೇನು ಕಾರ್ಯಕ್ರಮ ನಾಲ್ಕೈದು ನಿಮಿಷಗಳಲ್ಲಿ ಶುರು ಆಗುತ್ತದೆ ಎಂದಾದಾಗ ಮತ್ತೆ ವೇದಿಕೆ ಕಡೆಗೆ ಬಂದೆ.ನೋಡಿದರೆ ಮತ್ತೆ ಶುಭಾಷಯ ಎಂಬ ತಪ್ಪು ಬಳಕೆ ಇತ್ತು.ಅರೇ,ಈಗ ಅರ್ಧ ಗಂಟೆ ಮೊದಲು ಇದನ್ನು ನ ಶುಭಾಶಯ ಎಂದು  ಸರಿ ಪಡಿಸಿ ಹೋಗಿದ್ದೆ,ಯಾರು ಬದಲಾಯಿಸಿದ್ದು ? ಎಂದು ಕೇಳಿದೆ.ಅಲ್ಲಿನ ಉಪನ್ಯಾಸಕರು ಒಬ್ಬರು ಬಂದು ನಾನು ಸರಿಪಡಿಸಿದ್ದನ್ನು ನೋಡಿ ಅದು ತಪ್ಪೆಂದು ಹೇಳಿ ಮತ್ತೆ ಶುಭಾಷಯ ಎಂದು ತಪ್ಪಾಗಿ ಬರೆಸಿದ್ದರು.ನಾನು ಅದನ್ನು ತಪ್ಪೆಂದಾಗ ವಿದ್ಯಾರ್ಥಿಗಳೆಲ್ಲ ( ಇವರುಗಳು ನನ್ನ ಸಹಪಾಠಗಳು ಕೂಡ ) ಒಂದಾಗಿ "ನಿಮಗೇನು ಗೊತ್ತು ? ನಮ್ಮ .. ಸರ್ ನಾವು ಮೊದಲು ಬರೆದಿದ್ದೇ ( ಶುಭಾಷಯ ಎಂಬುದನ್ನು) ಸರಿ ಎಂದಿದ್ದಾರೆ.ನಿಮ್ಮ ಮಾತು ಕೇಳಿ ನಾವು ಶುಭಾಶಯ ಎಂದು ಬದಲಾಯಿಸಿ ಸರ್ ಕೈಂದ ಬೈಗಳು ತಿನ್ನ ಬೇಕಾಯಿತು" ಎಂದು ನನ್ನನ್ನೇ ತರಾಟೆಗೆ ತೆಗೆದುಕೊಂಡರು. ಆಗ ನಾನು ಗ್ರಂಥಾಲಯಕ್ಕೆ ಹೋಗಿ ಕನ್ನಡ ಶಬ್ದ ಕೋಶ ತಂದು ತೋರಿಸಿ ,ಅವರ ತಪ್ಪನ್ನು ತಿಳಿಯಪಡಿಸಿ ಅದನ್ನು ತಿದ್ದಬೇಕೆಂದು ಕಾಲೇಜು ಗ್ರಂಥಾಲಯಕ್ಕೆ ಹೋದರೆ " ಈಗ ಕಾರ್ಯಕ್ರಮ ಇದೆ,ಪುಸ್ತಕ ಕೊಡಲಾಗುವುದಿಲ್ಲ " ಎಂಬ ನಿರ್ದಾಕ್ಷಿಣ್ಯವಾದ ಉತ್ತರ ಸಿಕ್ಕಿತು.
ಏನು ಮಾಡುವುದು ಗೊತ್ತಾಗಲಿಲ್ಲ.ಅಷ್ಟರಲ್ಲಿ ಸರ್ಕಾರಿ ಬಿಎಡ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿ ಅಲ್ಲಿ ಗೌರವ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಸರ್   (ನಂಜುಂಡಪ್ಪ) ಬಂದರು.ಅವರಿಗೆ ವಿದ್ಯಾರ್ಥಿಗಳು ಶುಭಾಷಯ ಎಂದು ತಪ್ಪಾಗಿ ಬರೆದುದನ್ನು ತೋರಿಸಿ,ಅವರು ಅದನ್ನೇ ಸರಿ ಎಂದು ವಾದಿಸುತ್ತಿರುವ ಬಗ್ಗೆ ತಿಳಿಸಿದೆ‌.ಹಿರಿಯ ವಿದ್ವಾಂಸರಾಗಿದ್ದ ಅವರಿಗೆ ಶುಭಾಷಯ ಎಂಬುದು ತಪ್ಪು ಬಳಕೆ ಎಂದು ಗೊತ್ತಿತ್ತು.ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳನ್ನು ಸ್ವಲ್ಪ ಜೋರು ಮಾಡಿ ಶುಭಾಶಯಗಳು ಎಂದು ಬರೆಸಿದರು.
ಬರೆದು ಮುಗಿಸುವಷ್ಟರಲ್ಲಿ ವೇದಿಕೆಗೆ ಅತಿಥಿಗಳು ಆಗಮಿಸಿದ್ದರು. ಅದಾಗಲೇ ತಪ್ಪನ್ನು ಸರಿ ಪಡಿಸಿ ಶುಭಾಶಯಗಳು ಎಂದು  ಸರಿಯಾದ ರೂಪವನ್ನು ಬರೆಸಿದ್ದ ಕಾರಣ ಕಾಲೇಜಿನ  ಮರ್ಯಾದೆ ಉಳಿಯಿತು ಜೊತೆಗೆ ನಮ್ಮದು ಕೂಡ.- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲಮಂಗಲ

Sunday, 14 October 2018

ಬದುಕ ಬಂಡಿಯಲಿ- ಎರಡನೇ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನ ಎರಡನೇಯ ಕೆಟ್ಟ ಅನುಭವ..
ಕೆಟ್ಟ ಅನುಭವವೆಂದರೆ ಮೈ ಸವರಿ ಚಿವುಟಬೇಕು ಎಂದೇನೂ ಇಲ್ಲ!
ನಾನು ಹತ್ತನೇ ತರಗತಿ ಉತ್ತೀರ್ಣಳಾಗಿ ಪಿಯುಸಿಗೆ ಮಂಗಳೂರಿನ ಸರ್ಕಾರಿ ಕಾಲೇಜಿಗೆ( ಈಗುನ ವಿಶ್ವ ವಿದ್ಯಾಲಯ ಕಾಲೇಜು,ಆಗ ಅಲ್ಲಿ ಪಿಯುಸಿ ಮತ್ತು ಡಿಗ್ರಿ ಎರಡೂ ಒಟ್ಟಿಗೆ ಇತ್ತು) ಸೇರಿದೆ.ಇಲ್ಲಿ ಒಂದು ಸುಸಜ್ಜಿತವಾಗ ಸಭಾಂಗಣ ಇದೆ‌.ಮಂಗಳೂರಿಗೆ ರವೀಂದ್ರನಾಥ ಟಾಗೋರ್ ಬಂದಾಗ ಇಲ್ಲಿ ಉಪನ್ಯಾಸ ನೀಡಿದ್ದರಂತೆ.ಅದರ ನೆನಪಿಗಾಗಿ ಆ ಸಭಾಂಗಣಕ್ಕೆ ರವೀಂದ್ರ ಕಲಾ ಭವನ ಎಂದು ಹೆಸರಿತ್ತು ‌.ಇಲ್ಲಿ ಸದಾ ಸಾಂಸ್ಕೃತಿಕ  ಕಾರ್ಯಕ್ರಮ  ಹಾಗೂ ವಿದ್ವಾಂಸರ ಉಪನ್ಯಾಸ ಕಾರ್ಯಕ್ರಮಗಳು  ಆಗುತ್ತಾ ಇತ್ತು.
ನನಗೆ ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಜೀವ.ಜೊತೆಗೆ ವಿದ್ವಾಂಸರ ಮಾತುಗಳನ್ನು ಕೇಳಲು ಕೂಡ ತುಂಬಾ ಆಸಕ್ತಿ ಇತ್ತು. ಆದರೆ ಈ ಕಾಲೇಜಿನಲ್ಲಿ ಹುಡುಗಿಯರಿಗೆ ಯಾವುದೇ ಕಾರ್ಯಕ್ರಮವನ್ನು  ನೋಡುವುದು ಅಸಾಧ್ಯದ ವಿಚಾರವಾಗಿತ್ತು.
ಕಾರ್ಯಕ್ರಮ ಶುರು ಆಗುತ್ತಲೇ ಪುಂಡು ಹುಡುಗರ ಸಮೂಹ ಹುಡುಗಿಯರನ್ನು ಕಿಚಾಯಿಸಲು ಶುರು ಮಾಡುತ್ತಿದ್ದರು‌.ಏನೆನೋ ಕೆಟ್ಟದಾಗಿ ಬರೆದು ರಾಕೆಟ್ ಮಾಡಿ ಬಿಸಾಡುತ್ತಿದ್ದರು.ಇದು ಹುಡುಗಿಯರ ತಲೆಗೆ ಬಂದು ಬೀಳುವುದನ್ನು ನೋಡಿ ನಗಾಡಿ ಗಲಾಟೆ ಮಾಡುತ್ತಿದ್ದರು. ಒಂದು ಸಲ ಅಮೃತ ಸೋಮೇಶ್ವರರ ಉಪನ್ಯಾಸ ಕಾರ್ಯಕ್ರಮ ಇತ್ತು .ನಾನು ಅವರ ಮಾತುಗಳನ್ನು ಕೇಳುವ ಸಲುವಾಗಿ ಮುಂದೆ ಹೋಗಿ ಕುಳಿತಿದ್ದೆ .ಅವರ ಮಾತುಗಳನ್ನು ತನ್ಮಯತೆಯಿಂದ ಕೇಳುತ್ತಿರುವಾ ರಾಕೆಟ್ ಒಂದು ನನ್ನ ತಲೆ ಮೇಲೆ ಬಂದು ಬಿತ್ತು.ನನಗೇನಾದರೂ ಈಶ್ವರನಂತೆ ಮೂರನೆಯ ಉರಿಗಣ್ಡು ಇದ್ದರೆ ಅದನ್ನು ತೆರೆದು ಆ ಪುಂಡು ಹುಡುಗರನ್ನು ಸುಟ್ಟು ಬಿಡುತ್ತಿದ್ದೆ‌.ಆದರೇನು ಮಾಡಲಿ ಆ ಶಕ್ತಿ ನನಗಿರಲಿಲ್ಲ,ಅಸಹಾಯಕತೆಯಿಂದ ಅವಮಾನದಿಂದ  ಕಣ್ಣಲ್ಲಿ ನೀರು ತುಂಬಿ ಬರಲು ಎದ್ದು ಸಭಾಂಗಣದಿಂದ ಹೊರಬಂದೆ.
ಆಗೆಲ್ಲಾ  ಇವನ್ನು ನಿಯಂತ್ರಿಸದ ಅಲ್ಲಿನ ಉಪನ್ಯಾಸಕರ ಮೇಲೆ ನನಗೆ ತುಂಬಾ ಸಿಟ್ಟು ಬರುತ್ತಿತ್ತು. ಆಗಲೇ ನಿರ್ಧರಿಸಿ ಬಿಟ್ಟಿದ್ದೆ‌.ನಾನು‌ ಮುಂದೆ ಉಪನ್ಯಾಸಕಿಯಾದರೆ ನನ್ನ ವಿದ್ಯಾರ್ಥಿನಿಯರಿಗೆ ಈ ಕಿರುಕುಳ ಆಗದಂತೆ ತಡೆಯಬೇಕೆಂದು.ಇದಕ್ಕೆ ಬಹಳ ಸರಳ ಉಪಾಯವಿದೆ.ಉಪನ್ಯಾಸಕರು ಅಲ್ಲಲ್ಲಿ ವಿದ್ಯಾರ್ಥಿಗಳ ನಡುವೆ ಕುಳಿತರಾಯಿತು.
ನಾನು ಮುಂದೆ ಶ್ರೀ ರಾಮ ಪ್ರಾಥಮಿಕ ಶಾಲೆ, ಚಿನ್ಮಯ ಪ್ರೌಢಶಾಲೆ, ಸಂತ ಅಲೋಶಿಯಸ್ ಕಾಲೇಜುಗಳಲ್ಲಿ ಕೆಲಸ ಮಾಡಿದೆ‌.ಇಲ್ಲೆಲ್ಲ ತುಂಬಾ ಶಿಸ್ತು ಇತ್ತು.ಹಾಗಾಗಿ ಕಾರ್ಯಕ್ರಮ ನೋಡಲು ಹುಡುಗಿಯರಿಗಾಗಲೀ ಬೇರೆಯವರಿಗಾಗಲೀ ಯಾವುದೇ ಸಮಸ್ಯೆ ಇರಲಿಲ್ಲ.
ನಂತರ ಪ್ರಸಾದರಿಗೆ ಬೆಂಗಳೂರಿನಲ್ಲಿ ಕೆಲಸವಾದ ಕಾರಣ ನಾವು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದೆವು
ಇಲ್ಲಿ ಎನ್ ಆರ್ ಕಾಲೊನಿಯಲ್ಲಿ ಇರುವ ಅನುದಾನಿತ ಕಾಲೇಜೊಂದರಲ್ಲಿ ಅನುದಾನ ರಹಿತ ಉಪನ್ಯಾಸಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದೆ‌.ಇಲ್ಲಿ ಮತ್ತೆ  ಆಪಾ ಪೋಲಿ ಹುಡುಗರು ಅಲ್ಲಿನಷ್ಟು ಅಲ್ಲದಿದ್ದರೂ  ಹುಡುಗಿಯರಿಗೆ ಕಾಟ ಕೊಡುತ್ತಿದ್ದರು .ಇದನ್ನು ನಿಲ್ಲಿಸಲು ನಾನು ಶಕ್ತಿ ಮೀರಿ ಯತ್ನ ಮಾಡಿದೆ ಜೊತೆಗೆ ಸಹೋದ್ಯೋಗಿ ರೇವತಿ ಕೂಡ ಕೈಜೋಡಿಸಿದ್ದರು.ಇಲ್ಲಿ ಸುಮಾರಾಗಿ ನಿಯಂತ್ರಣಕ್ಕೆ ತಂದಿದ್ದೆವು.ನಂತರ ಸರ್ಕಾರಿ ಉದ್ಯೋಗ ದೊರೆತು ಬೆಳ್ಲಾರೆಗೆ ಹೋದೆ.ಇಲ್ಲಿ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ ಮತ್ತೆ ನೆಲಮಂಗಲಕ್ಕೆ ಬಂದಾಗ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಇತ್ತು .ಇಲ್ಲಿ ಕೂಡ ವಿದ್ಯಾರ್ಥಿಗಳ ನಡುವೆ ಕುಳಿತು ಹುಡುಗರ ಪುಂಡಾಟಿಕೆಯನ್ನು ನಿಯಂತ್ರಣಕ್ಕೆ ತಂದೆವು

ಬದುಕ ಬಂಡಿಯಲಿ - ಮೊದಲ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ಮೀ ಟೂ ಅಭಿಯಾನ ತಪ್ಪಲ್ಲ,ಅದರಲ್ಲಿ ರಾಜಕೀಯ ಬೆರೆಸಿ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಬಳಸುವುದು ತಪ್ಪು ,ಕಾನೂನು ಗಟ್ಟಿ ಗೊಳಿಸಬೇಕಿದ್ದಲ್ಲಿ ರಾಜ್ಯ ಮತ್ತು ಕೇಂದ್ರ ಎರಡರ ಮೇಲೂ ಒತ್ತಡ ಹಾಕಬೇಕು‌.

ನನಗಾದ ಮೊದಲ ಕೆಟ್ಟ ಅನುಭವ ಇನ್ನೂ ನನಗೆ ನೆನಪಿದೆ ..
 ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓಣಂ ರಜೆಯಲ್ಲಿ ಅಜ್ಜನ ಮನೆಗೆ ಹೋಗಿದ್ದೆ
ನನ್ನ ಅಜ್ಜನ ಮನೆ ಹೊಸ ಮನೆಯಿಂದ ನನ್ನ ತಂದೆ ಮನೆಗೆ ಸುಮಾರು ಎರಡು ‌ಮೈಲು ದೂರ.ಅರ್ಧಾಂಶ ಕಾಡು ದಾರಿ ಅರ್ಧಾಂಶ ಬಯಲು ಗುಡ್ಡೆಗಳ ದಾರಿ.
ಅಜ್ಜನ ಮನೆಯಿಂದ ತಾಯಿ ಮನೆಗೆ ಒಬ್ಬಳೇ ಬರುತ್ತಾ ಇದ್ದೆ.ನನ್ನ ತಾಯಿ ಮನೆ ತಲುಪಲು ಇನ್ನೂ  ಸುಮಾರು ಅರ್ಧ ಕಿಮೀ ದೂರ ಇತ್ತು.ಅಜ್ಜಿ ಮನೆಯಲ್ಲಿ ಬೆಳೆದ ದಾರೆಪೀರೆ,ಸೊರೆಕಾಯಿ ಹಾಗಲ ಕಾಯಿಗಳನ್ನು  ಅಡಿಕೆಯ ಉದ್ದ ಹಾಳೆಯಲ್ಲಿ ಕಟ್ಟಿ ತಾಯಿಗೆ ಕೊಡಲು ಕೊಟ್ಟಿದ್ದರು.ಬೇರೆ ಏನೋ ಕೂಡ ಗಂಟು ಇತ್ತು.ನಾನು ಭಾರದ ಕಟ್ಟು ಹೊತ್ತುಕೊಂಡು ನಿದಾನವಾಗಿ ನಡೆದುಕೊಂಡು ನಿರ್ಜನವಾದ ದಾರಿಯಲ್ಲಿ ನಡೆದು ಕೊಂಡು ಬರುತ್ತಾ ಇದ್ದೆ‌.ನನ್ನ ಎದುರಾಗಿ ಒಬ್ಬಾತ ನನ್ನನ್ನು  ವಿಚಿತ್ರವಾಗಿ ನೋಡುತ್ತಾ ದಾಟಿ ಹೋದ .ಕೆಟ್ಟ ದೃಷ್ಟಿಯನ್ನು ಅರ್ಥೈಸಿಕೊಳ್ಳುವಷ್ಟು ಪ್ರೌಢತೆ ನನಗಿನ್ನೂ ಬಂದಿರಲಿಲ್ಲ.
ನಾನು ಸ್ವಲ್ಪ ದೂರ ನಡೆದು ಬಂದು ದಾರಿ ಬದಿಯಲ್ಲಿ ಇದ್ದ ಕಲ್ಲಿನ ಮೇಲೆ ನನ್ನ ತಲೆಯ ಮೇಲೆ ಇದ್ದ ಕಟ್ಟನ್ನು ಇಳಿಸಿ ಇನ್ನೊಂದು ಕಲ್ಲಿನ ಮೇಲೆ ತುಸು ವಿಶ್ರಾಂತಿ ಗಾಗಿ ಕುಳಿತೆ,ಸಂಜೆ ಸಮಯ,ಆಕಾಶ ಶುಭ್ರವಾಗಿ ನೀಲಿ ಬಣ್ಣದಿಂದ ಕಾಣುತ್ತಾ ಇತ್ತು‌,ಸುತ್ರ ಮುತ್ತ ಹಸಿರು. ನೋಡುತ್ತಾ ಹಾಗೆಯೇ ಕುಳಿತಿದ್ದೆ‌.ಆಕಾಶವನ್ನು ನೋಡುತ್ತಾ ಸುಮ್ಮನೇ ಕುಳಿತುಕೊಳ್ಳುವುದೆಂದರೆ ಈಗಲೂ ನನಗೆ ತುಂಬಾ ಇಷ್ಟ ‌ಸುಮ್ಮನೇ ಟೇರೇಸ್ ಏರಿ ಸಂಜೆ ಹೊತ್ತು ಅಥವಾ ರಾತ್ರಿ ಬೆಳದಿಂಗಳಿನಲ್ಲಿ ಆಕಾಶ ನೋಡುತ್ತಾ ಜಗತ್ತನ್ನೇ ಮರೆತು ಬಿಡುತ್ತೇನೆ.
ಅಂದು ಕೂಡ ಹಾಗೆಯೇ ಆಯಿತು. ಸ್ವಲ್ಪ ಹೊತ್ತು ನನ್ನನ್ನು ದಾಟಿ ಮುಂದೆ ಹೋದ ವ್ಯಕ್ತಿ ಅತ್ತ ಇತ್ತ ಯಾರೂ ಇಲ್ಲವೆಂಬುದನ್ನು ಖಚಿತ ಪಡಿಸಿಕೊಂಡೇ ಇರಬಹುದು, ನನ್ನ ಸಮೀಪ ಬಂದು ಮುಖ ಸವರಲು ಬಂದ‌.ನಾನೋ ತಕ್ಷಣವೇ ಅಲ್ಲೇ ಕಲ್ಲಿನ ಮೇಲೆ ಇರಿಸಿದ್ದ ಅಜ್ಜಿ ಉದ್ದನೆಯ ಹಾಳೆಯನ್ನು ಸುತ್ತಿ ಮಾಡಿ ಕೊಟ್ಟ ಗಂಟನ್ನು ಎತ್ತಿ ಅವನಿಗೆ ತಾರಾಮಾರ ಹೊಡೆದೆ .ಆತ ಅಲ್ಲೇ ಕುಸಿದು ಬಿದ್ದ .ಅಲ್ಲಿಂದ ಗಂಟನ್ನು ಹಿಡಿದುಕೊಂಡು ಹಿಂದೆ ತಿರುಗಿ ನೋಡದೆ ಒಂದೇ ಸಮನೆ ಓಡಿ ಮನೆ ಸೇರಿದೆ.ಅಮ್ಮನಿಗೆ ಮಾತ್ರ ವಿಷಯ ತಿಳಿಸಿದೆ‌.ಅವನೇನಾದರೂ ಸತ್ತು ಹೋಗಿದ್ದನೇ ಎಂದು ಕೂಡ ನಮಗೆ ಆತಂಕವಾಯಿತು.ಬಹುಶಃ ಅವನಿಗೆ ಸಾಯುವಂತಹ ಏಟೇನೂ ಬಿದ್ದಿರಲಿಲ್ಲವೆಂದು ಕಾಣುತ್ತದೆ. ಯಾರೂ ಸತ್ತ ಸುದ್ದಿ ನಮ್ಮೂರಿನಲ್ಲಿ ಹರಡಿರಲಿಲ್ಲ.ಬಹುಶಃ ಆತ ಮತ್ತೆ ಸಾವರಿಸಿಕೊಂಡು ಎದ್ದು ತನ್ನ ಹಾದಿ ಹಿಡಿದು ಹೋಗಿರಬಹುದು.ಮುಂದೆಂದೂ ಹೆಂಗಸರ ಸುದ್ಧಿಗೆ ಹೋಗಿರಲಾರ‌.
ಇದರ ನಂತರವೂ ಕೆಟ್ಟ ಅನುಭವ ಆಗಿದೆ .ಪೋಲೀಸರಿಗೆ ದೂರನ್ನು ಕೊಟ್ಟು ಕೇಸ್ ಹಾಕಿದ್ದೇನೆ ಕೂಡ .ಆದರೆ ಸಮಾಜ ಗಂಡಿನ ಪರವೇ ಇರುತ್ತದೆ ಎಂಬ  ಕಟು ಅನುಭವ ಆಗಿದೆ ಎಂಬುದು ಕೂಡ ಅಷ್ಟೇ ಸತ್ಯ !

Sunday, 7 October 2018

ಬದುಕ ಬಂಡಿಯಲಿ - ನನಗೆ ಕಿವಿ ಕೇಳಿಸುವುದಿಲ್ಲ ಮಗಾ ಎಂದ ಎಕ್ಕಾರಿನ ಅಕ್ಕಮ್ಮಜ್ಜಿ

ನನಗೆ ಕಿವಿ ಕೇಳಿಸುವುದಿಲ್ಲ ಮಗಾ ಎಂದ  ಎಕ್ಕಾರಿನ ಅಕ್ಕಮ್ಮಜ್ಜಿ

ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದಿನ ಮಾತಿದು.ನನ್ನ ಓದಿನ ಕಾರಣಕ್ಕೆ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡು ಎಕ್ಕಾರಿನ ಒಂದು ರೂಮಿನ ಮೋಟು ಗೋಡೆಯ  ಗೆದ್ದಲು ಹಿಡಿದ ಮಣ್ಣಿನ ಮನೆಯನ್ನು ನೂರ ಐವತ್ತು ರುಪಾಯಿ ಬಾಡಿಗೆಗೆ ಹಿಡಿದಿದ್ದೆವು.ಅದಕ್ಕಿಂತ ಒಳ್ಳೆಯ ಮನೆ ನಮ್ಮ ಬಜೆಟ್ ಗೆ ಸಿಕ್ಕಲು ಸಾಧ್ಯವಿರಲಿಲ್ಲ. ಈ ಮನೆಯಲ್ಲಿ ಇದ್ದದ್ದು  ಒಂದು ಕೊಠಡಿ ಸುಮಾರು ಎಂಟಡಿ ಅಗಲ ಹತ್ತು ಹನ್ನೆರಡಡಿ ಉದ್ದ ಇದ್ದಿರಬಹುದು. ಅದರ ಒಂದು ತುದಿಯಲ್ಲಿ ಮೂರಡಿ ಎತ್ತರಕ್ಕೆ ಒಂದು ಸಣ್ಣ ಗೋಡೆ.ಅದರ ಆಕಡೆ ಅಡಿಗೆ ಮನೆ,ಅದಕ್ಕೆ ತಾಗಿಕೊಂಡು ಸ್ನಾನದ ಮನೆ.ಇದು ಮೂರುಅಡಿ ಉದ್ದ ಮೂರಡಿ ಅಗಲ ಇದ್ದಿರಬಹುದು.
ನಮ್ಮ ಈ ಮನೆಯ ಎತ್ತರ ಸುಮಾರು ಎಂಟು ಹತ್ತಡಿ ಇದ್ದಿರಬಹುದು. ಆದರೆ ಗೋಡೆ ಮಾತ್ರ ಆರಡಿ ಎತ್ತರ ಇತ್ತು.ಒಂದು ಕುರ್ಚಿ ತಗೊಂಡು ಹತ್ತಿ ಆಕಡೆಗೆ ಇಣುಕಿದರೆ ಆ ಕಡೆಯ ಇಳಿಸಿ ಕಟ್ಟಿದ ಜೋಪಡಿ ಕಾಣುವಂತೆ ಇತ್ತು.ಆದರೆ ಹತ್ತಿ ನೊಡಲು ನಮ್ಮಲ್ಲಿ ಖುರ್ಚಿಯಾಗಲಿ ಮಂಚವಾಗಲೀ ಇರಲಿಲ್ಲ. ಹಾಗಾಗಿ ಅಲ್ಲಿ ಏನಿದೆ ಎಂದು ಸುಮಾರು ಸಮಯ ಗೊತ್ತಿರಲಿಲ್ಲ. ಅಲ್ಲಿ ಒಂದು ಅಜ್ಜಿ ಮತ್ತು ಅವರ ಬುದ್ಧಿ ಮಾಂದ್ಯ ಮಗ ವಾಸಮಾಡುತ್ತಿದ್ದರು.ಆ ಮಗನಿಗೆ ಅಮವಾಸ್ಯೆ ಹತ್ತಿರ ಬಂದಂತೆಲ್ಲ ಕೋಪ ಆಕ್ರೋಶ ಹೆಚ್ಚಾಗುತ್ತಾ ಇತ್ತು ಏನೇನೋ ಕೂಗಾಡುತ್ತಾ ಇದ್ದ.
ಅದಿರಲಿ.ನಮ್ಮದು ಅರ್ಧ ಗೋಡೆಯ ಮನೆ ಆದ ಕಾರಣ ಸಣ್ಣ ಸದ್ದಾದರೂ ಆ ಕಡೆಗೆ ಕೇಳುವಂತೆ ಇತ್ತು..ನಾವು ಅಲ್ಲಿಗೆ ಬಂದು ಒಕ್ಕಲಾದ ಒಂದೆರಡು ದಿನಗಳಲ್ಲೇ ಅಕ್ಕಮ್ಮಜ್ಜಿ ತನ್ನ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಬಹಳ ಇಷ್ಟವಾದರು.ಅವರು ಮಾತನಾಡುತ್ತಾ ನನಗೆ ಕಿವಿ ಕೇಳಿಸುವುದಿಲ್ಲ ಮಗಾ.ಇನ್ನು ನನ್ನ ‌ಮಗ ಮಲಗಿದ ತಕ್ಷಣ ನಿದ್ದೆ ಮಾಡುತ್ತಾನೆ.ಅವನಿಗೇನೂ ಗೊತ್ತಿಲ್ಲ ಸಣ್ಣ ಮಗುವಿನ ಬುದ್ಧಿ  ಅವನದು( ಇದು ಸತ್ಯದ ವಿಚಾರವೇ ಆಗಿತ್ತು) ಆದರೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದು ಶುದ್ಧ ಸುಳ್ಳು.ಆದರೆ ಹೊಸತಾಗಿ ಮದುವೆಯಾಗಿ ಬಂದು ಸಂಸಾರ ಹೂಡಿದ  ನಮಗೆ ಸಂಕೋಚವಾಗಬಾರದೆಂಬ ಸದುದ್ದೇಶದಿಂದ ಅವರು ಹಾಗೆ ಹೇಳಿದ್ದರು.
ಅಕ್ಕಮ್ಮಜ್ಜಿ ಬಹಳ ಸಹೃದಯಿ. ಆಗಾಗ ನಮ್ಮ ಮನೆ ಅಂಗಳ ಗುಡಿಸಿ ಮನೆಗೆ ಹತ್ತಿದ ಗೆದ್ದಲು ತೆಗೆಯಲು ಸಹಾಯ ಮಾಡುತ್ತಿದ್ದರು ‌.ನಮ್ಮ ‌ಮನೆಯ ಓನರ್ ನಾಗವೇಣಿ ಅಮ್ಮನವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಅವರ ಮೊದಲ ‌ಮಗ ಬುದ್ಧಿ ಮಾಂದ್ಯ.ಆದರೆ ಎರಡನೇ ಮಗ ಮುಂಬಯಿಯಲ್ಲಿ  ಒಳ್ಳೆಯ ಕೆಲಸದಲ್ಲಿ ಇದ್ದ ,ಒಳ್ಳೆಯ ಆದಾಯವೂ ಇತ್ತು.ಆತ ತನ್ನ ತಾಯಿಯನ್ನು ಎಂದರೆ ಅಕ್ಕಮ್ಮಜ್ಜಿ ಯನ್ನು ಮುಂಬಯಿಗೆ ಕರೆದುಕೊಂಡು ಹೋಗಲು ತಯಾರಿದ್ದ ಆದರೆ ಬುದ್ಧಿ ಮಾಂದ್ಯನಾದ ಅಣ್ಣನನ್ನು ಕರೆದುಕೊಂಡು ಹೋಗಲು ತಯಾರಿರಲಿಲ್ಲ.ಆತನನ್ನು ನೋಡಿಕೊಳ್ಳುವ ಸಲುವಾಗಿ ಅಕ್ಕಮ್ಮಜ್ಜಿ ಎಕ್ಕಾರಿನಲ್ಲಿ ಕೂಲಿ ಮಾಡುತ್ತ ಇಳಿಸಿ ಕಟ್ಟಿದ ಅಡಿಕೆ ಮರದ ಸೋಗೆಯ ಜೋಡಿಯಲ್ಲಿ ದೊಡ್ಡ ‌ಮಗನೊಂದಿಗೆ ಬದುಕುತ್ತಾ ಇದ್ದರು.ನಾನಿರುವ ತನಕ ಮಗನನ್ನು ಬೀದಿ ಪಾಲಾಗಲು ಬಿಡುವುದಿಲ್ಲ ,ಮುಂದೆ ದೇವರು ಇಟ್ಟಂತೆ ಆಗುತ್ತದೆ ಎಂದು ಹೇಳುತ್ತಾ ಇದ್ದರು.ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ದೊಡ್ಡದಾಗಿ ನೋವಿನಿಂದ ನರಳಿದ ದೊಡ್ಡ ‌ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದ.ಅದೇ ಜೋಪಡಿಯ ಈ ಕಡೆ ಇದ್ದ ನಾವು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಎದೆ ಬಡಿತ ,ಮತ್ತು ನಾಡಿ ಬಡಿತ ನಿಂತಿತ್ತು. ಆರಂಭದಲ್ಲಿ ಎದೆ ಬಡಿದು ಅತ್ತ ಅಕ್ಕಮ್ಮಜ್ಜಿ ನಂತರ ನಾನು ಇರುವಾಗಲೇ ಮಗ ಸತ್ತಿದ್ದು ಒಳ್ಳೆದಾಯಿತು‌.ಇಲ್ಲವಾದರೆ ನನ್ನ ನಂತರ  ಊಟ ತಿಂಡಿ,ಸ್ನಾನ ಆಸರೆ ಇಲ್ಲದೆ ಹುಣ್ಣಾಗಿ ಸಾಯಬೇಕಿತ್ತು.ನನ್ನನ್ನು ಸಣ್ಣ ಮಗ ನೋಡಿಕೊಂಡಾನು ಎಂದು ಸಮಾಧಾನ ಮಾಡಿಕೊಂಡಿದ್ದರು.ನಂತರ ದೊಡ್ಡ ಮಗನ ಅಂತ್ಯ ಸಂಸ್ಕಾರಕ್ಕೆ ಬಂದ ಸಣ್ಣ ‌ಮಗ ಎಕ್ಕಾರು ನಾಗವೇಣಿ ಅಮ್ಮನವರಿಗೆ " ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ " ಎಂದು ಮಾತು ಕೊಟ್ಟು ಮುಂಬಯಿಗೆ ಕರೆದುಕೊಂಡು ಹೋಗಿದ್ದ.ಮುಂದೇನಾತು ತಿಳಿಯದು.ಬಹುಶಃ ಮಗ ಚೆನ್ನಾಗಿ ನೋಡಿಕೊಂಡಿರಬಹುದು.ಇಂದು ಹೊಸತಾಗಿ ಸಂಸಾರ ಹೂಡಿದ ಆತ್ಮೀಯರಾದ ಪರಶುರಾಮ ಯತ್ನಾಳ್( ಹೈ ಕೋರ್ಟ್ ನ್ಯಾಯವಾದಿ) ಮನೆಗೆ ಹೋಗಬೇಕೆಂದು ಕೊಂಡಾಗ ಅಕ್ಕಮ್ಮಜ್ಜಿ ಮತ್ತು ತೀರಾ ಕಡಿಮೆ ಬಾಡಿಗೆಗೆ ಮನೆ ಕೊಟ್ಟ  ನಾಗವೇಣಿ ಅಮ್ಮನವರ ಸಹೃದಯತೆ ನೆನಪಾಗಿ ಬರೆದೆ - ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ

Thursday, 6 September 2018

ಬದುಕ ಬಂಡಿಯಲಿ.24 .- ಡಾ.ಲಕ್ಷ್ಮೀ ಜಿ ಪ್ರಸಾದ

ಇಂದು ಕಾಲೇಜಿನಿಂದ ಮನೆಗೆ ಬರುತ್ತಿರ ಬೇಕಾದರೆ ಬಸ್ಸಿನಲ್ಲಿ ನಾನು ಕುಳಿತ ಸೀಟಿಗಿಂತ ಎರಡು ಸೀಟು ಮುಂದೆ ಕುಳಿತಿದ್ದ ಯುವತಿ ಹಿಂತಿರುಗಿ ನೋಡಿ ಮುಗುಳು ನಕ್ಕರು.ನನ್ನ ಹಿಂದಿನ ಸೀಟ್ ನಲ್ಲಿ ಯಾರಾದರೂ ಅವರ ಪರಿಚಿತರು ಕುಳಿತಿರಬಹುದು.ಅವರನ್ನು ನೋಡಿ ಪರಿಚಯದ ನಗು ಬೀರಿರಬಹುದು ಎಂದು ಕೊಂಡೆ.ಅವರು ಮತ್ತೊಮ್ಮೆ ನೋಡಿ‌ಮುಗುಳು ನಕ್ಕರು ಯಾರಾದರೂ ನನ್ನ ಪರಿಚಿತರಿದ್ದು ನಾನು ಮರೆತಿರಬಹುದೇನೋ ಎಂದು ಕೊಂಡು ನಾನು ಪ್ರತಿನಗು ಬೀರಿದೆ. ಮುಂದಿನ ಸ್ಟಾಪ್ ನಲ್ಲಿ ಅವರ ಪಕ್ಕದ ಸೀಟ್ನಲ್ಲಿದ್ದವರು ಇಳಿದು ಹೋದರು.ಆಗ ಅವರು ನನ್ನನ್ನು ಇಲ್ಲಿಗೆ ಬರ್ತೀರಾ ಮೇಡಂ pls ಎಂದು ‌ಕರೆದರು.ಯಾಕೆಂದು ಗೊತ್ತಾಗದಿದ್ದರೂ ಎದ್ದು ಅವರ ಪಕ್ಕ ಕುಳಿತೆ." ನಿಮ್ಮಲ್ಲಿ ಮಾತಾಡಲು ಯುನಿವರ್ಸಿಟಿಗೆ ಬರಬೇಕೆಂದಿದ್ದೆ " ಎಂದು ಹೇಳಿದರು.ಯುನಿವರ್ಸಿಟಿಯಾ ? ಯಾವ ಯುನಿವರ್ಸಿಟಿ ? ನೀವು ನನ್ನನ್ನು ಬೇರೆ ಯಾರೋ ಎಂದು ತಪ್ಪಾಗಿ ಭಾವಿಸಿರಬೇಕು ಎಂದು ಹೇಳಿದೆ."ನೀವು ಬೆಂಗಳೂರು ಯುನಿವರ್ಸಿಟಿ ಯ ಕನ್ನಡ ಪ್ರೊಫೆಸರ್ ಅಲ್ವಾ ? ಎಂದು ಕೇಳಿದರು
ಅಲ್ಲ ನಾನು ನೆಲಮಂಗಲ ಪಿಯು ಕಾಲೇಜು ಉಪನ್ಯಾಸಕಿ ಎಂದು ಉತ್ತರಿಸಿದೆ .ನೀವು ಲಕ್ಷ್ಮೀ ಜಿ ಪ್ರಸಾದ್ ತಾನೇ ? ಎಂದು ಕೇಳಿದರು.ಹೌದು ಎಂದೆ."ಗಣೇಶಯ್ಯ ಕಾದಂಬರಿಯಲ್ಲಿನ ಲಕ್ಷ್ಮೀ ಪೋದ್ದಾರ್ ನೀವೆ ತಾನೆ ? ನಿಮ್ಮ ಫೋಟೋ ಕೂಡಾ ಅದರಲ್ಲಿ ಇದೆ" ಎಂದು ಹೇಳಿದರು.ಆಗ ನನಗೆ ವಿಷಯವೇನೆಂದು ತಲೆಗೆ ಹೋಯಿತು. ಕೆ ಎನ್ ಗಣೇಶಯ್ಯ ಅವರು ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ  ನನ್ನನ್ನು ಒಂದು ಮುಖ್ಯ ಪಾತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿಯೂ ತುಳು ಸಂಶೋಧಕಿಯ ಪಾತ್ರ ನನ್ನದು.ಅ ಕಾದಂಬರಿಯಲ್ಲಿ ಲಕ್ಷ್ಮೀ ಪೋದ್ದಾರ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್. ಆ ಕಾದಂಬರಿಯ ಕೊನೆಯಲ್ಲಿ ಡಾ.ಗಣೇಶಯ್ಯ ಅವರೊಂದಿಗಿನ ಫೋಟೋ ಹಾಕಿ ಲಕ್ಷ್ಮೀ ಜಿ ಪ್ರಸಾದ ಪೋದ್ದಾರ್ ಆದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದರು .ಅವರ ಕಾದಂಬರಿ ಓದಿರುವ ಸುನೀತಾ ಅವರು ಅಲ್ಲಿ ಹಾಕಿರುವ ನನ್ನ ಫೋಟೋ ನೋಡಿದ್ದು ಬಸ್ ನಲ್ಲಿ ಗುರುತಿಸಿ ಮಾತನಾಡಿದರು.ಗಣೇಶಯ್ಯ ಅವರ ಕಾದಂಬತಿಗಳ ಬಗ್ಗೆ  ಮಾತನಾಡಿದರು ಭೂತಾರಾಧನೆ ತುಳು ಸಂಸ್ಕೃತಿಯ ಕುರಿತಾಗಿಯೂ ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದರು .ನನ್ನ ಪೋನ್ ನಂಬರ್ ತಗೊಂಡರು.ಅವರೊಂದಿಗೆ ಸೆಲ್ಫಿ ತಗೊಳ್ಳಬೇಕು ಅನ್ನುವಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು.ಅಂದ ಹಾಗೆ ಆ ಅಂದದ ಯುವತಿ ಕಾನ್ಪುರದ ಐಐಟಿಯಲ್ಲಿ ಎಂ ಟೆಕ್ ಓದ್ತಿದ್ದಾರೆ.ಅವರಿಗೆ ಕನ್ನಡ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸವಿದೆ.ಉತ್ತರ ಕಾಂಡ ಸೇರಿದಂತೆ ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ಓದಿದ್ದಾರೆ.ಕೆ ಎನ್ ಗಣೇಶಯ್ಯ ಅವರ ಎಲ್ಲಾ ಕಾದಮಬರಿಗಳನ್ನೂ ಓದಿದ್ದಾರೆ.ವಸುಧೇಂದ್ರ ಕೂಡ ಅವರಿಗೆ ತುಂಬಾ ಅಚ್ಚುಮೆಚ್ಚು ಅಂತೆ.ಎ ಅರ್ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಅನ್ನು ಇಪ್ಪತ್ತು ಮೂವತ್ತು ಬಾರಿ ಓದಿದ್ದಾರಂತೆ.ಅವರ ಮಾತೃಭಾಷೆ ತೆಲುಗು ಅಂತೆ ಅದರೆ ಹುಟ್ಟಿ ಬೆಳೆದದ್ದು ಎಲ್ಲಾ ಬೆಂಗಳೂರಿನಲ್ಲಿ .ಅವರ ಸಾಹಿತ್ಯದೆಡೆಗಿನ ಒಲವು ನೋಡಿ ತುಂಬಾ ಸಂತಸವಾಯಿತು
https://www.google.co.in/amp/avadhimag.com/%3fp=173110&amp=1

Saturday, 25 August 2018

ಬದುಕ ಬಂಡಿಯಲಿ‌23 :ನನ್ನ ‌ಮೊದಲ ಉಪನ್ಯಾಸ ಡಾ.ಲಕ್ಷ್ಮೀ ಜಿ ಪ್ರಸಾದ ‌


ನನ್ನ ‌ಮೊದಲ‌ ಉಪನ್ಯಾಸ ..
ನಾನು ಸುಮಾರು ಇನ್ನೂರೈವತ್ತು   ಇನ್ನೂರೆಂಬತ್ತು ಉಪನ್ಯಾಸಗಳನ್ನು ಬೇರೆ ಬೇರೆ ವಿಷಯಗಳ ಬಗ್ಗೆ  ನೀಡಿದ್ದೇನೆ‌.
ನನ್ನ ಮೊದಲ ಉಪನ್ಯಾಸ ರಕ್ಷಾ ಬಂಧನ ದ ಕುರಿತು  ಕಲ್ಲಡ್ಕ ಶಾಲೆಯಲ್ಲಿ ಆಗಿತ್ತು .ಆಗ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ಬಗ್ಗೆ ,ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿದ್ದೆ‌.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ನಾನು ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಇದ್ದೆ‌.ಆಗಷ್ಟೇ ಎರಡನೇ ವರ್ಷದ ಎಂಎ ಪರೀಕ್ಷೆ ಮುಗಿಸಿ ಕೆಲಸಕ್ಕೆ ಸೇರಿದ್ದೆ‌.ಫಲಿತಾಂಶ ಇನ್ನೂ ಬಂದಿರಲಿಲ್ಲ.
 ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ನಿಮಿತ್ತ ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಉಪನ್ಯಾಸ ನೀಡಲು ಯಾರನ್ನೋ ಆಹ್ವಾನಿಸಿದ್ದು ,ಆ ದಿನ ಬೆಳಗ್ಗೆ ಅವರಿಗೆ ಬರಲಾಗುವುದಿಲ್ಲ ಎಂದು ಯಾರಲ್ಲೋ ಹೇಳಿಕಳುಹಿಸಿದ್ದರು.ಆಗ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದು ಯಾರು ಎಂಬ ಸಮಸ್ಯೆ ಉಂಟಾಯಿತು‌.ಆಗ ಅಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದ ಗೋಪಾಲ್ ರಾವ್ ಅವರು ನನ್ನಲ್ಲಿ ರಕ್ಷಾ ಬಂಧನದ ಬಗ್ಗೆ ಅರ್ಧ ಗಂಟೆ ಮಾತನಾಡಿ ಎಂದು ಹೇಳಿದರು‌.ಆರಂಭದಲ್ಲಿ ನಾನು ಹಿಂದೇಟು ಹಾಕಿದೆ‌.ಆಗ ಅಲ್ಲಿ ಶಿಕ್ಷಕಿಯಾಗಿದ್ದ ಸಂಧ್ಯಾ ಮಾತಾಜಿ ಹಾಗೂ ಐತಪ್ಪ ಮಾಸ್ಟರ್ ಅವರು ಒತ್ತಾಸೆಯಾಗಿ ನಿಂತು ಧೈರ್ಯ ತುಂಬಿದರು‌."ನೀವು‌ಮುಂದೆ ಕಾಲೇಜು ಉಪನ್ಯಾಸಕರಾಗಲಿರುವವರು. ಮೈಕ್ ಹಿಡಿದು ನಾಲ್ಕು ಮಾತಾಡಲು ಹಿಂದೇಟು ಹಾಕಿದರೆ ಹೇಗೆ? ಬರೆಯುವ ಹವ್ಯಾಸ ನಿಮಗಿದೆ.ಅಂತೆಯೇ ಉಪನ್ಯಾಸ ನೀಡುವುದಕ್ಕೂ ಅಭ್ಯಾಸಮಾಡಿಕೊಳ್ಳಿ.ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಂಧ್ಯಾ ಮಾತಾಜಿ ಹೇಳಿದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತದೆ.ನಂತರ ರಕ್ಷಾ ಬಂಧನಕ್ಕೆ ಸಂಬಂಧಿಸಿದ ಎರಡು ‌ಮೂರು ಕಥೆಗಳನ್ನು ನನಗೆ ಹೇಳಿಕೊಟ್ಟು ಭಾಷಣಕ್ಕೆ ತಯಾರಾಗಲು ನನಗೆ ಸಹಾಯ ಮಾಡಿದರು .
ಅಂತೂ ಇಂತೂ ಸಭಾ ಕಾರ್ಯಕ್ರಮದಲ್ಲಿ ಇಪ್ಪತ್ತು ನಿಮಿಷ ಮಾತನಾಡಿದೆ‌.ನಾನು ನೀಡಿದ  ಮೊದಲ ಉಪನ್ಯಾಸವದು.ಚೆನ್ನಾಗಿ ಮಾತನಾಡಿದ್ದೇನೆ ಎಂದು ಮುಖ್ಯೋಪಾಧ್ಯಾಯರು ಮತ್ತು ಉಳಿದ ಅಧ್ಯಾಪಕರು ಮೆಚ್ಚುಗೆಯನ್ನು ತಿಳಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.
ಅದಕ್ಕೂ ಮೊದಲು ನಾನು ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಯಲ್ಲಿ ಭಾಷಣ ಮಾಡಿ ಬಹುಮಾನ ಪಡೆದುಕೊಂಡಿದ್ದೆ‌.ಆದರೆ ಸ್ಪರ್ಧೆಯಲ್ಲಿ ಐದು ಹತ್ತು ನಿಮಿಷ ಮಾತನಾಡುವುದಕ್ಕೂ ತುಂಬಿದ ಸಭೆಯಲ್ಲಿ ಭಾಷಣ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.
ಈ ನಿಟ್ಟಿನಲ್ಲಿ ನನಗೆ ಉಪನ್ಯಾಸ ನೀಡಲು ಅವಕಾಶ ನೀಡಿ,ನಾನು ಕೂಡ ಉಪನ್ಯಾಸ ನೀಡಬಲ್ಲೆ ಎಂಬ ಧೈರ್ಯವನ್ನು ತುಂಬಿದ ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ  ಗೋಪಾಲ್ ರಾವ್ ಮತ್ತು ಅಧ್ಯಾಪಕರನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುವೆ .
ಇದಕ್ಕೂ ಒಂದು ವರ್ಷದ  ಮೊದಲು ನಮ್ಮ ಊರು ಕೋಡಪದವಿನಲ್ಲಿ ಕೃಷ್ಣಾಷ್ಟಮಿ  ಮತ್ತು ರಕ್ಷಾ ಬಂಧನ ಹಬ್ಬದ ನಿಮಿತ್ತ ಒಂದು ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಅದರಲ್ಲಿ ಒಂದು ಉಪನ್ಯಾಸ ನೀಡುವಂತೆ ಮಾತಾಜಿಯವರು ತಿಳಿಸಿದ್ದರು.ಆದರೆ  ಸ್ಥಳೀಯರಾಗಿ  ಬಲಿಷ್ಠರಾಗಿದ್ದ  ನಮ್ಮ ಹತ್ತಿರದ ಸಂಬಂಧಿಯೊಬ್ಬರು ( ಪ್ರಸಾದರ ದೊಡ್ಡಪ್ಪನ ಮಗ) ಇದು ಗೊತ್ತಾಗಿ ಹೊಟ್ಟಿಕಿಚ್ಚಿನಿಂದ ನನಗೆ ಅಲ್ಲಿ  ನೀಡಿದ ಅವಕಾಶ ವನ್ನು ತಪ್ಪಿಸಿ ,ಆ ದಿನ ಉಪನ್ಯಾಸ ನೀಡಲು ಬೇರೆ ಯಾರನ್ನೋ ಕರೆಸಿದ್ದರು. ಈ ಬಗ್ಗೆ ನನ್ನ ಅತ್ತೆಯವರೇ "ಅಬ್ಬಾ ಇವರುಗಳ ಮತ್ಸರವೇ !ಎಂದು ಉದ್ಗರಿಸಿದ್ದರು. ಸಾಮಾನ್ಯವಾಗಿ ನನ್ನ ಅತ್ತೆಯವರು ಅವರ ಕಡೆಯವರನ್ನು(  ನನ್ನ ಗಂಡನ ಮನೆ ಸಂಬಂಧಿಕರನ್ನು ) ಬಿಟ್ಟುಕೊಡುತ್ತಿರಲಿಲ್ಲ.ಆದರೆ ಈ ವಿಷಯದಲ್ಲಿ ಅವರಿಗೆ ಕೂಡ ನಮ್ಮ ಸಂಬಂಧಿಕರ ಹೊಟ್ಟೆಕಿಚ್ಚಿನ ಅರಿವಾಗಿತ್ತು.
ಇಲ್ಲಿ ತಪ್ಪಿದ ಅವಕಾಶ ಮತ್ತೆ ನನಗೆ ಕಲ್ಲಡ್ಕ ಶಾಲೆಯಲ್ಲಿ ದೊರೆತಿತ್ತು .ಜಗತ್ತು ಬಹಳ ವಿಶಾಲವಾಗಿದೆ‌.ಕೊಲ್ಲುವ ಶಕ್ತಿಗಿಂತ ಕಾಯುವ ದೇವರು ಬಲಿಷ್ಠನಾಗಿರುತ್ತಾನೆ.ಕಾಲೆಳೆಯುವ ಮಂದಿ ಕೆಲವರಿದ್ದರೆ ಬೆಂಬಲಕೊಡುವವರು ನೂರಾರು ಜನರಿರುತ್ತಾರೆ ಎಂಬುದು ಮೊದಲ ಬಾರಿಗೆ ನನಗೆ ಇಲ್ಲಿಯೇ ಅರಿವಾದದ್ದು.ಹಾಗಾಗಿಯೇ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ನಿಲುವನ್ನು ಆಧರಿಸಿ ಉಪನ್ಯಾಸ ನೀಡಿದ್ದೆ .

Saturday, 11 August 2018

ದೊಡ್ಡವರ ದಾರಿ 61 ಅತುಲ ಆತ್ಮ ವಿಶ್ವಾಸದ ತರುಣ ಹನುಮಂತ ನಾಯಕ್© ಡಾ.ಲಕ್ಷ್ಮೀ ಜಿ ಪ್ರಸಾದ

ನೋಡ್ತಾ ಇರಿ ಮೇಡಂ, ಒಂದಲ್ಲ ಒಂದಿನ ನಾನು ಒಳ್ಳೆಯ ಕೆಲಸ ಪಡೆಯುತ್ತೇನೆ..ಎಂದ ಇಪ್ಪತ್ತೈದರ ತರುಣ ಹನುಮಂತ ನಾಯಕ್ ನ ಆತ್ಮವಿಶ್ವಾಸದ ಮಾತು ನನಗೆ ಬಹಳ ಇಷ್ಟವಾಯಿತು.ದಿನಾಲು ಬೆಂಗಳೂರಿನ ನಮ್ಮ ಮನೆಯಿಂದ ನೆಲಮಂಗಲದ ಕಾಲೇಜಿಗೆ ಓಲಾ ಅಥವಾ ಉಬರಚ ಕ್ಯಾಬ್ ನಲ್ಲಿ ಹೋಗಿ ಬರುತ್ತೇನೆ.ಸಾಮಾನ್ಯವಾಗಿ ಮುಂದಿನ ಸೀಟಿನಲ್ಲೇ ಕುಳಿತುಕೊಳ್ಳುತ್ತೇನೆ‌.ಹೆಚ್ಚಾಗಿ ಕಾರಿನಲ್ಲಿ ಕುಳಿತ ತಕ್ಷಣವೇ ಫೇಸ್ ಬುಕ್, ವಾಟ್ಸಪ್ ,ಬ್ಲಾಗ್ ಗಳಲ್ಲಿ ಮುಳುಗಿ ಹೋಗುತ್ತೇನೆ.ಒಳ್ಳೆಯ ಮೂಡ್ ಇದ್ದ ದಿನ ಕ್ಯಾಬ್ ಡ್ರೈವರ್ ಗಳ ಸ್ಥತಿ ಗತಿ ಬಗ್ಗೆ ಮಾತನಾಡುವುದೂ ಇದೆ.ಹೆಚ್ಚಿನ ಕ್ಯಾಬ್ ಡ್ರೈವರ್ ಗಳು ನಮಗೇನೂ ಅಸಲಾಗುವುದಿಲ್ಲ ಮೇಡಂ. ಇಪ್ಪತ್ತಾರು ಸೆಕಡಾ ಕಮಿಷನ್ ಕೊಟ್ಟ ಮೇಲೆ ನಮಗೇನೂ ಉಳಿಯುವುದಿಲ್ಲ‌. ಕಾರಿನ  ಸಾಲದ ತಿಂಗಳ ಕಂತು ಕಟ್ಟಲಾಗದೆ
ತುಂಬಾ ಜನರ ಕಾರುಗಳು ಸೀಸ್ ಆಗಿವೆ ಇತ್ಯಾದಿಯಾಗಿ ಹೇಳುತ್ತಾ ಇರುತ್ತಾರೆ.
ನಮ್ಮ ಕಾಲೇಜಿನಲ್ಲಿ ಮೊದಲ‌ ಕಿರು ಪರೀಕ್ಷೆ ಮುಗಿಸಿ ಉತ್ತರ ಪತ್ರಿಕೆ ತಿದ್ದಲು ಮನೆಗೆ ತಗೊಂಡು ಬಂದೆ.ಬರುವಾಗ   ನೆಲಮಂಗಲದಿಂದ ಮನೆಗೆ ಉಬರ್ ಕ್ಯಾಬ್ ನಲ್ಲಿ ಬಂದೆ.ನನ್ನ ಕೈಯಲ್ಲಿ ಇದ್ದ ಉತ್ತರ ಪತ್ರಿಕೆಗಳ ದೊಡ್ಡ ಕಟ್ಟನ್ನು ನೋಡಿದ ಕ್ಯಾಬ್ ಡ್ರೈವರ್ ನೀವು ಟೀಚರಾ ಮೇಡಂ ಎಂದು ಕೇಳಿದರು.ಹೌದು,ನಾನು ನೆಲಮಂಗಲ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದೇನೆ ಎಂದು ಹೇಳಿದೆ.
ಆಗ ಅವರು "ನಾನು ಕೂಡ ಡಿಎಡ್ ಮಾಡಿದ್ದೇನೆ ಮೇಡಂ" ಎಂದು ಹೆಮ್ಮೆಯಿಂದ ಹೇಳಿದರು.ಮತ್ಯಾಕೆ ಶಿಕ್ಷಕರಾಗಲಿಲ್ಲ ಎಂದು ಕೇಳಿದೆ.ಆಗ ನಾನು ಖಾಸಗಿಯಾಗಿ ಒಂದೆರಡು ಶಾಲೆಗಳಲ್ಲಿ ಕೆಲಸ ಮಾಡಿದೆ ಮೇಡಂ. ಎಂಟು ಹತ್ತು ಸಾವಿರ ಸಂಬಳ ಕೊಡ್ತಾರೆ.ಅದು ಎಲ್ಲಿಗೂ ಸಾಕಾಗುವುದಿಲ್ಲ.ಅದಕ್ಕೆ ಸರಿಯಾದ ಕೆಲಸ ಸಿಗೋ ತನಕ ಇರಲಿ ಅಂತ ಕಾರು ಓಡಿಸುತ್ತಿದ್ದೇನೆ ಎಂದು ಹೇಳಿದರು. ಆಗ ಇದರಲ್ಲಿ ಅಸಲಾಗುತ್ತಾ ಬರುತ್ತಾ ?   ನಿಮಗೆ ಎಷ್ಟು ಆದಾಯ ಬರುತ್ತದೆ ಎಂದು ಕೇಳಿದೆ.ಆಗ ಅವರು ನಮಗೆ ವಾರಕ್ಕೆ  ಇಪ್ಪತ್ತೈದು ಮೂವತ್ತು  ಸಾವಿರದಷ್ಟು ಬ್ಯುಸಿನೆಸ್‌ ಸಿಗುತ್ತದೆ. ಕಮಿಷನ್, ಡೀಸೆಲ್ ಬೆಲೆ ಬಿಟ್ಟು ವಾರಕ್ಕೆ ಇಪ್ಪತ್ತು ಸಾವಿರದಷ್ಟು ಆದಾಯ ಬರುತ್ತದೆ .ತಿಮಗಳಿಗೆ ಹದಿನೆಂಟು ಸಾವಿರ ಕಾರಿನ ಸಾಲದ ಕಂತು ಇರುತ್ತದೆ.ಉಳಿದ ಐವತ್ತು ಅರುವತ್ತು ಸಾವಿರ ನಮಗೆ ಉಳಿಯುತ್ತದೆ ಎಂದು ಹೇಳಿದರು. ಅರೇ! ಎಲ್ರೂ ವರಗಕ್ ಒಔಟ್ ಆಗಲ್ಲ ಎಂದು ಅಲವತ್ತುಕೊಳ್ತ್ತಾ ಇದ್ದರೆ ಇವರು ಇಷ್ಟು ಅದಾಯ ಗಳಿಸುವ ಬಗ್ಗೆ ಹೇಳುತ್ತಾರಲ್ಲ ಎಂದು ಸಂತಸವಾಯಿತು ಜೊತೆಗೆ ಒಂಚೂರು ಆಶ್ಚರ್ಯ ಕೂಡ ಅಯಿತು.ಮತ್ತೆ ತುಂಬಾ ಜನ ನಮಗೆ ಲಾಸ್ ಆಗುತ್ತಿದೆ, ಎಂದು ಹೇಳುತ್ತಾರಲ್ಲ ? ಎಂದು ಕೇಳಿದೆ.ಸೋಮಾರಿಗಳು ಮೇಡಂ ಅವರು.ಬೆಳಗ್ಗಿನಿಂದ ಸಂಜೆ ತನಕ ಮೈಗಳ್ಳತನ ಬಿಟ್ಟು ದುಡಿದರೆ ಇಲ್ಲೂ ದುಡ್ಡು ಬರುತ್ತೆ ಮೇಡಂ. ಕೆಲವೊಮ್ಮೆ ಮನೆಯಿಂದ ಹೊರಟು ಒಂದೆರಡು ಗಂಟೆ ಕಳೆದರೂ ಡ್ಯೂಟಿ ಬೀಳಲ್ಲ .ಆಗೆಲ್ಲ ತಾಳ್ಮೆಯಿಂದ ಕಾಯಬೇಕಾಗುತ್ತದೆ‌. ಬಿದ್ದ ಡ್ಯೂಟಿನ ಮಾಡಬೇಕು  ಅದು ಬಿಟ್ಟು ಕಂಪೆನಿನ ಬೈಕೊಂಡು ಮನೆಗೆ ಹೋಗಿ ಮಲಕ್ಕೊಂಡರೆ ದುಡ್ಡು ಎಲ್ಲಿಂದ ಬರುತ್ತೆ ಮೇಡಂ ? ಎಂದು ಹೇಳಿದರು.ಹೌದು.ಅವರು ಟೊಯೋಟಾ ಇಟಿಯೋಸ್ ಕಾರನ್ನು ಖರೀದಿಸಿ ಉಬರ್ ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ.ಹನುಮಂತ ನಾಯಕ್  ಮತ್ತು ಅವರ ತಮ್ಮ ಒಗ್ಗಟ್ಟಿನಂದ ಕೆಲಸ ಮಾಡುತ್ತಾರೆ. ಇವರು ಹಗಲು ಹೊತ್ತಿನಲ್ಲಿ ಕಾರು ಓಡಿಸುತ್ತಾರೆ.ಇವರ ಸಹೋದರ ರಾತ್ರಿ ಹೊತ್ತು ಇದೇ ಕಾರನ್ನು ಓಡಿಸುತ್ತಾರೆ.ದಿವಸಕ್ಕೆ ಮೂರು ನಾಲ್ಕುಸಾವಿರ ದುಡಿಯಲೇ ಬೇಕೆಂಬ ಗುರಿ ಇಟ್ಟುಕೊಂಡು ರಸ್ತೆಗೆ ಇಳಿಯುತ್ತಾರೆ‌ಟಾರ್ಗೆಟ್ ತಲುಪಿದ ನಂತರವೇ ಮನೆಗೆ ಹಿಂದಿರುಗುತ್ತಾರೆ‌.ಅವರು ಗುರಿ ತಲುಪುವಲ್ಲಿಯವರೆಗೆ ಡ್ಯೂಟಿಗಾಗಿ ತಾಳ್ಮೆಯಿಂದ ಕಾಯುತ್ತಾರೆ‌.ಹಾಗಾಗಿ ಸಾಕಷ್ಟು ಸಂಪಾದನೆ ಕೂಡ ಮಾಡುತ್ತಾರೆ.ಮಾತಿನ ನಡುವೆ ಅವರು ಡಿಎಡ್ ಮಾಡಿದ ನಂತರ ಬಿಎ ಓದಿ ನಂತರ ಎಂ್ ಎಸ್ ಡಬ್ಯು ಕೂಡ ಓದಿರುವುದು ತಿಳಿಯಿತು. ಕಾರು ಓಡಿಸುವ ಕಾಯಕ ಮಾಡುತ್ತಲೇ ಒಳ್ಳೆಯ ಕೆಲಸಕ್ಕಾಗಿ ಕೂಡ ಪ್ರಯತ್ನ ಮಾಡುತ್ತಿದ್ದಾರೆ‌.ಅಗ ಮಾತಿನ ನಡುವೆ ನೋಡುತ್ತಿರಿ ಮೇಡಂ, ಒಂದಲ್ಲ ಒಂದು ದಿನ ನಾನು ಒಳ್ಳೆಯ ಕೆಲಸ ಪಡೆದೇ ಪಡೆಯುತ್ತೇನೆ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿದರು‌.ನನಗೂ ಕೂಡ ಅವರು ಅದನ್ನು ಸಾಧಿಸಿಯಾರು ಎನಿಸಿತು.ಅಥವಾ ಸ್ವ ಉದ್ಯೋಗ ಮಾಡುತ್ತಲೇ ಈ ಇಬ್ಬರು ಯುವಕರು ಉನ್ನತ ಮಟ್ಟದ ಸಾಧನೆಯನ್ನು ಮಾಡಬಹುದು ಎನಿಸಿತು‌.ಧನಾತ್ಮಕ ಚಿಂತನೆ,ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ.ಈ ಯುವಕರಲ್ಲಿ ಈ ಮೂರೂ ಗುಣಗಳಿವೆ. ಇವುಗಳ ಮೂಲಕ ಉನ್ನತ ಸಾಧನೆಯನ್ನು ಮಾಡಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ,ಬೆಂಗಳೂರು ಗ್ರಾಮಾಂತರ ಜಿಲ್ಲೆ