Friday 14 November 2014

ದಡವರಿಯದ ಅಲೆಗಳು –ಇಂದಿನ ಯುವ ಜನಾಂಗ



                              22 ಏಪ್ರಿಲ್ 2014 ರಂದು ಕನ್ನಡ ಪ್ರಭದಲ್ಲಿ ಪ್ರಕಟಿತ ಬರಹ 
ಏಳು,ಎದ್ದೇಳು ಜಾಗೃತನಾಗು !ಇದು ಸ್ವಾಮಿ ವಿವೇಕಾನಂದರು ಯುವ ಜನತೆಗೆ ನೀಡಿದ ಸಂದೇಶ .ಈ ಸಂದೇಶವನ್ನು ಅವರು ನೀಡಿದಾಗ ಅವರಿನ್ನೂ  ಎಳೆಯ ಯುವಕ ರಾಗಿದ್ದರು .
ಆದರೆ ನಮ್ಮ ಇಂದಿನ ಯುವ ಜನಾಂಗದ ಮನೋಸ್ ಸ್ಥಿತಿ ಹೇಗಿದೆ ?ಓದ್ಕೋ ಹೋಗು ಅಂತ ಅಮ್ಮ ಬೈದರೆ ಆತ್ಮ ಹತ್ಯೆ ,ಅಪ್ಪ ಬೈಕ್ ತೆಗೆಸಿಕೊತ್ತಿಲ್ಲ ಅಂತ ಆತ್ಮ ಹತ್ಯೆ ಕೇಳಿದ ಶೂಸ್ ಕೊಡಿಸಿಲ್ಲ ಅಂತ ಆತ್ಮ ಹತ್ಯೆ ,ಸಿಗರೆಟ್ ಯಾಕೆ ಸೇದಿದ್ದು ಅಂತ ಮೇಷ್ಟ್ರು  ಕೇಳಿದ್ದಕ್ಕೆ ನೇಣು,,ಪರೀಕ್ಷೆ ಬರೆಯುವ ಮೊದಲು ಓದಿ ಆಗಿಲ್ಲ ಏನು ಮಾಡೋದು ಅಂತ ಸಾಯೋದು ,ಪರೀಕ್ಷೆಯಲ್ಲಿ ಫೈಲ್ ಆದರೆ ಅಂತ ಮೊದಲೇ ಸಾಯೋದು ,ಪರೀಕ್ಷೆಯಲ್ಲಿ ಫೈಲ್ ಆದರೆ ಸಾಯೋದು ,ಕಡಿಮೆ ಮಾರ್ಕ್ಸ್ ಬಂದ್ರೆ ಸಾಯೋದು ,ಓದಲು ಬೇಕಾದ ಕಾಲೇಜ್ ನಲ್ಲಿ ಸೀಟ್ ಸಿಕ್ಕಿಲ್ಲ ಅಂತ ಸಾಯೋದು ,ಕೆಲಸ ಸಿಗದಿದ್ರೂ ಸಾಯುವುದು ,ಪ್ರಮೋಷನ್ ಸಿಕ್ಕಿಲ್ಲಾಂತಾನೂ ಸಾಯೋದು ,ಕೆಲಸ ಹೋದರೂ ಸಾಯುವುದು ..ಹೀಗೆ ಹನುಮಂತನ ಬಾಲದ ಹಾಗೆ ಪಟ್ಟಿ  ಬೆಳೆಯುತ್ತಾ ಹೋಗುತ್ತದೆ.
ಯಾಕೆ ಹೀಗೆ ?ಇಂದಿನ ಯುವಕರ ಹತಾಶಾ ಮನೋಭಾವ ದೌರ್ಬಲ್ಯಕ್ಕೆ ಕಾರಣವೇನು ?ಇಂದಿನ ವಿಭಕ್ತ ಕುಟುಂಬಗಳಲ್ಲಿ ಯುವಕರಿಗೆ ಸಾಕಷ್ಟು ಆದರ ಸಾಂತ್ವನಗಳು ಸಿಗುತ್ತಿಲ್ಲವೇ ?ಹೆತ್ತವರ ಅತಿಯಾದ ಮಹತ್ವಾಂಕ್ಷೆಗಳಿಗೆ ಹದಿ ಹರೆಯದ ಯುವಕರು ಬಲಿಯಾಗುತ್ತಿದ್ದಾರೆಯೇ ?
ಇಂಜಿನಿಯರಿಂಗ್  ಮೆಡಿಕಲ್ ಓದದಿದ್ದರೆ ಬದುಕೇ ಇಲ್ಲ ,ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕಿ ಪ್ರಯೋಜನ ಇಲ್ಲ ಎಂಬ ಮನೋ ಭಾವನೆ ಮೂಡಲು ಕಾರಣವೇನು ?ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದ ಮನೋಭಾವವೇಕೆ?
ಇಂಥಹ ಮನೋಭಾವ ಮೂಡಲು ಒಂದು ರೀತಿಯಲ್ಲಿ ಹೆತ್ತವರೇ ಕಾರಣ ಎಂದು ಹೇಳ ಬೇಕಾಗುತ್ತದೆ.
ಎಂಥಹ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂಬ ಆಶ್ವಾಸನೆಯನ್ನು ಕೊಟ್ಟು ಸದಾ ಬದುಕಿನ ಬಗ್ಗೆ ಭರವಸೆಯನ್ನು  ಮೂಡಿಸುವ ಕಾರ್ಯವನ್ನ್ನು ಹೆತ್ತವರೇ ಮಾಡಬೇಕಾಗುತ್ತದೆ .ಆದರೆ ಈ ನಿಟ್ಟಿನಲ್ಲಿ ಹಲವರು ಸೋಲುತ್ತಿದ್ದಾರೆ ಎಂದೆನಿಸುತ್ತದೆ .
ಈ ಬಗ್ಗೆ ಎರಡು ಕುಟುಂಬಗಳಲ್ಲಿನ ಇಬ್ಬರು ತಾಯಿ ಮಗಂದಿರ ಸಂಭಾಷಣೆಯನ್ನು ಉದಾಹರಿಸುವುದು ಸೂಕ್ತವೆನಿಸುತ್ತದೆ .
                                              ಸಂಭಾಷಣೆ -1
ತಾಯಿ :ಯಾಕೋ ಉಟಕ್ಕೆ ಬಂದಿಲ್ಲ ?ಏನು ಚಿಂತೆ ಮಾಡುತ್ತಿದ್ದಿ ?
ಮಗ : ನಾಳೆ ರಿಸಲ್ಟ್ ಬರುತ್ತೆ ಅದಕ್ಕೆ ಭಯ
ತಾಯಿ :ಅದಕ್ಯಾಕೆ ಚಿಂತೆ !ನೀನು ಹೇಗೂ ಚೆನ್ನಾಗಿಯೇ ಮಾಡಿದ್ದೀಯಲ್ಲ ?
ಮಗ :ಹೌದು ಆದರೂ ಒಳ್ಳೆ ಮಾರ್ಕ್ಸ್ ಬಾರದೆ ಇದ್ದರೆ ಏನು ಮಾಡುವುದು ?
ತಾಯಿ :ಬಾರದಿದ್ರೆ ಬಿಎಸ್ಸಿ ಗೆ ಸೇರ್ಕೋ ಮುಂದೆ ಎಂ ಎಸ್ಸಿನೋ ಬಿಎಡ್ ಮಾಡಿದ್ರೆ ಆಯ್ತು
ಮಗ ;ಅಕಸ್ಮಾತ್ ಫೈಲ್ ಆದ್ರೆ ?!
ತಾಯಿ:ಫೇಲ್ ಆಗಲಿಕ್ಕಿಲ್ಲ ,ಹಾಗೊಂದು ವೇಳೆ ಆದ್ರೆ ಏನಾಯಿತು ?! ಪುನಃ ಕಟ್ಟಿ ಪಾಸ್ ಮಾಡಿದ್ರೆ ಆಯಿತು
ಮಗ :ಹಾಗೂ ಆಗಿಲ್ಲಾಂತ ಆದ್ರೆ.. ?
ತಾಯಿ :ಯಾಕಷ್ಟು ಚಿಂತೆ ಮಾಡ್ತೀಯ ?ಹಾಗೂ ಓದೋಕೆ ಆಗಿಲ್ಲಾಂತ ಆದರೆ ಏನಾದರೂ ಅಂಗಡಿ-ಗಿನ್ಗಡಿ ಇತ್ಕೊಂದ್ರೆ ಆಯ್ತು !ಈಗ್ಯಾಕೆ ಚಿಂತೆ ?ಊಟಕ್ಕೆ ಬಾ ..
                                                  ಸಂಭಾಷಣೆ -2
ತಾಯಿ :ಊಟಕ್ಕೆ ಬಾರೋ
ಮಗ :ಬೇಡಮ್ಮ ಹಸಿವಿಲ್ಲ
ತಾಯಿ :ನಿನಗೆ ಮೊದಲಿನಿಂದಲೂ ಓದು ಓದು ಅಂತ ಹೇಳಿದ್ದೇನೆ .ಆಗ ಚೆನ್ನಾಗಿ ಓದದೆ ಸಮಯ ವ್ಯರ್ಥ ಮಾಡಿ ಈಗ ಚಿಂತೆ ಮಾಡಿ ಊಟ ಬಿಟ್ರೆ ಏನ್ಬಂತು ?!
ಮಗ :ಅದೇ ಚಿಂತೆ ಅಮ್ಮಾ ..ನಾಳೆ ಒಳ್ಳೆ ಮಾರ್ಕ್ಸ್ ಬಾರದಿದ್ರೆ ಏನು ಮಾಡೋದು ಅಂತ ..ಚಿಂತೆ ?!
ತಾಯಿ :ನನಗೊತ್ತಿಲ್ಲ,ಅಪ್ಪನ ಕೈಯಿಂದ ಮಂಗಳಾರತಿ ಮಾಡಿಸ್ಕೋ !ಚೆನ್ನಾಗಿ ಓದು ಅಂತ ಫೀಸ್ ಜಾಸ್ತಿ ಆದ್ರೂನು ಒಳ್ಳೆ ಕಾಲೇಜ್ ಗೆ ಹಾಕಿದ್ದೇವೆ.ಜೊತೆಗೆ ಕೋಚಿಂಗ್ ಗೆ ಬೇರೆ ಹೋಗಿದ್ದಿ ..ಇನ್ನು ಮಾರ್ಕ್ಸ್ ಕಡಿಮೆ ತೆಗೆದರೆ ಏನು ಮಾಡೋದು ..ಮುಂದೆ ಏನು ಮಾಡ್ತೀಯ ?ನನಗಂತೂ ಗೊತ್ತಾಗುತ್ತಿಲ್ಲ ..!!

ಮೇಲಿನ ಎರಡೂ ಉದಾಹರಣೆಗಳಲ್ಲಿ ಪಿಯು ಓದುತ್ತಿರುವ ಹುಡುಗರು ಬುದ್ದಿವಂತರು !ಆದ್ರೆ ದುರದೃಷ್ಟವಶಾತ್ ಇಬ್ಬರ ರಿಸಲ್ಟ್ ಕೂಡಾ ಫೇಲ್ ಅಂತ ಬಂತು .ಮೊದಲನೆಯಾತ ಅತ್ತುಕೊಂಡು ಮನೆಗೆ ಬರ್ತಾನೆ.ಪುನರ್ ಮೌಲ್ಯಮಾಪನಕ್ಕೆ ಹಾಕಿ ಪಾಸಾಗುತ್ತಾನೆ.ಎರಡನೆಯ್ ಉದಾಹರಣೆಯ ಹುಡುಗನಿಗೆ ಮನೆಗೆ ಬರಲು ಭಯವಾಗುತ್ತದೆ.ಬೀಚ್ ಗೆ ಹೋಗಿ ವಿಷ ಕುಡಿದು ಸಾವಿಗೆ ಶರಣಾಗುತ್ತಾನೆ !
ಫೇಲ್ ಆದಾಗ .ಕೆಲಸ ಸಿಗದೇ ಇದ್ದಾಗ ,ಮನೆಯವರೇ ಆದರಿಸದೆ ಇದ್ದಾಗ ಹದಿಹರೆಯದ ಯುವ ಜನಾಂಗ ಇಂದು ಆತ್ಮ ಹತ್ಯೆಯತ್ತ ಮನ ಮಾಡುತ್ತಿದೆ !ತಾವು ಎಣಿಸಿದಂತೆ ಓದಿದರೆ ,ಕೆಲಸ ಸಿಕ್ಕರೆ ಮಾತ್ರ ಒಳ್ಳೆಯ ಬದುಕು ಇಲ್ಲವಾದರೆ ಬದುಕೇ ಬೇಡ ಎನ್ನುವ ಹತಾಶ ಮನೋಭಾವನೆ ಇದಕ್ಕೆ ಕಾರಣವಾಗಿದೆ.
ಡಾಕ್ಟರ್ ಇಂಜಿನಿಯರ್ ಆದ್ರೆ ಮಾತ್ರ ಬದುಕು ಎನ್ನುವ ತಪ್ಪು ಕಲ್ಪನೆ ಮನೆ ಮಾಡುವಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಹೆಚ್ಚಿನದು .ಶಿಕ್ಷಕರಿಗೆ ತಮ್ಮ ಘನೆತೆಯ ಉಳಿಕೆಗಾಗಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಬೇಕು .ಹೆತ್ತವರಿಗೆ ತಮ್ಮ ಮಹತ್ವಾಕಾಂಕ್ಷೆ  ಈಡೇರಿಕೆಗಾಗಿ ಮಕ್ಕಳು ಓದಬೇಕು ಅಂಕ ಗಳಿಸಬೇಕು !
ತರಗತಿ ಪರೀಕ್ಷೆಗಳಲ್ಲಿ ,ಪುರ ಸಿದ್ಧತೆ ಪರೀಕ್ಷೆಗಳಲ್ಲಿ ಅಂಕ ಕಡಿಮೆ ತೆಗೆದ ವಿದ್ಯಾರ್ಥಿಗಳನ್ನು ಬರ ಹೇಳಿ ಅವರ ಎದುರೆ ವಿದ್ಯಾರ್ಥಿಗಳಿಗೆ ಬೈದು ಅವಮಾನ ಮಾಡುವುದು ವಿದ್ಯಾರ್ಥಿಗಳಲ್ಲಿ ಹತಾಶ ಪ್ರವೃತ್ತಿಗೆ ಕಾರಣವಾಗುತ್ತದೆ.ಹೆತ್ತವರೂ ತಮ್ಮ ಮಕ್ಕಳ ಮೇಲೆ ಹರಿ ಹಾಯ್ದು ಬೀಳಲು ಇದೂ ಒಂದು ಕಾರಣವಾಗುತ್ತದೆ !
ಚಿಕ್ಕಂದಿನಲ್ಲಿ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರು ಕೇಳಿದ್ದೆಲ್ಲ ಸಿಗಲೇ ಬೇಕು ಎಂಬ ಮನೋಭಾವನೆ ಬೆಳೆಯಲು ಕಾರಣವಾಗುತ್ತಾರೆ .ಆಗ ಒಂದೊಮ್ಮೆ ಕೇಳಿದ್ದು ಕೊಡದೆ ಇದ್ದಾಗ ,ಬಯಸಿದ್ದು ಸಿಗದೇ ಇದ್ದಾಗ ಅವರಿಗೆ ಅದನ್ನು ತಾಳಿಕೊಳ್ಳುವ ಶಕ್ತಿಯೇ ಇರುವುದಿಲ್ಲ.
ಇನ್ನು ಸಣ್ಣ ಪುಟ್ಟ ತಪ್ಪುಗಳನ್ನು ತುಂಟಾಟಗಳನ್ನು ದೊಡ್ಡದು ಮಾಡಿ ಹೆತ್ತವರನ್ನು ಬರ ಹೇಳಿ ಅವರ ಮುಂದೆ ಮಕ್ಕಳನ್ನು ನಿಂದಿಸುವ ಶಿಕ್ಷಕರ ಪ್ರವೃತ್ತಿ ಅನೇಕ ಅಪಾಯಕಾರಿ ವಿಷಯಗಳನ್ನು ಹುಟ್ಟು ಹಾಕುತ್ತವೆ.ಸಣ್ಣ ಪುಟ್ಟ ತಪ್ಪುಗಳಿಗೆ ಕರೆದು ಒಳ್ಳೆ ಮಾತಿನಲ್ಲಿ ಬುದ್ದಿ ಹೇಳುವುದು ,ಸಣ್ಣ ಪುಟ್ಟ ಶಿಕ್ಷೆ (ಎರಡು  ಪುಟ ಏನನ್ನಾದರೂ ಬರೆಯಲು ಹೇಳುವುದು ಇತ್ಯಾದಿ ವಿದ್ಯಾರ್ಥಿಗಳಿಗೆ ಸಹಾಯವಾಗುವ ಮಾದರಿಯ )ಇತ್ಯಾದಿಗಳನ್ನು ನಡಿ ಸರಿ ಪಡಿಸ ಬೇಕೇ ಹೊರತು ಸಣ್ಣ ಪುಟ್ಟ ವಿಚಾರಗಳನ್ನು ಶಿಸ್ತಿನ ನೆಪದಿಂದ ದೊಡ್ಡದು ಮಾಡಿದ್ರೆ ,ಹೆತ್ತ ವರನ್ನು ಬರ ಹೇಳಿದರೆ ಮಕ್ಕಳಿಗೆ ಈ ವಿಚಾರವನ್ನು ಹೆತ್ತವರಲ್ಲಿ ಹೇಳಲೇ ಭಯವಾಗುತ್ತದೆ ಅಂತ ಸಂದರ್ಭಗಳಲ್ಲಿ ಭಯ ಹಾಗೂ ಸೇಡು ತೀರಿಸುವ ಮೊನೋಭಾವದಿಂದ ತಮ್ಮ ಅಮೂಲ್ಯವಾದ ಬದುಕನ್ನು ನಾಶ ಮಾಡುವ ,ಕೊಂದು ಕೊಳ್ಳುವ ಅನೇಕ ನಿದರ್ಶನಗಳನ್ನು ನಾವು ಕಣ್ಣ ಮುಂದೆಯೇ ಕಾಣುತ್ತಾ ಇರುತ್ತೇವೆ,ದಿನವಹಿ ಪತ್ರಿಕೆಗಳಲ್ಲಿ ಇಂಥ ಪ್ರಕರಣಗಳು ವರದಿಯಾಗುವುದನ್ನು ಓದುತ್ತಿರುತ್ತೇವೆ.
 ಹತ್ತು ಇಪ್ಪತ್ತು ವರ್ಷಗಳ ಹಿಂದೆ 23-24 ವಯಸ್ಸಿನ ಮೇಲ್ಪಟ್ಟವರು ಮಾತ್ರ ಆತ್ಮ  ಹತ್ಯೆ ಮಾಡಿಕೊಳ್ಳುವುದು  ಇತ್ತು ,.ಆದರೆ ಈಗೀಗ ತೀರ ಚಿಕ್ಕ ವಯಸ್ಸಿನ ಮಕ್ಕಳೇ ದಕ್ಕೆ ಮುಂದಾಗುತ್ತಿದ್ದಾರೆ ಎನ್ನುವುದು ನಿಜಕ್ಕೂ ಆತಂಕದ ವಿಚಾರ !ಈಗ್ಗೆ ಒಂದು ವರ್ಷದ ಹಿಂದೆ ಮೂರನೆ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಹುಡುಗ ನೀರಿನ ಬಾಟಲಿನಲ್ಲಿ ಪೆಟ್ರೋಲ್ ತುಂಬಿ ತಂದು ಶಾಲೆಯಲ್ಲಿ ಮೈಗೆ ಪೆಟ್ರೋಲ್ ಸುರಿದು ಆತ್ಮ ಹತ್ಯೆ ಮಾಡಿಕೊಂಡ ದಾರುಣ ಘಟನೆಯನ್ನು ನಾವೆಲ್ಲಾ ಓದಿದ್ದೇವೆ .ನಾಲ್ಕನೇ ತರಗತಿ ಹುಡುಗನೊಬ್ಬ ತಂದೆ ಚಿಕೆನ್ ಬಿರಿಯಾನಿ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ !ಮೊನ್ನೆ ಮೊನ್ನೆಯಷ್ಟೇ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯರು ಹೋಲಿ ಆಟ ವಾಡಿದ್ದಕ್ಕೆ ಹೆತ್ತವರನ್ನು ಕರೆತನ್ನಿ ಎಂದಾಗ ಮನೆಗೆ ಹೋಗದೆ ಸಾವಿಗೆ ಶರಣಾದದ್ದು ಎಲ್ಲರಿಗೆ ತಿಳಿದ ವಿಚಾರ .
ಸಣ್ಣ ಪುಟ್ಟ ಅವಮಾನವನ್ನೂ ಸೋಲನ್ನೂ ಎದುರಿಸಲು ಇಂದು ಅಸಮರ್ಥ ರಾಗುತ್ತಿದ್ದಾರೆ ಇಂದಿನ ಯುವ ಜನತೆ .ಯಾಕೆ ಹೀಗೆ ?ಇದಕ್ಕೇನು ಕಾರಣ ? ಒಂದು ಎರಡು ಮಕ್ಕಳಿರುವ ಕುಟುಂಬಗಳಲ್ಲಿ ಮಕ್ಕಳಿಗೆ ಕೇಳಿದ್ದೆಲ್ಲ ಸಿಗುವುದು ಹಾಗೂ ,ಅತಿಯಾದ ಕಾಳಜಿ ಯಿಂದಾಗಿ ಹೀಗಾಗುತ್ತಿದೆಯೇ ?ಮೊದಲು ತುಂಬಾ ಮಕ್ಕಳಿರುವ ಕುಟುಂಬಗಳಲ್ಲಿ ಹೊಂದಾಣಿಕೆ ಬೈಗಳು ಪೆಟ್ಟು ಎಲ್ಲವೂ ಇರುತ್ತಿತ್ತು .ಇದರಿಂದಾಗಿ ಹೊಂದಿ ಕೊಂಡು ಬಾಳಲು ,ಸಣ್ಣ ಪುಟ್ಟ ಬೈಗಳನ್ನು ಅಪಮಾನವನ್ನು ಎದುರಿಸುವ ಮನೋ ಸ್ಥೈರ್ಯ ಮಕ್ಕಳಲ್ಲಿ ತನ್ನಿಂತಾನಾಗಿಯೇ ಬೆಳೆಯುತ್ತಿತ್ತು .ಆದರೆ ಇಂದಿನ ಮಕ್ಕಳಿಗೆ ಅದನ್ನು ಹೇಳಿ ಕೊಡಬೇಕಾಗಿದೆ .
ಕೇಳಿದ್ದೆಲ್ಲವನ್ನು ಕೇಳಿದ ತಕ್ಷಣ ಕೊಡಿಸುವ ಅಭ್ಯಾಸವನ್ನು ಹೆತ್ತವರು ಮೊದಲು ಬಿಡಬೇಕು.ಕೇಳಿದ್ದೆಲ್ಲವೂ ಸಿಗಲು ಸಾಧ್ಯವಿಲ್ಲ ಬಯಸಿದಂತ ಬಾಳು ಸಿಗಲು ಸಾಧ್ಯವಿಲ್ಲ ,ಎಲ್ಲರೂ ಡಾಕ್ಟರ್ಸ್ ಇಂಜಿನಿಯರ್ಸ್ ಆಗಲು ಸಾಧ್ಯವಿಲ್ಲ ,ಬೈಕ್ ,ಕಾರು.ಮೊಬೈಲ್ ಗಳೇ ಬದುಕಲ್ಲ ಎಂಬ ಜೀವನದ ಸತ್ಯವನ್ನು ಇಂದಿನ ಯುಕರಿಗೆ ಮನಗಾಣಿಸಬೇಕು ,ಈ ನಿಟ್ಟಿನಲ್ಲಿ ಶಿಕ್ಷಕರ ಜವಾದ್ಬಾರಿ ತುಂಬಾ ದೊಡ್ಡದು
ಯಾವ ಕ್ಷೆತ್ರವನ್ನೂ ಆಯ್ಕೆ ಮಾಡಿದರೂ ಕೂಡಾ ಪ್ರತಿಭೆ ಪ್ರಾಮಾಣಿಕತೆ ಪರಿಶ್ರಮಗಲಿ ಇರುವ ಕಡೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಬೇಕು ನಾನಾ ಕಾರಣಗಳಿಂದ ಉನ್ನತ ಶಿಕ್ಷಣ ದೊರೆಯದೆ ಇರಬಹುದು.ಕೆಲಸ ಸಿಗದಿರಬಹುದು .ಎಣಿಸಿದ್ದು ಈಡೇರದೆ ಇರಬಹುದು .ಅವಮಾನ ಎದುರಾಗ ಬಹುದು.ಆದರೆ ಇದಕ್ಕೆ ಆತ್ಮ ಹತ್ಯೆ ಪರಿಹಾರವಲ್ಲ ,ಸತತ ಪ್ರಯತ್ನದಿಂದ ಉದ್ಯೋಗವನ್ನು ಶಿಕ್ಷಣವನ್ನು ಗಳಿಸ ಬಹುದು .ಎಂದು ವಿದ್ಯಾರ್ಥಿಗಳ ಮನಸನ್ನು ಗಟ್ಟಿ ಮಾಡ ಬೇಕು .
ಅವಮಾನವನ್ನು ಎದುರಿಸುವ ಮನೋಭಾವವನ್ನು ಬೆಳೆಸಬೇಕು.ಇಂದು ಅವಮಾನ ಮಾಡಿದವರ ಮುಂದೆಯೇ ನಾನು ಒಳ್ಳೆಯ ಸ್ಥಾನ ಮಾನ ಪಡೆದು ತಲೆಯೆತ್ತಿ ನಡೆಯುವ ಹಾಗೆ ಬದುಕುತ್ತೇನೆ ಎಂಬ ದೃಢತೆಯನ್ನು ಮೂಡಿಸಬೇಕು .
ಫೇಲಾಗುವುದು,ಕಡಿಮೆ ಅಂಕ ಬಂದಿರುವುದು ,ಮೊದಲಾದ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡುತ್ತಿದ್ದರೂ ಈ ಕುರಿತು ಸಮಾಜ ಎಚ್ಚತ್ತು ಕೊಂಡಿಲ್ಲ.
ತಮ್ಮ ಮಕ್ಕಳು ಮಹಾನ್ ಬುದ್ದಿವಂತ ಎಂದೇ ಹೆತ್ತವರು ಸದಾ ಭಾವಿಸುತ್ತಾರೆ.ಆದರೆ ಶಿಕ್ಷಕರಿಗೆ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಆದ್ದರಿಂದ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವ,ಜೀವನ್ಮುಖಿ ಉತ್ಸಾಹವನ್ನು ಚಿಗುರಿಸುವ  ಜವಾಬ್ದಾರಿಯನ್ನೂ ಶಿಕ್ಷಕರು ವಹಿಸಬೇಕಾಗಿದೆ .
ಮೊದಲಿಗೆ ಎಸ್ ಎಸ್ ಎಲ್ ಸಿ ,ಪಿ ಯು ಸಿ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಲದ್ದು ಕೋಪ ಅಸಹನೆ ಕಾಡುವ ವಯಸ್ಸು ಜೊತೆಗೆ ಪರೀಕ್ಷೆಯ ಒತ್ತದೆ ,ಬಯಸಿದ್ದೆಲ್ಲಾ ಸಿಗಬೇಕೆಂಬ ಕೆಚ್ಚು ! ಈ ವಯಸ್ಸಿಗೆ ಸೋಲನ್ನು ಸ್ವೀಕರಿಸುವುದು ಅವರಿಗೆ ಬಹಳ ಕಷ್ಟ ಎನಿಸುತ್ತದೆ .ಆದ್ದರಿಂದ ಈ ಹಂತದಲ್ಲಿ ಯೇ ವಿದ್ಯಾರ್ಥಿಗಳಿಗೆ ನಿರಂತರ ಸಲಹೆ ಆಪ್ತ ಸಮಾಲೋಚನೆಗಳ ಅಗತ್ಯವಿರುತ್ತದೆ .ಎಂಥಹ ಸಮಯ ಬಂದರೂ ನಾವು ನಿಮ್ಮ ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ಮೂಡಿಸಬೇಕಾಗಿದೆ
ಈ ನಿಟ್ಟಿನಲ್ಲಿ ಪ್ರಾಣಾಯಾಮ ,ಯೋಗ ಧ್ಯಾನಗಳು ಸಹಾರಿ ಜೊತೆಗ್ ನೈತಿಕ ಶಿಕ್ಷ ಣ ಕೂಡ ಸಹಕಾರಿಯಾಗಬಲ್ಲದು !ಎಲ್ಲಕ್ಕಿಂತ ಹೆಚ್ಚು ಗುರು ಶಿಷ್ಯರ ನಡುವಿನ ಆತ್ಮೀಯತೆ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹದ ಸೆಲೆ ಹುಟ್ಟಿಸುವಲ್ಲಿ ಅತ್ಯಂತ ಪ್ರಯೋಜನಕಾರಿ .ಈ ನಿಟ್ಟಿನಲ್ಲಿ ನಾವು ಯತ್ನಿಸಬೇಕಾಗಿದೆ .
ಒಂದು ಸಣ್ಣ ಜ್ಯೋತಿಯನ್ನು ಆರಿ ಹೋಗದಂತೆ ಗಾಳಿಗೆ ಕೈ ಅಡ್ಡ ಹಿಡಿದು ರಕ್ಷಿಸಿದರೆ ಆ ಜ್ಯೋತಿಯಿಂದ ನೂರಾರು ದೀಪಗಳನ್ನು ಬೆಳಗ ಬಹುದು ಅಲ್ಲವೇ ?ಆದ್ದರಿಂದ ಇಂದೇ ಎಚ್ಚತ್ತುಕೊಳ್ಳೋಣ.ದಡವರಿಯದ ಅಲೆಗಳಾಗಿರುವ ಯುವ ಜನಾಂಗಕ್ಕೆ ದಾರಿ ದೀಪವಾಗೋಣ!
  ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment